ವಿಷಯದ ವಿವರಗಳಿಗೆ ದಾಟಿರಿ

ಮೇ 16, 2015

3

ಪ್ರತಿಭಾಪಲಾಯನ

‍ನಿಲುಮೆ ಮೂಲಕ

– ಮಯೂರ ಲಕ್ಷ್ಮಿ

ಪ್ರತಿಭಾಪಲಾಯನಅದೊಂದು ಕಾಲದಲ್ಲಿ ನಳಂದಾ, ತಕ್ಷಶಿಲಾ ಮುಂತಾದ ವಿಶ್ವವಿಖ್ಯಾತ ವಿದ್ಯಾಲಯಗಳಿಂದ ಪ್ರಸಿದ್ಧಿಹೊಂದಿ ಎಲ್ಲೆಡೆಯಿಂದ ಎಲ್ಲರನ್ನೂ ಆಕರ್ಷಿಸಿ ಜ್ಞಾನದೇಗುಲವೆನಿಸಿದ್ದ ಭಾರದ ದೇಶವು ತನ್ನ ಹಿಂದಿನ ವೈಭವಗಳನ್ನು ಮರೆತುಹೋಗುವ ಸ್ಥಿತಿ ತಲುಪಿದ್ದಾದರೂ ಏಕೆ? ಯಾವುದೇ ಒಂದು ದೇಶವು ಆರ್ಥಿಕವಾಗಿ ಸಧೃಢವೆನಿಸಿಕೊಳ್ಳಲು ದೇಶದ ಬೆನ್ನೆಲುಬಾದ ಯುವಶಕ್ತಿಯಿಂದ ಮಾತ್ರ! ಜಗತ್ತಿಗೆ ಅರಿವು ನೀಡುವ ಜ್ಞಾನದೇಗುಲವೆನಿಸಿದ್ದ ಭಾರತ ಮೆಕಾಲೆಯ ಆಗಮನದಿಂದ ತನ್ನ ಮೌಲ್ಯಾಧರಿತ ಶಿಕ್ಷಣ ವ್ಯವಸ್ಥೆಯನ್ನೇ ಕಳೆದುಕೊಂಡಿತು.

ಭಾರತವು ವಿಶ್ವಮಾನ್ಯವೆನಿಸಿದ್ದು ತನ್ನ ಜ್ಞಾನ-ವಿಜ್ಞಾನ, ತಂತ್ರಜ್ಞಾನಗಳಿಂದ ಪ್ರಪಂಚಕ್ಕೆ ನೀಡಿದ ಕೊಡುಗೆಯಿಂದ.ಕಾಲಕ್ರಮೇಣ ಜಾಗತೀಕರಣದೊಂದಿಗೆ ಬದಲಾಗತೊಡಗಿದ ಭಾರತವು ಎದುರಿಸಿದ ಆರ್ಥಿಕ ಸಮಸ್ಯೆಗಳಲ್ಲಿ ಅತಿ ಮುಖ್ಯವಾದ ಸಮಸ್ಯೆಯಾಗಿದ್ದು ಪ್ರತಿಭಾ ಪಲಾಯನ. ಅಂದಿನ ಸ್ವಾಮೀ ವಿವೇಕಾನಂದರಿಂದ ಇಂದಿನ ಅಬ್ದುಲ್ ಕಲಾಂರವರು ನಂಬಿರುವುದು ಸಧೃಢ ಭಾರತದ ನಿರ್ಮಾಣದ ಕನಸು ಸಾಕಾರಗೊಳ್ಳಬೇಕಾಗಿರುವುದು ಈ ದೇ±್ನುದ ಯುವಶಕ್ತಿಯಿಂದ ಎನ್ನುವ ಭರವಸೆ! ಅದರೆ ಭಾರತವನ್ನು ಇನ್ನೈದು ವರ್ಷಗಳಲ್ಲಿ ಮುಂದವರಿದ ದೇಶವನ್ನಾಗಿಸುವ ಹೊಣೆ ಹೊತ್ತಿರುವ ನಮ್ಮ ಯುವಶಕ್ತಿ ವಿದೇಶಗಳಲ್ಲಿ ಪೋಲಾಗುತ್ತುರುವುದು ದುಃಖದ ವಿಚಾರ.

ಕಳೆದ ಇಪ್ಪತ್ತು ವರ್ಷಗಳಿಂದೀಚೆಗೆ ಉನ್ನತ ಶಿಕ್ಷಣ ಮತ್ತು ವೃತ್ತಿಗಳನ್ನರಸಿ ಅಮೇರಿಕಾ, ಇಂಗ್ಲೆಂಡ್, ಫ್ರಾನ್ಸ್ ಮುಂತಾದ ದೇಶಗಳಿಗೆ ವಲಸೆ ಹೋಗಿ ಹಿಂದಿರುಗಿ ಬಾರದಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಭಾರತದ ಅಭಿವೃದ್ಧಿಯ ನಿಟ್ಟಿನಲ್ಲಿ ಮಾರಕವೇ.ಈ ಪ್ರತಿಭಾ ಪಲಾಯನವು ಮುಂದುವರಿದ ರಾಷ್ಟ್ರಗಳಿಗೆ ವರವಾದರೆ ಭಾರತದ ಮಟ್ಟಿಗೆ ಶಾಪವೇ ಸರಿ! ಭಾರತದಲ್ಲಿ ನಮ್ಮ ವ್ಯಕ್ತಿ ಸಂಪನ್ಮೂಲ ನಮ್ಮ ಆಧಾರಸ್ತಂಭ, ನಮ್ಮ ವ್ಯಕ್ತಿ-ಶಕ್ತಿಯನ್ನು ಕಳೆದುಕೊಳ್ಳುವುದು ಮುಂದಿನ ಅಭಿವೃದ್ಧಿಯ ದೃಷ್ಟಿಯಲ್ಲಿ ಆತಂಕದ ವಿಚಾರ.ನಮ್ಮ ಭಾರತೀಯ ಮನಸ್ಥಿತಿಯೂ ವಿಚಿತ್ರ, ಸಣ್ಣ ಪುಟ್ಟದ್ದಕ್ಕೂ ದೇಶಭಕ್ತಿಯನ್ನು ಮೆರೆಯುವುದೇ ನಮ್ಮ ಸಹಜ ಗುಣ. ನಮ್ಮ ದೇಶದ ಮೂಲ ವ್ಯಕ್ತಿಗಳು ಮತ್ತೆಲ್ಲೋ ಮಿಂಚಿ ಸುದ್ದಿಯಾದ ವಿಚಾರಗಳನ್ನೇ ಮತ್ತೆ ಮತ್ತೆ ಮೆಲುಕು ಹಾಕಿ ಸುದ್ದಿಯಾಗಿಸುತ್ತೇವೆ.

ಅಮೇರಿಕಾದಲ್ಲಿರುವ 70%ರಷ್ಟು ನಮ್ಮ ವೈದ್ಯರು, 40% ನ್ಯಾಸಾದ ವಿಜ್ಞಾನಿಗಳು ನಮ್ಮವರು, ಅನೇಕ ಸಾಧಕರು ನಮ್ಮವರೆಂದು ನಾವೇನೋ ಹೆಮ್ಮೆ ಪಡುತ್ತೇವೆ. ಆದರೆ ಇವರಲ್ಲರನ್ನೂ ಕಳೆದುಕೊಂಡ ನಮ್ಮ ದೇಶದ ಸ್ಥಿತಿ? ಅಮೇರಿಕಾದ ಸೆನೆಟ್‍ನಲ್ಲಿ ಭಾರತೀಯರಿದ್ದಾರೆಂದರೆ ಸಂತಸಪಡುತ್ತೇವೆ, ನಾದೇಂಡ್ಲ ಸತ್ಯ ಮೈಕ್ರೋಸಾಫ್ಟ್ ಸಿ.ಈ.ಓ. ಆದರೆ ಸಂಭ್ರಮಿಸುತ್ತೇವೆ, ಭಾರತೀಯ ಮೂಲದ ಸುನೀತಾ ವಿಲಿಯಂಸ್ ಆಗಸ ತಲುಪಿ ದಾಖಲೆ ನಿರ್ಮಿಸಿದಾಗ ನಮ್ಮ ಮನೆಯ ಮಗಳೇ ಸಾಧನೆ ಮಾಡಿದಳೆಂದು ಹರ್ಷಿಸುತ್ತೇವೆ, ಆದರೆ ಇವರೆಲ್ಲರ ವಿಶ್ವಮಾನ್ಯ ಸಾಧನೆಗಳು ಭಾರತದ ಭೂಮಿಯಲ್ಲೇ ಆಗಿದ್ದರೆ….?

ಈಗಾಗಲೇ ಪ್ರತಿಭಾ ಪಲಾಯನವನ್ನು ತಡೆಯವ ಕುರಿತು ಸಾಕಷ್ಟು ಸಂಶೋಧನೆಗಳೂ ಮತ್ತು ವರದಿಗಳಿದ್ದರೂ ಈ ಪಿಡುಗನ್ನು ಹತ್ತಿಕ್ಕಲಾಗದ ಪರಿಸ್ಥಿತಿ ನಮ್ಮದು.2015ರಲ್ಲಿ ಇನ್ಸ್ಟಿಯೂಟ್ ಆಫ್ ಮ್ಯಾನೇಜ್‍ಮೆಂಟ್ (ಐಐಎಂ-ಬಿ) ನಡೆಸಿದ ಸಮೀಕ್ಷೆಯಿಂದ ದೊರೆತ ಮಾಹಿತಿಯ ಪ್ರಕಾರ ಉನ್ನತ ವಿದ್ಯಾಭ್ಯಾಸಕೆಂದು ವಿದೇಶಕ್ಕೆ ವಲಸೆ ಹೋಗುತ್ತಿರುವವರ ಸಂಖ್ಯೆ ಹತ್ತು ವರ್ಷಗಳಲ್ಲಿ ಶೇಕಡಾ 256ರಷ್ಟು ಹೆಚ್ಚಿದ್ದು, 2000ರದಲ್ಲಿ ಸುಮಾರು 53,000ರಷ್ಟಿದ್ದು 2010ರಲ್ಲಿ 1.9ಲಕ್ಷಕ್ಕೆ ಹೆಚ್ಚಿರುವುದು ವಿಪರ್ಯಾಸವೇ ಸರಿ! ಭಾರತೀಯರ ಮಟ್ಟಿಗೆ ವ್ಯಾಸಂಗ ಮತ್ತು ಉದ್ಯೋಗಕ್ಕಾಗಿ ವಲಸೆ ಹೋಗಲು ಮೊದಲ ಆದ್ಯತೆ ಅಮೇರಿಕಾವಾದರೆ ನಂತರದ ಸ್ಥಾನ ಯು.ಕೆ., ಆಸ್ಟ್ರೇಲಿಯಾ, ಜರ್ಮನಿ ಮತ್ತು ಫ್ರಾನ್ಸ್. ಈ ಸಮೀಕ್ಷೆಯು ನಿಜವಾಗಿ ಭಾರತದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ನಷ್ಟವಾಗಿರುವ ಯುವಶಕ್ತಿಯನ್ನು ಕುರಿತು ಆತಂಕಕಾರಿ!

2009ರಲ್ಲಿ ಯುನೆಸ್ಕೋ ಗ್ಲೋಬಲ್ ಎಜುಕೇಶನ್ ಡೈಜಸ್ಟ್‍ನ ವರದಿಯಂತೆ ಪ್ರತಿ ವರ್ಷ ವಿದೇಶಕ್ಕೆ ವಲಸೆ ಹೋಗುವ ದೇಶಗಳಲ್ಲಿ ಚೀನಾದಿಂದ 421,000 ಜನರಿದ್ದು ಅತಿ ಹೆಚ್ಚಿನದ್ದಾಗಿದೆ. ಭಾರತದ ಸಂಖ್ಯೆ 153,000ರಷ್ಟು, ನಂತರದ ಸ್ಥಾನ ಕ್ರಮವಾಗಿ ರಿಪಬ್ಲಿಕ್ ಆಫ್ ಕೊರಿಯ 105,000 ಮತ್ತು ಜಪಾನ್ 54,500ರಷ್ಟು. ಇದರಲ್ಲಿ ಗಮನಿಸಬೇಕಾದ ವಿಚಾರ ಏಷಿಯಾದಿಂದಲೇ ವಿದೇಶಗಳಿಗಾಗುತ್ತಿರುವ ಪ್ರತಿಭಾ ಪಲಾಯನ ಅತಿ ಹೆಚ್ಚು!

ಈ ಎಲ್ಲಾ ಮಾಹಿತಿಯೊಂದಿಗೆ ಇದರಿಂದ ದೇಶದ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳನ್ನು ಕುರಿತು ಆಲೋಚಿಸಿ ಕಾರಣಗಳನ್ನೂ ಹುಡುಕಿ ಪರಿಹಾರಗಳನ್ನು ಕಂಡುಕೊಳ್ಳುವುದು ಇಂದಿನ ಅಗತ್ಯ.ಭಾರತದಲ್ಲಿ ಉನ್ನತ ವಿದ್ಯಾಭ್ಯಾಸ ಅಥವಾ ಸಂಶೋಧನೆಗಳಿಗೆ ಸಿಗುವ ಆರ್ಥಿಕ ನೆರವು ಅಥವಾ ಅವಕಾಶ ಕಡಿಮೆಯೆನ್ನುವುದು ಮೇಲ್ನೋಟಕ್ಕೆ ಕಂಡು ಬಂದರೂ ಕಾರಣಗಳು ಹಲವಾರೆನ್ನುವುದು ಸತ್ಯ! ಅತಿ ಮುಖ್ಯವಾದ ಕಾರಣ ನಮ್ಮ ದೇಶದ ಸಧ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರತಿಭಾನ್ವಿತರಿಗೆ ಸಿಗದ ಸೂಕ್ತ ಅವಕಾಶಗಳು, ಅನೇಕರ ಅಭಿಪ್ರಾಯದಲ್ಲಿ ಎಷ್ಟೇ ಕಷ್ಟ ಪಟ್ಟು ಅಂಕಗಳನ್ನು ಪಡೆದರೂ ಮೀಸಲಾತಿಯಿಂದಾಗಿ ದೊರಯದ ಸರ್ಕಾರೀ ಉದ್ಯೋಗಗಳಿಂದಾ ವಂಚಿತರಾಗುವವರು ಅನಿವಾರ್ಯವಾಗಿ ಖಾಸಗಿ ಕಂಪನಿಗಳಲ್ಲಿ ಕೆಲಸ ಪಡೆದು ನಂತರ ಅಲ್ಲಿಂದಲೇ ವಿದೇಶಗಳಿಗೆ ಇನ್ನೂ ಹೆಚ್ಚಿನ ಸಾಧನೆಗಳಿಗೆ ಹೋಗುವರೆನ್ನುವ ಮಾತು ನಿಜವೇ! ವಿದೇಶೀ  ಶಿಕ್ಷಣದ ವೆಚ್ಚ ಭಾರತಕ್ಕೆ ಹೋಲಿಸಿದರೆ ಅತಿ ದುಬಾರಿಯಾದರೂ ನಮ್ಮ ವಿದ್ಯಾರ್ಥಿಗಳು ಆಕರ್ಷಿತರಾಗುತ್ತಿರುವುದು ಭವಿಷ್ಯದ ತಮ್ಮ ಉದ್ಯೋಗದ ಮತ್ತು ಆರ್ಥಿಕ ಭದ್ರತೆಯ ದೃಷ್ಟಿಯಿಂದ. ಇದಲ್ಲದೇ ತಾವು ವಲಸೆ ಹೋದ ದೇಶಗಳಲ್ಲೇ ನೆಲೆಸುವ ನಿರ್ಧಾರ ತಳೆಯುವುದಕ್ಕೂ ಕಾರಣಗಳಿವೆ. ಆಕರ್ಷಕ ಸಂಬಳದ ನಿರೀಕ್ಷೆಯೊಂದಿಗೆ ಸಿಗುವ ಉನ್ನತ ಜೀವನಶೈಲಿಯ ಹಂಬಲಗಳಿಂದಾಗಿ ಭಾರತಕ್ಕೆ ಹಿಂದಿರುಗುವ ಆಲೋಚನೆಯನ್ನೇ ಮರೆತುಬಿಡುವ ಹಂತ ತಲುಪುವುದು ಇದೇ ಕಾರಣಕ್ಕಾಗಿಯೇ!

ವಿಪರ್ಯಾಸವೆಂದರೆ ನಮ್ಮ ದೇಶದ ಐ.ಐ.ಎಂ. ಮತ್ತು ಐ.ಐ.ಟಿಗಳು ವಿದೇಶೀ ಸಂಸ್ಥೆಗಳನ್ನು ಆಕರ್ಷಿಸುವ ಪ್ರಮುಖ ಕೇಂದ್ರಗಳಾಗುತ್ತಿವೆಯೇ ಹೊರತು ಮುಂದಿನ ಹೊಸದೊಂದು ಪೀಳಿಗೆಯನ್ನಾಧರಿಸಿದ ಅಭಿವೃದ್ಧಿ ಹೊಂದಿದ ದೇಶದ ಕಲ್ಪನೆಯ ಜ್ಞಾನದೇಗುಲಗಳಂತಿಲ್ಲಾ! ವ್ಯವಸ್ಥಿತ ವಿದೇಶೀ ಸಂಚಿಗೆ ನಮ್ಮ ಸ್ಥಳೀಯ ಪ್ರತಿಭೆಗಳು ಬಲಿಯಾಗುತ್ತಿದ್ದಾರೆ ಎನ್ನುವ ಭಾವನೆ ಮೂಡುವುದು ಸಹಜ.

ಇನ್ನೂ ವಿಪರ್ಯಾಸವೆಂದರೆ ಭಾರತದಲ್ಲಿ ಮನೆಯಲ್ಲೇ ಕುಳಿತು ದೂರಶಿಕ್ಷಣಗಳಿಂದ ಪದವಿಗಳನ್ನು ಪಡೆಯಲು ನಮ್ಮ ಮುಕ್ತ ವಿಶ್ವವಿದ್ಯಾಲಯಗಳು ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಹೆಣಗುತ್ತಿವೆ. ಆದಾಗ್ಯೂ ನಮ್ಮ ಇಂದಿನ ಯುವಜನತೆಯ ವಿದೇಶೀ ಆಕರ್ಷಣೆಯ ಕಾರಣಗಳೇನು? ಬದಲಾದ ನಮ್ಮ ಯುವಶಕ್ತಿಯ ಮನಸ್ಥಿತಿಯೇ?

ಆಶ್ಚರ್ಯವೆಂದರೆ ನಮ್ಮ ಭಾರತೀಯ ತತ್ವಗಳನ್ನು ಸನಾತನ ವಿಚಾರಗಳನ್ನು ಇಂದಿಗೂ ಭಾರತಕ್ಕೆ ಬಂದು ಅಧ್ಯಯನ ನಡೆಸುತ್ತಿರುವ ವಿಶ್ವದ ಅನೇಕರು ಇಲ್ಲಿನ ಹಿಂದೂ-ಬನಾರಸ್ ವಿಶ್ವವಿದ್ಯಾಲಯಗಳನ್ನರಸಿ ಬರುತ್ತಿದ್ದಾರೆ. ಆದರೆ ಇದ್ಯಾವುದೂ ನಮ್ಮವರಿಗೆ ಅಧ್ಯಯನದ ವಿಷಯಗಳಾಗಿಲ್ಲಾ. ಇಂದಿನ ಯುವಜನತೆ ಕೇವಲ ಓದಿ ಅಂಕಗಳಿಸಿ ಉದ್ಯೋಗಗಳನ್ನರಸುವ ಒತ್ತಡದ ಜೀವನಕ್ಕೆ ಬಲಿಯಾಗುತ್ತಿದ್ದಾರೆ. ಕೆಲವೊಮ್ಮೆ ಕಷ್ಟಪಟ್ಟು ಅಂಕ ಗಳಿಸಿ ಪದವಿ ಪಡೆದರೂ ಉದ್ಯೋಗ ಪಡೆಯಲಾಗದವರ ಹತಾಶೆಯೂ ಇದಕ್ಕೆ ಕಾರಣವೇ?
ಭಾರತದಿಂದ ವಿದೇಶಗಳಿಗೆ ಹೋಗುವ ಇಂದಿನ ಇಂಜಿನೀಯರುಗಳಿಗೆ ಅಲ್ಲಿ ಸಿಗುವ ಮನ್ನಣೆ ಮತ್ತು ಸೌಲಭ್ಯಗಳು ಹೆಚ್ಚು ಆಕರ್ಷಕ. ನಮ್ಮ ಸಾಫ್ಟ್ವೇರ್ ಇಂಜಿನೀಯರುಗಳು ಅಪೇಕ್ಷೆ ಪಡುವುದು ಇಲ್ಲಿನ ಖಾಸಗೀ ಕಂಪನಿಗಳ ಸೌಲಭ್ಯ ಅಥವಾ ವೇತನಗಳಲ್ಲಾ, ಬದಲಿಗೆ ತಮ್ಮವರೆಂದು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಅಮೇರಿಕಾದ ‘ಗ್ರೀನ್ ಕಾರ್ಡ್’ ಅಥವಾ ಯೂರೋಪಿನ ‘ಬ್ಲೂ ಕಾರ್ಡು’ಗಳು! ಕಳೆದ ಹಲವಾರು ವರ್ಷಗಳಿಂದ ಭಾರತವು ವಿದೇಶಗಳಿಗೆ ತನ್ನ ಅತ್ಯುನ್ನತ ಇಂಜನೀಯರುಗಳನ್ನೂ ವಿಜ್ಞಾನಿಗಳನ್ನೂ ಮತ್ತು ವೈದ್ಯರನ್ನು ಕಳುಹಿಸಿಕೊಡುವ ರಫ್ತು ಕ್ಷೇತ್ರವಾಗುತ್ತಿದೆಯಷ್ಟೇ, ಇದಲ್ಲದೆ ಅಲ್ಲಿನ ವಲಸಿಗರಲ್ಲಿ ವಿಭಿನ್ನ ರೀತಿಗಳಿದ್ದು ತಮ್ಮ ಕಂಪನಿಗಳಿಂದಾ ‘ಸೀಸನಲ್’ ಅಂದರೆ ತಾತ್ಕಾಲಿಕವಾಗಿ ಹೋಗುವ ವಲಸಿಗರೂ ಇದ್ದಾರೆ. ನಂತರದ ಹಂತಗಳಲ್ಲಿ ಇವರೇ ಅಲ್ಲಿನ ಶಾಶ್ವತ ಪ್ರಜೆಗಳಾಗಬಹುದು. ಇನ್ನು ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಸರಿಸುಮಾರು 3,000ರದಷ್ಟು ವಿದೇಶಕ್ಕೆ ಹೋಗಿ ಭಾರತಕ್ಕೆ ಹಿಂದಿರುಗುವ ಸೂಚನೆ ತೋರಲಿಲ್ಲ.

ಸಂಪೂರ್ಣ ಸಾಕ್ಷರತೆ, ಎಲ್ಲರಿಗೂ ಶಿಕ್ಷಣ ನಮ್ಮ ಕನಸು….ತನ್ನ ಪ್ರತಿಭಾ ಪಲಾಯನವನ್ನು ತಡೆಯುವ ನಿಟ್ಟಿನಲ್ಲಿ ಭಾರತವು ಎಡಬಿಡದ ಪ್ರಯತ್ನವನ್ನೇನೋ ನಡೆಸಿದೆ. ಹೊಸ ಉದ್ಯೋಗಾವಕಾಶಗಳೊಂದಿಗೆ ನಮ್ಮ ಪ್ರತಿಭಾನ್ವಿತರಿಗೆ ಸೂಕ್ತ ವಿದ್ಯಾರ್ಥಿಗಳಿಗೆ ನಮ್ಮ ವ್ಯವಸ್ಥೆಯ ಬದಲಾವಣೆಗಳೊಂದಿಗೆ ಅವಕಾಶ ಕಲ್ಪಿಸಿಕೊಡುವುದು ಸೂಕ್ತ. ಇದರೊಂದಿಗೆ ಮುಂಬರುವ ದಿನಗಳಲ್ಲಿ ನಮ್ಮ ಪ್ರತಿಭೆಗಳನ್ನು ಸಂರಕ್ಷಿಸುವುದರೊಂದಿಗೆ ಪೋಷಿಸುವುದೂ ಅವಶ್ಯಕ. ಮುಂದಿನ ದಿನಗಳಲ್ಲಿ ಯು.ಎಸ್.ಗೆ ತೆರಳುವ ನಮ್ಮ ವೈದ್ಯಕೀಯ ವಿದ್ಯಾರ್ಥಿಗಳು ಅಲ್ಲಿನ ಸರ್ಕಾರದೊಂದಿಗೆ ತಮ್ಮ ವ್ಯಾಸಂಗದ ಅವಧಿಯ ನಂತರ ಭಾರತಕ್ಕೆ ಹಿಂದಿರುಗುವ ಒಪ್ಪಂದದ ಕುರಿತ ನಿಬಂಧನೆಯನ್ನು ಸರ್ಕಾರ ಆಲೋಚಿಸುತ್ತಿರುವುದು ಸ್ವಾಗತಾರ್ಹ! ಇದರಿಂದ ನಮ್ಮವರನ್ನು ಉಳಿಸುವ ಭರವಸೆಯನ್ನಾದರೂ ಕಾಣಬಹುದು. ಹತ್ತು ಹಲವಾರು ವರ್ಷಗಳಿಂದಾ ತಮ್ಮ ಕನಸುಗಳನ್ನು ನನಸಾಗಿಸುವ ಭರದಲ್ಲಿ ವಿದೇಶದಲ್ಲಿ ನೆಲೆಸಲು ಮುಂದಾಗುವ ನಮ್ಮವರು ಇಲ್ಲಿ ಅವಕಾಶ ವಂಚಿತರಾಗಿರಬಹುದು. ಇದು ಬದಲಾಗಬೇಕು. ಬದಲಾಗುತ್ತಿರುವ ಮನಸ್ಥಿತಿ, ಅಲ್ಪತೃಪ್ತಿಯಿಲ್ಲದ ಜೀವನಶೈಲಿ, ಮೌಲ್ಯಾಧರಿತ ಶಿಕ್ಷಣದ ಕೊರತೆಯೂ ಬಲವಾದ ಕಾರಣ. ಆದರೆ ಇದಕ್ಕೆ ನಮ್ಮ ಇಂದಿನ ವ್ಯವಸ್ಥೆ, ಜಾಗತೀಕರಣವೂ ಕಾರಣವಲ್ಲವೇ? ಇಷ್ಟಕಕ್ಕೂ ಉನ್ನತ ವಿದ್ಯಾಭ್ಯಾಸ ಎನ್ನುವುದು ಕೇವಲ ಆಧುನಿಕ ಜೀವನವನ್ನುಸರಿಸಿ ನಗರಗಳಲ್ಲಿ ಬದುಕುತ್ತಿರುವರ ಗುರಿಯೇ? ನಮ್ಮ ಹಳ್ಳಿಗಳಿಂದ ನಗರಗಳಿಗೆ ವಲಸೆ ಬರುತ್ತಿರುವ ಗ್ರಾಮೀಣ ಪ್ರತಿಭೆಗಳೂ ಇದಕ್ಕೆ ಹೊರತಾಗಿಲ್ಲ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಕನಸುಗಳನ್ನು ನನಸಾಗಿಸುವ ಭರದಲ್ಲಿ ತಮ್ಮ ಮಕ್ಕಳು ಡಾಕ್ಟರ್, ಇಂಜಿನೀಯರುಗಳನ್ನಾಗಿಸುವ ಇಚ್ಛಾಶಕ್ತಿಯನ್ನು ತುಂಬುವುದರೊಂದಿಗೆ ನಮ್ಮ ಪೋಷಕರು ಈ ದೇಶದ ಮಣ್ಣಿನಗುಣದ ಕುರಿತು ಅಲ್ಪ ದೇಶಭಕ್ತಿಯನ್ನೂ ತುಂಬಿದಲ್ಲಿ, ರಾಷ್ಟ್ರೀಯ ರ್ವಿಚಾರಗಳನ್ನು ಅರ್ಥ ಮಾಡಿಸಿದಲ್ಲಿ, ನಮ್ಮ ದೇಶದಲ್ಲಿ ಅರ್ಹತೆಗೆ ಸೂಕ್ತ ಅವಕಾಶದ ಮಾರ್ಪಾಟುಗಳಾದಲ್ಲಿ, ನೂರಾರು ಸಾವಿರಾರು ಸುನೀತಾ ವಿಲಿಯಂಗಳನ್ನೂ, ನಾದೇಂಡ್ಲ ಸತ್ಯರನ್ನೂ, ಸಾವಿರದಷ್ಟು ವೈದ್ಯರನ್ನೂ ವಿಜ್ಞಾನಿಗಳನ್ನೂ ನಮ್ಮ ದೇಶದಲ್ಲಿ ನೆಲೆಸಿ ಸಾಧನೆಗೈಯುವುದನ್ನೂ ನಾವು ಭವಿಷ್ಯದಲ್ಲಿ ಕಾಣಬಹುದು.

ಚಿತ್ರಕೃಪೆ : kannada.webdunia.com

Read more from ಲೇಖನಗಳು
3 ಟಿಪ್ಪಣಿಗಳು Post a comment
  1. WITIAN
    ಮೇ 22 2015

    ಮಯೂರ ಲಕ್ಷ್ಮಿ ಅವರ ‘ಪ್ರತಿಭಾ ಪಲಾಯನ’ ಕುರಿತ ಲೇಖನ ಉತ್ತಮ ಪ್ರಯತ್ನ. ಆದರೆ ಭಾವನಾತ್ಮಕ ವಿಷಯವನ್ನು ಬದಿಗಿಟ್ಟು ನೋಡಿದರೆ ಪ್ರತಿಭಾ ಪಲಾಯನದಿಂದ ಒಂದು ದೇಶಕ್ಕೆ ಪ್ರಯೋಜನ ಕೂಡಾ ಇದೆ. ಒಂದೆರಡು ವಾಕ್ಯಗಳಲ್ಲಿ ಇದನ್ನು ಹೇಳಲು ಬರುವುದಿಲ್ಲ.

    ಅಮೆರಿಕ ಸಂಯುಕ್ತ ಸಂಸ್ಥಾನಗಳು, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್ ಗಳು ವಲಸೆಹೋಗುವವರ ಮುಖ್ಯ ಗಮ್ಯದೇಶಗಳಾಗಿವೆ. ಏಕೆಂದರೆ ಈ ದೇಶಗಳು ‘Old world’ ನ ದೇಶಗಳಿಂದ ಪ್ರತಿಭಾನ್ವಿತರನ್ನು ತಮ್ಮ ದೇಶಗಳಿಗೆ ಆಹ್ವಾನಿಸುತ್ತಾರೆ. ಹಲವು ಕಾರಣಗಳಿಂದ ಈ ದೇಶಗಳಿಗೆ ಓದಲು, ವೃತ್ತಿಮಾಡಲು ಬಂದ ಕುಶಲಿಗಳನ್ನು ತಮ್ಮಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಈ ಪ್ರತಿಭಾನ್ವಿತರಲ್ಲಿ ಅದೆಷ್ಟು ಜನ ತಮ್ಮ ದೇಶಗಳಲ್ಲಿ, ನಮ್ಮ ಸನ್ನಿವೇಶಕ್ಕೆ ತೆಗೆದುಕೊಳ್ಳುವುದಾದರೆ ಭಾರತದಲ್ಲಿ ಅವಕಾಶಗಳ ಕೊರತೆ ಇರುವುದನ್ನು ವಿಶ್ವಾಸದಿಂದ ಅಲ್ಲಗಳೆಯಬಲ್ಲರು?

    ಎರಡನೆಯದಾಗಿ, ಅರುವತ್ತು-ಎಪ್ಪತ್ತು-ಎಂಬತ್ತರ ದಶಕಗಳಲ್ಲಿ ಈ ದೇಶಗಳಿಗೆ ವಲಸೆ ಬಂದ ಭಾರತೀಯರನ್ನು ಗಮನಕ್ಕೆ ತೆಗೆದುಕೊಳ್ಳುವುದಾದರೆ, ಈಗ ಅವರು ನಿವೃತ್ತಿಯ ವಯಸ್ಸಿನಲ್ಲಿರುವ ಹಿರಿಯರು, ಅವರ ಮಕ್ಕಳು ಇಂದು ಆ ದೇಶಗಳಲ್ಲೇ ಹುಟ್ಟಿ ಬೆಳೆದಿದ್ದಾರೆ, ಮತ್ತು ಬಹುತೇಕ ಜನ ಅಲ್ಲಿಯ ವ್ಯವಸ್ಥೆಯ ಭಾಗವೂ ಆಗಿದ್ದಾರೆ. ಕೇವಲ ರಾಜಕೀಯವಾಗಿ ಪ್ರಮುಖ ಹುದ್ದೆಗಳನ್ನು ಹೊತ್ತವರಬಗ್ಗೆ ನಾನು ಹೇಳುತ್ತಿಲ್ಲ, ಸಾರ್ವಜನಿಕ ಜೀವನದ ಹಲವು ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ವಹಿಸುತ್ತಿದ್ದಾರೆ. ಇದು ನಮ್ಮ ದೇಶಕ್ಕೆ ಅನುಕೂಲಕರ ವಿಷಯವಲ್ಲವೆ? ತನ್ನ ಸಮುದಾಯದ ಜನ ಗುರುತರ ನಿರ್ಧಾರಗಳನ್ನು ತೆಗೆದುಕೊಳ್ಳುವ ಸೂಕ್ಷ್ಮ ಹುದ್ದೆ ಗಳನ್ನು ಹೊಂದಿರುವುದರಿಂದಲೇ ಇಂದು ಇಸ್ರೇಲ್ ತನ್ನ ಹಿತಾಸಕ್ತಿಗಳನ್ನು ಅಷ್ಟು ಚೆನ್ನಾಗಿ ರಕ್ಷಿಸಿಕೊಳ್ಳುತ್ತದೆ.

    ವಿದೇಶಗಳಲ್ಲಿರುವ ಭಾರತೀಯ ಮೂಲದ ಜನರನ್ನು ಹಿಂದಿನ ಸರಕಾರಗಳು ಅನುಮಾನದಿಂದ ನೋಡುತ್ತಿದ್ದವು, ಕಾರಣ ಹಲವು ವರ್ಷಗಳ ಪರಕೀಯ ಆಡಳಿತ ಅಷ್ಟೇ ಅಲ್ಲ, ಆಳುವವರಲ್ಲಿದ್ದ ಕೀಳರಿಮೆ ಕೂಡಾ. ಆದರೆ ಅಟಲ್ ಬಿಹಾರಿ ವಾಜಪೇಯಿಯವರ ಎನ್ಡಿಎ ಸರ್ಕಾರ ಬಂದಾಗ ಅವರನ್ನು ಕೇವಲ ‘ಹಣದ ಥೈಲಿ’ಯಾಗಿ ನೋಡುವ ದೃಷ್ಟಿಕೋಣ ಬದಲಾಯಿತು ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

    ಪ್ರತಿ ವರ್ಷ ನಮ್ಮ ವಿಶ್ವವಿದ್ಯಾಲಯಗಳಿಂದ ತಯಾರಾಗುವ ಪದವೀಧರರಲ್ಲಿ ೧೦% ರಷ್ಟು ಜನ ಬೇರೆ ದೇಶಗಳಿಗೆ ಹೋದರೂ ಮಿಕ್ಕ ೯೦% ರಷ್ಟು ಜನ ನಮ್ಮಲ್ಲೇ ಉಳಿಯುತ್ತಾರಲ್ಲ, ಅವರ ಬಳಕೆ ಸರಿಯಾಗಿ ಆಗಬಹುದಲ್ಲ!

    ಉತ್ತರ
    • Nagshetty Shetkar
      ಮೇ 23 2015

      ಪಲಾಯನ ಮಾಡುವವರು ಎಷ್ಟೇ ಪ್ರತಿಭಾವಂತರಾಗಿದ್ದರೂ ಹೇಡಿಗಳು. ಕೆಚ್ಚೆದೆಯಿಂದ ಎದುರಿಸುವವರು ಪ್ರತಿಭೆ ಕಡಿಮೆ ಇದ್ದರೂ ಸ್ಮರಣೀಯರು. ದುಡ್ಡಿನ ಆಸೆಗೆ ಐಶಾರಾಮದ ಜೀವನದ ಬೆನ್ನೆತ್ತಿ ಪಶ್ಚಿಮಕ್ಕೆ ವಲಸೆ ಹೋಗುವವರ ಬಗ್ಗೆ ತಲೆ ಕೆಡಿಸಿಕೊಳ್ಳಕೂಡದು. ದುಡಿದು ತಿನ್ನುವ ನೆಲದ ವಾಸನೆಯ ಕಾಯಕಯೋಗಿಗಳಿಗೆ ಬೆಲೆ ಕೊಡತಕ್ಕದ್ದು.

      ಉತ್ತರ
  2. ಸೆಪ್ಟೆಂ 15 2018

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments