ಪ್ರಶಸ್ತಿಯ ಮಾನ ಕಳೆದ ಅಕಾಡೆಮಿ
– ರಾಕೇಶ್ ಶೆಟ್ಟಿ
ಕೆಲವು ವ್ಯಕ್ತಿಗಳು ಪ್ರಶಸ್ತಿಗಳನ್ನು ಮೀರಿ ಬೆಳೆದಿರುತ್ತಾರೆ.ಅವರ ವ್ಯಕ್ತಿತ್ವದ ಮುಂದೆ ಪ್ರಶಸ್ತಿಯೂ ಕುಬ್ಜವೆನಿಸುತ್ತದೆ. ಮಹಾತ್ಮ ಗಾಂಧೀಜಿಗೆ ನೊಬೆಲ್ ಶಾಂತಿ ಪ್ರಶಸ್ತಿ ಅಥವಾ ನೇತಾಜಿ ಸುಭಾಷ್ ಅವರಿಗೆ ಭಾರತ ರತ್ನವನ್ನು ಕೊಟ್ಟರೇ,ಪ್ರಶಸ್ತಿಗಳೇ ಕುಬ್ಜವಾಗಿ ಬಿಡುತ್ತವೆ.ಇನ್ನೊಂದಿಷ್ಟು ವ್ಯಕ್ತಿತ್ವಗಳು ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸುತ್ತವೆ.ಡಿ.ವಿ.ಜಿ,ಕುವೆಂಪು,ಕಾರಂತರಂತಹ ಶ್ರೇಷ್ಟ ಸಾಹಿತಿಗಳು ‘ಸಾಹಿತ್ಯ ಅಕಾಡೆಮಿ’ ಪ್ರಶಸ್ತಿಗೆ ಭಾಜನಾರಾಗಿ ‘ಪ್ರಶಸ್ತಿ’ಗೆ ಮೆರುಗು ತಂದವರು.
೨೦೧೩ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಪಟ್ಟಿ ನೋಡಿದರೇ,ಈ ಹಿಂದೆ ಪ್ರಶಸ್ತಿ ಸ್ವೀಕರಿಸಿದ ಮಹಾನ್ ಚೇತನಗಳಿಗೇ ಅವಮಾನ ಮಾಡುವಂತಿದೆ. “ಶ್ರೀರಾಮ ಅಪ್ಪನಿಗೆ ಹುಟ್ಟಿದವನಲ್ಲ;ಕುಂತಿ ಮಕ್ಕಳನ್ನು ಹೆತ್ತಿದ್ದು ಕೂಡಾ ವ್ಯಭಿಚಾರದಿಂದ; ಭಗವದ್ಗೀತೆಯನ್ನು ಸುಡಬೇಕು;ಒಕ್ಕಲಿಗರಿಗೆ ಸಾಮಾಜಿಕ ಪ್ರಜ್ಞೆಯಿಲ್ಲ” ಹೀಗೆ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುವ,ಒಂದು ಸಮುದಾಯವನ್ನು ಹಿಂಸೆಗೆ ಪ್ರಚೋದಿಸುವಂತಹ ಬೇಜವಬ್ದಾರಿ ಹೇಳಿಕೆಗಳನ್ನು ಒಂದು ವರ್ಷದಿಂದೀಚೆಗೆ ನೀಡುತ್ತ ಬಂದಿರುವ ಪ್ರೊ.ಭಗವಾನ್ ಅವರನ್ನು ಆಯ್ಕೆ ಮಾಡುವ ಮೂಲಕ ರಾಜ್ಯ ಸರ್ಕಾರವೂ ಸಹ ಇಂತ ಶಾಂತಿ ಭಂಗ ತರುವ ಹೇಳಿಕೆಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಘೋಷಿಸಿದಂತಿದೆ.ಅಷ್ಟಕ್ಕೂ ಭಗವಾನ್ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಕೃತಿಗಳಿಂದ ಹೆಸರು ಮಾಡಿದವರಲ್ಲ ಬದಲಿಗೆ ‘ಬೈಗುಳ’ಗಳಿಂದ ಚಾಲ್ತಿಗೆ ಬಂದವರು.ಭಗವಾನರ ಬಡಬಡಿಕೆಗಳನ್ನೇ ವೈಚಾರಿಕತೆ ಎಂದು ಬಿಂಬಿಸುವುದು ರಾಜ್ಯದ ವೈಚಾರಿಕ ಪರಂಪರೆಗೂ ಅವಮಾನ.
“ಮೊದಲೆಲ್ಲಾ ಬರೆದರೆ ಪ್ರಶಸ್ತಿ ಕೊಡುತಿದ್ದರು,ಈಗೆಲ್ಲಾ ಬಯ್ದರೆ ಪ್ರಶಸ್ತಿ ಕೊಡುತ್ತಾರೆ” ಎಂದು ಜನರು ಅಪಹಾಸ್ಯ ಮಾಡುವಲ್ಲಿಗೆ ಬಂದು ನಿಂತಿದೆ ಕನ್ನಡದ ಸಾಹಿತ್ಯ ಕ್ಷೇತ್ರ.ಪ್ರಶಸ್ತಿಗಳು ವಿವಾದಕ್ಕೀಡಾಗುವುದು ಕನ್ನಡ ಸಾಹಿತ್ಯ ಕ್ಷೇತ್ರಕ್ಕೇನೂ ಹೊಸತಲ್ಲ. ದಿ.ಕಲ್ಬುರ್ಗಿ ಮತ್ತು ದಿ.ಮೂರ್ತಿಗಳ ನಡುವೆ ಪ್ರಶಸ್ತಿಗಾಗಿ ಎದ್ದ ವಿವಾದವೇನೂ ಇನ್ನು ಮರೆತು ಹೋಗಿಲ್ಲ.ಗಮನಿಸಬೇಕಾದ ಸಂಗತಿಯೆಂದರೆ,ಸಾಮಾನ್ಯ ಜನರಿಗ್ಯಾರಿಗೂ ಈ ವಿವಾದದಲ್ಲಿ ಆಸಕ್ತಿಯಿರಲಿಲ್ಲ.ಆದರೆ,ಭಗವಾನ್ ಅವರಿಗೆ ಪ್ರಶಸ್ತಿ ನೀಡುತ್ತಿರುವುದನ್ನು ಜನಸಾಮಾನ್ಯರು ಇಷ್ಟು ದೊಡ್ಡ ಮಟ್ಟದಲ್ಲಿ ವಿರೋಧಿಸುತಿದ್ದಾರೆ.ಸುಮಾರು ೧೧೫೦೦ ಜನರು ಭಗವಾನರಿಗೆ ಪ್ರಶಸ್ತಿ ಕೊಡುವುದನ್ನು ವಿರೋಧಿಸಿ ಆನ್ಲೈನ್ ಪಿಟಿಷನ್ನಿಗೆ ಸಹಿ ಮಾಡಿದ್ದಾರೆ.ಫೇಸ್ಬುಕ್,ಟ್ವಿಟರ್ ಗಳಲ್ಲಿ #WithdrawAward ಎಂಬ ಹ್ಯಾಷ್ ಟ್ಯಾಗಿನಡಿಯಲ್ಲಿ ಎಷ್ಟು ಜನರು ಪ್ರತಿಭಟಿಸುತಿದ್ದಾರೆ ಎಂದು ಸರ್ಚ್ ಮಾಡಿದರೆ ಅರ್ಥವಾದೀತೂ.
ಇತ್ತೀಚೆಗೆ ಚರ್ಚೆಯೊಂದರಲ್ಲಿ ಸಿಕ್ಕಿದ್ದ ಹಿರಿಯ ಸಾಹಿತಿ ಚಂಪಾ ಅವರಿಗೆ ‘ಸಾರ್,ನಾನು ಬಹಳಷ್ಟು ಆನ್ಲೈನ್ ಪಿಟಿಷನ್ನುಗಳಲ್ಲಿ ಭಾಗವಹಿಸಿದ್ದೇನೆ.ಇಷ್ಟು ಮಟ್ಟಿಗೆ ಜನರು ಭಾಗವಹಿಸಿದ್ದನ್ನು ನೋಡಿಲ್ಲ.ಇದೊಂದು ಗಂಭೀರ ವಿಷಯ ಅಂತ ನಿಮಗೆ ಅನ್ನಿಸುತ್ತಿಲ್ಲವೇ?’ಅಂತ ಕೇಳಿದೆ.ಅದಕ್ಕವರು ಪ್ರಗತಿಪರರ ನೆಚ್ಚಿನ Conspiracy theory ಮುಂದಿಟ್ಟುಕೊಂಡು ,’ಮಾಡ್ತಾ ಇರೋದು ಜನರಲ್ರಿ.ವ್ಯವಸ್ಥಿತವಾಗಿ ಮಾಡಿಸಲಾಗುತ್ತಿದೆ’ ಎಂದರು.ಎಲ್ಲವನ್ನೂ ಹೀಗೆ Conspiracy ಎಂದು ಕುಳಿತರೇ ಆಗುತ್ತದೆಯೇ ಎಂದೇ.ಅವರಲ್ಲಿ ಉತ್ತರವಿರಲಿಲ್ಲವೇನೋ ಸುಮ್ಮನಾದರು. ವಿರೋಧ ಪಕ್ಷವೇ ಇಲ್ಲದ ರಾಜ್ಯದಲ್ಲಿ ಯಾವ ಗುಂಪು ವ್ಯವಸ್ಥಿತವಾಗಿ ಕೆಲಸ ಮಾಡಿದ್ದು?
ಭಗವಾನ್ ಪರವಿರುವ ಗುಂಪಿನವರು ಅನಗತ್ಯವಾಗಿ ಕ್ರೆಡಿಟ್ ಕೊಡುತ್ತಿರುವ ಪಕ್ಷದ ಬಗ್ಗೆ,ಆನ್ಲೈನ್ ಚಳವಳಿಯಲ್ಲಿ ಭಾಗವಹಿಸಿದ್ದವರು ‘ರಾಮನ ಹೆಸರಿನಲ್ಲಿ ಮತ ಕೇಳಲು ಬಂದವರು,ರಾಮ ಅಪ್ಪನಿಗೆ ಹುಟ್ಟಿದವನಲ್ಲ ಎನ್ನುವಾಗ ಕಾಣೆಯಾಗಿದ್ದಾರೆ’ ಎಂದು ಕಿಚಾಯಿಸುತ್ತಿರುವುದು ಬಹುಷಃ ಇವರಿಗೆ ತಿಳಿದಿರಲಿಕ್ಕಿಲ್ಲ.
ಸಾರ್ವಜನಿಕ ವಲಯದಿಂದ ಈ ಪರಿಯ ವಿರೋಧವೆದ್ದಾಗ,ಇದನ್ನು ಗಂಭೀರವಾಗಿ ಪರಿಗಣಿಸಬೇಕಿದ್ದ ಅಕಾಡೆಮಿಯ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿಯವರು,’ಅರೆಬೆಂದ ಯುವಕರ ಪ್ರತಿಭಟನೆ’ ಎಂದು ಬೇಜವ್ಬಾರಿ ಹೇಳಿಕೆ ನೀಡಿದರು.ಮಾಲತಿ ಪಟ್ಟಣಶೆಟ್ಟಿಯವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬುದ್ಧಿಜೀವಿ ವಲಯಕ್ಕಿಂತಲೂ ಗಂಭೀರವಾದ ಚರ್ಚೆಗಳು ನಡೆಯುತ್ತವೆ ಎಂಬುದು ತಿಳಿದಂತಿಲ್ಲ.ಅಕ್ಟೋಬರ್ ೧ ರಂದು ಅಕಾಡೆಮಿ ಸದಸ್ಯರು ಮತ್ತೆ ಸಭೆ ಸೇರಲಿದ್ದಾರೆ ಎಂಬ ವರದಿಯೊಂದು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.ಆದರೆ ಸಭೆ ಸೇರಿದ್ದು ಮತ್ತೆಲ್ಲೂ ಸುದ್ದಿಯಾಗಲಿಲ್ಲ.ಈ ಪ್ರಕರಣದಲ್ಲಿ ಯಾವುದು ಸುದ್ದಿಯಾಗಬಾರದು,ಯಾವುದು ಸುದ್ದಿಯಾಗಬೇಕು ಮತ್ತು ಸುದ್ದಿಯಾದರೂ ಹೇಗೆ ಸುದ್ದಿಯಾಗಬೇಕು ಎಂಬುದನ್ನು ಸರ್ಕಾರಿ ಪುರೋಹಿತಶಾಹಿಗಳು ನಿರ್ಧರಿಸುತಿದ್ದಾರೆ.ಮಾಧ್ಯಮ ಲೋಕದಲ್ಲಿರುವ ಮಿತ್ರರನ್ನು ಬಳಸಿಕೊಂಡು ತಮ್ಮನ್ನು ತಾವೇ ಬುದ್ಧಿಜೀವಿಗಳ ಸ್ಥಾನದಲ್ಲೂ(ನಯಾ ಪೈಸೆಯ ಬುದ್ದಿಯಿಲ್ಲದಿದ್ದರೂ),ಹಿಟ್ ಲಿಸ್ಟಿನಲ್ಲೂ ಪ್ರತಿಷ್ಟಾಪಿಸಿಕೊಳ್ಳುವ ಸುದ್ದಿಗಳನ್ನು ಪ್ರಕಟವಾಗುವಂತೆ ನೋಡಿಕೊಳ್ಳಲಾಗುತ್ತಿದೆ.
ಉದಾಹರಣೆಗೆ,ಹಿಂದೂಸ್ಥಾನ್ ಟೈಮ್ಸ್ ಎಂಬ ಪತ್ರಿಕೆಯ ಅಂತರ್ಜಾಲ ಆವೃತ್ತಿಯಲ್ಲಿ,ಯಾರೋ ಸುದೀಪ್ತೋ ಮೊಂಡಲ್ ಎಂಬ ಪತ್ರಕರ್ತನೊಬ್ಬ ಹಿಟ್ ಲಿಸ್ಟಿನಲ್ಲಿರುವ ರಾಜ್ಯದ ಪ್ರಗತಿಪರರ ಪಟ್ಟಿ ಮಾಡಿ ವರದಿ ಮಾಡಿದ್ದ.ಅದರಲ್ಲಿ ಮೊದಲ ಹೆಸರು ಮುಖ್ಯಮಂತಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರದ್ದು.ದಿನೇಶರಿಗೆ ನಿಲುಮೆ ಎಂಬ ಫೇಸ್ಬುಕ್ ಹಿಂದುತ್ವ ಗುಂಪಿನಿಂದ ಕೊಲೆ ಬೆದರಿಕೆ ಬಂದಿತ್ತು ಎಂದು ಬರೆಯುತ್ತಾನೆ ಸುದೀಪ್ತೋ.ಒಂದು ವೇಳೆ ಅದು ನಿಜವಾಗಿದ್ದರೆ, ಅಮೀನ್ ಮಟ್ಟು ಅವರು ನಮ್ಮ ಮೇಲೆ ಕೊಲೆ ಬೆದರಿಕೆಯ ಕೇಸನ್ನೇ ದಾಖಲಿಸಬೇಕಿತ್ತಲ್ಲ. ಹಾಗೇಕೆ ಮಾಡಲಿಲ್ಲ? ಅಮೀನ್ ಮಟ್ಟು ಅವರಿಗೆ ನೈತಿಕತೆ ಎಂಬುದು ಇದ್ದಿದ್ದರೆ,ಇದು ಸುಳ್ಳು ಎಂದು ಅವರ ಮಿತ್ರನಾದ ಸುದೀಪ್ತೊನಿಗೆ ಹೇಳಬೇಕಿತ್ತು. ಆದರೆ,ಸುಳ್ಳು ಸುದ್ದಿಯನ್ನೇ ಕೀರಿಟದಂತೆ ಅವರು ತಮ್ಮ ತಲೆಯ ಮೇಲೆ ಇರಿಸಿಕೊಂಡಿರುವುದು ವರದಿ ಪ್ರಕಟವಾದ ಮರುದಿನ ಬರೆದುಕೊಂಡ ಸ್ಟೇಟಸ್ಸಿನಿಂದ ಸಾಬೀತಾಗುತ್ತದೆ.ಎಂತಾ ಚಾಲೂ ಜನಗಳೆಂದರೆ,ವೆಬ್ ವರದಿಗೂ ಮರುದಿನ ಪತ್ರಿಕೆಯಲ್ಲಿ ಬಂದ ವರದಿಯ ನಡುವಿನ ವ್ಯತ್ಯಾಸ ಗಮನಿಸಬೇಕು.ವೆಬ್ಸೈಟಿನಲ್ಲಿ ನಿಲುಮೆಯಿಂದ ಕೊಲೆ ಬೆದರಿಕೆ ಎಂದರೆ,ಪತ್ರಿಕೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಎಂದು ಬರೆಸಲಾಗಿದೆ.ಈ ವ್ಯತ್ಯಾಸವೇಕೋ? ವೈಚಾರಿಕ ವಿರೋಧಿಗಳಿಗೆ ಕೊಲೆ ಬೆದರಿಕೆ ಹಾಕಿದವರ ಪಟ್ಟಕಟ್ಟುವುದು ‘ವೈಚಾರಿಕ ಅಸಹನೆ’ಯೆನ್ನೋಣವೇ ಅಥವಾ ದ್ವೇಷವೆನ್ನೋಣವೇ ಮಟ್ಟು ಅವರೇ?
ಇನ್ನೊಂದು ಉದಾಹರಣೆ,ಅಕಾಡೆಮಿಗೆ ಕರೆ ಮಾಡಿ ಪ್ರಶಸ್ತಿ ಕೊಟ್ಟಿದ್ದು ಸರಿಯಲ್ಲ ಎಂದ ಹುಬ್ಬಳ್ಳಿಯ ಹಾಸ್ಟೆಲ್ ವಾರ್ಡನ್ ಒಬ್ಬನನ್ನು ಬೆಂಗಳೂರಿಗೆ ಎತ್ತಾಕಿಕೊಂಡು ಬಂದಿದ್ದು ‘ಬೆದರಿಕೆ ಕರೆ ಮಾಡಿದ’ ಎಂದು ಸುದ್ದಿಯಾಗುತ್ತದೆ.ಇಂತವೆಲ್ಲ ಸುದ್ದಿಗಳಾಗುತ್ತವೆ.ಆದರೆ,11500 ಜನರ ಸಹಿಯನ್ನು,ಪ್ರತಿಭಟನೆಯನ್ನು ಸುದ್ದಿಯಾಗಲು ಬಿಡುತ್ತಿಲ್ಲ..ಹೇಗಿದೆ ನೋಡಿ,ನಮ್ಮ ರಾಜ್ಯದ ಪ್ರಜಾಪ್ರಭುತ್ವ.ಪ್ರಜೆಯೊಬ್ಬನಿಗೆ ಪ್ರಶ್ನಿಸುವ ಅಧಿಕಾರವೂ ಇಲ್ಲ! ಕೇಳಬೇಕಾದ ವಿರೋಧ ಪಕ್ಷವೇ ಅಸ್ತಿತ್ವದಲ್ಲಿ ಇಲ್ಲದಿರುವಾಗ,ಕೇಳುವರ್ಯಾರು ಸ್ವಾಮಿ?
ಕೇಳುವವರಿಲ್ಲದಿದ್ದಾಗ,ಆಡಿದ್ದೇ ಆಟವಲ್ಲವೇ? ಈ ನಡುವೆ,ಅಕಾಡೆಮಿಯ ಪಡಸಾಲೆಯಿಂದ ಒಂದೊಂದೇ ಗಾಳಿ ಸುದ್ದಿಗಳು ಹೊರಬರುತ್ತಿವೆ.ಭಗವಾನರ ಆಯ್ಕೆ ಕಡೆಯ 2-3 ದಿನಗಳಲ್ಲಿ ಆಗಿದ್ದು.ಅದಕ್ಕೂ ಮೊದಲು ಅವರ ಹೆಸರೇ ಲಿಸ್ಟಿನಲ್ಲಿರಲಿಲ್ಲ. ಅವರನ್ನು ಆಯ್ಕೆ ಮಾಡುವಾಗ ಯಾವ ಕೃತಿಗೆ ನೀಡಬೇಕು ಎಂಬುದೆಲ್ಲಾ ಚರ್ಚೆಯೇ ಆಗಿರಲಿಲ್ಲವಂತೆ! ಜನರು ವಿರೋಧ ವ್ಯಕ್ತಪಡಿಸಿದ ಮೇಲೆ ಮೊನ್ನೆ ಮೊನ್ನೆ ಸಭೆ ಸೇರಿಕೊಂಡವರು ಕೃತಿಗಳನ್ನು ತರಿಸಿಕೊಂಡು, ಯುದ್ಧಕಾಲದಲ್ಲಿ ಶಸ್ತ್ರಭ್ಯಾಸದಲ್ಲಿ ತೊಡಗಿಕೊಂಡಿದ್ದಾರಂತೆ! ಎಂತ ನಾಚಿಕೇಡಿನ ವಿದ್ಯಾಮಾನವಿದು.ಕೃತಿಯನ್ನು ಆಧರಿಸಿ ಪ್ರಶಸ್ತಿಗಾಗಿ ಆಯ್ಕೆ ಮಾಡುವುದು ಬಿಟ್ಟು,ಆಯ್ಕೆ ಮಾಡಿದ ಮೇಲೆ ಕೃತಿಯನ್ನು ಹುಡುಕಿಕೊಳ್ಳುವುದು. ಪ್ರಶಸ್ತಿಗಾಗಿ ‘ಮಾನದಂಡ’ವಿದ್ದಿದ್ದೇ ಆದರೆ ಅದು ಇರುವುದೇ “ದಂಡ” ಎಂದು ಸಾಬೀತು ಮಾಡುವ ಈ ಗಾಳಿ ಸುದ್ದಿ ನಿಜವಾದರೇ,’ಕನ್ನಡ ಸಾಹಿತ್ಯ ಅಕಾಡಮ್ಮಿ’ ಎಂದು ಮರುನಾಮಕರಣ ಮಾಡುವುದೊಳಿತು.
ಜನರಿಂದ ಇಷ್ಟೆಲ್ಲಾ ವಿರೋಧ ಬಂದ ಮೇಲು ‘ಸಂತೋಷದಿಂದ ಪ್ರಶಸ್ತಿ ಸ್ವಿಕರಿಸುತ್ತೇನೆ’ ಎನ್ನುವ ಭಗವಾನರ ಬಗ್ಗೆ ಜನರಿಗೇನು ಎನಿಸುವುದಿಲ್ಲ.ಯಾಕೆಂದರೆ ಆ ಮನುಷ್ಯನ ನೈತಿಕತೆಯೆನ್ನುವುದು ಜನರಿಗೆ ಅರ್ಥವಾಗಿದೆ. ಆದರೆ, ಅಕಾಡೆಮಿಯ ಸದಸ್ಯರಿಗೆ ನೈತಿಕತೆ ಇರುವುದಾದರೇ,ಬಹಿರಂಗವಾಗಿ ಈ ಬಾರಿ ಪ್ರಶಸ್ತಿ ಆಯ್ಕೆಯಲ್ಲಿ ನಡೆದ ವಿದ್ಯಾಮಾನಗಳನ್ನು ಖಾಸಗಿಯಾಗಿ ಅಸಹಾಯಕತೆ ತೋಡಿಕೊಳ್ಳುವ ಬದಲಿಗೆ ಸಾರ್ವಜನಿಕವಾಗಿ ಹೇಳಿಕೊಳ್ಳುಬೇಕಿತ್ತು.ಹೇಳಿಕೊಳ್ಳಲಾಗದಿದ್ದರೆ ಹೋಗಲಿ,ಈಗ ಪ್ರಶಸ್ತಿ ಹಿಂತಿರುಗಿಸುವ ಪರ್ವ ನಡೆಯುತ್ತಿದೆಯಲ್ಲಾ,ಅಕಾಡೆಮಿಯನ್ನು ಅಕಾಡಮ್ಮಿ ಮಾಡಿದ ಈ ಜನರಾದರೂ ರಾಜೀನಾಮೆ ಕೊಟ್ಟು ಹೋಗಬಾರದೇ?
ಅಕಾಡೆಮಿ ಹಟಕ್ಕೆ ಬಿದ್ದು ಭಗವಾನರರಿಗೆ ಪ್ರಶಸ್ತಿ ಕೊಡುವಂತೆ ಕಾಣುತ್ತಿದೆ. ಪ್ರಶಸ್ತಿ ಸಮಯದಲ್ಲಾದರೂ ಪ್ರತಿಭಟನೆಯ ಕಾವು ಇಳಿಸಲಿಕ್ಕಾಗಿ,ಬಾಯಿ ಮುಚ್ಚಿಕೊಂಡಿರುವಂತೆ ಭಗವಾನರಿಗೆ ಆದೇಶ ಹೊರಡಿಸಲಾಗಿದೆಯಂತೆ.ಈ ಸುದ್ದಿಗೆ ಪುಷ್ಟಿಯೆನುವಂತೆ, ಮೊನ್ನೆ ಬೆಂಗಳೂರಿಗೆ ಬಂದು ಬಡಬಡಿಸಿ ಹೋದ ಭಗವಾನರರು ಮತ್ತೆಲ್ಲೂ ಭೀಕರ ಭಾಷಣ ಮಾಡಿಲ್ಲ.ಪ್ರಶಸ್ತಿ ಹೊಡೆದುಕೊಳ್ಳಲು ಇರುವ ಎರಡು ತಿಂಗಳು ತೆಪ್ಪಗಿದ್ದು,ಆ ನಂತರ ಮತ್ತೆ ತನ್ನ ಬಡಬಡಿಕೆ ಶುರು ಮಾಡುತ್ತಾರೆ.ಅಷ್ಟರಲ್ಲಿ ಪ್ರಶಸ್ತಿ ಕೊಟ್ಟಾಗಿರುತ್ತದಲ್ಲ, ಅಕಾಡಮ್ಮಿಯ ತಲೆ ನೋವು ಕಳೆಯಿತು,ಕರ್ನಾಟಕದ ಜನರ ಕಿವಿಗೆ ಮಾತ್ರ ಭಗವಾನರ ಬಡಬಡಿಕೆಯ ಶಿಕ್ಷೆ ತಪ್ಪುವುದಿಲ್ಲ. ಹಟಕ್ಕೆ ಬಿದ್ದಿರುವುದು ಅಕಾಡೆಮಿ ಮಾತ್ರವಲ್ಲ,ಭಗವಾನರ ಬಡಬಡಿಕೆಯನ್ನೂ’ಬೌದ್ಧಿಕತೆ’ ಎನ್ನುತ್ತಿರುವ ಪ್ರಗತಿಪರ ಗುಂಪು ಮತ್ತು ಇವೆರಡು ಗುಂಪಿನ ನಡುವೆ ಜಾಣಕಿವುಡು ಪ್ರದರ್ಶಿಸುತ್ತಿರುವ ಬಲಪಂಥೀಯ ಬೌದ್ಧಿಕ ಸಂಘಟನೆಗಳು ಮತ್ತು ಸಾಹಿತಿಗಳು.
ಒಟ್ಟಿನಲ್ಲಿ,ಮಾನವಿರುವುದೇ ದಂಡ ಎಂಬುದೇ ಪ್ರಶಸ್ತಿ ಆಯ್ಕೆಯ ಮಾನದಂಡವಾಗಿರುವಾಗ ಪ್ರಶಸ್ತಿಗಳ ಮಾನ ಹೋಗದಿರುತ್ತದೆಯೇ?
ಕುಂತಿ ಮಕ್ಕಳನ್ನು ಹೆತ್ತಿದ್ದು ಕೂಡಾ ವ್ಯಭಿಚಾರದಿಂದ ಎಂದರೆ, ವೈದ್ಯಕೀಯವಾಗಿ ಬೇರೆ ಬೇರೆ ವಿಧಾನಗಳಿಂದ ಗರ್ಭ ಧರಿಸಿ ಮಕ್ಕಳನ್ನು ಪಡೆದವರಿಗೆ ಎಷ್ಟು ನೋವಾಗಬಹುದು. ಕೆಲವು ಸಾಹಿತಿಗಳು (?) ಯಾಕೆ ಹೀಗೆ ಒದರುತ್ತರೋ
Swamy, dayavittu taavu S L Bairappanavaro barediro “Parva” pustaka odabekagi vinanti
ಅವರಿಬ್ಬರೂ ಹಾಗೆಯೇ ಆದವರು. ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಪ್ಲೀಸ್.
ನಾನು ತುಳು ಸಾಹಿತ್ಯ ಅಕಾಡೆಮಿಯ ಸದಸ್ಯನಾಗಿದ್ದೆ. ನಾನು ಮೂರು ವರ್ಷ ಅಲ್ಲಿನ ಪ್ರಶಸ್ತಿಗಳ ಪಡೆದು ಕೊಳ್ಳುವಿಕೆಯ ಬಗ್ಗೆ ತಿಳಿದಿದ್ದೇನೆ. ಹಾಗೂ ಆಗಲೂ ತಕರಾರು ಎತ್ತಿದೆ. ವಶೀಲೀಬಾಜಿಯು ಬಹಳಷ್ಟು ಕೆಲಸ ಮಾಡುತ್ತದೆ. ಕಾರ್ನಾಡ್. ಕಂಬಾರರು. ಭಗ ವಾನರರು ಎಲ್ಲಾ ಎಲ್ಲಿದ್ದಾರೆಂದೇ ತಿಳಿಯುತ್ತಿಲ. ಅವರೆಲ್ಲರೂ ಪ್ರಶಸ್ತಿ ಹಿಂತಿರುಗಿಸದ ಸ್ಥಿತಿಯಲ್ಲಿದ್ದಾರೆ.
I earnestly request Mr. Bhagwan to return the Akademi award protesting the barbarity of Dadri massacre.