ಎಚ್ಚರ ಬ್ಲಾಗಿಗರೆ, ಕಳ್ಳರಿಹರು
-ಪ್ರಶಸ್ತಿ ಪಿ.
ಒಳ್ಳೆ ಸಾಹಿತ್ಯವನು ಸೃಷ್ಟಿಸಿಯೂ ಮುಂದೆ
ಕಳ್ಳನೆಂದೊಂದು ದಿನ ಬಿರುದು ಬೇಕೆ?
ನೀ ಮೊದಲು ಬರೆದದ್ದು ಎಂಬುದಕೆ ಏನುಂಟು
ಮಿಥ್ಯಾರೋಪಗಳ ಒಪ್ಪಬೇಕೆ?
ಪುಗಸಟ್ಟೆ ಮಾತುಗಳ ನುಂಗಬೇಕೆ?
ನೀವು ಕವಿಯೇ?ಸಾಹಿತಿಯೇ? ಬರೆದದ್ದ ನಿಮ್ಮ ಬ್ಲಾಗಲ್ಲಿ ಹಾಕುತ್ತಿದ್ದೀರಾ? ಜನ ಮೆಚ್ಚಲಿ , ಇಲ್ಲದಿರಲಿ ನಿಮಗೊಂದು ನಮನ ಮತ್ತು ಅಭಿನಂದನೆ. ನೀವು ಬರೆದಿದ್ದದು ಎಂಬುದಕ್ಕೆ ಅಲ್ಲಿರುವ ದಿನಾಂಕವೇ ಸಾಕ್ಷಿ. ಬೇರೆ ಯಾರಾದರೂ ಅದನ್ನು ಕದ್ದು ತನ್ನ ಹೆಸರಲ್ಲಿ ಪ್ರಕಟಿಸಿದರೆ ನೀವು ನಿಮ್ಮ ಬ್ಲಾಗಿನ ಪ್ರಕಟಗೊಂಡ ದಿನಾಂಕವನ್ನು ತೊರಿಸಿ ಅದನ್ನು ನೀವೇ ಬರೆದದ್ದೆಂದು ನಿರೂಪಿಸಬಹುದು.ಹಾಗಾಗಿ ಬ್ಲಾಗೆಂಬುದು ನಿಮ್ಮ ಕವನಕ್ಕೆ ಶ್ರೀ ರಕ್ಷೆ..ಹಾಂ.. ತಡೀರಿ, ಇಷ್ಟಿದ್ದೂ ನಿಮ್ಮ ಕವನವನ್ನು, ಲೇಖನವನ್ನು ಯಾರಾದರೂ ಕದೀಬಹುದು. ಅದನ್ನು ನಿಮಗಿಂತ ಮುಂಚಿನ ದಿನಾಂಕದಲ್ಲಿ ತನ್ನ ಬ್ಲಾಗಲ್ಲಿ ಹಾಕಿಕೊಳ್ಳಬಹುದು. ಅವಾಗೇನ್ಮಾಡ್ತೀರ? ಹೆಚ್ಚು ಕೇಳ ಹೋದರೆ ನೀವೇ ಕಳ್ಳರೆನ್ನುತ್ತಾರೆ.. ಅರೇ, ಇದು ಹೇಗೆ ಸಾಧ್ಯ? ಇದಕ್ಕೆ ಪರಿಹಾರವೇ ಇಲ್ಲವೇ ಅನಿಸುತ್ತಿದೆಯಾ? ಅದನ್ನು ತಿಳಿಸುವ ಒಂದು ಪುಟ್ಟ ಪ್ರಯತ್ನವೇ ಈ ಕಿರು ಲೇಖನ.
ಬ್ಲಾಗಿನ ಪೋಸ್ಟಿಗೆ ಇಂದಿನದು ಬಿಟ್ಟು ಹಿಂದಿನ ದಿನಾಂಕ ಹಾಕಬಹುದೇ?
ಹೌದು. ಹಾಕಬಹುದು. post options ಗೆ ಹೋಗಿ ಅಲ್ಲಿರುವ ದಿನಾಂಕದಲ್ಲಿ ಹಳೆಯ ದಿನಾಂಕವನ್ನು ಹಾಕಬಹುದು. (ಚಿತ್ರ ನೋಡಿ)
ಹಾಗೇನಾದರೂ ಹಾಕಿದರೆ ಅದು ಪ್ರಕಟಗೊಂಡ ದಿನಾಂಕ ತೋರಿಸೋ ಜಾಗದಲ್ಲಿ ಆ ದಿನಾಂಕವನ್ನೇ ತೋರಿಸುತ್ತದೆ. ಉದಾಹರಣೆಗೆ ಚಿತ್ರ ನೋಡಿ.. 🙂 🙂
ಇದಕ್ಕೇನು ಪರಿಹಾರ
ತಾಂತ್ರಿಕವಾಗಿ ಹಲವಾರು ಪರಿಹಾರ ಇರಬಹುದು. ಆದರೆ ಸುಲಭವಾದದ್ದೊಂದು ಇಲ್ಲಿದೆ.
೧) ನೀವು ಬ್ಲಾಗಿಗೆ ಹಾಕುವ ಮೊದಲು ಅದನ್ನ ನಿಮ್ಮ ಮೆಂಚೆಯಿಂದ ನಿಮ್ಮದೇ ಇನ್ನೊಂದು ಮಿಂಚೆಗೆ ಕಳುಹಿಸಿ.ಆ ದಿನಾಂಕವನ್ನು ಬದಲಿಸಲು ಸಾಧ್ಯವಿಲ್ಲ (ಎಂಬುದು ನನ್ನ ಇಲ್ಲಿಯವರೆಗಿನ ತಿಳುವಳಿಕೆ). ಅಲ್ಲಿಗೆ ಅದನ್ನು ಯಾವತ್ತು ಕಳುಹಿಸಿದ್ದಾರೆ ಎಂಬ ಪ್ರಮಾಣ ಸಿಕ್ಕಂತಾಯಿತಲ್ಲವೇ. ಆದರೆ ನಿಮ್ಮನ್ನು ಕಳ್ಳ/ಕಳ್ಳಿ ಎಂದವರ ಹತ್ತಿರ ಈ ತರದ ಮಿಂಚೆ ಇರಲಿಕ್ಕೆ ಸಾಧ್ಯವೇ ಇಲ್ಲ..
ಹಾಗೆ ಮಾಡಬೇಕು ಅಂತ ಗೊತ್ತಿರಲಿಲ್ಲ, ಹೊಳೆಯಲಿಲ್ಲ, ಮರೆತೋಯ್ತು ಇತ್ಯಾದಿ ನೂರಾರು ಕಾರಣ ಆಮೇಲೆ ಹೇಳಿದರೂ, ಗೋಗರೆದರೂ ಯಾರೂ ನಂಬೋಲ್ಲ ಆಮೆಲೆ. ಹಾಗಾಗಿ ಕಷ್ಟಪಟ್ಟು ಬರೆದ ನೀವು ಇಷ್ಟಾದರೂ ಎಚ್ಚರವಹಿಸಿ
ನಿಮ್ಮದು ಎರಡು ಮಿಂಚೆ ಇಲ್ಲದಿದ್ದರೆ
ನಿಮ್ಮ ಮಿಂಚೆಯಿಂದ ನಿಮ್ಮ ಮಿಂಚೆ ವಿಳಾಸಕ್ಕೇ ಕಳುಹಿಸಿಕೊಳ್ಳಿ.. Draft ಅಲ್ಲಿ ಇಡಬಹುದು. ಆದರೆ ಎಲ್ಲಿಗಾದರೂ ಕಳುಹಿಸಿದಾಕ್ಷಣ Draft ಪಟ್ಟಿಯಿಂದ ತಂತಾನೇ ಅಳಿಸಿಹೋಗುತ್ತದೆ ಸುಮಾರು ಮಿಂಚೆಗಳಲ್ಲಿ. ಕಳುಹಿಸಿದ ದಿನಾಂಕ ಮೂಡುತ್ತದೆ ಅಷ್ಟೇ ಅದರ ಮೇಲೆ.. ಹಾಗಾಗಿ ಆ ವಿಚಾರದಲ್ಲಿ ಕಾಳಜಿ ಅಗತ್ಯ
ಇದಕ್ಕೆ ಬೇರೆ ಪರಿಹಾರಗಳು ನಿಮಗೂ ತಿಳಿದಿರಬಹುದು. ತಿಳಿದಿದ್ದರೆ ಹಂಚಿಕೊಳ್ಳಿ. ಅಥವಾ ನಾನು ಹೇಳಿದ್ದರಲ್ಲಿ ಏನಾದರೂ ತಪ್ಪಿದ್ದರೆ ಅದನ್ನೂ ಪ್ರತಿಕ್ರಿಯಿಸಿ. ಸರಿಪಡಿಸಿಕೊಳ್ಳುವೆ.
* * * * * * * *
ಚಿತ್ರಕೃಪೆ: ಅಂತರ್ಜಾಲ
ಕಳ್ಳರನ್ನು ಪತ್ತೆ ಹಚ್ಚುವುದು ಹೇಗೆ ಎಂದು ತಿಳಿಸಿದ್ದರೆ ಚೆನ್ನಾಗಿರುತ್ತಿತ್ತು. ನಾನು ಒಮ್ಮೆ ನನ್ನ ಲೇಖನದ ವಿಷಯವನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾಗ ಬೇರೊಬ್ಬ ನನ್ನ ಲೇಖನ ಕದ್ದು ಅದೇ ಲೇಖನದ ಹೆಡ್ ಲೈನ್ ಬದಲಾಯಿಸಿ ಹಾಕಿದ್ದ ನಂತರ ಆತನಿಗೆ ಮೇಲ್ ಮಾಡಿದ ಮೇಲೆ ಡಿಲೀಟ್ ಮಾಡಿದ್ದ.
You can paste the article in JPEG, leaving your name as water mark behind –
ಪ್ರವೀಣ್ರವರೇ ನೀವು ಹೇಳಿದಂತೆ ಕಳ್ಳರನ್ನು ಪತ್ತೆಹಚ್ಚುವುದು ಸ್ವಲ್ಪ ಕಷ್ಟವೇ 🙂
ಸತೀಶರೇ… ನಿಮ್ಮದು ಒಳ್ಳೇ ಸಲಹೆ.ಆದರೆ ಇಡೀ ಲೇಖನವನ್ನು JPEG ಅಲ್ಲಿ ಉಳಿಸುವುದು ಕಷ್ಟ.. ಸಣ್ಣ ಕವನವನ್ನಾದರೆ ಹಾಗೆ ಮಾಡಬಹುದು.. ಆದರೆ ಒಂದು ಲೇಖನವೆಂದರೆ, ಅದೂ ಬ್ಲಾಗಲ್ಲಿ ಬರೆದಿದ್ದಾರೆ ಅದರಲ್ಲಿ ಹಲವು ಚಿತ್ರಗಳನ್ನೂ ಮಧ್ಯದಲ್ಲಿ ಕೂರಿಸಿರುತ್ತೇವೆ. ಹಾಗಾಗಿ ಆ ಇಡೀ ಲೇಖನವನ್ನು ಅದೇ ರೀತಿ ಕಾಣುವಂತೆ JPEG ಅಲ್ಲಿ ಉಳಿಸುವುದು ಸಾಧ್ಯವಿಲ್ಲ ಅಲ್ಲವೇ?
ಸೂಕ್ತವಾದ ಬರಹ. ಈ ಕಳಕಳಿ ಗಂಭೀರವೇ. ಬರಹವನ್ನು ನಿಮ್ಮ ಮೈಲ್ ಗೆ ಕಳಿಸಿಕೊಳ್ಳುವುದನ್ನು automate ಮಾಡಬಹುದು. ಬಹಳಷ್ಟು ಬ್ಲಾಗುಗಳಲ್ಲಿ ಬರಹವನ್ನು ಪೋಸ್ಟ್ ಮಾಡಿದ ತಕ್ಷಣವೇ ನೀವು ಮೊದಲೇ ಗುರುತಿಸಿಟ್ಟಿದ್ದ ಮೈಲ್ ಗೆ ಅದನ್ನು ತಾನೇತಾನಾಗಿ ಮೈಲ್ ಮಾಡುವ ಸೌಲಭ್ಯವಿರುತ್ತದೆ. ಉದಾಹರಣೆಗೆ ಬ್ಲಾಗರ್.ಕಾಂ ನಲ್ಲಿ ಡ್ಯಾಶ್ ಬೋರ್ಡ್ ಗೆ ಹೋಗಿ -> ನಿಮ್ಮ ಬ್ಲಾಗಿನ settings click ಮಾಡಿ -> ಅಲ್ಲಿ email & mobile ಎನ್ನುವ tabನ ಅಡಿಯಲ್ಲಿ email notification ಎಂಬ ಜಾಗೆಯಲ್ಲಿ ನಿಮ್ಮ email address ಕೊಡಿ (ಹತ್ತು email ವರೆಗೂ ಕೊಡಬಹುದು). ನೀವು ಯಾವಾಗ ಬ್ಲಾಗ್ ಬರಹವನ್ನು ಪ್ರಕಟಿಸಿದರೂ ಕೂಡಲೇ ನಿಮ್ಮ ಮೈಲ್ ಗೆ ಆ ಬರಹ ಹೋಗುತ್ತದೆ. ಪೋಸ್ಟಿಂಗ್ ದಿನಾಂಕ ಯಾವುದೇ ಇದ್ದರೂ ಮೈಲ್ ದಿನಾಂಕ ಇವತ್ತಿನದೇ ಇರುತ್ತಲ್ಲ! ಇದು ನಿಮಗೆ ರಕ್ಷೆ.
ಮತ್ತೊಂದು ಕ್ರಮವೆಂದರೆ ನಿಮ್ಮ ಬರಹದ key word ಗಳನ್ನು ಆಗಾಗ್ಗೆ ಗೂಗಲ್ ನಲ್ಲಿ ಹುಡುಕಿ ನೋಡುತ್ತಿರುವುದು.
ಒಳ್ಳೆಯ ಮಾಹಿತಿ ಮಂಜುನಾಥ ಕೊಳ್ಳೇಗಾಲರೇ.. ಕವಿಮಿತ್ರ ಪ್ರಕಾಶ್ ಶ್ರೀನಿವಾಸರು ಇನ್ನೊಂದು ಉಪಾಯ ಹೇಳಿದ್ದಾರೆ.. ಅವರ ಬ್ಲಾಗು ಪೋಸ್ಟಿನ ಕೆಳಗೆ ಕವನದ ಮೊದಲೆರಡು ಸಾಲುಗಳನ್ನು ಕಾಮೆಂಟಾಗಿ ಹಾಕುವುದು.. ಪೋಸ್ಟಿನ ದಿನಾಂಕ ಬದಲಾಯಿಸಿದರೂ ಕಾಮೆಂಟಿನ ದಿನಾಂಕ ಬದಲಾಯಿಸಲು ಸಾಧ್ಯವಿಲ್ಲ..ಹಾಗಾಗಿ ಅದೂ ಅದನ್ನ ನಾವೇ ಅಂದು ಬರೆದಿದ್ದೆಂಬುದಕ್ಕೊಂದು ದಾಖಲೆ 🙂
Post in your facebook status.
Date and time are not editable in facebook. It is acts as strong proof.
ದುಃಖದ ವಿಷಯವೆಂದರೆ ಕರ್ತೃ, ಕೃತಿಗಿಂತ ಹೆಚ್ಚು ಕೃತಿ ಚೌರ್ಯದ ಬಗ್ಗೆ ಯೋಚಿಸಬೇಕಾಗಿರುವುದು. ಸುಲಭದ ದಾರಿ ಎಂದರೆ – ಚೋರನ ಆತ್ಮಸಾಕ್ಷಿಗೆ ಬಿಡುವುದು. ನನ್ನ ಬ್ಲಾಗಿನಲ್ಲಿರುವ ವಿಷಯಗಳಿಗೆ ಕ್ರಿಯೇಟಿವ್ ಕಾಮನ್ಸ್ ಪರವಾನಗಿ ಕೊಟ್ಟಿದ್ದೇನೆ. ಯಾರೂ ಬೇಕಾದರೂ ಹೇಗೆ ಬೇಕಾದರೂ ಮಾಹಿತಿಯನ್ನು ಹಂಚಬಹುದು. ಮೂಲ ಕರ್ತೃವಿನ ಉಲ್ಲೇಖ ಮಾಡಿದರೆ ಸಂತೋಷ. ಇಲ್ಲಾಂದರೆ ಅವರವರಿಗೆ ಬಿಟ್ಟಿದ್ದು. ಎಲ್ಲರೂ ಇದನ್ನು ಅನುಸರಿಸುವುದು ಸಾಧ್ಯವಿಲ್ಲ. ಇದೂ ಒಂದು ಸಾಧ್ಯತೆ ಅಂತ ಹೇಳಿದೆನಷ್ಟೇ. ಮನಸ್ಸಂತೋಷಕಾಗಿ ಬ್ಲಾಗಿಸುವುದು ನಂತರ ಕೃತಿ ಚೌರ್ಯಕ್ಕೆ ಹೆದರಿ ಮನಸ್ಸಂತೋಷ ಕಳೆದುಕೊಳ್ಳುವುದು.. system ಯೇ ಸರಿಯಿಲ್ಲ ಚೊಂಬೇಶ್ವರ ..
ನೀವು ಹೇಳಿದಂತೆಯೇ ಮಾಡುತ್ತಿದ್ದೇನೆ ಶ್ರಿಹರ್ಷರೇ.. ಪ್ರತೀ ಪೋಸ್ಟನ್ನೂ Facebook ಸ್ಟೇಸಸ್ಗೆ ಕೊಂಡಿಯಾಗಿ ಹಾಕುತ್ತೇನೆ.. ನಿಮ್ಮ ಮಾತು ಸರಿ ರವಿಯವರೇ.. ಬರೆಯುವುದು ನಮ್ಮ ಮನಸ್ಸಂತೋಷಕ್ಕಾಗಿಯೇ.. ಎಲ್ಲೋ , ಯಾರೋ ಕದ್ದರೆ ಗೊತ್ತಾಗುವುದು ಕಷ್ಟವೇ.. ಪ್ರವೀಣ್ರವರು ಹೇಳಿದಂತೆ ಆಗಾಗ ಪತ್ತೆಹಚ್ಚುವ ಕೆಲಸ ಮಾಡಬಹುದು. ಆದರೆ ಬರೆಯುವುದು ಬಿಟ್ಟು ಅದೇ ಮಾಡೋಣವೇ? .. ಕದ್ದವರು ಚೆನ್ನಾಗಿರಲಿ ಅಂತ ಹಾರೈಸಬೇಕಷ್ಟೇ.. ನನ್ನ ಪೋಸ್ಟೊಂದು ಇಷ್ಟೊಂದು ಚರ್ಚೆಗೆ ದಾರಿ ಮಾಡಿಕೊಟ್ಟಿದ್ದಕ್ಕೆ ನಿಜವಾಗಿಯೂ ಸಂತೋಷವಾಗುತ್ತಿದೆ. ನಿಲುಮೆಗೆ, ಭಾಗವಹಿಸಿದ ನಿಮಗೆಲ್ಲಾ ಆಭಾರಿಯಾಗಿದ್ದೇನೆ 🙂 🙂