ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 6, 2015

1

ಯಾಕೂಬ್ ಮೆಮನ್ ಗಲ್ಲಿಗೆ ಕಂಬನಿ ಮಿಡಿದ ಜೀವಪರ ಮನಸ್ಸುಗಳು

‍ನಿಲುಮೆ ಮೂಲಕ

– ಪ್ರವೀಣ್ ಕುಮಾರ್,ಮಾವಿನಕಾಡು

Nilume Sulsuddi - Yakoob Menonಗಲ್ಲಿಗೇರಿ ಸತ್ತ 1993 ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ರೂವಾರಿ,ನತದೃಷ್ಟ ಭಯೋತ್ಪಾದಕ ಯಾಕೂಬ್ ಮೆಮನ್ ನ ಸ್ಮರಣಾರ್ಥ ಹಾಳ್ ಟೌನ್ ನಲ್ಲಿ ಇಂದು ನಡೆದ ಸಂತಾಪ ಸೂಚಕ ಸಭೆಯಲ್ಲಿ ಭಾರತದ ನ್ಯಾಯ ವ್ಯವಸ್ಥೆಯ ವಿರುದ್ಧ ರಾಜ್ಯದ ಹಲವು ಪ್ರಮುಖ ಜೀವಪರ ಮನಸ್ಸುಗಳ ಆಕ್ರೋಶ ಸ್ಫೋಟಗೊಂಡಿತು.

ಆತನನ್ನು 257 ಜನರ ಸಾವಿಗೆ ಕಾರಣನೆನ್ನಲಾಗುತ್ತಿದೆ.ಒಂದು ವೇಳೆ ಅಂದು ಸ್ಥಳದಲ್ಲಿ ಆ 257 ಜನ ಇಲ್ಲದಿರುತ್ತಿದ್ದರೆ ಆತ ಕೊಲೆಗಾರನಾಗಲು ಹೇಗೆ ಸಾಧ್ಯವಾಗುತ್ತಿತ್ತು?ಆದ್ದರಿಂದ ಆ ಘಟನೆಗೆ ಆ 257 ಜನ ಮತ್ತು ಗಾಯಗೊಂಡ ವ್ಯಕ್ತಿಗಳೇ ಕಾರಣವೇ ಹೊರತೂ ಯಾಕೂಬ್ ಮೆಮನ್ ಅಲ್ಲ.257 ಜನ ಮಾಡಿದ ತಪ್ಪಿಗೆ ಅಮಾಯಕನೊಬ್ಬನನ್ನು ನಮ್ಮ ವ್ಯವಸ್ಥೆಯೇ ನೇಣು ಬಿಗಿದು ಕೊಂದು ಹಾಕಿತು ಎಂದು ಕರ್ನಾಟಕ ರಾಜ್ಯದ ಹಿರಿಯ ಬುದ್ಧಿಜೀವಿ ಬಾಯ್ಕಟ್ ಬೀಬಿ ಆಕ್ರೋಶ ವ್ಯಕ್ತಪಡಿಸಿದರು.

ಆತನಿಗೆ ಕ್ಷಮಾದಾನ ನೀಡಿದ್ದರೆ ಈ ರಾಷ್ಟ್ರ ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂಬ ಶಕ್ತಿಯುತ ಸಂದೇಶವನ್ನು ಜಗತ್ತಿಗೆ ಸಾರುವ ಅವಕಾಶವಿತ್ತು!ಅನ್ಯಾಯವಾಗಿ ಭಾರತ ಅಂತಹಾ ಸುವರ್ಣಾವಕಾಶವನ್ನು ಕಳೆದುಕೊಂಡಿತು ಎಂದು ಕರ್ನಾಟಕ ರಾಜ್ಯ ಕಾರ್ಯಮರೆತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಹಾಗೂ ಸದ್ಯದ ಪ್ರಗತಿಪರಬುದ್ಧಿಜೀವಿಪತ್ರಕರ್ತರಾಜಕಾರಣಿಯೊಬ್ಬರು ವ್ಯಾಖ್ಯಾನಿಸಿದರು.”ಮನುಷ್ಯರನ್ನು ಗಲ್ಲಿಗೇರಿಸುವುದು ಈ ದೇಶವನ್ನು ಸುರಕ್ಷಿತವಾಗಿಸುವುದಿಲ್ಲ ಬದಲಾಗಿ ನಮ್ಮನ್ನು ಕೆಳಕ್ಕೆ ನೂಕುತ್ತದೆ” ಎಂದು ಅವರು ಪ್ರತಿಪಾದಿಸಿದರು. ಕೇಂದ್ರದಲ್ಲಿ ನಾವು ಬೆಂಬಲಿಸುತ್ತಿರುವ ಸರ್ಕಾರವಿದ್ದಿದ್ದರೆ ಖಂಡಿತಾ ಇಂತಹಾ ಘಟನೆಗಳು ನಡೆಯಲು ಬಿಡುತ್ತಿರಲಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ರಾಜ್ಯ ಚಿಲ್ಲರೆ ಪತ್ರಕರ್ತರ ಒಕ್ಕೂಟದ ಕಾರ್ಯದರ್ಶಿ ಶ್ರೀ ಹಸಿರ್ ರವರು ಮಾತನಾಡಿ ಯಾಕೂಬ್ ಮೆಮನ್ ಒಬ್ಬ ಮಹಾನ್ ಮಾನವತಾವಾದಿಯಾಗಿದ್ದು ಚಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾಲಯ ಆಯೋಜಿಸಿದ್ದ ಪ್ರಂಬಂಧ ಸ್ಫರ್ಧೆಯಲ್ಲಿ ಆತ ಬರೆದಿದ್ದ ಪ್ರಬಂಧವೆ ಇದಕ್ಕೆ ಸಾಕ್ಷಿ ಎಂದರು.ಆ ಪ್ರಬಂಧದಲ್ಲಿ ನಾವೆಲ್ಲರೂ ಭಾರತದಲ್ಲಿನ ಒಂದು ದೊಡ್ಡ ಕುಟುಂಬದ ಸದಸ್ಯರಂತೆ,ಭಾರತದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಪ್ರೀತಿಸುವ ಹಾಗೂ ಗೌರವಿಸುವ ಗುಣಗಳನ್ನೂ ರೂಢಿಸಿಕೊಳ್ಳಬೇಕು ಎಂದು ಹೇಳಿದ್ದಾನೆ.ಅಲ್ಲದೇ ಭಾರತದ ನಾಗರೀಕರಾಗಿ ನಾವು ನಮ್ಮ ಸಂಸ್ಕೃತಿಯನ್ನು ಬೆಳೆಸಬೇಕಿದ್ದು, ದೇಶವನ್ನು ಪ್ರೀತಿಸುವ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು.ದೇಶದ ಪ್ರಜೆಯಾಗಿ ಸಂವಿಧಾನ ಹಾಗೂ ಸಂಸ್ಕೃತಿಯ ಕುರಿತಂತೆ ನಮ್ಮ ಪಾತ್ರವನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕಾದದ್ದು ನಮ್ಮ ಕರ್ತವ್ಯ. ಈ ಕರ್ತವ್ಯವನ್ನೇನಾದರೂ ಮರೆತರೆ ನಮ್ಮ ಸಂಸ್ಕೃತಿ ಹಾಗೂ ನಮ್ಮ ಸಂವಿಧಾನ ಕೇವಲ ಪತ್ರಿಕೆ ಹಾಗೂ ಸುದ್ದಿಗಳಿಗೆ ಸೀಮಿತವಾಗಿ ಬಿಡುತ್ತದೆ ಎಂದು ಬರೆದಿದ್ದಾನೆ.ಇಂತಹಾ ಮಹಾನ್ ವ್ಯಕ್ತಿಯನ್ನು ನಮ್ಮ ಕ್ರೂರ ವ್ಯವಸ್ಥೆ ನೇಣಿಗೆ ಹಾಕಿರುವುದು ನಮ್ಮ ದೇಶದ ದುರದೃಷ್ಟ.ಆತ ನಮ್ಮ ಪಾಲಿಗೆ ಮಹಾತ್ಮಾ ಗಾಂಧಿಯಿದ್ದಂತೆ ಎಂದು ಆತನನ್ನು ಗಾಂಧೀಜಿಗೆ ಹೋಲಿಸುತ್ತಾ ಒಂದು ಕ್ಷಣ ಗದ್ಗದಿತರಾದರು ಬಳಿಕ ಸಾವರಿಸಿಕೊಂಡು ಎದುರಿಗಿದ್ದ ಕಬಾಬ್ ತಿನ್ನುತ್ತ ಕಂಬನಿಗೈದರು.

ವೇದಿಕಯಲ್ಲಿ ಉಪಸ್ಥಿತರಿದ್ದ ಖ್ಯಾತ ಸಿಡಿಮಿಡಿ ಸ್ವಾಮೀಜಿಯವರು ಮಾತನಾಡಿ,ಆತ ನಿಜವಾದ ಒಬ್ಬ ಕಾಯಕ ಯೋಗಿಯಾಗಿದ್ದು ತಾನು ಮಾಡುತ್ತಿದ್ದ ಕಾಯಕದಲ್ಲಿ ನಿಜವಾದ ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿದ್ದ ಎಂದು ಹೇಳಿ ತಾವೇ ಬರೆಸಿಕೊಂಡು ಬಂದಿದ್ದ ಒಂದೆರಡು ಜೀವಪರ ಕವನಗಳನ್ನು ಓದುವುದರ ಮುಖಾಂತರ ತಮ್ಮ ಭಾಷಣವನ್ನು ಮುಗಿಸಿದರು.

ಮುಖ್ಯ ಅತಿಥಿಯಾಗಿ ಬಂದಿದ್ದ ಅಶಾಂತ್ ದೂಷಣ್ ಮಾತನಾಡಿ ಯಾವ ಕಾನೂನಿಗೆ ಒಂದು ಜೀವಕ್ಕೆ ಜನ್ಮ ನೀಡುವ ಶಕ್ತಿ ಇಲ್ಲವೋ ಆ ಕಾನೂನಿಗೆ ಒಂದು ಜೀವವನ್ನು ತೆಗೆಯುವ ಹಕ್ಕೂ ಇಲ್ಲ ಎಂದು ಹೇಳಿದರು.ಹಾಗಾದರೆ ನೂರಾರು ಜನರ ಜೀವ ತೆಗೆದ ಯಾಕೂಬ್ ಗೆ ಜೀವ ನೀಡುವ ಶಕ್ತಿ ಇತ್ತೇ ಎಂಬ ಪ್ರಶ್ನೆಗೆ, ‘ಹೌದು ಆತನಿಗೆ ಜೀವ ನೀಡುವ ಶಕ್ತಿ ಇತ್ತು!ಆತನ ಪತ್ನಿಯು ಆತನ ಮಗಳಿಗೆ ಜನ್ಮ ನೀಡಿದ್ದೂ ಜೈಲಿನಲ್ಲೇ…ಇನ್ನು ಜೈಲಿನಿಂದ ಹೊರಗಡೆ ಆತ ಈ ಇಪ್ಪತ್ತಕ್ಕೂ ಹೆಚ್ಚು ವರ್ಷ ಇದ್ದಿದ್ದೇ ಆಗಿದ್ದರೆ ಹತ್ತಾರು ಪತ್ನಿಯರಿಂದ ನೂರಾರು ಮಕ್ಕಳಿಗೆ ಜನ್ಮ ನೀಡಿರುತ್ತಿದ್ದ ಎಂದು ವಾದಿಸಿದರು!!

ಮುಂದೆ ಯಾವುದೇ ಮುಗ್ಧ ಭಯೋತ್ಪಾದಕನಿಗೂ ಹೀಗಾಗದಂತೆ ನೋಡಿಕೊಳ್ಳಲಾಗುವುದು.ಭಯೋತ್ಪಾದಕರೂ ಕೂಡಾ  ಮನುಷ್ಯರೇ.. ನಮ್ಮವರೇ.. ಭಯೋತ್ಪಾದಕರೇ,ಭಯಪಡಬೇಡಿ.ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಘೋಷಣೆಗಳೊಂದಿಗೆ ಮುಗ್ಧ ಭಯೋತ್ಪಾದಕರಿಗೆ ಧೈರ್ಯ ತುಂಬುವ ಕೆಲಸವೂ ಸಹಾ ಇದೇ ಸಂದರ್ಭದಲ್ಲಿ ನಡೆಯಿತು!!

ವೇದಿಕೆಯ ಮೇಲೆ ಹಲವು ಬುದ್ಧಿಜೀವಿಗಳು,ಜಾತಿವಾದಿ ಸಂಘಟನೆಯಲ್ಲಿ ಗುರುತಿಸಿಕೊಂಡ ಜಾತ್ಯತೀತ ಪಕ್ಷದ ಮುಖಂಡರುಗಳು,ಖ್ಯಾತ ನ್ಯಾಯಾಧೀಶರುಗಳು,ಚಿತ್ರನಟರು ಹಾಜರಿದ್ದರು.ಸಭೆಯ ನಂತರ ಎಲ್ಲರಿಗೂ ದುಬೈನಿಂದ ತರಿಸಿದ ಖರ್ಜೂರದ ಜೊತೆಗೆ ಬೌ ಬೌ ಕಬಾಬ್ ಹಾಗೂ ಕಲಾಸಿ ಪಾಳ್ಯದ ಬಿರಿಯಾನಿಯನ್ನು ಉಣಬಡಿಸಲಾಯಿತು..

*ವಿ.ಸೂ:ಈ ಸುದ್ದಿಯು ಕೇವಲ ಸುಳ್ಸುದ್ದಿ ಹಾಗೂ ಕಾಲ್ಪನಿಕವಾಗಿದ್ದು,ಪ್ರಭಾವಿಗಳು ಕಾನೂನು ಮತ್ತು ನ್ಯಾಯಾಲಯಗಳು ನೀಡುವ ತೀರ್ಪುಗಳನ್ನು ತಮ್ತಮ್ಮ ಸ್ವಾರ್ಥ ಸಾಧನೆಗೆ ಹೇಗೆಲ್ಲಾ ವ್ಯಾಖ್ಯಾನಿಸುತ್ತಾರೆ ಅನ್ನುವುದನ್ನು ನೋಡಿ ಕಲ್ಪಿಸಿಕೊಂಡಿದ್ದಾಗಿರುತ್ತದೆ.ಈ ಸುದ್ದಿಯು ಕೇವಲ ಮನರಂಜನೆಗಾಗಿ ಮಾತ್ರ.

1 ಟಿಪ್ಪಣಿ Post a comment
  1. valavi
    ಆಗಸ್ಟ್ 6 2015

    ನಿಮಗೆ ಇನ್ನೂ ಒಂದು ವಿಷಯ ಗೊತ್ತಾ? ಯಾಕೂಬ್ ನನ್ನು ರಾತ್ರೋ ರಾತ್ರಿ ಕೋರ್ಟ್ ನಡೆಸಿ ಗಲ್ಲಿಗೇರಿಸುವ ನಿಯಮಗಳನ್ನು ಪರಿಹರಿಸಿಕೊಂಡರಂತೆ ಯಾಕೆಂದರೆ ಆತ ಬೆಳಿಗ್ಗೆ ಎದ್ದ ಕೂಡಲೆ ಮೋದಿ ಬಗ್ಗೆ ಏನೋ ಗುಟ್ಟು ಹೇಳುವವನಿದ್ದನಂತೆ ಅದಕ್ಕೆ ಹಾಗೆ ತರಾತುರಿಯಲ್ಲಿ ಗಲ್ಲಿಗೇರಿಸಿದರಂತೆ. ಪಾಪ! 20 ವರ್ಷಗಳಿಂದ ಹೇಳಬೇಕಿರುವ ಗುಟ್ಟು ಹೇಳುವ ಸಮಯ ಈಗ ಸಿಕ್ಕಿತ್ತು. ಅದಕ್ಕೂ ಕಲ್ಲು ಹಾಕಿದರು. ಊಂ ಊಂ (ನನ್ನ ಕಣ್ಣೀರಿಂದ ನನ್ನ ಕೀ ಬೋರ್ಡ ತೋಯಿತು.)

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments