‘ಆತ್ಮಾಹುತಿ’ ಯಿಂದ ಆತ್ಮವಿಮರ್ಶೆ
– ಮನುಶ್ರೀ ಜೋಯಿಸ್
ಮಹಾಭಾರತ, ರಾಮಾಯಣದಂತ ಯಾವುದೇ ಗ್ರಂಥವಾಗಲಿ ಮೊದಲ ಬಾರಿಗೆ ಓದುವಾಗ ಮನಸ್ಸಲ್ಲಿ ಒಂದು ವಿಶೇಷ ತನ್ಮಯ ಭಾವವಿರುತ್ತದೆ. ‘ವಿಶೇಷ’ ಏಕೆಂದರೆ ಇದು ಬೇರೆ ಪುಸ್ತಕಗಳಂತಲ್ಲದೆ ಸುತ್ತ-ಮುತ್ತ ಕೇಳಿದ, ಜೀವನದಲ್ಲಿ ಬೆರೆತ, ಅಜ್ಜಿ ಶುರು ಮಾಡಿದ ಒಂದು ಕುತೂಹಲದ ಕಥೆ. ಓದುವಾಗ ಬೇರೆ ಯುಗವನ್ನೇ ನೋಡಿ ಬಂದಂತಹ ಪುಳಕ, ಪಾತ್ರಗಳ ಜೀವನದಲ್ಲಿ ಭಾಗಿಯಾದಂತಹ ರೋಮಾಂಚನ. ಪೂರ್ವಜರ ಚರಿತ್ರೆಯೆಂದೆನೋ.. ಪುಸ್ತಕ ಮುಗಿದಾಗ ಮನಸು ತುಂಬಿ ಬರುತ್ತದೆ. ಇನ್ನು ಕೊನೆ ಅಧ್ಯಾಯದ ಪುಟಗಳಲ್ಲಿ ಕಣ್ಣಾಡಿಸುವಾಗ ಬಿಟ್ಟು ಹೋದ ಎಷ್ಟೋ ಹೆಜ್ಜೆ ಗುರುತುಗಳನ್ನು ಹಚ್ಚಿಕೊಂಡು ಬಿಟ್ಟಿರುತ್ತೇವೆ.
ಹೀಗೆ ಪುರಾಣಗಳಂತೆ ಮನಸಿಗೆ ಹತ್ತಿರವಾಗುವ, ಎತ್ತರದಲ್ಲಿ ನಿಲ್ಲುವ ಒಂದು ಅದ್ಭುತ ಕೃತಿ ಶಿವರಾಮುರವರ ‘ಆತ್ಮಾಹುತಿ’. ಇದು 1970 ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿತು. ಪ್ರತಿಯೊಬ್ಬ ಭಾರತೀಯನು ತಿಳಿದಿರಬೇಕಾದ ಇತಿಹಾಸ ಇದು. ಓದಲೇ ಬೇಕಾದ the best book.
ಸ್ವಾತಂತ್ರ್ಯ ವೀರ ಸಾವರಕರ ರವರ ಜೀವನ ಚರಿತ್ರೆ. ಇದನ್ನು ಆತ್ಮಕಥೆಯಂತೆ ನಿರೂಪಿಸಲಾಗಿದೆ. ಸಾಮಾನ್ಯ ವ್ಯಕ್ತಿಯೊಬ್ಬನ ಉನ್ನತ ಧೇಯ್ಯೋದ್ದೇಶಗಳು ಹೇಗೆ ಮಹಾನ್ ವ್ಯಕ್ತಿತ್ವಕ್ಕೆ ಮೆಟ್ಟಿಲುಗಳಾಗುತ್ತವೆ ಎಂಬುದಕ್ಕೆ ನಿದರ್ಶನವಿದು. ಬಾಲಕನಿದ್ದಾಗ ಚಿಗುರುವ ದೇಶ ಭಕ್ತಿ ಇಡೀ ವಿಶ್ವಕ್ಕೆ ವ್ಯಾಪಿಸುವ ಕಥಾನಕವಿದು. ಹಿಂದುತ್ವದ ಅಮೋಘ ಪರಿಕಲ್ಪನೆಯನ್ನು ಅನಾವರಣಗೊಳಿಸುವ ಇವರ ಜ್ಞಾನ ಅಗಾಧ. ಇದೆಲ್ಲವನ್ನೂ ಕೇಳುವುದಕ್ಕಿಂತ ಅನುಭವಿಸ ಬೇಕೆಂದಿದ್ದರೆ ಆತ್ಮಾಹುತಿಯನ್ನು ಓದಲೇಬೇಕು ಬೇಕು.
ಈ ಆದರ್ಶಪ್ರಾಯವಾದ ಪುಸ್ತಕದ ಅಗತ್ಯ ಇಂದಿಗೂ ಇದೆ.ಆದರೆ ಈಗ ಸ್ವತಂತ್ರ ಪೂರ್ವ ಇತಿಹಾಸ ಇಂದಿನ ಕಂಪ್ಯೂಟರ್ ಯುಗದಲ್ಲಿ ಎಷ್ಟು ಪ್ರಸ್ತುತ ಎಂಬುದೇ ಒಂದು ಜಿಜ್ಞಾಸೆಯಾಗಿದೆ. ಇಡೀ ಜಗತ್ತಿನಲ್ಲಿ ಮಾನವ ಜನಾಂಗ ವಿವಿಧ ದೇಶಗಳಲ್ಲಿ ತನ್ನದೇ ಆದ ಸಂಸ್ಕೃತಿಯೊಂದಿಗೆ ಹಬ್ಬಿಗೊಂಡಿದೆ. ಈ ಸಂಸ್ಕೃತಿ ಪ್ರತಿಯೊಬ್ಬನಿಗೆ ಪೂರ್ವಜರಿಂದ ಬರುವ ಬಳುವಳಿ. ಅದರಲ್ಲಿ ಸುಖ,ನೆಮ್ಮದಿ,ಉತ್ಕೃಷ್ಟ ಜೀವನಕ್ಕೆ ಒಂದಷ್ಟು ಜ್ಞಾನ ಕಾಲದಿಂದ ಕಾಲಕ್ಕೆ ಪ್ರವಹಿಸುತ್ತದೆ. ಮನುಷ್ಯನ ಗರಿಷ್ಟ ಆಯಸ್ಸು ನೂರು ವರ್ಷವೆಂದರೂ ಈ ಸಮಯದಲ್ಲಿ ಎಲ್ಲಾ ಅನುಭವ ಪಡೆದು ಜೀವನವನ್ನು ನಡೆಸಲಾಗುವುದಿಲ್ಲ. ಅಂತೆಯೇ ನಿತ್ಯ ಸೂತ್ರಗಳು ಸಂಸ್ಕಾರದ ರೂಪದಲ್ಲಿ ದಾರಿ ದೀಪವಾಗುತ್ತದೆ. ಈ ಸಂಸ್ಕಾರ ಭೌಗೋಳಿಕವಾಗಿ, ಮಾನಸಿಕ ಸ್ಥಿತಿಯ ಮೇಲೆ, ಇತಿಹಾಸದ ಮೇಲೆ, ಪೂರ್ವಜರ ಕೃಷಿಯ ಮೇಲೆ ದೇಶದಿಂದ ದೇಶಕ್ಕೆ ವಿಭಿನ್ನವಾಗಿರುತ್ತದೆ.
ಯುದ್ಧ,ಕಲಹವೆಂದು ಒಂದರ ಮೇಲೆ ಮತ್ತೊಂದನ್ನು ಹೇರಬಹುದು.ಆಗ ಸ್ವಂತ ಮನೆಯನ್ನು ದರೋಡೆಯಿಂದ ರಕ್ಷಿಸುವಂತೆ ದೇಶವನ್ನು ರಕ್ಷಿಸಲೇ ಬೇಕಾಗುತ್ತದೆ. ಈಗಂತೂ ಮನೆ, ಸಂಸಾರವೆಂದು ಯೋಚಿಸುವುದೇ ದೊಡ್ಡ ವಿಚಾರವಾಗಿದೆ. ಎಲ್ಲಾ ವಿಚಾರಗಳು ಕೂಡ ಸ್ವಂತಕ್ಕೆ ಕೇಂದ್ರವಾಗಿದ್ದು, ಅದರಾಚೆಗಿನ ಯೋಚನೆಗಳು ನಿರೀಕ್ಷೆಗೂ ನಿಲುಕದ್ದಾಗಿದೆ. ಕೇವಲ ತನಗೆ,ತನ್ನ ಮನೆಗೆ ಇಷ್ಟು ಮಹತ್ವ ಕೊಟ್ಟರೂ ನೆಮ್ಮದಿ, ಸಂತೃಪ್ತಿ ದೂರದ ಮರೀಚಿಕೆಯಾಗಿಯೇ ಇದೆ. ಜೀವನದ ಧೇಯ್ಯವೇ ಗೊಂದಲಮಯವಾಗಿರುವಾಗ ಆದರ್ಶಗಳ ಕಟ್ಟಿನಲ್ಲಿ ಸುಂದರ ಚಿತ್ರ ಬಿಡಿಸಿದ ಈ ವೀರನ ಬದುಕು ಒಂದು ಹೊಸ ಚಿಂತನೆಯನ್ನು ಹುಟ್ಟು ಹಾಕುವುದಂತೂ ಸತ್ಯ.
ಪುಸ್ತಕದಲ್ಲಿ ಬೇಕಾದಷ್ಟು ವಿಷಯಗಳು ನಮಗೆ ಹೇಳಿಕೊಟ್ಟ ಇತಿಹಾಸಕ್ಕೆ ವಿರುದ್ಧ ಅನಿಸಬಹುದು. ಆದರೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಸ್ವತಂತ್ರೋತ್ತರ ಭಾರತದವರೆಗಿನ ಘಟನೆಗಳು ಪ್ರಾಮಾಣಿಕವಾಗಿ ಇದರಲ್ಲಿ ಬಿಂಬಿತವಾಗಿದೆ. ಒಟ್ಟಿನಲ್ಲಿ ಮನಸ್ಸನ್ನು ಜಾಗೃತಗೊಳಿಸುವ,ಎಚ್ಚರಿಸುವ ಒಂದು ದೀಪದಂತೆ ಸಾವರ್ಕರ್ ಅವರು ಗುರುವಾಗುತ್ತಾರೆ
ಚಿತ್ರಕೃಪೆ :delhi.gov.in
Yes Sir, I have read this book. But unfortunately the book is not reprinted again. When I thought of purchasing about 10 copies and distribute to few of our youngsters i didn’t get this book.
But one of the great books I have ever read.