ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 20, 2014

34

ಸಂಸ್ಕೃತ ಸಪ್ತಾಹ ಮತ್ತು ಆರ್ಯ-ದ್ರಾವಿಡ ವಾದವೆಂಬ ಸತ್ತ ಕುದುರೆ

‍ನಿಲುಮೆ ಮೂಲಕ

– ಪ್ರವೀಣ್ ಪಟವರ್ಧನ್ (ಪ್ರ ಕೊ ಪ )

ಸಂಸ್ಕೃತಸ್ನೇಹಿತರೊಬ್ಬರು, ‘Breaking India’ ಪುಸ್ತಕ ಓದುತ್ತಿದ್ದರೆ ನಿದ್ದೆಯೇ ಬರುವುದಿಲ್ಲ , ಯೋಚನೆಯಲ್ಲಿ ಮುಳುಗಿಸುತ್ತದೆ, ನಮ್ಮ ದೇಶ ಭಾರತವನ್ನು ವಿಭಜಿಸುವಲ್ಲಿನ ಪಾತ್ರಧಾರಿಗಳ ಬಗ್ಗೆ, ಆ ವಿಭಜಿಸುವ ತಂತ್ರಕ್ಕೆ ಬೆನ್ನೆಲುಬು ಇಲ್ಲದಿದ್ದರೂ ದೇಶವನ್ನು ಬೆರಗುಗೊಳಿಸುವಂತೆ ಹೆಣೆದ ಸುಳ್ಳಿನ ಕಂತೆಯನ್ನು, ಅವರ ಕಾರ್ಯತಂತ್ರವನ್ನೂ ಲೇಖಕರಾದ ರಾಜೀವ್ ಮಲ್ಹೋತ್ರಾ ತಿಳಿಸಿದ್ದಾರೆಂದು ತಿಳಿದಾಗಲೇ ಆ ಪುಸ್ತಕವನ್ನು ಕೊಂಡು ಓದುವ ಸಾಹಸಕ್ಕೆ ಮುಂದಾದೆ. 600 ಪುಟಕ್ಕೂ ಮೀರಿದ ಈ ಪುಸ್ತಕವನ್ನು ಓದಲಾರಂಭಿಸಿದ್ದು ಇತ್ತೀಚೆಗಿನ ಹೊಸ ವಿವಾದವೊಂದು ಸೃಷ್ಟಿಯಾದ ಬಳಿಕವೇ. ಪುಸ್ತಕದಲ್ಲಿ ಬರೋಬ್ಬರಿ 60 ಪುಟಗಳ ವಿವಿಧ ಆಧಾರ ಗ್ರಂಥಗಳನ್ನು ಉಲ್ಲೇಖಿಸಿರುವ ರಾಜೀವ್ ಮಲ್ಹೋತ್ರ, ಅರವಿಂದನ್ ನೀಲಕಂದನ್ ಇನ್ನೆಷ್ಟು ಅಧ್ಯಯನ ಮಾಡಿರಬೇಕು ಎಂಬುದನ್ನು ಊಹಿಸಲೂ ಅಸಾಧ್ಯ.

ವಿವಾದ:
ಆಗಸ್ಟ್ ತಿಂಗಳ ಎರಡನೆಯ ವಾರವನ್ನು ಸಂಸ್ಕೃತ ಸಪ್ತಾಹವೆಂದು ಘೋಷಿಸಿ ಆ ವಾರ ಸಿ.ಬಿ.ಎಸ್.ಸಿ (ಬೋರ್ಡ್) ಪಠ್ಯಕ್ರಮದ ವ್ಯಾಪ್ತಿಗೆ ಬರುವ ಎಲ್ಲಾ ಹದಿನೈದು ಸಾವಿರ ಶಾಲೆಗಳು ಸಂಸ್ಕೃತ ಸಪ್ತಾಹವನ್ನು ಆಚರಿಸಬೇಕೆಂದು ಬೋರ್ಡ್ ಸೂಚನೆಯನ್ನು ಹೊರಡಿಸಿತು. ಈ ವಿಷಯ ಸೋಷಿಯಲ್ ಮೀಡಿಯಾದಲ್ಲೂ ಚರ್ಚೆಗೊಳಗಾಯಿತು. ಕಟ್ಟಾ ಕನ್ನಡಾಭಿಮಾನಿಗಳು ಇದನ್ನು ವಿರೋಧಿಸಿದರು. ಸಂಸ್ಕೃತಕ್ಕೆ ಮಾನ್ಯತೆ ನೀಡುವ ಕೇಂದ್ರ ಸರ್ಕಾರ ನಮ್ಮ ದೇಶದ ಪ್ರತಿಯೊಂದು ಭಾಷೆಗೂ ಈ ತರಹದ ಚಟುವಟಿಕೆಯನ್ನು ಹಮ್ಮಿಕೊಳ್ಳುವ ಯೋಜನೆ ಮಾಡಬೇಕು. ಅದರ ಬದಲು ಸಂಸ್ಕೃತಕ್ಕೇನು ವಿಶೇಷ ಎಂದೆಲ್ಲಾ ಚರ್ಚಿಸತೊಡಗಿದರು. ಬೋರ್ಡ್‌ನ ಈ ತಾರತಮ್ಯ (?) ನೀತಿಯನ್ನೂ ಖಂಡಿಸಿದರು. ಈ ಬಗೆಯ ಸಂಸ್ಕೃತ ಒಲವು ಮಾತೃಭಾಷೆಯನ್ನು ಕಡೆಗಣಿಸುತ್ತದೆಂಬುದೇ ಹಲವರ ಮೂಲ ಆಪಾದನೆಯಾಗಿತ್ತು. ಈ ತರಹದ ಚರ್ಚೆಗೆ ಕೆಲ ಉತ್ತರಗಳನ್ನು ಹುಡುಕೋಣ. ಜೊತೆಗೆ ಈ ಚರ್ಚೆಯನ್ನು ನಮ್ಮಗಳ ನಡುವೆ ಮುಂದಿಟ್ಟ ಕಾರಣಗಳನ್ನೂ ಕೆಲ ಮಟ್ಟಿಗೆ ಮೆಲಕು ಹಾಕೋಣ.

ಸಂಸ್ಕೃತ ಸಪ್ತಾಹದ ಪರವಾಗಿಯೇ ನಿಲ್ಲುತ್ತಾ…..
1. ಸಂಸ್ಕೃತ ನಮ್ಮ ನೆಲದ ಭಾಷೆಯೇ. ಇನ್ನಾವುದೋ ನೆಲದಿಂದ ಬಂದ ಭಾಷೆಯನ್ನು ಪ್ರವರ್ತಿಸುತ್ತಿದ್ದರೆ ಅದಕ್ಕೆ ವಿರೋಧಿಸುವುದು ಸರಿಯೇ.
2. ಸಂಸ್ಕೃತವೇ ಭಾರತ ಭಾಷೆಗಳ ತಾಯಿ ಎಂದು ತಿಳಿದುಕೊಂಡಿದ್ದಾಗಿದೆ. ಈ ವಿಷಯವಾಗಿ ಸಾಕಷ್ಟು ಪುರಾವೆಗಳೂ ಇವೆ.
3. ಈ ಸಪ್ತಾಹ ಮಕ್ಕಳಿಗೆ ಸಂಸ್ಕೃತ ದಲ್ಲಿ ಕಾವ್ಯ, ನಾಟಕ, ಶಾಸ್ತ್ರವನ್ನು ಬರೆಯಲು ಮುಂದು ಮಾಡದೇ ಅವರಲ್ಲಿ ಸಂಸ್ಕೃತದ ಬಗ್ಗೆ ಒಂದು ಭಾವ, ಅದರಲ್ಲಿನ ಸಾರ, ಮಾಧುರ್ಯವನ್ನು ತೋರ್ಪಡಿಸುವುದೇ ಆಗಿದೆಯೆಂದು ಸಾಮಾನ್ಯರಲ್ಲಿ ಸಾಮಾನ್ಯರೂ ತಿಳಿದುಕೊಳ್ಳಬಹುದಾಗಿದೆ.
4. ಇಂತಹ ಸಪ್ತಾಹದಿಂದ ಮಕ್ಕಳಲ್ಲಿ ವಿಶೇಷ ಆಸಕ್ತಿ ಬೆಳೆಯಬಹುದೇ ಹೊರತು, ಮಾತೃಭಾಷೆಯ ಒಲವು ಕಡಿಮೆಯಾಗುತ್ತದೆಂದು ಹೇಳಲು ಯಾವುದೇ ಪುರಾವೆಗಳೂ ಕಾಣಸಿಗುವುದಿಲ್ಲ.
5. ಸಂಸ್ಕೃತ ದಲ್ಲಿ ರಚಿತವಾದ ಮಹಾಕಾವ್ಯಗಳು, ಪುರಾಣಗಳು, ನಾಟಕಗಳನ್ನು ಮಕ್ಕಳಿಗೆ ಹೇಳಿಕೊಟ್ಟು ಒಂದು ವಾರದಲ್ಲಿ ಮಕ್ಕಳ ಮೆದುಳಿನಲ್ಲಿ ಬಲವಂತವಾಗಿ ತುಂಬುವ ಯೋಜನೆಯಂತೆಯಂತೂ ಇದು ಕಂಡು ಬರುವುದಿಲ್ಲ.
ಸಂಸ್ಕೃತ ಕಲಿಯುವಿಕೆ ಕಷ್ಟಕರ ಎಂಬುವ ತಪ್ಪು ಗ್ರಹಿಕೆಯನ್ನೇ ಹೋಗಲಾಡಿಸಲು ಕೈಗೊಂಡಿದ್ದಿರಬಹುದಾದ ಈ ಯೋಜನೆಯಿಂದ ಭಾರತದ ಇನ್ನಾವುದೇ ಭಾಷೆಯಾಗಲಿ ಕಲಿಯುವುದಕ್ಕೆ ಸುಲಭವೇ ಆಗುತ್ತದೆ. ಏಕೆಂದರೆ,
1. ಯಾವುದೇ ಭಾರತೀಯ ಭಾಷೆಯ 60-70 ಪ್ರತಿಶತ ಪದಗಳ ಬಳಕೆ ಸಂಸ್ಕೃತದ್ದೇ.
2. ಬರೆಯುವಂತೆ ಓದುವ ವಿಷಿಷ್ಟ ಶೈಲಿ ಸಂಸ್ಕೃತ ಹಾಗೂ ಸಂಸ್ಕೃತದಿಂದ ಬೆಳೆದ ಇತರೆ ಭಾಷೆಗಳಿಗಿವೆ. (ಫೋನಿಟಿಕ್ಸ್) ಇದನ್ನು ಪಾಶ್ಚಾತ್ಯ ಭಾಷೆಗಳಲ್ಲಿ ಕಾಣಲು ಸಿಗುವುದಿಲ್ಲ.
3. ಹೊಸ ಪದಗಳನ್ನು ರಚಿಸುವ ಅಮೋಘ ಸದವಕಾಶ ಸಂಸ್ಕೃತದಲ್ಲೂ ಇದ್ದೇ ಇದೆ.
4. ಸಂಸ್ಕೃತ ಪದ ಭಂಡಾರವು ವೈಜ್ಞಾನಿಕವಾಗಿದ್ದು ಪ್ರತಿ ಪದಕ್ಕೂ ಅರ್ಥವಷ್ಟೇ ದೊರೆಯದೆ ಪದ ರಚನೆಯ ಮೂಲ ಪ್ರೇರಣೆ, ಕಾರಣಗಳೂ ಸಿಗುತ್ತವೆ. ಇತರೆ ಹಲವು ಭಾಷೆಗಳಲ್ಲಿ ಪದಗಳು ಅಭೇದ್ಯ.

ಇದೊಂದು ವಿನೂತನ ಶಿಬಿರದಂತೆ, ಮಕ್ಕಳಿಗೆ ಹೊಸತಾದ, ತೀರಾ ಹೊಸತೂ ಅಲ್ಲದ, ಸಮದ್ಧವಾದ – ತೀರಾ ಕ್ಲಿಷ್ಟಕರವಲ್ಲದ, ನಮ್ಮದೇ ನೆಲದ ಮರೆತು ಹೋದ ಭಾಷೆಯನ್ನು ಮುಂದಿಟ್ಟು, ತಾವು ಹೇಳಿಕೊಳ್ಳುವ ಪುಟ್ಟ ಶ್ಲೋಕಗಳ, ಸುಭಾಷಿತರಸಾಮೃತಗಳ ಅರ್ಥ ಕಂಡುಹಿಡಿದುಕೊಳ್ಳುವುದೇ ಆದಂತೆ ಕಾಣುತ್ತದೆ. ಕಾಲೇಜುಗಳಲ್ಲಿ ಫ್ರೆಂಚ್, ಜರ್ಮನ್ ಇತರೆ ಭಾಷೆಗಳನ್ನು ಕಲಿಯಲು ಮಕ್ಕಳು ಮುಂದಾದಾಗ ವಿರೋಧಿಸಲು ಮರೆತು ಬಿಡುವ ನಾವು ಸಂಸ್ಕೃತ ಕ್ಕೆ ವರ್ಷದ ಒಂದು ವಾರವನ್ನು ಮೀಸಲಿಡುವುದು ಹೇಗೆ ತಪ್ಪಾಗಬಹುದು. ಇವೆಲ್ಲದರ ಜೊತೆಗೆ ನಮ್ಮ ವಾದವನ್ನು ಪುಷ್ಟಿಗೊಳಿಸುವಂತೆ ಸಿ.ಬಿ.ಎಸ್.ಸಿ ಬೋರ್ಡ್ ಈ ನಿಯಮವನ್ನು ಕಡ್ಡಾಯಮಾಡಿಲ್ಲ. ಹಾಗಿರುವಾಗ ಆಸಕ್ತ ಪೋಷಕರು, ವಿದ್ಯಾರ್ಥಿಗಳಷ್ಟೇ ಈ ಯೋಜನೆಯನ್ನು ಅನುಭವಿಸುವಂತಾಗಿದೆ. ಆದ್ದರಿಂದ ಸಂಸ್ಕೃತ ಅಭಿಮಾನಿಗಳಿಗೆ ಬೋರ್ಡ್‌ನ ಸಂಸ್ಕೃತ ಸಪ್ತಾಹ ಕಡ್ಡಾಯವಾಗದಿರುವಿಕೆಯ ನಿರ್ಧಾರ ನಿರಾಶಾದಾಯಕವಾಗುತ್ತದೆಯೇ ಹೊರತು ಮತ್ತೆ ಯಾರಿಗೂ ಇಲ್ಲಿ ಭೂಮಿಕೆ ಇದ್ದಂತೆ ತೋರುವುದಿಲ್ಲ. ಪ್ರಜಾಪ್ರಭುತ್ವದ ನಾಡಿನಲ್ಲಿ ಪ್ರತಿಯೊರ್ವನಿಗೂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆಯಾದರೂ, ಯೋಜನೆಯ ಹಿಂದಿನ ಗುರಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಚರ್ಚೆಯ ಅವಶ್ಯಕತೆಯನ್ನು ಈ ಮೂಲಕ ಪ್ರಶ್ನಿಸುತ್ತೇನೆ.

ಕೇಂದ್ರದಲ್ಲಿ ಇತ್ತೀಚೆಗೆ ಹೊಸ ಸರ್ಕಾರವೊಂದು ರಚನೆಯಾಗಿ ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರಾದ ಸುಶ್ಮಾ ಸ್ವರಾಜ್, ಡಾ. ಹರ್ಷವರ್ಧನ್, ಉಮಾ ಭಾರತಿ ಬಳಸಿದ್ದೂ ಸಂಸ್ಕೃತವನ್ನೇ. ಆಗಲೂ ಇರಸುಮುರುಸಾದ ಕೆಲವರು ತಮ್ಮ ಮಾತೃಭಾಷೆಯಲ್ಲಿಯೇ ಪ್ರಮಾಣ ವಚನ ಸ್ವೀಕರಿಸಬಹುದಿತ್ತೆಂದು ಪುಕ್ಕಟೆ ಸಲಹೆ ಇತ್ತರು. ಪ್ರಾಯಶಃ ಅವರುಗಳು ಅಂದು ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರೆ, ಇತರೆ ಭಾಷೆಯ ಅಭಿಮಾನಿಗಳು ಹಿಂದಿ ಧೋರಣೆಯೆಂದು ಮತ್ತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೋ ಏನೋ.

ಹುನ್ನಾರದ ವೇದಿಕೆ:
ನಮ್ಮ ದೇಶವನ್ನು ಅರಬ್ಬಿನಿಂದ ಬಂದ ಮುಸಲ್ಮಾನರು, ಪೋರ್ತುಗೀಸರು, ಡಚ್ಚ್‌ರು, ಫ್ರೆಂಚರು, ಬ್ರಿಟಿಷರು ಹಲವು ವರ್ಷಗಳ ಕಾಲ ಆಳಿದ್ದಾರೆ. ನಮ್ಮ ದೇಶಕ್ಕಿದ್ದ ತನ್ನದೇ ಆದ ಜೀವನ ಪದ್ಧತಿಯನ್ನು ಬದಲಿಸುವ ವ್ಯವಸ್ಥಿತ ಕಾರ್ಯ ಇವರುಗಳಿಂದ ನಡೆದಿತ್ತಾದರೂ ಅವರೆಲ್ಲರೂ ಸೋತವರ ಸಾಲಿಗೇ ಸೇರಿಹೋದರು. ಇಂದಿಗೂ ಬ್ರಿಟಿಷರ ಆಗಮನದಿಂದಲೇ ನಮ್ಮ ದೇಶದಲ್ಲಿ ಅಭಿವೃದ್ಧಿ, ಹೊಸ ಪದ್ಧತಿಯ ಕಲ್ಪನೆಗಳು, ಆಯಾಮಗಳು ಪ್ರಾರಂಭವಾದದ್ದು ಎಂದು ವಾದಿಸುವ ಬುದ್ಧಿಜೀವಿಗಳಿದ್ದಾರೆ. ದೇಶವನ್ನು, ನಾಗರಿಕರನ್ನು, ಎಲ್ಲಕ್ಕಿಂತ ಮಿಗಿಲಾಗಿ ದೇಶದ ಸಂಸ್ಕೃತಿ, ಸತ್ಯಗಳನ್ನು ಕೀಳಾಗಿ ಕಂಡ ಇವರುಗಳು ನೀಡಿದ ಅಭಿವೃದ್ಧಿ ಯಾವ ಮಟ್ಟದ್ದಿರಬಹುದೆಂದು ನಾವು ಅರ್ಥೈಸಿಕೊಳ್ಳಬಹುದು. ಬ್ರಿಟಿಷರು ದೇಶದ ಆಡಳಿತ ಸುಗಮವಾಗಿ ನಡೆಸಲು ತೆಗೆದುಕೊಂಡ ಹಲವು ನೀತಿಗಳನ್ನು ಇಂದಿಗೂ ನಾವು ಪಾಲಿಸುತ್ತಿದ್ದೇವೆ ಹಾಗೂ ಇಂದಿಗೂ ಪ್ರಚಲಿತವಾಗಿವೆ ಎಂದರೆ ಅದು ಹಾಸ್ಯಾಸ್ಪದ. ಉತ್ತರ – ದಕ್ಷಿಣ ಭಾರತೀಯರನ್ನು ಬೇರ್ಪಡಿಸಿದರೆ ಈ ದೇಶವನ್ನೇ ಒಡೆದಂತೆ ಎಂದು ಯೋಚಿಸಿ ಆ ನಿಟ್ಟಿನಲ್ಲಿ ತಮ್ಮದೇ ವ್ಯಾಖ್ಯಾನವನ್ನು ಪ್ರದರ್ಶಿಸಿದವರಲ್ಲಿ ಜರ್ಮನ್, ಬ್ರಿಟಿಷ್ ಮತ ಪ್ರಚಾರಕರ ಪಾತ್ರ ಅತಿ ದೊಡ್ಡದು. ಜ್ಞಾನದ ದಾಹ ತೊರಿ ಭಾರತಕ್ಕೆ ಬಂದು ಹೊಸತನ್ನು ಕಲಿಯುವ ಯೋಜನೆ, ಸಂಶೋಧನೆಯಾಗಿ ಪರಿವೃತಗೊಂಡು ಸತ್ಯವನ್ನು ಮುಚ್ಚಿಟ್ಟು ಇವರಿಗೆ ಬೇಕಾದ ಸಂಗತಿಗಳನ್ನೇ ಸತ್ಯದ ಚಿತ್ರಣವೆಂದು ಹಾಡಿದವರು ಅಂದಿನ ಚರ್ಚ್ ಪಾದ್ರಿಗಳು.

ಮೊದಮೊದಲು ಭಾರತಕ್ಕೆ ಬಂದಾಗ, ಸಂಸ್ಕೃತ ಅಧ್ಯಯನಗಳನ್ನು ಅವರು ಕೈಗೊಂಡಾಗ ಸಂಸ್ಕೃತ ಅವರಿಗೆ ತಿಳಿದಿದ್ದ ಗ್ರೀಕ್, ಲ್ಯಾಟಿನ್, ಇಂಗ್ಲಿಷ್‌ಗಿಂತಲೂ ಶ್ರೇಷ್ಠ ಎಂಬುದನ್ನು ವ್ಯಕ್ತಪಡಿಸುತ್ತಿದ್ದರು. ಸರ್ ವಿಲಿಯಮ್ ಜೋನೆಸ್ ಮೊದಲಾದವರು ಸಂಸ್ಕೃತವನ್ನು ಹೆಚ್ಚು ಹೆಚ್ಚು ಉಪಯೋಗಿಸುವಂತಾದರು. 1801 ರಲ್ಲಿ ಕೋಲ್ ಬ್ರುಕ್ ಎಂಬುವವನು ತನ್ನ ಒಂದು ಲೇಖನದಲ್ಲಿ ಭಾರತೀಯ ಭಾಷೆಗಳೆಲ್ಲಕ್ಕೂ ಮೂಲ ಭಾಷೆ, ಜನನಿ ಭಾಷೆ ಸಂಸ್ಕೃತ ಎಂದು ತಿಳಿಸಿದ್ದನು.

ಕಲ್ಕತ್ತಾ ದ ಫೋರ್ಟ್ ವಿಲ್ಲಿಯಮ್ಸ್ ಕಾಲೇಜಿನಲ್ಲಿ ವಿಲ್ಲಿಯಮ್ ಕೇರಿಯೂ ಇದನ್ನೇ ಹೇಳುತ್ತ, ಸಂಸ್ಕೃತ ಭಾಷೆಯೇ ಎಲ್ಲಾ ಭಾಷೆಗಳನ್ನು ಜೋಡಿಸುತ್ತದೆ ಎಂದೂ ನುಡಿದಿದ್ದನು. ಆದರೆ ಬ್ರಿಟಿಷ್ ವಸಾಹತು ಅಧಿಕಾರಿಗಳಾದ ಫ್ರಾನ್ಸಿಸ್ ಎಲಿಸ್, ಅಲೆಕ್ಸಾಂಡರ್ ಕ್ಯಾಮ್‌ಬೆಲ್ ನಮ್ಮ ದೇಶಕ್ಕೆ ಆಗಮಿಸಿದ ನಂತರ ತಮ್ಮ ಕಾರ್ಯಕ್ಷೇತ್ರವನ್ನು ತಮಿಳು, ತೆಲುಗು ಕಲಿಯುವಿಕೆಯಾಗಿ ಚುನಾಯಿಸಿಕೊಂಡರು. ಸಮಕಾಲೀನನಾದ ಬ್ರಯಾನ್ ಹಾಗ್ಟನ್ ಜನಾಂಗದ ತಜ್ಞತೆಯನ್ನು ಬೆಳೆಸಿಕೊಳ್ಳುವಲ್ಲಿ ಮುಂದಾದನು. ಭಾಷಾ ಪರಿಣತಿ ಹೊಂದಿದ್ದೆವೆಂದು ಬೀಗಿದ ಫ್ರಾನ್ಸಿಸ್, ಕ್ಯಾಮ್‌ಬೆಲ್ ಹೊಸತೊಂದು ಸಂವೇದನೆಯನ್ನು ಜನರ ಮುಂದಿಟ್ಟು, ತೆಲುಗು, ತಮಿಳು ಹತ್ತಿರದ ಸಂಬಂಧಿಭಾಷೆಯೆಂದೂ ಸಂಸ್ಕೃತಕ್ಕಿಂತಲೂ ಬಹಳವೇ ಭಿನ್ನವೆಂದು ಪ್ರಸ್ತಾಪಿಸಿದರು. ಈ ವಾದಕ್ಕೆ ಇಂಬು ಕೊಡಲೋಸುಗ ಬ್ರಯಾನ್‌ನ ಉತ್ತರ ಭಾರತ- ದಕ್ಷಿಣ ಭಾರತ ದ ಜನರಲ್ಲಿನ ವ್ಯತ್ಯಾಸವನ್ನು ಪ್ರಸ್ತಾಪಿಸಿದನು. ಈ ಅಪಸ್ವರದ ಜುಗಲಬಂದಿಯು ನಡೆಯುತ್ತಿರುವಂತೆ, ಹಲವಾರು ಭಾಷಣಗಳನ್ನು, ಪುಸ್ತಕಗಳನ್ನು ಪ್ರಕಟಿಸುತ್ತಿದ್ದ ಅಂದಿನ ಚರ್ಚುಗಳು ಮತ ಪ್ರಚಾರಕನಾದ ಬಿಷಪ್ ರಾಬರ್ಟ್ ಕಾಲ್ಡ್‌ವೆಲ್‌ನ ಮೊರೆ ಹೋದವು. ಕಾಲ್ಡ್‌ವೆಲ್ ಭಾರತಕ್ಕೆ ಬಂದಾಗ ಅವನ ವಯಸ್ಸು 24 ವರ್ಷ. ಕೆಲಸದ ಕಸುವು, ಬಿಷಪ್‌ನ ಬಲಿಷ್ಠ ಜವಾಬ್ದಾರಿ ಅವನ ಮೇಲಿದ್ದುದು ಅವನಿಗೆ ತಿಳಿದೇ ಇತ್ತು. ಬ್ರಿಟಿಷರ ಒಡೆದು ಆಳುವ ನೀತಿಗೆ ಸರಿಹೊಂದುವಂತೆ ಕಾಲ್ಡ್‌ವೆಲ್ ಭಾಷೆಯ ಭಿನ್ನತೆ, ಜನಾಂಗೀಯ ವ್ಯತ್ಯಾಸವನ್ನು ಉಪಯೋಗಿಸಿಕೊಂಡು ಆರ್ಯ ದ್ರಾವಿಡ ಎಂಬ ಕಲ್ಪನೆಯನ್ನು ಜನರ ಎದುರಿಟ್ಟು ನಂಬಿಸಲು ಮುಂದಾದನು.

ಅಸಲಿಗೆ ಆರ್ಯ, ದ್ರಾವಿಡ ಎರಡೂ ಸಂಸ್ಕೃತ ದ ಪದಗಳೇ. ಆರ್ಯ ಎಂದರೆ ಸಾತ್ವಿಕ, ಸುಗುಣ. ದ್ರಾವಿಡ ಎಂಬುದು ಪ್ರಾದೇಶಿಕ ಪದ. ಆದಿ ಶಂಕರಚಾರ್ಯರು ವಾರಾಣಸಿಗೆ ಹೋಗಿ ಮಂಡನ ಮಿಶ್ರರೊಂದಿಗೆ ವಾದದಲ್ಲಿ ಇಳಿದಾಗ ತನಗೆ ಕೇಳಲಾದ ‘ನೀನು ಯಾರು’ ಎಂಬ ಪ್ರಶ್ನೆಗೆ ಶಂಕರರು ಉತ್ತರಿಸಿದ್ದು ತಾವೊಬ್ಬ ದ್ರಾವಿಡ ಶಿಶು ಎಂದು. ದ್ರಾವಿಡ ಪದದ ಅರ್ಥ – 3 ಸಮುದ್ರಗಳು ಸೇರುವ ಸ್ಥಳವೆಂದು (peninsula). ಈ ಸ್ಥಳೀಯ ಅರ್ಥವನ್ನು, ಜನಾಂಗೀಯವಾಗಿ ಪರಿವರ್ತಿಸಿ ದ್ರಾವಿಡರು ದಕ್ಷಿಣ ಭಾರತದವರು, ಆರ್ಯರು ಪಶ್ಚಿಮದಿಂದ ಬಂದವರು ಎಂಬ ಅಪ್ಪಟ ಸುಳ್ಳನ್ನು ಪ್ರತಿಪಾದಿಸಿದನು. ಚರ್ಚುಗಳೋ ಇವನು ಹೇಳಿದ್ದನ್ನು ಒಪ್ಪುತ್ತಲೇ ಇತ್ತು. ಉಳಿದಂತೆ ಕಾಲ್ಡ್‌ವೆಲ್ ತನ್ನ ಸ್ನೇಹಿತರಿದ್ದ ಕಾಲೇಜು, ಶಾಲೆಗಳಲ್ಲಿ ತನ್ನ ಈ ಸಿದ್ದಾಂತವು ಜನಪ್ರಿಯವಾಗುವಂತೆ ನೋಡಿಕೊಳ್ಳುತ್ತಲೇ ಇದ್ದನು.

ಯಾವ ಮಟ್ಟದ ಸಂಶೋಧನೆಯೂ ಇಲ್ಲದೇ ತಮಗೆ ತೋಚಿದ ಭಾರತದ ಏಕತೆಯನ್ನು ಒಡೆಯುವ ಹುನ್ನಾರದಲ್ಲಿ ತೊಡಗಿದ ಬ್ರಿಟಿಷರು ಹಾಗೂ ಅವರ ಕೃಪೆಗೆ ಪಾತ್ರರಾದ ಅಂದಿನ ಕ್ರಿಶ್ಚಿಯನ್ ಮತ ಪ್ರಚಾರಕರು ಇನ್ನುಳಿದ ಸುಳ್ಳುಗಳನ್ನು ಹೇಳಲಾರಂಭಿಸಿದರು. ಉದಾಹರಣೆಗೆ,

1. ಭಾರತ- ಯೂರೋಪ್ ದೇಶಗಳ ಭಾಷೆಗಳ ಸಮಾನತೆಯ ಹೊಸ ಪರಿಕಲ್ಪನೆಯನ್ನು ತೇಲಿಬಿಟ್ಟರು. ಹೀಗೆ ಮಾಡಲು ಮುಖ್ಯ ಕಾರಣ ಬಿಳಿ ಚರ್ಮದ ವ್ಯಾಮೋಹ ಹಾಗೂ ಬಿಳಿ ಚರ್ಮದವರೇ ಶ್ರೇಷ್ಠ ಎಂಬ ಅವರ ಮೂಢನಂಬಿಕೆ. ಆದ್ದರಿಂದಲೇ ಆರ್ಯರು ಬುದ್ಧಿವಂತರು, ಪ್ರಜ್ಞಾವಂತರು, ಮುಂದುವರೆದವರು (ಉದಾಹರಣೆಗೆ ಹಿಟ್ಲರ್ ತಾನು ಆರ್ಯನೆಂದು ಹೇಳಿಕೊಳ್ಳುತ್ತಾ ಸ್ವಸ್ತಿಕ ಚಿನ್ಹೆಯನ್ನು ಬಳಸುತ್ತಿದ್ದುದು) ಯುರೋಪಿಯನ್ನರಿಗೂ ಆರ್ಯರಿಗೂ ವ್ಯತ್ಯಾಸವೇ ಇಲ್ಲ ಎನ್ನುತ್ತಿದ್ದವರು, ಆರ್ಯರು ಯೂರೋಪ್ ನಿಂದಲೇ ಭಾರತಕ್ಕೆ ವಲಸೆ ಬಂದವರು ಎನ್ನುತ್ತಿದ್ದವರು 1921 ರ ಹರಪ್ಪ-ಮೊಹೆಜೊದಾರೋ ಉತ್ಖನನದ ನಂತರ ಆರ್ಯ ದ್ರಾವಿಡ ಸಂಘರ್ಷದ ಅನುಕೂಲ ಸಿಂಧು ಪ್ರತಿಪಾದನೆಯನ್ನು ಮುಂದಿಟ್ಟರು.
2. ಆರ್ಯರು ಮಾತನಾಡುತ್ತಿದ್ದುದು ಸಂಸ್ಕೃತವನ್ನು; ದ್ರಾವಿಡರು ಮಾತನಾಡುತ್ತಿದ್ದುದು ತಮಿಳು, ತೆಲುಗನ್ನು.
3. ಆರ್ಯರು ಬ್ರಾಹ್ಮಣರು ಹಾಗೂ ದ್ರಾವಿಡರು ಬ್ರಾಹ್ಮಣೇತರರು. ಆರ್ಯರು ಮುಂಚಿನಿಂದಲೂ ದ್ರಾವಿಡರನ್ನು ತುಚ್ಛವಾಗಿ ಕಾಣುತ್ತಿದ್ದರು ಹಾಗೂ ಶೋಷಿಸುತ್ತಿದ್ದರು.
4. ದ್ರಾವಿಡರು ಆರ್ಯರಷ್ಟೇ ಸಮರ್ಥರಾಗಿದ್ದರೂ ತಮ್ಮ ಉಳಿವಿನ ಕಾರಣಕ್ಕಾಗಿಯೇ ದುರ್ಬಲರಾಗಿದ್ದುಕೊಂಡು ಜೀವನ ನಡೆಸಿದ್ದರು ಇತ್ಯಾದಿ.

ಇಂತಹ ಸುಳ್ಳಿನ ಕಂತೆಯನ್ನು ಬಯಲು ಮಾಡುವ ಎಷ್ಟೆಷ್ಟೋ ಪುರಾವೆಗಳನ್ನು ನೀಡಿದರೂ ಮದ್ರಾಸಿನ ಪೌರಸ್ತ್ಯರು (orientalists ) ಒಪ್ಪುತ್ತಲೇ ಇರಲಿಲ್ಲ. ಈ ವಿಷಯವಾಗಿಯೇ ಕಲ್ಕತ್ತದ ವಸಾಹತು ಪೌರಸ್ತ್ಯರಿಗೂ ಮದರಾಸಿನ ಪೌರಸ್ತ್ಯರಿಗೂ ದ್ವೇಷ ಮನಸ್ತಾಪಗಳು ಇದ್ದವು. ಕಾಲ್ಡ್‌ವೆಲ್ ಹಾಗೂ ಮತ ಪ್ರಚಾರಕರ ವಾದವನ್ನು ಸಾರಾಸಗಟಾಗಿ ತೆಗೆದುಹಾಕುವುದಕ್ಕೆ ಸಾಕಷ್ಟು ಪುರಾವೆಗಳಿದ್ದವು. ತಿರುನಲ್ವೇಲಿಯ ಬಿಷಪ್ ಆಗಿದ್ದ ಕಾಲ್ಡ್‌ವೆಲ್ ದಕ್ಷಿಣ ಭಾರತದಲ್ಲಿ ದ್ರಾವಿಡ ಸ್ಥಾನವನ್ನು ಗುರುತಿಸಿ ಜನರನ್ನು ವಿಭಜಿಸುವ ಕಾರ್ಯದಲ್ಲಿ ಮಹತ್ವದ ಜವಾಬ್ದಾರಿ ಹೊಂದಿದ್ದನು. ಜನರು ಇವನ ಮಾತನ್ನು ನಂಬುತ್ತಿದ್ದಂತೆಯೇ ಸಮಸ್ಯೆಯ ಇಲಾಜು ಎಂಬಂತೆ ದ್ರಾವಿಡರು (ತಮಿಳರು) ಬೈಬಲ್ ನ ಮೊರೆ ಹೋಗುವುದು ಒಳಿತೆಂದು ಹೇಳುತ್ತಾ ತನ್ನ ಒಳ ಹುನ್ನಾರವನ್ನೂ ಮುಂದಿಟ್ಟನು. ಇಷ್ಟೆಲ್ಲಾ ಪುರಾವೆಗಳು ಕ್ರಿಶ್ಚಿಯನ್ ಪಾದ್ರಿಗಳಿಂದ ಮಾತ್ರವೇ ಕೇಳಸಿಗುವ ದಿವ್ಯ ವಿಚಾರ ಸರಣಿ, ಕಾಲ್ಡ್‌ವೆಲ್ ಹಾಗೂ ಇತರರು ಹೇಳುವ ಹಾಗೆ ಈ ಸಂಘರ್ಷ ಹಿಂದೆ ನಡೆದಿತ್ತೆಂದೇ ಆದರೆ, ಪುರಾವೆಗಳಿರುವುದನ್ನು ನಮ್ಮ ಪುರಾತನ ಗಂಥಗಳಲ್ಲಿ ಹುಡುಕಿ ನೋಡಿದರೆ ಯಾರೊಬ್ಬರೂ (ಕನ್ನಡ, ತಮಿಳು, ತೆಲುಗು, ಸಂಸ್ಕೃತ) ಅಲ್ಲದೇ ಜಾವಾ, ಸುಮಾತ್ರ, ನೇಪಾಳ, ಭೂತಾನ್‌ನ ಕವಿಗಳು ಈ ಆರ್ಯ ದ್ರಾವಿಡ ಸಂಘರ್ಷದ ಬಗ್ಗೆ ಹೇಳಿಯೇ ಇಲ್ಲ. ಈ ಬಗೆಯಾಗಿ ಬ್ರಿಟಿಷ್ ಪಾದ್ರಿಗಳು ಹೇಳಬೇಕಾದರೆ ಇರುವ ಕೊಂಡಿ ಏನಿರಬಹುದೆಂದು ಗಮನಿಸಿದರೆ ವೇದಗಳಲ್ಲಿ ಸಿಗುವುದು, ದೇವತೆಗಳಿಗೂ ಅಸುರರಿಗೂ ಜಗಳ- ವೈಮನಸ್ಸು ಇತ್ತೆಂಬುದಾಗಿ. ಅದರ ಜಾಡನ್ನೇ ಇಟ್ಟುಕೊಂಡು ಜನಾಂಗೀಯ ಜಗಳವಾಗಿ ತೋರಿಸುವಲ್ಲಿ ವಿಶೇಷ ಆಸಕ್ತಿಯಂತೂ ಇವರಲ್ಲಿ ಇದ್ದಿರಲೇಬೇಕು.

ಅದಲ್ಲದೇ ಪಾದ್ರಿಗಳ ಪ್ರೇರಣೆಯಿಂದ ಸಂಸ್ಕೃತ, ತಮಿಳು ತಿಳಿದುಕೊಂಡ ಬ್ರಿಟಿಷರು, ಜರ್ಮನರು ತಮಿಳಿನ ಸಾಹಿತ್ಯದಲ್ಲಿ ಸಿಗುವ ಮೂರು ವಿಧವಾದ ಸಾಹಿತ್ಯಗಳು ಸಾಹಿತ್ಯಗಳನ್ನು ವಿಂಗಡಿಸುವ ಕಾರ್ಯದಲ್ಲಿ ತೊಡಗಿದರು.

1. ತಿರುವಳ್ಳುವರ್ ರಚಿಸಿದ ತಿರುಕ್ಕುರಳ್ 2. ಶೈವ ಸಿದ್ಧಾಂತ 3. ತಮಿಳು ಭಕ್ತಿ ಸಾಹಿತ್ಯ. ಇವುಗಳಲ್ಲಿ ತಿರುಕ್ಕುರಳ್ ಆರ್ಯ ಪದ್ಧತಿಯೆಂದೂ, ಅದರ ಲೇಖಕ ಕ್ರಿಶ್ಚಿಯನ್ ಮತದಿಂದ ಪ್ರಚೋದನೆಗೊಂಡೂ ಬರೆಯಲಾಗಿದೆ ಎಂಬ ಮತ್ತೊಂದು ಅಪಸಿದ್ಧಾಂತವನ್ನು ಗಾಳಿಯಲ್ಲಿ ತೂರಿಬಿಟ್ಟರು (ಈ ವಿಷಯವಾಗಿ ಗೊಂದಲಗಳು ಇದ್ದವಾದರೂ, ಜನರು ಅದನ್ನು ನಂಬದಿದ್ದರೂ) ಇತ್ತೀಚೆಗೆ ಅಂದರೆ 1969 ರಲ್ಲಿ ಎಂ. ದೈವಿನಾಯಗಂ ಎಂಬುವವರು ತಿರುವಳ್ಳುವರ್ ಕ್ರಿಶ್ಚಿಯನ್ ಆಗಿದ್ದರೇ ? ಎಂಬ ಪುಸ್ತಕವನ್ನೂ ಬರೆದರು. ಅಸಲಿಗೆ ತಿರುವಳ್ಳುವರ್ ತಿರುಕ್ಕುರಳ್ ಬರೆದಾಗ ಮದ್ರಾಸಿನಲ್ಲಿ ಸೈಂಟ್ ಥಾಮಸ್ ಇದ್ದರೆಂದು ವಾದಿಸುವ ದೈವಿನಾಯಗಂರ ವಾದ ತೀರಾ ಹಾಸ್ಯಾಸ್ಪದವಾದದ್ದು. ಸೈಂಟ್ ಥಾಮಸ್ 52 ಸಿ. ಇ.ನಲ್ಲಿ ಬಂದು ಸಂಸ್ಕೃತ ವನ್ನು ಉತ್ತರ ಭಾರತದಲ್ಲಿ ಬೆಳೆಸಿದ್ದನೆಂದೂ, ವೇದಗಳು ಜೀಸಸ್ ಹುಟ್ಟಿದ ನಂತರ ರಚಿತವಾದದ್ದೆಂದೂ, ಶೈವ ವೈಷ್ಣವ ಪದ್ಧತಿಗಳು ಥಾಮಸ್‌ನ ಕ್ರಿಶ್ಚಿಯಾನಿಟಿಯ ಮುಂದುವರೆದ ಬೆಳವಣಿಗೆ ಎಂದೆಲ್ಲಾ ಹುಸಿ ನುಡಿದವರು ಆಘಾತಕಾರಿಯಾದ ಮತ್ತೊಂದು ಅಂಶ ಹೊರಗೆಡವಿದ್ದು – ಬ್ರಾಹ್ಮಣರು, ಸಂಸ್ಕೃತ , ವೇದಾಂತ ಗಳು ದುಷ್ಟ ಶಕ್ತಿಗಳು ಹಾಗೂ ತಮಿಳು ಸಂಸ್ಕೃತಿಯನ್ನು ಉಳಿಸಿಕೊಳ್ಳಲೆಂದೇ ಈ ಘಾತುಕ (?) ಶಕ್ತಿಗಳನ್ನು ಹೋಗಲಾಡಿಸಬೇಕೆಂಬುದೇ ದೈವಿನಾಯಗಂರ ಮೊಂಡುತನದ ವಾದ. ಇನ್ನು ಶೈವ ಸಿದ್ಧಾಂತ, ತಮಿಳು ಭಕ್ತಿ ಸಾಹಿತ್ಯ ಎಲ್ಲವೂ ದ್ರಾವಿಡರ ಕೊಡುಗೆ ಎಂದೂ ಹೇಳುತ್ತಾ ಪ್ರತ್ಯೇಕತಾ ಕೂಗಿಗೆ ಮತ್ತಷ್ಟು ದನಿ ತುಂಬಿದರು. ಅಲ್ಲದೇ ತಮಿಳುನಾಡಿನಲ್ಲಿರುವ ಇನ್ಸ್‌ಟಿಟ್ಯೂಟ್ ಆಫ್ ಏಶಿಯನ್ ಸ್ಟಡೀಸ್ ಕೂಡ ಈ ನಿಟ್ಟಿನಲ್ಲಿ ತಮಿಳು ಸಂಸ್ಕೃತಿಯನ್ನು ವಿಂಗಡಿಸಿ ಸಾಹಿತ್ಯವನ್ನು ಒಳ್ಳೆಯ ಹಾಗೂ ಕೆಟ್ಟ ಎಂಬ ಎರಡು ಭಾಗಗಳನ್ನು ಮಾಡಿದ್ದಾರೆ. ಅವರ ಪ್ರಕಾರ, ಒಳ್ಳೆಯದೆಲ್ಲವೂ ದ್ರಾವಿಡರದ್ದು ಹಾಗೂ ಕೆಟ್ಟದ್ದೆಲ್ಲದೂ ಆರ್ಯರಿಂದ ಬಂದದ್ದು ಎಂದು.

ದ್ರಾವಿಡಸ್ತಾನ್ ಮತ್ತು ಪ್ರತ್ಯೇಕತೆ:

ಇನ್ನು 1917ರ ಇಸವಿಯಲ್ಲಿ ಮದರಾಸಿನ ಟಿ.ಎಂ. ನಾಯರ್, ತ್ಯಾಗರಾಯ ಚೆಟ್ಟಿಯವರ ಪ್ರಯತ್ನಗಳಿಂದ ಹೊಸದೊಂದು ಸಂಘಟನೆಯನ್ನು ಹುಟ್ಟುಹಾಕಿದರು. ಅದರ ಹೆಸರೇ ಜಸ್ಟಿಸ್ ಪಾರ್ಟಿ. ಜಸ್ಟಿಸ್ ಪಾರ್ಟಿ ತನ್ನ ಕೆಲಸವನ್ನು ಪ್ರಾರಂಭಿಸಿದ್ದು ಬ್ರಾಹ್ಮಣೇತರರನ್ನು ಬ್ರಾಹ್ಮಣರ ವಿರುದ್ಧವಾಗಿ ಎತ್ತಿ ಕಟ್ಟಲು. ಈ ಒಡಕನ್ನು ಬ್ರಿಟಿಷರು ಪ್ರೋತ್ಸಾಹಿಸಿ ಜಸ್ಟಿಸ್ ಪಾರ್ಟಿಯನ್ನು ಸಮರ್ಥಿಸಿದರು. ಕಾರಣ ಮದ್ರಾಸ್ ಪ್ರಾಂತ್ಯದಲ್ಲಿ ಜನರು ಈ ವಿಷಯವಾಗಿ ಒಳಜಗಳವಾಡುತ್ತಿದ್ದರೆ ಸ್ವಾತಂತ್ರ್ಯ ವಿಷಯವಾಗಿಯಂತೂ ಇವರ ಸುದ್ದಿಗೆ ಬರದೇ ಉಳಿಯುತ್ತಾರೆಂದು ನಂಬಿದ್ದರು. ವಿಚಾರ ಗೋಷ್ಠಿ, ಧರಣಿಗಳು ಇಂತಹ ಚಟುವಟಿಕೆಗಳಿಂದಲೇ ಕೂಡಿದ್ದ ಜಸ್ಟಿಸ್ ಪಾರ್ಟಿ ದೇಶದ ಸ್ವಾತಂತ್ರ್ಯದ ಕಡೆಗೆ ತೋರಿದ ಆಸಕ್ತಿಗಿಂತ ಬ್ರಾಹ್ಮಣರನ್ನು ತೆಗಳುವ, ತುಳಿಯುವ ಕೆಲಸದಲ್ಲಿಯೇ ತೊಡಗಿತ್ತು. ಯಾವ ಮಟ್ಟಿಗೆ ಜಸ್ಟಿಸ್ ಪಾರ್ಟಿ ತನ್ನ ತತ್ವವನ್ನು ನಂಬಿತ್ತೆಂದರೆ ದೇಶದಲ್ಲಿ ನಡೆದ Non co-operation Movementನ್ನು ವಿರೋಧಿಸಿತು; ಕಾರಣ ಅದನ್ನು ಪ್ರಸ್ತಾಪಿಸಿದ್ದು ಮಹಾತ್ಮ ಗಾಂಧಿಯವರು, ಹಾಗೂ ಗಾಂಧಿಯವರಿಗೆ ಕೇವಲ ಮೇಲ್ಜಾತಿ ಬ್ರಾಹ್ಮಣರಲ್ಲಷ್ಟೇ ಒಲವಿತ್ತು ಎಂದು. ಥಿಯೊಸಾಫಿಕಲ್ ಸೊಸೈಟಿಯನ್ನು ಕಟ್ಟಿದ ಆ್ಯನಿಬೆಸೆಂಟ್‌ರ ಹೋಂ ರೂಲ್ ಚಳುವಳಿಯನ್ನೂ ವಿರೋಧಿಸಿದ್ದರು. ಅವರ ಪ್ರಕಾರ ಹೋಂ ರೂಲ್‌ನಿಂದಾಗಿ ಬ್ರಾಹ್ಮಣರಿಗಷ್ಟೇ ಅನುಕೂಲವಾಗುತ್ತಿತ್ತಂತೆ. ಇನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜನರನ್ನು ಬೆಸೆಯಲು ಇದ್ದ ಏಕೈಕ ಭಾಷೆ ಹಿಂದಿ. ಆಗಲೂ (!) ಹಿಂದಿಯನ್ನು ಯಾರೂ ರಾಷ್ಟ್ರೀಯ ಭಾಷೆ ಎಂದು ಕರೆದಿರಲಿಲ್ಲ. ಅದನ್ನು ಲಿಂಕ್ ಭಾಷೆಯಾಗಿ ಬಳಸಲಾಗುತ್ತಿತ್ತು. ನಾನಾ ಭಾಷೆಯ ನಾಡಾಗಿದ್ದ ಭಾರತದಲ್ಲಿ ಎಲ್ಲರನ್ನೂ ಒಗ್ಗೂಡಿಸಲು ಆಗ ಬೇಕಿದ್ದುದು ಇಂತಹ ಲಿಂಕ್ ಭಾಷೆಯೇ. ಇಲ್ಲವಾದರೆ ಸ್ವಾತಂತ್ರ್ಯ ಸಿಗುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲವೆಂಬುದನ್ನು ನಾವಿಲ್ಲಿ ಮನದಟ್ಟು ಮಾಡಿಕೊಳ್ಳಬೇಕಾಗುತ್ತದೆ. ಜಸ್ಟಿಸ್ ಪಾರ್ಟಿಯ ಮತ್ತೊಂದು ಕೊಡುಗೆ ಈ ಲಿಂಕ್ ಭಾಷೆಯ ವಿರುದ್ಧ ತಾವು ಎತ್ತುತ್ತಿದ್ದ ದನಿ, ರಗಳೆಯೇ ಆಗಿತ್ತು.

ಮೊದಮೊದಲಿಗೆ ಬ್ರಾಹ್ಮಣರ ಗುಂಪೊಂದು ಬಿಟ್ಟು ಉಳಿದೆಲ್ಲಾ ಜಾತಿಗಳು ಜಸ್ಟಿಸ್ ಪಾರ್ಟಿಯನ್ನು ಅವಲಂಬಿಸಿದ್ದರಾದರೂ ಒಳ ಜಗಳಗಳಿಂದ ಮುಸ್ಲಿಮರು, ಕೆಲ ಜಾತಿಯವರು ಜಸ್ಟಿಸ್ ಪಾರ್ಟಿಯ ದ್ವಂದ್ವ ರೀತಿಗಳು, ಸ್ವಜನ ಪಕ್ಷಪಾತದ ಕಾರಣಗಳಿಂದ ಹೊರ ನಡೆಯಿತು. ಜಸ್ಟಿಸ್ ಪಾರ್ಟಿ ತನ್ನ ಮುಂದಿನ ಗುರಿನ್ನಾಗಿಸಿಕೊಂಡದ್ದು ಮೊಹಮ್ಮಮ್ ಆಲಿ ಜಿನ್ನಾನೊಂದಿಗೆ ಸೇರಿಕೊಂಡು ಪ್ರತ್ಯೇಕತೆಯ ಕೂಗನ್ನು ತೀವ್ರಗೊಳಿಸಿ ದ್ರಾವಿಡಸ್ತಾನ್ ಎಂಬ ಹೊಸ ದೇಶವನ್ನು ನಿರ್ಮಿಸಬೇಕೆಂಬ ಆಗ್ರಹದೊಂದಿಗೆ. ದೈವವಶಾತ್ ಅದು ನಡೆಯಲೇ ಇಲ್ಲ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ – 15 ಆಗಸ್ಟ್ 1947 ರಂದು ಜಸ್ಟಿಸ್ ಪಾರ್ಟಿ ಕಪ್ಪು ದಿನವಾಗಿ ಆಚರಿಸಿಕೊಂಡಿತು. ಇನ್ನು ಈ ಸಂಘಟನೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳದೇ ಇಂದಿನ ದ್ರಾವಿಡ ಮುನ್ನೇತ್ರ ಕಳಗಂ (ಡಿ.ಎಂ.ಕೆ) ಆಗಿ ಹೊರಹೊಮ್ಮಿತು. ಉಳಿದಂತೆ ದ್ರಾವಿಡ ಪಕ್ಷಗಳಾದ ಎ.ಐ.ಎ.ಡಿ.ಎಂ.ಕೆ., ಎಂ.ಡಿ.ಎಂ.ಕೆ., ಪಿ.ಎಂ.ಕೆ. ಎಲ್ಲರೂ ಈ ಪಕ್ಷದಿಂದ ಹೊರ ನಡೆದವರೇ. ದ್ರಾವಿಡ ಎಂಬ ಕೂಗು ಹುಟ್ಟುಹಾಕಿದ್ದ ಕಾಲ್ಡ್‌ವೆಲ್ ತೀರಿಕೊಂಡ ಬಳಿಕ ಮದ್ರಾಸಿನ ರಸ್ತೆಯೊಂದರಲ್ಲಿ ಪುತ್ಥಳಿಯಾದನು. ಅವನ ಹೇಳಿಕೆ, ಸುಳ್ಳಿನ ಕಂತೆಯಾದ ಸಂಶೋಧನೆಯನ್ನು ನಂಬಿ ದ್ರಾವಿಡ – ಆರ್ಯ ಸಂಘರ್ಷ ನಮ್ಮ ನಮ್ಮವರಲ್ಲಿಯೇ ಹೊಡೆದಾಟದ ಸ್ಥಿತಿಗೆ ತಂದು ಒಯ್ದಿತ್ತು. ಈ ದ್ರಾವಿಡ ಕೂಗೇ ಇಂದಿನ ಸಂಸ್ಕೃತ ವಿರೋಧಿಹೇಳಿಕೆಗಳಿಗೆ ಮುನ್ನುಡಿ.

ಮ್ಯಾಕ್ಸ್ ಮುಲ್ಲರ್ ಸೇರಿದಂತೆ ಪಾಶ್ಚಾತ್ಯದ ಹಲವರು ಉದಾಹರಣೆಗೆ ಸರ್ ವಿಲಿಯಮ್ ಜೋನ್ಸ್, ಪ್ರೊ. ಬೋಪ್ ಕೂಡ ಸಂಸ್ಕೃತ ಭಾಷೆಯ ವೈಭವವನ್ನು ಹೊಗಳಿದ್ದಾರೆ. ದಲಿತರಿಗೆ ಸಂಸ್ಕೃತ ವರ್ಜ್ಯ ಎನ್ನುವವರು ಮಹಾನ್ ದಲಿತ ನಾಯಕ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಸಹ ಸಂಸ್ಕೃತವನ್ನು ಇಷ್ಟಪಟ್ಟು ಭಾರತದ ಅಧಿಕೃತ ಭಾಷೆಗಳಲ್ಲಿ ಒಂದು ಎಂದು ಘೋಷಿಸಿದ್ದನ್ನು ಮರೆಯಬಾರದು. ಸರ್ ಮಿರ್ಜಾ ಇಸ್ಮಾಯಿಲ್ ಭಾರತದ ಸಂಸ್ಕಾರ ಉಳಿಯಬೇಕಿದ್ದರೆ ಸಂಸ್ಕೃತ ಅಧ್ಯಯನ ಅತ್ಯಗತ್ಯ ಎಂದು ಸಾರಿದ್ದಾರೆ. ಫಕೃದ್ದಿನ್ ಅಲಿ ಅಹಮದ್ ಸಂಸ್ಕೃತ ಯಾವುದೋ ಪಂಗಡಕ್ಕೆ, ಜಾತಿಗೆ ಸೇರಿದ ಭಾಷೆಯಲ್ಲ. ಆದರೆ ಅದು ಪ್ರತಿ ಭಾರತೀಯನ ಭಾಷೆ ಎಂದಿದ್ದಾರೆ. ಇನ್ನು ಮಹಾತ್ಮಾ ಗಾಂಧಿ, ಸಾವರ್ಕರ್, ಎಸ್. ರಾಧಾಕೃಷ್ಣನ್, ರಾಜಾಜಿ, ಅರಬಿಂದೋ ಎಲ್ಲರು ಸಂಸ್ಕೃತದ ಪರವಾಗಿಯೇ ಇದ್ದವರು.

ರಾಮಾಯಣ ರಚಿಸಿದ ವಾಲ್ಮಿಕಿ ಬ್ರಾಹ್ಮಣನಲ್ಲ. ಮಹಾಕಾವ್ಯಗಳನ್ನು ರಚಿಸಿದ ಕಾಳಿದಾಸನೂ ಬ್ರಾಹ್ಮಣನಲ್ಲ ಎಂಬುದು ವೇದ್ಯ. ಇವರೆಲ್ಲ ಬ್ರಾಹ್ಮಣರಲ್ಲ ಎಂದೂ, ಇವರು ಸಂಸ್ಕೃತದಲ್ಲಿ ಬರೆದರೆಂದು ಸಂಸ್ಕೃತ ಕಲಿಯುವ ಗೋಜಿಗೆ ಹೋಗದೆ, ನಮ್ಮ ಋಷಿಗಳು ರಚಿಸಿರುವ ಉಪನಿಷತ್ತು, ವೇದಗಳ, ಪುರಾಣಗಳ ಅಧ್ಯಯನ, ಬದುಕುವ ಮಾರ್ಗ ಕಲಿಯಲು ಸಂಸ್ಕೃತ ದ ಅಗತ್ಯತೆ ಇದೆಯೆಂದು ನಮ್ಮ ದೇಶದಲ್ಲೇ ಇದ್ದುಕೊಂಡು ನಮ್ಮ ದೇಶದವರಿಗೇ ಕೂಗಿ ಹೇಳುವ ಪರಿಸ್ಥಿತಿ ಬಂದಿರುವುದು ಶೋಚನೀಯ.

ಬೋರ್ಡ್‌ನ ‘ಸಂಸ್ಕೃತ ಸಪ್ತಾಹ’ದ ನಿರ್ಧಾರಕ್ಕೆ ಜಯಲಲಿತ, ವೈಕೊ, ರಾಮದಾಸ್ ಹಾಗೂ ಇತರೆ ಕಮ್ಮ್ಯುನಿಸ್ಟ್ ಸಿದ್ಧಾಂತದವರು ಇದನ್ನು ಕೇಸರೀಕರಣ ಅಂತಲೂ, ದಕ್ಷಿಣ ಭಾರತದವರಿಗೆ ಮಾಡುವ ಅನ್ಯಾಯವೆಂದೂ, ಸಂಸ್ಕೃತ ವಿರೋಧಿಹೇಳಿಕೆಗಳನ್ನು ಕೊಟ್ಟಿದ್ದಾರೆ. ಇವರೆಲ್ಲರೂ ಹೇಳುವ ಪ್ರಕಾರ ಸಂಸ್ಕೃತ ಶಿಕ್ಷಣ ದೇಶದ ಐಕ್ಯತೆಗೆ ಧಕ್ಕೆ ತರುತ್ತದೆಂದು. ಸಂಸ್ಕೃತ ಭಾಷೆಯ ಹೆಸರಲ್ಲೇ ವೈಭವಯುತವಾದ ಸಂಸ್ಕೃತಿ ಅಡಕವಾಗಿರುವಾಗ ಆ ಒಂದು ಭಾಷೆ ದೇಶವನ್ನು ಹೇಗೆ ಒಡೆಯಬಹುದು ಎಂಬುದನ್ನು ವೈಕೊ ಹಾಗೂ ಜಯಲಲಿತ ಕೆಲ ಕಾಲ ತಮ್ಮ ಮತ ಬ್ಯಾಂಕ್, ತಾವೇ ರಚಿಸಿಕೊಂಡ ಹುಸಿ ಪ್ರತಿಪಾದನೆಯನ್ನು ಮೀರಿ ಯೋಚಿಸಿದರೆ ಉತ್ತರ ಸಿಕ್ಕಿಬಿಡುತ್ತದೆ. ಇಷ್ಟೆಲ್ಲಾ ಇರುವಾಗ ಜಯಲಲಿತಾ, ರಾಮದಾಸ್, ವೈಕೊ ಇವರುಗಳ ಮತಬ್ಯಾಂಕ್ ರಾಜಕಾರಣ, ಅಜ್ಞಾನದ ಮಾತುಗಳಿಗೆ ನಕ್ಕು ಸುಮ್ಮನಾಗುವುದಕ್ಕಾಗುತ್ತದೆಯೇ? ಅವರನ್ನು ಸತ್ಯದೆಡೆಗೆ ಜಾಗೃತರನ್ನಾಗಿಸುವ ಅಗತ್ಯತೆ ಇಲ್ಲವೆ?

– – – – – – – –
ಆಧಾರ :
1. Breaking India – Rajiv Malhotra / Aravindan Neelakandan.
2. ಆರ್ಯರ ಆಕ್ರಮಣ ಒಂದು ಬುಡವಿಲ್ಲದ ವಾದ – ಎಸ್. ಆರ್. ರಾಮಸ್ವಾಮಿ.
3. ಶಿಲಾಕುಲ ವಲಸೆ (ಕಾದಂಬರಿ) – ಕೆ. ಎನ್. ಗಣೇಶಯ್ಯ.
4. Myths about Aryan Invasion Theory – Speech by Shatavadhani Ganesh.

ಚಿತ್ರಕೃಪೆ : http://www.kln.ac.lk

Read more from ಲೇಖನಗಳು
34 ಟಿಪ್ಪಣಿಗಳು Post a comment
  1. ಆಗಸ್ಟ್ 20 2014

    ಆರ್ಯರ ಆಕ್ರಮಣ ಒಂದು ಬುಡವಿಲ್ಲದ ವಾದ

    ಉತ್ತರ
  2. valavi
    ಆಗಸ್ಟ್ 20 2014

    Breaking India – Rajiv Malhotra / Aravindan Neelakandan. ಇದರ ಕನ್ನಡ ಅನುವಾದ ಸಿಗಬಹುದೆ?

    ಉತ್ತರ
  3. valavi
    ಆಗಸ್ಟ್ 20 2014

    ಅತ್ಯಂತ ಉತ್ತಮ ಮತ್ತು ಸಮಯೋಚಿತ ಬರಹಾ. ಎಲ್ಲರ ಕಣ್ಣು ತೆಗೆಸುವಂಥದ್ದಿದೆ.

    ಉತ್ತರ
  4. valavi
    ಆಗಸ್ಟ್ 20 2014

    SSNK ಅವರೆ ನಿಮಗೆ ಒಂದು ಪ್ರಸ್ನೆ ಏನಂದರೆ ಹರಪ್ಪಾ ಇತ್ಯಾದಿ ನಾಗರೀಕತೆಗಳು ದ್ರಾವಿಡ ಎನ್ನುತ್ತಾರಲ್ಲ? ಮತ್ತು ಅಲ್ಲಿ ಶವವನ್ನು ಹೂಳುವದು ಮತ್ತು ಶಿವನ ಪೂಜೆ ಇತ್ಯಾದಿ ದ್ರಾವಿಡರಿಗೆ ಸಂಬಂಧಿಸಿದ ಅವಶೇಷಗಳು ಸಿಕ್ಕಿವೆ ಎನ್ನುತ್ತರೆ ನಿಮ್ಮ ಅಭಿಪ್ರಾಯವೆನು?

    ಉತ್ತರ
    • ಆಗಸ್ಟ್ 20 2014

      ಭಾರತೀಯರನ್ನು ಆರ್ಯ-ದ್ರಾವಿಡ ಎಂದು ವಿಭಜಿಸಿ ನೋಡುವುದೇ ತಪ್ಪು.
      ಲೇಖನದಲ್ಲಿ ಈಗಾಗಲೇ ಸ್ಪಷ್ಟಪಡಿಸಿರುವಂತೆ ದ್ರಾವಿಡ ಎನ್ನುವುದು ದಕ್ಷಿಣ ಭಾರತದ ಭೂಪ್ರದೇಶಕ್ಕಿದ್ದ ಹೆಸರು.
      ಅದೇ ರೀತಿ, ಬಂಗಾಳಕ್ಕೆ ಗೌಡ ದೇಶ ಎಂದು ಹೆಸರಿತ್ತು.
      ಮಗಧ, ಕೋಸಲ, ಕಳಿಂಗ, ಕಶ್ಮೀರ, ಅಂಗ, ಗಾಂಧಾರ, ಇತ್ಯಾದಿಗಳೂ ವಿವಿಧ ಪ್ರದೇಶಗಳಿಗಿದ್ದ ಹೆಸರುಗಳು.

      ಭಾರತದ ವಿವಿಧ ಪ್ರದೇಶಗಳಲ್ಲಿ ವಿವಿಧ ಪದ್ಧತಿಗಳು, ಪರಂಪರೆಗಳು ಬೆಳೆದಿವೆ.
      ಮತ್ತು ಭಾರತದ ಜನ ವಿವಿಧ ಪ್ರದೇಶಗಳಿಗೆ ಹೋಗಿ ನೆಲೆಸಿದ್ದಾರೆ.
      ಉದಾಹರಣೆಗೆ ಗೌಡ ದೇಶದ ಜನ (ಅಂದರೆ ಬಂಗಾಳದ ಜನ) ಕರ್ನಾಟಕದ ಕರಾವಳಿಯಲ್ಲಿ ನೆಲೆಸಿದ್ದಾರೆ (ಗೌಡ ಸಾರಸ್ವತ ಬ್ರಾಹ್ಮಣ).
      ಸರಸ್ವತೀ ನದೀ ತೀರದಲ್ಲಿದ್ದ ಸಾರಸ್ವತ ಬ್ರಾಹ್ಮಣರೂ ದಕ್ಷಿಣದಲ್ಲಿ ಸಿಗುತ್ತಾರೆ.
      ಅದೇ ರೀತಿ, ದ್ರಾವಿಡ ದೇಶದ ಜನ ಉತ್ತರ ಭಾರತದಲ್ಲಿ (ಅಂದರೆ ಹರಪ್ಪಾ ಪ್ರದೇಶದಲ್ಲಿ) ನೆಲೆಸಿದ್ದಿರಬಹುದು.

      ಉತ್ತರ
  5. ಸಂತೋಷ
    ಆಗಸ್ಟ್ 20 2014

    ನಾನು ಸಂಸ್ಕೃತ ಸಪ್ತಾಹವನ್ನು ವಿರೋಧಿಸುವೆನು. ಇದಕ್ಕೆ ಕಾರಣಗಳು:

    1. ಸಂಸ್ಕೃತ ಸಪ್ತಾಹದಿಂದ ಸರಕಾರವು ಏನೋ ಬ್ರಾಹ್ಮಣರಿಗೆ ಸಿಕ್ಕಾಪಟ್ಟೆ ದುಡ್ಡು ಕೊಡುತ್ತದೆ ಎಂದು ಹೊಟ್ಟೆಯನ್ನು ಉರಿದುಕೊಳ್ತಾ ಇದ್ದಾರೆ.
    2. ತಮಿಳುನಾಡು ಮುಂತಾದೆಡೆ ಮಂದಿಗೆ ಸಂಸ್ಕೃತವನ್ನು ಕಂಡರೆ ಆಗುವುದಿಲ್ಲ.
    3. ಒತ್ತಾಯವಾಗಿ ಸಂಸ್ಕೃತಸಪ್ತಾಹವನ್ನು ನಡೆಸುವುದರಿಂದ ಏನು ಫಲ? ಇನ್ನು ಸಂಸ್ಕೃತದ್ವೇಷವು ಹೆಚ್ಚುವುದಿಲ್ಲವೇ?

    ಪರಿಹಾರ?
    1. ಸಂಸ್ಕೃತ ಸ್ಫರ್ಧೆಗಳನ್ನು ಆಯೋಜಿಸಿ ಪುರಸ್ಕಾರ ನೀಡಿ.
    2. ಸಂಸ್ಕೃತಾಧ್ಯಯನಕ್ಕೆ ವಿದೇಶದಲ್ಲಿ ಆಸಕ್ತಿ ಇದ್ದು, ವಿದೇಶಿಯರು ಬಂದು ಸಂಸ್ಕೃತವನ್ನು ಕಲಿಯಲು ಅಂತಾರಾಷ್ಟೀಯ-ಮಟ್ಟದ ಸಂಸ್ಥೆಗಳನ್ನು ಕಟ್ಟಿ ಬೆಳಸಿ.
    3. ಸಂಸ್ಕೃತದಲ್ಲಿ ಸಿನಿಮ, ಟೀವೀ ಕಾರ್ಯಕ್ರಮಗಳನ್ನು ರಚಿಸಿ. ಪ್ರದರ್ಶಿಸಿ.
    4. ಸಂಸ್ಕೃತ-ಸಪ್ತಾಹವನ್ನು ನಡೆಸಲು ಸ್ವಾಸಕ್ತಿಯಿಂದ ಮುಂದು ಬರುವ ಶಾಲೆಗಳಿಗೆ ಪ್ರೋತ್ಸಾಹವನ್ನು ನೀಡಿರಿ.

    ಉತ್ತರ
    • shripad
      ಆಗಸ್ಟ್ 21 2014

      ನಾನು ಇದನ್ನು ವಿರೋಧಿಸುವೆನು: ಯಾಕೆಂದರೆ ಇದು ಪರೋಕ್ಷವಾಗಿ ಪುರೋಹಿತಶಾಹಿಯನ್ನು,ಮನುವಾದವನ್ನು ಹಾಗೂ ವೈದಿಕತೆಯನ್ನು ಬೆಂಬಲಿಸುತ್ತದೆ!! ಹಾಗಾಗಿ ಶರಣ ಸಪ್ತಾಹ ನಡೆಸುವುದು ಸೂಕ್ತ. ಇದಕ್ಕೆ ಯಾರು ನೇತೃತ್ವ ವಹಿಸಬೇಕು ಎಂಬುದು ಜಾಹೀರಾದ ಸಂಗತಿ.

      ಉತ್ತರ
      • valavi
        ಆಗಸ್ಟ್ 21 2014

        Shripaadare Sharana saptahakke yaaru adyaksharu?

        ಉತ್ತರ
        • shripad
          ಆಗಸ್ಟ್ 23 2014

          ಏನು ವಲವಿಯವರೇ ಹೀಗೆ ಕೇಳ್ತೀರಿ? ದರ್ಗಾ ಶರಣ ಕರಕಮಲ ಸಂಜಾತ, ಅಭಿನವ ಚೆನ್ನಬಸವಣ್ಣ, ಶರಣಶಾಹಿ ಪ್ರತಿಪಾದಕ, ದರ್ಗಾವಾದ ಭಯಂಕರ, ಉಗ್ರ ಪ್ರತಾಪಿ ಇತ್ಯಾದಿ ಬಿರುದಾಂಕಿತರು ನಮ್ಮ ನಡುವೆ ಇಲ್ಲವೇ? ಅಂದಹಾಗೆ ಈ ಬಿರುದಾವಳಿಗಳಲ್ಲಿ ಸಂಸ್ಕೃತ ಕಾಣಿಸಿರಬಹುದು. ಇದಕ್ಕೆ ಸಂಸ್ಕೃತಶಾಹಿಯೇ ಕಾರಣ. ಶರಣಶಾಹಿ ಒಮ್ಮೆ ಸ್ಥಾಪನೆಯಾದರೆ ಈ ಸಮಸ್ಯೆ ಇರಲಾರದು! ಆಫ್ ಕೋರ್ಸ್, ಶರಣ ಎಂಬುದೇ ಸಂಸ್ಕೃತ ಪದ ಎಂಬುದು ಬೇರೆ ಮಾತು!!

          ಉತ್ತರ
      • Nagshetty Shetkar
        ಆಗಸ್ಟ್ 22 2014

        ವಚನ ೩೬೫ ಕಾರ್ಯಕ್ರಮ ಬರಲಿದೆ. ಕಾದು ನೋಡಿ.

        ಉತ್ತರ
        • ಸಂತೋಷ
          ಆಗಸ್ಟ್ 22 2014

          ಸಂಸ್ಕೃತ-ಸಪ್ತಾಹವನ್ನು ಮಾಡುವುದು ಒಂದು ಭಾಷೆಯನ್ನು ಕಲಿಸಲು. ಸಂಸ್ಕೃತಭಾಷೆಯ ಪದಗಳ ಸಕಲ ಭಾರತೀಯ ಭಾಷೆಗಳಲ್ಲೂ ಬಳಕೆಯಲ್ಲಿದೆ. ಅದಕ್ಕೆ ಅದರ ಜ್ಞಾನದಿಂದ ಕಲಿಕೆಗೆ ನೆರವಾಗುವುದು.

          ವಚನ/ಶರಣ ಒಂದು ಜಾತಿಗೆ/ಸಿದ್ಧಾಂತಕ್ಕೆ ಸೇರಿದ ವಿಷಯ. ಅದನ್ನು ಕಲಿತು ಅನ್ಯರಿಗೆ ಏನು ಪ್ರಯೋಜನ?

          ಉತ್ತರ
          • ಆಗಸ್ಟ್ 22 2014

            [[ವಚನ/ಶರಣ ಒಂದು ಜಾತಿಗೆ/ಸಿದ್ಧಾಂತಕ್ಕೆ ಸೇರಿದ ವಿಷಯ. ಅದನ್ನು ಕಲಿತು ಅನ್ಯರಿಗೆ ಏನು ಪ್ರಯೋಜನ?]]

            “ಶರಣಶಾಹಿ”ಯ ಪ್ರತಿಷ್ಟಾಪನೆ!

            ಉತ್ತರ
            • ಸಂತೋಷ
              ಆಗಸ್ಟ್ 22 2014

              😀 …LOL

              ಉತ್ತರ
            • Nagshetty Shetkar
              ಆಗಸ್ಟ್ 22 2014

              ಬ್ರಾಹ್ಮಣಶಾಹಿಗಿಂತ ಇಬ್ರಾಹಿಮ್ ಶಾಹಿ ಎಷ್ಟೋ ವಾಸಿ ಅಂತ ಬಿಜಾಪುರ ಕಡೆಯ ಜನ ಹೇಳುತ್ತಾರೆ.

              ಉತ್ತರ
              • ಆಗಸ್ಟ್ 22 2014

                [[ಬ್ರಾಹ್ಮಣಶಾಹಿಗಿಂತ ಇಬ್ರಾಹಿಮ್ ಶಾಹಿ ಎಷ್ಟೋ ವಾಸಿ ಅಂತ ಬಿಜಾಪುರ ಕಡೆಯ ಜನ ಹೇಳುತ್ತಾರೆ.]]
                ಶರಣಶಾಹಿ ಬಗ್ಗೆ ಏನು ಹೇಳ್ತಾರೆ ಹೇಳಿ?

                ಉತ್ತರ
          • Nagshetty Shetkar
            ಆಗಸ್ಟ್ 22 2014

            “ವಚನ/ಶರಣ ಒಂದು ಜಾತಿಗೆ/ಸಿದ್ಧಾಂತಕ್ಕೆ ಸೇರಿದ ವಿಷಯ. ”

            ಜಾತಿವಾದದ ಕೂಪದಲ್ಲಿ ಹೊರಳಾಡುತ್ತಿರುವ ಮಂಡೂಕಗಳಿಗೆ ಹೀಗೆ ಅನ್ನಿಸುವುದು ಸಹಜ.

            ಉತ್ತರ
            • ಸಂತೋಷ
              ಆಗಸ್ಟ್ 22 2014

              ಸಂಸ್ಕೃತ ಕಲಿಯಲಿ ಅಂದರೆ ಹೇಗೇ ಜಾತಿವಾದ… ಇದ್ಯಾವ ಗೂಬೆವಾದ?

              ಉತ್ತರ
              • ಆಗಸ್ಟ್ 22 2014

                ಇವರಿಗೆ ಸಂಸ್ಕೃತ ಎಂದ ಕೂಡಲೇ ಜಾತಿ ನೆನಪಾಗಿಬಿಡುತ್ತದೆ!
                ಸಂಸ್ಕೃತ ಎಂದರೆ ವೇದ; ವೇದ ಅಂದರೆ ಬ್ರಾಹ್ಮಣ ಅಲ್ವೇ?
                ಸಂಸ್ಕೃತ ಕಲ್ತೋವ್ರೆಲ್ಲಾ ಬ್ರಾಹ್ಮಣ್ರೇ ಅಲ್ವೇ?
                ವ್ಯಾಸ, ವಾಲ್ಮೀಕಿ, ಆಂಜನೇಯ, ಕಾಳಿದಾಸ, ವಿಶ್ವಾಮಿತ್ರ, ಇವ್ರೆಲ್ಲಾ ಬ್ರಾಹ್ಮಣ ಜಾತಿಗೆ ಸೇರಿದೋವ್ರೇ ಅಲ್ವೇ?
                ಇನ್ನು ಇವ್ರ ದೇವರುಗಳು – ರಾಮ, ಕೃಷ್ಣ, ಶಿವ, ಕಾಳಿ, ದುರ್ಗೆ, ಗಣೇಶ…. – ಇವ್ರೂ ಎಲ್ಲಾ ಬ್ರಾಹ್ಮಣ ಜಾತಿಗೆ ಸೇರಿದವ್ರೇ ಇರಬೇಕು. ಇಲ್ದೇ ಇದ್ರೆ ಬ್ರಾಹ್ಮಣರು ಇವ್ರುನ್ನ ಹೇಗೆ ತಾನೇ ಪೂಜೆ ಮಾಡೋಕ್ಕೆ ಸಾಧ್ಯ!!?

                ಇವರಿಗೆ ಇಬ್ರಾಹಿಂ ಶಾಹಿ ಅಂದರೆ ಬಲು ಇಷ್ಟ. ಎಷ್ಟೆಂದರೂ ಇಬ್ರಾಹಿಂ ಶಾಹಿ ಎನ್ನುವುದು ‘ಪ್ರಗತಿಪರ ಜಾತ್ಯಾತೀತ’ವಾದಿಗಳೇ ಮಾಡಿರುವ ಶಾಹಿಯೇ ಇರಬೇಕಲ್ಲವೇ!?

                [[ಇದ್ಯಾವ ಗೂಬೆವಾದ]]
                ಈ ಪಕ್ಷಿ ಶರಣಶಾಹಿಗಳ, ಪ್ರಗತಿಪರರ, ಜಾತ್ಯಾತೀತವಾದಿಗಳ ಲಾಂಛನ ಎಂದು ನಿಮಗೆ ಹೇಗೆ ತಿಳಿಯಿತು!?
                ಬೆಳಕಿದ್ದಾಗ ಎಲ್ಲರೂ ಎದ್ದಿದ್ದಾಗ ನಿದ್ದೆ ಮಾಡುವುದು, ಕತ್ತಲಲ್ಲಿ ಎಲ್ಲರೂ ಮಲಗಿದ್ದಾಗ ಕಳ್ಳತನದಲ್ಲಿ ಓಡಾಡುವುದು, ಇದೇ ಅಲ್ಲವೆ ಇವರ ಕೆಲಸ? ಹಾಗೆ ನೋಡಿದ್ರೆ, ಇವ್ರಿಗೆ ಹಗಲೊತ್ತು ಕಣ್ಣು ಸಹ ಕಾಣೋಲ್ಲ; ರಾತ್ರಿ ಹೊತ್ತು ಎಲ್ಲಾ ಸ್ಪಷ್ಟವಾಗಿ ಕಾಣೋತ್ತೆ!
                ಇಂತಹವರಿಗೆ ಗೂಬೆಗಿಂತ ಒಳ್ಳೆ ಲಾಂಛನ ಯಾವ್ದಿದೆ ನೀವೇ ಹೇಳಿ?
                ಎಷ್ಟು ಗುಟ್ಟಾಗಿಟ್ಟರೂ ಗೂಢಚರ್ಯೆ ಮಾಡಿ ಸತ್ಯ ಹೊರಗೆ ಹಾಕಿ ಪ್ರಗತಿಪರರಿಗೆಲ್ಲಾ ಕಸಿವಿಸಿಯಾಗುವಂತೆ ಮಾಡುತ್ತಿದ್ದೀರ ಅಂದರೆ, ನೀವು ಕೋಮುವಾದಿಗಳೇ ಇರಬೇಕು!!

                ಉತ್ತರ
                • ಸಂತೋಷ
                  ಆಗಸ್ಟ್ 22 2014

                  ಈ ದಡ್ಡ ಮಂಡೆಗಳಿಂದ ನಮಗೆ ಯಾವಾಗ ಮುಕ್ತಿಯು ಸಿಗುವುದೋ..

                  ಸಂಸ್ಕೃತದಲ್ಲಿ ಹೇರಳವಾದ ಬೌದ್ಧ ಸಾಹಿತ್ಯವಿದೆ.

                  ಭರ್ತೃಹರಿ ಎಂಬ ಬೌದ್ಧಕವಿಯ ಶತಕಗಳೆಲ್ಲ ಸಂಸ್ಕೃತದಲ್ಲಿವೆ.

                  ಇದಲ್ಲದೇ ಅನೇಕ ಶಾಸನಗಳು ಸಂಸ್ಕೃತದಲ್ಲಿವೆ. ಇದನ್ನೆಲ್ಲ ಓದಲೂ ಸಂಸ್ಕೃತದ ಜ್ಞಾನವು ಬೇಕು.

                  ಉತ್ತರ
      • ಸಂತೋಷ
        ಆಗಸ್ಟ್ 22 2014

        “ಶರಣ ಸಪ್ತಾಹ ನಡೆಸುವುದು ಸೂಕ್ತ”

        ವಿರೋಧ! ಬೇಕಾದರೆ ಕನ್ನಡ ಸಪ್ತಾಹವಿರಲಿ.

        ಉತ್ತರ
    • Nagshetty Shetkar
      ಆಗಸ್ಟ್ 22 2014

      ಸಂಸ್ಕೃತ ಸಪ್ತಾಹಕ್ಕೆ ನನ್ನ ವಿರೋಧವೇನೂ ಇಲ್ಲ. ಸಪ್ತಾಹವನ್ನು ನಿಜಕ್ಕೂ ಪರಿಣಾಮಕಾರಿಯಾಗಿಸಲು ಸಂಸ್ಕೃತ ಸಾಹಿತ್ಯದಲ್ಲಿರುವ ಜೀವ ವಿರೋಧಿ ಹಾಗೂ ಪ್ರತಿಗಾಮಿ ಅಂಶಗಳೆಲ್ಲವನ್ನೂ ಸಪ್ತಾಹದಲ್ಲಿ ಹುಡುಕಿ ಬಯಲು ಮಾಡುವುದು ಉತ್ತಮ. ಈ ಕಾರ್ಯಕ್ಕೆ ಪ್ರಗತಿಪರ ಚಿಂತಕರನ್ನು ಆಹ್ವಾನಿಸಿ ಅವರ ನೆರವನ್ನು ಪಡೆಯುವುದು ಉತ್ತಮ.

      ಉತ್ತರ
      • ಸಂತೋಷ
        ಆಗಸ್ಟ್ 22 2014

        ತಾವೇ ಯೋಗ್ಯತೆ ಇದ್ದರೆ ಸಂಸ್ಕೃತ ಕಲಿತು ಆ ಕೆಲಸ ಮಾಡಿ.. ನಿಮ್ಮ ಯೋಗ್ಯತೆಗೆ ನಿಮಗೆ ಸರಿಯಾಗಿ ಕನ್ನಡದ ವಚನಗಳೇ ಬರವು!

        ಉತ್ತರ
  6. Ram
    ಆಗಸ್ಟ್ 21 2014

    Please start Sanskrit News, Daily 1 hr of Sanskrit teaching in the national channels.

    ಉತ್ತರ
  7. caarvaka
    ಆಗಸ್ಟ್ 22 2014

    ನನಗೂ ಸಂಸ್ಕೃತವು ಬರುತ್ತದೆಯು. “ಶುಕ್ಲಂ ದರಬುಡಂ ವಿಷ್ಣುಂ…..” ಆರು ತೆಂಗಿನಕಾಯಿಗಳೂ, ಮೂರುವರೆ ಕೇಜೀ ಅಕ್ಕಿಯೂ. ನಾಲ್ಕು ಸೇರು ಬೇಳೆಯೂ. ಮೂರು ಕೇಜೀ ದ್ರಾಕ್ಷಿಯೂ, ನಾಲ್ಕು ಸಾವಿರದ ಮುನ್ನೂರು ರೂಪಾಯಿಗಳೂ ದಕ್ಷಿಣೆಗೆ ಇಡಿರಿ.

    ಉತ್ತರ
    • ಸಂತೋಷ
      ಆಗಸ್ಟ್ 22 2014

      [ಆರು ತೆಂಗಿನಕಾಯಿಗಳೂ, ಮೂರುವರೆ ಕೇಜೀ ಅಕ್ಕಿಯೂ. ನಾಲ್ಕು ಸೇರು ಬೇಳೆಯೂ. ಮೂರು ಕೇಜೀ ದ್ರಾಕ್ಷಿಯೂ, ನಾಲ್ಕು ಸಾವಿರದ ಮುನ್ನೂರು ರೂಪಾಯಿಗಳೂ ದಕ್ಷಿಣೆಗೆ ಇಡಿರಿ.]

      ಇದನ್ನೆಲ್ಲ ಯಾವ ಸಂಸ್ಕೃತ ಸಪ್ತಾಹದಲ್ಲಿ ಮಾಡ್ತಾರೆ?

      ಉತ್ತರ
      • shripad
        ಆಗಸ್ಟ್ 23 2014

        ಇವೆಲ್ಲ ಶರಣರ ಪಾದಪೂಜೆಗೆ ಬೇಕಾಗ್ತವೆ

        ಉತ್ತರ
        • Nagshetty Shetkar
          ಆಗಸ್ಟ್ 23 2014

          ಪಾದಪೂಜೆ ವೈದಿಕರ ಸಂಪ್ರದಾಯ, ಇಷ್ಟಲಿಂಗ ಪೂಜೆ ಶರಣರ ಸಂಪ್ರದಾಯ.

          ಉತ್ತರ
          • shripad
            ಆಗಸ್ಟ್ 26 2014

            ಕರ್ಮಠ ಶರಣರೇ,ಲಿಂಗಾಯತ ಗುರುಗಳ ಪಾದಪೂಜೆ ನಡೆಯುವುದಿಲ್ಲವೇ? ಇಂಥ ಅನೇಕ ಶರಣ ಪಾದಪೂಜೆಗಳನ್ನು ಕಂಡಿದ್ದೇನೆ. ವೈದಿಕವಂತೆ ವೈದಿಕ.

            ಉತ್ತರ
            • Nagshetty Shetkar
              ಆಗಸ್ಟ್ 27 2014

              “ಶರಣ ಪಾದಪೂಜೆಗಳನ್ನು ಕಂಡಿದ್ದೇನೆ.”

              Veerashaiva tradition has all the bad elements of Vaidik traditions. Lingayata system is different from Veerashaiva and don’t entertain such practices.

              ಉತ್ತರ
              • shripad
                ಆಗಸ್ಟ್ 27 2014

                Again you are coming to the same point! What is that Lingayata System? when it comes to a system, it will have to have all (so called) the bad elements of vaidik and veerashaivism! ಅಳಿಯ ಅಲ್ಲ, ಮಗಳ ಗಂಡ ಅಷ್ಟೆ!

                ಉತ್ತರ
  8. mandagadde srinivaasaiah
    ಆಗಸ್ಟ್ 24 2014

    samskruta is a language and mother of many languages. Why people

    are worried.It has nothing to do with religion and any caste.

    ಉತ್ತರ
  9. valavi
    ಆಗಸ್ಟ್ 25 2014

    ಶೆಟ್ಕರ್ ಅವರೆ ನೀವು ಕೆ. ಎನ್ ಗಣೇಶಯ್ಯನವರ ಶಿಲಾಕುಲ ವಲಸೆ ತಪ್ಪದೆ ಓದಿ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments