ಇನ್ನೊಂದು ಸಮರಕ್ಕೆ ಸಿದ್ಧರಾಗಿ…
-ಸಂಪತ್ ಕುಮಾರ್
ಅಣ್ಣ ಹಜಾರೆಯವರ ಉಪವಾಸವೇನೋ ಮುಗಿಯಿತು. ರಂಗೋಲೆಯ ಕೆಳಗೆ ನುಸುಳುವ ಬುದ್ಧಿ ಉಳ್ಳ ರಾಜಕಾರಣಿಗಳು ಎಂತಹ ಕಾನೂನು ತಯಾರಿಸುತ್ತರೋ ಕಾದುನೋಡಬೇಕು. ಈಗಾಗಲೇ ಅಸ್ತಿತ್ವದಲ್ಲಿರುವ ಲೋಕಾಯುಕ್ತದಂತಹ ಸಂಸ್ಥೆಯಿಂದ ಆಗುತ್ತಿರುವ ಭ್ರಷ್ಟಾಚಾರಿಗಳ ಬೇಟೆ ಅವರಿಗೆ ಶಿಕ್ಷೆ ಕೊಡಿಸುವಲ್ಲಿ ವಿಫಲವಾಗಿರುವುದು ಸರ್ವವೇದ್ಯ. ಅಲ್ಲದೆ ಇಂತಹ ವಿಧೇಯಕ ಸಂಸತ್ತಿನಲ್ಲಿ ಅಂಗೀಕಾರಗೊಳ್ಳುವುದೂ ಅನುಮಾನ.ಇಂತಹ ಪರಿಸ್ತಿತಿಯಲ್ಲಿ ಇನ್ನೊದು ಹೋರಾಟದ ಅಗತ್ಯ ಇದೆ.
ಭಾರತದ ರಾಜಕಾರಣಿಗಳ ಕೋಟಿ ಕೋಟಿ ಕಪ್ಪು ಹಣ ಸ್ವಿಸ್ ಬ್ಯಾಂಕಿನಲ್ಲಿ ಕೊಳೆಯುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಈ ಹಣವನ್ನು ರಾಷ್ಟ್ರೀಯ ಸಂಪತ್ತೆಂದು ಘೋಷಿಸಿದರೆ ಭಾರತ ತನ್ನೆಲ್ಲ ಸಾಲದಿಂದ ಮುಕ್ತವಾಗಿ, ಹಣ ದುಬ್ಬರ, ಬಡತನ, ಮುಂತಾದ ತನ್ನೆಲ್ಲ ಕಷ್ಟ ಕೋಟಲೆಗಳಿಂದ ಹೊರಬರಲು ಸಾಧ್ಯ. ಇದಕ್ಕಾಗಿ ಅಣ್ಣ ಹಜಾರೆ ಅವರನ್ನು ಈ ಉದ್ದೇಶಕ್ಕಾಗಿ ಪುನಃ ಉಪವಾಸ ಕೂರಲು ಹೇಳುವುದು ಸ್ವಾರ್ಥ ಎನಿಸಬಹುದು. ಈ ವಿಚಾರವನ್ನೇ ತನ್ನ ಚುನಾವಣ ಪ್ರಾಣಾಳಿಕೆ ಮಾಡಿಕೊಂಡಿರುವ ಭಾ.ಜ.ಪ. ದಿಂದ ಇದನ್ನು ರಾಜಕೀಯಗೊಳಿಸಬಾರದು.
ಈ ವಿಚಾರವನ್ನೇ ಪದೇ ಪದೇ ಹೇಳುತ್ತಿದ್ದ ಶ್ರೀ ರಾಜೀವ ದೀಕ್ಷಿತರು ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಭಾಷಣದ ಕನ್ನಡ ರೂಪ ಹೇಳುತ್ತಿರುವ “ಜಾಗೋ ಭಾರತ್ ” ನ ಸೂಲಿಬೆಲೆ (ಮಿಥುನ್) ಚಕ್ರವರ್ತಿ ಅಥವಾ “ಭಾರತ್ ಸ್ವಾಭಿಮಾನ್” ನ ಬಾಬಾ ರಾಮದೇವ್ ಅವರು ಉಪವಾಸ ಸತ್ಯಾಗ್ರಹ ಕೈಗೊಂಡು ಈ ಕಾರ್ಯಕ್ಕೆ ಮುಂದಾಗಲಿ ಎಂದು ನಮ್ಮ ಆಶಯ. ಕೇವಲ ಭಾಷಣಗಳಿಂದ ಏನೂ ಸಾಧ್ಯವಿಲ್ಲ.ಅಣ್ಣಾ ತೋರಿಸಿಕೊಟ್ಟ ಹಾದಿಯಲ್ಲಿ ಇವರು ಮುನ್ನಡೆಯಲಿ,ಭಾರತದ ಯುವಶಕ್ತಿ ಖಂಡಿತ ಅಭೂತಪೂರ್ವ ಬೆಂಬಲ ನೀಡಲಿದೆ.
ಜೈ ಭಾರತ ಮಾತೆ.
ಹವುದು ಹವುದು..
ಈ ಪ್ರಚಂಡ ಮಾತುಗಾರರ ನೇತೃತ್ವದಲ್ಲಿ ನಾವು ಮುಂದುವರೆಯೋಣ!
ನಮಗೆ ಒಬ್ಬ ನಿಸ್ವಾರ್ಥ ನಾಯಕ ಇದ್ದರೆ ಸಾಲದೇ?
ಬಹು ನಾಯಯಕತ್ವದ ಅಗತ್ಯ ಇದೆಯೇ?
ಅಣ್ಣಾನ ಹಿಂದೆ ಎಲ್ಲರೂ ನಡೆಯಲಾಗದೇ? ನಡುವೆ ಈ ರಾಮದೇವ, ಸೂಲಿಬೆಲೆ ಇವರನ್ನೆಲ್ಲಾ ವಿಶೇಷವೆಂದು ಕಾಣುವುದೇಕೆ?
ಅವರನ್ನೂ ನಮ್ಮ ನಿಮ್ಮಂಥೆಯೇ ತಿಳಿಯಬಾರದೇಕೆ ಈ ಆಂದೋಲನದಲ್ಲಿ?
ನಮಗೆ ಆಂದೋಲನ ಮುಖ್ಯ, ಬರಿಯ ವ್ಯಕ್ತಿಗಳಲ್ಲ.
ಅಣ್ಣಾರ ನಿಸ್ವಾರ್ಥ ಧೋರಣೆ ಮುಖ್ಯ. ಬರೀ ಅಣ್ಣಾ ಅಲ್ಲ.
ಓರ್ವ ನಾಯಕನ ಹಿಂದೆ ಎಲ್ಲರೂ ಸಮಾನರಾಗಿ ಮುನ್ನಡೆಯುವ ವಿಶಾಲ ಮನೋಭಾವ ಬೇಕು.
ಅಲ್ಲೂ ತುಂಡು ನಾಯಕತ್ವಗಳಿಗೆ ಎಡೆಮಾಡಿಕೊಟ್ಟರೆ, ನಾಳೆ ಒಳ ರಾಜಕೀಯ ಶುರು ಆದೀತು.
ರಾಮದೇವನ ಹೇಳಿಕೆಯಿಂದ ಈಗಲೇ ಅಂಥ ವಾಸನೆ ಬರುತ್ತಿದೆ.
ಒಬ್ಬ ನಾಯಕನಿಂದ ಭ್ರಷ್ಟಾಚಾರ ತೊಲಗುವುದಿಲ್ಲ. ಈ ರಾಕ್ಷಸರನ್ನು ಮಟ್ಟ ಹಾಕಲು ನೂರು ಹಜಾರೆಗಳು, ನೂರು ರಾಮದೇವರು, ನೂರು ಸೂಲಿಬೆಲೆಗಳು ಬೇಕು. ಇದು ವಾಸ್ತವ. ಭಿನ್ನಾಭಿಪ್ರಾಯಗಳನ್ನು ಋಣಾತ್ಮಕವಾಗಿ ನೋಡಬೇಕಿಲ್ಲ. ಅಪ್ಪ-ಮಗ ಒಂದೇ ಕಮಿಟಿಯಲ್ಲಿ ಯಾಕೆ ಎಂಬ ರಾಮದೇವರ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿಯೂ ಇತ್ತು. ರಾಮದೇವರ ನೆಪದಿಂದಲಾದರೂ ಆ ಪ್ರಶ್ನೆಗೆ ಸಮಾಧಾನ ದೊರಕಿತು ತಾನೆ. ಅಷ್ಟರಮಟ್ಟಿಗೆ ಬಹು ನಾಯಕತ್ವ ಉಪಯುಕ್ತ.
ಅಣ್ಣಾ ಹಜಾರೆಯನ್ನು ಹೊಗಳಿ ಅಟ್ಟಕ್ಕೇರಿಸುವ ಮೊದಲು ರಾಮದೇವ ಕಳೆದ ಒಂದು ವರ್ಷದಿಂದ ಹಗಲಿರುಳು ಕಪ್ಪು ಹಣದ ಬಗ್ಗೆ ಗಂಟಲು ಹರಿದು ಜನರಲ್ಲಿ ಕಪ್ಪು ಹಣ ಎಂಬ ಕಲ್ಪನೆಯನ್ನು ಜನರ ಮನಸ್ಸಿನಲ್ಲಿ ಬೇರೂರಿಸಿದ್ದನ್ನು ಮರೆಯದಿರೋಣ. ಈ ಜಾಗೃತಿ ಇಲ್ಲದೇ ಹಜಾರೆಗೆ ಈ ಪರಿ ಜನ ಬೆಂಬಲ ಸಿಗುತ್ತಿರಲಿಲ್ಲ. ಈ ಮೊದಲು ಹಜಾರೆ ನಡೆಸಿದ ಆರ್ಟಿಐ ಹೋರಾಟಕ್ಕೆ ಎಲ್ಲಿತ್ತು ಜನ ಬೆಂಬಲ? ಜನ ಬೆಂಬಲ ಇಲ್ಲದೆಯೂ ಹಜಾರೆಗೆ ಜಯವಾಗಬಹುದು ಎನ್ನುವುದು ಬೇರೆ ವಿಷಯ. ಅಷ್ಟರ ಮಟ್ಟಿಗಿನ ತಾಕತ್ತು ಅವರಿಗೆ ಇದೆ. ಆದರೆ ಗೊಬ್ಬರವಿಲ್ಲದೇ ಮರ ಬೆಳೆಯದು. ರಾಮದೇವ್ ಗೊಬ್ಬರದಲ್ಲಿ ಹಜಾರೆ ಮರ ಚೆನ್ನಾಗಿ ಬೆಳೆದಿದೆ. ನಮಗೆ ಗೊಬ್ಬರವೂ ಬೇಕು ಮರವೂ ಬೇಕು. ಮರದಲ್ಲಿನ ಹಣ್ಣೂ ಬೇಕು. ಒಂದಿಲ್ಲದೇ ಇನ್ನೊಂದಿಲ್ಲ.
ನಿಜ!
ಗೊಬ್ಬರವೂ ಬೇಕು ಮರವೂ ಬೇಕು… ಮರದಲ್ಲಿನ ಹಣ್ಣು ಬೇಕು… ಈ ಮಾತು ನಿಜ. ಎಲ್ಲವೂ ಮರಗಳೇ ಆಗುವ ಯತ್ನ ನಡೆಸಿದರೆ… ಗಿಡಗಳು ಸಿಗಬಹುದೇ ವಿನಹ… ಹಣ್ಣುಗಳು ಸಿಗದು… ಎಂಬ ಭ್ರಮೆ ನನ್ನದು.
“”ಅಣ್ಣಾ ಹಜಾರೆಯನ್ನು ಹೊಗಳಿ ಅಟ್ಟಕ್ಕೇರಿಸುವ ಮೊದಲು ರಾಮದೇವ ಕಳೆದ ಒಂದು ವರ್ಷದಿಂದ ಹಗಲಿರುಳು ಕಪ್ಪು ಹಣದ ಬಗ್ಗೆ ಗಂಟಲು ಹರಿದು ಜನರಲ್ಲಿ ಕಪ್ಪು ಹಣ ಎಂಬ ಕಲ್ಪನೆಯನ್ನು ಜನರ ಮನಸ್ಸಿನಲ್ಲಿ ಬೇರೂರಿಸಿದ್ದನ್ನು ಮರೆಯದಿರೋಣ.”
ಒಳ್ಳೆ ಕಾಮೆಡಿ ಮಾರಾಯರೆ! ಚೆನ್ನಾಗಿ ಜೋಕ್ ಮಾಡ್ತೀರಿ…
“”ಈ ಮೊದಲು ಹಜಾರೆ ನಡೆಸಿದ ಆರ್ಟಿಐ ಹೋರಾಟಕ್ಕೆ ಎಲ್ಲಿತ್ತು ಜನ ಬೆಂಬಲ?””
ಹವುದು ಹವುದು ಜನಬೆಂಬಲವಿಲ್ಲದೇ ಆರ್ ಟಿ ಐ ಜಾರಿಗೆ ಬಂದುಬಿಟ್ಟಿತು. ಅರವಿಂದ್ ಕೇಲರಿವಾಲ್ ಅಣ್ಣಾ ಹಜಾರೆ ಇಬ್ಬರೆ ನಿಂತಿದ್ದರು ಅಲ್ಲವೆ ಸಂಸತ್ತಿನೆದುರಿಗೆ?
“”ರಾಮದೇವ್ ಗೊಬ್ಬರದಲ್ಲಿ ಹಜಾರೆ ಮರ ಚೆನ್ನಾಗಿ ಬೆಳೆದಿದೆ.””
ರಾಮದೇವ್ ಗೊಬ್ಬರವೇ. ಜೊತೆಗೆ ಅವರ ತಲೆಯೂ ಗೊಬ್ಬರವೇ! 😉
ರಾಮದೇವ್ ಮಹಾರಾಜರು ಬಂದಿದ್ದು ತೀರಾ ಇತ್ತೀಚೆಗೆ. ಅಣ್ಣಾ ಹಜಾರೆಯವರದು ನಲವತ್ತು ವರುಷಗಳ ತಪಸ್ಸು. ಒಂದೇ ಏಟಿಗೆ ಭಸ್ಮ ಮಾಡಿಬಿಟ್ಟರಲ್ಲ ಸ್ವಾಮಿ ಅವರ ತಪಸ್ಸನ್ನು ಭೇಷ್!
ಕಿವಿ ಮೇಲೆ ಕಾಲಿಫ್ಲವರ್!
ನನ್ನ ಲೇಖನದ ಉದ್ದೇಶ ತುಂಡು ನಾಯಕತ್ವದ ಬಗ್ಗೆ ಅಲ್ಲ. ೭೨ ರ ಹರೆಯದ ಅಣ್ಣಾ ಅವರಿಂದ ಪ್ರತಿ ಬಾರಿ ನಿರಶನ ಮಾಡಿಸುವ ಬದಲು ಯುವಕರಿಂದ ಮಾಡಿಸುವ ಬಗ್ಗೆ ಚಿಂತನೆ ನಡೆಸುವುದೇ ಆಗಿತ್ತು. ಅಲ್ಲದೆ ಜನಲೋಕಪಾಲದಂತಹ ವಿಶಾಲ ಗಾತ್ರದ ಉದ್ದೇಶದ ಈಡೇರಿಕೆಗೆ ಸಮಯ ತಗಲಬಹುದು. ಆದ್ದರಿಂದ ಸ್ವಿಸ್ ಬ್ಯಾಂಕಿನಂತಹ ವಿಷಯ ತ್ವರಿತ ಗತಿಯಲ್ಲಿ ಈಡೇರಿದರೆ ಭ್ರಷ್ಟಾಚಾರದ ಮೂಲಕ್ಕೆ ಕೊಡಲಿ ಏಟು ಬೀಳುವುದರಲ್ಲಿ ಸಂಶಯವಿಲ್ಲ. ಸಮೃದ್ಧ ಭಾರತದಲ್ಲಿ ಜನರ ಅತಿ ಆಸೆಗೆ ಕಡಿವಾಣ ಬೀಳಬಹುದೇನೋ!
naavella jotegoodi bembalisona..