ಸಾವಿರ ರುಪಾಯಿಯ ಫೋಟೋ ಮತ್ತು ಲಕ್ಷದ ಪ್ರಚಾರ
ಡಾ ಅಶೋಕ್ ಕೆ ಆರ್.
ವೈಯಕ್ತಿಕ ವಿಷಯದಿಂದ ಲೇಖನವೊಂದನ್ನು ಪ್ರಾರಂಭಿಸುವುದು ಅಷ್ಟೇನೂ ಸರಿಯಲ್ಲವಾದರೂ ಈ ಲೇಖನಕ್ಕೆ ಪೂರಕವಾಗಿರುವ ಘಟನೆಯಾಗಿರುವುದರಿಂದ ಹೇಳುತ್ತಿದ್ದೇನೆ, ಕ್ಷಮೆಯಿರಲಿ. ಮದುವೆಯಾಗುವ ದಿನ ಹೊಸದೇನನ್ನಾದರೂ ಮಾಡಬೇಕೆಂಬ ಆಸೆಯಿಂದ ನನ್ನ ಗೆಳೆಯನೊಬ್ಬ ಮದುವೆಗೆ ಬಂದವರಿಗೆಲ್ಲ ಒಂದೊಂದು ಗಿಡ ಹಂಚಿದ್ದ, ಒಟ್ಟು ಎರಡು ಸಾವಿರ ಗಿಡಗಳು. ಬಂದವರಿಗೆಲ್ಲ ಯಾವುದಾದರೊಂದು ಪುಸ್ತಕವನ್ನು ತಾಂಬೂಲದ ರೂಪದಲ್ಲಿ ಕೊಡಬೇಕೆಂಬುದು ನನ್ನಾಸೆಯಾಗಿತ್ತು. ಮದುವೆ ನಿಶ್ಚಿತವಾಗುವಷ್ಟರೊಳಗೆ ನನ್ನದೇ ಹದಿನೈದರಷ್ಟು ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಕಾರಣ ನನ್ನದೇ ಕಥಾ ಸಂಕಲನ ಬಿಡುಗಡೆಗೊಳಿಸಿ ಮದುವೆಮನೆಯಲ್ಲೇ ತಾಂಬೂಲದ ಜೊತೆಗೆ ಕೊಡುವ ನಿರ್ಧಾರವೂ ಆಯಿತು. ಮಾಧ್ಯಮದವರನ್ನೂ ಕರೆಯುವ ತೀರ್ಮಾನವನ್ನೂ ಕೈಗೊಂಡೆವು. ಮದುವೆ ದಿನ ತಾಳಿ ಕಟ್ಟಿದ ಮೇಲೆ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಮಾಧ್ಯಮದವರು ವಿಡಿಯೋ ಕ್ಯಾಮೆರಾಗಳ ಜೊತೆಗೆ ಬಂದು ಮುಂದಿನ ಸಾಲಿನಲ್ಲಿ ಆಸೀನರಾಗಿದ್ದರು. ಆಗ ಗಾಬರಿಯಾಗಿದ್ದು ಹುಡುಗಿ ಮತ್ತು ನನ್ನ ಮನೆ ಕಡೆಯ ನೆಂಟರು!! ಕೆಲವರಿಗಷ್ಟೇ ಪುಸ್ತಕ ಬಿಡುಗಡೆಯ ಬಗ್ಗೆ ತಿಳಿಸಿದ್ದೆವು, ಇನ್ನುಳಿದವರಿಗೆ ಅಂದೇ ತಿಳಿಯಲಿ ಎಂದು ಸುಮ್ಮನಿದ್ದೆವು. ಮೀಡಿಯಾದವರು ಕ್ಯಾಮೆರ ಸಮೇತ ದಾಂಗುಡಿಯಿಟ್ಟಿದ್ದು ಕಂಡು ಗಾಬರಿಗೊಂಡ ಜನ ಅವರ ಬಳಿ ಹೋಗಿ ಏನು ಸಮಾಚಾರ ಎಂದು ವಿಚಾರಿಸಿ ಪುಸ್ತಕ ಬಿಡುಗಡೆಯ ಬಗ್ಗೆ ತಿಳಿದು ನಿಟ್ಟುಸಿರುಬಿಟ್ಟರು!! ಜನ ಗಾಬರಿಗೊಂಡಿದ್ದಾದರೂ ಯಾಕೆ? ಯಾವುದೇ ದೃಶ್ಯ ಮಾಧ್ಯಮದಲ್ಲಿ ಮದುವೆಯ ಸುದ್ದಿ ಬರುವುದು ಹುಡುಗ/ಹುಡುಗಿ ಓಡಿ ಹೋದಾಗ ಅಥವಾ ಮತ್ಯಾವುದೋ ರಂಪ ರಾಮಾಯಣವಾದಾಗ. ಮಾಧ್ಯಮದವರಿದ್ದಾರೆಂದರೆ ಅಲ್ಲೇನೋ ಕೆಟ್ಟದ್ದು ನಡೆಯುತ್ತಿದೆ ಎಂಬ ಭಾವನೆಯೇ ತುಂಬಿ ಹೋಗಿದೆ ಜನರಲ್ಲಿ. ಅದೇ ಕಾರಣದಿಂದ ನನ್ನ ಮದುವೆಯ ದಿನ ನೆಂಟರಿಷ್ಟರು ಗಾಬರಿಯಾಗಿದ್ದರು! ಇದು ನಮ್ಮ ಮಾಧ್ಯಮಗಳು ಬೆಳೆಸಿಕೊಂಡಿರುವ ಪ್ರಭಾವಳಿ!
ಮಾಧ್ಯಮ ಕೆಟ್ಟ ಸಂಗತಿಗಳಿಗಷ್ಟೇ ಕೊಡುತ್ತಿರುವ ಪ್ರಾಮುಖ್ಯತೆಯನ್ನು ಉಪಯೋಗಿಸಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆಯಾ? ಇತ್ತೀಚೆಗೆ ನಡೆದ ಕನ್ನಡ ಚಿತ್ರವೊಂದರ ಶೀರ್ಷಿಕೆಯ ವಿವಾದ ಈ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದೆ. ದಂಡುಪಾಳ್ಯದ ನಿರ್ದೇಶಕ ಶ್ರೀನಿವಾಸ ರಾಜು ಉಪೇಂದ್ರನ ನಾಯಕತ್ವದಲ್ಲಿ ತೆಗೆಯಲುದ್ದೇಶಿಸಿದ ಹೊಸ ಚಿತ್ರಕ್ಕೆ ಇಟ್ಟ ಹೆಸರು ‘ಬಸವಣ್ಣ’. ಚಾರಿತ್ರಿಕವಾಗಿ ಸಾಮಾಜಿಕವಾಗಿ ಒಂದು ಬಹುಮುಖ್ಯ ಸ್ಥಾನದಲ್ಲಿರುವ ವ್ಯಕ್ತಿಯ ಹೆಸರನ್ನು ಚಿತ್ರವೊಂದಕ್ಕೆ ಇಟ್ಟಾಗ ಐತಿಹಾಸಿಕ ಚಿತ್ರದ ನಿರೀಕ್ಷೆ ಜನರಲ್ಲಿ ಬರುವುದು ಸಹಜವೇ. ಆದರೆ ಮೊದಲು ಬಿಡುಗಡೆಗೊಂಡ ಚಿತ್ರದ ಪೋಸ್ಟರಿನಲ್ಲಿದ್ದಿದ್ದಾದರೂ ಏನು?! ಮೈಮೇಲೆ ವಿಭೂತಿ ಪಟ್ಟಿ ಬಳಿದುಕೊಂಡು ಧ್ಯಾನದ ಸ್ಥಿತಿಯಲ್ಲಿ ಕುಳಿತ ಉಪೇಂದ್ರ, ಇಷ್ಟೇ ಆಗಿದ್ದರೆ ಏನೂ ಪ್ರಚಾರವಾಗುವುದಿಲ್ಲ ಎಂದೆನ್ನಿಸಿತೇನೋ ಪಕ್ಕದಲ್ಲಿ ಒಂದು ಬಂದೂಕು ಇಟ್ಟುಬಿಟ್ಟರು! ಸಮಾಜ ಪರಿವರ್ತನೆಯ ಹರಿಕಾರ ಬಸವಣ್ಣ ಹೆಸರಿನ ಚಿತ್ರದ ನಾಯಕ ಪಿಸ್ತೂಲು ಹಿಡಿದು ನಿಂತರೆ ಗಲಾಟೆಗಳಾಗಿ ಪ್ರಚಾರ ಸಿಕ್ಕೇಸಿಗುತ್ತದೆಂಬ ವಿಶ್ವಾಸ ಚಿತ್ರತಂಡಕ್ಕೆ. ಇದೂ ಸಾಲುವುದಿಲ್ಲವೆಂಬಂತೆ ಮತ್ತೊಂದು ಪೋಸ್ಟರಿನಲ್ಲಿ ಚಾಣಕ್ಯನ ವೇಷದ ಉಪೇಂದ್ರ ಕತ್ತಿಹಿಡಿದು ಆರ್ಭಟಿಸುವ ಚಿತ್ರ. ವಿವಾದವನ್ನಾರಂಭಿಸಲು ಮತ್ತೇನು ಬೇಕೇಳಿ? ಸರಿ, ದೃಶ್ಯಮಾಧ್ಯಮಗಳಲ್ಲಿ ದಿನಗಟ್ಟಲೆ ಈ ಚಿತ್ರದ ಶೀರ್ಷಿಕೆಯ ಬಗ್ಗೆ ಚರ್ಚೆಗಳು ಆರಂಭವಾಗೇಬಿಟ್ಟಿತು. ಜಾತಿ ಬಿಟ್ಟು ಹೊಸತೊಂದು ವ್ಯವಸ್ಥೆ ಕಟ್ಟಲವಣಿಸಿದ ಬಸವಣ್ಣನವರನ್ನು ಕೂಡ ಕಾಲ ಸರಿದಂತೆ ಲಿಂಗಾಯತ ಧರ್ಮಕ್ಕೆ ಮಾತ್ರ ಸೀಮಿತಗೊಳಿಸಿಬಿಟ್ಟಿದ್ದೇವೆ ನಾವು. ಅಂಬೇಡ್ಕರ್ ದಲಿತರಿಗೆ ಬಸವಣ್ಣ ಲಿಂಗಾಯತರಿಗೆ ಎಂದು ಮಿತಿಗೊಳಿಸಿದ ಮೇಲೆ ಆ ಜಾತಿ ಧರ್ಮದ ರಾಜಕಾರಣಿಗಳು ಸುಮ್ಮನಿದ್ದಾರೆಯೇ? ಮತ್ತಷ್ಟು ಓಟನ್ನು ಗಿಂಜಿಕೊಳ್ಳುವ ಅವರ ಪ್ರಯತ್ನಕ್ಕೆ ವಿಧಾನಸಭೆ ಕೂಡ ಸಾಕ್ಷಿಯಾಗಿಬಿಟ್ಟಿತು. ಬಸವಣ್ಣ ಚಿತ್ರದ ಶೀರ್ಷಿಕೆ ವಿವಾದ ರಾಜ್ಯದ ಜ್ವಲಂತ ಸಮಸ್ಯೆಯಾಗಿ ನಮ್ಮ ರಾಜಕಾರಣಿಗಳಿಗೆ ಕಂಡು ‘ಶೀರ್ಷಿಕೆ ಬದಲಾಗದಿದ್ದರೆ ರಾಜ್ಯದಾದ್ಯಂತ ಲಿಂಗಾಯತರು ಸಿಡಿದೇಳಲಿದ್ದಾರೆ’ ಎಂದು ಹೇಳಿಕೆಗಳನ್ನೂ ಕೊಟ್ಟರು. ದೃಶ್ಯ ಮಾಧ್ಯಮಗಳಲ್ಲಿ ಮತ್ತಷ್ಟು ಚರ್ಚೆಗಳು! “ನೀವು ಚಿತ್ರ ನೋಡಿ ನಂತರ ಮಾತನಾಡಿ” – ಚಿತ್ರತಂಡದ ಮಾಮೂಲಿ ಡೈಲಾಗ್. ಇವೆಲ್ಲ ಬೆಳವಣಿಗೆಗಳಿಂದ ಚಿತ್ರತಂಡಕ್ಕೆ ನಿಜಕ್ಕೂ ಖುಷಿಯಾಗಿರಬೇಕು. ಸಾವಿರಗಳ ಲೆಕ್ಕದಲ್ಲಿ ಖರ್ಚು ಮಾಡಿ ಲಕ್ಷಾಂತರ ರುಪಾಯಿ ಖರ್ಚು ಮಾಡಿದರೂ ಸಿಗದ ಪ್ರಚಾರವನ್ನು ಗಿಟ್ಟಿಸಿಬಿಟ್ಟಿತು. ವಿಧಾನಸಭೆಯಲ್ಲಿ ಚರ್ಚೆಗೊಳಪಡುವ ಅದೃಷ್ಟ ಎಷ್ಟು ಚಿತ್ರಗಳಿಗಿದೆ?! ಇಷ್ಟೆಲ್ಲ ಆದ ನಂತರ “ಒಂದು ಸಮುದಾಯಕ್ಕೆ ನೋವುಂಟುಮಾಡುವ ಉದ್ದೇಶ ನಮಗಿಲ್ಲ” ಎಂದು ಮತ್ತೊಂದು ಸಿನಿಮೀಯ ಡೈಲಾಗನ್ನು ಹೊಡೆದು ಚಿತ್ರದ ಶೀರ್ಷಿಕೆಯನ್ನು ಬದಲಿಸುವ ನಿರ್ಧಾರವನ್ನು ಪ್ರಕಟಿಸಿತು. ಬಸವಣ್ಣ ಹೆಸರಿನ ಬದಲು ಬ್ರಾಹ್ಮಣ ಎಂಬ ಹೆಸರಿಡುತ್ತಾರೆ ಎಂದು ಸುದ್ದಿಯಾಯಿತು. ಸುದ್ದಿ ಎಷ್ಟು ನಿಜ ಎಂಬುದನ್ನು ತಿಳಿಯುವ ಮೊದಲೇ ಮತ್ತೊಮ್ಮೆ ಈ ವಿಷಯ ವಿಧಾನಸಭೆಯಲ್ಲಿ ಚರ್ಚಿತವಾಯಿತು. ಬ್ರಾಹ್ಮಣ ಹೆಸರಿಟ್ಟರೆ ಒಂದು ಸಮುದಾಯಕ್ಕೆ ಮಾಡಿದ ಅವಮಾನ ಮಾಡಿದ ಹಾಗೆ ಎಂದು ಹೇಳಿದ್ದು ಬಿಜೆಪಿಯ ಸುರೇಶ್ ಕುಮಾರ್. ಆ ರೀತಿಯ ಶೀರ್ಷಿಕೆ ನೋಂದಣಿಯಾಗಿಲ್ಲ ಅದನ್ನು ಕೊಡುವುದೂ ಇಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದ ಮೇಲೆ ಈ “ವಿವಾದ” ಸದ್ಯಕ್ಕೆ ತಣ್ಣಗಾಗಿದೆ. ವಿವಾದ ಸೃಷ್ಟಿಯಾಗಿ ಒಂದಷ್ಟು ಪ್ರಚಾರ ಸಿಗಲೆಂದೇ ಚಿತ್ರತಂಡದವರು ಈ ರೀತಿಯ ಹೆಸರಿಟ್ಟರಾ? ಉಪೇಂದ್ರ ಮತ್ತು ಶ್ರೀನಿವಾಸ ರಾಜುರವರ ಹಳೆಯ ವಿವಾದಗಳನ್ನು ನೋಡಿದರೆ ವಿವಾದಗಳಾಗಲೆಂದೇ ಬಸವಣ್ಣನ ಹೆಸರನ್ನು ಉಪಯೋಗಿಸಿಕೊಂಡರೆಂಬುದು ಸತ್ಯ. ಹಾಗೆಂದು ಬರೀ ಅವರನ್ನೇ ದೂಷಿಸಲಾದೀತೇ? ವಿವಾದ ಸೃಷ್ಟಿಸುವಂಥದ್ದೇನಾದರೂ ಮಾಡದಿದ್ದರೆ ಮಾಧ್ಯಮಗಳಲ್ಲಿ ಆ ಚಿತ್ರಗಳ ಬಗ್ಗೆ (ಅಥವಾ ಯಾವುದೇ ಸಂಗತಿಯ ಬಗ್ಗೆ) ಸುದ್ದಿ ಬರುತ್ತದೆಯೇ? ಅದೂ ದಿನಗಟ್ಟಲೇ? ಉಹ್ಞೂ… ಚಿತ್ರತಂಡದವರಿಗೆ “ಏನಾದ್ರೂ ಕಾಂಟ್ರೋವರ್ಸಿ ಮಾಡಿ ಸರ್ ಹಾಕ್ತೀವಿ” ಎಂದು ನೇರವಾಗಿಯೇ ಹೇಳುವಷ್ಟು ನಮ್ಮ ಮಾಧ್ಯಮ ಪ್ರಪಂಚ ಮುಂದುವರೆದಿದೆ. ರಾಜಕೀಯವಾಗಿ ಲಿಂಗಾಯತರು ಪ್ರಬಲವಾಗಿರುವುದರಿಂದ ವಿಧಾನಸಭೆ ಕೂಡ ಚಿತ್ರತಂಡದ ಸಂಚಿಗೆ ಬಲಿಯಾಗಿ ಅನವಶ್ಯಕ ಪ್ರಚಾರ ನೀಡಿದ್ದು ದುರದೃಷ್ಟಕರ. ಇಂಥ ವಿಚಾರಗಳ ಬಗ್ಗೆ ಮಾತನಾಡಿದರಷ್ಟೇ ತಮ್ಮ ಮುಖ ಮಾಧ್ಯಮದಲ್ಲಿ ಬರುತ್ತದೆ ಎಂದು ರಾಜಕಾರಣಿಗಳಿಗೂ ತಿಳಿದಿರುವ ಕಾರಣ ಹೆಚ್ಚೆಚ್ಚು ಚರ್ಚೆ ಮಾಡಿದರೋ ಏನೋ?!! ಕೊನೆಗೆ ಇಂಥ ವಿವಾದಗಳನ್ನೇ ಹೆಚ್ಚೆಚ್ಚು ವೀಕ್ಷಿಸುವ ನಾವು ಕೂಡ ದೋಷಿತರ ಪಟ್ಟಿಯಲ್ಲಿದ್ದೇವೆ. ನಮ್ಮ ಮನಃಸ್ಥಿತಿ ಕೂಡ ಕಲುಷಿತಗೊಂಡಿದೆಯೋ ಏನೋ?
ಯಡಿಯೂರಪ್ಪ ಮತ್ತವರ ಪಟಾಲಂನಲ್ಲಿನ ಅನೇಕರು ಮಾಧ್ಯಮಗಳಿಗೆ ಅದರಲ್ಲೂ ದೃಶ್ಯ ಮಾಧ್ಯಮಗಳಿಗೆ ಅನ್ನದಾತರಾಗಿದ್ದರು! Infotainmentಗೆ ಹೇಳಿಮಾಡಿಸಿದಂತಿದ್ದ ಅವರು ದಿನಕ್ಕೊಂದು ಹಗರಣ, ಅದಕ್ಕಿಂತ ಹೆಚ್ಚಾಗಿ ತಮ್ಮ ಅಪ್ರಬುದ್ಧ ನಡವಳಿಕೆಯಿಂದ ನ್ಯೂಸ್ ಎಂದರೆ ಮನರಂಜನೆಯ ಭಾಗ ಎಂಬಂತೆ ಮಾಡಿಬಿಟ್ಟಿದ್ದರು. ಆಡಳಿತದ ವಿಷಯವೇನೇ ಇದ್ದರೂ ಈಗಿನ ಮುಖ್ಯಮಂತ್ರಿಯನ್ನು “ಮನರಂಜನೆಗಂತೂ” ಉಪಯೋಗಿಸಿಕೊಳ್ಳುವ ಹಾಗಿಲ್ಲ!! ಮಾಧ್ಯಮ ಮಿತ್ರರು ಹೇಳುವ ಹಾಗೆ “ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಮೂರ್ನಾಲ್ಕು ಹೊಸ ನ್ಯೂಸ್ ಛಾನೆಲ್ಲುಗಳು ಹುಟ್ಟಿಕೊಂಡವು…. ಈಗ ಸಿದ್ಧರಾಮಯ್ಯನವರತ್ರ ಕಷ್ಟ…. infotainment ಸುದ್ದೀನೇ ಇಲ್ಲದೆ ಇರೋ ಛಾನೆಲ್ಲುಗಳೂ ಮುಚ್ಚಿ ಹೋಗೋ ಪರಿಸ್ಥಿತಿ”! ರಾಜಕಾರಣಿಗಳಿಂದ infotainment ಬರದ ಕಾರಣ ಕೊನೇ ಪಕ್ಷ ಪತ್ರಿಕೆಗಳಲ್ಲಿ ಸರಣಿ ಲೇಖನದ ಹೆಸರಿನಲ್ಲಿ ‘ಅಭಿವೃದ್ಧಿ ಪತ್ರಿಕೋದ್ಯಮ’ ಮತ್ತೆ ಪುನರಾರಂಭಗೊಂಡಿದೆ, ಮುಖಪುಟದಲ್ಲೇ ಮೂಡುತ್ತಿದೆ. ಇನ್ನು ದೃಶ್ಯ ಮಾಧ್ಯಮಗಳು ವಿವಾದದ ಬೆನ್ನತ್ತುತ್ತಲೇ ಇವೆ. ವಿವಾದಗಳು ನಿಜಕ್ಕೂ ಇದ್ದವೇ? ಅಥವಾ ಇದು ಸಂಪೂರ್ಣ ಮಾಧ್ಯಮದ ಸೃಷ್ಟಿಯೇ ಎಂಬ ಗೊಂದಲ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವುದರಲ್ಲಿ ಸಂದೇಹವಿಲ್ಲ.
(ನನ್ನ ನೆನಪು ಸರಿಯಿದ್ದರೆ ಹಿಂದೊಮ್ಮೆ ಕನ್ನಡದಲ್ಲಿ ‘ಬೀದಿ ಬಸವಣ್ಣ’ ಹೆಸರಿನ ಚಿತ್ರ ಬಿಡುಗಡೆಯಾಗಿತ್ತಲ್ಲವೇ? ಆಗಲೂ ಪ್ರತಿಭಟನೆಯಾಗಿತ್ತಾ? ತಿಳಿದವರು ಉತ್ತರಿಸಿಬೇಕೆಂದು ಕೋರಿಕೆ)
ಕೊನೆಗೊಂದು ಬಿಟ್ಟಿ ಅಡೈಸ್- ನನಗೆ ಪ್ರಚಾರ ಬೇಕು ಒಳ್ಳೆಯ ಪ್ರಚಾರವಾದರೂ ಆಯಿತು ಕೆಟ್ಟ ಪ್ರಚಾರವಾದರೂ ಆಯಿತು ಎನ್ನುವ ಗುಂಪಿನವರು ನೀವಾಗಿದ್ದರೆ ಕೆಟ್ಟ ಕೆಲಸ ಮಾಡಿ!! ಒಳ್ಳೆ ಕೆಲಸ ಮಾಡಿದರೆ ಅಬ್ಬಬ್ಬಾ ಅಂದರೆ ಐದು ನಿಮಿಷದ ಸುದ್ದಿ… ಅದೇ ಕೆಟ್ಟ ಕೆಲಸ ಮಾಡಿದರೆ ದಿನವಿಡೀ “ಪ್ಯಾನೆಲ್ ಡಿಸ್ಕಷನ್”! ನಿರ್ಧಾರ ನಿಮ್ಮದು.
ಮಾನ್ಯರೇ, ಚಲನಚಿತ್ರಗಳ ಪ್ರಚಾರದ ಬಗ್ಗೆ ಮತ್ತಿತರೆ ಪ್ರಚಾರಗಳ ಬಗ್ಗೆ ಒಳ್ಳೆಯ ವಿಶ್ಲೇಷಣೆ ಮಾಡಿದ್ದೀರಿ. ಈಗಿನ ” ಬಸವಣ್ಣ ” ಚಲನಚಿತ್ರದ ವಿವಾದದ ಬಗ್ಗೆ ಬೇಸರವಾಗುತ್ತದೆ. ಕನ್ನಡ ಚಲನಚಿತ್ರದ ಬಗ್ಗೆ ಈ ಮೊದಲು ಕೂಡ ಬಸವಣ್ಣ ಎನ್ನುವ ಬದಲು ಬ್ರಾಹ್ಮಣ ಎಂದು ಹೆಸರಿಡುತ್ತೇವೆ ಎಂದು ಲೇಖನ ಬಂದಾಗ ಕೇವಲ ಹೆಸರಿಗೇಕೆ ವಿವಾದ “ಅನಾಮಿಕ” ಎಂದು ಹೆಸರಿಟ್ಟರೆ ಸೂಕ್ತ ಎಂದು ಬರೆದಿದ್ದೆ. ಅದು ಚಲನಚಿತ್ರದ ನಿರ್ದೇಶಕರಿಗೆ, ನಿರ್ಮಾಪಕರಿಗೆ ಅದು ತಲುಪಿತೋ ಇಲ್ಲವೋ ತಿಳಿಯಲಿಲ್ಲ. ಆದರೂ ಇದು ಕನ್ನಡ ಚಿತ್ರರಂಗದಲ್ಲಿ ಸಹಜವೇನೋ ಎನ್ನುವಂತಾಗಿದೆ. ಹಾಗೆಯೇ ಟಿ.ವಿ. ಮಾಧ್ಯಮಗಳಲ್ಲಿ ದಿನಗಟ್ಟಲೆ ವಾದ ವಿವಾದಗಳು ನಡೆಯುತ್ತಿರುತ್ತವೆ. ಇದು ಸರಿಯಾದ ಬೆಳವಣಿಗೆಯಲ್ಲ. ಇಂತಹ ವಿಷಯಗಳಿಗೆ ಸುದ್ದಿ ಮಾಧ್ಯಮಗಳು ಮತ್ತು ದೃಶ್ಯ ಮಾಧ್ಯಮಗಳು ಹೆಚ್ಚಿನ ಪ್ರಧಾನ್ಯತೆ ನೀಡಬಾರದಿತ್ತು.
ಮಾನ್ಯರೇ, ನೀವು ತಿಳಿಸಿರುವಂತೆ, ಈ ಹಿಂದೆ ಡಾ:ರಾಜಕುಮಾರ್ ನಟಿಸಿದ “ಬೀದಿ ಬಸವಣ್ಣ” ಚಲನಚಿತ್ರ ಬಂದಾಗ ಈ ವಿವಾದ ಬರಲಿಲ್ಲ. ಆಗಿನ ಕಪ್ಪು ಬಿಳುಪು ಚಿತ್ರ ಚೆನ್ನಾಗಿಯೇ ಓಡಿತು. ಡಾ:ರಾಜಕುಮಾರ್ ಆಗ ತಾನೆ ಮೇರು ನಟರಾಗಿ, ಪ್ರವರ್ಧಮಾನಕ್ಕೆ ಬರುತ್ತಿದ್ದರು. ಕನ್ನಡ ಚಲನಚಿತ್ರ ಬಂದರೆ ಸಾಕಾಗಿತ್ತು. ಅಂತಹದರಲ್ಲಿ ಈ ವಿವಾದ ಯಾರಿಗೆ ಬೇಕಾಗಿತ್ತು. ಖಡಾಖಂಡಿತವಾಗಿ ಹೇಳುತ್ತೇನೆ. ಬೀದಿ ಬಸವಣ ಚಲನಚಿತ್ರ ಬಂದಾಗ ಕನ್ನಡಿಗರೆಲ್ಲಾ ನೋಡಿ ಸಂತೋಷ ಪಟ್ಟೆವೇ ಹೊರತು ಯಾವುದೇ ವಿವಾದ ಸೃಷ್ಟಿಯಾಗಿರಲಿಲ್ಲ.
Ee hinde Sai Kumar abhinayada “Om Namah Shivaya” hesarina chitra banditthu. Aaga yaava prathibhataneyu nadediralilla. Aaga Madhyamagalu bahushaha ishtu prabalavagiralillaveno? Ivarige bisi bisi suddi… Avarige bitti prachara… Ashte..
media people are already jokers in peoples mind.because of them..reality getting suppress and reel is coming as news..!
ಬೀದಿ ಬಸವಣ್ಣದ ಪೋಸ್ಟರ್ ಮತ್ತು ಚಿತ್ರದಲ್ಲಿ ವಿವಾದವಾಗುವ ಯಾವ ಅಂಶಗಳೂ ಇರಲಿಲ್ಲ. ಆದರೆ ಈಗಿನ ಬಸವಣ್ಣ ವಿವಾದವಾಗಲೀ ಅಂತಾನೇ ಪೋಸ್ಟರ್ ಕ್ರಿಯೇಟ್ ಮಾಡಿರೋದು ಅಂತಾ ಮೇಲ್ನೋಟಕ್ಕೇ ಗೊತ್ತಾಗುತ್ತೆ. ಇಂಥ ವಿಕೃತ ಮನಸ್ಸುಗಳಿಗೂ ‘ಹಳೆಯ ಸದಭಿರುಚಿ’ಯ ಚಿತ್ರಗಳಿಗೂ ಹೋಲಿಸಬೇಡಿ.
ನನಗೆ ವಿಷಾದವಾದದ್ದು ಶ್ರೀನಿವಾಸಮೂರ್ತಿಯವರಂಥ ಸಭ್ಯನಟರು ಮಾಧ್ಯಮವೊಂದರ ಸಂದರ್ಶನದಲ್ಲಿ ಈ ಚಿತ್ರದ ಪರವಾಗಿ ಮಾತನಾಡಿದ್ದು.