ಸುಳ್ಸುದ್ದಿ : ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವಿವಾದಕ್ಕೆ ಅನಿರೀಕ್ಷಿತ ತಿರುವು
– ಪ್ರವೀಣ್ ಕುಮಾರ್ ಮಾವಿನಕಾಡು
ಸೂರ್ಯ ನಮಸ್ಕಾರವನ್ನು ಮಾಡಿಯೇ ತೀರುತ್ತೇವೆ:ಅಸಾದುದ್ದೀನ್ ಒವೈಸಿ
ನವದೆಹಲಿ: ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನ ನಿಮಿತ್ತ ಭಾನುವಾರ ರಜೆ ದಿನದಂದು ಕಡ್ಡಾಯವಾಗಿ ಉರ್ದು ಶಾಲೆಗಳು ಸೇರಿದಂತೆ ಎಲ್ಲ ಶಾಲೆಗಳು ತೆರೆದಿದ್ದು, ಅಂದು ಬೆಳಗ್ಗೆ ಶಾಲೆಗಳಲ್ಲಿ ಯೋಗ ಕಾರ್ಯಕ್ರಮ ಆಯೋಜಿಸಲಾಗುವುದು ಎಂಬ ಸರ್ಕಾರದ ಆದೇಶಕ್ಕೆ ಹಲವಾರು ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ವಿಶ್ವಹಿಂದೂ ಪರಿಷತ್,ಅಖಿಲ ಭಾರತೀಯ ಹಿಂದೂ ಮಹಾ ಸಭಾ,ಶ್ರೀರಾಮ ಸೇನೆ ಮೊದಲಾದ ಸಂಘಟನೆಗಳ ಮುಖಂಡರು ಸರಕಾರದ ಈ ಆದೇಶವು ನಮ್ಮ ಧಾರ್ಮಿಕ ನಂಬಿಕೆಗಳನ್ನು ಇತರ ಧರ್ಮದವರು ದುರುಪಯೋಗಪಡಿಸಿಕೊಳ್ಳಲು ವೇದಿಕೆಯನ್ನು ಕಲ್ಪಿಸಿಕೊಟ್ಟಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇತರ ಧರ್ಮದವರು ಏಕೇಶ್ವರವಾದಿಗಳಾಗಿದ್ದು, ಅವರುಗಳು ಕೇವಲ ಆ ದೇವರ ಎದುರು ಮಾತ್ರ ಬಾಗುತ್ತಾರೆ. ಆದ್ದರಿಂದ ನಾವು ದೇವರೆಂದು ಭಾವಿಸುವ ಸೂರ್ಯದೇವರಿಗೆ ಇತರ ಧರ್ಮದವರು ನಮಸ್ಕಾರ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರ ಎದುರು ತಮ್ಮ ಅಸಮಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ರವರು, ಹಿಂದೂಗಳಲ್ಲದವರು ಸೂರ್ಯ ನಮಸ್ಕಾರ ಮಾಡುವುದನ್ನು ನಾವೆಂದಿಗೂ ಸಹಿಸಲು ಸಾಧ್ಯವಿಲ್ಲ ಎಂದರು.
ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಮಣಿದ ಪ್ರಧಾನಿ ನರೇಂದ್ರ ಮೋದಿಯವರು ಕೇವಲ ಹಿಂದೂಗಳು ಮಾತ್ರ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ನರೇಂದ್ರ ಮೋದಿಯವರ ಈ ನಿರ್ಧಾರಕ್ಕೆ ದೇಶದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ.ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಜಮಾತ್-ಎ-ಇಸ್ಲಾಮಿ ಹಿಂದ್ ಸಂಘಟನೆಯ ಶೈಕ್ಷಣಿಕ ಕಾರ್ಯದರ್ಶಿ ಮೊಹಮ್ಮದ್ ಝಹೂರ್ ಅಹ್ಮದ್,ಯೋಗವು ಎಲ್ಲರಿಗೂ ಸೇರಿದ್ದಾಗಿದ್ದು ಇದನ್ನು ಯಾವುದೇ ಒಂದು ಧರ್ಮಕ್ಕೆ ಸೀಮಿತಗೊಳಿಸಲು ನಾವು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.ಇದೇ ವೇಳೆ, ಈ ಪ್ರಧಾನಿಯವರ ಈ ಕ್ರಮದ ಬಗ್ಗೆ ಸಂಸದ ಅಸಾದುದ್ದೀನ್ ಒವೈಸಿ ಮಾತನಾಡಿ ಕೇವಲ ಹಿಂದೂಗಳಿಂದ ಮಾತ್ರ ಸೂರ್ಯನಮಸ್ಕಾರವನ್ನು ಮಾಡಿಸಿ ಅವರನ್ನು ಮಾತ್ರ ಸದೃಢ ರನ್ನಾಗಿ ಮಾಡುವ ಹುನ್ನಾರ ಇದಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿ ನಾವು ಅಂತಾರಾಷ್ಟ್ರೀಯ ಯೋಗ ದಿನದಂದು ಸೂರ್ಯನಮಸ್ಕಾರವನ್ನು ಮಾಡಿಯೇ ತೀರುತ್ತೇವೆ ಎಂದು ಹೇಳಿದ್ದಾರೆ..
ಪ್ರಧಾನಿಯವರ ಈ ನಿರ್ಧಾರಕ್ಕೆ ದೇಶದಾದ್ಯಂತ ಹಲವಾರು ಪ್ರಗತಿಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು,ಇದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದಿದ್ದಾರೆ.ಇನ್ನು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ರವರು ಇತರ ಧರ್ಮದವರೂ ಸಹಾ ಇದೇ ದೇಶದಲ್ಲಿ ಹುಟ್ಟಿದ್ದು ಸೂರ್ಯನಮಸ್ಕಾರ ಅವರ ಹಕ್ಕು,ಆ ಹಕ್ಕನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ.ನರೇಂದ್ರ ಮೋದಿ ಒಬ್ಬ ಕೋಮುವಾದಿ ಎಂದು ಟಿ.ವಿ. ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಇನ್ನು ಕರ್ನಾಟಕದಲ್ಲಿಯೂ ಸಹ ಕೇವಲ ಹಿಂದೂಗಳಿಂದ ಮಾತ್ರ ಸೂರ್ಯನಮಸ್ಕಾರ ಮಾಡಿಸಲಾಗುವುದು ಎನ್ನುವ ನರೇಂದ್ರ ಮೋದಿಯವರ ಹೇಳಿಕೆಯನ್ನು ಖಂಡಿಸಿ ಹಲವಾರು ಪ್ರಗತಿಪರ ಸಂಘಟನೆಗಳು ನಾಳೆ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ನೇತೃತ್ವದಲ್ಲಿ ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಸಾಮೂಹಿಕ ಸೂರ್ಯನಮಸ್ಕಾರ ಮಾಡುವುದರ ಮೂಲಕ ಪ್ರತಿಭಟನೆ ಮಾಡಲು ನಿರ್ಧರಿಸಿವೆ.ಇಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಮುಖಂಡರು ಈ ನಿರ್ಧಾರವನ್ನು ಪ್ರಕಟಿಸಿದರು.ಕರ್ನಾಟಕ ಕೋಮು ಸೌಹಾರ್ದ ವೇದಿಕೆ,PFI,KFD,SDPI,SFI,DYFY ಮುಂತಾದ ಪ್ರಗತಿಪರ ಸಂಘಟನೆಗಳ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ದೇಶದ ಎಲ್ಲ ಮಾಧ್ಯಮಗಳೂ ಮೋದಿಯವರ ಈ ನಿರ್ಧಾರ ಸಂಪೂರ್ಣ ಕೋಮುವಾದ ಪ್ರೇರಿತವಾಗಿದ್ದು,ಯೋಗ ಎಲ್ಲರ ಹಕ್ಕು ಎಂದು ಹೇಳಿವೆ.ಈ ನಡುವೆ ಮೋದಿಯವರ ಈ ನಡೆ ಸಾಮಾಜಿಕ ಜಾಲ ತಾಣಗಳಲ್ಲೂ ಸಹ ತೀವ್ರ ಚರ್ಚೆಗಳನ್ನು ಹುಟ್ಟುಹಾಕಿದೆ.
*ವಿ.ಸೂ:ಈ ಸುದ್ದಿಯು ಕೇವಲ ಕಾಲ್ಪನಿಕವಾಗಿದ್ದು ಮೇಲೆ ಹೆಸರಿಸಿದ ಆಯಾ ಪಕ್ಷ,ವ್ಯಕ್ತಿ,ಸಂಸ್ಥೆ,ಸಂಘಟನೆಗಳ ಇದುವರೆಗಿನ ನಡವಳಿಕೆಗಳನ್ನಾಧರಿಸಿ ಕಲ್ಪಿಸಿಕೊಂಡಿದ್ದಾಗಿರುತ್ತದೆ. ಈ ಸುದ್ದಿಯು ಕೇವಲ ಮನರಂಜನೆಗಾಗಿಯೇ ಹೊರತೂ ಯಾರನ್ನೂ ನೋಯಿಸುವ ಅಥವಾ ಅವಮಾನಿಸುವ ಉದ್ದೇಶದ್ದಲ್ಲ.