ಅಪಘಾತ ಎಂಬ ಬಹಿರಂಗ ಹತ್ಯೆ
– ಚಾಮರಾಜ ಸವಡಿ
ಪುಣೆಯಲ್ಲಿ ಬುಧವಾರ ಸಂಭವಿಸಿದ ಘಟನೆ ನಿರ್ಲಕ್ಷ್ಯದ ಚಾಲನೆ ಅಥವಾ ರೋಷಾವೇಶದ ಚಾಲನೆ ಕುರಿತ ಪ್ರಶ್ನೆಗಳನ್ನು ಮತ್ತೆ ಎತ್ತಿದೆ. ತಲೆ ಕೆಟ್ಟ ಚಾಲಕನೊಬ್ಬ ಸರ್ಕಾರಿ ಬಸ್ಸನ್ನು ಮನಸೋಇಚ್ಛೆ ಚಾಲನೆ ಮಾಡಿ ೧೦ ಜನ ಅಮಾಯಕರ ಸಾವಿಗೆ ಹಾಗೂ ೩೫ಕ್ಕೂ ಹೆಚ್ಚು ಜನ ಗಾಯಗೊಳ್ಳಲು ಕಾರಣನಾಗಿದ್ದಾನೆ.
ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವ ಘಟನೆಗಳು ಇತ್ತೀಚೆಗೆ ಹೆಚ್ಚುತ್ತಿರುವುದೇಕೆ?
ನಿಜ, ಎಲ್ಲರಿಗೂ ಅವರದೇ ಆದ ವೈಯಕ್ತಿಕ ಸಮಸ್ಯೆಗಳಿದ್ದೇ ಇರುತ್ತವೆ. ಆದರೆ, ಭಾವಾವೇಶಕ್ಕೆ ಒಳಗಾಗಿ ರಸ್ತೆಗಿಳಿಯುವ ಮನಃಸ್ಥಿತಿ ಎಂಥದು? ಅದರಲ್ಲೂ ಪಕ್ಕದಲ್ಲಿ ಹಾಗೂ ಎದುರು ಇರುವ ವಾಹನಗಳನ್ನು ಹಿಂದಿಕ್ಕಿ ಹೋಗಬೇಕೆನ್ನುವ ಚಪಲ ಏಕೆ ಉಂಟಾಗುತ್ತದೆ? ರಸ್ತೆ ಸೂಚನೆಗಳನ್ನು ಉಲ್ಲಂಘಿಸುವ, ಇತರರ ಸರಾಗ ಚಲನೆಗೆ ಅಡ್ಡಿಪಡಿಸುವ ಮನಃಸ್ಥಿತಿ ಏಕೆ ಮೂಡುತ್ತದೆ?
ಹೆಚ್ಚುತ್ತಿರುವ ಒತ್ತಡ
ಇತ್ತೀಚಿನ ದಿನಗಳಲ್ಲಿ ಒತ್ತಡ ಪ್ರಮಾಣ ಹೆಚ್ಚುತ್ತಿದೆ. ಕೆಲಸದ ಸ್ಥಳಗಳ ಒತ್ತಡ ಬಹಳಷ್ಟು ಸಾರಿ ಇಂಥ ತಲೆಕೆಟ್ಟ ನಡತೆಗಳಿಗೆ ಕಾರಣವಾಗಿದ್ದೂ ಉಂಟು. ಮೇಲಧಿಕಾರಿಗಳ ಒತ್ತಡ, ಹಿಂಸೆ, ಸಹೋದ್ಯೋಗಿಗಳ ಕಿರಿಕಿರಿ, ಕೆಲಸದ ಸ್ಥಳದಲ್ಲಿ ಮೂಲಸೌಕರ್ಯಗಳ ಕೊರತೆ, ಅಸ್ತವ್ಯಸ್ತ ಕೆಲಸದ ಅವಧಿ, ರಜೆ ಕೊಡದಿರುವುದು, ಸರಿಯಾದ ವೇತನ/ಸೌಲಭ್ಯ ನೀಡದಿರುವುದು- ಹೀಗೆ ಹಲವಾರು ಕಾರಣಗಳಿಂದ ಒತ್ತಡ ಉಂಟಾಗುತ್ತದೆ. ಇದಕ್ಕೆ ವೈಯಕ್ತಿಕ ಸಮಸ್ಯೆಗಳ ಒತ್ತಡವೂ ಸೇರುತ್ತದೆ.
ಆದರೆ, ಇಂಥ ಒತ್ತಡವನ್ನು ಹೊರಹಾಕುವ ಮಾರ್ಗಗಳು ಮಾತ್ರ ಇದುವರೆಗೆ ಪರಿಣಾಮಕಾರಿಯಾಗಿ ರೂಪಿತವಾಗಿಲ್ಲ. ಎಲ್ಲಿಯೋ ಹುಟ್ಟಿದ ಒತ್ತಡ, ರೋಷ ಮತ್ತೆಲ್ಲೋ ಪ್ರಕಟವಾಗುವ ಘಟನೆಗಳು ಹೆಚ್ಚುತ್ತಿವೆ. ಮೇಲಿನವರ ಒತ್ತಡವನ್ನು ಕೆಳಗಿನವರ ಮೇಲೆ ಹರಿಬಿಡುವುದು ರಸ್ತೆಗೂ ಬಂದುಬಿಟ್ಟಿದೆ. ಬಹುಶಃ ಪುಣೆಯ ಈ ಚಾಲಕ ಅದನ್ನೇ ಮಾಡಿರಬೇಕು. ತನ್ನ ಒತ್ತಡ/ರೋಷವನ್ನು ಅಮಾಯಕ ಪಾದಚಾರಿಗಳ ಮೇಲೆ, ಜನರ ಮೇಲೆ ಹರಿಬಿಟ್ಟಿದ್ದಾನೆ.
ಹಾಗಂತ ಈ ಕ್ರಮವನ್ನು ಸಮರ್ಥಿಸಬೇಕೆಂದೇನಿಲ್ಲ. ಆದರೆ, ಜನರ ಮೇಲೆ ವಾಹನ ಹರಿಬಿಟ್ಟರೂ ಅದರಿಂದ ಅಂಥ ಹೆಚ್ಚಿನ ಶಿಕ್ಷೆಯಾಗಲಿ ತೊಂದರೆಯಾಗಲಿ ಆಗುವುದಿಲ್ಲ ಎಂಬ ಮನಃಸ್ಥಿತಿ ಇಂಥ ಘಟನೆಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ.
ವರ್ಷಕ್ಕೆ ೧ ಲಕ್ಷ ಸಾವು
ಕೇಂದ್ರ ಸರ್ಕಾರದ ಕಾನೂನು ಇಲಾಖೆ ೨೦೦೯ರಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿರುವ ವರದಿಯಲ್ಲಿರುವ ಅಂಶಗಳು ಆಘಾತಕಾರಿಯಾಗಿವೆ. ಆ ಪ್ರಕಾರ, ಭಾರತದ ರಸ್ತೆ ಅಪಘಾತಗಳಲ್ಲಿ:
- ಪ್ರತಿ ವರ್ಷ ೧ ಲಕ್ಷಕ್ಕೂ ಹೆಚ್ಚು ಜನ ರಸ್ತೆ ಅಪಘಾತಗಳಲ್ಲಿ ಸಾಯುತ್ತಾರೆ
- ೧೦ ಲಕ್ಷಕ್ಕೂ ಹೆಚ್ಚು ಜನ ಗಾಯಗೊಳ್ಳುತ್ತಾರೆ/ಅಂಗಹೀನರಾಗುತ್ತಾರೆ.
- ಪ್ರತಿ ೬ ನಿಮಿಷಕ್ಕೆ ಒಂದು ಸಾವು.
- ರಸ್ತೆ ಅಪಘಾತಗಳಿಂದಾಗಿ ವಾರ್ಷಿಕ ರೂ.೫೫,೦೦೦ ಕೋಟಿ ನಷ್ಟ.
ಅಪಘಾತಗಳ ಕುರಿತು ಇನ್ನಷ್ಟು…
- ದೇಶದಲ್ಲಿರುವ ರಸ್ತೆಯ ಒಟ್ಟು ಉದ್ದ ೩೩ ಲಕ್ಷ ೧೪ ಸಾವಿರ ಕಿ.ಮೀ.
- ರಾಷ್ಟ್ರೀಯ/ರಾಜ್ಯ ಹೆದ್ದಾರಿ ಪ್ರಮಾಣ ಶೇ.೫.೮
- ಆದರೆ, ಇಲ್ಲಿ ಸಂಭವಿಸುವ ಅಪಘಾತಗಳ ಪ್ರಮಾಣ ಶೇ.೫೦
- ೨೦೦೪-೦೫ರವರೆಗೆ ನೋಂದಾವಣೆಗೊಂಡಿರುವ ವಾಹನಗಳ ಸಂಖ್ಯೆ ೭ ಕೋಟಿ ೩೦ ಲಕ್ಷ.
- ಈ ಪೈಕಿ ಭಾರಿ ವಾಹನಗಳ ಪ್ರಮಾಣ ಶೇ.೭.೫.
- ಬೈಕ್-ಕಾರ್ಗಳ ಪ್ರಮಾಣ ಶೇ.೮೦.
- ವರ್ಷಕ್ಕೆ ೧ ಲಕ್ಷ ಸಾವು
- ಕೇಂದ್ರ ಸರ್ಕಾರದ ಕಾನೂನು ಇಲಾಖೆ ೨೦೦೯ರಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿರುವ ವರದಿಯಲ್ಲಿರುವ ಅಂಶಗಳು ಆಘಾತಕಾರಿಯಾಗಿವೆ. ಆ ಪ್ರಕಾರ, ಭಾರತದ ರಸ್ತೆ ಅಪಘಾತಗಳಲ್ಲಿ:
- ಪ್ರತಿ ವರ್ಷ ೧ ಲಕ್ಷಕ್ಕೂ ಹೆಚ್ಚು ಜನ ರಸ್ತೆ ಅಪಘಾತಗಳಲ್ಲಿ ಸಾಯುತ್ತಾರೆ
- ೧೦ ಲಕ್ಷಕ್ಕೂ ಹೆಚ್ಚು ಜನ ಗಾಯಗೊಳ್ಳುತ್ತಾರೆ/ಅಂಗಹೀನರಾಗುತ್ತಾರೆ.
- ಪ್ರತಿ ೬ ನಿಮಿಷಕ್ಕೆ ಒಂದು ಸಾವು.
- ರಸ್ತೆ ಅಪಘಾತಗಳಿಂದಾಗಿ ವಾರ್ಷಿಕ ರೂ.೫೫,೦೦೦ ಕೋಟಿ ನಷ್ಟ.
- ಶೇ.೬೫ ಪ್ರಮಾಣದ ಸರಕು ಹಾಗೂ ಶೇ.೮೬.೭ರಷ್ಟು ಜನರ ಸಾಗಣೆ ರಸ್ತೆ ಮೂಲಕ.
- ಭಾರಿ ವಾಹನಗಳಿಂದ ಉಂಟಾಗುತ್ತಿರುವ ಅಪಘಾತ ಪ್ರಮಾಣ ಶೇ.೩೦. ಹಾಗೂ ಸಾವಿನ ಪ್ರಮಾಣ ಶೇ.೩೮.
- ಪ್ರತಿ ದಿನ ಸುಮಾರು ೧೩೦೦ ಅಪಘಾತಗಳು
- ಶೇ.೨೦ರಷ್ಟು ರಸ್ತೆ ಅಪಘಾತಗಳು ಮಾರಣಾಂತಿಕ
- ೪.೪ ರಸ್ತೆ ಅಪಘಾತಗಳಲ್ಲಿ ೧ ಸಾವು ಸಂಭವಿಸುತ್ತದೆ
- ರಸ್ತೆ ಅಪಘಾತಗಳಲ್ಲಿ ಸಾಯುವವರ ಪೈಕಿ ಶೇ.೫೦ರಷ್ಟು ಜನ ಪಾದಚಾರಿಗಳು
ಅಪಘಾತಗಳಿಗೆ ಮೂಲ
- ಕೆಟ್ಟ ರಸ್ತೆ, ಬಿಜಿ ರಸ್ತೆ
- ನಿರ್ಲಕ್ಷ್ಯ/ರೋಷಾವೇಶದ ಚಾಲನೆ
- ರಸ್ತೆ ಸೂಚನೆಗಳ ಉಲ್ಲಂಘನೆ/ಅಸಡ್ಡೆ
- ತರಬೇತಿ ಇಲ್ಲದವರಿಂದ ಚಾಲನೆ
- ಹೆಲ್ಮೆಟ್ ಧರಿಸದಿರುವುದು
- ಮದ್ಯ ಸೇವಿಸಿ ಚಾಲನೆ
- ಮೊಬೈಲ್ನಲ್ಲಿ ಮಾತನಾಡುತ್ತ ಚಾಲನೆ
- ಅತಿ ವೇಗ
- ಮಾನಸಿಕ ಒತ್ತಡ
- ಆತುರ
ರಸ್ತೆ ಅಪಘಾತಗಳಿಗೆ ನಮ್ಮಲ್ಲಿರುವ ಶಿಕ್ಷೆಯ ಪ್ರಮಾಣ ನೋಡಿದರೆ ಸಾಕು, ಈ ಚಿತ್ರ ಸ್ಪಷ್ಟವಾಗುತ್ತದೆ.
ಮೂಲಸೌಕರ್ಯ ಕೊರತೆ
ದೆಹಲಿ ಮೂಲದ ‘ಡೌನ್ ಟು ಅರ್ಥ್’ ಪತ್ರಿಕೆಯ ವರದಿಯ ಪ್ರಕಾರ: ೧೯೭೦ರಿಂದ ೨೦೦೫ರವರೆಗೆ ವಾಹನಗಳ ನೋಂದಣಿ ಪ್ರಮಾಣದಲ್ಲಿ ಶೇ.೫೦ರಷ್ಟು ಹೆಚ್ಚಳವಾಗಿದೆ. ಆದರೆ, ರಸ್ತೆ ಜಾಲ ಅಭಿವೃದ್ಧಿಯಾಗಿದ್ದು ಶೇ.೩ಕ್ಕಿಂತ ಕಡಿಮೆ. ಈ ಅವಧಿಯಲ್ಲಿ ಅಪಘಾತ ಪ್ರಮಾಣ ನಾಲ್ಕು ಪಟ್ಟು ಹೆಚ್ಚಳವಾಗಿದ್ದರೆ, ಸಾವಿನ ಪ್ರಮಾಣ ಆರು ಪಟ್ಟು ಹೆಚ್ಚಾಗಿದೆ.
ರಸ್ತೆ ಜಾಲ ಅಭಿವೃದ್ಧಿಯಾಗದಿರುವುದು; ಸಾಕಷ್ಟು ಸ್ಥಳಾವಕಾಶ ಹೊಂದಿದ ಫುಟ್ಪಾತ್ಗಳ ಕೊರತೆ, ಸೈಕಲ್ ಮಾರ್ಗಗಳ ಕೊರತೆ ಹಾಗೂ ವಾಹನಗಳ ವೇಗಮಿತಿಗೆ ಸೂಕ್ತ ನಿರ್ಬಂಧ ಇಲ್ಲದಿರುವುದೇ ಅಪಘಾತ ಪ್ರಮಾಣದಲ್ಲಿ ಹೆಚ್ಚಳವಾಗಲು ಮುಖ್ಯ ಕಾರಣ.
ರಸ್ತೆ ಅಪರಾಧಗಳಿಗೆ ಈಗಿರುವ ಶಿಕ್ಷೆ/ದಂಡದ ಪ್ರಮಾಣ
ಅಪರಾಧ: ಅತಿ ವೇಗದಿಂದ ಚಾಲನೆಯಿಂದ ಅಪಘಾತವಾಗುವ ಸಾಧ್ಯತೆ, ಇತರರಿಗೆ ತೊಂದರೆ, ಭಯ ಉಂಟಾಗುವಂತಿದ್ದರೆ
ಶಿಕ್ಷೆ: ಗರಿಷ್ಠ ೩ ತಿಂಗಳ ಸಾದಾ ಸಜೆ, ರೂ.೨೫೦ ದಂಡ ಅಥವಾ ಎರಡೂ (ಸೆಕ್ಷನ್ ೩೩೬)
ಅಪರಾಧ: ಸಾರ್ವಜನಿಕ ರಸ್ತೆಯಲ್ಲಿ ಅತಿವೇಗದ/ ನಿರ್ಲಕ್ಷ್ಯದ/ ಅಪಾಯಕಾರಿ ಚಾಲನೆ ಮಾಡಿ ಗಾಯಗೊಳಿಸಿದರೆ
ಶಿಕ್ಷೆ: ಗರಿಷ್ಠ ೬ ತಿಂಗಳ ಸಾದಾ ಸಜೆ, ರೂ.೧,೦೦೦ ದಂಡ ಅಥವಾ ಎರಡೂ (ಸೆಕ್ಷನ್ ೨೭೯)
ಅಪರಾಧ: ನಿರ್ಲಕ್ಷ್ಯದಿಂದ ಚಾಲನೆ ಮಾಡಿ ಸಾವಿಗೆ ಕಾರಣರಾದರೆ
ಶಿಕ್ಷೆ: ಗರಿಷ್ಠ ೨ ವರ್ಷ ಸಾದಾ ಸಜೆ, ದಂಡ ಅಥವಾ ಎರಡೂ [ಸೆಕ್ಷನ್ ೩೦೪ (ಎ)]
ಅಪರಾಧ: ಇತರರಿಗೆ ಜೀವಭಯ/ಅಭದ್ರತೆ ಉಂಟಾಗುವಂತೆ ಮಾಡಿದರೆ
ಶಿಕ್ಷೆ: ಗರಿಷ್ಠ ೬ ತಿಂಗಳ ಸಜೆ, ರೂ.೫೦೦ ದಂಡ ಅಥವಾ ಎರಡೂ (ಸೆಕ್ಷನ್ ೩೩೭)
ಅಪರಾಧ: ಗಂಭೀರವಾಗಿ ಗಾಯಗೊಳಿಸಿದರೆ
ಶಿಕ್ಷೆ: ಗರಿಷ್ಠ ೨ ವರ್ಷ ಸಜೆ, ರೂ.೧,೦೦೦ ದಂಡ ಅಥವಾ ಎರಡೂ (ಸೆಕ್ಷನ್ ೩೩೮)
ಇವು ಮುಖ್ಯ ಅಂಶಗಳು. ಎಲ್ಲಕ್ಕಿಂತ ತಮಾಷೆಯ ವಿಷಯ ಏನೆಂದರೆ, ಚಾಲಕನೊಬ್ಬನ ಅತಿ ವೇಗ ಮತ್ತು ಹಾರ್ನ್ ಬಾರಿಸದಿರುವುದು ಸೆಕ್ಷನ್ ೨೭೯ರ ಪ್ರಕಾರ ಅಪರಾಧವಲ್ಲವಂತೆ. ಚಾಲಕನೊಬ್ಬ ನಿರ್ಲಕ್ಷ್ಯದಿಂದ, ಅತಿ ವೇಗವಾಗಿ ವಾಹನ ನಡೆಸುತ್ತಿದ್ದ ಎಂಬುದು ಸ್ಥಳ, ಟ್ರಾಫಿಕ್ ಪ್ರಮಾಣ, ಜನರ ಪ್ರಮಾಣ ಮುಂತಾದವುಗಳ ಮೇಲೆ ನಿರ್ಧರಿಸಲಾಗುವುದಂತೆ.
ಅದೂ ಕೊಲೆ, ಇದೂ ಕೊಲೆಯೇ
ತಂತಿ ಕದ್ದ, ಬೀದಿಯ ನಲ್ಲಿ ಕದ್ದವರಿಗೆ ತಿಂಗಳುಗಟ್ಟಲೇ ಜೈಲುಶಿಕ್ಷೆ ವಿಧಿಸಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಆದರೆ, ನಿರ್ಲಕ್ಷ್ಯದ ಚಾಲನೆಯಿಂದ ಪ್ರಾಣವನ್ನೇ ಕದ್ದವರಿಗೆ, ಸಾಯುವವರೆಗೆ ಅಂಗಹೀನರನ್ನಾಗಿ/ಅವಲಂಬಿತರನ್ನಾಗಿ ಮಾಡುವವರಿಗೆ ಶಿಕ್ಷೆಯ ಪ್ರಮಾಣ ಮಾತ್ರ ಅತಿ ಕನಿಷ್ಟ. ಕೊಲೆ ಮಾಡಿದವರಿಗೆ ಜೀವಾವಧಿಯಿಂದ ಹಿಡಿದು ಗಲ್ಲಿಗೇರಿಸುವವರೆಗೆ ಶಿಕ್ಷೆಯ ಪ್ರಮಾಣ ಇದೆ. ಆದರೆ, ನಿರ್ಲಕ್ಷ್ಯದ ಚಾಲನೆಯಿಂದ ಯಾರಾದರೂ ಸತ್ತರೆ ಶಿಕ್ಷೆ ಕೇವಲ ೨ ವರ್ಷದ ಜೈಲುವಾಸ ಮಾತ್ರ. (ಸುಪ್ರೀಂ ಕೋರ್ಟ್ ಇತ್ತೀಚೆಗೆ ವ್ಯಕ್ತಿಯೊಬ್ಬನಿಗೆ ಈ ಪ್ರಮಾಣವನ್ನು ೩ ವರ್ಷಕ್ಕೆ ಏರಿಸಿ ತೀರ್ಪಿತ್ತಿದೆ). ಶಿಕ್ಷೆ ಹಾಗೂ ದಂಡದ ಪ್ರಮಾಣದಲ್ಲಿ ಈ ಪರಿಯ ವ್ಯತ್ಯಾಸ ಇರುವುದರಿಂದಲೇ ವಾಹನ ಚಾಲನೆ ಬೇಕಾಬಿಟ್ಟಿಯಾಗಲು ಮುಖ್ಯ ಪ್ರೇರಣೆಯಾಗಿದೆ.
ಪುಣೆಯ ಅಪಘಾತಕ್ಕೂ ಈ ಅಂಕಿಅಂಶಗಳಿಗೂ ಒಂದು ಸಾಮ್ಯತೆಯಿದೆ. ತನ್ನೊಳಗಿನ ರೋಷಕ್ಕೆ ಅಥವಾ ಮಾನಸಿಕ ಅಸ್ವಸ್ಥತೆಗೆ ಆ ಬಸ್ ಚಾಲಕ ಕಂಡುಕೊಂಡ ಮಾರ್ಗ ಎಂದರೆ ಅಮಾಯಕರ ಮೇಲೆ ವಾಹನ ಹರಿಸುವುದು. ಒಂದು ವೇಳೆ ಆತ ಮಾನಸಿಕವಾಗಿ ಸ್ವಸ್ಥನೇ ಆಗಿದ್ದರೂ, ಕಾನೂನು ಪ್ರಕಾರ ಅವನಿಗೆ ಎಷ್ಟು ವರ್ಷ ಶಿಕ್ಷೆಯಾಗಬಹುದು? ಹೆಚ್ಚೆಂದರೆ ಮೂರು ವರ್ಷ. ಅದಾದ ನಂತರ ಆತ ಮತ್ತೆ ರಸ್ತೆಗಿಳಿಯುತ್ತಾನೆ. ಆದರೆ, ಆತನಿಂದಾಗಿ ಪ್ರಾಣ ಕಳೆದುಕೊಂಡ, ಗಾಯಗೊಂಡ, ಅಂಗಹೀನರಾದ ಜನರು ಮತ್ತೆ ರಸ್ತೆಗೆ ಇಳಿದಾರೆ?
ಇಂಥ ಸರಳ ವಿಷಯಗಳು ಕಾನೂನು ನಿರ್ಮಾತೃಗಳ ತಲೆಯೊಳಗೆ ಏಕೆ ಇಳಿಯುವುದಿಲ್ಲ?
* * * * * * * *
ಚಿತ್ರಕೃಪೆ : thehindu.com
ಉತ್ತಮವಾದ ಲೇಖನ, ಧನ್ಯವಾದಗಳು. ನಿಮ್ಮಿಂದ ಮತ್ತಷ್ಟು ಒಳ್ಳೆಯ ಲೇಖನಗಳನ್ನು ಅಥವ ಬರವಣಿಗೆಗಳನ್ನು ನಿರೀಕ್ಷೆ ಮಾಡುತ್ತೇವೆ.
ಉತ್ತಮವಾದ ಲೇಖನ, ಬಹಳಷ್ಟು ಉಪಯುಕ್ತವಾದ ಮಾಹಿತಿಗಳಿವೆ. ಧನ್ಯವಾದಗಳು. ನಿಮ್ಮಿಂದ ಮತ್ತಷ್ಟು ಒಳ್ಳೆಯ ಲೇಖನಗಳನ್ನು ಅಥವ ಬರವಣಿಗೆಗಳನ್ನು ನಿರೀಕ್ಷೆ ಮಾಡುತ್ತೇವೆ.
disturbing informative artcle thanks for the author and also nilume 🙂
ಚಾಮರಾಜ ಸವಡಿಯವರು ಒಟ್ಟು ಮಾಡಿದ ಅಪಘಾತಗಳ ಅಂಕಿ-ಅಂಶಗಳು ಬೆಚ್ಚಿ ಬಿಳುವಂತವು.
ನಮ್ಮ ದೇಶದಲ್ಲಿ ಅಪಘಾತ ಯಾರು ಮಾಡಿದ್ದಾರೆ ಎನ್ನುವದರ ಮೇಲೆ ಶಿಕ್ಷೆಯ ನಿರ್ಧಾರವಾಗುತ್ತದೆ. ಉದಾಹರಣೆಗೆ 1999ರ ದೆಹಲಿಯ ಸಂಜೀವ ನಂದಾ ತನ್ನ BMW ಕಾರನ್ನು ಏಳು ಜನರ ಮೇಲೆ ಹರಿಸಿದ ಕೇಸ್ ಇನ್ನುವರೆಗೂ ನಡೆಯುತ್ತಿದೆ. ಅಜ್ಜ ನಿವೃತ್ತ ನೇವಿ ಮುಖ್ಯಸ್ಥ, ಅಪ್ಪ ಪ್ರಖ್ಯಾತ ಶಸ್ತ್ರಾಸ್ತ್ರ ವ್ಯಾಪಾರಿ. ಸಲ್ಮಾನ ಖಾನ್ ಕೇಸಿನ ಗತಿ ಏನಾಯ್ತೊ ದೇವರಿಗೆ ಗೊತ್ತು..ಆತನಿನ್ನೂ ಎಲ್ಲರ ಕಣ್ಣಲ್ಲಿ ಗೊಲ್ಡನ್ ಬಾಯ್, ಹಿಂದಿ ನಟ ರಾಜಕುಮಾರ ಮಗ ಪುರು ಸ್ವರ್ಗಕ್ಕೆ ಕಳಿಸಿದ್ದು ಆರು ಜನರನ್ನು. ಕೇಸಿನಲ್ಲಿ ಖುಲಾಸೆ.
ಈಗ ಪುಣೆಯ ಬಸ್ ಡ್ರೈವರ ಒಂಬತ್ತು ಜನರನ್ನು ಬಲಿ ತೆಗೆದುಕೊಂಡಿದ್ದಾನೆ. ಖಂಡಿತವಾಗಿಯೂ ಈ ಮನುಷ್ಯನಿಗೆ ಗರೀಷ್ಟ ಶಿಕ್ಷೆಯಾಗುತ್ತೆ ..ಸಂಶಯದ ಅಗತ್ಯವಿಲ್ಲ. ಏಕೆಂದರೆ ಯಾವ ವಕೀಲರು ಅವನ ಪರವಾಗಿ ವಾದ ಮಾಡುತ್ತಿಲ್ಲ!.
ಒಳ್ಳೇ ಮಾಹಿತಿ ಪೂರ್ಣ ಲೇಖನ ಚಾವಡಿ ಸರ್. ನಿಮ್ಮ ಲೇಖನಿಯಿಂದ ಇನ್ನೂ ಲೇಖನಗಳು ಹರಿದು ಬರಲಿ ಎಮ್ದು ಹಾರೈಸುವ
ಸುರೇಶ್ ಚಿಕ್ಕಮಗಳೂರು
ಚಾಮರಾಜ್ ಸರ್,
ಕಾನೂನು ನಿರ್ಮಾತೃಗಳ ತಲೆಯೊಳಗೆ ಏನಾದರೂ ಇದ್ದರೆ ನುಸುಳಬಹುದೇನೋ? 🙂
ಅಂಕಿ-ಅಂಶ ಸಹಿತ ಮಾಹಿತಿ ಪೂರ್ಣ ಲೇಖನಕ್ಕೆ ಧನ್ಯವಾದಗಳು 🙂 …