ನಿಲುಮೆ ಪ್ರಕಾಶನದ ಪುಸ್ತಕ ಬಿಡುಗಡೆಯ ಬಗ್ಗೆ “ನಿಲುಮಿಗನ” ವರದಿ
– ಹರೀಶ್ ಆತ್ರೇಯ
ನಿಲುಮೆ ಬಳಗದ ಎರಡನೆಯ ಕಾಣ್ಕೆಯಾಗಿ ’ಬುದ್ಧಿಜೀವಿಗಳ ಮೂಢನಂಬಿಕೆಗಳು’ ಮತ್ತು ’ಕೊಟ್ಟಕುದುರೆಯನೇರಲರಿಯದೆ’ ಎಂಬ ಪುಸ್ತಕಗಳ ಲೋಕಾರ್ಪಣೆಯ ಕಾರ್ಯಕ್ರಮ ದಿನಾಂಕ ೦೨ ಆಗಸ್ಟ್ ೨೦೧೫ ರಂದು ಮಿಥಿಕ್ ಸೊಸೈಟಿಯಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀ ಷಣ್ಮುಖರವರು, ಮುಖ್ಯ ಅಥಿತಿಗಳಾಗಿ ಶ್ರೀ ವಿಶ್ವೇಶ್ವರ ಭಟ್ ರವರು ವೇದಿಕೆಯಲ್ಲಿ ಆಸೀನರಾಗಿದ್ದರು. ಅನುವಾದಕ ಲೇಖಕ ಪ್ರೊ ರಾಜಾರಾಮ್ ಹೆಗಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮವು ಚಿತ್ರ ಪ್ರಸನ್ನ ಅವರ ಪ್ರಾರ್ಥನೆಯೊಂದಿಗೆ ಆರಂಭವಾಗಿ ನವೀನ್ ಕುಮಾರ್ ರವರ ಸ್ವಾಗತದಿಂದ ಮುನ್ನಡೆದು ಯಶಸ್ವಿನಿಯವರ ನಿರೂಪಣೆಯಲ್ಲಿ ಕಳೆಗಟ್ಟಿತು.
ಕಳೆದ ಆರು ವರ್ಷಗಳಿಂದ ಬೌದ್ಧಿಕ ವಿಷಯಗಳನ್ನು ಮಂಡಿಸುತ್ತಿರುವ ನಿಲುಮೆ ಬ್ಲಾಗಿಗರು ತಮ್ಮ ಸಿದ್ದಾಂತಗಳಿಂದ ಮತ್ತು ಬೌದ್ಧಿಕತೆಯಿಂದ ಹೆಚ್ಚು ಪ್ರಕಾಶಗೊಂಡಿದ್ದಾರೆ. ಕಳೆದ ವರ್ಷ ’ಬೌದ್ಧಿಕ ದಾಸ್ಯದಲ್ಲಿ ಭಾರತ’ ಎಂಬ ಪುಸ್ತಕದ ಲೋಕಾರ್ಪಣೆಯ ನಂತರ ಅದರ ಮುಂದುವರೆದ ಭಾಗವಾಗಿ ಬುದ್ಧಿಜೀವಿಗಳ ಮೂಡನಂಬಿಕೆಗಳು ಲೋಕಾರ್ಪಣೆಯಾಗಿದೆ. ’ಬೌದ್ಧಿಕ ದಾಸ್ಯದಲ್ಲಿ ಭಾರತ’ ಬ್ರಿಟಿಶ್ ವಸಾಹತು ಪ್ರಜ್ಞೆಯ ಪ್ರವೇಶಿಕೆಯಾದರೆ ’ಬುದ್ಧಿಜೀವಿಗಳ ಮೂಡ ನಂಬಿಕೆಗಳು’ ಪುಸ್ತಕವು ಮೊದಲ ಬೆಳಕಿನ ಕಿರಣವಾಗಿದೆ. ಕ್ರಿಶ್ಚಿಯನ್ ಥಿಯಾಲಜಿಯ ನೆಲೆಗಟ್ಟಲ್ಲಿ ನೋಡಿದ ಮತ್ತು ನೋಡುತ್ತಿರುವ ನಮ್ಮ ಬುದ್ಧಿಜೀವಿಗಳ (ಕು)ತರ್ಕಗಳಿಗೆ ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಸಿದ್ದಾಂತವನ್ನು ಪ್ರೊ ಬಾಲು ರವರು ಬಲವಾದ ಪೆಟ್ಟು ಕೊಟ್ಟಿದ್ದಾರೆ. ಅವರು ತಮ್ಮ The Heathen in his blindness ಎಂಬ ಸಂಶೋಧನಾ ಗ್ರಂಥದಲ್ಲಿ ಎಲ್ಲ ಕುತರ್ಕಗಳಿಗೂ ಸಮಗ್ರವಾಗಿ ಸಾದಾರವಾಗಿ ಉತ್ತರಿಸಿದ್ದರೂ ಅದು ಹೆಚ್ಚು ಜನರಿಗೆ ತಲುಪದಿದ್ದುದ್ದರಿಂದ ಮತ್ತು ಅರ್ಥೈಸಿಕೊಳ್ಳಲು ಸುಲಭದ ತುತ್ತಲ್ಲವಾದ್ದರಿಂದ ಪ್ರೊ ರಾಜಾರಾಮ ಹೆಗಡೆಯವರು ಅದನ್ನು ಇನ್ನೂ ಸರಳಗೊಳಿಸಿ ಕನ್ನಡದಲ್ಲಿ ತಂದಿದ್ದಾರೆ.
ಪ್ರೊ ಬಾಲುರವರ ಕ್ರಮದಲ್ಲೇ ಅಭ್ಯಸಿಸುತ್ತಿರುವ ಮತ್ತು ಸಂಶೋಧಿಸಿತ್ತಿರುವ ತಂಡದ ಮತ್ತೊಂದು ಕಾಣ್ಕೆ ಕೊಟ್ಟ ’ಕುದುರೆಯನೇರಲರಿಯದೆ’ . ವಚನ ಸಾಹಿತ್ಯವನ್ನು ಕ್ರಾಂತಿಯೆಂದು ಅಥವಾ ಅದನ್ನು ಚಳುವಳಿಯೆಂದು ಇಲ್ಲಿಯವರೆಗೂ ನಂಬಿರುವ ಮತ್ತು ಅದನ್ನು ಜೀವಂತವಾಡುವುದರಲ್ಲಿಯೇ ಜೀವಂತವಾಗಿರುವ ಬುದ್ದಿಜೀವಿಗಳ ತಂಡಕ್ಕೆ, ವಚನ ಸಾಹಿತ್ಯ ಅನುಭಾವ ಸಾಹಿತ್ಯ ಮತ್ತು ಅದನ್ನು ನೋಡುವ ನೆಲೆ ಆಧ್ಯಾತ್ಮದ್ದು ಎನ್ನುವುದನ್ನು ಪ್ರೌಢ ಲೇಖನಗಳ ಮೂಲಕ ತೊರಿಸಿರುವುದು ’ಕೊಟ್ಟಕುದುರೆಯನೇರಲರಿಯದೆ’ ಪುಸ್ತಕದ ಹೆಮ್ಮೆ.
ಮುಖ್ಯ ಅಥಿತಿಗಳ ಮಾತು : ಬುದ್ದಿಜೀವಿಗಳ ಮೂಡನಂಬಿಕೆಗಳು ಪುಸ್ತಕವು ಬೇರೊಂದು ಪ್ರಕಾಶನದಿಂದ ಪ್ರಕಟವಾಗಿದ್ದರೆ ಇದರ ಮೌಲ್ಯ ಮತ್ತು ನೈತಿಕತೆಯನ್ನು ಹಲವಾರು ರೀತಿಗಳಲ್ಲಿ ಅರ್ಥೈಸಿಕೊಳ್ಳುತ್ತಿದ್ದರು, ಬರೆದವನ ಜಾತಿ ಪ್ರಕಾಶಕನಜಾತಿ ಮುದ್ರಕನ ಜಾತಿ ಎಲ್ಲವೂ ಮುಖ್ಯವಾಗಿ ಪುಸ್ತಕದ ವಿಷಯವೇ ಗೌಣವಾಗುವ ಎಲ್ಲ ಸಾಧ್ಯತೆಗಳಿದ್ದವು, ಆದರೆ ಇದನ್ನು ನಿಲುಮೆಯೇ ಪ್ರಕಾಶಪಡಿಸುತ್ತಿರುವುದು ನಿಜಕ್ಕೂ ಮೆಚ್ಚುವ ಕಾರ್ಯ. ಇತ್ತೀಚೆಗೆ ಸುದ್ದಿಮನೆಗಳಲ್ಲಿ ನಿಲುಮೆಯಲ್ಲಿನ ಚರ್ಚೆಗಳನ್ನು ಗಣನೆಗೆ ತೆಗೆದುಕೊಂಡು ಲೇಖನಗಳನ್ನು ಮತ್ತು ವಿಷಯಗಳನ್ನು ಬರೆಯುತ್ತಿರುವುದು ನಿಲುಮೆಯ ಹೆಚ್ಚುಗಾರಿಕೆಯಾಗಿದೆ. ಕಾರಣ ಇಲ್ಲಿನ ಬೌದ್ದಿಕ ಚರ್ಚೆಗಳಿ ಹೊಸ ಕ್ರಾಂತಿಯನ್ನು ಹುಟ್ಟುಹಾಕುತ್ತಿವೆ.
ಪ್ರಸ್ತುತ ಪುಸ್ತಕವು ಹಲವಾರು ಜನರ ನಂಬಿಕೆ ಮತ್ತು ವಿಚಾರಗಳನ್ನು ಕದಲಿಸುತ್ತದೆಯಾದ್ದರಿಂದ ಈ ಪುಸ್ತಕವು ಹೆಚ್ಚು ಮೌಲ್ಯಯುತವಾಗಿದೆ. ಸತ್ಯಗಳನ್ನು ನೇರವಾಗಿ ಹೇಳಿದರೆ ಒಪ್ಪಿಕೊಳ್ಳದ ಮನಸ್ಸುಗಳು ಸುದ್ದಿಮನೆಯ ಮುಖ್ಯದ್ವಾರದಲ್ಲಿ ಕುಳಿತು ದಿಡ್ಡಿಬಾಗಿಲನ್ನು ಕಾಯುತ್ತಾ ಅಡ್ಡಗಾಲಾಗಿರುವುದು ವಿಷಾಯದನೀಯ. ಯಾರೋ ಒಪ್ಪಿಸಿದ ಅಥವಾ ಸ್ವತಃ ಅರ್ಥೈಸಿಕೊಳ್ಲಲಾರದ ಸಿದ್ದಾಂತಗಳನ್ನು ಬಲವಂತವಾಗಿ ಆರೋಪಿಸಿಕೊಂಡು ತೊಳಲಾಡುವ ಸೋಗಲಾಡೀ ಬುದ್ದಿಜೀವಿಯೊಬ್ಬರ ಉದಾಹರಣೆಯ ಮೂಲಕ ಬುದ್ದಿಜೀವಿಗಳ ಬಣ್ಣವನ್ನು ವಿಶ್ವೇಶ್ವರಭಟ್ಟರು ಬಯಲು ಮಾಡಿದರು.ತಮ್ಮನ್ನು ತಾವು ಪ್ರಗತಿಪರರೆಂದು ಕರೆದುಕೊಳ್ಳುವ ವ್ಯಕ್ತಿಗಳನ್ನು ಪ್ರಶ್ನಿಸುತ್ತಾ, ಪ್ರಗತಿಪರರೆಂದರೆ ಯಾರು ಮತ್ತು ಅದಕ್ಕಿರುವ ಅರ್ಹತೆಗಳೇನು ಎಂಬುದಾಗಿ ಛೇಡಿಸಿದರು.
ಶ್ರೀ ಎಂ ಎಸ್ ಚೈತ್ರ : ‘ಕೊಟ್ಟಕುದುರೆಯನೇರಲರಿಯದೆ’ ಪುಸ್ತಕವನ್ನು ಪರಿಚಯಿಸುತ್ತಾ, ಶ್ರೀ ಡಂಕಿನ್ ಜಳಕಿಯವರ ಸಂಶೋದನೆಯ ಕಿಡಿಯಾದ ವಚನಸಾಹಿತ್ಯ ಚಳುವಳಿಯ ನಿಜರೂಪವನ್ನು ಲೇಖನಗಳ ಮೂಲಕ ಪ್ರಸ್ತುತ ಪುಸ್ತಕಗಳಲ್ಲಿ ಟಂಕಿಸಲಾಗಿದೆ. ಪ್ರಜಾವಾಣಿಯಲ್ಲಿ ಪ್ರಕಟವಾದ ವಚನಸಾಹಿತ್ಯ ಚಳುವಳಿಯ ನಿಜರೂಪ ಲೇಖನಕ್ಕೆ ಬಂದ ತೀವ್ರವಾದ ಪ್ರತಿಕ್ರಿಯೆಗಳು ಈ ಪುಸ್ತಕದ ಪ್ರಕಟನೆಗೆ ಕಾರಣವಾಗಿದೆ. ವಿಮರ್ಶೆಯೆಂದರೆ ಅರ್ಥವಾಗದ ಸಾಲುಗಳನ್ನು ಹೆಣೆಯುವ ಬುದ್ದಿಜೀವಿಗಳ ಮೌಡ್ಯವನ್ನು ವಿಡಂಬಿಸುತ್ತಾ ಚೈತ್ರರವರು ಯುರೊಪಿನ ಪೂರ್ವಗ್ರಹಿಕೆಯಲ್ಲಿ ವಚನಗಳನ್ನು ನೋಡುವುದು ಹಾಸ್ಯಾಸ್ಪದ ಮತ್ತು ತಪ್ಪು ಕ್ರಮವೆಂದು ಈ ಪುಸ್ತಕ ನಿರೂಪಿಸುತ್ತದೆ. ಜ್ಞಾನಮಾರ್ಗವನ್ನು ಆಧರಿಸಿ ವಚನಸಾಹಿತ್ಯವನ್ನು ನೋಡಬೇಕೇ ವಿನಃ ಕ್ರಿಶ್ವಿಯನ್ ಥಿಯಾಲಜಿಯ ಚೌಕಟ್ಟಿನಲ್ಲಿ ನೋಡುವುದು ಸರಿಯಾದ ಮಾರ್ಗವಲ್ಲವೆಂದು ಹೇಳಿದರು.
ಶ್ರೀ ರಾಜಾರಾಮ್ ಹೆಗಡೆ : ಪಾಶ್ಚಾತ್ಯರ ಕನ್ನಡಕದಲ್ಲಿ ನಮ್ಮ ಸಂಸ್ಕೃತಿಯನ್ನು ವಿಮರ್ಶಿಸಿದ್ದು ಮತ್ತು ಅದನ್ನೇ ಇತಿಹಾಸ (ಪಾಶ್ಚಾತ್ಯರ ಪ್ರಕಾರ ಹಿಸ್ಟರಿ) ವೆಂದು ಕರೆದದ್ದು ದೊಡ್ಡ ದುರಂತ. ಹಲವಾರು ಪದಗಳನ್ನು ಅರ್ಥಕೋಶದಲ್ಲಿ ಹುಡುಕಿ ಬರೆದು ಮಾಡಿದ ಅಪಸವ್ಯಗಳೇ ಈ ಎಲ್ಲ ತೊಡಕು ಒಡಕುಗಳಿಗೆ ಕಾರಣವಾಗಿದೆ. ಆಧ್ಯಾತ್ಮದ ಮೂಲ ಎಲ್ಲರನ್ನು ಒಗ್ಗೂಡಿಸುವುದಾಗಿದೆ ಆದರೆ ಪಾಶ್ಚಾತ್ಯರ ಕೈಯಲ್ಲಿ ಸಿಕ್ಕ ನಮ್ಮ ಗ್ರಂಥಗಳು ಅವರ ಕಣ್ಣಿನಲ್ಲಿ ಅವರದೇ ದೇಶದಲ್ಲಿ ನಡೆದ ಘಟನೆಗಳನ್ನು ತಾಳೆಹಾಕಿ, ’ಹೀಗಾಗಿರಬಹುದೆಂಬ’ ಮೌಡ್ಯ ಈ ಎಲ್ಲ ಅನಾಹುತಕ್ಕೆ ಕಾರಣವಾಗಿದೆ ಎಂದರು.
ಶ್ರೀ ಷಣ್ಮುಖ : ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಲೇಖಕರನ್ನು ಪರಿಚಯಿಸಿ ಅವರ ಕೊಡುಗೆಯನ್ನು ನೆನೆದರು. ವ್ಯವಸ್ಥಿತವಾಗಿ ಸತ್ಯಮಾರ್ಗವನ್ನು ಹಣಿಯುವ ಕೆಲಸ ನಡೆದುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಶ್ರೀ ಭಾಸ್ಕರ್ ರವರು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ನಿಲುಮೆಯ ನಿಲುವು ಎಲ್ಲರಿಗೂ ತಲುಪುತ್ತಿದೆ, ಬೆಳಕಿನ ಕಿರಣಗಳು ಹರಡುತ್ತಿವೆ.
(y)
great ಅಂತ ನನ್ನ ಭಾವ.
super sir
ನಿಲುಮೆ ಪ್ರಕಾಶನದ ಹೊಸ ಪುಸ್ತಕಗಳು ಬಿಡುಗಡೆಗೊಂಡಿದ್ದು ಸಂತೋಷಕರ ಬೆಳವಣಿಗೆ. ಕನ್ನಡ ಪುಸ್ತಗಳಿಗೆ ನನ್ನ ಸ್ವಾಗತವಿದ್ದೇ ಇದೆ. ಆದರೆ ಇಂತಹ ಸಂದರ್ಭದಲ್ಲಿ ಸಂಕುಚಿತ ಮನೋಧೋರಣೆಯನ್ನು ಮೀರುವಂತಹ ಕ್ರಮಗಳನ್ನು ನಿಲುಮೆಯ ವ್ಯವಸ್ಥಾಪಕರು ಕೈಗೊಂಡಿದ್ದರೆ ಇನ್ನಷ್ಟು ಸಂತೋಷವಾಗುತ್ತಿತ್ತು. ಉದಾಹರಣೆಗೆ ಕನ್ನಡ ಬುದ್ಧಿಜೀವಿಗಳನ್ನು ಟೀಕಿಸುವ ಪುಸ್ತಕಕ್ಕೆ ಪ್ರತಿಯಾಗಿ ಪ್ರತಿಪಕ್ಷದ ಬುದ್ಧಿಜೀವಿಯೋಬ್ಬರಿಂದ ಉಪನ್ಯಾಸ ಇರಿಸಬಹುದಿತ್ತು. ರಹಮತ್ ತರಿಕೆರೆ ಅಥವಾ ಎಸ್ ಜಿ ಸಿದ್ದರಾಮಯ್ಯನವರನ್ನು ಕರೆಸಿ ಅವರಿಂದ ಭಾಷಣ ಮಾಡಿಸಬಹುದಿತ್ತು. ವಚನ ಸಾಹಿತ್ಯದ ಬಗ್ಗೆ ಬಾಲಗಂಗಾಧರ ಅವರ ನಿಲುವುಗಳಿಗೆ ಪ್ರತಿಯಾಗಿ ರಂಜಾನ್ ದರ್ಗಾ ಅಥವಾ ಕೋಟಗಾನಹಳ್ಳಿ ರಾಮಯ್ಯನವರಿಂದ ಭಾಷಣ ಮಾಡಿಸಬಹುದಿತ್ತು. ಬಾಲು ಅವರ ನಿಲುವುಗಳು ನಿಲುಮೆಯ ವ್ಯವಸ್ಥಾಪಕರಿಗೆ ಭಗವದ್ಗೀತೆಯಷ್ಟೇ ಸತ್ಯವೆನಿಸಿದರೂಬಾಲು ಅವರ ತತ್ವಗಳಾಚೆಗೂ ಕನ್ನಡ ಬೌದ್ಧಿಕ ಲೋಕ ಹರಡಿದೆ. ಎಲ್ಲಾ ತತ್ವಗಳ ಎಲ್ಲೆ ಮೀರಬಯಸುವವರು ಬಾಲು ಅವರಿಗಿಂತ ಭಿನ್ನವಾಗಿ ಚಿಂತಿಸುವವರ ಧ್ವನಿಯನ್ನು ಕೇಳಬೇಕಲ್ಲವೇ?
ಮೊದಲಿಗೆ ಆ ಪುಸ್ತಕವು ಬುದ್ಧಿಜೀವಿಗಳನ್ನು ಬೈಯುವದಿಲ್ಲ. ಬುದ್ಧಿಜೀವಿಗಳಲ್ಲಿನ ನಂಬಿಕೆಗಳಿಗೆ ಕಾರಣಗಳನ್ನು ವಿವರಿಸಲಾಗಿದೆ. ಒಬ್ಬರು ಒಂದು ಸಿದ್ಧಾಂತ ಮಂಡಿಸುತ್ತಾರೆ ಎಂದಾದರೆ ಅದರ ಹಿಂದಿನ ಊಹೆಗಳೇನು ಎಂಬುದಷ್ಟೇ ಇಲ್ಲಿ ತಿಳಿಸಲಾಗಿದೆ. ಉದಾಹರಣೆಗೆ ಬುದ್ಧಿಜೀವಿಗಳು ಮಾಂಸಾಹಾರವನ್ನು ವಿರೋಧಿಸುವದಿಲ್ಲ. ಆದರೆ ದೇವಸ್ಥಾನಗಳ ಪ್ರಾಣಿಬಲಿಯನ್ನು ಮೂಢನಂಬಿಕೆ ಎಂದು ವಿರೋಧಿಸುತ್ತಾರೆ. ಇದಕ್ಕೆ ಕಾರಣ ಏನು? ಜೀವಗಳ ಮೇಲಿನ ಪ್ರೀತಿಯೇ? ಖಂಡಿತ ಅಲ್ಲ. ಹಾಗಿದ್ದರೆ ಅವರು ಮಾಂಸಾಹಾರವನ್ನೂ ವಿರೋಧಿಸಬೇಕಿತ್ತು. ಇವರಿಗೆ ಕುರಿಯನ್ನು ಅಡುಗೆ ಮನೆಯಲ್ಲಿ ಕಡಿಯಲು ತಕರಾರಿಲ್ಲ. ದೇವರ ಮುಂದೆ ಕಡಿಯುವದಷ್ಟೇ ತಕರಾರು. ಇದಕ್ಕೆ ಕಾರಣ ಏನು?
ಬಾಲಗಂಗಾಧರರ ಲಾಜಿಕ್ಕು ಇಲ್ಲಿ ಕೆಲಸಕ್ಕೆ ಬರುತ್ತದೆ. ಕ್ರಿಶ್ಚಿಯಾನಿಟಿಯಲ್ಲಿ ಏಸುವು ಜನರ ಪಾಪಗಳನ್ನು ತೆಗೆದುಕೊಂಡು ಕ್ರೂಸಿಫೈ ಆಗುತ್ತಾನೆ. ಹೀಗಾಗಿ ಇನ್ನು ಮುಂದೆ ದೇವನಿಗಾಗಿ ಯಾವ ಬಲಿಯನ್ನೂ ನೀಡುವ ಅಗತ್ಯವಿಲ್ಲ ಎಂದು ಕ್ರಿಶ್ಚಿಯಾನಿಟಿ ಸಾರುತ್ತದೆ. ಹೀಗಾಗಿ ಅವರ ಗ್ರಂಥಗಳ ನಂಬಿಕೆಗೆ ವಿರುದ್ಧವಾದ ಆಚರಣೆಗಳು ಸುಪರ್ಸ್ಟಿಷನ್ ಎನಿಸಿಕೊಳ್ಳುತ್ತದೆ. ಹೀಗಾಗಿ ನಾವು ಮೂರ್ತಿ ಪೂಜೆ, ಇಷ್ಟಲಿಂಗ ಪೂಜೆ ಮಾಡುವದು, ದೇವರಿಗೆ ಪ್ರಾಣಿಬಲಿ ನೀಡುವದು ಮೂಢನಂಬಿಕೆ ಎನ್ನಿಸುವದು ಸಹಜ. ಆದರೆ ನಾವೇಕೆ ಅದನ್ನೇ ಇಟ್ಟುಕೊಳ್ಳಬೇಕು?
ಈ ಪುಸ್ತಕಕ್ಕೆ ಪ್ರತಿಕ್ರಿಯೆ ನೀಡುವ ಮೊದಲು ಅದನ್ನು ಓದಬೇಕಾಗುತ್ತದೆ. ಇದರ ಮೊದಲನೇ ಭಾಗವನ್ನು ಈ ಮುಂಚೆಯೇ ಬಿಡುಗಡೆ ಮಾಡಲಾಗಿತ್ತು. ಒಂದು ವೇಳೆ ಯಾರಾದರೂ ಅದನ್ನು ಓದಿ ವಾದಿಸಲು ಬಂದಿದ್ದರೆ ಇಲ್ಲವೇ, ಈ ಪುಸ್ತಕವನ್ನೇ ಮುಂಚೆಯೇ ಓದಿಕೊಂಡು ಬಂದಿದ್ದರೆ ಖಂಡಿತ ಇದಕ್ಕೆ ಅವಕಾಶವನ್ನು ನೀಡಲಾಗುತ್ತಿತ್ತು. ನಾನು ಸ್ವತಃ ಕೆಲವು ವಿರೋಧಿಗಳಿಗೆ ಇಲ್ಲಿನ ಸಿದ್ಧಾಂತಗಳ ಕುರಿತು ಚರ್ಚಿಸಲು ಕರೆದೆವು. ಆದರೆ ಈ ಸಿದ್ಧಾಂತಗಳನ್ನು ಓದಲೂ ತಯಾರಿಲ್ಲದ ಬುದ್ಧಿಜೀವಿಗಳು ಇನ್ನು ಇದಕ್ಕೆ ಪ್ರತ್ಯುತ್ತರವನ್ನಾದರೂ ನೀಡುವರೇ?
“ಈ ಪುಸ್ತಕಕ್ಕೆ ಪ್ರತಿಕ್ರಿಯೆ ನೀಡುವ ಮೊದಲು ಅದನ್ನು ಓದಬೇಕಾಗುತ್ತದೆ.”
ಇದು ಒಪ್ಪುವಂತಹ ಮಾತು.
“ನಾನು ಸ್ವತಃ ಕೆಲವು ವಿರೋಧಿಗಳಿಗೆ ಇಲ್ಲಿನ ಸಿದ್ಧಾಂತಗಳ ಕುರಿತು ಚರ್ಚಿಸಲು ಕರೆದೆವು.”
ಬಹಳ ಸಂತೋಷವಾಯಿತು ಇದನ್ನು ಕೇಳಿ. ತಾವು ಯಾರು ಯಾರನ್ನು ಕರೆದಿರಿ ಚರ್ಚೆಗೆ ಅಂತ ತಿಳಿಸಬಹುದೇ? ಸುಮ್ಮನೆ ಅನುಮಾನ ಪಡುವುದು ತಪ್ಪುತ್ತದೆ.
“ಬುದ್ಧಿಜೀವಿಗಳು ಇನ್ನು ಇದಕ್ಕೆ ಪ್ರತ್ಯುತ್ತರವನ್ನಾದರೂ ನೀಡುವರೇ?”
ತಾವು ಎಲ್ಲಾ ಬುದ್ಧಿಜೀವಿಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುತ್ತಿದ್ದೀರಿ. ದಯವಿಟ್ಟು ಈ ಎರಡು ಪುಸ್ತಕಗಳನ್ನು ನಾನು ಹೆಸರಿಸಿದ ಬುದ್ಧಿಜೀವಿಗಳಿಗೆ ಕಳುಹಿಸಿ ನೋಡಿ. ಮತ್ತು ಎಚ್ ಎಸ್ ಶಿವಪ್ರಕಾಶ್ ಅವರಿಗೂ.
ಬಿದರಿಯವರೇ ತಾವು ಹೆಸರಿಸಿದ, ಇನ್ನೂ ಹೆಸರಿಸಬಹುದಾದಂಥ ಅನೇಕ “ಬುದ್ಧಿಜೀವಿಗಳು” ನಾಲ್ಕಾರು ವಚನಗಳನ್ನು ಇಟ್ಟುಕೊಂಡೇ ಯಾವ ಅಭಿಪ್ರಾಯಕ್ಕೆ ಬಂದಿದ್ದಾರೆ, ಉಳಿದ ವಚನಗಳ ಕತೆ ಏನು ಎಂಬುದರ ಆಮೂಲಾಗ್ರ, ಖಚಿತ ಪುರಾವೆಗಳನ್ನು ದಾಖಲಿಸಿಯೇ ಕೆಲವು ಪ್ರಶ್ನೆಗಳನ್ನು ಎತ್ತಲಾಗಿದೆ. ಈ ಕೃತಿಯನ್ನು ಓದದೇ ಮತ್ತೆ ಮತ್ತೆ ಅವವೇ ಮಾತುಗಳನ್ನು ಆಡುವ ಯಾರ ಉಪನ್ಯಾಸದ ಅಗತ್ಯ ಸದ್ಯಕ್ಕಿಲ್ಲ ಅನಿಸುತ್ತದೆ.
ವಚನಗಳನ್ನು ಕುರಿತು ಈವರೆಗೆ ಬಿಂಬಿಸಿಕೊಂಡು ಬರಲಾದ ಧೋರಣೆ ಕುರಿತು ಎತ್ತಲಾದ ಪ್ರಶ್ನೆಗಳಿಗೆ ಅಷ್ಟೇ ಸಮಂಜಸವಾಗಿ ವಚನಗಳ ಮೂಲಕವೇ ಉತ್ತರಿಸುವವರಿಗೆ ಮುಕ್ತ ಸ್ವಾಗತ ಇದ್ದೇ ಇದೆ. ವಚನಗಳನ್ನು ಅರಿಯಲು ಇವು ಸಹಾಯಕ. ಅದು ಬಿಟ್ಟು “ಈವರೆಗೆ ವಚನಗಳನ್ನು ಹೀಗೇ ನೋಡಿ ಎನ್ನಲಾಗಿದೆ, ಹಾಗೇ ನೋಡತಕ್ಕದ್ದು” ಎಂದು ಬಸವಣ್ಣನೂ ಹೇಳಿಲ್ಲ, ಚೆನ್ನಬಸವಣ್ಣನೂ ಹೇಳಿಲ್ಲ. ಅದು ವಚನಗಳಿಗೆ ಗೌರವ ತರುವುದೂ ಇಲ್ಲ. ಅವುಗಳ ಅರ್ಥ ವ್ಯಾಪ್ತಿ ಹಿರಿದಾಗಿದೆ ಎಂದೇ ಕೃತಿಯಲ್ಲಿ ಬಿಂಬಿಸಿರುವುದು. ವಚನಗಳ ಅರ್ಥ ಸಂಕೋಚನೆ ಮಾಡುತ್ತಿರುವವರು ಯಾರೆಂದು ಕೃತಿ ಓದಿ ಹೇಳಿ.
ಬಾಲು ವಿರೋಧಿಸುವ (ಯಾಕೆಂದು ಗೊತ್ತಿಲ್ಲ) ಕಾರಣಕ್ಕಾಗಿಯೇ ಅವರು ಮಂಡಿಸುವ ವಿಚಾರಗಳನ್ನು ಸಾರಾಸಗಟಾಗಿ ವಿರೋಧಿಸಲೇಬೇಕು ಎಂದೇನಿಲ್ಲ. ಮುಖ್ಯ ಕಾರಣ: ಅವರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭವಲ್ಲ. ಹೀಗಾಗಿ ಉಳಿದ ದಾರಿ ಒಂದೇ- ಅವರ ಕೃತಿಗಳನ್ನು ಕೈಗೆತ್ತಿಕೊಳ್ಳುವ ಮುನ್ನವೇ ವಿರೋಧಿಸಲು ಶುರುಮಾಡಿಬಿಡುವುದು. ನೀವು ಈ ವರ್ಗಕ್ಕೆ ಸೇರುವವರೋ ಅಲ್ಲವೋ ಕೃತಿ ಪರಿಚಯ ನಿಮಗೆ ಎಷ್ಟಾಗಿದೆ ಎಂಬುದನ್ನು ಅವಲಂಬಿಸಿದೆ.