ಭಿತ್ತಿ : ಭಾವಪ್ರಧಾನ ವ್ಯಕ್ತಿತ್ವದ ಕಥನ
– ರಾಜಕುಮಾರ.ವ್ಹಿ.ಕುಲಕರ್ಣಿ,ಗ್ರಂಥಪಾಲಕರು
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ,ಬಾಗಲಕೋಟ
‘ಚಿಕ್ಕ ಹುಡುಗನಾದ್ದರಿಂದ ಚಟ್ಟದ ಅಗತ್ಯವಿರಲಿಲ್ಲ. ನಾನೇ ಎತ್ತಿ ಎಡ ಹೆಗಲ ಮೇಲೆ ಹೊತ್ತುಕೊಂಡು ಬಲಗೈಲಿ ಬೆಂಕಿಯ ಮಡಕೆ ಹಿಡಿದು ಹೋಗುವುದೆಂದು ತೀರ್ಮಾನವಾಯಿತು. ಹೆಣ ಎತ್ತುವ ಮೊದಲು ಒಂದೊಂದು ಹಿಡಿಯಂತೆ ಒಟ್ಟು ಮೂರು ಹಿಡಿ ಅಕ್ಕಿ ಕಾಳು ನಾನು, ಅಜ್ಜಿ, ಲಲಿತ ಹೆಣದ ಬಾಯಿ ಮೇಲೆ ಸುರಿದ ನಂತರ ನಾನು ಮುಕ್ಕಿರಿದು ಎತ್ತಿ ಹೆಣವನ್ನು ಎಡ ಹೆಗಲ ಮೇಲೆ ಹಾಕಿಕೊಂಡು ಕೆಂಪು ಸೀರೆಯ ತುಂಡನ್ನು ಹೊದಿಸಿ ಮಡಕೆಯ ಬೆಂಕಿಯನ್ನು ಬಲಗೈಲಿ ಹಿಡಿದು ಬೀದಿಯಲ್ಲಿ ಹೊರಟೆ. ಏಳು ವರ್ಷದ ಹುಡುಗನ ಹೆಣದ ಭಾರಕ್ಕೆ ಎಡ ಹೆಗಲು ಸೇದಿ ನುಲಿಯತೊಡಗಿತು.ಅತ್ತಿತ್ತ ಹೊರಳಿಸಿ ಭಾರದ ಸ್ಥಾನವನ್ನು ಬದಲಿಸಿಕೊಳ್ಳಲು ಬಲಗೈ ಮುಕ್ತವಾಗಿರಲಿಲ್ಲ. ಅದಕ್ಕೆ ಕೂಡ ಬೆಂಕಿಯ ರಾವು ಹೊಡೆಯುತ್ತಿತ್ತು. ಸುಸ್ತಾಯಿತೆಂದು ಪದೇ ಪದೇ ಕೆಳಗಿಳಿಸಿ ಸುಧಾರಿಸಿಕೊಂಡು ಪಯಣವನ್ನು ಮುಂದುವರೆಸುವಂತೆಯೂ ಇಲ್ಲ. ಸ್ಮಶಾನಕ್ಕೆ ಹೋಗುವಷ್ಟರಲ್ಲಿ ನನ್ನ ಭುಜ ಮತ್ತು ಎದೆಗೂಡುಗಳು ಸತ್ತು ಹೋಗಿದ್ದವು. ನನ್ನ ಕಣ್ಣುದುರಿಗೇ ಕೃಷ್ಣಮೂರ್ತಿಯ ಹೆಣ ಕಪ್ಪು ತಿರುಗಿ ಚರ್ಮ ಸುಲಿದು ಬಿಳಿಯ ನೆಣ ಬಾಯ್ದೆರೆದು ತೊಟ್ಟಿಕ್ಕಿ ಅದೇ ಇಂಧನವಾಗಿ ಹೆಣವೇ ಹೊತ್ತಿಕೊಂಡಿತು’. ಓದಿದ ಆ ಕ್ಷಣ ಬುದ್ದಿಯನ್ನೇ ಮಂಕಾಗಿಸಿ ಮನಸ್ಸನ್ನು ಆರ್ದ್ರಗೊಳಿಸುವ ಈ ಸಾಲುಗಳು ನಾನು ಇತ್ತೀಚಿಗೆ ಓದಿದ ‘ಭಿತ್ತಿ’ ಪುಸ್ತಕದಿಂದ ಹೆಕ್ಕಿ ತೆಗೆದವುಗಳು.
‘ಭಿತ್ತಿ’ ಇದು ಕನ್ನಡ ಸಾಹಿತ್ಯಕ್ಕೆ ಕ್ಲಾಸಿಕ್ ಕಾದಂಬರಿಗಳನ್ನು ನೀಡಿರುವ ಶ್ರೇಷ್ಠ ಬರಹಗಾರ ಸಂತೇಶಿವರ ಲಿಂಗಣ್ಣ ಭೈರಪ್ಪನವರ ಆತ್ಮಕಥೆ. ಇಪ್ಪತ್ನಾಲ್ಕು ಕಾದಂಬರಿಗಳು, ಆತ್ಮವೃತ್ತಾಂತ, ನಾಲ್ಕು ಸಾಹಿತ್ಯ ಚಿಂತನ ಗ್ರಂಥಗಳು ಮತ್ತು ಎರಡು ಸಂಪಾದಿತ ಕೃತಿಗಳ ಲೇಖಕರಾದ ಎಸ್.ಎಲ್.ಭೈರಪ್ಪನವರು ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳಲ್ಲೂ ಓದುಗರ ದೊಡ್ಡ ಸಮೂಹವನ್ನು ಹೊಂದಿರುವ ವಿಶಿಷ್ಟ ಬರಹಗಾರ. ಭೈರಪ್ಪನವರ ಕಾದಂಬರಿಗಳು ತೆಲುಗು, ಮರಾಠಿ, ಹಿಂದಿ ಭಾಷೆಗಳೂ ಸೇರಿ ಭಾರತದ ಎಲ್ಲ 14 ಭಾಷೆಗಳಿಗೂ ಅನುವಾದಗೊಂಡಿವೆ. ಭೈರಪ್ಪನವರ ಬದುಕು ಮತ್ತು ಸಾಹಿತ್ಯ ಕುರಿತೇ ಇಪ್ಪತ್ತಕ್ಕೂ ಹೆಚ್ಚು ಕೃತಿಗಳು ಬೇರೆ ಬೇರೆ ಲೇಖಕರಿಂದ ರಚನೆಗೊಂಡಿರುವುದು ಇನ್ನೊಂದು ವಿಶೇಷ. ಕಾಲಕಾಲಕ್ಕೆ ತಮ್ಮ ಬರವಣಿಗೆಯಿಂದ ಭೈರಪ್ಪನವರು ಕನ್ನಡದ ಓದುಗರನ್ನು ಚಿಂತನೆಗೆ ಹಚ್ಚುತ್ತಲೇ ಬಂದಿರುವರು. ಅವರ ಕೃತಿಗಳು ಮನೋರಂಜನೆಗಾಗಿಯೋ ಇಲ್ಲವೇ ಸಮಯ ಕಳೆಯುವುದಕ್ಕಾಗಿಯೋ ಓದುವಂಥ ಪುಸ್ತಕಗಳ ಸಾಲಿನಲ್ಲಿ ನಿಲ್ಲುವ ಕೃತಿಗಳಲ್ಲ. ಭೈರಪ್ಪನವರ ಕಾದಂಬರಿಯೊಂದನ್ನು ಓದಿದ ನಂತರ ಅದು ಓದುಗನ ಮನಸ್ಸನ್ನು ಅನೇಕ ದಿನಗಳವರೆಗೆ ಕಾಡುತ್ತ ಹೊಸ ಚಿಂತನೆಯನ್ನು ಸೃಷ್ಟಿಸಿ ಬದುಕಿನ ಪರಿವರ್ತನೆಗೆ ಕಾರಣವಾಗುತ್ತದೆ.
ಧರ್ಮಶ್ರೀ, ಮತದಾನ, ದಾಟು, ಪರ್ವ, ಸಾರ್ಥ, ಮಂದ್ರ, ಆವರಣ, ವಂಶವೃಕ್ಷ ಕಾದಂಬರಿಗಳನ್ನು ಓದಿದ ನನಗೆ ಭೈರಪ್ಪನವರ ಆತ್ಮಕಥೆ ಓದಬೇಕೆನ್ನುವ ಆಸೆ ಮನಸ್ಸಿನಲ್ಲಿ ಮೊಳಕೆಯೊಡೆದು ಕಾಲಾನಂತರದಲ್ಲಿ ಅದು ಹೆಮ್ಮರವಾಗಿ ಬೆಳೆದು ಕೂತಲ್ಲಿ ನಿಂತಲ್ಲಿ ಕಾಡತೊಡಗಿದಾಗ ಪರಿಚಿತರನ್ನು ಸಂಪರ್ಕಿಸಿ ‘ಭಿತ್ತಿ’ಯನ್ನು ತರಿಸಿಕೊಳ್ಳದೆ ಬೇರೆ ದಾರಿಯೆೀ ಇರಲಿಲ್ಲ. ಒಂದು ಹಗಲು ಒಂದು ರಾತ್ರಿ ಕುಳಿತು ಓದಿದ್ದಾಯಿತು. ಓದಿದ ನಂತರದ ಕೆಲವು ದಿನಗಳವರೆಗೆ ಮನೆಯಲ್ಲಿ ಹಾಗೂ ಪರಿಚಿತರಲ್ಲಿ ‘ಭಿತ್ತಿ’ಯದೇ ಮಾತು. ಅಷ್ಟರಮಟ್ಟಿಗೆ ಭೈರಪ್ಪನವರ ಬದುಕು ನನ್ನನ್ನು ಕಲಕಿತ್ತು. ಜೊತೆಗೆ ಓದಿದ ಉತ್ತಮ ಪುಸ್ತಕವೊಂದನ್ನು ಅನೇಕ ಮನಸ್ಸುಗಳಿಗೆ ದಾಟಿಸುವ ಕೆಲಸ ಓದುಗನಿಂದಾಗಬೇಕು ಎನ್ನುವುದನ್ನು ಬಲವಾಗಿ ನಂಬಿಕೊಂಡಿರುವ ಓದುಗ ನಾನು. ಅದಕ್ಕೇಂದೇ ಕನ್ನಡ ಪುಸ್ತಕಗಳ ಓದುಗರಿಗಾಗಿ ‘ಭಿತ್ತಿ’ ಕುರಿತು ನನ್ನ ಲೇಖನ.
ಭಿತ್ತಿಯಲ್ಲಿ ಮೂಡಿದ ಬದುಕು
ಬೆನ್ನು ಹತ್ತಿದ ಬಡತನ, ಜವಾಬ್ದಾರಿಯರಿಯದ ಅಪ್ಪ,ನೆರವು ನೀಡದ ಬಂಧುಗಳು ಹಾಗೂ ಇತರರ ಕೊಂಕು ನುಡಿಗಳ ನಡುವೆ ಭೈರಪ್ಪನವರ ಬಾಲ್ಯದ ಬದುಕು ತೆರೆದುಕೊಳ್ಳುತ್ತದೆ. ಏಳು ಮಕ್ಕಳ ದೊಡ್ಡ ಕುಟುಂಬಕ್ಕೆ ತಾಯಿಯ ದುಡಿಮೆಯೊಂದೇ ಆಧಾರ. ಗಂಡಸಿಗೆ ಸರಿಸಮವಾಗಿ ದುಡಿಯುತ್ತ ಕುಟುಂಬವನ್ನು ಸಾಕುತ್ತಿರುವ ತಾಯಿಯನ್ನು ಕಂಡರೆ ಭೈರಪ್ಪನವರಿಗೆ ಎಲ್ಲಿಲ್ಲದ ಗೌರವ ಮತ್ತು ಅಭಿಮಾನ. ಆ ಅಭಿಮಾನ ಮತ್ತು ಗೌರವ ಅಮ್ಮನ ಸಾವಿನ ನಂತರವೂ ಅವರಲ್ಲುಳಿದು ಅವರನ್ನು ಸದಾ ಎಚ್ಚರಿಸುವ ಜಾಗೃತ ಪ್ರಜ್ಞೆಯಾಗುತ್ತದೆ. ಜೊತೆಗೆ ಬಾಲ್ಯದಲ್ಲೇ ಕಂಡ ಸಾಲು ಸಾಲು ಸಾವುಗಳು ಭೈರಪ್ಪನವರ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನುಂಟು ಮಾಡುತ್ತವೆ. ಅಮ್ಮ, ಅಕ್ಕ, ರಾಮಣ್ಣ, ಸುಶೀಲ, ಕೃಷ್ಣಮೂರ್ತಿ ಈ ಎಲ್ಲ ಸಾವುಗಳನ್ನು ಕಂಡ ಆ ಘಳಿಗೆ ಭೈರಪ್ಪನವರಿಗಿನ್ನೂ ಹದಿನೈದು ವರ್ಷ ವಯಸ್ಸು. ಈ ಸೂತಕದ ಛಾಯೆ ಸಹಜವಾಗಿಯೆೀ ಅವರಲ್ಲಿ ಧರ್ಮ, ಕರ್ಮ, ನ್ಯಾಯ, ನೀತಿ, ಸರಿತಪ್ಪು ಇತ್ಯಾದಿ ಆಧ್ಯಾತ್ಮ ಗುಣದ ಪ್ರಶ್ನೆಗಳು ಸ್ಪುಟವಾಗಲು ಕಾರಣವಾಯಿತು. ಸಂತೇಶಿವರದಿಂದ ಬಾಗೂರಿಗೆ ಮುಂದೆ ನುಗ್ಗೆಹಳ್ಳಿ, ಗೊರೂರು, ಮೈಸೂರು, ಮುಂಬೈ, ಹಾವೇರಿ ಹೀಗೆ ಬದುಕು ಭೈರಪ್ಪನವರನ್ನು ಕೈಹಿಡಿದು ಎಲ್ಲೆಲ್ಲಿಗೋ ಕರೆದೊಯ್ಯುತ್ತದೆ. ಸ್ವಾಮಿ ಮೇಷ್ಟ್ರು, ಅತ್ತಿಗೆ, ಶ್ರೀನಿವಾಸ ಅಯ್ಯಂಗಾರರು, ರಾಮಕೃಷ್ಣಯ್ಯನವರು, ರಾಂಪುರದ ಕಲ್ಲೇಗೌಡರಿಂದ ದೊರೆತ ಸಹಾಯ ಭೈರಪ್ಪನವರ ಬಾಲ್ಯ ಜೀವನವನ್ನು ಒಂದಿಷ್ಟು ಸಹನೀಯವಾಗಿಸುತ್ತದೆ. ಸೋದರಮಾವನ ಮನೆಯಲ್ಲಿ ಅನುಭವಿಸಿದ ಹಿಂಸೆ, ಅಪಮಾನವನ್ನು ಕುರಿತು ಬರೆಯುವಾಗ ಸಹಜವಾಗಿಯೇ ಭೈರಪ್ಪನವರು ಭಾವುಕರಾಗುತ್ತಾರೆ. ಆ ಅಪಮಾನ ಹಿಂಸೆಯೇ ಅವರ ವ್ಯಕ್ತಿತ್ವವನ್ನು ಗಟ್ಟಿಗೊಳಿಸುತ್ತವೆ. ಅಮ್ಮನ ಸಾವಿನ ನಂತರ ಸೋದರಮಾವನನ್ನು ವಿರೋಧಿಸಿ ಮನೆಯಿಂದ ಹೊರಬರುವ ಆ ಸಂದರ್ಭ ಅಸಹಾಯಕಳಾಗಿ ಅಳುತ್ತ ನಿಲ್ಲುವ ಆಕ್ಕಮ್ಮ (ಅಜ್ಜಿ)ನ ಚಿತ್ರಣ ಕಣ್ಮುಂದೆ ಸುಳಿದು ಓದುಗನ ಮನಸ್ಸು ಆರ್ದ್ರವಾಗುತ್ತದೆ.
ಅಮ್ಮನ ಅಗಲಿಕೆ, ಸಹೋದರ ಸಹೋದರಿಯರ ಸಾವುಗಳು, ಬೆನ್ನುಹತ್ತಿದ ಬಡತನ, ಅಪ್ಪನ ಬೇಜವಾಬ್ದಾರಿತನ, ಅಮ್ಮನ ತವರಿನಲ್ಲಿ ಅನುಭವಿಸಿದ ಕಷ್ಟ ಈ ಎಲ್ಲ ನೋವುಗಳ ನಡುವೆಯೂ ಭೈರಪ್ಪನವರು ಬದುಕನ್ನು ಒಂದು ಸೃಜನಶೀಲ ನೆಲೆಯಲ್ಲಿ ಕಟ್ಟಿಕೊಳ್ಳಲು ನೆರವಾಗಿದ್ದೆ ನಾಟಕಗಳು. ದಿನನಿತ್ಯ ಹತ್ತಾರು ಮೈಲಿ ನಡೆದು ಊರೂರು ಸುತ್ತಿ ರಾತ್ರಿಯೆಲ್ಲ ನಿದ್ದೆಗೆಟ್ಟು ನೋಡಿದ ನಾಟಕಗಳು ಭೈರಪ್ಪನವರ ಬದುಕಿನ ಮೇಲೆ ಗಾಢ ಪ್ರಭಾವ ಬೀರುತ್ತವೆ. ಮುಂದೆ ಸಿನಿಮಾ ಮಂದಿರದಲ್ಲಿ ಗೇಟ್ಕೀಪರ್ ಆಗಿ ಕೆಲಸ ಮಾಡುವ ವೇಳೆ ನೋಡುವ ಸಿನಿಮಾಗಳು, ಸಂಗೀತದ ಅಭಿಮಾನಿಯಾಗಿ ಅಸಂಖ್ಯಾತ ಕಾರ್ಯಕ್ರಮಗಳಿಗೆ ಕಿವಿಯಾದದ್ದು ಊರೂರು ಅಲೆದಾಟ ಈ ಹವ್ಯಾಸಗಳೇ ಅಂದಿಗೂ ಇಂದಿಗೂ ಭೈರಪ್ಪನವರ ಸೃಜನಶೀಲತೆ ಮಂಕಾಗದಂತೆ ಕಾಪಿಟ್ಟುಕೊಂಡು ಬಂದಿವೆ.
ಭೈರಪ್ಪನವರಿಗೆ ಬರಹದಲ್ಲಿ ರಸವನ್ನು ಸೃಷ್ಟಿಸುವ ಸೃಜನಶೀಲತೆಯಿದೆ. ಅಂಥದ್ದೊಂದು ಸೃಜನಶೀಲ ಶಕ್ತಿ ಅವರಲ್ಲಿರುವುದರಿಂದ ಅವರ ಈ ಆತ್ಮಕಥೆಯನ್ನು ಓದುವಾಗ ಅದೊಂದು ರೋಚಕ ಕಾದಂಬರಿಯಂತೆ ಭಾಸವಾಗುತ್ತದೆ. ಕಥೆಯ ಓಘ ತನ್ನ ವೇಗವನ್ನು ಕಳೆದುಕೊಳ್ಳದಿರುವುದರಿಂದ ಇಲ್ಲಿ ಪ್ರತಿಯೊಂದು ಅದ್ಯಾಯ ತನ್ನ ತಾಜಾತನವನ್ನು ಉಳಿಸಿಕೊಂಡಿದೆ. ಜೊತೆಗೆ ಸಾಹಿತ್ಯದ ಒಂದು ಪ್ರಕಾರಕ್ಕೆ (ಕಾದಂಬರಿ ಪ್ರಕಾರಕ್ಕೆ) ಮಾತ್ರ ನಿಷ್ಠರಾಗಿರಬೇಕೆನ್ನುವ ಅವರೊಳಗಿನ ಹಠ ರಸ ಸೃಷ್ಟಿಯ ಸೆಲೆಯನ್ನು ನಿರಂತರವಾಗಿ ಪ್ರವಹಿಸುವಂತೆ ಮಾಡಿದೆ. ಭೈರಪ್ಪನವರು ತತ್ವಶಾಸ್ತ್ರವನ್ನು ತಮ್ಮ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲು ಅವರು ಬದುಕಿನಲ್ಲಿ ಎದುರಿಸಿದ ಅನೇಕ ಸವಾಲುಗಳು ಮತ್ತು ಸಮಸ್ಯೆಗಳೇ ಮುಖ್ಯ ಕಾರಣವಾಗುತ್ತವೆ. ತತ್ವಶಾಸ್ತ್ರದ ಅಧ್ಯಯನದಿಂದ ನೌಕರಿ ಗಿಟ್ಟಿಸುವುದು ಅಸಾಧ್ಯ ಎನ್ನುವ ಸಮಸ್ಯೆಯ ನಡುವೆಯೂ ಅವರು ತತ್ವಶಾಸ್ತ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ‘ಇಫ್ ಫಿಲಾಸಫಿ ಡಸ್ ನಾಟ್ ಬೇಕ್ ಎನಿ ಬ್ರೆಡ್ ಐ ವಿಲ್ ಓಪನ್ ಎ ಬೇಕರಿ ಫಾರ್ ಅರ್ನ್ ಮೈ ಬ್ರೆಡ್’ ಎನ್ನುವಷ್ಟು ತತ್ವಶಾಸ್ತ್ರದ ಮೇಲೆ ಶ್ರದ್ಧೆ ಮತ್ತು ಪ್ರೀತಿ ಅವರಿಗೆ. ವಿದ್ಯಾರ್ಥಿ ದೆಸೆಯಲ್ಲೇ ತತ್ವಶಾಸ್ತ್ರದ ಆಳ ಅಗಲಗಳ ಶೋಧನೆಗೆ ಮುಂದಾಗುತ್ತಾರೆ. ಯಮುನಾಚಾರ್ಯ ಮತ್ತು ಶಾಂತಮ್ಮನವರಂಥ ಶ್ರೇಷ್ಠ ಗುರುಗಳ ಮಾರ್ಗದರ್ಶನದಲ್ಲಿ ಭೈರಪ್ಪನವರು ತತ್ವಶಾಸ್ತ್ರವನ್ನು ತಮ್ಮೊಳಗೆ ಅಂತರ್ಗತಗೊಳಿಸಿಕೊಳ್ಳುತ್ತಾರೆ. ತತ್ವಶಾಸ್ತ್ರದ ವಿದ್ಯಾರ್ಥಿಯಾಗಿ ಅದನ್ನು ಆಳವಾಗಿ ಅಭ್ಯಸಿಸಿ ಅದೇ ವಿಷಯದ ಉಪನ್ಯಾಸಕರಾಗಿ ಮತ್ತು ಸಂಶೋಧಕರಾಗಿ ಕಾರ್ಯನಿರ್ವಹಿಸುವ ಭೈರಪ್ಪನವರು ಮುಂದೊಂದು ದಿನ ಶ್ರೇಷ್ಠ ತತ್ವಜ್ಞಾನಿಯಾಗುವ ಎಲ್ಲ ಅವಕಾಶಗಳು ಮತ್ತು ಪ್ರತಿಭೆ ಇದ್ದೂ ಅವರು ಸಾಹಿತ್ಯದತ್ತ ಹೊರಳುವುದು ಸಾಹಿತ್ಯದ ಮೇಲಿನ ಅನನ್ಯ ಪ್ರೀತಿಗೆ ಸಾಕ್ಷಿಯಾಗಿದೆ. ಬದುಕಿನ ಒಂದು ಹಂತದಲ್ಲಿ ಎದುರಾಗುವ ಎರಡು ಅವಕಾಶಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ ಎನ್ನುವ ದ್ವಂದ್ವ ಭೈರಪ್ಪನವರನ್ನು ಕಾಡುತ್ತದೆ. ತತ್ವಜ್ಞಾನಿಯಾಗಿ ಖ್ಯಾತಿಯನ್ನು ಹೊಂದಬೇಕೋ ಅಥವಾ ಸಾಹಿತ್ಯದ ಸೃಷ್ಟಿಯಲ್ಲಿ ತನ್ನ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಬೇಕೋ ಎನ್ನುವ ಜಿಜ್ಞಾಸೆಗೆ ಉತ್ತರವನ್ನು ಕಂಡುಕೊಳ್ಳಲು ಅವರು ಹೆಣಗುತ್ತಾರೆ.
ಸಾಹಿತ್ಯದತ್ತ ಹೊರಳುವಿಕೆ
ಎಸ್.ಎಲ್.ಭೈರಪ್ಪನವರು ೧೯೫೮ರಲ್ಲಿ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ತತ್ವಶಾಸ್ತ್ರದ ಉಪನ್ಯಾಸಕರಾಗಿ ತಮ್ಮ ವೃತ್ತಿ ಬದುಕಿಗೆ ಕಾಲಿಡುವರು.೧೯೬೦ ರ ವರೆಗೆ ಸುಮಾರು ಎರಡು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿ ಮುಂದೆ ಗುಜರಾತಿನ ಸರ್ದಾರ ಪಟೇಲ ವಿಶ್ವವಿದ್ಯಾಲಯದಲ್ಲಿ ಹೊಸ ನೇಮಕಾತಿಯೊಂದಿಗೆ ಹೊಸ ಪರಿಸರದಲ್ಲಿ ಅವರ ವೃತ್ತಿ ಬದುಕಿನ ಪುಟಗಳು ತೆರೆದುಕೊಳ್ಳಲಾರಂಭಿಸುತ್ತವೆ. ಆ ಖಾಸಗಿ ಕಾಲೇಜು ಬಿಟ್ಟು ಬರುವಾಗ ಅವರಿಗೆ ಅಡೆತಡೆಗಳು ಮತ್ತು ಕೆಲವು ಮಹನೀಯರ ಸಹಕಾರ ಒಟ್ಟೊಟ್ಟಿಗೆ ಎದುರಾಗುತ್ತವೆ. ಆ ಸಂದರ್ಭ ಹಿರಯರಾದ ನಾಡಗೌಡ ತೋಪಖಾನೆ, ಕಲ್ಮಠ ಅವರಿಂದ ದೊರೆಯುವ ಸಹಕಾರ ಮತ್ತು ನೈತಿಕ ಪ್ರೋತ್ಸಾಹ ಯಾವುದೇ ಸಮಸ್ಯೆಗಳಿಲ್ಲದೆ ಭೈರಪ್ಪನವರು ವಿಶ್ವವಿದ್ಯಾಲಯದಂಥ ಉನ್ನತ ಶಿಕ್ಷಣ ಕೇಂದ್ರಕ್ಕೆ ಉಪನ್ಯಾಸಕರಾಗಿ ಸೇರಲು ನೆರವಾಗುತ್ತವೆ.
ಗುಜರಾತು ಸೇರಿದ ಮುಂದಿನ ಎರಡು ವರ್ಷಗಳಲ್ಲೇ ಭೈರಪ್ಪನವರು ಜಾವಡೇಕರ್ ಅವರ ಮಾರ್ಗದರ್ಶನದಲ್ಲಿ ಪಿ.ಹೆಚ್.ಡಿ ಪದವಿ ಪಡೆದು ನಂತರ ಅವರ ಮಾರ್ಗದರ್ಶಕರ ಸಲಹೆಯಂತೆ ಡಿ.ಲಿಟ್ ಪದವಿಗಾಗಿ ತತ್ವಶಾಸ್ತ್ರದಲ್ಲಿ ಪುಸ್ತಕ ಬರೆಯಲು ತೊಡಗುವರು. ಅನೇಕ ಪುಸ್ತಕಗಳನ್ನು ಓದಿ ತತ್ವಶಾಸ್ತ್ರ ವಿಷಯದಲ್ಲಿ ಪ್ರಭುತ್ವವಿರುವ ಭೈರಪ್ಪನವರಿಗೆ ಇದು ಸುಲಭದ ಕೆಲಸ ಎನ್ನುವುದು ಜಾವಡೇಕರ್ ಅವರ ಅಭಿಪ್ರಾಯವಾಗಿತ್ತು. ತಮ್ಮ ಗುರುಗಳ ಸಲಹೆಗೆ ಪ್ರಾರಂಭದಲ್ಲಿ ಸೂಕ್ತವಾಗಿಯೇ ಪ್ರತಿಕ್ರಿಯಿಸುವ ಭೈರಪ್ಪನವರು ಈ ವಿಷಯವಾಗಿ ಕಾರ್ಯೋನ್ಮುಖರಾಗುವರು. ಡಿ.ಲಿಟ್ ಪದವಿಗಾಗಿ ತಯ್ಯಾರಿ ಮಾಡಿಕೊಳ್ಳುತ್ತಿರುವ ಸಮಯದಲ್ಲೇ ಅವರಲ್ಲಿ ‘ವಂಶವೃಕ್ಷ’ದ ಕಥೆ,ಪಾತ್ರಗಳು,ಸನ್ನಿವೇಶ,ಸಂದರ್ಭಗಳು ಮನಸ್ಸಿನಲ್ಲಿ ಮೊಳಕೆಯೊಡೆದು ಕಾಡಲಾರಂಭಿಸುತ್ತವೆ. ಈ ನಡುವೆ ಹುಬ್ಬಳ್ಳಿಯ ಸಾಹಿತ್ಯ ಭಂಡಾರದ ಗೋವಿಂದರಾಯರಿಂದ ಕಾದಂಬರಿಯೊಂದನ್ನು ಬರೆದು ಕಳುಹಿಸಿ ಎನ್ನುವ ಪ್ರೀತಿಯ ಒತ್ತಾಯ. ಒಂದೆಡೇ ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನ ತಂದುಕೊಡಲಿರುವ ಡಿ.ಲಿಟ್ ಪದವಿ ಇನ್ನೊಂದೆಡೆ ಸೃಜನಾತ್ಮಕವಾದದ್ದನ್ನು ಸೃಷ್ಟಿಸಲು ನೆರವಾಗುವ ಸಾಹಿತ್ಯ. ಒಂದು ವಾಸ್ತವವಾದರೆ ಇನ್ನೊಂದು ಭಾವಪ್ರಧಾನ. ತತ್ವಶಾಸ್ತ್ರದ ಸಂಶೋಧನೆಯಲ್ಲೇ ಮುಂದುವರೆಯಲೇ? ಅಥವಾ ಸೃಜನಶೀಲ ಮಾಧ್ಯಮವಾದ ಕಾದಂಬರಿ ರಚನೆಯಲ್ಲಿ ತೊಡಗಿಸಿಕೊಳ್ಳಲ್ಲೇ? ಭೈರಪ್ಪನವರ ಮನಸ್ಸು ಈ ಸಂದಿಗ್ಧದಲ್ಲಿ ಅನೇಕ ತಿಂಗಳುಗಳ ಕಾಲ ಹೊಯ್ದಾಡುತ್ತದೆ. ಒಂದು ಹಂತದಲ್ಲಿ ಕನ್ನಡದಲ್ಲಿ ಬರೆಯುವ ಕಾದಂಬರಿಗೆ ಗುಜರಾತಿನಲ್ಲಿರುವ ತತ್ವಶಾಸ್ತ್ರ ವಿಭಾಗದಲ್ಲೇನು ಬೆಲೆ ಇರುತ್ತದೆ? ಎಂಬ ಲೌಕಿಕ ವಿವೇಕ ಎಚ್ಚರಿಸುತ್ತದೆ. ಇಂಥದ್ದೊಂದು ಹೊಯ್ದಾಟದ ನಡುವೆ ಕೆಲವು ದಿನಗಳ ಕಾಲ ಡಿ.ಲಿಟ್ ಪುಸ್ತಕಕ್ಕೆ ಕೈಹಚ್ಚುವುದು ನಂತರ ಇದು ನನ್ನ ಅಭಿವ್ಯಕ್ತಿ ಮಾಧ್ಯಮವಲ್ಲ ಎನ್ನುವ ಒಳಗಿನ ಒತ್ತಡದಿಂದಾಗಿ ಕಾದಂಬರಿಕಡೆ ಹೊರಳುವುದು ಈ ತೊಳಲಾಟ ಮುಂದುವರೆಯುತ್ತದೆ. ಕೊನೆಗೆ ಲೌಕಿಕ ವಿವೇಕದ ಧ್ವನಿಯು ಬುದ್ದಿಯೊಳಕ್ಕೆ ಪ್ರವೇಶವನ್ನೇ ಮಾಡದ ಸ್ಥಿತಿಯು ಒಳಗಿನಿಂದ ಬೆಳೆದು ಹೆಮ್ಮರವಾದಾಗ ಭೈರಪ್ಪನವರು ಸೃಜನಾತ್ಮಕವಾಗಿ ಸೃಷ್ಟಿಸುವ ಸಾಹಿತ್ಯವನ್ನೇ ತಮ್ಮ ಅಭಿವ್ಯಕ್ತಿಯ ಮಾಧ್ಯಮವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.
ಭೈರಪ್ಪನವರ ದೃಷ್ಟಿಯಲ್ಲಿ ಬರವಣಿಗೆ ಎನ್ನುವುದು ಅದು ಬರೀ ಬರೆದು ಹೊರಹಾಕುವುದಲ್ಲ. ಕುಸುರಿ ಕೆಲಸವಿರುವ ಪಾತ್ರಗಳ ಒಳಗನ್ನು ಪದರ ಪದರವಾಗಿ ತೋರಿಸುವ ಬರವಣಿಗೆ ಅದೊಂದು ಕಲೆ. ಇಂಥದ್ದೊಂದು ಕಲೆ ಅದು ಕಾದಂಬರಿ ರಚನೆಯಲ್ಲಿ ಮಾತ್ರ ಸಾಧ್ಯ ಎಂದವರ ನಂಬಿಕೆ. ಆದ್ದರಿಂದ ಸಂಶೋಧನಾ ಬರವಣಿಗೆಯನ್ನು ಹಿಂದೆ ಸರಿಸಿ ಕಾದಂಬರಿಯ ಬರವಣಿಗೆಗೆ ಮುಂದಾಗುತ್ತಾರೆ. ಸಂಶೋಧನಾ ಬರವಣಿಗೆಯಿಂದ ಸಂಪೂರ್ಣವಾಗಿ ಬಿಡಿಸಿಕೊಂಡು ಹೊರಬರುವ ಭೈರಪ್ಪನವರು ಆ ಘಳಿಗೆ ಹೀಗೆ ನುಡಿಯುತ್ತಾರೆ ‘ತತ್ವಶಾಸ್ತ್ರದಲ್ಲಿ ಸೃಜನಾತ್ಮಕವಾಗಿ ಸೃಷ್ಟಿಸುವುದು ನನ್ನ ಮನೋಧರ್ಮದಲ್ಲಿಲ್ಲ. ನನ್ನದು ಭಾವಪ್ರಧಾನ ವ್ಯಕ್ತಿತ್ವ. ನಾನು ಸೃಜನಾತ್ಮಕವಾದದ್ದನ್ನು ಸಾಹಿತ್ಯದಲ್ಲಿ ಮಾತ್ರ ಸೃಷ್ಟಿಸಬಲ್ಲೆ ಎಂಬುದನ್ನು ಒಂದು ಘಟ್ಟದಲ್ಲಿ ಅರ್ಥಮಾಡಿಕೊಂಡೆ. ಸಾಹಿತ್ಯವು ನನ್ನ ಸೃಜನಶೀಲ ಅಭಿವ್ಯಕ್ತಿಯ ಮಾಧ್ಯಮವಾಯಿತು. ಅದು ಅಪೇಕ್ಷಿಸಿದಂತೆ ನನ್ನ ಕಾಲ, ಚಿಂತನೆ, ವ್ಯವಸಾಯಗಳನ್ನೆಲ್ಲ ಬದಲಿಸಿಕೊಂಡೆ’. ಹೀಗೆ ಕಾಲ, ಚಿಂತನೆ, ವ್ಯವಸಾಯಗಳನ್ನು ಸಾಹಿತ್ಯಕ್ಕೆ ಪೂರಕವಾಗಿ ಬದಲಿಸಿಕೊಂಡ ಭೈರಪ್ಪನವರಿಂದ ನಂತರದ ದಿನಗಳಲ್ಲಿ ಕನ್ನಡಕ್ಕೆ ಮಾತ್ರವಲ್ಲದೆ ಭಾರತದ ಇಡೀ ಸಾಹಿತ್ಯ ಕ್ಷೆತ್ರಕ್ಕೆ ಶ್ರೇಷ್ಠ ಕಾದಂಬರಿಗಳು ಕೊಡುಗೆಯಾಗಿ ದೊರೆತವು.
ನಾನ್-ಅಕಾಡೆಮಿಕ್ ಬರಹಗಾರ
ಭೈರಪ್ಪನವರು ಓದಿದ್ದು ತತ್ವಶಾಸ್ತ್ರ ಆದರೆ ಕೃಷಿ ಮಾಡುತ್ತಿರುವುದು ಸಾಹಿತ್ಯದಲ್ಲಿ. ಅವರ ಓದಿನ ಹಿನ್ನೆಲೆಯನ್ನೇ ಆಧಾರವಾಗಿಟ್ಟುಕೊಂಡು ಕನ್ನಡದ ಸಾಹಿತ್ಯ ವಲಯ ಕಾಲಾನುಕಾಲಕ್ಕೆ ಭೈರಪ್ಪನವರ ಬರವಣಿಗೆಯನ್ನು ಟೀಕಿಸುತ್ತಲೇ ಬಂದಿದೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಭೈರಪ್ಪನವರು ಯಾವ ಟೀಕೆ-ಟಿಪ್ಪಣೆಗಳಿಗೆ ಕಿವಿಗೊಡದೆ ಅತ್ಯುತ್ತಮ ಕಾದಂಬರಿಗಳನ್ನು ಬರೆದು ತಮ್ಮ ಬರವಣಿಗೆಯ ಓದಿಗೆ ಓದುಗರ ದೊಡ್ಡ ಸಮೂಹವನ್ನೇ ಸೃಷ್ಟಿಸಿಕೊಂಡ ಲೇಖಕ. ಭೈರಪ್ಪನವರಿಗಿರುವ ಈ ಜನಪ್ರಿಯತೆ ಮತ್ತು ಅವರೊಳಗಿನ ಸೃಜನಶೀಲತೆಯನ್ನು ಸಹಿಸಿಕೊಳ್ಳದ ನಮ್ಮ ಅಕಾಡೆಮಿಕ್ ಬರಹಗಾರರು ಅನೇಕ ಸಂದರ್ಭಗಳಲ್ಲಿ ತಮ್ಮ ಸಣ್ಣತನವನ್ನು ಪ್ರದರ್ಶಿಸಿದ್ದುಂಟು. ಅಂಥ ಒಂದೆರಡು ಸಣ್ಣತನಗಳನ್ನು ಹೇಳದೇ ಇದ್ದಲ್ಲಿ ಲೋಪವಾಗಬಹುದೆನ್ನುವ ವಿನಯದಿಂದಲೇ ಭೈರಪ್ಪನವರು ತಮ್ಮ ಆತ್ಮಕಥನದಲ್ಲಿ ಒಂದೆರಡು ಉದಾಹರಣೆಗಳಿಗೆ ಜಾಗಮಾಡಿ ಕೊಟ್ಟಿರುವರು.
ಕನ್ನಡದ ಶ್ರೇಷ್ಠ ವಿಮರ್ಶಕರೆಂದೇ ಹೆಸರಾದ ಕೀರ್ತಿನಾಥ ಕುರ್ತುಕೋಟಿ ಅವರು ಅನೇಕ ಸಂದರ್ಭಗಳಲ್ಲಿ ಭೈರಪ್ಪನವರ ಬರವಣಿಗೆಯನ್ನು ಟೀಕಿಸಿದ ಪ್ರಸಂಗಗಳು ಪುಸ್ತಕದ ಅಲ್ಲಲ್ಲಿ ಬರುತ್ತವೆ. ಒಂದು ಹಂತದಲ್ಲಿ ಕೀರ್ತಿನಾಥ ಕುರ್ತುಕೋಟಿ ಅವರು ಭೈರಪ್ಪನವರ ವ್ಯಕ್ತಿತ್ವದ ಮೇಲೆ ಪ್ರಹಾರ ಮಾಡುತ್ತ ಹೀಗೆ ಟೀಕಿಸುತ್ತಾರೆ ‘ಸದಾ ಪುಸ್ತಕ ಜೀವಿಯಾಗಿರುವ ಭೈರಪ್ಪನವರಿಗೆ ಜೀವನಾನುಭವವೇ ಇಲ್ಲ. ಅವರು ಬರೆಯುವ ಕಾದಂಬರಿಯಲ್ಲಿ ಸತ್ವ ಹೇಗಿದ್ದೀತು? ಭೈರಪ್ಪನವರು ಚಹಾ ಕುಡಿಯುವುದಿಲ್ಲ ಆದ್ದರಿಂದ ಅವರ ಪಾತ್ರಗಳಿಗೂ ಚಹಾ ಕುಡಿಯಲು ಬರುವುದಿಲ್ಲ’.
1967 ರಲ್ಲಿ ಉಡುಪಿಯಲ್ಲಿ ಏರ್ಪಟ್ಟ ವಿಚಾರಗೋಷ್ಠಿಯಲ್ಲಿ ಕುರ್ತುಕೋಟಿಯವರು ‘ವಂಶವೃಕ್ಷ’ ಕಾದಂಬರಿಯನ್ನು ನೂರು ದೋಷಗಳಿರುವ ಕಾದಂಬರಿ ಎಂದು ಟೀಕಿಸಿದರೆ ‘ಪರ್ವ’ದ ಮೇಲೆ ಬೆಂಗಳೂರಿನಲ್ಲಿ ನಡೆದ ವಿಮರ್ಶಾಗೋಷ್ಠಿಯಲ್ಲಿ ‘ಇದು ಪಾಶ್ಚಿಮಾತ್ಯರಿಂದ ಪಡೆದ ಕಾದಂಬರಿ ಫಾರಂನಿಂದ ನಮ್ಮ ಪುರಾಣದ ಮೇಲೆ ನಿಯೋಗ ಮಾಡಿಸಿ ಸೃಷ್ಟಿಸಿದ ಕೃತಿ’ ಎಂದು ರೋಷ ವ್ಯಕ್ತಪಡಿಸುತ್ತಾರೆ. 1988 ರಲ್ಲಿ ಬರೋಡದಲ್ಲಿ ಏರ್ಪಡಿಸಿದ ಭೈರಪ್ಪನವರ ಸನ್ಮಾನ ಸಮಾರಂಭದಲ್ಲಿ ಕುರ್ತುಕೋಟಿ ಅವರು ‘ಭೈರಪ್ಪನವರು ತುಂಬಾ ಉದಾರವಾದಿ ಮನೆಗೆ ಬಂದ ಮಿತ್ರರಿಗೆ ಹೋಳಿಗೆ ಮಾಡಿಸಿ ಉಣ್ಣಿಸುತ್ತಾರೆ’ ಎಂದು ಹೇಳಿ ಅವರ ಕಾದಂಬರಿಗಳ ವಿಷಯವಾಗಿ ಒಂದು ಮಾತನ್ನೂ ಆಡುವುದಿಲ್ಲ.
ಭೈರಪ್ಪನವರು ತಮ್ಮ ವೃತ್ತಿ ಬದುಕಿನ ಕೊನೆಯ ದಿನಗಳಲ್ಲಿ ಮೈಸೂರಿಗೆ ಬಂದು ನೆಲೆಸಿದಾಗ ಅದಾಗಲೇ ನವ್ಯರು ಕನ್ನಡ ಸಾಹಿತ್ಯ ವಲಯದಲ್ಲಿ ತಮ್ಮ ನೆಲೆಯನ್ನು ಗಟ್ಟಿಗೊಳಿಸಿಕೊಂಡಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ ಕರ್ನಾಟಕದ ಹೊರಗಿದ್ದೇ ಭೈರಪ್ಪನವರು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರೂ ಇಲ್ಲಿನ ನವ್ಯರೊಂದಿಗೆ ಅವರಿಗೆ ಸಂಪರ್ಕ ಏರ್ಪಡಲಿಲ್ಲ. ಪರಿಣಾಮವಾಗಿ ನವ್ಯರು ಕಾಲಕಾಲಕ್ಕೆ ಭೈರಪ್ಪನವರ ಕೃತಿಗಳನ್ನು ಅಂನತಮೂರ್ತಿ ಅವರ ಕೃತಿಗಳೊಂದಿಗೆ ತುಲನೆ ಮಾಡುತ್ತ ಟೀಕಿಸುತ್ತಲೇ ಬಂದರು. ಅನಂತಮೂರ್ತಿ ಅವರ ‘ಸಂಸ್ಕಾರ’ ಪ್ರಗತಿಗಾಮಿಯಾದರೆ ಭೈರಪ್ಪನವರ ‘ವಂಶವೃಕ್ಷ’ ಪ್ರತಿಗಾಮಿ ಎನ್ನುವ ಉಪೇಕ್ಷೆಗೆ ಒಳಗಾಯಿತು. ‘ಭಾರತೀಪುರ’ ಕ್ರಾಂತಿಕಾರಕ ಕೃತಿಯಾದರೆ ‘ದಾಟು’ ಬ್ರಾಹ್ಮಣಿಕೆಯ ಹಿರಿಮೆಯನ್ನು ಎತ್ತಿ ಹಿಡಿಯುವ ಪ್ರತಿಗಾಮಿ ಕೃತಿ ಎಂದು ಪ್ರಚಾರ ಮಾಡಲಾಯಿತು. ಕೆಲವು ವಿಮರ್ಶಕರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ‘ಭೈರಪ್ಪನವರದು ರಂಜಿಸಿ ವಂಚಿಸುವ ಕಲೆ. ಇವರದು ಪೂರ್ವನಿಶ್ಚಿತ ವಿಚಾರಗಳನ್ನು ಪ್ರತಿಪಾದಿಸಲೆಂದು ಬರೆಯುವ ವಿಧಾನ. ಇವರೊಬ್ಬ ರಂಜಕ ಕಥೆಗಾರರು. ಕಥೆಗಿಂತ ಹೆಚ್ಚಿನದು ಇವರ ಕಾದಂಬರಿಗಳಲ್ಲಿಲ್ಲ. ಇವರೊಬ್ಬ ಜನಪ್ರಿಯ ಆದರೆ ಕಲಾಗುಣವಿಲ್ಲದ ಲೇಖಕ’ ಎಂದು ಆರೋಪಿಸಿರುವರು.
1981 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಭಾರತದ ಎಲ್ಲ ಭಾಷೆಗಳಲ್ಲೂ ಒಂದೊಂದು ಆಧುನಿಕ ಕ್ಲಾಸಿಕ್ ಎಂದು ಪರಿಗಣಿಸಲ್ಪಡಬಹುದಾದ ಸಾಹಿತ್ಯ ಕೃತಿಯನ್ನು ಇಂಗ್ಲಿಷ್ಗೆ ಅನುವಾದಿಸಲು ಯೋಜನೆ ಹಾಕಿಕೊಳ್ಳುತ್ತದೆ. ಆಗ ಕನ್ನಡ ಭಾಷೆಯಿಂದ ಆಯ್ಕೆಯಾಗುವ ಕೃತಿ ಕನ್ನಡ ಸಾಹಿತ್ಯದಲ್ಲೇ ಶ್ರೇಷ್ಠ ಎಂದೇ ಪರಿಗಣಿತವಾಗಿದ್ದ ‘ಪರ್ವ’ ಕಾದಂಬರಿ. ಅಕಾಡೆಮಿಯ ಸದಸ್ಯರೆಲ್ಲರೂ ‘ಪರ್ವ’ ಕೃತಿ ಅನುವಾದಗೊಳ್ಳಲೇ ಬೇಕಾದ ಕೃತಿ ಎಂದು ಅನುಮೋದಿಸಿದರೂ ಅನಂತಮೂರ್ತಿ ಮತ್ತು ಕುರ್ತುಕೋಟಿ ಅಪಸ್ವರ ಎತ್ತುತ್ತಾರೆ. ಕೊನೆಗೆ ಹೊಸ ಸಲಹಾ ಸಮಿತಿಯೊಂದು ಅಸ್ತಿತ್ವಕ್ಕೆ ಬಂದು ‘ಪರ್ವ’ ಕಾದಂಬರಿಯ ಇಂಗ್ಲಿಷ್ ಅನುವಾದಕ್ಕೆ ಒಪ್ಪಿಗೆ ದೊರೆಯುತ್ತದೆ. ಹೀಗೆ ಭೈರಪ್ಪನವರ ವ್ಯಕ್ತಿತ್ವ ಮತ್ತು ಬರವಣಿಗೆಯನ್ನು ಅವಕಾಶ ಸಿಕ್ಕಾಗಲೆಲ್ಲ ನವ್ಯರ ಗುಂಪು ತೇಜೋವಧೆಗೆ ಪ್ರಯತ್ನಿಸುತ್ತಲೇ ಬಂದಿದೆ. ಇತ್ತೀಚಿನ ಉದಾಹರಣೆಯಾಗಿ ಅವರ ‘ಆವರಣ’ ಕೃತಿಯನ್ನು ವಿರೋಧಿಸಿ ‘ಅನಾವರಣ’ ಪುಸ್ತಕವನ್ನೇ ಬರೆದರು. ಆದರೆ ಭೈರಪ್ಪನವರು ಮಾತ್ರ ಈ ಎಲ್ಲ ಬೆಳವಣಿಗೆಗಳಿಂದ ದೂರನಿಂತು ಕನ್ನಡಕ್ಕೆ ಕ್ಲಾಸಿಕ್ ಕೃತಿಗಳನ್ನು ಕೊಡುತ್ತಲೇ ಇರುವರು.
ಸಾಹಿತ್ಯ ಭಂಡಾರದೊಂದಿಗೆ ನಂಟು
ಭೈರಪ್ಪನವರ ಎಲ್ಲ ಕೃತಿಗಳನ್ನು ಪ್ರಕಟಿಸಿದ್ದು ಸಾಹಿತ್ಯ ಭಂಡಾರ ಪ್ರಕಾಶಕರು. ಭೈರಪ್ಪನವರ ಕಾದಂಬರಿಗಳಿಗೆ ಅತಿ ಬೇಡಿಕೆಯಿದ್ದು ಅನೇಕ ಪ್ರಕಾಶಕರು ಅವರ ಕೃತಿಗಳನ್ನು ಪ್ರಕಟಿಸಲು ಮುಂದೆ ಬಂದರೂ ಭೈರಪ್ಪನವರು ಮಾತ್ರ ಸಾಹಿತ್ಯ ಭಂಡಾರದೊಂದಿಗಿನ ತಮ್ಮ ನಿಷ್ಠೆಯನ್ನು ಮುರಿಯಲಿಲ್ಲ. ಅದಕ್ಕೆಂದೇ ಭೈರಪ್ಪನವರಿಗೂ ಮತ್ತು ಸಾಹಿತ್ಯ ಭಂಡಾರದ ಗೋವಿಂದರಾಯರಿಗೂ ನಡುವೆ ಲೇಖಕ ಮತ್ತು ಪ್ರಕಾಶಕನ ಸಂಬಂಧವನ್ನು ಮೀರಿದ ಅನ್ಯೋನ್ಯತೆ ಮನೆ ಮಾಡಿತ್ತು. ಭೈರಪ್ಪನವರು ತಮ್ಮ ಅತ್ಮಕಥೆ ‘ಭಿತ್ತಿ’ಯಲ್ಲಿ ಸಾಹಿತ್ಯ ಭಂಡಾರ ಮತ್ತು ಗೋವಿಂದರಾಯರಿಗೆ ವಿಶೇಷ ಸ್ಥಾನ ನೀಡಿರುವರು. ನಿಜಕ್ಕೂ ಅವರಿಬ್ಬರ ನಡುವಣ ಅನ್ಯೋನ್ಯತೆ ಮತ್ತು ವ್ಯವಹಾರ ನಿಷ್ಠೆ ಇವತ್ತಿನ ಲೇಖಕರು ಹಾಗೂ ಪ್ರಕಾಶಕರಿಗೆ ಅದೊಂದು ಮಾದರಿ.
ಭೈರಪ್ಪನವರಿಗೆ ಗೋವಿಂದರಾಯರ ಪರಿಚಯವಾಗಿದ್ದು ಅವರ ‘ಧರ್ಮಶ್ರೀ’ ಕಾದಂಬರಿಯ ಪ್ರಕಟಣೆಯ ಸಂದರ್ಭ. ಯಾವ ಹೆಸರೂ ಇಲ್ಲದ ಲೇಖಕನನ್ನು ಮನೆ ಹುಡುಕಿಕೊಂಡು ಹೋಗಿ ಅವರ ಕಾದಂಬರಿಯನ್ನು ಪ್ರಕಟಿಸಿದ ಔದಾರ್ಯತೆ ಸಾಹಿತ್ಯ ಭಂಡಾರದ ಗೋವಿಂದರಾಯರದು. ಅವರ ಆ ಔದಾರ್ಯತೆಯೇ ಭೈರಪ್ಪನವರು ತಮ್ಮ ಎಲ್ಲ ಕೃತಿಗಳನ್ನು ಸಾಹಿತ್ಯ ಭಂಡಾರದ ಮೂಲಕವೇ ಪ್ರಕಟವಾಗುವಂತೆ ನೋಡಿಕೊಳ್ಳಲು ಕಾರಣವಾಯಿತು. ನಂತರದ ದಿನಗಳಲ್ಲಿ ಭೈರಪ್ಪನವರ ಜನಪ್ರಿಯತೆ ಹೆಚ್ಚಿ ಅವರ ಕಾದಂಬರಿಗಳ ಬೇಡಿಕೆ ಏರಿ ಅನೇಕ ಪ್ರಕಾಶಕರು ಹೆಚ್ಚಿನ ಸಂಭಾವನೆ ಕೊಡುವ ಪ್ರಲೋಭನೆ ಒಡ್ಡಿದಾಗಲೂ ಅವರು ಗೋವಿಂದರಾಯರೆಡೆಗಿನ ತಮ್ಮ ನಿಷ್ಠೆಯನ್ನು ಬದಲಿಸಲಿಲ್ಲ. ಗೋವಿಂದರಾಯರು ತಮ್ಮ ಮೊದಲ ಕಾದಂಬರಿಯನ್ನು ಪ್ರಕಟಿಸಿದರು ಎನ್ನುವುದರ ಜೊತೆಗೆ ಪುಸ್ತಕ ಪ್ರಕಾಶನದ ಬಗೆಗಿನ ಅವರಲ್ಲಿದ್ದ ಕಾಳಜಿ, ಪ್ರಾಮಾಣಿಕತೆ, ಖರೀದಿಸಿ ಓದುವ ಓದುಗರಿಗೆ ಮೋಸ ಮಾಡಬಾರದೆನ್ನುವ ಮನೋಭಾವ ಈ ಗುಣಗಳೇ ಭೈರಪ್ಪನವರಿಗೆ ಗೋವಿಂದರಾಯರ ಬಗೆಗಿನ ನಿಷ್ಠೆಗೆ ಕಾರಣಗಳಾದವು.
ಈ ನಡುವೆ ಭೈರಪ್ಪನವರು ಸಂಬಳವಿಲ್ಲದೆ ರಜೆ ಹಾಕಿ ‘ಪರ್ವ’ ಬರೆಯಲು ನಿರ್ಧರಿಸುತ್ತಾರೆ. ಸಂಬಳವಿಲ್ಲದೆ ಸಂಸಾರದ ಖರ್ಚು ವೆಚ್ಚಗಳನ್ನು ತೂಗಿಸುವುದಾದರೂ ಹೇಗೆ ಎನ್ನುವ ಸಮಸ್ಯೆ ಎದುರಾದಾಗ ಗೋವಿಂದರಾಯರು ಅವರ ನೆರವಿಗೆ ಬರುತ್ತಾರೆ. ಭೈರಪ್ಪನವರು ರಜೆಯಿಂದ ಕೆಲಸಕ್ಕೆ ಹಿಂದಿರುಗುವವರೆಗೂ ಅವರ ಸಂಸಾರ ನಿರ್ವಹಣೆಗೆ ಅಗತ್ಯದ ಹಣವನ್ನು ಪ್ರತಿತಿಂಗಳೂ ತಪ್ಪದೆ ತಲುಪಿಸುತ್ತಾರೆ. ಲೇಖಕನ ಸೃಜನಶೀಲತೆ ಮುಕ್ಕಾಗದಂತೆ ಕಾಯ್ದುಕೊಳ್ಳುವ ಈ ಪ್ರವೃತ್ತಿ ಇವತ್ತಿನ ಪ್ರಕಾಶಕರಲ್ಲಿ ಇಲ್ಲದಿರುವುದು ಅತ್ಯುತ್ತಮ ಪುಸ್ತಕಗಳ ಕೊರತೆಗೆ ಬಹುಮುಖ್ಯ ಕಾರಣಗಳಲ್ಲೊಂದು.‘ದಾಟು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಗೋವಿಂದರಾಯರು ಸಂಭ್ರಮದಿಂದ ಮನೆಯಲ್ಲಿ ಹಬ್ಬ ಆಚರಿಸುವರು. ಆ ನೆನಪಿಗಾಗಿ ಸಾಹಿತ್ಯ ಪರಿಷತ್ತಿಗೆ ಹಣವನ್ನು ದೇಣಿಗೆಯಾಗಿ ನೀಡುವರು. ಭೈರಪ್ಪನವರೂ ಸಹ ಗೋವಿಂದರಾಯರೊಂದಿಗಿನ ವ್ಯವಹಾರಕ್ಕೆ ಯಾವುದೇ ಧಕ್ಕೆಯಾಗದಂತೆ ನಡೆದುಕೊಳ್ಳುವರು. ಭೈರಪ್ಪನವರು ತಮ್ಮ ಆತ್ಮಕಥೆಯನ್ನು ಬರೆಯಲು ಮುಂದಾಗುವುದು ಕೂಡ ಗೋವಿಂದರಾಯರ ಪ್ರೀತಿಯ ಒತ್ತಾಯದಿಂದಲೇ. ಗೋವಿಂದರಾಯರ ಸಾವಿನ ನಂತರ ಹಿರಿಯ ಜೀವವೊಂದನ್ನು ಕಳೆದುಕೊಂಡ ಅನಾಥಪ್ರಜ್ಞೆ ಕಾಡಲಾರಂಭಿಸುತ್ತದೆ. ಆ ಅನಾಥಪ್ರಜ್ಞೆಯನ್ನು ಭೈರಪ್ಪನವರು ಹೀಗೆ ವಿವರಿಸುತ್ತಾರೆ ‘ಸಾವಿನ ಆ ಕ್ಷಣ ಗೋವಿಂದರಾಯರಿಗೆ ಎಂಬತ್ತೇಳು. ವಯಸ್ಸಿಂದ ಮಾತ್ರವಲ್ಲ ಭಾವನಾತ್ಮಕವಾಗಿಯೂ ಅವರು ನನಗೆ ಹಿರಿಯರಾಗಿದ್ದರು. ಕೆಲವು ಗಟ್ಟಿ ಮೌಲ್ಯಗಳ ಜೀವಂತ ಪ್ರತ್ಯಕ್ಷವಾಗಿದ್ದರು. ನನಗೂ ಸಾವಿಗೂ ನಡುವಣ ಮರೆಯಾಗಿದ್ದರು. ಅವರು ಹೋದ ನಂತರ ಆತ್ಮೀಯ ವರ್ತುಲದಲ್ಲಿ ನನಗೆ ಹಿರಿಯರೆಂದು ನಾನು ಭಾವಿಸಬಹುದಾದ ಬೇರಾವ ವ್ಯಕ್ತಿಯೂ ಇಲ್ಲ. ಆ ನಡುವಣ ಮರೆಯು ಹೊರಟು ಹೋಗಿ ಇನ್ನು ನಾನೇ ಹಿರಿಯ ಎಂಬ ಸರದಿಯ ಭಾವನೆ ತುಂಬಿಕೊಂಡಿತು’.
ಪುಸ್ತಕದ ಅಲ್ಲಲ್ಲಿ ಇನ್ನೂ ಅನೇಕ ಸಂಗತಿಗಳು ಓದಲು ಸಿಗುತ್ತವೆ. ತಂಗಿ ಲಲಿತಳ ಬದುಕನ್ನು ಒಂದು ದಡಕ್ಕೆ ಮುಟ್ಟಿಸಿದ್ದು, ಅಪ್ಪನ ಸಾವು, ಚಿಕ್ಕಪ್ಪನಿಗೆ ನೀಡಿದ ನೆರವು, ವಿದೇಶ ಪ್ರವಾಸ, ಗುಜರಾತಿನಿಂದ ದೆಹಲಿ ಮತ್ತು ದೆಹಲಿಯಿಂದ ಮೈಸೂರಿಗೆ ಬಂದು ನೆಲೆಸಿದ್ದು, ನಿವೃತ್ತಿಯ ದಿನ ಭಾವನೆಗಳನ್ನು ಹಿಡಿದಿಡಲು ಆಗದೆ ಅತ್ತಿದ್ದು ಹೀಗೆ ಅನೇಕ ಸಂಗತಿಗಳ ಸ್ವಾರಸ್ಯಪೂರ್ಣ ಓದು ಪುಸ್ತಕದುದ್ದಕ್ಕೂ ಹೇರಳವಾಗಿ ಲಭಿಸುತ್ತದೆ.
ಕೊನೆಯ ಮಾತು
ವ್ಯಕ್ತಿಯೊಬ್ಬನ ಕುರಿತು ಬರೆಯಲು ಹೊರಟರೆ ಅದು ಸಮಾಜದ ಚರಿತ್ರೆಯಾಗುತ್ತದೆ ಎನ್ನುವ ಮಾತಿದೆ. ಈ ಮಾತಿಗೆ ಪುಷ್ಟಿ ಕೊಡುವಂತೆ ಕನ್ನಡದಲ್ಲಿ ಅನೇಕ ಆತ್ಮಕಥೆಗಳು ಪ್ರಕಟವಾಗಿವೆ. ಆದರೆ ಇನ್ನೊಂದು ವರ್ಗದ ಆತ್ಮಕಥೆಗಳಲ್ಲಿ ಕಥಾನಾಯಕ ನೇಪಥ್ಯಕ್ಕೆ ಸರಿದು ಅಲ್ಲಿ ಸಾಮಾಜಿಕ ಸಮಸ್ಯೆಗಳು ಮುಖ್ಯ ಭೂಮಿಕೆಗೆ ಬರುತ್ತವೆ. ಹಾಗೆಂದ ಮಾತ್ರಕ್ಕೆ ಅಲ್ಲಿನ ಕಥಾನಾಯಕ ಪರ್ಯಾಯ ವ್ಯವಸ್ಥೆಯನ್ನೇನೂ ತೋರಿಸಲಾರ. ಇಂಥ ಪ್ರಕಾರದ ಆತ್ಮಕಥೆಯನ್ನು ಬರೆಯುತ್ತಿರುವ ವ್ಯಕ್ತಿಗೆ ಸಾಮಾಜಿಕ ಸಮಸ್ಯೆಗಳು ಶಾಶ್ವತವಾಗಿದ್ದರೆ ಮಾತ್ರ ಆತನ ಬರವಣಿಗೆಗೆ ಹೇರಳ ಫಸಲು ಲಭ್ಯ. ಇಂಥದ್ದೊಂದು ತಕರಾರು ಅನೇಕ ಓದುಗರದು. ಆದರೆ ಭೈರಪ್ಪನವರ ‘ಭಿತ್ತಿ’ ಯಾವ ಸಾಮಾಜಿಕ ಅಪಸವ್ಯಗಳ ಸುತ್ತ ಸುತ್ತದೆ ಅವರ ವೈಯಕ್ತಿಕ ಬದುಕನ್ನೇ ಕೇಂದ್ರವಾಗಿಟ್ಟುಕೊಂಡು ರಚನೆಯಾದ ಆತ್ಮಕಥನ. ಇಲ್ಲೂ ಕೆಲವೊಂದು ಸಣ್ಣತನಗಳ ಮೇಲೆ ಬೆಳಕು ಚೆಲ್ಲಲಾಗಿದೆಯಾದರೂ ಆ ಎಲ್ಲ ಸಮಸ್ಯೆಗಳು ಭೈರಪ್ಪನವರ ಸಂಪರ್ಕಕ್ಕೆ ಬಂದು ಅನಾವರಣಗೊಳ್ಳುತ್ತವೆ. ಈ ಆತ್ಮಕಥನ ಓದಿದ ನಂತರ ಭೈರಪ್ಪನವರ ಬದುಕು ಮತ್ತು ಬರಹ ಆದರ್ಶಪ್ರಾಯವಾಗಿ ನಿಲ್ಲುತ್ತದೆ. ಕಿರಿಯರು ತಮ್ಮ ಹಿರಿಯರಿಂದ ನಿರೀಕ್ಷಿಸುವುದು ಕೂಡ ಇದನ್ನೇ.
ಚಿತ್ರಕೃಪೆ : http://www.a4dable.in
ಭೈರಪ್ಪನವರ ಆತ್ಮಕಥೆ ಭಿತ್ತಿ ಓದುವದಕ್ಕಿಂತಲೂ ಮೊದಲು ನನ್ನ ತಂದೆಯ ಬೇಜವಾಬ್ದಾರಿ ಸಂಸಾರದಲ್ಲಿ ಇದ್ದೂ ಇಲ್ಲದಂತೆ ವರ್ತಿಸಿದ ಅವರ ಬಗ್ಗೆ ನನಗೆ ಕೋಪವಿತ್ತು. ಭಿತ್ತಿ ಓದಿದ ನಂತರ ನನಗೆ ಲಿಂಗಣ್ಣಯ್ಯನಿಗಿಂತ ನಮ್ಮಪ್ಪ ವಾಸಿ ಅನ್ನಿಸಿ ಕೋಪ ಹೋಗಿದೆ. ಉತ್ತಮ ಕೃತಿ ಪರಿಚಯಿಸಿದ್ದಕ್ಕೆ ಕುಲಕರ್ಣಿ ಅವರಿಗೆ ಅನಂತಾನಂತ ಕೃತಜ್ಞತೆಗಳು.
ನನ್ನದೂ ನಿಮ್ಮ ಕಥೆಯೇ.
ತಂದೆ ಬಗ್ಗೆ ಗೌರವ ಬೆಳೆಸಿಕೊಳ್ಳಿ. ಅದು ಭಾರತೀಯ ಸಂಸ್ಕೃತಿ.
ಭಾರತೀಯವಾದ ಯಾವುದೇ ವಿಷಯದ ಬಗ್ಗೆ ತಮಗೆ ಅಂಥ ಗೌರವವೇನೂ ಇದ್ದ ಹಾಗೆ ಕಾಣುವುದಿಲ್ಲ – ಶಿವಾಯ್ ಬಸವ ತತ್ವ (ತಮ್ಮ ಹಲವಾರು ‘ಅಮೋಘ’ ಪ್ರತಿಕ್ರಿಯೆಗಳನ್ನು ಓದಿದ ನಂತರ ನನ್ನ ಗ್ರಹಿಕೆ ಇದು). ಮತ್ತೇಕೆ ಇನ್ನೊಬ್ಬರಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಉಪದೇಶ ಕೊಡುತ್ತೀರಿ?
excellent…bhittiyanna 3 saari odiddene…
ಭೈರಪ್ಪ ನವರ ಕಾದಂಬರಿಗಳು ನೀವು ಹೇಳಿದಂತೆ ಓದಿದ ಒಂದು ವಾರದವರೆಗೂ ತಲೆಯಲ್ಲಿ ಚಕ್ರ ಸುತ್ತಿಸುತ್ತದೆ. ವಿಮರ್ಷಿಸುವವರಿಗೆ ವಿನಂತಿ “ಭಾರತದ ಸಂಸ್ಕೃತಿಯ ವಿಷಯಗಳನ್ನು ವಿಮರ್ಶಿಸುವಾಗ ಪಶ್ಚಿಮದ ಕನ್ನಡಕದಿಂದಿ ಸಾಹಿತ್ಯ, ಸಂಸ್ಕೃತಿ ನೋಡದಿರಲಿ”. ಬೈರಪ್ಪನವರ ಕಾದಂಬರಿಯನ್ನು (ಕಥೆ ಮತ್ತು ಕಥಾವಸ್ತು, ಸತ್ಯ ಮತ್ತು ಸೌಂದರ್ಯ) ಓದಿ ನಂತರ ವಿಮರ್ಶಿಸಲು. ಅವರದ್ದು ಗುಬ್ಬಿಕಾಗೆ ಗುಬ್ಬಿಯ ಕಥೆಯಲ್ಲ, ಅದು ಜೀವನ ದರ್ಶನ, ಸತ್ಯ ಶೋಧನೆ. ಎಲ್ಲವೂ ವಿಭಿನ್ನ, ವಿಶಿಷ್ಟ. ನನ್ನ ಗೆಳೆಯನೊಬ್ಬ ಹೇಳಿದ್ದಾರೆ ” ಬೈರಪ್ಪನಿಂದ ಹೊರಬರಬೇಕಾದರೆ ಕಾರಂತರನ್ನೊದು.” ನಿಜನಾ? ನೀವು ಹೇಳಿ.
ಕಾರಂತರ ಕೃತಿಗಳೂ ಆವುಗಳದ್ದೇ ಆದ ಹುಳುಕುಗಳನ್ನು ಹೊಂದಿವೆ. ಅವರ ಮುಖರ್ಜಿಯ ಕನಸುಗಳು ಮಾತ್ರವೇ ನನಗೆ ಬಹಳ ಹಿಡಿಸಿದ್ದು.. ಉಳಿದವುಗಳು ಪರವಾಗಿಲ್ಲ ಎಂದೆನ್ನಿಸಬಹುದು.
ಅದು ‘ಮೂಕಜ್ಜಿಯ ಕನಸುಗಳು’ ಸ್ವಾಮಿ, ಮುಖರ್ಜಿಯ ಕನಸುಗಳು ಅಲ್ಲ! ತಾವೇಕೆ ನಾಶೆಶೇ ಅವರಂತೆ ಬರೆಯುತ್ತೀರಿ?!
Autoselection text ನಲ್ಲಿ ನುಸುಳಿದ ತಪ್ಪು.
ನಾನು ಭಿತ್ತಿ ಓದುತ್ತಾ ತುಂಬ ಭಾವುಕಳಾಗಿರುವೆ…ಈ ಪರಿಯ ಬಡತನ,ತಂದೆಯ ನಿರ್ಲಜ್ಜತನ,ನೆರೆಹೊರೆಯವರ ವರ್ತನೆ,ಮಾವನ ದುಷ್ಟತನ…ನನ್ನ ಭಾವಕ್ಕೆ ನಿಲುಕುತ್ತಿಲ್ಲ..ಈ ಪರಿಯ ಕ್ರೌರ್ಯ ಸಾಧ್ಯವೇ?ನನ್ನ ಕಣ್ಣಾಲಿಗಳು ತುಂಬೆ ಇವೆ……..