ನಾಡು-ನುಡಿ ಮರುಚಿಂತನೆ : ಅಕ್ಷರಕ್ಕೂ,ಶಿಕ್ಷಣಕ್ಕೂ,ವಿದ್ಯೆಗೂ,ಜ್ಞಾನಕ್ಕೂ ಏನು ಸಂಬಂಧ?
– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ
ಸಾಧಾರಣವಾಗಿ ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿಯ ಕುರಿತು ಒಂದು ಆರೋಪವನ್ನು ಪದೇ ಪದೇ ಮಾಡಲಾಗುತ್ತದೆ: ಅದೆಂದರೆ ಬ್ರಾಹ್ಮಣರು ಶೂದ್ರರನ್ನು ಹಾಗೂ ಅಸ್ಪೃಶ್ಯರನ್ನು ಅಕ್ಷರ ಜ್ಞಾನದಿಂದ ವಂಚಿಸಿದ್ದಾರೆ. ಆಕಾರಣದಿಂದಾಗಿ ಅವರಿಗೆ ಜ್ಞಾನವನ್ನೂ, ವಿದ್ಯೆಯನ್ನೂ ನಿರಾಕರಿಸಿದ್ದರು ಅಂತ. ನಮ್ಮ ಜಾತಿ ವ್ಯವಸ್ಥೆಯಲ್ಲಿ ಶೋಷಣೆಯ ಒಂದು ಲಕ್ಷಣ ಎಂಬಂತೆ ಕೆಲವು ಹಿತಾಸಕ್ತಿ ಪೀಡಿತ ಗುಂಪುಗಳು ಈ ಸಂಗತಿಯನ್ನು ತಪ್ಪದೇ ಹೇಳುತ್ತಿರುತ್ತವೆ.
ಹೀಗೆ ಹೇಳುವವರು ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ. ಆಧುನಿಕ ಶಿಕ್ಷಣವು ಅಕ್ಷರಾಭ್ಯಾಸಕ್ಕೂ ಶಿಕ್ಷಣಕ್ಕೂ ಒಂದು ಅವಿನಾಭಾವಿಯಾದ ಸಂಬಂಧ ಕಲ್ಪಿಸುತ್ತದೆ. ಆ ಕಾರಣದಿಂದಲೇ ಸಂಪೂರ್ಣ ಸಾಕ್ಷರತೆಯ ಕಾರ್ಯಕ್ರಮವನ್ನು ನಮ್ಮ ಸರ್ಕಾರವು ಹಮ್ಮಿಕೊಂಡಿದೆ ಹಾಗೂ ವಿಶ್ವಸಂಸ್ಥೆ ಕೂಡಾ ಅಕ್ಷರವನ್ನು ಅಭಿವೃದ್ಧಿಯ ಮಾನದಂಡವನ್ನಾಗಿ ಸ್ವೀಕರಿಸಿದೆ. ವಯಸ್ಕರಿಗೆ ಕೂಡಾ ಅವರು ಸಾಯುವುದರ ಒಳಗೆ ಒಮ್ಮೆಯಾದರೂ ಅಕ್ಷರಾಭ್ಯಾಸವನ್ನು ಮಾಡಿಸುವುದು ನಿರ್ಣಾಯಕ ಎಂದು ಭಾವಿಸಲಾಗಿದೆ. ಈ ರೀತಿಯ ಶಿಕ್ಷಣ ಪದ್ಧತಿಯಲ್ಲಿ ಜ್ಞಾನವನ್ನು ಪುಸ್ತಕವನ್ನು ಓದುವ ಮೂಲಕವೇ ಪಡೆಯುವುದು ಅತ್ಯವಶ್ಯ. ಇದು ಪಾಶ್ಚಾತ್ಯ ಸಂಸ್ಕೃತಿಯ ಕ್ರಮ. ಅಲ್ಲಿ ಸತ್ಯದೇವನ ವಾಣಿಯು ಅಂತಿಮವಾದ ಸತ್ಯವಾಗಿದ್ದು ಅದು ಬರೆಹದ ಮೂಲಕವೇ ಲಭ್ಯವಿರುವುದರಿಂದ ಬರೆಹವನ್ನು ಕಲಿಯುವುದು ನಿರ್ಣಾಯಕ.
ಇಂದು ಅಕ್ಷರಕ್ಕೆ ಸಿಕ್ಕಿರುವ ಈ ಮಹತ್ವದಿಂದಾಗಿ ಒಂದು ಅನಕ್ಷರಸ್ಥ ವ್ಯಕ್ತಿ ಹಾಗೂ ಅಶಿಕ್ಷಿತನು ಅಜ್ಞಾನಿ ಎಂಬ ಸಮೀಕರಣ ಕೂಡ ಬೆಳೆದಿದೆ. ಹಾಗೂ ಅಂಥವನನ್ನು ಹಿಡಿದು ಅವನಿಗೆ ಅವನ ಹೆಸರನ್ನು ಬರೆದು ಸಹಿ ಹಾಕಲಿಕ್ಕೆ ಕಲಿಸಿಬಿಟ್ಟರೆ ಏನೋ ಸಾಮಾಜಿಕ ಕ್ರಾಂತಿ ನಡೆದುಬಿಡುತ್ತದೆ ಎಂಬಂತೆ ಸಾಕ್ಷರತಾ ಆಂದೋಲನವು ಬಿಂಬಿಸುತ್ತದೆ. ಅದು ಹೇಗೆ ಒಬ್ಬನು ಹೆಬ್ಬೆಟ್ಟನ್ನು ಒತ್ತುವುದನ್ನು ನಿಲ್ಲಿಸಿ ತನ್ನ ಹೆಸರನ್ನು ಬರೆಯಲು ಕಲಿತಾಕ್ಷಣ ಅಥವಾ ಓದಲು ಕಲಿತಾಕ್ಷಣ ಜ್ಞಾನಿಯಾಗಿಬಿಡುತ್ತಾನೆ? ಎಂಬುದನ್ನು ಯಾರೂ ವಿವರಿಸಿಲ್ಲ, ಹಾಗೂ ಸ್ವತಃ ಈ ಕಾರ್ಯಕ್ರಮದಲ್ಲಿ ತೊಡಗಿಕೊಂಡಿರುವವರೇ ಅದನ್ನು ನಂಬಿರಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಜ್ಞಾನ ಸಂಪಾದನೆಗೆ ಅಕ್ಷರವು ಸಾಧನ ಎಂಬ ನಂಬಿಕೆ ಇಂಥವರಲ್ಲಿ ಬೇರೂರಿರುವುದು ಸ್ಪಷ್ಟ.
ಇದರ ಜೊತೆಗೇ ಶೂದ್ರರನ್ನು ಶಿಕ್ಷಣದಿಂದ ವಂಚಿಸಲಾಗಿತ್ತು ಎನ್ನುವವರಿಗೆ ವೇದಶಾಸ್ತ್ರಗಳು ಹಾಗೂ ಸಂಸ್ಕೃತವನ್ನು ಕಲಿಯುವುದೇ ಪ್ರಾಚೀನ ಭಾರತೀಯ ಶಿಕ್ಷಣವಾಗಿತ್ತು ಎಂಬ ಭಾವನೆ ಇದೆ. ಇಂಥ ಅನಿಸಿಕೆಗಳಿಗೆ ಕಾರಣವೆಂದರೆ ಇಂದು ನಾವು ಶಿಕ್ಷಣವನ್ನು ಪಡೆಯುವುದಕ್ಕೂ ಪುಸ್ತಕಗಳನ್ನು ಓದುವುದಕ್ಕೂ ಅವಿನಾಭಾವೀ ಸಂಬಂಧವನ್ನು ಕಲ್ಪಿಸುತ್ತೇವೆ. ಈ ಸಮೀಕರಣವು ಕೂಡ ಪಾಶ್ಚಾತ್ಯ ಸಂಸ್ಕೃತಿಯ ಲಕ್ಷಣವಾಗಿದೆ. ಪಾಶ್ಚಾತ್ಯ ಶಿಕ್ಷಣದಲ್ಲಿ ಪುಸ್ತಕಗಳನ್ನು ಓದುವುದರ ಮೂಲಕ ಜ್ಞಾನವನ್ನು ಸಂಪಾದಿಸುವ ಕ್ರಮವಿದೆ. ಅಂದಮೇಲೆ ಪ್ರಾಚೀನ ಭಾರತದಲ್ಲಿ ಕೂಡ ಸಂಸ್ಕೃತ ಪುಸ್ತಕಗಳನ್ನು ಓದಿಯೇ ವಿದ್ಯೆಯನ್ನು ಪಡೆಯುತ್ತಿದ್ದರು ಹಾಗೂ ಅದಕ್ಕೆ ಅಕ್ಷರಾಭ್ಯಾಸವೇ ತಳಹದಿ ಎಂಬುದಾಗಿ ಇಂದಿನ ವಿದ್ಯಾವಂತರಿಗೆ ಕಾಣಿಸುವುದು ಸಹಜ.
ಆದರೆ ನಮ್ಮ ಸಾಮಾನ್ಯ ಜ್ಞಾನವನ್ನು ಹಾಗೂ ಅನುಭವವನ್ನು ಆಧರಿಸಿ ಆಲೋಚಿಸಿದರೆ ಈ ನಿರ್ಣಯದಲ್ಲೇನೋ ಎಡವಟ್ಟು ಇರುವಂತೆ ಅನಿಸುವುದು ಸಹಜ. ಮೊದಲು ನಿಮಗೆ ಗೊತ್ತಿರುವ ಜನರನ್ನೆಲ್ಲ ತುಲನೆ ಮಾಡಿ, ಆಗ ಆ ನಿರ್ಣಯವು ತಪ್ಪೆಂದು ಗೋಚರಿಸುತ್ತದೆ. ಹಾಗೆ ನಿರ್ಣಯಿಸಬೇಕಾದರೆ ವಿದ್ಯೆಯನ್ನು ಅಕ್ಷರಾಭ್ಯಾಸಕ್ಕೆ ಸಮೀಕರಿಸಿಕೊಳ್ಳಬೇಕಾಗುತ್ತದೆ. ಆದರೆ ಭಾರತೀಯ ಸಂಸ್ಕೃತಿಯು ಇಂಥ ಸಮೀಕರಣವನ್ನು ಒಪ್ಪುವುದಿಲ್ಲ. ನಮ್ಮಲ್ಲಿ ಯಾವ ವೇದಗಳಿಂದ ತಮ್ಮನ್ನು ವಂಚಿಸುವ ಮೂಲಕ ತಮಗೆ ಶಿಕ್ಷಣವನ್ನು ನಿರಾಕರಿಸಿದರು ಎನ್ನಲಾಗುತ್ತದೆಯೋ ಆ ವೇದಗಳನ್ನು ಶ್ರುತಿ ಅಥವಾ ಕೇಳಿ ತಿಳಿದದ್ದು ಎನ್ನಲಾಗುತ್ತದೆ. ವೇದಗಳನ್ನು ಬರೆದು, ಓದಿ ಕಲಿಯುವ ಪದ್ಧತಿಯನ್ನು ಉದ್ದೇಶಪೂರ್ವಕವಾಗಿಯೇ ನಮ್ಮವರು ಅಳವಡಿಸಿಕೊಳ್ಳಲಿಲ್ಲ. ಬರೆದು ಓದಿದರೆ ಅದರ ಧ್ವನಿ, ಉಚ್ಛಾರಣೆಗಳೆಲ್ಲ ಅಪಭ್ರಂಶಗೊಳ್ಳುತ್ತವೆ, ಹಾಗಾಗಿ ಅವುಗಳ ಕಲಿಕೆಗೆ ಅಕ್ಷರವು ಅಡ್ಡಿ ಎಂಬ ಭಾವನೆಯೇ ಇತ್ತು. ಅವುಗಳನ್ನು ಸಾವಿರಾರು ವರ್ಷಗಳ ವರೆಗೆ ಕೇಳಿ ಕಲಿಯುವ ಮೂಲಕವೇ ದಾಟಿಸಿಕೊಂಡು ಬರಲಾಗಿದೆ. ಹಾಗಾಗಿ ವೇದವನ್ನು ಕಲಿಯಲು ಅಕ್ಷರ ಜ್ಞಾನವು ಬ್ರಾಹ್ಮಣರಿಗೆ ಅನಿವಾರ್ಯವಾಗಿರಲಿಲ್ಲ. ನಮ್ಮ ಇತಿಹಾಸದಲ್ಲಿ ಎಲ್ಲೆಲ್ಲಿ ಗ್ರಂಥಾಭ್ಯಾಸ ಅಗತ್ಯವಿತ್ತೊ ಅಲ್ಲಲ್ಲಿ ಅದನ್ನು ನಡೆಸುವ ಸಲುವಾಗಿ ಬ್ರಾಹ್ಮಣರಷ್ಟೇ, ಬೌದ್ಧ, ಜೈನಾದಿ ವಿದ್ವಾಂಸರಿಗೂ ಅಕ್ಷರಜ್ಞಾನವು ಬೇಕಿತ್ತು. ಕಾರಕೂನರು, ಲಿಪಿಕಾರರು, ಶಿಲ್ಪಿಗಳು ಮುಂತಾದ ಕೆಲವು ವೃತ್ತಿಗಳನ್ನು ವಲಂಬಿಸಿದವರು ಕೂಡ ಅಕ್ಸರವನ್ನು ಕಲಿತಿರುತ್ತಿದ್ದರು. ಇವರಲ್ಲಿ ಬಹುತೇಕರು ಶೂದ್ರರೇ ಆಗಿದ್ದರು.
ನಮ್ಮ ಸಂಸ್ಕೃತಿಯಲ್ಲಿ ಅಕ್ಷರಕ್ಕೂ, ವಿದ್ಯೆಗೂ, ಜ್ಞಾನಕ್ಕೂ ಸಮೀಕರಣವನ್ನು ಮಾಡಲಾಗಿಲ್ಲ. ಅದರಲ್ಲೂ ವಿದ್ಯೆ ಹಾಗೂ ಜ್ಞಾನಗಳನ್ನು ಪಡೆಯಲಿಕ್ಕೆ ಅಕ್ಷರಾಭ್ಯಾಸವು ಅನಿವಾರ್ಯವೇ ಆಗಿರಲಿಲ್ಲ. ನಮ್ಮ ಸಂಸ್ಕೃತಿಯು ಆತ್ಮಜ್ಞಾನವೇ ಆತ್ಯಂತಿಕವಾದ ಜ್ಞಾನವೆಂಬುದಾಗಿ ಪ್ರತಿಪಾದಿಸಿದೆ. ಈ ಜ್ಞಾನವನ್ನು ಹೊಂದಲಿಕ್ಕೆ ಅಕ್ಷರ ಅಥವಾ ಪಾಂಡಿತ್ಯ ಅನಿವಾರ್ಯವಲ್ಲ ಎಂಬುದಾಗಿ ಎಲ್ಲಾ ಅಧ್ಯಾತ್ಮ ಸಂಪ್ರದಾಯಗಳೂ ಸಾರಿ ಹೇಳುತ್ತವೆ. ಅಷ್ಟೇ ಅಲ್ಲ ಕೇವಲ ವೇದಗಳನ್ನು ಶಾಸ್ತ್ರಗಳನ್ನು ಕಲಿತಾಕ್ಷಣ ಜ್ಞಾನ ಸಿಕ್ಕಿಬಿಡುವುದಿಲ್ಲ ಎಂಬುದಾಗಿ ಅವು ಎಚ್ಚರಿಸುತ್ತವೆ. ಹಾಗಾಗಿ ಆತ್ಮಜ್ಞಾನ ಸಾಧನೆಗೆ ಅನೇಕ ಮಾರ್ಗಗಳು ಬೆಳೆದುಕೊಂಡು ಬಂದವು. ಅವುಗಳಲ್ಲಿ ವೇದವಿದ್ಯೆ ಕೇವಲ ಒಂದು ಮಾರ್ಗವಾಗಿತ್ತು. ಭಕ್ತಿಯ ಮೂಲಕ ಅದನ್ನು ಗಳಿಸುವವರಿಗೆ ಅಕ್ಷರಜ್ಞಾನ ಅಗತ್ಯ ಕೂಡ ಇರಲಿಲ್ಲ. ಆ ಕಾರಣದಿಂದಲೇ ಅನಕ್ಷರಸ್ಥ ಕೆಳಜಾತಿಗಳಿಂದ ಬಂದ ಅಷ್ಟೊಂದು ಭಕ್ತರು ಜ್ಞಾನಿಗಳೆನಿಸಿಕೊಂಡು ನಮ್ಮ ಸಮಾಜದಲ್ಲಿ ಬ್ರಾಹ್ಮಣರಾದಿಯಾಗಿ ಎಲ್ಲರ ಮನ್ನಣೆಯನ್ನು ಪಡೆಯುವುದು ಕೂಡ ಸಾಧ್ಯವಾಯಿತು. ಹಾಗಾಗಿ ನಮ್ಮ ಸಂಸ್ಕೃತಿಯಲ್ಲಿ ಬೆಳೆದುಬಂದವನೊಬ್ಬನು ಅನಕ್ಷರಸ್ಥನನ್ನು ಅಜ್ಞಾನಿ ಎಂಬುದಾಗಿ ನೋಡಲಾರ.
ಅದೇ ರೀತಿಯಲ್ಲಿ, ನಮ್ಮ ಸಂಸ್ಕೃತಿಯಲ್ಲಿ ಬಹುತೇಕ ವೃತ್ತಿ ವಿದ್ಯೆಗಳು ಕ್ರಿಯೆಯ ಅನುಕರಣೆಯ ಮೂಲಕ ಕಲಿತು ಬರುತ್ತವೆಯೇ ವಿನಃ ಪುಸ್ತಕ ಜ್ಞಾನದಿಂದಲ್ಲ. ವೃತ್ತಿ ವಿದ್ಯೆಗಳನ್ನು ಆಯಾ ಕುಟುಂಬಗಳು ದಾಟಿಸಿಕೊಂಡು ಬರುತ್ತಿದ್ದವು. ಕಿರಿಯರು ಹಿರಿಯರಿಂದ ಕಲಿಯುತ್ತಿದ್ದರು. ಇದಕ್ಕೆ ಅಕ್ಷರಜ್ಞಾನವು ಅಪ್ರಸ್ತುತವಾಗಿತ್ತು. ಅಂದರೆ ಇವರು ಇಂದಿನ ಹಾಗೆ ಯಾವುದೋ ಶಿಕ್ಷಣ ಸಂಸ್ಥೆಗೆ ಬಂದು ಅಕ್ಷರ ಕಲಿತು ಡಿಗ್ರಿಗಳನ್ನು ಪಡೆಯಲಿಲ್ಲ ಅಂದಾಕ್ಷಣ ಅವರಿಗೆ ಶಿಕ್ಷಣವೇ ಇರಲಿಲ್ಲ ಎನ್ನುವುದು ತಪ್ಪಾಗುತ್ತದೆ. ಅಂದಿನ ಶಿಕ್ಷಣದ ಸ್ವರೂಪವೇ ಬೇರೆ ಇತ್ತು ಎಂಬುದನ್ನು ಗಮನಿಸಬೇಕು. ಭಾರತೀಯರು ವಿಶ್ವದಲ್ಲಿ ತಮ್ಮ ಕುಶಲಕರ್ಮಕ್ಕೆ ಪ್ರಾಚೀನ ಕಾಲದಿಂದಲೂ ಹೆಸರುವಾಸಿಯಾಗಿದ್ದರು. ಭಾರತದಾದ್ಯಂತ ಇರುವ ದೇವಾಲಯಗಳು ಪ್ರಾಚೀನ ವಾಸ್ತುಶಿಲ್ಪಿಗಳ ಎಂಜಿನಿಯರಿಂಗ್ ಕೌಶಲ್ಯಕ್ಕೆ ಸಾಕ್ಷಿಯಾಗಿವೆ. ಭಾರತದ ವಿವಿಧ ಶಾಸ್ತ್ರ ಸಂಪ್ರದಾಯಗಳೆಲ್ಲ ಮೂಲತಃ ಇಂಥ ಅನುಕರಣೆಯ ಕಲಿಕೆಯಿಂದಲೇ ದಾಟಿ ಬಂದಿದ್ದವು. ಇಂಥವರನ್ನು ಅಕ್ಷರ, ಪುಸ್ತಕಗಳ ಮಾನದಂಡವನ್ನಿಟ್ಟುಕೊಂಡು ಶಿಕ್ಷಣದಿಂದ ವಂಚಿತರು, ಅವಿದ್ಯಾವಂತರು ಎಂದು ಕರೆಯಬಲ್ಲೆವೆ?
ಏಕೆ ನಮಗಿಂದು ಇಂಥ ಸರಳ ವಿಷಯವೂ ತಲೆಗೆ ಹೋಗುವುದಿಲ್ಲ? ಏಕೆಂದರೆ ನಮ್ಮ ಇತಿಹಾಸ ಪುಸ್ತಕಗಳೇ ಹಾಗೆ ಹೇಳುತ್ತವೆ. ಆದರೆ ನಮ್ಮ ಶಿಕ್ಷಣದ ಇತಿಹಾಸವನ್ನು ಬರೆಯುವಲ್ಲೇ ಎಡವಿದ್ದೇವೆ ಎಂಬುದನ್ನು ನಾವು ಗಮನಿಸಬೇಕು. ನಮ್ಮ ಆಧುನಿಕ ಶಿಕ್ಷಣವ್ಯವಸ್ಥೆಯ ಮಾನದಂಡವನ್ನಿಟ್ಟುಕೊಂಡು ಪ್ರಾಚೀನ ಭಾರತದಲ್ಲಿಯೂ ಕಾಲೇಜುಗಳಿದ್ದವು, ವಿಶ್ವವಿದ್ಯಾಲಯಗಳಿದ್ದವು ಎನ್ನುತ್ತೇವೆ. ಅವು ಯಾವವು? ಬ್ರಾಹ್ಮಣರ ಅಗ್ರಹಾರಗಳು, ಘಟಿಕಾಸ್ಥಾನಗಳು, ದೇವಾಲಯಗಳು, ಮಠಗಳು, ಬೌದ್ದ, ಜೈನರ ಸಂಘಗಳು, ವಿಹಾರಗಳು, ಇತ್ಯಾದಿ. ಇವೆಲ್ಲ ಆಯಾ ಸಾಂಪ್ರದಾಯಿಕ ವಿದ್ಯೆಗಳನ್ನು ಕಲಿಸುವ ಸ್ಥಾನಗಳಾಗಿದ್ದವೇ ಹೊರತೂ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಾಗಿರಲಿಲ್ಲ. ಅವು ಸಾರ್ವಜನಿಕ ಸಂಸ್ಥೆಗಳು ಅಂದುಕೊಂಡಾಗ ಬ್ರಾಹ್ಮಣರು ಶೂದ್ರರನ್ನು ತಮ್ಮ ಅಗ್ರಹಾರಗಳೆಂಬ ಕಾಲೇಜುಗಳಲ್ಲಿ ಬಿಟ್ಟುಕೊಳ್ಳಲಿಲ್ಲ, ಹಾಗಾಗಿ ಶೂದ್ರರು ಅವಿದ್ಯಾವಂತರಾಗಿ ಮಾರ್ಪಟ್ಟರು ಎಂಬ ನಿರ್ಣಯ ಸ್ವಾಭಾವಿಕ. ಆದರೆ ಪ್ರಾಚೀನ ಭಾರತದ ಸಂದರ್ಭದಲ್ಲಿ ಸ್ಕೂಲು, ಕಾಲೇಜು, ಯೂನಿವರ್ಸಿಟಿ, ಡಿಗ್ರಿ, ಡಿಪ್ಲೊಮಾ, ಇತ್ಯಾದಿಗಳ ಕುರಿತು ಮಾತನಾಡುವುದೇ ಹಾಸ್ಯಾಸ್ಪದವಾಗುತ್ತದೆ.
ಚಿತ್ರಕೃಪೆ :http://www.industrytap.com
ನಮ್ಮ ಕನ್ನಡ ಪ್ರಾಧ್ಯಾಪಕರ ‘ಶೂದ್ರರನ್ನು ಶಿಕ್ಷಣದಿಂದ ದೂರವಿರಿಸಲಾಗಿತ್ತು’ ಎಂಬ ದೋರಣೆಯ ಇತಿಹಾಸ ವಿವರಣೆಗೆ ಪ್ರತ್ಯುತ್ತರವಾಗಿ ಅತ್ಯುತ್ತಮ ಸಂಗ್ರಹಣಾ ಲೇಖನವಾಗುತ್ತದೆ ಇದು..! ಅನಂತ ಧನ್ಯವಾದಗಳು…
ಅಕ್ಷರಾಭ್ಯಾಸ ಬೇರೆ , ಜ್ಞಾನ ಬೇರೆ ಎನ್ನುವ ವಿಭಿನ್ನ ಆಯಾಮದ ಭಾರತೀಯ ಶಿಕ್ಷಣದ ದೃಷ್ಟಿಕೋನ . ವಿಷಯಪೂರ್ಣ ಸಂಗ್ರಹಯೋಗ್ಯ ಲೇಖನ . ಧನ್ಯವಾದಗಳು.
Reblogged this on ಮಳೆಗಾಲದ ರಂಗೋಲಿ and commented:
ಅಕ್ಷರಾಭ್ಯಾಸ ಬೇರೆ , ಜ್ಞಾನ ಬೇರೆ ಎನ್ನುವ ವಿಭಿನ್ನ ಆಯಾಮದ ಭಾರತೀಯ ಶಿಕ್ಷಣದ ದೃಷ್ಟಿಕೋನ . ವಿಷಯಪೂರ್ಣ ಸಂಗ್ರಹಯೋಗ್ಯ ಲೇಖನ .
ಕನ್ಯಾನಾಂ ಸಂಪ್ರದಾನಂ ಚ ಕುಮಾರಾಣಾಂ ಚ ರಕ್ಷಣಮ್ || ಮನು 7.152
ಇದರ ಅಭಿಪ್ರಾಯವೆಂದರೆ, ಐದನೇಯ ಅಥವಾ ಆರನೇಯ ವರ್ಷವಾದ ಮೇಲೆ ಯಾರೂ ತಮ್ಮ ಹುಡುಗರನ್ನು ಅಥವಾ ಹುಡುಗಿಯರನ್ನು ಮನೆಯಲ್ಲಿಟ್ಟುಕೊಳ್ಳಲಾಗದಂತೆ, ಅಗತ್ಯವಾಗಿ ಪಾಠಶಾಲೆಗೆ ಕಳುಹಿಸುವಂತೆ ಮತ್ತು ಯಾವನು ಕಳುಹಿಸುವುದಲ್ಲವೋ, ಅವನು ದಂಡನೀಯನಾಗುವಂತೆ, ಶಿಕ್ಷಣವಿಷಯದಲ್ಲಿ ರಾಜ ನಿಇಯಮ ಅಥವಾ ಜಾತಿನಿಯಮವಿರಬೇಕು .[ ಸತ್ಯಾರ್ಥ ಪ್ರಕಾಶ ತೃತೀಯ ಸಮುಲ್ಲಾಸ]
ಅರ್ಥಾತ್, ಹಿಂದಿನ ಕಾಲದಲ್ಲಿ ಶಿಕ್ಷಣ ಕೊಡಿಸದೇ ಇರುವ ತಂದೆ ತಾಯಿಗಳು ದಂಡನೆಗೆ ಒಳಗಾಗುತ್ತಿದ್ದರು. ಹೀಗಾಗಿ ಭಯದಿಂದಲಾದರೂ ತಮ್ಮ ಮಕ್ಕಳನ್ನು ಶಿಕ್ಷಣ ಕೊಡುವ ಗುರುಕುಲಕ್ಕೆ ಕಳುಹಿಸುತ್ತಿದ್ದರು. ಅಲ್ಲಿ ಅವರ ಗುಣ ಕರ್ಮ, ಮತ್ತು ಸ್ವಭಾವಕ್ಕೆ ತಕ್ಕಂತೆ ವರ್ಣ ನಿಶ್ಚಯವಾಗುತ್ತಿತ್ತು. ಎಲ್ಲಿಯವರೆಗೆ ಈ ಸಂಪ್ರದಾಯ ನಡೆದು ಬಂದಿತ್ತೋ ಅಲ್ಲಿಯವರೆಗೆ ಅಶಿಕ್ಷತರು ಇರುತ್ತಿರಲಿಲ್ಲ. ಕಾಲ ಕ್ರಮೇಣ, ವೇದ ವಿಮುಖವಾದ ಭಾರತ ಇದನ್ನು ಪಾಲಿಸದೆ ಅಶಿಕ್ಷಿತ ಜನಾಂಗವನ್ನು ಹುಟ್ಟು ಹಾಕಿತು. ಇದು ಇತಿಹಾಸ.
ಮಹಾಭಾರತ ಕಾಲವಾದ ಮೇಲೆ ಭಾರತ ಸಾಂಸ್ಕೃತಿಕವಾಗಿ ಕುಸಿಯುತ್ತಾ ಬಂದ ಪರಿಣಾಮವಾಗಿ ಸ್ತ್ರೀ ಮತ್ತು ಶೂದ್ರರು ಶಿಕ್ಷಣದಿಂದ ವಂಚಿತರಾಗಬೇಕಾಗಿ ಬಂದಿತು. ಶಂಕರಾಚಾರ್ಯಕಾಲದಲ್ಲೂ ವಿಧುಷಿಗಳು ಇದ್ದರು. ಆದರೆ ವಿದೇಶಿ ಆಡಳಿತ, ವೇದಗಳನ್ನು ಮತ್ತೊಬ್ಬರಿಗೆ ಎಂದರೆ ತಮ್ಮ ಜಾತಿಯ ಪುರುಷರನ್ನು ಹೊರತು ಪಡಿಸಿ ಅನ್ಯರಿಗೆ ಹೇಳಿಕೊಡಬಾರದೆಂಬ ದುಷ್ಟ ಸಂಪ್ರದಾಯ ತಲೆ ಎತ್ತಿದ್ದರಿಂದ ಜಾತಿವ್ಯವಸ್ಥೆಗೆ ನಾಂದಿಯಾಯಿತು. ನಿಜ ಅಕ್ಷರಸ್ಥರಲ್ಲದವರು ವಿವೇಕವಂತರಾಗಿರಬಹುದು. ಆದರೆ ಅಕ್ಷರ ಶಿಕ್ಷಣ ಅವರನ್ನು ಸರ್ವಾಂಗೀಣ ಉನ್ನತಿಗಯತ್ತ ಕೊಂಡೊಯ್ಯಬಲ್ಲದು.
ಸ್ತ್ರೀ ಶೂದ್ರಾದಿಗಳಿಗೆ ವೇದಗಳನ್ನು ಹೇಳಿಕೊಡುವ ಪರಿಪಾಠ ಆರಂಭವಾದದ್ದು ಸ್ವಾಮಿ ದಯಾನಂದರ ವಿಚಾರದಿಂದ ಪ್ರೇರಿತವಾದ ಆರ್ಯಸಮಾಜ ಹುಟ್ಟು ಹಾಕಿದ ನೂರಾರು ಆರ್ಯಗುರುಕುಲಗಳಲ್ಲಿ. ಅದೊಂದು ಚಳುವಳಿಯಾಗಿ ಉತ್ತರ ಬಾರತದಲ್ಲಿ ಮಾರ್ಪಟ್ಟಿತು. ದುರುದೃಷ್ಟ ವಶಾತ್ ಡಾ|| ಅಂಬೇಡ್ಕರ್ ರಂತಹ ಮೇಧಾವಿಗಳಿಗೆ ಇಂತಹ ಗುರುಕುಲಗಳ ಸಂಪರ್ಕವಿರಲಿಲ್ಲವಾಗಿ ಅವರು ಮತ್ತು ಅವರ ಅನುಯಾಯಿಗಳು ಇಂದು ಶೂದ್ರರ ಅನರಕ್ಷತೆಗೆ ಬ್ರಾಹ್ಮಣರೇ ಕಾರಣ ಎಂಬ ವಾದವನ್ನು ಒಡ್ಡುತ್ತಾರೆ. ಬ್ರಿಟಿಷ್ ಆಡಳಿತದಲ್ಲಿ ಇಂತಹ ವಿಚಾರಗಳಿಗೆ ಪ್ರಚಾರವೂ ದೊರಕಿ, ಸ್ತ್ರೀ-ಶೂದ್ರಾದಿಗಳ ಅನರಕ್ಷತೆಗೆ ಬ್ರಾಹ್ಮಣರೇ ಕಾರಣ ಎಂಬ ವಾದಕ್ಕೆ ಪುಷ್ಟಿಯೂ ದೊರಕಿದೆ.
ಲೇಖನವನ್ನ ಓದಿದೆ. ಇಲ್ಲಿ ಚರ್ಚಿಸಿದ ವಿಚಾರ ಚೆನ್ನಾಗಿದೆ. ಆದರೆ ಈ ಲೇಖನದಲ್ಲಿ, “ವಿದ್ಯೆ” ಹಾಗೂ “ಶಿಕ್ಷಣ” ಗೊಂದಲಕ್ಕೀಡಾದಂತಿದೆ ಎನ್ನುವುದು ನನ್ನ ಅಭಿಪ್ರಾಯ. ನನ್ನ ಪ್ರತಿಕ್ರಿಯೆ ಈ ಕೆಳಕಂಡಂತೆ;
(೧) ಅಕ್ಷರ ಎನ್ನುವ ಶಬ್ಧದ ಅರ್ಥ “ನಶಿಸಿ ಹೋಗಲಾರದ್ದು” ಅಂತ (ಅ-ಕ್ಷರಾ, ಕ್ಷರ=ನಾಶ). ಅದು ಲಿಖಿತ ರೂಪದಲ್ಲೇ ಇರಬೇಕೆಂಬ ಯಾವ ನೀತಿಯೂ ಇಲ್ಲ. ಬರೆದಿಟ್ಟು, ಲಿಖಿತ ಗ್ರಂಥಗಳ ಮೇಲೆ ಅವಲಂಬಿತವಾದರೆ ಜ್ಞಾನದ ಮೂಲ ನಶಿಸಿಹೋಗಬಹುದು ಎನ್ನುವ ಉದ್ದೇಶದಿಂದ ವೇದಜ್ಞಾನವನ್ನ ಶೃತಿಯ ಮೂಲಕ ಕಲಿಸಿದ್ದು. ಶಬ್ಧಾರ್ಥದಲ್ಲಿ ಇದೂ ಅಕ್ಷರವೇ. ಹಾಗಾಗಿ ವೇದವೂ ಅಕ್ಷರ ಜ್ಞಾನವೇ…
(೨) ಈ ಲೇಖನ ಹೇಳಲು ಪ್ರಯತ್ನಿಸುತ್ತಿರುವ, ಅಕ್ಷರಾಭ್ಯಾಸ ಅಥವಾ ಶಿಕ್ಷಣ ಕೇವಲ ಶಾಲೆಯಲ್ಲಿ ಕಲಿಯುವ ಓದು-ಬರವಣಿಗೆಯ ಕ್ರಮಗಳಲ್ಲ ಎನ್ನುವ ವಿಚಾರವನ್ನ ನಾನು ಸಂಪೂರ್ಣವಾಗಿ ಸಮರ್ಥಿಸುತ್ತೇನೆ. ಇಂದಿನ ಶೈಕ್ಷಣಿಕ ಪಧ್ಧತಿಯೇ ವಿದ್ಯೆಯಲ್ಲ. ಕೇವಲ ಸಹಿ ಹಾಕಲು ಅಥವಾ ಓದು-ಬರೆಯಲು ಬಂದವರೆಲ್ಲಾ ಜ್ಞಾನಿಗಳೂ ಅಲ್ಲ ಅಥವಾ ಅಕ್ಷರಸ್ಥರೂ ಅಲ್ಲ. ನಮ್ಮ ಈಗಿನ ಪಧ್ಧತಿ ಸರಿಯಾದ ಶಿಕ್ಷಣಪಧ್ಧತಿಯೂ ಅಲ್ಲ..!
(೩) ಕಾಲ-ಕಾಲಕ್ಕೆ “ಶಿಕ್ಷಣ” ಎನ್ನುವ ಶಬ್ಧದ ವ್ಯಾಪ್ತಿ ಬದಲಾಗುತ್ತಾ ಬರುತ್ತಿದೆ. ಚಿಕ್ಕ ಉದಾಹರಣೆಯೆಂದರೆ, ನಾನು ೩೦ವರ್ಷಗಳ ಹಿಂದೆ ಕಲಿತ ಗಣಿತ-ವಿಜ್ಞಾನ ಶಿಕ್ಷಣ ಕ್ರಮ ಈಗ ಪ್ರಚಲಿತದಲ್ಲಿಲ್ಲ. ಹಾಗೇ, ಅನಾದಿಕಾಲದ (ವೇದಕಾಲದ) ಶಿಕ್ಷಣ ವ್ಯವಸ್ಥೆಯಲ್ಲಿ, ವೇದ, ಶಾಸ್ತ್ರ, ಸಾಹಿತ್ಯ, ತರ್ಕ, ಜ್ಯೋತಿಷ್ಯ, ಸಮಕಾಲೀನ ವಿಜ್ಞಾನ, ಇತ್ಯಾದಿಗಳು ಪ್ರಮುಖ ಭಾಗವಾಗಿತ್ತು. ಜನರು ಋಷಿಗಳ ಆಶ್ರಮದಲ್ಲಿ ಇಂಥವುಗಳನ್ನ ಹೆಚ್ಚಾಗಿ ಕಲಿತು “ಪಂಡಿತ”ರೆಂದೆನಿಸಿಕೊಳ್ಳುತ್ತಿದ್ದರು. ಈ ಪಧ್ಧತಿಯ ಮೂಲ ಭಾಷೆ “ಸಂಸ್ಕೃತ”ವಾಗಿದ್ದು ಇದನ್ನ ಶೂದ್ರರಿಗೆ ಮುಕ್ತವಾಗಿಸಿದ ಉದಾಹರಣೆಗಳಿವೆಯೇ?
(೪) ಲೇಖನದಲ್ಲಿ ಉಲ್ಲೇಖವಾಗಿರುವ “…. ಕಾರಕೂನರು, ಲಿಪಿಕಾರರು, ಶಿಲ್ಪಿಗಳು ಮುಂತಾದ ಕೆಲವು ವೃತ್ತಿಗಳನ್ನು ಅವಲಂಬಿಸಿದವರು ಕೂಡ ಅಕ್ಸರವನ್ನು ಕಲಿತಿರುತ್ತಿದ್ದರು. ಇವರಲ್ಲಿ ಬಹುತೇಕರು ಶೂದ್ರರೇ ಆಗಿದ್ದರು.” ಎನ್ನುವ ಮಾತನ್ನ ಪುನರ್ ಪರಿಶೀಲಿಸಬೇಕಾಗಿದೆ. ಇವರೆಲ್ಲರೂ ವೃತ್ತಿಯಾಧಾರಿತ ವಿದ್ಯೆಗಳನ್ನ ಕಲಿತಿದ್ದರೇ ವಿನಃ ಆಗಿನ ಸಮಕಾಲೀನ “ಶಿಕ್ಷಣ”ವನ್ನಲ್ಲ. “ಕೊಂಡು ತಂದು ಹೊತ್ತು ಮಾರಿ ಹೊಟ್ಟೆಹೊರೆಯಲು ವಿದ್ಯೆ ಏನು ಬಳೆಯ ಮಾಲಾರವೇ?” ಎಂದು ಕುಮಾರವ್ಯಾಸನನ್ನ ಆಗಿನ ಪಂಡಿತರು ಹೀಯಾಳಿಸಿದ್ದು ನೆನಪಿದೆಯೇ? ಅನಾದಿಕಾಲದಿಂದಲೂ ಸಾಮಾಜಿಕ ವಿದ್ಯೆಗೂ, ಗ್ರಾಂಥಿಕ ಶಿಕ್ಷಣಕ್ಕೂ ವ್ಯತ್ಯಾಸ ಇದ್ದೇ ಇದೆ. ಇದೇ ಸಂಪ್ರದಾಯ ಈಗಲೂ ಮುಂದುವರೆದಿದೆ. ಈ ವ್ಯತ್ಯಾಸಗಳೇ ಸಮಾಜದಲ್ಲಿ ಮೇಲು-ಕೀಳು ಎನ್ನುವ ತಾರತಮ್ಯ ಹುಟ್ಟಿಸಲು ಕಾರಣವಿರಬಹುದು.
(೫) ನಮ್ಮ ಪೂರ್ವಿಕರು ಅರವತ್ತನಾಲ್ಕು ವಿದ್ಯೆಗಳನ್ನ ಗುರುತಿಸಿದ್ದಾರೆ. ಇವೆಲ್ಲವೂ ಭೌತಿಕ ಜೀವನವನ್ನ ನಡೆಸಲು ಬೇಕಾದ ವಿದ್ಯೆಗಳು. ಆದರೆ, ವೇದ, ಶಾಸ್ತ್ರ, ತರ್ಕ, ಆತ್ಮಜ್ಞಾನ, ಜ್ಯೋತಿಷ್ಯಗಳು ಇವೆಲ್ಲಕ್ಕೂ ಮೀರಿದ್ದು ಎನ್ನುವುದು ಆ ಕಾಲಕ್ಕೆ ತಿಳಿದಿದ್ದರಿಂದ ಇವನ್ನು ಮಾತ್ರಾ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿ ಬ್ರಾಹ್ಮಣರಿಗೆ ಮಾತ್ರಾ ಮೀಸಲಾಗಿಟ್ಟಿದ್ದು. ಉಳಿದ ವರ್ಗದವರು ಮೇಟಿ-ವಿದ್ಯೆ ಕಲಿತರೆ, ಬ್ರಾಹ್ಮಣರು ಪಂಡಿತರಾದರು.
ಒಟ್ಟಿನಲ್ಲಿ, ಈಗಿನ ಶಿಕ್ಷಣ ವ್ಯವಸ್ಥೆ ಅರ್ಥಕಳೆದುಕೊಂಡಿರುವುದಂತೂ ನಿಜ..
-ಸೂರ್ಯಸಾರಥಿ
ಹೌದು, ಹೆಸರು ಬರಿಯುವದು ಕಲಿಸಿ, ಸಾಕ್ಷರತೆ ಸಾಧಿಸಿದಿವಿ, ಎಲ್ಲರಿಗೂ ಅವಕಾಶ ಸಿಕ್ಕಿದೆ ಅಂತ ಹೇಳಿಕೊಳ್ಳುವುದರಲ್ಲಿರುವ ಶೂನ್ಯತನವನ್ನ ಚೆನ್ನಾಗಿ ತೆಳಿಸಿದ್ದೀರಿ. ಜ್ಞಾನಿ ಅಜ್ಞಾನಿ ಅಂದರೇನು ಅಂತ ಸ್ವಲ್ಪ ಯೋಚನೆ ಮಾಡಿ ನೋಡಬೇಕು ಇಂದಿನ ಸಮಾಜ ಮತ್ತು ಶಾಸನಗಾರರು.
ಸೂರ್ಯಸಾರಥಿಯವರ ವಿಚಾರದ ಬಗ್ಗೆ ನನ್ನ ಅಭಿಪ್ರಾಯ –
ವೇದಕಾಲದ ಶಿಕ್ಷಣವ್ಯವಸ್ಥೆಯಲ್ಲಿ ವೇದ ಮತ್ತು ಶಾಸ್ತ್ರಗಳು (ತರ್ಕ, ಜ್ಯೋತಿಷ್ಯ ಇತ್ಯಾದಿ) ಶಿಲ್ಪಶಾಸ್ತ್ರಾದಿಗಳಂತೆ ಪರಂಪರಾಗತ ವಿದ್ಯೆಗಳೇ ಆಗಿದ್ದವು. ಹಾಗಾಗಿಯೇ ಅದನ್ನು ಎಲ್ಲರಿಗೂ ಹೇಳಿಕೊಡಬೇಕು ಎಂಬ ವಿಚಾರ ಆ ಕಾಲದಲ್ಲಿ ಸಾಧ್ಯವಿರಲಿಲ್ಲ ಮತ್ತು ಆ ಕಾಲದವರಿಗೆ ಇದು ಅರ್ಥವೂ ಆಗುತ್ತಿರಲಿಲ್ಲ. ಇತರ ವಿದ್ಯೆಗಳಂತೆ ಈ ವಿದ್ಯೆಗಳು ಆ ಪರಂಪರೆಗೆ ಸೇರಿದವರಿಗೆ ಹೇಳಿಕೊಡಲಾಗುತ್ತಿತ್ತು. ಆದರೆ ಆತ್ಮಜ್ಞಾನವನ್ನು ಯಾರಿಗೂ ನಿರಾಕರಿಸಲಾಗಿರಲಿಲ್ಲ. ವೇದದ ಅಧ್ಯಯನ ಪರಂಪರಾಗತವಾಗಿದ್ದರೂ ಇತಿಹಾಸ(ರಾಮಾಯಣ, ಮಹಾಭಾರತ) ಮತ್ತು ಪುರಾಣಗಳ ಅಧ್ಯಯನಕ್ಕೆ ಎಲ್ಲರಿಗೂ ಅಧಿಕಾರವಿತ್ತು. ಇದರ ಉಲ್ಲೇಖವನ್ನು ಶಂಕರಾಚಾರ್ಯರ ಭಾಷ್ಯದಲ್ಲೇ ಕಾಣಬಹುದು. “ಯೇಷಾಂ ಪುನಃ ಪೂರ್ವಕೃತಸಂಸ್ಕಾರವಶಾದ್ವಿದುರಧರ್ಮವ್ಯಾಧಪ್ರಭೃತೀನಾಂ ಜ್ಞಾನೋತ್ಪತ್ತಿಃ ತೇಷಾಂ ನ ಶಕ್ಯತೇ ಫಲಪ್ರಾಪ್ತಿಃ ಪ್ರತಿಷೇದ್ಧುಮ್. ಶ್ರಾವಯೇತ್ ಚತುರೋ ವರ್ಣಾನ್ ಇತಿ ಚ ಇತಿಹಾಸಪುರಾಣಾಧಿಗಮೇ ಚಾತುರ್ವರ್ಣ್ಯಸ್ಯ ಅಧಿಕಾರಸ್ಮರಣಾತ್” (ಶಂಕರಭಾಷ್ಯ, ಬ್ರಹ್ಮಸೂತ್ರ, ೧/೩/೯/೩೪) ಅರ್ಥ – ” ವಿದುರ ಧರ್ಮವ್ಯಾಧ ಮುಂತಾದದವರಿಗೆ ಯಾವ ಜ್ಞಾನೋತ್ಪತ್ತಿ ಆಗಿದೆ ಅದನ್ನು ನಿರಾಕರಣೆ ಮಾಡಲು ಸಾಧ್ಯವಿಲ್ಲ. ಅಲ್ಲದೇ ನಾಲ್ಕುವರ್ಣದವರಿಗೂ ಹೇಳಬೇಕು ಎಂದು ಇತಿಹಾಸಪುರಾಣದ ತಿಳಿವಿಕೆಗೆ ಎಲ್ಲರಿಗೂ ಅಧಿಕಾರ ಕೇಳಿಬರುತ್ತದೆ”.
ಅಲ್ಲದೇ ವೇದಾಧ್ಯಯನದ ಅಂತಿಮ ಫಲ ಆತ್ಮಜ್ಞಾನವೇ ಆಗಿದೆ. ಅದನ್ನು ಇತಿಹಾಸಪುರಾಣಾದಿಗಳ ಮೂಲಕ ತಿಳಿದುಕೊಳ್ಳುವ ಅಧಿಕಾರ ಎಲ್ಲರಿಗೂ ಇದೆ. ಆ ರೀತಿಯಾಗಿ ಅಧ್ಯಯನ ನಡೆಸಿ ಆತ್ಮಜ್ಞಾನಿಯಾದ ಧರ್ಮವ್ಯಾಧ ಮುಂತಾದವರಿರುವಾಗ ಆತ್ಮಜ್ಞಾನವೇ ವಿದ್ಯೆ ಎಂದು ಉಪನಿಷತ್ತುಗಳಲ್ಲಿ ಹೇಳಲ್ಪಟ್ಟಿರುವಾಗ, ಶೂದ್ರರಿಗೆ ವಿದ್ಯೆಯ ನಿರಾಕರಣೆ ಮಾಡಲಾಗಿತ್ತು ಎಂಬುದು ವಿಚಾರವಿಲ್ಲದ ಅಭಿಪ್ರಾಯವೆನಿಸುತ್ತದೆ.
ಸಂಸ್ಕೃತವನ್ನು ಶೂದ್ರರಿಗೆ ಮುಕ್ತವಾಗಿರಿಸಿದ್ದರೇ ಎಂಬ ಪ್ರಶ್ನೆಯೇ ಸರಿಯಾದುದ್ದಲ್ಲ. ಶೂದ್ರರಿಗೆ ಇತಿಹಾಸಪುರಾಣಗಳ ಅಧ್ಯಯನಕ್ಕೆ ಅಧಿಕಾರವಿರುವಾಗ, ಅವುಗಳು ಸಂಸ್ಕೃತದಲ್ಲೇ ಇರುವಾಗ, ಅದನ್ನು ಬರೆದವರೇ ಜಾತಿಯಿಂದ ಬ್ರಾಹ್ಮಣರಾಗದಿರುವಾಗ ಹೇಗೆ ತಾನೇ ಅವರಿಗೆ ಸಂಸ್ಕೃತವನ್ನು ನಿರಾಕರಿಸಲು ಸಾಧ್ಯ!!!!!
ವ್ಯಾಕರಣದ ಮಹಾಭಾಷ್ಯದಲ್ಲಿ (ಪತಂಜಲಿಮಹರ್ಷಿಗಳ ಗ್ರಂಥ) ಸೂತ (ರಥ ಓಡಿಸುವವನು) ಮತ್ತು ವ್ಯಾಕರಣ ತಿಳಿದವನ ಒಂದು ಸಂವಾದವಿದೆ. ಅದರಲ್ಲಿ ವ್ಯಾಕರಣ ತಿಳಿದವನು ‘ಪ್ರಾಜಿತಾ’ ಎಂದು ಪ್ರಯೋಗ ಮಾಡುತ್ತಾನೆ. ಆಗ ಸೂತ ಈ ಪ್ರಯೋಗ ಸರಿ ಇಲ್ಲ ಎಂದು ವಾದಿಸುತಾನೆ ಮತ್ತು ಅವನೇ ಗೆಲ್ಲುತ್ತಾನೆ (ಮಹಾಭಾಷ್ಯ ೨/೪/೫೬). ಈ ಸಂಭಾಷಣೆ ಕೆಳಜಾತಿ ಎಂದು ಪರಿಗಣಿಸಲ್ಪಡುವವರೂ ಸಂಸ್ಕೃತಜ್ಞರಾಗಿದ್ದರು ಎಂದು ತಿಳಿಯಪಡಿಸುತ್ತದೆ.
ಹಾಗಾಗಿ ಆಗಿನ ಸಾಮಾಜಿಕ ವ್ಯವಸ್ಥೆಯಲ್ಲಿ ನಿಂತು ಯೋಚಿಸುವುದೇ ಹೆಚ್ಚು ಸೂಕ್ತವೆನಿಸುತ್ತದೆ.