ಗುಬ್ಬಣ್ಣ ಇನ್ ‘ಎನ್ನಾರೈ ರಿಟರ್ನ್ & ಸ್ಮಾರ್ಟ್ ಸಿಟಿ’! (ಲಘು ಹರಟೆ)
– ನಾಗೇಶ ಮೈಸೂರು
ಗುಬ್ಬಣ್ಣ ಅವತ್ಯಾಕೋ ತುಂಬಾ ‘ಖರಾಬ್ ಅಂಡ್ ಗರಂ’ ಮೂಡಿನಲ್ಲಿ ಮರಿ ಹಾಕಿದ ಬೆಕ್ಕಿನ ತರ ಬೀಟ್ ಹೊಡಿತಿದ್ದ ಲಿಟಲ್ ಇಂಡಿಯಾ ಒಳಗಿರೋ ಕರ್ಬಾವ್ ಸ್ಟ್ರೀಟಲ್ಲಿ.. ಅದೂ ಬೆಳ್ಳಂಬೆಳಿಗ್ಗೆ ಯಾರೂ ಓಡಾಡದೆ, ಬರಿ ಪಾರಿವಾಳಗಳು ಮಾತ್ರ ಅಕ್ಕಿಕಾಳು ಹೆಕ್ಕೋ ಹೊತ್ನಲ್ಲಿ..
ಈ ‘ಬೀದಿನಾಮ’ಗಳು ಎಲ್ಲೂ ಕೇಳಿದ ಹಾಗಿಲ್ಲವಲ್ಲ ಅಂತ ಅನ್ಸಿದ್ರೆ ಅದರಲ್ಲೇನು ವಿಶೇಷ ಇಲ್ಲ ಬಿಡಿ – ಯಾಕೆಂದ್ರೆ ಗುಬ್ಬಣ್ಣನ ಠಿಕಾಣೆ ಇರೋದೇ ಸಿಂಗಪುರ ಅನ್ನೋ ಪುಟ್ಟ ‘ರೆಡ್ ಡಾಟ್ನಲ್ಲಿ’. ಸಿಂಗಪುರವೇ ರೆಡ್ ಡಾಟ್ ಆದ ಮೇಲೆ ಇನ್ನು ಅದರಲ್ಲಿರೋ ‘ಲಿಟಲ್ ಇಂಡಿಯಾ’ ಅನ್ನೋ ಮೈಕ್ರೋ ಡಾಟ್ ಕೇಳಬೇಕೆ ? ಸಿಂಗಪುರ ಮ್ಯಾಪಲ್ಲೇ ಲೆನ್ಸ್ ಹಾಕ್ಕೊಂಡು ಹುಡುಕಬೇಕು ಅನ್ನೋ ಹಾಗಿರುತ್ತೆ. ಇನ್ನು ಅದರೊಳಗಿರೊ ‘ಕರ್ಬಾವ್ ಸ್ಟ್ರೀಟ್’ ಅನ್ನೋ ‘ನ್ಯಾನೋ ಡಾಟ್’ ಬಗ್ಗೆ ಹೇಳೊ ಹಾಗೆ ಇಲ್ಲ ಅಂತ ಮೂಗು ಮುರಿಬೇಡಿ. ಸುತ್ತಮುತ್ತಲ ಜಾಗದ ಸಿಂಗಪುರದಲ್ಲಿ ‘ಕಲ್ಚರಲ್ ಹೆರಿಟೇಜ್ ಸೈಟ್’ ಅಂತ ಗುರ್ತಿಸಿರೋದ್ರಿಂದ ಇದೊಂದು ಇಂಪಾರ್ಟೆಂಟ್ ಟೂರಿಸ್ಟ್ ಸ್ಪಾಟ್.. ಅದರ ಪಕ್ಕದಲ್ಲೇ ಮನೆ ಇರೋ ನನಗೆ ‘ರಿಯಲ್ ಎಸ್ಟೇಟ್’ ಪಾಯಿಂಟಿನಿಂದ ಈ ‘ನ್ಯಾನೋ ಡಾಟ್’ ಇನ್ನೂ ತುಂಬಾ ಇಂಪಾರ್ಟೆಂಟು..!
ಅದೇನೇ ಕಲ್ಚರ್ ಹೆರಿಟೇಜ್ ಸೈಟ್ ಇದ್ದರೂ, ಬೆಳಂಬೆಳಗ್ಗೆ ಆರಕ್ಕೆಲ್ಲ ವಲ್ಚರ್ ತರ ಹಾರ್ಕೊಂಡ್ ಬಂದು ‘ಅರ್ಜೆಂಟು ಬೇಗ ಕೇಳಗ್ಬನ್ನಿ ಸಾರ್’ ಅಂತ ಮೊಬೈಲಲ್ಲಿ ಅವಾಜ್ ಹಾಕಿ ವಾರದ ಕೊನೆಯ ಬೆಳಗಿನ ಸಕ್ಕರೆ ನಿದ್ದೆಗೂ ಕಲ್ಲು ಹಾಕಿದ್ದ ಗುಬ್ಬಣ್ಣನಿಗೆ ಮನಸಾರೆ ‘ಸಹಸ್ರನಾಮ’ ಹಾಕಿ ಶಪಿಸುತ್ತಲೇ ನಿದ್ದೆಗಣ್ಣಲ್ಲಿ ಕಣ್ಣಿಜ್ಜಿಕೊಳ್ಳುತ್ತ ಎದ್ದು ಬಂದಿದ್ದೆ. ದೂರದಿಂದಲೇ ಮೂಡು ಗೆಸ್ ಮಾಡಿದ್ದ ಗುಬ್ಬಣ್ಣ ನಾನು ಬಾಯಿ ಬಿಡೋ ಮೊದಲೇ ಕಣ್ಮುಂದೆ ಬಿಸಿಬಿಸಿ ‘ತೇತಾರೈ’ ಪ್ಯಾಕೆಟನ್ನು ತಂದು – ‘ ಮೊದಲು ಟೀ, ಆಮೇಲೆ ಮಾತು’ ಅನ್ನುತ್ತ ಏನಕ್ಕೋ ತೆರೆದಿದ್ದ ಬಾಯನ್ನು ಮುಚ್ಚಿಸಿ, ಇನ್ನೇನಕ್ಕೋ ತೆರೆಯುವಂತೆ ಮಾಡಿಬಿಟ್ಟ.. ಅವನ ಹುನ್ನಾರ ಅರ್ಥವಾದರೂ “ತೇತಾರೈ” ನನ್ ವೀಕ್ನೆಸ್ ಆದ ಕಾರಣ ನಾನೂ ನನ್ನ ‘ರೇಗಿಂಗ್’ ಪ್ರೋಗ್ರಾಮ್ ಅನ್ನು ತಾತ್ಕಾಲಿಕವಾಗಿ ಮುಂದೂಡಿ ಬಿಸಿಬಿಸಿ ಟೀ ಚಪ್ಪರಿಸತೊಡಗಿದೆ..
ಕುಡಿಯುತ್ತಾ ಇಬ್ಬರೂ ಹಾಗೆ ತೇಕಾ ಮಾರ್ಕೆಟ್ಟಿನ ಕಡೆ ನಡೆದು, ಆನಂದ ಭವನ್ ಎದುರಿನ ಕಲ್ಲು ಬೆಂಚಿನ ಮೇಲೆ ಕೂರುವಷ್ಟು ಹೊತ್ತಿಗೆ ನನ್ನ ಸಿಟ್ಟಿನ ಉತ್ಸಾಹ ಅರ್ಧ ಮಾಯಾವಾಗಿದ್ದರು, ಮಿಕ್ಕರ್ಧದಲ್ಲೇ ಭುಸುಗುಟ್ಟುತ್ತ ಕೇಳಿದೆ..
” ಅಲ್ವೋ ದ್ರ್ಯಾಬೆ, ಮೊದಲೇ ಬಿಜಿನೆಸ್ ಟ್ರಿಪ್ಪಲ್ಲಿ ಸತ್ತು ಸುಣ್ಣವಾಗಿ ಮಧ್ಯರಾತ್ರೀಲಿ ಮನೆ ಸೇರ್ಕೊಂಡಿದೀನಿ.. ಶನಿವಾರ ಇವತ್ತು ಬೆಳಿಗ್ಗೆ ಲೇಟಾಗೆದ್ರೂ ನಡೆಯುತ್ತೆ ಅನ್ಕೊಂಡು ಬೆಳಗಿನ ಜಾವದ ಹೊತ್ತಿಗೆ ನಿದ್ದೆ ಬಂತೋ ಇಲ್ವೋ ಅಂತ ಕಣ್ಮುಚ್ಚೋ ಅಷ್ಟರಲ್ಲಿ ದರಿದ್ರ ಫೋನ್ಮಾಡಿ ಎಬ್ಬಿಸಿದ್ದೀಯಲ್ಲ್ಲಾ? ಏನಂತ ರಾಜಕಾರ್ಯ ಇತ್ತು ?”
“ಅಯ್ಯೋ ಅರ್ಜೆಂಟಂದ್ರೆ ಅರ್ಜೆಂಟು ಸಾರ್.. ನೇಷನ್ಸ್ ಕಾಲ್ ಇಸ್ ಕಾಲಿಂಗ್… ನಾವು ಡಿಲೇನೆ ಮಾಡಂಗಿಲ್ಲ ..ಮಾಡಿದ್ರೆ ನಾವು ಎಚ್ಚೆತ್ತು ಕಣ್ಬಿಡೋಕೆ ಮುಂಚೆ ಆಪರ್ಚುನಿಟಿ ಬೇರೆಯವರ ಪಾಲಾಗ್ಬಿಡುತ್ತೆ.. ಅದಕ್ಕೆ ಬುಲಾಯ್ಸಿದೆ..” ಎಂದ.
ನಾನೆಲ್ಲೋ ಯಾವುದೋ ತೀರಾ ಎಮರ್ಜೆನ್ಸಿ ಕೇಸಾದ್ರು ಹಿಡ್ಕೊಂಡ್ಬಂದು ಎಬ್ಬಿಸಿರ್ತಾನೆ ಅಂದ್ಕೊಂಡಿದ್ರೆ, ಗುಬ್ಬಣ್ಣ ಯಾವುದೋ ಪ್ಯಾಟ್ರಿಯಾರ್ಟಿಕ್ ಸ್ಲೋಗನ್ ಜಪ ಮಾಡ್ತಾ ಇರೋದು ಕಂಡು ಮೈಯೆಲ್ಲಾ ಉರಿದೋಯ್ತು.
“ಗುಬ್ಬಣ್ಣಾ ಡೊಂಟ್ ಮೇಕ್ ಮಿ ಲೂಸ್ ಟೆಂಪರ್ .. ಮೊದಲೇ ನಿದ್ದೆಯಿಲ್ದೆ ಕಣ್ಣೆಲ್ಲ ಕೆಂಪಾಗಿದೆ.. ಈಗ ಸುಮ್ನೆ ಇಲ್ದೆ ಇರೋ ಸ್ಟೋರಿ ಮೇಕಿಂಗ್ ಶುರು ಮಾಡಿದ್ಯೋ ನಿನ್ನ ಮೇಡಿನ್ ಇಂಡಿಯ ಬಾಡಿ, ಮೇಡ್ ಇನ್ ಸಿಂಗಪುರ್ ಕ್ಯಾಸ್ಕೆಟ್ ಹುಡುಕ್ಕೊಂಡ್ ಹೋಗ್ಬೇಕಾಗುತ್ತೆ ನೋಡು..” ಅಂದೆ ಒಳಗಿದ್ದ ಕೋಪವನ್ನು ಆದಷ್ಟು ಗದರಿಕೆಯ ದನಿಯಲ್ಲಿಯೆ ವ್ಯಕ್ತಪಡಿಸುತ್ತ..
ಇದಕ್ಕೆಲ್ಲ ಬಗ್ಗೋ ಆಸಾಮಿಯೇ ಗುಬ್ಬಣ್ಣ ? ದಿನಕ್ಕೆ ನನ್ನಂಥಾ ಹತ್ತು ಕುರಿ ಮೇಯಿಸೊ ಪೈಕಿ…
” ಸಾರ್.. ಇದು ನನ್ನ ನಿಮ್ಮ ಮಕ್ಕಳ ಭವಿಷ್ಯದ ಪ್ರಶ್ನೆ.. ಇಫ್ ದಟ್ ಇಸ್ ಅಟ್ ಸ್ಟೇಕ್ , ಯೂ ಸ್ಟಿಲ್ ಸೇ ದ ಸಂ ಥಿಂಗ್ ?” ಎಂದು ರಾಮಬಾಣ ಹೂಡಿಬಿಟ್ಟ.. !
ಬೇರೆ ಯಾವ ಟ್ರಿಕ್ಕು ವರ್ಕ್ ಆಗದೆ ಇರ್ಬೋದು. ಆದರೆ ‘ಮಕ್ಕಳ ಫ್ಯೂಚರ್ ‘ ಅಂತ ಅಂದು ನೋಡಿ ? ಎಲ್ಲಾ ಅಪ್ಪ ಅಮ್ಮಂದಿರೂ ಗಪ್ಚಿಪ್ ! ಅದರಲ್ಲೂ ಇಂಡಿಯಾ ಪೇರೆಂಟ್ಸ್…? ಮಾತಾಡೋ ಹಾಗೆ ಇಲ್ಲಾ. ನಾನು ಇರೋದು ಸಿಂಗಪುರ ಆದರು ಒಳಗೆಲ್ಲ ಅಪ್ಪಟ ಭಾರತಿಯ, ಅಪ್ಪಟ ಕನ್ನಡಿಗ.. ಅಂದ್ಮೇಲೆ ಹೇಳೋದೇನು ಬಂತು ? ಫ್ರಿಡ್ಜಲ್ಲಿಟ್ಟ ಸ್ಯಾಂಡ್ವಿಚ್ಚಿನ ಹಾಗೆ ಮೆತ್ತಗಾದ ದನಿಯಲ್ಲಿ ಕೇಳಿದೆ..
” ಹಾಗಲ್ವೋ ಗುಬ್ಬಣ್ಣ.. ಸಿರಿಯಸ್ ಆಗಿ ವಿಷ್ಯ ಏನು ಅಂತ ಹೇಳಬೇಕಲ್ವಾ ? ಒಂದು ಗಂಟೆ ಲೇಟಾಗಿ ಮಾತಾಡಿದ್ರೆ ಗಂಟೇನು ಹೋಗ್ತಾ ಇರ್ಲಿಲ್ಲಾ ಅಲ್ವಾ” ಎಂದೆ..
” ಗಂಟೆಯಲ್ಲ ಗಳಿಗೇನೂ ಇರೋಕಾಗಲ್ಲ ಸಾರ್..ಅಷ್ಟೊಂದು ಕ್ರಿಟಿಕಲ್.. ನೀವಾದ್ರೆ ವಾಸಿ ಇಲ್ಲೇ ಇದ್ದು ಈಗ ಎದ್ದು ಬರ್ತಾ ಇದೀರಾ.. ನಾ ನೋಡಿ ಇಲ್ಲಿಂದ ಒಂದು ಗಂಟೆ ದೂರದಲ್ಲಿರೋನು.. ನಾಕೂವರೆಗೆ ಎದ್ದು ಐದು ಗಂಟೆ ಟ್ರೈನ್ ಹಿಡಿದು ಬಂದಿದೀನಿ..”
“ಓಕೆ ಓಕೆ ಸಾರಿ ಗುಬಣ್ಣ ವಿಷ್ಯ ಏನೂ ಅಂತ ಹೇಳು..” ಈಗ ಪುಸಲಾಯಿಸೋದು ನನ್ನ ಬಾರಿ..
“ಸಾರ್.. ಈಗ ನಾವೆಲ್ಲಾ ಎನ್ನಾರೈಗಳೆಲ್ಲ ಒಂದು ಅರ್ಜೆಂಟ್ ನಿರ್ಧಾರ ತೊಗೊಂಡ್ಬಿಡ್ಬೇಕು… ನಮ್ ಮಕ್ಕಳ ಫ್ಯೂಚರ್ಗೋಸ್ಕರ..”
” ಏನು ನಿರ್ಧಾರ ?”
” ಕನಿಷ್ಠ ಫಿಫ್ಟಿ ಪರ್ಸೆಂಟಷ್ಟು ಜನ ಏನಾದ್ರೂ ಸರಿ ವಾಪಸ್ ಇಂಡೀಯಾಗೆ ವಾಪಸ್ ಹೋಗಿ ಸೆಟಲ್ ಆಗ್ಬಿಡ್ಬೇಕು..ಅದೂ ದೊಡ್ಡ ಸಿಟಿಗಳಲ್ಲಲ್ಲ..”
” ಯಾಕೋ ?”
” ಅದಕ್ಕೆ ಸಾರ್.. ಜನರಲ್ ನಾಲೆಡ್ಜು ಇರ್ಬೇಕು ಅನ್ನದು.. ನಿಮಗೆ ನಿಮ್ಮ ಏರಿಯಾದ ಜಿಯಾಗ್ರಫಿ ನಾಲೆಡ್ಜೇ ಇರಲ್ಲ , ಇನ್ನು ಜೆನರಲ್ ನಾಲೆಡ್ಜು ಎಲ್ಲಿಂದ ಬರಬೇಕು ಬಿಡಿ.. ಹೋಗ್ಲಿ ಈಚೆಗೆ ನಮ್ ಸೆಂಟ್ರಲ್ ಗವರ್ಮೆಂಟಿಂದ ಏನೇನಲ್ಲ ಸ್ಕೀಮು ಅನೌನ್ಸ್ ಮಾಡಿದಾರೆಂತಾದ್ರು ಗೊತ್ತಾ ?”
” ಅದೆಲ್ಲಿ ಎಲ್ಲಾ ಗೊತ್ತಿರುತ್ತೋ..? ಅಲ್ಲಿ ಇಲ್ಲಿ ಓಡಾಡೊ ಸುದ್ದಿಯಿಂದ ಕರ್ನಾಟಕದಂತ ಕಡೆ ‘ಕತ್ತಲೆ ಭಾಗ್ಯ’ , ‘ಬಡ್ಜೆಟ್ಟಿಲ್ಲದೆ ಗ್ಯಾಡ್ಜೆಟ್ಟು’ , ‘ಅವಾರ್ಡೆ ರಿವಾರ್ಡು’, ‘ ಲದ್ದಿಯೇ ಸಿದ್ದಿ’ ಅಂತ ಅನ್ನೋ ವಿನೂತನವಾದ, ಇನ್ನೋವೇಟಿವ್ ಐಡಿಯಾ ಮಾಡ್ತಿರೋದು ಗೊತ್ತಾಯ್ತು.. ಅದು ಬಿಟ್ರೆ ಸೆಂಟ್ರಲ್ ‘ಸ್ವಚ್ಚ ಭಾರತ’, ‘ಸ್ಕಿಲ್ ಇಂಡಿಯ’ ಅಂತೇನೊ ಮಾಡ್ತಾ ಇದಾರೆ ಅಂತ ಕೇಳಿದೆ..”
” ಸದ್ಯ ಸ್ಟೇಟ್ದಾದ್ರು ಅಷ್ಟಿಷ್ಟು ತಿಳ್ಕೊಂಡಿದೀರಲ್ಲ ? ಮೊನ್ನೆ ಬಡ್ಜೆಟ್ಟಲ್ಲಿ ‘ಟಾರ್ಚಿನ ಭಾಗ್ಯ’ ಅಂತಲು ಒಂದು ಶುರು ಮಾಡಿ ಮನೆಗೊಂದು ಟಾರ್ಚು ಕೊಡಬೇಕಂತ ಪ್ಲಾನ್ ಮಾಡಿದಾರಂತೆ… ಟಾರ್ಚ್ ಕಂಪನಿ, ಬ್ಯಾಟರಿ ಕಂಪನಿ ಇಬ್ಬರೂ ಬದುಕಿಕೊಂಡುಬಿಟ್ರು ಬಿಡಿ.. ನಾ ಹೇಳ್ತಾ ಇರೋದು ಅದಲ್ಲ.. ಸೆಂಟ್ರಲ್ ಡೆವಲಪ್ಮೆಂಟ್ ಸ್ಕೀಮುಗಳು.. ‘ಸ್ಕಿಲ್ ಇಂಡಿಯಾ’, ‘ಮೇಕ್ ಇನ್ ಇಂಡಿಯ’, ‘ಹಂಡ್ರೆಡ್ ಸ್ಮಾರ್ಟ್ ಸಿಟೀಸ್’ ಅಂತೆಲ್ಲಾ ಅನೌನ್ಸ್ ಮಾಡಿದಾರೆ ತರ ತರಾವರಿ ಸ್ಕೀಮುಗಳು..”
“ಹೂ ಗುಬ್ಬಣ್ಣ ಕೇಳಿದ್ದೆ ಕೇಳಿದ್ದೆ…. ಆದರೆ ಎಲ್ಲಾ ಓಕೆ, ಎನ್ನಾರೈ ವಾಪಸ್ ಯಾಕೆ ? “
” ಅಯ್ಯೋ ಎಲ್ಲಾ ಈ ಸ್ಮಾರ್ಟು ಸಿಟಿ ದೆಸೆಯಿಂದ ಸಾರ್…”
ನನಗೆ ಅರ್ಥವಾಗಲಿಲ್ಲ.. ಸ್ಮಾರ್ಟ್ ಸಿಟಿ ಆದ್ರೆ ಕರ್ನಾಟಕದಲ್ಲಿ ಒಂದು ಬೆಂಗಳೂರು ಬದಲು ಹತ್ತು ಬೆಂಗಳೂರಾಗುತ್ತಲ್ವಾ ? ಒಳ್ಳೇದೆ ತಾನೇ ?
” ಗುಬ್ಬಣ್ಣ..ಬಿಡಿಸಿ ಹೇಳೊ…”
” ಅಯ್ಯೋ ನಿಮ್ಮದು ಯಾವಾಗಲೂ ಟ್ಯೂಬ್ ಲೈಟೇ.. ಸಿಂಪಲ್ ಆಗಿ ಹೇಳ್ತೀನಿ ಕೇಳಿ.. ಇವತ್ತು ನೀವು ಬೆಂಗಳೂರಿಗೆ ಹೋದ್ರೆ ಏನನ್ಸುತ್ತೆ ?”
” ಅನ್ಸೋದೇನು ? ಯಾವುದೋ ಬೇರೆ ರಾಜ್ಯಕ್ಕೋ , ದೇಶಕ್ಕೆ ಹೋದ ಹಾಗೆ ಫೀಲು ಆಗುತ್ತೆ… ನಮ್ ಬೆಂಗಳೂರೇನಾ ಇದು ಅನ್ನೋ ಹಾಗೆ.. ಕನ್ನಡ ಬಿಡು, ಆ ನೂರಾರು ಮಲ್ಟಿ ನ್ಯಾಷನಲ್ ಕಂಪನಿಗಳು , ಟ್ರಾಫಿಕ್ಕು, ಅಲ್ಲಿನ ಲಿವಿಂಗ್ ಕಾಸ್ಟು , ರೆಸ್ಟೋರೆಂಟು ರೇಟುಗಳು – ಒಂದೇ , ಎರಡೇ ? ಭಗವಂತಾ..! ಪ್ರತಿ ಸಾರಿ ಹೋದಾಗ್ಲೂ ಎಷ್ಟೊತ್ತಿಗೆ ಅಲ್ಲಿಂದ ಹೊರಟು ನಮ್ಮೂರಿಗೆ ಹೋಗಿ ತಲುಪ್ತೀನೊ ಅನ್ನೋ ಹಾಗೆ ಆಗ್ಬಿಡುತ್ತೆ..”
” ನೋಡಿದ್ರಾ ಹೇಗೆ ಗಿಣಿ ಬಿಡೋ ಹಾಗೆ ಬಾಯ್ಬಿಟ್ರಿ ? ಅದು ನಮ್ಮೂರೇನಾ ಅನ್ನೋ ಅನುಮಾನ ಬನ್ಬಿಡುತ್ತೆ ಅಲ್ವಾ ? ಸಾಲದ್ದಕೆ ಅಷ್ಟೊಂದು ಕಂಪನಿ ಇಂಡಸ್ಟ್ರಿಗಳಿದ್ರೂ, ಅದು ಅರ್ಧಕ್ಕರ್ಧ ಫಾರೀನ್ ಕಂಪನಿ ಹೊಟ್ಟೆ ತುಂಬಿಸ್ತಾ ಇರೋದು.. ಅಲ್ಲಿ ಠಾಕುಠೀಕು ಕೆಲಸ, ಕೇಳಿದಷ್ಟು ಸಂಬಳ ಸಿಗುತ್ತೆ ಅನ್ನೋದು ಬಿಟ್ರೆ ಬಿಗ್ ಶೇರು ದೇಶದಿಂದಾಚೆಗೇನೆ.. ಅದೆಲ್ಲ ಯಾಕೆ ಆಗಿದ್ದು ಗೊತ್ತಾ?”
” ಯಾಕೆ ?”
” ಯಾವುದೇ ಕಂಟ್ರೋಲ್ ಇಡದೆ ಯಾರು ಬಂದು ಏನಾದ್ರೂ ಮಾಡ್ಕೊಂಡ್ ಹೋಗ್ಲಿ ಅಂತ ಸುಮ್ನೆ ಇದ್ಬಿಟ್ಟಿದ್ದುಕ್ಕೆ..!”
“ಅದೇನೊ ನಿಜವೇ ಅನ್ನು…” ನಾನು ಹೌದೆನ್ನುವ ಹಾಗೆ ತಲೆಯಾಡಿಸಿದೆ..
“ಈಗಲೂ ಹಾಗೆ ಕೂತ್ರೆ ಈಗ ಮಾಡಕೆ ಹೊರಟಿದಾರಲ್ಲ ಸ್ಮಾರ್ಟ್ ಸಿಟಿಗಳು, ಅಲ್ಲೂ ಏನಾಗುತ್ತೆ ಗೊತ್ತಾ…? ”
ಆಗ ನನಗೆ ಫಕ್ಕನೆ ಹೊಳೆದಿತ್ತು ಗುಬ್ಬಣ್ಣನ ಲಾಜಿಕ್ !
” ಗೊತ್ತಾಯ್ತು ಗುಬ್ಬಣ್ಣ… ಈಗ ಬೆಂಗಳೂರಿಗೆ ಏನಾಗಿದೆಯೋ ಅದೇ ಈ ಸ್ಮಾರ್ಟ್ ಸಿಟಿಗಳಿಗೂ ಆಗೋಗುತ್ತೆ ಒಂದಷ್ಟು ವರ್ಷಾ ಕಳದ್ರೆ.. ಅಯ್ಯೋ ದೇವ್ರೇ! ಈಗ ಬೆಂಗಳೂರು ಬೇಡ ನಮ್ಮೂರು ಅಂತ ಹೇಳ್ಕೊಂಡು ಈ ಊರುಗಳಿಗೆ ಹೋಗಿ ಉಸ್ಸಪ್ಪಾ ಅಂತೀವಿ.. ಇನ್ನು ಇವು ಸ್ಮಾರ್ಟ್ ಸಿಟಿಗಳಂತಾ ಆಗ್ಬಿಟ್ರೆ ಅವೂ ಬೆಂಗಳೂರು ತರಾನೆ ಗಬ್ಬೆದ್ದು ಅಲ್ಲಿಗೂ ಹೋಗದ ಹಾಗೆ ಮಾಡ್ಬಿಡುತ್ತೆ ಅಂತೀಯಾ?” ಎಂದೆ ಗಾಬರಿಯ ದನಿಯಲ್ಲಿ..
” ಆಗೋದೇನು ಬಂತು ? ಜನ ನೋಡ್ತಾ ನಿಂತಿದ್ರೆ ಅದೇ ಆಗೋದು.. ಅಲ್ಲಂತೂ ಯಾರು ಅದನ್ನೆಲ್ಲ ಯೋಚಿಸೋಕು ಹೋಗಲ್ಲ.. ಕೆಲಸ ಬರುತ್ತೆ, ಇಂಡಸ್ಟ್ರೀಸ್ ಬರುತ್ತೆ, ಎಲ್ಲಾ ಸೌಕರ್ಯ ಬರುತ್ತೆ ಅಂತ ಖುಷಿಯಾಗಿ ಕೂತ್ಬಿಡ್ತಾರೆ.. ಆಗ ಇವೇ ಕಂಪನಿಗಳು, ಇದೇ ಕಲ್ಚರು, ಇದೇ ವಾತಾವರಣ ಅಲ್ಲಿಗೂ ಕಾಲಿಡ್ತಾ ನೋಡ್ನೋಡೊದ್ರಲ್ಲಿ ಅವನ್ನು ಬೆಂಗಳೂರಿನ ಹಾಗೆ ಮಾಡಿಬಿಡ್ತವೆ – ಅದೂ ರಾಕೆಟ್ ಸ್ಪೀಡಲ್ಲಿ.. ಅಲ್ಲಿಗೆ ನಮ್ ಹಳ್ಳಿ ಹೈಕಳೆ ಹೋಗಿ ಕೆಲಸ, ಗಿಲಸ ಅಂತ ಸೇರ್ಕೊಂಡ್ ಅದಕ್ಕೆ ಹೆಲ್ಪ್ ಮಾಡ್ತಾರೆ, ಅದೇ ಪೀಜಾ ಹಟ್, ಮೆಕ್ಡಿಗಳಲ್ಲಿ ಕೆಲಸ ಮಾಡ್ತಾ…! ನಿಮಗೆ ಈಗ ಹೋಗೋಕೆ ನಿಮ್ಮೂರಾದ್ರು ಇದೆ, ನಿಮ್ಮ ಮಕ್ಕಳ ಜೆನರೇಷನ್ನಿಗೆ ಅದೂ ಮಾಯಾ… ಬರಿ ಮಿನಿ ವರ್ಶನ್ ಆಫ್ ಬೆಂಗಳೂರೆ ಗಟ್ಟಿ..!”
” ಸರಿ ಗುಬ್ಬಣ್ಣ.. ಐ ಅಗ್ರೀ ಪ್ರಾಬ್ಲಮ್ ಇಸ್ ಸೀರಿಯಸ್… ಆದ್ರೆ ಸಲ್ಯೂಶನ್ ಏನು ? ನಾವ್ಯಾಕೆ ವಾಪಸ್ ಹೋಗ್ಬೇಕು?”
” ಅಲ್ಲೇ ಇರದು ಸಾರ್ ಪಾಯಿಂಟೂ… ನಾವುಗಳೆಲ್ಲ ಸುಮ್ನೆ ಹೋಗದಲ್ಲ ..ಹೇಗೂ ಇಲ್ಲೆಲ್ಲಾ ಒಳ್ಳೆ ಎಕ್ಸ್ಪೀರಿಯೆನ್ಸ್ ಆಗಿದೆ.. ಎಂಟರ್ಪ್ರೈನರ್ಶಿಪ್ ಕ್ವಾಲಿಟಿ ಇರೋ ಒಂದಷ್ಟು ಜನ ನೇರ ಆ ನಮ್ ಸ್ಮಾರ್ಟ್ ಸಿಟಿ ಊರುಗಳಿಗೋಗಿ, ನಮ್ ಗವರ್ಮೆಂಟ್ ಕೊಡ್ತೀರೊ ಸಹಾಯ, ಇಟ್ಟಿರೋ ಸ್ಕೀಮು ಎಲ್ಲಾ ಅಡ್ವಾಂಟೇಜ್ ತೊಗೊಂಡು ನಾವೇ ಇಂಡಸ್ಟ್ರಿಗಳನ್ನ ಶುರು ಮಾಡ್ಬೇಕು.. ಎಲ್ಲಾ ಸೆಗ್ಮೆಂಟಲ್ಲು ನಿಧಾನವಾಗಿ, ಸಣ್ಣದಾಗಿಯಾದರು ಸರಿ ಶುರು ಮಾಡಿ ಅಲ್ಲಿನ ಲ್ಯಾಂಡ್ಸ್ಕೇಪ್ ಅಡ್ಡದಾರಿ ಹಿಡಿಯದ ಹಾಗೆ ನೋಡ್ಕೊಬೇಕು.. ಬೇರೆ ದೊಡ್ಡ ಕಂಪನಿಗಳು ಬಂದ್ರು ಬ್ಯಾಲೆನ್ಸ್ ಮಾಡೋ ತರ ಪಾಲಿಸಿ ಮಾಡೋಕೆ ಇನ್ ಫ್ಲುಯೆನ್ಸ್ ಮಾಡ್ಬೇಕು.. ಹಾಗೆ ಮಾಡಿ ನಾವು ಫೌಂಡೇಶನ್ ಹಾಕಿದ್ರೆ ನಮ್ ಮಕ್ಕಳಿಗೆ ಅದನ್ನೇ ದೊಡ್ಡದು ಮಾಡಿ ಬೆಳೆಸೋಕೆ ದಾರಿ ತೋರಿಸ್ದಂಗೆ ಆಗುತ್ತೆ..”
” ಒಂದು ತರ ಚೈನಾದಲ್ಲಿ ಮಾಡಿ ಫಾರಿನ್ ಜೊತೆ ಲೋಕಲ್ ಇಂಡಸ್ಟ್ರೀನು ಬೆಳೆಸಿದ್ರಲ್ಲ ಹಾಗೆ… ಗುಬ್ಬಣ್ಣ, ನೀ ಹೇಳದೇನೊ ಕೇಳಕೆ ತುಂಬಾ ಚೆನ್ನಾಗಿದೆ ಆದರೆ ಒಂದು ಅನುಮಾನ..”
“ಏನೂ?”
“ಇದಕ್ಕೆ ಇಲ್ಲಿಂದ ಎನ್ನಾರೈಗಳೆ ಯಾಕೆ ಹೋಗ್ಬೇಕು? ಅಲ್ಲೇ ಲಕ್ಷಾಂತರ, ಕೋಟ್ಯಾಂತರ ಜನ ಇದಾರೆ.. ಅದರಲ್ಲೂ ಇರೋಬರೋ ಕಂಪನಿ ತುಂಬ ಐಟಿ ಜನಗಳೇ ಇದಾರೆ..ವರ್ಷಕ್ಕೆ ಲಕ್ಷಗಟ್ಲೆ ಇಂಜೀನಿಯರುಗಳು ಬರ್ತಾನೆ ಇರ್ತಾರೆ… ಅವರುಗಳೇ ಆಪರ್ಚುನಿಟಿ ತೊಗೊಂಡು ಮಾಡೋವಾಗ ನಮಗೆ ಛಾನ್ಸ್ ಎಲ್ಲಿ ಸಿಗುತ್ತೆ ?”
” ಅಯ್ಯೋ ಸಾರ್.. ಅಲ್ಲೇ ನೀವ್ ತಪ್ಪು ತಿಳ್ಕೊಂಡಿರೋದು… ಅವರೆಲ್ಲ ಪೂರಾ ಬ್ರೈನ್ ವಾಷಡ್ ಬೈ ಸಿಸ್ಟಂ ಸಾರ್.. ಕಂಪನಿಗಳಿಗೆ ಕೆಲಸ ಮಾಡೋಕೆ ಬೇಕಾದ ರಾ ಮೆಟೀರಿಯಲ್ ತರ ರೆಡಿ ಮಾಡ್ಬಿಟ್ಟಿರ್ತಾರೆ ಅವರನ್ನ , ಕಾಲೇಜಿಂದ್ಲೆ.. ಪುಸ್ತಕದ ಬದನೇಕಾಯಿ ತರ ಓದಿ ಓದಿ ರಿಟನ್ ಟೆಸ್ಟ್ , ಇಂಟರ್ವ್ಯೂ ಪಾಸ್ ಮಾಡೋದು, ಕೆಲಸ ಗಿಟ್ಟಿಸೋದು, ಆನ್ ಸೈಟ್ ಆಪರ್ಚುನಿಟಿ ನೋಡೋದು, ಸಂಬಳ ಕಮ್ಮಿ ಅನ್ನಿಸ್ತಾ ಇನ್ನೊಂದ್ ಕಡೆ ಜಂಪ್ ಮಾಡದು, ಪೀಜಾ, ಬರ್ಗರ, ವೀಕೆಂಡ್ ಮೂವಿ ಅಂತ ‘ಜುಂ’ ಅನ್ಕೊಂಡು ಓಡಾಡ್ಕೊಂಡಿರೊದು, ಲೋನಲ್ಲಿ ಬೇಗ ಕಾರು, ಫ್ಲಾಟು ತೊಗೊಂಡು ಸೆಟಲ್ ಆಗೋದು – ಈ ಲೈಫ್ ಸ್ಟೈಲಿಗೆ ಹುಡುಕೊ ಜನ ರಿಸ್ಕು ತೊಗೊಂಡ್ ಇಂಡಸ್ಟ್ರಿ ಮಾಡ್ತಾರ ? ನಿಮಗೆಲ್ಲೋ ಕನಸು.. ಅದೆಲ್ಲ ಮಾಡೋಕೆ ಪ್ಯಾಶನ್ ಇರ್ಬೇಕು ಸಾರ್..ತಪಸ್ ಮಾಡಿದ ಹಾಗೆ..”
“ಅದೇನೆ ಇದ್ರೂ ಮಾಡ್ಬೇಕು ಅನ್ನೋ ಮನಸಿರೋರು ಬೇಕಾದಷ್ಟು ಜನ ಇರ್ತಾರೆ ಗುಬ್ಬಣ್ಣ ..”
“ರಿಟನ್ ಟೆಸ್ಟು , ಇಂಟರ್ವ್ಯೂ ಪಾಸ್ಮಾಡಿದ್ರೆ ಸಿಗೋ ಸುಲಭದ ಕೆಲಸ ಬಿಟ್ಟು ಯಾರು ಹೋಗ್ತಾರೆ ಸಾರ್ ಈ ಡೈರೆಕ್ಷನ್ಲಿ ? ಹೋಗ್ತೀವಂದ್ರು ಬಿಡೋ ಪೆರೇಂಟ್ಸ್ ಎಷ್ಟು ಜನ ಇದಾರೆ ? ಎಷ್ಟೋ ಜನರಿಗೆ ಮಾಡೋ ಮನಸಿನವರಿದ್ರೂ ಪಾಪ ಮನೆ ಪರಿಸ್ಥಿತಿ ಬಿಟ್ಟಿರಲ್ಲ ಸಾರ್.. ನಮಗಾದ್ರೆ ಆ ಸ್ಟೇಜೆಲ್ಲಾ ದಾಟಿರೋದ್ರಿಂದ ರಿಸ್ಕ್ ತೊಗೋಬೋದು.. ನಮ್ಮ ಮುಂದಿನ ಜನರೇಶನನ್ನ ಮತ್ತೆ ಕರ್ಕೊಂಡು ಹೋಗಿ ರೂಟ್ಸಿಗೆ ತಲುಪಿಸೋಕು ಅವಕಾಶ ಆಗುತ್ತೆ.. ಆ ನಮ್ ಊರುಗಳನ್ನೆಲ್ಲ ಬೆಂಗಳೂರು ತರ ತಬ್ಬಲಿ ಆಗದೆ, ನಮ್ಮೂರಾಗೆ ಇದ್ದು, ಜತೆಗೆ ಪ್ರಗತಿ ಕೂಡ ಆಗೋ ಹಾಗೆ ನೋಡ್ಕೊಳಕೊಂದು ಛಾನ್ಸ್….. ನಾವು ಮಾಡಿ ಸಕ್ಸಸ್ ಆದ್ರೆ, ಆಗ ಅವರೂ ರಿಸ್ಕ್ ತೊಗೋತಾರೆ , ಜತೆಗೆ ಸಾಥ್ ಕೊಡ್ತಾರೆ.. ಆಗ ನಮ್ ದೇಶ ನಮ್ ದೇಶವಾಗಿಯೇ ಉಳಿಯುತ್ತೆ.. ಇನ್ ಸ್ಪೈಟ್ ಆಫ್ ಡೆವಲಪ್ಮೆಂಟ್..” ಅಂತ ದೊಡ್ಡ ಭಾಷಣವನ್ನೇ ಕೊಟ್ಟುಬಿಟ್ಟ ಗುಬ್ಬಣ್ಣ..!
ಅವನ ಭಾಷಣದ ಪ್ರಭಾವವೋ , ಸ್ಮಾರ್ಟ್ ಸಿಟಿಯ ನೆಪದಲ್ಲಿ ಹುಟ್ಟೂರಿಗೆ ಮರಳುವ ಪ್ರಲೋಭನೆಯೊ ಅಂತೂ ನನಗೂ ಏನೋ ಹುಮ್ಮಸ್ಸು ಬಂದು,
” ನಿಜ, ಅಲ್ಲಿಗೆ ಹೋಗೋದೇ ಸರಿ ನಡೀ ಗುಬ್ಬಣ್ಣ…ಒಂದು ಕೈ ನೋಡೇ ಬಿಡೋಣ… ‘ಜೈ ಡೆವಲಪ್ಮೆಂಟ್, ಜೈ ಸ್ಕಿಲ್ ಇಂಡಿಯಾ, ಜೈ ಸ್ಮಾರ್ಟ್ ಸಿಟಿ’ ”
ಅಂತ ನಾನೂ ಒಂದು ಸ್ಲೋಗನ್ ಕೂಗಿಕೊಂಡು ಇನ್ನೊಂದು ಟೀಗೆ ಆರ್ಡರು ಮಾಡಿದೆ, ಇನ್ನೇನು ಆ ಗಳಿಗೆಯೇ ಲಾಸ್ಟ್ ಟೀ ಕುಡಿದು ಇಂಡಿಯಾಗೆ ಹೊರಟುಬಿಡುವ ಅವಸರವಿದ್ದವನ ಹಾಗೆ..
“ಸಾರ್.. ನನಗೂ ಇನ್ನೊಂದ್ ತೇತಾರೈ…” ಎಂದವನೇ, ಗುಬ್ಬಣ್ಣ ಮೊಬೈಲಿನಲ್ಲಿ ಸುತ್ತಮುತ್ತಲ ಏರಿಯಾದಲ್ಲಿದ್ದ ಮಿಕ್ಕ ಸನ್ಮಿತ್ರರಿಗೆ ಕಾಲ್ ಮಾಡತೊಡಗಿದ – ಫಿಫ್ಟಿ ಪರ್ಸೆಂಟ್ ಕೋಟಾದ ಮಿಕ್ಕ ಭಾಗಕ್ಕೆ ಅರ್ಜಿ ತುಂಬಿಸಿಕೊಳ್ಳಲು !
ಚಿತ್ರಕೃಪೆ : – ಟೈಮ್ಸ್ ಆಫ್ ಇಂಡಿಯ & ಗೂಗಲ್
Trackbacks & Pingbacks