ಅಂತೂ ಇಂತೂ ಇವತ್ತಿನ ಕೆಲಸ ಮುಗಿಯಿತು ಅನ್ನೋ ಸಮಾಧಾನದಿಂದ ಈಗಷ್ಟೇ ಹೊರಬಂದಿದ್ದೆ.
ಬೆಳಗ್ಗಿನಿಂದ ಈ ಸಂಜೆ ವರೆಗೂ ಆಫೀಸಿನ ನಾಲ್ಕು ಗೋಡೆಗಳ, ಬಿಳೀ ಬಲ್ಪಿನ ಮತ್ತು ತಣ್ಣನೆ ಏಸಿಯ ಮಧ್ಯೆ ಕುಳಿತು ಹೊರಬಂದಾಗಲೇ ಗೊತ್ತಾಗಿದ್ದು, ಜಿಟಿ ಜಿಟಿ ಮಳೆ ಬರುತ್ತಾ ಗಾಳಿ ತಂಪು ತಂಪಾಗಿ ಇಡೀ ಸಿಟಿ ಹಾಯಾಗಿದೆ ಅಂತ. ಕೆಲವರು ಖುಷಿಯಿಂದ ಬರೋ ಪಿರಿ ಪಿರಿ ಮಳೆಗೆ ಮುಖಕೊಟ್ಟು ಖುಸಿಯಿಂದ ಶಿಳ್ಳೆ ಹಾಕುತ್ತಾ ನಡೆಯುತ್ತಿದ್ದರೆ ಕೆಲವರು ಸಿಕ್ಕ ಸಿಕ್ಕ ಗ್ರೋಸರಿ, ಬಿಲ್ಡಿಂಗಿನ ಟೋಪಿ ಅಡಿಯಲ್ಲಿ ಮಳೆನಿಲ್ಲುತ್ತೆ ಅನ್ನೋ ಆಸೆಯಿಂದ ನೋಡುತ್ತಾ, ಫೋನಲ್ಲಿ ಮಾತಾಡುತ್ತಾ ನಿಂತಿದ್ದಾರೆ. ಟ್ರಾಫಿಕ್ಕಿನಲ್ಲಿ ಬ್ಲಾಕಾಗಿ ನಿಂತಿರೋ ಗಾಡಿಗಳು ಬೇರೆ ಬೇರೆ ರೀತಿ ಚಾಲೆಂಜಿಗೆ ನಿಂತವರಂತೆ ಹಾರನ್ ಮಾಡುತ್ತಾ ಮನೆಸೇರೋ ಆತುರದಲ್ಲಿವೆ. exfo ಅನ್ನೋ ಗ್ರೋಸರಿ ಅಡಿಯಲ್ಲಿ ನಿಂತಿದ್ದ ನಾನು ಹಾಗೇ ಶರ್ಟಿನ ಗುಂಡಿ ತೆಗೆದು ಬೀಳುತ್ತಿರೋ ಮಳೆಹನಿಗೆ ಕೈಚಾಚಿದೆ.
ಎಷ್ಟೊಂದು ಹಾಯ್ ಹಾಯ್ ಎನಿಸಿತು. ಒಂದುಕ್ಷಣ ಮನಸ್ಸೊಳಗೆ ಏನೋ ಒಂದು ಮಿಂಚುಹರಿಯಿತು. ಈಗ ಸಿಕ್ಕ ಈ feel ಎಲ್ಲೊ ಸವಿದಿದ್ದ ನೆನೆಪಾಯಿತು.
ಹೌದು, ನೆನಪಾಗಿದ್ದು ಮನೆ ಮತ್ತು ಊರು. ಸಣ್ಣವನಿದ್ದಾಗ ಬರೋಬ್ಬರಿ ಮೂರ್ನಾಲ್ಕು ತಿಂಗಳು ಬಿಡದೆ ಸುರಿಯುತ್ತಿದ್ದ ಜಿಟಿ ಜಿಟಿ ಮಳೆಗೆ ಇದೆ ರೀತಿ ಕೈ ಚಾಚುತ್ತ, ಮನೆ ಮುಂದಿನ ಹೆಂಚಿನ ದೋಣಿಯಿಂದ ಬೀಳೋ ನೀರಿನ ಹರಿವಲ್ಲಿ ಪೇಪರ್ ದೋಣಿ ಬಿಟ್ಟಿದ್ದು, ಶೀತಕ್ಕೆ ಹೊರಗೋಗಬೇಡ ಅನ್ನೋ ಅಮ್ಮನ ಬೊಬ್ಬೆ, ಅಕ್ಕ ತಂದು ಕೊಡುತ್ತಿದ್ದ ಬೇಯಿಸಿದ ಹಲಸಿನ ಬೀಜ, ಪಕ್ಕದ ಮನೆ ಪಾರು ಕಿಟಕಿಯಿಂದ ಕೈ ಬೀಸಿ ಹಾಯ್ ಅಂದದ್ದು, ಮಳೆಗೆ ನಾನೂ ಸುಸ್ತಾಗಿದ್ದೇನೆ ಅನ್ನೋ ಹಾಗೆ ಮಲ್ಲಗೆ ಹೋಗುತ್ತಿದ್ದ ಕೃಷ್ಣಾ ಬಸ್ಸು ಎಲ್ಲವೂ ನೆನಪಾಯಿತು.
ಮಲೆನಾಡು, ಮಳೆನಾಡು, ಕಿತ್ತಳೆನಾಡು ಹೀಗೆ ಇನ್ನೂ ಬೇರೆ ಬೇರೆ ಹೆಸರಿನಿಂದ ಕೆರೆಯಬಹುದಾದ ನಮ್ಮೂರಿನ ಮಳೆಯಂತೂ ತುಂಬಾ ಚೆಂದ. ಈ ಕಾಲ ಶುರುವಾದರೆ ಬಿಸಿಲು ನೋಡೋ ಆಸೆ ಹಿಡಿಯೋಸ್ಟು ಸುದೀರ್ಘ. ಪಾಚಿಕಟ್ಟಿ ನೆಲವೆಲ್ಲ ಹಸಿರಾಗಿ ಜಾರುತ್ತ, ಜಾರಿಸುತ್ತಾ ಬದಲಾಗೋ ನೆಲ, ಸಿಕ್ಕ ಸಿಕ್ಕಲ್ಲೆಲ್ಲ ರೇಸಿಗೆ ಬಿದ್ದವರಂತೆ ಹುಟ್ಟಿಕೊಳ್ಳೋ ನೀರುಕಡ್ಡಿ ಗಿಡ, ಚುರುಚುಣ, ಬೇಲಿಬಳ್ಳಿ, ಮುನಿಸೋ ಗಿಡ… ಇವೆಲ್ಲವೂ ಅಂದವೋ ಅಂದ.
ದಿನದ ಕೆಲವೊಮ್ಮೆ ಭಯಂಕರವಾಗಿ ಬೀಸೋ ಗಾಳಿಗೆ ಸಾದ್ಯವೇ ಇಲ್ಲ ಅಂತ ಶರಣಾಗಿ ದೊಪದೊಪನೆ ಬೀಳೋ ಮರಗಳು ಮಾಡೋ ತೊಂದರೆ ಅಷ್ಟಿಷ್ಟಲ್ಲ. ಕೆಯೀಬಿಯೋರ ಪಾಡಂತೂ ನಾಯೀ ಪಾಡಾಗಿರುತ್ತೆ. ಕೆಯೀಬಿ ಕಂಬ ಮುರಿದ್ದಿದ್ದ ಮರವನ್ನ ಕುಯ್ದು ಹೊಸಾ ಕಂಬ ನಿಲ್ಲಿಸೋವಷ್ಟರಲ್ಲಿ ಮುಂದೋ ಹಿಂದೋ ಮತ್ತೆರಡು ಮರಾಬಿದ್ದು ಮತ್ತೆರಡು ಕಂಬ ಕಾಲವಾಗಿರುತ್ತೆ. ಸುರಿಯೋಮಳೆಗೆ ಪ್ಲಾಸ್ಟಿಕ್ ಕೋಟು ಹಾಕಿ ಬೀಡಿಸೆದುತ್ತಾ ಕೆಸರಿನಲ್ಲಿ ಜಾರಾಡುತ್ತಾ ಕಂಬಾ ನಿಲ್ಲಿಸೋ ಕೆಯೀಬಿಯೋರು ಈ ಕೆಲಸ ಬೇಡ ಅಂತ ರೋಸಿಹೊಗೋ ಕಾಲ.
ನನಗಂತೂ ಮಳೆಗಾಲ ಅಂದರೆ ಖುಷಿಯೋ ಖುಷಿ. ಶಾಲೆಗೆ ವಾರಕ್ಕೆ ಮೂರು ರಜೆಯಂತು ಪಕ್ಕಾ. ಜ್ವರ ಅಂತ ರಜೆ ಮಾಡೋ ಸರೋಜಮ್ಮ ಟೀಚರ್ ಪೀರಿಡಿನಲ್ಲಿ ಕಿರುಚಾಡುತ್ತ ಕಳೆಯೋವಾಗ ಕ್ಲಾಸು ಲೀಡರ್ ನಮ್ಮ ಹೆಸರನ್ನ ಬರೆದು ಹೆಡ್ಮಾಷ್ಟರಿಗೆ ಕೊಟ್ಟು ಹೊಡೆಸಿದ್ದು ತುಂಬಾ ಇದೆ. ಸಾಯಂಕಾಲ ಆಟಕ್ಕೆ ಬಿಟ್ಟಾಗ ಪಾಚಿಹಿಡಿದ ಗ್ರೌಂಡಿನಲ್ಲಿ ಬಿದ್ದು ಬಿಳೀ ಬಟ್ಟೆಗೆ ಕೆಸರುಮಾಡಿ ಅಕ್ಕಾ ಹೊಡೆಯುತ್ತಾಳೆ ಅನ್ನೋ ಭಯದೊಂದಿಗೆ ರಸ್ತೆಬದಿಯ ನೀರು-ಗೊಚ್ಚೆಯಲ್ಲಿ ಆಟಾಡುತ್ತಾ ಮನೆಸೇರಿದಾಗ ಸಿಗೋ ಬಿಸಿ ಕಾಫಿ ಮತ್ತು ಉಪ್ಪಿಟ್ಟು ಅಧ್ಬುತ. ಶಾಲೆ ಬ್ಯಾಗನ್ನು ಎಸೆದು ಓಡುತ್ತಾ ಓಲೆ ಮುಂದೆ ಕೂತು ಕಾಲಬೇರಳನ್ನು ಎತ್ತಿ ಬಿಸಿಮಾಡುತ್ತಾ ಕೈಯಿಂದ ಬಿಸಿತೆಗೆದು ಕಿವಿಗಿಟ್ಟುಕೊಳ್ಳೋದು ತುಂಬಾ ಖುಷಿಕೊಡುತ್ತಿತ್ತು.
excuse me side please ಅಂತ ಯಾರೋ ತಳ್ಳಿದಾಗ ವಾಸ್ತವ ನೆನಪಾಯಿತು. ಹಳೆ ಮಳೆಗಾಲ ದಾಟಿ ಎಷ್ಟು ಮುಂದೆ ಬಂದಿದ್ದೇನೆ ಅಂತ ನೆನೆಯೋವಾಗ ಬೇಜಾರಾಯಿತು. ಇನ್ನೆಂದೂ ಸಿಗದ ಆ ಜೀವನ ಬರೀ ನೆನಪಷ್ಟೇ…
ಇರಲಿ, ಇದನ್ನೆಲ್ಲಾ ನಿಮ್ಮೊಂದಿಗೆ ಹೇಳಿಕೊಂಡು ತುಂಬಾ ಖುಷಿಯಾಗಿದೆ.
ಮಳೆ ನಿಂತಿದೆ. ಸರಿಯಾಗಿ ಎಂಟಕ್ಕೆ ಅವಳನ್ನ ಮೀಟಾಗೋದಕ್ಕಿದೆ.
Bye ….
ಹ ಹ.. ಬಹಳ ಖುಷಿಯಾಯ್ತು ಓದಿ. ನಿಂತ ಮಳೆ ನೀರಿನ ಮೇಲೆ ಓಡಿ ರಪ್ಪೆಂದು ಕಾಲು ಝಾಡಿಸಿ ನೀರನ್ನು ಹಾರಿಸುವ ಮಜವೇ ಬೇರೆ. ನಿಂತ ಮಳೆ ನೀರು ನೋಡಿದಾಗ ಒಮ್ಮೆ ಹಾಗೆ ಮಾಡೋಣ ಅನಿಸುತ್ತದೆ. ನೀರುಕಡ್ಡಿ ಗಿಡ ಮರೆತೇ ಹೋಗಿತ್ತು ನೋಡಿ. ಹಪ್ಪಳ, ಸಂಡಿಗೆ, ಮಳೆಯಲ್ಲೂ ಮಿಸ್ ಮಾಡದ PT ಪಿರಿಯಡ್, ಕೊಕ್ಕೋ, ಬ್ಯಾಡ್ಮಿಂಟನ್, ಕಬಡ್ಡಿ, ಸೀನು, ಸುರಿಯುವ ಮೂಗು, ಜ್ವರ, ಒದ್ದೆಯಾಗಬಾರದೆಂದು ಮೊಣಕಾಲುವರೆಗೂ ಮಡಚಿ ಚಡ್ಡಿಯಂತೆ ತೋರುವ ಪ್ಯಾಂಟು, ಮೇಲೆ ನಿಂತಾಗ ಮರೆತು ಬಂದ ಕೊಡೆ, ಶ್ರಾವಣ, ಮಲ್ಲ ಕಂಭ, ಕಲ್ಲ ಲಾಂಬು (ಕಲ್ಲಣಬೆ), ಗಾಳಿ ಮಳೆಗೆ ಉದುರಿದ ನೆಕ್ಕರೆ, ಕಾಟು ಮಾವುಗಳು, ದಿನಗಟ್ಟಲೆ ಬಾರದ ಕರೆಂಟ್, ಸೋರುವ KSRTC … ಧನ್ಯವಾದ ಅಬ್ದುಲ್ 🙂
ಮಳೆ ನಿಂತಾಗ ಮರೆತು ಬಂದ ಕೊಡೆ*
abdul wat a wonderful write up infinet likes abdul tumba umba tumba chennagide 🙂 🙂
ನೀರುಕಡ್ಡಿ ಗಿಡ ನಂಗೂ ಮರೆತು ಹೋಗಿತ್ತು. slate ಒರೆಸೋಕೆ ಅದನ್ನ use ಮಾಡ್ತಾ ಇದ್ವಿ 🙂
ಅಬ್ದುಲ್.. ಸಕ್ಕತ್ತಾಗಿ ನೆನಪಿಸಿದ್ದೀರಿ ಎಲ್ಲವನ್ನಾ..
ಹಾಗೇ.. “ಮಲೆನಾಡು, ಮಳೆನಾಡು, ಕಿತ್ತಳೆನಾಡು ” ಅಂದದ್ದು ಯಾವ ಊರನ್ನ ಅಂತ ತಿಳಿಸಿದ್ದರೆ ಚೆನ್ನಾಗಿತ್ತು.. ಚಿಕ್ಕಮಗಳೂರು ಅನ್ನಿಸಿತು.. ಸರಿಯೇ?
ನಿಮ್ಮೊಲವಿನ,
ಸತ್ಯ.. 🙂
ವಾಹ್ವ್ ಸೂಪರ್ ನಂಗಂತೂ ತುಂಬಾ ಇಷ್ಟ ಆಯ್ತು….
ಎಲ್ಲರಿಗೂ ಧನ್ಯವಾದ, ಇಲ್ಲಿರೋ ಮಲೆನಾಡು ಕೊಡಗು. ನಮ್ಮೂರು-ಸುಂದರ ಊರು.
-ಗೋಪಾಲ್ಪುರ ಅಬ್ದುಸ್ಸತ್ತಾರ್.
THUMBA ADBUTHAVAAGI BAREETHEERA KELEVONDU SOOKSHMA VISHAYAGALANTHU BHAAVANEGALIGE MATHRAVE SIGUVANTHAHDU. ADANNA AKSHARADALLI HANCHIKONDIDDAKKE DHANYAVAADAGALU……..
ಸೂಪರ್……….