ಕನ್ನಡ ಪುಸ್ತಕೋದ್ಯಮ ಎದುರಿಸುತ್ತಿರುವ ಸವಾಲುಗಳು
– ರಾಜಕುಮಾರ.ವ್ಹಿ.ಕುಲಕರ್ಣಿ
ಮುಖ್ಯಗ್ರಂಥಪಾಲಕ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ,ಬಾಗಲಕೋಟ
ಈ ವಿಷಯ ಮೊನ್ನೆ ಗೊತ್ತಾಯಿತು. ಲೇಖಕ ಮತ್ತು ಪ್ರಕಾಶಕರಾಗಿರುವ ನನ್ನ ಸ್ನೇಹಿತರೋರ್ವರಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಪುಸ್ತಕ ಖರೀದಿಗೆ ಸಂಬಂಧಿಸಿದಂತೆ ಪತ್ರ ಬಂದಿತ್ತು. ಆ ಪತ್ರದಲ್ಲಿ ಉಲ್ಲೇಖಿಸಿದಂತೆ ಪುಸ್ತಕದ ಮೂರು ನೂರು ಪ್ರತಿಗಳನ್ನು ಕಳುಹಿಸಿಕೊಡುವಂತೆ ಹಾಗೂ ಪುಸ್ತಕದ ಪ್ರತಿ ಪುಟಕ್ಕೆ 40 ಪೈಸೆಗಳ ಬೆಲೆ ನಿಗದಿಪಡಿಸಲಾಗಿರುವುದನ್ನು ಸೂಚಿಸಲಾಗಿತ್ತು. ನನ್ನ ಸ್ನೇಹಿತನ ಪುಸ್ತಕ ಒಟ್ಟು ನೂರು ಪುಟಗಳಲ್ಲಿದ್ದು ಅದರ ಮುಖ ಬೆಲೆ ಎಪ್ಪತ್ತು ರೂಪಾಯಿಗಳಾಗಿತ್ತು. ಹೀಗಿದ್ದೂ ಆತ ಒಂದು ಪ್ರತಿಗೆ ನಲವತ್ತು ರೂಪಾಯಿಗಳಂತೆ 300 ಪ್ರತಿಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಈ ಪುಸ್ತಕದ ಮಾರಾಟದಿಂದ ಅವನಿಗೇನಾದರೂ ಲಾಭವಾಗಿರಬಹುದೆ ಎನ್ನುವ ಸಂದೇಹ ನನ್ನನ್ನು ಕಾಡುತ್ತಿರುವ ಹೊತ್ತಿನಲ್ಲೇ ಆತ ಪ್ರಕಟಣೆಯ ಮೇಲೆ ಆದ ಖರ್ಚಿನ ಲೆಕ್ಕ ಒಪ್ಪಿಸಿದ. ಪುಸ್ತಕದ ಒಟ್ಟು ಸಾವಿರ ಪ್ರತಿಗಳ ಪ್ರಕಟಣೆಗಾಗಿ ಆತ ಮುದ್ರಕರಿಗೆ ಕೊಟ್ಟ ಹಣ ಬರೊಬ್ಬರಿ ಮೂವತ್ತು ಸಾವಿರ ರೂಪಾಯಿಗಳು.ಈ ನಡುವೆ ಪುಸ್ತಕದ ಬಿಡುಗಡೆ ಕಾರ್ಯಕ್ರಮಕ್ಕಾಗಿ ನಾಲ್ಕೈದು ಸಾವಿರ ರೂಪಾಯಿಗಳು ಖರ್ಚಾದವು. ಸಾವಿರ ಪ್ರತಿಗಳು ಕೈಸೇರಿದಾಗ ಅವುಗಳಲ್ಲಿ ನೂರರಿಂದ ನೂರೈವತ್ತು ಪ್ರತಿಗಳು ಗೌರವ ಪ್ರತಿ ರೂಪದಲ್ಲಿ ಪುಕ್ಕಟ್ಟೆಯಾಗಿ ಕೈಬಿಟ್ಟವು. ಮೂರು ನೂರು ಪ್ರತಿಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಮಾರಾಟ ಮಾಡುವುದರಿಂದ ಬರುವ ಹಣ ಹನ್ನೆರಡು ಸಾವಿರ ರೂಪಾಯಿಗಳು. ಪರಿಚಯದ ಪುಸ್ತಕ ಮಾರಾಟಗಾರರನ್ನು ಸಂಪರ್ಕಿಸಿದಾಗ ಎರಡು ನೂರು ಪ್ರತಿಗಳೇನೋ ಶೇಕಡಾ 20ರ ರಿಯಾಯಿತಿ ದರದಲ್ಲಿ ಮಾರಾಟವಾದರೂ ಅವರಿಂದ ಬರಬೇಕಾದ ರೂ.11,200/- ಇನ್ನೂ ಆತನ ಕೈಸೇರಿಲ್ಲ. ಸುಮಾರು ಮೂರು ನೂರು ಪ್ರತಿಗಳು ಮಾರಾಟವಾಗದೆ ಹಾಗೇ ಉಳಿದುಕೊಂಡಿವೆ.
ಪುಸ್ತಕದ ಪ್ರಕಟಣೆಗಾಗಿ ಆದ ಖರ್ಚು ಮತ್ತು ಮಾರಾಟದಿಂದ ಕೈಸೇರಿದ ಹಣ ಎರಡನ್ನೂ ಕೂಡಿ ಕಳೆದು ನೋಡಿದಾಗ ಆತನಿಗೆ ಈ ಪುಸ್ತಕ ಪ್ರಕಟಣೆಯಿಂದ ಅಂದಾಜು 12,000 ರೂಪಾಯಿಗಳ ನಷ್ಟವಾಯಿತು. ಬಳಿಯಲ್ಲಿ ಮೂರು ನೂರು ಪ್ರತಿಗಳಿವೆಯಾದರೂ ಅವು ಮಾರಾಟವಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಇಂಥದ್ದೊಂದು ಸಮಸ್ಯೆಯನ್ನು ಎದುರಿಸಿರುವ ಆತ ಭವಿಷ್ಯದಲ್ಲಿ ಪುಸ್ತಕ ಪ್ರಕಟಣೆಯ ಕೆಲಸಕ್ಕೆ ಕೈಹಾಕದಿರಲು ನಿರ್ಧರಿಸಿರುವನು. ಒಂದಿಷ್ಟು ಉತ್ತೇಜನ ದೊರೆತಿದ್ದರೆ ಬೇರೆ ಬೇರೆ ಲೇಖಕರ ಪುಸ್ತಕಗಳನ್ನು ಪ್ರಕಟಿಸುವ ಇರಾದೆ ಅವನದಾಗಿತ್ತು. ಆದರೆ ಎದುರಾದ ನಿರುತ್ಸಾಹ ಆತನನ್ನು ಶಾಶ್ವತವಾಗಿ ಕನ್ನಡ ಪುಸ್ತಕೋದ್ಯಮದಿಂದ ದೂರಾಗುವಂತೆ ಮಾಡಿತು.
ಈ ಮೇಲೆ ಹೇಳಿದಂಥ ಸಮಸ್ಯೆಯನ್ನು ಇವತ್ತು ಕನ್ನಡದ ಬಹುತೇಕ ಪುಸ್ತಕ ಪ್ರಕಾಶಕರು ಎದುರಿಸುತ್ತಿರುವರು. ಪುಸ್ತಕಗಳ ಪ್ರಕಟಣೆಯ ಖರ್ಚು,ಅದ್ದೂರಿ ಸಮಾರಂಭದಲ್ಲಿ ಪುಸ್ತಕಗಳ ಬಿಡುಗಡೆ,ಪುಸ್ತಕಗಳ ಮಾರಾಟಕ್ಕಾಗಿ ವಿತರಕರನ್ನು ಹುಡುಕಿಕೊಂಡು ಅಲೆದಾಟ,ಓದುಗರು ಅಪೇಕ್ಷಿಸುತ್ತಿರುವ ಅಧಿಕ ರಿಯಾಯಿತಿ ಈ ಎಲ್ಲದರ ಪರಿಣಾಮ ಪುಸ್ತಕ ಪ್ರಕಟಣೆ ಎನ್ನುವುದು ಪ್ರಕಾಶಕರಿಗೆ ಹೊರೆಯಾಗುತ್ತಿದೆ. ಇಂಥದ್ದೊಂದು ಸಮಸ್ಯೆಯ ನಡುವೆಯೂ ಕರ್ನಾಟಕದಲ್ಲಿ ನೂರಾರು ಪ್ರಕಾಶಕರು ಪುಸ್ತಕೋದ್ಯಮದಲ್ಲಿ ತೊಡಗಿಸಿಕೊಂಡಿರುವುದನ್ನು ಕೆಲವರು ಉಲ್ಲೇಖಿಸಬಹುದು. ನಿಜವಾದ ಸಂಗತಿ ಎಂದರೆ ಅವರಲ್ಲಿ ಹೆಚ್ಚಿನವರು ಲೇಖಕರೇ ಪ್ರಕಾಶಕರಾಗಿ ತಮ್ಮ ಪುಸ್ತಕಗಳನ್ನು ಪ್ರಕಟಿಸುತ್ತಿರುವರೇ ವಿನಹ ಪೂರ್ಣಪ್ರಮಾಣದಲ್ಲಿ ಪುಸ್ತಕೋದ್ಯಮದಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಬಹಳಷ್ಟು ಕಡಿಮೆ. ಹೀಗೆ ಲೇಖಕರೆ ಪ್ರಕಾಶಕರಾದಾಗ ಒಂದೆರಡು ಪುಸ್ತಕಗಳ ಪ್ರಕಟಣೆಯ ಹೊತ್ತಿಗೆ ಹೈರಾಣಾಗಿ ಅವರು ಪುಸ್ತಕ ಪ್ರಕಟಣೆಯ ಕೆಲಸವನ್ನೆ ಕೈಬಿಡುತ್ತಿರುವರು. ಹೀಗಾಗಿ ಕನ್ನಡದಲ್ಲಿ ಪ್ರಕಾಶನ ಸಂಸ್ಥೆಗಳು ಹುಟ್ಟಿಕೊಂಡಷ್ಟೆ ವೇಗದಲ್ಲಿ ನಶಿಸಿ ಹೋಗುತ್ತಿವೆ. ಆದರೆ ಏನೆಲ್ಲ ಸಮಸ್ಯೆಗಳ ನಡುವೆಯೂ ಕೆಲವೊಂದು ಪ್ರಕಾಶನ ಸಂಸ್ಥೆಗಳು ಗಟ್ಟಿಯಾಗಿ ತಳವೂರಿ ಕನ್ನಡ ಪುಸ್ತಕಗಳ ಪ್ರಕಟಣೆಯ ಕೆಲಸವನ್ನು ಒಂದು ವ್ರತದಂತೆ ಮುನ್ನಡೆಸಿಕೊಂಡು ಹೋಗುತ್ತಿವೆ. ಅಂಥ ಪ್ರಕಾಶನ ಸಂಸ್ಥೆಗಳಿಗೆ ಉದಾಹರಣೆಯಾಗಿ ಮನೋಹರ ಗ್ರಂಥಮಾಲೆ,ರಾಷ್ಟ್ರೋತ್ಥಾನ ಮುದ್ರಣಾಲಯ,ಲೋಹಿಯಾ ಪ್ರಕಾಶನ, ನವಕರ್ನಾಟಕ ಪಬ್ಲಿಕೇಷನ್, ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ, ಸಪ್ನಾ ಬುಕ್ ಹೌಸ್ ಹೀಗೆ ಬೆರಳೆಣಿಕೆಯಷ್ಟು ಪ್ರಕಾಶನ ಸಂಸ್ಥೆಗಳ ಹೆಸರುಗಳನ್ನು ಹೇಳಬಹುದು.
ನಿಜಕ್ಕೂ ಪುಸ್ತಕ ಪ್ರಕಟಣೆ ಎನ್ನುವುದು ಅದೊಂದು ಪವಿತ್ರ ಕಾರ್ಯ. ಇಲ್ಲಿ ಪ್ರಕಾಶಕರು ಪುಸ್ತಕ ಪ್ರಕಟಣೆಯ ಮೂಲಕ ನಾಡಿನ ಸಾಂಸ್ಕೃತಿಕ ಬೆಳವಣಿಗೆಗೆ ಅವರು ಸಲ್ಲಿಸುತ್ತಿರುವ ಕೊಡುಗೆ ಅಭಿನಂದನಾರ್ಹ. ಕರ್ನಾಟಕ ಏಕೀಕರಣದಲ್ಲಿ ಲೋಕ ಶಿಕ್ಷಣ ಟ್ರಸ್ಟ್ ತನ್ನ ಪ್ರಕಟಣೆಯ ಮೂಲಕ ಅಂದು ಅದು ನಿರ್ವಹಿಸಿದ ಪಾತ್ರ ಕರ್ನಾಟಕದ ಇತಿಹಾಸದಲ್ಲಿ ದಾಖಲೆಯಾಗಿ ಉಳಿಯಿತು. ಲೇಖಕನೋರ್ವನ ಬೌದ್ಧಿಕ ವಿಚಾರವೊಂದು ಪುಸ್ತಕ ರೂಪದಲ್ಲಿ ಪ್ರಕಟವಾಗಿ ಅದು ಸಮಾಜದಲ್ಲಿ ಸೃಷ್ಟಿಸುವ ಸಂಚಲನ ಮತ್ತು ಆಗುವ ಬದಲಾವಣೆಗಳ ಹಿಂದೆ ಪ್ರಕಾಶಕರ ಪಾತ್ರ ಮಹೋನ್ನತವಾದದ್ದು. ತತ್ವಜ್ಞಾನಿಯೋರ್ವ ಪುಸ್ತಕಗಳನ್ನು ಮುಂದಿನ ಜನಾಂಗದ ಆಸ್ತಿ ಎಂದು ಕರೆದು ಪುಸ್ತಕಗಳ ಮಹತ್ವವನ್ನು ಇಡೀ ಜಗತ್ತಿಗೇ ತೋರಿಸಿಕೊಟ್ಟಿರುವನು. ‘ದಾಸ್ ಕ್ಯಾಪಿಟಲ್’ ನಂಥ ಕೃತಿ ದೇಶವೊಂದರ ಕ್ರಾಂತಿಗೆ ಕಾರಣವಾಯಿತು. ಗಾಂಧೀಜಿ ಅವರ ‘ಸತ್ಯದೊಂದಿಗೆ ನನ್ನ ಪ್ರಯೋಗಗಳು’ ಪುಸ್ತಕ ಇವತ್ತಿಗೂ ಓದುಗರನ್ನು ಆತ್ಮ ವಿಮರ್ಶೆ ಎನ್ನುವ ಕಟಕಟೆಯಲ್ಲಿ ಒಯ್ದು ನಿಲ್ಲಿಸುವ ಮಹತ್ವದ ಕೃತಿ. ಹೀಗೆ ಪುಸ್ತಕವೊಂದು ಕಟ್ಟಿಕೊಡುವ ಅನುಭವ ಮತ್ತು ಸೃಷ್ಟಿಸುವ ಸಂಚಲನದ ಹಿಂದೆ ಪ್ರಕಾಶಕರ ಶ್ರಮ ಹಾಗೂ ಸೃಜನಾತ್ಮಕ ಚಟುವಟಿಕೆಯಿದೆ. ಆದರೆ ಕಾಲಾನಂತರದಲ್ಲಿ ಆದ ಅನೇಕ ಬದಲಾವಣೆಗಳು ಮತ್ತು ಬೆಳವಣಿಗೆಗಳು ಇವತ್ತು ಕನ್ನಡ ಪುಸ್ತಕೋದ್ಯಮವನ್ನು ವಿನಾಶದಂಚಿಗೆ ತಂದು ನಿಲ್ಲಿಸಿವೆ. ಪರಿಣಾಮವಾಗಿ ಪುಸ್ತಕ ಪ್ರಕಟಣೆಯನ್ನು ಒಂದು ಉದ್ಯಮವಾಗಿ ಒಪ್ಪಿಕೊಳ್ಳುವ ಪ್ರಕಾಶಕರ ಸಂಖ್ಯೆ ರಾಜ್ಯದಲ್ಲಿ ಕ್ಷೀಣಿಸುತ್ತಿದೆ.
ಪುಸ್ತಕದ ಓದು ಮತ್ತು ವಾಹಿನಿಗಳ ಭರಾಟೆ
ಕಳೆದ ಒಂದು ದಶಕದಿಂದ ಕನ್ನಡದಲ್ಲಿ ವಾಹಿನಿಗಳ ಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಈ ಮೊದಲು ಸರ್ಕಾರದ ನಿಯಂತ್ರಣದಲ್ಲಿದ್ದ ದೂರದರ್ಶನವೊಂದೆ ಏಕೈಕ ಎಲೆಕ್ಟ್ರಾನಿಕ್ ಮನೋರಂಜನಾ ಮಾಧ್ಯಮವಾಗಿತ್ತು. ಆ ದೂರದರ್ಶನದಲ್ಲಿ ಮನೋರಂಜನೆ ಎನ್ನುವುದು ಅದರ ಕಾರ್ಯಕ್ರಮಗಳ ಒಂದು ಭಾಗವಾಗಿತ್ತೆ ವಿನ: ಮನೋರಂಜನೆಯೇ ಅದರ ಪೂರ್ಣ ಉದ್ದೇಶವಾಗಿರಲಿಲ್ಲ. ಪರಿಣಾಮವಾಗಿ ಅಂದಿನ ದೂರದರ್ಶನದ ವೀಕ್ಷಕರು ಪುಸ್ತಕದ ಓದುಗರು ಸಹ ಆಗಿದ್ದರು. ಇದಕ್ಕೆ ಕಾರಣವೆನೆಂದರೆ ದೂರದರ್ಶನದ ಕಾರ್ಯಕ್ರಮಗಳ ನಡುವೆಯೂ ವೀಕ್ಷಕರಿಗೆ ಪುಸ್ತಕಗಳ ಓದಿಗಾಗಿ ಸಾಕಷ್ಟು ಸಮಯ ದೊರೆಯುತ್ತಿತ್ತು. ಆದರೆ ಯಾವಾಗ ಮಾಧ್ಯಮದಲ್ಲಿ ಖಾಸಗಿ ವಾಹಿನಿಗಳು ಪ್ರಭುತ್ವ ಸಾಧಿಸಿದವೋ ಆಗ ಮನೋರಂಜನೆಯೇ ಪ್ರಧಾನವಾಗುತ್ತ ಹೋಯಿತು. ದಿನದ 24 ಗಂಟೆಗಳೂ ಖಾಸಗಿ ವಾಹಿನಿಗಳಲ್ಲಿ ಮನೋರಂಜನಾ ಕಾರ್ಯಕ್ರಮಗಳು ವೀಕ್ಷಿಸಲು ಲಭ್ಯವಿರುವುದರಿಂದ ಕಾಲಕ್ರಮೇಣ ಅತಿ ಹೆಚ್ಚಿನ ಓದುಗರು ವಾಹಿನಿಗಳ ವೀಕ್ಷಕರಾಗಿ ಬದಲಾದರು. ಹಿಂದೆ ಎಲ್ಲ ಮನೆಗಳಲ್ಲಿ ಗೃಹಣಿಯರು ತಮ್ಮ ಮನೆ ಕೆಲಸದ ನಡುವಿನ ಬಿಡುವಿನ ವೇಳೆಯನ್ನು ಓದುವಂಥ ಸೃಜನಾತ್ಮಕ ಹವ್ಯಾಸಕ್ಕಾಗಿ ಬಳಸಿಕೊಳ್ಳುತ್ತಿದ್ದರು. ಯಾವಾಗ ಖಾಸಗಿ ವಾಹಿನಿಗಳು ಭರಪೂರ ಮನೋರಂಜನೆಯನ್ನು ಕೊಡಲು ಆರಂಭಿಸಿದವೋ ಆಗ ಅವರೆಲ್ಲ ಓದಿನಿಂದ ದೂರಾದರು. ಇದರ ನೇರ ಪರಿಣಾಮವಾಗಿದ್ದು ಪುಸ್ತಕೋದ್ಯಮವನ್ನೇ ನಂಬಿಕೊಂಡು ಬದುಕುತ್ತಿದ್ದ ಪ್ರಕಾಶಕರ ಮೇಲೆ. ಮನೋರಂಜನೆಯು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ದೊರೆಯಲಾರಂಭಿಸಿದ ಮೇಲೆ ಪುಸ್ತಕಗಳನ್ನು ಖರೀದಿಸುವವರ ಸಂಖ್ಯೆ ಕ್ಷೀಣಿಸಲಾರಂಭಿಸಿತು. ಈ ಎಲೆಕ್ಟ್ರಾನಿಕ್ ಮಾಧ್ಯಮಗಳು ಸುದ್ದಿಯನ್ನು ಅತ್ಯಂತ ವೇಗವಾಗಿ ಬಿತ್ತರಿಸುತ್ತಿರುವ ಪರಿಣಾಮ ಮುಂಜಾನೆ ಮನೆ ಬಾಗಿಲಿಗೆ ಬಂದು ಬೀಳುವ ದಿನಪತ್ರಿಕೆಗಳಲ್ಲಿನ ಸುದ್ದಿಯೇ ನಮಗೆ ಹಳೆಯದಾಗಿ ಕಾಣಿಸುತ್ತಿದೆ. ಪೈಪೋಟಿಯ ಪರಿಣಾಮ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ವಾಹಿನಿಗಳು ರೋಚಕ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದರಿಂದ ಈ ಕಾರ್ಯಕ್ರಮಗಳೆದುರು ಪುಸ್ತಕದ ಓದು ಸಪ್ಪೆಯಾಗಿ ಕಾಣುತ್ತಿದೆ. ಒಟ್ಟಿನಲ್ಲಿ ಸಧ್ಯದ ಪರಿಸ್ಥಿತಿಯಲ್ಲಿ ಕನ್ನಡದ ಸಾಹಿತ್ಯವಲಯ ಅತಿ ಹೆಚ್ಚಿನ ಸಂಖ್ಯೆಯ ಓದುಗರನ್ನು ಕಳೆದುಕೊಂಡಿರುವುದು ಸತ್ಯಕ್ಕೆ ಹತ್ತಿರವಾದ ಸಂಗತಿ. ಪರಿಸ್ಥಿತಿ ಹೀಗಿರುವಾಗ ಪ್ರಕಾಶಕರು ಕನ್ನಡ ಪುಸ್ತಕಗಳ ಪ್ರಕಟಣೆಗೆ ಮುಂದಾಗುತ್ತಿಲ್ಲ.
ಮಾರಾಟ ಮತ್ತು ರಿಯಾಯಿತಿ
ಕನ್ನಡ ಪುಸ್ತಕಗಳ ಮಾರಾಟದಲ್ಲಿ ಪ್ರಕಾಶಕರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಎಂದರೆ ಅದು ಓದುಗರು ಪುಸ್ತಕಗಳ ಖರೀದಿಗಾಗಿ ಅಪೇಕ್ಷಿಸುತ್ತಿರುವ ಪುಸ್ತಕದ ಬೆಲೆಯ ಮೇಲಿನ ರಿಯಾಯಿತಿ. ಹೆಚ್ಚಿನ ಓದುಗರು ಪುಸ್ತಕವೊಂದನ್ನು ಅದರ ಪ್ರಕಟಿತ ಬೆಲೆಗೆ ಖರೀದಿಸುವ ಔದಾರ್ಯ ತೋರಿಸುತ್ತಿಲ್ಲವಾದ್ದರಿಂದ ಪ್ರಕಾಶಕರಿಗೆ ಕನ್ನಡ ಪುಸ್ತಕಗಳ ಮಾರಾಟದಲ್ಲಿ ಹಿನ್ನಡೆ ಉಂಟಾಗುತ್ತಿದೆ. ಇಂಗ್ಲಿಷ್ ಭಾಷೆಯ ಪುಸ್ತಕಗಳ ಮಾರಾಟದಲ್ಲಿನ ರಿಯಾಯಿತಿಯ ಧಾರಾಳತನವೇ ಕನ್ನಡ ಪುಸ್ತಕೋದ್ಯಮಕ್ಕೆ ಉರುಳಾಗಿ ಪರಿಣಮಿಸಿದೆ. ಇಂಗ್ಲಿಷ್ ಭಾಷೆಯ ಪುಸ್ತಕಗಳ ಖರೀದಿಯಲ್ಲಿ 30 ರಿಂದ 40 ಪ್ರತಿಶತ ರಿಯಾಯಿತಿ ಕೊಡುತ್ತಿರುವುದರಿಂದ ಓದುಗರು ಕನ್ನಡ ಪುಸ್ತಕಗಳಿಂದಲೂ ಇದನ್ನೇ ನಿರೀಕ್ಷಿಸುತ್ತಿರುವರು. ಇಂಗ್ಲಿಷ್ ಭಾಷೆಯ ಪುಸ್ತಕಗಳಿಗೆ ವಿಸ್ತೃತ ಮಾರುಕಟ್ಟೆ ಇರುವುದರಿಂದ ಹಾಗೂ ಕೆಲವೊಮ್ಮೆ ಪುಸ್ತಕ ವ್ಯಾಪಾರಿಗಳೇ ನಕಲು ಪ್ರತಿಗಳನ್ನು ಮುದ್ರಿಸಿ ಮಾರಾಟ ಮಾಡುವುದರಿಂದ ಇಲ್ಲಿ ನಷ್ಟಕ್ಕಿಂತ ಲಾಭವೇ ಹೆಚ್ಚು. ಆದರೆ ಇದೇ ಮಾತನ್ನು ಕನ್ನಡ ಪುಸ್ತಕಗಳ ಮಾರಾಟಕ್ಕೆ ಅನ್ವಯಿಸಿ ಹೇಳಲಾಗದು. ಕನ್ನಡ ಪುಸ್ತಕಗಳಿಗೆ ಸೀಮಿತ ಮಾರುಕಟ್ಟೆ ಇರುವುದರಿಂದ ಹೆಚ್ಚಿನ ರಿಯಾಯಿತಿ ನೀಡಿದಲ್ಲಿ ಪ್ರಕಾಶಕರಿಗೆ ನಷ್ಟವಾಗುವ ಸಾಧ್ಯತೆಯೇ ಅಧಿಕ.
ಕನ್ನಡ ಪುಸ್ತಕಗಳ ಮಾರಾಟದಲ್ಲಿ ಪ್ರಕಾಶಕರು ಎದುರಿಸುತ್ತಿರುವ ಇನ್ನೊಂದು ಬಹುಮುಖ್ಯ ಸಮಸ್ಯೆ ಎಂದರೆ ಅದು ಹಣ ಪಾವತಿಸುವಲ್ಲಿ ಆಗುತ್ತಿರುವ ವಿಳಂಬ. ಸಾಮಾನ್ಯವಾಗಿ ಪ್ರಕಾಶಕರು ತಮ್ಮ ಪುಸ್ತಕಗಳ ಮಾರಾಟಕ್ಕಾಗಿ ಅವರು ಹೆಚ್ಚು ಅವಲಂಬಿತರಾಗಿರುವುದು ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಪುಸ್ತಕ ಮಾರಾಟಗಾರರನ್ನು. ಆದರೆ ಯಾವ ಶಿಕ್ಷಣ ಸಂಸ್ಥೆಗಳಾಗಲಿ ಇಲ್ಲವೇ ಪುಸ್ತಕ ಮಳಿಗೆಗಳಾಗಲಿ ಮುಂಗಣ ಹಣ ಪಾವತಿಸಿ ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿಸಿದ ಉದಾಹರಣೆಯೇ ಇಲ್ಲ. ಇಲ್ಲಿ ಪ್ರಕಾಶಕ ಹಣ ಪಡೆಯುವುದಕ್ಕಾಗಿ ಅನೇಕ ತಿಂಗಳುಗಳ ಕಾಲ ಕಾಯಬೇಕಾಗುತ್ತದೆ. ಕೆಲವೊಮ್ಮೆ ಹಣ ಪಡೆಯುವುದಕ್ಕಾಗಿ ಪ್ರಕಾಶಕರು ನ್ಯಾಯಾಲಯದ ಮೆಟ್ಟಿಲು ಏರಿದ ಉದಾಹರಣೆಯೂ ಉಂಟು. ಹಲವು ಸಂದರ್ಭಗಳಲ್ಲಿ ಖರೀದಿಯಾದ ಪುಸ್ತಕಗಳು ತಿರಸ್ಕೃತಗೊಂಡು ಮತ್ತೆ ಮರಳಿ ಪ್ರಕಾಶಕರ ಕೈಸೇರುವುದುಂಟು. ಹೀಗೆ ಹೆಚ್ಚಿನ ರಿಯಾಯಿತಿಯ ಅಪೇಕ್ಷೆ, ಹಣ ಪಾವತಿಸುವಲ್ಲಿನ ವಿಳಂಬ, ಕನ್ನಡ ಪುಸ್ತಕಗಳ ಖರೀದಿಯಲ್ಲಿ ತೋರಿಸುತ್ತಿರುವ ನಿರಾಸಕ್ತಿ ಈ ಎಲ್ಲ ಕಹಿ ಘಟನೆಗಳಿಂದ ಅನೇಕ ಪ್ರಕಾಶನ ಸಂಸ್ಥೆಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ.
ಪುಸ್ತಕ ಪ್ರಕಟಣೆ ಮತ್ತು ಪ್ರಚಾರ
ಪುಸ್ತಕ ಪ್ರಕಟಣೆಗಾಗಿ ಬಳಸುವ ಕಚ್ಚಾ ಸಾಮಗ್ರಿಗಳ ಬೆಲೆ ಗಗನಕ್ಕೇರುತ್ತಿರುವುದರಿಂದ ಪ್ರಕಾಶಕರಿಗೆ ಪುಸ್ತಕಗಳ ಪ್ರಕಟಣೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಈ ನಡುವೆ ಪುಸ್ತಕಗಳನ್ನು ವರ್ಣರಂಜಿತ ಸಮಾರಂಭದ ಅದ್ದೂರಿ ವೇದಿಕೆಯ ಮೇಲೆ ಬಿಡುಗಡೆ ಮಾಡುವ ಪರಿಸ್ಥಿತಿ ಎದುರಾಗಿದೆ. ಪುಸ್ತಕ ಬಿಡುಗಡೆಯ ಆಹ್ವಾನ ಪತ್ರಿಕೆ, ಅತಿ ಗಣ್ಯರ ಅಧ್ಯಕ್ಷತೆ, ಆಹ್ವಾನಿತರಿಗೆ ಭೋಜನದ ವ್ಯವಸ್ಥೆ, ಪತ್ರಿಕಾ ಮಾಧ್ಯಮದವರಿಗೆ ಗೌರವ ಪ್ರತಿ ಹೀಗೆ ಅನೇಕ ಗಿಮಿಕ್ಗಳನ್ನು ಕನ್ನಡ ಪುಸ್ತಕಗಳ ಬಿಡುಗಡೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಕನ್ನಡ ಪುಸ್ತಕೋದ್ಯಮದಲ್ಲಿ ಪ್ರಕಾಶಕ ಉಳಿಯಲು ಇವುಗಳೆಲ್ಲ ಅನಿವಾರ್ಯವಾಗುತ್ತಿವೆ. ಜೊತೆಗೆ ಈ ದಿನಗಳಲ್ಲಿ ಪುಸ್ತಕವೊಂದು ದೊಡ್ಡ ಸಂಖ್ಯೆಯ ಓದುಗರವಲಯವನ್ನು ತಲುಪುವಂತಾಗಲು ಪ್ರಕಾಶಕರು ಈ ಹೊಸ ಬದಲಾವಣೆಗಳಿಗೆ ತಮ್ಮನ್ನು ತಾವು ತೆರೆದುಕೊಳ್ಳಬೇಕಾಗಿದೆ. ಪುಸ್ತಕಗಳ ಬಿಡುಗಡೆಯ ನಂತರವೂ ಚರ್ಚೆ, ಸಂವಾದಗಳ ಮೂಲಕ ವ್ಯಾಪಕ ಪ್ರಚಾರ ಒದಗಿಸಬೇಕಾಗಿದೆ. ಹೀಗೆ ಮಾಡಿದಾಗ ಮಾತ್ರ ಪ್ರಕಾಶಕ ಪುಸ್ತಕೋದ್ಯಮದಲ್ಲಿ ತಳವೂರಿ ನಿಲ್ಲಲು ಸಾಧ್ಯ. ಆದರೆ ಇದೆಲ್ಲ ಎಲ್ಲ ಪ್ರಕಾಶಕರಿಂದ ಸಾಧ್ಯವೇ? ಎನ್ನುವ ಪ್ರಶ್ನೆ ಇಲ್ಲಿ ಎದುರಾಗುತ್ತದೆ. ಇಂಥ ಸನ್ನಿವೇಶದಲ್ಲಿ ಇಲ್ಲಿ ಬಲವಿರುವ ಪ್ರಕಾಶಕ ಮಾತ್ರ ಉಳಿದು ಬೆಳೆಯಲು ಸಾಧ್ಯ.
ಓದುಗರ ಸೀಮಿತ ಓದು
ದೇವನೂರ ಮಹಾದೇವರ ‘ಎದೆಗೆ ಬಿದ್ದ ಅಕ್ಷರ’ ಪ್ರಕಟವಾದ ಒಂದು ತಿಂಗಳಲ್ಲೇ ಎರಡನೇ ಮುದ್ರಣ ಕಂಡಿತು. ದೇವನೂರರ ಪುಸ್ತಕಗಳ ಪ್ರಕಟಣೆಯ ನಡುವೆ ಸಾಕಷ್ಟು ಅಂತರವಿರುವುದರಿಂದ ಅವರ ಬರವಣಿಗೆಯ ಓದಿಗಾಗಿ ಕಾದು ಕುಳಿತಿದ್ದ ಓದುಗರು ಸಹಜವಾಗಿಯೇ ಪುಸ್ತಕವನ್ನು ಮುಗಿಬಿದ್ದು ಖರೀದಿಸಿದರು. ಓದುಗರ ಈ ಪ್ರಕಾರದ ಬೇಡಿಕೆಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ಪ್ರಕಾಶಕ ಬಹುಬೇಗ ಕೃತಿಯ ಎರಡನೇ ಮುದ್ರಣವನ್ನು ಹೊರತರುವನು. ಅನಂತಮೂರ್ತಿಯವರ ‘ಸುರಗಿ’ ಕಾರ್ನಾಡರ ‘ನೋಡನೋಡ್ತಾ ದಿನಮಾನ’ ಕೃತಿಗಳಿಗೂ ಇದೇ ರೀತಿಯ ಅನುಕೂಲಕರ ವಾತಾವರಣ ಎದುರಾಯಿತು. ಭೈರಪ್ಪನವರ ಕಾದಂಬರಿಗಳಿಗೆ ದೊಡ್ಡ ಓದುಗರ ಸಮೂಹವೇ ಇರುವುದರಿಂದ ಅದರ ಲಾಭವೇನಿದ್ದರೂ ‘ಸಾಹಿತ್ಯ ಭಂಡಾರ’ ಪ್ರಕಾಶನ ಸಂಸ್ಥೆಗೆ ಮೀಸಲು. ಇದಕ್ಕೆಲ್ಲ ಕನ್ನಡ ಪುಸ್ತಕಗಳ ಓದುಗರ ಓದಿನ ವ್ಯಾಪ್ತಿ ಸೀಮಿತವಾಗಿರುವುದೇ ಕಾರಣ.
ಕನ್ನಡದಲ್ಲಿ ಹೊಸ ಲೇಖಕರ ಪುಸ್ತಕಗಳನ್ನು ಓದುವ ಹಾಗೂ ಪೆÇ್ರೀತ್ಸಾಹಿಸುವ ಔದಾರ್ಯವನ್ನು ಓದುಗರು ತೋರಿಸುತ್ತಿಲ್ಲ. ಉತ್ತಮವಾದದ್ದು ಯಾವ ಲೇಖಕನಿಂದ ಬಂದರೂ ಅದನ್ನು ಓದಿ ಪ್ರೋತ್ಸಾಹಿಸುವ ಗುಣ ಕನ್ನಡದ ಓದುಗರಲ್ಲಿ ಬರಬೇಕು. ಹಾಗಾದಾಗ ಮಾತ್ರ ಲೇಖಕರೊಂದಿಗೆ ಪ್ರಕಾಶಕರೂ ಬೆಳೆಯಲು ಸಾಧ್ಯ. ನಮ್ಮ ಓದು ನಿರ್ಧಿಷ್ಟ ಲೇಖಕರ ಕೃತಿಗಳಿಗೆ ಸೀಮಿತವಾದರೆ ಒಂದರ್ಥದಲ್ಲಿ ಕೆಲವೇ ಪ್ರಕಾಶಕರು ಉಳಿದು ಬೆಳೆಯಲು ಅಪರೋಕ್ಷವಾಗಿ ನಾವುಗಳೇ ಕಾರಣರಾದಂತಾಗುವುದು. ಆದ್ದರಿಂದ ಕನ್ನಡ ಪುಸ್ತಕೋದ್ಯಮವನ್ನು ಉಳಿಸಿ ಬೆಳೆಸುವ ಮಹತ್ವದ ಜವಾಬ್ದಾರಿ ಓದುಗರ ಮೇಲಿದೆ.
ಎಲೆಕ್ಟ್ರಾನಿಕ್ ಮಾಧ್ಯಮ
ಕನ್ನಡದಲ್ಲಿ ಅನೇಕ ಯುವ ಬರಹಗಾರರು ಎಲೆಕ್ಟ್ರಾನಿಕ್ ಮಾಧ್ಯಮವಾದ ಇಂಟರ್ನೆಟ್ ಮೂಲಕ ಬರವಣಿಗೆಯ ಕೃಷಿಯಲ್ಲಿ ತೊಡಗಿಸಿಕೊಂಡಿರುವರು. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಬರಹಗಾರ ತನ್ನ ಬರಹದ ಪ್ರಕಟಣೆಗಾಗಿ ಪ್ರಕಾಶಕರನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇಲ್ಲದಿರುವುದರಿಂದ ಅತಿ ಹೆಚ್ಚಿನ ಬರಹಗಾರರು ಈ ಮಾಧ್ಯಮಕ್ಕೆ ವಲಸೆ ಬರುತ್ತಿರುವರು. ಇವತ್ತು ಎಲೆಕ್ಟ್ರಾನಿಕ್ ಮಾಧ್ಯಮ ಯುವ ಬರಹಗಾರರನ್ನಲ್ಲದೆ ಹಿರಿಯ ಲೇಖಕರನ್ನೂ ತನ್ನತ್ತ ಸೆಳೆಯುತ್ತಿದೆ. ಕನ್ನಡದ ಬ್ಲಾಗ್ಗಳಲ್ಲಿ ಅತ್ಯುತ್ತಮ ಲೇಖನಗಳು ಪ್ರಕಟವಾಗುತ್ತಿವೆ. ಜೊತೆಗೆ ಪ್ರಕಟವಾದ ಕೆಲವೇ ಕ್ಷಣಗಳಲ್ಲಿ ಪ್ರಾದೇಶಿಕ ಗಡಿಯನ್ನೂ ದಾಟಿ ಆ ಬರಹಗಳು ಹೆಚ್ಚಿನ ಸಂಖ್ಯೆಯ ಓದುಗರನ್ನು ಹೋಗಿ ತಲುಪುತ್ತಿವೆ. ಪರಿಣಾಮವಾಗಿ ಲೇಖಕರು ಈ ದಿನಗಳಲ್ಲಿ ತಮ್ಮ ಬರಹಗಳ ಪ್ರಕಟಣೆಗಾಗಿ ಪತ್ರಿಕೆ, ನಿಯತಕಾಲಿಕೆ ಮತ್ತು ಪುಸ್ತಕಗಳಿಗಾಗಿ ಕಾಯಬೇಕಾಗಿಲ್ಲ. ಒಂದು ಕಾಲದಲ್ಲಿ ಸಂಪಾದಕೀಯ ಲೇಖನಕ್ಕೆ ಮಾತ್ರ ಸೀಮಿತವಾಗಿರುತ್ತಿದ್ದ ದಿನಪತ್ರಿಕೆಗಳ ಸಂಪಾದಕರ ಬರವಣಿಗೆ ಇವತ್ತು ಪತ್ರಿಕೆಯ ಹೆಚ್ಚಿನ ಭಾಗಗಳಿಗೆ ವಿಸ್ತರಿಸುತ್ತಿದೆ. ಇದಕ್ಕೆಲ್ಲ ಕಾರಣ ಇವತ್ತಿನ ಬರಹಗಾರರು ಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ನೆಚ್ಚಿಕೊಂಡು ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಇಲ್ಲದಿರುವುದು. ಒಂದರ್ಥದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮ ಬರಹಗಾರರಿಗೆ ಒಂದು ವೇದಿಕೆಯೊದಗಿಸುವುದರ ಜೊತೆಗೆ ಪ್ರಕಾಶಕರನ್ನು ನಿರುದ್ಯೋಗಿಗಳನ್ನಾಗಿಸುತ್ತಿದೆ.
ಕೊನೆಯ ಮಾತು
ಕನ್ನಡದಲ್ಲಿ ಪುಸ್ತಕೋದ್ಯಮದ ಮಾತು ಬಂದಾಗ ನೆನೆಯಲೇ ಬೇಕಾದ ವ್ಯಕ್ತಿತ್ವ ಜಿ.ಬಿ.ಜೋಶಿ ಅವರದು. ಮನೋಹರ ಗ್ರಂಥಮಾಲೆ ಮೂಲಕ ಕನ್ನಡ ಪುಸ್ತಕಗಳನ್ನು ಪ್ರಕಟಿಸಿ ನಾಡಿನ ಮೂಲೆ ಮೂಲೆಗೂ ತಲುಪುವಂತೆ ಮಾಡಿದ ಅವರನ್ನು ಸಹಜವಾಗಿಯೇ ಕನ್ನಡ ಪುಸ್ತಕೋದ್ಯಮದ ಭೀಷ್ಮ ಎಂದು ಕರೆಯಲಾಗಿದೆ. ಪುಸ್ತಕದ ಗಂಟನ್ನು ತಲೆಯ ಮೇಲೆ ಹೊತ್ತುಕೊಂಡು ಊರೂರು ಅಲೆದ ಜಿಬಿ ಅವರ ಪರಿಶ್ರಮ ಹಾಗೂ ಕನ್ನಡ ಪ್ರೇಮ ಇವತ್ತಿನ ತರುಣ ಓದುಗರಿಗೆ ಅರ್ಥವಾಗಬೇಕು ಜೊತೆಗೆ ಕನ್ನಡ ಪುಸ್ತಕಗಳನ್ನು ಓದಬೇಕೆನ್ನುವ ವಾಂಛೆಯೊಂದು ನಮ್ಮೊಳಗೆ ಟಿಸಿಲೊಡೆದು ಬೆಳೆಯಲು ಪ್ರೇರಣೆಯಾಗಬೇಕು. ಅದುವೇ ನಾವು ಆ ಪುಸ್ತಕ ಪ್ರಕಟಣೆಯ ಭೀಷ್ಮನಿಗೆ ಸಲ್ಲಿಸುವ ನಿಜವಾದ ಗೌರವ.
ಚಿತ್ರಕೃಪೆ : ದಿ.ಹಿಂದೂ