ಸತ್ಯಮೇವ ಜಯತೇ
- ಚೇತನ್ ಹೊನ್ನವಿಲೆ
ಸತ್ತೇ ಹೋಗದ , ಎ೦ದೂ ಮುಗಿಯದ ಮೇ… ಘಾ ಧಾರಾವಾಹಿಗಳು …, ಬ್ರಾಡ್-ಕಾಸ್ಟ್ ಮಾಡೋದಕ್ಕೆ ಯೋಗ್ಯತೆನೇ ಇಲ್ಲದೇ ಇರೋ.. ಕಿತ್ತೋಗಿರೋ ಕೆಲ ರಿಯಾಲಿಟಿ ಶೋಗಳು, ಅಪ್ಪನ ದುಡ್ಡು ಖರ್ಚು ಮಾಡಲೇಬೇಕ೦ತ ಹುಟ್ಟಿರುವ ಎಡಬಿಡಂಗಿ ಮಕ್ಕಳ ಅಧೋಗತಿ ಸಿನಿಮಾಗಳು. ಸಾಕಪ್ಪಾ ನಿಮ್ಮ ಸಹವಾಸ.
ಸತ್ಯ ಮೇವ ಜಯತೆ ಕಾರ್ಯಕ್ರಮದ ಮೊದಲ ಕ೦ತಿನ ಕಾರ್ಯಕ್ರಮ ನೋಡ್ತಾ ಇದ್ದೆವು(ಕನ್ನಡದಲ್ಲಿ , ಇ೦ಟರ್ನೆಟ್ ನಲ್ಲಿ). ಹೆಣ್ಣು ಮಗುವನ್ನು ಭ್ರೂಣದಲ್ಲಿಯೇ ಕರಗಿಸುವ ಕಟುಕ ಸಮಾಜದ ಕರಾಳತೆಯನ್ನು ೩೬೦ ಡಿಗ್ರಿ ಯಲ್ಲಿ ಹಿಡಿದು ತೋರಿಸುತ್ತಿದ್ದರು. ಕಾರ್ಯಕ್ರಮ ನೋಡ್ತಾ ಇದ್ದವರು ಯಾರೂ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುವ ಧೈರ್ಯ ಮಾಡಲಿಲ್ಲ. ಯಾಕ೦ದ್ರೆ ಎಲ್ಲರ ಕಣ್ಣಲ್ಲೂ ನೀರಿತ್ತು. ಇ೦ತಹ ಸಮಾಜಮುಖಿ ಕಾರ್ಯಕ್ರಮಗಳು ನಮ್ಮವರಿಗೆ ತಲುಪಬೇಕು. ಎಲ್ಲರೂ ಎಚ್ಚೆತ್ತುಕೊಳ್ಳದಿದ್ದರೂ ಪರವಾಗಿಲ್ಲ, ಬದಲಾವಣೆಯ ಗಾಳಿ ನಮ್ಮೂರಿನ ಕಡೆಗೆ ಬೀಸಲಿ.
ನನಗೆ ಅವೆಲ್ಲಾ ಗೊತ್ತಿಲ್ಲಪ್ಪ..?
ಇಷ್ಟು ಅದ್ಭುತವಾಗಿರುವ ಕಾರ್ಯಕ್ರಮವನ್ನು ನಾನು ನಮ್ಮ ಅಪ್ಪ , ಅಮ್ಮ, ಅಜ್ಜಿ, ದೊಡ್ಡಪ್ಪ ಅವರಿಗೆಲ್ಲಾ ತೋರಿಸಬೇಕು. ಡಬ್ಬಿ೦ಗ್ ನ ಸಾಧಕ-ಬಾಧಕ ಗಳು ಏನೇ ಇರಲಿ… ಪ್ಲೀಸ್ ಸತ್ಯ ಮೇವ ಜಯತೆಯ ಕನ್ನಡ ಅವತರಣಿಕೆಯನ್ನು ಟಿವಿ ಯಲ್ಲಿ ಪ್ರಸಾರ ಮಾಡೋದಕ್ಕೆ …. ಅವಕಾಶ ಕೊಟ್ಟು ಬಿಡ್ರಿ. ಪ್ಲೀಸ್
ಇನ್ನು ಇದನ್ನ ಡಬ್ಬಿ೦ಗ್ ಮಾಡಿ ಟಿವಿ ನಲ್ಲಿ ಹಾಕುವುದಕ್ಕೆ ಅಡ್ಡಿ ಬರ್ತಾ ಇರೋ ಕನ್ನಡ ಸಿನಿಮಾ ರ೦ಗದ ಬಗ್ಗೆ ಎರಡು ಮಾತುಗಳನ್ನ ಕಟುವಾಗಿ ಹೇಳಿಬಿಡ್ತೇನೆ.
ಇವರು ತೆಗೆಯುವ ಸಿನಿಮಾಗಳಲ್ಲಿ ಕನ್ನಡತನ, ಸ೦ಸ್ಕೃತಿ ಎಲ್ಲಿರುತ್ತೆ ಪಿ೦ಡ. ಅಷ್ಟಕ್ಕೂ ಕನ್ನಡಿಗರ ಬೇಕು-ಬೇಡಗಳನ್ನು ನಿರ್ಧರಿಸಲು ಇವರು ಯಾರು?ಇವರೆಲ್ಲಾ ಭಾಷೆಯನ್ನ ಗುತ್ತಿಗೆಗೆ ತಗೊ೦ಡಿದಾರಾ ..? ಎಲ್ಲರ೦ತೆ ಇವರೂ ಕೂಡ ತಮ್ಮ ಜೋಳಿಗೆ ತು೦ಬಿಸಿಕೊಳ್ಳುವುದಕ್ಕೇ ಸಿನಿಮಾ ಮಾಡೋದು. ನೇಮು-ಫೇಮು ಕಾಸಿಗ೦ತ ಇವರು ಸಿನಿಮಾ ಮಾಡ್ತಾರೆ. ಮನರ೦ಜನೆಗೆ ಅ೦ತ ನಾವು ದುಡ್ಡು ಕೊಟ್ಟು ಸಿನಿಮಾ ನೋಡ್ತೀವಿ. ಇಲ್ಲಿ ಒಬ್ಬರಿಗೊಬ್ಬರು ಸವೆದುಕೊಳ್ಳುತ್ತಿರುವುದೇನು.. ಸ೦ಸ್ಕೃತಿ, ಭಾಷೆಯನ್ನ ಯಾಕಿವರು ಮಧ್ಯ ಹಿಡ್ಕ್೦ಡ್ ಬರ್ತಾರೆ ಗೊತ್ತಾಗ್ತಿಲ್ಲ. Read more 
ಡಬ್ಬಿಂಗ್ ಆದರೇನು ಶಿವ, ನಮಗೆ ಬೇಕಾಗಿರುವುದು ಎಂಟರ್ಟೇನ್ಮೆಂಟ್… ಎಂಟರ್ಟೇನ್ಮೆಂಟ್…
-ಶ್ರೀಧರ್ ಜಿ ಬನವಾಸಿ
ಕನ್ನಡಿಗರಿಗೆ ಇದಕ್ಕಿಂತ ದೊಡ್ಡ ದೌಭಾರ್ಗ ಇನ್ನೊಂದಿಲ್ಲ. ಬಿಬಿಸಿ, ಡಿಸ್ಕವರಿ, ನ್ಯಾಷನಲ್ ಜಿಯೋಗ್ರಾಫಿಕ್ನಂತಹ ಜಗತ್ತೇ ಮೆಚ್ಚಿದ ಚಾನೆಲ್ಗಳನ್ನು ಕರ್ನಾಟಕದಲ್ಲಿದ್ದುಕೊಂಡು ತಮಿಳು, ತೆಲಗು, ಹಿಂದಿ ಭಾಷೆಯಲ್ಲಿ ನೋಡಬೇಕಾದ ಪರಿಸ್ಥಿತಿ ಮಾತ್ರ ಆಗಿರುವುದು ಕನ್ನಡದದವರ ದುರಂತ. ಈ ದುರಂತದ ಅಧ್ಯಾಯಕ್ಕೆ ಕಾರಣವಾಗಿರುವವರು ಕೂಡ ನಮ್ಮ ಕನ್ನಡಿಗರೇ. ಡಬ್ಬಿಂಗ್ ಸಂಸ್ಕೃತಿ ನಮ್ಮ ಕನ್ನಡಕ್ಕಲ್ಲ ಅಂತ ಹೇಳುವ ಕನ್ನಡ ಚಿತ್ರರಂಗದ ಒಂದು ಪ್ರಭಾವಿ ವರ್ಗ ಒಂದು ರೀತಿಯಲ್ಲಿ ತಮ್ಮ ತಮ್ಮ ವೈಯಕ್ತಿಕ ಸ್ವಾರ್ಥಕ್ಕನುಸಾರಕ್ಕಾಗಿ ಡಬ್ಬಿಂಗ್ ಬೇಡ ಅನ್ನುವ ಅಸ್ತ್ರವನ್ನು ಇಂದಿಗೂ ತಮ್ಮಲ್ಲಿ ಇಟ್ಟುಕೊಂಡು ಕನ್ನಡ ಚಿತ್ರೋದ್ಯಮದ ಹಾಗೂ ಮನರಂಜನಾ ಟೀವಿ ಉದ್ಯಮದ ಬೆಳವಣಿಗೆ ಕುಂಠಿತವಾಗಲು ಕಾರಣವಾಗಿದ್ದಾರೆ. ಅಷ್ಟಕ್ಕೂ ಡಬ್ಬಿಂಗ್ ಕನ್ನಡ ಸಂಸ್ಕೃತಿಯಲ್ಲ ಅಂತ ಹೇಳುವವರಿಗೆ, ಮೊದಲು ನಮ್ಮ ಕನ್ನಡ ಸಂಸ್ಕೃತಿ ಏನು ಎಂಬುವನ್ನು ದಯವಿಟ್ಟು ಬಿಡಿಸಿಹೇಳಬೇಕಾಗಿದೆ. ಕನ್ನಡ ಮಣ್ಣಿನ ಸೊಗಡು ಅಂತ ಹೇಳಿಕೊಂಡು ರಿಮೇಕ್ ಚಿತ್ರಗಳು ಹಾಗೂ ರಿಮೇಕ್ ಧಾರಾವಾಹಿಗಳ ಮೇಲೆ ನೂರಾರು ಕೋಟಿ ರೂಪಾಯಿ ಹರಿದು ಹಾಳಾಗಿ ಕನ್ನಡ ಉದ್ಯಮಶೀಲದ ಬುಡಕ್ಕೆ ದೊಡ್ಡ ಪೆಟ್ಟು ಬೀಳುತ್ತಿರುವುದು, ಇದರ ಜೊತೆಗೆ ಆಗುತ್ತಿರುವ ಅನ್ಯ ಭಾಷೆಯ ಸಂಸ್ಕೃತಿಯ ಹೇರಿಕೆ ಮಾತ್ರ ಡಬ್ಬಿಂಗ್ ವಿರೋಧಿಸುತ್ತಿರವವರಿಗೆ ಕಾಣುತ್ತಿಲ್ಲ.
ಡಬ್ಬಿಂಗ್ ಬಗ್ಗೆ ಈ ಹಿಂದೆ ಅಂದರೆ ಸುಮಾರು ನಾಲ್ಕು ದಶಕಗಳ ಹಿಂದೆ ದೊಡ್ಡ ಹೋರಾಟವಾಗಿದ್ದು ನಿಜಕ್ಕೂ ಒಪ್ಪುವಂತದ್ದು. ಆಗಿನ ಸಮಯದಲ್ಲಿ ಡಬ್ಬಿಂಗ್ ವಿರುದ್ಧ ಹೋರಾಟ ಆಗಿಲ್ಲದಿದ್ದರೆ ಈಗಿನ ನಮ್ಮ ಕನ್ನಡ ಚಿತ್ರರಂಗವನ್ನು ನಾವು ಕಲ್ಪಿಸಿಕೊಳ್ಳುವುದು ಕೂಡ ಕಷ್ಟ ಸಾಧ್ಯ. ವರನಟ ಡಾ.ರಾಜ್ಕುಮಾರ್ ಸಾರಥ್ಯದಲ್ಲಿ ಕನ್ನಡ ಚಿತ್ರರಂಗ ಹಾಗೂ ಅನಕೃ ಅವರ ನೇತೃತ್ವದಲ್ಲಿ ಸಾಹಿತ್ಯವಲಯ ಒಟ್ಟಾಗಿ ಅಂದು ದೊಡ್ಡ ಹೋರಾಟ ಮಾಡಿದ್ದವು. ಆಗಿನ ಡಬ್ಬಿಂಗ್ ಹೋರಾಟಕ್ಕೆ ನೂರಕ್ಕೆ ನೂರರಷ್ಟು ಅರ್ಥ ಇತ್ತು. ಆಗಿನ ಪರಿಸ್ಥಿತಿ ಕೂಡ ಹೋರಾಟಕ್ಕೆ ಪೂರಕವಾಗಿತ್ತು. ಇದಕ್ಕೆ ನೀಡುವ ಕಾರಣಗಳನ್ನು ಕೂಡ ಪಟ್ಟಿಮಾಡುವುದಾದರೆ, ಅಂದು ಸಿನಿಮಾ ಹಾಗೂ ಕನ್ನಡ ಸಾಹಿತ್ಯ ಒಂದೇ ನಾಣ್ಯದ ಮುಖಗಳಾಗಿದ್ದವು. ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳು ಸಿನಿಮಾ ಉದ್ಯಮದಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡಿದ್ದರು. ಹಾಗಾಗಿಯೇ ಅಂದಿನ ಕನ್ನಡ ಸಿನಿಮಾಗಳಲ್ಲಿ ದ.ರಾ.ಬೇಂದ್ರೆ, ಶಿವರಾಮಕಾರಂತ, ಕುವೆಂಪು, ತ್ರಿವೇಣಿ, ಅನಕೃ, ತರಾಸು, ಎಸ್.ಎಲ್.ಭೈರಪ್ಪ, ಯು.ಆರ್.ಅನಂತಮೂರ್ತಿ, ಎಂ.ಕೆ.ಇಂದಿರಾ, ಆಲನಳ್ಳಿ ಕೃಷ್ಣ, ಪಿ.ಲಂಕೇಶ್, ರಾಮರಾಯರು, ಗಿರಡ್ಡಿ ಗೋವಿಂದರಾಜು ಇನ್ನು ಹಲವಾರು ಸಾಹಿತಿಗಳ ಕೃತಿಗಳು ಕನ್ನಡ ಸಿನಿಮಾ ಉದ್ಯಮಕ್ಕೆ ಉಸಿರಾಗಿದ್ದವು. ಅಕಸ್ಮಾತ್ ಬೇರೆ ಭಾಷೆಯ ಸಿನಿಮಾಗಳನ್ನು ಡಬ್ಬಿಂಗ್ ಮಾಡಿ ಬಿಡುವುದರಿಂದ ಮೂಲ ಕನ್ನಡ ಕೃತಿಗಳನ್ನು ಬಳಸಿಕೊಳ್ಳಲು ಆಗುವ ತೊಡಕನ್ನು ಮನಗಂಡು ಡಬ್ಬಿಂಗ್ಗೆ ಸಾಹಿತ್ಯವಲಯದ ಕಡೆಯಿಂದ ಬೆಂಬಲ ಸಿಕ್ಕಿತ್ತು. ಕನ್ನಡ ಚಿತ್ರರಂಗ ಆಗಿನ್ನೂ ಮದ್ರಾಸ್ ಪ್ರಾಂತ್ಯದಲ್ಲಿ ನೆಲೆಯೂರಿದ್ದರಿಂದ ಕನ್ನಡ ಸಿನಿಮಾಗಳ ನಿರ್ಮಾಣವೇ ದೊಡ್ಡ ಸವಾಲಾಗಿತ್ತು. ವರ್ಷಕ್ಕೆ 40-50 ಕನ್ನಡ ಸಿನಿಮಾಗಳು ನಿರ್ಮಾಣವಾದರೆ ಹೆಚ್ಚಾಗಿತ್ತು, ನಿರ್ಮಾಣವಾದ ಈ ಅಷ್ಟೂ ಸಿನಿಮಾಗಳಲ್ಲಿ ಹೆಚ್ಚಿನವರು ಪರಭಾಷಾ ತಂತ್ರಜ್ಞರು, ನಿರ್ಮಾಪಕ, ನಿರ್ದೇಶಕರಿಗೇನೆ ಹೆಚ್ಚೆಚ್ಚು ಕೆಲಸ ಸಿಗುತ್ತಿತ್ತು. ತಂತ್ರಜ್ಞರಿಗೆ ಅಗಾಧ ಬೆಲೆ ಇದ್ದ ಸಂದರ್ಭದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಸಿನಿಮಾ ತಂತ್ರಗಾರಿಕೆ ಹಾಗೂ ನೈಪುಣ್ಯತೆಯ ವಿಷಯ ಬಂದಾಗ ಕನ್ನಡಿಗರು ಅವಕಾಶ ವಂಚಿತರಾಗಿದ್ದರು. ಅಂದು ಕರ್ನಾಟಕದಲ್ಲಿ ಸಿನಿಮಾಭಾಷೆಯನ್ನು ಕಲಿಸುವಂತಹ ತರಬೇತಿ ಸಂಸ್ಥೆಗಳು, ಸ್ಟುಡಿಯೋಗಳು ಯಾವುವು ಇಲ್ಲಿರಲಿಲ್ಲ.
ಇಂತಹ ಸಂದರ್ಭದಲ್ಲಿ ಕನ್ನಡ ಸಿನಿಮಾ ಉದ್ಯಮವೇ ಪರಭಾಷಾದವರ ಹಿಡಿತಕ್ಕೆ ಬಂದು, ಬೇರೆ ಭಾಷೆಯ ಸೂಪರ್ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ಬಿಡುವಂತಹ ಪರಿಸ್ಥಿತಿ ಬಂದ ಸಂದರ್ಭದಲ್ಲಿ ಕನ್ನಡ ಕಲಾವಿದರು ಈ ಬಂಧನ ಹಾಗೂ ತಮ್ಮ ಅಸ್ತ್ತಿತ್ವವನ್ನು ಉಳಿಸಿಕೊಳ್ಳಲೇಬೇಕಾದ ಪರಿಸ್ಥಿತಿ ಅಂದಿತ್ತು. ಇದೆಲ್ಲಾ ಡಬ್ಬಿಂಗ್ ಹೋರಾಟಕ್ಕೆ ಅಂದು ದೊಡ್ಡ ಕಾರಣವಾಗಿತ್ತು. ಆದರೆ ಇಂದು ನಮ್ಮ ಕನ್ನಡ ಚಿತ್ರರಂಗ ಆ ತರಹದ ಪರಿಸ್ಥಿತಿಯನ್ನು ಎದುರಿಸುತ್ತಿದೆಯೇ? ಕನ್ನಡ ಚಿತ್ರರಂಗದಲ್ಲಿ ಇಂದು ವರ್ಷಕ್ಕೆ ನೂರಕ್ಕೂ ಹೆಚ್ಚು ಸಿನಿಮಾಗಳು ನಿರ್ಮಾಣವಾಗುತ್ತಿವೆ. ಇಂದು ತಾಂತ್ರ್ರಿಕವಾಗಿ ಬೇರೆ ಭಾಷೆಯವರಷ್ಟೇ ನಾವು ಮುಂದುವರೆದಿದ್ದೇವೆ. ಸ್ವಂತ ಸ್ಟುಡಿಯೋಗಳಿವೆ, ವರ್ಷಕ್ಕೆ 400 ರಿಂದ 500 ಕೋಟಿ ರೂಪಾಯಿಗಳು ಕನ್ನಡ ಚಿತ್ರರಂಗದಲ್ಲಿ ಒಳ ಹಾಗೂ ಹೊರಹರಿವು ಆಗುತ್ತಿದೆ. ಇದೆಲ್ಲಾ ಕನ್ನಡ ಚಿತ್ರರಂಗದ ಬೆಳವಣಿಗೆಯನ್ನು ಎತ್ತಿಹಿಡಿಯುತ್ತದೆ. ಬೇರೆ ಭಾಷೆಯಲ್ಲೂ ಇದೇ ಪರಿಸ್ಥಿತಿ ಇದೆ. ಅವರೆಲ್ಲ ಡಬ್ಬಿಂಗ್ ಉದ್ಯಮವನ್ನು ಒಪ್ಪಿಕೊಂಡು ಬದುಕುತ್ತಿಲ್ಲವೇ?
ಡಬ್ಬಿಂಗ್ ಎಂಬ ರುಚಿಗೆಟ್ಟ ದಿಢೀರ್ ಅಡುಗೆ ಏಕೆ?
- ರೂಪ ರಾವ್
ಇತ್ತೀಚಿಗೆ ಡಬ್ಬಿಂಗ್ ಬೇಕು ಬೇಡ ಅನ್ನುವ ಹುಯಿಲು ಮತ್ತೆ ಕಾಣ್ತಿದೆ. ರಾಕೇಶ್ ಶೆಟ್ಟಿಯವರ ಲೇಖನ ಓದಿದ ಮೇಲೆ ಇದರ ಬಗ್ಗೆ ನನ್ನದೊಂದಿಷ್ಟು ಅನಿಸಿಕೆ.
ಸ್ವಾಮಿ ಡಬ್ಬಿಂಗ್ ಬೇಡ ಅನ್ನೋದು ಹಳೆಯ ರಾಗವಿರಬಹುದು. ಆದರೆ ಕಾರಣ ಮಾತ್ರ ನಿಚ್ಚಳ… ಅದು ಕನ್ನಡದ ಕಲಾವಿದರಿಗೆ ಆಗೋ ಅನ್ಯಾಯ ಅಷ್ಟೆ. ಅದು ಯಾವತ್ತಿಗೂ ಸಲ್ಲುವ ಕಾರಣ. ಚಿತ್ರರಂಗವನ್ನೇ ನಂಬಿಕೊಂಡು ನಿಂತ ಅಸಂಖ್ಯಾತ ಕಲಾವಿದರಿಗೆ. ನಾಯಕ ,ನಾಯಕಿ ಪಾತ್ರದಿಂದ ಹಿಡಿದು ಪೋಷಕ ಪಾತ್ರಧಾರಿಗಳು, ಛಾಯಾಗ್ರಾಹಕರು, ನಿರ್ದೇಶಕರು,ನೂರಾರು ಜನ ನೇರವಾಗಿ ಇಲ್ಲವೇ ಪರೋಕ್ಷವಾಗಿ ಒಂದು ಚಿತ್ರದ ಮೇಲೆ ಅವಲಂಬಿತರಾಗಿರುತ್ತಾರೆ.. ಅಷ್ಟೂ ಜನರ ಹೊಟ್ಟೆಯ ಮೇಲೆ ಹೊಡೆಯುವ ಹುನ್ನಾರವಿದು.
ರಿಮೇಕ್ ಚಿತ್ರಗಳ ಆರ್ಭಟಕ್ಕೆ ನಿರ್ದೇಶಕರ ಸೃಜನಾತ್ಮಕತೆ ಈಗಾಗಲೇ ಕಡಿಮೆಯಾಗಿದೆ.ಒಂದು ವೇಳೆ ಡಬ್ಬಿಂಗ್ ನಿಷೇಧ ತೆರವು ಗೊಳಿಸಿದರೆ,ಕನ್ನಡದಲ್ಲಿ ನಿರ್ದೇಶಕ, ಕತೆಗಾರ, ಸತ್ತಂತೆ…..! ಉಪೇಂದ್ರ, ಸೂರಿ, ಶಶಾಂಕ್, ಚಂದ್ರು,ಯೋಗರಾಜ್ ಭಟ್ ರವರಂತೆ ಆಗಬೇಕೆನ್ನುವ ಯುವ ನಿರ್ದೇಶಕರ ಗತಿ ?
ಮತ್ತೆ ಯಾವುದೋ ಪ್ರಾದೇಶಿಕತೆಗೆ ಹೊಂದುವ ಅಲ್ಲಿನ ವಾತಾವರಣಕ್ಕೆ ನಿರ್ಮಿಸಲಾಗಿರುವ ಚಿತ್ರವೊಂದನ್ನ ಹಾಗೆಯೇ ಡಬ್ಬಿಂಗ್ ಮಾಡಿದಲ್ಲಿ ಅದನ್ನು ಕೂತು ನೋಡುವ ಕರ್ಮ ನಮ್ಮದಾಗುತ್ತದೆ.ಪಾತ್ರದ ತುಟಿಯ ಚಲನೆ ಒಂದಾದರೆ. ಹಿನ್ನಲೆ ದ್ವನಿಯ ಮಾತು ಒಂದಾಗಿರುತ್ತದೆ. ಅದಕ್ಕೂ ಇದಕ್ಕೂ ಜೋಡಿಸಿ ನೋಡುವ ದರ್ದು ನಮಗೆ ಬೇಕಾ?
Read more 
’ಸತ್ಯ ಮೇವ ಜಯತೇ’ ಅನ್ನಲು ಕನ್ನಡಿಗರು ಅಪ್ಪಣೆ ಪಡೆಯಬೇಕಾ?
- ರಾಕೇಶ್ ಶೆಟ್ಟಿ
ಕಳೆದ ವರ್ಷ ‘ಕನ್ನಡ ಚಲನ ಚಿತ್ರ ಅಕಾಡೆಮಿ’ಯು ಬಿಡುಗಡೆ ಮಾಡಿದ್ದ ವರದಿ ಡಬ್ಬಿಂಗ್ ಪರವಾಗಿತ್ತು.ಆ ವರದಿ ಬಿಡುಗಡೆಯಾದ ತಕ್ಷಣ ಚಿತ್ರರಂಗದ ಬಹುತೇಕ ಮಂದಿ ನಾಗಾಭರಣರ ಮೇಲೆ ಮುಗಿಬಿದ್ದರು.ಕಡೆಗೆ ಅವ್ರು ವರದಿಯನ್ನ ಹಿಂಪಡೆದರು.ಇಲ್ಲಿ ನಷ್ಟ ಆಗಿದ್ದು ಯಾರಿಗೆ? ಕನ್ನಡ ಚಿತ್ರ ರಂಗಕ್ಕಾ? ಅಲ್ಲ … ಕನ್ನಡ ಪ್ರೇಕ್ಷಕನಿಗೆ.
ಇಷ್ಟಕ್ಕೂ, ಡಬ್ಬಿಂಗ್ ಬೇಕೋ ಬೇಡವೋ ಅಂತ ನಿರ್ಧರಿಸಬೇಕಾದವನು “ಕನ್ನಡ ಪ್ರೇಕ್ಷಕನೋ?” ಇಲ್ಲ “ಕನ್ನಡ ಚಿತ್ರ ರಂಗವೋ?”
ಡಬ್ಬಿಂಗ್ ಯಾಕೆ ಬೇಡ ಅಂದ್ರೆ, ಅದರಿಂದ ಕನ್ನಡದ ಮಕ್ಕಳಿಗೆ ಕೆಲಸವಿರೋದಿಲ್ಲ ಅಂತ ಹಳೆ ಕತೆ ಹೇಳ್ತಾ ಇದ್ದಾರೆ.ಈಗ ಬರ್ತಾ ಇರೋ ಅದಿನ್ನೆಷ್ಟು ಚಿತ್ರಗಳಲ್ಲಿ ಕನ್ನಡದ ಕಲಾವಿದರು,ತಂತ್ರಜ್ಞರು,ನಟಿಯರು,ಪೋಷಕ ನಟರು,ಖಳನಟರು,ಸಂಗೀತ ನಿರ್ದೇಶಕರು,ಗಾಯಕ-ಗಾಯಕಿಯರಿಗೆ ಕೆಲ್ಸ ಇದೆ?,ಎಲ್ಲದಕ್ಕೂ ಬೇರೆ ಭಾಷೆಯವರೇ ಬೇಕು.ಆಗ ಮಾತ್ರ ಯಾರು ಕನ್ನಡ ಮಕ್ಕಳಿಗೆ ಅನ್ಯಾಯವಾಗ್ತಾ ಇದೆ ಅಂತ ಉಸಿರೆತ್ತುವುದಿಲ್ಲ. ಭಾಷೆಯ ಉಚ್ಚಾರಣೆ ಬರದೆ ಇದ್ರೂ ನಮಗೆ ಬಾಲಿವುಡ್ ಗಾಯಕರು ಬಂದು ಉಸಿರು ಕಟ್ಟಿ ಹಾಡ್ಬೇಕು,ಬಾಯಿ ಅಲ್ಲಾಡಿಸಲು ಬರದ ಖಳ ನಟರು ಅಲ್ಲಿಂದಲೇ ಬರಬೇಕು.ಒಟ್ಟಿನಲ್ಲಿ ಬೇರೆ ಕಡೆಯಿಂದ ಜನ ಆಮದಾದಷ್ಟು ಚಿತ್ರ ಅದ್ದೂರಿ ಅನ್ನೋ ಭ್ರಮೆ! ಈಗಲೂ ಕನ್ನಡದ ಮಕ್ಕಳಿಗೆ ಆಗುತ್ತಿರುವುದು ಅನ್ಯಾಯವೇ ಅಲ್ಲವೆ?
ಇಷ್ಟಕ್ಕೂ ಡಬ್ಬಿಂಗ್ಗೆ ಅವಕಾಶ ಕೊಟ್ರೆ ಎಲ್ರೂ ಅದೇ ಮಾಡ್ತಾರೆ ಅನ್ನೋ ಅತಂಕವಿದ್ದರೆ,ಅದಕ್ಕಾಗಿ ಕೆಲ ನೀತಿ ನಿಯಮಗಳನ್ನ ಮಾಡಿಕೊಳ್ಳಬಹುದು. ಡಬ್ಬಿಂಗ್ ಮಾಡುವ ಹಕ್ಕನ್ನ ಮುಕ್ತವಾಗಿಡದೆ ‘ವಾಣಿಜ್ಯ ಮಂಡಳಿ’ ಯೇ ಆಯ್ದ ಚಿತ್ರಗಳನ್ನ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಬಹುದು.ಹಾಗೆ ಡಬ್ಬಿಂಗ್ ಮಾಡಿದ ಸಿನೆಮಾಗಳಲ್ಲಿ ನಮ್ಮ ನೇಟಿವಿಟಿ ಇಲ್ಲ ಅಂದ್ರೆ ಅವು ಗೆಲ್ಲೋದು ಅಷ್ಟರಲ್ಲೇ ಇದೆ,ಅದರಿಂದ ಯಾವ ಅಪಾಯವು ಇಲ್ಲ. ವಿಷಯ ಹೀಗಿರುವಾಗ ಇನ್ನು ಆಗಿನ ಕಾಲದ ಕತೆಯನ್ನೇ ಹೇಳಿ ಕನ್ನಡ ಪ್ರೇಕ್ಷಕರಿಗೆ ಒಳ್ಳೊಳ್ಳೆ ಚಿತ್ರವನ್ನ ನಮ್ಮ ಭಾಷೆಯಲ್ಲಿ ನೋಡದಂತೆ ಚಿತ್ರ ರಂಗದ ಕೆಲವರು ಯಾಕೆ ಮಾಡುತಿದ್ದಾರೆ!?, ಹಾಗೆ ಡಬ್ಬಿಂಗ್ನಿಂದ ಮುಳುಗಿ ಹೋಗುವಷ್ಟು ‘ಕನ್ನಡ ಚಿತ್ರ ರಂಗ’ ದುರ್ಬಲವಾಗಿಲ್ಲ.೭೫ ವರ್ಷದ ಇತಿಹಾಸವಿರುವ ಚಿತ್ರ ರಂಗದ ಮಾರುಕಟ್ಟೆ ವ್ಯಾಪ್ತಿ ಚಿಕ್ಕದು ಅಂತ ಇನ್ನ ಎಷ್ಟು ದಿನ ಹೆದರ್ತಿರ ಸ್ವಾಮೀ?




