ವಿಷಯದ ವಿವರಗಳಿಗೆ ದಾಟಿರಿ

ಜನವರಿ 21, 2016

25

ರೋಹಿತ್‌ ಬದುಕು ಮತ್ತು ಸಾವಿನ ಸುತ್ತ ರಾಜಕೀಯ

‍ನಿಲುಮೆ ಮೂಲಕ

– ಇಂಚರ

ರೋಹಿತ್ ವೆಮುಲಾರೋಹಿತ್ ವೆಮುಲಾ – ಆತನ ವಯಸ್ಸು ಸುಮಾರು ೨೭ ವರ್ಷ, ಸಮಾಜ ವಿಜ್ಙಾನದಲ್ಲಿ ರಿಸರ್ಚ್ ಸ್ಕಾಲರ್, ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಓದು, ವಿದ್ಯಾರ್ಥಿ ಸಂಘಟನೆಗಳಲ್ಲಿ ಹುರುಪಿನಲ್ಲಿ ಪಾಲ್ಗೊಳ್ಳುತ್ತಿದ್ದವ….. ಇಷ್ಟೆಲ್ಲಾ ಇದ್ದರೂ ಆತ ಆತ್ಮಹತ್ಯೆ ಮಾಡಿಕೊಂಡದ್ದು ಏಕೆ?

೨೦೧೦ ರಲ್ಲಿ ಫೇಸ್ ಬುಕ್ಕಿಗೆ ಪ್ರವೇಶ ಪಡೆದ ಅವನು ಮೊದಮೊದಲಿಗೆ ಸಿನೆಮಾ ವಿಡಿಯೋ ತುಣುಕುಗಳನ್ನು, ಹೊಸ ವರ್ಷದ ಶುಭಾಶಯಗಳನ್ನು ಹಾಕಿಕೊಳ್ಳುತ್ತಿದ್ದವ, ನಂತರ ಪ್ರೀತಿ, ಪ್ರೇಮದ ಬಗೆಗಿನ ಪೋಸ್ಟ್ ಗಳು, ಹೆಣ್ಣುಮಕ್ಕಳನೆಲ್ಲಾ ಮೋಸ ಮಾಡುವ ಕ್ಯಾಟಗೆರಿಗೆ ಸೇರಿಸಿ ತಮಾಷೆ ಮಾಡುವಂತಹ ಪೋಸ್ಟ್ ಗಳನ್ನು ಹಾಕುತ್ತಿದ್ದವ, ತೀರಾ ಇತ್ತೀಚಿನ ಪೋಸ್ಟ್ ಗಳಲ್ಲಿ ಕೇವಲ ರಾಜಕೀಯಕ್ಕೆ ಸಂಬಂಧ ಪಟ್ಟ ಪೋಸ್ಟ್ ಗಳನ್ನೇ ಹಾಕಿಕೊಂಡಿರುವುದು ತಿಳಿಯುತ್ತದೆ. ಆತನ ತಂದೆ ಆಸ್ಪತ್ರೆಯೊಂದರಲ್ಲಿ ವಾಚ್ ಮ್ಯಾನ್, ತಾಯಿ ಟೇಲರ್. ಕಡು ಬಡತನದಿಂದ ಬಂದವ ಪಿಹೆಚ್ ಡಿ ಮಾಡಲು ವಿಶ್ವವಿದ್ಯಾಲಯಕ್ಕೆ ಸೇರುವುದು ಹರ ಸಾಹಸವೇ ಸರಿ. ಫೇಸ್ ಬುಕ್ಕಿನಲ್ಲಿ ಆತನ ಮನೆಯ ಫೋಟೋಗಳು, ಷೆಡ್ ನಂತಹ ಮನೆ, ಅದರ ಅಡುಗೆ ಮನೆ, ಅಪ್ಪನ ಯೂನಿ ಫಾರ್ಮ್ ನೇತಾಕಿರುವ ಹಗ್ಗ, ಅಮ್ಮನ ಹೊಲಿಗೆ ಯಂತ್ರದ ಫೋಟೋ, ಇವೆಲ್ಲವುಗಳ ಬಗ್ಗೆ ಅತ್ಯಂತ ಭಾವುಕನಾಗಿ ಬರೆದಿರುವ ರೀತಿ ನೋಡಿದಾಗ ಯಾರಿಗಾದರೂ ಆತನ ಭಾವುಕತೆ ಬಗ್ಗೆ ಅರ್ಥವಾಗುತ್ತದೆ. ತಾನಿದ್ದ ಹಾಸ್ಟೆಲಿನಲ್ಲಿ ವಿವೇಕಾನಂದರ ಫೋಟೋ ಮತ್ತು ಸಂದೇಶವನ್ನು ಹಾಕಿಕೊಂಡಿದ್ದವ, ಇದ್ದಕಿದ್ದಂತೆ ಇತ್ತೀಚೆಗೆ ವಿವೇಕಾನಂದರ ಬಗ್ಗೆ ಕೆಟ್ಟದಾಗಿ ಬರೆದದ್ದನ್ನು ನೋಡಿದರೆ ಈತನದು ಚಂಚಲ ಮನಸ್ಥಿತಿ ಎಂದು ತಿಳಿಯುತ್ತದೆ. ತನ್ನ ಡೆತ್ ನೋಟ್ ಕೂಡ ಕಾವ್ಯಾತ್ಮಕವಾಗಿ ಬರೆದಿದ್ದಾನೆಯೇ ಹೊರತು ತನ್ನ ಮನೆಯವರ ಬಗ್ಗೆ ಕಿಂಚಿತ್ತೂ ಕೂಡ ಯೋಚಿಸಿಲ್ಲ. ಮನಸ್ಸು ದುರ್ಬಲಗೊಂಡು, ಹತಾಶನಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಗೊತ್ತಾಗುತ್ತದೆ. ಆತನ ಫೇಸ್ ಬುಕ್ ಡೈರಿ ಓದಿದಾಗ ಅಮಾಯಕ ಹುಡುಗನೊಬ್ಬನನ್ನು ನಮ್ಮ ರಾಜಕೀಯ ವ್ಯವಸ್ಥೆ (ಎಡ, ಬಲ, ದಲಿತ ಭೇದವಿಲ್ಲದೆ) ತುಳಿದದ್ದು ಅರ್ಥವಾಗುತ್ತದೆ. ಆತನ ಸಾವಿಗೆ ಇಡೀ ರಾಜಕೀಯ ವ್ಯವಸ್ಥೆ ಒಂದು ರೀತಿಯಲ್ಲಿ ಕಾರಣವಾದರೆ, ಅವನ ಅತಿ ಹೆಚ್ಚಿನ ಭಾವುಕತನ ಕೂಡ ಆತ್ಮಹತ್ಯೆಗೆ ಪ್ರೇರೇಪಿಸಿದೆ

ಅವನ ಮೊದಮೊದಲ ಪೋಸ್ಟ್ ಗಳಲ್ಲಿ ಆಡಮ್, ಈವ್ ಇವರನ್ನೆಲ್ಲಾ ಅಪಹಾಸ್ಯ ಮಾಡುತ್ತಾ, ಹೋಲಿ ಗ್ರಂಥಗಳಿಗೆಲ್ಲಾ ತಮಾಷೆ ಮಾಡಿದ್ದಾನೆ. ತೀರಾ ಇತ್ತೀಚೆಗಷ್ಟೆ ಹಿಂದೂ ದೇವರುಗಳ ಬಗ್ಗೆ ತಮಾಷೆ ಮಾಡಿದ್ದಾನೆ. ಬಹಳಷ್ಟು ಕಡೆ ತಾನು ಯಾವ ದೇವರನ್ನು ನಂಬುವುದಿಲ್ಲ, ಯಾವ ಧರ್ಮಗಳನ್ನು ಬೆಂಬಲಿಸುವುದಿಲ್ಲ ಎಂದು ಹೇಳಿಕೊಂಡಿದ್ದಾನೆ. ಶ್ರೀ ಅಬ್ದುಲ್ ಕಲಾಮ್ ಅವರು ಸಾಯಿಬಾಬಾನ ಪಾದದ ಬಳಿ ಕುಳಿತು ಮಾತಾಡಿದರು ಎಂಬ ಕಾರಣಕ್ಕಾಗಿ, ಅವರನ್ನು ಇನ್ನು ಮುಂದೆ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಕೂಡ ಹೇಳಿದ್ದಾನೆ. ಆತ ಮೊದಮೊದಲಿಗೆ ಕಾಂಗ್ರೆಸ್ ಪಕ್ಷದಲ್ಲಿನ ವಂಶ ಪಾರಂಪರ್ಯ ಆಡಳಿತದ ಬಗ್ಗೆ ಆಕ್ರೋಶ ತೋರಿಸುತ್ತಾ, ರಾಹುಲ್ ಗಾಂಧಿಯ ಬಗ್ಗೆ ತಮಾಷೆ ಮಾಡುತ್ತಾ, ನಮ್ಮ ಮುಂದಿನ ಪ್ರಧಾನಿ ರಾಹುಲ್ ಗಾಂಧಿಯಾದರೆ ದೇಶದ ಭವಿಷ್ಯವೇನು? ಎಂದು ಚಿಂತಿಸುತ್ತಾ, ಕಾಂಗ್ರೆಸ್ ಪಕ್ಷದ ಅನೇಕ ರಾಜಕಾರಣಿಗಳು ಹೈದರಾಬಾದಿನ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಕ್ಕೆ ಕಿರಿಕಿರಿ ವ್ಯಕ್ತ ಪಡಿಸುತ್ತಾ, ಈ ರಾಜಕಾರಣಿಗಳು ವಿಶ್ವವಿದ್ಯಾಲಯದ ಪರಿಸರವನ್ನು ತಮ್ಮ ಕಪ್ಪು ಹಣದಿಂದ ಹಾಳು ಮಾಡುತ್ತಾರೆ, ಇಂತಹವರಿಂದ ವಿದ್ಯಾರ್ಥಿಗಳನ್ನು ರಕ್ಷಿಸಬೇಕು ಎಂದೆಲ್ಲಾ ಬರೆದುಕೊಂಡಿದ್ದಾನೆ! ಇವನಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಅತೀವ ಅಸಹನೆ ಇದ್ದದ್ದು, ಇದ್ದಕಿದ್ದಂತೆ ಈ ಎರಡು ವರ್ಷಗಳಿಂದ ಬಿಜೆಪಿ ವಿರುದ್ಧ, ಮೋದಿಯವರ ವಿರುದ್ಧ ತಿರುಗಿದೆ! ಮೊದಮೊದಲಿಗೆ ಆಪ್ ಮತ್ತು ಕೇಜ್ರಿವಾಲ್ ಅವರನ್ನು ಬೆಂಬಲಿಸುತ್ತಿದ್ದ ಇವನು, SFI ಯನ್ನು ಬೆಂಬಲಿಸಿದ್ದಾನೆ. ಆಮೇಲೆ SFI ಬಗ್ಗೆ ಕೂಡ ಅಸಹನೆ ಮೂಡಿ ಅಂಬೇಡ್ಕರ್ ಸಂಘಟನೆಯ ಜೊತೆಗೆ ಗುರುತಿಸಿಕೊಂಡಿದ್ದಾನೆ.ತಾನೇಕೆ SFI ಅವರನ್ನು ವಿರೋಧಿಸಿ,ಅಂಬೇಡ್ಕರ್ ಸಂಘಟನೆಗೆ ಸೇರಿದೆ ಎಂದು ಕೂಡ ವಿವರಿಸಿದ್ದಾನೆ. ಈ ವಿಷಯವಾಗಿ ಅನೇಕ ಸಹಪಾಠಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾನೆ. ಕೆಲ ಗೆಳೆಯರಂತೂ ಕೇವಲ ಪುಸ್ತಕಗಳನ್ನು ಓದಿ ಸಿದ್ಧಾಂತಗಳ ಬಗ್ಗೆ, ಹೋರಾಟಗಳ ಬಗ್ಗೆ ಮಾತಾಡಬೇಡ ಎಂದು ಕೂಡ ತಿಳಿ ಹೇಳಿದ್ದಾರೆ. ಇವನು ಈ ASA ಗೆ ಸೇರುವ ಹಂತದಲ್ಲಿ ಬಿಜೆಪಿ, ಮೋದಿ, ABVP ಯ ಬಗ್ಗೆ ಹೀಯಾಳಿಸಿ ಬರೆಯಲು ಶುರು ಮಾಡಿದ್ದಾನೆ.

ಅಂತಹ ಸಮಯದಲ್ಲಿಯೇ ಬಾಬ್ರಿ ಮಸೀದಿಯ ಘಟನೆ ಬಗ್ಗೆ ಮುಸ್ಲಿಮರ ಪರವಾಗಿ, ಯಾಕೂಬ್ ಮೆನನ್ ಗಲ್ಲಿಗೇರುವ ಸಮಯದಲ್ಲಿ ಆತನ ಪರ ವಾದಿಸಿ, ಭಾರತದ ಪ್ರಜಾಪ್ರಭುತ್ವಕ್ಕೆ ಕಪ್ಪು ದಿನವೆಂದು ಘೋಷಿಸಿದ್ದಾನೆ. ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ನನ್ನು ಆರಾಧಿಸುತ್ತಿದ್ದ ಈ ರೋಹಿತ್, ಉಗ್ರ ಯಾಕೂಬ್ ಮೆನನ್ ಪರ ಹೇಗೆ ವಾದಿಸಿದ? ಎಂಬುದೇ ಆಶ್ಚರ್ಯ! ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳೊಂದಿಗೆ ಈ ವಿಷಯವಾಗಿ ವಾಗ್ವಾದವಾಗಿದೆ. ಎಬಿವಿಪಿ ಕಾರ್ಯಕರ್ತನೊಬ್ಬ ಇವರ ASA ಗುಂಪಿನ ಬಗ್ಗೆ ಫೇಸ್ ಬುಕ್ಕಿನಲ್ಲಿ ಕೆಟ್ಟದಾಗಿ ಸ್ಟೇಟಸ್ ಹಾಕಿಕೊಂಡಿರುವುದನ್ನು ನೋಡಿ, ಎಲ್ಲರೂ ಹಾಸ್ಟೆಲ್ಲಿನಲ್ಲಿದ್ದ ಅವನ ರೂಮಿಗೆ ನುಗ್ಗಿ, ಆತನಿಂದ ಕ್ಷಮಾಪಣೆ ಪತ್ರ ಬರೆಸಿಕೊಂಡಿದ್ದಾರೆ. ಮರುದಿವಸ ಆತ ಹೋಗಿ ತನ್ನ ಮೇಲೆ ಇವರೆಲ್ಲರೂ ದೈಹಿಕ ಹಲ್ಲೆ ನಡೆಸಿದ್ದಾರೆಂದು ಕಂಪ್ಲೇಂಟ್ ನೀಡಿದ್ದಾನೆ. (ಇದರ ಸತ್ಯಾಸತ್ಯತೆ ತಿಳಿದಿಲ್ಲ, ಈತನ ಪೋಸ್ಟ್ ಪ್ರಕಾರ ಈತ ನಿರಪರಾಧಿ) ಇದು ನಡೆದದ್ದು ಜುಲೈ / ಆಗಸ್ಟ್ ೨೦೧೫ ರಲ್ಲಿ.  ಆ ಸಮಯದಲ್ಲಿ ಈ ಘಟನೆಯ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ, ಧಾಂಧಲೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂತ್ರಿಯೊಬ್ಬರು ಶ್ರೀಮತಿ ಸ್ಮೃತಿ ಇರಾನಿಯವರಿಗೆ ಪತ್ರ ಬರೆದಿದ್ದಾರೆ. ಶ್ರೀಮತಿ ಸ್ಮೃತಿ ಇರಾನಿಯವರು ಈ ಹುಡುಗರ ಮೇಲೆ ಕ್ರಮ ಕೈಗೊಳ್ಳಲು ನಿರ್ದೇಶಿಸಿದ್ದಾರೆ ಎಂಬುದಕ್ಕೆ ಆಧಾರಗಳು ಈತನ ಫೇಸ್ ಬುಕ್ಕಿನಲ್ಲಂತೂ ಇಲ್ಲ. ನಂತರ ನಡೆದ ಮೀಟಿಂಗ್ ಗಳಲ್ಲಿ ಐದು ಜನ ವಿದ್ಯಾರ್ಥಿಗಳನ್ನು ಹಾಸ್ಟೆಲಿನಿಂದ ಹೊರ ಹಾಕಲು ನಿರ್ಧರಿಸಲು ಸುಮಾರು ಆರು ತಿಂಗಳು ತೆಗೆದುಕೊಂಡಿದ್ದಾರೆ. ಕೊನೆಗೆ ಡಿಸೆಂಬರ್ ನಲ್ಲಿ ಹಾಸ್ಟೆಲ್ ನಿಂದ ಹೊರಹಾಕಿದ್ದಾರೆ. ಈ ಐವರು ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿಯೇ ನಿರಶನ ಶುರು ಮಾಡಿದ್ದಾರೆ. ಇದ್ದಕಿದ್ದಂತೆ ಒಂದು ದಿವಸ ಆತನ ಸ್ನೇಹಿತನ ರೂಮಿಗೆ ಹೋಗಿ ಪತ್ರವೊಂದನ್ನು ಬರೆದಿಟ್ಟು ರೋಹಿತ್ ವೆಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

೨೦೧೦ರಿಂದ ಆತನ ಸಾಮಾಜಿಕ ಕಳಕಳಿಯ ಪೋಸ್ಟ್ ಗಳು ಇದ್ದಕಿದ್ದಂತೆ ಕೇವಲ ಅಂಬೇಡ್ಕರ್ ಮಯವಾದದ್ದು ಏಕೆ? ಭಗತ್ ಸಿಂಗ್ ನನ್ನು ಆರಾಧಿಸುತ್ತಿದ್ದ ಅವನು ಮುಸ್ಲಿಮರ ಪರ ಸಹಾನುಭೂತಿ ಬೆಳೆಸಿಕೊಂಡದ್ದು ಏಕೆ? ಆಪ್ ಪಕ್ಷದ ಪರ ಇದ್ದವನು, ಇದ್ದಕಿದ್ದಂತೆ ಆ ಪಕ್ಷದ ಬಗ್ಗೆ ಮಾತಾಡುವುದು ಬಿಟ್ಟಿದ್ದು ಏಕೆ? ಕಾಂಗ್ರೆಸ್ ಪಕ್ಷದ ವಿರುದ್ಧ, ರಾಹುಲ್ ಗಾಂಧಿಯ ವಿರುದ್ಧ ಕೆಂಡ ಕಾರುತ್ತಿದ್ದ ಅವನು, ಮೋದಿ ಪ್ರಧಾನಿಯಾದ ಮೇಲೆ ಮೋದಿಯವರನ್ನು ವಿರೋಧಿಸಲು ಏಕೆ ಶುರು ಮಾಡಿದ? ಆತನ ಮುಗ್ಧತೆಯನ್ನು, ಅಸಹಾಯಕತೆಯನ್ನು ಅಥವಾ ಆತನ ಜಾತಿಯನ್ನು, ಆರ್ಥಿಕ ಪರಿಸ್ಥಿತಿಯನ್ನು ಯಾವುದಾದರೂ ಪಕ್ಷಗಳು ದಾಳವಾಗಿ ಬಳಸಿಕೊಂಡವೇ? ಎಲ್ಲವೂ ರಾಜಕೀಯ ವಿಷಯಗಳಾಗಿಯೇ ಬದಲಾಗುತ್ತಿರುವ ಈ ಹೊತ್ತಿನಲ್ಲಿ, ಎಲ್ಲವನ್ನೂ ಜಾತೀಯ ವಾದಗಳಿಂದಲೇ ಗುರುತಿಸುತ್ತಿರುವ ಈ ಕಾಲದಲ್ಲಿ, ಕಣ್ಣಿಗೆ ಕಂಡದ್ದು, ಕಾಣದ್ದು ಎಲ್ಲವನ್ನೂ ಈತ ನಂಬಿ ಮೋಸ ಹೋದನೇ? ಈತನ ಆರ್ಥಿಕ ಅಥವಾ ಸಾಮಾಜಿಕ ಪರಿಸ್ಥಿತಿಯನ್ನು ನೋಡಿದಾಗ, ಈತನಿಗೆ ಬೆಂಬಲವಾಗಿ ನಿಂತಿರುವವರು ಯಾರೂ ಇಲ್ಲ ಎಂಬುದು ತಿಳಿಯುತ್ತದೆ. ಹಾಗಾಗಿಯೇ ಏಳು ತಿಂಗಳಿನಿಂದ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಘಟನೆಗಳು ಆತನನ್ನು ಹತಾಶೆಗೆ ದೂಡಿರಬಹುದಲ್ಲವೇ? ಆತನ ಪೋಸ್ಟ್ ಗಳನ್ನು ಲೈಕ್ ಮಾಡಿರುವವರು ಕೂಡ ಬಹಳ ಕಡಿಮೆ. ಆದರೆ ಆತ ಕೇವಲ ಹೈದರಾಬಾದ್ ವಿಶ್ವವಿದ್ಯಾಲಯದ ವಿಷಯಗಳನ್ನು ಮಾತ್ರ ಹಂಚಿಕೊಳ್ಳುತ್ತಿರಲಿಲ್ಲ. ದೇಶದಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಆತನ ಗಮನವಿತ್ತು. ಕಲ್ಬುರ್ಗಿಯವರ ಸಾವಿನಿಂದ ಹಿಡಿದು ಲೂಸಿಯಾ ಸಿನೆಮಾದವರೆಗೆ, ದೆಹಲಿಯ ಅತ್ಯಾಚಾರದ ಘಟನೆಯಿಂದ ಹಿಡಿದು ದೇಶದ ಈಶಾನ್ಯ ಭಾಗದಲ್ಲಿ ನಡೆದ ಭೂಕಂಪಗಳ ಬಗ್ಗೆ, ಪ್ರತಿಯೊಂದರ ಬಗ್ಗೆಯೂ ತನಗನ್ನಿಸಿದನ್ನು ಬರೆಯುತ್ತಿದ್ದ.

ಆದರೆ ಆತನ ಕೊನೆಯ ಪತ್ರದಲ್ಲಿ ಬರೆದಂತೆ ವಿಜ್ಞಾನದ ಬರಹಗಾರ ಆಗಬೇಕೆಂದಿತ್ತು ಎಂಬುದು ತುಸು ಆಶ್ಚರ್ಯವಾಗಿ ಕಾಣುತ್ತದೆ. ಏಕೆಂದರೆ ಪ್ರಚಲಿತ ಸುದ್ಧಿಗಳಿಗೆ ಕೊಟ್ಟಷ್ಟು ಮಹತ್ವ ಆತ ವಿಜ್ಞಾನದ ವಿಷಯಗಳ ಬಗ್ಗೆ ನೀಡಿಲ್ಲ. ಪ್ರಕೃತಿಯಿಂದ ಮನುಷ್ಯ ದೂರವಾಗಿದ್ದಾನೆ ಎಂದು ತನ್ನ ಪತ್ರದಲ್ಲಿ ದೂರುವ ಈತ, ಪ್ರಕೃತಿಯನ್ನು ಪ್ರೀತಿಸುತ್ತಿದ್ದ ಎಂಬುದು ಕೂಡ ಈತನ ಫೇಸ್ ಬುಕ್ಕಿನಲ್ಲಿ ಕಾಣುವುದಿಲ್ಲ. ವೋಟಿನ ಲೆಕ್ಕಾಚಾರದಲ್ಲಿಯೇ ಮನುಷ್ಯರನ್ನು ಅಳೆಯುತ್ತಾರೆಯೇ ಹೊರತು ಅವರ ಬುದ್ಧಿಮತ್ತೆಯ ಅವಶ್ಯಕತೆ ರಾಜಕೀಯಕ್ಕಾಗಲೀ, ಶಿಕ್ಷಣಕ್ಕಾಗಲೀ, ಬೀದಿಯಲ್ಲಾಗಲೀ, ಬದುಕು / ಸಾವುಗಳಲ್ಲಾಗಲೀ ಇಲ್ಲ. ಮನುಷ್ಯ ಕೇವಲ ಅಂಕಿ ಅಂಶಗಳಾಗಿಯೇ ಉಳಿದುಬಿಟ್ಟಿದ್ದಾನೆ, ವಸ್ತುವಾಗಿ ಬಿಟ್ಟಿದ್ದಾನೆ ಎಂದು ಬೇಸರಿಸಿದ್ದಾನೆ. ನಮ್ಮ ಪ್ರೀತಿ, ಪ್ರೇಮ ಎಲ್ಲವನ್ನೂ ನಾವೇ ಕಟ್ಟಿಕೊಂಡಿದ್ದೇವೆ, ನಮ್ಮ ಭಾವನೆಗಳೆಲ್ಲವೂ ಎರವಲು ಪಡೆದಿರುವುದು, ನಮ್ಮ ನಂಬಿಕೆಗಳೆಲ್ಲಕ್ಕೂ ಬಣ್ಣ ಬಳಿಯಲಾಗಿದೆ, ನಮ್ಮ ಪ್ರಾಮಾಣಿಕತೆಗಿಂತ ಹೆಚ್ಚಿನ ಬೆಲೆ ಕೃತಕತೆಗೆ ಸಿಗುತ್ತದೆ. ನನ್ನ ಹುಟ್ಟೇ ಒಂದು ದುರಂತ ಆಕಸ್ಮಿಕ. ನಾನು ಇಂದಿಗೂ ಚಿಕ್ಕಂದಿನಿಂದ ಕಾಡುತ್ತಿದ್ದ ಒಂಟಿತನದಿಂದ ಹೊರಬಂದಿಲ್ಲ ಎಂದು ಕೊರಗಿದ್ದಾನೆ. ಬದುಕನ್ನು ಅತ್ಯಂತ ಪ್ರೀತಿಸಿದ ನಾನು ಈ ಜಗತ್ತನ್ನು ಅರ್ಥ ಮಾಡಿಕೊಳ್ಳುವಲ್ಲಿ, ಪ್ರೀತಿ, ಪ್ರೇಮ, ನೋವು, ಸಾವು, ಬದುಕು ಇವೆಲ್ಲವನ್ನೂ ಅರ್ಥೈಸುವಲ್ಲಿ ಬಹುಶಃ ಎಡವಿದೆ ಎಂದು ಪಶ್ಚಾತ್ತಾಪ ಪಟ್ಟಿದ್ದಾನೆ. ಕೆಲವರಿಗೆ ಅವರ ಬದುಕೇ ಒಂದು ಶಾಪವಾಗಿರುತ್ತದೆ. ಈ ಸಮಯದಲ್ಲಿ ನಾನು ಖಾಲಿಯಾಗಿದ್ದೇನೆ ಹೊರತು ಬೇಸರಗೊಂಡಿಲ್ಲ, ಹಾಗಾಗಿಯೇ ಇಂತಹ ಕೆಲಸ ಮಾಡಿದ್ದೇನೆ, ನನ್ನ ಸಾವಿಗೆ ನಾನೇ ಕಾರಣ, ಇನ್ಯಾರೂ ಅಲ್ಲಾ ಎಂದು ಹೇಳಿದ್ದಾನೆ. ಅಪ್ಪಿತಪ್ಪಿಯೂ ತನ್ನ ಆರ್ಥಿಕ ಪರಿಸ್ಥಿತಿಯ ಬಗ್ಗೆ, ತನ್ನ ಜಾತಿಯ ಬಗ್ಗೆ ಅಥವಾ ರಾಜಕೀಯ ಪಕ್ಷಗಳ ಬಗ್ಗೆ ಏನನ್ನೂ ಬರೆದಿಲ್ಲ.

ಇವೆಲ್ಲವನ್ನೂ ನೋಡಿದಾಗ ಏನನ್ನಿಸುತ್ತದೆ? ಒಳಗೊಳಗೆ ಒಂಟಿತನದಿಂದ ಕೊರಗುತ್ತಿದ್ದ ಇವನು, ತನ್ನ ಯಾವ ಕೆಲಸಗಳಿಗೂ ಸರಿಯಾದ ಬೆಂಬಲ ಸಿಗದೆ ಹತಾಶನಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಸ್ವಭಾವತಃ ಭಾವುಕತೆ ಹೆಚ್ಚಿರುವವರು ಒಳಗೊಳಗೆ ಕೊರಗುವುದು, ಖಿನ್ನತೆಯಿಂದ ಬಳಲುವುದು ಹೆಚ್ಚು. ಅಂತಹವರು ಯಾವ ಹಂತಕ್ಕೆ ಬೇಕಿದ್ದರೂ ಹೋಗಬಲ್ಲರು. ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಇಂತಹ ವ್ಯಕ್ತಿಗಳಿಗೆ ಸಾಧ್ಯವಿಲ್ಲ. ವಿಜ್ಙಾನ ಆಸಕ್ತಿಯ ವಿಷಯವಾಗಿದ್ದು, ರಾಜಕೀಯವೆಂದರೆ ಹೇಸಿಗೆ ಪಡುತ್ತಿದ್ದ ವ್ಯಕ್ತಿ, ತನ್ನ ಬದುಕಿನೊಂದಿಗೆ ರಾಜಕೀಯ ಆಟವಾಡಿದ್ದು, ತಾನು ದಾಳವಾಗಿದ್ದು ಕಂಡಾಗ ನೋವಾಗಿರಬಹುದು. ಆತನ ಬದುಕಿನಲ್ಲಿ ರಾಜಕೀಯ ಆಟವಾಡಿದ್ದರೆ, ಈಗ ಆತನ ಸಾವನ್ನು ಕೂಡ ತಮ್ಮ ರಾಜಕೀಯ ಉದ್ದೇಶಗಳಿಗೆ ಬಳಸುತ್ತಿರುವವರನ್ನು ನೋಡಿದಾಗ ಎಂತಹವರಿಗಾದರೂ ಆಕ್ರೋಶ ಉಕ್ಕದಿರದು. ಬಹುಶಃ ಆತನಿಗೇನಾದರೂ ಜೀವವಿದ್ದು, ಎಲ್ಲಿಯೋ ನಿಂತು ತನ್ನ ಸಾವಿನೊಂದಿಗೂ ರಾಜಕೀಯದಾಟ ಆಡುತ್ತಿರುವವರನ್ನು ನೋಡಿದರೆ, ಆತನಿಗೆಷ್ಟು ನೋವಾಗುತ್ತದೆಯೋ? ಇವರೆಲ್ಲರನ್ನೂ ನೋಡುತ್ತಿದ್ದರೆ ಹೇಸಿಗೆ ಹುಟ್ಟುತ್ತಿದೆ. ವೋಟ್ ಬ್ಯಾಂಕಿಗಾಗಿ ನಮ್ಮ ದೇಶದ ಭವಿಷ್ಯದ ಕನಸುಗಾರರನ್ನು ಚಿವುಟುತ್ತಿರುವ ಇಂತಹವರನ್ನು ಜಾತಿ, ಮತ, ಪಕ್ಷ ಭೇದವಿಲ್ಲದೆ ಖಂಡಿಸಬೇಕಿದೆ. ನಮ್ಮ ದೇಶದ ನಿಜವಾದ ಭಯೋತ್ಪಾದಕರು ಈತನ ಸಾವಿನಲ್ಲಿ ತಮಗೆಷ್ಟು ಲಾಭವಿದೆ? ಎಂದು ಲೆಕ್ಕ ಹಾಕುತ್ತಿರುವ ಈ ಮಂದಿಗಳು! ಇವರನ್ನು ಸಾಮಾನ್ಯ ನಾಗರೀಕರು ಬಡಿದು, ಉರುಳಿಸದಿದ್ದಲ್ಲಿ ಇನ್ನೆಷ್ಟು ಇಂತಹ ಸಾವು, ನೋವುಗಳನ್ನು ನಾವು, ನಮ್ಮ ಮಕ್ಕಳು ನೋಡಬೇಕಿದೆಯೋ?

ರೋಹಿತ್ ಗೆ ರಾಹುಲ್ ಗಾಂಧಿಯನ್ನು ಕಂಡರಾಗುತ್ತಿರಲಿಲ್ಲ. ಈಗ ಅದೇ ರಾಹುಲ್ ಗಾಂಧಿ ಅಲ್ಲಿಗೆ ಹೋಗಿ ಮೊಸಳೆ ಕಣ್ಣೀರು ಸುರಿಸುವುದನ್ನು ಕಂಡಿದ್ದರೆ, ಫೇಸ್ ಬುಕ್ಕಿನಲ್ಲಿ ಎಷ್ಟು ಪೋಸ್ಟ್ ಗಳನ್ನು ಹಾಕುತ್ತಿದ್ದನೇನೋ? ಆತನ ಸಾವಿನಿಂದ ಇವರೆಲ್ಲರ ಮುಖವಾಡಗಳು ಕಳಚಿಬಿದ್ದಿದ್ದು ನಮಗೆ ಕಂಡರೆ, ಆತನಿಗೆ ಬದುಕಿದ್ದಾಗಲೇ ಇವರ ಮುಖವಾಡಗಳು ಕಳಚಿ ಬಿದ್ದದ್ದನ್ನು ನೋಡಿ ಮನ ನೊಂದು ಹೀಗೆ ಮಾಡಿಕೊಂಡಿರಬೇಕು. ವಿಶ್ವವಿದ್ಯಾಲಯಗಳ ಆವರಣದಲ್ಲಿ ಎಳ್ಳಷ್ಟು ಕೂಡ ರಾಜಕೀಯ ಕಾಲಿಡದಂತೆ, ರಾಜಕಾರಣಿಗಳು ಬರದಂತಹ ವಾತಾವರಣ ತುರ್ತಾಗಿ ನಿರ್ಮಾಣವಾಗಬೇಕು. ಈತನ ಸಾವನ್ನು ರಾಷ್ಟ್ರದ ದುರಂತವೆಂಬಂತೆ ಬಿಂಬಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಸ್ವಯಂ ಘೋಷಿತ ದಲಿತೋದ್ಧಾರಕರನ್ನು, ಸಮಾಜವಾದಿಗಳನ್ನು, ಬುದ್ಧಿಜೀವಿಗಳನ್ನು ಖಂಡಿಸುವ ಕೆಲಸ ಸಾಮಾನ್ಯ ಜನರು ಮಾಡಬೇಕಿದೆ. ಸಮಾಜವನ್ನು ಉದ್ಧರಿಸುವೆವು ಎಂಬ ಮುಖವಾಡ ತೊಟ್ಟು, ದಲಿತರ ಶೋಷಣೆ ಎಂಬ ಅಡಿಬರಹದಲ್ಲಿ ತಾವೇ ಜನರ ಶೋಷಣೆ ಮಾಡುತ್ತಿರುವವರ ವಿರುದ್ಧ ಜಾತಿ, ಮತ ಭೇಧವಿಲ್ಲದೆ ಎಲ್ಲರೂ ಎದ್ದು ನಿಲ್ಲಬೇಕಿದೆ. ಕರ್ನಾಟಕದ ಸ್ವಯಂ ಘೋಷಿತ ಹೋರಾಟಗಾರರಂತೂ ಕರ್ನಾಟಕದಲ್ಲಾಗುವ ಯಾವುದೇ ಆಗು ಹೋಗುಗಳಿಗೂ ತಲೆ ಕೆಡಿಸಿಕೊಳ್ಳದೆ, ಕರ್ನಾಟಕದ ಹೊರಗೆ ಏನೇ ಆದರೂ ಬೊಬ್ಬೆ ಹೊಡೆಯುವುದನ್ನು ನೋಡುತ್ತಿದ್ದರೆ, ಕರ್ನಾಟಕವೆಲ್ಲಿದೆ? ಎಂಬುದನ್ನು ಹುಡುಕುವಂತಹ ಪರಿಸ್ಥಿತಿ ಬಂದೊದಗಿದೆ.

ನಮ್ಮ ಕರ್ನಾಟಕ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರೈತರೆಲ್ಲರೂ ದುರ್ಬಲ ಮನಸ್ಥಿತಿಯುಳ್ಳವರು, ಅದಕ್ಕಾಗಿಯೇ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಅವರಿಗಿಂತಲೂ ಈ ಹುಡುಗನ ಸಾವು ಅತ್ಯಂತ ದಾರುಣವಾದದ್ದು, ಏಕೆಂದರೆ ಈ ಹುಡುಗ `ದಲಿತ’ ಎಂದು ಹೇಳುವುದನ್ನು ನೋಡಿದರೆ, ಇಂತಹವರು ನಮ್ಮ ರಾಜ್ಯಕ್ಕೆ ಸಲಹೆಗಾರರಾಗಿ ಬೇಕಾ? ಎಂದನ್ನಿಸುವುದಿಲ್ಲವೇ? ಜಾತಿ ಲೆಕ್ಕಾಚಾರದಲ್ಲಿಯೇ ಇವರು ಎಲ್ಲಾ ಸಮಸ್ಯೆಗಳನ್ನು ತೂಕ ಹಾಕುವುದನ್ನು ನೋಡಿದಾಗ, ನಮ್ಮ ಕರ್ನಾಟಕಕ್ಕೆ ಎಂತಹ ದಾರುಣ ಸ್ಥಿತಿ ಬಂದೊದಗಿದೆ ಎಂದನ್ನಿಸಿಬಿಡುತ್ತದೆ. ಕರ್ನಾಟಕದಲ್ಲಿ ಸಮಸ್ಯೆಗಳಾಗುವುದು, ನೋವಾಗುವುದು, ಸಂಕಟವಾಗುವುದು ಕೇವಲ ಅಹಿಂದದವರಾಗಿದ್ದರೆ ಮಾತ್ರ, ಉಳಿದ ಜನರೆಲ್ಲರೂ ಸುಖ, ಸಮೃದ್ಧಿಯಿಂದ ಬದುಕುತ್ತಿದ್ದಾರೆ ಎಂದು ನಮ್ಮ ರಾಜ್ಯದ ಮುಖ್ಯಮಂತ್ರಿಗಳು, ಅವರ ಸಲಹೆಗಾರರು, ಆ ಸಲಹೆಗಾರರ ಬೆಂಬಲಿಗರು ನಂಬಿರುವುದು ನಮ್ಮ ದುರಂತ. ಇಂತಹ ಪೊಳ್ಳು ಆಡಳಿತ ಪಕ್ಷವನ್ನು ವಿರೋಧಿಸದೇ, ತಮ್ಮದೇ ಲೋಕದಲ್ಲಿರುವ ವಿರೋಧ ಪಕ್ಷಗಳನ್ನು ನೋಡಿದಾಗ, ಕರ್ನಾಟಕಕ್ಕೆ ಭವಿಷ್ಯವಿದೆಯೇ? ಇಂತಹ ಆಡಳಿತಗಾರರ ನಡುವೆ ನಮ್ಮ ಮಕ್ಕಳ ಗತಿಯೇನು? ಒಬ್ಬ ರೋಹಿತ್ ಸಮಾಜದ ಈ ಅವ್ಯವಸ್ಥೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ನಾವು, ನಮ್ಮ ಮಕ್ಕಳು?! ಏನು ಮಾಡಬೇಕು? ಆಡಳಿತ ಪಕ್ಷಕ್ಕಂತೂ ಜಾಣ ಕುರುಡು / ಕಿವುಡುತನ ಬಂದಿದೆ. ಆದರೆ ವಿರೋಧ ಪಕ್ಷಗಳೇಕೆ ನಿದ್ದೆ ಮಾಡುತ್ತ ಕುಳಿತಿವೆ? ಎದುರಿಗೆ ಭಕ್ಷ್ಯಭೋಜನಗಳಿದ್ದರೂ, ಕುಂಭಕರ್ಣನಂತೆ ಮಲಗಿರುವ ವಿರೋಧಪಕ್ಷಗಳನ್ನು ಎಬ್ಬಿಸುವುದು ಹೇಗೆ? ಎಬ್ಬಿಸುವವರು ಯಾರು?

25 ಟಿಪ್ಪಣಿಗಳು Post a comment
  1. ಜನ 21 2016

    I ll recommend this author for pultizer prize for writing this article… “ಆದರೆ ಆತನ ಕೊನೆಯ ಪತ್ರದಲ್ಲಿ ಬರೆದಂತೆ ವಿಜ್ಞಾನದ ಬರಹಗಾರ ಆಗಬೇಕೆಂದಿತ್ತು ಎಂಬುದು ತುಸು ಆಶ್ಚರ್ಯವಾಗಿ ಕಾಣುತ್ತದೆ. ಏಕೆಂದರೆ ಪ್ರಚಲಿತ ಸುದ್ಧಿಗಳಿಗೆ ಕೊಟ್ಟಷ್ಟು ಮಹತ್ವ ಆತ ವಿಜ್ಞಾನದ ವಿಷಯಗಳ ಬಗ್ಗೆ ನೀಡಿಲ್ಲ. ಪ್ರಕೃತಿಯಿಂದ ಮನುಷ್ಯ ದೂರವಾಗಿದ್ದಾನೆ ಎಂದು ತನ್ನ ಪತ್ರದಲ್ಲಿ ದೂರುವ ಈತ, ಪ್ರಕೃತಿಯನ್ನು ಪ್ರೀತಿಸುತ್ತಿದ್ದ ಎಂಬುದು ಕೂಡ ಈತನ ಫೇಸ್ ಬುಕ್ಕಿನಲ್ಲಿ ಕಾಣುವುದಿಲ್ಲ”…..if somebody wants to become a popular science writer…he must share science garbage on his facebook wall…wate va…..

    ಉತ್ತರ
    • ಜನ 21 2016

      Not really. All your facebook feed can speak about porn and you can be an adhyatma guru 🙂 I second your thought Mr Yashwanth

      ಉತ್ತರ
    • Sachin
      ಜನ 21 2016

      When a person is interested in politics and he put all politically motivated stuff in his fb wall why not even a single article related to science and technology?

      ಉತ್ತರ
    • Yeshvanth bikaari
      ಜನ 21 2016

      ಮಾಧ್ಯಮ ಸಲಹೆಗಾರರಿಗೆ ಒಂದು ಪ್ರಶಸ್ತಿಗೆ ರೆಕಮೆಂಡ್ ಮಾಡಿ ಬಹುಶಃ ನಿಮಗೆ ರೆಕಮ್ಂಡ್ ಇಲ್ಲದೆಯೂ ಪ್ರಶಸ್ತಿಗಳು ಸಿಗುತ್ತವೆ ಎಂಬ ಮಾಹಿತಿಯೇ ಇಲ್ಲ ಎನಿಸುತ್ತಿದೆ.

      ಉತ್ತರ
    • ಜನ 21 2016

      Out of line thinking. If dime one is so passionate, at least some inclination would be shown- generally.

      ಉತ್ತರ
      • Sunanda Pushkr
        ಜನ 21 2016

        Are you suggesting that Rohith’s death note wasn’t written by him but planted by someone else? Are you suspecting foul play?

        ಉತ್ತರ
  2. Anonymous
    ಜನ 21 2016

    “ನಮ್ಮ ಕರ್ನಾಟಕ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರೈತರೆಲ್ಲರೂ ದುರ್ಬಲ ಮನಸ್ಥಿತಿಯುಳ್ಳವರು, ಅದಕ್ಕಾಗಿಯೇ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ”

    ಸದರಿ ಸಲಹೆಗಾರರು ಎಲ್ಲಾ ವಿಷಯಗಳ ಬಗ್ಗೆ ಪಾಂಡಿತ್ಯಪೂರ್ಣವಾಗಿ ಮಾತಾಡಬಲ್ಲ ಅದ್ಭುತ ಪ್ರತಿಭೆ; ಜ್ಞಾನ/ಮಾಹಿತಿ/ಒಳನೋಟಗಳ ಖನಿ. ಅವರಿಗೆ ಎಲ್ಲಾ ವಿದ್ಯಮಾನಗಳ ಹಿಂದಿನ ಸತ್ಯ ಏನು ಅಂತ ಬಹಳ ಸ್ಪಷ್ಟವಾಗಿ ಕಾಣಿಸುತ್ತದೆ. ಆದುದರಿಂದ ಅವರು ರೈತರು ದುರ್ಬಲ ಮನಸ್ಸಿನವರು ಎಂದ ಮೇಲೆ ಮುಗಿಯಿತು, ರೈತರು ಖಂಡಿತ ದುರ್ಬಲ ಮನಸ್ಸಿನವರೇ. ರೈತರ ಆತ್ಮ ಹತ್ಯೆಗೆ ದುರ್ಬಲ ಮನಸ್ಸು ಹಾಗೂ ಅದನ್ನು ದುರ್ಬಲವಾಗಿಸಿರುವ ಮನುವಾದಿ ಜಾತಿವ್ಯವಸ್ಥೆಯೇ ಕಾರಣ, ಸದರಿ ಸರಕಾರವಂತೂ ಅಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡರು ಅಂತ ನಗರಗಳ ಬ್ರಾಹ್ಮಣರೂ ಮೇಲ್ಜಾತಿಯವರೂ ಚಿಕನ್ ಬಿರಿಯಾನಿ ತಿನ್ನುವುದನ್ನು ನಿಲ್ಲಿಸಿದ್ದಾರಾ? ಪೇಜಾವರ ಮಠದವರು ಪರ್ಯಾಯ ಸಂಭ್ರಮ ನಿಲ್ಲಿಸಿದ್ದಾರಾ? ನರೇಂದ್ರ ಮೋದಿ ಸೆಲ್ಫಿ ತೆಗೆಯುವುದನ್ನು ನಿಲ್ಲಿಸಿದ್ದಾರಾ? ಸುಶಿಕ್ಷಿತ ಜನರು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಡೆಸ್ನಾನ ಮಾಡುವುದನ್ನು ನಿಲ್ಲಿಸಿದ್ದಾರಾ? ಸುಖಾಸುಮ್ಮನೆ ಸಿದ್ದರಾಮಯ್ಯನವರ ನೇತೃತ್ವದ ಸರಕಾರವನ್ನು ರೈತರ ಆತ್ಮಹತ್ಯೆಗಳಿಗೆ ದೂರುವುದು ಸರಿಯಲ್ಲ. ಜಾತಿವ್ಯವಸ್ಥೆ ಬದಲಾಗದ ಹೊರತು ರಾಜ್ಯ ಸರಕಾರ ತಾನೆ ಏನು ಮಾಡಲು ಸಾಧ್ಯ? ಎಲ್ಲಾ ಅವಘಡಗಳಿಗೂ ಜಾತಿವ್ಯವಸ್ಥೆಯನ್ನು ಬದಲಾಯಿಸದ ಕೇಂದ್ರ ಸರಕಾರವೇ ಹೊಣೆ. ಸ್ಮೃತಿ ಇರಾನಿ ಹಾಗೂ ದತ್ತಾತ್ರೇಯ ತಕ್ಷಣವೇ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಪೋಲೀಸ್ ತನಿಖೆಗೆ ಒಳಗಾಗತಕ್ಕದ್ದು.

    ಉತ್ತರ
    • Naveen
      ಜನ 21 2016

      ಸಂಪೂರ್ಣ ಅಸಂಬಂದ್ಧ ಮತ್ತು ಅರ್ಥವಿಲ್ಲದ ಪೂರ್ವಾಗ್ರಹ ಪೀಡಿತ comment

      ಉತ್ತರ
      • Nayantara Sahgal
        ಜನ 21 2016

        It’s a pity you missed the sarcasm.

        ಉತ್ತರ
    • ಜನ 21 2016

      Ayyo! ee jaati jaati anta badkonde nimmantavaru hotte horeyodu!

      ಉತ್ತರ
  3. hemapathy
    ಜನ 21 2016

    Our nation is full of educated brutes and illiterate fools. This has happened because our country got the premature independence. Nobody knows the meaning of independence.

    ಉತ್ತರ
    • Farooq Abdullah
      ಜನ 21 2016

      You nailed the coffin of truth!

      After British colonial rule we should have asked the French to rule us from 1947 till 1997 and the Germans to rule us from 1997 till 2047. Then we would be in perfect condition for independence.

      ಉತ್ತರ
  4. suffering talent
    ಜನ 21 2016

    it is very sad
    Some annonymus has written
    “ಎಲ್ಲಾ ಅವಘಡಗಳಿಗೂ ಜಾತಿವ್ಯವಸ್ಥೆಯನ್ನು ಬದಲಾಯಿಸದ ಕೇಂದ್ರ ಸರಕಾರವೇ ಹೊಣೆ.”
    Till now which party was in center for so many years???

    The same congress which is ruling the state now….
    Those cannot come up by their mere qualification are curbing towards the one who came up by their mere qualification not by the freebies…
    those who took freebies want more & never come up bcos they are happy in blaming others for their incapability

    😦 😦

    ಉತ್ತರ
    • Ashok Vajpeyi
      ಜನ 21 2016

      It’s a pity you missed the sarcasm.

      ಉತ್ತರ
  5. ರಾಜು ಮೌರ್ಯ ದಾವಣಗೆರೆ
    ಜನ 21 2016

    ಕೇಳಿಸಿಕೊಳ್ಳಲು ಈಗ ಅವನಿಲ್ಲ.
    ಜಾತಿ ವ್ಯವಸ್ಥೆ, ಎಡ- ಬಲಪಂಥೀಯಗಳ ವಾದ-ವಿವಾದಗಳು ಇವುಗಳಿಂದ ನಷ್ಟ ಅನುಭವಿಸುತ್ತಿರುವವರು ಜನಸಾಮಾನ್ಯ.
    ಇದರ ಲಾಭ ಪಡೆಯುತ್ತಿರುವವರು ರಾಜಕಾರಣಿಗಳು. ಇದು ಎಡಪಂಥೀಯರಿಗೂ ಅರ್ಥವಾಗುತ್ತಿಲ್ಲ. ಬಲಪಂಥೀಯರಿಗೂ ಅರ್ಥವಾಗುತ್ತಿಲ್ಲ.

    ಉತ್ತರ
  6. Goutham
    ಜನ 21 2016

    ಇಂಚರರವರೆ, ರೋಹಿತ್ ವಿರೋದಿಸಿದ್ದು ಗಲ್ಲುಶಿಕ್ಷೆಯನ್ನು. ನಾಗರೀಕ ಸಮಾಜದಲ್ಲಿ capital punishment ಇರಬಾರದು ಎನ್ನುವುದು ಆತನ ಅಭಿಪ್ರಾಯವಾಗಿತ್ತು. ಇದು ಸರಿಯೋ ತಪ್ಪೋ ಬೇರೆ ವಿಷಯ. ಆದರೆ ಯಾಕೂಬ್ ಮೆನನ್ ಗೆ ಶಿಕ್ಷಿಯಾಗುವುದನ್ನು ಆತ ವಿರೋಧಿಸಿರಲಿಲ್ಲ. ನೀವು ಬರೆದಿರುವಂತೆ ಆತ ಯಾಕೂಬ್ ಪರ ವಾದಿಸಿರಲಿಲ್ಲ. ಈ ಬಗ್ಗೆ ತಪ್ಪು ತಿಳುವಳಿಕೆ ಬೇಡ. ಈ ದಲಿತ ವಿದ್ಯಾಥಿ೯ಯ ಸಾವು ನಿಜಕ್ಕೂ ದುರಂತ. ಮತ್ತೊಂದು ದುರಂತವೆಂದರೆ ಆತನ ಡೆತ್ ನೋಟ್ ನಿಮಗೆ ಕಾವ್ಯಾತ್ಮಕವಾಗಿ ಕಂಡಿರುವುದು.

    ಉತ್ತರ
    • Mandakranta Sen
      ಜನ 22 2016

      To some his death note is poetic and to some others his death itself is poetic. What about the life he lived?

      ಉತ್ತರ
    • ಇಂಚರ
      ಜನ 22 2016

      ರೋಹಿತ್ ಮಾಡಿದ್ದು ಸರಿ / ತಪ್ಪು ಅನ್ನೋಕೆ ನಾನ್ಯಾರು? ಅವನ ಗೊಂದಲಮಯ ಸ್ಥಿತಿ ಬಗ್ಗೆ ಹೇಳಿದೆ. ಯುವಕರು ಹೇಗೆ ಫೋಕಸ್ ತಪ್ಪುತ್ತಾರೆ? ಎಂಬುದನ್ನು ಹೇಳಬೇಕಿತ್ತು. ಭಗತ್ ಸಿಂಗ್ ನನ್ನು ಆದರ್ಶವಾಗಿಟ್ಟುಕೊಂಡವ ಯಾಕೂಬ್ ನನ್ನು ಬೆಂಬಲಿಸಲು ಸಾಧ್ಯವಿಲ್ಲ. ಡೆತ್ ನೋಟ್ ಕಾವ್ಯಾತ್ಮಕವಲ್ಲದೆ ಪ್ರಾಕ್ಟಿಕಲ್ ಆಗಿತ್ತು ಎನ್ನುವಿರಾ? ತನ್ನ ಅಪ್ಪ, ಅಮ್ಮನ ಬಗ್ಗೆ ಯೋಚಿಸದೆ, ನಾನು ನಕ್ಷತ್ರವಾಗುವೆ, ಗೋಸ್ಟ್ ಆಗೋಲ್ಲ ಅನ್ನೋ ಮಾತುಗಳೆಲ್ಲಾ ಹಾಗಿದ್ದರೆ ಏನು? 😊

      ಉತ್ತರ
      • Chamanlal
        ಜನ 22 2016

        He has written in the death note that he felt indifferent to himself and hence taking the extreme step. To him living was no different non living. He realized the disconnect between his true self and the identity he wore. The world didn’t care about his true self but acknowledged only his identity. All relationships were with his identity and not with his true self. I think he was on the door step of enlightenment but probably didn’t realize that.

        ಉತ್ತರ
    • WITIAN
      ಜನ 23 2016

      ‘ತುಮ್ ಏಕ್ ಯಾಕೂಬ್ ಕೋ ಮಾರೋ ಗೆ ತೋ ಹರ್ ಘರ್ ಮೇ ಯಾಕೂಬ್ ಪೈದಾ ಹೋಂಗೇ..’ ಇದು ಮರಣದಂಡನೆಯನ್ನು ವಿರೋಧಿಸುವ ಘೋಷಣೆಯೋ ಅಥವಾ ಯಾಕೂಬ್ ಮೇಮನ್ ನನ್ನು ವೈಭವೀಕರಿಸುವ ಪ್ರಯತ್ನವೋ ಓದಿದವರು ಹೇಳಬೇಕು.

      ಉತ್ತರ
  7. WITIAN
    ಜನ 23 2016

    ಏನೋ ಮಾಡಲು ಹೋಗಿ ಏನೋ ಆದ ಕತೆಗೊಂದು ದುರಂತ ಉದಾಹರಣೆ, ರೋಹಿತ್ ವೇಮುಲ ಎಂಬ ವಿದ್ಯಾರ್ಥಿಯ ಸಾವು. ಮೊದಲಿಗೆ ಅದೊಂದು ವಿಶ್ವವಿದ್ಯಾಲಯದಲ್ಲಿನ ವಿದ್ಯಾರ್ಥಿಗಳ ಜಗಳ ದೈಹಿಕ ಹಲ್ಲೆಯಲ್ಲಿ ಬದಲಾದ ನಿರುಪದ್ರವಿ ಪ್ರಕರಣ! ಯಾರಿಗೂ ಅವನ ಜಾತಿಯ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿದ್ದಂತೇನೂ ಕಾಣುವುದಿಲ್ಲ. ಆದರೆ, ಪ್ರಕರಣದ ಬಗ್ಗೆ ಸಾರ್ವಜನಿಕರಿಗೆ ದಿಕ್ಕು ತಪ್ಪಿಸಲು ಮಾಧ್ಯಮ (ದಿ ಹಿಂದೂ ಪತ್ರಿಕೆ) ಮಾಡಿದ ಕುಚೇಷ್ಟೆಯಿಂದ ರೋಹಿತ್ ‘ದಲಿತ’ನಾಗಿಬಿಟ್ಟ! ತಕ್ಕೋ, ಎಲ್ಲ ದಲಿತರೂ, ಪ್ರೋಗ್ರೆಸಿವ್ ಗಳೂ ‘ಪ್ರತಿಗಾಮಿ’ ಕೇಂದ್ರಸರಕಾರದ ಮೇಲೆ ಮುರಕೊಂಡು ಬಿದ್ದರು. ದೆಹಲಿ ಎಂಬ ‘ಶೋಭೀಕೃತ’ ಮುನಿಸಿಪಾಲಿಟಿಯ ಮುಖ್ಯಸ್ಥ ಮಂತ್ರಿಯೊಬ್ಬ ‘ವೋಹ್ ದಲಿತ್ ಥೇ..’ ಎನ್ನುವ ಘೋಷಣೆಯೊಂದಿಗೆ ರೋಹಿತ್ ನ ಚಿತೆಯಲ್ಲಿ ದೆಹಲಿ ಚಳಿಗೆ ಬೆಂಕಿಕಾಯಿಸಿಕೊಳ್ಳುವ ನೀಚ ಕೆಲಸ ಮಾಡಿದ. ಅವಾರ್ಡ್ ವಾಪಸಿ ಖ್ಯಾತಿಯ ಅಸೊಕ್ ಬಾಜ್ಪೇಯಿ ಎನ್ನುವ ಮನುಷ್ಯ ‘ಇದೇ ಚಾನ್ಸ್’ ಅಂತ ಹೈದರಾಬಾದ್ ವಿಶ್ವವಿದ್ಯಾಲಯ ನೀಡಿದ ಡಿ ಲಿಟ್ ಪದವಿಯನ್ನು ಮರಳಿಸಿ ಮೂವತ್ತು ಸೆಕೆಂಡುಗಳ ಪ್ರಖ್ಯಾತಿಗೆ ದಾವೆ ಹಾಕಿದ! ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಹೈದರಾಬಾದ್ ವಿಶ್ವವಿದ್ಯಾಲಯಕ್ಕೆ ಹೋಗಿ ಮಿಂಚಿದ! ಎಲ್ಲ ಆದ ನಂತರ ಈಗ ರೋಹಿತ್ ದಲಿತನೇ ಅಲ್ಲ ಎನ್ನುವ ಸುದ್ದಿ ಪೋಲೀಸರ ತನಿಖೆಯಿಂದ ತಿಳಿದು ಬರುವಾಗ ಎಲ್ಲರೂ ಚೇಳುಕುಟುಕಿದ ಕಳ್ಳನಂತೆ ಸೈಲೆಂಟ್ ಆಗಿದ್ದಾರೆ!

    ಉತ್ತರ
    • Anonymous
      ಜನ 24 2016

      “ಅದೊಂದು ವಿಶ್ವವಿದ್ಯಾಲಯದಲ್ಲಿನ ವಿದ್ಯಾರ್ಥಿಗಳ ಜಗಳ ದೈಹಿಕ ಹಲ್ಲೆಯಲ್ಲಿ ಬದಲಾದ ನಿರುಪದ್ರವಿ ಪ್ರಕರಣ!”

      ಹೌದೇ? “ದೇಶದ ವಿಶ್ವವಿದ್ಯಾಲಯಗಳ ಒಳಹೊಕ್ಕು ನೋಡಿದರೆ ಒಂದು ಕೈಯಲ್ಲಿ ವಿಷದ ಬಾಟಲಿ, ಇನ್ನೊಂದು ಕೈಯಲ್ಲಿ ನೇಣಿನ ಹಗ್ಗ ಹಿಡಿದುಕೊಂಡ ನೂರಾರು ರೋಹಿತ ವೇಮುಲರನ್ನು ಕಾಣಬಹುದು. ನಾವಿಂದು ಯೋಚಿಸಬೇಕಾಗಿರುವುದು ಅನ್ಯಾಯ-ಅವಮಾನಗಳನ್ನು ನುಂಗಿಕೊಂಡು ಉಳಿದುಕೊಂಡವರನ್ನು ಉಳಿಸಿಕೊಳ್ಳುವುದು ಹೇಗೆ ಎಂದು.” — ಮುಖ್ಯಮಂತ್ರಿಗಳ ಮಾಧ್ಯಮ ಸಲಹಾಗಾರರು.

      ಉತ್ತರ
      • WITIAN
        ಜನ 24 2016

        ‘ದೇಶದ ವಿಶ್ವವಿದ್ಯಾಲಯಗಳ ಒಳಹೊಕ್ಕು ನೋಡಿದರೆ ಒಂದು ಕೈಯಲ್ಲಿ ವಿಷದ ಬಾಟಲಿ, ಇನ್ನೊಂದು ಕೈಯಲ್ಲಿ ನೇಣಿನ ಹಗ್ಗ ಹಿಡಿದುಕೊಂಡ ನೂರಾರು ರೋಹಿತ್ ವೇಮುಲರನ್ನು ಕಾಣಬಹುದು’.. ಸ್ವಾಮಿ, ಕೈಯಲ್ಲಿ ಪುಸ್ತಕವನ್ನೂ ಮನಸ್ಸಿನಲ್ಲಿ ನೂರಾರು ಕನಸುಗಳನ್ನು ತುಂಬಿಕೊಂಡು ವಿಶ್ವವಿದ್ಯಾಲಯಕ್ಕೆ ಹೆಜ್ಜೆ ಇಡಬೇಕು. ಮನಸ್ಸಿನಲ್ಲಿ ಅಪಾರವ್ಯಥೆಯನ್ನೂ, ನಮ್ಮ ಎಮೋಷನಲ್ ಬ್ಯಾಗೇಜುಗಳನ್ನೂ, ಕೈಯಲ್ಲಿ ವಿಷದ ಬಾಟಲು ಮತ್ತದರ ಜತೆ ಹಗ್ಗವನ್ನು ಹೊತ್ತುಕೊಂಡು ಹೋಗುವುದಲ್ಲ.

        ಉತ್ತರ
        • Ckvmurthy
          ಫೆಬ್ರ 5 2016

          Correct answer. Dikku tappisuvarige sariyada uttara.Naane sarvgna emba durhankarakke sariyada pettu.ennaadaru bidali evra monduvada.

          ಉತ್ತರ
  8. ಗುರುಬಸವರಾಜ
    ಜನ 21 2017

    ನಿಮ್ಮ ಅಂಕಣದ ಉದ್ದೇಶ ಅಮಿನಮಟ್ಟು ಅವರನ್ನ ಎಳೆದು ತರುವೊದೊ ಅಥವಾ ರೋಹಿತ್ ಬಗ್ಗೆ ತಿಳಿಸುವೊದು ಅರ್ಥವಾಗಲಿಲ್ಲ.ಒಟ್ಟಾರೆಯಾಗಿ ರೋಚ ಮತ್ತು ನೀವು ನಿಮ್ಮ ಸಗಡಿರಗಲೊಬ್ಬರ ಬಿ.ಜೆ.ಪಿ ಸರ್ಕಾರ ಬಂದರೆ ಮಾದ್ಯಮ ಸಲಹೆಗಾರಾಗಲು ಕಾತುರದಿಂದ ಕಾಯುತ್ತಿರುವು ನಿಜ ಏನಿಸುತ್ತಿದೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments