ಸುಳ್ಸುದ್ದಿ : ಎಲ್ಲಾ ಡಿ-ದರ್ಜೆಯ ಹುದ್ದೆಗಳನ್ನು ರದ್ದು ಮಾಡಲು ಸರ್ಕಾರದ ಮಹತ್ವದ ನಿರ್ಧಾರ
– ರಾಘವೇಂದ್ರ ಸುಬ್ರಹ್ಮಣ್ಯ
ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳ ಸಲಹೆಕಾರರು ಇತ್ತೀಚೆಗೆ ಕೊಟ್ಟ ಸಲಹೆಯೊಂದನ್ನು ಅಗತ್ಯಕ್ಕಿಂತ ಗಂಭೀರವಾಗಿ ಪರಿಗಣಿಸಿರುವ,ಘನಸರ್ಕಾರವು,ಎಲ್ಲಾ ಡಿ-ದರ್ಜೆಯ ಗುಮಾಸ್ತರ ಹುದ್ದೆಗಳನ್ನು ರದ್ದು ಮಾಡಲು ನಿರ್ಧರಿಸಿದ್ದಾರೆ.ಇತ್ತೀಚೆಗೆ ಸಮಾರಂಭವೊಂದರಲ್ಲಿ ಸಲಹೆಕಾರರು,”ಜಮೀನ್ದಾರರು ಹೆಚ್ಚಿನ ಜಮೀನಿನ ಹಿಡುವಳಿಯಿಟ್ಟುಕೊಂಡು, ಕೂಲಿ ಕಾರ್ಮಿಕರಿಲ್ಲ ಎಂದು ಗೋಳಾಡುವ ಬದಲು, ಎಷ್ಟೋ ಬೇಕೋ ಅಷ್ಟಿಟ್ಟುಕೊಂಡು, ಉಳಿದ ಹೆಚ್ಚಿನ ಜಮೀನಿದ್ದರೆ ಬಡವರಿಗೆ ಕೊಟ್ಟರೆ, ಕೂಲಿಕಾರ್ಮಿಕರ ಸಮಸ್ಯೆ ಬರುವುದಿಲ್ಲ. ಬಡವರು ಕೂಲಿ ಕೆಲಸಕ್ಕೆ ಬರಬೇಕೆಂಬ ಧೋರಣೆಯೇ ಅಮಾನುಷ ಮತ್ತು ಅಮಾನವೀಯವಾದದ್ದು” ಎಂದಿದ್ದರು.
ಈ ಸುದ್ಧಿಯನ್ನು ಕೇಳಿ, ಅದೇ ಮಟ್ಟದಲ್ಲಿ ಯೋಚಿಸುತ್ತಿದ್ದ ಮು.ಮಂಗಳಿಗೆ ಸದನದಲ್ಲಿ ತೂಕೂಡಿಸುತ್ತಿದ್ದಾಗ ಹೊಳೆದ ಆಲೋಚನೆಯ ಪ್ರಕಾರ, “ಸರ್ಕಾರ ಎಲ್ಲರನ್ನೂ ಸಮನಾಗಿ ನೋಡಬೇಕು. ಸಿ ದರ್ಜೆ, ಡಿ ದರ್ಜೆ ಎಂದು ವಿಂಗಡಿಸುವುದೇ ಅಮಾನುಷ ಹಾಗೂ ಅಮಾನವೀಯ. ಸರ್ಕಾರವೇ ಹೀಗೆ ಮಾಡಿದರೆ, ಪ್ರಜೆಗಳಿನ್ನೆಷ್ಟರ ಮಟ್ಟಿಗೆ ಅಮಾನವೀಯವಾಗಿ ವರ್ತಿಸಬಹುದು!? ಆದ್ದರಿಂದ ಎಲ್ಲಾ ಡಿ-ದರ್ಜೆಯ ನೌಕರರನ್ನೂ ತಕ್ಷಣವೇ ಸಿ-ದರ್ಜೆಗೆ, ಎಲ್ಲಾ ಸಿ-ದರ್ಜೆಯ ನೌಕರರನ್ನು ಬಿ-ದರ್ಜೆಗೆ, ಹಾಗೇ ಮುಂದುವರಿದು ಎಲ್ಲಾ ಸೂಪರಿಂಟೆಂಡೆಂಟುಗಳನ್ನು ಕೆ.ಎ.ಎಸ್ ದರ್ಜೆಗೆ ಏರಿಸುವ ಆಲೋಚನೆಯನ್ನು ಗಂಭೀರವಾಗಿ ಪರಿಗಣಿಸುತ್ತಿದೆಯೆಂದು, ಮು.ಮಂಗಳ ವಕ್ತಾರ ತಿಳಿಸಿದ್ದಾರೆ. ಇದರ ಪರಿಣಾಮವಾಗಿ, ಈ ವರ್ಷದಿಂದ ಡಿ-ದರ್ಜೆಯ ನೌಕರರೇ ಇಲ್ಲದಂತಾಗುತ್ತಾರೆ. ಸರ್ಕಾರ ಮತ್ತು ಸಮಾಜದಲ್ಲಿ ಜನರು ಒಂದು ಹೆಜ್ಜೆ ಮೇಲೇರಿದಂತಾಗುತ್ತದೆ. ಈ ಯೋಜನೆಯ ಮುಂದಿನ ಹಂತವಾಗಿ ಎಲ್ಲಾ ಸಿ-ದರ್ಜೆಯವರನ್ನು ಬಿ-ದರ್ಜೆಗೇರಿಸಿ, ಬಿ-ದರ್ಜೆಯನ್ನು ಎ-ದರ್ಜೆಗೇರಿಸಿ, ಕೊನೆಯ ಹಂತವಾದ ಕೆ.ಎ.ಎಸ್ ಅಧಿಕಾರಿಗಳನ್ನು ಐ.ಎ.ಎಸ್ ಅಧಿಕಾರಿಗಳನ್ನಾಗಿ ಮಾಡಲಾಗುವುದು. ಇದಕ್ಕೆ ಕೇಂದ್ರ ಸರ್ಕಾರ ಅಡ್ಡಿಬಂದಲ್ಲಿ ಸುಗ್ರೀವಾಜ್ಞೆಯೊಂದನ್ನು ಹೊರಡಿಸಿ, ಕೇಂದ್ರಸರ್ಕಾರವನ್ನೇ ಅಮಾನ್ಯಗೊಳಿಸುವ ಬಗ್ಗೆಯೂ, ಸರ್ಕಾರಿ ವಕೀಲರು ಅಸಂವಿಧಾನಾತ್ಮಕ ಮಾರ್ಗಗಳನ್ನು ಹುಡುತಿದ್ದಾರೆ. ಈ ರೀತಿ ಸಮಾಜದಲ್ಲಿನ ಎರಡು ಹಂತನ ಅಸಮಾನತೆಯನ್ನು ತೊಡೆದುಹಾಕಿದ ಕೀರ್ತಿ ನಮ್ಮ ಸರ್ಕಾರಕ್ಕೆ ಸೇರಲಿದೆಯೆಂದು ವಕ್ತಾರರು ತಿಳಿಸಿದ್ದಾರೆ.”
“ಬರೇ ಎರಡು ಹಂತ ಮಾತ್ರ ಯಾಕೆ, ಅದರಿಂದ ಮುಂದೆ ಹೋಗಿ, ಎಲ್ಲಾ ಹಂತಗಳನ್ನೂ ಒಂದೇ ಮಾಡಬಹುದಲ್ಲಾ!?” ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಸಧ್ಯಕ್ಕೆ ನಮ್ಮ ಸರ್ಕಾರದ ಜೀವಿತಾವಧಿ ಎರಡೇ ವರ್ಷವಾಗಿರುವುದರಿಂದ ಈ ಎರಡು ಹಂತದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಪ್ಪಿತಪ್ಪಿಯೆಲ್ಲಾದರೂ ಮುಂದಿನ ಬಾರಿಯೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬಂದರೆ, ಅದನ್ನೂ ಈಡೇರಿಸಲಾಗುವುದು ಎಂಬ ಆಶ್ವಾಸನೆಯನ್ನು ಮು.ಮಂಗಳು ಅದಾಗಲೇ ಮೂರ್ಖಜನತೆಗೆ ಕೊಟ್ಟಾಗಿದೆಯೆಂದು ತಿಳಿಸಿದರು.
‘ಎಲ್ಲಾ ನೌಕರರನ್ನು ಮೇಲಿನ ಹಂತಕ್ಕೆ ಏರಿಸದರೆ, ಸರ್ಕಾರಿ ಬೊಕ್ಕಸಕ್ಕೆ ಉಂಟಾಗುವ ವೆಚ್ಚವೆಷ್ಟು, ಹಾಗೂ ಇದಕ್ಕೆ ಬೇಕಾದ ಹಣವನ್ನು ಸರ್ಕಾರ ಹೇಗೆ ಹೊಂದಿಸಲಿದೆ?’ ಎಂಬ ಪ್ರಶ್ನೆಗೆ, ಕೋಪದಿಂದಲೇ ಉತ್ತರಿಸಿದ ವಕ್ತಾರರು “ನೋಡಿ ಸ್ವಾಮಿ, ಈ ಅಸಮಾನತೆಯ ಪರಿಕಲ್ಪನೆ ಬಂದಿದ್ದೇ, ಸನಾತನಿಗಳಿಂದ ಹಾಗೂ ಪುರೋಹಿತಶಾಹಿಯಿಂದ. ಸರ್ಕಾರದಲ್ಲಿ ಅಸಮಾನತೆ ಉಂಟಾಗಲೂ ಅವರೇ ಕಾರಣ. ಈ ಅಸಮಾನತೆ ಸಾವಿರಾರು ವರ್ಷಗಳಿಂದ ಇರುವುದರಿಂದ, ಇದಕ್ಕೆ ತಗಲುವ ಎಲ್ಲಾ ವೆಚ್ಚಗಳನ್ನು ಅವರಿಂದಲೇ ವಸೂಲು ಮಾಡೂವ ಪ್ರಸ್ತಾವನೆಯೊಂದನ್ನು, ನಾಡಿನ ಚಿಂತಾಜನಕ ಚಿಂತಕರೇ ಮುಂದಿಟ್ಟಿದ್ದಾರೆ. ಇದರ ಸಂಪೂರ್ಣ ರೂಪುರೇಷೆಗಳು ಸಧ್ಯದಲ್ಲೇ ಹೊರಬೀಳಲಿವೆ. ಈಗಿನಮಟ್ಟಿಗೆ ನಾನು ತಿಳಿಸಬಹುದದ್ದೇನೆಂದರೆ, ಎಲ್ಲಾ ಬ್ರಾಹ್ಮಣರಿಗೆ ತಲಾ ೧೭% ಹೆಚ್ಚಿನ ಆದಾಯ ತೆರಿಗೆ ವಿಧಿಸಲಾಗುವುದು. ಮುಜರಾಯಿ ಇಲಾಖೆಯಡಿಯಲ್ಲಿ ಬರುವ ದೇವಸ್ಥಾಗಳಿಂದ ೭% ಹೆಚ್ಚಿನ ಅಸಮಾನತಾ ಆದಾಯ ಅನ್ನು ವಸೂಲಿಮಾಡಲಾಗುವುದು. ಮಸಾಲೆದೋಸೆ ಮತ್ತು ಪ್ಲೇನ್ ದೋಸೆಯ ಮಧ್ಯೆ ಅಸಮಾನತೆಯನ್ನು ಸೃಷ್ಟಿಸಿರುವ ಹೋಟೆಲುಗಳಿಂದ ೧೩% ಅಸಮಾನತಾ ಸೆಸ್ ಅನ್ನು ಪೀಕಿಸಲಾಗುವುದು. ಅನ್ನಭಾಗ್ಯದ ಅಡಿಯಲ್ಲಿ ಬರದಿರುವ ಎಲ್ಲಾ ಕುಟುಂಬಗಳಿಂದ ಬಡತನರೇಖೆಯ ಮೇಲಿರುವ ತಪ್ಪಿಗಾಗಿ ೯.೫೫% ಅವರೋಹಣಾ ತೆರಿಗೆಯನ್ನು ವಿಧಿಸಲಾಗುವುದು. ಅಹಿಂದ ಮತ್ತು ಕೂಲಿಕಾರ್ಮಿಕರಲ್ಲದವರಿಗೆ ತಿಂಗಳಿಗೆ ೪೨೦ ರೂಗಳ ದಂಡವನ್ನು ವಿಧಿಸಲಾಗುವುದು. ಕಳೆದ ಬಾರಿ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ವೋಟು ಹಾಕದವರಿಂದ ತಲಾ 2000 ರೂಗಳ ದಂಡವನ್ನು ವಸೂಲಿಮಾಡಲಾಗುವುದು. ಆರೆಸ್ಸೆಸ್ಸಿನವರು ಪಥಸಂಚಲನ ನಡೆಸುವಾಗ ರಸ್ತೆಗಳು ಸವೆಯುವುದರಿಂದ, ಪ್ರತೀ ಪಥಸಂಚಲನಕ್ಕೆ 35000ರೂಗಳ ಸವಕಳಿ ಶುಲ್ಕವನ್ನು ವಸೂಲಿಮಾಡಲಾಗುವುದು. ಮುಂದಿನ ಬಜೆಟ್ಟಿನಲ್ಲಿ ಎರಡು ಅಡಿಗಿಂತಾ ಗಿಡ್ಡವಿರುವ ಎಲ್ಲಾ ಚಡ್ಡಿಗಳಿಗೆ ಹಾಗೂ ಕೇಸರಿ ಬಣ್ಣದ ಎಲ್ಲಾ ಬಟ್ಟೆಗಳಿಗೆ, ಮತ್ತು ತಿನ್ನುವ ಕೇಸರಿಯ ಆಮದು ಸುಂಕವನ್ನೂ 100% ಹೆಚ್ಚಿಸಿ, ಈ ಯೋಜನೆಗೆ ಬೇಕಾದ ಹಣವನ್ನು ಹೊಂದಿಸಲಾಗುವುದು. ನಮ್ಮ ಬಳಿ ಇನ್ನೂ ಭಯಂಕರ ಐಡಿಯಾಗಳಿದ್ದು, ಸಧ್ಯದಲ್ಲೇ ಸರ್ಕರ ನಡೆಸುವ ಅಸಮಾನತಾ ನಿರ್ಮೂಲನಾ ಸಪ್ತಾಹದಲ್ಲಿ ಇದರ ಬಗ್ಗೆ ಪ್ರಕಟೆಯನ್ನು ನೀಡಲಾಗುವುದು” ಎಂದರು.
ಸೂ : ಇದೊಂದು ವಿಡಂಬನಾತ್ಮಕ ಬರಹವಾಗಿದ್ದು ಯಾರನ್ನೂ ನೋಯಿಸುವ ಉದ್ದೇಶವನ್ನು ಹೊಂದಿರುವುದಿಲ್ಲ.
so nilume runs out of stuffs to publish……a forum which was meant for countering an idea with idea ..steeping into level of spoof forum….scoring persnal goals in disguise of spoof parody article