ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 15, 2011

50

ದಯವಿಟ್ಟು ಗುದ್ದಲಿಪೂಜೆಗೆ ಬನ್ನಿ…

‍ನಿಲುಮೆ ಮೂಲಕ

– ಕಿರಣ ಬಾಟ್ನಿ

’ನಿಲುಮೆ’ಯಲ್ಲಿ ಪ್ರಕಟವಾಗಿದ್ದ ಶ್ರೀ ಅಜಕ್ಕಳ ಗಿರೀಶಬಟ್ಟಕನ್ನಡಕ್ಕಿಂತ ತಮಿಳು ಯಾವುದರಲ್ಲಿ ಮುಂದಿದೆ? ಎಂಬ ಬರಹಕ್ಕೆ ಉತ್ತರವಾಗಿ ನಾನು ಬರೆದಿದ್ದ ಇಗೋ, ಇದರಲ್ಲಿ ಮುಂದಿದೆ ಎಂಬ ಬರಹಕ್ಕೆ ಹಲವರು ತಮ್ಮ ಅನಿಸಿಕೆಯನ್ನು ತಿಳಿಸಿ, ಅದರ ಬಗ್ಗೆ ’ನಿಲುಮೆ’ಯಲ್ಲಿ ಚರ್ಚೆಯಾಗಿರುವುದು ಮನಸ್ಸಿಗೆ ಮುದ ತಂದಿದೆ. ಕನ್ನಡದ ಸೊಲ್ಲರಿಮೆ ಮತ್ತು ನುಡಿಯರಿಮೆಗಳ ವಿಶಯ ಬಹಳ ಮುಕ್ಯವಾದುದು. ಹಾಗೆಯೇ, ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ಕಾಳಜಿಯುಳ್ಳವರು ಇದನ್ನು ಕುರಿತು ನೆಮ್ಮದಿಯ ಮನಸ್ಸಿನಿಂದ ಚಿಂತಿಸುವುದು ಕೂಡ ಬಹಳ ಮುಕ್ಯವಾದುದು. ಆದುದರಿಂದ ನನ್ನ ಬರಹಕ್ಕೆ ಬಂದ ಅನಿಸಿಕೆಗಳನ್ನು ನಿದಾನವಾಗಿ ಕುಳಿತು ಯೋಚಿಸಿ ಉತ್ತರಿಸಲು ಸಮಯವನ್ನು ಕೊಟ್ಟ ’ಒಡ-ಕಾಳಜಿಗ’ರಿಗೆ ದನ್ಯವಾದಗಳು. ಇಲ್ಲಿ ನಾನು ಮಂಡಿಸಿದ ವಿಶಯಕ್ಕೆ ಸಂಬಂದಿಸಿದ ಅನಿಸಿಕೆಗಳಿಗೆ ನನ್ನ ಟಿಪ್ಪಣಿಗಳನ್ನು ಬರೆಯಲು ಪ್ರಯತ್ನಿಸುತ್ತೇನೆ.

ಕನ್ನಡದಾ ಮಕ್ಕಳೆಲ್ಲ ಒಂದಾಗಿಮಕ್ಕಳಲ್ಲ!

ಮೊದಲನೆಯದಾಗಿ, ಶ್ರೀ ನರೇಂದ್ರಕುಮಾರ್ ಎಸ್. ಎಸ್. ಅವರು ನಾನು ಪ್ರಶ್ನೆಗಳನ್ನು ಸ್ವಾಗತಿಸುವೆನೆಂದೂ, ಪ್ರಶ್ನಿಸಿದವರ ಮೇಲೆ ಹಾರಾಡುವುದಿಲ್ಲವೆಂದೂ, ತರ್ಕಬದ್ದವಾದುದನ್ನು ಒಪ್ಪುವೆನೆಂದೂ ಎಣಿಸಿ ಕೆಲ ಪ್ರಶ್ನೆಗಳನ್ನು ನನ್ನ ಮುಂದಿಟ್ಟಿದ್ದಾರೆ. ಅವರ ಈ ಪೀಟಿಕೆ ಬಹಳ ಸಂತಸ ತಂದಿತು, ಏಕೆಂದರೆ ಈ ನಂಬುಗೆಯು ಯಾವರೀರ್ವರ ನಡುವೆ ಇರುವುದಿಲ್ಲವೋ, ಅವರ ನಡುವೆ ಚರ್ಚೆಗೆ ಅರ್ತವಿಲ್ಲ. ಆ ನಂಬುಗೆಯನ್ನು ನಾನು ಈ ನನ್ನ ಟಿಪ್ಪಣಿಯಲ್ಲಿ ಉಳಿಸಿಕೊಳ್ಳುತ್ತೇನೆ ಎಂದು ನಂಬಿದ್ದೇನೆ.

ಜನರು ಉಲಿದಿದ್ದನ್ನು ಕಣ್ಗೊತ್ತಿಗೊಂಡು ಸರಿಯೆಂದು ಒಪ್ಪಿಕೊಳ್ಳುವುದೇ ನುಡಿಯರಿಗರಿಗೂ ಹುಲುಜನರಿಗೂ ಒಪ್ಪುವಂತದ್ದು, ಅದೇ ವೈಗ್ನಾನಿಕತೆಯು ಎಂಬ ನನ್ನ ಮಾತನ್ನು ಅವರು ಒಪ್ಪತಕ್ಕುದಲ್ಲವೆಂದು ಹೇಳುತ್ತ, ಪ್ರತಿಯೊಂದು ಭಾಷೆಯಲ್ಲೂ ಪದಗಳನ್ನು ಯಾವ ರೀತಿ ಉಚ್ಚರಿಸಬೇಕೆಂದು ಇರುತ್ತದೆ, ಮತ್ತು ಆ ಪದಗಳನ್ನು ಆಯಾ ಭಾಷೆಯಲ್ಲಿ ತಿಳಿಸಿದಂತೆಯೇ ಉಚ್ಚರಿಸಬೇಕು, ಇಲ್ಲದಿದ್ದರೆ ನಿಮ್ಮೊಡನೆ ಮಾತನಾಡುತ್ತಿರುವವನಿಗೆ ಅದು ತಿಳಿಯುವುದಿಲ್ಲ. ಮುಂದಿರುವವನಿಗೆ ತಿಳಿಯದಿದ್ದರೆ, ಸಂವಹನ ಅಲ್ಲಿ ನಿಂತ ಹಾಗೇ ಅಲ್ಲವೆ? ಎಂಬ ಪ್ರಶ್ನೆಯನ್ನು ಹಾಕಿದ್ದಾರೆ. ಅವರ ಈ ಪ್ರಶ್ನೆಗೆ ಉದಾಹರಣೆಯಾಗಿ ’rendezvous’ ಎಂಬ ಪದವನ್ನು ಬಳಸಿಕೊಂಡಿದ್ದಾರೆ. ಇಲ್ಲಿ ಗಮನಿಸಬೇಕಾದುದೇನೆಂದರೆ, ಒಂದು ನುಡಿಯಿಂದ ಪದವೊಂದು ಎರವಲಾಗಿ ಮತ್ತೊಂದು ನುಡಿಗೆ ಬಂದಮೇಲೆ ಈ ಎರಡನೆ ನುಡಿಲೋಕದೊಳಗಿನ ಜನರ ನಡುವೆ ಸಂವಹನ ನಡೆಯಬೇಕಾದ ಬಗ್ಗೆ ನಾವು ಚರ್ಚಿಸಬೇಕೇ ಹೊರತು ಮೊದಲನೆ ಮತ್ತು ಎರಡನೆ ನುಡಿಲೋಕಗಳ ನಡುವೆ ಸಂವಹನ ನಡೆಯಬೇಕಾದ ಬಗ್ಗೆಯಲ್ಲ. ’Rendezvous’ ಎಂಬ ಪದದ ಫ್ರೆಂಚ್ ಉಲಿಕೆಯ ಕಟ್ಟಲೆಗಳನ್ನು ಇಂಗ್ಲೀಶು ನುಡಿಗರಿಂದ ಬಯಸಬೇಕಾಗೇ ಇಲ್ಲ. ಇಂಗ್ಲೀಶು ನುಡಿವವರೆಲ್ಲ ಆ ಪದವನ್ನು ಬೇರೆ ಇಂಗ್ಲೀಶು ಪದಗಳಿಗಿಂತ ಬೇರೆಯಾಗಿ ನುಡಿದರೆ ಸಾಕು, ಇಂಗ್ಲೀಶಿಗರ ನಡುವೆ ಯಾವುದೇ ಸಂವಹನದ ಕಶ್ಟಗಳು ಏಳುವುದಿಲ್ಲ. ಹಾಗೆಯೇ ಸಂಸ್ಕ್ರುತದ ಪದಗಳು ಕನ್ನಡಕ್ಕೆ ಬಂದಾಗಲೂ ಆ ಪದಗಳನ್ನು ಕನ್ನಡಿಗರು ಸಂಸ್ಕ್ರುತದಲ್ಲಿ ನುಡಿಯುವಂತೆಯೇ ನುಡಿಯಬೇಕೆಂದು ಬಯಸುವುದು ಬೇಕಾಗಿಲ್ಲ; ಕನ್ನಡದ ಬೇರೆಲ್ಲ ಪದಗಳಿಗಿಂತ ಬೇರೆಯಾಗಿ ನುಡಿದರೆ ಸಾಕು. ಈ ’ಬೇರೆಯಾಗಿ’ ನುಡಿಯಬೇಕೆಂಬುದೂ ಏನು ಪಾಲಿಸಲೇಬೇಕಾದ ಕಟ್ಟಳೆಯೇನಲ್ಲ, ಏಕೆಂದರೆ ಒಂದೇ ಉಲಿಕೆಯ ಎರಡು ಪದಗಳನ್ನು ಬೇರೆಬೇರೆ ಅರ್ತಗಳಲ್ಲಿ ಬಳಸುವ ಅಳವು ಮನುಶ್ಯನಿಗೆ ಇರುತ್ತದೆ.

ಹಾಗೆ ನೋಡಿದರೆ ಎರವಲು ಪದಗಳನ್ನು ಬೇರುನುಡಿಗಳಲ್ಲಿ ಉಲಿದಂತೆ ಉಲಿಯಲು ವಿಶೇಶವಾದ ಒಂದು ಪ್ರಯತ್ನ ಬೇಕಾಗುತ್ತದೆ. ಅಂತಹ ಪ್ರಯತ್ನದಿಂದ ಉಲಿಯುವವನೇ ’ತನಗಿಶ್ಟಬಂದಂತೆ’ ಉಲಿದಂತಾಗುವುದು. ಎರವಲು ಪದದ ಗುರಿನುಡಿಯಲ್ಲಿ ಎಲ್ಲರೂ ಉಲಿದಂತೆ ಉಲಿಯುವಾತನಿಗೆ ಇಶ್ಟ-ಅನಿಶ್ಟಗಳ ಪ್ರಶ್ನೆಯೇ ಏಳುವುದಿಲ್ಲ; ಸಹಜವಾಗಿ ಸುತ್ತಮುತ್ತಲ ಪರಿಸರವು ಅವನ ನಾಲಗೆಯನ್ನು ಹೊರಳಿಸುತ್ತದೆ. ಈ ಎರಡನೆಯ ಬಗೆಯಲ್ಲೇ ಉಲಿವಾತನ ನುಡಿಯ ನಿಯಮಗಳ ಮೀರಿಕೆ ನಡೆಯದೆ ಇರುವುದು, ಮೊದಲನೆಯ ಬಗೆಯಲ್ಲಲ್ಲ.

ಮತ್ತೊಂದೇನೆಂದರೆ, ’rendezvous’ ನಂತಹ ಫ್ರೆಂಚ್ ಪದಗಳನ್ನು ಇಂಗ್ಲೀಶಿನವರು ಆಮದಿಸಿಕೊಂಡಾಗ ಫ್ರೆಂಚ್ ನುಡಿಗರು ಮತ್ತು ಇಂಗ್ಲೀಶು ನುಡಿಗರ ನಡುವೆ ಸಂವಹನದ ಸಾದ್ಯತೆಯಾದರೂ ಇದೆ, ಆದರೆ ಸಂಸ್ಕ್ರುತದ ಪದಗಳನ್ನು ಕನ್ನಡಿಗರು ಆಮದಿಸಿಕೊಂಡಾಗ ಆ ಸಾದ್ಯತೆಯೇ ಇಲ್ಲ, ಏಕೆಂದರೆ ಸಂಸ್ಕ್ರುತವನ್ನು ನುಡಿವವರು ಯಾರೂ ಇಲ್ಲ (ಕೆಲವು ಕೈಬಿಡಬಹುದಾದ ಕಟ್ಟೇರ್ಪಾಡುಗಳನ್ನು ಕೈಬಿಟ್ಟು). ಆದುದರಿಂದ, ಕನ್ನಡಿಗರ ನಡುವಿನ ಸಂವಹನದ ಪ್ರಾಮುಕ್ಯತೆಯನ್ನೂ, ಕನ್ನಡಿಗರ ಮತ್ತು ಇಲ್ಲದ ’ಸಂಸ್ಕ್ರುತಿಗರ’ ನಡುವಿನ ಇಲ್ಲದ ’ಸಂವಹನ’ಕ್ಕೋಸ್ಕರ ಸಂಸ್ಕ್ರುತದ ಉಲಿಕೆಯ ಕಟ್ಟಳೆಗಳನ್ನು ಕನ್ನಡಿಗರು ಪಾಲಿಸಬೇಕೆಂಬ ’ಹಳೆ-ಶಾಲೆ’ಯ ನಿಲುವು ತರ್ಕದಲ್ಲಿ ಬಿದ್ದುಹೋಗುತ್ತದೆ. ಅಲ್ಲದೆ, ಈಗಾಗಲೇ ನಾನು ವಾದಕ್ಕೆ ತಂದಿರುವ ಕನ್ನಡಿಗರ ’ಮನುಶ್ಯತನ’ವೇ ಕನ್ನಡಿಗರು ತಮ್ಮದೇ ಒಂದು ಬಗೆಯಲ್ಲಿ ಎಲ್ಲವನ್ನೂ ಉಲಿಯುವುದಕ್ಕೆ ಕಾರಣ. ಆ ಮನುಶ್ಯತನವನ್ನು ’ಕೊಟ್ಟು’ ವಿಶಯವನ್ನು ಮರುಪರೀಕ್ಶಿಸಿದರೆ ಯಾವುದೇ ನುಡಿಯವರನ್ನು ಅವರದಲ್ಲದ ಉಲಿಕೆಯ ಕಟ್ಟಳೆಗಳಿಂದ ಕಟ್ಟುವ ಪ್ರಯತ್ನವೇ ಸರಿಯಲ್ಲವೆಂದು ತಿಳಿಯುತ್ತದೆ.

ಹೊಸದೊಂದು ಪದವನ್ನು ಕಲಿಸಿದಾತನ ನುಡಿಯಲ್ಲಿ ಉಲಿದಂತೆಯೇ ಕಲಿತವನು ಉಲಿಯಬೇಕು ಎಂಬ ಕಟ್ಟಳೆ ಒಂದೇ ಒಂದು ಒಂದು ಕಡೆ ಹೊಂದುತ್ತದೆ: ಹಿರಿಯರು ಕಿರಿಯರಿಗೆ ಹೊಸದಾಗಿ ನುಡಿಯನ್ನು ಕಲಿಸುವಾಗ. ಮಕ್ಕಳು ತಮ್ಮ ಪರಿಸರದಲ್ಲಿ ಎಲ್ಲರೂ ಉಲಿಯುವಂತೆಯೇ ಉಲಿಯಬೇಕು ಎಂಬ ಕಟ್ಟಳೆಯನ್ನು ಹಿರಿಯರು ಹಾಕಿಕೊಳ್ಳುವುದನ್ನು ಯಾರೂ ಪ್ರಶ್ನಿಸುವುದಿಲ್ಲ. ಆದರೆ ಸಂಸ್ಕ್ರುತವನ್ನು ತಕ್ಕಮಟ್ಟಿಗೆ ನುಡಿಯುವವರಿಗೂ ಕೋಟಿಗಟ್ಟಲೆ ಕನ್ನಡಿಗರಿಗೂ ಈ ’ಹಿರಿಯರು-ಮಕ್ಕಳ’ ನಂಟಿಲ್ಲ. ಹಾಗೆ ಇದೆಯೆಂದು ನಂಬುವುದು ’ಹಳೆ-ಶಾಲೆ’ಯವರ ಒಂದು ವಿಶೇಶವಾದ ಗುಣವು. ಆ ಗುಣವು ಅವರಿಂದ ಹೋಗುವ ವರೆಗೆ ಕನ್ನಡಿಗರನ್ನೆಲ್ಲ ’ಮಕ್ಕಳಾ’ಗಿ ಕಾಣುವುದು ನಿಲ್ಲುವುದಿಲ್ಲ, ಮತ್ತು ಅವರು ಸಂಸ್ಕ್ರುತದ ಪದಗಳನ್ನು ಉಲಿಯುವ ಬಗೆಯನ್ನು ತಿದ್ದುವ ಅಬ್ಯಾಸವೂ ಹೋಗುವುದಿಲ್ಲ. ಆದರೆ ವಿಗ್ನಾನಕ್ಕೆ, ಮತ್ತು ಕನ್ನಡಿಗರ ’ಮನುಶ್ಯತನ’ಕ್ಕೆ ಬೆಲೆ ಕೊಡುವವರು ಆ ಗುಣದ ಸರಿತನವನ್ನು ಪ್ರಶ್ನಿಸದೆ ಇರುವುದಿಲ್ಲ ಎಂದು ನನಗೆ ಗಟ್ಟಿಯಾದ ನಂಬಿಕೆಯಿದೆ. ಅಂತವರು ತಮ್ಮ ಉಲಿಕೆಯನ್ನೇ ನೆಮ್ಮದಿಯಿಂದ ಗಮನಿಸಿಕೊಂಡರೆ ದಿಟವು ಹೊರಬರುತ್ತದೆ.

ಸಮಾಜದಲ್ಲಿರುವ ತಾರತಮ್ಯಗಳು ಮತ್ತು ಕನ್ನಡದ ಬರವಣಿಗೆಯ ಸರಿಪಡಿಸುವಿಕೆ

ನರೇಂದ್ರಕುಮಾರರು ಮುಂದುವರೆದು ಸಮಾಜದ ತಾರತಮ್ಯಗಳು ಹೋಗಬೇಕೆಂದು ಒಪ್ಪಿ, ಬರಿಗೆಮಣೆಯ ಸರಿಪಡಿಸುವಿಕೆಯಿಂದ ಅದು ಈಡೇರುವುದಾದರೆ ಕನ್ನಡವನ್ನೂ ಪೂರ್ಣವಾಗಿ ಬದಲಾಯಿಸಿಬಿಡೋಣ ಎಂದಿದ್ದಾರೆ. ಈ ನಮ್ಮ ಚರ್ಚೆಯ ಕೊನೆಯಲ್ಲಿ ಏನೇ ತೀರ್ಮಾನವಾಗಲಿ, ಅವರ ಕಾಳಜಿಗೆ ಮುಗಿಬೀಳುತ್ತ ಅದನ್ನು ಮಾತ್ರ ಕೈಬಿಡಬೇಡಿ ಎಂದು ಓದುಗರೆಲ್ಲರನ್ನೂ ಕೇಳಿಕೊಳ್ಳುತ್ತೇನೆ. ಆವೊಂದು ಕಾಳಜಿಯಿದ್ದರೆ ಸಾಕು, ’ಕನ್ನಡದಾ ಮಕ್ಕಳೆಲ್ಲ ಒಂದಾಗಿ’ ನಾವು ಅದ್ಬುತಗಳಾನ್ನು ಸಾದಿಸಬಲ್ಲೆವು.

ಮೊದಲಾಗಿ, ನಾವಿಲ್ಲಿ ಕನ್ನಡವನ್ನು ಬದಲಾಯಿಸುವ ಬಗ್ಗೆ ಮಾತಾಡುತ್ತಿಲ್ಲ, ಕನ್ನಡದ ಬರಹವನ್ನು ಮಾತ್ರ ಬದಲಾಯಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಮತ್ತೊಮ್ಮೆ ನೆನಪಿಸಲು ಇಶ್ಟಪಡುತ್ತೇನೆ. ಕನ್ನಡವನ್ನು – ಎಂದರೆ ಮಾತನ್ನು – ಹಿಂದಿನಿಂದ ಬಂದಿರುವ ಬರಹಕ್ಕೆ ಒಪ್ಪುವಂತೆ ಬದಲಾಯಿಸಬೇಕು ಎಂಬುದು ’ಹಳೆ-ಶಾಲೆ’ಯ ನಿಲುವು. ಆದರೆ ಮಾತನ್ನು ಬದಲಾಯಿಸತಕ್ಕದ್ದು ಎಂದೇ ಒಪ್ಪದೆ ಆ ಮಾತಿಗೆ ಬರವಣಿಗೆಯನ್ನು ಆದಶ್ಟೂ ಹತ್ತಿರವಾಗಿ ಇರುವಂತೆ ಮಾಡಬೇಕು ಎನ್ನುವುದು ’ಹೊಸ-ಶಾಲೆ’ಯ ನಿಲುವು.

ಕನ್ನಡದ ಬರವಣಿಗೆಯನ್ನು ಬದಲಾಯಿಸಿಬಿಟ್ಟರೆ ಸಮಾಜದ ತಾರತಮ್ಯಗಳು ಅಳಿಯುವವೇ ಎಂಬ ಪ್ರಶ್ನೆ ಬಹಳ ಒಳ್ಳೆಯದು. ಕಾರ್ಯವನ್ನು ಬದಲಿಸಿದರೆ ಕಾರಣವನ್ನು ಬದಲಿಸಲು ಆಗುವುದಿಲ್ಲವಾದ್ದರಿಂದ ಈ ಪ್ರಶ್ನೆ ಯಾರಿಗಾದರೂ ಏಳಬಹುದು. ಆದರೆ ಇಲ್ಲಿ ಸಮಾಜದ ತಾರತಮ್ಯಗಳು ಕನ್ನಡದ ಬರವಣಿಗೆಯ ಇಂದಿನ ಸ್ತಿತಿಗೆ ಕಾರಣವಶ್ಟೇ ಅಲ್ಲ, ಬರವಣಿಗೆಯ ಇಂದಿನ ಸ್ತಿತಿಯು ಆ ತಾರತಮ್ಯಗಳಿಗೆ ಕಾರಣವೂ ಹೌದು. ಎಂದರೆ, ಒಂದು ಬರೀ ಕಾರಣವೆಂದೂ, ಮತ್ತೊಂದು ಬರೀ ಕಾರ್ಯವೆಂದೂ ಹೇಳಲು ಬರುವುದಿಲ್ಲ. ತಾರತಮ್ಯ-ಬರವಣಿಗೆಗಳೆರಡೂ ಕಾರ್ಯ-ಕಾರಣಗಳೆರಡೂ ಹೌದು. ಹೀಗೇಕೆಂದರೆ ಬರವಣಿಗೆಯನ್ನು ಕಲಿಸುವಾಗ ’ನಿನ್ನ ಉಲಿಕೆ ಸರಿಯಿಲ್ಲ’ ಎಂಬ ಸಂದೇಶವನ್ನು ನಿಜಕ್ಕೂ ’ಸರಿಯಾಗಿ’ ಉಲಿಯುವ ಕೋಟಿಗಟ್ಟಲೆ ಕನ್ನಡಿಗರಿಗೆ ಕೊಡಲಾಗುತ್ತಿದೆ, ಮತ್ತು ಆ ಮೂಲಕ ತಾರತಮ್ಯವನ್ನು ಮುಂದುವರೆಸಲಾಗುತ್ತಿದೆ. ತಾರತಮ್ಯ-ಬರವಣಿಗೆಗಳೆರಡರ ಈ ಎರಡು ಮುಕಗಳನ್ನೂ ನೆನಪಿನಲ್ಲಿಟ್ಟುಕೊಂಡರೆ ಬರವಣಿಗೆಯಲ್ಲಿ ಮಾಡುವ ಬದಲಾವಣೆಯನ್ನು ಸಮಾಜ-ಸುದಾರಣೆಯ ಸಾದನವೆಂದು ಕಾಣಬಹುದು.

ಹಾಗೆಂದ ಮಾತ್ರಕ್ಕೆ ಶ್ರೀ ಪ್ರಿಯಾಂಕ್ ಅವರು ತಮ್ಮ ಕಾಮೆಂಟಿನಲ್ಲಿ ಹೇಳಿದಂತೆ, ಈ ಬದಲಾವಣೆಯು ತಾರತಮ್ಯವನ್ನು ಇಡಿಯಾಗಿ ಕಿತ್ತೊಗೆಯುವುದು ಎಂದು ಬದಲಾವಣಾ-ವಾದಿಗಳು ನಂಬಿಲ್ಲ; ಬದಲಾವಣೆಯಿಂದ ಹುಟ್ಟುವ ಡೆಲ್ಟಾಲಾಬವನ್ನು ಅವರು ಕೈಬಿಡುವುದಿಲ್ಲ, ಅಶ್ಟೆ. ಸಮಾಜ ಮತ್ತು ನುಡಿಯ ವಿಶಯಗಳು ಎಶ್ಟು ಸಿಕ್ಕಲು ವಿಶಯಗಳೆಂದರೆ ಯಾವ ಒಂದು ಬದಲಾವಣೆಯಿಂದಲೂ ಹೆಚ್ಚಿನದೇನನ್ನೂ ಸಾದಿಸಲಾಗುವುದಿಲ್ಲ, ಹೇಗೆ ಯಾವ ಒಂದು ಹೆಜ್ಜೆಯಿಂದಲೂ ನೂರುಮೈಲಿಯ ದಾರಿಯನ್ನು ದಾಟಲಾಗುವುದಿಲ್ಲವೋ ಹಾಗೆ. ಆದರೆ ಆ ಒಂದು ಹೆಜ್ಜೆಯನ್ನು ಇಡುವುದೇ ಲೇಸೆಂದು ಕಾಣುವುದು ಕಶ್ಟವೇನಲ್ಲ. ಈ ಬದಲಾವಣೆಯಿಂದ ’ಹಳೆ-ಶಾಲೆ’ಯವರು ಎತ್ತುವ ’ಹಿಂದಿನ ಗ್ರಂತಗಳನ್ನು ಓದುವುದು ಕಶ್ಟವಾಗುತ್ತದೆ’ ಎಂಬ ಪ್ರಶ್ನೆಯು ಸರಿಯಾದುದೇ. ಆದರೆ ಬದಲಾವಣೆಯ ಗುಣವೇ ಇದಲ್ಲವೆ? ಅಲ್ಲದೆ ಆ ’ಹಿಂದಿನ ಗ್ರಂತಗಳನ್ನು’ ಓದುವುದು ಮೇಲೆ ತಿಳಿಸಿದ ಡೆಲ್ಟಾಲಾಬಕ್ಕಿಂತ ಮುಕ್ಯವೇ? ಹೌದು, ಹಳಮೆಯ ಉಳಿಕೆಯೇ ಕೊಳೆಯ ಸಾರಿಸುವಿಕೆಗಿಂತ ಮುಕ್ಯವೆಂಬುದು ’ಹಳೆ-ಶಾಲೆ’ಯವರ ಉತ್ತರ. ಅರಿಮೆಗಣ್ಣಿನವರ ಉತ್ತರ ಬೇರೆಯದು.

ಈ ಹಿಂದೆ ಶ್ರೀ ಡಿ.ಎನ್. ಶಂಕರಬಟ್ಟರು ಹೇಳುವ ಬದಲಾವಣೆಗಳನ್ನು ಮಾಡಿ ಸ್ಪೆಲಿಂಗ್ ತೊಂದರೆಯನ್ನು ಹೋಗಿಸಿಕೊಳ್ಳುವುದಕ್ಕೆ ಆತುರಪಡಬೇಕಿಲ್ಲ ಎಂಬ ನಿಲುವನ್ನು ನಾನು ಹೊಂದಿದ್ದೆ. ಅದಕ್ಕೆ ಕಾರಣ ಸ್ಪೆಲಿಂಗ್ ತೊಂದರೆಯಿರುವ ನುಡಿಗಳ ಜನರೆಲ್ಲ ಏಳಿಗೆ ಹೊಂದಿಲ್ಲವೆಂದು ತೋರಿಸಲು ಆಗದೆ ಇರುವುದಾಗಿತ್ತು. ಆದರೆ ಈಗ ನನ್ನ ವೈಯಕ್ತಿಕ ನಿಲುವು ಬದಲಾಗಿದೆ (ಇಡೀ ಹೊಸ-ಶಾಲೆಯ ನಿಲುವು, ಇಲ್ಲವೇ ಬನವಾಸಿ ಬಳಗದ ನಿಲುವು ಇದೇ ಎನ್ನಲಾರೆ), ಏಕೆಂದರೆ ಕನ್ನಡದ ಸ್ಪೆಲಿಂಗ್ ತೊಂದರೆ ಬರೀ ಸ್ಪೆಲಿಂಗಿನ ತೊಂದರೆಯಶ್ಟೇ ಅಲ್ಲ, ಅದಕ್ಕೆ ಈ ಮೇಲಿನ ಸಾಮಾಜಿಕ ತೊಂದರೆಯ ಸ್ವರೂಪವೂ ಇದೆ ಎಂಬ ಅರಿವು ಇತ್ತೀಚೆಗೆ ನನಗೆ ಆಗಿದೆ. ಇದರ ಬಗ್ಗೆ ಕಾಳಜಿಯುಳ್ಳವರು ಕನ್ನಡದ ಬರವಣಿಗೆಯ ಬದಲಾವಣೆಯನ್ನು ಬೇಡವೆನ್ನುವುದು ಕಶ್ಟವಾಗುತ್ತದೆ.

ಹಲವರು ಈ ಬದಲಾವಣೆಯನ್ನು ಮಾಡಿ ತೀರಿಸುವುದು ಕಶ್ಟವೆಂಬ ಕಾರಣದಿಂದ ಬದಲಾವಣೆಯನ್ನು ಬೇಡವೆನ್ನುತ್ತಾರೆ. ಸರ್ಕಾರಗಳನ್ನು ಬಗ್ಗಿಸಬೇಕು, ಈಗಾಗಲೇ ಹೇಳಿದಂತೆ ಹಳೆಯ ಗ್ರಂತಗಳನ್ನು ಮತ್ತು ಇರುವ ಎಲ್ಲ ಬರವಣಿಗೆಯನ್ನೂ ಹೇಗೆ ’ನಿಬಾಯಿಸುವುದು’ ಎಂಬುದನ್ನು ನೋಡಬೇಕು – ಇವೆಲ್ಲ ನಿಜವಾದ ಕಶ್ಟಗಳೇ. ಆದರೆ ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆ ಸುಲಬವಾದುದು ಎಂದು ಯಾರು ಹೇಳಿದ್ದು? ನಾವುಗಳು ಯಾವುದೇ ಕಶ್ಟ ಪಡದೆ ಎಲ್ಲವೂ ಸರಿಹೋಗುತ್ತದೆ ಎಂದು ಯಾರು ಹೇಳಿದ್ದು? ಒಂದು ನಿಟ್ಟಿನಲ್ಲಿ ಈ ಕಶ್ಟಗಳು ಲಾಬಗಳಾಗೂ ಕಾಣುತ್ತವೆ. ಉದಾಹರಣೆಗೆ – ಈ ’ಯೋಜನೆಗಳನ್ನು’ ಮಾಡುತ್ತ ಎಶ್ಟು ಕನ್ನಡಿಗರಿಗೆ ಕೆಲಸ ದೊರಕುತ್ತದೆ ಎನ್ನುವುದನ್ನು ಗಮನಿಸಿ, ಎಶ್ಟು ಕನ್ನಡಿಗರು ’ಮಾಡಿಸಿಕೊಳ್ಳುಗ’ರಾಗಿ ತಮ್ಮನ್ನು ತಾವು ಕೂಡಿಹಾಕಿಕೊಂಡಿರುವ ಕತ್ತಲೆಕೋಣೆಗಳಿಂದ ಹೊರಬಂದು ’ಮಾಡುಗ’ರಾಗುತ್ತಾರೆ ಎನ್ನುವುದನ್ನು ಗಮನಿಸಿ. ಈ ಲಾಬಗಳನ್ನು ’ಬದಲಾವಣೆಯೆಲ್ಲವೂ ಬೀಳುಗೆಯ ರೂಪದ್ದು’ ಎಂಬ ನಿಲುವಿನ ’ಹಳೆ-ಶಾಲೆ’ಯವರು ಎಂದಿಗೂ ಕನ್ನಡಿಗರಿಗೆ ದೊರಕಿಸಿ ಕೊಡಲಾರರು; ’ಕನ್ನಡದಾ ಮಕ್ಕಳೆಲ್ಲ ಒಂದಾಗಿ’ ಮಕ್ಕಳೆಂದು ಕಾಣುವ ಕೆಲವು ’ಹಿರಿಯರು’ ಮಾತ್ರವೇ ಆ ಲಾಬಗಳನ್ನು ಉಣ್ಣುವರಶ್ಟೆ. ಇದು ಸರಿಯೇ ಎಂದು ಅರಿಮೆಗಣ್ಣನ್ನು ತೆರೆದು ಪ್ರಶ್ನಿಸಿಕೊಂಡರೆ ಬದಲಾವಣೆಯು ಬೀಳುಗೆಯ ರೂಪದ್ದೇ ಆಗಬೇಕಿಲ್ಲ, ಏಳಿಗೆಯ ರೂಪದ್ದು ಕೂಡ ಆಗಬಹುದು ಎಂದು ತಿಳಿವುದು.

ಜಾತಿವ್ಯವಸ್ಥಿತಿಯುಂ ಕೇರಳ ಚರಿತ್ರವುಂ

ಬರವಣಿಗೆಯ ಸರಿಪಡಿಸುವಿಕೆ ಮತ್ತು ಸಮಾಜದ ಬಗ್ಗೆ ಮಾತನಾಡುತ್ತಿರುವಾಗಲೇ ಶ್ರೀ ಅಜಕ್ಕಳ ಗಿರೀಶಬಟ್ಟರ ’ಮಲೆಯಾಳಿ’ ಪ್ರಶ್ನೆಗೆ ಬರುತ್ತೇನೆ. ಅವರು ಜನಸಾಮಾನ್ಯರಿಗೆ ಮನುಷ್ಯತ್ವವನ್ನು ಅಲ್ಲಗಳೆಯದೆ ಇರುವುದರಲ್ಲಿ ಕೇರಳ ರಾಜ್ಯವು ತಮಿಳುನಾಡಿಗಿಂತ ಮುಂದಿಲ್ಲವೇ? ಅಲ್ಲಿ ಕನ್ನಡಕ್ಕಿಂತ ಹೆಚ್ಚು ಅಕ್ಕರಗಳಿಲ್ಲವೆ? ಕನ್ನಡಕ್ಕಿಂತ ಎಷ್ಟೋ ಹೆಚ್ಚು ಸಂಸ್ಕೃತಮೂಲದ ಪದಗಳಿಲ್ಲವೇ?ಎಂದು ಕೇಳಿದ್ದಾರೆ.

ಕೇರಳವೇ ಏಕೆ? ನಾನೇ ಉದಾಹರಿಸಿದ ಅಮೇರಿಕವು ಇಂದು ಕೇರಳಕ್ಕಿಂತ ’ಮನುಶ್ಯತನವನ್ನು ಅಲ್ಲಗಳೆಯದೆ’ ಇರುವುದರಲ್ಲಿ ಮುಂದಿದೆ (ನಿಜಕ್ಕೂ ಮಂದಿಯಾಳ್ವಿಕೆಯೆಂಬುದು ಎಲ್ಲಾದರೂ ಇದ್ದರೆ ಅದು ಅಲ್ಲೇ ಇರುವುದು ಎನ್ನಬಹುದು), ಮತ್ತು ಅಮೇರಿಕದ ಬುಡಕಟ್ಟಿನವರಿಗಿಂತ ಹೆಚ್ಚು ಬರಿಗೆಗಳು ಮತ್ತು ವಲಸಿಗರ ಪದಗಳು ಇಂದಿನ ಅಮೇರಿಕದ ಬರಿಗೆಮಣೆ ಮತ್ತು ಬರವಣಿಗೆಯಲ್ಲಿ ಇದೆ. ಹಾಗೆಂದ ಮಾತ್ರಕ್ಕೆ ಅಮೇರಿಕದಲ್ಲಿ ಹಿಂದೆ ನಡೆದಿದ್ದನ್ನು ಮರೆಯಲಾದೀತೆ? ಹಿಂದೆ ನಡೆದಿದ್ದಕ್ಕೆಲ್ಲ ಇದು ಪ್ರಾಯಶ್ಚಿತ್ತವೇ? ಸುಟ್ಟಮೇಲೆ ಬೂದಿಯಲ್ಲಿ ಸಮಾನತೆಯಿರುತ್ತದೆ ಎಂದು ಸುಡುವುದನ್ನು ಸಮರ್ತಿಸಿಕೊಳ್ಳಲಾದೀತೆ? ಮನುಶ್ಯತ್ವದ ಅಲ್ಲಗಳೆಯುವಿಕೆಯಿಂದ ಸತ್ತವರ ಹೆಣಗಳ ಮೇಲೆ ಅಲ್ಲಗಳೆಯದ (ಇಲ್ಲವೇ ಅದಕ್ಕಿಂತ ಕಡಿಮೆ ಅಲ್ಲಗಳೆಯುವ) ಏರ್ಪಾಡೊಂದನ್ನು ಕಟ್ಟುಬಿಟ್ಟರೆ ಹಿಂದೆ ಅಲ್ಲಗಳೆದಿದ್ದನ್ನು ಸರಿ ಎನ್ನಲಾದೀತೆ? ಇನ್ನು ಮುಂದೆ ಕನ್ನಡದಲ್ಲಿ ಆ ಮನುಶ್ಯತ್ವದ ಅಲ್ಲಗಳೆಯುವಿಕೆ ಕಡಿಮೆಯಾಗಬಹುದು ಎಂದು ಹಗಲಗನಸು ಕಾಣುತ್ತ ಕಣ್ಮುಂದೆ ನಡೆಯುತ್ತಿರುವ ಅಲ್ಲಗಳೆಯುವಿಕೆಯನ್ನು ಸರಿಯೆಂದು ಒಪ್ಪಿಕೊಳ್ಳೋಣವೇ?

ಕೇರಳದಲ್ಲಿ ಸಮಾಜದರಿಮೆಯಲ್ಲಿ, ಅಲ್ಲಿಯ ಮೇಲುಕೀಳುಗಳ ವಿಶಯದಲ್ಲಿ ನಾನೇನು ಎತ್ತಿದಕೈಯವನಲ್ಲ, ಮಲೆಯಾಳಿ ನುಡಿಯೂ ನನಗೆ ಬರುವುದಿಲ್ಲ; ಆದರೆ ಮಲೆಯಾಳಿಯಲ್ಲೂ ಮಾತಿನಲ್ಲಿ ಬರವಣಿಗೆಗಿಂತ ಬಹಳ ಕಡಿಮೆ ಸಂಸ್ಕ್ರುತದ ಪದಗಳಿವೆ ಎಂದು ಊಹಿಸಿ ಹೇಳಬಲ್ಲೆ – ಕನ್ನಡದಲ್ಲಿ ಹೇಗೋ ಹಾಗೆ. ಬರವಣಿಗೆಯೊಂದರದೇ ಪರಂಪರೆಯುಳ್ಳ ಸಂಸ್ಕ್ರುತದ ಪದಗಳು ಬರವಣಿಗೆಯಲ್ಲಿ ಆಡುನುಡಿಗಿಂತ ಹೆಚ್ಚಿರುವುದನ್ನು ಅನುಮಾನ-ಪ್ರಮಾಣದಿಂದ ಸಾದಿಸಬಹುದು. ಹಾಗೇನಿಲ್ಲ ಎನ್ನುವುದಾದರೆ ಅದನ್ನು ಪ್ರತ್ಯಕ್ಶವಾಗಿ ತೋರಿಸಿಕೊಡುವ ಹೊರೆ ಹಾಗೆಂಬರ ಮೇಲೇ ಬೀಳುವುದು.

ಹಾಗೆಯೇ ಕೇರಳಕ್ಕೆ ವಲಸೆ ಬಂದ ನಂಬೂದಿರಿಗಳು ಅಲ್ಲಿ ಏನೇನು ಸಾದಿಸಿರುವರು, ಅಲ್ಲಿಯ ಬುಡಕಟ್ಟಿನವರಿಗೆ ಹೇಗೆ ನೆತ್ತರ ಚೆಲ್ಲಾಟವಿಲ್ಲದೆ ಮನುಶ್ಯತನವನ್ನು ಅಲ್ಲಗಳೆದರು, ಅಲ್ಲಿಯ ಹೆಂಗಸರನ್ನು ಹೇಗೆ ನಡೆಸಿಕೊಂಡರು, ಸಮಾಜವೆಂಬ ಕಟ್ಟಡದ ಇಟ್ಟಿಗೆಯೆನ್ನಬಹುದಾದ ಕುಟುಂಬವನ್ನು ಅವರು ಹೇಗೆ ಕಂಡರು ಎಂದೆಲ್ಲ ಸ್ವಲ್ಪ ಓದಿಕೊಂಡರೆ ತಿಳಿದು ಬರುತ್ತದೆ, ಮಲೆಯಾಳಿ ನುಡಿಯಲ್ಲಿ ಮತ್ತು ಬರವಣಿಗೆಯಲ್ಲಿ ಏಕೆ ಕನ್ನಡಕ್ಕಿಂತ ಹೆಚ್ಚು ಸಂಸ್ಕ್ರುತದ ಪದಗಳಿವೆ, ಮತ್ತು ಅದರ ಬರಿಗೆಮಣೆಯಲ್ಲಿ ಏತಕ್ಕೆ ಬೇಡದ ಬರಿಗೆಗಳಿವೆ ಎಂದು. ಚಿಕ್ಕದಾಗಿ ಹೇಳುವುದಾದರೆ ಕೇರಳದ ಹೆಸರಾಂತ ಇತಿಹಾಸಕಾರರೂ ಬರಹಗಾರರೂ ಆದ ಶ್ರೀ ಪಿ. ಕೆ. ಬಾಲಕ್ರಿಶ್ಣನ್ ಅವರು ತಮ್ಮ ’ಜಾತಿವ್ಯವಸ್ಥಿತಿಯುಂ ಕೇರಳ ಚರಿತ್ರವುಂ’ ಎಂಬ ಹೊತ್ತಗೆಯ ಬರಹವೊಂದರಲ್ಲಿ ತಿಳಿಸಿಕೊಟ್ಟಂತೆ (ಇಂಗ್ಲೀಶು ಅನುವಾದ ಇಲ್ಲಿ) ಸಂಸ್ಕ್ರುತ-ಪ್ರಾಕ್ರುತಗಳನ್ನು ಬಲ್ಲವರಾಗಿದ್ದ ನಂಬೂದಿರಿಗಳ ಮೇಲುಸ್ತಾನದಿಂದ ಬುಡಕಟ್ಟಿನವರ ನುಡಿಯ ಪದಗಳು ಕೀಳು ಪದಗಳಾದವು (ಇದು ನಮ್ಮಲ್ಲಿ ಇಂದಿಗೂ ನಡೆಯುತ್ತಿದೆ). ಆ ಕೀಳಾಗಿಹೋದ ಪದಗಳ ಹೆಣಗಳ ಮೇಲೇ ಸಂಸ್ಕ್ರುತದ ಹಲವಾರು ಹೊಸ ಪದಗಳು ನಿಂತಿರುವುದು – ಹೇಗೆ ಅಮೇರಿಕದ ಬುಡಕಟ್ಟಿನವರ ಹೆಣಗಳ ಮೇಲೆ ಇಂದು ಯೂರೋಪಿಯನ್ನರ ಬಿಳಿಬಿಳಿ ದೇಹಗಳು ಓಡಾಡುತ್ತಿವೆಯೋ ಹಾಗೆ. ಪದಗಳ ಕೊಲೆ ನಡೆದಾಗ ಅವುಗಳ ನೆತ್ತರ ಚೆಲ್ಲಾಟ ಕಾಣಿಸುವುದಿಲ್ಲ, ಏಕೆಂದರೆ ಪದಗಳ ನೆತ್ತರಿಗೆ ಬಣ್ಣವಿರುವುದಿಲ್ಲ – ಮನುಶ್ಯತನಕ್ಕೆ ಹೇಗೆ ಬಣ್ಣವಿರುವುದಿಲ್ಲವೋ ಹಾಗೆ. ಆದುದರಿಂದ ಬಣ್ಣವಿಲ್ಲದ ನೆತ್ತರ ಚೆಲ್ಲಾಟವನ್ನು ನಾವು ಗಮನಿಸದೆ ಹೋಗುವೆವು, ಮತ್ತು ಅದರ ಮೂಲಕ ಮನುಶ್ಯತನದ ಅಲ್ಲಗಳೆಯುವಿಕೆಯನ್ನೂ ಗಮನಿಸದೆ ಹೋಗುವೆವು.

’ಮಣಿಪ್ರವಾಲ’ದಿಂದ ಮಲಯಾಳದ ಬರವಣಿಗೆಯ ಪರಂಪರೆಯನ್ನು ಶುರು ಮಾಡಿದ್ದಕ್ಕೆ ನಂಬೂದಿರಿಗಳನ್ನು ದನ್ಯವಾದಿಸುತ್ತಲೇ ಬಾಲಕ್ರಿಶ್ಣನ್ ಅವರು ಮಲೆಯಾಳಿ ನುಡಿಯ ಇತಿಹಾಸದಲ್ಲಿ ಏನೇನು ನಡೆದಿರಬಹುದು ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ (ಇತಿಹಾಸದ ಬಗ್ಗೆ ಮಾತಾಡುವಾಗ ’ನಡೆದಿರಬಹುದು’ ಎನ್ನುವುದೇ ಸರಿ, ’ಹಳೆ-ಶಾಲೆ’ಯವರಂತೆ ’ನಡೆದಿದೆ’ ಎನ್ನುವುದು ತಪ್ಪು).

ಬರವಣಿಗೆಯೇ ಇಲ್ಲದ ಒಂದು ನುಡಿಜನಾಂಗಕ್ಕೆ ಬರವಣಿಗೆಯನ್ನು ಯಾರು ತರುವರೋ ಅವರ ಇಂಗಿತವೇ ಅದರಲ್ಲಿ ಉಳಿಯುವುದು ಸಹಜ (’ಹಾಳೂರಿಗೆ ಉಳಿದವನೇ ಗೌಡ’ ಎಂಬಂತೆ). ಇದೇ ಜಗತ್ತಿನಲ್ಲಿ ಎಲ್ಲೆಲ್ಲೂ ಆಗಿರುವುದು, ಇದೇ ಮಲೆಯಾಳಿಯಲ್ಲೂ ಆಗಿರುವುದು, ಇದೇ ಕನ್ನಡದಲ್ಲೂ ಆಗಿರುವುದು. ಆದರೆ ಬರವಣಿಗೆಯನ್ನು ತಂದವರು ತರಿಸಿಕೊಂಡವರಿಗಿಂತ ತಮ್ಮನ್ನು ತಾವು ಮುಟ್ಟಿಸಿಕೊಳ್ಳಲಾರದಶ್ಟು ಶುದ್ದರು ಎಂದುಕೊಂಡಿರುವುದು ಬಾರತದಲ್ಲಿ ವಿಶೇಶವಾಗಿ ನಡೆದಿದೆ. ಕೇರಳದಲ್ಲಂತೂ ಇದು ಎಶ್ಟು ನಡೆದಿದೆಯೆಂದರೆ ಸ್ವಾಮಿ ವಿವೇಕಾನಂದರು ಕೇರಳವನ್ನು ’ಜಾತಿಗಳ ಹುಚ್ಚಾಸ್ಪತ್ರೆ’ ಎಂದು ಕರೆದಿರುವುದುಂಟು. ಈ ಹುಚ್ಚಾಸ್ಪತ್ರೆತನದಲ್ಲಿ ಕರ್ನಾಟಕವು ಕೇರಳಕ್ಕಿಂತ ಪ್ರಾಯಶಹ ತುಸು ಹಿಂದಿರುವುದರಿಂದ ಕನ್ನಡದ ನುಡಿಯಲ್ಲಿ ಮಲೆಯಾಳಿಯಲ್ಲಿ ಇರುವುದಕ್ಕಿಂತ ಕಡಿಮೆ ಸಂಸ್ಕ್ರುತದ ಪದಗಳಿವೆ ಎನ್ನಬಹುದು. ಕನ್ನಡದ ಪದಗಳ ಕೊಲ್ಲಾಟ ಮಲೆಯಾಳಿಯಲ್ಲಿ ನಡೆದ ಕೊಲ್ಲಾಟಕ್ಕಿಂತ ಕಡಿಮೆಯಾಗಿರುವುದರಿಂದ ಕನ್ನಡದ ನುಡಿಯಲ್ಲಿ ಮಲೆಯಾಳಿಯಲ್ಲಿ ಇರುವುದಕ್ಕಿಂತ ಕಡಿಮೆ ಸಂಸ್ಕ್ರುತದ ಪದಗಳಿವೆ ಎನ್ನಬಹುದು.

ಇದೇನು ತಾನಾಗೇ ಹೀಗೆ ಆಗಿಲ್ಲ, ಹಲವರು ಇದಕ್ಕಾಗಿ ತಮ್ಮ ಬಾಳುವೆಯನ್ನೇ ತೆತ್ತಿ ನಮ್ಮಯ ಬಾಳುಗಳನ್ನು ಬೆಳಗಿರ್ಪರು, ’ಬಹುದಿನಗಳಿಂದ ಮೈಮರವೆಯಿಂದ ಕೂಡಿರುವ ಕೊಳೆ’ಯನ್ನು ಕೊಳೆಯೆಂದೇ ಕಾಣುವ ಎದೆಗಾರಿಕೆಯನ್ನೆಮಗೆ ತಂದಿರ್ಪರು, ಮತ್ತು ಅವರಿಗೆ ಒಮ್ಮೆ ಇಲ್ಲೇ ತಲೆಬಾಗು.

ಮತ್ತೊಂದೇನೆಂದರೆ, ಕೇರಳದ ಉದಾಹರಣೆಯಂತೂ ಬರವಣಿಗೆಯ ಬದಲಾವಣೆ ಬೇಡವೆಂಬುವರಿಗೆ ಮೊದಲೇ ತರವಲ್ಲ. ಏಕೆಂದರೆ ಅದೇ ಕೇರಳವೇ ಇತ್ತೀಚೆಗೆ 1971 ರಲ್ಲಿ ಮಲಯಾಳಿ ಲಿಪಿಯಲ್ಲಿ ಬಹಳ ಸರಳತನವನ್ನು ತಂದು ಅದರ ಸಿಕ್ಕಲುತನವನ್ನು 75% ಕಡಿಮೆ ಮಾಡಿತು. ಇದರ ಬಗ್ಗೆ ಇನ್ನಶ್ಟು ಅರಿಯಲು ಇಚ್ಚಿಸುವವರು ಇಲ್ಲಿಗೆ ಹೋಗಿ ಕೇರಳ ಸರ್ಕಾರದ ಅಪ್ಪಣೆಯನ್ನು ಓದಬಹುದು. ಕೇರಳದ ಹುಚ್ಚಾಸ್ಪತ್ರೆತನ ಇದರಿಂದ ಸಾಕಶ್ಟು ಕಡಿಮೆಯಾಗಲು ಅನುವಾಯಿತು ಎನ್ನುವುದರಲ್ಲಿ ಸಂದೇಹವಿಲ್ಲ. ಈಗ ಅದು ಕರ್ನಾಟಕದ ಹುಚ್ಚಾಸ್ಪತ್ರೆತನಕ್ಕೆ ತುಸು ಹತ್ತಿರವಾಗಿದೆ, ಆದರೆ ಇನ್ನೂ ಹೆಚ್ಚೇ ಇದೆ!

ಬವಿಶ್ಯಕ್ಕೆ ಬೇಕಾದ ಇಟ್ಟಿಗೆಗಳನ್ನು ನಮ್ಮದೇ ಆಲೆಮನೆಯಲ್ಲಿ ತಯಾರಿಸಬೇಕು

ಹಳೆ-ಶಾಲೆಯವರು ಮತ್ತು ಅವರ ನೆರಳಿನಲ್ಲಿರುವವರು ’ಬದಲಾವಣೆ’ ಎಂದಕೂಡಲೆ ’’ನಿಮಗೆ ಸಂಸ್ಕ್ರುತದ್ವೇಶ’!’ ಎಂಬ ಅಸ್ತ್ರವನ್ನು ಬಹಳ ಬಳಸುತ್ತಾರೆ. ಆದರೆ ನಿಜಕ್ಕೂ ಬದಲಾವಣೆಯನ್ನು ಬಯಸುವವರಿಗೆ ಆ ದ್ವೇಶವಿಲ್ಲದಿರುವುದರಿಂದ ಆ ಅಸ್ತ್ರವು ಅವರ ಮೇಲೆ ಬೀಳುವುದೇ ಇಲ್ಲ. ಶ್ರೀಮತಿ ಶಾಂತಿ ಮತ್ತು  ಶ್ರೀ ಮಹೇಶ ಪ್ರಸಾದ ನೀರ್ಕಜೆ ಅವರು ಈ ’ದ್ವೇಶದ ಅಸ್ತ್ರ’ವನ್ನು ಮತ್ತೊಮ್ಮೆ ಈ ಚರ್ಚೆಯಲ್ಲಿ ಬಳಸಿಕೊಂಡಿದ್ದಾರೆ.

ಎರಡನೆಯವರು ಬರೆಯುತ್ತ ’“ಸಂಸ್ಕೃತ ದ್ವೇಷ” ಇಲ್ಲದಿದ್ದರೆ ಸಂಸ್ಕೃತ ಮಾದರಿಯಲ್ಲಿರುವ ಪದಗಳನ್ನು ಯಾಕೆ ಬದಲಾಯಿಸಬೇಕು? ಭಾಷಾ ವಿಜ್ನಾನಿಗಳು ಅನ್ನೋದು ಬಿಟ್ಟು ಈ “ನುಡಿಯರಿಗರು” ಏಕೆ? ರಸ್ತೆಯಲ್ಲಿ ಹೋಗೋ ಕನ್ನಡಿಗನನ್ನ ಈ ಎರಡು ಶಬ್ದಗಳನ್ನು ಕೇಳಿ ನೋಡಿ. ಯಾವುದು ಅರ್ಥ ಆಗುತ್ತೆ ಅಂತ. ಎಲ್ಲರಿಗೂ ಅರ್ಥ ಆಗುವ ಸರಳ ನುಡಿ ಬೇಕು ಅನ್ನುವವರೇ ಈವರೆಗೆ ಯಾರೂ ಕಂಡು ಕೇಳಿಲ್ಲದ ಪದಗಳನ್ನು ಹೇರುವುದು ಯಾಕೆ? ಅದೂ ಅಧ್ಯಯನದ ಹೆಸರಿನಲ್ಲಿ? ಎಂದು ಕೇಳಿದ್ದಾರೆ. ದ್ವೇಶವಾದಿಗಳಿಗೆಲ್ಲ ನಾನು ಹೇಳಬಯಸುವುದು ಇಶ್ಟೇ: ಮೊದಲು ಬದಲಾವಣೆಯೆಂಬ ಒಂದು ಎಂಟಿಟಿಯ ಇರುವಿಕೆಯನ್ನು ಗೌರವಿಸಿ, ’ಬದಲಾವಣೆ ಎಂಬುದು ಇದೆ’ ಎಂದು. ಆಮೇಲೆ ಬದಲಾವಣೆಯೆಂಬುದು ಎಂದೆಂದಿಗೂ ಬೀಳುಗೆಯೇ ಎಂಬ ’ಹಳೆ-ಶಾಲೆ’ಯ ನಿಲುವನ್ನು ಪ್ರಶ್ನಿಸಿಕೊಳ್ಳಿ. ಆಗ ತಿಳಿಯುತ್ತದೆ, ಹೊಸ ಪದಗಳ ಕಟ್ಟಣೆಯಿಂದ ಯಾವುದೇ ತೊಂದರೆಯಿಲ್ಲ ಎಂದು, ಆ ಹೊಸಪದಗಳು ಸಂಸ್ಕ್ರುತಬೇರಿನವು ಆಗದೆ ಹೋದರೂ ತೊಂದರೆಯಿಲ್ಲ ಎಂಬುದು, ಇನ್ನೂ ಲಾಬವೇ ಹೆಚ್ಚಿರುವುದು ಎಂದು.

ಈ ವಿಶಯದಲ್ಲಿ ನನ್ನ ವೈಯಕ್ತಿಕ ಅನುಬವವೊಂದನ್ನು ಇಲ್ಲಿ ಹೇಳುವುದು ಸರಿಯೆನಿಸುತ್ತದೆ. ಈ ಹಿಂದೆ ಕನ್ನಡದಲ್ಲಿ ಇಂಜಿನಿಯರಿಂಗಿನ Signals and Systems ಎಂಬ ವಿಶಯದ ಒಂದು ಹೊತ್ತಗೆಯನ್ನು ನಾನು ಬರೆಯಲು ಹೊರಟಿದ್ದೆ, ಸಾಕಶ್ಟು ಮುಂದೂ ವರೆದಿದ್ದೆ. ಆದರೆ ಅದನ್ನು ಬರೆಯುವಾಗ ಒಂದು ಹಂತದಲ್ಲಿ ಉಸಿರುಕಟ್ಟುವ ಅನುಬವವುಂಟಾಯಿತು. ಅದರ ಕಾರಣವನ್ನು ನಾನು ಹುಡುಕುತ್ತ ಹೊರಟಾಗ ನನಗೆ ಅರಿವಾಗಿದ್ದು ಏನೆಂದರೆ, ನಾನು ಹೊಸದಾಗಿ ಕಟ್ಟಿದ ಪದಗಳೆಲ್ಲ ಸಂಸ್ಕ್ರುತದವಾಗಿದ್ದವು, ಮತ್ತು ಸಂಸ್ಕ್ರುತದ ಪದಗಳನ್ನು ಕಟ್ಟಲು ನನಗೆ ಒಂದು ಹಂತದ ಮೇಲೆ ಆಗಲಿಲ್ಲ. ನಾನು ಕಟ್ಟಲು ಬಯಸಿದ್ದ ಕಟ್ಟಡಕ್ಕೆ ಇಟ್ಟಿಗೆಗಳೇ ಇಲ್ಲವಾದವು. ದುಡ್ಡು ಕೊಟ್ಟರೂ ಸಿಗುವಂತಿರಲಿಲ್ಲ, ತಲೆ ಚೆಚ್ಚಿಕೊಂಡರೂ ಸಿಗುವಂತಿರಲಿಲ್ಲ, ನನ್ನ ಬೇರೆ ಮನೆಗಳನ್ನು ಮಾರಿಕೊಂಡರೂ ಸಿಗುವಂತಿರಲಿಲ್ಲ. ಉದಾಹರಣೆಗೆ, Superposition ಎನ್ನುವ ಪದಕ್ಕೆ ಒಂದು ಹೊಸ ಪದವನ್ನು ಕೊಡಲು ತಿಂಗಳೇ ಬೇಕಾಯಿತು. ಆಮೇಲೆ ಸಂಸ್ಕ್ರುತದ ನಿಗಂಟುಗಳನ್ನು (ಕನ್ನಡದಲ್ಲ!) ತಿರುವು ಹಾಕಿ, ಸಂಸ್ಕ್ರುತದ ಸಾಕಶ್ಟು ಸಾಹಿತ್ಯವನ್ನು (ಕನ್ನಡದಲ್ಲ!) ತಿರುವು ಹಾಕಿ ಕೊನೆಗೆ ’ಉಪರಿಸ್ಥಾಪನೆ’ ಎಂಬ ಪದವನ್ನು ಕಟ್ಟಿ ನಾನೆ ದನ್ಯನೆಂದುಕೊಂಡೆ. ತಿಂಗಳುಗಟ್ಟಲೆಯ ಹುಡುಕಾಟ ಸಂಸ್ಕ್ರುತವನ್ನು ಸ್ವಲ್ಪಮಟ್ಟಗೆ ನನ್ನದೇ ಪ್ರಯತ್ನದಿಂದ ಕಲಿತವನಾದ ನನಗೇ ಬೇಕಾದರೆ ನನ್ನದೇ ರೀತಿಯಲ್ಲಿ ’ಮಾಡುಗ’ರಾಗಬೇಕಾದ ಮತ್ತು ನನ್ನಶ್ಟೂ ಸಂಸ್ಕ್ರುತಬಾರದ ಕನ್ನಡಿಗರಿಗೆ ಇನ್ನೆಶ್ಟು ಶತಮಾನಗಳ ಹುಡುಕಾಟ ಬೇಕಾದೀತು? ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಂಡೆ. ಆಗ ನನಗೆ ಹೊಸ ಪದಗಳಿಗೆ ಸಂಸ್ಕ್ರುತವನ್ನು ಮೂಲವಾಗಿ ಇಟ್ಟುಕೊಳ್ಳುವುದೇ ತಪ್ಪು ಎಂದು ಅರಿವಾಯಿತು. ಆಮೇಲೆ ಶಂಕರಬಟ್ಟರ ಪದಕಟ್ಟಣೆಯ ಬಗೆಗಿನ ಸಂಶೋದನೆ, ಅವರ ಕನ್ನಡದ ಸೊಲ್ಲರಿಮೆಯ ಬಗೆಗಿನ ಸಂಶೋದನೆ – ಇವೆಲ್ಲಕ್ಕೂ ಅರ್ತ ಬಂದಿತು. ಈಗ ಅದೇ ಪದವನ್ನು ’ಮೇಲಿರಿಸುವಿಕೆ’ ಎಂದು ಕನ್ನಡಿಸಬಹುದಿತ್ತು ಎನಿಸುತ್ತದೆ. ಈ ಪದವು ನನ್ನ ಒಳಗಿನಿಂದ ಬರುತ್ತದೆ, ನನ್ನ ಒಳಗಿರುವ ಯಾವನೋ ಒಬ್ಬನು ಇದರ ’ಮಾಡುಗ’ನಾಗಿದ್ದಾನೆ. ಈ ಇಟ್ಟಿಗೆಗಳು ನಮ್ಮದೇ ಆಲೆಮನೆಯಲ್ಲಿ ಬೆಂದವು.

ಈ ರೀತಿಯ ಹೊಸತನ್ನು ಕನ್ನಡಕ್ಕೆ ತರುವ ’ಮಾಡುಗ’ತನವನ್ನು ಗೌರವಿಸುವವರಿಗೆ ತಮ್ಮ ಸಂಸ್ಕ್ರುತ ಗೊತ್ತಿಲ್ಲದಿರುವಿಕೆ ’ಹಳೆ-ಶಾಲೆ’ಯವರು ಹಾಕಿಕೊಟ್ಟಿರುವ ಹಾದಿಯಲ್ಲಿ ದೊಡ್ಡ ತೊಂದರೆಯಾಗಿ ನಿಲ್ಲುತ್ತದೆ. ಮೊದಲಾಗಿ ’ಹಳೆ-ಶಾಲೆ’ಯವರಿಗೆ ಹೊಸತನದ ಬಗ್ಗೆಯೇ ಗುಮಾನಿ: ಹೊಸದೆಂದರೆ ಬದಲಾವಣೆ, ಬದಲಾವಣೆಯೆಂದರೆ ಬೀಳುಗೆಯಲ್ಲವೆ ಅವರಿಗೆ? ಆದುದರಿಂದ ಅವರಿಗೆ ಕನ್ನಡದಲ್ಲೇ ಪದಗಳನ್ನು ಕಟ್ಟುವುದು ಸರಿಯೆನಿಸುವುದಕ್ಕಿಂತ ಮುಂಚೆ ಬೇಕೆಂದೇ ಅನಿಸುವುದಿಲ್ಲ. ಬೇಕಾಗಿದ್ದರೆ ತಾನೆ ಸರಿ-ತಪ್ಪುಗಳ ಪ್ರಶ್ನೆ? ಇಲ್ಲೂ ’ಹಳೆ-ಶಾಲೆ’ಯವರು ಮಾಡುವ ತಪ್ಪೇನೆಂದರೆ ಬೆರಳೆಣಿಕೆಯ ಸಂಸ್ಕ್ರುತ ಬಲ್ಲ ಕೆಲವರು ಒಂದು ಇಡೀ ನುಡಿಜನಾಂಗಕ್ಕೆ ಮುಂದೆ ಬೇಕಾಗುವ ಎಲ್ಲ ವಿದ್ಯೆಗಳ ಎಲ್ಲ ಪದಗಳನ್ನೂ ಕಟ್ಟಿಬಿಡುತ್ತಾರೆ ಎಂದು ನಂಬಿಕೊಂಡಿರುವುದು, ಜೊತೆಗೆ ಪದಕಟ್ಟಣೆಯಲ್ಲಿ ಇಡೀ ಕನ್ನಡಜನಾಂಗವು ’ಮಾಡಿಸಿಕೊಳ್ಳುಗ’ನ ಪಾತ್ರವನ್ನು ಮಾತ್ರ ಹಾಕಿಕೊಳ್ಳಬಹುದು ಎಂದು ತಿಳಿದಿರುವುದು. ಇದಕ್ಕಿಂತ ಕಡಿಮೆ ತಪ್ಪು ಮಾಡುವವರು ಎಲ್ಲರಿಗೂ ’ಮಾಡುಗತನ’ವನ್ನು ಕೊಡುತ್ತಾರೆ, ಆದರೆ ’ಮಾಡಲು’ ಬೇಕಾದ ಸಲಕರಣೆಗಳೇತಕ್ಕೆ ಎನ್ನುತ್ತಾರೆ, ’ಮನೆಯನ್ನು ಇಟ್ಟಿಗೆಯಿಲ್ಲದೆ ಕಟ್ಟಿ’ ಎಂಬಂತೆ. ಇದಕ್ಕಿಂತಲೂ ಕಡಿಮೆ ತಪ್ಪು ಮಾಡುವವರು ರೇಶನ್ ಅಂಗಡಿಯಲ್ಲಿ ಬಿತ್ತರಿಸಿದಂತೆ ತಾವು ಬಿತ್ತರಿಸಿದ ಬೆರಳೆಣಿಕೆಯ ಸಂಸ್ಕ್ರುತದ ಇಟ್ಟಿಗೆಗಳಿಂದಲೇ ’ಆದಶ್ಟನ್ನು ಕಟ್ಟಿ, ಮಿಕ್ಕಿದ್ದನ್ನು ಕಟ್ಟುವುದೇ ಏತಕ್ಕೆ ಎಂದು ಪ್ರಶ್ನಿಸಿ’ ಎನ್ನುತ್ತಾರೆ. ಇದಕ್ಕಿಂತ ಕಡಿಮೆ ತಪ್ಪು ಮಾಡುವವರು ’ನಿಮಗೆ ಬೇಕಾದ ಇಟ್ಟಿಗೆಯಲ್ಲೇ ಕಟ್ಟಿ, ನಾವೂ ನಿಮ್ಮ ಜೊತೆಗೆ ಇದ್ದೇವೆ, ಆದರೆ ನಿಮ್ಮ ಇಟ್ಟಿಗೆಗಳನ್ನು ಕಟ್ಟುವ ಅರಿಮೆಯನ್ನು ನಾವು ಅರಿಮೆಯೆಂದು ಗುರುತಿಸುವುದಿಲ್ಲ’ ಎನ್ನುತ್ತಾರೆ.

ಆದುದರಿಂದ ಇಲ್ಲಿ ನಾನು ಹೇಳಬಯಸುವುದೇನೆಂದರೆ ’ಬಾಶಾವಿಗ್ನಾನ’ಕ್ಕೆ ’ನುಡಿಯರಿಮೆ’ ಎಂದು ಹೊಸ ಪದ ಕಟ್ಟುವುದು ’ಬಾಶಾವಿಗ್ನಾನ’ವೆಂಬ ಪದದ, ಇಲ್ಲವೇ ಅದರ ಬೇರುನುಡಿಯಾದ ಸಂಸ್ಕ್ರುತದ ದ್ವೇಶದಿಂದಲ್ಲ, ’ನುಡಿಯರಿಮೆ’, ’ಸೊಲ್ಲರಿಮೆ’, ’ಅರಿವರಿಮೆ’, ’ಮೈಯರಿಮೆ’, ’ಬಾಳರಿಮೆ’, ’ಬದುಕರಿಮೆ’ ಎಂಬೆಲ್ಲ ಹೊಸ ಕನ್ನಡದ ಪದಗಳನ್ನು ತಾವೇ ಕಟ್ಟುವ ’ಮಾಡುಗತನ’ ಮತ್ತು ಮನುಶ್ಯತನದಲ್ಲಿ ಮೆರೆಯುವ ಆಸೆಯಿಂದ. ಈ ಮನುಶ್ಯತನವನ್ನು ಅಲ್ಲಗಳೆಯುವವರಿಗೆ ಅದರ ಸವಿಯೇನು ಗೊತ್ತು, ಉಪಯೋಗವೇನು ಗೊತ್ತು? ಈ ಮನುಶ್ಯತನವನ್ನು ಅಲ್ಲಗಳೆದು ಕನ್ನಡಿಗರನ್ನೆಲ್ಲ ಪದಕಟ್ಟಣೆಯ ಆಟದಲ್ಲಿ ’ಮಾಡಿಸಿಕೊಳ್ಳುಗ’ರಾಗಿಸುವವರಿಗೆ ಈ ಇಟ್ಟಿಗೆಗಳಿಂದ ಏನೇನು ಪ್ರಯೋಜನವಿದೆಯೆಂದು ಏನು ಗೊತ್ತು? ಈ ಬರಹದಲ್ಲೂ ನಾನೇ ಈ ’ಮಾಡುಗತನ’ ಮತ್ತು ಮನುಶ್ಯತನಗಳಲ್ಲಿ ಮೆರೆದಿದ್ದೇನೆ, ’ಒಡ-ಕಾಳಜಿಗ’ ಮುಂತಾದ ಪದಗಳನ್ನು ಕಟ್ಟಿ. ಇದನ್ನೇ ಸಂಸ್ಕ್ರುತದಲ್ಲಿ ಕಟ್ಟಲು ಬೇಕಾದ ಇಟ್ಟಿಗೆಯನ್ನು ನಾನು ವಾರಾಣಸಿಯಿಂದ ಹೊತ್ತು, ಇಲ್ಲವೇ ಇಲ್ಲದ/ಸತ್ತವರ ಬರೀ ಬರವಣಿಗೆಯ ನುಡಿಯಾದ ಸಂಸ್ಕ್ರುತದ ಹಳೆಯ ಗ್ರಂತಗಳನ್ನು ದೂಳುಹೊಡೆದು ತಂದು ನಂತರ ಕಟ್ಟುವುದು ಪೆದ್ದತನವೆಂದೂ ಕಶ್ಟದ ಕೆಲಸವೆಂದೂ ನನಗೆ ಅರಿವಾಗಿದೆ. ಅದರ ಬದಲಾಗಿ ನನ್ನೊಳಗಿನಿಂದ ಸಹಜವಾಗಿ ಹೊರಬರುವ, ಮತ್ತು ನನ್ನ ಸುತ್ತಮುತ್ತಲ ಜನರ ನಾಲಗೆಯಲ್ಲಿ ತಾನೇ ಓಡಾಡುವ ಪದಗಳನ್ನು ಬಳಸಿ ಪದಗಳನ್ನು ಕಟ್ಟುವುದು ಸುಲಬವೆಂಬ ಅರಿವು ನನಗಾಗಿದೆ. ಈ ಅರಿವು ವೈಗ್ನಾನಿಕವಾಗಿ ಚಿಂತಿಸುವವರಿಗೆ ಸುಲಬವಾಗಿ ಬರುತ್ತದೆ – ಹೊಸತನ್ನು ಕಟ್ಟಬೇಕೆಂಬ ಆಸೆಯಿದ್ದರೆ. ಹಳೆಯದನ್ನೇ ಹಾಡಿಕೊಂಡು ಮೆರೆಯುವುದೇ ಯಾರ ಗುರಿಯೋ ಅವರಿಗೆ ವೈಗ್ನಾನಿಕತೆಯಿದ್ದರೂ ಬರುವುದಿಲ್ಲ, ಏಕೆಂದರೆ ಅವಶ್ಯಕತೆಯೇ ಹೊಸತನ್ನು ಹಡೆಯುವುದು.

ಆದ್ದರಿಂದ ಕನ್ನಡದ್ದೇ ಪದಗಳನ್ನು ಕಟ್ಟಲು ಹೊರಡುವವರು ಸಂಸ್ಕ್ರುತದ ದ್ವೇಶದಿಂದಲ್ಲ, ಅದರಿಂದ ಹೆಕ್ಕಿ ತೆಗೆಯಲಾರದ ಇಟ್ಟಿಗೆಗಳು ಅಂಗೈಯಲ್ಲೇ ಇರುವಾಗ ಕೊಂಕಣ ಸುತ್ತಿ ಮೈಲಾರಕ್ಕೆ ಏತಕ್ಕೆ ಬರುವುದು ಎಂಬ ವೈಗ್ನಾನಿಕತೆಯಿಂದ. ಇನ್ನು ಆ ಅಂಗೈಯ ಮೇಲೆ ಕೊಳೆಬಟ್ಟೆಯೊಂದು ಮುಚ್ಚಿರುವಾಗ ಅದನ್ನು ತೆಗೆಯೋಣವೆನ್ನುವುದೇ ’ಹೊಸ-ಶಾಲೆ’ಯ ಸೊಲ್ಲರಿಮೆ ಮತ್ತು ನುಡಿಯರಿಮೆಗಳ ಸಂಶೋದನೆಯ ಗುರಿ; ಸಂಸ್ಕ್ರುತದ ದ್ವೇಶವಲ್ಲ. ಕನ್ನಡಕ್ಕೂ ಸಂಸ್ಕ್ರುತಕ್ಕೂ ಇಲ್ಲದ ನಂಟಿನ ವ್ಯಾಪಾರ ಇಲ್ಲಿಯವರೆಗೆ ’ಹಳೆ-ಶಾಲೆ’ಯವರಿಂದ ನಡೆದಿರುವಾಗ ಈಗ ಅರಿಮೆಯಿಂದ ಆ ನಂಟಿನ ಇಲ್ಲದಿರುವಿಕೆ ಬೆಳಕಿಗೆ ಬಂದಾಗ ಅದು ಸಂಸ್ಕ್ರುತದ ದ್ವೇಶವೆಂದು ’ಹಳೆ-ಶಾಲೆ’ಯವರಿಗೆ ಅನಿಸಬಹುದು, ಆದರೆ ’ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು, ನಿದಾನಿಸಿ ಯೋಚಿಸಿದಾಗ ನಿಜವು ತಿಳಿವುದು’.

ಬಾಳ ಕರೇ ಐತ್ರಿ!’

ಶ್ರೀ ಮಹೇಶ ಪ್ರಸಾದ ನೀರ್ಕಜೆಯವರು ಸರಿಯಾಗೇ ಕನ್ನಡದಲ್ಲಿ ಕೆಲವು ಕಡೆ ಮಹಾಪ್ರಾಣಗಳು ಉಲಿಯಲ್ಪಡುತ್ತವೆ ಎಂದು ತೋರಿಸಿಕೊಟ್ಟಿದ್ದಾರೆ (ಉದಾಹರಣೆಗೆ ’ಕರೇ’ ಮತ್ತು ’ಬಾಳ’ ಎನ್ನುವಲ್ಲಿ ಮೊದಲ ತಡೆಯುಲಿಯಲ್ಲಿ). ಆದರೆ ’ಎಲ್ಲರಕನ್ನಡ’ ಎನ್ನುವುದು ಕನ್ನಡಿಗರಿಗೆಲ್ಲರಿಗೂ ನೂರಕ್ಕೆ ನೂರು ಹತ್ತಿರವಾಗಲಾರದು. ’ಎಲ್ಲರಕನ್ನಡ’ವನ್ನು ಆದಶ್ಟೂ ಎಲ್ಲ ಕನ್ನಡಿಗರಿಗೆ ಹತ್ತಿರವಾಗಿಸುವುದು ನಮ್ಮ ಗುರಿಯಾಗಿರಬೇಕಶ್ಟೆ. ಈ ಗುರಿಯನ್ನು ಅರಿತವರಿಗೆ ಕೆಲವರೇ ಆಡುವ ಕೆಲವೇ ಪದಗಳನ್ನು ಬರೆಯುವಲ್ಲಿ ಉಂಟಾಗುವ ಸ್ಪೆಲಿಂಗ್ ತೊಂದರೆಗಳು, ಎಲ್ಲರೂ ಆಡುವ ಮಹಾಪ್ರಾಣವಿಲ್ಲದ ನುಡಿಯನ್ನು ಬರೆಯುವಾಗ ಮಹಾಪ್ರಾಣಗಳನ್ನು ಬಳಸಿದಾಗ ಉಂಟಾಗುವ ಸ್ಪೆಲಿಂಗ್ ತೊಂದರೆಗಿಂತ ತೀರ ಕಡಿಮೆ ಎಂದು ತಿಳಿಯುತ್ತದೆ, ಮತ್ತು ಕಡಿಮೆ ತೊಂದರೆಗೆ ಈಡುಮಾಡಿಕೊಡುವುದನ್ನು ಒಪ್ಪುವುದೇ ಲೇಸೆಂದು ತೀರ್ಮಾನಿಸುತ್ತಾರೆ. ಇಲ್ಲಿ ಇನ್ನೂ ಕೆಲವರ ವಾದವು ಹೇಗಿದೆಯೆಂದರೆ – ’ಹಲವು ಕನ್ನಡಂಗಳಲ್ಲಿ ಒಂದೇಸಮತೆ ತರುವುದು ಕಶ್ಟವಾಗಿರುವುದರಿಂದ ಆ ಎಲ್ಲ ಕನ್ನಡಂಗಳಿಗಿಂತ ದೂರವಾದ ಸಂಸ್ಕ್ರುತದಲ್ಲಿ ಬರೆದಂತೆ ಬರೆಯುವುದು ಒಂದೇಸಮತೆಯನ್ನು ತರುವ ವಿದಾನ’ ಎಂದಂತಿದೆ –  ಹೇಗೆ ವಿವಿದತೆಯ ನೆಲೆವೀಡಾದ ಬಾರತದಲ್ಲಿ ಒಂದೇಸಮತೆಯನ್ನು ಬ್ರಿಟೀಶರು ತರಲು ಹೊರಟರೋ, ಈಗ ಹಿಂದಿಗರು ತರಲು ಹೊರಟಿರುವರೋ ಹಾಗೆ.

’ಎಲ್ಲದಕ್ಕೂ ಹತ್ತಿರವಿರಬೇಕು’ ಎನ್ನುವುದಕ್ಕೂ ’ಎಲ್ಲದಕ್ಕೂ ಸಮದೂರದಲ್ಲಿ ಇರಬೇಕು’ ಎನ್ನುವುದಕ್ಕೂ ಅಂತರವಿದೆ. ’ಎಲ್ಲರಕನ್ನಡ’ ಎನ್ನುವುದು ಎಲ್ಲ ಕನ್ನಡಂಗಳಿಗೂ ಹತ್ತಿರವಿರಬೇಕು, ಸಮದೂರದಲ್ಲಿ ಇದ್ದರೆ ಸಾಲದು. ಏಕೆಂದರೆ ಚೈನೀಸು ಲಿಪಿಯೂ ಎಲ್ಲ ಕನ್ನಡಂಗಳಿಗೆ ಸಮದೂರದಲ್ಲಿದೆ. ಅಶ್ಟೇ ಅಲ್ಲ, ಕನ್ನಡಿಗರ ಆಡುನುಡಿಗಳಲ್ಲಿ ಮಹಾಪ್ರಾಣ ಕೇಳಿಸುವ ದಿನ ಬಂದರೆ ಮತ್ತೊಮ್ಮೆ ಮಹಾಪ್ರಾಣಗಳನ್ನು ಬರವಣಿಗೆಯಲ್ಲಿ ಸೇರಿಸಿಕೊಳ್ಳಲೂ ನಾವು ತಯಾರಿರಬೇಕು, ಏಕೆಂದರೆ ಬದಲಾವಣೆಯೆಂದರೆ ಬೀಳುಗೆಯೆಂಬುದು ’ಹೊಸ-ಶಾಲೆ’ಯ ನಿಲುವಲ್ಲ, ’ಹಳೆ-ಶಾಲೆ’ಯ ಅವೈಗ್ನಾನಿಕ ನಿಲುವು (ಅಂದಹಾಗೆ ಇಂತದ್ದೇ ನಿಲುವು ತಮಿಳರಿಗೂ ಇದೆ).

ಗುದ್ದಲಿ ಪೂಜೆಗೆ ಎಲ್ಲರೂ ದಯವಿಟ್ಟು ಬರಬೇಕು!

ಬರಿಗೆಮಣೆಯ ಸರಿಪಡಿಸುವಿಕೆ, ಕನ್ನಡದ್ದೇ ಪದಗಳ ಕಟ್ಟಣೆ, ಮತ್ತು ಕನ್ನಡದ ಸರಿಯಾದ ಸೊಲ್ಲರಿಮೆಯ ಬಗೆಗಿನ ಸಂಶೋದನೆ – ಇವುಗಳಲ್ಲಿ ಮೊದಲನೆಯದು ಮತ್ತು ಮೂರನೆದು ಎರಡನೆಯದಶ್ಟು ತುರ್ತಾಗಿ ಆಗಬೇಕಿಲ್ಲ ಎಂದು ನನ್ನ ನಿಲುವು. ಈ ವಿಶಯದಲ್ಲಿ ನನಗೂ ಶಂಕರಬಟ್ಟರಿಗೂ ಬಹಳ ವಾದಗಳು ನಡೆದಿವೆ, ಮತ್ತು ಈಗ ಅವರೂ ಇದನ್ನು ಹೆಚ್ಚು-ಕಡಿಮೆ ಒಪ್ಪುತ್ತಾರೆ.

ಆದರೂ ನಾನಿಲ್ಲಿ ಶಂಕರಬಟ್ಟರ ’ಹೊಸಬರಹ’ದಲ್ಲಿ ಬರೆಯುತ್ತಿರುವುದು ಹೀಗೂ ಬರೆಯಬಹುದು ಎಂದು ತೋರಿಸಬೇಕೆಂಬುದು ಕಾರಣದಿಂದ, ಈ ’ಹೊಸಬರಹದಲ್ಲಿ’ ನನಗೆ ಹೆಚ್ಚು ’ಮಾಡುಗತನ’ದ ಅನುಬವ ಆಗುತ್ತಿರುವ ಕಾರಣದಿಂದ, ಮತ್ತು ’ಹಳೆ-ಬರಹ’ ಕಂಡಾಗಲೆಲ್ಲ ಅದರ ಅವೈಗ್ನಾನಿಕತೆ, ಅದನ್ನು ಅಪ್ಪಿಕೊಳ್ಳುವವರಿಂದ ನಡೆದಿರುವ ಮತ್ತು  ನಡೆಯಿತ್ತಿರುವ ಕನ್ನಡಿಗರ ’ಮಾಡುಗತನ’ದ ಅಲ್ಲಗಳೆಯುವಿಕೆಯು ನೆನಪಾಗುವ ಕಾರಣದಿಂದ. ಮಾಡುಗತನ ಮತ್ತು ಮನುಶ್ಯತನಗಳು ನನ್ನದಶ್ಟೇ ಅಲ್ಲ, ಮನುಶ್ಯರೆಲ್ಲರ ಹುಟ್ಟಕ್ಕು (ಹುಟ್ಟಿನಿಂದ ಬಂದ ಹಕ್ಕು – ಈ ಪದವನ್ನು ಕಟ್ಟುವ ದೈರ್ಯವೇ ಕೆಲ ವರ್ಶಗಳ ಹಿಂದೆ ನನಗೆ ಇರಲಿಲ್ಲ, ಈಗ ಈ ಚಣದಲ್ಲಿ ಹುಟ್ಟಿದ್ದು ಇದು…). ಇದನ್ನು ಯಾರೂ ಕಿತ್ತುಕೊಳ್ಳಲಾರರು. ಇದನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದಶ್ಟೂ ಇದು ಬೇರೆಬೇರೆ ರೀತಿಗಳಲ್ಲಿ ಹೊರಬಂದು ಕಿತ್ತುಕೊಳ್ಳುವವರನ್ನು ಕಾಡುತ್ತದೆ. ಇದೇ ಪ್ರಕ್ರುತಿಯ ನಿಯಮ.

ಒಟ್ಟಿನಲ್ಲಿ ನನಗಾಗಲಿ ’ಹೊಸ-ಶಾಲೆ’ಯ ಬೇರೆಯವರಿಗಾಗಲಿ ಐವತ್ತೋ ಐವತ್ತೊಂದೋ ಬರಿಗೆಗಳ ಹಳೆ-ಬರಹದ ಮೇಲೆ ಯಾವ ದ್ವೇಶವೂ ಇಲ್ಲ. ಸಂಸ್ಕ್ರುತದ ಪದಗಳ ಮೇಲೂ ಯಾವ ದ್ವೇಶವೂ ಇಲ್ಲ, ಸಂಸ್ಕ್ರುತದ ಮೇಲೂ ಯಾವ ದ್ವೇಶವೂ ಇಲ್ಲ. ಇರುವುದು ಕನ್ನಡಿಗರ ಮಾಡುಗತನವನ್ನು ಹಿಂತಿರುಗಿಸುವ ಕಾಳಜಿ, ಅವರಿಂದ ದೂರವಾಗಿರುವ ಮನುಶ್ಯತನವನ್ನು ಹಿಂತಿರುಗಿಸುವ ಕಾಳಜಿ. ಈ ಕಾಳಜಿಗಳು ಯಾರುಯಾರಿಗೆ ಇವೆಯೋ ಅವರಿಗೆ ಈ ’ಹೊಸ-ಶಾಲೆ’ಯು ತಂದುಕೊಡುವ ಸ್ವಾತಂತ್ರ್ಯದಿಂದ ಉಸಿರುಕಟ್ಟಿರುವುದು ಬಿಟ್ಟಾಗ ಆಗುವ ಅನುಬವವಾಗುತ್ತದೆ.

ಈ ’ಹೊಸ-ಶಾಲೆ’ಯೆಂದರೆ ’ಇಂತದ್ದೇ’, ಇದರ ನಿಲುವುಗಳು ’ಇಂತವೇ’ ಎಂದು ಕಡಾಕಂಡಿತವಾಗಿ ಹೇಳಲು ಇನ್ನೂ ಸಾದ್ಯವಾಗಿಲ್ಲ. ಉದಾಹರಣೆಗೆ, ಇದರಲ್ಲಿ ಶಂಕರಬಟ್ಟರ ’ಹೊಸಬರಹ’ವನ್ನೇ ಬಳಸಬೇಕು ಎಂದು ಹೇಳಲು ಇನ್ನೂ ಸಾದ್ಯವಾಗಿಲ್ಲ. ಆದರೆ ಇಶ್ಟು ಮಾತ್ರ ಹೇಳಲು ಸಾದ್ಯವಾಗಿದೆ: ನಮ್ಮ ದಿಕ್ಕು ಬದಲಾಗಬೇಕಿದೆ, ಹುಸಿಯಿಂದ ದಿಟದ ಕಡೆಗೆ, ಕತ್ತಲಿನಿಂದ ಬೆಳಕಿನ ಕಡೆಗೆ, ಸಾವಿನಿಂದ ಬದುಕಿನ ಕಡೆಗೆ (ಹೌದು, ಇದು ಸಂಸ್ಕ್ರುತದ ಶ್ಲೋಕದ ಆಶು-ಕನ್ನಡಿಸುವಿಕೆಯೇ). ಬರವಣಿಗೆಯು ಮುಂದುವರೆಸುತ್ತಿರುವ ಸಾಮಾಜಿಕ ತಾರತಮ್ಯಗಳನ್ನು ಕಡಿದುಹಾಕಬೇಕಿದೆ, ಕನ್ನಡದಲ್ಲೇ ಪದಗಳನ್ನು ಕಟ್ಟುವ ಅಳವಿಗೆ ಮತ್ತೊಮ್ಮೆ ಜೀವ ತುಂಬಬೇಕಿದೆ, ಕನ್ನಡದ ಸೊಲ್ಲರಿಮೆಯ ಸರಿಯಾದ ಅದ್ಯಯನವಾಗಬೇಕಿದೆ. ಕನ್ನಡವನ್ನು ಅರಿವಿನ ಒಯ್ಯುಗನುಡಿಯಾಗಿ ಮಾರ್ಪಡಿಸಬೇಕಿದೆ, ಅರಿವಿನ ’ಮಾಡುಗ’ ನುಡಿಯಾಗಿ ಮಾರ್ಪಡಿಸಬೇಕಿದೆ. ಕನ್ನಡಿಗನ ’ಮಾಡುಗತನ’ವನ್ನು ಅವನಿಗೆ ಹಿಂತಿರುಗಿಸಬೇಕಿದೆ. ಈ ಶಾಲೆಯಲ್ಲಿ ಹಳೆ-ಶಾಲೆಗೆ ಬೋರಲಾಗಿ ಪ್ರಶ್ನೆಗಳಿಗೆ ಅವಕಾಶವಿದೆ, ಅರಿಮೆ ಮತ್ತು ತರ್ಕಕ್ಕೆ ಗೆಲುವಿದೆ, ಕನ್ನಡಿಗರ ಏಳಿಗೆಗೆ ಸರಿಯಾದುದು ಯಾವುದೋ ಅದಕ್ಕೆ ಮೊದಲ ಸ್ತಾನವಿದೆ.

ಈ ಶಾಲೆಯೇನು ಕಟ್ಟಿ ಮುಗಿಸಿಯೂ ಆಗಿಲ್ಲ, ಅದರ ನಕ್ಶೆಯೂ ಪೂರ್ತಿ ಬರೆದಾಗಿಲ್ಲ. ಈಗಿನ್ನೂ ಗುದ್ದಲಿಪೂಜೆ ನಡೆಯುತ್ತಿದೆ. ಆ ಗುದ್ದಲಿ ನಮ್ಮದೇ ನೆಲದಲ್ಲಿ ನೆಟ್ಟಿದೆ, ಅಶ್ಟೆ. ಎಲ್ಲರೂ ದಯವಿಟ್ಟು ಬರಬೇಕು!

50 ಟಿಪ್ಪಣಿಗಳು Post a comment
  1. ಏಪ್ರಿಲ್ 15 2011

    >>ಆದರೆ ಮಲೆಯಾಳಿಯಲ್ಲೂ ಮಾತಿನಲ್ಲಿ ಬರವಣಿಗೆಗಿಂತ ಬಹಳ ಕಡಿಮೆ ಸಂಸ್ಕ್ರುತದ ಪದಗಳಿವೆ ಎಂದು ಊಹಿಸಿ ಹೇಳಬಲ್ಲೆ

    ಬರೀ ಊಹೆ ಮಾಡಬೇಡಿ ಸ್ವಾಮಿ. ಒಂದು ನಾಲ್ಕು ಮಲೆಯಾಳಂ ಸಿನೆಮಾಗಳನ್ನು ನೋಡಿದರೆ, ನಿಮಗೆ ನಿಮ್ಮ ಊಹೆ ತಪ್ಪು ಅನ್ನೋದನ್ನ, ಯಾರೂ ಹೇಳದೇ ಸುಲಭವಾಗೇ ಮನದಟ್ಟಾಗುತ್ತೆ ಬಿಡಿ!

    ಉತ್ತರ
  2. ಏಪ್ರಿಲ್ 15 2011

    ’X << Y’ ಎಂಬುದು ನನ್ನ ಊಹೆ. (X = ಮಾತಿನಲ್ಲಿ ಸಂಸ್ಕ್ರುತ ಪದಗಳ ಬಳಕೆ, Y = ಬರವಣಿಗೆಯಲ್ಲಿ ಸಂಸ್ಕ್ರುತ ಪದಗಳ ಬಳಕೆ).

    ನೀವು ಹೇಳುತ್ತಿರುವುದು ’X ಸಾಕಶ್ಟು ದೊಡ್ಡದಿದೆ’ ಎಂದು. ಅದನ್ನು ನಾನೂ ಹೇಳಿದ್ದೇನೆ, ಗಿರೀಶಬಟ್ಟರೂ ಹೇಳಿದ್ದಾರೆ. ಮೇಲೆ ಓದಿ ನೋಡಿ.

    ನಾಲ್ಕಲ್ಲ, ನಾಲ್ಕುನೂರು ಸಿನಿಮಾಗಳನ್ನು ನೋಡಿದರೂ Y ಎಶ್ಟು ಎಂಬುದು ತಿಳಿದು ಬರುವುದಿಲ್ಲ. ತಿಳಿದು ಬರುವುದು ಮಲಯಾಳಿ ಸಾಹಿತ್ಯವನ್ನು ಓದುವುದರಿಂದ, ಓದಿ ಅದಕ್ಕೂ ಮಾತಿಗೂ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳುವುದರಿಂದ.

    ಇಲ್ಲಿ ನೀವು ನನ್ನ ಊಹೆಯನ್ನು ತಪ್ಪೆನ್ನುತ್ತಿರುವುದೂ Y ಎಂಬುದರ ನಿಮ್ಮ ’ಊಹೆ’ಯಿಂದಲೇ ಎಂದು ನನಗೆ ಗುಮಾನಿ, ಏಕೆಂದರೆ ಮಲೆಯಾಳಿ ಸಾಹಿತ್ಯದ ಮಾತೇ ನೀವು ಆಡಿಲ್ಲ. ಅತವಾ X ಮತ್ತು Y ಎಂಬ ಎರಡು ಎಂಟಿಟಿಗಳ ಬಗ್ಗೆ ನಾನು ಹೇಳಿರುವುದು ಗಮನಕ್ಕೆ ಬರಲಿಲ್ಲವೋ?

    ಉತ್ತರ
    • ಮಾಯ್ಸ
      ಏಪ್ರಿಲ್ 15 2011

      ಇಲ್ಲ ಕಿರಣ್.. ನೀಲಾಂಜನ ಅವರ ಮಾತು ಸರಿ…

      ಕೇರಳದಲ್ಲಿ ಮಂದಿ ಹೊತ್ತಗೆಯಲ್ಲಿ ಎಶ್ಟು ಸಂಸ್ಕ್ರುತ ಬಳಸುವರೋ ಅಶ್ಟೇ, ಮಾತಿನಲ್ಲೂ ಬಳಸುವುರು. ಆದರೆ ಅದು ಎಲ್ಲ ವರ್ಗ, ಜಾತಿಗಳಲ್ಲೂ ಅಲ್ಲ. ಕೆಳವರ್ಗದವರ, ಮುಸ್ಲಿಮರ, ಕ್ರಿಶ್ಚಿಯನ್ನರ ಮಾತಿನ ಕತೆಯೇ ಬೇರೆ. ಕೇರಳದಲ್ಲಿ ಮುಸ್ಲಿಮರು ಹಾಗು ಕ್ರಿಶ್ಚಿಯನ್ನರು ಕರ್ನಾಟಕಕ್ಕಿಂತ proportionally ತೀರಾನೇ ಹೆಚ್ಚಿದ್ದು, ಅವರ ಮಾತಿನಲ್ಲಿ ಅರಬ್ಬಿ, ಇಂಗ್ಲೀಶು, ಪೋರ್ಚುಗೀಸು ಹೀಗೆ ಅವರ ದರ್ಮದ ನುಡಿಯು ತುಂಬಿಕೊಳ್ಳುತ್ತಿದೆ.

      ನಿಮ್ಮ ಬರಹದಲ್ಲಿ ಬಂದ ಹಾಗೆ ಕೇರಳದಲ್ಲಿ ತೀರಾ ಜಾತಿ-ದರ್ಮದ ಒಡಕು. ತುಂಬಾ polarized ಸಮಾಜ ಅದು. ನಾನು ಓದಿದ ಇತಿಹಾಸದ ಪ್ರಕಾರ ತೀರಾ ಮಡಿವಂತ ನಂಬೂದರಿಗಳು, ಬರಗಾಲದಲ್ಲಿ ಕೆಳವರ್ಗದವರ ಮೇಲೆ ಮಾಡಿದ ಕೆಡುಕಿನಿಂದ ಮಳಯಾಳದ ದೊಡ್ಡ ಪಾಲು ಮಂದಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ನಾಗಿ ಹೋದರು, ಹಾಗು ಅವರೆಲ್ಲ ಈಗ ಮಳಯಾಳಂಇಂದ ಸಂಸ್ಕ್ರುತದ ಪದಗಳನ್ನು ಹೆಕ್ಕಿ ತೆಗೆದು ಅವರ ದರ್ಮದ ನುಡಿಯ ಪದಗಳನ್ನು ಸೇರಿಸ ತೊಡಗಿದ್ದಾರಂತೆ. ಈ ಸಂಗತಿಯಿಂದ ಮಳಯಾಳಂ ದರ್ಮದಿಂದ ದರ್ಮಕ್ಕೆ ಎರವಲು ಪದಗಳಿಂದ ಬೇರೆಯದೇ ನುಡಿಯಂತೆ ಆಗಿಹೋಗುತ್ತಿದೆ.

      ಕರ್ನಾಟಕವೂ ಅಂತ ಒಡಕು-ಸಮಾಜ ಹೊಂದಲೂ, ಸಂಸ್ಕ್ರುತ ಬೂಯಿಶ್ಟತನ ಸಹಕಾರಿ. ಎಲ್ಲರ-ಕನ್ನಡದಿಂದ ಒಂದಿಕೆ!

      ಉತ್ತರ
      • ಏಪ್ರಿಲ್ 16 2011

        ಮಾಯ್ಸ ಅವರೆ:

        ನೀವು ಮಲೆಯಾಳಿ ಸಾಹಿತ್ಯವನ್ನು ಓದಿದ್ದೀರಾ? ಓದಿರುವುದಾದರೆ ’ಸಾಕಶ್ಟು’ ಓದಿದ್ದೀರಾ? ಇಲ್ಲವಾದರೆ ಅದರಲ್ಲಿ ಮಾತಿನಶ್ಟೇ ಸಂಸ್ಕ್ರುತದ ಪದಗಳಿವೆ ಎಂದು ಹೇಗೆ ಹೇಳಬಲ್ಲಿರಿ? ಊಹೆಯಿಂದ ತಾನೇ? ಆ ಊಹೆಯನ್ನು ನಾನು ಪ್ರಶ್ನಿಸುತ್ತೇನೆ. ನನ್ನ ಊಹೆ ಬೇರೆ.

        ಅಲ್ಲದೆ, ಅಲ್ಲಿ ’ಕೆಳವರ್ಗದವರು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ’ ನುಡಿಯ ’ಕತೆಯೇ ಬೇರೆ’ ಎಂದು ನೀವೇ ಹೇಳಿದ್ದೀರಿ. ಅವರನ್ನೂ ’ಕೇರಳದ ಮಂದಿ’ ಎಂದೇನು ನೀವು ಎಣಿಸುತ್ತಿಲ್ಲವೇನು? ಹಾಗೆ ಎಣಿಸಿದಾಗಲೂ ’ಮಾತಿನಲ್ಲಿ ಇರುವಶ್ಟೇ ಬರಹದಲ್ಲೂ’ ಎಂಬ ಮಾತು ನಿಮ್ಮ ಸೊಲ್ಲುಗಳ ಆದಾರದ ಮೇಲೇ ಬಿದ್ದುಹೋಗುವುದಿಲ್ಲವೇ?

        ಮಿಕ್ಕಂತೆ, ಎಲ್ಲರಕನ್ನಡದಿಂದ ಸಮಾಜದಲ್ಲಿ ಒಂದಿಕೆಯಾಗುತ್ತದೆ ಎಂಬ ನಿಮ್ಮ ಮಾತು ಬಹಳ ನಿಜ. ಅದೇ ’ಹೊಸ-ಶಾಲೆ’ಯ ಒಂದು ಬಲುಮುಕ್ಯವಾದ ಪ್ರೇರಣೆ.

        ನೀಲಾಂಜನ ಅವರೆ:

        ಮಾಯ್ಸ ಅವರ ಉತ್ತರದಿಂದ ನಿಮಗೆ ನಾನು ಕೇಳಿರುವ ಪ್ರಶ್ನೆಗೆ ಉತ್ತರ ಸಿಕ್ಕಿದಂತಾಗಿಲ್ಲ. ಆದುದರಿಂದ ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ. ನನಗೆ ತಿಳಿದಿರುವ ಮಟ್ಟಿಗೆ ನಿಮಗೆ ನಾಲ್ಕು ದಾರಿಗಳಿವೆ:

        ೧)
        ನಾನು X ಮತ್ತು Y ಎಂಬ ಎರಡು ಎಂಟಿಟಿಗಳ ಬಗ್ಗೆ ಮಾಡಿದ ಊಹೆಯನ್ನು X ಒಂದರ ಬಗ್ಗೆ ಮಾತ್ರ ನೀವು ಆಡಿದ ಒಂದು ಸೊಲ್ಲಿನಿಂದ ತಪ್ಪೆನ್ನುವ ನಿಮ್ಮ ತರ್ಕವನ್ನು ಸರಿಯೆಂದು ತೋರಿಸುವುದು.

        ೨)
        ನನ್ನ ಊಹೆ ಅವೆರಡು ಎಂಟಿಟಿಗಳ ಬಗ್ಗೆ ಎಂದು ನೀವು ಗ್ರಹಿಸಲಿಲ್ಲವೆಂದು ಒಪ್ಪಿಕೊಳ್ಳುವುದು.

        ೩)
        X>=Y ಎಂಬುದು ನಿಮ್ಮ ’ಊಹೆ’ಯೆಂದು ಒಪ್ಪಿಕೊಂಡು ’ಬರೀ ಊಹೆಯ ಸ್ವಾಮಿ’ ನೀವೂ ಆಗುವುದು (ತಮಾಶೆಯಾಗಿ ಹೇಳುತ್ತಿದ್ದೇನೆ, ಇದನ್ನು ಗಂಬೀರವಾಗಿ ತೆಗೆದುಕೊಳ್ಳಬೇಡಿ!). ’ಊಹೆ’ ಮಾಡಿದಾಗ ಮಾಡಿರುವುದನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ತರ್ಕದೋಶಗಳು ಬರುತ್ತವೆ.

        ನಮ್ಮಿಬ್ಬರ ಊಹೆಗಳಲ್ಲಿ ಯಾವುದು ಸರಿ ಎಂಬುದರ ಬಗ್ಗೆ ಮುಂದೆ ನೋಡೋಣ. ನೀವೂ ಮಲಯಾಳಿಯ ಬಗ್ಗೆ ಹೆಚ್ಚಿ ಸಂಶೋದನೆ ಮಾಡಿರಿ, ನಾನೂ ಮಾಡುತ್ತೇನೆ, ಆಮೇಲೆ ಚರ್ಚಿಸೋಣ.

        ೪)
        X>=Y ಎನ್ನುವುದು ಎಲ್ಲರರಿವಿನ ದಿಟವೆಂದು ಊಹೆಗಳಿಲ್ಲದೆ ತೋರಿಸುವುದು. ಆಗ ನನಗೊಬ್ಬನಿಗೇ ಇದು ಗೊತ್ತಿಲ್ಲದೆ ಇರುವುದರಿಂದ ನಿಮ್ಮ ತೋರಿಸುವಿಕೆಯನ್ನು ಪರೀಕ್ಶಿಸಿ ಮುಂದುವರೆಯುತ್ತೇನೆ.

        ಉತ್ತರ
        • ಮಾಯ್ಸ
          ಏಪ್ರಿಲ್ 16 2011

          ನಾನು ಊಹೆಯಿಂದ ಹೇಳಿದ್ದಲ್ಲ..

          http://en.wikipedia.org/wiki/Loan_words_in_Malayalam

          ಅಲ್ಲಿ ನೋಡಿ.. ಮಲಯಾಳಂ ಕತೆ ಕಾಲಿ ಪೇಂದ ಉಡೀಸ್!

          ಉತ್ತರ
        • ಏಪ್ರಿಲ್ 19 2011

          ಕಿರಣ ಅವರೆ,

          ನಾನು ಕೆಲವು ದಿನ ಈ ಕಡೆ ಬಂದಿರಲಿಲ್ಲ. ನೀವು ನನಗೆ ನಾಲ್ಕು ದಾರಿ ಕೊಟ್ಟಿರಿ, ಐದನೆಯದನ್ನು ನಾನು ಆರಿಸಿಕೊಳ್ಳುವೆ.

          ನಿಮ್ಮ ಊಹೆ ಎರಡು ಎಂಟಿಟಿಗಳ ಬಗ್ಗೆ ಎನ್ನುವುದನ್ನು ನಾನು ಗ್ರಹಿಸಿದೆ, ನನ್ನ ಟಿಪ್ಪಣಿ ಇದ್ದಿದ್ದು “ಮಾತಿನಲ್ಲಿ ಬರವಣಿಗೆಗಿಂತ ಬಹಳ ಕಡಿಮೆ” ಅನ್ನುವ ಸಾಲಿನ ಬಗ್ಗೆ.

          ಬಹಳ ಕಡಿಮೆ ಎಂದರೆ ಎಷ್ಟು ಕಡಿಮೆ ಅನ್ನೋ ಪ್ರಶ್ನೆ ಬರುತ್ತದೆ. ಬರವಣಿಗೆಯಲ್ಲಿ ಹತ್ತು ಪದವಿದ್ದಾಗ, ಮಾತಿನಲ್ಲಿ ಎರಡೋ ಮೂರೋ ಇದ್ದರೆ ಅದು “ಬಹಳ” ಕಡಿಮೆ ಅನ್ನಬಹುದು; ಆರೋ ಏಳೋ ಇದ್ದರೆ ಅದು “ಕಡಿಮೆ” ಅಷ್ಟೇ ಅಂತ ನನ್ನೆಣಿಕೆ, ಈ ವಿಭಾಗಗಳು ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ರೀತಿ ಹುಟ್ಟಬಹುದು ಬಿಡಿ.

          ಮಲೆಯಾಳವನ್ನು ಓದಿ, ಬರೆಯದ ನಾನು ಬರವಣಿಗೆಯ ಬಗ್ಗೆ ಮಾತನಾಡಲಾರೆ. ಆದರೆ ನಾನು ಕೇಳಿರುವ ಮಲೆಯಾಳ ಮಾತುಕತೆಯಲ್ಲಿ (ಆಡುಮಾತು) ಸಂಸ್ಕೃತ ಪದಗಳು ಕನ್ನಡಕ್ಕಿಂತ ಲೆಕ್ಕಿಸುವಷ್ಟು ಹೆಚ್ಚಿವೆ ಅನ್ನುವುದು ನನ್ನ ಮಾತಿನ ಹುರುಳಾಗಿತ್ತು. ಅದನ್ನು ನಾನು ಬರೆದ ರೀತಿಯೂ ಸರಿಯಿರಲಿಕ್ಕಿಲ್ಲವೇನೋ.

          ಮಲೆಯಾಳದ ಬಗ್ಗೆ ತಾಂತ್ರಿಕವಾಗಿ ಆಳವಾಗಿ ಮಾತನಾಡಲು ನಾನು ಶಕ್ತನಲ್ಲ. ಕೃಷ್ಣಪ್ರಕಾಶರು ಅದನ್ನು ಮಾಡಿದ್ದಾರೆ, ಮತ್ತೆ ನಮ್ಮೆಲ್ಲರ ಮನಸ್ಸಿನ ಅನುಮಾನಗಳನ್ನು ಅವರು ಚೆನ್ನಾಗಿ ಪರಿಹರಿಸಬಲ್ಲರು ಅನ್ನಿಸುತ್ತೆ.

          ಉತ್ತರ
          • ಏಪ್ರಿಲ್ 19 2011

            ೧) ನನ್ನ ಟಿಪ್ಪಣಿ ಇದ್ದಿದ್ದು “ಮಾತಿನಲ್ಲಿ ಬರವಣಿಗೆಗಿಂತ ಬಹಳ ಕಡಿಮೆ” ಅನ್ನುವ ಸಾಲಿನ ಬಗ್ಗೆ

            ೨) ಮಲೆಯಾಳವನ್ನು ಓದಿ, ಬರೆಯದ ನಾನು ಬರವಣಿಗೆಯ ಬಗ್ಗೆ ಮಾತನಾಡಲಾರೆ

            ನಿಮ್ಮ ಮೇಲಿನ ಎರಡು ಮಾತುಗಳೂ ನಿಜವಾಗಿದ್ದರೆ ಮೊದಲನೆಯದು ಊಹೆಯಿಂದಶ್ಟೇ ಮಾಡಿರಲು ಸಾದ್ಯ. ಆದುದರಿಂದ ನೀವು ಆರಿಸಿಕೊಂಡಿರುವುದು ಐದನೆಯ ದಾರಿಯನ್ನಲ್ಲ, ನಾನು ಮೇಲೆ ಬರೆದ ಮೂರನೆಯದನ್ನು.

            ಬರವಣಿಗೆಯ ಬಗ್ಗೆ ಮಾತನಾಡಲಾರೆ, ಮಾತನಾಡಲಾರೆ ಎಂದು ಮಾತನಾಡುತ್ತಲೇ ಇದ್ದೀರಲ್ಲ? ಇದನ್ನೇ ಊಹೆ ಎನ್ನುವುದು. ಇದೇನು ತಪ್ಪಲ್ಲ, ನಾನೂ ಮಾಡಿದ್ದೇನೆ. ಊಹೆ ಎಂದು ನಾನು ಒಪ್ಪಿಕೊಂಡಿದ್ದೇನೆ, ನೀವು ಒಪ್ಪಿಕೊಂಡಿಲ್ಲ, ಅಶ್ಟೆ.

            ಉತ್ತರ
            • ಏಪ್ರಿಲ್ 19 2011

              ನಿಮ್ಮ ತರ್ಕದ ತಾರ್ಕಿಕತೆಯನ್ನು ಪರೀಕ್ಶಿಸಲು ಈ ಉದಾಹರಣೆ ತೆಗೆದುಕೊಳ್ಳಿ. ಈ ಕೆಳಗಿನ ಎರಡು ಸೊಲ್ಲುಗಳು ನಿಮ್ಮ ಎರಡು ಸೊಲ್ಲುಗಳಿಗೆ ಉದಾಹರಣೆಗಳು (ನಾನು ಮೇಲೆ ಎತ್ತಿಕೊಂಡಿದ್ದೇನಲ್ಲ, ಆ ಎರಡು ಸೊಲ್ಲುಗಳಿಗೆ):

              ಸೊಲ್ಲು ೧:

              ’ಕೆಂಪು ಡಬ್ಬಿಯಲ್ಲಿ ನೀಲಿ ಡಬ್ಬಿಗಿಂತ ಬಹಳ ಕಡಿಮೆ ಗೋಲಿಗಳಿವೆ’

              ಸೊಲ್ಲು ೨

              ’ನನಗೆ ನೀಲಿ ಡಬ್ಬಿಯಲ್ಲಿ ಎಶ್ಟು ಗೋಲಿಗಳಿವೆ ಎಂದು ಗೊತ್ತಿಲ್ಲ’

              ಮೇಲಿನ ಎರಡು ಸೊಲ್ಲುಗಳೂ ನಿಜವಾಗಿದ್ದರೆ ಮೊದಲನೆಯದು ಊಹೆ. ಅದನ್ನು ಊಹೆಯೆಂದು ನಾನು ಒಪ್ಪುತ್ತೇನೆ, ನೀವು ಒಪ್ಪುತ್ತಿಲ್ಲ. ಅಶ್ಟೇ.

              ಉತ್ತರ
              • ಏಪ್ರಿಲ್ 19 2011

                ’ಕೆಂಪು ಡಬ್ಬಿಯಲ್ಲಿ ನೀಲಿ ಡಬ್ಬಿಗಿಂತ ಬಹಳ ಕಡಿಮೆ ಗೋಲಿಗಳಿವೆ’

                ಬದಲು ಇದು ಇನ್ನೂ ಸುಲಬ:

                ’ಕೆಂಪು ಡಬ್ಬಿಯಲ್ಲಿ ನೀಲಿ ಡಬ್ಬಿಗಿಂತ ಬಹಳ ಕಡಿಮೆ ಗೋಲಿಗಳಿವೆ ಎನ್ನುವ ಕಿರಣನ ಊಹೆ ತಪ್ಪು’

                ಉತ್ತರ
  3. ಏಪ್ರಿಲ್ 15 2011

    ಕನ್ನಡ ಬರಹವನ್ನು ಓದುವವರಿಗೆ ಆಂಗ್ಲ ಭಾಷಾಜ್ಞಾನ ಇರಲೇಬೇಕೇ?
    ಇಲ್ಲಿ ಬಳಸಿರುವ ಕೆಲವು ಆಂಗ್ಲ ಪದಗಳನ್ನು ಓದಿ ಅರ್ಥೈಸಿಕೊಳ್ಳಲಾಗದೇ ಒದ್ದಾಡಿ, ಅರ್ಧಕ್ಕೇ ಓದು ನಿಲ್ಲಿಸಿದೆ.
    “ಎಂಟಿಟಿ” ಎಂಬ ಪದವನ್ನು ಕನ್ನಡದ ಪದವೆಂದೇ ತಿಳಿದು ಒದ್ದಾಡಿದೆ. ಆಮೇಲೆ ಇದ್ಯಾವುದೋ ಆಂಗ್ಲ ಪದವಿರಬೇಕು ಎಂದು ತಿಳಿದು, ಸುಮ್ಮನಿದ್ದುಬಿಟ್ಟೆ.
    ಅಂಥ ಪರಭಾಷಾ ಪದಗಳ ಕನ್ನಡಾನುವಾದವನ್ನು ಆವರಣದೊಳಗೆ ಕೊಟ್ಟರೆ ಆಂಗ್ಲಭಾಷೆಯ ಅರಿವಿಲ್ಲದವರೂ ಕನ್ನಡ ಭಾಷೆಯ ಇಂಥ ಬರಹಗಳನ್ನು ಸರಾಗವಾಗಿ ಓದಿ ಅರ್ಥೈಸಿಕೊಳ್ಳಬಹುದು.

    ಉತ್ತರ
    • ಏಪ್ರಿಲ್ 16 2011

      ಕ್ಶಮಿಸಿ. ಹೌದು, ಇದು ಇಂಗ್ಲೀಶಿನಿಂದ ನಾನು ಇಗೋ ಈಗ ಕನ್ನಡಕ್ಕೆ ತಂದ ಪದವೇ. ಕನ್ನಡ ಲಿಪಿಯಲ್ಲೇ ’ಎಂಟಿಟಿ’ ಎಂದು ಗೂಗಲಿಸಿ (Google + ’ಇಸಿ’) ನೋಡಿದ್ದರೆ ಅರ್ತ ತಿಳಿಯುತ್ತಿತ್ತು, ಇಲ್ಲವೇ ಊಹಿಸಬಹುದಿತ್ತು ಎಂದು ಹಾಗೇ ಬಿಟ್ಟೆ.

      ಅಲ್ಲದೆ, ’ಎಂಟಿಟಿ’ ಎಂಬುದಕ್ಕೆ ಕನ್ನಡದ ಇಲ್ಲವೇ ಜಗತ್ತಿನ ಇನ್ನಾವುದೇ ನುಡಿಯಲ್ಲಿ ಇದಕ್ಕಿಂತ ಚಿಕ್ಕದಾಗಿಯೂ ಚೊಕ್ಕದಾಗಿಯೂ ಕನ್ನಡದ ನಾಲಿಗೆಯು ಉಲಿಯಲು ಸುಲಬವಾಗಿಯೂ ಇರುವ ಬೇರೊಂದು ಪದವಿದ್ದರೆ ತಿಳಿಸಿ.

      ಮಾಯ್ಸ/ಬರತ್… ನಿಮ್ಮ ಬತ್ತಳಿಕೆಯಲ್ಲಿ ಇರಬೇಕಲ್ಲ ಇದು?

      ಉತ್ತರ
      • ಮಾಯ್ಸ
        ಏಪ್ರಿಲ್ 16 2011

        ಪ್ರೊ. ಡಿ. ಎನ್. ಶಂಕರ ಭಟ್ ಅವರ “ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು” ನಿಘಂಟು

        entity ನಾಮಪದ
        ಇರವು, ಇರುಗ

        ಆದರೆ ಅದು ಒಗ್ಗದ್ದು..

        ” ಮೊದಲು ಬದಲಾವಣೆಯೆಂಬ ಒಂದು ಎಂಟಿಟಿಯ ಇರುವಿಕೆಯನ್ನು ಗೌರವಿಸಿ,”
        ಈ ಸಾಲನ್ನು.. “ಮೊದಲು ಮಾರ್ಪಾಟೆಂಬುದೊಂದಿದೆ ಎಂಬುದನ್ನು ಗವ್ರವಿಸಿ” ಎಂದು ಬರೆಯಬಹುದು.

        ನಾವು ಕನ್ನಡದಲ್ಲಿ ಹೇಳೋ ಬಗೆ ಹೀಗೆ..
        “ಆ ಕಾಡುಮಂದಿಗೆ ಕೊಳಾಯಿ ಎಂಬುದಿದೆ(ಎಂಬ ಎಂಟಿಟಿ ಇದೆ) ಎಂದೇ ಗೊತ್ತಿರಲಿಲ್ಲ )

        ಉತ್ತರ
  4. Narendra Kumar.S.S
    ಏಪ್ರಿಲ್ 15 2011

    ಕಿರಣ್, ನಮ್ಮೆಲ್ಲರ ಪ್ರಶ್ನೆ-ಸಂದೇಹಗಳಿಗೂ ತಾಳ್ಮೆಯಿಂದ ಉತ್ತರಿಸಿರುವುದಕ್ಕೆ ಧನ್ಯವಾದಗಳು.
    ಹಿಂದಿನ ಲೇಖನಗಳಲ್ಲಿ ಚರ್ಚೆ ನಡೆದ ವೇಳೆ ನಡೆದ ಕೆಲವು ಬೇಸರದ ನಡವಳಿಕೆಯಿಂದ, ಇಲ್ಲಿ ಚರ್ಚೆಗೆ ಸ್ವಾಗತವಿಲ್ಲ ಎನ್ನಿಸಿತ್ತು.
    ಇದೀಗ ನಿಮ್ಮ ಲೇಖನ ನೋಡಿದ ನಂತರ, ನನ್ನ ಭಾವನೆ ಬದಲಾಗಿದೆ.

    ಲೇಖನ ಬಹಳ ದೀರ್ಘವಾಗಿದೆ. ಒಂದೆರಡು ದಿನ ಊರಿನಲ್ಲೂ ಇರುವುದಿಲ್ಲ.
    ಹೀಗಾಗಿ, ಸೋಮವಾರದ ನಂತರವೇ ಓದಲು ಸಾಧ್ಯವಾಗುವುದು.
    ಓದಿದ ನಂತರ, ನನ್ನ ಪ್ರತಿಕ್ರಿಯೆಯನ್ನು ಕಳುಹಿಸುವೆ.

    ಉತ್ತರ
  5. ರವಿ ಕುಮಾರ್ ಜಿ ಬಿ
    ಏಪ್ರಿಲ್ 15 2011

    ಚೆನ್ನಾಗಿ ಬರೆದಿದ್ದೀರಿ ಕಿರಣ್ ರವರೆ , ಮೊದಲಿಗೆ ಧನ್ಯವಾದ , ಆದರೆ ನನಗನಿಸಿದ್ದು ಏನೆಂದರೆ ಹೀಗೆ ಬದಲಾಯಿಸಲು ಹೊರಟು ನಮ್ಮ ಕನ್ನಡವನ್ನ ನಾವೇ ನಮ್ಮ ಕೈಯಾರೆ ಹಾಳುಮದುತ್ತಿದ್ದೆವೆಯೋ ಎಂದು !!! ಏಕೆಂದರೆ ಒಂದು ಐ ಎ ಎಸ್ ಪರೀಕ್ಷೆ ಯಲ್ಲಿ ಕೇಳಿದ ಪ್ರಶ್ನೆ “ಜಗತ್ತಿನ ಅತೀ ಹೆಚ್ಚು ಮಾತಾಡುವ ಭಾಷೆ ತೆಲುಗು ಎಂದು “. (ನನಗೆ ಐ ಎ ಎಸ್ ಬರೆದ ಸ್ನೇಹಿತರು ಹೇಳಿದ್ದು). ಯಾಕಿರಬಹುದೆಂದು ಯೋಚಿಸಿ ದಾಗ, ಕೆಲವರಲ್ಲಿ ಕೇಳಿದಾಗ ನನಗನಿಸಿದ್ದು ತೆಲುಗಿನಲ್ಲಿ ಎಲ್ಲರೂ ಹೆಚ್ಚೂ ಕಡಿಮೆ ಒಂದೇ ತರಹ ಮಾತನಾಡುತ್ತಾರೆ ಮತ್ತು ಬರೆಯುತ್ತಾರೆ !! ಕನ್ನಡದಲ್ಲಿರುವಂತೆ ಒಂದೊಂದು ಪ್ರಾಂತ ದವರು ಒಂದೊಂದು ತರಹ ಮಾತನಾಡುವುದಿಲ್ಲ !!!! ಉದಾಹರಣೆಗೆ ಉತ್ತರ ಕರ್ನಾಟಕದವರು ಮಾತನಾಡಿದ್ದು ದಕ್ಷಿಣ ಕರ್ನಾಟಕದವರಿಗೆ ಸರಿಯಾಗಿ ಅರ್ಥ ಆಗುವುದಿಲ್ಲ ಹಾಗೆಯೇ ತಿರುಗುಮುರುಗು …. ಈಗ ನಾವು ಬರವಣಿಗೆಯಲ್ಲಿ ಬದಲಾವಣೆ ಅಂತ ಹೊರಟು ‘ನುಡಿದಂತೆ ಬರೆ ” ಅಂತ ಹೊರಟು ಮುಂದೆ ಬರವಣಿಗೆಗೂ ಇದೇ ಗತಿ ಆದರೆ ? ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ತೊಂದರೆ ಅಲ್ಲವೇ? ಈಗ ಕೊನೆ ಪಕ್ಷ ಬರವಣಿಗೆ ಯಾದರೂ ಹೆಚ್ಚೂ ಕಡಿಮೆ ಒಂದೇ ರೀತಿಯಿದೆ ಎಲ್ಲಾ ಪ್ರಾಂತದವರು ಓದಬಹುದು.(ಅಪವಾದ ಇರಬಹುದು=> ಈ ಮಾತು ಯಾಕೆ ಹೇಳಿದೆ ಅಂದರೆ ನನಗೆ ಗೊತ್ತು ಇದಕ್ಕೆ ಈ ಶಬ್ದ ನೋಡಿ ಆ ಶಭ್ಧ ನೋಡಿ…ಈ ಪುಸ್ತಕ ಓದಿ ಆ ಪುಸ್ತಕ ಓದಿ ಎಂದೋ ಇಲ್ಲಾ ಈ ಕೊಂಡಿ ನೋಡಿ ಎಂದು ಬರುತ್ತಾರೆ ಅಂತ !!! ಇರಲಿ !!!).
    ಬೇರೆಯವರ ವಿಷಯ ನನಗೆ ಗೊತ್ತಿಲ್ಲ ….ನಾನಂತೂ ನೀವು ಬರೆದಿದ್ದನ್ನು ಓದಲು ಬಹಳ ಕಷ್ಟ ಪಟ್ಟೆ!!! ಉದಾ:ಅವೈಗ್ನಾನಿಕತೆ,ವೈಗ್ನಾನಿಕತೆ,ಸೊಲ್ಲರಿಮೆಯ,ನುಡಿಯರಿಮೆ,ಚಣ ಇತ್ಯಾದಿ ಇತ್ಯಾದಿ.
    ಮತ್ತೆ ಕೊನೆಯದಾಗಿ ಹೊಸ ಪದಗಳನ್ನು ಸೇರಿಸುವುದಕ್ಕೆ ನನ್ನ ಅಸಮಧಾನ ಇಲ್ಲ ! , ಕೆಲವು ನಮ್ಮಲ್ಲಿ ಹಾಸು ಹೊಕ್ಕಾಗಿರುವ ಶಬ್ಧಗಳನ್ನ ಬದಲಾಯಿಸಿ ಹೊಸತನ್ನು ತುರುಕುವುದಕ್ಕಸ್ತೆ(ನಿಮ್ಮ ಭಾಷೆ ಯಲ್ಲಿರುವಂತೆ ) ನನ್ನ ಅಸಮಧಾನ (ವಿರೋಧ ಅಲ್ಲ) ಅಸ್ಟೇ !!!

    ಇನ್ನು ಮಾಯ್ಸ ರವರೆ ,
    ಕೇರಳದಲ್ಲಿ ಹಿಂದೂಗಳು ಕ್ರಿಸ್ತಿಯನ್ನರಾಗಿ ಅಥವಾ ಮುಸ್ಲಿಮರಾಗಿ ಮತಾಂತರ ವಾಗಿದ್ದು ನಮ್ಬೂದಿರಿಗಳು ಮಾಡಿದ ಕೆಡುಕಿನಿಂದಲೋ ಅಥವಾ “ಕ್ರಿಸ್ತಿಯನ್ನರು ಮತ್ತು ಮುಸ್ಲಿಮರು ( ಮತಾಂಧರು)” ಮಾಡಿದ ಕೆಡುಕಿ(ಬೇರೆ ದಾರಿ ಕಾಣದೆ!!!) ನಿಂದಲೋ? ತಿಳಿದು ಕೊಳ್ಳಿ!!!! “ಚರಿತ್ರೆಯ ಅಥವಾ ಇತಿಹಾಸದ ಜಾಣ ಮರೆವು ಇದು ಇರಬಹುದೇ?”. ಇತಿಹಾಸದಿಂದ ಪಾಠ ಕಲಿಯದಿರುವುದು ನಮಗೆ ಕೆಟ್ಟದ್ದೇ !!! ಇತಿಹಾಸ ಮರುಕಳಿಸ ಬೇಕೆಂಬುದು ಅದರರ್ಥ ಅಲ್ಲ !!! ಇತಿಹಾಸ ನಮಗೆ ಪಾಠ ಆಗಬೇಕು ಮತ್ತು ನಾವದರಿಂದ ಜಾಗೃತ ರಾಗಬೇಕು ಅನ್ನುವುದ್ ಮಾತ್ರ ಕಳಕಳಿ ಇಲ್ಲಿ …

    ಇಲ್ಲಿ ಅಸುಹೆಗ್ದೆಯವರು ಹೇಳಿದಂತೆ, ಕನ್ನಡದಿಂದ ಆಂಗ್ಲ ಪದಗಳನ್ನು ತೆಗೆಯುವ ಕಾಯಕ ಸುರುಮಾಡಬೇಕಗಬಹುದು!!! (ಈಗಾಗಲೇ ಬೇಕಾದಷ್ಟು ತುಂಬಿಕೊಂಡಿವೆ=> ಕನ್ನಡಕ್ಕಿಂತ ಜಾಸ್ತಿ ಅಂದರೂ ತಪ್ಪಿಲ್ಲ? ಹಿ ಹಿ ಹಿ !!!! ).

    ಇರಲಿ ಇಲ್ಲೂ “ಆರೋಗ್ಯಕರ” ಚರ್ಚೆ ಆಗಲಿ .

    ಉತ್ತರ
    • ಮಾಯ್ಸ
      ಏಪ್ರಿಲ್ 15 2011

      ರವಿಯವರೇ,

      >>>>”ಯಾಕಿರಬಹುದೆಂದು ಯೋಚಿಸಿ ದಾಗ, ಕೆಲವರಲ್ಲಿ ಕೇಳಿದಾಗ ನನಗನಿಸಿದ್ದು ತೆಲುಗಿನಲ್ಲಿ ಎಲ್ಲರೂ ಹೆಚ್ಚೂ ಕಡಿಮೆ ಒಂದೇ ತರಹ ಮಾತನಾಡುತ್ತಾರೆ ಮತ್ತು ಬರೆಯುತ್ತಾರೆ !!”

      ಆಂದ್ರದಲ್ಲಿಯೂ ನಮ್ಮ ಹಾಗೆ ಹಲ-ಕವಲು-ತೆಲುಗುಗಳಿದ್‌ದೂ, ಅವೂ ಒಬ್ಬರಿಗೊಬ್ಬರು ನಮ್ಮ ಕನ್ನಡದ ಕವಲುಗಳಶ್ಟೇ ಅರ್ತವಾಗಬಲ್ಲವು. ಅನಂತಪುರದ ಕನ್ನಡಕ್ಕೆ ಹತ್ತಿರವಾದ ತೆಲುಗು, ತೆಲಂಗಾಣದ ಉರ್ದು ಬರೆತ ತೆಲುಗು, ಇನ್ನು ಒಡಿಶಾ ಗಡಿಯ ತೆಲುಗು ತೀರಾ ಹೆಚ್ಚಿನ ವ್ಯತ್ಯಾಸಗಳನ್ನು ಹೊಂದಿದೆ. ಅಲ್ಲೂ ರಾಯಲಸೀಮೆಯ ತೆಲುಗು ಒರಟು, ಕೋಶ್ಟ ತೆಲುಗು ಮೆದು ಹಾಗು ತೆಲಂಗಾಣ ತೆಲುಗು ಕಲಗೆಟ್ಟಿದ್ದು ಎಂಬ ತಾರತಮ್ಯದ ಬಾವನೆಗಳೂ ಇವೆ. ಈ ತಿಕ್ಕಾಟ ನಮ್ಮ ಕನ್ನಡ ನಾಡಿಗಿಂತ ತೀರಾ ಜೋರಾಗಿದೆ.

      ಈಗ ತೆಲಂಗಾಣ ಬಾಶೆ, ತೆಲುಗಿಂತ ಬೇರೆಯೇ ಎಂದು ಹೊರಟಿರುವ ಮಂದಿಯೂ ಇದ್ದಾರೆ.

      >>>>>”ಇನ್ನು ಮಾಯ್ಸ ರವರೆ ,
      ಕೇರಳದಲ್ಲಿ ಹಿಂದೂಗಳು ಕ್ರಿಸ್ತಿಯನ್ನರಾಗಿ ಅಥವಾ ಮುಸ್ಲಿಮರಾಗಿ ಮತಾಂತರ ವಾಗಿದ್ದು ನಮ್ಬೂದಿರಿಗಳು ಮಾಡಿದ ಕೆಡುಕಿನಿಂದಲೋ ಅಥವಾ “ಕ್ರಿಸ್ತಿಯನ್ನರು ಮತ್ತು ಮುಸ್ಲಿಮರು ( ಮತಾಂಧರು)” ಮಾಡಿದ ಕೆಡುಕಿ(ಬೇರೆ ದಾರಿ ಕಾಣದೆ!!!) ನಿಂದಲೋ? ತಿಳಿದು ಕೊಳ್ಳಿ!!!! “ಚರಿತ್ರೆಯ ಅಥವಾ ಇತಿಹಾಸದ ಜಾಣ ಮರೆವು ಇದು ಇರಬಹುದೇ?”. ಇತಿಹಾಸದಿಂದ ಪಾಠ ಕಲಿಯದಿರುವುದು ನಮಗೆ ಕೆಟ್ಟದ್ದೇ !!! ಇತಿಹಾಸ ಮರುಕಳಿಸ ಬೇಕೆಂಬುದು ಅದರರ್ಥ ಅಲ್ಲ !!! ಇತಿಹಾಸ ನಮಗೆ ಪಾಠ ಆಗಬೇಕು ಮತ್ತು ನಾವದರಿಂದ ಜಾಗೃತ ರಾಗಬೇಕು ಅನ್ನುವುದ್ ಮಾತ್ರ ಕಳಕಳಿ ಇಲ್ಲಿ …”

      ಹವುದು.. ನನಗೆ ಈ ಇತಿಹಾಸದ ಕತೆಗಳಲ್ಲಿ ಹೆಚ್ಚಿಗೆ ನಂಬಿಕೆ ಇಲ್ಲ.. ಒಬ್ಬೊಬ್ಬರು ಅವರವರಿಗೆ ಬೇಕಾದ ಹಾಗೆ ಬರೆದುಕೊಂಡಿರುತ್ತಾರೆ. ನಾನು ಅದಕ್ಕೇನೇ.. “ನಾನು ಓದಿದ ಇತಿಹಾಸದ ಪ್ರಕಾರ” ಎಂದು ಬರೆದುದು. ತಪ್ಪು ಬರೆದಿದ್ದರೆ ಮನ್ನಿಸಿ.. ಈ ಹಾಳು ಇತಿಹಾಸ ಹಿಡಿದು ಮಾತಾಡುವುದೇ ಹಿಂಗೆ.. ಎಡವಟ್ಟು!

      ಆಸುಹೆಗ್ಡೆಯವರು ಹೇಳಿದ ಮಾತು ದಿಟ. ಇಂಗ್ಲೀಶ್ ಪದಗಳನ್ನ ಕನ್ನಡದಲ್ಲಿ ಬರೆದಾಗ ಬೇಗ ತಿಳಿಯುವುದಿಲ್ಲ.. ಆದರೆ ನಮಗೆ ಈಗಾಗಲೇ ಬ್ಯಾಂಕು, ಟ್ಯಾಂಕು, ರೋಡು ಇವೆಲ್ಲ ಅಲುವಾಟು ಆಗಿ ಹೋಗಿವೆ. ತೀರಾ ಇಂಗ್ಲೀಶ್ ಬಳಕೆ ಕನ್ನಡದಲ್ಲಿ ಚನ್ನಾಗಿರುವುದಿಲ್ಲ ಹಾಗೇ ತೀರಾ ಸಂಸ್ಕ್ರುತ, ಉರ್ದು ಮುಂತಾದ ಹೊರನುಡಿಗಳದ್ದು.. ಅದಕ್ಕೆ “ಕನ್ನಡಕ್ಕೆ ಬೇಕು ಕನ್ನಡದ್ದೇ ಪದಗಳು”

      ಉತ್ತರ
      • ಮಾಯ್ಸ
        ಏಪ್ರಿಲ್ 15 2011

        ಮನ್ನಿಸಿ. ತೆಲುಗು ಬಾರದವರಿಗೆ ಆ ವಿಡೀಯೋದ ಹುರುಳು :-

        ತೆಲಂಗಾಣ ತೆಲುಗನ್ನು ಕೀಳೆಂದು ಅದನ್ನು ಬರೆವಣಿಗೆ ಹಾಗು ಬಳಕೆಯಲ್ಲಿ ಕುಗ್ಗಿಸಿ ತನ್ನ ತಾಯಿನುಡಿಯನ್ನು ಕುಗ್ಗಿಸಿದ್ದೀರಿ ಎಂದು ಅವರು ಹೇಳಿದ್ದಾರೆ. ಹಾಗೇ ಅವರಿಗೆ ತಮ್ಮ ತಾಯಿನುಡಿಯಲ್ಲದ ‘ಶಿಶ್ಟ’ ತೆಲುಗಿನಲ್ಲಿ ಮಾತಾಡುವುದು ತೀರಾ ತೊಡಕಿನದು ಹಾಗು ಕಶ್ಟಪಟ್ಟು ಮಾಡುವಂತದ್ದು ಎಂದೂ ಹೇಳೆಕೊಂಡಿದ್ದಾರೆ.

        ಉತ್ತರ
    • Priyank
      ಏಪ್ರಿಲ್ 15 2011

      ರವಿ ಕುಮಾರ್ ಅವರೇ,

      ನೀವು ಹೇಳಿದಂತೆ ತೆಲುಗು ಭಾಷಿಕರು ಎಲ್ಲರೂ ಒಂದೇ ರೀತಿಯ ತೆಲುಗು ಮಾತನಾಡುವುದಿಲ್ಲ.
      ನಿಮಗೆ ತೆಲುಗು ಗೆಳೆಯರಿದ್ದರೆ, ಅವರಿಂದಲೇ ಇದನ್ನು ಕೇಳಿ ತಿಳಿದುಕೊಳ್ಳಬಹುದು.

      ಇನ್ನು, ‘ನುಡಿದಂತೆ ಬರೆ’ ಎನ್ನುವುದು ಮುಂದೆ ತೊಡಕು ತಂದೊಡ್ಡಬಹುದು ಎಂದು ನೀವು ಹೇಳಿದ್ದೀರ.
      ಎಲ್ಲರೂ ಅವರವರು ನುಡಿದಂತೆ ಬರೆದರೆ ತೊಡಕಾಗುವುದು ದಿಟವೇ.
      ಆದಕ್ಕೆ, ಎಲ್ಲರ (ಕನ್ನಡಿಗರ) ನುಡಿಗೂ ಹತ್ತಿರವಿರುವ, ಬರೆಯುವ ವಿದಾನ ನಮಗೆ ಬೇಕಾಗಿದೆ. ಅದನ್ನೇ ‘ಎಲ್ಲರಕನ್ನಡ’ ಎಂದು ಶಂಕರ ಭಟ್ಟರು ಕರೆಯುತ್ತಾರೆ.
      ನಿಮಗೆ ‘ಎಲ್ಲರಕನ್ನಡ’ ಎಂದರೇನು ಎಂದು ತಿಳಿಯುವ ಆಸಕ್ತಿ ಇದ್ದರೆ ತಿಳಿಸಿ. ನಿಮಗೊಂದು ಲಿಂಕು ಕೊಡುತ್ತೇನೆ, ಅದರಲ್ಲಿ ಹೆಚ್ಚಿನ ಮಾಹಿತಿ ಸಿಗುವುದು.

      ಎಲ್ಲರನುಡಿಗೂ ಹತ್ತಿರವಿರುವ ಎಂದರೆ, ಎಲ್ಲರ ನುಡಿಗೂ ಸಮಾನ ದೂರವಿರುವ ಎಂದರ್ಥವಲ್ಲ ಎಂಬುದನ್ನು ಕಿರಣ್ ಅವರೇ ಚೆನ್ನಾಗಿ ವಿವರಿಸಿದ್ದಾರೆ. ನಿಮಗದು ಅರ್ಥವಾಗಿದೆ ಎಂದು ನಂಬಿದ್ದೇನೆ.

      ‘ನಮ್ಮಲ್ಲಿ ಹಾಸು ಹೊಕ್ಕಾಗಿರುವ ಪದಗಳನ್ನು ಕಿತ್ತು ಹಾಕಿ ಕನ್ನಡ ಬೇರಿನ ಪದಗಳನ್ನು ತುರುಕುವುದು ಬೇಡ’ ಎಂದು ನೀವು ಹೇಳಿದ್ದೀರ.
      ಇದನ್ನು ನಾನೂ ಒಪ್ಪುತ್ತೇನೆ. ಯಾವುದೇ ಭಾಷೆಯ ಬೇರಿನ ಪದವಾಗಿದ್ರೂ, ಇವತ್ತಿನ ದಿನ ಕನ್ನಡದಲ್ಲಿ ಹಾಸು ಹೊಕ್ಕಾಗಿದ್ದರೆ ಅದನ್ನು ಕನ್ನಡ ಪದವೆಂದೇ ಕರೆಯಬಹುದು.
      ಉದಾ: ಕಿಟಕಿ, ಕೇಜಿ, ಕಾರು, ಸುಲಬ
      ಈ ಪದಗಳು ಹೆಚ್ಚಿನ ಕನ್ನಡಿಗರಿಗೆ ಗೊತ್ತಿದ್ದೂ, ಅವರ ಬಳಕೆಯಲ್ಲೂ ಇವೆ.
      ಆದರೆ, ಇನ್ನು ಕೆಲವು ಪದಗಳು, ಹೆಚ್ಚಿನ ಕನ್ನಡಿಗರಿಗೆ ಗೊತ್ತಿಲ್ಲವಾಗಿದ್ದೂ, ಬಳಕೆಯಲ್ಲೂ ಇಲ್ಲವಾಗಿದ್ದೂ, ನಮ್ಮ ಪಟ್ಯ ಪುಸ್ತಕಗಳಲ್ಲಿ ಮಾತ್ರ ಕಂಡು ಬರುತ್ತವೆ.
      ಅವನ್ನು, ‘ಹಾಸು ಹೊಕ್ಕಾಗಿವೆ’ ಎಂದು ಕರೆಯಲಾಗೋಲ್ಲ ಎಂಬುದು ನನ್ನ ನಂಬಿಕೆ. ಅವುಗಳ ಬದಲು ಕನ್ನಡದ್ದೇ ಪದಗಳನ್ನು ಹುಟ್ಟು ಹಾಕೋದು ಒಳಿತು.
      (ನೀವು ಇದನ್ನು ಮುಂಚೆಯೂ ಕೇಳಿರಬಹುದು) ಉದಾ: ಬೀಜಾಕ್ಷರ, ಪರಿಮಿತ, ಅಪರಿಮಿತ, ಕ್ಷೇತ್ರ ಫಲ, ಸರಣೀಕೃತ

      ಉತ್ತರ
      • ರವಿ ಕುಮಾರ್ ಜಿ ಬಿ
        ಏಪ್ರಿಲ್ 15 2011

        ಮಾಯ್ಸ ರವರೆ ,
        ಧನ್ಯವಾದ …..
        ತೆಲುಗಿನಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸ ಇದ್ದರೂ ಕೂಡ , ಇನ್ನೊಂದು ಪ್ರಾಂತ ದವರಿಗೆ ಅರ್ಥವೇ ಆಗದಷ್ಟು ವ್ಯತ್ಯಸವಿಲ್ಲವಂತೆ !!!!!! ಅದಕ್ಕಾಗಿಯೇ ಅದು ಅತೀ ಹೆಚ್ಚೂ ಮಾತನಾಡುವ ಭಾಷೆ ಅಂತ ಹೆಸರು ಪಡೆದಿರೋದು ಅಂತ ತಿಳಿದೆ ನಾನು.
        ಮಾಯ್ಸ ರವರೆ ನಿಮ್ಮನ್ನು ಈ ರೀತಿ ಕೆಣಕುವುದರಲ್ಲಿ ನನ್ನ ಜ್ನಾನವನ್ನ ವೃದ್ದಿ ಮಾಡುವ ಸ್ವಾರ್ಥ ಇದೆಯೇ ಹೊರತು ನಿಮ್ಮೊಡನೆ ಮೊಂಡು ವಾದ ಮಾಡುವ ಉತ್ಸಾಹವಲ್ಲ !!!!!!!
        ಹಾಗಾಗಿ ಕನ್ನಡಕ್ಕೆ ಕನ್ನಡದ್ದೇ ಆದ ಹೊಸ ಸುಲಭ ಪದಗಳು ಬರಲಿ ಅದು ಬಿಟ್ಟು ಕ್ಲಿಷ್ಟ ಶಬ್ದಗಳನ್ನು ತುರುಕುವುದು ಬೇಡ !!! ಅದು ನಮ್ಮ ನಮ್ಮಲ್ಲಿ ಬೇಡ ಗಳನ್ನು ಹೆಚ್ಚೂ ಮಾಡುತ್ತದೆಯೇ ವಿನಃ ಕಡಿಮೆಯಂತೂ ಮಾಡಲಾರದು.ಈಗಾಗಲೇ ಧಾರ್ಮಿಕವಾಗಿ ಬೇಡ ಭಾವ ಮಾಡಿ ಮಾಡಿ ಸಮಾಜ ಹೊಲಸು ಮಾಡಿ ಆಗಿದೆ.ಉದಾಹರಣೆ ಕೊಡುತ್ತೇನೆ ಕೇಳಿ . ” ಬ್ರಾಹ್ಮಣ ಉಚ್ಚ …ಶೂದ್ರ ನೀಚ !!!??? ” ಶಾಸ್ತ್ರಗಳಲ್ಲಿ ಅದನ್ನು ಹೇಳಿಯೇ ಇಲ್ಲ ನಾವೇ ಕಲ್ಪಿಸಿ ಸೃಷ್ಟಿಸಿ ಕೊಂಡದ್ದು !!!! ಯಾವುದೊ ಒಂದು ಕಾಲಘಟ್ಟದಲ್ಲಿ ಒಬ್ಬ ಮನುಷ್ಯ ಇನ್ನೊಬ್ಬನಿಗೆ ಅನ್ಯಾಯ ಮಾಡಿರಬಹುದು!! ಅದೇ ಈಗ ಮಾಡಿದರೆ !!ರಾಜಕೀಯವಾಗಿ ದಲಿತರೆನಿಸಿಕೊಂಡವರು ನಾವು ದಲಿತರು ಹಾಗಾಗಿ ನಮಗೆ ಅನ್ಯಾಯ ಮಾಡಲಾಯಿತು ಅನ್ನುತ್ತ ಬೇಳೆ ಬೇಯಿಸ ಹೊರಡುತ್ತಾರೆ.(ಯಾಕೆ ಹೇಳಿದೆ ಅಂದರೆ ಮೊನ್ನೆ ತಾನೇ ಒಬ್ಬ ಬ್ರಷ್ಟ ಅಧಿಕಾರಿಯನ್ನ /ರಾಜಕಾರಣಿಯೋ ಯಾರೋ ಒಬ್ಬರನ್ನ ಬಯಲಿಗೆಳೆದಾಗ ಅವರು ಅಲವತ್ತುಕೊಂಡಿದ್ದು ಹೀಗೆಯೇ!!!) ಹಾಗೆಯೇ ಇಲ್ಲಿ ಕೂಡ, ಅದು ಸಂಸ್ಕೃತ ಶಬ್ದ , ಅದು ಕಷ್ಟ ಅಂತ ಹೇಳಿ ಅದಕ್ಕೆ ಅನಾವಶ್ಯವಾಗಿ ಪ್ರಾಮುಖ್ಯತೆಯನ್ನ ಕೊಡುತ್ತಿದ್ದೇವೆ!!!!! ಹಾಗೆಯೇ ” ಮಾಂಜುಗಾರ,ಅಲುವಾಟು,ಮಾಡುಗತನ,ಮಸಕ !!!! ಇತ್ಯಾದಿ ಇತ್ಯಾದಿ ತುರುಕುವುದು ಕೂಡ ಅನಾವಶ್ಯವೇ ಅಲ್ಲವೇ? ಖಂಡಿತವಾಗಿಯೂ ಕನ್ನಡದಲ್ಲಿ ವಿಜ್ಞಾನದ ಪಟ್ಯಗಳು ಬರದೆ ಇರುವುದಕ್ಕೆ ಕಾರಣ ಅನ್ಯ ಭಾಷೆಯಿಂದ (ನೀವು ಯೋಚಿಸುವಂತೆ ಸಂಸ್ಕೃತದಿಂದ ) ಬಂದ ಶಬ್ದಗಳು ಅಂತೂ ಅಲ್ಲ !!!!! ಹೊಸದಾಗಿ ಹುಟ್ಟುಹಾಕಿದ ಕನ್ನಡದ್ದೇ ಅನ್ನಿಸುವಂತಹ ಶಭ್ದಗಳಿಂದ ವಿಜ್ಞಾನದ ಪಟ್ಯಗಳು ಬರುತ್ತವೆ ಅನ್ನುವುದಕ್ಕೆ ಪುರಾವೆಗಳೂ ಇಲ್ಲ !!! (ಅಂದರೆ ತಾಂತ್ರಿಕ/ವೈಜ್ಞಾನಿಕ ಶಿಕ್ಷಣ ನೀಡಬಹುದೆಂಬ ಆಸೆ ). ವೈಜ್ಞಾನಿಕ ಪಟ್ಯ ಅರ್ಥ ಆದವರಿಗೆ ಶಬ್ಧಗಳು ತೊಡಕಾಗಲಾರವು. ಅವರು ಅದು ಇಂಗ್ಲಿಷ್ಣಲ್ಲಿದ್ದರೂ ,ಸಂಸ್ಕೃತ ದಲ್ಲಿದ್ದರೂ , ಎಲ್ಲರ ಕನ್ನಡ ದಲ್ಲಿದ್ದರೂ ಕಲಿತೇ ಕಲಿಯುತ್ತಾನೆ ಉತ್ಸಾಹವಿದ್ದರೆ !!!

        ಪ್ರಿಯಾಂಕ್ ,
        >>>ನಿಮಗೆ ‘ಎಲ್ಲರಕನ್ನಡ’ ಎಂದರೇನು ಎಂದು ತಿಳಿಯುವ ಆಸಕ್ತಿ ಇದ್ದರೆ ತಿಳಿಸಿ. ನಿಮಗೊಂದು ಲಿಂಕು ಕೊಡುತ್ತೇನೆ, ಅದರಲ್ಲಿ ಹೆಚ್ಚಿನ ಮಾಹಿತಿ ಸಿಗುವುದು.
        => ಮಾಹಿತಿಯನ್ನ ದಯವಿಟ್ಟು ಪ್ರಕಟಿಸಿ, ನನಗೂ ಇತರರಿಗೂ ಉಪಯೋಗವಾಗಲಿ. ನನಗಂತೂ ಜ್ಞಾನದ ಅಸ್ಪ್ರುಶ್ಯತೆ ಖಂಡಿತಾ ಇಲ್ಲ !! ಹಾಗೆ ನೋಡಿದರೆ ನಾನು ನಿಮ್ಮೊಂದಿಗೆ ಚರ್ಚಿಸುವ ಉದ್ದೇಶವೇ ಅದು “ಜ್ಞಾನಾರ್ಜನೆ ” ಅಸ್ಟೇ !!! ನಿಮ್ಮನ್ನು ಸೋಲಿಸುವುದಾಗಲಿ, ಹೀಯಾಳಿಸುವುದಾಗಲಿ,ವ್ಯಂಗ್ಯವಾಗಿ ನೋಡುವುದಾಗಲಿ ,ಉದ್ದೇಶವಲ್ಲ.!!!!!!!

        ಉತ್ತರ
        • ಮಾಯ್ಸ
          ಏಪ್ರಿಲ್ 15 2011

          “ತೆಲುಗಿನಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸ ಇದ್ದರೂ ಕೂಡ , ಇನ್ನೊಂದು ಪ್ರಾಂತ ದವರಿಗೆ ಅರ್ಥವೇ ಆಗದಷ್ಟು ವ್ಯತ್ಯಸವಿಲ್ಲವಂತೆ !!!!!! ಅದಕ್ಕಾಗಿಯೇ ಅದು ಅತೀ ಹೆಚ್ಚೂ ಮಾತನಾಡುವ ಭಾಷೆ ಅಂತ ಹೆಸರು ಪಡೆದಿರೋದು ಅಂತ ತಿಳಿದೆ ನಾನು.”

          ನಿಮಗೆ ತೆಲುಗು ಬಂದೆ ನಾನು ಕೊಟ್ಟು ವಿಡಿಯೋ ನೋಡಿ.. ಇಲ್ಲವೆ ನಿಮ್ಮ ಗೆಳೆಯರನ್ನು ಕೇಳಿರಿ..

          ಅಂದ ಹಾಗೆ ‘ಮಸಕ’ ಅನ್ನುವುದು ನಾವು ಬಲು ಬಳಸುವ ಪದ. ಮಸಕ ಹೊಡೆ ಅಂತ ಇದೆ!(to make someone passionate)

          ಉತ್ತರ
        • Priyank
          ಏಪ್ರಿಲ್ 16 2011

          ರವಿ ಕುಮಾರ್ ಅವರೇ,

          ಎಲ್ಲರಕನ್ನಡ ಬಗ್ಗೆ ಇನ್ನಷ್ಟು ತಿಳಿಯಲು ಈ ಕೊಂಡಿಗೆ ಭೇಟಿ ನೀಡಿ: http://ellarakannada.org/

          ಹಾಗೇ, ನೀವು ಮಾಯ್ಸ ಅವರನ್ನು ಕುರಿತು ಬರೆದ ಕೆಲವು ವಿಷಯಗಳ ಬಗ್ಗೆ ನನ್ನ ಅನಿಸಿಕೆ ಹಂಚಿಕೊಳ್ತೀನಿ.
          ೧. ‘ವೈಜ್ಞಾನಿಕ ಪಟ್ಯ ಅರ್ಥವಾದವರಿಗೆ ಶಬ್ದಗಳು ಕಷ್ಟವಾಗೋಲ್ಲ’ ಅಂತ ನೀವು ಹೇಳುತ್ತಿದ್ದೀರ.
          ‘ವ್ಯವಕಲನ’ ಎಂಬ ಪದ ಗಣಿತ ಕಲಿಯುತ್ತಿರುವ ಮಗುವಿಗೆ ಬೇಗ ಅರ್ಥವಾಗುತ್ತೋ, ‘ಕಳೆಯುವುದು’ ಎಂಬ ಪದ ಬೇಗ ಅರ್ಥವಾಗುತ್ತೋ? ಅದೇ ರೀತಿ, ‘ವ್ಯುತ್ಕ್ರಮ’ ಎಂಬ ಪದ ಬೇಗ ಅರ್ಥವಾಗುತ್ತೋ, ‘ತಲೆಕೆಳಗು’ ಎಂಬ ಪದ ಬೇಗ ಅರ್ಥವಾಗುತ್ತೋ?
          ವೈಜ್ಞಾನಿಕ ಪಟ್ಯಗಳು ಅರ್ಥವಾಗಲು, ಅದನ್ನು ಕಲಿಸಲು ಬಳಸುವ ಪದಗಳು ಮುಖ್ಯವಾಗುತ್ತವೆ. ಆಸಕ್ತಿ ಹುಟ್ಟಿಸುವಲ್ಲಿ ಸುಲಬದ ಪದಗಳ ಪಾತ್ರ ಹೆಚ್ಚು.
          ಕಷ್ಟದ ಪದಗಳನ್ನು ತುರುಕಿಸಿ, ಮಕ್ಕಳಿಗೆ ಅವು ಏನಂದೂ ಅರ್ಥವಾಗದೇ ಆಸಕ್ತಿ ಬಾರದಿದ್ದಲ್ಲಿ, ‘ಮಕ್ಕಳಿಗೆ ಆಸಕ್ತಿ ಇಲ್ಲ’ ಎಂಬ ತೀರ್ಮಾನಕ್ಕೆ ಬರೋದು ಎಷ್ಟು ಸರಿ?

          ೨. ‘ಉತ್ಸಾಹವಿದ್ದರೆ ಯಾವ ಭಾಷೆಯಲ್ಲಾದರೂ ಕಲಿಕೆ ನಡೆಯುತ್ತದೆ’ ಎಂಬುದು ನಿಮ್ಮ ನಿಲುವಾಗಿದೆ.
          ಕಲಿಕೆಯ ಬಗ್ಗೆ ಆಳವಾಗಿ ಅಧ್ಯಯನ ನಡೆಸಿರುವವರು ಒಪ್ಪುವ ಮಾತು ‘ಕಲಿಕೆಯು ಪರಿಸರದ ನುಡಿಯಲ್ಲಿರಬೇಕು. ಆಗಲೇ, ಪ್ರತಿಯೊಬ್ಬರನ್ನೂ ಕಲಿಕೆಯು ತಲುಪುವುದು’.
          ‘ಬೇರೊಂದು ನುಡಿಯಲ್ಲಿ ಕಲಿಸುವುದು, ಈಜಲು ಬಾರದ ಮಗುವನ್ನು ನೀರಿಗೆ ಎಸೆದಂತೆ’ ಎಂದು ಯುನೆಸ್ಕೋ ಸಂಸ್ಥೆಯೇ ಹೇಳುತ್ತದೆ.
          ಕನ್ನಡ ಸಮಾಜದ ಪ್ರತಿಯೊಬ್ಬರೂ ಒಳ್ಳೆಯ ಕಲಿಕೆ ಹೊಂದಿದವರಾಗಬೇಕು ಎಂದು ಯೋಚಿಸಿದಾಗ, ಅದು ಕನ್ನಡದಲ್ಲಿದ್ದರೆ ಮಾತ್ರ ಸಾದ್ಯ ಎಂಬುದು ಹೊಳೆಯುತ್ತದೆ.

          ಉತ್ತರ
          • ಮಾಯ್ಸ
            ಏಪ್ರಿಲ್ 16 2011

            ಪ್ರಿಯಾಂಕ್..

            ತಮಗೆ ಹೆಚ್ಚು ಅಲವಾಟು/ಅಬ್ಯಾಸ ಇಲ್ಲದ ಪದಗಳನ್ನು ಒಲ್ಲೆ ಎಂಬ ಅವರ ಮಾತು ತಕ್ಕುದ್ದೇ?

            ಎಲ್ಲಿರಗೂ ಬರೀ ಅವರವರ ಜಾಗದ ಮಾತು ಅಲವಾಟು ಇರುವುದು.

            ಮಂಡ್ಯದ ಹೆಚ್ಚಿನವರಿಗೆ ‘ವಸಿ’, ‘ವಾಸಿ’, ‘ತಾವ’, ‘ಗಂಟ’, ‘ವತ್ತುಕೊ’, ‘ಬಿರೀನ್’, ‘ದಬ್ ಹಾಕು’ ‘ತಡಗುಣಿ ಕಾಳು’ ‘ತಡಬಡಿಕೆ ಕಲೆಸು’ ಎಂಬ ಪದಗಳು ಗೊತ್ತು, ಇದರಲ್ಲಿ ಸುಮಾರು ತುಮಕೂರಿನವರಿಗೆ ತಿಳಿದಿಲ್ಲ.. ಹಾಗೆಂದು ಇವುಗಳನ್ನು ಬಳಸದೇ ಹೋದರೇ ಮಂಡ್ಯದ ಕನ್ನಡದ ಕುಂದಿಹೋಗಿ, ಬರಹದಲ್ಲಿ ಕಾಣಿಸುವುದೇ ಇಲ್ಲ..

            ಆದುದರಿಂದ ಕನ್ನಡದ್ದೇ ಆದ ಯಾವ ಬಳಕೆ/ಪ್ರಯೋಗ, ಯಾವ ಕಡೆಯ ಬಳಕೆಯಾದರೂ ಅದು ಬರಹಕ್ಕೆ ಬರಲೇ ಬೇಕು.. ಅದು ನಿನ್ನೊಂದು ಕಡೆಯವರಿಗೆ ಎಶ್ಟು ಹೊಸತು ಎನ್ನಿಸಿದರು ( ಇದು ಕರ್ನಾಟಕ/ಕನ್ನಡ ನಾಡಿ ಅಶ್ಟೂ ಜಾಗಗಳನ್ನು ಸೇರಿಸಿಕೊಂಡು ).

            ಆಗ ಒಂದು ಜಾಗದ ಕನ್ನಡದ ಪದಗಳು ಇನ್ನೊಂದು ಕಡೆಯವರಿಗೆ ತಿಳಿಯುವುದು.. ಈ ಕೆಲಸವನ್ನು ನಮ್ಮ ಸರಕಾರಗಳು ಬಲು ಹಿಂದೆಯೇ ಮಾಡಬೇಕಿತ್ತು, ಆಗ ನಮಗೆ ಬಡಗಣ, ತೆಂಕಣವೇನು, ಎಲ್ಲ ಕನ್ನಡ ಬಗೆಗಳು ಸಲೀಸಾಗಿ ಅರಗುತ್ತಿತ್ತು..

            ಒಬ್ಬರಿಗೆ ಬಡಗಣ ಕರ್ನಾಟಕದ ಪದಗಳು ಚೂರೂ ಗೊತ್ತಿಲ್ಲ ಎಂದರೆ ಅದಕ್ಕೆ ಸಲುವು/ಕಾರಣ ಅವರು ಆ ಪದಗಳನ್ನು ಕೇಳಿಸಿಕೊಳ್ಳಲು ಹೆಚ್ಚಿಗೆ ಹೋಗಿಲ್ಲ, ಇಲ್ಲ ಅವರ ನಮಗೆ ಬಂದು ಹೆಚ್ಚಿಗೆ ಹೇಳಿಲ್ಲ.

            ಉತ್ತರ
            • ಮಾಯ್ಸ
              ಏಪ್ರಿಲ್ 16 2011

              ಆ ಕನ್ನಡದ್ದೇ ಬಳಕೆಗಳಲ್ಲಿ ಕನ್ನಡಿಗರು ಹುಟ್ಟಿಸ/ಕಟ್ಟುವ ಹೊಸ ಹೊಸಪದಗಳೂ ಕೂಡ..

              ಎಶ್ಟು ಕನ್ನಡದ್ದೇ ಹೊಸಪದಗಳು ಬರುವುವೋ ಬರಲಿ, ಆ ಆ ಪದಗಳ ‘ಹಿಡಿಸುವಿಕೆ’ಯ ಮೇಲೆ ಅವು ಬಳಕೆಯಲ್ಲಿ ಉಳಿಯುತ್ತವೆ, ಇಲ್ಲವೇ ಬಳಕೆಯಿಂದ ಅಳಿಯುತ್ತವೆ..

              ಆದರೆ ಅವುಗಳು ಬರಲು ಅನುವು ಯಾವಾಗಲೂ ತೆರೆದಿರಬೇಕು.. !

              ಉತ್ತರ
          • ಮಾಯ್ಸ
            ಏಪ್ರಿಲ್ 16 2011

            ಪ್ರಿಯಾಂಕ್..
            ತಮಗೆ ಹೆಚ್ಚು ಅಲವಾಟು/ಅಬ್ಯಾಸ ಇಲ್ಲದ ಪದಗಳನ್ನು ಒಲ್ಲೆ ಎಂಬ ಅವರ ಮಾತು ತಕ್ಕುದ್ದೇ?
            ಎಲ್ಲಿರಗೂ ಬರೀ ಅವರವರ ಜಾಗದ ಮಾತು ಅಲವಾಟು ಇರುವುದು. ಬೇರೆಡೆ ಮಾತು ಹೆರ(something which is not mine) ಅನ್ನಿಸುವುದು.

            ಮಂಡ್ಯದ ಹೆಚ್ಚಿನವರಿಗೆ ‘ವಸಿ’, ‘ವಾಸಿ’, ‘ತಾವ’, ‘ಗಂಟ’, ‘ವತ್ತುಕೊ’, ‘ಬಿರೀನ್’, ‘ದಬ್ ಹಾಕು’ ‘ತಡಗುಣಿ ಕಾಳು’ ‘ತಡಬಡಿಕೆ ಕಲೆಸು’ ಎಂಬ ಪದಗಳು ಗೊತ್ತು, ಇದರಲ್ಲಿ ಸುಮಾರು ತುಮಕೂರಿನವರಿಗೆ ತಿಳಿದಿಲ್ಲ.. ಹಾಗೆಂದು ಇವುಗಳನ್ನು ಬಳಸದೇ ಹೋದರೇ ಮಂಡ್ಯದ ಕನ್ನಡದ ಕುಂದಿಹೋಗಿ, ಬರಹದಲ್ಲಿ ಕಾಣಿಸುವುದೇ ಇಲ್ಲ..

            ಆದುದರಿಂದ ಕನ್ನಡದ್ದೇ ಆದ ಯಾವ ಬಳಕೆ/ಪ್ರಯೋಗ, ಯಾವ ಕಡೆಯ ಬಳಕೆಯಾದರೂ ಅದು ಬರಹಕ್ಕೆ ಬರಲೇ ಬೇಕು.. ಅದು ಇನ್ನೊಂದು ಕಡೆಯವರಿಗೆ ಎಶ್ಟು ಹೊಸತು, ಹೆರ/foreign ಎನ್ನಿಸಿದರು ( ಇದು ಕರ್ನಾಟಕ/ಕನ್ನಡ ನಾಡಿ ಅಶ್ಟೂ ಜಾಗಗಳನ್ನು ಸೇರಿಸಿಕೊಂಡು ).
            ಆಗ ಒಂದು ಜಾಗದ ಕನ್ನಡದ ಪದಗಳು ಇನ್ನೊಂದು ಕಡೆಯವರಿಗೆ ತಿಳಿಯುವುದು.. ಈ ಕೆಲಸವನ್ನು ನಮ್ಮ ಸರಕಾರಗಳು ಬಲು ಹಿಂದೆಯೇ ಮಾಡಬೇಕಿತ್ತು, ಆಗ ನಮಗೆ ಬಡಗಣ, ತೆಂಕಣವೇನು, ಎಲ್ಲ ಕನ್ನಡ ಬಗೆಗಳು ಸಲೀಸಾಗಿ ಅರಗುತ್ತಿತ್ತು..
            ಒಬ್ಬರಿಗೆ ಬಡಗಣ ಕರ್ನಾಟಕದ ಪದಗಳು ಚೂರೂ ಗೊತ್ತಿಲ್ಲ ಎಂದರೆ ಅದಕ್ಕೆ ಸಲುವು/ಕಾರಣ ಅವರು ಆ ಪದಗಳನ್ನು ಕೇಳಿಸಿಕೊಳ್ಳಲು ಹೆಚ್ಚಿಗೆ ಹೋಗಿಲ್ಲ, ಇಲ್ಲ ಬಡಗಣ ಕರ್ನಾಟಕದವರೇ ಬಂದು ಹೆಚ್ಚಿಗೆ ಹೇಳಿಲ್ಲ.

            ಇಂದಿನ ‘ಶಿಶ್ಟ’ ಕನ್ನಡವೆಂದರೇ ೧೯ನೇ ನೂರೇಡು/ಶತಮಾನದ ಮೊದಲಲ್ಲಿ ಮಯ್ಸೂರಿನಲ್ಲಿದ್ದ ಒಂದು ಕನ್ನಡದ ಬರಹದ ಬಗೆ ಅಶ್ಟೇ! ಅದಕ್ಕೆ ಯಾವ ಹೆಚ್ಚಿನ ಕೊಂಬುಕೋಡುಗಳಿಲ್ಲ..! ಅದಕ್ಕಿಂತ ಲವಲವಿಕೆ ಇರುವ ಹಾಗು ನಮ್ಮ ಮಂದಿ ಬಾಯಿಗೊಗ್ಗುವ ಕನ್ನಡವಿದೆ. ಅದರಲ್ಲೇ ನಾವೆಲ್ಲ ಮಾತಾಡುವುದು, ಸಿನಿಮ-ಸೀರಿಯಲ್ಲು ನೋಡುವುದು

            ಉತ್ತರ
          • ರವಿ ಕುಮಾರ್ ಜಿ ಬಿ
            ಏಪ್ರಿಲ್ 16 2011

            ಪ್ರಿಯಾಂಕ್,

            ಧನ್ಯವಾದ “ಕೊಂಡಿ ” ಗೆ,

            ಒಪ್ಪಿದೆ ನಿಮ್ಮ ಮಾತಿಗೆ, ಆದರೆ ಇಲ್ಲಿ ಬರುತ್ತಿರುವ ವಿಷಯ ಅಂದರೆ ಇಲ್ಲಿ (ಕನ್ನಡದಲ್ಲಿ )ಮಾಂಜುಗಾರ,ಅಲುವಾಟು,ಮಾಡುಗತನ,ಮಸಕ !!!! ಇತ್ಯಾದಿ ಇತ್ಯಾದಿ ಶಬ್ದಗಳನ್ನು ಬದಲಿಸುವುದರಿಂದ ಅಂಥಹ ಕಲಿಕೆಗೆ ಹೇಗೆ ಸಹಕಾರಿ? ನನ್ನ ಮಟ್ಟಿಗೆ ಹೇಳುವುದಾದರೆ ಇಂತಹ ಶಬ್ಧಗಳು ನನಗೆ ಕಷ್ಟಕರವಾಗಿ ಕಾಣಿಸುತ್ತಿದೆ !! ಹೊಸ ಪದ ಸೃಷ್ಟಿಯ ಬದಲು ಇರುವ ಶಬ್ಧಗಳನ್ನೇ ಸರಳ ಗೊಳಿಸಿ !!!! ಉದಾ: ‘ವ್ಯುತ್ಕ್ರಮ’ ಎಂಬ ಪದದ ಬದಲು ‘ತಲೆಕೆಳಗು’ ಒಪ್ಪಿದೆ. ಆದರೆ “ವೈದ್ಯ/ಡಾಕ್ಟರ “ನಿಗೆ “ಮಾಂಜುಗಾರ” ಸರಿ /ಸುಲಭ ಅನ್ನಿಸುತ್ತಿದೆಯೇ? ಜ್ಞಾನಿಗೆ…. ಗ್ನಾನಿ ಸರಿಯೇ(ಉಚಿತವೆ? )? ಇಂತಹವುಗಳನ್ನಷ್ಟೇ ನಾನು ಹೇಳುವುದು. ಆಮೇಲೆ ಎಲ್ಲದಕ್ಕೂ ಒಂದೇ ಅಕ್ಷರ ಬಳಸುವುದೂ ಕೂಡ ಅನರ್ಥಕ್ಕೆ ದಾರಿ ಮಾಡಿಕೊಡಬಹುದು ಉದಾ: ಷ ಬದಲು ಶ!!! …ಷ ಬದಲು ಶ ಉಪಯೋಗಿಸುವುದರಿಂದ ಆಗುವ ಲಾಭವಾದರೂ ಏನು? ಇನ್ನೂ confuse ಹೆಚ್ಚಾದೀತೇ ಹೊರತು ಬೇರೆನಾಗದು ಅಂತ ನನ್ನ ಅನಿಸಿಕೆ …ಆಗ ಒಬ್ಬರು ಅಸ್ಟೆ ಅಂದರೆ ಇನ್ನೊಬ್ಬರು ಅಷ್ಟೇ ಅನ್ನುವರು ಮಗದೊಬ್ಬರು ಅಶ್ಟೇ ಎನ್ನುತ್ತಾರೆ !!! ಇದರಿಂದ ಸಾದಿಸಿದ್ದು ಏನು ? ಮತ್ತೊಂದು confution ಅಷ್ಟೇ!!! ಇದು ಒಂದು ಸಣ್ಣ ಉದಾಹರಣೆ ಆದೀತು. ಮತ್ತೆ ಅಲ್ಪಪ್ರಾಣ ಮತ್ತು ಮಹಾಪ್ರಾಣ ಎರಡು ಇದ್ದಾಗ ಮಾತ್ರ ಒಂದು ಶಭ್ದದ ಅರ್ಥ ಇನ್ನೊಂದಕ್ಕಿಂತ ಬೇರೆ ಅನ್ನುವುದನ್ನು ಸ್ಪಷ್ಟವಾಗಿ ಹೇಳಬಹುದು ಅನ್ನಿಸುತ್ತೆ ನನಗೆ. ಅದು ಬಿಟ್ಟು ಹೆಚ್ಚಿನವರು ಹ-ಕಾರಕ್ಕೆ ಬದಲಾಗಿ ಅ-ಕಾರ ಉಚ್ಚರಿಸುತ್ತಾರೆ ಆದಕಾರಣ ಹ-ಕಾರ ಬೇಡ ಅ-ಕಾರವೇ ಇರಲಿ ಅಂದರೆ ಅಕ್ಕಿ ಮತ್ತು ಹಕ್ಕಿ ಎರಡು ಒಂದೇ ಆಗುವ ಸಂಭವ ಹೆಚ್ಚು !! ಭಾರತ ಹೋಗಿ ಬರ್ತಾ ಆಗಲೂ ಬಹುದು (ಇದು ಒಂದು ಉದಾಹರಣೆಯಾಗಿ ಹೇಳಿದೆ ಅಸ್ಟೆ). ಹಾಗಾಗಿ ಹೊಸ ಶಬ್ಧದ ಉತ್ಪತ್ತಿ ಬೇಡ ಬದಲಾಗಿ ಸುಲಭವಾದ ಬಳಕೆಯಲ್ಲಿರುವ ಸಮಾನ ಅರ್ಥ ಬರುವ ಪದದ ಬಳಕೆ ಒಳ್ಳೆಯದು ನಮ್ಮ ಮತ್ತು ಕನ್ನಡದ ಬೆಳವಣಿಗೆಗೆ ಅಂತ ನನ್ನ ಅನಿಸಿಕೆ.

            ಉತ್ತರ
            • Priyank
              ಏಪ್ರಿಲ್ 16 2011

              ರವಿ ಕುಮಾರ್ ಅವರೇ,

              ‘ಕೊಂಡಿ’ ಎನ್ನಬಹುದಿತ್ತು, ‘ಲಿಂಕು’ ಎಂದು ಹೇಳಿದ್ದೆ 🙂
              ನೆನಪಿಸಿದ್ದಕ್ಕೆ ಧನ್ಯವಾದ.

              ಡಾಕ್ಟರ್/ಡಾಕ್ಟರು ಎಂಬ ಪದ ಎಲ್ಲ ಕನ್ನಡಿಗರಿಗೂ ಗೊತ್ತಿರೋದರಿಂದ, ‘ಮಾಂಜುಗಾರ’ ಎಂಬ ಪದ ಬೇಕೇ ಎಂಬ ನಿಮ್ಮ ಪ್ರಶ್ನೆ ಸರಿಯಾದ್ದೇ.
              ಇದನ್ನು ನಾನೂ ಕೇಳಿಕೊಂಡಿದ್ದೇನೆ.
              ‘ಮಾಂಜುಗಾರ’ ಎಂಬ ಪದದ ಪರಿಚಯ ಕನ್ನಡಿಗರಿಗೆ ಆದಮೇಲೆ, ಮುಂದಿನ ದಿನಗಳಲ್ಲಿ ‘ಡಾಕ್ಟರು’ ಕೆಲಸಕ್ಕೆ ಸಂಬಂಧಪಟ್ಟ ಇನ್ನೊಂದು ಪದ ಕನ್ನಡದಲ್ಲಿ ಬೇಕಾದಾಗ, ಅದನ್ನು ಹುಟ್ಟಿಹಾಕೊದು ಸುಲಬವಾಗುತ್ತೆ.
              ಕಿರಣ್ ತಮ್ಮ ಬರಹದಲ್ಲಿ ಹೇಳಿದಂತೆ, ಕನ್ನಡಿಗರಲ್ಲಿನ ಒಬ್ಬ ‘ಮಾಡುಗ’ ಆ ಪದವನ್ನು ಹುಟ್ಟಿಸುತ್ತಾನೆ.
              ‘ಅಂತಹ ಪದಗಳು ಯಾಕೆ ಬೇಕು?’ ಎಂಬ ಪ್ರಶ್ನೆ ನಿಮ್ಮಲ್ಲಿ ಇದ್ದರೆ ಹೇಳಿ, ಆಗ ಚರ್ಚೆ ಇನ್ನೊಂದು ದಿಕ್ಕಿನಲ್ಲಿ ಹೋಗಬೇಕಾಗುತ್ತದೆ (ಆ ಚರ್ಚೆಯಲ್ಲೂ ಪಾಲ್ಗೊಳ್ಳಲು ನಾನು ರೆಡಿ).
              ‘ಅಂತಹ ಪದಗಳನ್ನು, ಡಾಕ್ಟರ್ ಎಂಬುದರ ಸುತ್ತಲೇ ಹುಟ್ಟಿಸಬಹುದೇ? ಅದೇ ಸುಲಬವಲ್ಲವೇ?’ ಎಂಬ ಪ್ರಶ್ನೆಗಳು ನಿಮ್ಮಲ್ಲಿರಬಹುದು. ನನಗೂ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

              ‘ಷ’ ಮತ್ತು ‘ಶ’ ಬಳಕೆಯ ಬಗ್ಗೆ ನೀವು ಕೆಲವು ಉದಾಹರಣೆ ಕೊಟ್ಟು ಪ್ರಶ್ನೆ ಒಂದನ್ನು ಎತ್ತಿದ್ದೀರಿ.
              ಶ ಮತ್ತು ಷ ಎರಡು ಬರವಣಿಗೆಯಲ್ಲಿ ಇದ್ದರೂ, ಇವತ್ತಿನ ದಿನ ಕನ್ನಡಿಗರ ಉಲಿಯುವಿಕೆಯಲ್ಲಿ ಇದೆರಡರ ನಡುವೆ ವ್ಯತ್ಯಾಸ ಕಾಣೋದಿಲ್ಲ.
              ಯಾವುದನ್ನು ಯಾವಾಗ ಬಳಸಬೇಕು ಎಂಬ ಗೊಂದಲ ಬರವಣಿಗೆ ಕಲಿಯುವ ಪ್ರತಿಯೊಂದು ಮಗುವೂ ಎದುರಿಸಿರುತ್ತದೆ. ಬರವಣಿಗೆ ಕಲಿತ ದೊಡ್ಡವರೂ ಇದನ್ನು ಎದುರಿಸುತ್ತಿರುತ್ತಾರೆ.
              ಸುಮಾರು ಬರವಣಿಗೆಯಲ್ಲಿ, ಇವೆರಡು ‘ಷ’ಗಳು ಅದಲು-ಬದಲಾಗುವುದನ್ನು ನೀವೂ ಗಮನಿಸಿರಬಹುದು.
              ಈ ತೊಂದರೆಯು, ಉಲಿದಂತೆ ಬರೆಯುವ ಅಭ್ಯಾಸ ಮಾಡಿಕೊಂಡಾಗ ಇರುವುದಿಲ್ಲ ಎಂಬುದು ನನ್ನ ಅನಿಸಿಕೆ. ಹಾಗೆ ಮಾಡುವುದಾದರೆ, ಎಲ್ಲೆಡೆ ‘ಶ’ ಒಂದನ್ನೇ ಬಳಸಬಹುದು.
              ‘ಹಾಗೆ ಮಾಡಿದರೆ, ಅಸ್ಟೆ ಎಂದು ಉಲಿಯುವವರು ಹಾಗೇ ಬರೆದಾರು, ಆಗ ಗೊಂದಲ ಏಳುತ್ತದಲ್ಲವೇ?’ ಎಂಬ ನಿಮ್ಮ ಪ್ರಶ್ನೆ ಸರಿಯಾದ್ದೇ.
              ಇದಕ್ಕೆ ನಿಮಗೆ ಉತ್ತರ ‘ಎಲ್ಲರಕನ್ನಡ’ ಕೊಂಡಿ ನೋಡಿದಾಗ ದೊರೆತೀತು ಎಂದುಕೊಂಡಿದ್ದೆ. ಕಿರಣ್ ಅವರು ಈಗಾಗಲೇ ಹೇಳಿದಂತೆ,ಎಲ್ಲ ಕನ್ನಡಿಗರಿಗೂ ಆದಷ್ಟು ಹತ್ತಿರವಿರುವ ‘ಬರವಣಿಗೆ ಕನ್ನಡ’ ರೂಡಿ ಮಾಡುವುದು ಒಳಿತು.
              ಹೆಚ್ಚಿನ ಕನ್ನಡಿಗರು ‘ಅಶ್ಟೇ’ ಎಂದು ಉಲಿಯುತ್ತಿದ್ದರೆ, ಅದನ್ನೇ standard ಆಗಿ ಒಪ್ಪಿಕೊಳ್ಳಬಹುದು. ಹೆಚ್ಚಿನ ಕನ್ನಡಿಗರು ‘ಅಸ್ಟೇ’ ಎಂದು ಉಲಿಯುತ್ತಿದ್ದರೆ, ಅದನ್ನೇ ಒಪ್ಪಿಕೊಳ್ಳಬಹುದು.
              ಒಟ್ಟಿನಲ್ಲಿ ಈ ರೀತಿಯ ಕಟ್ಟಳೆ ಮೂಲಕ, ಗೊಂದಲಗಳನ್ನು ಕಡಿಮೆ ಮಾಡಬಹುದು.
              ನೀವು ‘ಹ’ಕಾರ ಮತ್ತು ‘ಅ’ಕಾರದ ಬಗೆಗೆ ಎತ್ತಿದ ಪ್ರಶ್ನೆಗೂ, ಈ ಮೇಲಿನದೇ ಉತ್ತರವಾಗುತ್ತದೆ.

              ಉತ್ತರ
    • ಏಪ್ರಿಲ್ 16 2011

      ದನ್ಯವಾದ ರವಿ ಅವರೆ. ಯಾವುದು ಹಾಳು, ಯಾವುದು ಬಾಳು ಎಂಬುದೇ ಪ್ರಶ್ನೆ. ಯಾವುದು ತುರುಕುವುದು, ಯಾವುದು ತುರುಕುವುದಲ್ಲ ಎಂಬುದೇ ಪ್ರಶ್ನೆ.

      ಉತ್ತರ
  6. ಬರತ್
    ಏಪ್ರಿಲ್ 15 2011

    ಕಿರಣರವರೆ,
    “’ಹೊಸಬರಹದಲ್ಲಿ’ ನನಗೆ ಹೆಚ್ಚು ’ಮಾಡುಗತನ’ದ ಅನುಬವ ಆಗುತ್ತಿರುವ ಕಾರಣದಿಂದ”

    ಈ ನಿಮ್ಮ ಮಾತಿಗೆ,

    ಶಂಕರಬಟ್ಟರನ್ನು ಹೊಸಬರಹವನ್ನು ತುಂಬ ಮಸಕದಿಂದ(passion)ಬಳಸುತ್ತಿರುವವರಲ್ಲಿ ನಾನೂ ಒಬ್ಬ.

    ಹೊಸಬರಹದ ಹೆಗ್ಗಳಿಕೆ ಮತ್ತು ಬಳಕೆಗಳು:-
    ೧. ನೀವು ಹೇಳಿದಂತೆ ನನ್ನ ಅಳವನ್ನು(ಮಾಡುಗತನ) ಹೆಚ್ಚಿಸಲು ನೆರವಾಗಿದೆ
    ೨. ಅಲ್ಲದೆ ಹಳೆ-ಶಾಲೆಯವರೊಡನೆ ಮಾತಾಡುವಾಗ ’ಹೊಸಬರಹ’ವೆಂಬ ಸಾದನದೊಂದಿಗೆ ನುಗ್ಗುವುದರಿಂದ ಹೊಸಬರಹದ ಬಳಕೆಯವ ಅರಿವೂ ಹಳೆಶಾಲೆಯವರಿಗೂ ಆಗುತ್ತಿರುತ್ತದೆ. ಯಾಕಂದರೆ ಎಶ್ಟೊ ಸಲ ಹಳೆಶಾಲೆಯವರು ನಾನು ಹೊಸಬರಹದಲ್ಲಿ ಬರೆದಾಗ ಅದು ಅವರಿಗೆ ತಿಳಿಯುವುದಿಲ್ಲ ಅಂತ ಹೇಳಿಲ್ಲ(ಮೊದಮೊದಲು ಹೇಳಿದ್ದುಂಟು). ನನಗನ್ನಿಸುತ್ತೆ, ಹಳೆಶಾಲೆಯವರು ಹೊಸಬರಹವನ್ನು ಒಳಗೊಳಗೆ ಒಪ್ಪಿದ್ದರೂ ಅವರ ’ಸಕ್ಕದದ ಕುರುಡೊಲವು’ ಅವರನ್ನ ಕಟ್ಟಿ ಹಾಕಿದೆ. ಅದನ್ನು ದಾಟಿ ಬಂದಾಗ ಅವರಿಗೆ ’ಅರೆರೆ ಇಶ್ತೊಂದು ಸುಲಬವೆ”, “ಇದು ನನ್ನದೆ’ ಅನಿಸುವುದರಲ್ಲಿ ಎರಡು ಮಾತಿಲ್ಲ.

    ೩. ಹೊಸಬರಹವೆಂದರೆ ಬರೀ ಬರಿಗೆಕಡಿತವಲ್ಲ. ಕಲಿಕೆಗೆ/ಬದುಕಿಗೆ ಬೇಕಾಗಿರುವ ಒಂದು ನಮ್ಮದೇ ಆದ ಹೊಸ ಸಾದನ/ಹೊಸ ದಾರಿ.
    ಅದೊಂದು ಪದವುಟ್ಟು, ಒರೆವುಟ್ಟು, ಸೊಲ್ಲುವುಟ್ಟು, ಬರಹವುಟ್ಟು. ಆ ಮೂಲಕ ಅದು ಹಲವು ಅರಿಮೆವುಟ್ಟುಗಳಿಗೆ ಮುನ್ನುಡಿಯಾಗಬಲ್ಲುದು. ಈ ಅರಿಮೆವುಟ್ಟುಗಳೇ ನಮಗೆ ಈ ಹೊತ್ತಿಗೆ ಬೇಕಾಗಿರುವ ’ಬೇಕು’.

    ನಮಗೆ ಮೊದಮೊದಲು ಬರಿ ಬರಿಗೆಕಡಿತದ ’ಹೊಸಬರಹ’ ಕೂಡಲೆ ಬೇಕಾಗಿಲ್ಲ ಅನಿಸಿದರೂ(ಏಕೆಂದರೆ ಸ್ಪೆಲ್ಲಿಂಗ್ ತೊಂದರೆಯಿದ್ದರೂ ಬೇರೆ ನುಡಿಗಳಲ್ಲಿದೆ) ಆದರೆ ಅದೊಂದು ಮೇರು ಮಟ್ಟದ ಮೊಗಸಿಗೆ(ಮೊಗ+ಇಸು, ಮೊಗಯಿಸು, ಮೊಗಮಾಡು) ಅಂದರೆ ನೀವು ಹೇಳಿದಂತೆ ಎಲ್ಲರೊ ಕನ್ನಡದ ಮಕ್ಕಳಾಗುವ) ಒಳ್ಳೆಯ ಸುರುವಾಗಬಲ್ಲುದು, ಅಡಿಗಲ್ಲಾಗಬಲ್ಲುದು ಎಂಬುದನ್ನ ನಾನು ಬಲವಾಗಿ ನಂಬಿದ್ದೇನೆ.

    ಈ ತರದ ಪದವುಟ್ಟು ಶಂಕರಬಟ್ಟರಲ್ಲದೆ ಹಲವರು ಹಿಂದೆಯೂ ಮಾಡಿದ್ದಾರೆ(ಆಂಡಯ್ಯ, ಕೊಳಂಬೆ ಪುಟ್ಟಣ್ಣಗವ್ಡರು). ಆದರೆ ಇದು ದೊಡ್ಡಮಟ್ಟದಲ್ಲಿ ನಡೆದಿಲ್ಲ. ಅದು ದೊಡ್ಡಮಟ್ಟದಲ್ಲಿ ನಡೆಯಲು ’ಹೊಸಬರಹ’ಹೆಚ್ಚು ಮಂದಿಯನ್ನು ತಲುಪಬೇಕು, ಹೆಚ್ಚು ಮಂದಿ ಬಳಸಬೇಕು.

    ಬರತ್

    ಉತ್ತರ
  7. ಬರತ್
    ಏಪ್ರಿಲ್ 15 2011

    “ಶಂಕರಬಟ್ಟರನ್ನು ಹೊಸಬರಹವನ್ನು ” ತಪ್ಪು
    “ಶಂಕರಬಟ್ಟರ ಹೊಸಬರಹವನ್ನು ” ಒಪ್ಪು

    ಉತ್ತರ
  8. ಮಾಯ್ಸ
    ಏಪ್ರಿಲ್ 16 2011

    ನನ್ನಿ!

    ಉತ್ತರ
  9. kpbolumbu
    ಏಪ್ರಿಲ್ 17 2011

    >>ಅಮೇರಿಕವು ಇಂದು ಕೇರಳಕ್ಕಿಂತ ’ಮನುಶ್ಯತನವನ್ನು ಅಲ್ಲಗಳೆಯದೆ’ ಇರುವುದರಲ್ಲಿ ಮುಂದಿದೆ (ನಿಜಕ್ಕೂ ಮಂದಿಯಾಳ್ವಿಕೆಯೆಂಬುದು ಎಲ್ಲಾದರೂ ಇದ್ದರೆ ಅದು ಅಲ್ಲೇ ಇರುವುದು ಎನ್ನಬಹುದು)
    ಇದು ಪೂರ್ತಿಯಾಗಿ ನಿಜವಲ್ಲ. ಅಮೇರಿಕದವರು ಅಲ್ಲಿನ ಪ್ರಜೆಗಳನ್ನು ನಡೆಸಿಕೊಳ್ಳುವ ರೀತಿ ಯಾವುದಾಗಿದ್ದರೂ ಇತರ ದೇಶಗಳೊನ್ದಿಗೆ ಅವರ ಧೋರಣೆ ಎತ್ತಿಹೇೞುವನ್ತೆ ಇಲ್ಲ.

    ಉತ್ತರ
    • ಏಪ್ರಿಲ್ 17 2011

      ಇಲ್ಲಿ ಆಯಾ ನಾಡುಗಳ ಒಳಗಿನ ’ಮನುಶ್ಯತ್ವವನ್ನು ಅಲ್ಲಗಳೆಯುವಿಕೆ’ಯ ಬಗ್ಗೆ ಮಾತ್ರ ಮಾತು ನಡೆಯುತ್ತಿರುವುದು.

      ಉತ್ತರ
  10. kpbolumbu
    ಏಪ್ರಿಲ್ 17 2011

    >>1971 ರಲ್ಲಿ ಮಲಯಾಳಿ ಲಿಪಿಯಲ್ಲಿ ಬಹಳ ಸರಳತನವನ್ನು ತಂದು ಅದರ ಸಿಕ್ಕಲುತನವನ್ನು 75% ಕಡಿಮೆ ಮಾಡಿತು.
    ಈ ಅಪ್ಪಣೆಯಲ್ಲಿ ಹೇೞಿರುವುದು –
    ೧. “ಉ, ಊ, ಋ ಎಂಬ ಸ್ವರಗಳು ವ್ಯಂಜನಕ್ಕೆ ಸೇರುವಾಗ ಇನ್ದಿಗೆ ಒನ್ದೊನ್ದು ಅಕ್ಷರಕ್ಕೂ ಒನ್ದೊನ್ದು ಅಚ್ಚುಮೊಳೆ ಬೇಕಾಗುತ್ತದೆ. [ಕನ್ನಡದಲ್ಲಿ ಇರುವನ್ತೆ]. ಹಾಗಾಗಿ ಈ ರೀತಿಯಲ್ಲಿ ಸೇರುವ ಸ್ವರಗಳಿಗೆ ಒನ್ದೊನ್ದು ಚಿಹ್ನೆಯನ್ನು ಸೇರಿಸುವುದು.
    കു, കു, കൃ – ಕು, ಕೂ, ಕೃ
    തു, തൂ, തൃ – ತು, ತೂ, ತೃ
    ಮೊದಲು ಅದನ್ನು ಕನ್ನಡದ ರೀತಿಯಲ್ಲಿ ಸೇರಿಕೊಣ್ಡನ್ತೆ ಬರೆಯಲಾಗುತ್ತಿತ್ತು. ಕನ್ನಡದ ರೀತಿಯಲ್ಲಿ ಎನ್ದು ಇಲ್ಲಿ ವಿವರಣೆಗಾಗಿ ಸೇರಿಸಿದುದು.

    ೨. ಅರ್ಕಾವೊತ್ತನ್ನು ಬಿಡಬೇಕು.
    “ಮಲೆಯಾಳ ಭಾಷೆಯಲ್ಲಿ ಅರ್ಕಾವೊತ್ತನ್ನು ಒಳಗೊಣ್ಡ ಈಗ ಎರಡು ವಿಧವಾಗಿ ಬರೆಯಲಾಗುತ್ತಿದೆ.
    ಉದಾ: ಅರ್ಕ್ಕನ್, ಅರ‍್ಕ್ಕನ್ ಪಾರ್ತ್ತಲಂ, ಪಾರ‍್ತ್ತಲಂ ನೇರ್ಚ್ಚ, ನೇರ‍್ಚ್ಚ
    ಇದರಲ್ಲಿ ಮೊದಲಿನದನ್ನು ಬಿಡಬೇಕು”
    ಹಾಗೆನ್ನುವಾಗ ಅಲ್ಲಿ ಮೊದಲೇ ಇದ್ದ ಎರಡು ರೀತಿಗಳಲ್ಲಿ ಒನ್ದನ್ನು ಆಯ್ದುಕೊಳ್ಳಲಾಗಿದೆಯೆನ್ದು ತಿಳಿಯಬಹುದು. ಹಾಗೆ ಮಾಡಲು ಕಾರಣವೇನೆನ್ದರೆ ಅರ್ಕ್ಕನ್, ಪಾರ್ತ್ತಲಂ, ನೇರ್ಚ್ಚ ಮುನ್ತಾದುವನ್ನು ಬರೆಯುವಾಗ ಅಕ್ಷರದ ಮೇಲ್ಗಡೆ ಚುಕ್ಕಿ ಇಡಬೇಕಾಗುತ್ತದೆ. ಹಾಗೆ ಚುಕ್ಕಿ ಇಡಲು ಎಲ್ಲಾ ಅಕ್ಷರಕ್ಕೂ ಒನ್ದೊನ್ದು ಅಚ್ಚುಮೊಳೆ ಬೇಕಾಗುತ್ತದೆ ಎಂಬುದು. ಅರ‍್ಕ್ಕನ್, ಪಾರ‍್ತ್ತಲಂ, ನೇರ‍್ಚ್ಚ ಎಂಬನ್ತೆ ಬರೆಯುವಾಗ ಈ ಸಮಸ್ಯೆಯಿಲ್ಲ. ಒಟ್ಟು ೯೦ ಲಿಪಿಗಳಿವೆಯೆನ್ದು ಕೊನೆಯಲ್ಲಿ ಹೇೞಲಾಗಿದೆ.

    ೩. ಮಲೆಯಾಳ ಭಾಷೆಯ ക്ക(ಕ್ಕ), ങ്ക(ಙ್ಕ), ങ്ങ(ಙ್ಙ), ച്ച(ಚ್ಚ), ഞ്ച(ಞ್ಚ), ഞ്ഞ(ಞ್ಞ), … ಮುನ್ತಾದ ಹದಿನೆಣ್ಟು ಮೂಲ ಸಂಯುಕ್ತಾಕ್ಷರಗಳನ್ನು ಹಾಗೆಯೇ ಉೞಿಸಿಕೊಣ್ಡು ಸಂಸ್ಕೃತ ಶಬ್ದಗಳಲ್ಲಿ ಬರುವ ಕ್ತ, ಶ್ಚ, .. ಮುನ್ತಾದ ಸಂಯುಕ್ತಾಕ್ಷರಗಳನ್ನು ಚಂದ್ರಕಲೆಯನ್ನು ಬೞಸಿ ಬಿಡಿಸಿ ಬರೆಯಬೇಕು. ಚಂದ್ರಕಲೆ ಎನ್ದರೆ ഞ്ച(ಞ್ಚ) ಎನ್ನುವಲ್ಲಿ ಬನ್ದಿರುವ ಅರ್ಧವೃತ್ತಾಕೃತಿ. ಕನ್ನಡದಲ್ಲಿ ಹೆಚ್ಚಿನ ಶಬ್ದಗಳು ಉ-ವಿನಿನ್ದ ಕೊನೆಗೊಣ್ಡರೆ ಮಲೆಯಾಳದಲ್ಲಿ ಹೆಚ್ಚಿನ ಶಬ್ದಗಳು ಮೇಲೆ ಹೇೞಿದ ಚಂದ್ರಕಲೆಯೊನ್ದಿಗೆ ಕೊನೆಗೊಳ್ಳುವುವು. ഞ്ച(ಞ್ಚ) ಎನ್ನುವುದನ್ನು ಮೊದಲಿಗೆ ಬರೆಯುತ್ತಿದ್ದ ರೀತಿಯನ್ನು ಇಲ್ಲಿ ತೋಱಿಸಲು ಸಾಧ್ಯವಾಗಲಿಲ್ಲ. [ಬರಿಗೆಮಣೆಯ ತೊಡಕು]

    ೪. ಯ್, ರ್, ಲ್, ವ್ ಎಂಬ ವ್ಯಂಜನಗಳು ಶಬ್ದದ ನಡುವೆ ಸೇರುವುದಾದರೆ – ಕ್ಯ(ക്യ), ಕ್ರ(ക്ര), ಕ್ಲ(ക്ല), ಕ್ವ(ക്വ) ಎಂಬನ್ತೆ ಬರೆಯಬೇಕು. ಮೊದಲಿಗೆ ಇನ್ತಹ ಅಕ್ಷರಗಳಿಗೆ ಪ್ರತ್ಯೇಕ ಅಚ್ಚುಮೊಳೆಗಳು ಬೇಕಾಗುತ್ತಿದ್ದುವು.
    ಯ್, ರ್, ಲ್, ವ್ ಒತ್ತುಗಳನ್ನು ಸೇರಿಸುವ [ಕನ್ನಡದಲ್ಲಿ ಇರುವನ್ತೆ] ಮೂಲಕ ಬರಿಗೆಮಣೆಯ ತೊಡಕುಗಳನ್ನು ಪರಿಹರಿಸಬಹುದಾಗಿದೆ.
    ,
    *ಗಮನಿಸಿರಿಃ ಕನ್ನಡದಲ್ಲಿ ಇರುವನ್ತೆ – ಎನ್ದು ವಿವರಣೆಗಾಗಿ ನಾನು ಹೇೞಿದುದಲ್ಲದೆ ಸರಕಾರದ ಅಪ್ಪಣೆಯಲ್ಲಿ ಕನ್ನಡದ ಉಲ್ಲೇಖವಿಲ್ಲ.

    ಹಾಗಾಗಿ ’ಲಿಪಿ’ ಎನ್ನುವಾಗ ಅಚ್ಚುಮೊಳೆಯೆನ್ದೇ ತಿಳಿಯಲಾಗಿದೆ. ಒಟ್ಟು ೯೦ ಲಿಪಿಗಳಿವೆಯೆನ್ದು ಕೊನೆಯಲ್ಲಿ ಹೇೞಲಾಗಿದೆ. ಅದು ಮೊದಲು ಬೞಕೆಯಲ್ಲಿದ್ದ ’ಲಿಪಿಗೆ’ ಹೆಚ್ಚಿನ ಬದಲಾವಣೆಯನ್ನು ತರಲಿಲ್ಲ. ಅದು ಲಿಪಿಯ ಸರಳತೆಗಾಗಿ ಮಾಡಿದುದಲ್ಲ. ಅಚ್ಚುಮೊಳೆಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಕೈಗೊಣ್ಡ ಕ್ರಮ.

    ಉತ್ತರ
    • ಏಪ್ರಿಲ್ 17 2011

      ಕಾಗುಣಿತ ಮುಂತಾದವುಗಳನ್ನು ಬರೆಯುವ ಬಗೆಯನ್ನು ಮಾರ್ಪಡಿಸಿರುವುದನ್ನು ನಾನು ಲಿಪಿ-ಬದಲಾವಣೆ ಎಂದು ಕರೆದಿದ್ದೇನೆ. ಬರಿಗೆಮಣೆಯನ್ನು ಬದಲಾಯಿಸಿದರೆ ಮಾತ್ರ ಲಿಪಿ-ಬದಲಾವಣೆ ಎನ್ನಬೇಕಿಲ್ಲ ಎಂಬ ತರ್ಕದಿಂದ. ’ಲಿಪಿ’ ಎಂಬುದಕ್ಕೆ ’ಬರಿಗೆಮಣೆ’ (ಅಕ್ಶರಮಾಲೆ) ಎಂಬ ಅರ್ತವು ಸ್ವಲ್ಪ ಸಂಕುಚಿತವಾಗುತ್ತದೆ, ಏಕೆಂದರೆ ಬೇರೆಬೇರೆ ಕಾಗುಣಿತದ ಚಿನ್ನೆಗಳು ಮತ್ತು ಒತ್ತುಗಳು ’ಬರಿಗೆಮಣೆ’ಯಲ್ಲಿ ಸಾಮಾನ್ಯವಾಗಿ ತೋರಿಸುವುದಿಲ್ಲ.

      ಉತ್ತರ
  11. kpbolumbu
    ಏಪ್ರಿಲ್ 17 2011

    @ಕಿರಣ ಬಾಟ್ನಿ –
    ಆದರೆ “1971 ರಲ್ಲಿ ಮಲಯಾಳಿ ಲಿಪಿಯಲ್ಲಿ ಬಹಳ ಸರಳತನವನ್ನು ತಂದು ಅದರ ಸಿಕ್ಕಲುತನವನ್ನು 75% ಕಡಿಮೆ ಮಾಡಿತು” ಎಂಬುದು ಸರಿಯಲ್ಲ. ಇಲ್ಲಿ ಪ್ರಿಂಟ್ ಮಾಡುವ/ ಟೈಪ್ ಮಾಡುವ ಸಿಕ್ಕಲುತನವನ್ನು ಕಡಿಮೆಗೊಳಿಸಿದುದು. ಇನ್ನು ಬರೆಹದ ಮಟ್ಟಿಗೆ ಅದೊನ್ದು ಸಿಕ್ಕಲುತನವೆನ್ದು ಯಾರೂ ಹೇೞಲಿಲ್ಲ.

    ಉತ್ತರ
  12. kpbolumbu
    ಏಪ್ರಿಲ್ 17 2011

    >>ಕಾಗುಣಿತ ಮುಂತಾದವುಗಳನ್ನು “ಬರೆಯುವ” ಬಗೆಯನ್ನು ಮಾರ್ಪಡಿಸಿರುವುದನ್ನು ನಾನು ಲಿಪಿ-ಬದಲಾವಣೆ ಎಂದು ಕರೆದಿದ್ದೇನೆ.
    ಬರೆಯುವ ಬಗೆಯನ್ನು ಮಾರ್ಪಡಿಸಲಾಗಿಲ್ಲ. ಕೂಡಿಕೊಣ್ಡನ್ತಿದ್ದ ಅಚ್ಚುಮೊಳೆ ಬೇಱೆಯೇ ಆಗಿ ಇರುವನ್ತೆ ರೂಪಿಸಲಾಗಿದೆ, ಇನ್ನೇನೂ ಇಲ್ಲ.

    >>ಮಲೆಯಾಳಿ ನುಡಿಯೂ ನನಗೆ ಬರುವುದಿಲ್ಲ.
    ಹಾಗಿದ್ದರೆ “ಕಾಗುಣಿತ ಮುಂತಾದವುಗಳನ್ನು ಬರೆಯುವ ಬಗೆಯನ್ನು ಮಾರ್ಪಡಿಸಿರುವುದನ್ನು ನಾನು ಲಿಪಿ-ಬದಲಾವಣೆ ಎಂದು ಕರೆದಿದ್ದೇನೆ. ಬರಿಗೆಮಣೆಯನ್ನು ಬದಲಾಯಿಸಿದರೆ ಮಾತ್ರ ಲಿಪಿ-ಬದಲಾವಣೆ ಎನ್ನಬೇಕಿಲ್ಲ ಎಂಬ ತರ್ಕದಿಂದ.” ಈ ಮಾತಿಗೆ ಯಾವ ಅರ್ಥವನ್ನು ಕಣ್ಡುಕೊಳ್ಳಬೇಕು?

    >>’ಲಿಪಿ’ ಎಂಬುದಕ್ಕೆ ’ಬರಿಗೆಮಣೆ’ (ಅಕ್ಶರಮಾಲೆ) ಎಂಬ ಅರ್ತವು ಸ್ವಲ್ಪ ಸಂಕುಚಿತವಾಗುತ್ತದೆ.
    ಇದ್ದರೂ ಇರಬಹುದು. ಆದರೆ ಮೇಲೆ ತಿಳಿಸಿದ ಸರಕಾರದ ಅಪ್ಪಣೆಯಲ್ಲಿ ಅದು ’ಅಚ್ಚುಮೊಳೆ’ ಎಂಬ ಅರ್ಥದಲ್ಲೇ ಬೞಸಲ್ಪಟ್ಟಿದೆಯೆಂಬುದರಲ್ಲಿ ನನಗೇನೂ ಅನುಮಾನವಿಲ್ಲ. ಇನ್ನು ಮುನ್ದೆ ಬೞಸುವ ’ಲಿಪಿಗಳು’ ಎಂಬ ಪಟ್ಟಿಯ ಕೊನೆಯಲ್ಲಿ “ಮೊತ್ತಂ ೯೦ ಲಿಪಿಗಳ್” ಎನ್ನಲಾಗಿದೆ.

    ನಾಲ್ಕನೆಯ ಅಂಶವನ್ನು ವಿವರಿಸಿದ ಸಾಲುಗಳ ಒನ್ದು ಆಯ್ದ ಭಾಗ ಹೀಗಿದೆ-
    ಚಿಲ್ಲುಗಳ್ [ ണ്‍, ന്‍, ര്‍, ല്‍, ള്‍ – ಣ್, ನ್, ರ್, ಲ್, ಳ್ ] ಇಪ್ಪೋೞತ್ತೆಪೋಲೆ ನಿಲನಿರ್ತಾಮೆನ್ನ್ ಕಮಿಟಿ ಶುಪಾರ್ಶ ಚೆಯ್ದಿರಿಕ್ಕುನ್ನು. ಎೞುದುನ್ನದಿನು ಇಪ್ಪೋೞತ್ತೆ ಲಿಪಿಸಂಪ್ರದಾಯಂತನ್ನೆ ತುಡರ್ನುಗೊಣ್ಡ್ ಅಚ್ಚಡಿಯಿಲುಂ ಟೈಪ್‍ರೈಟಿಂಗಿಲುಂ ಪುದಿಯ ಸಂಪ್ರದಾಯಮ್ ಸ್ವೀಕರಿಚ್ಚಾಲ್ ಮದಿಯಾಗುಮೆನ್ನುಂ ಕಮಿಟಿ ಶುಪಾರ್ಶ ಚೆಯ್ದಿಟ್ಟುಣ್ಡ್.
    ಮೇಲಣ ವಾಕ್ಯಗಳ ತಿರುಳು-
    ಣ್, ನ್, ರ್, ಲ್, ಳ್ – ಇವಿಷ್ಟನ್ನು ಈಗ ಇರುವನ್ತೆಯೇ ಉೞಿಸಿಕೊಳ್ಳಬಹುದೆನ್ದು ಸಮಿತಿ ಶಿಫಾರಸ್ಸು ಮಾಡಿದೆ. ~~ಬರೆಯಲು ಈಗಿನ ಲಿಪಿಸಂಪ್ರದಾಯವನ್ನೇ ಮುನ್ದುವರಿಸಬಹುದೆನ್ದೂ ಸಮಿತಿ ಶಿಫಾರಸ್ಸು ಮಾಡಿದೆ.~~

    ಕೊನೆಯ ಎರಡು ಪ್ಯಾರಗಳು ಇನ್ತಿವೆ-
    “ಲಿಪಿಪರಿಷ್ಕರಣ ಸಮಿತಿಯುಡೆ ಶುಪಾರ್ಶಕಳ್ ಅನುಸರಿಚ್ಚ್ ಪಲ ಲಿಪಿಗಳ್ಕುಂ ಸಮುಚಿತಮಾಯ ಮುದ್ರಣಮಾತೃಕಗಳ್ ರೂಪಪ್ಪೆಡುತ್ತೇಣ್ಡದಾಣ್. ಅಚ್ಚಡಿಯಿಲುಂ ಟೈಪ್‍ರೈಟಿಂಗಿಲುಂ ಇತ್ತರಂ ಮಾತೃಕಗಳ್ ಉಣ್ಡಾಕ್ಕಾನ್ ಆವಶ್ಯಮಾಯ ನಡಪಡಿಗಳ್ ಗವರ್ನ್‍ಮೆಣ್ಟ್ ಸ್ವೀಕರಿಚ್ಚ್ ವರುನ್ನುಣ್ಡ್. ಪರಿಷ್ಕರಿಚ್ಚ ಲಿಪಿಗಳ್ಕ್ ಏಕೀಕೃತಮಾಯ ಕಂಪೋಸಿಂಗ್‍ಕೇಸ್ ನಡಪ್ಪಿಲ್ ವರುತ್ತುನ್ನದಿನಾವಶ್ಯಮಾಯ ನಡಪಡಿಗಳುಂ ಸ್ವೀಕರಿಚ್ಚುವರುನ್ನು.

    “ಮಲೆಯಾಳಂ ಕ್ರಮಾನುಗತಮಾಯಿ ಕೇರಳತ್ತಿನ್ಡೆ ಔದ್ಯೋಗಿಕ ಭಾಷಯಾಯಿ ಮಾಱಿಕ್ಕೊಣ್ಡಿರಿಕುಗಯಾಣ್. ಪಲ ಘಟ್ಟಂಗಳಿಲಾಯಿ ನಡಪ್ಪಿಲ್ ವರುತ್ತುನ್ನ ಈ ಮಾಱ್ಱಂ ಪೂರ್ತಿಯಾಗುಂಬೋೞೇಕ್ಕು ಪುದಿಯ ಲಿಪಿಸಂಪ್ರದಾಯತ್ತಿನ್ಡೆ ಉಪಯೋಗಂ ಸಾರ್ವತ್ರಿಕಮಾಯಿತ್ತೀರೇಣ್ಡದಾವಶ್ಯಮಾಣ್. ಎಂಗಿಲ್‍ಮಾತ್ರಮೇ ಔದ್ಯೋಗಿಕಮಾಯ ಎಲ್ಲಾ ಆವಶ್ಯಂಗಳ್ಕುಂ ಮಲೆಯಾಳ ಭಾಷಯೆ ಸುಗಮಮಾಂವಿಧಂ ಉಪಯೋಗಿಕ್ಕಾನ್ ಕೞಿಯು. ಅದಿನಾಲ್ ಪುದಿಯ ಲಿಪಿಗಳ್ ನಿತ್ಯೋಪಯೋಗತ್ತಿಲಾಕ್ಕಿತ್ತೀರ್ಕಾನ್ ಭಾಷಾಭಿಮಾನಿಗಳು ಪರಿಶ್ರಮಿಕ್ಕೇಣ್ಡಿಯಿರಿಕ್ಕುನ್ನು.

    ಮೇಲಣ ವಾಕ್ಯಗಳ ತಿರುಳು-
    “ಲಿಪಿಪರಿಷ್ಕರಣ ಸಮಿತಿಯ ಶಿಫಾರಸ್ಸುಗಳ ಅನ್ವಯ ಹಲವು “ಲಿಪಿಗಳಿಗೆ” ತಕ್ಕುದಾದ ಅಚ್ಚಿನ ಮಾದರಿಗಳನ್ನು ರೂಪಿಸಬೇಕಾಗಿದೆ. ಪ್ರಿಂಟ್ ಮಾಡಲು/ ಟೈಪ್ ಮಾಡಲು ಈ ಬಗೆಯ ಮಾದರಿಗಳನ್ನು ತಯಾರಿಸಲು ಬೇಕಾದ ಕ್ರಮಗಳನ್ನು ಸರಕಾರ ಕೈಗೊಳ್ಳುತ್ತಲಿದೆ. ಪರಿಷ್ಕರಣೆಗೊಳಗಾದ ಲಿಪಿಗಳಿಗೆ ಏಕೀಕೃತವಾದ ಕಂಪೋಸಿಂಗ್‍ಕೇಸ್ ಜಾರಿಗೆ ತರಲು ಬೇಕಾದ ಕ್ರಮಗಳನ್ನೂ ಸರಕಾರ ಕೈಗೊಳ್ಳುತ್ತಲಿದೆ.

    ಮಲೆಯಾಳ ಭಾಷೆ ಕಾಲಕ್ರಮದಲ್ಲಿ ಕೇರಳದ ಅಧಿಕೃತ ಭಾಷೆಯಾಗುತ್ತಲಿದೆ. ಹಲವು ಹನ್ತಗಳಲ್ಲಿ ಜಾರಿಗೆ ತರಲಾಗುವ ಈ ಬದಲಾವಣೆಗಳು ಪೂರ್ತಿಯಾಗುವಾಗ ಹೊಸ ಲಿಪಿಸಂಪ್ರದಾಯದ ಬೞಕೆ ಸಾರ್ವತ್ರಿಕವಾಗಬೇಕು. ಹಾಗಾದರೆ ಮಾತ್ರ ಎಲ್ಲಾ ಅಧಿಕೃತ ಆವಶ್ಯಕತೆಗಳಿಗೆ ಮಲೆಯಾಳ ಭಾಷೆಯನ್ನು ಸುಗಮವಾಗಿ ಬೞಸಲು ಸಾಧ್ಯವಾದೀತು. ಹಾಗಾಗಿ ಹೊಸ ಲಿಪಿಗಳ ಬೞಕೆಗಾಗಿ ಭಾಷಾಭಿಮಾನಿಗಳು ಪರಿಶ್ರಮಿಸಬೇಕಿದೆ.

    >>ಯ್, ರ್, ಲ್, ವ್ ಒತ್ತುಗಳನ್ನು ಸೇರಿಸುವ [ಕನ್ನಡದಲ್ಲಿ ಇರುವನ್ತೆ] ಮೂಲಕ ಬರಿಗೆಮಣೆಯ ತೊಡಕುಗಳನ್ನು ಪರಿಹರಿಸಬಹುದಾಗಿದೆ.
    ನಾಲ್ಕನೆಯ ಅಂಶವನ್ನು ಚುಟುಕಾಗಿ ಹೇೞುವಾಗ ನಾನು “ಬರಿಗೆಮಣೆ” ಎಂಬುದನ್ನು ಅಕ್ಷರಮಾಲೆ ಎಂಬ ಅರ್ಥದಲ್ಲಿ ಬೞಸದೆ ಟೈಪ್‍ಸೆಟ್ ಎಂಬ ಅರ್ಥದಲ್ಲೇ ಬೞಸಿರುವೆನು. “ഞ്ച(ಞ್ಚ) ಎನ್ನುವುದನ್ನು ಮೊದಲಿಗೆ ಬರೆಯುತ್ತಿದ್ದ ರೀತಿಯನ್ನು ಇಲ್ಲಿ ತೋಱಿಸಲು ಸಾಧ್ಯವಾಗಲಿಲ್ಲ. [ಬರಿಗೆಮಣೆಯ ತೊಡಕು]” ಈ ವಾಕ್ಯದಲ್ಲೂ ನಾನು “ಬರಿಗೆಮಣೆ” ಎಂಬುದನ್ನು ಟೈಪ್‍ಸೆಟ್ ಎಂಬ ಅರ್ಥದಲ್ಲೇ ಬರೆದಿರುವೆನು.

    ಉತ್ತರ
    • ಏಪ್ರಿಲ್ 17 2011

      ನೀವು ಮಲೆಯಾಳಿಯ ಬಗ್ಗೆ ನನಗಿಂತ ಹೆಚ್ಚು ತಿಳಿದುಕೊಂಡಿದ್ದೀರಿ ಎನ್ನುವುದು ಸ್ಪಶ್ಟ (ನನಗೆ ತಿಳಿದಿರುವುದು ಸೊನ್ನೆಯೇ).

      ನನ್ನ ಗೊಂದಲವನ್ನು ಹೋಗಲಾಡಿಸಲು ಈ ಪ್ರಶ್ನೆಯನ್ನು ದಯವಿಟ್ಟು ಉತ್ತರಿಸಿ: ಈ ಅಪ್ಪಣೆಯ ನಂತರ ಶಾಲೆಗಳಲ್ಲಿ ಮಕ್ಕಳಿಗೆ ಹೇಳಿಕೊಡುವ ಮಲೆಯಾಳಿ (ಕೈ-)ಬರವಣಿಗೆಯು ಬದಲಾಯಿತೋ ಇಲ್ಲವೋ? ಉದಾಹರಣೆಗೆ, ಚಂದ್ರಕಲೆಯ ಬಳಕೆ ಸಂಬಂದಿಸಿದಂತೆ ಏನಾದರೂ ಬದಲಾಯಿತೋ? ಇಲ್ಲವೇ ಅಚ್ಚಿನ ಲಿಪಿಗೂ ಕೈಬರಹದ ಲಿಪಿಗೂ ಅಂತರಗಳು ಇದ್ದರೆ ಇರಲಿ ಎಂಬುದೇ ಅವರ ನಿಲುವೋ? ಇಲ್ಲವೇ ಆ ಅಂತರಗಳನ್ನು ನಿದಾನವಾಗಿ ಕಡಿಮೆ ಮಾಡಿಕೊಳ್ಳಬೇಕು ಎಂಬುದು ಅವರ ನಿಲುವೋ?

      ಅಂದಹಾಗೆ, ನನಗೆ ಸಿಂಹಳ ನುಡಿ ಬರುವುದಿಲ್ಲ. ಆದರೆ ಅದರ ಲಿಪಿಯಲ್ಲಿ ಕಾಗುಣಿತವನ್ನು ಬರೆಯುವ ಬಗೆಯನ್ನು ಬದಲಾಯಿಸಿದರೆ ಅದನ್ನು ನಾನು ಲಿಪಿ-ಬದಲಾವಣೆ ಎಂದೇ ಕರೆಯುತ್ತೇನೆ (ಏಕೆಂದರೆ ’ಲಿಪಿ’ ಎನ್ನುವುದಕ್ಕೆ ನಾನು ಕೊಟ್ಟಿರುವ ಹೆಚ್ಚು ಹರವಿನ ಅರ್ತದಿಂದ). ಇಲ್ಲಿ ನಿಮ್ಮ ಸಂದೇಹ ಏನೆಂದು ನನಗೆ ತಿಳಿಯುತ್ತಿಲ್ಲ.

      ಉತ್ತರ
      • ಏಪ್ರಿಲ್ 18 2011

        ಈ ಕೊಂಡಿಯನ್ನು ದಯವಿಟ್ಟು ನೋಡಿ:

        http://indic-computing.sourceforge.net/faq/malayalam.html

        ಇದರಲ್ಲಿ ಮಲೆಯಾಳಿ ಲಿಪಿಯಲ್ಲಿ ’ಕು’ ಎಂಬ ಕಾಗುಣಿತಾಕ್ಶರವನ್ನು ಹಿಂದೆ ಹೇಗೆ ಬರೆಯುತ್ತಿದ್ದರು ಎಂದು ತೋರಿಸಿದ್ದಾರೆ. ಈ ಮಾಹಿತಿ ಸರಿಯಿದೆಯೆ?

        ಸರಿಯಿದ್ದರೆ, ಶಾಲಾ ಪಟ್ಯಗಳಲ್ಲಂತೂ ಈಗ ಬೇರೆಯ ರೀತಿಯಲ್ಲಿ ಕಲಿಸುತ್ತಿದ್ದಾರೆ. ಈ ಪಟ್ಯಪುಸ್ತಕದಲ್ಲಿ ಪುಟ 48 ನೋಡಿ (ಇದು ತಮಿಳುನಾಡಿನಲ್ಲಿ ಅಚ್ಚಾಗಿರುವುದು ಎನ್ನುವುದು ಹಾಗಿರಲಿ):

        Click to access Std01-Malayalam.pdf

        ಪಟ್ಯಪುಸ್ತಕದಲ್ಲಿ ’ಕು’ ಎಂಬ ಅಕ್ಶರವನ್ನು ಒಂದು ರೀತಿ ತೋರಿಸಿ ಕೈಬರಹದಲ್ಲಿ ಇನ್ನೊಂದು ರೀತಿಯಲ್ಲಿ ಬರೆಯಲು ಹೇಳಿಕೊಡುತ್ತಿದ್ದಾರೆಯೆ? ಇಲ್ಲವೇ ಕೈಬರಹದಲ್ಲೂ ಬದಲಾವಣೆಗಳು ಆಗಿವೆಯೆ?

        ಕೈಬರಹದಲ್ಲೂ ಬದಲಾವಣೆಗಳು ಆಗಿವೆ ಎನ್ನುವುದಾದರೆ 1971ರ ಅಪ್ಪಣೆಯಿಂದ ಬರೀ ಪ್ರಿಂಟ್ ಮಾಡುವ/ ಟೈಪ್ ಮಾಡುವ ಸಿಕ್ಕಲುತನವನ್ನು ಮಾತ್ರ ಬದಲಾಯಿಸಿದಂತೆ ಎನ್ನುವುದು ಒಪ್ಪುತ್ತದೆಯೆ?

        ಹಳೆಯ ಕೈಬರಹವನ್ನು ನೀವು ಸಿಕ್ಕಲುತನವೆಂದೇ ಕರೆಯುತ್ತಿಲ್ಲ ಎಂದು ನನಗೆ ಅರಿವಾಯಿತು. ಆದುದರಿಂದ ಪ್ರಾಯಶಹ ನೀವು ನನ್ನ ’ಸಿಕ್ಕಲುತನ’ದ ಮಾತನ್ನು ಮಾತ್ರ ವಿರೋದಿಸುತ್ತಿರುವಿರೋ ಏನೋ. ಹಾಗಾದರೆ ತೊಂದರೆಯಿಲ್ಲ. ನನ್ನ ಬರಹದಲ್ಲಿ ಮಂಡಿಸಿರುವ ವಾದದ ಮಟ್ಟಿಗೆ ಆ ಸಿಕ್ಕಲುತನದ ನನ್ನ ಮಾತನ್ನು ಅಚ್ಚಿಗಶ್ಟೇ ಹಚ್ಚಲು ನನಗೆ ಹಿಂಜರಿಕೆಯಿಲ್ಲ.

        ~

        ಆದರೆ ಮಲೆಯಾಳಿಗೆ ಸಂಬಂದಪಟ್ಟಂತೆ ಮುಕ್ಯವಾಗಿ ನಾನು ಹೇಳಬಯಸಿದ್ದು ಏನೆಂದರೆ – ಬರವಣಿಗೆಯನ್ನು ಕೇರಳದವರು 1971ರಲ್ಲಿ ಬದಲಾಯಿಸಿಕೊಂಡರು. ಅಚ್ಚಿಗೆ ಸಂಬಂದಿಸಿದಂತೆ 75% ಚಿನ್ನೆಗಳನ್ನು ಕಡಿಮೆ ಮಾಡಲಾಯಿತು. ಈ ಬದಲಾವಣೆಯ ’ಬದಲಾವಣೆತನ’ವೊಂದರ ಬಗ್ಗೆಯೇ ನಾನು ಹೇಳಲು ಹೊರಟಿದ್ದು: ’ನೋಡಿ, ಕೇರಳದಲ್ಲಿ ಬರವಣಿಗೆಯಲ್ಲಿ ಬದಲಾವಣೆ ಮಾಡಿಕೊಂಡರು, ಆದುದರಿಂದ ಬದಲಾವಣೆಯಲ್ಲಿ ಬದಲಾವಣೆ ಮಾಡಿಕೊಳ್ಳಬಾರದು ಎನ್ನುವುದಕ್ಕೆ ಕೇರಳದ ಉದಾಹರಣೆ ತರವಲ್ಲ’ ಎಂದು.

        ಉತ್ತರ
        • kpbolumbu
          ಏಪ್ರಿಲ್ 18 2011

          >>ಪುಸ್ತಕದಲ್ಲಿ ’ಕು’ ಎಂಬ ಅಕ್ಷರವನ್ನು ಒಂದು ರೀತಿ ತೋರಿಸಿ ಕೈಬರೆಹದಲ್ಲಿ ಇನ್ನೊಂದು ರೀತಿಯಲ್ಲಿ ಬರೆಯಲು ಹೇಳಿಕೊಡುತ್ತಿದ್ದಾರೆಯೆ?
          ಕಾಪಿ ತಿದ್ದುವಾಗ ಮೊದಲಿನ ರೀತಿಯಲ್ಲಿ ಬರೆಯಬೇಕೆನ್ದೇ ತಿದ್ದುತ್ತಾರೆ.

          ಈಗಿನ ರೀತಿಯನ್ತೆ ಕಾಗುಣಿತಗಳನ್ನು ಬರೆಯುವ ಕ್ರಮವನ್ನು ಇಲ್ಲಿ ಕಾಣಬಹುದು.

          ಕೆೞಗಿನದ್ದು ’ರಚನಾ’ ಫಾಣ್ಟ್. ಇದನ್ನು ಬೞಸಿಕೊಣ್ಡು ಮೊದಲಿಗೆ ಇದ್ದ ರೀತಿಯಲ್ಲಿ ಟೈಪ್ ಮಾಡಬಹುದು.

          ರಚನಾ ಫಾಣ್ಟಿನ ಕುಱಿತು ಇನ್ನಷ್ಟು.
          http://www.chintha.com/taxonomy/term/2/9

          ಅಲ್ಲಿ,
          “The people of Kerala have welcomed the initiative of Rachana wholeheartedly. Leading intellectuals, literary stalwarts and journalists have supported the venture. Even students brought up with the truncated alphabets have come forward for the original alphabets offered by Rachana. During the last four years several books have been published using the Rachana editor. The autobiography of Guru Nityachaithanya Yeti is one among them. The Ramayana of Ezhuthachan, who is considered the father of Malayalam language, has also been published in Rachana. The Malayalam Bible published in 19th century is being reprinted in the original script using Rachana currently.” – ಎನ್ನಲಾಗಿದೆ.

          ಉತ್ತರ
  13. kpbolumbu
    ಏಪ್ರಿಲ್ 18 2011

    >>ಲಿಪಿಯಲ್ಲಿ ಕಾಗುಣಿತವನ್ನು ಬರೆಯುವ ಬಗೆಯನ್ನು ಬದಲಾಯಿಸಿದರೆ ಅದನ್ನು ನಾನು ಲಿಪಿ-ಬದಲಾವಣೆ ಎಂದೇ ಕರೆಯುತ್ತೇನೆ –
    ಲಿಪಿಯಲ್ಲಿ ಕಾಗುಣಿತವನ್ನು ಬರೆಯುವ ಬಗೆ ಇಲ್ಲಿ “ಬದಲಾಗಲಿಲ್ಲ” ಎನ್ನುತ್ತಿರುವೆನು. ಈ ಸುಧಾರಣೆಯಿನ್ದಲಾಗಿ ಟೈಪ್‍ಸೆಟ್ಟುಗಳನ್ನು ಜೋಡಿಸುವ ಕೆಲಸ ಸುಲಭವಾಗಿದೆ. ಅನ್ದರೆ “ಕು” ಎಂಬುದು ಮೊದಲಿಗೆ ಒನ್ದೇ ಟೈಪ್‍ಸೆಟ್ ಆಗಿತ್ತು ಮತ್ತು ಈಗ ಎರಡು ವಿಭಿನ್ನ ಟೈಪ್‍ಸೆಟ್ಟುಗಳನ್ನು ಜೋಡಿಸಿ “ಕು” ಎಂಬುದನ್ನು ಮೂಡಿಸಬಹುದು ಎಂಬುದಷ್ಟೇ. ಬರೆಯುವಾಗ “ಲಿಪಿಯಲ್ಲಿ” ಏನೂ ವ್ಯತ್ಯಾಸವಾಗದು. ಲಿಪಿಯೆನ್ನುವುದು ಅಲ್ಲಿ ’ಅಚ್ಚುಮೊಳೆ’ ಎಂಬ ಅರ್ಥದಲ್ಲೇ ಬೞಸಲ್ಪಟ್ಟಿದೆ ಎನ್ದು ನೀವು ಗಮನಿಸಿದನ್ತೆ ತೋಱಲಿಲ್ಲ. ಅದಕ್ಕೆ ನೀವು ಹೆಚ್ಚು ಹರವಿನ ಅರ್ಥವನ್ನು ಕೊಟ್ಟಿರುವುದು ನಿಜವೇ ಆದರೂ ಅಲ್ಲಿ ಇರುವುದು ಏನೆನ್ದು ತಿಳಿಯಲು ಅಲ್ಲಿ ಬೞಕೆಯಾದ ಅರ್ಥವನ್ನು ಮನಗಾಣಬೇಕು.

    ಮತ್ತೂ ನಾನು ಹೇೞುತ್ತಿರುವುದು “ಲಿಪಿಯಲ್ಲಿ ಬಹಳ ಸರಳತನವನ್ನು ತಂದು ಅದರ ಸಿಕ್ಕಲುತನವನ್ನು 75% ಕಡಿಮೆ ಮಾಡಿತು” ಎನ್ನುವುದು ಸರಿಯಲ್ಲ ಎಂಬುದಾಗಿ. ಸರಳತನವೆನ್ದು ನೀವು ಕರೆಯಬಹುದಾದುದು ಅರ್ಕಾವೊತ್ತಿನ ಕುಱಿತಾದುದೊನ್ದೇ. ಅಕ್ಷರದ ಮೇಲ್ಗಡೆ ಚುಕ್ಕಿ ಇಡುವುದನ್ನು ಕಡಿಮೆಗೊಳಿಸಿದುದೊನ್ದೇ ಎತ್ತಿಹೇೞಬಹುದಾದ ಬದಲಾವಣೆ. ಪರಿಹಾರವಾದುದು ಅಚ್ಚಿನ ಸಮಸ್ಯೆ. ಪ್ರಿಂಟ್ ಮಾಡುವ/ ಟೈಪ್ ಮಾಡುವ ಸಿಕ್ಕಲುತನವನ್ನು ಕಡಿಮೆಗೊಳಿಸಿದುದು. ಬರೆಹದ ಮಟ್ಟಿಗೆ ಅದೊನ್ದು ಸಿಕ್ಕಲುತನವೆನ್ದು ಯಾರೂ ಹೇೞಲಿಲ್ಲ.

    >>ಶಾಲೆಗಳಲ್ಲಿ ಮಕ್ಕಳಿಗೆ ಹೇಳಿಕೊಡುವ ಮಲೆಯಾಳ (ಕೈ-)ಬರವಣಿಗೆಯು ಬದಲಾಯಿತೋ ಇಲ್ಲವೋ-
    ವ್ಯಂಜನಾಕ್ಷರಗಳನ್ನು ಈಗ ಎರಡೂ ರೀತಿಯಲ್ಲಿ ಬರೆಯಲಾಗುತ್ತಿದೆ. ಅರ್ಕಾವೊತ್ತಿಗಾಗಿ ಅಕ್ಷರದ ಮೇಲ್ಗಡೆ ಚುಕ್ಕಿ ಇಡುವ ಕ್ರಮ ಬರೆಹದಲ್ಲಿ (ಅಚ್ಚಿನಲ್ಲಿಯೂ) ಮುನ್ದುವರಿಯುತ್ತಲಿದೆ. [ಈಗ ಟೈಪ್‍ಸೆಟ್ಟುಗಳ ಜೋಡಿಸುವ ಕೆಲಸವಿಲ್ಲ],

    ಉತ್ತರ
  14. ಏಪ್ರಿಲ್ 18 2011

    >> ಲಿಪಿಯೆನ್ನುವುದು ಅಲ್ಲಿ ’ಅಚ್ಚುಮೊಳೆ’ ಎಂಬ ಅರ್ಥದಲ್ಲೇ ಬೞಸಲ್ಪಟ್ಟಿದೆ ಎನ್ದು ನೀವು ಗಮನಿಸಿದನ್ತೆ ತೋಱಲಿಲ್ಲ.
    >> [ಕೈಬರಹದಲ್ಲಿ] ವ್ಯಂಜನಾಕ್ಷರಗಳನ್ನು ಈಗ ಎರಡೂ ರೀತಿಯಲ್ಲಿ ಬರೆಯಲಾಗುತ್ತಿದೆ.

    ಆ ಅಪ್ಪಣೆಯಲ್ಲಿ ’ಅಚ್ಚುಮೊಳೆ’ ಎಂಬ ಅರ್ತದಲ್ಲಿ ಮಾತ್ರ ಬಳಸಲ್ಪಟ್ಟಿದೆ ಎಂದು ಕಂಡಿತ ಗಮನಿಸಿದೆ. ಆದರೆ ಕೈಬರಹವೂ ಬದಲಾಗಿದೆ ಎಂದು ನೀವೇ ಹೇಳುತ್ತಿದ್ದೀರಲ್ಲ?

    ಮಿಕ್ಕಂತೆ ನನ್ನ ಮತ್ತೊಂದು ಕಾಮೆಂಟು ಪರಿಶೀಲನೆಯಲ್ಲಿದೆ.

    ಉತ್ತರ
  15. kpbolumbu
    ಏಪ್ರಿಲ್ 18 2011

    ಬದಲಾಗಿದೆ, ಆದರೆ ನೀವು ಹೇೞುವ ಪರಿಮಾಣದಲ್ಲಿ ಆಗಲಿಲ್ಲ. “75% ಕಡಿಮೆಯಾಯಿತು” ಎನ್ನುವಷ್ಟಿಲ್ಲ.
    ಯಾಕೆನ್ದರೆ, ಇಲ್ಲಿ ಗಮನಿಸಿರಿಃ
    “ಮಲೆಯಾಳ ಭಾಷೆಯಲ್ಲಿ ಅರ್ಕಾವೊತ್ತನ್ನು ಒಳಗೊಣ್ಡ [ಶಬ್ದಗಳನ್ನು – ಇದು ಬಿಟ್ಟುಹೋಗಿತ್ತು.] ಈಗ ಎರಡು ವಿಧವಾಗಿ ಬರೆಯಲಾಗುತ್ತಿದೆ.
    ಉದಾ: ಅರ್ಕ್ಕನ್, ಅರ‍್ಕ್ಕನ್ ಪಾರ್ತ್ತಲಂ, ಪಾರ‍್ತ್ತಲಂ ನೇರ್ಚ್ಚ, ನೇರ‍್ಚ್ಚ
    ಇದರಲ್ಲಿ ಮೊದಲಿನದನ್ನು ಬಿಡಬೇಕು”
    ಹಾಗೆನ್ನುವಾಗ ಅದೊನ್ದು ಬರೆಹದಲ್ಲಿ ಅದೊನ್ದು ಪ್ರಮುಖ ಬದಲಾವಣೆಯಲ್ಲ.

    >>ಸರಳತನವೆನ್ದು ನೀವು ಕರೆಯಬಹುದಾದುದು ಅರ್ಕಾವೊತ್ತಿನ ಕುಱಿತಾದುದೊನ್ದೇ. ಅಕ್ಷರದ ಮೇಲ್ಗಡೆ ಚುಕ್ಕಿ ಇಡುವುದನ್ನು ಕಡಿಮೆಗೊಳಿಸಿದುದೊನ್ದೇ ಎತ್ತಿಹೇೞಬಹುದಾದ ಬದಲಾವಣೆ.
    ಇದನ್ನು ಮೊದಲೇ ಹೇೞಿರುವೆನು.

    >>ಮಲೆಯಾಳ ಭಾಷೆಯ ക്ക(ಕ್ಕ), ങ്ക(ಙ್ಕ), ങ്ങ(ಙ್ಙ), ച്ച(ಚ್ಚ), ഞ്ച(ಞ್ಚ), ഞ്ഞ(ಞ್ಞ), … ಮುನ್ತಾದ ಹದಿನೆಣ್ಟು ಮೂಲ ಸಂಯುಕ್ತಾಕ್ಷರಗಳನ್ನು ಹಾಗೆಯೇ ಉೞಿಸಿಕೊಣ್ಡು ಸಂಸ್ಕೃತ ಶಬ್ದಗಳಲ್ಲಿ ಬರುವ ಕ್ತ, ಶ್ಚ, .. ಮುನ್ತಾದ ಸಂಯುಕ್ತಾಕ್ಷರಗಳನ್ನು ಚಂದ್ರಕಲೆಯನ್ನು ಬೞಸಿ ಬಿಡಿಸಿ ಬರೆಯಬೇಕು.
    ಅಲ್ಲಿ ಮಲೆಯಾಳ ಭಾಷೆಯ ಹದಿನೆಣ್ಟು ಮೂಲ ಸಂಯುಕ್ತಾಕ್ಷರಗಳನ್ನು ಹೆಸರಿಸಿ “ಇವು ಹೀಗೆಯೇ ಇರಬೇಕು” ಎನ್ದಿದ್ದಾರೆ. ಸಂಸ್ಕೃತ ಶಬ್ದಗಳಲ್ಲಿ ಬರುವ ಸಂಯುಕ್ತಾಕ್ಷರಗಳೆನ್ದು ಹೆಸರಿಸಿದುದು ಎರಡನ್ನು ಮಾತ್ರ. ಹದಿನೆಣ್ಟು ಮೂಲ ಸಂಯುಕ್ತಾಕ್ಷರಗಳು ಮೊದಲು ಇದ್ದನ್ತೆಯೇ ಇವೆ. [ಅವು ಅಚ್ಚಿಗೆ ತೊಡಕಾಗಿದ್ದರೂ].ಇನ್ನು ಚಂದ್ರಕಲೆಯೆಂಬುದು ಹೊಸ ಬೞಕೆಯಾಗಿರಲಿಲ್ಲ. ಮೊದಲಿಗೆ ಇದ್ದ ಎರಡು ರೀತಿಗಳಲ್ಲಿ ಒನ್ದನ್ನು ಆಯ್ದುಕೊಣ್ಡುದು ಮಾತ್ರ.

    ಉತ್ತರ
    • ಏಪ್ರಿಲ್ 18 2011

      75% ಸಿಕ್ಕಲುತನ ಕಡಿಮೆಯಾಗಿದೆ ಎಂಬ ಅಂಕಿ ಅಂಶ ಅಚ್ಚುಮೊಳೆಗಳಿಗೆ ಮಾತ್ರ ಒಪ್ಪುವುದು ಎಂದು ನೀವು ತೋರಿಸಿಕೊಟ್ಟಿರುವುದಕ್ಕೆ ದನ್ಯವಾದಗಳು. ಅದನ್ನು ನಾನು ನಿಮ್ಮಶ್ಟು ಸ್ಪಶ್ಟವಾಗಿ ಕಂಡಿರಲಿಲ್ಲ, ಎಲ್ಲವನ್ನೂ ಸೇರಿ ’ಮಲೆಯಾಳಿ ಲಿಪಿಯಲ್ಲಿ 75% ಸಿಕ್ಕಲುತನ ಕಡಿಮೆಯಾಗಿದೆ’ ಎಂದಶ್ಟೇ ನಾನು ಸಾರಾಂಶಿಸಿದ್ದೆ. ಅದು ತಪ್ಪು. ಆ ತಪ್ಪು ಮಾಹಿತಿಯನ್ನು ಜನರ ಮುಂದೆ ಇಟ್ಟಿದ್ದಕ್ಕೆ ಕ್ಶಮೆ ಕೇಳಿಕೊಳ್ಳುತ್ತ, ಅದನ್ನು ತಿದ್ದಿದ ನಿಮಗೆ ನನ್ನಿ.

      ಆದರೂ ಅಚ್ಚಿನಲ್ಲೋ ಕೈಬರಹದಲ್ಲೋ 0% ಗಿಂತ ಹೆಚ್ಚು ಬದಲಾವಣೆ ಆಗಿದೆ ಎನ್ನುವುದಶ್ಟೇ ನನ್ನ ವಾದಕ್ಕೆ ಬೇಕಾಗಿರುವುದು (ಏಕೆಂದರೆ ತಂತ್ರಗ್ನಾನ ಯಾವುದೇ ಆದರೂ ಎರಡೂ ಸಾದಿಸುವುದು ಬರವಣಿಗೆಯನ್ನೇ). ಯಾವ ವಾದಕ್ಕೆ? ’ಬರವಣಿಗೆಯಲ್ಲಿ ಬದಲಾವಣೆಯೇ ಬೇಡ’ ಎನ್ನುವವರು ಮಲೆಯಾಳಿಯ ಉದಾಹರಣೆಯನ್ನು ತೆಗೆದುಕೊಳ್ಳುವುದು ತರವಲ್ಲ ಎಂಬ ವಾದಕ್ಕೆ. ವಿಶೇಶವಾಗಿ ’ಅಚ್ಚಿನ ಬರವಣಿಗೆಯಲ್ಲಿ ಬದಲಾವಣೆ ಬೇಡ’ ಎಂದು ಹೇಳುವವರು ಯಾರಾದರೂ ಇದ್ದರೆ ಅವರಿಗೆ ಮಲೆಯಾಳಿಯ ಉದಾಹರಣೆ ಇನ್ನೂ ಹೆಚ್ಚು ತರವಲ್ಲ ಎಂದು ನಿಮ್ಮ ತಿಳಿಮಾಳ್ಕೆಯಿಂದ ತಿಳಿದುಬಂತು. ಅದಕ್ಕೆ ನನ್ನಿ.

      ಅಚ್ಚಿನಲ್ಲಿ ಆದ ಬದಲಾವಣೆಗಳ ’ಲಾಬ’ ನಿದಾನವಾಗಿ ಕೈಬರಹಕ್ಕೂ ಬರಲಿದೆ ಎಂದು ನನ್ನ ಅನಿಸಿಕೆ, ಏಕೆಂದರೆ ಅಚ್ಚು ಮತ್ತು ಕೈಬರಹಗಳು ಬೇರೆಯಾಗಿ ಹೆಚ್ಚು ದಿನ ಉಳಿಯಲಾರವು. ಈಗಾಗಲೇ ಆ ’ಲಾಬ’ ಕೈಬರಹಕ್ಕೂ ಬರಲು ಶುರುವಾಗಿರುವಂತಿದೆ ಎಂದು ನೀವು ಒಪ್ಪಿದಂತಿದೆ (’ಲಾಬ’ ಎಂದು ನೀವು ಒಪ್ಪುತ್ತೀರೋ ಇಲ್ಲವೋ ಗೊತ್ತಿಲ್ಲ, ಆದರೆ ಬದಲಾವಣೆಯಂತೂ ಶುರುವಾಗಿದೆ ಎಂದು ’ವ್ಯಂಜನ’ಗಳ ಬಗ್ಗೆ ಹೇಳುವಾಗ ನೀವೇ ಒಪ್ಪಿದ್ದೀರಿ).

      (ನನ್ನ ಮತ್ತೊಂದು ಕಾಮೆಂಟು ಪರಿಶೀಲನೆಯಲ್ಲಿದೆ, ಅದರಲ್ಲಿ ಇದರ ಬಗ್ಗೆ ಹೆಚ್ಚು ಬರೆದಿದ್ದೇನೆ).

      ಉತ್ತರ
  16. kpbolumbu
    ಏಪ್ರಿಲ್ 18 2011

    ಕನ್ನಡದಲ್ಲಿಯೂ ಕೆಲ ಅಕ್ಷರಗಳನ್ನು ಎರಡು ವಿಧವಾಗಿ ಬರೆಯಲಾಗುತ್ತಿತ್ತು. ನನಗೆ ತಿಳಿದಿರುವ ಉದಾಹರಣೆಗಳು – ೧)ಭ, ೨)ಈ, ೩)ಹ

    ೧)ಭ-ವನ್ನು ಖ ಬರೆಯುವನ್ತೆ ತೊಡಗಿ ಚ-ದ ಹೋಲಿಕೆಯಲ್ಲಿ ಕೊನೆಗೊಳ್ಳುವನ್ತೆ ಹಿನ್ದೆ ಬರೆಯಲಾಗುತ್ತಿತ್ತು. ನನ್ನ ಅಜ್ಜನ ಕಾಲದಲ್ಲಿ ಎಲ್ಲರೂ ಹಾಗೆಯೇ ಬರೆಯುತ್ತಿದ್ದರು.
    ೨)ಈ ಅಕ್ಷರವನ್ನು ರ-ದ ಮೇಲೆ ದೀರ್ಘ ಚಿಹ್ನೆಯನ್ನಿಟ್ಟು ಬರೆಯುವನ್ತೆಯೇ ಇ-ಯ ಮೇಲೆ ದೀರ್ಘ ಚಿಹ್ನೆಯನ್ನಿಟ್ಟು ಬರೆಯುವ ರೂಢಿಯೂ ಚಾಲ್ತಿಯಲ್ಲಿತ್ತು. ಕೆೞಗಿನ ಚಿತ್ರದಲ್ಲಿ ’ಈ’ಅಕ್ಷರವನ್ನು ನಾಲ್ಕು ಭಾಷೆಗಳಲ್ಲಿ ’ರ’ ಅಕ್ಷರದ ಎರಡೂ ಬದಿಯಲ್ಲಿ ಚುಕ್ಕೆಗಳನ್ನಿಟ್ಟು ಸೂಚಿಸಿರುವುದನ್ನು ಕಾಣಬಹುದು. ಇವುಗಳಲ್ಲಿ ನನಗೆ ತಿಳಿದಿರುವ ಕನ್ನಡ ಮತ್ತು ಮಲೆಯಾಳ ಭಾಷೆಯಲ್ಲಿ ಇ-ಯ ಮೇಲೆ ದೀರ್ಘ ಚಿಹ್ನೆಯನ್ನಿಡುತ್ತಲೂ ’ಈ’ ಎಂಬ ಸ್ವರವನ್ನು ರೂಪಿಸಬಹುದು.

    ೩)ಹ-ವನ್ನು ಇನ್ದಿನ ತೆಲುಗು ಲಿಪಿಯಲ್ಲಿ ಬರೆಯುವನ್ತೆ “హ” ಎಂಬನ್ತೆಯೂ ಬರೆಯುತ್ತಿದ್ದರು.

    ಉತ್ತರ
  17. ಏಪ್ರಿಲ್ 18 2011

    ೧. ಕೈಬರಹದಲ್ಲೂ ಬದಲಾವಣೆಗಳು ಆಗಿವೆಯೆ?
    ಈ ಪ್ರಶ್ನೆಗೆ ಉತ್ತರಿಸಿದ್ದಾಗಿದೆ. ಅದೇನೆನ್ದರೆ “ಸರಳತನವೆನ್ದು ನೀವು ಕರೆಯಬಹುದಾದುದು ಅರ್ಕಾವೊತ್ತಿನ ಕುಱಿತಾದುದೊನ್ದೇ. ಅಕ್ಷರದ ಮೇಲ್ಗಡೆ ಚುಕ್ಕಿ ಇಡುವುದನ್ನು ಕಡಿಮೆಗೊಳಿಸಿದುದೊನ್ದೇ ಎತ್ತಿಹೇೞಬಹುದಾದ ಬದಲಾವಣೆ.”

    ೨.ಕೈಬರಹದಲ್ಲೂ ಬದಲಾವಣೆಗಳು ಆಗಿವೆ ಎನ್ನುವುದಾದರೆ 1971ರ ಅಪ್ಪಣೆಯಿಂದ ಬರೀ ಪ್ರಿಂಟ್ ಮಾಡುವ/ ಟೈಪ್ ಮಾಡುವ ಸಿಕ್ಕಲುತನವನ್ನು ಮಾತ್ರ ಬದಲಾಯಿಸಿದಂತೆ ಎನ್ನುವುದು ಒಪ್ಪುತ್ತದೆಯೆ?
    ನನ್ನ ಮೊದಲ ಪ್ರತಿಕ್ರಿಯೆಯಲ್ಲಿ ಹೇೞಿರುವನ್ತೆ –
    [“ಮಲೆಯಾಳ ಭಾಷೆಯಲ್ಲಿ ಅರ್ಕಾವೊತ್ತನ್ನು ಒಳಗೊಣ್ಡ ಈಗ ಎರಡು ವಿಧವಾಗಿ ಬರೆಯಲಾಗುತ್ತಿದೆ.
    ಉದಾ: ಅರ್ಕ್ಕನ್, ಅರ‍್ಕ್ಕನ್ ಪಾರ್ತ್ತಲಂ, ಪಾರ‍್ತ್ತಲಂ ನೇರ್ಚ್ಚ, ನೇರ‍್ಚ್ಚ
    ಇದರಲ್ಲಿ ಮೊದಲಿನದನ್ನು ಬಿಡಬೇಕು”
    ಹಾಗೆನ್ನುವಾಗ ಅಲ್ಲಿ ಮೊದಲೇ ಇದ್ದ ಎರಡು ರೀತಿಗಳಲ್ಲಿ ಒನ್ದನ್ನು ಆಯ್ದುಕೊಳ್ಳಲಾಗಿದೆಯೆನ್ದು ತಿಳಿಯಬಹುದು.]

    >>ಕೇರಳದಲ್ಲಿ ಬರವಣಿಗೆಯಲ್ಲಿ ಬದಲಾವಣೆ ಮಾಡಿಕೊಂಡರು, ಆದುದರಿಂದ ಬರವಣಿಗೆಯಲ್ಲಿ ಬದಲಾವಣೆ ಮಾಡಿಕೊಳ್ಳಬಾರದು ಎನ್ನುವುದಕ್ಕೆ ಕೇರಳದ ಉದಾಹರಣೆ ತರವಲ್ಲ –
    ಹೀಗೆ ಯಾರು ಹೇೞಿದರು? ತಿರುಮಲೇಶರ ಮಾತಿನನ್ತೆ ’ಮಾಡಿಕೊಳ್ಳುವ ಬದಲಾವಣೆಗಳಿನ್ದ ಹೊಸತನ್ನು ಕಟ್ಟಲು ಸಾಧ್ಯವಾಗಬೇಕು. ಅದು ಸಾಧ್ಯವಾಗುವುದಿದ್ದರೆ ಯಾವ ರೀತಿಯದ್ದಾದರೂ ಬದಲಾವಣೆಗಳನ್ನು ಮಾಡಿಕೊಳ್ಳಬಹುದು’. ವಿಜಯಕರ್ನಾಟಕದಲ್ಲಿ ಮತ್ತು ಕೆಂಡಸಂಪಿಗೆಯಲ್ಲಿ ಪ್ರಕಟಗೊಣ್ಡಿರುವ ಅವರ ಬರೆಹಗಳಿನ್ದಲೂ ಅವರ ’ನಮ್ಮ ಕನ್ನಡ’ ಎಂಬ ಪುಸ್ತಕದಿನ್ದಲೂ ನಾನು ಇಷ್ಟು ತಿಳಿದುಕೊಣ್ಡೆನು.
    ತಿರುಮಲೇಶರು ೞ ಮತ್ತು ಱ ಬೞಸಬಾರದೆನ್ದು ಹೇೞಲಿಲ್ಲ. ನನ್ನದೇ ಅನುಭವವನ್ನು ಹೇೞುವುದಾದರೆ “ನೀವು ೞ ಮತ್ತು ಱ ಅಕ್ಷರಗಳನ್ನು ಬೞಸುತ್ತಿರುವುದು ನನಗೆ ಕುತೂಹಲ ಮೂಡಿಸುತ್ತದೆ” ಎನ್ದು ಮಾತ್ರ ಹೇೞಿದ್ದರು. [ಅವರ ಅಭಿಪ್ರಾಯವ ಕೇಳಿ ನನ್ನ ಎಳಸು ಅನುವಾದವೊನ್ದನ್ನು ಕಳಿಸಿಕೊಟ್ಟಿದ್ದೆನು.]

    ಉತ್ತರ
    • ಏಪ್ರಿಲ್ 19 2011

      ಅಂದಹಾಗೆ ನೀವು ೞ/ಱ ಗಳನ್ನು ಬಳಸುತ್ತಿರುವುದು ನನಗೂ ಕುತೂಹಲ ತಂದಿದೆ. ಮಾಹಿತಿಗಾಗಿ ಮಾತ್ರ ಕೇಳುತ್ತಿದ್ದೇನೆ – ಇವುಗಳನ್ನು ನೀವು ಳ/ರ ಗಳಿಗಿಂತ ಬೇರೆಯಾಗಿ ಉಲಿಯುತ್ತೀರಾ? ನೀವು ಇರುವುದು ಎಲ್ಲಿ? ಅಲ್ಲಿಯ ಜನರು ಕನ್ನಡ ಮಾತಾಡುವಾಗ ಇವುಗಳನ್ನು ಬೇರೆಯಾಗಿ ಉಲಿಯುತ್ತಾರಾ?

      ಉತ್ತರ
  18. ಏಪ್ರಿಲ್ 18 2011

    >>ಈಗಾಗಲೇ ಆ ’ಲಾಬ’ ಕೈಬರಹಕ್ಕೂ ಬರಲು ಶುರುವಾಗಿರುವಂತಿದೆ ಎಂದು ನೀವು ಒಪ್ಪಿದಂತಿದೆ (’ಲಾಬ’ ಎಂದು ನೀವು ಒಪ್ಪುತ್ತೀರೋ ಇಲ್ಲವೋ ಗೊತ್ತಿಲ್ಲ, ಆದರೆ ಬದಲಾವಣೆಯಂತೂ ಶುರುವಾಗಿದೆ ಎಂದು ’ವ್ಯಂಜನ’ಗಳ ಬಗ್ಗೆ ಹೇಳುವಾಗ ನೀವೇ ಒಪ್ಪಿದ್ದೀರಿ).
    ಇಲ್ಲ, ಅಂಥದೊನ್ದು ಲಾಭವಾಗಿದೆಯೆಂಬ ನಂಬಿಕೆ ನನಗಿಲ್ಲ. ಒಪ್ಪುವುದು ಮುನ್ದಿನ ವಿಚಾರ.

    ಉತ್ತರ
    • ಏಪ್ರಿಲ್ 19 2011

      ಬರವಣಿಗೆಯಲ್ಲಿ ೦% ಗಿಂತ ಹೆಚ್ಚು ಬದಲಾವಣೆ ಆಗಿದೆ ಎಂದು ನೀವು ಒಪ್ಪಿದ್ದಾಯಿತು. ಅಶ್ಟೇ ನನ್ನ ವಾದಕ್ಕೆ ಸಾಕು ಎಂದು ನಾನು ಹೇಳಿದ್ದಾಯಿತು. ಇದಾದ ಮೇಲೆ ನನಗೆ ಈ ವಿಶಯದಲ್ಲಿ ಹೇಳುವುದು ಏನೂ ಇಲ್ಲ.

      ಉತ್ತರ

Leave a reply to Priyank ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments