ಮಧುರೈ ಮೀನಾಕ್ಷಿ
– ರಂಜನ್ ಕೇಶವ
ಭಯ ಹುಟ್ಟಿಸುವಂತಹ ಬೃಹತ್ ಗಾತ್ರದ ಕಂಬಗಳು. ಅದರಲ್ಲಿ ದೊಡ್ಡ ದೊಡ್ಡ ಗಾತ್ರದ ಸಿಂಹದಂತಿರುವ ರಾಕ್ಷಸನ ಕೆತ್ತನೆಗಳು. ಇಂಥಹ ಸಾಲು ಸಾಲು ಕಂಬಗಳು ದಾರಿಯ ಇಕ್ಕೆಲಗಳಲ್ಲಿ ಇರುತ್ತವೆ. ಮೊದಲಸಲ ನೋಡುವವರಿಗೆ ಇಲ್ಲಿನ ಭವ್ಯ ಕೆತ್ತನೆಗಳ ನೋಟವೇ ಒಮ್ಮೆ ದಿಗಿಲು ಹುಟ್ಟಿಸಬಹುದು. ಮೀನಾಕ್ಷಿ ಮಂದಿರಸಮೂಹಗಳು ಒಂದು ಬೃಹತ್ ಆವರಣದ ಮಧ್ಯೆಯಲ್ಲಿವೆ. ಇದಕ್ಕೆ ಉತ್ತರ, ದಕ್ಷಿಣ, ಪೂರ್ವ – ಪಶ್ಚಿಮ ಎಂಬಂತೆ ನಾಲ್ಕು ಪ್ರವೇಶದ್ವಾರಗಳು. ಒಳ ಪ್ರವೇಶಿಸುತ್ತಿದ್ದಂತೆ ಒಂದು ಚಕ್ರವ್ಯೂಹ ಪ್ರವೇಶಿಸಿದಂತೆ ಅನೇಕ ಮಾರ್ಗಗಳ ದರ್ಶನ. ಮಾರ್ಗಗಳ ಪರಿಚಯವಿಲ್ಲದೆ ಒಳ ಪ್ರವೇಶಿಸಿದರೆ ದಾರಿ ತಪ್ಪಿ ಒಳಗೊಳಗೆಯೇ ವ್ಯರ್ಥ ಸಮಯ ಕಳೆಯುವ ಸಾಧ್ಯತೆಯೇ ಹೆಚ್ಚು.
ಹದಿನಾಲ್ಕು ಪ್ರವೇಶ ಗೋಪುರಗಳು. ಅದರಲ್ಲಿ ಅತಿ ಎತ್ತರದ್ದು ದಕ್ಷಿಣದ ಐವತ್ತೆರಡು ಮೀಟರ್ ಎತ್ತರದ್ದು. ಪ್ರತೀ ಗೋಪುರದಲ್ಲಿ ಹಂತ ಹಂತವಾಗಿ ಸ್ಥಾಪಿಸಲ್ಪಟ್ಟ ಶಿಲ್ಪಕಲೆಗಳ ರಾಶಿ. ಇಡೀ ಆವರಣದೊಳಗೆ ಒಟ್ಟು ಮೂವತ್ಮೂರು ಸಾವಿರ ಕಲಾಕೃತಿಗಳಿವೆಯೆಂದು ಅಂದಾಜು. ಶಿಲ್ಪ ಶಾಸ್ತ್ರದನುಸಾರವಾಗಿ ಈ ಮಂದಿರಗಳ ಸಮೂಹ ನಿರ್ಮಾಣ ಮಾಡಿದ್ದು ಮಧುರೈನ ಕೇಂದ್ರ ಕಮಲದಂತೆ ಮಧ್ಯೆ ಭಾಗದಲ್ಲಿದ್ದು ಸುತ್ತಲೂ ಹಂತ ಹಂತವಾಗಿ ನಗರ ನಿರ್ಮಾಣಮಾಡಲಾಗಿತ್ತು. ಇದರ ವಿವರಣೆಯನ್ನು ಬಣ್ಣಿಸುತ್ತಾ ಹೋದರೆ ಕೈ ಸೋಲುವುದು ನಿಶ್ಚಿತ. ಸಾಮಾನ್ಯರಾದವರು ಮೂರುವರೆ ಸಾವಿರ ವರ್ಷಗಳ ಇತಿಹಾಸವನ್ನು ಹೊತ್ತಿರುವ ಈ ದೇವಾಲಯಗಳ ಮೇಲೆ ಅಭಿಮಾನವೊಂದಿಟ್ಟರಷ್ಟೇ ಸಾಕು. ಇಂಥಹ ಭವ್ಯ ಕಲಾಕೃತಿಗಳನ್ನು ಅಭ್ಯಸಿಸಲು ವಿದೇಶಗಳಿಂದಲೂ ಅನೇಕರು ಬರುತ್ತಾರೆ.
ಇಂಥಹ ಭವ್ಯ ಕಟ್ಟಡಗಳು ಭಾರತದಾಚಿನ ಜಗತ್ತು ಕಣ್ ಬಿಡುವ ಮುಂಚೆಯೇ ಮೂರುವರೆ ಸಾವಿರ ವರ್ಷಗಳ ಹಿಂದಿನಿಂದಲೂ ತಲೆ ಎತ್ತಿ ನಿಂತಿದ್ದವು ಎಂದರೆ ಹೆಮ್ಮೆ ಎನಿಸುತ್ತದೆ. ಆದರೂ , ಶತಮಾನಗಳ ಕಾಲ ಯಾವ ಸಮಸ್ಯೆಯೂ ಇಲ್ಲದೇ ಶಾಂತಿಯಿಂದಿದ್ದ ಈ ದೂರದ ದಕ್ಷಿಣ ಭಾರತದ ಪ್ರದೇಶ ಕೊನೆಗೂ ಇಸ್ಲಾಮಿನ ಆಕ್ರಮಣಕ್ಕೂ ಗುರಿಯಾಗಿತ್ತು. 1311 ಇಸವಿಯಲ್ಲಿ ಅಲ್ಲಾವುದ್ದೀನ್ ಖಿಲ್ಜಿ ತನ್ನ ಸೇನಾಪತಿ ಮಲಿಕ್ ಖಾಫರ್ ನನ್ನು ದಕ್ಷಿಣ ಭಾರತದ ದಂಡಯಾತ್ರೆಗೆ ಕಳುಹಿಸಿರುತ್ತಾನೆ. ದುರ್ದೈವವೆಂಬಂತೆ ಆಗ ಹೊಯ್ಸಳರ ಅವನತಿಯ ಕಾಲ. ದುಸ್ಥಿತಿಯನ್ನು ಅರಿತೇ ಖಾಫರ್ ದಂಡಯಾತ್ರೆಗೆ ಬಂದಂತಿತ್ತು.
ಖಾಫರ್ ವಾರಂಗಲ್ ನನ್ನು ವಶಪಡಿಸಿಕೊಂಡು ಹೊಯ್ಸಳರನ್ನು ಇನ್ನೂ ದಕ್ಷಿಣಕ್ಕೆ ತಳ್ಳುತ್ತಾನೆ. ವೀರ ಬಲ್ಲಾಳ (III) ನನ್ನು ಸೋಲಿಸಿ ಹಳೆಬೀಡಿನ ಹಿಂದೂ ದೇವಾಲಯಗಳನ್ನು ಲೂಟಿ ಮಾಡುತ್ತಾನೆ. ಈ ಘಟನಾವಳಿಗಳು ಪಾಂಡ್ಯರಿಗೆ ಎಚ್ಚರಿಗೆ ಗಂಟೆಯಂತೆ ಎದ್ದುನಿಲ್ಲುತ್ತಾರೆ. ಖಾಫರ್ ನಿಗೆ ಪಾಂಡ್ಯರ ಏರುತ್ತಿರುವ ಸೇನಾಬಲದ ಬಗ್ಗೆ ಸುದ್ದಿ ತಲುಪಿತ್ತು. ಮತ್ತು ಮಧುರೈನ ರಕ್ಷಣಾ ಕೋಟೆಯಲ್ಲಿ ಇವರಿಗಿರುವ ಅನುಕೂಲತೆಗಳು. ಆದ್ದರಿಂದ ಅಲ್ಲಾವುದ್ದೀನನೇ ಕಾಫರ್ ನಿಗೆ ಸೇನಾ ಬಲವರ್ಧನೆಗಳನ್ನು ಒದಗಿಸುತ್ತಾನೆ. ಮೀನಾಕ್ಷಿ ದೇವಾಲಯವನ್ನು ಲೂಟಿಮಾಡಿಯೇ ಬರಲೆಂದು. ಸುಂದರ ಪಾಂಡ್ಯನು ಹಿಂದೂ ದೇವಾಲಯಗಳ ದ್ವಂಸ ಮಾಡುತ್ತಿರುವ ಮುಸ್ಲಿಮ್ ಧಾಳಿಕೋರರ ಮೇಲೆ ಕ್ರೋಧಗೊಂಡು ಸೇನಾ ಸಮೇತನಾಗಿ ಖಾಫಿರನನ್ನು ಮಣಿಸುತ್ತೇನೆಂದು ಹೊರಡುತ್ತಾನೆ. ವೀರ ಪಾಂಡ್ಯನು ರಕ್ಷಣಾತ್ಮಕವಾಗಿ ಎದುರಿಸುವುದು ಸೂಕ್ತ , ಮೈದಾನದಲ್ಲಿ ಎದುರಿಸುವುದು ಅಪಾಯವೆಂದು ಹೇಳಿದರೂ ಕೇಳದ ಸುಂದರ ಪಾಂಡ್ಯ ಅಲ್ಲಿಂದ ತೆರಳುತ್ತಾನೆ.
ಆದರೆ ಶತ್ರುಸೇನೆಯ ಸ್ಥಾನವನ್ನು ಸರಿಯಾಗಿ ಅರಿಯದೇ ಯಾವ ಯೋಜನೆಯಿಲ್ಲದೆಯೇ ಹೊರಟ ಸುಂದರ ಪಾಂಡ್ಯನಿಗೆ ಆಪತ್ತೇ ಕಾದಿತ್ತು. ಬೃಹತ್ ಸೇನೆಯೊಂದಿಗೆ ಅವನು ತಂಜಾವೂರಿನ ಯಾವುದೋ ಒಂದು ಹೊರವಲಯದ ತನಕ ಹೋದರೂ ಖಾಫರ್ ನ ಸೇನೆ ಎದುರಾಗಲಿಲ್ಲ. ಅಲ್ಲಿಯ ತನಕ ನೀರಿನ ದಾಸ್ತಾನನ್ನು ಪೂರೈಸುತ್ತಿದ್ದ ಕಾವೇರಿ ನದಿ ಬೇಸಿಗೆಗಾಲದ ಉಚ್ರಾಯ ಹಂತದಲ್ಲಿದ್ದು ಸಂಪೂರ್ಣ ಬತ್ತಿ ಹೋಗಿತ್ತು. ಆದರೂ ಆ ಬರಿದಾದ ನದೀ ತೀರದಲ್ಲಿ ಸೇನೆಯನ್ನು ಮುನ್ನಡೆಸುತ್ತಾ ಹೋದ. ಸೇನೆ ಸಾಕಷ್ಟು ದಣಿವಾಗಿತ್ತು.
ಆಗ ಖಾಫರ್ ಸೇನೆಯ ಹಠಾತ್ತನೆ ಧಾಳಿ ! ಮೊದಲೇ ದಣಿದಿದ್ದ ಸೇನೆ ಕಾಫರ್ ನಿಗೆ ಸುಲಭದ ತುತ್ತಾಗುತ್ತದೆ. ಅನೇಕರು ಸುಖಾಸುಮ್ಮನೆ ಹತರಾದರು. ನಂತರ ಪಾಂಡ್ಯರ ಅಶ್ವದಳ ಕದನ ಮುಂದುವರೆಸುತ್ತಾರೆ. ಆದರೂ ಖಾಫಿರನ ಅಶ್ವದಳದವರು ಉತ್ತಮ ಆಯುಧಗಳು(Turcopoles) ಮತ್ತು ಸರಪಳಿ ಕವಚವನ್ನು (Chain mail Armours) ಧರಿಸಿದ್ದ ಸಲುವಾಗಿ ಅವರನ್ನು ಎದುರಿಸಲಾಗುವುದಿಲ್ಲ. ಪಾಂಡ್ಯನ್ನರ ಹತ್ತಿರ ಉತ್ತಮ ರಕ್ಷಾಕವಚಗಳೇ ಇರಲಿಲ್ಲ. ಅಷ್ಟೇ ಅಲ್ಲದೇ ತಮ್ಮ ಜೊತೆಗೆ ಭಾರೀ ಭಾರದ ಕತ್ತಿಯನ್ನು ಹೊತ್ತೊಯ್ಯುತ್ತಿದ್ದರು. ಇದು ನಮ್ಮ ಜನ ಆಗ ಆಯುಧಗಳನ್ನು ಮೇಲ್ದರ್ಜೆಗೆ ಏರಿಸುವ ಕಡೆ ಗಮನ ಕೊಡದ ಪರಿಣಾಮ.
ಕೊನೆಯದಾಗಿ ಖಾಫಿರನ ಪದಾತಿದಳ ಪಾಂಡ್ಯನರನ್ನು ಓಡಿಹೋಗದಂತೆ ಎಲ್ಲಾ ಕಡೆಯಿಂದ ಮುತ್ತುವರೆದುಕೊಂಡು ಸೆರೆಹಿಡಿಯುತ್ತಾರೆ. ಸುಂದರಪಾಡ್ಯನನ್ನು ಸೆರೆಹಿಡಿದು ಮಿಕ್ಕ ಎಲ್ಲಾ ಯುದ್ಧಕೈದಿಗಳ ತಲೆ ಕಡಿಸುತ್ತಾನೆ. ಗೆದ್ದ ಖಾಫಿರ ತಿರುಚಿನಾಪಳ್ಳಿ ಮತ್ತು ಶ್ರೀರಂಗಂ ನ ದೇವಾಲಯಗಳನ್ನೂ ಕೊಳ್ಳೆ ಹೊಡೆಯುತ್ತಾನೆ.
ಕೆಲವು ಅಳಿದುಳಿದ ಅಶ್ವದಳದ ಸೇನೆ ಅಲ್ಲಿಂದ ತಪ್ಪಿಸಿಕೊಂಡು ವೀರಪಾಂಡ್ಯನಿಗೆ ಈ ಘೋರ ಸೋಲಿನ ಸುದ್ದಿ ಮುಟ್ಟಿಸುತ್ತಾರೆ. ಈಗ ಮಧುರೈನ ನಗರ ಕೋಟೆ ಮಾತ್ರ ರಕ್ಷಣೆ. ಮೀನಾಕ್ಷಿ ದೇವಾಲಯವನ್ನು ರಕ್ಷಿಸುವುದೊಂದೇ ಆದ್ಯ ಕರ್ತವ್ಯ. ಏನು ಮಾಡುವುದು ? ಸಾಧ್ಯವಾದಷ್ಟು ದ್ವಾರದ ರಕ್ಷಣೆ ಮಾಡುತ್ತಾ ಖಾಫಿರನನ್ನು ಸಂಧಿಗೆ ಎಳೆತರುವುದೊಂದೇ ಇರುವ ಮಾರ್ಗ.
ಖಾಫಿರನ ಸೇನೆ ಎದುರಾಯಿತು. ಕೋಟೆಯನ್ನು ಮುತ್ತಿಗೆ ಹಾಕಲು ಶುರುಮಾಡಿದ. ಆದರೆ ಗೋಡೆಯನ್ನು ಒಡೆಯುವ ಬ್ಯಾಲಿಸ್ಟಾಗಳೋ ಟ್ರಿಬ್ಯುಚೆಟ್ ಗಳನ್ನು ತಂದಿರಲಿಲ್ಲ. ಒಂದು ಕಡಿಮೆ ದರ್ಜೆಯ ಬ್ಯಾಟರಿಂಗ್ ರಾಮ್ ಇದ್ದ ಮಾತ್ರಕ್ಕೆ ಮುತ್ತಿಗೆ ಧೀರ್ಘಕಾಲವಾಗುತ್ತಿತ್ತು. ಅದರ ಜೊತೆಗೆ ಪಾಂಡ್ಯರ ನಿರಂತರ ಬಾಣಗಳ ಧಾಳಿ ಮತ್ತು ಅಶ್ವದಳದ ಹಠಾತ್ತನೆ ರಾತ್ರಿವೇಳೆಯ ಧಾಳಿಯಿಂದ ಅನೇಕರನ್ನು ಯಮಸದನಕ್ಕಟ್ಟಿದರು. ಖಾಫರನು ಅರ್ಧದಷ್ಟು ಸೇನೆ ಯನ್ನು ಕಳೆದುಕೊಂಡ.
ಆದರೂ ಖಾಫರನು ಒಂದು ವಾರದ ಮುತ್ತಿಗೆಯ ನಂತರ ಗೋಡೆಯನ್ನು ಒಡೆದು ಒಳ ಪ್ರವೇಶಿಸಿದ. ಮೀನಾಕ್ಷಿ ದೇವಾಲಯವನ್ನೂ ಪ್ರವೇಶಿಸಿದ.
ಮಧುರೈನ ಒಳ ಪ್ರವೇಶಿಸಿದರೂ ಅಪಾರ ಸೇನೆಯನ್ನು ಕಳೆದುಕೊಂಡ ಖಾಫರ್ ಸಂಧಿ ಮಾಡಿಕೊಳ್ಳಲೇ ಬೇಕಾಯಿತು.
ಖಾಫರ್ ಹಾಕಿದ ಷರತ್ತುಗಳು.
1. ಮೀನಾಕ್ಷಿ ದೇವಾಲಯದ ಮತ್ತು ಮಧುರೈನ ಸಮಸ್ತ ನಿಧಿಯನ್ನು (96000 ಚಿನ್ನದ ನಾಣ್ಯಗಳು) ಸಮರ್ಪಿಸತಕ್ಕದ್ದು.
2. ಮಧುರೈನ ಅರ್ಧದಷ್ಟು ಅಕ್ಕಿಯ ದಾಸ್ತಾನನ್ನು ಒಪ್ಪಿಸಬೇಕು.
3. ಪಾಂಡ್ಯ ಸೇನೆಯ ಪ್ರತೀ ಕುದುರೆ ಮತ್ತು ಆನೆಗಳನ್ನು ಕೊಡತಕ್ಕದ್ದು.
ಇದರ ಪರವಾಗಿ ಖಾಫರನು ಸುಂದರ ಪಾಂಡ್ಯನನ್ನು ವಾಪಾಸು ಕಳುಹಿಸಿ ಮತ್ತು ದೇವಾಲಯಕ್ಕೆ ಯಾವುದೇ ಹಾನಿಯನ್ನು ಮಾಡದಿರುವೆನೆಂದು ಮಾತುಕೊಡುತ್ತಾನೆ. ವೀರ ಪಾಂಡ್ಯನು ಆ ಮೂರೂ ಅಂಶಗಳನ್ನು ಪಾಲಿಸಬೇಕಾಯಿತು !
ಒಂದು ಕಡೆ ಮುಸ್ಲಿಮರ ಬರ್ಬರ ಆಕ್ರಮಣಗಳಾದರೆ ಮತ್ತೊಂದೆಡೆ ನಮ್ಮ ಜನರ ಅಜಾಗರೂಕತೆಗಳಿಂದ ಅದೆಷ್ಟು ಪ್ರಾಣ ಮಾನ ಹಾನಿಗಳಾದವೋ ? ಅತೀ ಪ್ರಾಚೀನ ಕಲಾಕೃತಿಗಳು ಬಹುಶಃ ತಮಿಳುನಾಡು ರಾಜ್ಯದಲ್ಲಿ ಮಾತ್ರ ಅಧಿಕವಾಗಿ ಕಾಣಸಿಗುತ್ತದೆ. ಈ ಪ್ರದೇಶಗಳನ್ನು ಆಳಿದ ಪ್ರತಿಯೊಬ್ಬ ಅರಸನೂ ಮಂದಿರಗಳನ್ನು ಹಂತ ಹಂತವಾಗಿ ವಿಸ್ತಾರಗೊಳಿಸಿ ಕಲೆಗಳಿಗೆ ಪ್ರೋತ್ಸಾಹ ಕೊಡುತ್ತಲೇ ಬಂದವರು. ಸಾವಿರಾರು ವರ್ಷಗಳ ಇತಿಹಾಸಕ್ಕೆ ಸಾಕ್ಷಿಯೆಂಬಂತೆ ಈ ಕಟ್ಟಡಗಳು ನಮ್ಮ ಶ್ರದ್ಧೆಯನ್ನು ಕಾಪಾಡುತ್ತಿದ್ದಾವೆ. ಅದರೆ ವಿಗ್ರಹರಾಧಕರಲ್ಲದವರಿಗೇನು ತಿಳಿಯುತ್ತದೆ ಕಲೆಯ ಮಹತ್ವ ? ಬ್ರಿಟಿಷರಾದರೋ ಈ ದೇವಾಲಯದ ಶಿಲ್ಪಕಲೆಗಳಿಗೆ ಮನಸೋತು ಈ ಪ್ರಾಚೀನ ಕಲೆಯ ರಕ್ಷಣೆಗೆ ಶ್ರಮ ಕೊಟ್ಟಿದ್ದರು. ಇಲ್ಲಿನ ಸ್ಥಳೀಯ ಉತ್ಸವಗಳಲ್ಲೂ ಪಾಲ್ಗೊಳ್ಳುತ್ತಿದ್ದರು.