ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 15, 2012

1

ಒಂದು ಸೋಲಿನ ವೃತ್ತಾಂತ; ಪಾಠ ಕಲಿಯದ ದುರಂತ

‍ನಿಲುಮೆ ಮೂಲಕ

-ರಾಕೇಶ್ ಏನ್  ಎಸ್

ಸೋಲು… ಸೋಲು… ಸೋಲು
ಸೋಲು ಅಕ್ಷ್ಯಮ್ಯ, ಅದರಲ್ಲಿಯೂ ಯುದ್ಧಭೂಮಿಯಲ್ಲಿನ ಅಪಜಯಕ್ಕೆ ಕ್ಷಮೆಯೇ ಇಲ್ಲ ಎಂದು ಕೊಂಡಿರುವ ಪರಂಪರೆ ನಮ್ಮದು. ಸೋತವ ಎಂಬ ಹಣೆಪಟ್ಟಿ ಯಾರಿಗೂ ಬೇಡ, ಸೋಲು ಎಂದಿಗೂ ತಬ್ಬಲಿ.

ಸರಿಯಾಗಿ ೫೦ ವರ್ಷಗಳ ಹಿಂದೆ, ಇದೇ ಸಮಯದಲ್ಲಿ ಹಿಮಾಲಯದ ಧವಳಗಿರಿಗಳ ಮಧ್ಯೆ ಭಾರತೀಯರನ್ನು ಅಪ್ಪಿಕೊಳ್ಳಲು ಇಂತಹದ್ದೆ ಒಂದು ಸೋಲು ಹೊಂಚು ಹಾಕಿ ಕುಳಿತಿತ್ತು. ಚೀನಾದ ಕೆಂಪು ಪಡೆ ಹೆದ್ದೆರೆಯೋಪಾದಿಯಲ್ಲಿ ನಡೆಸಿದ ದಾಳಿಗೆ ಗಣತಂತ್ರ ಸ್ವತಂತ್ರ ಭಾರತ ಬೆರಗಾಗಿತ್ತು, ಬೆನ್ನು ಬಾಗಿಸಿ ವಂದಿಸಿ ಸೋತು ಹೋಗಿತ್ತು.

ಭಾರತ ಮತ್ತು ಚೀನಾ ಪ್ರಾಚೀನ ನಾಗರಿಕತೆಗಳ ತವರೂರು. ಹಾಗೆಯೆ ಜಾಗತಿಕರಣಗೊಂಡ ಜಗತ್ತನ್ನು ಹೊತ್ತು ಸಾಗಿಸುವ ಗಾಲಿಗಳು. ಈ ಎರಡು ದೇಶಗಳಿಗೆ ಭೂತ ಮತ್ತು ಭವಿಷ್ಯದಲ್ಲಿರುವ ಪ್ರಾಮುಖ್ಯತೆ ಆಪಾರ. ಆದರೆ ಭಾರತ ಮತ್ತು ಚೀನಾದ ಮಧ್ಯೆ ಹುಟ್ಟಿಕೊಂಡ ಸಂಘರ್ಷದ ಕಾಲಘಟ್ಟ ಬಹಳ ವಿಚಿತ್ರವಾದದ್ದು.

೧೯೫೦ರ ದಶಕದಲ್ಲಿ ಚೀನಾವು ಮಾವೋ ತ್ಸೆತುಂಗ್‌ನ ತೆಕ್ಕೆಯಲ್ಲಿ ಅಪರಿಮಿತ ವೇಗದ ಅಭಿವೃದ್ಧಿಯ ಕನಸನ್ನು ಹೊಸೆಯುತ್ತಿದ್ದರೆ, ಭಾರತ ಬ್ರಿಟಿಷರಿಂದ ಮುಕ್ತವಾಗಿ ಪ್ರಜಾರಾಜ್ಯದ ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಿದ್ದ ಸಮಯ, ಸಂದರ್ಭವದು. ಆಗ ಈ ಎರಡು ದೇಶಗಳಿಗೆ ಯುದ್ಧವೆಂಬ ಹೊರೆ ಬೇಕಾಗಿರಲಿಲ್ಲ.

ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ’ಹಿಂದಿ ಚೀನಿ ಭಾಯಿ ಭಾಯಿ’ ಎಂಬ ಉದ್ಘೋಷವನ್ನು ೧೯೫೦ರ ದಶಕದಲ್ಲಿ ಮುನ್ನೆಲೆಗೆ ತಂದಿದ್ದರು. ತೈವಾನ್ ವಿವಾದದಿಂದಾಗಿ ವಿಶ್ವ ಗುಂಪಿನಲ್ಲಿ ಚೀನಾ ಮೂಲೆಗುಂಪಾದ ಸಂದರ್ಭದಲ್ಲಿ ಅದನ್ನು ಒಂದು ದೇಶವೆಂದು ಪರಿಭಾವಿಸಿ ಅದರೊಂದಿಗೆ ಸ್ನೇಹ ಸಂಬಂಧ ಬೆಳೆಸಿದ ದೇಶಗಳಲ್ಲಿ ಭಾರತವು ಒಂದು. ಇಂತಹ ಮಧುರ ಸಂಬಂಧ ಉತ್ತುಂಗಕ್ಕೇರುತ್ತಲೇ ಪರಸ್ಪರ ಅನುಮಾನದ ಪಾತಳಕ್ಕೆ ಕುಸಿದದ್ದು ಚರಿತ್ರೆಯ ವೈಚಿತ್ರ.
ಕಮ್ಯುನಿಷ್ಟ್ ನಾಯಕ ಮಾವೋ ಚೀನಾದ ಮೇಲೆ ಹಿಡಿತ ಸಂಪಾದಿಸಿದ್ದು ೧೯೪೯ರಲ್ಲಿ. ಬ್ರಿಟೀಷ್‌ರಿಂದ ಭಾರತ ಸ್ವಾತಂತ್ರ್ಯ ಪಡೆದದ್ದು ೧೯೪೭ರಲ್ಲಿ. ಮಾವೋ ಚೀನಾದ ಚುಕ್ಕಾಣಿ ಹಿಡಿಯಲು ಶೀತಲ ಸಮರದ ಮೂಲಕ ಅಲ್ಲಿನ ರಾಷ್ಟ್ರೀಯ ಪಕ್ಷವನ್ನು ಸೋಲಿಸಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ರೂವಾರಿಯಾದ. ಚೀನಾ ಕಮ್ಯುನಿಷ್ಟ್ ಮಾದರಿಯ ಆಡಳಿತವನ್ನು ಅಪ್ಪಿಕೊಂಡರೆ ಭಾರತ ಪ್ರಜಾತಂತ್ರ ರಾಷ್ಟ್ರವಾಗಿ ರೂಪುಗೊಂಡಿತು. ಈ ಎರಡು ರಾಷ್ಟ್ರಗಳು ಹೊಸ ವ್ಯವಸ್ಥೆಯೊಂದಿಗೆ, ಆಶಯದೊಂದಿಗೆ ಪ್ರಜಾ ಕಲ್ಯಾಣದ ಕಂಕಣವನ್ನು ಒಂದೆ ಕಾಲದಲ್ಲಿ ಹೊತ್ತಿದ್ದವು.

ಜಮ್ಮು ರಾಜರ ತೆಕ್ಕೆಯಲ್ಲಿದ್ದ ಲಡಾಖ್‌ನ್ನು ಭಾರತೀಯ ಸಿಖ್ ಪಡೆ ೧೮೩೪ರಲ್ಲಿ ವಶಪಡಿಸಿಕೊಂಡಿತು. ಆ ಬಳಿಕ ಟಿಬೆಟ್‌ನ ಮೇಲೆ ದಾಳಿ ನಡೆಸಿದ ಈ ಪಡೆ ಪಶ್ಚಿಮ ಟಿಬೆಟ್‌ನ್ನು ವಶ ಪಡಿಸಿಕೊಳ್ಳುವ ಪ್ರಯತ್ನ ನಡೆಸಿತು. ಆದರೆ ಚೀನಿಯರು ಈ ಪ್ರಯತ್ನವನ್ನು ಹಿಮ್ಟೆಟ್ಟಿಸಿದರು. ಆದರೆ ಲಡಾಖ್ ಪ್ರಾಂತ್ಯವನ್ನು ಉಳಿಸಿಕೊಳ್ಳುವಲ್ಲಿ ಸಿಖ್‌ರು ಯಶ ಪಡೆದರು. ಇದೇ ಸಂದರ್ಭದಲ್ಲಿ ಭಾರತದಲ್ಲಿ ಮೊದಲ ಆಂಗ್ಲೋ-ಸಿಖ್ ಯುದ್ಧ ಪ್ರಾರಂಭವಾಗಿದ್ದರೆ, ಅತ್ತ ಚೀನಾದಲ್ಲಿ ಮೊದಲ ಅಪಿಮ್ ಯುದ್ಧ ನಡೆಯುತ್ತಿತ್ತು. ಇಲ್ಲೂ ಸಾಮ್ಯತೆ! ಸದ್ಯ ನಾವು ನಮ್ಮೊಳಗೆ ಕಾದಾಡುವುದು ಬೇಡ ಎಂದು ಭಾವಿಸಿದ ಉಭಯ ದೇಶಗಳು ಪರಸ್ಪರ ಆಕ್ರಮಣ ಮಾಡಿಕೊಳ್ಳದ ಒಪ್ಪಂದಕ್ಕೆ ಸಹಿ ಹಾಕಿದವು.

ಮಾವೋ ಮುಂದಾಳತ್ವದ ಚೀನಾಕ್ಕೆ ಟಿಬೆಟ್ ಅದರ ಅವಿಭಾಜ್ಯ ಅಂಗ ಎಂಬ ಭಾವನೆ. ಭಾರತಕ್ಕೆ ಇದು ಒಪ್ಪತಕ್ಕ ಮಾತಲ್ಲ. ಆದರೂ ಉಭಯ ದೇಶಗಳಿಂದ ಶಾಂತಿ ಮಂತ್ರ ಪಠಣದ ಮುಂದುವರಿಕೆ. ಈ ಮಧ್ಯೆ ಭಾರತ ಆಕ್ರಮಣಕಾರಿ ಮನೋಭಾವ ತೋರುತ್ತಿರುವ ಸಂಶಯ ಚೀನಾಕ್ಕೆ.

ಅಭಿವೃದ್ಧಿಯ ಮಾನದಂಡಗಳ ಆಧಾರದಲ್ಲಿ ೧೫ ವರ್ಷಗಳಲ್ಲಿ ಬ್ರಿಟನ್‌ನನ್ನು ಹಿಂದಿಕ್ಕಬೇಕು ಎಂಬ ಮಾವೋನ ಮಹಾತ್ವಕಾಂಕ್ಷೆಯ ಈಡೇರಿಕೆಗಾಗಿ ೧೯೫೮ರಲ್ಲಿ ಚೀನಾ ಮುನ್ನಡೆಯ ಮಹಾ ಹೆಜ್ಜೆಯನ್ನು ಇಟ್ಟಿತು. ಶೀತಲ ಸಮರದ ಕಾಲದಲ್ಲಿ ಕಮ್ಯುನಿಷ್ಟ್ ರಾಷ್ಟ್ರಗಳ ನಾಯಕನಾಗಿದ್ದ ರಷ್ಯಾ ಮತ್ತು ಆ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಚೀನಾದ ಮಧ್ಯೆ ೧೯೫೮-೫೯ರ ಮಧ್ಯೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಹಿವಾಟು ನಡೆಯುತ್ತದೆ. ಈ ವಹಿವಾಟಿನ ಹಣಕಾಸು ಪ್ರಮಾಣ ಮತ್ತು ಒಳಗೊಂಡಿದ್ದ ಶಸ್ತ್ರಾಸ್ತ್ರಗಳ ಬಗೆಗಿನ ಸಂಪೂರ್ಣ ಮಾಹಿತಿ ಇಂದಿಗೂ ಲಭ್ಯವಾಗಿಲ್ಲ. ಅದೇ ರೀತಿ ಈ ವಹಿವಾಟು ನಡೆಯುವ ಸಂದರ್ಭದಲ್ಲಿ ಮಾವೋನ ಲಕ್ಷ್ಯದಲ್ಲಿ ಭಾರತವಿತ್ತೇ ಅನ್ನುವುದು ಕೂಡ ನಿಗೂಢ ಸಂಗತಿ. ಏಕೆಂದರೆ ಆ ಸಂದರ್ಭದಲ್ಲಿ ಚೀನಾಕ್ಕೆ ಬೇರೆಯೇ ಶತ್ರುಗಳಿದ್ದರು. ಅದು ರಷ್ಯಾದ ಸ್ಥಾನಕ್ಕೆ ಕೊಕ್ ಕೊಡುವ ಒಳ ಉದ್ದೇಶದಿಂದ ಕಾರ್ಯತತ್ಪರವಾಗಿತ್ತು.
ಭಾರತ ೧೯೫೪ ಬಿಡುಗಡೆ ಮಾಡಿದ ನಕಾಶೆಯೊಂದರಲ್ಲಿ ಅಕ್ಷಯ್ ಚೀನಾವನ್ನು ತನ್ನ ಸೀಮೆಯ ಪರಿಧಿಯೊಳಗೆ ತಂದಿತ್ತು. ಹಾಗೆಯೆ ಚೀನಾದ ವಿಶ್ವಾಸರ್ಹತೆಯ ಬಗ್ಗೆ ನೆಹರುವಿಗೆ ಸಂಶಯವಿದೆ ಎಂಬ ಅಂಶ ಕೂಡ ಬಹಿರಂಗವಾಗಿತ್ತು. ಇದೆಲ್ಲವು ಚೀನಾದ ಕಣ್ಣು ಕೆಂಪಾಗಲು ಕಾರಣವಾಯಿತು. ಆದರೆ ೧೯೫೦ರ ದಶಕದಲ್ಲಿ ನಡೆದಿತ್ತು ಎಂಬ ಈ ಘಟನೆ ಈ ವಾದಕ್ಕೆ ತದ್ವಿರುದ್ಧವಾಗಿದೆ. ಆಗ ಭೂದಳದ ಜನರಲ್ ಆಗಿದ್ದ ಕಾರಿಯಪ್ಪ ಅವರು ಭಾರತ-ಚೀನಾದ ಗಡಿ ರೇಖೆಯ ಸುರಕ್ಷತೆಯ ಬಗ್ಗೆ ಅದರಲ್ಲಿಯೂ ಅರುಣಾಚಲ ಪ್ರದೇಶದಲ್ಲಿನ ಆತಂಕದ ಬಗ್ಗೆ ನೆಹರುರವರ ಗಮನಕ್ಕೆ ತಂದಿದ್ದರು. ಆಗ ನೆಹರು ನಮ್ಮ ಮೇಲೆ ಯಾರು ದಾಳಿ ಮಾಡಬಹುದು ಎಂದು ಪ್ರಧಾನಮಂತ್ರಿಗೆ ಹೇಳುವುದು ಜನರಲ್‌ನ ಕೆಲಸವಲ್ಲ. ವಾಸ್ತವವಾಗಿ ಚೀನಿಯರು ನಮ್ಮ ಈಶಾನ್ಯ ಗಡಿಯನ್ನು ಕಾಯುತ್ತಿದ್ದಾರೆ. ಕಾಶ್ಮೀರ ಮತ್ತು ಪಾಕಿಸ್ತಾನ ಮಾತ್ರ ನಿಮ್ಮ ಗಮನದಲ್ಲಿರಲಿ ಎಂದು ಹೇಳಿದ್ದರಂತೆ.

ಚೀನಾದ ವಿರುದ್ಧ ನಡೆಸಿದ ಟಿಬೆಟ್ ದಂಗೆ ವಿಫಲವಾದ ಬಳಿಕ ಟಿಬೆಟಿಯನ್ನರ ಧರ್ಮಗುರು ದಲಾಯಿ ಲಾಮಾ ತನ್ನ ಸಾವಿರಾರು ಅನುಯಾಯಿಗಳ ಜೊತೆ ಭಾರತದಲ್ಲಿ ನೆಲೆಸಲು ಅವಕಾಶ ಮಾಡಿಕೊಟ್ಟದ್ದು ಚೀನಾವನ್ನು ಕೆರಳಿಸಿತು. ಈ ಘಟನೆ ಉಭಯ ದೇಶಗಳ ಸಂಬಂಧವನ್ನು ಅಧಿಕೃತವಾಗಿ ದುರ್ಗಮ ಗೊಳಿಸಿತು. ಇದೇ ಸಂದರ್ಭದಲ್ಲಿ ಟಿಬೆಟ್ ಬಗ್ಗೆ ಭಾರತದ ನಿಲುವನ್ನು ರಷ್ಯಾ ಬೆಂಬಲಿಸುತ್ತದೆ. ಇದು ಮಾವೋನಲ್ಲಿ ತಳಮಳ ಹುಟ್ಟಿಸುತ್ತದೆ. ರಷ್ಯಾ, ಅಮೆರಿಕ ಮತ್ತು ಭಾರತ ಒಂದೇ, ಇವುಗಳು ಒಟ್ಟು ಸೇರಿ ಯಾವುದೇ ಕ್ಷಣದಲ್ಲಿ ತನ್ನ ಮೇಲೆ ದಾಳಿ ನಡೆಸಬಹುದು ಎಂಬ ಭಯ ಚೀನಾಕ್ಕೆ ಶುರುವಾಗುತ್ತದೆ.
ಈ ಮಧ್ಯೆ ಅರುಣಾಚಲ ಪ್ರದೇಶವನ್ನು ತೆಗೆದುಕೊಳ್ಳಿ ಆದರೆ ಅಕ್ಷಯ್ ಚಿನ್‌ದ ತಂಟೆಗೆ ಬರಬೇಡಿ ಎಂಬ ಪ್ರಸ್ತಾಪವನ್ನು ಚೀನಾ ಭಾರತದ ಮುಂದಿಡುತ್ತದೆ. ಆದರೆ ಇದಕ್ಕೆ ಭಾರತ ತನ್ನ ಒಪ್ಪಿಗೆ ನೀಡುವುದಿಲ್ಲ.

ಸೈನ್ಯದ ಆಯಕಟ್ಟಿನ ಹುದ್ದೆಗಳಲ್ಲಿ ಆಗಿನ ರಕ್ಷಣಾ ಮಂತ್ರಿ ಕೃಷ್ಣ ಮೆನನ್ (ಈಗ ರಾಜಧಾನಿಯಲ್ಲಿರುವ ಸೇನಾ ಭವನಕ್ಕೆ ಹೋಗುವ ರಸ್ತೆಗೆ ಅವರದ್ದೆ ಹೆಸರಿದೆ!) ಅವರ ಪರಮಾಪ್ತರೇ ತುಂಬಿದ್ದರು. ಈ ಬಗ್ಗೆ ಜನರಲ್ ತಿಮ್ಮಯ್ಯ ತಮ್ಮ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆಗೆ ಮುಂದಾಗಿದ್ದು ಆ ಬಳಿಕ ಜವಾಹರ್ ಲಾಲ್ ನೆಹರು ಮಧ್ಯಪ್ರವೇಶದಿಂದಾಗಿ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದದ್ದು ಇತಿಹಾಸ. ಇದು ಯುದ್ಧ ಆರಂಭದಲ್ಲೆ ಭಾರತೀಯ ಸೈನ್ಯದಲ್ಲಿ ಗೊಂದಲಕ್ಕೆ ಕಾರಣವಾಗುತ್ತದೆ.

ಅರುಣಾಚಲ ಪ್ರದೇಶದ ಝಿಮ್ತಾಂಗ್ ಕಣಿವೆಯ ಥಾಗ್ಲಾ ಬೆಟ್ಟದ ಅಂಚಿನ ನಾಮ್ ಕಾ ಚು ನದಿ ದಂಡೆಯಲ್ಲಿ  ಭಾರತೀಯ ಸೈನಿಕರ ಮೇಲೆ ಚೀನಿಯರು ದಾಳಿ ನಡೆಸುವುದರೊಂದಿಗೆ ಇಂಡೋ-ಚೀನಾ ಯುದ್ಧ ಸ್ಪೋಟಗೊಳ್ಳುತ್ತದೆ.

ಪರಸ್ಪರ ಅಪನಂಬಿಕೆ, ಅಸಮಾಧಾನಗಳ ಲಾವಾರಸ ೧೯೬೨ರ ಅಕ್ಟೋಬರ್ ೧೯ರ ಕತ್ತಲಲ್ಲಿ ಜ್ವಾಲಾಮುಖಿಯಾಗಿ ಹಿಮ ಕಣಿವೆಯ ದಿವ್ಯ ಮೌನವನ್ನು ಬಂದೂಕು, ಫಿರಂಗಿಗಳ ಭೊರ್ಗರೆತ ನುಂಗಿ ಹಾಕುತ್ತದೆ. ಬಳಿಕದ ಸುಮಾರು ಒಂದು ತಿಂಗಳ ಕಾಲ ಉತ್ತುಂಗ ಹಿಮ ಶಿಖರಗಳ ಅಪಾದ ಮಸ್ತಕಕ್ಕೆ ಕೆಂಪು ರಕುತದ ನಿರಂತರ ಅಭಿಷೇಕ.

’ಅಭೇದ್ಯ ಹಿಮಾಲಯ’ ಎಂದು ಭಾವಿಸಿದ್ದ ಭಾರತೀಯ ಮನಸ್ಥಿತಿ ಅಂದು ಚೆಲ್ಲಾಪಿಲ್ಲಿಯಾಗಿ ಹೋಗಿತ್ತು. ಅನೇಕ ಸೈನಿಕರು ಅಪ್ರತಿಮ ಸಾಹಸ ಪ್ರದರ್ಶಿಸಿದರು ಕೂಡ ಅದು ವಿಜಯದ ಲೆಕ್ಕಕ್ಕೆ ಸಾಕಾಗಲೇ ಇಲ್ಲ. ಗಡಿ ರೇಖೆಗೆ ಎದೆ ಕೊಟ್ಟು ನಿಂತಿದ್ದ ಸೈನಿಕರನ್ನು ಹಿಂದೆ ಕರೆಸಿಕೊಳ್ಳಲಾಯಿತು. ಹಿಮ್ಮೆಟಲು ಒಪ್ಪದ ಸೈನಿಕರು ತಮ್ಮಲ್ಲಿ ಸೀಮಿತ ಪ್ರಮಾಣದಲ್ಲಿ ದಾಸ್ತಾನಿದ್ದ ಮದ್ದುಗುಂಡು ಖಾಲಿಯಾದ ಬಳಿಕ ಚೀನಿ ಸೈನಿಕರ ಜೊತೆ ಕೈ ಕೈ ಮಿಲಾಯಿಸಿ ಹುತಾತ್ಮರಾದ ಅನೇಕ ಪ್ರಸಂಗಗಳು ನಡೆದವು. ಸಿಪಾಯಿ ಕೇವಲ್ ಸಿಂಗ್, ಸಿಪಾಯ್ ಪ್ಯಾರಾ ಸಿಂಗ್, ಲೆಪ್ಟೆನೆಂಟ್ ಸುಭಾಶ್ ಚಂದೇರ್, ಮೇಜರ್ ಬಿ. ಕೆ. ಪಂತ್ ಮುಂತಾದ ವೀರ ಸೈನಿಕರು ತಮ್ಮ ಸಾಹಸಗಳಿಂದ ಅಜರಾಮರರಾದರು.

೧೯೬೨ರ ನವೆಂಬರ್ ೨೦ರಂದು ಚೀನಾ ಯುದ್ಧ ವಿರಾಮ ಘೋಷಿಸುವುದರೊಂದಿಗೆ ಈ ಯುದ್ಧ ಕೊನೆಗೊಳ್ಳುತ್ತದೆ. ಆದರೆ ಈ ಯುದ್ಧ ಕಲಿಸಿದ ಪಾಠವು ಅಲ್ಲಿಗೆ ಕೊನೆಯಾಗಿರುವುದು ಮುಂದೊಂದು ದಿನ ಮತ್ತೇ ಇಂತಹದ್ದೆ ಯುದ್ಧ ನಡೆದದ್ದೆ ಆದರೆ ಇತಿಹಾಸದ ಪುನರಾವರ್ತನೆಯಾಗಲಿರುವ ಮುನ್ಸೂಚನೆ.

ಭಾರತೀಯ ಮನಸ್ಸುಗಳು ತಮಗೆ ಪಾಕಿಸ್ತಾನವನ್ನು ಹೊರತಾಗಿ ಬೇರೆಯೂ ಬಲಿಷ್ಠ ಶತ್ರುಗಳಿದ್ದರೆ ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತಿವೆ. ವಾಸ್ತವವಾಗಿ ಪಾಕಿಸ್ತಾನವು ಭಾರತಕ್ಕೆ ಶತ್ರು ರಾಷ್ಟ್ರವೇ ಅಲ್ಲ. ಇದಕ್ಕೆ ಪಾಕ್ ಜೊತೆ ನಡೆದ ನಾಲ್ಕು ಯುದ್ಧಗಳಲ್ಲಿ ಅದು ಮಣ್ಣು ಮುಕ್ಕಿದ ರೀತಿಯೇ ಸಾಕ್ಷಿ. ಆದರೆ ಪಾಕ್ ಏನು ಮಾಡಿದೆ, ಮಾಡುತ್ತಿದೆ, ಅದನ್ನು ಹೇಗೆ ಹಣಿಯುವುದು ಎಂಬುದಷ್ಟೆ ನಮ್ಮ ಚಿಂತೆ. ನಮ್ಮ ರಾಜಕೀಯ ಮುತ್ಸದಿಗಳಿಗೂ ಕೂಡ ಪಾಕ್ ವಿರುದ್ಧದ ದ್ವೇಷ ಕಾರಿ ಮತ ಕೊಯ್ಲು ಮಾಡುವ ವಿದ್ಯೆ ಚೆನ್ನಾಗಿ ಕರಗತವಾಗಿದೆ.

ಚೀನಾವನ್ನು ಭಾರತದ ಶತ್ರು ರಾಷ್ಟ್ರವೆಂದು ಒಪ್ಪುವುದು, ಬಿಡುವುದು ವ್ಯಕ್ತಿಯೊಬ್ಬನ ವಿವೇಚನೆಗೆ ಬಿಟ್ಟಿರುವುದು. ಆದರೆ ಇಂದು ಭಾರತಕ್ಕೆ ಮಿಲಿಟರಿ ಆತಂಕವಿರುವುದೇ ಆಗಿದ್ದರೆ ಅದು ಚೀನಾದಿಂದ ಮಾತ್ರ.

ಚೀನಾ ಎಲ್ಲ ರಂಗದಲ್ಲಿಯೂ ಭಾರತವನ್ನು ಹಿಂದಿಕ್ಕಿ ಸಾಗಿದೆ, ಸಾಗುತ್ತಿದೆ. ಭಾರತಕ್ಕಿಂತ ಮೂರು ಪಟ್ಟು ದೊಡ್ಡದಿರುವ ಚೀನಾದಲ್ಲಿ ನಮಗಿಂತ ೩ ಪಟ್ಟು ಕಡಿಮೆ ಜನಸಾಂದ್ರತೆ ಇದೆ. ನಮ್ಮಲ್ಲಿ ತಲಾ ಜಿಡಿಪಿ ೧,೩೮೯ ಅಮೆರಿಕನ್ ಡಾಲರ್ ಇದ್ದರೆ, ಚೀನಾದ್ದು ೫೫,೪೧೩ ಅಮೆರಿಕನ್ ಡಾಲರ್ ಇದೆ. ನಮ್ಮ ವಿದೇಶಿ ವಿನಿಮಯ ಮೀಸಲು ೨೯ ಮಿಲಿಯನ್ ಅಮೆರಿಕನ್ ಡಾಲರ್ ಇದ್ದರೆ ಚೀನಾದ್ದು ೩೧ ಕೋಟಿ ಅಮೆರಿಕನ್ ಡಾಲರ್ ಇದೆ. ನಾವು ನಮ್ಮ ರಕ್ಷಣೆಗಾಗಿ ೪೬.೮ ಬಿಲಿಯನ್ ಅಮೆರಿಕನ್ ಡಾಲರ್ ಖರ್ಚು ಮಾಡಿದರೆ ಚೀನಾ ೧.೪ ಟ್ರಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಖರ್ಚು ಮಾಡುತ್ತದೆ. ನಮ್ಮಲ್ಲಿ ೧೫ ಲಕ್ಷದಷ್ಟು ಸೈನಿಕರಿದ್ದರೆ ಚೀನಾದ ಬಳಿ ಒಂದು ಕೋಟಿ ಸೈನಿಕರಿದ್ದಾರೆ. ಒಂದು ವೇಳೆ ಭಾರತವನ್ನು ಪಾಕಿಸ್ತಾನದ ಜೊತೆ ಹೋಲಿಸಿದ್ದೇ ಆದರೆ ಮೇಲಿನ ಹೋಲಿಕೆಯಲ್ಲಿ ಚೀನಾ ಪಡೆದಿರುವ ಸ್ಥಾನವನ್ನು ಭಾರತ ಹೊಂದಿದೆ. ಪಾಕಿಸ್ತಾನ ಭಾರತದ ಸ್ಥಾನವನ್ನು ಪಡೆದಿದೆ. ಅಂದರೆ ಭಾರತಕ್ಕೆ ಪಾಕ್ ಹೇಗೆಯೋ ಹಾಗೆಯೇ ಚೀನಾಕ್ಕೆ ಭಾರತ!

ಅಭಿವೃದ್ಧಿ ಅಂಕಿಅಂಶಗಳ ವ್ಯಾಖ್ಯಾನದಲ್ಲಿ ಭಾರತ ಸೋತಿರುವುದು ನಿಜ. ಹಾಗೆಂದು ಚೀನಾ ಎಂದರೆ ಸ್ವರ್ಗ ಎಂದು ಭಾವಿಸಬೇಕಿಲ್ಲ. ಭಾರತ ಮಾನವ ಹಕ್ಕುಗಳಿಗೆ ಮಾರ್ಯಾದೆ ಕೊಟ್ಟು ಬೆಳೆಯುತ್ತಿದ್ದರೆ, ಚೀನಾ ಮಾನವಿಯತೆಯ ಸಮಾಧಿಯ ಮೇಲೆ ಅಭಿವೃದ್ಧಿಯ ಲಾಂಗ್ ಮಾರ್ಚ್ ಮಾಡುತ್ತಿದೆ, ತನ್ನ ಕೆಂಬಾವುಟವನ್ನು ಪಟಪಟಿಸುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ತುಣುಕು ಸಿಗದ, ೪೫ ಮಿಲಿಯನ್ ಜನರ ಹೆಣದ ಮೇಲೆ ಇಟ್ಟ ಮಹಾ ಹೆಜ್ಜೆಯಿಂದ, ಹಸಿವಿನಿಂದ ದೇಶದ ಅರ್ಧ ಜನರು ಸತ್ತರೆ, ಉಳಿದರ್ಧ ಜನರ ಹೊಟ್ಟೆ ತುಂಬಬಹುದು ಎಂಬ ಮಾವೋ ಪ್ರಣೀತ ಚಿಂತನೆಯಿಂದ ಕಟ್ಟಿದ ಮಹಾನ್ ಚೀನಾಕ್ಕಿಂತ ಮೇರಾ ಭಾರತ ಅದೇಷ್ಟೋ ವಾಸಿ.

ಚೀನಾದ ಮಧ್ಯೆ ಸ್ನೇಹ ಸಂಬಂಧವನ್ನು ಶಾಶ್ವತವಾಗಿಡಲು ಹೆಚ್ಚಿನ ಸಾಧ್ಯತೆಗಳನ್ನು ಹುಡುಕಬೇಕು ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ನಿಜ. ಆದರೆ ಆಧುನಿಕ ಚೀನಾ ನಂಬಿಕೆಗೆ ಅದೇಷ್ಟು ಅರ್ಹ ಎಂಬುದೇ ಈಗಿನ ಪ್ರಶ್ನೆ. ಏಕೆಂದರೆ ೧೯೫೦ರ ದಶಕದಲ್ಲಿ ಚೀನಾವು ಭಾರತದ ಜೊತೆ ಯಾವುದೆ ಗಡಿ ತಕರಾರಿಲ್ಲ ಎದು ಪದೇ ಪದೇ ಹೇಳುತ್ತಿದ್ದ ಸಂದರ್ಭದಲ್ಲಿ ಈ ಹೇಳಿಕೆಗಳ ಬಗ್ಗೆ ಜಾಗೃತೆ ವಹಿಸುವಂತೆ ಬರ್ಮಾದ ಆಗಿನ ಆಧ್ಯಕ್ಷರಾಗಿದ್ದ ಬಾ ಸ್ವೇ ನೆಹರುರಲ್ಲಿ ಹೇಳಿದ್ದರು ಎಂಬ ಗುಟ್ಟು ಇದೀಗ ಬಹಿರಂಗವಾಗಿದೆ. ಅದ್ದರಿಂದ ಸ್ನೇಹಕ್ಕೂ ಸಿದ್ಧ, ಸಮರಕ್ಕೂ ಬದ್ಧ ಎಂಬ ರೀತಿಯಲ್ಲಿಯೇ ಭಾರತ ಮತ್ತು ಚೀನಾದ ಸಂಬಂಧ ಆರಳಬೇಕಿದೆ.

ಇಂಡೋ-ಚೀನಾ ಯುದ್ಧ ಸಂಭವಿಸಿ ೫೦ ವರ್ಷಗಳು ಉರುಳಿದರು ಕೂಡ ಭಾರತ ಅದರಿಂದ ಕಲಿತ ಪಾಠವೇನು? ಇಂದಿಗೂ ದೇಶದಲ್ಲಿ ಅತ್ಯಂತ ಹೆಚ್ಚು ಭ್ರಷ್ಟಾಚಾರ ನಡಯುತ್ತಿರುವುದು ಸೇನೆಯಲ್ಲೇ ಎಂಬ ಮಾತು ಚಾಲ್ತಿಯಲ್ಲಿದೆ, ಈಗಾಲೇ ಅನೇಕ ಆರೋಪಗಳ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ. ದೇಶದ ಗಡಿಯಂಚಿನಲ್ಲಿರುವ ಸೈನಿಕನಲ್ಲಿ ಆಧುನಿಕ ಯುದ್ಧೋಪಕರಣವೇ ಇಲ್ಲ ಎಂಬ ಸಾಕಷ್ಟು ವರದಿಗಳಿವೆ. ಪ್ರತಿ ಬಜೆಟ್‌ನಲ್ಲಿಯೂ ಸೈನ್ಯದ ಆಧುನೀಕರಣಕ್ಕೆ ಎಂದು ನೀಡುವ ಹಣ ಎತ್ತ ಹೋಗುತ್ತಿದ್ದೆ, ಎಷ್ಟು ಆಧುನಿಕರಣ ಗೊಂಡಿದೆ ಎಂಬ ಸುಳಿವು ಕೂಡ ಸಿಗುತ್ತಿಲ್ಲ. ಮೇಲಾಧಿಕಾರಿಗಳ ದೌರ್ಜನ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ, ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸುತ್ತಿರುವ, ಸೈನಿಕರು ದಂಗೆ ಏಳುತ್ತಿರುವ ಸಾಕಷ್ಟು ನಿದರ್ಶನಗಳು ಕಾಣುತ್ತಿದ್ದೇವೆ.

ಅತ್ತ ಚೀನಾ ತನ್ನ ಗಡಿ ಪ್ರದೇಶಗಳಿಗೆ ರಸ್ತೆ, ರೈಲು ಸಂಪರ್ಕವನ್ನು ಲೀಲಾಜಾಲವಾಗಿ ನಿರ್ಮಿಸಿ, ಗಡಿಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದರೆ, ಭಾರತ ಮಾತ್ರ ತಾನು ಅಂತಹ ಕ್ರಮ ಕೈಗೊಂಡರೆ ಚೀನಾ ಏನು ಹೇಳಬಹುದು ಎಂಬ ಆತಂಕದಲ್ಲಿಯೇ ದಿನ ದೂಡುತ್ತಿದೆ.

೧೯೬೨ರ ಯುದ್ಧದ ಬಗ್ಗೆ ಸಿದ್ಧಪಡಿಸಲಾದ ಇಂದಿಗೂ ಅತ್ಯಂತ ರಹಸ್ಯವಾಗಿರುವ ಹೆಂಡರ್ಸನ್ ಬ್ರೂಕ್ಸ್-ಭಗತ್ ವರದಿಯಲ್ಲಿ ಭಾರತ ಈ ಯುದ್ಧದಲ್ಲಿ ಸೊಲೊಪ್ಪಲು ಶಸ್ತ್ರಾಸ್ತ್ರಗಳ ಕೊರತೆ ಪ್ರಮುಖ ಕಾರಣವಲ್ಲ ಬದಲಾಗಿ ಕೆಟ್ಟ ನಾಯಕತ್ವವೇ ಕಾರಣ ಎಂದು ಹೇಳಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು.

ಇರಬಹುದು, ಅಂದು ಒಬ್ಬರು ಕೃಷ್ಣ ಮೆನನ್ ಇದ್ದರು. ಅವರು ಆಗ ದೇಶದ ರಕ್ಷಣಾ ಸಚಿವರಾಗಿದ್ದರು. ದೇಶದ ಸೈನ್ಯದ ಪ್ರಧಾನ ಕಚೇರಿ ಸೇನಾ ಭವನಕ್ಕೆ ಹೋಗುವ ರಸ್ತೆಗೆ ಅವರ ಹೆಸರನ್ನಿಟ್ಟು ೧೯೬೨ರಲ್ಲಿ ದೇಶವನ್ನು ಸೋಲಿಸಿದಕ್ಕಾಗಿ ಅವರಿಗೆ ಗೌರವ ಸಲ್ಲಿಸಲಾಗಿದೆ! ಆದರೆ ಇಂದು ಎಲ್ಲೆಲ್ಲೂ ಅಂತಹವರೇ ತುಂಬಿ ತುಳುಕುತ್ತಿದ್ದಾರೆ. ಹಾಗಿರುವಾಗ ಮತ್ತೆ ಚೀನಾ ನಮ್ಮ ಮೇಲೆ ದಂಡೆತ್ತಿ ಬಂದದ್ದೆ ಆದರೆ…

ಬಹುಶಃ ಇತಿಹಾಸದಿಂದ ಮತ್ತು ತನ್ನ ತಪ್ಪುಗಳಿಂದ ಪಾಠ ಕಲಿಯದಿರುವುದಕ್ಕಿಂತ ನಾಚಿಕೆಗೇಡು ಬೇರೆನು ಇರಲಾರದು.

**********************

1 ಟಿಪ್ಪಣಿ Post a comment
  1. ನವೆಂ 16 2012

    ಮಾನ್ಯ ರಾಖೇಶ್ ರವರೇ ಒಳ್ಳೆಯ ಮಾಹಿತಿ ನೀಡಿದ್ದೀರಿ.ನಮ್ಮ ಜನ ನಾಯಕರು, ಹಿಂದಾಗಿರುವ ಘಟನೆಗಳನ್ನು ನೆನೆದು.ಮುಂದೆ ಹೆಜ್ಜೆ ಇಡಬೇಕು.ನಮ್ಮ ಸೈನಿಕರು ಹುಮ್ಮಸ್ಸಿನಿಂದ ಹೋರಾಡುತ್ತಾರೆ.ಆದರೆ ಅವರಿಗೆ ಸವಲತ್ತುಗಳು ಬೇಕಲ್ಲ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments