Skip to content

Archive for March 19th, 2012

19
Mar

ಮಂಕು ತಿಮ್ಮನ ಕಗ್ಗ – ರಸಧಾರೆ (೩)

- ರವಿ ತಿರುಮಲೈ

ಇಹುದೋ ಇಲ್ಲವೋ ತಿಳಿಯಗೊಡದೊಂದು ವಸ್ತು ನಿಜ I
ಮಹಿಯಿಂ ಜಗವಾಗಿ ಜೀವವೇಷದಲಿ II
ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ I
ಗಹನ ತತ್ತ್ವಕೆ  ಶರಣೋ – ಮಂಕುತಿಮ್ಮ II

ತಿಳಿಯಗೊಡದೊಂದು=ತಿಳಿಯಗೊಡದ ಒಂದು ವಿಹರಿಪುದದೊಳ್ಳಿತೆಂಬುದು = ವಿಹರಿಪುದು ( ವಿಹಾರ ಮಾಡುವುದು) +ಅದು+ಒಳ್ಳಿತು = ಒಳ್ಳೆಯದು +ಎಂಬುದು
ನಿಸದವಾದೊಡಾ = ನಿಸದವಾದೊಡೆ + ಆ ವಿಹಾರಮಾಡುವುದು ಎಂದರೆ, ಎಲ್ಲದರಲ್ಲೂ  ವ್ಯಾಪಕವಾಗಿ ಚೈತನ್ಯ ರೂಪದಲ್ಲಿರುವುದು ಎಂದೂ ಅರ್ಥೈಸಬಹುದು.  ನಿಸದವಾದೊಡೆ ಎಂದರೆ ನಿಜವಾದರೆ ಎಂದೇ ಅರ್ಥೈಸಬೇಕು.

Read more »

19
Mar

ಭಕ್ತಿ ಆಂದೋಲನದ ಪರಿಪ್ರೇಕ್ಷ್ಯದಲ್ಲಿ ‘ನಳಚರಿತ್ರೆ’

-ಡಾ| ಜಿ. ಭಾಸ್ಕರ ಮಯ್ಯ

ಭಾಗ – 1

ಭಕ್ತಿ ಆಂದೋಲನವು ಶ್ರೀನಗರದಿಂದ ಕನ್ಯಾಕುಮಾರಿಯ ತನಕ ಹಾಗೂ ಗುಜರಾತಿನಿಂದ ಬಂಗಾಲದ ತನಕ ವ್ಯಾಪಿಸಿತ್ತು. ಇದು ಈ ದೇಶದ ಮಧ್ಯಯುಗದ ಅತೀ ದೊಡ್ಡ ಜನಾಂದೋಲನ.

ಸಂತರೆಂದರೆ ಯಾರು? ಕೆಲವರು ನಿರ್ಗುಣ ಪಂಥದ ಸಾಧುಗಳನ್ನು ಸಂತರೆನ್ನುತ್ತಾರೆ.ಸಂಸಾರ ತ್ಯಾಗ ಮಾಡಿದವರಿಗೆ ಮಾತ್ರ ಸಂತರೆನ್ನುವುದು ತಪ್ಪು ಕಲ್ಪನೆ. ಏಕೆಂದರೆ, ಎಷ್ಟೋ ಜನ ಸಂತರು ಗೃಹಸ್ಥರಿದ್ದರು. ಅಂತೆಯೇ ಸಂತರಲ್ಲಿ ಹಿಂದೂ-ಮುಸ್ಲಿಂ ಭೇದ ಕೂಡಾ ತಪ್ಪು. ಏಕೆಂದರೆ ಇಸ್ಲಾಂ ಮತದ ರೂಢಿವಾದದ ವಿರುದ್ಧ ಸಿಡಿದೆದ್ದ ಸಾವಿರಾರು ಮುಸ್ಲಿಂ ಸಂತರಿದ್ದರು. ಸಂತರೆಂದರೆ ಕೇವಲ ಗಂಡಸರೆಂದರೆ ಅದೂ ತಪ್ಪು. ಏಕೆಂದರೆ, ಮೀರಾ, ಅಕ್ಕಮಹಾದೇವಿ, ತಾಜ್, ಸಂಕವಿ ಯಂತವರು ಗಣನೀಯವಾಗಿ ಸಿಗುತ್ತಾರೆ.

ಅಂದರೆ ಸಂತರಲ್ಲಿ ಸನ್ಯಾಸಿ ಗೃಹಸ್ಥ, ಹಿಂದೂ, ಮುಸ್ಲಿಂ, ಗಂಡು-ಹೆಣ್ಣು, ನಿರ್ಗುಣವಾದಿ, ಸಗುಣವಾದಿ ಎಲ್ಲರೂ ಸೇರುತ್ತಾರೆ.

ಇವರು ಲೋಕಧರ್ಮ ಸಂಸ್ಥಾಪಕರು. ಪುರೋಹಿತರು ಮತ್ತು ಮೌಲ್ವಿಗಳ ಭಾಷೆ, ಸಂಸ್ಕೃತ ಮತ್ತು ಅರಬಿಯಾಗಿತ್ತು. ಆದರೆ, ಸಂತರು ಜನಭಾಷೆಯಲ್ಲಿ ಬರೆದರು.

ಇವರ ಸಾಮಾಜಿಕ ಆಧಾರ ಯಾವುದು?
ಅವರು ನೇಕಾರರು, ಬಡಗಿಗಳು, ಕೃಷಿಕರು, ಕೂಲಿಗಾರರು, ವ್ಯಾಪಾರಿಗಳು ಇತ್ಯಾದಿ ನಾನಾ ಶ್ರಮ ಆಧಾರಿತ ವೃತ್ತಿಯಲ್ಲಿರುವವರು.

ಇದು ಭಾರತೀಯ ಪರಿಪ್ರೇಕ್ಷ್ಯದ ಕೇವಲ ಒಂದು ಆಕಸ್ಮಿಕ ಘಟನೆ ಅಲ್ಲ, ಬದಲಿಗೆ ದೇಶದ ಆರ್ಥಿಕ,ಸಾಮಾಜಿಕ ಪರಿಸ್ಥಿತಿಗಳ ಅನಿವಾರ್ಯ ಉತ್ಪನ್ನ. ಆದ್ದರಿಂದಲೇ ಇದು ಒಂದು ಭಾಷೆಗಾಗಲೀ, ಒಂದು ಪ್ರದೇಶಕ್ಕಾಗಲೀ ಸೀಮಿತವಾಗಿರಲಿಲ್ಲ. ಅಂತೆಯೇ ಸಂತ ಸಾಹಿತ್ಯದ ಉಗಮವನ್ನು ಭಾರತೀಯ ಜೀವನದ ತನ್ನದೇ ಪರಿಸ್ಥಿತಿಗಳಲ್ಲಿ ಆರ್ಥಿಕ,ಸಾಮಾಜಿಕ ಪರಿಸ್ಥಿತಿಗಳಲ್ಲಿ ಹುಡುಕಬೇಕೇ ಹೊರತು ಬೌದ್ಧ ಅಥವಾ ಇಸ್ಲಾಂ ಮತಗಳ ಹಿನ್ನೆಲೆಯಲ್ಲಿ ಅಲ್ಲ.

Read more »

19
Mar

ಸಂಸ್ಕೃತಿ ಸಂಕಥನ – 27 – ನಮಗೆ ನಾವೇ ಪರಕೀಯರು

-ರಮಾನಂದ ಐನಕೈ

1947 ಅಗಸ್ಟ್ 15ರಂದು ಭಾರತ ಪರಕೀಯರ ದಾಸ್ಯದಿಂದ ಮುಕ್ತವಾಯಿತು ಎಂದು ಭಾಷಣ ಬಿಗಿಯುತ್ತೇವೆ. ಇದು ನಿಜವೇ? ಕೇವಲ ಆಡಳಿತ ಮತ್ತು ಅಧಿಕಾರ ಹಸ್ತಾಂತರ ಮಾಡಿದಾಕ್ಷಣ ದಾಸ್ಯ ವಿಮೋಚನೆ ಆಯಿತು ಅಂತ ನಿರ್ಧರಿಸಿಬಿಡಬಹುದೇ? ವಸಾಹತು ಪ್ರಭಾವದಿಂದ ಮಲೀನವಾದ ಭಾರತೀಯ ಮನಸ್ಸುಗಳಿಗೆ ಮುಕ್ತಿ ಸಿಕ್ಕಿದೆಯೇ? ಒಂದೊಮ್ಮೆ ಸಿಗದಿದ್ದ ಪಕ್ಷದಲ್ಲಿ ಇದೂ ಒಂದು ರೀತಿಯ ಮಾನಸಿಕ ದಾಸ್ಯ ಅಲ್ಲವೇ? ಈ ಮಾಸಿಕ ಅವಲಂಬನೆಯಿಂದ ಹೊರ ಬರುವುದು ಹೇಗೆ?

ಮೊದಲು ಭಾರತದಲ್ಲಿ ಮುಸ್ಲಿಂ ವಸಾಹತುಶಾಹಿ ಆಡಳಿತ ನಡೆಯಿತು. ನಂತರ ಸುದೀರ್ಘ ಕಾಲ ಕ್ರಿಶ್ಚಿಯನ್ ವಸಾಹತುಶಾಹಿ ರಾಜ್ಯಭಾರ ನಡೆಯಿತು. ಇವರೆಲ್ಲರೂ ಸೇರಿ ಭಾರತೀಯ ಸಂಸ್ಕೃತಿಯ ಕುರಿತು ಬೇರೆಯದೇ ಆದ ಚಿತ್ರಣ ಕಟ್ಟಿಕೊಟ್ಟರು. ಭಾರತೀಯ ಚಿಂತಕರೂ ಕೂಡಾ ಅದನ್ನೇ ಪಠಿಸುತ್ತ ಬಂದರು. ಸದ್ಯ ಭಾರತವನ್ನು ಆಳುತ್ತಿರುವುದು ಇದೇ ವಸಾಹತುಶಾಹಿ ಪ್ರಜ್ಞೆ. ಈ ಕಾರಣಕ್ಕಾಗಿ ಭಾರತದಲ್ಲಿ ರಾಷ್ಟ್ರತತ್ವಗಳಿಗೂ ಜನಸಾಮಾನ್ಯರ ಅನುಭವಕ್ಕೂ ತಾಳೆಯಾಗಲಾರದು. ಅದರ ಫಲಿತಾಂಶಗಳೇ ಸಂಘರ್ಷಗಳು. ಆದ್ದರಿಂದ ನಿಜವಾದ ನಮ್ಮ ಸಂಸ್ಕೃತಿಯನ್ನು ಅರಿತು ಅದರ ಆಧಾರದ ಮೇಲೆ ನಮ್ಮ ದೇಶದ ಜನಜೀವನವನ್ನು ರೂಪಿಸುವ ತುತರ್ು ಇದೆ.

ಸಾವಿರಾರು ವರ್ಷಗಳಿಂದ ಬಾಳಿ ಬೆಳಗಿದ ಭಾರತೀಯ ಸಂಸ್ಕೃತಿ ಐರೋಪ್ಯರ ಆಗಮನದಿಂದಾಗಿ ತನ್ನ ಸ್ವರೂಪವನ್ನೇ ಬದಲಿಸಿಕೊಂಡದ್ದು ಈಗ ಇತಿಹಾಸ. ಭಾರತ ಐರೋಪ್ಯರಿಗೆ ಅರ್ಥವಾಗಲಿಲ್ಲ. ಇಲ್ಲಿನ ಸಂಸ್ಕೃತಿ ಅವರಿಗೆ ಒಗಟಾಯಿತು. ಅಷ್ಟರಲ್ಲಾಗಲೇ ಪ್ರತಿ ಸಂಸ್ಕೃತಿಗೆ ಇತಿಹಾಸ ಬರೆಯುವ ಕಲೆಯನ್ನು ಐರೋಪ್ಯರು ಕರಗತ ಮಾಡಿಕೊಂಡಿದ್ದರು. ಇತಿಹಾಸ ಮಾತ್ರ ಅವರಿಗೆ ಸತ್ಯ ದಾಖಲೆಯಾಗಿತ್ತು. ಏಕೆಂದರೆ ಸತ್ಯವೇದವಾದ ಬೈಬಲ್ಲೇ ಅವರಿಗೆ ನಿಜವಾದ ಇತಿಹಾಸ. ಭಾರತೀಯ ಇತಿಹಾಸವನ್ನು ಎಲ್ಲಿಂದ ಆರಂಭಿಸಬೇಕು? ಅವರಿಗಾದ ದೊಡ್ಡ ಸಮಸ್ಯೆ ಅದು. ಯಾವುದೇ ಭಾರತೀಯ ಪಂಡಿತರನ್ನು ಭಾರ ತೀಯ ಇತಿಹಾಸದ ಕುರಿತು ಕೇಳಿದರೆ ಅವರೆಲ್ಲ ಪುರಾಣದ ರೋಚಕ ಕಥೆಗಳನ್ನೇ ಹೇಳಿದರು. ಒಂದೇ ಕಥೆಯನ್ನು ಬೇರೆ ಬೇರೆ ಪಂಡಿತರು ಬೇರೆ ಬೇರೆ ರೀತಿಯಲ್ಲಿ ಹೇಳಿದರು. ಸಂಶಯ ಶುರುವಾಯಿತು. ಆಗ ಐರೋಪ್ಯರು ತಮ್ಮದೇ ಆದ ಕಲ್ಪನೆಯಲ್ಲಿ ಭಾರತವನ್ನು ಗ್ರಹಿಸತೊಡಗಿದರು.

Read more »

Follow

Get every new post delivered to your Inbox.

Join 1,256 other followers