ಒಳ್ಳೆಯ ದಿನಗಳು ಉಚಿತವಾಗಿ ಬರುವುದಿಲ್ಲ!
– ಅನಿಲ್ ಚಳಗೇರಿ
2014ರ ಚುನಾವಣೆಯಲ್ಲಿ ಬಿಜೆಪಿಯ ಪಂಚ್ ಲೈನ್ ಎನ್ನಬಹುದಾದ “ಅಚ್ಛೆ ದಿನ್ ಅನೆ ವಾಲೆ ಹೈ’ (ಒಳ್ಳೆಯ ದಿನಗಳು ಬರಲಿವೆ) ಸುತ್ತಮುತ್ತಲೂ ಕಳೆದ ಒಂದು ತಿಂಗಳಿಂದ ವಿವಾದವೊಂದು ಸೃಷ್ಟಿಯಾಗಿದೆ. ಮೋದಿಯವರು ಆಡಳಿತ ರೀತಿಯನ್ನು ಬಿಗಿಗೊಳಿಸಿ ಇಡೀ ದೇಶದ ಪರಿಸ್ಥಿತಿಯನ್ನು ಹತೋಟಿಯಲ್ಲಿ ತರಬೇಕಾದಾರೆ ಕೆಲವು ಗಟ್ಟಿ ನಿರ್ಧಾರ(ಸದ್ಯಕ್ಕೆ ನಮಗೆ ಇಷ್ಟವಾಗದಿರುವ) ತೆಗೆದುಕೊಳ್ಳಲೇಬೇಕು. ಕಳೆದ ಒಂದು ದಶಕದಲ್ಲಿ ಯುಪಿಎ ಸರ್ಕಾರ ಮಾಡಿದ ಆವಾಂತರಗಳನ್ನು ಮೊದಲು ಸರಿಪಡಿಸಿ ಆಮೇಲೆ ಅಭಿವೃದ್ಧಿಯ ಕಡೆಗೆ ಹೋಗುವ ಜವಾಬ್ದಾರಿ ಹೊಸ ಸರ್ಕಾರದ ಮೇಲಿದೆ. ಅಷ್ಟಕ್ಕೂ ಈ ಅಭಿವೃದ್ಧಿಯ ಹಾದಿ ಮೊದಲ ದಿನದಿಂದಲೇ ಪ್ರಾರಂಭವಾಗಿದೆ. ಇದನ್ನು ಅಚ್ಛೆ ದಿನ್ ಅಂದರೂ ತಪ್ಪಾಗದು. ಅಷ್ಟಕ್ಕೂ ಮೋದಿಯವರು ಉಚಿತ ದಿನ್ ಎಂದು ಹೇಳಿಲ್ಲ!
ದೆಹಲಿಯಲ್ಲಿನ ವಿದ್ಯುತ್ ಅಭಾವದಿಂದ ಹಿಡಿದು ರೈಲ್ವೆ ದರ ಏರಿಕೆಯವರೆಗಿನ ವಿಷಯವನ್ನು ಹಿಡಿದುಕೊಂಡು ಅಚ್ಛೇ ದಿನ್ ಅಂದರೆ ಇದೇನಾ ಅನ್ನುವಷ್ಟು ಕನ್ಫ್ಯೂಷನ್ ಹುಟ್ಟಿಬಿಟ್ಟಿದೆ. “ಒಮ್ಮಿಂದೊಮ್ಮೇಲೆ ಮಧ್ಯಮ ವರ್ಗದ ವಿರೋಧಿಯಾದರೆ ನರೇಂದ್ರ ಮೋದಿ?” ಎನ್ನುವ ಪ್ರಶ್ನೆಗಳು ನಮ್ಮನ್ನು ಕಾಡುತ್ತಿವೆ. ಯುಪಿಎ ನೀತಿಯಂತೆ ರಾಜಕೀಯ ಹಿತಾಸಕ್ತಿಗೆ ಸರ್ಕಾರದ ಬೊಕ್ಕಸವನ್ನು ಬರಿದಾಗಿಸುವುದು ಸರಿಯೇ? ಎಂದು ನಮ್ಮನ್ನು ನಾವು ಒಮ್ಮೆ ಕೇಳಿಕೊಂಡರೆ ಬಹುಶಃ ನಿಮಿಷಾರ್ಧದಲ್ಲೇ ನಮಗೆ ಉತ್ತರ ಸಿಕ್ಕು ಬಿಡಬಹುದು.
ನಮ್ಮ ಸರ್ಕಾರಗಳಿಗೆ ರೈಲ್ವೆ ಸ್ಟೇಷನ್ ಸ್ವಚ್ಛವಿಡಲು ಏನು ಸಮಸ್ಯೆ? ಸರಿಯಾದ ಸಮಯಕ್ಕೆ ತತ್ಕಾಲ್ ಟಿಕೆಟ್ ಬುಕ್ ಆಗುವದಿಲ್ಲ, ರೈಲ್ವೆ ಪ್ಲಾಟ್ ಫಾರಂ ಸ್ವಚ್ಛವಿರುವುದಿಲ್ಲವೆಂದು ದೂರುತ್ತಾ ಬೇರೆ ದೇಶದ ರೈಲ್ವೆ ವ್ಯವಸ್ಥೆಯನ್ನು ಹೊಗಳುತ್ತೇವೆ. ರೈಲ್ವೆ ಇಲಾಖೆ 26 ಸಾವಿರ ಕೋಟಿಗಳ ನಷ್ಟ ಅನುಭವಿಸುತ್ತಿದೆ, ಪ್ರತಿ ದಿನ 30 ಕೋಟಿಯಷ್ಟು ನಷ್ಟ ಭರಿಸಬೇಕಾಗುತ್ತಿದೆ, ಅದರಲ್ಲೂ ಸರಕು ಸಾಗಣಿಕೆಯಲ್ಲಿ ಸ್ವಲ್ಪ ಲಾಭ ಮಾಡುವದನ್ನು ಬಿಟ್ಟರೆ, ಪ್ರಯಾಣಿಕರ ರೈಲುಗಳಿಂದಲೇ ಅಧಿಕ ನಷ್ಟ ಎದುರಾಗುತ್ತಿದೆ ಎನ್ನುತ್ತದೆ ರೈಲ್ವೆ ಇಲಾಖೆಯ ಅಂಕಿ ಅಂಶಗಳು. ಇಷ್ಟೆಲ್ಲಾ ನಷ್ಟಗಳ ಮಧ್ಯೆ ಸರ್ಕಾರ ಒಳ್ಳೆಯ ರೈಲ್ವೆ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವದಾದರು ಹೇಗೆ? ಅದಕ್ಕಾಗಿಯೇ ಈ ರೈಲ್ವೆ ದರ ಏರಿಕೆ. ಮುಂಬರುವ ದಿನಗಳಲ್ಲಿ ರೈಲ್ವೆ ಇಲಾಖೆ ತನ್ನ ನಷ್ಟಗಳನ್ನೆಲ್ಲ ಸಂಪೂರ್ಣವಾಗಿ ಕಡಿಮೆ ಮಾಡಿ ಆಮೇಲೆ ನವೀಕರಣದ ಬಗ್ಗೆ ವಿಚಾರ ಮಾಡಬೇಕು, ಫ್ರೀ ಬೀ(ಉಚಿತ ಕೊಡುಗೆಗಳನ್ನು) ಸರ್ಕಾರಗಳು ಕೊಡಬಾರದೆನ್ನುವ ನಾವು ದಿನಕ್ಕೆ 30 ಕೋಟಿ ನಷ್ಟವಾದರೂ ಪರವಾಗಿಲ್ಲ, ನಮ್ಮ ಜೇಬಿಗೆ ಮಾತ್ರ ಕತ್ತರಿ ಬೀಳಬಾರದು ಎನ್ನುತ್ತಿದ್ದೇವೆ! ಅಷ್ಟಕ್ಕೂ, ಒಂದು ಉತ್ತಮ ರೈಲ್ ವ್ಯವಸ್ಥೆಯಿಂದ ಅತೀ ಹೆಚ್ಚು ಲಾಭ ಪಡೆಯುವವರು ಯಾರು? ನಾವೇ ಅಲ್ಲವೇ? ಇಲ್ಲವೆಂದರೆ, ರೈಲ್ವೆ ಇಲಾಖೆಯು ಮುಂದೊಂದು ದಿನ ಏರ್ ಇಂಡಿಯಾ ಥರ ದೊಡ್ಡ ನಷ್ಟಕ್ಕೆ ಒಳಗಾಗಬಹುದು. ಲಾಭಗಳಿಸುವ ರೈಲ್ವೆ ಇಲಾಖೆಯಿಂದ ಮಾತ್ರ ಜಪಾನ್ ಮತ್ತು ಯುರೋಪ್ ರಾಷ್ಟ್ರಗಳಂಥ ರೈಲ್ವೆ ಸಂಪರ್ಕ ಒದಗಿಸಲು ಸಾಧ್ಯ.
ಕಳೆದ 3 ವಾರಗಳಲ್ಲಿ ಇಂಥ ಅನೇಕ ಕಠಿಣ ನಿರ್ಧಾರಗಳನ್ನು ಈ ಸರ್ಕಾರ ತೆಗೆದುಕೊಂಡಿದೆ. ಅವುಗಳ ಫಲಿತಾಂಶ ನಾವು ಈಗಲೇ ಅನುಭವಿಸಲಿಕ್ಕಿಲ್ಲ, ಆದರೆ ಮುಂಬರುವ ಒಳ್ಳೆಯ ದಿನಗಳ ಮುನ್ಸೂಚನೆಯಂತೂ ಸ್ಪಷ್ಟವಾಗಿ ಕಾಣಿಸುತ್ತಿದೆ. ಬರೀ ಜನಪ್ರಿಯ ಸ್ಕೀಮ್ಗಳಿಂದ ಹೆಸರು ಮಾಡುವ ಸರ್ಕಾರಗಳನ್ನು ದಶಕಗಳಿಂದ ನೋಡುತ್ತಲೇ ಬಂದಿದ್ದೇವೆ. ಈ ಸರ್ಕಾರ ದೂರದೃಷ್ಟಿಯಿಂದ ಇಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವದನ್ನೇ ಹೊಸ ಹೆಜ್ಜೆಯೆಂದರೆ ತಪ್ಪಾಗದು. ಅಷ್ಟಕ್ಕೂ ಬರೀ ವೋಟು ಬ್ಯಾಂಕಿಗೊಸ್ಕರ ಸರ್ಕಾರಿ ಇಲಾಖೆಯ ನಷ್ಟಗಳನ್ನು ಬದಿಗೊತ್ತಿ, ಮುಂದೊಂದು ದಿನ ವಿಶ್ವ ಬ್ಯಾಂಕ್ ಮುಂದೆ ನಿಂತು ಸಾಲಕ್ಕಾಗಿ ಕೈಯೊಡ್ಡುವುದಕ್ಕಿಂತ ಈಗಲೇ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸಮಂಜಸವಲ್ಲವೇ? ಹಾಗೆ ಮಾಡುವ ಸರ್ಕಾರಗಳು ಮತ್ತೆ ಆ ಸಾಲದ ಹೊರೆಯನ್ನು ಹೊರಿಸುವುದು ಇದೇ ಮಧ್ಯಮ ವರ್ಗದ ಜನರ ಮೇಲೆಂದು ನೆನಪಿರಲಿ.
ತಪ್ಪು ಮಾಡಿದಾಗ ಟೀಕಿಸುವ, ಸರಿಯೆನಿಸಿದಾಗ ಪ್ರಶಂಸಿಸುವ ಅಧಿಕಾರ ನಮ್ಮೆಲ್ಲರಿಗೂ ಇದೆ. ಏಕೆಂದರೆ ಎಲ್ಲರಿಗೂ ಒಳ್ಳೆಯ ದಿನಗಳು ಬೇಕು. ಸರ್ಕಾರದ ಜೊತೆ ಆ ಒಳ್ಳೆಯ ದಿನಗಳತ್ತ ಹೆಜ್ಜೆ ಹಾಕುವದನ್ನು ನಾವೆಲ್ಲರೂ ಕಲಿಯಬೇಕು. ಜನರನ್ನು ಬದಲಾಯಿಸುವ ಅವಶ್ಯಕತೆಯೇನು ಇಲ್ಲ, ಆದರೆ ಬದಲಾವಣೆಯಲ್ಲಿ ಜನರು ಪಾಲ್ಗೊಳ್ಳುವ ಅವಕಾಶ ಕಲ್ಪಿಸಿಕೊಟ್ಟರೆ ಸಾಕು. ಮೋದಿ ಸರ್ಕಾರ ಜನರಿಗೆ ಅಂಥದ್ದೊಂದು ಅವಕಾಶ ಕಲ್ಪಿಸಿಕೊಡಲು ಮುಂದು ನೋಡುತ್ತಿದೆ. ಕಳೆದ ಹತ್ತು ವರ್ಷಗಳಿಂದ ಹಣಕಾಸು, ಭದ್ರತೆ, ಮಹಿಳಾ ಸುರಕ್ಷೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಥಾನ, ಸರ್ಕಾರಿ ಬೊಕ್ಕಸ, ಎಲ್ಲದರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಕೇವಲ ಮೂರು ವಾರಗಳಲ್ಲಿ ಇವುಗಳನ್ನು ಸುಧಾರಿಸಲಾಗುವದಿಲ್ಲ. ಆದರೆ ಕೈ ಕೆಸರಾದರೆ ಬಾಯಿ ಮೊಸರು ಎನ್ನುವಂತೆ ಈ ಸರ್ಕಾರದ ಕಠಿಣ ನಿರ್ಧಾರಗಳೆಲ್ಲವೂ ಮುಂದೊಂದು ದಿನ ಸಾಮಾನ್ಯ ಜನರಿಗೆ ಆಚ್ಛೆ ದಿನಗಳು ತರಲಿವೆ.
ಹಿಂದಿನ ಸರ್ಕಾರಗಳು ನಮಗೆ ಅದೆಷ್ಟು ಉಚಿತ ದಿನಗಳನ್ನು(ನಷ್ಟದ ನಂತರವೂ) ತೋರಿಸಿವೆಯೆಂದರೆ, ನಮ್ಮಲ್ಲಿ ಕೆಲವರು ಹೊಸ ಸರ್ಕಾರ ಇನ್ನೂ ಹೆಚ್ಚು ಉಚಿತ ವಸ್ತುಗಳನ್ನು ಕೊಡಬಹುದು ಅಂದುಕೊಂಡಿದ್ದರೆನೋ? ಒಳ್ಳೆಯ ದಿನಗಳಲ್ಲಿ ಯಾರು ಉಚಿತ ಅಕ್ಕಿ, ಬೇಳೆ ತಿಂದು ಸೋಮಾರಿಗಳಾಗುವದು ಬೇಡ.
ಕಳೆದ ಮೂರು ವಾರದಲ್ಲಿ ನೆರೆ ರಾಷ್ಟ್ರಗಳೊಂದಿಗಿನ ಸಂಬಂಧ ಹೆಚ್ಚಿಸಲು ಮಾಡಿರುವ ಪ್ರಯತ್ನಗಳು, ಅಧಿಕಾರಿಗಳಿಗೆ ಸ್ವಾತಂತ್ರ್ಯ ಹಾಗೂ ಉತ್ತಮ ಆಡಳಿತ ಕೊಡಲು ಹುರಿದುಂಬಿಸಿರುವುದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವ ಹಾಗೂ ಎಲ್ಲ ದೇಶಗಳು ಭಾರತವನ್ನು ಮತ್ತೆ ನೋಡುವಂತೆ ಮಾಡಿರುವುದು, ಕೆಲಸಗಾರ ಮಂತ್ರಿ ಮಂಡಲ ರಚಿಸಿರುವದು, ಗಡಿ ಭದ್ರತೆ ಮತ್ತು ನೌಕ ಪಡೆಗಳಲ್ಲಿ ವಿಶ್ವಾಸವನ್ನು ತುಂಬಿರುವುದು, ದಿನಕ್ಕೆ ಹನ್ನೆರಡು ಗಂಟೆಗಳ ಕಾಲ ಕೆಲಸ ಮಾಡುವುದು, ಪ್ರಜಾಪ್ರಭುತ್ವದ ದೇಗುಲವನ್ನು ಪರಿಚಯಿಸಿದ್ದು, ಯಾವುದೇ ರೀತಿಯ ದ್ವೇಷ ರಾಜಕಾರಣ ಅಥವಾ ಹೇಳಿಕೆ ಕೊಡದಿರುವುದು, ಇವೆಲ್ಲವೂ ಕುಸಿದು ಹೋಗಿರುವ ಪರಿಸ್ಥಿತಿಯನ್ನು ಸುಧಾರಿಸುವ, ಭವಿಷ್ಯದಲ್ಲಿ ಆಶಾದಾಯಕ ದಿನಗಳನ್ನು ತಂದುನಿಲ್ಲಿಸುವ ಮುನ್ಸೂಚನೆಯಾಗಿ ಗೋಚರಿಸುತ್ತಿವೆ
This is the best decision taken by NDA govt. Indians should remember that, We shouldn’t loose a year-food just for a meal of one day.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 65 ವರ್ಷಗಳ ನಂತರವೂ ಒಳ್ಳೆಯ ದಿನಗಳಿಗೆ ಕಾಯುವ ಗತಿ ಬಂತಲ್ಲಾ!