ಪ್ರಶಸ್ತಿ ಹಿಂತಿರುಗಿಸುವಿಕೆ ಮತ್ತು ಸೆಕ್ಯುಲರ್ ಸಮೂಹ ಸನ್ನಿ
– ರಾಕೇಶ್ ಶೆಟ್ಟಿ
ದೇಶದಲ್ಲಿ ಪ್ರಶಸ್ತಿ ಹಿಂತಿರುಗಿಸುವಿಕೆಯ ಪರ್ವ ಭರ್ಜರಿಯಾಗಿ ಶುರುವಾಗಿದೆ.ಕಲ್ಬುರ್ಗಿ ಹತ್ಯೆಯನ್ನು ಖಂಡಿಸಿ ಚಂಪಾ ಅವರಿಂದ ರಾಜ್ಯದಲ್ಲಿ ಶುರುವಾಗಿದ್ದು ಈಗ ನಯನತಾರಾ ಸೆಹಗಲ್ ಅವರು ಹಿಂದಿರುಗಿಸುವ ಮೂಲಕ ಸಾಮೂಹಿಕ ಸನ್ನಿಯಂತೆ ಹರಡಲಾರಂಭಿಸಿದೆ.ಇವರೆಲ್ಲಾ ನೀಡುತ್ತಿರುವ ಕಾರಣ “ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ.ತುರ್ತು ಪರಿಸ್ಥಿತಿಗಿಂತಲೂ ಭೀಕರವಾದ ಸನ್ನಿವೇಶವಿದೆ.ದಾದ್ರಿ ಹತ್ಯೆಯನ್ನು ವಿರೋಧಿಸಿ,ಕಲ್ಬುರ್ಗಿ ಕೊಲೆ ಪ್ರಕರಣದಲ್ಲಿ ಸಾಹಿತ್ಯ ಅಕಾಡೆಮಿಯ ಮೌನವನ್ನು ವಿರೋಧಿಸಿ,ಮೋದಿಯ ಮೌನವನ್ನು ವಿರೋಧಿಸಿ,’ ಇತ್ಯಾದಿ ಇತ್ಯಾದಿ ಕಾರಣಗಳನ್ನು ನೀಡಿದ್ದಾರೆ.
ನಿಜಕ್ಕೂ ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ಗಂಭೀರ ಸನ್ನಿವೇಶ ಸೃಷ್ಟಿಯಾಗಿದೆಯಾ? ಅಥವಾ ಸೆಕ್ಯುಲರ್ ಗುಂಪು ಸಮೂಹ ಸನ್ನಿಗೊಳಗಾಗಿದೆಯೇ? ಊಹೂಂ.ಸನ್ನಿಗೊಳಗಾಗುವಷ್ಟು ಮುಗ್ದರೇನಲ್ಲ ಇವರು. Mass Hysteria ಸೃಷ್ಟಿಸುವಷ್ಟು ಸಾಮರ್ಥ್ಯವುಳ್ಳ ಜನರಿವರು.2002ರ ಗುಜರಾತ್ ಗಲಭೆಯನ್ನು ನೆನಪು ಮಾಡಿಕೊಳ್ಳಿ.ಆಗ ಜನರು ಈ ಹುಟ್ಟು ಹಾಕಿದ ಸಮೂಹ ಸನ್ನಿಯೇನೂ ಕಡಿಮೆಯದೇ,ಒಬ್ಬ ಮುಖ್ಯಮಂತ್ರಿಯ ಮಿತಿಯಲ್ಲಿ ಏನೆಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಿತ್ತೋ ಅದನ್ನೆಲ್ಲಾ ಮಾಡಿಯೂ ನರೇಂದ್ರ ಮೋದಿಯವರಿಗೆ ನರಹಂತಕ ಪಟ್ಟ ಕಟ್ಟಿಸಿ,ಆಗಿನ ಪ್ರಧಾನಿ ವಾಜಪೇಯಿಯವರಿಂದಲೂ ’ರಾಜಧರ್ಮ ಪಾಲನೆ’ಯ ಮಾತನ್ನೂ ಆಡಿಸಿಬಿಟ್ಟಿತ್ತು ಈ ಸೆಕ್ಯುಲರ್ ಸಮೂಹ ಸನ್ನಿ. ಹಾಗೆಂದು ಗುಜರಾತ್ ಗಲಭೆಯನ್ನೂ ಸಮರ್ಥಿಸುತ್ತಿಲ್ಲ.ಅದಕ್ಕೂ ಮೊದಲು ಈ ದೇಶ ಅಂತ ಗಲಭೆಯನ್ನೇ ನೋಡಿರಲಿಲ್ಲವಾ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಿ.
- 2000ಕ್ಕೂ ಹೆಚ್ಚೂ ಮುಸ್ಲಿಂರನ್ನು ಬಲಿತೆಗೆದುಕೊಂಡ ಅಸ್ಸಾಂನ ನೆಲ್ಲಿ ಹತ್ಯಾಕಾಂಡ ನಡೆದ 1983 ಇಸವಿಯಲ್ಲಿ ರಾಷ್ಟ್ರಪತಿ ಆಳ್ವಿಕೆಯಿತ್ತು.
- 2000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಉತ್ತರ ಪ್ರದೇಶದ ಮೊರಾದಾಬಾದ್ ಗಲಭೆ ನಡೆದಾಗ (1980ನೇ ಇಸವಿ) ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ಸಿನ ವಿ.ಪಿ ಸಿಂಗ್.(ಆಗ ಕಾಂಗ್ರೆಸ್ಸಿನಲ್ಲಿದ್ದರು)
- 2800ಕ್ಕೂ ಹೆಚ್ಚು ಸಿಖ್ಖರನ್ನು ಬಲಿತೆಗೆದುಕೊಂಡ 1984ರ ಸಿಖ್ ಹತ್ಯಾಕಾಂಡ ನಡೆದಿದ್ದು ಪ್ರಧಾನಿ ಶ್ರೀಮಾನ್ ರಾಜೀವ್ ಗಾಂಧಿಯವರ ಕಾಲದಲ್ಲಿ.(’ದೊಡ್ಡ ಮರವೊಂದು ಉರುಳಿದಾಗ ಭೂಮಿ ಕಂಪಿಸುವುದು ಸಹಜ’ ಎಂದು ಧಿಮಾಕಿನಿಂದ ಪ್ರತಿಕ್ರಿಯಿಸಿದ್ದು ನೆನಪಿರಬೇಕಲ್ಲವೇ?)
- ಕಾಶ್ಮೀರ ಕಣಿವೆಯಿಂದ ಲಕ್ಷಗಟ್ಟಲೆ ಕಾಶ್ಮೀರಿ ಪಂಡಿತರನ್ನು ಮತ್ತು ಇತರೆ ಜಾತಿಯ ಹಿಂದೂಗಳನ್ನು 1990ರಲ್ಲಿ ಕೊಲೆ,ಅತ್ಯಾಚಾರಗೈದು,ಹೊರಗಟ್ಟಿದಾಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದದ್ದು ಜನತಾದಳದ ವಿ.ಪಿ ಸಿಂಗ್
- 1990ರ ಇಸವಿಯಲ್ಲಿ ಮುಂಬೈನಲ್ಲಿ ನಡೆದ ಭೀಕರ ಕೋಮುಗಲಭೆಯ ಕಾಲದಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ಸಿನ ಸುಧಾಕರ್ ನಾಯಕ್
- 2000ರಲ್ಲಿ ಇಸವಿ ಕರ್ನಾಟಕದ ಕಂಬಾಲಪಲ್ಲಿ ದುರಂತ ನಡೆದಾಗ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ಸಿನ ಎಸ್.ಎಂ ಕೃಷ್ಣ
- 2006ರಲ್ಲಿ ಮಹಾರಾಷ್ಟ್ರದ ಖೈರ್ಲಾಂಜಿಯ ದುರಂತ ನಡೆದಾಗ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ಸಿನ ವಿಲಾಸ್ ರಾವ್ ದೇಶಮುಖ್
- ದೇಶದ ಭದ್ರತಾ ವ್ಯವಸ್ಥೆಯನ್ನು ಹಾಸ್ಯಾಸ್ಪದವಾಗಿಸಿದ 2008ರ ಮುಂಬೈ ಉಗ್ರರ ದಾಳಿಯ ಸಮಯದಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ಸಿನ ವಿಲಾಸ್ ರಾವ್ ದೇಶಮುಖ್
ಇವೆಲ್ಲಾ ಕೆಲವೇ ಕೆಲವು ಉದಾಹರಣೆಗಳು.ಸ್ವಾತಂತ್ರ್ಯಾನಂತರ ಆದ ಗಲಭೆಗಳು,ಹತ್ಯಾಕಾಂಡಗಳೂ ಇನ್ನೂ ಬಹಳಷ್ಟಿವೆ.ಇದುವರೆಗೂ ಆಳ್ವಿಕೆ ನಡೆಸಿರುವ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಮೇಲೂ ಇಂತಹ ಕಪ್ಪು ಚುಕ್ಕೆಗಳಿವೆ.ನರೇಂದ್ರ ಮೋದಿಯೆಂಬ ವ್ಯಕ್ತಿ ಮುಖ್ಯಮಂತ್ರಿಯಾಗುವ ಮೊದಲೂ,ಪ್ರಧಾನಮಂತ್ರಿಯಾಗುವ ಮೊದಲೂ ಈ ದೇಶದಲ್ಲಿ,ಅಷ್ಟೇ ಏಕೆ ಪ್ರಪಂಚದಲ್ಲಿ ಮನುಷ್ಯನೆಂಬ ಪ್ರಾಣಿ ಇರುವೆಡೆಯಲೆಲ್ಲಾ ಘಟಿಸುವಂತೆಯೇ ಹಿಂಸಾಚಾರದ ಘಟನೆಗಳೂ ನಡೆದಿವೆ ಮುಂದೆಯೂ ನಡೆಯುತ್ತಲೇ ಇರುತ್ತವೆ.ವಾಸ್ತವ ಹೀಗಿರುವಾಗ,ಈಗ ಭಾರತದಲ್ಲಿ ಭೂಮಿಯೇ ಬಾಯ್ದೆರೆದು ಕುಳಿತಿರುವಂತೆ,ಆಕಾಶವೇನೋ ತಲೆಯ ಮೇಲೆ ಉರುಳುತ್ತಿದೆಯೆಂಬಂತೆ ಈ ಜನರು ಬೊಬ್ಬೆ ಹೊಡೆಯುತ್ತಿರುವ ಕಾರಣವೇನು?
ಕಾರಣ ಸ್ಪಷ್ಟವಾಗಿದೆ.ಈ ದೇಶದ ಬುದ್ಧಿಜೀವಿಗಳ ನಿಂತ ನೆಲ ಕುಸಿದಿದ್ದು 2014ರ ಮೇ 16ರ ದಿನ.ನೆಹರೂ ಕಾಲದಿಂದ ಬುದ್ಧಿಜೀವಿಗಳ ಕಾಶಿ JNU ಇಂದ ಹಿಡಿದು ದೇಶದ ಮೂಲೆ ಮೂಲೆಯ ಸೆಕ್ಯುಲರ್ ಬಿಲಗಳಲ್ಲಿ ಸೇರಿಕೊಂಡಿದ್ದವರಿಗೆಲ್ಲ ಮುಳುಗು ನೀರಿನ ಅನುಭವವಾದ ದಿನವದು.ಜಾತಿ ಮತ್ತು ದ್ವೇಷದ ರಾಜಕೀಯಕ್ಕೆ ಕ್ಯಾರೇ ಎನ್ನದ ಜನರು ಮೋದಿಯವರ ಅಭಿವೃದ್ಧಿ ಮಂತ್ರಕ್ಕೆ ಮತ ನೀಡಿದ್ದು ಬುದ್ಧಿಜೀವಿಗಳನ್ನು ದಂಗುಬಡಿಸಿತು.ಸಾಮಾಜಿಕ ಜಾಲತಾಣಗಳು ಇನ್ನೂ ಕಣ್ಣು ಬಿಡುತ್ತಿರುವಾಗಲೇ, ಅಷ್ಟೆಲ್ಲಾ ವ್ಯವಸ್ಥಿತ ಹೇಟ್ ಕ್ಯಾಂಪೇನ್ ಮಾಡಿಯೂ ನಮ್ಮ ಕೈಯಿಂದ ತಪ್ಪಿಸಿಕೊಂಡ ಈ ಚಾಣಾಕ್ಷ ಮೋದಿ,ಇನ್ನೀಗ ಸಾಮಾಜಿಕ ಜಾಲತಾಣಗಳ ಅಬ್ಬರದ ದಿನಗಳಲ್ಲಿ ನಮ್ಮ ಕೈಗೆ ಸಿಗುತ್ತಾನೆಯೇ ಎಂಬುದೇ ಇವರ ಅಳಲು.ಇದರ ಜೊತೆಗೆ NGOಗಳ ಹೆಸರಿನಲ್ಲಿ ಇವರ ಐಡಿಯಾಲಜಿಯನ್ನು ಹರಡಲು ಮೊದಲೆಲ್ಲಾ ದಾರಿಗಳಿದ್ದವು.ಇವರ ಜೇಬಿಗೂ ಆಗ ಸುಭೀಕ್ಷದ ದಿನಗಳು,ಈ ಮಹಾನುಭಾವ ಮೋದಿ ಬಂದ ಮೇಲೆ ಅದಕ್ಕೂ ಕಲ್ಲು ಹಾಕಿದ್ದಾರೆ.ವಿದೇಶಿ ದೇಣಿಗೆ ಪಡೆಯುವ NGOಗಳ ಮೇಲೆ ಕಣ್ಗಾವಲಿದೆ,ಬೇನಾಮಿ NGOಗಳಿಗೆ ಬೀಗವನ್ನು ಜಡಿಯಲಾಗಿದೆ.ಗಂಜಿ ಕೇಂದ್ರಗಳೆಲ್ಲ ಮುಚ್ಚಿದಾಗ ಬಂಡಾಯವೇಳುವುದೂ ಸಹಜವೇ.ಈಗ ಆಗುತ್ತಿರುವುದೂ ಅದೇ ತಾನೇ?
ಇನ್ನೊಂದು ವಿಷಯ ಗಮನಿಸಬೇಕು.ಗುಜರಾತ್ ಗಲಭೆಯ ಸಂದರ್ಭದಲ್ಲೂ,ಬುದ್ಧಿಜೀವಿಗಳ ಮಾತೃಪಕ್ಷ ಕಾಂಗ್ರೆಸ್ಸ್ ನೆಲಕಚ್ಚಿ ಹೀನಾಯ ಸ್ಥಿತಿಯಲ್ಲಿತ್ತು.ವಾಜಪೇಯಿಯವರ ಪ್ರಭಾವದ ಮುಂದೆ ಕೈ ಕಾಣದಂತಾಗಿತ್ತು.ಹಸಿದು ಕುಳಿತವರಿಗೆ ಗುಜರಾತಿನ ನೆತ್ತರು ಹರಿವಾಣದ ಮೇಲೆ ಸಿಕ್ಕಂತಾಯಿತು! ಶುರುವಾಯಿತು ನೋಡಿ ಹೇಟ್ ಕ್ಯಾಂಪೇನ್. ಇಂತದ್ದೊಂದು ಸುಳ್ಳಿನ ಕ್ಯಾಂಪೇನ್ ಅನ್ನು ನೇರಾನೇರ ಎದುರಿಸಬೇಕಾಗಿದ್ದ ಬಿಜೆಪಿ,ಅಂದಿನ ಮೈತ್ರಿ ಸರ್ಕಾರದ ಅನಿವಾರ್ಯತೆಗೋ ಏನೋ Defensive modeಗೆ ಇಳಿದು ಬೆನ್ನು ಬಾಗಿಸಿತು,ಸಿಕ್ಕ ಅವಕಾಶವನ್ನು ಬಿಟ್ಟಾರೇನು? ಸೆಕ್ಯುಲರ್ ಸುಳ್ಳಿನ ಸವಾರಿ ಶುರುವಾಯಿತು.ವೃತ್ತಿ ಧರ್ಮ ಮರೆತ ಮುಖ್ಯವಾಹಿನಿಯ ಮೀಡಿಯಾಗಳೂ ಈ ಸುಳ್ಳಿಗೇ ದನಿಗೂಡಿಸಿದವು.ಮುಂದಿನ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಿತು ಮತ್ತೆ ಕಾಂಗ್ರೆಸ್ಸ್ ಮುನ್ನೆಲೆಗೆ ಬಂತು. ಇವರು ಸೃಷ್ಟಿಸಿದ ಸುಳ್ಳಿನ ಮೂಟೆಯಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರು ಮಣ್ಣುಪಾಲಾಗಿದ್ದು ಮಾತ್ರವಲ್ಲ,ಮೋದಿಯವರನ್ನು ಖಳನಾಯಕನ ಸ್ಥಾನದಲ್ಲಿ ತಂದು ನಿಲ್ಲಿಸಿತ್ತು.ಹತ್ತು ವರ್ಷಗಳ ದುರಾಡಳಿತದ ನಡುವೆಯೂ ನಡೆಯುತ್ತಲೇ ಬಂದ ಈ ಸೆಕ್ಯುಲರ್ ಸುಳ್ಳಿನ ಬಲೂನಿಗೆ ಸೂಜಿ ಚುಚ್ಚಿದ್ದು ಸಾಮಾಜಿಕ ಜಾಲತಾಣಗಳ ಬರಹಗಾರರು.
ಅಷ್ಟಕ್ಕೇ ಕತೆ ಮುಗಿಯಲಿಲ್ಲ,2014ರ ಲೋಕಸಭೆಯ ಚುನಾವಣೆಯ ಮುಖ್ಯ ಅಖಾಡಗಳಲ್ಲಿ ಸಾಮಾಜಿಕ ಜಾಲತಾಣವೂ ಒಂದಾಗಿತ್ತು ಮತ್ತು ಮೋದಿಯವರೂ ಅದನ್ನು ಸಮರ್ಥವಾಗಿ ಬಳಸಿಕೊಂಡರು.ಕೇವಲ ಅದಷ್ಟೇ ಬುದ್ಧಿಜೀವಿಗಳ ಕೋಪಕ್ಕೆ ಕಾರಣವಲ್ಲ. ಯಾವ “ಬುದ್ಧಿಜೀವಿ” ಎಂಬ ಪದವನ್ನು ತಲೆಯ ಮೇಲಿನ ಕೀರಿಟದಂತೆ ಹೊತ್ತು ತಿರುಗುತಿದ್ದರೋ ಅದನ್ನೂ ಅವರೇ ಬೇಡ ಬೇಡ ಎನ್ನುವಂತೆ ಮಾಡಿದ್ದೂ ಸಾಮಾಜಿಕ ಜಾಲತಾಣಗಳೇ.ಒಂದು ಕಾಲದಲ್ಲಿ ತಾವು ಹೇಳಿದ್ದೇ ’ವೈಚಾರಿಕತೆ,ಬೌದ್ಧಿಕತೆ’ ಎನ್ನುತಿದ್ದವರಿಗೆ ಮೀಸೆ ಚಿಗುರದ ಯುವಕರ ತರ್ಕಬದ್ಧ ಪ್ರಶ್ನೆಗಳಿಗೆ ಉತ್ತರಗಳೂ ಸಿಗುತ್ತಿಲ್ಲ.’ನಮ್ಮನ್ನೇ ಪ್ರಶ್ನೆ ಮಾಡ್ತಾರಲ್ರೀ’ ಎನ್ನುವ ಹತಾಶೆ ಎದ್ದು ಕಾಣುತ್ತಿದೆ.
ವಾಜಪೇಯಿಯವರ ಕಾಲಕ್ಕಿಂತಲೂ ಅತಿಕೆಟ್ಟ ದಿನಗಳನ್ನು ಕಾಂಗ್ರೆಸ್ಸ್ ಮೋದಿಯವರ ಕಾಲದಲ್ಲಿ ನೋಡುತ್ತಿದೆ. ಮಾತೃಪಕ್ಷವೇ ದೈನೇಸಿ ಸ್ಥಿತಿಯಲ್ಲಿರುವಾಗ ಋಣ ತೀರಿಸದಿದ್ದರೇ ಹೇಗೆ? ಅದೇ ಕಾರಣಕ್ಕಾಗಿಯೇ ಮುಖ್ಯವಾಗಿ ಮೂರು ಸುದ್ದಿಗಳನ್ನು ಮುಂದಿಟ್ಟುಕೊಂಡು ಮತ್ತೆ ಅಖಾಡಕ್ಕಿಳಿದಿದ್ದಾರೆ.
1) ದಾಭೋಲ್ಕರ್, ಪನ್ಸಾರೆ, ಕಲ್ಬುರ್ಗಿಯವರ ಹಂತಕರನ್ನು ಬಂಧಿಸಲಾಗಿಲ್ಲ – ವಿಷಯವೇನೋ ಸರಿ.ಅದು ಆಯಾ ರಾಜ್ಯಗಳ ಕಾನೂನು ಸುವ್ಯವಸ್ಥೆಯ ವೈಫಲ್ಯವೂ ಹೌದು.ಆದಷ್ಟು ಬೇಗ ಹಂತಕರನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕಾದದ್ದು ನ್ಯಾಯ ಸಮ್ಮತ ಬೇಡಿಕೆಯೇ ಹೌದು.
2) ದಾದ್ರಿಯಲ್ಲಿ ದನದ ಮಾಂಸವಿಟ್ಟುಕೊಂಡಿದ್ದ ಎಂಬ ಕಾರಣಕ್ಕಾಗಿಯೇ ಮುಸ್ಲಿಂ ಒಬ್ಬರ ಹತ್ಯೆಯಾದ ಸುದ್ದಿ – ಈ ಸುದ್ದಿಗಳಿಗೇ ಹಲವು ಮುಖಗಳಿರುವ ವರದಿಗಳು ಬಂದಿವೆ. ಅದರಲ್ಲಿ ಮುಖ್ಯವಾಹಿನಿಗಳಲ್ಲಿ ಕಾಣಿಸಿಕೊಂಡ ದನದ ಮಾಂಸದ ಕಾರಣವೂ ಒಂದಾದರೇ,ಇನ್ನೊಂದು ಅದೇ ಗ್ರಾಮದ ಹೋಂಗಾರ್ಡ್ ಒಬ್ಬನ ಜೊತೆಗೆ ಹತ್ಯೆಗೀಡಾದ ವ್ಯಕ್ತಿಗಿದ್ದ ವೈಯುಕ್ತಿಕ ತಕರಾರು.ಮತ್ತೊಂದು ವರದಿಯ ಪ್ರಕಾರ ಹತ್ಯೆಗೀಡಾದ ವ್ಯಕ್ತಿ ಪಾಕಿಸ್ತಾನಕ್ಕೆ ಹೋಗಿ ತಿಂಗಳುಗಟ್ಟಲೇ ಇದ್ದು ಬಂದ ನಂತರ ಪ್ರಚೋದನಕಾರಿ ಭಾಷಣ ಮಾಡಲಾರಂಭಿಸಿದ ಎಂಬುದು.ಮಗದೊಂದು ಮಗ್ಗುಲಿನ ವರದಿಯ ಪ್ರಕಾರ ಆ ಗ್ರಾಮದ ವ್ಯಕ್ತಿಯೊಬ್ಬನ ಕರುವೊಂದು ಕಾಣೆಯಾಗಿತ್ತು.ಕಾಣೆಯಾಗಿದ್ದ ಆ ಕರುವಿನ ಕಾಲುಗಳು ಹತ್ಯೆಗೀಡಾದ ವ್ಯಕ್ತಿಯ ಮನೆಯ ಬಳಿ ದೊರಕಿದೆಯೆಂದು ಗ್ರಾಮದಲ್ಲಿ ಸುದ್ದಿಯಾಯಿತು.ಅದನ್ನು ಪ್ರಶ್ನಿಸಲು ಹೋದವನ ಮೇಲೆ ಹತ್ಯೆಗೀಡಾದ ವ್ಯಕ್ತಿಯ ಮಗ ಗುಂಡಿನ ದಾಳಿ ನಡೆಸಿದ,ಆ ವ್ಯಕ್ತಿಯೂ ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ಹೋರಾಟ ನಡೆಸುತಿದ್ದಾನೆ. ಇದರಿಂದ ಕೆರಳಿದ ಜನ ಸಮೂಹ ಅವರ ಮನೆಯೊಳಗೆ ನುಗ್ಗಿ ಹತ್ಯೆಗೈದಿದೆ ಎಂಬುದು.
ಬೆಂಗಳೂರಿನ ಟೌನ್ ಹಾಲ್ ಮುಂದೆ ಕಬಾಬ್ ಕ್ರಾಂತಿ ಮಾಡಿದ ಪ್ರಗತಿಪರರಿಗೆ ಈ ಮೇಲಿನ ವಿವಿಧ ವರದಿಗಳ ಬಗ್ಗೆ ಮಾಹಿತಿ ಇತ್ತೋ ಇಲ್ಲವೋ ಅಥವಾ ತಮ್ಮ ಅಜೆಂಡಾಗೆ ಸರಿಹೊಂದುವ ಮೊದಲ ಕಾರಣವನ್ನೇ ಮುನ್ನೆಲೆಗೆ ತರೋಣವೆಂದುಕೊಂಡೇ ಹೊರಟರೋ ಏನೋ! ಒಟ್ಟಿನಲ್ಲಿ ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಈ ದೇಶದ ಸೆಕ್ಯುಲರ್ರುಗಳು ಧಾರ್ಮಿಕ ಸಮಸ್ಯೆಯೆಂಬಂತೆಯೇ ಬಿಂಬಿಸಲು ಸದಾಕಾಲ ಉತ್ಸುಕರಾಗಿರುತ್ತಾರೆ.ಕಾರಣ ಸ್ಪಷ್ಟ! ಸಮಸ್ಯೆಯ ಮೂಲ ಕಂಡು ಹಿಡಿದರೆ ಪರಿಹಾರ ಸಿಗುತ್ತದೆ.ಸಮಸ್ಯೆಯ ಸ್ವರೂಪವನ್ನೇ ವಿರೂಪಗೊಳಿಸಿದರೆ ಪ್ರತಿಭಟನೆಗೆ ಮತ್ತು ತಮ್ಮ ಅಜೆಂಡಾದ ಈಡೇರಿಕೆಗೆ ಹಾದಿ ತೆರೆದುಕೊಳ್ಳುತ್ತದೆ.ಜನರನ್ನು ಸಮಸ್ಯೆಗಳಿಂದ ಮುಕ್ತಗೊಳಿಸದಿರುವುದೇ ಇವರ ಐಡಿಯಾಲಜಿಯ ಮೂಲಮಂತ್ರ.
3) ಉ.ಪ್ರದೇಶದಲ್ಲಿ ದೇವಸ್ಥಾನ ಪ್ರವೇಶಿಸಲು ಪ್ರಯತ್ನಿಸಿದ 90 ವರ್ಷದ ವೃದ್ಧರೋರ್ವರನ್ನು ಸುಟ್ಟ ಸುದ್ದಿ. – ಮುಖ್ಯವಾಹಿನಿಗಳಲ್ಲಿ ಇದು ಸುದ್ದಿಯಾಗಿದ್ದೂ ದೇವಸ್ಥಾನದ ಪ್ರವೇಶ ಮಾಡಲು ಪ್ರಯತ್ನಿಸಿದ ದಲಿತ ವೃದ್ಧರನ್ನು ಕೊಲೆಗೈದು ಸುಡಲಾಗಿದೆ ಎಂದೇ.ಪೋಲಿಸರ ಪ್ರಕಾರ ಹತ್ಯೆಗೈದ ಆರೋಪಿ ಡ್ರಗ್ಸ್ ನಶೆಯಲ್ಲಿದ್ದ,ಹತ್ಯೆಗೀಡಾದ ವೃದ್ಧರನ್ನು ಹಣಕ್ಕಾಗಿ ಪೀಡಿಸಿದ,ಕೊಡಲು ನಿರಾಕರಿಸಿದಾಗ ಅವರನ್ನು ಕೊಲೆಗೈದು ಸುಟ್ಟಿದ್ದಾನೆ…!
ಇದರ ಜೊತೆಗೆ ದಲಿತ ಕುಟುಂಬವೊಂದನ್ನು ಉತ್ತರ ಪ್ರದೇಶದ ಪೋಲಿಸರು ವಿವಸ್ತ್ರಗೊಳಿಸಿದರು ಎಂಬ ಸುದ್ದಿಯೂ ಹರಿದಾಡತೊಡಗಿತು.ಆದರೆ,ಅಷ್ಟೇ ಬೇಗ ಅದು ಪೋಲಿಸರು ಮಾಡಿದ್ದಲ್ಲ ಖುದ್ದು ಆ ಕುಟುಂಬವೇ ಪ್ರತಿಭಟನೆಯ ರೂಪದಲ್ಲಿ ಮಾಡಿದ್ದು ಎಂಬುದೂ ಹೊರಬಿದ್ದು,ಆ ಸುದ್ದಿ ತೆರೆಗೆ ಸರಿಯಿತು.
ಈ ಮೇಲಿನ ಹತ್ಯೆಗಳು,ಅವಮಾನಗಳು ಯಾವುದೇ ಕಾರಣಕ್ಕಾಗಿಯೇ ಆಗಿದ್ದರೂ ಅವುಗಳನ್ನು ನಾಗರೀಕ ಸಮಾಜವೊಂದು ಸಮರ್ಥಿಸಿಕೊಳ್ಳಬೇಕಾಗಿಲ್ಲ.ಆರೋಪಿಗಳಿಗೆ ಖಂಡಿತ ಕಠಿಣ ಶಿಕ್ಷೆಯಾಗಲೇಬೇಕು.ಬಡವರ ಜೊತೆಗೆ ಬೇಕಾಬಿಟ್ಟಿ ವರ್ತಿಸುವ ಪೋಲಿಸ್ ಧೋರಣೆಯೂ ಖಂಡಿತವಾಗಿ ದೇಶಾದ್ಯಾಂತ ಬದಲಾಗಲೇಬೇಕು (ಇದು ಮೋದಿಯ ಕಾಲದ ಸಮಸ್ಯೆಯೇನಲ್ಲ,ನೆಹರೂ ಅಜ್ಜನ ಕಾಲದಿಂದಲೂ ಹೀಗೆ ಇತ್ತೇನೋ!)ಆದರೇ, ವಿಚಿತ್ರವೆಂದರೇ, ರಾಜ್ಯಗಳಲ್ಲಿ ಆಗಿರುವ ಈ ಘಟನೆಗಳೆಲ್ಲವನ್ನೂ ಕೇಂದ್ರದ ತಲೆಗೆ ಕಟ್ಟಿ ದೇಶದಲ್ಲಿ ಉಸಿರುಕಟ್ಟಿಸುವ ವಾತಾವರಣವಿದೆ(ಇಂಗಾಲದ ಪ್ರಮಾಣ ಹೆಚ್ಚಾಗಿದೆಯಾ?),ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ನೆಪವೊಡ್ಡಿ ಮತ್ತೊಮ್ಮೆ 2002ರಲ್ಲಿ ಮಾಡಿದ Mass Hysteria ಸೃಷ್ಟಿಯನ್ನೇ ಮತ್ತೆ ಪುನಾರವರ್ತಸಿಲು ಹೊರಟು ನಿಂತಿದ್ದಾರೆ.
ಆಗ ಸೆಕ್ಯುಲರ್ ಹೇಟ್ ಕ್ಯಾಂಪೇನ್ ಸೃಷ್ಟಿಸಿದ ಸುಳ್ಳಿನ ಮೂಟೆಯಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರು ಮಣ್ಣುಪಾಲಾಗಿದ್ದು ಮಾತ್ರವಲ್ಲ,ಮೋದಿಯವರನ್ನು ಖಳನಾಯಕನ ಸ್ಥಾನದಲ್ಲಿ ತಂದು ನಿಲ್ಲಿಸಿತ್ತು.ಈಗಲೂ ಅಂತರಾಷ್ಟ್ರೀಯ ಮಟ್ಟದಲ್ಲಿ ಇವರ ಪ್ರಶಸ್ತಿ ಹಿಂತಿರುಗಿಸುವಿಕೆಯ ರಾಜಕೀಯ ಸದ್ದು ಮಾಡಿದೆ (ಆವೇಶಕ್ಕೆ ಬಿದ್ದು ಆಡಬಾರದ್ದನ್ನು ಆಡಿದ ಯುವಕನೊಬ್ಬನ ಒಂದು ಟ್ವೀಟನ್ನೇ ಬಿಬಿಸಿಯಲ್ಲಿ ಪ್ರಸಾರ ಮಾಡಿಸುವಷ್ಟು ನೆಟ್ವರ್ಕ್ ಇರುವ ಈ ಜನರಿಗೆ ಇಂತದ್ದೊಂದು ಸಮೂಹ ಸನ್ನಿ ಸೃಷ್ಟಿಯ ಸುದ್ದಿ ಮಾಡುವುದು ತಿಳಿದಿರುವುದಿಲ್ಲವೇ?) ೧೫೦ ದೇಶಗಳ ಬರಹಗಾರರ ಸಂಘಟನೆಯಾಗಿರುವ “ಪೆನ್” ಇತ್ತೀಚೆಗೆ ಸಭೆ ಸೇರಿ ರಾಷ್ಟ್ರಪತಿಗಳಿಗೆ,ಪ್ರಧಾನಿಗಳಿಗೆ ಪತ್ರ ಬರೆದು ಕಳವಳ ವ್ಯಕ್ತಪಡಿಸಿ,ಸಚಿವರು ಸಹನೆ ಮತ್ತು ತಾಳ್ಮೆ ಬೆಳೆಸಿಕೊಳ್ಳಬೇಕೆಂಬ ಪಾಠ ಮಾಡಿದೆ.(ಅದೂ ನಿಜವೇ ಎನ್ನಿ ಇಲ್ಲಿ ಗ್ಯಾಂಗ್ ರೇಪಿನ ಡೇಪಿನೇಷನ್ ಬರೆಯುವ ಸಚಿವರು,ತಮ್ಮ ವಿರುದ್ಧ ಬರೆದರೂ ಎಂಬ ಕಾರಣಕ್ಕೆ ಪೋಲಿಸ್ ಕಂಪ್ಲೇಟ್ ಕೊಡಿಸುವವರು ಇರುವಾಗ ಸಹನೆ ತಾಳ್ಮೆಯ ಪಾಠವಾಗಲೇ ಬೇಕು)
ಅಂತರಾಷ್ಟ್ರೀಯ ಮಟ್ಟದಲ್ಲಿ ದಿನೇ ದಿನೇ ಪ್ರಭಾವಶಾಲಿಯಾಗುತ್ತಿರುವ ಮೋದಿಯವರ ಹೆಸರಿಗೆ ಮಸಿ ಬಳಿಯುವುದೂ ಈ ಸೆಕ್ಯುಲರ್ ಸಮೂಹ ಸನ್ನಿಯ ಮುಖ್ಯ ಉದ್ದೇಶಗಳಲ್ಲೊಂದು.ದೇಶದ ಹೆಸರು ಮಣ್ಣು ಪಾಲಾದರೂ ಸರಿಯೇ,ತಮ್ಮ ಹೇಟ್ ಕ್ಯಾಂಪೇನ್ ಜಯಗಳಿಸಿ ಮತ್ತೆ ತಮ್ಮ ಮಾತೃ ಪಕ್ಷವನ್ನು ಮುನ್ನೆಲೆಗೆ ತಂದು ಗಂಜಿಗೆ ಹಾದಿ ಮಾಡಿಕೊಳ್ಳಬೇಕಷ್ಟೇ!
ಅಷ್ಟಕ್ಕೂ,ಈ ಬುದ್ಧಿಜೀವಿಗಳು,ಸಾಹಿತಿಗಳಿಗೆ ಈ ದೇಶಕ್ಕೆ,ದೇಶದ ಪ್ರಜಾಪ್ರಭುತ್ವಕ್ಕೆ ಉಪಕಾರ ಮಾಡುವ ಮನಸ್ಸಿದ್ದರೆ,ಕೇವಲ ತಮ್ಮ ಪ್ರಶಸ್ತಿಗಳನ್ನಷ್ಟೇ ಹಿಂದಿರುಗಿಸದೇ,ತಮ್ಮ ಸರ್ಕಾರಿ ಉದ್ಯೋಗಗಳನ್ನೂ,ವಿವಿಯ ಸ್ಥಾನಗಳನ್ನೂ ತ್ಯಜಿಸಲಿ.ಅದನ್ನು ಬಿಟ್ಟು ಸುಮ್ಮನೇ ಪ್ರಶಸ್ತಿ ಹಿಂತಿರುಗಿಸುತ್ತಾ ಸಮೂಹ ಸನ್ನಿಯನ್ನು ಸೃಷ್ಟಿಸಲು ಹೊರಟು ಜನಸಾಮಾನ್ಯರ ದೃಷ್ಟಿಯಲ್ಲಿ ಹಾಸ್ಯಾಸ್ಪದ ಸರಕಾಗುವುದೂ ತಪ್ಪುತ್ತದೆ.
ಈ ಬಾರಿ ಇವರ ಆಟಗಳು ಸಫಲವಾಗುವ ಲಕ್ಷಣಗಳಿಲ್ಲ ಬಿಡಿ.ಯುವಜನತೆ ಜಾಗೃತವಾಗಿದೆ ಮತ್ತು ಅಷ್ಟರಮಟ್ಟಿಗೆ ದೇಶದ ಜನಸಾಮಾನ್ಯರಿಗೆ ಅಚ್ಚೇ ದಿನಗಳ ಭರವಸೆಯಿದೆ…
ಚಿತ್ರಕೃಪೆ : http://www.spirit-of-metal.com
Prashasthi gittisi kondiddharindha adhannu hindirugisutthiddhaare. Kasta pattu swa saamarthyadinda yogyatheganusaaravaagi padedhiddhare ee reethiya manganaata maadu tthiralilla.
Haagaagi kendra sarkaara koodale prashasthi pathra maathravalladhe adhara jothe kodalpattiruva ella swokaryavannu himpadedhu thakka shaasthi maadabeku ee saaythiruva saaythigalige.
Nehru praneetha vichaaravyaadhi laaddhijeevigalannu maatta haaka bekaagidhe.
Sarkaari krupaposhitha akshara bayothpaadakarannu innillavaagisa bekaagadhe.
Swaccha bhaarath abhiyaana saahithya kshethradhida prambha aagiruvanthaddhu bhahala santhosha.
Eee kaarya ella kshethradallu aaguvalli ,bhaarathavaannu vishwa guru paattadhalli alankruthaavaaguvudannu nodda bayasuvaalli,kendra sarkaaradha niluvannu bembalisuvudhu nammellara karthavya allave.
nivu heliruv kone salu correct sir. achche din anewale
ಪ್ರತಾಪ್ ಸಿಂಹ ಸಂತೋಷ್ ತಮ್ಮಯ್ಯ ನಂತರ ನಿಷ್ಠುರವಾಗಿ ಬರೆಯುತ್ತಿರುವುದು ರಾಕೇಶ್ ಶೆಟ್ಟಿ ಮಾತ್ರ
ಪ್ರಶಸ್ತಿ ಹಿಂದಿರುಗಿಸುವಿಕೆ, ಹಿಂದಿರುಗಿಸುವಿಕೆಯ ಬಗ್ಗೆ ಕೆಲವರ ಅಸಮಾದಾನ, ಪ್ರಧಾನ ಮಂತ್ರಿಗಳ ಮೌನ, ಇದೆಲ್ಲಾ ಏನೇ ಇರಲಿ. ಕಲ್ಪಗಿ೯ಗಿಯವರ ಕೊಲೆಗೆ ಕಾರಣರಾದವರಿಗೆ ಶಿಕ್ಷೆಯಾಗಲಿ.
ಸಮಗ್ರ ಮಾಹಿತಿ ಯನ್ನ ಹೊಂದಿದ ನಿಮ್ಮ ಲೇಖನ ಅದ್ಭುತ ಸರ್
ಅಂಕಿ ಅಂಶ ಸಮರ್ಥವಾಗಿದೆ