ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 10, 2015

ಆಡುಜೀವನ

‍ನಿಲುಮೆ ಮೂಲಕ

– ಪ್ರಶಾಂತ್ ಭಟ್

ಆಡುಜೀವನಸ್ವಾತಂತ್ರ್ಯದ ಮಹತ್ವದ ಅರಿವಾಗುವುದು ಅದು ಇಲ್ಲವಾದಾಗಲೇ ಎಂಬ ಮಾತಿದೆ. ನಮ್ಮ ತಲೆಮಾರಿಗೆ ಈ ಮಾತಿನ ಅರ್ಥ ಆಗಿರುವ ಸಂಭವಗಳು ಕಡಿಮೆ. ಇತ್ತೀಚೆಗೆ ಓದಿದ ’ಬೆನ್ಯಾಮೀನ್’ ರ ’ಆಡುಜೀವನ’ (ಅನುವಾದ ಡಾ.ಅಶೋಕ್ ಕುಮಾರ್ ) ಇದರ ಅರ್ಥವ ತಕ್ಕಮಟ್ಟಿಗೆ ಮಾಡಿಸಿತು.ನಮಗೆಲ್ಲ ಒಂದು ಕಲ್ಪನೆಯಿದೆ. ಇಲ್ಲಿಂದ ಅರಬ್ ದೇಶಗಳಿಗೆ ಹೋದವರೆಲ್ಲ ಕೈ ತುಂಬಾ ದುಡಿದು ಝಣ ಝಣ ಎಣಿಸಿಕೊಂಡು ಬರುತ್ತಾರೆ ಎಂದು.ಈ ಕಾದಂಬರಿಯು ಅದೇ ಆಸೆ ಹೊತ್ತು ವಿದೇಶಕ್ಕೆ ತೆರಳುವ ಒಬ್ಬನ ಅನುಭವದ ಕತೆ. ಲೇಖಕರಿಗೆ ಇನ್ನೊಬ್ಬರ ಅನುಭವವಾಗಿ ದಕ್ಕಿದ ಈ ಕತೆ ಪ್ರಥಮ ಪುರುಷ ನಿರೂಪಣೆಯಲ್ಲಿ ನಮ್ಮದೇ ಕತೆಯಾಗಿ ಎದೆ ಹಿಂಡಿಸಿಕೊಳ್ಳುತ್ತದೆ.

ಮನೆಯ ಕಷ್ಟಗಳಿಗೆ ಒಂದೇ ಉತ್ತರವೆಂಬಂತೆ ನಜೀರ್ ವಿದೇಶಕ್ಕೆ ಹೋಗಲು ಅಣಿಯಾಗುತ್ತಾನೆ.ಪತ್ನಿಯ ಬಿಟ್ಟು ಯಾವುದೋ ಕನ್ಸ್ಟ್ರಕ್ಷನ್ ಕಂಪೆನಿಯಲ್ಲಿ ಕೆಲಸ ಹುಡುಕಿ ಹೊರಡುವ ಆತನಿಗೆ ಅಲ್ಲಿ ಎದುರಾಗುವುದು ಕಷ್ಟ ಪರಂಪರೆ.ಏರ್ ಪೋರ್ಟ್ ನಲ್ಲಿ ಕಾದೂ ಕಾದೂ ಸುಸ್ತಾಗುವ ಅವನಿಗೆ, ಕೊನೆಗೊಮ್ಮೆ ಆಶಾಕಿರಣದಂತೆ ಬಂದ ಅರಬಾಬ್ ಅವನನ್ನು ಎಲ್ಲಿಗೋ ಕರೆದೊಯ್ಯುತ್ತಾನೆ. ಅಲ್ಲಿ ತಲುಪುವವರೆಗೂ ತನ್ನ ಕೆಲಸದ ಅರಿವಿರದ ನಜೀರ್ ಗೆ ಅಲ್ಲಿನ ಪರಿಸ್ಥಿತಿ ಕಂಡು ಅಯೋಮಯವಾಗುತ್ತದೆ. ಆಡುಗಳನ್ನು ನೋಡಿಕೊಳ್ಳುವ, ಅವುಗಳ ಚಾಕರಿ ಮಾಡುವ,ಅವಕ್ಕೆ ಹುಲ್ಲು ಹಾಕಿ ನೀರು ಕುಡಿಸುವ, ಅವುಗಳನ್ನು ಕಾಲಾಡಿಸಲು ಕರಕೊಂಡು ಹೋಗುವ ಕೆಲಸ.ಮಲಗಲು ನೆಲವೇ ಗತಿ.ಸ್ನಾನ ಕನಸಿನ ಮಾತು.ತಿನ್ನಲು ಖಾಮೂಸ್ ಎಂಬ ತಿನಿಸು ಮಾತ್ರ. ಬಹಿರ್ದೆಶೆಗೆ ಹೋದರೆ ಸ್ವಚ್ಚಗೊಳಿಸಲೂ ನೀರಿಲ್ಲ. ಅಲ್ಲಿ ಬಂದಿಳಿದವನಿಗೆ ನಿರ್ಭಾವುಕನಾದ ಭೀಕರ ಜೀವಿಯೊಬ್ಬ ಕಾಣ ಸಿಗುತ್ತಾನೆ. ತನ್ನಂತೆ ಅಲ್ಲಿಗೆ ಕೆಲಸ ಹುಡುಕಿಕೊಂಡು ಬಂದವನು ಅವನು ಎಂಬ ಸತ್ಯ ಗೊತ್ತಾದ ನಜೀರ್ ಗೆ ಅವನ ಅಸಹ್ಯ ವೇಷ ಕಂಡು ತನ್ನ ಭವಿಷ್ಯವೂ ಹೀಗೇ ಎಂಬ ಕಟು ಸತ್ಯ ಅರಿವಾಗುತ್ತದೆ.

ಬೆಳಗ್ಗೆ ಆಡಿನ ಹಾಲು ಕರೆಯುವುದು. ಸ್ವಲ್ಪ ಅದನ್ನೇ ಕುಡಿಯುವುದು. ಆಮೇಲೆ ಆಡುಗಳಿಗೆ ಹುಲ್ಲು ಹಾಕಿ,ನೀರು ಕುಡಿಸಿ, ಕಾಲಾಡಿಸಲು ಕರಕೊಂಡು ಹೋಗುವುದು,ಅವು ಅಂಕೆ ತಪ್ಪದಂತೆ ನೋಡಿಕೊಳ್ಳುವುದು, ಹೀಗೆ ನಜೀಬ್ ಕೆಲಸ ಮಾಡಿ ಮಾಡಿ ಬಳಲಿ ಬೆಂಡಾಗುತ್ತಾನೆ.ಭಾಷೆಯ ಪರಿಚಯವಿಲ್ಲದೆ ಕಣ್ಣು ಹಾಯಿಸುವವರೆಗಿನ ಮರಳುಗಾಡಿನ ಏಕತಾನತೆಗೆ,ತನ್ನ ಹೊರತು ಇನ್ನೊಂದು ಮನುಷ್ಯ ಜೀವಿಯ ಸಂಗಾತವಿಲ್ಲದೆ ಬಳಲುತ್ತಾನೆ. ಕುರಿಗಳ ಉಣ್ಣೆ ಕತ್ತರಿಸಲು ಬರುವ ಕೆಲಸಗಾರರ ದೇಹ ವಾಸನೆ ಪಡೆಯಲೆಂದು ಹತ್ತಿರ ಹೋಗಿ ನಿಲ್ಲುವಷ್ಟು ವಿಚಲಿನಾಗುತ್ತಾನೆ.

ಒಂದು ರಾತ್ರಿ ಅವನ ಜೊತೆಗಿದ್ದ ಆ ಮನುಷ್ಯ ತಪ್ಪಿಸಿಕೊಳ್ಳುತ್ತಾನೆ.ಆಮೇಲೆ ತಿಳಿದು ಬರುವುದೆಂದರೆ ತಪ್ಪಿಸಿಕೊಳ್ಳಲು ಯತ್ನಿಸಿದ ಅವನನ್ನು ಅರಬಾಬ್ ಕೊಂದಿರುತ್ತಾನೆ. ಹಗಲಿನ ಸೆಕೆ, ರಾತ್ರಿಯ ಮೈ ನಡುಗಿಸುವ ಚಳಿಯಲ್ಲಿ ಮಣ್ಣಿನ ಮೇಲೆ ಮಲಗ ಬೇಕಾದ ಅವಸ್ಥೆಯಲ್ಲಿ ನಜೀಬ್ ಗೆ ತನ್ನೂರಿನ ನೆನಪುಗಳು ಒತ್ತರಿಸಿಕೊಂಡು ಬರುತ್ತವೆ. ಆದರೇನು ಮಾಡುವುದು? ಓಡಿ ಹೋಗಲು ಯತ್ನಿಸಿದರೆ ಅರಬಾಬ್ ನ ಕೋವಿಯ ಭಯ. ಕೊನೆಗೊಂಡು ದಿನ ಹತ್ತಿರ ಅದೇ ರೀತಿ ಕೆಲಸ ಮಾಡುತ್ತಿದ್ದ ಇಬ್ಬರೊಂದಿಗೆ ಪರಾರಿಯಾಗುತ್ತಾನೆ.ಹೀಗೆ ಅದೂ ಒಂದು ರೋಚಕ ಪಯಣವೇ! ಕೊನೆಗೆ ತನ್ನ ಹಾಗೆ ವೀಸಾ ಇಲ್ಲದೆ ಬಂದಿರುವವರಿಗಾಗಿರುವ ಸರಕಾರಿ ಜೈಲಿನಲ್ಲಿ ಬಂಧಿಯಾಗುತ್ತಾನೆ. ಅಲ್ಲಿಗೆ ತನ್ನ ಪರಾರಿ ಕೆಲಸಗಾರರ ಹುಡುಕಿಕೊಂಡು ಬರುವ ಅರಬಾಬ್ ಗಳ ವರ್ತನೆ ನೋಡಿ ಕುಸಿಯುತ್ತಾನೆ. ಕೊನೆಗೊಂದು ದಿನ ತನ್ನ ಅರಬಾಬ್ ನ್ನು ಅಲ್ಲಿ ಕಂಡು ಮತ್ತೆ ತಾನು ತನ್ನ ಅದೇ ಕೆಲಸಕ್ಕೆ ಹೋಗಬೇಕಾಗಿ ಬರುತ್ತದಲ್ಲ ಎಂದು ಭಯಪಡುತ್ತಾನೆ. ಆದರೆ ಅರಬಾಬ್ ಅವನನ್ನು ಕೊಂಡುಹೋಗುವುದಿಲ್ಲ. ಆಮೇಲೆ ತಿಳಿಯುವುದೆಂದರೆ ಅವನ ಬಳಿ ಕೆಲಸ ಮಾಡುವ ಪರವಾನಿಗೆಯಲ್ಲಿ (ಆಡು ಮೇಯಿಸುವ) ನಜೀಬ್ ಬಂದದ್ದಲ್ಲ ಎಂದು.

ಎಲ್ಲವೂ ತನ್ನ ವಿಧಿ ಎಂದುಕೊಳ್ಳುವ ನಜೀಬ್ ಗೆ ಕೊನೆಗೆ ಗಡೀಪಾರಿನ ಅದೃಷ್ಟ ಒದಗಿ ತನ್ನ ದೇಶಕ್ಕೆ ಮರಳುತ್ತಾನೆ.ಅಲ್ಲಲ್ಲಿ ಸ್ಲಾವೋಮೀರ್ ರಾವೀಸ್ ನ ’ದ ಲಾಂಗ್ ವಾಕ್’ ನ್ನೂ, ಚಾಂಗ್ ಶನ್ ಲಿಯಾನ ರ ’ಹುಲ್ಲಿನ ಸಾರು’ (ಅನುವಾದ ಬೇಳೂರು ಸುದರ್ಶನ) ವನ್ನೂ ನೆನಪಿಸುವ ಈ ಕೃತಿ ಮನುಷ್ಯನೊಬ್ಬನಿಗೆ ಬರುವ ಕಷ್ಟಗಳ ಬೆಟ್ಟದಲ್ಲೂ ಅವನ ಬದುಕಿನ ಬಗೆಗಿನ ಆಸೆ ಅವನ ದಡ ಸೇರಿಸುವುದರ ಮನೋಜ್ಞವಾಗಿ ಕಟ್ಟಿ ಕೊಡುತ್ತದೆ. ೨೦೦೯ ರಲ್ಲಿ ಮಲಯಾಳಮ್ ನಲ್ಲಿ ಬಂದ ಈ ಕಾದಂಬರಿ ಇದುವರೆಗೂ ೩೨ ಮುದ್ರಣ ಕಂಡಿದೆ. ಅಲ್ಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಗೆದ್ದ ಈ ಪುಸ್ತಕವನ್ನು ಸಮರ್ಥವಾಗಿ ಡಾ.ಅಶೋಕ್ ಕುಮಾರ್ ಅನುವಾದಿಸಿದ್ದಾರೆ. ’ಕೆಂಡ ಸಂಪಿಗೆ ’ ಅಂರ್ತರ್ಜಾಲ ತಾಣದಲ್ಲಿ ಧಾರಾವಾಹಿಯಾಗಿ ಬಂದ ಕೃತಿ ಈಗ ಪುಸ್ತಕ ರೂಪದಲ್ಲಿ ಬೆಳಕು ಕಂಡಿದೆ. ಅರಬ್ ದೇಶಗಳ ಬಗೆಗಿನ ಮಿಥ್ ಅನ್ನು ಒಂದೇಟಿಗೇ ತುಂಡು ಮಾಡಿದ ಈ ಕಾದಂಬರಿ ಬದುಕ ಪ್ರೀತಿಸುವ ಎಲ್ಲರೂ ಓದಲೇ ಬೇಕಾದ್ದು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments