Skip to content

Posts from the ‘ಕರ್ನಾಟಕ,ಕನ್ನಡ’ Category

8
May

ಡಬ್ಬಿಂಗ್ ಅವಶ್ಯಕವೇ?

 ಡಾ ಅಶೋಕ್. ಕೆ. ಆರ್.

ಡಬ್ಬಿಂಗ್ ವಿವಾದ ಮತ್ತೆ ಗರಿಗೆದರಿದೆ. ಕಳೆದ ಹಲವಾರು ತಿಂಗಳುಗಳಿಂದ ‘ಏನ್ ಗುರು’ವಿನಂಥ ಬ್ಲಾಗುಗಳಲ್ಲಿ, ಫೇಸ್ ಬುಕ್ ನಂಥ ಸಾಮಾಜಿಕ ತಾಣಗಳಿಗೆ ಸೀಮಿತವಾಗಿದ್ದ ಈ ಚರ್ಚೆ ಅಮೀರ್ ಖಾನನ ‘ಸತ್ಯಮೇವ ಜಯತೆ’ಯ ಕನ್ನಡದವತರಣಿಕೆಯ ತಯಾರಿಕೆಯ ಹಿನ್ನೆಲೆಯಲ್ಲಿ ಮುಖ್ಯವಾಹಿನಿಗಳಲ್ಲೂ ಚರ್ಚೆಗೊಳಪಡುತ್ತಿದೆ. ‘ಸತ್ಯಮೇವ ಜಯತೆ’ಯನ್ನು ಕನ್ನಡದಲ್ಲಿ ಪ್ರಸರಿಸಲು ಮುಂದಾಗಿದ್ದ ಸುವರ್ಣ ವಾಹಿನಿಯು ಚಿತ್ರೋದ್ಯಮದ ‘ಬೆದರಿಕೆ’ ಭರಿತ ವಿರೋಧದ ಹಿನ್ನೆಲೆಯಲ್ಲಿ ಪ್ರಸಾರದಿಂದ ಹಿಂದೆ ಸರಿದಿದೆ. ‘ಪ್ರಾಣ ಹೋದರೂ ಸರಿಯೇ ಡಬ್ಬಿಂಗಿಗೆ ಅವಕಾಶ ಕೊಡುವುದಿಲ್ಲ. ಅಪ್ಪಾಜಿಯ ಮೇಲಾಣೆ’ ಎಂದು ಶಿವರಾಜ್ ಕುಮಾರ್ ಆರ್ಭಟಿಸಿದ್ದಾರೆ. ಪ್ರಜಾವಾಣಿ ಶನಿವಾರದ ಪುಟವೊಂದನ್ನು ಡಬ್ಬಿಂಗಿನ ಚರ್ಚೆಗೆ ಮೀಸಲಿರಿಸಿದರೆ ಸುವರ್ಣ ವಾರ್ತಾ ವಾಹಿನಿಯು ನಾಗತಿಹಳ್ಳಿ ಚಂದ್ರಶೇಖರ್, ಶ್ರೀನಿವಾಸಮೂರ್ತಿ, ಮದನ್ ಪಟೇಲ್ ಮತ್ತು ಬನವಾಸಿ ಬಳಗದ ಆನಂದ್ ರನ್ನು ಕರೆಸಿ ಜುಗಲ್ ಬಂದಿ ನಡೆಸಿದ್ದಾರೆ.
ಡಬ್ಬಿಂಗ್ ಪರವಾಗಿರುವವರು ವಾದಿಸುವುದೆಂದರೆ ‘ ನಾವು ಗ್ರಾಹಕರು. ಏನು ಪಡೆಯಬೇಕು ಎಂಬುದನ್ನು ನಾವು ನಿರ್ಧರಿಸಬೇಕೆ ಹೊರತು ಚಿತ್ರರಂಗದ ಕೆಲವರಲ್ಲ. ಇತರೆ ರಾಜ್ಯದವರು ತಮ್ಮ ತಮ್ಮ ಮಾತೃಭಾಷೆಯಲ್ಲೇ ಕಾರ್ಟೂನ್, ಡಿಸ್ಕವರಿ, ಪೋಗೋದಂಥಹ ವಾಹಿನಿಗಳನ್ನು, ಆಂಗ್ಲ ಸಿನಿಮಾಗಳನ್ನು ನೋಡುತ್ತಿರುವಾಗ ನಾವ್ಯಾಕೆ ಪರಭಾಷೆಯಲ್ಲೇ ಅವುಗಳನ್ನು ವೀಕ್ಷಿಸಬೇಕು? ಕನ್ನಡಿಗನಾಗಿ ಹುಟ್ಟಿದ್ದಕ್ಕೆ ಕನ್ನಡದಲ್ಲಿ ಚಿತ್ರ – ವಾಹಿನಿಗಳನ್ನು ವೀಕ್ಷಿಸುವ ಸೌಲಭ್ಯದಿಂದ ವಂಚಿತನಾಗಬೇಕೇಕೆ? ಅರ್ಥವಾಗದ ಭಾಷೆಯ ಸಿನಿಮಾಗಳನ್ನು ನೋಡಿ ಅರ್ದಂಬರ್ಧ ತಿಳಿದುಕೊಳ್ಳುವ ಬದಲು ಡಬ್ಬಿಂಗ್ ಮಾಡಿದರೆ ನನ್ನ ಭಾಷೆಯಲ್ಲೇ ನೋಡಿ ಆನಂದಿಸಿ ಸಂಪೂರ್ಣ ಅರಿತುಕೊಳ್ಳುವುದು ಒಳ್ಳೆಯದಲ್ಲವೇ? ತಮಿಳಿನಲ್ಲೇ ಪೋಗೋ ವೀಕ್ಷಿಸುವ ಹುಡುಗನಿಗೆ ತನ್ನ ಭಾಷೆಯ ಬಗ್ಗೆ ಪ್ರೀತಿ ಬೆಳೆಯುತ್ತದೆಯೇ ಹೊರತು ಅದೇ ಕಾರ್ಯಕ್ರಮಗಳನ್ನು ಇಂಗ್ಲೀಷಿನಲ್ಲಿ ನೋಡುವ ನಮ್ಮ ಮಕ್ಕಳಿಗೆ ಕನ್ನಡದ ಬಗ್ಗೆ ಪ್ರೀತಿ ಬೆಳೆಯಲು ಹೇಗೆ ಸಾಧ್ಯ? ನಮ್ಮ ಹಕ್ಕನ್ನು ಕಸಿದುಕೊಂಡಿರುವ ಚಿತ್ರೋದ್ಯಮದ ಈ ನೀತಿ ಸಂವಿಧಾನಬಾಹಿರ’
ಇನ್ನು ಡಬ್ಬಿಂಗ್ ವಿರೋಧಿಸುವವರು ಮುಂದಿಡುವ ವಾದವೆಂದರೆ ‘ಡಬ್ಬಿಂಗ್ ವಿರೋಧಿ ಚಳುವಳಿಗೆ ದಶಕಗಳ ಇತಿಹಾಸವಿದೆ. ಅನಕೃರಂಥ ಹಿರಿಯ ಲೇಖಕರು ಆರಂಭಿಸಿದ ಈ ಚಳುವಳಿ ರಾಜ್ ಕುಮಾರ್ ರಂಥ ಮೇರು ನಟರ ನೇತೃತ್ವದಲ್ಲಿ ಮುಂದುವರಿದು ಕನ್ನಡ ಚಿತ್ರೋದ್ಯಮದ ಉಳಿವಿನ ದೃಷ್ಟಿಯಿಂದ ಡಬ್ಬಿಂಗ್ ನಿಷೇಧಿಸಲಾಗಿದೆ. ಈ ನಿಷೇಧ ತೆರವುಗೊಳಿಸಿದರೆ ಹೆಚ್ಚು ಬಂಡವಾಳದ ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಕನ್ನಡ ಚಿತ್ರಗಳ ಮಾರುಕಟ್ಟೆಯನ್ನು ಕಿತ್ತುಕೊಳ್ಳುತ್ತದೆ. ಚಿತ್ರೋದ್ಯಮವನ್ನೇ ಅವಲಂಬಿಸಿದ ಜನರ ಹೊಟ್ಟೆಪಾಡಿಗೆ ಚ್ಯುತಿಯುಂಟಾಗುತ್ತದೆ. ಮೇಲಾಗಿ ಪರಸಂಸ್ಕೃತಿ ಬಿಂಬಿಸುವ ಚಿತ್ರಗಳು ಎಂದಿಗೂ ನಮ್ಮವಲಾಗಲಾರವು ಮತ್ತು ನಮ್ಮ ಕನ್ನಡ ಸಂಸ್ಕೃತಿಯನ್ನು ಅವನತಿಗೆ ದೂಡುತ್ತದೆ’ Read more »
2
May

ಕನ್ನಡಿಗನಿಗೆ ಕನ್ನಡಿಗನೇ ಸಾರಥಿ

- ಪವನ್ ಪಾರುಪತ್ತೇದಾರ

ಮೊನ್ನೆ ಬಹಳಾ ದಿನಗಳಾದ ಮೇಲೆ ಭಟ್ಟ ಫೋನ್ ಮಾಡಿದ್ದ, ನಾನು ತುಂಬಾ ಸಾರಿ ಅವ್ನಿಗೆ ಫೋನ್ ಮಾಡಿದ್ದೆ ಆದ್ರು ರಿಸೀವ್ ಮಾಡಿರ್ಲಿಲ್ಲ, ನಾ ಫೋನ್ ಎತ್ತಿದೊಡನೆ ಲೇ ಡಿ ಕೇ ಬೋಸ್, ಎಲ್ಲಿ ಹಾಳಾಗೋಗಿದ್ಯ ಅಂದೆ. ಒಂದು ಫೋನ್ ರಿಸೀವ್ ಮಾಡ್ಲಿಕ್ಕಾಗಲ್ವ ಅಂತ ಬೈದೆ, ಏನ್ ಮಾಡೋದು ಮಗಾ ಕೆಲಸ ಸಿಕ್ಕಾಪಟ್ಟೆ ಕಷ್ಟ ಐತಿ, ನಿಲ್ಲಂಗಿಲ್ಲ ಕೂರಂಗಿಲ್ಲ, ಮಕ್ಳು ಬಿಡೋಂಗೆ ಇಲ್ಲ, ಭಾರಿ ಕಷ್ಟ್ ಕೊಡ್ತಾರೆ ಅಂದ, ನಾನು ಸರಿ ಮಗನ ಅಂತ ಕಷ್ಟದ್ ಕೆಲ್ಸ ಏನ್ಲೆ ಮಾಡ್ತಿದ್ಯ ಅಂದೆ, ಆಗ ಭಟ್ಟನ ಉತ್ತರ ಕೇಳಿ ಮನಸ್ಸಿಗೆ ಬಹಳಾ ನೋವಾಯ್ತು, ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪ್ರಥಮ ದರ್ಜೆಯಲ್ಲಿ ಮುಗಿಸಿದ್ದ ಭಟ್ಟ, ವೆಂಟಿಲೇಶನ್ ರಿಪೇರಿ ಮಾಡುವ ಕೆಲಸ ಮಾಡುತಿದ್ದ, ಅವನೇ ಹೇಳಿದ ಪ್ರಕಾರ, ವೆಂಟಿಲೇಶನ್ ಕೆಲಸ ಇಲ್ದೆ ಇದ್ರೆ ಅವರ ಕಂಪನಿಯ ಆಫೀಸ್ ಬಾಯ್ ಕೂಡ ಅವನೆ, ಆ ಬ್ಯಾಂಕಿಗೆ ಹೋಗಿ ಚೆಕ್ ಹಾಕಿ ಬಾ, ಅಲ್ಲೆಲ್ಲೋ ಹೋಗಿ ಆರ್ಡರ್ ಕಾಪಿ ತೆಗೆದುಕೊಂಡು ಬಾ, ಹೀಗೆ ಎಲ್ಲ ರೀತಿಯಲ್ಲು ಅವ್ನನ್ನ ಬಳಸಿಕೊಳ್ಳುತಿದ್ದರು.

ಭಟ್ಟ ಓದಿದ್ದೆಲ್ಲ ಹುಬ್ಬಳ್ಳಿಯಲ್ಲಿ, ಕೆ.ಎಲ್.ಇ. ಶಾಲೆಯ ಬೋರ್ಡುಗಳಲ್ಲಿ ಕನ್ನಡ ಮೀಡಿಯಂ ಓದಿ ಬೆಳೆದ ಹುಡುಗ, ಅಂತಹ ದಡ್ಡ ಹುಡುಗನೇನಲ್ಲ, ಡಿಪ್ಲೋಮದಲ್ಲಿ ಮತ್ತು ಇಂಜಿನಿಯರಿಂಗ್ನಲ್ಲಿ ಮೊದಲನೆ ದರ್ಜೆಯಲ್ಲಿ ಪಾಸಾಗಿದ್ದಾನೆ. ಮನೆಯ ಕಷ್ಟಗಳನ್ನೆಲ್ಲ ಮೂಲೆಯಲ್ಲಿ ಬಿಸಾಕಿ ಅವರಪ್ಪ ಸಾಲ ಸೋಲ ಮಾಡಿ ಓದಿಸಿದ್ದಾರೆ, ಎಜುಕೇಶನ್ ಲೋನ್ ಕಟ್ಟಲೇ ಬೇಕಾದ ಅನಿವಾರ್ಯತೆ ಅವನ್ನ ಈ ಕೆಲಸಕ್ಕೆ ದೂಡಿದೆ. ಈ ಮಧ್ಯೆ ಆ ಕೋರ್ಸು ಈ ಕೋರ್ಸು ಅಂತ ಹೇಳಿದವರ ಮಾತು ಕೇಳಿ ಟೆಸ್ಟಿಂಗ್ ಕೋರ್ಸ್ ಸಹ ಮಾಡಿದ್ದಾನೆ.ಆದ್ರು ಕೆಲಸ ಇಲ್ಲಿವರೆಗೂ ಸರಿಯಾದ ಕೆಲಸ ಮಾತ್ರ ಸಿಕ್ಕಿಲ್ಲ. ಇದು ಬರೀ ನನ್ನೊಬ್ಬ ಗೆಳೆಯನ ಕಥೆಯಲ್ಲ, ಭಟ್ಟ ಎಂಬುದು ಇಲ್ಲಿ ಪಾತ್ರವಷ್ಟೇ, ಇಂತಹ ಸಾವಿರಾರು ಹುಡುಗರು ಚೆನ್ನಾಗಿ ಓದಿಯೂ ಉತ್ತಮ ಅಂಕಗಳು ಪಡೆದೂ ಸಹ, ಎಂತ ಎಂತಹುದೋ ಕೆಲಸಗಳನ್ನು ಮಾಡುತಿದ್ದಾರೆ, ವೆಂಟಿಲೇಶನ್ ಸೆರ್ವೀಸ್ ಮಾಡುವುದೇ ಆಗಿದ್ದರೆ ಭಟ್ಟ ಐ.ಟಿ.ಐ ಓದಿದ್ದರೆ ಸಾಕಾಗಿತ್ತು, ಇಂಜಿನಿಯರಿಂಗ್ ಅವಶ್ಯಕತೆಯೇ ಇರಲಿಲ್ಲ, ವಿ.ಟಿ.ಯು. ಅಡಿಯಲ್ಲಿ ಸುಮಾರು ೨೦೦ ಕಾಲೇಜುಗಳಿವೆ ಅಂದರೆ ಪ್ರತಿ ವರ್ಷ ಹೊರಬರುವ ಇಂಜಿನಿಯರುಗಳೆಷ್ಟು, ಮತ್ತು ಅವರಲ್ಲಿ ಕೆಲಸಗಳಿಗೆ ಸೇರುವರೆಷ್ಟು? ನಿಜಕ್ಕು ಅಂಕಿ ಅಂಶಗಳ ನೋಡಲು ಹೋದರೆ ಭಯವಾಗುತ್ತದೆ.

Read more »

28
Apr

ಡಬ್ಬಿಂಗ್ ಎಂಬ ರುಚಿಗೆಟ್ಟ ದಿಢೀರ್ ಅಡುಗೆ ಏಕೆ?

- ರೂಪ ರಾವ್

ಇತ್ತೀಚಿಗೆ ಡಬ್ಬಿಂಗ್ ಬೇಕು ಬೇಡ ಅನ್ನುವ ಹುಯಿಲು ಮತ್ತೆ ಕಾಣ್ತಿದೆ. ರಾಕೇಶ್ ಶೆಟ್ಟಿಯವರ ಲೇಖನ ಓದಿದ ಮೇಲೆ ಇದರ ಬಗ್ಗೆ ನನ್ನದೊಂದಿಷ್ಟು ಅನಿಸಿಕೆ.

ಸ್ವಾಮಿ ಡಬ್ಬಿಂಗ್ ಬೇಡ ಅನ್ನೋದು ಹಳೆಯ ರಾಗವಿರಬಹುದು. ಆದರೆ ಕಾರಣ ಮಾತ್ರ ನಿಚ್ಚಳ… ಅದು ಕನ್ನಡದ ಕಲಾವಿದರಿಗೆ ಆಗೋ ಅನ್ಯಾಯ ಅಷ್ಟೆ. ಅದು ಯಾವತ್ತಿಗೂ ಸಲ್ಲುವ ಕಾರಣ. ಚಿತ್ರರಂಗವನ್ನೇ ನಂಬಿಕೊಂಡು ನಿಂತ ಅಸಂಖ್ಯಾತ ಕಲಾವಿದರಿಗೆ. ನಾಯಕ ,ನಾಯಕಿ ಪಾತ್ರದಿಂದ ಹಿಡಿದು ಪೋಷಕ ಪಾತ್ರಧಾರಿಗಳು, ಛಾಯಾಗ್ರಾಹಕರು, ನಿರ್ದೇಶಕರು,ನೂರಾರು ಜನ ನೇರವಾಗಿ ಇಲ್ಲವೇ ಪರೋಕ್ಷವಾಗಿ ಒಂದು ಚಿತ್ರದ  ಮೇಲೆ ಅವಲಂಬಿತರಾಗಿರುತ್ತಾರೆ.. ಅಷ್ಟೂ ಜನರ ಹೊಟ್ಟೆಯ ಮೇಲೆ ಹೊಡೆಯುವ ಹುನ್ನಾರವಿದು.

ರಿಮೇಕ್ ಚಿತ್ರಗಳ ಆರ್ಭಟಕ್ಕೆ ನಿರ್ದೇಶಕರ ಸೃಜನಾತ್ಮಕತೆ ಈಗಾಗಲೇ ಕಡಿಮೆಯಾಗಿದೆ.ಒಂದು ವೇಳೆ ಡಬ್ಬಿಂಗ್ ನಿಷೇಧ ತೆರವು ಗೊಳಿಸಿದರೆ,ಕನ್ನಡದಲ್ಲಿ ನಿರ್ದೇಶಕ, ಕತೆಗಾರ, ಸತ್ತಂತೆ…..! ಉಪೇಂದ್ರ, ಸೂರಿ, ಶಶಾಂಕ್, ಚಂದ್ರು,ಯೋಗರಾಜ್ ಭಟ್ ರವರಂತೆ ಆಗಬೇಕೆನ್ನುವ ಯುವ ನಿರ್ದೇಶಕರ ಗತಿ ?

ಮತ್ತೆ ಯಾವುದೋ ಪ್ರಾದೇಶಿಕತೆಗೆ ಹೊಂದುವ ಅಲ್ಲಿನ ವಾತಾವರಣಕ್ಕೆ ನಿರ್ಮಿಸಲಾಗಿರುವ ಚಿತ್ರವೊಂದನ್ನ ಹಾಗೆಯೇ ಡಬ್ಬಿಂಗ್ ಮಾಡಿದಲ್ಲಿ ಅದನ್ನು ಕೂತು ನೋಡುವ ಕರ್ಮ ನಮ್ಮದಾಗುತ್ತದೆ.ಪಾತ್ರದ ತುಟಿಯ ಚಲನೆ ಒಂದಾದರೆ. ಹಿನ್ನಲೆ ದ್ವನಿಯ  ಮಾತು ಒಂದಾಗಿರುತ್ತದೆ. ಅದಕ್ಕೂ ಇದಕ್ಕೂ  ಜೋಡಿಸಿ ನೋಡುವ ದರ್ದು ನಮಗೆ ಬೇಕಾ?
Read more »

27
Apr

’ಸತ್ಯ ಮೇವ ಜಯತೇ’ ಅನ್ನಲು ಕನ್ನಡಿಗರು ಅಪ್ಪಣೆ ಪಡೆಯಬೇಕಾ?

- ರಾಕೇಶ್ ಶೆಟ್ಟಿ

ಕಳೆದ ವರ್ಷ ‘ಕನ್ನಡ ಚಲನ ಚಿತ್ರ ಅಕಾಡೆಮಿ’ಯು ಬಿಡುಗಡೆ ಮಾಡಿದ್ದ ವರದಿ ಡಬ್ಬಿಂಗ್ ಪರವಾಗಿತ್ತು.ಆ ವರದಿ ಬಿಡುಗಡೆಯಾದ ತಕ್ಷಣ ಚಿತ್ರರಂಗದ ಬಹುತೇಕ ಮಂದಿ ನಾಗಾಭರಣರ ಮೇಲೆ ಮುಗಿಬಿದ್ದರು.ಕಡೆಗೆ ಅವ್ರು ವರದಿಯನ್ನ ಹಿಂಪಡೆದರು.ಇಲ್ಲಿ ನಷ್ಟ ಆಗಿದ್ದು ಯಾರಿಗೆ? ಕನ್ನಡ ಚಿತ್ರ ರಂಗಕ್ಕಾ? ಅಲ್ಲ … ಕನ್ನಡ ಪ್ರೇಕ್ಷಕನಿಗೆ.

ಇಷ್ಟಕ್ಕೂ, ಡಬ್ಬಿಂಗ್ ಬೇಕೋ ಬೇಡವೋ ಅಂತ ನಿರ್ಧರಿಸಬೇಕಾದವನು “ಕನ್ನಡ ಪ್ರೇಕ್ಷಕನೋ?” ಇಲ್ಲ “ಕನ್ನಡ ಚಿತ್ರ ರಂಗವೋ?”

ಡಬ್ಬಿಂಗ್ ಯಾಕೆ ಬೇಡ ಅಂದ್ರೆ, ಅದರಿಂದ ಕನ್ನಡದ ಮಕ್ಕಳಿಗೆ ಕೆಲಸವಿರೋದಿಲ್ಲ ಅಂತ ಹಳೆ ಕತೆ ಹೇಳ್ತಾ ಇದ್ದಾರೆ.ಈಗ ಬರ್ತಾ ಇರೋ ಅದಿನ್ನೆಷ್ಟು ಚಿತ್ರಗಳಲ್ಲಿ ಕನ್ನಡದ ಕಲಾವಿದರು,ತಂತ್ರಜ್ಞರು,ನಟಿಯರು,ಪೋಷಕ ನಟರು,ಖಳನಟರು,ಸಂಗೀತ ನಿರ್ದೇಶಕರು,ಗಾಯಕ-ಗಾಯಕಿಯರಿಗೆ ಕೆಲ್ಸ ಇದೆ?,ಎಲ್ಲದಕ್ಕೂ ಬೇರೆ ಭಾಷೆಯವರೇ ಬೇಕು.ಆಗ ಮಾತ್ರ ಯಾರು ಕನ್ನಡ ಮಕ್ಕಳಿಗೆ ಅನ್ಯಾಯವಾಗ್ತಾ ಇದೆ ಅಂತ ಉಸಿರೆತ್ತುವುದಿಲ್ಲ. ಭಾಷೆಯ ಉಚ್ಚಾರಣೆ ಬರದೆ ಇದ್ರೂ ನಮಗೆ ಬಾಲಿವುಡ್ ಗಾಯಕರು ಬಂದು ಉಸಿರು ಕಟ್ಟಿ ಹಾಡ್ಬೇಕು,ಬಾಯಿ ಅಲ್ಲಾಡಿಸಲು ಬರದ ಖಳ ನಟರು ಅಲ್ಲಿಂದಲೇ ಬರಬೇಕು.ಒಟ್ಟಿನಲ್ಲಿ ಬೇರೆ ಕಡೆಯಿಂದ ಜನ ಆಮದಾದಷ್ಟು ಚಿತ್ರ ಅದ್ದೂರಿ ಅನ್ನೋ ಭ್ರಮೆ! ಈಗಲೂ ಕನ್ನಡದ ಮಕ್ಕಳಿಗೆ ಆಗುತ್ತಿರುವುದು ಅನ್ಯಾಯವೇ ಅಲ್ಲವೆ?

ಇಷ್ಟಕ್ಕೂ ಡಬ್ಬಿಂಗ್ಗೆ ಅವಕಾಶ ಕೊಟ್ರೆ ಎಲ್ರೂ ಅದೇ ಮಾಡ್ತಾರೆ ಅನ್ನೋ ಅತಂಕವಿದ್ದರೆ,ಅದಕ್ಕಾಗಿ ಕೆಲ ನೀತಿ ನಿಯಮಗಳನ್ನ ಮಾಡಿಕೊಳ್ಳಬಹುದು. ಡಬ್ಬಿಂಗ್ ಮಾಡುವ ಹಕ್ಕನ್ನ ಮುಕ್ತವಾಗಿಡದೆ ‘ವಾಣಿಜ್ಯ ಮಂಡಳಿ’ ಯೇ ಆಯ್ದ ಚಿತ್ರಗಳನ್ನ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಬಹುದು.ಹಾಗೆ ಡಬ್ಬಿಂಗ್ ಮಾಡಿದ ಸಿನೆಮಾಗಳಲ್ಲಿ ನಮ್ಮ ನೇಟಿವಿಟಿ ಇಲ್ಲ ಅಂದ್ರೆ ಅವು ಗೆಲ್ಲೋದು ಅಷ್ಟರಲ್ಲೇ ಇದೆ,ಅದರಿಂದ ಯಾವ ಅಪಾಯವು ಇಲ್ಲ. ವಿಷಯ ಹೀಗಿರುವಾಗ ಇನ್ನು ಆಗಿನ ಕಾಲದ ಕತೆಯನ್ನೇ ಹೇಳಿ ಕನ್ನಡ ಪ್ರೇಕ್ಷಕರಿಗೆ ಒಳ್ಳೊಳ್ಳೆ ಚಿತ್ರವನ್ನ ನಮ್ಮ ಭಾಷೆಯಲ್ಲಿ ನೋಡದಂತೆ ಚಿತ್ರ ರಂಗದ ಕೆಲವರು ಯಾಕೆ ಮಾಡುತಿದ್ದಾರೆ!?, ಹಾಗೆ ಡಬ್ಬಿಂಗ್ನಿಂದ ಮುಳುಗಿ ಹೋಗುವಷ್ಟು ‘ಕನ್ನಡ ಚಿತ್ರ ರಂಗ’ ದುರ್ಬಲವಾಗಿಲ್ಲ.೭೫ ವರ್ಷದ ಇತಿಹಾಸವಿರುವ ಚಿತ್ರ ರಂಗದ ಮಾರುಕಟ್ಟೆ ವ್ಯಾಪ್ತಿ ಚಿಕ್ಕದು ಅಂತ ಇನ್ನ ಎಷ್ಟು ದಿನ ಹೆದರ್ತಿರ ಸ್ವಾಮೀ?

Read more »

26
Apr

ಕನ್ನಡದಲ್ಲೇ ಹೇಳೋಣ ಬನ್ನಿ – “ಸತ್ಯಮೇವ ಜಯತೇ”

18
Apr

ಶಾರ್ಟ್ ವೇವ್ ರೇಡಿಯೋ ಪ್ರಸಾರದಲ್ಲಿ ಕನ್ನಡದ ದನಿಯಿಲ್ಲ

-ಸಾತ್ವಿಕ್ ಎನ್ ವಿ

ಕನ್ನಡಿಗನೊಬ್ಬ ತನ್ನ ಕೆಲಸದ ನಿಮಿತ್ತ ಕರ್ನಾಟಕದ ಹೊರಗೆ ಬದುಕಬೇಕಾಗಿ ಬಂದರೆ ಆತನಿಗೆ ಕನ್ನಡ ಆಕಾಶವಾಣಿ ಕೇಳಲು ಸಾಧ್ಯವಿಲ್ಲ. ಕಾರಣ, ಕಿರುತರಂಗಾಂತರ ಅಂದರೆ ಶಾರ್ಟ್‌ವೇವನಲ್ಲಿ ಕನ್ನಡದ ಯಾವುದೇ ಆಕಾಶವಾಣಿ ಕೇಂದ್ರ ಪ್ರಸಾರ ಮಾಡುತ್ತಿಲ್ಲ. ಆದರೆ ಇಂಥ ಪರಿಸ್ಥಿತಿ ಇತರೆ ಭಾಷಿಕರಿಗೆ ಇದೆಯೇ? ಇಲ್ಲ. ಕನ್ನಡವನ್ನು ಬಿಟ್ಟು ಮಿಕ್ಕೆಲ್ಲ ದಕ್ಷಿಣಭಾರತದ ಭಾಷೆಗಳಿಗೂ ಈ ಸೌಲಭ್ಯವಿದೆ.

ಏನಿದು ಕಿರುತರಂಗಾತರದಲ್ಲಿ ರೇಡಿಯೋ ಪ್ರಸಾರ?
ಬಾನುಲಿ ಪ್ರಸಾರದಲ್ಲಿ ಶಾರ್ಟ್ ವೇವ್(SW), ಮೀಡಿಯಂ ವೇವ್(MW) ಮತ್ತು ಫ್ರಿಕ್ವೇನ್ಸಿ ಮೊಡೊಲೇಷನ್ (FM) ಎಂಬ ಮೂರು ರೀತಿಯ ತರಂಗಾತರಗಳನ್ನು ಬಳಸಲಾಗುತ್ತದೆ. ಈಗ ಕರ್ನಾಟಕದ ಆಕಾಶವಾಣಿ ಕೇಂದ್ರಗಳು ಕೇವಲ ಎಂ.ಡಬ್ಲ್ಯೂ ಮತ್ತು ಎಫ್.ಎಂ ಗಳಲ್ಲಿ ಮಾತ್ರ ತಮ್ಮ ಕಾರ್ಯಕ್ರಮಗಳನ್ನು ಪ್ರಸರಿಸುತ್ತಿವೆ. ಆದರೆ ಎಂ.ಡಬ್ಲ್ಯೂ ಮತ್ತು ಎಫ್.ಎಂ ತರಂಗಗಳ ದೊಡ್ಡ ಕೊರತೆ ಎಂದರೆ ಈ ಅಲೆಗಳು ಬಹಳ ದೂರ ಚಲಿಸಲಾರವು. ಆದರೆ ಶಾರ್ಟ್ ವೇವ್ ಹಾಗಲ್ಲ. ಅದರ ಚಲನೆಯ ಶಕ್ತಿ ಖಂಡಾಂತರ ವ್ಯಾಪ್ತಿಯದ್ದು. ಇಂದು ನಾವು ಕೇಳುತ್ತಿರುವ ಬಿಬಿಸಿ, ವಾಯ್ಸ್ ಆಫ್ ಅಮೆರಿಕಾ, ರೇಡಿಯೋ ಸಿಲೋನ್, ಚೈನಾ ರೇಡಿಯೋ ಇಂಟರ್ ನ್ಯಾಷನಲ್ ಇತ್ಯಾದಿಗಳು ಇದೇ ತರಂಗಗಳನ್ನು ಬಳಸಿಕೊಳ್ಳುತ್ತವೆ. ಈ ತರಂಗಗಳನ್ನು ಬಳಸಿ ಪ್ರಪಂಚದ ಯಾವುದೇ ನಿರ್ದಿಷ್ಟ ಭಾಗಕ್ಕೆ ಪ್ರಸಾರವನ್ನು ತಲುಪಿಸಲು ಸಾಧ್ಯ. ಇದನ್ನು ಬೀಮಿಂಗ್ ಎಂದು ಕರೆಯಲಾಗುತ್ತದೆ. Read more »

12
Apr

ಕನ್ನಡದಲ್ಲೂ ಮಾಹಿತಿ ಮುದ್ರಿತವಾಗಲಿ

- ರವಿ ಸಾವ್ಕರ್

ಇತ್ತೀಚಿಗೆ ಪೆಪ್ಸಿಕೋ ರವರ ಲೇಸ್ , ಮ್ಯಾಕ್ ಡೋನಾಲ್ದ್ ರವರ ಬರ್ಗರ್ ಗಳಲ್ಲಿ ಆರೋಗ್ಯಕ್ಕೆ ಹಾನಿಕಾರವಾಗುವಂಥಹ ಕೊಬ್ಬಿನಂಶ ಹೆಚ್ಚಾಗಿ ಇದೆ ಅನ್ನೋದರ ಬಗ್ಗೆ ಸುದ್ದಿ ಪ್ರಚಾರದಲ್ಲಿದೆ. ತಯಾರಕರು ತಮ್ಮ ಉತ್ಪಾದನೆಗಳಲ್ಲಿ ಯಾವ ಸಾಮಗ್ರಿ ಎಷ್ಟು ಪ್ರಮಾಣದಲ್ಲಿದೆ ಎಂದು ಗ್ರಾಹಕನಿಗೆ ಸರಿಯಾಗಿ ತಿಳಿಸುವುದು ಅವರ ಕರ್ತವ್ಯ. ಹಾಗೆಯೇ ಅದನ್ನು ಕೇಳಿ ಪಡೆಯುವುದೂ ಸಹ ಒಬ್ಬ ಗ್ರಾಹಕನಹಕ್ಕು ಆಗಿದೆ. Centre for Science and Environment (CSE) ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ.

ಆದರೆ ಇಂಥಹ ಚರ್ಚೆಗಳಲ್ಲಿ ಈ ಮಾಹಿತಿಯನ್ನು ಜನರು ಅರಿಯಬೇಕಾದರೆ ಅದು ಜನರ ಭಾಷೆಯಲ್ಲಿ ಇರಬೇಕು ಅನ್ನೋ ಅತಿ ಮುಖ್ಯವಾದ ಅಂಶವನ್ನು ಮರೆತ ಹಾಗಿದೆ. ಒಂದು ವರದಿಯ ಪ್ರಕಾರ ನಮ್ಮ ದೇಶದಲ್ಲಿ ೭% ಜನರಿಗೆ ಮಾತ್ರ ಇಂಗ್ಲಿಷ್ ನಲ್ಲಿ ಇರುವುದನ್ನು ಅರ್ಥಮಾಡಿಕೊಳ್ಳಬಲ್ಲರು. ಮಿಕ್ಕ ೯೩% ಜನರಿಗೆ ಇಂಗ್ಲಿಷ್ ನಲ್ಲಿ ಮಾಹಿತಿ ತಲುಪಿಸಲಾಗದ ಪರಿಸ್ಥಿತಿ ಇರುವಾಗ , ಕೇವಲ ಇಂಗ್ಲಿಷ್ನಲ್ಲಿ ಮಾಹಿತಿಯನ್ನು ನಮೂದಿಸಿದರೆ ನಮ್ಮ ಜನರಿಗೆ ಹೇಗೆ ಅರ್ಥವಾದೀತು? ಒಬ್ಬ ಕನ್ನಡ ಮಾತ್ರ ಬರುವ ಗ್ರಾಹಕನೂ ಸಹ ಅಷ್ಟೇ ದುಡ್ಡು ಕೊಟ್ಟು ಖರೀದಿ ಮಾಡಿರುತ್ತಾನೆ. ಅವನಿಗೆ ಆ ಸಾಮಗ್ರಿಯ ಬಗೆಗೆ ಮಾಹಿತಿಯನ್ನು ತಿಳಿಸದಿರುವುದು ಯಾವ ನ್ಯಾಯ ?

Read more »

2
Apr

‘ಕೋಮುವಾದ ಮತ್ತು ಮಹಿಳೆ’ ಎಂಬ ಲೇಖನಕ್ಕೊಂದು ಪ್ರತಿಕ್ರಿಯೆ

- ಡಾ.ಜಿ. ಭಾಸ್ಕರ ಮಯ್ಯ

ಸಬಿಹಾರವರ ಮಹಿಳೆ ಮತ್ತು ಕೋಮುವಾದ ಇಂದು ವಿವಾದಕ್ಕೆ ಒಳಗಾಗಿರುವುದು ಜನರ ಕೋಮುವಾದೀಕರಣದ ಪ್ರಕ್ರಿಯೆ ಎಷ್ಟೊಂದು ಉಲ್ಬಣಿಸಿದೆ ಎನ್ನುವುದಕ್ಕೆ ಸಾಕ್ಷಿ. ಸಬಿಹಾರವರ ಲೇಖನದ ಯಾವ ಒಂದು ವಾಕ್ಯವೂ ಅಸತ್ಯದಿಂದ ಕೂಡಿಲ್ಲ. ಪೂರ್ವಾಗ್ರಹಪೀಡಿತವಾಗಿಲ್ಲ. ಅದು ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ. ಹಾಗೆ ನೋಡಿದರೆ, ಗುಜರಾತಿನ ಬಗ್ಗೆ ಲೇಖಕಿ ಹೇಳಿರುವುದು ಕಡಿಮೆಯೆ. ಅಲ್ಲಿಯ ನರಮೇಧ ಮತ್ತು ಮಹಿಳೆಯರ ಮೇಲಿನ ಭಯಾನಕ ಅತ್ಯಾಚಾರ ಮಧ್ಯಯುಗದ ಯಾವುದೇ ಧರ್ಮಯುದ್ಧ, ಕ್ರುಸೇಡ್ ಮತ್ತು ಜಿಹಾದ್‌ಗೆ ಕಡಿಮೆಯಿಲ್ಲ. ಮನುಷ್ಯತ್ವದಲ್ಲಿ ನಂಬಿಕೆ ಇರುವವರಿಗೆ ಆಕ್ರೋಶ ಉಂಟಾಗುವಂತಹ ಸನ್ನಿವೇಶದ ಚಿತ್ರಣವನ್ನು ಲೇಖಕಿ ಅತ್ಯಂತ ಸಹನೆಯಿಂದ ಉಲ್ಲೇಖಿಸುತ್ತಾರೆ. ಕೋಮುವಾದದ ವಿವಿಧ ಮುಖಗಳನ್ನು ಮತ್ತು ಆಯಾಮಗಳನ್ನು ಚರ್ಚಿಸುತ್ತಾರೆ. ಆದರೆ, ಲೇಖನದ ಆರಂಭದಲ್ಲಿ ಫಣಿರಾಜರವರು ಕೋಮುವಾದದ ಕುರಿತು ಹೇಳಿದ ಮಾತಿನ ಒಂದು ಉಲ್ಲೇಖವಿದೆ. ಅದು …ಬಹುಸಂಖ್ಯಾತರ ಸಂಸ್ಕೃತಿಗೆ ಅಲ್ಪಸಂಖ್ಯಾತರು ಹೊರಗಿನವರು ಎಂದು ವಾದಿಸಿ ದ್ವೇಷ ತಿರಸ್ಕಾರಗಳನ್ನು ಬೆಳೆಸುವುದೇ ಕೋಮುವಾದ – ಕೋಮೂವಾದಕ್ಕೆ ಇಂತಹ ಸರಳ ವ್ಯಾಖ್ಯೆ ಸರಿಯಲ್ಲ. ಫಣಿರಾಜ್ ಮತ್ತು ಜಿ. ರಾಜಶೇಖರ್ ಕೋಮುವಾದವನ್ನು ವಿರೋಧಿಸುವಲ್ಲಿ ನಿಷ್ಪಕ್ಷಪಾತಿಗಳಾಗಿರದೆ, ಒಂದು ಕೋಮಿನ ಕೋಮುವಾದದ ಕುರಿತು ಮೌನವಹಿಸುವುದು ಅಥವಾ ಅಂತಹ ಸಂಸ್ಥೆಗಳೊಂದಿಗೆ ಸಂಬಂಧವನ್ನಿರಿಸಿಕೊಳ್ಳುವುದು ನಿಜಕ್ಕೂ ಆಕ್ಷೇಪಾರ್ಹ. ಆದರೆ ಸಬಿಹಾರವರ ಬರವಣಿಗೆ ಈ ನಿಟ್ಟಿನಲ್ಲಿ ದೋಷಮುಕ್ತವಾಗಿದೆ. ಅವರು ಪಾಕಿಸ್ತಾನ, ಬಾಂಗ್ಲಾ ಮತ್ತು ತಸ್ಲೀಮಾ ನಜರೀನ್ ಅವರನ್ನು ಉಲ್ಲೇಖಿಸುತ್ತಾ ನೆರೆಯ ದೇಶಗಳಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲಿನ ದೌರ್ಜನ್ಯದ ಕುರಿತೂ ಹೇಳುತ್ತಾರೆ. ಸಬಿಹಾರವರ ಲೇಖನ ಈ ನಿಟ್ಟಿನಲ್ಲಿ ವಾಸ್ತವವಾದೀ, ಮಾನವತಾವಾದೀ ಬರವಣಿಗೆಯೆಂಬುದು ನಿಸ್ಸಂಶಯ.

Read more »

27
Mar

ಕನ್ನಡಮ್ಮನ ಹೆಮ್ಮೆಯ ಪುತ್ರನೂ ಅಣ್ಣಾವರ ಮಗನೂ

- ಜಿ.ವಿ ಜಯಶ್ರೀ

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ,

ಇದು ಎಂಬತ್ತರ ದಶಕದ ಹಾಡು. ತುಂಬಾ ಇಷ್ಟ ಪಟ್ಟು ಈಗಲೋ ಕೇಳುವಂತಹ ಸುಂದರ ಗೀತೆ.ಈ ಚಿತ್ರದಲ್ಲಿ ನಟಿಸಿದ ಪುನೀತ್ ರಾಜ್ ಕುಮಾರ್ ನಟನೆಯಷ್ಟೇ ಮನಸೆಳೆದ ಸಂಗತಿ ಅಂದ್ರೆ ಅವರು ಹಾಡಿದ ಈ ಹಾಡು .
ಮೊದಲಿನಿಂದ ವೀಕ್ಷಕ ದೇವರ ಮನ ಸೆಳೆದ ಕಲಾವಿದ ಪುನೀತ್. ಅವರ ಅಣ್ಣಂದಿರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಖುದ್ದು ಪುನೀತ್ ವಿಷಯದಲ್ಲಿ ತೋರುವ ಅಭಿಮಾನ ಅಪಾರ.

ಈತನ ಬಗ್ಗೆ ತಮಗೆ ತುಂಬಾ ಹೆಮ್ಮೆ ಇದೆ. ಅಪ್ಪಾಜಿಯ ನಂತರ ಬಣ್ಣ ಹಚ್ಚಿದ (ಪೂರ್ಣಿಮಾ ಸಹ ಹಚ್ಚಿದ್ದಾರೆ ) ಪುನೀತ್ ತಮಗೆ ಮಾದರಿ ಎನ್ನುವ ಮಾತು ಹೇಳಿರುವುದು ಅವರು ತಮ್ಮನ ಮೇಲೆ ಇಟ್ಟಿರುವ ಪ್ರೀತಿಯನ್ನು ಎತ್ತಿ ತೋರುತ್ತದೆ.

ಶಿವಣ್ಣ ಜೀ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮ ನಡೆಸಿ ಕೊಟ್ಟಾಗ ಅಪಾರ ಸಂಖ್ಯೆಯ ವೀಕ್ಷಾಕಾಭಿಮಾನ ಹೊಂದಿದ್ದರು.ಆ ಕಾರ್ಯಕ್ರಮದ ಮೂಲಕ  ಹೆಚ್ಚು ಗೊತ್ತಾದರೂ ಶಿವಣ್ಣ. ಕಾರಣ ಇಷ್ಟೇ ಸಿನಿಮಾದಲ್ಲಿ ಗಿಣಿಗೆ ಕಲಿಸಿದ ಪಾಠದಂತೆ   ಡೈಲಾಗ್ ಹೇಳುವ ಶಿವಣ್ಣನಿಗಿಂತ  ತನ್ನ ಹೃದಯದಿಂದ ಮಾತನಾಡಿದ ಶಿವಣ್ಣ ಇಷ್ಟ ಆಗಿತ್ತು.. ಮಾತಲ್ಲಿ ಯಾವುದೇ ರೀತಿಯ ನಾಟಕೀಯತೆ, ಕಲಿತ ಮಾತು ಇರದೇ ಸಾಮಾನ್ಯ ಮನೆಕನ್ನಡ ಮಾತಾಡಿ , ತಮ್ಮ ಸರಳತೆ, ವಿಶೇಷ ವ್ಯಕ್ತಿತ್ವ್ದದಿಂದ ಗೆದ್ದಿದ್ದರು.

Read more »

21
Mar

ನಿಮ್ಮ ಬ್ಲಾಗ್ ಪೂರ್ತಿ ಕನ್ನಡದಲ್ಲಿ

ಆತ್ಮೀಯ ಕನ್ನಡಿಗರೆ,
ಈಗ ನೀವು ನಿಮ್ಮ ಬ್ಲಾಗ್ ಅನ್ನು ಆಂಗ್ಲ ಭಾಷೆಯಲ್ಲಿ ಮಾತ್ರವಲ್ಲದೆ ಪೂರ್ತಿ ಕನ್ನಡದಲ್ಲೇ ನೋಡಬಹುದು. ಈಗ ನಿಮಗೆ ಗೂಗಲ್ ಈ ರೀತಿಯ ಅವಕಾಶವನ್ನು ಕಲ್ಪಿಸಿದೆ.gs->Language and Formatting

ಅಲ್ಲಿ Language ಕಾಲಂನಲ್ಲಿ ಕನ್ನಡ ಭಾಷೆಯನ್ನು ಆರಿಸಿಕೊಳ್ಳಿ.

ನಂತರ Save ಮಾಡಿ

ಗ್ಯಾಡ್ಜೆಟ್ ಗಳು ಬ್ಲಾಗಿಗೆ ಹೊರಗಿನವುಗಳಾಗಿರುವುದರಿಂದ ಅಲ್ಲಿ ನಿಮಗೆ ಕನ್ನಡ ಸಿಗುವುದಿಲ್ಲ.

ಈಗ ನಿಮ್ಮ ಬ್ಲಾಗ್ ಕನ್ನಡದಲ್ಲಿ ತಯಾರಾಗಿರುತ್ತದೆ.

ಕನ್ನಡ ಭಾಷೆಯನ್ನು ಸೇರಿಸಿರುವುದಕ್ಕೆ ನನ್ನ ಕಡೆಯಿಂದ ಗೂಗಲ್ ಗೆ ಒಂದು ಅಭಿನಂದನೆ

ಈ ವಿಷಯವನ್ನು ಎಲ್ಲರೊಂದಿಗೂ ಹಂಚಿಕೊಳ್ಳಿ :)

***************************************************************************

ಚಿತ್ರ ಕೃಪೆ: hackuadi.blogspot.in

Follow

Get every new post delivered to your Inbox.

Join 265 other followers