ಕಾಂಗ್ರೆಸ್ ಮುಕ್ತ ಸುಳ್ಯದಲ್ಲಿ ಅರಳಿದ ಕಮಲ
– ತಾರನಾಥ ನಡುಮನೆ
ಸುಳ್ಯ- ಇಂದು ಇದು ರಾಜಕೀಯವಾಗಿ ದಕ್ಷಿಣಕನ್ನಡಕ್ಕೆ ಸೇರಿದರೂ, ಇನ್ನೂ ಕೊಡಗಿನ ಕೆಲವು ಸಂಪ್ರದಾಯವನ್ನು ಉಳಿಸಿಕೊಂಡು ಬಂದ ಪ್ರದೇಶ. ಕರ್ನಾಟಕದ ಪ್ರಮುಖ ತೀರ್ಥಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವನ್ನು ಹೊಂದಿರುವ ತಾಲೂಕು.
ಸುಳ್ಯ ಪರಿಸರ ಮಂಗಳೂರಿನಂತೆ ಸಮತಟ್ಟಾಗಿರದೆ , ಕೊಡಗಿನಂತೆ ಸಣ್ಣ ಬೆಟ್ಟ-ಗುಡ್ಡ ವನ್ನು ಹೊಂದಿರೋ ಪ್ರದೇಶ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹಸಿರು ಸಿರಿಯಲ್ಲಿ ಮಲಗಿರುವ ಊರು. ಇಲ್ಲಿನ ಜನ ಸ್ವಾಭಿಮಾನಿಗಳು , 1837 ರಲ್ಲಿ ನಡೆದ ಅಮರ ಸುಳ್ಯದ ರೈತ ದಂಗೆ ಇದಕ್ಕೆ ಸಾಕ್ಷಿ. ಅಂದು ಕಂದಾಯ ಪಾವತಿ ಹಾಗೂ ಕೊಡಗಿನ ಅರಸ ಚಿಕ್ಕವೀರರಾಜೇಂದ್ರನ ಪದಚ್ಯುತಿ ಕಾರಣಕ್ಕಾಗಿ ತಮ್ಮನಾಳುತ್ತಿದ್ದ ಬ್ರಿಟಿಷರ ವಿರುದ್ದ ದಂಗೆ ಎದ್ದ ರೈತರು ಮಂಗಳೂರಿಗೆ ಮುತ್ತಿಗೆ ಹಾಕಿದ್ದರು. ಮೊದಲು ಮಂಗಳೂರನ್ನು ಗೆದ್ದರೂ ನಂತರ ಆಂಗ್ಲರಿಗೆ ಬಿಟ್ಟು ಕೊಡಬೇಕಾಯಿತು.
ಸುಳ್ಯದ ಜನ ಪ್ರಜ್ಞಾವಂತರು , ದೇಶದ ಪ್ರತಿ ವಿದ್ಯಮಾನವನ್ನು ಸೂಕ್ಷ್ಮ ಕಣ್ಣಿನಿಂದಲೇ ಗಮನಿಸಿ ತಕ್ಕನಾಗಿ ಪ್ರತಿಸ್ಪಂದಿಸುತ್ತಾರೆ. ೫೦ ವರ್ಷದ ಹಿಂದೆ ಮಲೇರಿಯಾ ಮೊದಲಾದ ರೋಗಗಳಿಂದ , ಬಡತನದಿಂದ ಬಳಲುತ್ತಿದ್ದ ಊರು ಈಗ ಬದಲಾಗಿದೆ . ಬಹುತೇಕ ಗ್ರಾಮೀಣ ಪ್ರದೇಶವನ್ನು ಹೊಂದಿದ್ದರೂ ಕೂಡ 86.35% ರಷ್ಟು ಸಾಕ್ಷರತೆಯನ್ನು ಹೊಂದಿದೆ. ಅಧುನಿಕ ಸುಳ್ಯದ ನಿರ್ಮಾತೃ ದಿ. ಕುರುಂಜಿ ವೆಂಕಟರಮಣ ಗೌಡರು ಕಟ್ಟಿ ಬೆಳೆಸಿದ ಕೆ.ವಿ.ಜಿ ಕ್ಯಾಂಪಸ್ನಲ್ಲಿ ಎಲ್ಲಾ ತರಹನಾದ ಶಿಕ್ಷಣದ ವ್ಯವಸ್ಥೆ ಇದೆ. ಇಂಜಿನಿಯರಿಂಗ್, ಮೆಡಿಕಲ್, ಆಯುರ್ವೇದ, ದಂತ ವೈದ್ಯಕೀಯ ಕಾಲೇಜ್ ಇದೆ. 3000 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೆಲವೆಡೆಯಲ್ಲಿ ಇನ್ನೂ ಒಂದು ಭಾವನೆಯಿದೆ ,ಏನೆಂದರೆ ಬುದ್ದಿವಂತರು ಅಥವಾ ಬುದ್ದಿಜೀವಿಗಳ (?) ಪಕ್ಷ ಕಾಂಗ್ರೆಸ್ ಎಂದು.
ಇಷ್ಟೆಲ್ಲಾ ಶೈಕ್ಷಣಿಕವಾಗಿ ಮುಂದಿರುವ ಊರಲ್ಲಿ ಇಂದು ಕಮಲ ಅರಳಿದೆ ಎಂದರೆ ಅದಕ್ಕೆ ಸುಳ್ಯದ ನಾಗರಿಕರ ಅಜ್ಞಾನ ಕಾರಣವಲ್ಲ ಬದಲಾಗಿ ,ದೇಶದ ಮೇಲಿರುವ ಅಭಿಮಾನ ಅವರನ್ನು ಬಿ.ಜೆ.ಪಿ ಯತ್ತ ವಾಲುವಂತೆ ಮಾಡಿದೆ. ಅದಕ್ಕಾಗಿ ಇಷ್ಟೆಲ್ಲಾ ಹೇಳಬೇಕಾಗಿ ಬಂತು.
ಮೊನ್ನೆ ನಡೆದ ಜಿ. ಪಂ, ತಾ. ಪಂ ಚುನಾವಣೆಗಳಲ್ಲಿ ಬಿ.ಜೆ.ಪಿ ಮತ್ತೆ ಜಯಭೇರಿ ಭಾರಿಸಿದೆ. ಜಿ.ಪಂ ನ 4 ಕ್ಷೇತ್ರದಲ್ಲಿ 4 ಹಾಗು ತಾ.ಪಂನ 13 ಕ್ಷೇತ್ರದಲ್ಲಿ 9 ರಲ್ಲಿ ಜಯಶಾಲಿ ಆಯಿತು. ಅನೇಕ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಸೂಕ್ತ ಅಭ್ಯರ್ಥಿಗಳೇ ಸಿಗದೆ ಪರದಾಡುವಂತಾಗಿತ್ತು. ಅಲ್ಲದೆ ಬಿ.ಜೆ.ಪಿ 28 ಗ್ರಾಂ.ಪ ಯಲ್ಲಿ 23 ನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅಷ್ಟೇ ಅಲ್ಲದೇ ಸುಳ್ಯ ಪಟ್ಟಣ ಪಂಚಾಯತ್ ಹಾಗು ಬಹುತೇಕ ಸಹಕಾರಿ ಬ್ಯಾಂಕ್ ಹೀಗೆ ಸಂಪೂರ್ಣ ಕಮಲಮಯವಾಗಿದೆ.ಮೀಸಲು ಕ್ಷೇತ್ರವಾಗಿರುವ ಸುಳ್ಯ ವಿಧಾನಸಭಾ ಕ್ಷೇತ್ರವನ್ನು ಸತತ 5ನೇ ಬಾರಿ ಶಾಸಕ ಎಸ್. ಅಂಗಾರರು ಪ್ರತಿನಿಧಿಸುತ್ತಿದ್ದಾರೆ. 1983 ರಲ್ಲಿ ಬಾಕಿಲ ಹುಕ್ರಪ್ಪರು ಮೊದಲ ಬಾರಿಗೆ ಬಿ.ಜೆ.ಪಿ ಯಿಂದ ಆಯ್ಕೆಯಾದರು. ನಂತರ ಮತ್ತೆ ಕಾಂಗ್ರೇಸ್ ವಶವಾದ ಕ್ಷೇತ್ರವನ್ನು 1994 ರಲ್ಲಿ ಗೆದ್ದ ಅಂಗಾರರು ಸತತವಾಗಿ ಗೆಲ್ಲುತ್ತಲೇ ಬಂದಿದ್ದಾರೆ.
2013 ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಸ್ವಜನ ಪಕ್ಷಪಾತ, ಭ್ರಷ್ಟಚಾರ , ಹಗರಣಗಳಿಂದಾಗಿ ಕರಾವಳಿ ಕರ್ನಾಟಕದಲ್ಲಿ ಬಿ.ಜೆ.ಪಿ ಮಕಾಡೆ ಮಲಗಿತ್ತು. ದಕ್ಷಿಣ ಕನ್ನಡದ ವಿಧಾನಸಭಾ 8 ಕ್ಷೇತ್ರದಲ್ಲಿ 7 ಕಾಂಗ್ರೆಸ್ ಪಾಲಾಗಿತ್ತು. ಆದರೆ ಸುಳ್ಯ ವಿಧಾನಸಭಾ ಕ್ಷೇತ್ರ ‘ಕೈ’ಗೆಟುಕಲೇ ಇಲ್ಲ. 1000ಕ್ಕೂ ಹೆಚ್ಚು ಮತಗಳಿಂದ ಸುಳ್ಯದಲ್ಲಿ ಗೆದ್ದ ಬಿ.ಜೆ.ಪಿ ಕ್ಲೀನ್ ಸ್ವೀಪ್ ಮಾಡುವ ಕಾಂಗ್ರೆಸ್ ಆಸೆಗೆ ತಣ್ಣೀರೆರಚಿತು. ಅಂಗಾರರ ಸರಳ ಸ್ವಭಾವ, ಭ್ರಷ್ಟಾಚಾರ ಮುಕ್ತ ಬದುಕು ಅವರನ್ನು 22 ವರ್ಷಗಳಿಂದ ಶಾಸಕರನ್ನಾಗಿ ಮಾಡಿದೆ. ಅಂತೆಯೇ ರಾಜ್ಯದ ಮಾಜಿ ಮುಖ್ಯಮಂತ್ರಿ , ಹಾಲಿ ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡರ ಹುಟ್ಟಿದ ಊರು. ಹಾಗೇ ಮಾಜಿ ಇಂಧನ ಸಚಿವೆ, ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಯವರ ತವರೂರು ಸುಳ್ಯ.
ಅಗೊಮ್ಮೆ- ಈಗೊಮ್ಮೆ ಕಾಂಗ್ರೆಸ್ ಕೈಗೆ ಅಧಿಕಾರ ಕೊಟ್ಟರೂ ಸಹ ಸುಳ್ಯದ ಮತದಾರರು ಬಿ.ಜೆ.ಪಿ ಯ ಕೈ ಬಿಟ್ಟಿಲ್ಲ. ಜೆ.ಡಿ.ಎಸ್ ಪಕ್ಷ ಸುಳ್ಯದ ಪರಿಸರದಲ್ಲಿ ತಲೆ ಎತ್ತಲೂ ಸಾಧ್ಯವಾಗದೆ ಇರುವುದರಿಂದ ಬಿ.ಜೆ.ಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಫರ್ಧೆ ಏರ್ಪಟ್ಟಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ ರವರಿಗೆ 25,000 ಮತಗಳ ಮುನ್ನಡೆ ದೊರಕಿಸಿಕೊಟ್ಟ ಸುಳ್ಯ ಕಾಂಗ್ರೆಸ್ ನಾಯಕರ ಪಾಲಿಗೆ ಬಿಸಿತುಪ್ಪವಾಗಿದೆ. ಯುವ ಮತದಾರರಂತೂ ಬಿ.ಜೆ.ಪಿಯತ್ತ ದಾಪುಗಾಲು ಇಡುತ್ತಿದ್ದಾರೆ . ಸುಳ್ಯದ ಈ ವಿಜಯಗಳಿಗೆ ಬಿ.ಜೆ.ಪಿ ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಾತ್ರ ಬಹಳವಿದೆ. ಸಂಘದ ಶಾಖೆಗಳ ಮೂಲಕ ಇಂದಿಗೂ ಯುವಜನರಲ್ಲಿ ರಾಷ್ಟ್ರಭಕ್ತಿ ಮೂಡಿಸುತ್ತಿದೆ. ಅಂತೆಯೇ ಅಂದಿನ ಕಾಲದಲ್ಲಿ ಜನಸಂಘವಾಗಿದ್ದ ಬಿ.ಜೆ.ಪಿ ಯನ್ನು ಕಟ್ಟಿ ಬೆಳೆಸಿದ ಹಿರಿಯರಿದ್ದಾರೆ.
ಯಾವ ಟಿಪ್ಪು ಜಯಂತಿಯ ಕಾರಣಕ್ಕೆ ಕೊಡಗಿನಲ್ಲಿ ಮೊನ್ನೆ ಬಿ.ಜೆ.ಪಿ ಗೆ ಜನ ಮತ ಕೊಟ್ಟರೋ, ಅದರ ಪ್ರಭಾವ ಸುಳ್ಯದ ಮೇಲಾಗಿದೆ. ಏಕೆಂದರೆ ಒಂದು ಕಾಲದಲ್ಲಿ ಟಿಪ್ಪು ಕೂಡ ಸುಳ್ಯದ ಮುಖಾಂತರ ದಂಡಯಾತ್ರೆ ಮಾಡಿದವನೇ. ತನ್ನ ನೆತ್ತಿ ಮೇಲಿರುವ ಕೊಡಗಿನಂತೆ ಎಲ್ಲ ಕಡೆ ಬಿ.ಜೆ.ಪಿ ಸದಸ್ಯರನ್ನು ಹೊಂದಿರುವ ಸುಳ್ಯ ಕಾಂಗ್ರೆಸ್ ಮುಕ್ತವಾಗುವತ್ತ ಹೊರಟಿದೆ. ಎಂದೋ ನಡೆಯುವ ಬಂದ್ ಗಳನ್ನೂ ಗಲಭೆಯೇನೋ ಎಂಬಂತೆ ಬಿಂಬಿಸುವವರ ಮದ್ಯೆ , ಬಿ.ಜೆ.ಪಿ ಕೊಮುವಾದಿಯಂತೆ , ಜಾತಿವಾದಿಯಂತೆ ಎನ್ನುವ ಅಂತೆ ಕಂತೆಗಳ ನಡುವೆ ಸುಳ್ಯ ನಿಶ್ಚಿಂತೆಯಾಗಿದೆ.
ನಮ್ಮ ಸುಳ್ಯದಲ್ಲಿ ಬಿಜೆಪಿಯಿಂದ ಕಲ್ಲಿನ ಕಂಬ ಓಟಿಗೆ ನಿಂತರೂ ಗೆಲ್ಲುತ್ತದೆ!