ಪೌರ ಕಾರ್ಮಿಕರ ಬದುಕು ಹಸನಾಗುವುದು ಯಾವಾಗ?
– ಪವನ್ ಯಂ.ಟಿ
ನಾಳೆ ಬೆಳಗ್ಗೆ ೫ ಗಂಟೆಗೆ ಅಲಾರಾಮ್ ಇಡು ಮಗಳೆ ೫:೩೦ ರ ಬಸ್ಸು ಮಿಸ್ ಆಗೋದ್ರೆ ಕಸವೆಲ್ಲ ಅಲ್ಲೇ ಉಳಿದು ಬಿಡುತ್ತೆ, ನಿನ್ನೆ ದಿನ ಸಂತೆ ಬೇರೆ ಇತ್ತು. ಕಸದ ರಾಶಿಯೇ ಬಿದ್ದಿರ ಬಹುದು. ಬೇಗ ಹೋಗಿ ಕ್ಲೀನ್ ಮಾಡಬೇಕು…! ಎಂದು ಪೌರಕಾರ್ಮಿಕೆ ಮಲ್ಲಮ್ಮ ತನ್ನ ಮಗಳಿಗೆ ಹೇಳಿ ಮಲಗಿಕೊಂಡಳು. ಮಲ್ಲಮ್ಮನಿಗಿರುವ ಒಂದೇ ಆಲೋಚನೆ ತನಗೆ ವಹಿಸಿದ ವಾರ್ಡನಂಬರ್ ೭ರಲ್ಲಿ ಬಿದ್ದಿರುವ ಕಸವನ್ನು ತೆಗೆದು ಶುಚಿಗೊಳಿಸುವುದು. ಎಲ್ಲಿ ಬೆಳಗ್ಗೆ ಬಸ್ಸು ಮಿಸ್ಸಾದರೆ ಕಸದ ರಾಶಿ ಅಲ್ಲಿಯೇ ಉಳಿದು ಮೇಲಾಧಿಕಾರಿಗಳು, ಗುತ್ತಿಗೆದಾರರು ನನ್ನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆಯೋ ಅನ್ನುವ ಭಯ ಮಲ್ಲಮ್ಮನಿಗೆ. ಇದು ಕೇವಲ ಒಬ್ಬ ಪೌರಕಾರ್ಮಿಳ/ನ ಚಡಪಡಿಕೆಯಲ್ಲ. ನಮ್ಮ ದೇಶದಲ್ಲಿ ಅಥವಾ ರಾಜ್ಯದಲ್ಲಿ ದುಡಿಯುತ್ತಿರುವ ಎಲ್ಲಾ ಪೌರ ಕಾರ್ಮಿಕರ ಚಡಪಡಿಕೆಯಾಗಿದೆ. ಪೌರ ಕಾರ್ಮಿಕರಿಗೆ ದಿನಬೆಳಗಾದರೆ ಸ್ವಚ್ಚತೆಯದ್ದೇ ಚಿಂತೆ. ಅವರು ಈ ಕೆಲಸವನ್ನು ತಮ್ಮ ಒಟ್ಟೆ ಪಾಡಿಗಾಗಿ ಮಾಡಿದರೂ ಸಹ ಅದರ ಹಿಂದೆ ಪ್ರತಿಯೊಬ್ಬ ನಾಗರೀಕನ ಆರೋಗ್ಯದ ಕುರಿತ ಕಾಳಜಿ ಅವರಲ್ಲಿ ಮನೆ ಮಾಡಿರುತ್ತದೆ.
ನಾವು ಬೆಳಗ್ಗೆ ಎದ್ದು ಸುಮಾರು ೭ ಗಂಟೆಯ ಸಮಯಕ್ಕೆ ಪಟ್ಟಣಕ್ಕೆ ಒಂದು ಸುತ್ತು ಬಂದರೆ ಸಾಕು ಪೌರ ಕಾರ್ಮಿಕರು ಪಡುವ ಕಷ್ಟ, ಅವರು ಮಾಡುವ ಕೆಲಸ, ನಮ್ಮ ಕಣ್ಣಿಗೆ ಕಾಣುತ್ತದೆ. ನಮಗೆ ಅಸಯ್ಯ ಎನ್ನಿಸುವ ಕೆಲಸವನ್ನು ಅವರು ಮಾಡಿದಂತೆ ಕಂಡರೂ ಅವರೆಲ್ಲ ನಮ್ಮ ಪಾಲಿನ ದೇವರಿದ್ದಂತೆ, ಇಂದು ನಾವೆಲ್ಲ ಒಳ್ಳೆಯ, ಕೈತುಂಬಾ, ಹಣ ಬರುವ ಕೆಲಸವನ್ನು ಮಾತ್ರ ಹುಡುಕುತ್ತೇವೆ. ಒಂದು ವೇಳೆ ಪೌರ ಕಾರ್ಮಿಕರೇ ಇಲ್ಲವೆಂದಿದ್ದರೇ ಇಂದು ನಮ್ಮ ಆರೋಗ್ಯದ ಪರಿಸ್ಥಿತಿ ಏನಾಗುತ್ತಿತ್ತು ಎನ್ನುವುದನ್ನು ನೀವೇ ಯೋಚಿಸಿ.
ದಿನ ಬೆಳಿಗ್ಗೆಯೇ ತಮ್ಮ ಸಣ್ಣ ಸಣ್ಣ ಮಕ್ಕಳನ್ನು ಬಿಟ್ಟು, ಕುಟುಂಬದವರನ್ನು ಬಿಟ್ಟು, ಹೆಂಗಸರು-ಗಂಡಸರು ತಮ್ಮ ತಮ್ಮ ಕೆಲಸಕ್ಕೆ ಹೋಗುತ್ತಾರೆ. ಇವರು ನಾವು ಉಪಯೋಗಿಸಿ ಬಿಡುವ ಅತ್ಯಂತ ವಿಷಕಾರಿಯಾದ ವಸ್ತುಗಳನ್ನು, ಕೊಳೆತ ಪ್ರಾಣಿಗಳ ದೇಹವನ್ನು ಮತ್ತು ಇತರ ತ್ಯಾಜ್ಯಗಳನ್ನು ಯಾವುದೇ ಮುಲಾಜಿಲ್ಲದೇ ಎತ್ತಿ ಕಸದ ಬುಟ್ಟಿಗಳಿಗೆ ಎಸೆಯುತ್ತಾರೆ. ನಮಗೆ ಇದು ನೋಡುವುದಕ್ಕೆ ಬಹು ಸರಳವಾಗಿ ಕಂಡರೂ ಸಹ ನಾವು ಅವರ ಸ್ಥಾನದಲ್ಲಿದ್ದರೆ ಯಾವ ರೀತಿಯ ಭಾವನೆ ಇರುತ್ತಿತ್ತೋ ಅದೇ ಭಾವನೆ ಅವರಲ್ಲಿಯೂ ಇರುತ್ತದೆ. ಪಾಪ ಅವರ ಕಷ್ಟ ಅವರಿಗೆ ಗೊತ್ತು.
ಆದರೆ ಇಷ್ಟು ಕಷ್ಟಪಟ್ಟು ದುಡಿಯುವ ಅವರಿಗೆ ತಮ್ಮ ಆರೋಗ್ಯದ ಕುರಿತಂತೆ ಯಾವುದೇ ಕಾಳಜಿಯಿಲ್ಲ. ಅವರು ತಮ್ಮ ಹೊಟ್ಟೆಪಾಡಿಗಾಗಿ ಆ ಕೆಲಸಕ್ಕೆ ಇಳಿದರೂ ಸಹ ಅವರೆಲ್ಲ ನಮ್ಮ ಹಿತೈಸಿಗಳು. ಇಷ್ಟೆಲ್ಲಾ ಕಷ್ಟ ಪಡುವ ಪೌರ ಕಾರ್ಮಿಕರು ನಮ್ಮಕರ್ನಾಟಕದ ಮಟ್ಟಿಗೆ ಹೇಳುದಾದರೆ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ನಮ್ಮ ಸರಕಾರ ಅವರನ್ನು ಪ್ರಾಣಿಗಿಂತ ಕಡೆಯ ಜೀವನವನ್ನು ನಡೆಸುವಂತೆ ಮಾಡಿದೆ. ನಮ್ಮಲ್ಲಿ ದುಡಿಯುವ ಪೌರ ಕಾರ್ಮಿಕರಲ್ಲಿ ಅರ್ಧದಷ್ಟು ಮಂದಿಗೆ ಇನ್ನೂ ಕೆಲಸ ಖಾಯಂ ಮಾಡಿಲ್ಲ. ಗುತ್ತಿಗೆಯವರಿಗೆ ಸರಕಾರವು ತನ್ನ ಲಾಭಕ್ಕಾಗಿ ಪಾಲಿಕೆಯ ವಾರ್ಡ್ಗಳನ್ನು ಟೆಂಡರ್ ಕರೆದು ನೀಡುವುದರ ಮೂಲಕ ಕಡಿಮೆ ಸಂಬಳಕ್ಕೆ ಪೌರ ಕಾರ್ಮಿಕರು ತಾತ್ಕಾಲಿಕವಾಗಿಯೇ ದುಡಿಯುವಂತೆ ಮಾಡಿದ್ದಾರೆ. ಗುತ್ತಿಗೆದಾರರು ೧೫೦೦೦ ವೇತವನ್ನು ನೀಡಬೇಕಾದಲ್ಲಿ ೩೦೦೦-೫೦೦೦ದಷ್ಟು ಹಣವನ್ನು ನೀಡಿ ದುಡಿಸಿಕೊಳ್ಳುತ್ತಿದೆ. ಇಂದು ಸರಕಾರವು ಎಲ್ಲಾ ಕೆಲಸಗಳಿಗೆ ಗುತ್ತಿಗೆದಾರರನ್ನು ಅವಲಂಬಿಸಿರುವುದರಿಂದ ದುಡಿಯುವ ವರ್ಗದವರು ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ.
ನಮ್ಮ ಸರಕಾರ ಖಾಯಂ ಪೌರ ಕಾರ್ಮಿಕರಿಗೆ ಪೂರ್ವ ಕಾಲದಲ್ಲಿ ಕೆಲವು ವಸತಿಗಳನ್ನು ನಿರ್ಮಿಸಿ ಕೊಟ್ಟಿದೆ. ಆದರೆ ಅದರಲ್ಲಿ ಹೆಗ್ಗಣಗಳು ವಾಸಮಾಡುವುದಕ್ಕೆ ಹಿಂಜರಿಯುತ್ತವೆಯೇನೋ. ಮನೆ ನಿರ್ಮಾಣ ಮಾಡಿದ ನಂತರ ಗೋಡೆಗಳು ಇದುವರೆಗೆ ಸುಣ್ಣ, ಬಣ್ಣವನ್ನೂ ಇನ್ನೂ ಕಂಡಿಲ್ಲ. ಮಂಗಳೂರಿನ ಕೆಲವು ಪೌರ ಕಾರ್ಮಿಕರ ವಸತಿಗಳಲ್ಲಂತು ಗೋಡೆಯ ಮೇಲೆಲ್ಲ ಮರ ಗಿಡಗಳು ಹುಟ್ಟಿಕೊಂಡಿವೆ. ಕಾಡು ಬೆಳೆದಿವೆ, ಇನ್ನೂ ಪ್ರಾಣಿ ಪಕ್ಷಿಗಳು ವಾಸ ಮಾಡುದೊಂದೆ ಬಾಕಿ. ಅದರಲ್ಲಿ ಮಹಡಿಯ ರೂಪದಲ್ಲಿ ನಿರ್ಮಿಸಿರುವ ಈ ಕಟ್ಟಡಕ್ಕೆ ಪೈಪ್ ಲೈನ್ಗಳನ್ನು ಸರಿಯಾಗಿ ಜೋಡಿಸಿಲ್ಲ. ಇರುವ ಪೈಪ್ಗಳು ಕೂಡಾ ತುಂಡಾಗಿವೆ. ಇದರಿಂದ ಮೇಲಿನ ಮನೆಯ ಕೊಳಚೆ ನೀರು ಕೆಳಗಿನ ಮನೆಯವರ ತಲೆಯ ಮೇಲೆಯೇ ಬೀಳುತ್ತಿದೆ. ಇಡೀ ವಸತಿ ಗೃಹದ ಸುತ್ತಮುತ್ತ ಕಾಲಿಡದ ರೀತಿಯಲ್ಲಿ ಮಾಲಿನ್ಯತೆ ಉಂಟಾಗಿದೆ. ಇದು ಒಂದು ಬದಿಯ ವಸತಿಗಳ ಕಥೆಯಾದರೆ ಮಂಗಳೂರಿನ ವಾಮಂಜೂರಿನಲ್ಲಿರುವ ಪೌರ ಕಾರ್ಮಿಕರ ಕಾಲೋನಿಯಲ್ಲಿ ಬೇರೆಯದೇ ಆದ ಕಥೆಯಾಗಿದೆ. ಇಲ್ಲಿ ತ್ಯಾಜ್ಯ ಸಂಗ್ರಹ ಜಾಗದಿಂದ ಬರುವ ವಾಸನೆಯಿಂದ ಕೂಡಿದ ಕಲುಷಿತ ನೀರು ಈ ಪೌರ ಕಾರ್ಮಿಕರ ಮನೆಯ ಅಂಗಳದಿಂದಲೇ ಹರಿದು ಬರುತ್ತಿದೆ. ಇದರಿಂದ ಇಲ್ಲಿಯ ಕಾರ್ಮಿಕರು ಸೊಳ್ಳೆ ಕಡಿತದಿಂದ, ಕಲುಷಿತ ನೀರಿನ ವಾಸನೆಯಿಂದ ತೊಂದರೆಗೀಡಾಗಿದ್ದಾರೆ. ಇದರಿಂದ ಆನೆ ಕಾಲು ಮೊದಲಾದ ರೋಗದಿಂದ ಬಳಲುತ್ತಿದ್ದಾರೆ. ಇಲ್ಲಿ ಹರಿಯುವ ಕಲುಷಿತ ನೀರಿನ ಚರಂಡಿಗೆ ಮುಚ್ಚಳವನ್ನು ಹಾಕುವ ವ್ಯವಸ್ಥೆಯನ್ನು ಸಹ ನಮ್ಮ ಸರಕಾದವರು ಮಾಡಿಲ್ಲ. ನಾವು ಪೌರ ಕಾರ್ಮಿಕರು ಅದಕ್ಕೆ ನಮಗೆ ಈ ಗತಿ ಎಂದು ಇಲ್ಲಿಯ ನಿವಾಸಿಗಳು ಹೇಳುತ್ತಾರೆ. ಇದರಿಂದ ನೊಂದ ಪೌರ ಕಾರ್ಮಿಕರು ನಮ್ಮ ಜನರ ಆರೋಗ್ಯವನ್ನು ಕಾಪಾಡಲು ಇಷ್ಟು ಕಷ್ಟಪಟ್ಟರೂ ಸಹ ಇಂದು ಸರಕಾರದ ನಿರ್ಲಕ್ಷ್ಯದಿಂದಾಗಿ ಶೋಚನಿಯ ಬದುಕನ್ನು ನಡೆಸುವಂತಾಗಿದೆ. ಇನ್ನೂ ಮುಂದೆಯಾದರೂ ಸರಕಾರ ಇವರ ಕುರಿತಂತೆ ಗಮನ ಕೊಡುವಂತಾಗಲಿ.
ಮಾನ್ಯರೇ ಪೌರ ಕಾರ್ಮಿಕರೆಂದರೆ, ಒಂದು ರೀತಿಯ ನಮ್ಮ ಆರೋಗ್ಯ ಕಾಪಾಡುವ ದೇವರಿದ್ದಂತೆ. ನಮ್ಮ ಪರಿಸರ ಏನಾದರೂ ಸ್ವಚ್ಚವಾಗಿದ್ದರೆ, ನಮ್ಮ ಆರೋಗ್ಯ ಚೆನ್ನಾಗಿದೆ ಎಂದರೆ, ಈ ಪೌರ ಕಾರ್ಮಿಕರೇ ಕರಣವೆಂದು ಗಂಟಾಘೋಷವಾಗಿ ಹೇಳಬಹುದು. ಬೆಳಿಗ್ಗೆ ಎದ್ದರೆ ಅವರನ್ನೇ ನೆನಸಬೇಕು. ಅವರು ಒಂದು ದಿನ ಕೆಲಸ ಸ್ತಗಿತಗೊಳಿಸಿದರೆ, ಎಲ್ಲಮೂ ಅಲ್ಲೋಲಕಲ್ಲೋಲವಾಗುತ್ತದೆ.
ಆದರೂ ಅವರ ಅವಶ್ಯಕತೆ, ಅನಿವಾರ್ಯ, ಅತ್ಯಮೂಲ್ಯ. ಆದರೂ ನಮ್ಮ ಸರಕಾರ ಅವರನ್ನು ಕಡೆಗಣಿಸಿದೆ. ಅವರಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಅವರ ವೇತನ ಸುಧಾರಣೆಯೊಂದಿಗೆ, ಆರೋಗ್ಯ್ ಸುಧಾರಣೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.
ಮತ್ತೊಂದು ವಿಪರ್ಯಾಸವೆಂದರೆ, ಹೊಸ ಪಿಡುಗು ಎಂದರೆ, ಗುತ್ತಿಗೆ ಆಧಾರಮೇಲೆ ಕೆಲಸಕ್ಕೆ ತೆಗೆದುಕೊಂಡು, ಕನಿಷ್ಟ ವೇತನ ನೀಡಿ ಶೋಷಣೆ ಮಾಡುವುದು ಸರಿಯಲ್ಲ. ಇವರು ದೇವರ ಸಮಾನ ಇವರ ಕೆಲಸವನ್ನು ಯಾರು ಮಾಡಲು ಸಧ್ಯವಿಲ್ಲ. ಸರಕಾರವು ಹೆಚ್ಛು ಗಮನಹರಿಸುವುದು ಸೂಕ್ತ. ಅಲ್ಲವೆ?
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com