ಗೆದ್ದಿದ್ದು ಕಾಂಗ್ರೆಸ್ಸ್ ಅಲ್ಲ ’ಸೋತಿದ್ದು ಬಿಜೆಪಿ’
– ರಾಕೇಶ್ ಶೆಟ್ಟಿ
ಮೇ೮ರಂದು ರಾಜ್ಯದ ರಾಜಕೀಯ ಪಂಡಿತರ ಲೆಕ್ಕಾಚಾರಗಳೆಲ್ಲ ತಲೆಕೆಳಕಾಗಿ ಖುದ್ದು ಕಾಂಗ್ರೆಸ್ಸಿಗರೇ ತಮ್ಮ “ಕೈ” ಚಿವುಟಿ ಚಿವುಟಿ ಕನಸೋ ನನಸೋ ಅನ್ನುವಷ್ಟರಲ್ಲಿ ಕಾಂಗ್ರೆಸ್ಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.ಪರಮೇಶ್ವರ್ ಸೋಲಿನಿಂದ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿಯೂ ಆಗಿಬಿಟ್ಟರು.
ಅತ್ತ ಕಾಂಗ್ರೆಸ್ಸ್ ಗೆದ್ದಿದ್ದೇ ತಡ,ಇತ್ತ ನಮ್ಮ ನಾಡಿನ ಪ್ರಗತಿಪರರು,ಬುದ್ದಿಜೀವಿಗಳು,ಸಾಕ್ಷಿಪ್ರಜ್ನೆಗಳು ಚುನಾವಣಾ ಫಲಿತಾಂಶದ ಬಗ್ಗೆ ಬರೆಯಲು ಕುಳಿತರು ನೋಡಿ. ಶುರುವಾಯ್ತು ಪದಪುಂಜಗಳ ಪಟ್ಟಿ.ಹೆಚ್ಚು ಕಡಿಮೆ ಆ ಎಲ್ಲಾ ಬರಹಗಳೂ ಈ ಧಾಟಿಯಲ್ಲಿದ್ದವು.
“ಸಂಘ ಪರಿವಾರದ ಪುಂಡಾಟಿಕೆಯಿಂದ,ವಿಷಮಯವಾದ ಹಿಂದುತ್ವದ ಅಜೆಂಡಾ,ಮತಾಂಧತೆ ಇತ್ಯಾದಿ ಇತ್ಯಾದಿಗಳಿಂದ ಅಲ್ಪಸಂಖ್ಯಾತರ ಜೀವನ ನರಕವಾಗಿದ್ದ ಕರ್ನಾಟಕ”ವನ್ನು ನೋಡಿ ಸಹಿಸಲಾಗದ ನಾಡಿನ ಪ್ರಜ್ಞಾವಂತ, ಪ್ರಗತಿಪರ,ಸಂವೇದನಾಶೀಲ,ಸಾಕ್ಷಿಪ್ರಜ್ನೆ ಕನ್ನಡಿಗರು ಕಾಂಗ್ರಸ್ ಪರ ನಿಂತರಂತೆ…!
ನಿಜವಾಗಿಯೂ ಕನ್ನಡಿಗರು ಕಾಂಗ್ರೆಸ್ಸ್ ಪರ ಮತ ಚಲಾಯಿಸದರೆ ಅಂತ ನೋಡ ಹೊರಟರೆ, ೬ ಸ್ಥಾನ ಗೆದ್ದ ಕೆ.ಜೆ.ಪಿ ೩೯ ಸ್ಥಾನಗಳಲ್ಲಿ ಎರಡನೇ ಸ್ಥಾನದಲ್ಲಿದ್ದರೆ,ಬಿ.ಜೆ.ಪಿ ಸುಮಾರು ೩೦ ಸ್ಥಾನಗಳಲ್ಲಿ ಎರಡನೇ ಸ್ಥಾನದಲ್ಲಿದ್ದರೆ,ಬಿ.ಆಸ್.ಆರ್ ಗೆದ್ದಿದ್ದು ೪ ಸೀಟುಗಳನ್ನು.ಅಂದರೆ ಬಿಜೆಪಿ+ಕೆಜೆಪಿ+ಬಿ.ಆಸ್.ಆರ್ ನಡುವೆ ಮತಗಳು ಚೆಲ್ಲಾಪಿಲ್ಲಿಯಾಗಿರುವುದರಿಂದ ಕಾಂಗ್ರೆಸ್ಸು ಗೆದ್ದಿದೆ.ಬಹುಷಃ ಬಿಜೆಪಿಯಿಂದ ಯಡ್ಯೂರಪ್ಪ ಹೊರಹೋಗದಿದ್ದರೆ ೮೦ರ ಹತ್ತಿರ ಬಂದು ತಲುಪುತಿತ್ತು.ಇನ್ನೂ ಸರಳವಾಗಿ ಹೇಳಬೇಕೆಂದರೆ ಗೆದ್ದಿದ್ದು ಕಾಂಗ್ರೆಸ್ಸ್ ಅಲ್ಲ ’ಸೋತಿದ್ದು ಬಿಜೆಪಿ’ ಅಷ್ಟೆ.ಗೆಲ್ಲಲ್ಲಿಕ್ಕೆ ಕಾಂಗ್ರೆಸ್ಸ್ ಏನಾದರೂ ವಿರೋಧ ಪಕ್ಷ ಕೆಲಸವನ್ನಾದರೂ ಸರಿಯಾಗಿ ನಿಭಾಯಿಸಿತ್ತೇ? ಇದೊಂತರ ಕೋಗಿಲೆ ಗೂಡಲ್ಲಿ ಕಾಗೆ ಮೊಟ್ಟೆ ಇಟ್ಟ ಹಾಗೆ …!!! ಬಿಜೆಪಿಯ ಭ್ರಷ್ಟಾಚಾರವನ್ನು ಬಯಲಿಗೆಳೆದು ಸಮರ್ಥ ವಿರೋಧ ಪಕ್ಷದ ಕೆಲಸ ಮಾಡಿದ್ದು ಜೆಡಿಎಸ್,ಗೆದ್ದಿದ್ದು ಕಾಂಗ್ರೆಸ್ಸ್ …!!!
ಇನ್ನು ಬಿಜೆಪಿ ಸೋಲಿಗೆ ಕಾರಣಗಳನ್ನು ದುರ್ಬೀನು ಹಾಕಿಕೊಂಡೇನು ಹುಡುಕಬೇಕಿಲ್ಲ.ಸಾಲು ಸಾಲು ಡಿ-ನೋಟಿಫಿಕೇಷನ್,ಭ್ರಷ್ಟಾಚಾರದ ಹಗರಣಗಳು,ಬ್ಲೂ-ಫಿಲಂ ಕರ್ಮಕಾಂಡ ಅದು ಇದು ಅಂತಲೇ ಪಟ್ಟಿ ಮಾಡಿಬಿಡಬಹುದು.ಇವೆಲ್ಲಕ್ಕೂ ಕಳಶವಿಟ್ಟಂತೆ ಬಿಜೆಪಿಯ ಮಾಸ್ ನಾಯಕ ಯಡ್ಯೂರಪ್ಪರನ್ನು, ಬೆಂಗಳೂರಿನ ತನ್ನ ಕ್ಷೇತ್ರವೊಂದನ್ನು ಬಿಟ್ಟು ಇನ್ನೆಲ್ಲೂ ನಿಂತು ಒಂದು ಸಂಸದನ ಸ್ಥಾನ ಗೆಲ್ಲಲಾಗದ ರಾಷ್ಟ್ರೀಯ ನಾಯಕ(?)ರೊಬ್ಬರ ಕುತಂತ್ರದಿಂದ ಪಕ್ಷ ತೊರೆದು ಹೋಗುವಂತೆ ಮಾಡಿದ್ದು ಮುಖ್ಯ ಕಾರಣ.ಇನ್ನು ದಕ್ಷಿಣ ಕನ್ನಡದಲ್ಲಿ ಹಾಲಾಡಿ,ಯೋಗಿಶ್ ಭಟ್,ನಾಗರಾಜ್ ಶೆಟ್ಟಿ ಅಂತವರ ವಿಷಯದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ನಡೆದುಕೊಂಡ ರೀತಿಯಿಂದ ಮತ್ತು ಸದಾನಂದ ಗೌಡರನ್ನ ವಿನಾಕಾರಣ ಕುರ್ಚಿಯಿಂದ ಇಳಿಸಿದ್ದು ಬಿಜೆಪಿಗೆ ಮುಳುವಾಯಿತು.
ಇವೇ ಬಿಜೆಪಿಯ ಸೋಲಿಗೆ ಪ್ರಮುಖ ಕಾರಣಗಳೇ ಹೊರತು, ಈ ವಿಮರ್ಶಕರು (ಪ್ರಜ್ನಾವಂತರು?) ಹೇಳುತ್ತಿರುವ ಉಸಿರುಕಟ್ಟಿಸುವ,ದ್ವೇಷಮಯ,ಅಲ್ಪಸಂಖ್ಯಾತರ ಜೀವನ ನರಕವಾಗಿಸಿದ್ದ,ಪುಂಡಾಟಿಕೆಯಂತ ಮತ್ತಿತ್ತರ ಅಲಂಕಾರಿಕ ಪದಪುಂಜಗಳಲ್ಲ.ಯಾರಾದರೂ ದೇಶ ಬಿಟ್ಟು ೫ ವರ್ಷ ದುಡಿಯಲು ಹೊರದೇಶಕ್ಕೆ ಹೋದವನು ಇವರ ಇಂತ ಪದಪುಂಜಗಳುಳ್ಳ ಲೇಖನವನ್ನು ಓದಿ ಗಾಬರಿ ಬಿದ್ದು ಮತ್ತೆ ಈ ದೇಶದ ಕಡೆ ತಲೆಹಾಕದಿರುವ ಸಾಧ್ಯತೆಗಳಿವೆ ಅಂತ ಗೆಳೆಯರೊಬ್ಬರು ಹಾಸ್ಯ ಮಾಡುತಿದ್ದರು.ಆದರೆ,ಅದು ಬರಿ ಹಾಸ್ಯವಾಗಿರಲಿಲ್ಲ ಅದರೊಳಗೊಂದು ಕಟು ಸತ್ಯವೂ ಇತ್ತು. ಈ ವಿಮರ್ಶಕರು (ಪ್ರಜ್ನಾವಂತರು?) ಇಲ್ಲದ್ದನ್ನೆಲ್ಲ ಇರುವಂತ ಕಲ್ಪಿಸಿ ಬರೆದರೆ ನಮ್ಮ ರಾಜ್ಯದ ಚಿತ್ರಣ ಬೇರೆಯವರ ದೃಷ್ಟಿಯಲ್ಲಿ ಹೇಗೆ ಕಂಡೀತು? ಈ ಚುನಾವಣೆಯ ಸಂದರ್ಭ ಕೋಲಾರದಲ್ಲಿ ಕಾಂಗ್ರೆಸ್ಸ್ ಬೆಂಬಲಿಗರು ಮಚ್ಚು-ಲಾಂಗುಗಳನ್ನು ಸಾರ್ವಜನಿಕವಾಗಿ ಝಳಪಿಸಿದ್ದು ನೆನಪಿದೆಯಲ್ಲಾ? ಸ್ವಲ್ಪ ಯೋಚಿಸಿ.ಒಂದು ವೇಳೆ ಆ ಊರು ಕೋಲಾರದ ಬದಲಿಗೆ ನಮ್ಮ ದಕ್ಷಿಣ ಕನ್ನಡವಾಗಿದ್ದು, ಆ ಪುಂಡರು ಬಿಜೆಪಿಯವರಾಗಿದ್ದರೆ ಇಡಿ ಕರ್ನಾಟಕದ ಸಾಕ್ಷಿಪ್ರಜ್ನೆಗಳು,ಪ್ರಜ್ನಾವಂತರು(?) ಆಕಾಶ-ಭೂಮಿ ಒಂದು ಮಾಡುತ್ತಿರಲಿಲ್ಲವೇ? ಆದರೆ ಅದು ಸಂಘಪರಿವಾರದ ಪ್ರಯೋಗಶಾಲೆಯಗಿರದೆ ಕೋಲಾರವಾಗಿತ್ತು ನೋಡಿ ಇವರೆಲ್ಲರ ಬಾಯಿಗಳು ಬಿದ್ದು ಹೋಗಿದ್ದವೇನು?
ಇದು ಚುನಾವಣೆಯ ವಿಷಯವಾದರೆ, ಮುಖ್ಯಮಂತ್ರಿಯಾದ ಸಿದ್ದು ಮೊದಲ ದಿನವೇ ಸಿಕ್ಸರ್ ಹೊಡೆದರು.ಮೊದಲ ದಿನದ ಪ್ರಮುಖ ಘೋಷಣೆಯಾದ ೧ ರೂಪಾಯಿಯ ಅಕ್ಕಿಯದೇ ಸುದ್ದಿಯಾಯಿತು.ಸರ್ಕಾರದ ಯೋಜನೆಗಳು ಜನರಿಗೆ ಸ್ವಾವಲಂಬಿ,ಸ್ವಾಭಿಮಾನಿ ಬದುಕನ್ನು ಕಟ್ಟಿಕೊಡುವಂತಿರಬೇಕೆ ಹೊರತು ಸರತಿ ಸಾಲಿನಲ್ಲಿ ನಿಂತು ಕೈಯೊಡ್ಡುತ್ತಲೇ ಜೀವನ ಸವೆಸಿ ಸಮಾಧಿ ಸೇರಿಸಬಾರದು.ಪಕ್ಕದ ತಮಿಳುನಾಡಿನಲ್ಲಿ ಜನ ಕೆಲಸಕ್ಕೆ ಬರುವುದಿಲ್ಲ ಅಂತ ಸ್ನೇಹಿತರೊಬ್ಬರು ಗೋಳಾಡುತಿದ್ದರು.ಯಾಕೆ ಅಂತ ಕೇಳಿದರೆ,ಸರ್ಕಾರ ಎಲ್ಲ ಕಡಿಮೆ ಬೆಲೆಗೆ ಕೊಡುತ್ತಪ್ಪ … ದುಡ್ಡು ಬೇಕೆನಿಸಿದ ದಿನವಷ್ಟೆ ಬಂದು ಹೋಗುತ್ತಾರೆ ಅಂತ.
೧ ರೂಪಾಯಿ ಅಕ್ಕಿ ಕೊಡಲಿ,ಆದರೆ ಜನರಿಗೆ ಬದುಕು ಕಟ್ಟಿಕೊಡಬಲ್ಲ ಧೀರ್ಘಾವಧಿಯ ಯೋಜನೆಗಳು ಬರಬೇಕು.ಬಡವರ ಮಕ್ಕಳು ನಾಳೆ ಬಡವರಾಗೇ ಉಳಿದು ಒಂದು ರೂಪಾಯಿಯ ಅಕ್ಕಿ ತಿನ್ನಬಾರದಲ್ಲವೇ?ಹಸಿದವರಿಗೆ ಅನ್ನ ಕೊಡುವುದರಲ್ಲೇನು ತಪ್ಪಿಲ್ಲ.ಆದರೆ ಅವರು ಜೀವನ ಪರ್ಯಂತ ಕೈಚಾಚಿ ಕೊಂಡೆ ಸಮಾಧಿ ಸೇರುವ ಬದಲಿಗೆ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ದಾರಿಯನ್ನು ತೋರಿಸಬೇಕು ಅನ್ನುವುದಷ್ಟೇ ಕಳಕಳಿ. ಬಡವರ ಬಗ್ಗೆ ಮಾನವ ಸಹಕ ಕರುಣೆ ತೋರುತ್ತಲೇ ಬಡತನ ನಿವಾರಣೆಯ ಬಗ್ಗೆಯೂ ಯೋಚಿಸುವತ್ತ ಸಿದ್ದು ಗಮನಹರಿಸುತ್ತಾರೆಂಬ ಆಶಯವಿಟ್ಟುಕೊಳ್ಳೋಣವೆಂದರೆ ಕಡಿಮೆ ಬೆಲೆಗೆ ಸಾರಾಯಿ ಕೊಡುವ ಉದ್ದೇಶವಿದೆಯಂತೆ? ಇದೇ ಏನು ಸಮಾಜವಾದಿ,ಸರ್ವರಿಗೂ ಸಮಬಾಳು,ಸರ್ವರಿಗೂ ಸಮಪಾಲು ನೀಡುವ ನೀತಿಯೆಂದರೆ?
ಸಿದ್ದು ಸಿಎಂ ಆದಾಗ ಅವರ ಅಭಿಮಾನಿಗಳು ಎರಡನೇ ದೇವರಾಜ ಅರಸು ಬಂದ್ರು ಅನ್ನುವಷ್ಟರ ಮಟ್ಟಿಗೆ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.ಅರಸು ಅವರು ಉಳುವವನೇ ಭೂಮಿಯ ಒಡೆಯ ಅಂತೇಳಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದಾರೆ.ಸಿದ್ದು ಅವರು ಕಡೇ ಪಕ್ಷ ಶಿಕ್ಷಣ ಕ್ಷೇತ್ರವನ್ನು ಕ್ಯಾಪಿಟೇಶನ್ ಕುಳಗಳಿಂದ ಮುಕ್ತಗೊಳಿಸುವತ್ತ ಹೆಜ್ಜೆ ಹಾಕಬಲ್ಲರೇ?
ಇನ್ನೈದು ವರ್ಷಗಳಲ್ಲಿ ಸಿದ್ದು ಏನೇನು ಮಾಡುತ್ತಾರೋ ನೋಡೋಣ.ಆಲ್ ದಿ ಬೆಸ್ಟ್ ಸಿದ್ದು.
ಚಿತ್ರ ಕೃಪೆ : http://www.thehindu.com
ಬಿಜೆಪಿಯವರು ಯಾವ ಸ್ವಾಭಿಮಾನದ ದಾರಿ ತೋರಿಸಿದ್ದರು ರಾಕೇಶ್. ಸ್ವಲ್ಪ ಹೇಳಿ. ಹೌದು ಕರಾವಳಿಯಲ್ಲಿ ಕೋಮುವಾದಿಗಳ ಹಾವಳಿ ವಿಪರೀತ. ಕೋಲಾರದ ಒಂದು ಉದಾಹರಣೆ ನಿಮ್ಮ ಹಿಡೆನ್ ಅಜೆಂಡಾವನ್ನು ಬಯಲುಮಾಡುತ್ತದೆ.
ಈ ಐದು ವರ್ಷದಲ್ಲಿ ಜನ ಟಿವಿ ಧಾರವಹಿಗಳಿಗಿಂತ ಬಿಜೆಪಿಯವರ ನಾಟಕವನ್ನೇ ನೋಡಿದ್ದೇ ಹೆಚ್ಚು.ಅದೇ ಇವರ ಸಾಧನೆ ಕೂಡ.ನಾನು ಹಿಂದಿನ ಬಿಜೆಪಿ ಸರ್ಕಾರವೇನೋ ಘನಕಾರ್ಯ ಮಾಡಿತ್ತು ಅಂತ ಸಮರ್ಥಿಸಿಕೊಂಡಿಲ್ಲ.ನನ್ನ ಆಕ್ಷೇಪವಿರುವುದು ಇಲ್ಲದಿರುವುದೆನ್ನಲ್ಲ ಬರೆದು ಭಯ ಹುಟ್ಟಿಸುವ ಬುದ್ದಿಜೀವಿಗಳ ಬಗ್ಗೆಯಷ್ಟೆ.
ಹ್ಮ್.ನನಗೇ ಗೊತ್ತಿಲ್ಲದ ನನ್ನ ಹಿಡನ್ ಅಜೆಂಡಾದ ಬಗ್ಗೆ ಹೇಳಿ ಸ್ವಲ್ಪ ತಿಳಿದುಕೊಳ್ಳುವ.
ಸ್ವಾಮೀ ವಸಂತರೆ, ಬೀಜೇಪಿಯವರು ಬಡವರಿಗೆ ಸ್ವಾಭಿಮಾನದ ದಾರಿ ತೋರಿಸಿದ್ದಾರೆಂದು ರಾಕೇಶ್ ಈ ಲೇಖನದಲ್ಲಿ ಹೇಳಿಲ್ಲ. ಕೋಲಾರದ ಉದಾಹರಣೆ ಯಾಕೆ ಸರಿಯಾಗಿಲ್ಲ? ಆ ಬಗ್ಗೆ ಮಾಧ್ಯಮಗಳು ಯಾಕೆ ಮೌನವಾಗಿವೆ?
ಅಬ್ಬಬ್ಬಾ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರಕಾರ್ಯ ಅತ್ಯಂತ ಚೊಕ್ಕವಾಗಿ ಮಾಡಿದವರು ಕನ್ನಡ ಮಾಧ್ಯಮಗಳು. ಅತ್ತ ವಿಜಯಕರ್ನಾಟಕದಲ್ಲಿ ದಿಲ್ಲಿ ಡೈರಿ ಬರೆಯುವವರೂ ಇತ್ತ ಪ್ರಜಾವಾಣಿಯಲ್ಲಿ ವಾರಕ್ಕೊಮ್ಮೆ ಅನಾವರಣಗೊಳ್ಳುವವರೂ ತಮ್ಮ ಕೆಲಸ ಅಚ್ಚುಕಟ್ಟಾಗಿ ಮಾಡಿದರು.. ಈ ಕೆಲಸಕ್ಕೆ ಸಿದ್ದು ಕೈಯಿಂದ ರಿಟರ್ನ್ ಗಿಫ್ಟ್ ಸಿಕ್ಕೇ ಬಿಟ್ಟಿತಲ್ಲ ? ಅನಾವರಣದ ಪತರಕರ್ತರನ್ನು ಸಿದ್ದು ತಮ್ಮ ಮಾಧ್ಮ ಸಲಹೆಗಾರನ್ಣಾಗಿಸಿ ಕ್ಯಾಬಿನೆಟ್ ಸಚಿವ ಸ್ಥಾನ ಮಾನ ಕೊಟ್ಟ್ಟ ಸುದ್ದಿ ಪತ್ರಿಕೆಗಆಳ್ಲ್ಲಿ ಚಿಕ್ಕದಾಗಿ ಬ೦ತು
ತಮ್ಮ “ಕೈ”ಲಾದಷ್ಟು ಬರೆದು ಕರಾವಳಿಯಲ್ಲಿ ಮಿಡಿಗಳು ಕಾಣೆಯಾಗುತ್ತಿವೆ ಅಂತ ಮನಮಿಡಿಯುವಂತೆ ಬರೆದು ಕ್ಯಾಬಿನೆಟ್ ದರ್ಜೆಯ ಪದವಿ ಪಡೆಯುವುದು ಸುಲಭದ ಮಾತೇ? ಎಷ್ಟು ಕಷ್ಟಪಟ್ಟಿರಬೇಡ ಪಾಪ
ಹೌದು ಸುಲಭದ ವಿಷಯ ಅಲ್ಲ. ಆದರೆ ಕೈ ಕೆಸರಾದ್ದಕ್ಕೆ ಬಾಯಿ ಮೊಸರೂ ಆಯಿತಲ್ವಾ 🙂
ಈ ‘ಪ್ರಜ್ಞಾವಂತ, ಪ್ರಗತಿಪರ, ಸಾಕ್ಷಿಪ್ರಜ್ಞೆ’ಗಳಲ್ಲಿ ಹೆಚ್ಚಿನವು ಕಳೆದೆಲ್ಲ ವರ್ಷಗಳಲ್ಲಿ ಕಮ್ಯುನಿಷ್ಟ ಒಲವಿನವಾಗಿದ್ದವು.. ಕಮ್ಯುನಿಷ್ಟ್ ಪಕ್ಷ ದ ಅವನತಿಯ ಸೂಚನೆ ಸಿಕ್ಕ ಮೇಲೆ ಈ ಎಲ್ಲ ‘ಪ್ರಜ್ಞೆ’ಗಳು ಕಾಂಗ್ರೇಸ್ ಗೆ ವಲಸೆ ಹೋಗುತ್ತಿವೆ. ಈ ವಲಸೆ ಕಾರ್ಯಕ್ರಮಕ್ಕೆ ಬಗೆ ಬಗೆಯ ಸಮರ್ಥನೆ. ಈಗೀಗ ಅವರದ್ದು ರಾಜ್ಯ/ದೇಶವನ್ನು ಕೋಮುವಾದಿಗಳಿಂದ ರಕ್ಷಿಸುವ ಏಕೈಕ ಹಂಬಲ ಮತ್ತು ಅದಕ್ಕಾಗಿಯೇ ಅವರ ತನು ಮನ ಪೆನ್ನು ಮುಡಿಪು.
ನಾನು ಗಮನಿಸಿದ ಇನ್ನೊಂದು ವಿಷಯವೆಂದರೆ ಈ ಲೇಖನದಲ್ಲಿ ಯಡಿಯೂರಪ್ಪನ ಬಗ್ಗೆ ಸಹಾನುಭೂತಿ ಯಾಕೆಂದು ಗೊತ್ತಾಗಲಿಲ್ಲ. ಇವತ್ತು ಸಾಕಷ್ಟು ಜನ ಬಿಜೆಪಿ ಗೆ ಮತ ಹಾಕದಿದ್ದುದೇ ಈವಯ್ಯನ ಬ್ರಷ್ಟಾಚಾರದ ಮಹಿಮೆಯಿಂದ, ಸ್ವಾರ್ಥಕ್ಕೆ ಏನು ಮಾಡಲು ಹೇಸದ ನೀತಿಯಿಂದ. .ಕೊನೆಗಾದರೂ ಯಡಿಯೂರಪ್ಪ ಮಾಡಿದ ಒಳ್ಳೆಯ ಕೆಲಸವೆಂದರೆ ಬಿಜೆಪಿಯನ್ನು ಕೊರೆಯುತ್ತಿದ್ದ, ರಾಡಿ ಎಬ್ಬಿಸಿದ ಕೆಲವಷ್ಟಾದರೂ ಕ್ರಿಮಿ-ಕೀಟಗಳನ್ನು ತೆಗೆದುಕೊಂಡು ಪಾರ್ಟಿ ಬಿಟ್ಟಿದ್ದು. ಇವರ ಬಗ್ಗೆ ಸಹಾನುಭೂತಿ ತೋರಿಸುವುದು, ಇದ್ದಿದ್ದರೆ ಇನ್ನಷ್ಟು ಸೀಟು ಗೆಲ್ಲುತ್ತಿದ್ದರು ಎಂಬ ಆಸೆ ಇಟ್ಟುಕೊಳ್ಳುವುದು..ತಮ್ಮ ಕಾಲ ಮೇಲೆ ತಾವು ಕಲ್ಲು ಹಾಕಿಕೊಂಡಂತೆ. ಬಿಜೆಪಿ ಈಗ ಪರಮ ಸ್ವಚ್ಛವಾಗಿಬಿಟ್ಟಿದೆಯೆಂದೇನಲ್ಲ..ಇನ್ನೂ ಸ್ವಚ್ಚವಾಗಬೇಕಾದದ್ದು ಬೇಕಾದಷ್ಟಿದೆ.
ಇನ್ನು ಅಡ್ವಾನಿ ಅಚ್ಚುಮೆಚ್ಚಿನ ಶಿಷ್ಯ, ಪರಮ ಕುತಂತ್ರಿ ಬೆಂಗಳೂರಿನ ಸಂಸದರ ಬಗ್ಗೆಯಂತೂ ಹೇಳುವುದೇ ಬೇಡ. ಧವಸ ಧಾನ್ಯವಿಲ್ಲದಿದ್ದರೆ ಅಡುಗೆ ಮನೆಯತ್ತ ಇಣುಕಿ ನೋಡದಂತಹ, ಆದರೆ ಘಮ ಘಮ ಪರಿಮಳ ಬಂದು, ತಟ್ಟೆ ಇಟ್ಟ ಶಬ್ದ ಕೇಳಿದ ಕೂಡಲೇ, ಕೈ ಕಾಲು ತೊಳೆದು ಊಟಕ್ಕೆ ಬಂದು ಕೂಡುವಂತಹ ಈ ಮಹಾನುಭಾವ ಈಗ ಯಾರ ಕಣ್ಣಿಗೂ ಕಾಣುತ್ತಿಲ್ಲ..ಐ ಮೀನ ನಕ್ಕು ಹಲ್ಲು ತೋರಿಸುತ್ತಿಲ್ಲ!.
ಸಂಘದಲ್ಲಿರುವ, ಹಿಂಬದಿ ಸೀಟನಲ್ಲಿ ಕುಳಿತು ಚಾಲನೆ ಮಾಡುವುದರಲ್ಲಿ ನಿಷ್ಣಾತ ರಾದ ಕೆಲವರು ಆಗಲೂ ಮುಖ ತೋರಿಸುತ್ತಿರಲಿಲ್ಲ.ಈಗಲೂ ತೋರಿಸುತ್ತಿಲ್ಲ. ಆಷ್ಟರ ಮಟ್ಟಿಗೆ ಈ ಎಲ್ಲ ‘ಜಿ’ ಗಳಿಗೆ ಪ್ರಾಮಾಣಿಕತೆಯಿದೆ!.
ರಾಡಿಯೆದ್ದಿದ್ದ ಬಿಜೆಪಿ ಅಧಿಕಾರದಿಂದ ಇಳಿದದ್ದು ಒಳ್ಳೆಯದೇ ಆಯಿತು..ಇದು ಆತ್ಮಾವಲೋಕನಕ್ಕೆ ಸಮಯ..ಇಷ್ಟು ದಿನ ಉಂಡಿದ್ದನ್ನು ಜೀರ್ಣಿಸಿಕೊಳ್ಳಲು , ಕೊಬ್ಬಿದ್ದನ್ನು ಕರಗಸಿಕೊಳ್ಳಲು ಸಮಯ ಬೇಕು. ಬೇಸರ ಪಡುವಂತದ್ದು ಏನೂ ಇಲ್ಲ.
ಹೌದು ನೀವು ಹೇಳಿದಂತೆ ಸಾಕ್ಷಿಪ್ರಜ್ಞೆ ಪ್ರಗತಿಪರ ಇತ್ಯಾದಿಗಳೆಲ್ಲ ಕಾಂಗ್ರೆಸ್ ಶಂಖ ಊದುವ ಪರಿಪಾಟ ಶುರುಮಾಡಿದ್ದಾರೆ . ಕಾಂಗ್ರೆಸ್ನಲ್ಲಿ ‘ಸಾಮಾಜಿಕ ನ್ಯಾಯ’ ಬಹಳ ಉತ್ತಮವಾಗಿದೆಯೆಂದು ಬೇರೆ ಬೇರೆ ಸಂದರ್ಭಗಳಲ್ಲಿ ಅಪ್ಪಣೆಗಳನ್ನೂ ಕೊಡಿಸಿದ್ದಾರೆ..
ಇನ್ನು ಕರ್ನಾಟಕ ಬೀಜೇಪಿಗೂ ಕಾಂಗ್ರೆಸ್ ಮತ್ತು ಯಾತರ್ ಪಾರ್ಟಿಗಳಿಗೂ ಯಾವುದೇ ವ್ಯತ್ಯಾಸ ನನಗಂತೂ ಕಾಣುತ್ತಿಲ್ಲ.. ಎಲ್ಲ ಪಕ್ಷಗಳಲ್ಲೂ ಎಷ್ಟು ತಿಂದರೂ ಹಸಿವು ಹಿಂಗದ ಬಕಾಸುರರದ್ದೇ ಕಾರು ಬಾರು.. ಇನ್ನು ಕೇಂದ್ರದತ್ತ ಕಣ್ಣು ಹಾಯಿಸಿದರೆ ಅಲ್ಲೂ ಭರವಸೆಯ ಮುಖಗಳೊ೦ದೂ ಇಲ್ಲ.. ಇರುವ ಕೆಲವು ಭರವಸೆಯ ಮುಖಗಳು ಸದ್ಯಕ್ಕಂತೂ ರಾಜ್ಯ ರಾಜಕಾರಣಕ್ಕೆ ಸೀಮಿತವಾಗಿವೆ (ಮೋದಿ, ಶಿವರಾಜ ಚೌಹಾನ್ ಖಂಡೂರಿ ಇತ್ಯಾದಿ)
ಹೌದು, ಬಿಜೆಪಿ ಸರಕಾರ ಎಂಬುದು ಕಳ್ಳರ ಕೂಟವಾಗಿತ್ತು. ಈಗಿರುವವರು ಕನಿಷ್ಟ ಲೋಕಸಭಾ ಚುನಾವಣೆ ಆಗುವವರೆಗೆ ದೋಚುವುದನ್ನು ಸುರು ಮಾಡಲಿಕ್ಕಿಲ್ಲ!
[……ಅದಕ್ಕಾಗಿಯೇ ಅವರ ತನು ಮನ ಪೆನ್ನು ಮುಡಿಪು……]
ಏನ್ ಸಾರ್, ಧನ ಮುಡಿಪು ಇಡಲ್ವಾ ಅವರು? 🙂
ಧನ ನೀವು ಕೊಟ್ಟರೆ ತೊಗೊತಾರೆ!..ದೇಣಿಗೆ ಪಾವತಿ ಕೊಡ್ತಾರೆ.. ಜನರ ದುಡ್ಡಿನಲ್ಲಿಯೇ ಜನರಿಗಾಗಿ ಹೋರಾಟ!.:).
ನಿಮ್ಮ ಹತ್ರ ದನ ಇದ್ರೂ ಹೇಳಿ..ಎಲ್ಲಿಗೆ ಮುಟ್ಟಿಸಬೇಕು ಅಂತ ಆಡ್ರೆಸ್ ಕೊಡ್ತಾರೆ.. ಬೇರೆಯವರ ಆಹಾರ ಹಕ್ಕುಗಳ ಕುರಿತು ಕೂಡ ಈ ಜನ ಹೋರಾಟ ಮಾಡ್ತಾರೆ.
ಗೆದ್ದಿದ್ದು ಕಾಂಗ್ರೆಸ್ಸ್ ಅಲ್ಲ ’ಸೋತಿದ್ದು ಬಿಜೆಪಿ’ ಎಂಬುದು ನಿಜ.