ವಿಷಯದ ವಿವರಗಳಿಗೆ ದಾಟಿರಿ

ಜುಲೈ 13, 2016

ನುಡಿ ಮರಣ ಭಾಷಾವಸಾನ

‍ನಿಲುಮೆ ಮೂಲಕ

– ಸುದರ್ಶನ ಗುರುರಾಜರಾವ್

kannada (1)

ಮುನ್ನುಡಿ:

ಕೆಳಗಿನ  ಕವಿತಾ ಸಂಭಾಷಣೆಯ ಮೂಲಕ  – ಸಮಸ್ಯೆಯ ಪರಿಚಯ ಗಮನಿಸಿ

ಕನ್ನಡಿಗ
ಓ ತಾಯಿ ನೀನೇಕೆ ಬೇಡುತಿಹೆ ಭಿಕ್ಷೆ
ಎಲ್ಲಿ ಹೋಯಿತು ನಿನ್ನ ಮನೆ ಮಂದಿ ರಕ್ಷೆ
ಬಾಡಿ ನಲುಗಿಹುದಲ್ಲ ಈ ನಿನ್ನ ವದನ
ಏನಾಯ್ತು ಆ ನಿನ್ನ ಬಹು ಭವ್ಯ ಸದನ

ಭುವನೇಶ್ವರಿ ದೇವಿ (ಕನ್ನಡ ಮಾತೆ:)
ಮಗುವೆ ಮನೆಯಿದ್ದು ಪರದೇಶಿ ನಾನು
ದಿನವೂ ನಾ ಅರೆಹೊಟ್ಟೆ ನೀ ತಿಳಿಯೆಯೇನು
ನನ್ನ ಕೋರಿಕೆಗಿನಿತು ಕೊಡದೆ ಬೆಲೆಯನ್ನು
ಬೇಯಿಸುತ ಬಡಿಸಿಹರು ಕಲಬೆರೆಕೆಯನ್ನು

ಹಸಿವೆಯಿಂ ಕಂಗೆಟ್ಟು ದೇಹ ಸೊರಗಿಹುದು
ಭಿಕ್ಷೆ ಬೇಡಲು ನಡೆಯೆ ಕಾಲು ಸೋತಿಹುದು
ಬರಿ ಹೊಟ್ಟೆ, ಕಲಬೆರಕೆ ಸೌಖ್ಯವೆನಗಿಲ್ಲ
ನಾ ಪೊರೆದ ಮಕ್ಕಳಿಂ ಏನು ಸುಖವಿಲ್ಲ

ಕನ್ನಡ ಮಾತೆ ತನ್ನ ಮಕ್ಕಳಿಂದಲೇ ಕಡೆಗಣಿಸಲ್ಪಡುತ್ತಿರುವ ಕರಾಳ ಪರಿಸ್ಥಿತಿಯನ್ನು ಚಿತ್ರಿಸುವ ಕವನದ ಸಾಲುಗಳು ಇವು. ಕನ್ನಡವನ್ನು ಕುರಿತಂತೆ ಕೆಳಗಿನ ಚಿಂತಾಜನಕ ಬೆಳವಣಿಗೆಗಳನ್ನು ಗಮನಿಸಿ:

  • ಸರಕಾರೀ ಕನ್ನಡ ಶಾಲೆಗಳಲ್ಲಿ ಮಕ್ಕಳಿಲ್ಲ
  • ಕನ್ನಡ ಶಾಲೆಗಳನ್ನು ಮುಚ್ಚಲು ಸರಕಾರದ ನಿರ್ಧಾರ
  • ಕನ್ನಡ ಮಾಧ್ಯಮದಲ್ಲಿ ಕಲಿಸುವ ಖಾಸಗೀ ಶಾಲೆಗಳಿಲ್ಲ
  • ಕನ್ನಡ ಮಾಧ್ಯಮದ ಪರವಾನಗಿ ಪಡೆದು ಆಂಗ್ಲ ಮಾಧ್ಯಮದಲ್ಲಿ ಕಲಿಸುವ ಶಾಲೆಗಳು
  • ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಸರಕಾರದ ನಿರ್ಧಾರ
  • ಖಾಸಗೀ ಶಾಲೆಗಳ ಶುಲ್ಕ ಪೋಷಕರಿಗೆ ಹೊರೆ ಆದರೆ ಸರಕಾರೀ ಶಾಲೆಗಳಿಗೆ ಬೆನ್ನು
  • ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣದ ಕೊರತೆ
  • ಆಂಗ್ಲ ಮಾಧ್ಯಮದಲ್ಲಿ ಕಲಿತರೆ ಯಶಸ್ಸು- ಕನ್ನಡದಲ್ಲಿ ಕಲಿತರೆ ಆಪತ್ತು
  • ಸರ್ವೋಚ್ಛನ್ಯಾಯಾಲಯದ ತೀರ್ಪು

ಈ ಎಲ್ಲ ಮೇಲಿನ ತಲೆಬರಹಗಳುಳ್ಳ ಲೇಖನಗಳನ್ನು ನೀವೆಲ್ಲಾ ಓದೇ ಇರುತ್ತೀರಿ. ಕನ್ನಡವನ್ನು ಆದರಿಸಿ ಪೋಷಿಸುವ ಬದಲು ಅದರ ಬುಡಕ್ಕೇ ಕೊಡಲಿ ಹಾಕುವಂತಹ ಕಾನೂನಿನ ಹೋರಾಟವನ್ನು ಪೋಷಕರೂ, ಖಾಸಗೀ ಶಾಲೆಯ ಬಂಡವಾಳಶಾಹಿಗಳೂ ನಡೆಸಿದ್ದು ಒಂದು ದುರದೃಷ್ಟಕರ ಬೆಳವಣಿಗೆಯಲ್ಲದೆ ಮತ್ತೇನು?

ಭಾರತದ ಉಚ್ಛ ನ್ಯಾಯಾಲಯ ಮಕ್ಕಳ ಶಿಕ್ಷಣದಲ್ಲಿ ಮಾಧ್ಯಮವನ್ನು ಕುರಿತಂತೆ ಯಾವ ಭಾಷೆಯಲ್ಲಿ ಕಲಿಸಬೇಕು ಎನ್ನುವ ನಿರ್ಣಯ ಪೋಷಕರದ್ದು; ಸರಕಾರಕ್ಕೆ ಆ ಅಧಿಕಾರ ಇಲ್ಲ ಎಂದು ಹೇಳಿದೆ. ಮಾತೃಭಾಷೆ ಎಂಬ ಪರಿಕಲ್ಪನೆಯ ಹಿಂದಿನ ಭಾವನಾತ್ಮಕ/ ಸಾಂಸ್ಕೃತಿಕ / ರಾಷ್ಟ್ರೀಯ / ಪ್ರಾಂತೀಯ ಪ್ರಾಮುಖ್ಯತೆಯನ್ನು ಕಡೆಗಣಿಸಿ, ಶಿಕ್ಷಣವನ್ನು ಒಂದು ಸರ್ವತೋಮುಖ ಪರಿವೀಕ್ಷಣೆಗೆ ಒಳಪಡಿಸದೆ ಕೇವಲ ವ್ಯಾಪಾರೀ ದೃಷ್ಟಿಯಿಂದ ಮಾತ್ರ ಪರಿಗಣಿಸಿ, ದೀರ್ಘಕಾಲಿಕ ದುಷ್ಪರಿಣಾಮಗಳನ್ನು ನಿರ್ಲಕ್ಷಿಸಿ ನೀಡಿದ ಈ ತೀರ್ಪು ಕನ್ನಡದ ಅಳಿವು ಉಳಿವನ್ನು ನಿರ್ಧರಿಸಲಿದೆ.

ನೀವು ಈ ಲೇಖನ ಓದ್ತಾ ಇದೀರಾ ಅಂತ ಅಂದ್ರೆ ನಿಮಗೆ ಕನ್ನಡದ ಮೇಲಿನ ಕಳಕಳಿ ಇದೆ ಅಂತಾಯ್ತು. ಇಲ್ದೇ ಇದ್ರೆ ಇಷ್ಟೊತ್ತಿಗೆ  ಮೂಗ್ ಮುರ್ದು ಬೇರೆ ಪುಟಕ್ಕೆ ಹೋಗಿರ್ತಿದ್ರಿ. ನಾನು ಯಾಕೆ – ಯಾರಿಗೆ ಈ ಲೇಖನ ಬರೀಬೇಕು? ಅಂತ ನನ್ನನ್ನು ನಾನೇ ಬಹಳ ಸಾರಿ ಪ್ರಶ್ನೆ ಮಾಡ್ಕೊಂಡೆ. ಭಾಷಾ ಮರಣದ ಬಗ್ಗೆ ಜಾಗೃತಿ ಮೂಡಿದ್ರೆ, ಅದರ ಸಂದೇಶ ನಿಧಾನವಾಗಿ ಬೇರೆಯವ್ರಿಗೂ ಹರಡಬಹುದೇನೋ ಆ ಮೂಲಕ ಜನರ ವಿಚಾರಸರಣಿಯಲ್ಲಿ ಸ್ವಲ್ಪ ಬದಲಾವಣೆ ಆಗಬಹುದೆಂಬ ಅಭಿಲಾಷೆ ನನ್ನದು. ರೋಗಿಯನ್ನು ಗುಣಪಡಿಸಲು ವೈದ್ಯರಿಗೆ ರೋಗಲಕ್ಷಣಗಳ ಪರಿಚಯ ಹೇಗೆ ಮುಖ್ಯವೋ ಹಾಗೆ ಕನ್ನಡದ ಇಂದಿನ ಬವಣೆ ನೀಗಿಸಲು ನಾವೆಲ್ಲರೂ ಒಂದು ಬಗೆಯ ನುಡಿ ವೈದ್ಯರಾಗುವ ಅವಶ್ಯಕತೆ- ಅನಿವಾರ್ಯತೆ ಇದೆ ಎಂಬುದು ನನ್ನ ಭಾವನೆ.

ಈ ನಿಟ್ಟಿನಲ್ಲಿ ಹಲವಾರು ಆಯಾಮಗಳಿಂದ ಕನ್ನಡದ ದುರ್ಗತಿಯನ್ನು ಪರೀಕ್ಷಿಸಿ ಕನ್ನಡಿಗರಾಗಿ ನಮ್ಮ ಭಾಷೆಗೆ ನಾವು ಮಾಡಬಹುದಾದ ಸೇವೆಯನ್ನು ಪರ್ಯವಲೋಕಿಸುವುದು ಅದನ್ನು ನಿಮ್ಮೊಂದಿಗೆ ಹಂಚಿಕೊಳುವುದು ನನ್ನ ಸದಾಶಯ.

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮಹಾನ್ ಕೃತಿಗಳ ಸಂಪತ್ತಿದೆ, ತನ್ನದೇ ಆದ ಸರಳ, ಸಮೃದ್ಧ, ಸುಂದರ ಲಿಪಿಯೂ ಇದೆ, ಕನ್ನಡವನ್ನಾಡುವ ಜನಗಳು ತಮ್ಮ ನೆಲವೆಂದು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲ ಭೌಗೋಳಿಕ ಚೌಕಟ್ಟಿನ ಪರಿಸರವೂ ಇದೆ, ಇತ್ತೀಚೆಗೆ ಶಾಸ್ತ್ರೀಯಸ್ತಾನ ಮಾನಗಳೂ ದೊರೆತಿವೆ. ಇವೆಲ್ಲಾ ಇದ್ದೂ ಕನ್ನಡಮಾತೆ ಭಿಕ್ಷೆ ಬೇಡುವ ಕಾರ್ಪಣ್ಯಕ್ಕೂ, ನಾನಿಂದು ಈ ಲೇಖನವನ್ನು ಬರೆಯುತ್ತಿರುವುದಕ್ಕೂ ಕಾರಣವೇನು?

ಒಂದು ಭಾಷೆ ಉಳಿದು ಬೆಳೆಯಲು ಭಾಷೆಯ ಸಮೃದ್ಧಿ ಮತ್ತು ಶಕ್ತಿಯಷ್ಟೇ ಸಾಲದು. ಅದನ್ನು ಬಳಸುವ ಸಮಾಜದಲ್ಲಿನ ಜನಗಳ ಮನೋವ್ಯಾಪಾರ / ಅಭಿರುಚಿ / ಅವಶ್ಯಕತೆಗಳು/ಬದಲಾಗುತ್ತಿರುವ ಜಾಗತಿಕ ವಿದ್ಯಮಾನಗಳು /ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಗಳು ಹಾಗೂ ಸಾಮಾಜಿಕ ಮೌಲ್ಯಗಳು ಪರಿಣಾಮ ಬೀರುತ್ತವೆ.ಎಲ್ಲಕ್ಕಿಂತ ಪ್ರಮುಖವಾಗಿ ಭಾಷಿಕರು ಅದರಲ್ಲೂ ಮಕ್ಕಳು ಮತ್ತು ಯುವಪೀಳಿಗೆ ಭಾಷೆಯೊಂದರ ಅಳಿವು ಉಳಿವಿನ ಅತಿಮುಖ್ಯ ರೂವಾರಿಗಳು. ಇವುಗಳನ್ನು ಒಂದೊಂದಾಗಿ ಗಮನಿಸೋಣ.

ಕನ್ನಡ ಸ್ಥಿತಿ ಗತಿಗಳು ಸವಾಲುಗಳು ಮತ್ತು ಅವಕಾಶಗಳು
1) ಕನ್ನಡದ ಕುರಿತಾಗಿ ಕನ್ನಡಿಗರ ಮನೋಧರ್ಮ- ಒಂದು ಪಕ್ಷಿ ನೋಟ

2) ಕನ್ನಡ ಭಾಷೆಯ ಸಧ್ಯದ ಪರಿಸ್ಥಿತಿಯ ಸರಳ ನೋಟ

3) ನುಡಿಯ ಮಹತ್ವ

4) ಬದಲಾಗುವ ಮನೋಧರ್ಮದ ಹಿಂದಿನ ವೈಜ್ಞಾನಿಕ ಕಾರಣಗಳು

      ಅ) ಮನುಷ್ಯನ ಅವಶ್ಯಕತೆಗಳ ಶ್ರೇಣಿ
ಆ) ಮ್ಯಾಸ್ಲೊನ ಮನೋವೈಜ್ಞಾನಿಕ ವಿಶ್ಲೇಷಣೆ
ಇ) ಮನೋಧರ್ಮದಅನುಸಾರ ಕನ್ನಡ ಜನಪದದ ಹರಹು
ಈ) ಭಾಷೆ ಮತ್ತು ಅವಶ್ಯಕತೆಗಳ ಪೂರೈಕೆ – ಭಾಷೆಯೆಂಬ ಸಾಧನ

5) ಅವಶ್ಯಕತೆಗಳ ಹಿನ್ನೆಲೆಯಲ್ಲಿ ಭಾಷೆಗಳ ಉದಯ

      ಅ) “ತಾಯಿ ನುಡಿ” ಯ ಪರಿಕಲ್ಪನೆ
ಆ) ನುಡಿಯ (ಭಾಷೆಯ) ಜೀವ ಯಾತ್ರೆ- ಭಾಷೆ ಹಾಯ್ದು ಹೋಗುವ ವಿವಿಧ ಹಂತಗಳು (ಸಂಕ್ಷಿಪ್ತ ಪರಿಚಯ)

6) ಅವಶ್ಯಕತೆಗಳ ಪೂರೈಕೆಯಲ್ಲಿ ಭಾಷಾ ಮಾಧ್ಯಮ

      ಅ) ಏಕ ಭಾಷಾ ವ್ಯವಸ್ಥೆ ಮತ್ತು ಭಾಷೆಯ ಸ್ವಾಸ್ಥ್ಯ- ಕನ್ನಡ ಒಂದೇ ಇದ್ದಲ್ಲಿ
ಆ) ದ್ವಿಭಾಷಾ ಪದ್ಧತಿ ಮತ್ತು ಅದರ ಪರಿಣಾಮಗಳು – ಕನ್ನಡ ಮತ್ತು ಇಂಗ್ಲೀಷ್ ಪೈಪೋಟಿಯಲ್ಲಿ
ಇ) ಕಂಗ್ಲೀಷ್ ಮತ್ತದರ ಪರಿಣಾಮಗಳು
ಈ) ಜಾಗತೀಕರಣ ಮತ್ತು ಸಂಸ್ಕೃತಿ

7) ನುಡಿಯ (ಭಾಷೆಯ) ಜೀವಯಾತ್ರೆ – ವಿವರಣೆ ಮತ್ತು ವಿಶ್ಲೇಷಣೆ  ( ಸವಿವರ ನಿರೂಪಣೆ)

8) ಪರಿಹಾರೋಪಾಯಗಳು ಮತ್ತು ಅವುಗಳ ಸಾಧ್ಯಾಸಾಧ್ಯತೆಗಳ ನಿರೂಪಣೆ

9) ಕೊನೆಹನಿ

10) ಉಪಸಂಹಾರ ಮತ್ತು ಪರಿಸಮಾಪ್ತಿ

ಕನ್ನಡವ ಕುರಿತಂತೆ ಕನ್ನಡಿಗರ ಮನೋಧೋರಣೆಗಳ ಪಕ್ಷಿನೋಟ

ವಿಶ್ವದಲ್ಲಿ ಇಂದು ( ಮತ್ತು ಕರ್ನಾಟಕದಲ್ಲಿ ಅನ್ಯ ಭಾಷೆಯ ಜನಗಳನ್ನು ಹೊರತುಪಡಿಸಿ ) ಕನ್ನಡಿಗರೆಂದು ಅವರ ಹುಟ್ಟು ಹಾಗೂ ವಂಶಜರ ಭಾಷೆಯ ಮೂಲಕ ಗುರುತಿಸಲ್ಪಟ್ಟ ಜನಗಳನ್ನು ಒಟ್ಟುಗೂಡಿಸಿ ಕನ್ನಡದ ಬಗೆಗಿನ ಅವರ ಧೋರಣೆಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದರೆ ಅವರುಗಳನ್ನು ಹಲವು ಗುಂಪು (ಪಂಗಡ) ಗಳಾಗಿ ವಿಂಗಡಿಸಬಹುದು.

ಗುಂಪು 0 ( ಅಲ್ಪಸಂಖ್ಯಾತ ಕನ್ನಡ ಪ್ರೇಮಿಗಳು)

  • ಆರ್ಥಿಕ ಚೈತನ್ಯ ಇಲ್ಲಿ ಅಮುಖ್ಯ. ನಾಡು-ನುಡಿ-ಸಂಸ್ಕೃತಿಗೆ ಪ್ರಾಮುಖ್ಯತೆ.
  • ಸಮಾಜ ಮುಖಿ ಕುಟುಂಬ ವ್ಯವಸ್ಥೆ. ವೈಯಕ್ತಿಕ ಹಿತಕ್ಕಿಂತ ಸಾರ್ವತ್ರಿಕ ಹಿತಕ್ಕೆ ಆದ್ಯತೆ.
  • ಮನೆಯಲ್ಲಿ ಪೂರಕ ವಾತಾವರಣ. ಮಕ್ಕಳ ಸಮಗ್ರ ಬೆಳವಣಿಗೆ- ಆತ್ಮವಿಶ್ವಾಸ ವಿಕಾಸ.
  • ನನ್ ಮಕ್ಳು ಕನ್ನಡದಲ್ಲೇ ಕಲಿತು ಬೆಳೆಯಲಿ.
  • ಕನ್ನಡದಲ್ಲಿ ಕಲಿತ್ರೆ ನಮ್ಮ ಸಂಸ್ಕೃತಿ ಸಾಹಿತ್ಯದ ಬಗ್ಗೆ ತಿಳುವಳಿಕೆ ಬರುತ್ತೆ.
  • ನಾವ್ ಅಲ್ಲದೇ ನಮ್ಮ ಭಾಷೆ -ಸಂಸ್ಕೃತಿನ ಯಾರು ಉಳಿಸಬೇಕು.
  • ಮಕ್ಕಳ ಸ್ಕೂಲ್ ಮನೇಲಲ್ವೆ. ನಾವ್ ಪ್ರೋತ್ಸಾಹ ಕೊಟ್ರೆ ಯಾವ್ ಮಾಧ್ಯಮ ದಲ್ಲಿ ಓದಿದ್ರೂ ಜಯಿಸ್ಕೊಂಡ್ ಬರ್ತಾರೆ.
  • ಹೊರ ನಾಡಿನಲ್ಲಿದ್ದರೂ ಮಕ್ಕಳಿಗೆ ಕನ್ನಡದ ತಿಳಿವು ಮೂಡಿಸಿ ಬೆಳೆಸುವ ಮಹಾ ಚೈತನ್ಯಗಳು.

ಗುಂಪು-೧/೨ ( ಕನ್ನಡದ ಮೇಲೆ ಅಭಿಮಾನ ಇದ್ರೂ ಸಮಾಜದ ಪ್ರತಿಷ್ಟೆ/ ಭವಿಷ್ಯದ ಆತಂಕ ಇತ್ಯಾದಿಗಳಿಂದ ಮತಿಭ್ರಮಣೆಗೊಳಗಾದ ಗುಂಪು)

  • ಹೆಂಗಾದ್ರೂ ಸರಿ ಮಕ್ಕಳು ಮುಂದೆ ಬರ್ಲಿ. ನಮಗೆ ಸಿಗದೇ ಇದ್ದದ್ದು ನಮ್ ಮಕ್ಳಿಗಾದ್ರೂ ಸಿಗ್ಲಿ.
  • ಹೆಣಗಾಟ ಇವರ ಮುಖ್ಯ ಲಕ್ಷಣ. ಆರ್ಥಿಕವಾಗಿ ಬಹಳ ಬಲಿಷ್ಠರಲ್ಲದ ಸಾಮಾಜಿಕ ವರ್ಗ.
  • ಪೋಷಕರ ವಿದ್ಯಾರ್ಹತೆಯೂ ಬಹುತೇಕ ಮಧ್ಯಮ ಅಥವಾ ಕನಿಷ್ಠ.
  • ಆರ್ಥಿಕ ಚೈತನ್ಯ ಕಡಿಮೆ; ಅದರೆ ತೀರಾ ಬಡವರಲ್ಲ.
  • ಕಡಿಮೆ ದರ್ಜೆಯ ಖಾಸಗೀ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವುದು.
  • ಉತ್ತಮ ದರ್ಜೆಯ ಸರ್ಕಾರೀ ಶಾಲೆ ತಿರಸ್ಕರಿಸುವುದು.
  • ಕೆಳಮಟ್ಟದ ಶಿಕ್ಷಕರು, ಬೋಧನೆ, ಮನೆಯಲ್ಲಿ ಪೂರಕ ಮಾರ್ಗದರ್ಶನದ ಕೊರತೆ.
  • ಮಕ್ಕಳ ಯೋಗ್ಯತೆ ಹಾಗೂ ಇರುವ ಸೌಲಭ್ಯಗಳನ್ನು ಮೀರಿದ ನಿರೀಕ್ಷೆ.
  • ಮಕ್ಕಳು ಎಲ್ಲಿಯೂ ಸಲ್ಲದಂತಾಗುವೆ ಅನಿವಾರ್ಯತೆ.

ಗುಂಪು-೧ ( ಕಾವೇರಿ ನೀರ್ ಕುಡ್ದು ಕನ್ನಡದಲ್ಲೇ ಮಾತಾಡ್ತಾ ಕನ್ನಡಕ್ಕೆ ಗುನ್ನ ಹಾಕೋವ್ರು)

  • ಆರ್ಥಿಕವಾಗಿ ಸಬಲರು. ಆಡಂಬರ, ಅರೆ ತಿಳುವಳಿಕೆ ಹೆಚ್ಚು.
  • ಭೌತಿಕ ಸಂಪನ್ಮೂಲಗಳ ಮೂಲಕ ಮನುಷ್ಯನ ದರ್ಜೆ ಅಳೆಯುವ ಮಂದಿ.
  • ವೈಯಕ್ತಿಕ ಹಿತ, ಪ್ರತಿಷ್ಠೆ ಪ್ರಮುಖ ಅಂಶಗಳು.
  • ಭಾಷೆಯೂ ವ್ಯಾವಹಾರಿಕ ಸರಕು ಮಾತ್ರ.
  • ಅಯ್ಯೊ ನಮ್ ಮಗನ್ನ ನಾವು ಕಾನ್ವೆಂಟ್ಗೆ ಸೇರಿಸೋದು. ದುಡ್ಡು ಎಷ್ಟಾದ್ರೂ ಸರೀನೆ!.
  • ಎಲ್ಲರ್ ಮಕ್ಳೂ ಇಂಗ್ಲೀಷ್ ನಲ್ಲೇ ಓದ್ತವೆ, ನಮ್ ಮಕ್ಳು ಮಾತ್ರಾ ಭಿಕಾರಿಗಳ್ ತರಹ ಕನ್ನಡದಲ್ಲಿ ಓದ್ಬೇಕಾ.
  • ಕನ್ನಡ ಮೀಡಿಯಮ್ ನಲ್ಲಿ ಓದಿದ್ರೆ ಮಣ್ ತಿನ್ಬೇಕಷ್ಟೆ.
  • ನಮ್ ಭಾಷೆ ಕನ್ನಡ ಆದ್ರೆ ಏನಂತೆ; ನಾವು ಅದನ್ನ ಮಕ್ಳಿಗೆ ಕಲ್ಸದೇನ್ ಬೇಕಿಲ್ಲ.
  • ಕನ್ನಡ ಕಲಿಯೊದ್ರಿಂದ ಏನೂ ಪ್ರಯೋಜನ ಇಲ್ಲ. ಈಗೆಲ್ಲಾ ಕಡೆ ಇಂಗ್ಲೀಷೇ ಬೇಕು.
  • ಇವೆಲ್ಲಾ ಯಾಕ್ರೀ ತಲೆನೋವು. ಒಳ್ಳೆ ಸ್ಕೂಲಿಗ್ ಹಾಕ್ತೀವಿ. ಇಂಗ್ಲೀಶ್ನಲ್ಲೇ ಓದ್ಲಿ ಬಿಡಿ. ಕನ್ನಡ ಕಟ್ಕೊಂಡ್ ನಮ್ಗೇನಾಗ್ಬೇಕು.

ಗುಂಪು-೨ (ಕಾವೇರಿ ನೀರ್ ಕುಡುದ್ರೂ ಥೇಮ್ಸ್ ನದಿ ನೀರ್ ಕುಡ್ದೌರ್ ಥರ ಆಡೋರು)

  • ಮೇಲಿನ ಗುಂಪಿನ ಎಲ್ಲ ಗುಣಗಳೂ ಇವರಲ್ಲಿ ಮೇಳೈಸಿರುವುದಲ್ಲದೆ ಕೆಳಗಿನ ಕುಚೇಷ್ಟೆಯೂ ಸೇರಿರುತ್ತವೆ
  • ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಬಲ ಪೋಷಕರು. ರಾಷ್ಟ್ರೀಯತೆಯಾಗಲೀ, ಭಾಷಾಭಿಮಾನವಾಗಲೀ ಕಡಿಮೆ. ಸ್ವಾರ್ಥಪರ ಕುಟುಂಬ ವ್ಯವಸ್ಥೆ. ಸಾಮಾಜಿಕ ಹಿತಕ್ಕಿಂತ ವೈಯಕ್ತಿಕ ಪ್ರತಿಷ್ಠೆ ಮುಖ್ಯ.
  • ಆರ್ಥಿಕವಾಗಿ ಬಲಿಷ್ಠರು.
  • ಸಾಂಸ್ಕೃತಿಕವಾಗಿ ದಿವಾಳಿಗಳು. ಮೋಜು, ಮಸ್ತಿ , ಹಣ, ಹನನಕ್ಕೆ ಆದ್ಯತೆ.
  • ನಾನು ನಮ್ ಹಸ್ಬಂಡು ಮೊದ್ಲೇ ಡಿಸೈಡ್ ಮಾಡಿದ್ದೀವಿ. ಆಲ್ ಅವರ್ ಚಿಲ್ಡ್ರೆನ್ ವಿಲ್ ಗೊ ಟು ಇಂಗ್ಲೀಷ್ ಮೀಡಿಯಮ್.
  • ಈಗೆಲ್ಲ ಗ್ಲೋಬಲ್ ಸಿವಿಲೈಸೇಷನ್. ವ್ಹೂ ವುಡ್ ವಾಂಟ್ ಕನ್ನಡ.
  • ಹಾಯ್ ಚಿಲ್ಡ್ರೆನ್ ಹ್ಯಾಡ್ ಯುವರ್ ಫುಡ್. ತಿಂದ್ರಾ?
  • ಡೋಂಟ್ ಡೂ ಇಟ್. ಐ ಹ್ಯಾವ್ ಟೋಲ್ಡ್ ಯು.ಹೇಳ್ಲಿಲ್ವಾ?
  • ಆಲ್ ಅವರ್ ಚಿಲ್ದ್ರೆನ್ ಅಂಡರ್ಸ್ತ್ಯಾಂಡ್ ವೆರಿ ಲಿಟ್ಟ್ಲ್ ಕನ್ನಡ.

ಗುಂಪು -೩ ( ಕನ್ನಡದವರಾದ್ರೂ ಕನ್ನಡಾದ ಹಂಗೇ ಇಲ್ಲದಂತಿರುವವರು).

  • ಇವರ ಬಗ್ಗೆ ಬರೆಯೋಕೂ ನನಗೆ ಬೇಜಾರು ಬರುತ್ತೆ. ನೀವೇ ಊಹೆ ಮಾಡ್ಕೊಳಿ.

ಗುಂಪು-೪ (ಜೀವನದಲ್ಲಿ ಆಯ್ಕೆಯ ಸ್ವಾತಂತ್ರ್ಯ- ಸಾಮರ್ಥ್ಯ ಇಲ್ಲದ ಬಡ ಜನತೆ)

  • ಆಪಾರ ಸಂಖ್ಯೆಯ ಜನಸ್ತೋಮ ಆದರೆ ಬದಲಾವಣೆಯ ಪ್ರಕ್ರಿಯಯಲ್ಲಿ ಇವರ ಯಾವ ಪಾತ್ರವೂ ಇರದು.
  • ಕನ್ನಡದ ಉಳಿವಿಗೆ ಈ ಗುಂಪು ಹೆಚ್ಚು ಶಕ್ತಿ ನೀಡಬಲ್ಲದು. ಆದರೆ ಉತ್ಕೃಷ್ಟ ಕಲಿಕಾ ಸೌಲಭ್ಯ ಇವರಿಗೆ ಲಭ್ಯವಾಗುವುದೆಂತು?

ಹೀಗೆ ಮೇಲೆ ವಿಶದೀಕರಿಸಿದಂತೆ ವಿವಿಧ ಬಗೆಯ ಮನೋಧೋರಣೆಗಳಿಂದಾದ ಒಂದು ಭಾಷೆಯ ಜನಪದವು ಆ ಭಾಷೆಯ ಆರೋಗ್ಯ ಮತ್ತು ಸ್ಥಿತಿ-ಗತಿಗಳನ್ನು ನಿರ್ಧರಿಸುತ್ತದೆ. ಅದನ್ನು ಈಗ ನೋಡೋಣ.

ಭಾಷೆಯಾಗಿ ಕನ್ನಡದ ಸ್ಥಿತಿ-ಗತಿ ಮತ್ತು ಸ್ವಾಸ್ಥ್ಯ- ಒಂದು ಸರಳ ನೋಟ

ಈ ಕೆಳಗಿನ ಹೇಳಿಕೆಗಳನ್ನು ಕುರಿತು ಯೋಚಿಸಿ ಅದರ ಅಂಕಿ ಅಂಶಗಳನ್ನು ಕೆದಕಿದರೆ/ಚಿತ್ರಿಸಿಕೊಂಡರೆ ಕನ್ನಡ ನಿಧಾನವಾಗಿ ಕನ್ನಡಿಗರ ಮನ ಮನೆಗಳಿಂದ ದೂರವಾಗುತ್ತಿರುವುದನ್ನು ಗಮನಿಸಬಹುದು.

  • ಕರ್ನಾಟಕದ ಜನಸಂಖ್ಯೆ
  • ಕನ್ನಡಿಗರ ಸಂಖ್ಯೆ
  • ಕನ್ನಡ ಮಾತನಾಡುವವರ ಸಂಖ್ಯೆ
  • ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳು
  • ಕನ್ನಡ ಮೊದಲ ಭಾಷೆಯಾಗಿ ಕಲಿಯುತ್ತಿರುವ ಮಕ್ಕಳು
  • ಕನ್ನಡ ನಿರರ್ಗಳ ಮಾತನಾಡಬಲ್ಲ ಕನ್ನಡಿಗರು
  • ಕನ್ನಡವನ್ನು ಸುಲಭವಾಗಿ ಬರೆಯಬಲ್ಲವರ ಸಂಖ್ಯೆ
  • ಕನ್ನಡ ನಿಯತ ಕಾಲಿಕೆ/ ದಿನಪತ್ರಿಕೆ ಓದಬಲ್ಲ ಯುವ ಪೀಳಿಗೆ
  • ಕನ್ನಡ ಪುಸ್ತಕಗಳನ್ನು ಓದಬಲ್ಲ ಮಕ್ಕಳು
  • ಮನೆಯಲ್ಲಿ ಕನ್ನಡ ವ್ಯವಹಾರಿಕ ಭಾಷೆ
  • ಮನೆಯಲ್ಲಿ ಕಂಗ್ಲೀಶ್ ವ್ಯವಹಾರಿಕ ಭಾಷೆ
  • ಮನೆಯಲ್ಲಿ ಬಹುತೇಕ ಇಂಗ್ಲೀಶ್ ವ್ಯವಹಾರಿಕ ಭಾಷೆ
  • ಶಾಲೆ- ಹೊರಗಡೆ ಬಹುತೇಕ ಇಂಗ್ಲೀಷ್ ಬಳಸುವವರ ಸಂಖ್ಯೆ
  • ಕನ್ನಡ ದಿನಪತ್ರಿಕೆಗಳ ಮಾರಾಟದ ಒಟ್ಟು ಸಂಖ್ಯೆ
  • ನಿಯತಕಾಲಿಕೆಗಳ ಮಾರಾಟದ ಒಟ್ಟು ಸಂಖ್ಯೆ.

ಬದಲಾಗುತ್ತಿರುವ ಜನಸಂಖ್ಯಾ ಚಿತ್ರಣ ಮತ್ತು ಅದರ ಪರಿಣಾಮಗಳು

  • ಕುಟುಂಬ ಕಲ್ಯಾಣ ಯೋಜನೆ
  • ಒಂದು ಅಥವಾ ಎರಡು ಮಕ್ಕಳು
  • ಸಣ್ಣ ಪ್ರಮಾಣದ ಮಕ್ಕಳ ಸಂಖ್ಯೆ
  • ಹೆಚ್ಚುತ್ತಿರುವ ಕನ್ನಡ ವಿಮುಖತೆ
  • ಸಂಕುಚಿತಗೊಂಡ ಯುವ ಪೀಳಿಗೆಯ ಜನಸಂಖ್ಯೆ
  • ಸಂಕುಚಿತಗೊಂಡ ಕನ್ನಡವನ್ನು ಸಮರ್ಪಕವಾಗಿ ಬಳಸಬಲ್ಲ ಯುವಪೀಳಿಗೆಯ ಪ್ರಮಾಣ
  • ಸಂಕುಚಿತ ಭಾಷಾ ಬಳಕೆದಾರರ ಸಂಖ್ಯೆ
  • ಕನ್ನಡ ಭಾಷಾ ಅಲ್ಪ ಸಂಖ್ಯಾತರು
  • ಕನ್ನಡ ಭಾಷೆಯ ನಿರ್ವಹಣೆ ಸರಕಾರಗಳಿಗೆ ಅರ್ಥಿಕ ಹೊರೆ
  • ಕನ್ನಡ ಭಾಷೆಗೆ ಸರಕಾರಗಳ ನಿರ್ಲಕ್ಷ್ಯ
  • ಕನ್ನಡ ಭಾಷಾ ಮರಣ ಶಾಸನ!!

ಇವೆಲ್ಲ ಪ್ರಶ್ನೆಗಳು ಕನ್ನಡದ ವತಿಯಿಂದ ಬಹಳ ಮುಖ್ಯವಾದವುಗಳು. ಕಾರಣ, ಕನ್ನಡ ಒಂದು ಪ್ರಾದೇಶಿಕ ಭಾಷೆ. ಅದಕ್ಕೆ ಸೀಮಿತ ಸಂಖ್ಯೆಯ ಜನರು ಮಾತ್ರವೇ ವಾರಸುದಾರರು. ಕನ್ನಡಕ್ಕೆ ಇಂಗ್ಲೀಷಿಗಿರುವಂತೆ ಜಾಗತಿಕ ವೇದಿಕೆ ಇಲ್ಲ. ಕನ್ನಡದ ಪುಸ್ತಕಗಳನ್ನು ಕನ್ನಡದವರು ಮಾತ್ರವೇ ಓದುವುದು. ಹೀಗಾಗಿ ಸಂಖ್ಯಾ ಪ್ರಮಾಣ ಕಡಿಮೆಯಿರುವಲ್ಲಿ ಪ್ರತಿಯೊಂದು ಸದಸ್ಯನಿಗೂ ಪ್ರಾಮುಖ್ಯತೆ ಬರುತ್ತದೆ ಹಾಗೂ ಅವರ ಕೊಡುಗೆಗೆ ಮಹತ್ವ ಇದೆ. ಇದನ್ನೇ ಇನ್ನೊಂದು ರೀತಿ ಹೇಳ ಬೇಕೆಂದರೆ, ಕನ್ನಡನುಡಿಯಿಂದ ವಿಮುಖನಾಗುವ ಪ್ರತಿಯೊಬ್ಬ ಪ್ರಜೆಯೂ ಕನ್ನಡವನ್ನು ವಿನಾಶದೆಡೆಗೆ ತಳ್ಳುತ್ತಿದ್ದಾನೆ/ಳೆ ಎಂದೆನ್ನಬಹುದು. ಈ ಹಿನ್ನೆಲೆಯಲ್ಲಿ ನುಡಿಯ ಬಗೆಗೆ ನಾವೇಕೆ ಇಷ್ಟೊಂದು ಆತಂಕ ತಾಳಬೇಕೆಂಬುದನ್ನು ಇಲ್ಲಿ ಪರೀಕ್ಷಿಸೋಣ.

ನುಡಿಯ ಮಹತ್ವ:

ಈಗ ನುಡಿಯ ಮಹತ್ವ ಏನು? ನಾವು ಏಕೆ ನಮ್ಮ ಭಾಷೆಯ ಕುರಿತು ಅಭಿಮಾನ ತಳೆಯಬೇಕೆಂಬುದನ್ನು ಸ್ವಲ್ಪ ಪರ್ಯಾವಲೋಚಿಸೋಣ

ಸಂಘ ಜೀವಿಯಾಗಿ ವಿಕಾಸ ಹೊಂದಿದ ಮನುಷ್ಯ ಸಮಾಜಮುಖಿಯಾಗಿ ಸಮಾಜದ ಮೂಲಕ ತನ್ನ ಭದ್ರತೆಯನ್ನು ಕಂಡುಕೊಂಡಿದ್ದು ಈಗ ಓಬೀರಾಯನ ಇತಿಹಾಸವಾಗಿ ಕಾಣಬಹುದು. ಇವತ್ತು ನಾವು ಸಮಾಜವನ್ನು ನಮ್ಮ ದೇಹದ ಭಾಗದಷ್ಟೇ ಸ್ವಾಭಾವಿಕವಾಗಿ ಸ್ವೀಕರಿಸಿದ್ದೇವೆ. ಎಲ್ಲರಿಗೂ ಇದು ತಿಳಿದದ್ದೇ. ಚಿಕ್ಕ ಚಿಕ್ಕ ಗುಂಪುಗಳಾಗಿ, ನಂತರ ಪುಟ್ಟ ಸಮಾಜಗಳಾಗಿ, ಪುಟ್ಟ ಸಮಾಜಗಳು ದೊಡ್ದ ಸಮಾಜಗಳಾಗಿ, ಪ್ರಾಂತ್ಯ, ರಾಜ್ಯ, ದೇಶಗಳೆಂದು ಬೆಳೆದು ಇಂದು ತಮ್ಮದೇ ವೈಶಿಷ್ಟ್ಯಗಳನ್ನು ಪ್ರದರ್ಶಿಸುತ್ತ ಪ್ರಪಂಚದಲ್ಲಿ ತಮ್ಮ ತಮ್ಮ ಛಾಪು ಮೂಡಿಸುತ್ತಿರುವುದು, ತಮ್ಮ ಜೀವನಕ್ರಮವನ್ನು ಇತರರ ಮೇಲೆ ಹೇರುವ ಪ್ರಯತ್ನ ನಡೆಸುವುದು, ಅದನ್ನು ಇನ್ನೊಂದು ಸಮಾಜ ಪ್ರತಿಭಟಿಸುವುದು, ಕಾಲಾಂತರದಲ್ಲಿ ಒಂದು ಇನ್ನೊಂದನ್ನು ನುಂಗಿ ಹಾಕುವುದು, ಪ್ರತಿದಿನ ಕೇಳಿ, ಓದಿ, ತಿಳಿದ ಸರ್ವವೇದ್ಯ ಸತ್ಯ. ಧರ್ಮ, ದೇಶ, ಜಾತಿ, ನಂಬಿಕೆಗಳು ಮಾನವನನ್ನು ಪ್ರಬಲವಾಗಿ ಪ್ರಚೋದಿಸಬಲ್ಲ ವಿಷಯಗಳು. ಇವೆಲ್ಲವನ್ನು ಭಾವನಾತ್ಮಕವಾಗಿ ಬಂಧಿಸುವ ಸಾಮಾನ್ಯ ಕೊಂಡಿಯೇ ಭಾಷೆ. ಹೀಗಾಗಿ ಭಾಷೆ ಒಂದು ಸಮಾಜದ ಗುಣ-ಲಕ್ಷಣಗಳನ್ನು  ಪ್ರತಿನಿಧಿಸುವ ಅಪೂರ್ವ ಮತ್ತು ಶಕ್ತಿಶಾಲೀ  ಸಾಧನ. ಕರ್ನಾಟಕವೆಂಬ ಪ್ರಾಂತ್ಯದ ಕನ್ನಡಿಗರಿಗೂ ಕೊಂಡಿಯ ರೂಪದಲ್ಲಿ ಕನ್ನಡ ಭಾಷೆಯ ಪ್ರಸ್ತುತತೆ ಅನ್ವಯಿಸುತ್ತದೆ. ಕನ್ನಡವನ್ನು ಕಳೆದುಕೊಂಡಾಗ ನಮ್ಮ ಸ್ವಂತಿಕೆಯೂ ನಶಿಸಿಹೋಗುವುದು ಅನಿವಾರ್ಯವಾಗುತ್ತದೆ. ಹೀಗೆ ಭಾಷೆಯನ್ನು ಕಳೆದುಕೊಳ್ಳುವ  ಪರಿಸ್ಥಿತಿ ಏಕೆ ಬರುತ್ತದೆ? ಇದನ್ನು ಅರಿತುಕೊಳ್ಳಲು, ಮಾನವನ ಅವಶ್ಯಕತೆಯನ್ನು ಪೂರೈಸುವ ಸಾಧನವಾಗಿ ಭಾಷೆಯೊಂದು ಉದಯವಾಗಿ ಬೆಳೆದು ಪ್ರಾದೇಶಿಕತೆ ಮತ್ತು ಬಾಂಧವ್ಯವನ್ನು ಬೆಸೆಯುವ ಪ್ರಕ್ರಿಯೆಯನ್ನು ಮೊದಲು ತಿಳಿಯಬೇಕು.

ಮ್ಯಾಸ್ಲೋ ಮತ್ತು ಮಾನವನ ಅವಶ್ಯಕತೆಗಳ ಶ್ರೇಣಿ: ಭಾಷೆಯ ಬೆಳವಣಿಗೆಗೆ ಸಂಬಂಧಿಸಿದಂತೆ

ಮನುಷ್ಯನ ಅವಶ್ಯಕತೆಗಳನ್ನು ಪೂರೈಸುವ ಸಾಧನವಾಗಿ ಉದಯವಾಗುವ ಭಾಷೆ ಮುಂದೆ ಭಾವನಾತ್ಮಕವಾಗಿ ಜೀವನದೊಂದಿಗೆ ಬೆಸೆದುಕೊಳ್ಳುವ ಪರಿ ಬಹಳ ಆಸಕ್ತಿ ದಾಯಕ. ಮನುಷ್ಯನ ಅಭಿವೃದ್ಧಿಯ ಜೊತೆ ಜೊತೆಗೆ ಭಾವನಾತ್ಮಕ ಅವಶ್ಯಕತೆಗಳನ್ನೂ ಪೂರೈಸಬಲ್ಲದ್ದಾದ್ದರಿಂದ ಭಾಷೆಯ ಸುತ್ತಲೂ ಕೆಲವಾರು ವೃತ್ತಿ -ಪ್ರವೃತ್ತಿಗಳ ಉಗಮವಾಗಿ ಜನರು ಮನರಂಜೆನೆಗೂ, ಮಾಹಿತಿ/ವಿಷಯ ಪರಿಗ್ರಹಣೆಗೂ, ಇನ್ನಿತರ ಸೇವೆ ಸೌಲಭ್ಯಗಳಿಗೂ ಬಳಸುವುದರ ಪರಿಣಾಮವಾಗಿ ಜೀವಾವಶ್ಯಕತೆಗಳ ಎಲ್ಲ ಸ್ಥರಗಳಲ್ಲೂ ಭದ್ರ ಸ್ಥಾನ ಪಡೆಯುತ್ತದೆ ಹಾಗೂ ಜನರ ಅಭಿಮಾನ/ಸರಕಾರಗಳ ಮನ್ನಣೆ /ಪ್ರೋತ್ಸಾಹ ಇತ್ಯಾದಿಗಳು ಭಾಷೆಗೆ ಕಾಲಾಂತರದಲ್ಲಿ ದೊರೆಯುತ್ತದೆ. ಮನುಷ್ಯನ ಅವಶ್ಯಕತೆಗಳು ಮತ್ತು ಆದ್ಯತೆಗಳ ಬಗ್ಗೆ ನೋಡೋಣ.

ಮನುಷ್ಯನ ಅವಶ್ಯಕತೆಗಳನ್ನು ಮ್ಯಾಸ್ಲೋ ಎಂಬ ಮನೋವಿಜ್ಞಾನಿ ಕೆಳಗಿನ ಚಿತ್ರದಲ್ಲಿಯಂತೆ  ವಿವಿಧ ಸ್ತರಗಳಲ್ಲಿ ಶ್ರೇಣೀಕರಿಸಿದ್ದಾನೆ. (ದಯವಿಟ್ಟು ಕೆಳಗಿನಿಂದ ಮೇಲಕ್ಕೆ ಓದಿಕೊಳ್ಳಬೇಕು).

  • ಸ್ವ ಸಾಕ್ಷಾತ್ಕಾರ / ಆತ್ಮ ಸಾಕ್ಷಾತ್ಕಾರ:- ಕಲೋಪಾಸನೆ, ಆಧ್ಯಾತ್ಮ, ತತ್ವಜ್ಞಾನ, ವಿಜ್ಞಾನ, ಆವಿಷ್ಕಾರ. ಲೌಕಿಕ ಆಕರ್ಷಣೆಗಳನ್ನು ಮೀರಿದ ಮನೋಸ್ಥಿತಿಯ ಅನ್ವೇಷಣೆ.
  • ಗೌರವಾದರಗಳ ಹಂಬಲ/ಕಲೋಪಾಸನೆ/ಕಲಾಭಿವ್ಯಕ್ತಿ/ಸಾಮಾಜಿಕ ಘನತೆ:- ನವರಸಗಳ ಅಭಿವ್ಯಕ್ತಿ/ಆದರ,ಪೋಷಣೆ/ಸಮಾಜದಲ್ಲಿ ತನ್ನದೇ ಗುರುತು ಮೂಡಿಸಬಲ್ಲ ಹಂಬಲ/ ಮನೋಸಂಕಲ್ಪ/ಸಂಗೀತ, ಸಾಹಿತ್ಯ/
  • ಸಂಬಂಧಗಳು/ಕುಟುಂಬ/ಸಮರ್ಪಣಾ ಭಾವ:- ಬಹುಮಟ್ಟಿಗೆ ಭಾವನಾತ್ಮಕ ಮಜಲು. ಪ್ರೀತಿ, ಮಮತೆ, ಆದರ/ಗೌರವ/ರೀತಿ/ರಿವಾಜು/ಸಂಪ್ರದಾಯ/ಹೊಣೆ/ಜವಾಬುದಾರಿಕೆ/ಉತ್ತರದಾಯಿತ್ವ
  • ಸುರಕ್ಷಿತತೆಯ ಭಾವನೆ:- ತಂಡಗಳು/ಗುಂಪುಗಳು/ವ್ಯಾವಹಾರಿಕ ಬೆಸುಗೆ/ಸಮಾಜಿಕ ಜೀವನ ಕ್ರಮ
  • ಮೂಲಭೂತ ಅವಶ್ಯಕತೆಗಳು:- ಊಟ/ವಸತಿ/ಬಟ್ಟೆ/ಉದ್ಯೋಗಾಭಿಲಾಶೆ.

ಮನುಷ್ಯನ ಜೀವನ ಈ ಎಲ್ಲ ಅವಶ್ಯಕತೆಗಳನ್ನ ಲಭ್ಯ ಮಾಡಿಕೊಳ್ಳುವುದರ ಅನ್ವೇಷಣೆಯಲ್ಲಿ ಸಾಗಿರುತ್ತದೆ. ಭಾಷೆ ಈ ಅನ್ವೇಷಣೆಯಲ್ಲಿ ಪೂರಕವಾದ ಪಾತ್ರ ಧರಿಸಿದಲ್ಲಿ ಅದರ ಉಳಿವು ಹಾಗೂ ಬೆಳವಣಿಗೆ ಆಯಾಚಿತವಾಗಿ, ಸ್ವಾಭಾವಿಕವಾಗಿ, ಅಪ್ರಯತ್ನಪೂರ್ವಕವಾಗಿ ತಂತಾನೇ ಆಗುತ್ತಾ ಸಾಗುತ್ತದೆ.

ಸುಧಾರಣೆಯ ಹರಿಕಾರ ಬಸವಣ್ಣನವರು ಇದೇ ಸಂದೇಶವನ್ನು ಸರಳ ಕನ್ನಡದಲ್ಲಿ  ೧೨ನೇ ಶತಮಾನದಲ್ಲಿಯೇ ಈ ಕೆಳಗಿನ ವಚನದ ಮೂಲಕ ತಿಳಿಸಿರುವರು:
ಬಡತನಕೆ ಉಂಬುವ ಚಿಂತೆ
ಉಂಬುವುದಾದರೆ ಉಡುವ ಚಿಂತೆ
ಉಡುವುದಾದರೆ ಹೆಂಡಿರ ಚಿಂತೆ
ಹೆಂಡಿರಾದರೆ ಮಕ್ಕಳ ಚಿಂತೆ

ಹೀಗೆ ಅವಶ್ಯಕತೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಪುರಂದರ ದಾಸರು ಹೇಳಿದಂತೆ:
ಇಷ್ಟು ದೊರಕಿದರೆ ಮತ್ತಷ್ಟು ಬೇಕೆಂಬಾಸೆ
ಅಷ್ಟು ದೊರಕಿದರೆ ಮತ್ತಷ್ಟರಾಸೆ
ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ
ನಷ್ಟ ಜೀವನದಾಸೆ ಪುರಂದರಾ ವಿಠಲ.

ಮ್ಯಾಸ್ಲೋ ೨೦ ನೇ ಶತಮಾನದಲ್ಲಿ ಹೇಳಿದ್ದನ್ನು ಕನ್ನಡದ ಮಹಾನುಭಾವರು ಹಿಂದೆಯೇ ಸುಂದರವಾಗಿ ಹೇಳಿದ್ದಾರೆ, ಇರಲಿ.

‘ಮ್ಯಾಸ್ಲೋ’ನ ಪಿರಮಿಡ್ಡನ್ನು ಗಮನಿಸಿ

praveen0ಈ ಎಲ್ಲ  ಹಂತಗಳ ಅವಶ್ಯಕತೆಗಳನ್ನು ಪುರೈಸಬಲ್ಲ ಸಂವಹವನಾ ಸಾಧನವಾಗಿದ್ದಲ್ಲಿ ಭಾಷೆ ಸುಸ್ಥಿತಿಯಲ್ಲಿರುತ್ತದೆ. ಇದನ್ನು  ಮಾತೃ ಭಾಷೆಯ ಮೂಲಕ ಸಾಧ್ಯ ಮಾಡಬೇಕಾದದ್ದು ಅಭಿಮಾನ ಇರಬೇಕಾದ ಆಳುವ ಸಂಸ್ಥೆಯ ಹೊಣೆ. ಹಿಂದಿನ ಮಹಾರಾಜರುಗಳು ಪಾಲಿಸಿ ಪೊಷಿಸಿದ್ದು ಇದೇ ಧ್ಯೇಯವನ್ನೇ. ಇಂದಿನ ಹಲವಾರು ದೇಶಗಳ (ಸ್ವೀಡನ್, ಡೆನ್ಮಾರ್ಕ್, ಜರ್ಮನಿ, ಜಪಾನ್, ಚೀನಾ, ಇಸ್ರೇಲ್, ರಷ್ಯಾ) ಸರಕಾರಗಳು ಮಾಡುತ್ತಿರುವುದೂ ಇದೇ- ಭಾಷೆಯ ಪೋಷಣೆ. ಆದರೆ ಬೇಲಿಯೇ ಎದ್ದು ಹೊಲ ಮೇಯುವ ರೀತಿಯಲ್ಲಿ ನಮ್ಮ ಪುಢಾರಿಗಳು, ದೂರದೃಷ್ಟಿಯಿಲ್ಲದ ಸರಕಾರದ ಕಾರ್ಯವೈಖರಿ, ಕನ್ನಡದ ಹೆಸರಿನ ಸಂಸ್ಥೆಗಳಿಗೆ ಅನುದಾನ ನೀಡಿ ಕೈತೊಳೆದುಕೊಳ್ಳುವ ಬೇಜವಾಬ್ದಾರಿ ಧೋರಣೆ ಕನ್ನಡದ ಉಳಿವಿಗೆ ಪೂರಕವಾಗಿಲ್ಲದಿರುವುದು ಮೇಲುನೋಟಕ್ಕೇ ಕಂಡು ಬರುತ್ತಿದೆ.

ಕನ್ನಡ ಭಾಷೆಗೆ, ಈ ಎಲ್ಲ ಸ್ತರಗಳಲ್ಲೂ ತಂತಮ್ಮ ಅವಶ್ಯಕತೆಗಳನ್ನು ಅರಸುತ್ತಿರುವ ಕನ್ನಡ ಜನಗಳ ಅಭಿಲಾಷೆ ಪೂರೈಸುವ ಸಾಮರ್ಥ್ಯ ಇದೆಯೇ ಎಂದು ಕೇಳಿದರೆ ನಿಸ್ಸಂದೇಹವಾಗಿ ಇದೆ ಎಂದು ಎದೆ ತಟ್ಟಿ ಹೇಳಿಕೊಳ್ಳಬಹುದು. ಆದರೆ ತಂತ್ರಜ್ಞಾನದ ವಿವಿಧ ಶಾಖೆಗಳಲ್ಲಿ ಆದ ಬೆಳವಣಿಗೆಯ ಸ್ಫೋಟ ಮತ್ತು ಜಾಗತೀಕರಣದ ಓಟ ಎರಡೂ ಪ್ರಾರಂಭವಾದ ಸಮಯಕ್ಕೇ ಕನ್ನಡದಲ್ಲಿ ಉನ್ನತ ಶಿಕ್ಷಣ ರೂಪಿಸುವ ಹೊಣೆಗಾರಿಕೆಯಿಂದ ನಮ್ಮ ವಿದ್ಯಾಲಯಗಳು ಮತ್ತು ಸರಕಾರ ಸೋತಿದ್ದರ ಪರಿಣಾಮವಾಗಿ ಇಂದು ಈ ವಿಷಯವಾಗಿ ಕನ್ನಡ ಹಿಂದಿದೆ ಎನ್ನಬಹುದಾದರೂ ಅದು ಸಾಮರ್ಥ್ಯ ಇಲ್ಲವೆಂದಲ್ಲ. ಈ ದಿಶೆಯಲ್ಲಿ ಆಗುತ್ತಿರುವ ಪ್ರಗತಿಪರ ಬದಲಾವಣೆಗಳನ್ನು ಮುಂದೆ ತಿಳಿಸುತ್ತೇನೆ.

praveen0ಏನೆಲ್ಲ ಇದ್ದರೂ ಜನಗಳು ತಮ್ಮ ಬದುಕಿನಲ್ಲಿ ಆದ್ಯತೆ ನೀಡುವ/ ಪ್ರಮುಖವೆಂದು ಭಾವಿಸುವ / ಜೀವನದ ಗುರಿ ಎಂದಿಟ್ಟುಕೊಳ್ಳುವ ಪರಿ ಬೇರೆ ಬೇರೆ ಹಾಗೂ ವೈವಿಧ್ಯಮಯ. ಅವರುಗಳನ್ನು ಈ ಕೆಳಗಿನಂತೆ ವಿಂಗಡಿಸಬಹುದು:
ಎಲ್ಲ ಬಗೆಯ ಅವಶ್ಯಕತೆಗಳನ್ನು ಪೂರೈಸಬಲ್ಲ ಶಕ್ತಿ ಕನ್ನಡಕ್ಕಿದೆಯೆಂದು ಮೇಲೆ ನೋಡಿದೆವು.

( ಚಿತ್ರ ನೋಡಿ)

ಮನೋಧರ್ಮದ ಆದ್ಯತೆ  ಅನುಸಾರ ಕನ್ನಡ ಜನಪದದ ಹರಹು

ಸಮಸ್ತ ಕನ್ನಡಿಗರನ್ನೂ ಅವರ ಜೀವನದಲ್ಲಿ ವಿವಿಧ ಅವಶ್ಯಕತೆಗಳಿಗೆ ಅವರುಗಳು ನೀಡಬಹುದಾದ ಆದ್ಯತೆಯ ಮೇರೆಗೆ ವಿಂಗಡಿಸಿದಲ್ಲಿ ಆ ಜನಸಂಖ್ಯೆಯ ಹರಹು ಕೆಳಗಿನ ಚಿತ್ರದಂತೆ ಕಂಡು ಬರುತ್ತದೆ.

Untitledಬಹುಸಂಖ್ಯಾತ ಸಾಮಾನ್ಯ ಗುಂಪು:
ಬಹುತೇಕ ಜನರು ಮ್ಯಾಸ್ಲೋ ಮನೋವಿಜ್ಞಾನಿ ಹೇಳಿದಂತೆ ಹಸಿವು, ವಸತಿ ಮುಂತಾದ ಮೂಲಭೂತ ಅವಶ್ಯಕತೆಗಳಾದಿಯಾಗಿ ಮೊದಲುಗೊಂಡು ಉನ್ನತ ಸ್ತರದ ಅವಶ್ಯಕತೆಗಳಾದ ಕಲೋಪಾಸನ, ಕಲಾ ಪೋಷಣೆ, ಸಾಮಾಜಿಕ ಸ್ಥಾನಮಾನ ದೊರಕಿಸಿಕೊಳ್ಳುತ್ತಾ  ಆತ್ಮಸಾಕ್ಷಾತ್ಕಾರದ ಕಡೆಗೆ ನಡೆಯುವವರು. ಇವರುಗಳಿಗೆ ಭಾಷೆ ತಮ್ಮ ಉದ್ದೇಶ ಪೂರೈಸುವ ಸಾಧನವಾದರೆ ಮಾತ್ರ ಅದನ್ನು ಪೋಷಿಸಬಲ್ಲರು. ಇವರುಗಳ ಸಂಖ್ಯಾ ಪ್ರಮಾಣ ಹೆಚ್ಚಿರುವ ಕಾರಣ ಭಾಷೆಯ ಉಳಿವಿನಲ್ಲಿ ಮಹತ್ವದ ಪಾತ್ರ ವಹಿಸುವರು. ಈ ಗುಂಪಿನ ಜನಸ್ತೋಮ ತಮ್ಮ ಮೂಲಭೂತ ಅವಶ್ಯಕತೆಗಳು ಪೂರೈಸಿದಾಗ ಸಮಾಜಮುಖಿಗಳಾಗಿ ಉತ್ತಮ ಕೆಲಸ ಮಾಡಬಲ್ಲವರು. ಸರಕಾರಗಳು, ಸಂಘಟನಕಾರರು, ಸಂಘ ಸಂಸ್ಥೆಗಳು ಈ ಸತ್ಯವನ್ನು ಗ್ರಹಿಸಿದರೆ ಕನ್ನಡ ಉಳಿಸುವ ಕೈಂಕರ್ಯದಲ್ಲಿ ಇವರುಗಳನ್ನು ಭಾಗಿಯಾಗಿಸುವ ಯೊಜನೆ ಹಾಕುವುದು ಸುಲಭವಾಗುತ್ತದೆ. ಜೀವನದ ಅತೀ ಅವಶ್ಯಕವೆನ್ನುವ ಸೌಲಭ್ಯಗಳನ್ನು ದಕ್ಕಿಸಿಕೊಂಡ ಇವರುಗಳಲ್ಲಿ ಕನ್ನಡದ ಕಿಚ್ಚನ್ನು ಹೊತ್ತಿಸಿ ಬೆಳೆಸಿದರೆ ಕನ್ನಡದ ಸ್ಥಿತಿಗತಿಗಳು ಉತ್ತಮವಾಗುವುದರಲ್ಲಿ ಅನುಮಾನವಿಲ್ಲ. 

ಉನ್ನತ ಸ್ತರಕ್ಕೆ ಆದ್ಯತೆ ಕೊಡುವವರ ಗುಂಪು

ಬಲಭಾಗದ ತುದಿಯಲ್ಲಿರುವ ಜನಗಳ ಸಂಖ್ಯೆ ಕಡಿಮೆ; ಆದರೆ ಇವರುಗಳ ಆದ್ಯತೆ ಎತ್ತರದ ಸ್ತರದಲ್ಲಿ ಇರುತ್ತದೆ. ಮಹಾ ಕವಿಗಳು, ಸಾಮಾಜಿಕ ಬದಲಾವಣೆಯ ಹರಿಕಾರರು, ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ ಸಕಲವನ್ನೂ ಸಮರ್ಪಿಸಿದ, ನಾಡಿಗಾಗಿ ಹಸಿವು ನಿದ್ರೆಗಳನ್ನು ವರ್ಜಿಸಿದ್ದ ಪ್ರಾತ್ಃಸ್ಮರಣೀಯರು ಇವರು. ಕೈಯ್ಯಾರ ಕಿಯ್ಯಣ್ಣ ರೈ, ಆಲೂರು ವೆಂಕಟರಾಯರು, ಡಿ.ವಿ.ಜಿ ಮುಂತಾದವರನ್ನು ಹೆಸರಿಸಬಹುದು. ಸಮಾಜಮುಖಿ, ಸಾರ್ವತ್ರಿಕ ಹಿತ ಇವರ ಅದ್ಯತೆ.

ಕೆಳಸ್ತರದಲ್ಲಿ ಉಳಿದವರ ಗುಂಪು

ಎಡ ಭಾಗದ ಕೊನೆಯಲ್ಲಿರುವ ಮಂದಿ, ಇವರುಗಳ ಪ್ರಮಾಣವೂ ದೈವ ವಶಾತ್ ಕಡಿಮೆಯೇ. ಸ್ವಾರ್ಥದ ಪರಿಧಿಯಿಂದ ಮೇಲೇರದ ಜನ. ವೈಯಕ್ತಿಕ ಹಿತಾಸಕ್ತಿಗಳು, ವೈಭೋಗ, ಮೋಜು ಇವರುಗಳ ಜೀವನಧರ್ಮ. ಇರುವ ಶಕ್ತಿ, ಕಾಲವನ್ನು ಇವರಿಗಾಗಿ ಸಂವಚಯಿಸುವುದು ವ್ಯರ್ಥ.

ಯಾವುದೇ ಗುಣಲಕ್ಷಣ ಕುರಿತು ನಡೆಸಿದ ಜನಗಣತಿಯ ಹರಹು ಮೇಲಿನ ಗಂಟೆಯಾಕಾರದಲ್ಲಿ ಇರುವುದು ಒಂದು ನೈಸರ್ಗಿಕ ಸತ್ಯ. ಮೂರರಲ್ಲಿ ಎರಡು ಭಾಗ ಸಮಾನ ಅಭಿರುಚಿಯ ಪ್ರಜೆಗಳಿದ್ದರೆ ಇನ್ನುಳಿದ ಜನರು ಎರಡೂ ತುದಿಗಳಲ್ಲಿ ಹಂಚಿಹೋಗಿರುತ್ತಾರೆ. ಬಲಭಾಗದವರಿಂದ ಭಾಷೆಯ ಸುಧಾರಣೆ/ಉನ್ನತ ಚಿಂತನೆಗಳು ಮೂಡಿಬಂದರೆ  ಎಡಭಾಗದ ಜನರು ಕೇವಲ ಬಳಸುವ ಪ್ರವೃತ್ತಿಯವರು . ಇವರುಗಳಿಂದ ಯಾವುದೇ ಸದುದ್ದೇಶಗಳು ಹಾಗೂ ಮಹದುದ್ದೇಶಗಳು ಕೈಗೂಡವು.

ಇದನ್ನು ಅರಿತು ನಮ್ಮ ಕಾರ್ಯ ಸಾಧನೆ ಆಯೋಜಿಸಿಕೊಳ್ಳಬೇಕು.

ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗುವ ಪದಸಮೂಹ ಅಥವಾ ಅವಕಾಶ ಇಂದು ಕನ್ನಡದಲ್ಲಿ ಇಲ್ಲದಿರಬಹುದು; ಅದರೆ ಈ ದಿಶೆಯಲ್ಲಿ ಪ್ರಯತ್ನಗಳು ನಡೆದಿವೆ. ಅಲ್ಲಿಯವರೆಗೂ ಈ ಭಾಷೆಯನ್ನು ಪೋಷಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗುತ್ತದೆ.

ಅವಶ್ಯಕತೆಗಳ ಹಿನ್ನೆಲೆಯಲ್ಲಿ ಭಾಷೆಗಳ ಉದಯ ಮತ್ತು ಪಯಣ (ಜನನದಿಂದ ಮರಣದವರೆಗೆ)

ನುಡಿ ಯಾತ್ರೆ

ನಮ್ಮ ಜೀವನದಂತೆಯೇ ಎಲ್ಲ ಭಾಷೆಗಳು ವಿವಿಧ ಹಂತಗಳನ್ನು ಹಾದು-ಹೊಕ್ಕು ಬೆಳೆಯುತ್ತವೆ. ಆದರೆ ನಮ್ಮ ದೇಹ ಕ್ಷರವಾದದ್ದು. ನಾವೇನೇ ತಿಪ್ಪರಲಾಗಹೊಡೆದರೂ ಒಂದಲ್ಲ ಒಂದು ದಿನ ನಮ್ಮ ಇಹಲೋಕ ಯಾತ್ರೆ ಮುಗಿಸಬೇಕಾದದ್ದು ಒಂದು ಅನಿವಾರ್ಯ ಸತ್ಯ. ಆದರೆ ಭಾಷೆಗೆ ಇದನ್ನು ಮೀರುವ ಸಾಮರ್ಥ್ಯ ಇದೆ. ಅದು ಅಕ್ಷರಗಳಿಂದಾದದ್ದು. ಅ-ಕ್ಷರ -ಅಂದರೆ ಅಳಿವಿಲ್ಲದ್ದು ಎಂದರ್ಥ. ಈ ಸಾಮರ್ಥ್ಯ ಇರುವುದರ ಕಾರಣದಿಂದಲೇ ಭಾಷೆ (ಕನ್ನಡವೂ ಸೇರಿದಂತೆ ) ಸಾವಿರಾರು ವರ್ಷಗಳಿಂದ ಅಳಿಯದೆ ಉಳಿದು-ಬೆಳೆದು ಬಂದಥದ್ದಾಗಿರುತ್ತವೆ. ಇದು ಭಾಷೆಯ ಬಳಕೆ ಇರುವಲ್ಲಿ ಅನ್ವಯಿಸುವಂಥಾ ಮಾತು.. ಭಾಷೆಯ ವಾರಸುದಾರರು ಕನ್ನಡವನ್ನು ತೊರೆದಲ್ಲಿ ಕನ್ನಡ ಭಾಷೆ ನಿಧಾನವಾಗಿ ಅವಸಾನದತ್ತ ಸಾಗುತ್ತದೆ. ಇಂತಹ ಸನ್ನಿವೇಶ ಉದಯವಾದರೆ ಕನ್ನಡ ಭಾಷೆಯ ಉದಯದಿಂದ   ಅಸ್ತಮಾನದ ವರೆಗಿನ  ಪಯಣವನ್ನು ಕೆಳಗಿನಂತೆ ಚಿತ್ರಿಸಬಹುದು

1.ಊರ್ಧ್ವಮುಖ ಬೆಳವಣಿಗೆಗಳು: (ಏರು ಮುಖ)

  • ಮೂಲದಲ್ಲಿ ಮಾತಾ-ಪಿತ-ಮಕ್ಕಳ ಸಂವಹನ (ಕನ್ನಡ)
  • ಮಾತೃ ಭಾಷೆಯ ಜನನ- ಪಾಲನ (ಕನ್ನಡ)
  • ಮಾತೃ ಭಾಷೆಯ ವಿಕಾಸ-ಬೆಳವಣಿಗೆ (ಕನ್ನಡ)

2.ಸ್ಥಿತ್ಯಂತರದ ಹಂತಗಳು: ( ವಿಭ್ರಮಣೆ)

  • ಎರಡನೇ ಭಾಷೆಯ ಆಗಮನ (ಕನ್ನಡ ಮತ್ತು ಇಂಗ್ಲೀಷ್)
  • ಭ್ಹಾಷಾ ತಾರತಮ್ಯತೆ ( ಇಂಗ್ಲೀಷಿಗೆ ವ್ಯಾಮೋಹ ಮತ್ತು ಅತ್ಯಾದರ )

3.ಅಧೋಮುಖ ಹಂತಗಳು: (ಇಳಿ ಮುಖ)

  • ಕನ್ನಡ ಭಾಷಾ ವಿಕಾಸ ಸ್ಥಂಭನ
  • ಕನ್ನಡ ಭಾಷಾ ಸ್ಥಂಭನ
  • ಕನ್ನಡ ನುಡಿ ತಲ್ಲಣ/ನುಡಿ ಕಂಪನ
  • ಕನ್ನಡ ನುಡಿ ಪಲ್ಲಟ
  • ಕನ್ನಡ ನುಡಿ ಹೀನತೆ ( ಭಾಷಾ ಸವಕಳಿ)
  • ಕನ್ನಡ ನುಡಿ ಕ್ಷೀಣತೆ
  • ಕನ್ನಡ ನುಡಿ ಮರಣ

ಈ ಎಲ್ಲ ಮೇಲಿನ ಹಂತಗಳನ್ನೂ ಈಗ  ತಿಳಿಯೋಣ

ಭಾಷೆಯ ಉದಯ-(ಹುಟ್ಟು/ಜನನ):

ಭಾಷೆಯ ಹುಟ್ಟು ಹೇಗೆ ಆಯ್ತು ಎಂಬುದು ಸತತವಾಗಿ ಚರ್ಚೆಗೊಳಪಡುವ ವಿಚಾರ. ಹಲವಾರು ವ್ಯಾಖ್ಯೆಗಳು ಬಂದಿವೆ. ಪ್ರತಿಯೊಂದರ ಉದಯಕ್ಕು/ಆವಿಷ್ಕಾರಕ್ಕೂ ತನ್ನದೇ ಆದ ಕಾರಣ ಅಥವಾ ಅವಶ್ಯಕತೆ ಇರುತ್ತದೆ. ಈ ಅವಶ್ಯಕತೆಗಳನ್ನು ವ್ಯಾವಹಾರಿಕ ಹಾಗೂ ಭಾವನಾತ್ಮಕ ಎಂದು ವಿಂಗಡಿಸಬಹುದು. ಯಾವುದು ಮೊದಲು- ಭಾವನಾತ್ಮಕವೋ? ಇಲ್ಲಾ  ವ್ಯಾವಹಾರಿಕವೋ? ಎಂಬ ಜಿಜ್ಞಾಸೆ ಬಗೆಹರಿದಿಲ್ಲವಾದರೂ, ಭಾವನಾತ್ಮಕ ಕಾರಣವೇ ಪ್ರಧಾನ ಎಂದು ಊಹಿಸಬಹುದು. ಕಾರಣ ಇಷ್ಟೆ– ಎಲ್ಲ ದೇಶಗಳ ನೆಲಗಳನ್ನೂ ತಾಯಿನಾಡು ಎಂದು ಉದ್ಧರಿಸುವುದು ಗೌರವಿಸುವುದು ವಾಡಿಕೆ. ತಾಯಿಯಂತೆ ಅವಶ್ಯಕತೆಗಳನ್ನು ಪೂರೈಸಬಲ್ಲ ನೆಲವೇ, ನಮಗೆ ಜನ್ಮತಾಳಲು, ನಿಲ್ಲುವ ನೆಲೆ ನೀಡಿದ ನೆಲವೇ ತಾಯಿನಾಡು ಎಂದು ನಮ್ಮ ಭಾವಪೂರ್ಣ ನಂಬಿಕೆ. ಜೀವಸಂಕುಲಗಳನ್ನು ಪೊರೆಯುವ ನದಿಗಳನ್ನೂ ಹೆಣ್ಣು-ತಾಯಿ ಎಂದು ಪರಿಗಣಿಸಿ ಪೂಜಿಸುವ ಪರಿಪಾಠವೂ ಇದೆ. (ನದ ಎಂಬುದು `ನದಿ` ಎನ್ನ್ನುವುದರ ಪುಲ್ಲಿಂಗ ವಾಚಕವಾದರೂ ನದಿಗಳ ಹೆಸರಿಗೆ ~’ಸ್ತ್ರೀ’ ಸಂಬೊಧಕ ಪದಗಳ ಬಳಕೆಯೇ ಹೆಚ್ಚು ಪ್ರಚಲಿತದಲ್ಲಿರುವುದು)  ಹಾಗೆಯೇ ಭಾಷೆಯೂ ಕೂಡ ಭಾವನಾತ್ಮಕ ಪ್ರಾಮುಖ್ಯತೆ ಪಡೆದಿರುವುದು ಒಂದು ಅಧ್ಯಾತ್ಮಿಕ ಸತ್ಯ ಎಂದು ವ್ಯಾಖ್ಯಾನಿಸಬಹುದು. ಈಗ ಭಾಷೆಗೆ ಏಕೆ “ತಾಯಿನುಡಿ” ಎಂಬ ಅನ್ವರ್ಥಕ ನಾಮ ಬಂತು ಎಂಬುದು ಯೋಚಿಸಬೇಕಾದ ವಿಚಾರ.

“ತಾಯಿ ನುಡಿ”ಯ ಪರಿಕಲ್ಪನೆ:

ಒಂದು ವ್ಯಾಖ್ಯಾನದ ಪ್ರಕಾರ:- ಮಾನವ ವಿಕಾಸವಾಗುವ ಹಂತದಲ್ಲಿ ಭಾಷೆ ಇರಲಿಲ್ಲ. ವಿಕಾಸ ಪಥದಲ್ಲಿ, ಜೀವನ ಕ್ರಮಗಳಲ್ಲಿ ಆದ ಬದಲಾವಣೆಗಳಿಂದ ಮಾನವನಿಗೆ, ಅದರಲ್ಲೂ ನೆರಳಲ್ಲಿದ್ದುಕೊಂಡು/ಹವಾಮಾನಕ್ಕೆ ಅದರ ವೈಪರೀತ್ಯಗಳಿಗೆ ಮೈಒಡ್ಡುವ ಅನಿವಾರ್ಯತೆಯಿಂದ ತಪ್ಪಿಸಿಕೊಂಡ ಹೆಣ್ಣಿನ ದೇಹದಲ್ಲಿ ಬದಲಾವಣೆಗಳಾಗಿ, ಮೈಮೇಲಿನ ಕೂದಲು (ಉದ್ದ ವಾದ ರೋಮಗಳು) ಹೊರಟು ಹೋದದ್ದರಿಂದ, ಶಿಶುಗಳನ್ನು ಮುಂಚಿನಂತೆ ಸದಾಕಾಲ ಹೊತ್ತು ತಿರುಗಲು ಸಾಧ್ಯವಾಗದೆ ಹೋಯಿತು. ಚಿಕ್ಕ ಮಕ್ಕಳಿಗೂ ಹಿಡಿದುಕೊಳ್ಳಲು ತಾಯಿಯ ಮೈಮೇಲೆ ಯಾವುದೇ ಆಧಾರ ಸಾಕಾಗದೆ ಹೋಯ್ತು. ತಾಯಿಯ ದೇಹವನ್ನು ತಬ್ಬದೆ ದೂರ ಇರುವುದು ಕಂದಮ್ಮಗಳಿಗೆ ಭಯ ಹುಟ್ಟಿಸುವ, ಅವು ರಚ್ಚೆ ಹಿಡಿಯುವ, ಅಳುವ ಕಾರಣವಾಯ್ತು. ಇಂತಹ ಪರಿಸ್ಥಿತಿಯಲ್ಲಿ, ಅವುಗಳಿಗೆ ರಕ್ಷಣೆಯ ಭರವಸೆ ನೀಡುವ, ಆತ್ಮವಿಶ್ವಾಸ ಮೂಡಿಸುವ ಸಂವಹನದ ಮಾಧ್ಯಮವಾಗಿ ಬೆಳೆದ ಸಾಧನವೇ ಭಾಷೆ; ಜೋಗುಳದ ಹಾಡಿನಂತೆ ಪ್ರಾರಂಭವಾದ ಈ ಬಗೆಯ ಸಂವಹನದ ಮೊದಲ ದನಿಗಳು, ಆ ಮೂಲಕ ಮೊದಲ ನುಡಿ ಪದಗಳು ಕಾಲಾನುಕ್ರಮದಲ್ಲಿ ಇತರ ಗುಣಲಕ್ಷಣಗಳನ್ನು ಮೈಗೂಡಿಸಿಕೊಂಡಿರಲೂ ಸಾಕು. ಇದು ಮುಂದೆ ಗುಂಪಿನ ಇತರ ತಾಯಿಯರಿಗೆ ಅಲ್ಲಿಂದ ಕುಟುಂಬ-ಸಮಾಜಕ್ಕೆ ಹರಡಿ ಪೀಳಿಗೆಯಿಂದ ಪೀಳಿಗೆಗೆ ಸಾಗಿಬಂದ ಸಾಧನವೇ ಭಾಷೆ. ಹೀಗೆ ತಾಯಿ- ಮಗುವಿನ ಒಡನಾಟದ ಫಲವಾಗಿ ತಾಯಿಯ ಭರವಸೆಯ ನುಡಿಗಳ ರೂಪದಲ್ಲಿ ಉದಯವಾಗಿರಬಹುದಾದ್ದರಿಂದ ಮೂಲ ಭಾಷೆಗೆ ತಾಯಿ ಭಾಷೆ, ಮಾತೃ ಭಾಷೆ, ತಾಯಿ ನುಡಿ ಎಂದೆನ್ನುವುದು.

ಭಾಷೆ ಮತ್ತು ಅವಶ್ಯಕತೆಗಳ ಪೂರೈಕೆ– ಭಾಷೆಯೆಂಬ ಸಾಧನ

ಈ ರೀತಿಯಾಗಿ ಉದಯವಾದ ಭಾಷೆ ಸಾವಧಾನವಾಗಿ ದೈನಂದಿನ ಇತರ ವ್ಯವಹಾರಗಳಲ್ಲೂ  ಬಳಸಲ್ಪಟ್ಟು ಸಮಾಜದ, ವ್ಯಕ್ತಿಯ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಸಾಧನವಾಗುತ್ತದೆ. ಹೀಗೆ ಭಾವನಾತ್ಮಕ-ವ್ಯಾವಹಾರಿಕ ಜಗತ್ತಿನಲ್ಲಿ ಬೆಳೆದ ನುಡಿ ತನ್ನ ಪರಿಮಿತಿಗಳನ್ನು/ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಾ ಭಾವನೆಗಳು, ಸಂವೇದನೆಗಳು, ಮುಂತಾದ ಉಚ್ಛಸ್ತರದ ಆಲೋಚನೆಗಳ ಅಭಿವ್ಯಕ್ತಿಯ ಮಾಧ್ಯಮವಾಗಿಯೂ ಉಪಯೋಗಿಸಿಕೊಳ್ಳಲ್ಪಡುತ್ತದೆ. ಊಟ, ವಸತಿ, ಭದ್ರತೆಗಳನ್ನು ದೊರಕಿಸಿಕೊಂಡ  ಮನಸ್ಸು ಸುಖ,ಮನರಂಜನೆಗಳಿಗೆ ತೆರೆದು ಕೊಳ್ಳುತ್ತದೆ. ಇದರ ಅನುಭೂತಿ ಭಾಷೆಯ ಮೂಲಕವೇ ಆಗಬೇಕಾದ ಕಾರಣದಿಂದ, ಸಂಗೀತ, ಅನಂತರ ಸಾಹಿತ್ಯ, ಕಥೆ, ಕಾವ್ಯಗಳು ಒಡಮೂಡಿರಬಹುದು. ಇವು ನಿರ್ದಿಷ್ಟ ಜನಪದದಲ್ಲಿ ಹರಡಿದುದಲ್ಲದೆ, ಲೋಕಾನುಭವಗಳು, ಗಾದೆಗಳು, ಒಗಟುಗಳು, ಸಮಾಜದ ಕಟ್ಟು-ಪಾಡುಗಳಿಗೆ ಅನುಸಾರವಾಗಿ ಧಾರ್ಮಿಕ ಭಾವನೆಗಳು, ಅವುಗಳ ಅಂಶಗಳನ್ನೊಳಗೊಂಡ ಕಥೆ ಕಾವ್ಯಗಳು ಕಲಾಂತರದಲ್ಲಿ ಸೇರಿ ಬೆಳೆದು ಭಾಷೆಗೆ ಆ ಸಮಾಜವನ್ನು, ಆ ಮೂಲಕ ಪ್ರಾಂತ್ಯದ ಜನತೆಯನ್ನು ಬೆಸೆಯುವ ಶಕ್ತಿ ಬರುತ್ತದೆ. ಇದಕ್ಕೆ ಲಿಪಿಯ ಬಲವೂ ಸೇರಿದಾಗ ಭಾಷೆಗೆ ಒಂದು ಅಧಿಕೃತತೆಯೂ ದೊರೆತು ಈ ಎಲ್ಲ ಬೆಳವಣಿಗೆಗಳು ಪೀಳಿಗೆಯಿಂದ ಪೀಳಿಗೆಗೆ ಶೃತಿ (ಕೇಳುವುದು), ಸ್ಮೃತಿ (ಮನನ ಮತ್ತು ಜ್ಞಾಪಕ ಇಟ್ಟುಕೊಳ್ಳುವುದು), ಲಿಪಿಗಳ (ಬರಹ) ಮೂಲಕ ರವಾನಿಸಲ್ಪಡುತ್ತದೆ. ಮುಂದೆ ಅಧಿಕಾರ-ಸತ್ತೆಗಳು ಪ್ರವರ್ಧಮಾನಕ್ಕೆ ಬಂದಾಗ ಭಾಷೆಗೆ ಆಡಳಿತಾತ್ಮಕ ಸ್ಥಾನಮಾನಗಳು ದೊರೆತು ತನ್ನ ಹರಹುಗಳನ್ನು ಮತ್ತೂ ವಿಸ್ತರಿಸಿಕೊಳ್ಳುತ್ತಾ ಸಾಗುತ್ತದೆ.

ವೇದ ಉಪನಿಷತ್ತುಗಳು, ಪುರಾಣ-ಪುಣ್ಯಕಥೆಗಳು,ಜಾನಪದ ಗೀತೆ, ಜೋಗಿ-ಜಂಗಮ ಗೀತೆಗಳು, ಜೋಗುಳದ ಹಾಡುಗಳು,ದಾಸವಾಣಿ, ಶರಣರ ವಚನ, ಪಂಪನಿಂದಾದಿಯಾಗಿ ಇಂದಿನ ಎಲ್ಲರ ಬಳಕೆಯಲ್ಲಿರುವ ಕನ್ನಡ ಭಾಷೆಯೂ ಇದೇ ರೀತಿಯಾಗಿ  ತನ್ನದೇ ಆದ ಸ್ಮೃತಿ, ಶೃತಿ ಹಾಗೂ  ಲಿಪಿಯಿಂದ ಕೂಡಿ ಭವ್ಯವಾಗಿ ಬೆಳೆದು ಸುಮಾರು ಸಾವಿರ ವರ್ಷಗಳಿಂದ ಕಂಗೊಳಿಸುತ್ತಿರುವ ಭಾಷೆಯೇ. ಇಂತಹ ಪರಂಪರೆಯ ಸಮೃದ್ಧ ಭಾಷೆಯೊಂದು ಕೇವಲ ಇಪ್ಪತ್ತು ಮೂವತ್ತು ವರ್ಷಗಳಲ್ಲಿ ಗಣನೀಯವಾಗಿ ಕುಸಿಯಿತೆಂದರೆ ಆಘಾತಕರ ವಿಚಾರವಲ್ಲವೇ. ಇದರ ಕಾರಣಗಳನ್ನು ತಿಳಿದರೆ ಸರಿಪಡಿಸುವ ಬಗೆಗೆ ಯೋಚಿಸಲು / ಆ ದಿಶೆಯಲ್ಲಿ ಕಾರ್ಯ ಪ್ರವೃತ್ತರಾಗಲು ಅನುಕೂಲವಾಗಬಹುದು.

ಈ ನಿಟ್ಟಿನಲ್ಲಿ ಮೂಲಭೂತ ಅವಶ್ಯಕತೆಗಳನ್ನು ಪೂರೈಸುತ್ತಾ ಭಾಷೆಯೊಂದು ವಿಕಾಸಗೊಳ್ಳುವ ಪ್ರಕ್ರಿಯೆಯನ್ನು ತಿಳಿಯೋಣ.

ಭಾಷೆಯ ವಿಕಾಸ:

ಮಾನವನ ಜೊತೆಜೊತೆಗೆ, ಸಮಾಜದ ಅವಶ್ಯಕತೆಗಳ ಜೊತೆಗೆ ಭಾಷೆ ವಿಭಿನ್ನ ಆಯಾಮಗಳಲ್ಲಿ ಹೇಗೆ ವಿಕಾಸಗೊಳ್ಳುತ್ತದೆ ಎಂಬುದನ್ನು ಕ್ಷಿಪ್ರವಾಗಿ ಅವಲೋಕಿಸಿದೆವು. ನುಡಿ, ನುಡಿಗಟ್ಟುಗಳು, ಗಾದೆ, ಒಗಟು, ಹಾಡು ಹಸೆ, ಕಥೆ, ಕಾವ್ಯ ಎಲ್ಲವೂ ಬೆಳೆಯುತ್ತಾ ಹೋದಂತೆ ಅದಕ್ಕನುಗುಣವಾಗಿ ವ್ಯಾಕರಣವೂ ರೂಪುಗೊಳ್ಳುತ್ತದೆ. ಲಿಪಿಯಿಂದ ಒಂದಷ್ಟು ಉಳಿದು ಬೆಳೆದರೆ, ಇನ್ನೂ ಕೆಲವು ಕುಲಕಸುಬಿಗೆ, ದೈನಂದಿನ ಆಚರಣೆಗೆ ತಳುಕು ಹಾಕಿಕೊಂಡು ಶೃತಿ ಹಾಗೂ ಸ್ಮೃತಿಯ ರೂಪದಲ್ಲೇ ಪ್ರಸಾರವಾಗಿರುತ್ತವೆ- ಜಾನಪದ, ಜೊಗಿ, ಜಂಗಮ, ಶರಣರ, ದಾಸರ, ಗೊರವರು, ಹಕ್ಕಿ ಪಿಕ್ಕೆಯವರು,ಬಸವಣ್ನನ ಆಡಿಸುವವರು, ಹರಿಕಥೆಗಳ ದಾಸರು, ಬೀದಿ ನಾಟಕದವರು,ಮುಂತಾದವರು ಅಕ್ಷರ ಕಲಿಯದೆಯೂ ಭಾಷೆಯನ್ನು ಅದರ ಸಾರವನ್ನು ಮುಂದಿನ ಪೀಳಿಗೆಗಳಿಗೆ ವರ್ಗಾಯಿಸುವುದನ್ನು ಕಾಣಬಹುದು, ಉದಾಹರಣೆಗಳನ್ನು ಕೊಡಬಹುದು. (ಈಗೀಗ ಧ್ವನಿ ಮುದ್ರಣ, ದೃಶ್ಯ ಮಾಧ್ಯಮದ ಆವಿಷ್ಕಾರ ಆದ ನಂತರದಲ್ಲಿ ಅವುಗಳ ಮೂಲಕವೂ ಸಂಗ್ರಹಿಸಿ ಶೇಖರಿಸಿಡಬಹುದು. ಆದರೆ ಅದನ್ನು ಬಳಸುವ, ಅದರ ಮಹತ್ವ ತಿಳಿದು ಉಳಿಸದ ಪೀಳಿಗೆ ಇಲ್ಲದಿದ್ದಲ್ಲಿ ಈ ಎಲ್ಲ ಕರ್ಮಗಳಿಗೆ ಯಾವುದೇ ಅರ್ಥ ಬರದು.)

ಹೀಗೆ ವ್ಯವಸ್ಥಿತವಾಗಿ, ಒಂದೇ ನುಡಿಯಾಡುವ , ಸಾಮ್ಯತೆ ಇರುವ ಜೀವನ ಧರ್ಮ ಅನುಸರಿಸುವ ಜನಪದ ಇದ್ದಲ್ಲಿ ಕನ್ನಡ ಭಾಷೆ ಸುರಕ್ಷಿತವಾಗಿರುತ್ತದೆ. ಭ್ಹಾಷೆಯನ್ನು ಆಡುವ ವರಸೆ, ಬಳಸುವ ಪರಿ ಭಿನ್ನವಾದರೂ ಲಿಪಿ ಒಂದೇ ಆಗಿದ್ದು, ಸಾಮಾನ್ಯ ಪದಗಳು ಎಲ್ಲರಲ್ಲೂ ಬಳಕೆಯಲ್ಲಿ ಇರುವ ಕಾರಣದಿಂದ ಭಾಷೆ ಶ್ರೀಮಂತವೂ ಆಗಿರುತ್ತದೆ. ನಮ್ಮ ಉತ್ತರ- ದಕ್ಷಿಣ ಕರ್ನಾಟಕಗಳ ಭಾಷೆ,, ಕರಾವಳಿ ಕನ್ನಡದಂತೆ!! ವಿಭಿನ್ನವಾಗಿ ನುಡಿದರೂ ಎಲ್ಲವೂ ಕನ್ನಡವೇ!!

ಕರ್ನಾಟಕದ ಜನಗಳು ಒಂದೇ ಕನ್ನಡ ಆಡುತ್ತಿರುವಲ್ಲಿ, ಭಾಷೆ ಸ್ವಲ್ಪ ರೂಪಾಂತರ ಹೊಂದಿದರೂ,ಪರಿಸ್ಥಿತಿ ಹಾಗೂ ಪ್ರಗತಿಗೆ ಅನುಗುಣವಾಗಿ ಹೊಸ ಹೊಸ ಪದಗಳು ಸೇರಿಕೊಂಡರೂ ಅನ್ಯ ಭಾಷೆಯ ಜನಗಳ ಸಂಪರ್ಕದಿಂದ ಅಯಾ ಭಾಷೆಯ ಕೆಲವು ಪದಗಳು ಮಿಳಿತಗೊಂಡರೂ, ಆ ಹೊಸ ಪದಗಳ ಅರ್ಥ ಸ್ಫುರಿಸುವ ಹೊಸ ಪಾರಿಭಾಷಿಕ ಪದಗಳು ಸೇರಿಕೊಂಡರೂ, ಮೂಲಭಾಷೆ ತನ್ನ ಗತ್ತು ಗೈರತ್ತು,ಛಂದಸ್ಸು, ವ್ಯಾಕರಣ,ಇತ್ಯಾದಿಗಳನ್ನು ಆರೋಗ್ಯಪೂರ್ಣವಾಗಿ ಉಳಿಸಿಕೊಂಡು ಬಂದಿರುತ್ತದೆ.

ಬೇರೆ ಭಾಷೆಯ ಆಕ್ರಮಣದ ಭಯವಿಲ್ಲದ ಕಾರಣ,ಸಾಮಾನ್ಯ ಸಂವಹನದ ಮಾಧ್ಯಮವಾದ ಕಾರಣ, ಜೀವನಾವಶ್ಯಕತೆಗಳನ್ನು  ಪೂರೈಸಬಲ್ಲ ಸಾಧನವಾಗುವ ಕಾರಣದಿಂದ ಕನ್ನಡ, ತನ್ಮೂಲಕ ಅದರ ವಿಶಿಷ್ಟ ಪರಂಪರೆ , ಸುಸ್ಥಿತಿಯಲ್ಲಿರಬಹುದಾದ ಪರಿಸರ ನಿರ್ಮಾಣವಾಗಿ ತಂತಾನೆ ನಿರ್ವಹಣೆಗೊಳಪಟ್ಟಿರುತ್ತದೆ.

ಕಳೆದ ಶತಮಾನದ ಅಂತ್ಯದವರೆಗೂ ಕನ್ನಡದ ವಿಷಯದಲ್ಲಿ ಈ ಪರಿಸ್ಥಿತಿ ಇತ್ತು.

ಅಲ್ಲಲ್ಲಿ ಇಂಗ್ಲೀಷ್ ಶಾಲೆಗಳಿದ್ದರೂ, ಮನೆ, ಸಮಾಜದಲ್ಲಿ ಕನ್ನಡದ ಬಳಕೆ ವ್ಯಾಪಕವಾಗಿದ್ದ ಕಾರಣ ಭಾಷೆಗೆ ಹೆಚ್ಚಿನ ಕುಂದು ಇರಲಿಲ್ಲ.

ತೊಂಭತ್ತರ ದಶಕದಿಂದೀಚೆಗೆ ನಗರೀಕರಣ, ಜಾಗತೀಕರಣ ನೆಪವಾಗಿ ಕನ್ನಡವನ್ನು ಕಡೆಗಣಿಸುವ ಪ್ರಕ್ರಿಯೆ ಪ್ರಾರಂಭವಾಯ್ತು. ಜೊತೆ ಜೊತೆಗೆ ಹಳೆ ತಲೆಮಾರಿನ ಆದರ್ಶ ಶಿಕ್ಷಕರು ಸರಕಾರೀ ಶಾಲೆಗಳಿಂದ ಮರೆಯಾಗಿ ಅನೇಕಾನೇಕ ಹೊಸ ತಲೆಮಾರಿನ ಬಧ್ಧತೆ ಇಲ್ಲದ ಹೊಟ್ಟೇ ಹೊರಕ ಜಂತುಗಳು ಸೇರಿದ ಪರಿಣಾಮ (ಎಲ್ಲರೂ ಅಲ್ಲ; ಇಂದಿಗೂ ನಿಷ್ಠೆಯಿಂದ ದುಡಿಯುವ ಮಹಾನುಭಾವರುಗಳು ಇದ್ದಾರೆ) ಸರಕಾರೀ ಶಾಲೆಗಳ ಗುಣಮಟ್ಟವೂ, ಅದರ ಜೊತೆಯಲ್ಲಿ ಈ ಶಾಲೆಗಳಿಂದ ಮಕ್ಕಳ ವಲಸೆಯೂ ಪ್ರಾರಂಭವಾಗಿ ಅದು ಕಾಳ್ಗಿಚ್ಚಿನೋಪಾದಿಯಲ್ಲಿ, ಪಾರ್ಥೇನಿಯಂ ಹುಲ್ಲಿನ ತೆರದಲ್ಲಿ ಮನೆ ಮನೆಗೂ ಹಬ್ಬಿರುವ ಕಾರಣವನ್ನು ನಾವು ಅವಲೋಕಿಸಬೇಕಾಗಿದೆ.

ಮೂರನೆಯ ಹಂತದ-ಅವಶ್ಯಕತೆ- ಕುಟುಂಬದ ಸಂಬಂಧವಾಗಿ ಮೂಡುವ ಹಲವಾರು ಬಗೆಯ ಮಾನಸಿಕ ಬದಲಾವಣೆಗಳು ಭಾಷೆಯ ಉಳಿವಿನ ಜೊತೆಯಲ್ಲಿ ತಳುಕು ಹಾಕಿಕೊಂಡಿರುವುದನ್ನು ನಾವು ಕಾಣಬಹುದು. ಮನೆಗಳಲ್ಲಿ /ಕುಟುಂಬಗಳಲ್ಲಿ

ರೀತಿ/ರಿವಾಜು/ಧರ್ಮಾಚರಣೆ ಇವುಗಳು ಕಥೆ ,ಕಾವ್ಯ,ಸಾಂಪ್ರದಾಯಿಕ ಆಚರಣೆಗಳ ಮೂಲಕ ಪೀಳಿಗೆಯಿಂದ ಪೀಳಿಗೆಗೆ ಭಾಷೆಯ ರೂಪದಲ್ಲಿ ವರ್ಗಾವಣೆ ಅಗುತ್ತಾ ಹಿರಿಯ,ಮಧ್ಯಮ ಹಾಗೂ ಕಿರಿಯ ಪೀಳಿಗೆಗಳಲ್ಲಿ ಬೆಸುಗೆಯಾಗಿ ಆ ಎಲ್ಲರಲ್ಲೂ ಕಾಣಬಲ್ಲ ಸಾಮಾನ್ಯ ತತ್ವಗಳಾಗಿ ಕೌಟುಂಬಿಕ ,ತನ್ಮೂಲಕ ಸಾಮಾಜಿಕ ಬಾಂಧವ್ಯವನ್ನು ಕಾಯ್ದುಕೊಳ್ಳುತ್ತದೆ. ಭಾಷೆಯ ಪಲ್ಲಟವಾದಾಗ ನಂಬಿಕೆಗಳ ಮತ್ತು ಆಚರಣೆಗಳ ಪಲ್ಲಟವೂ ಕಂಡು ಬಂದು ಈ ಸಮತೋಲನ ಅಸಮತೋಲನದಲ್ಲಿ ಬದಲಾಗಬಹುದು- ಆಗುತ್ತದೆ.

ನಮ್ಮ ಕರ್ನಾಟಕದಲ್ಲಿ ಮನೆ ಮನೆಗಳಲ್ಲಿ ಇರುವ ಪೀಳಿಗೆಗಳಲ್ಲಿನ ಅಂತರ ಗಮನಿಸಿದರೆ ಇದು ಸ್ಪಷ್ಟವಾಗುವುದು. ಅಜ್ಜಿ-ತಾತಂದಿರ ಭಾವನೆಗಳು ಇಂದಿನ ಯುವ ಪೀಳಿಗೆಗೆ ಅರ್ಥಹೀನ ಎನ್ನಿಸಬಹುದು. ಜೀವನವನ್ನು ಕುರಿತ ದೃಷ್ಟಿಕೋನಗಳು ಬದಲಾಗುವುದರಿಂದ ಬಾಂಧವ್ಯ ಶಿಥಿಲವಾಗಿರುವುದನ್ನೂ ಕಾಣಬಹುದು. ಮಧ್ಯಮ ಪೀಳಿಗೆಯ ಪೋಷಕವರ್ಗ ಭಾಷೆಯನ್ನು ಕುರಿತಂತೆ ನಿರ್ಭಾವುಕವಾದಲ್ಲಿ ಯುವ ಪೀಳಿಗೆ ಭಾಷೆಯಿಂದ ವಿಮುಖವಾಗುವ ಸಾಧ್ಯತೆ ಬಹಳ. ಹಬ್ಬ ಹರಿದಿನಗಳು, ಅದರ ಹಿಂದಿರುವ ಸಾಮಾಜಿಕ ಆಶಯಗಳು, ಭಾಷೆಯ ಮೂಲಕ ಕಲಿಯುವ ಸಾಂದರ್ಭಿಕ ಕಥೆ- ಹಾಡು-ಪುರಾಣ-ಕಾವ್ಯಗಳು ಎಲ್ಲವೂ ಕನ್ನಡ ಭಾಷೆಯಿಲ್ಲದಿದ್ದಲ್ಲಿ ನಶಿಸಿಹೋಗುತ್ತವೆ. ಈಗಾಗಲೇ ಈ ಪ್ರಕ್ರಿಯೆ ಶುರು ಆಗಿರುವುದನ್ನು ನಾವು ನೋಡುತ್ತಿದ್ದೇವೆ. ಕನ್ನಡವನನ್ನು ಸರಿಯಾಗಿ ಅರಿಯದ ಪೋಷಕ ವರ್ಗ ಕನ್ನಡದಿಂದ ತಮ್ಮ ಮಕ್ಕಳುಗಳನ್ನು ವಿಮುಖಗೊಳಿಸುತ್ತಿರುವ ಆತಂಕಕಾರೀ ಬದಲಾವಣೆ ಇಂದು ನಗರಗಳಲ್ಲಿ ವ್ಯಾಪಕವಾಗಿ ಕಾಣಬಹುದು.

ಅವಶ್ಯಕತೆಗಳ ಪೂರೈಕೆಯಲ್ಲಿ ಭಾಷಾ ಮಾಧ್ಯಮ

ಒಂದೇ ಭಾಷೆಯು ವ್ಯಾಪಕವಾಗಿ ಬಳಕೆಯಲ್ಲಿದ್ದರೆ ಸಾಮಾಜಿಕ ಪಲ್ಲಟ ಸಾವಧಾನವಾಗಿ ಆಗುತ್ತದೆ ಅಥವಾ ಆಗದೆಯೂ ಇರಬಹುದು. ಜೊತೆಯಲ್ಲಿ ಪರಂಪರೆ ಉಳಿದುಬರಲು ಪೂರಕ ವಾತಾವರಣ ಇರುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ ಎರಡು ಭಾಷೆಗಳು ಬಳಕೆಗೆ ಬಂದು ಹೊರಗಿನ ಭಾಷೆ (ಇಂಗ್ಲೀಷು) ಮೇಲುಗೈ ಸಾಧಿಸಿದಾಗ ಆಗುವ ಬದಲಾವಣೆಗಳು ತೀವ್ರವಾಗಿಯೂ, ಇತರ ಬೆಳವಣಿಗೆಗಳಿಗೆ ಅನುಸಾರವಾಗಿ ಕ್ಷಿಪ್ರವಾಗಿಯೂ ಆಗಬಹುದು. ಈ ವಿದ್ಯಮಾನಗಳನ್ನು ಕನ್ನಡದ ದೃಷ್ಟಿಯಿಂದ  ಗಮನಿಸೋಣ.

ಏಕ ಭಾಷಾ ಪರಿಸರ ಮತ್ತು ಏಕ ಭಾಷಾ ಸಮಾಜ. ( ಕನ್ನಡ ಒಂದೇ ಇರುವಲ್ಲಿ)

ಸಮಾಜದ ಬಹುತೇಕ ಜನರು ಒಂದೇ ಭಾಷೆ ನುಡಿಯುವಲ್ಲಿ ಮೇಲೆ  ನಿರೂಪಿಸಿದ `ಮ್ಯಾಸ್ಲೋ` ನ ಎಲ್ಲ ಸ್ತರಗಳ ಅವಶ್ಯಕತೆಗಳನ್ನೂ ಅದು ಪೂರೈಸುವುದರ ಫಲವಾಗಿ ಭಾಷೆ ಸುಸ್ಥಿತಿಯಲ್ಲಿ ಉಳಿದಿರುತ್ತದೆ.

ಇಂತಹ ಸಮಾಜದಲ್ಲಿ  ಭಾಷೆ ಕಾಲಾಂತರದಲ್ಲಿ ಪಡೆಯಬಹುದಾದ ರೂಪಾಂತರವನ್ನು ಈ ಕೆಳಗಿನಂತೆ ಚಿತ್ರದ ಮೂಲಕ ತೋರಿಸಬಹುದು– ಕನ್ನಡಕ್ಕೆ ಅನ್ವಯಿಸುವಂತೆ

Untitled

ದ್ವಿಭಾಷಾ ಪರಿಸರ: ಕನ್ನಡ ಮತ್ತು ಇಂಗ್ಲೀಷ್  ಎರಡೂ ಭಾಷೆಗಳ ಬಳಕೆ

ಬ್ರಿಟಿಷರ ಆಳ್ವಿಕೆ ಮುಗಿದು ಭಾಷಾವಾರು ಪ್ರ್ಯಾಂತ್ಯಗಳ ರಚನೆಯಾದಮೇಲೂ ಆಯಾ ಪ್ರಾಂತೀಯ ಭಾಷೆಗಳಲ್ಲಿ ಆಡಳಿತಾತ್ಮಕ ವ್ಯವಹಾರ ಸಂಪೂರ್ಣವಾಗಿ ಜಾರಿಗೆ ಬರದ ಕಾರಣ ಕನ್ನಡ ಕಲಿಕಾ ಮಾಧ್ಯಮವಾಗಿದ್ದಾಗ್ಯೂ ಇಂಗ್ಲೀಷ್ ಬಳಕೆ ವ್ಯಾಪಕವಾಗಿ ಉಳಿಯಿತು. ಇದಕ್ಕೆ ಪೂರಕವಾಗಿ ಉನ್ನತ ಶಿಕ್ಷಣಗಳು, ರಾಷ್ಟ್ರೀಯ  ನೇಮಕಾತಿ ಪರೀಕ್ಷೆಗಳು ಇಂಗ್ಲೀಷಿನಲ್ಲೇ ನಡೆದುದರ ಕಾರಣ ಇಂಗ್ಲೀಷಿಗೆ ಸಿಗುವ ಆದ್ಯತೆ ಹೆಚ್ಚುತ್ತಲೇ ಹೋಯಿತು. ಈ ಪರಿಸ್ಥಿತಿ ಯೂರೋಪಿನ ಇತರ ದೇಶಗಳಲ್ಲಿ ಹಾಗೂ ರಾಷ್ಟ್ರೀಯ ಭಾವನೆ ಜಾಗೃತವಾಗಿರುವ ಚೈನಾ ,ರಷ್ಯಾ, ಜ಼ಪಾನ್ ಇನ್ನಿತರ ದೇಶಗಳಲ್ಲಿ ಕಂಡುಬರುವುದಿಲ್ಲ. ಪ್ರಾಪಂಚಿಕ ಬದಲಾವಣೆಗನುಗುಣವಾಗಿ ತಮ್ಮ ತಮ್ಮ ಭಾಷೆಗಳನ್ನು ಅಲ್ಲಿನ ಭಾಷಾ ಯೋಜನಾ ಆಯೋಗಗಳು ಅಚ್ಚುಕಟ್ಟಾಗಿ ನಿಭಾಯಿಸಿ ಇಂಗ್ಲೀಷಿನ ಪದಗಳು ನುಡಿಯಲ್ಲಿ ನುಸುಳದಂತೆ ಹಾಗೂ ಎಲ್ಲ ಹಂತದ ವಿದ್ಯಾಭ್ಯಾಸದಲ್ಲಿ ಕುಂದು ಬರದಂತೆ ನೋಡಿಕೊಂಡಿವೆ. ನಮ್ಮಲ್ಲಿ ಈ ದೂರಗಾಮೀ ಯೋಜನೆಗಳು ಇಲ್ಲವಾದ ಕಾರಣ ಇಂದು ಕನ್ನಡ ಇಂಗ್ಲೀಷಿನಿಂದ ಪ್ರಬಲ ಆಕ್ರಮಣ ಎದುರಿಸಬೇಕಾಗಿದೆ.  ಇಂಗ್ಲೀಷನ್ನು ಕಲಿಸುವ ಸಮಾಜ ಗಳನ್ನು ಎರಡು ವಿಧವಾಗಿ ನೋಡ ಬಹುದು.

  1. ಕನ್ನಡ ( ಮೂಲಭಾಷೆ) ಪ್ರಾಥಮಿಕ ಮಾಧ್ಯಮ ಹಾಗೂ ಇಂಗ್ಲೀಷ್ ಕೇವಲ ಒಂದು ಭಾಷೆಯಾಗಿ ಕಲಿಕೆ. ಕನ್ನಡಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಓದಿ ಬೆಳೆದ ಡಾ.ಎಸ್.ಎಲ್.ಭೈರಪ್ಪ,ಕುಂ.ವೀರಭದ್ರಪ್ಪನವರಂತಹ ಪ್ರಸಿದ್ಧ ಲೇಖಕರುಗಳು, ವಿಜ್ಞಾನಿಗಳು, ತಂತ್ರಜ್ಞಾನಿಗಳು, ಈ ಮಾದರಿಯಲ್ಲಿ ಕಲಿತವರು ನಮ್ಮೆದುರಿಗೆ ಇಂದಿಗೂ ಇದ್ದಾರೆ. ಹೊರದೇಶಗಳಿಗೆ ಹೋಗಿ ಸಾಧನೆಯ ಶಿಖರಗಳನ್ನೂ ಏರಿದ್ದಾರೆ.
  2. ಕನ್ನಡ (ಮೂಲಭಾಷೆ) ಕೇವಲ ಸಂವಹನದ ಭಾಷೆ ಹಾಗೂ ಇಂಗ್ಲೀಷ್ ಮಾಧ್ಯಮ ಭಾಷೆಯಾಗಿ ಎಲ್ಲ ವಿಷಯಗಳ ಕಲಿಕೆ.

ಈ ಮಿಶ್ರತಳಿ ವ್ಯವಸ್ಥೆ ಸಮಾಜದಲ್ಲಿ ಹಲವು ಅನಪೇಕ್ಷಿತ ಬದಲಾವಣೆಗಳಿಗೆ ಕಾರಣವಾಗುತ್ತದೆ.

ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಸುವ ಶಾಲೆಗಳು ಬಹುತೇಕ ನಗರಗಳಲ್ಲಿ ಹಾಗೂ ಪಟ್ಟಣಗಳಲ್ಲಿದ್ದು ಹಳ್ಲಿಗರಿಗೆ  ಸರಕಾರೀ ಶಾಲೆಗಳು ಕಲಿಕಾಕೇಂದ್ರಗಳಾಗುತ್ತವೆ. ಮೂಲಭೂತವಾಗಿ ಇದರಲ್ಲಿ ಯಾವುದೇ ಸಮಸ್ಯೆ ಇಲ್ಲವಾದರೂ, ನಗರವಾಸಿಗಳಿಗೆ, ಉಳ್ಳವರಿಗೆ,ವಿದ್ಯಾವಂತ ಪೋಷಕರ ಮಕ್ಕಳಿಗೆ ಲಭ್ಯವಾಗುವೆ ಆಂಗ್ಲಭಾಷಾ ಮಾಧ್ಯಮ ಜೀವನದಲ್ಲಿ ಸ್ಫರ್ಧೆಗಳು ಬಂದಾಗ ಎದುರಿಸಲು ಸಜ್ಜು ಮಾಡುತ್ತವೆ; ಕಾರಣ ಹೆಚ್ಚುವರಿ ಮಾರ್ಗದರ್ಶನ ಹಾಗೂ ಬೋಧನೆಗೆ ಇಲ್ಲಿ ಅವಕಾಶ ಇರುವುದೇ ಆಗಿರುತ್ತದೆ. ಬುದ್ಧಿವಂತಿಕೆಯಲ್ಲೂ, ಬೇರ್ಯಾವುದೇ ವಿಷಯದಲ್ಲೂ  ಕಡಿಮೆಯಿರದ ಹಳ್ಳೆ ಮಕ್ಕಳು ಹಿಂದೆ ಬೀಳುವುದು ಒಂದು ಮಿಥ್ಯಾ ವಾದಕ್ಕೆ ದಾರಿ ಮಾಡಿಕೊಡುತ್ತದೆ.ಆಂಗ್ಲ ಮಾಧ್ಯಮಕ್ಕೂ ಜೀವನದಲ್ಲಿನ ಯಶಸ್ಸಿಗೂ ಅವಿನಾಭಾವ ಸಂಬಂಧವನ್ನು ಮಿಥ್ಯಾರೋಪಿಸಿ ಕನ್ನಡದಲ್ಲಿ ಕಲಿಯುವ ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಕೀಳರಿಮೆಯನ್ನೂ, ಆತಂಕವನ್ನೂ ಸೃಷ್ಟಿಸಿ ಸಮಾಜವನ್ನು ವಿಭಜಿಸುವ ಪರಿಕ್ರಿಯೆಗೆ ಹಾದಿ ಮಾಡಿಕೊಡುತ್ತದೆ. ಇಂದು ಕರ್ನಾಟಕದಲ್ಲಿ ಸರ್ವವ್ಯಾಪಿಯಾಗಿ ಕಂಡು ಬರುತ್ತಿರುವ ವಿಭಜಿತ ಸಮಾಜ ಈ ದ್ವಿಭಾಷಾ ನೀತಿಯ ಸೃಷ್ಟಿ.

ಕನ್ನಡ ( ಮೂಲಭಾಷೆ) ಪ್ರಾಥಮಿಕ ಮಾಧ್ಯಮ ಹಾಗೂ ಇಂಗ್ಲೀಷ್ ಕೇವಲ ಒಂದು ಹೆಚ್ಚುವರಿ ಭಾಷೆಯಾಗಿ ಮಾತ್ರ ಕಲಿಕೆ.

ಇದು ನಾವೆಲ್ಲಾ ಮಕ್ಕಳಾಗಿದ್ದಾಗ ಬಹುತೇಕ ಇದ್ದ ಪರಿಸ್ಥಿತಿ. ಜನಪದದ ಬಹುಭಾಗ ಮಕ್ಕಳು ಇಂಗ್ಲೀಷನ್ನು ಒಂದು ಭಾಷೆಯಾಗಿ ಕಲಿಯುತ್ತಿದ್ದರೇ ವಿನಃ ಮಾಧ್ಯಮವಾಗಿ ಅಲ್ಲ. ಭಾಷೆಯ ಮೇಲಿನ ಹಿಡಿತ, ಅಭಿಮಾನ, ಭಾಷೆಯ ಮೂಲಕ ಸಂಸ್ಕೃತಿಯ ಅರಿವು, ಭಾಷೆ ಅಷ್ಟೇ ಅಲ್ಲದೆ ಇತರ ಕಲಿಕಾ ವಿಷಯಗಳ ಬಗೆಗೆ ಕುತೂಹಲ, ಅರಿವು  ಮಾತೃ ಭಾಷೆಯ ಮೂಲಕ ಕಲಿಯುವುದರಿಂದ ಸುಲಭ ಸಾಧ್ಯ ಎಂಬುದು ಪ್ರಪಂಚದ ಎಲ್ಲ ಸಂಶೋಧನೆಗಳಿಂದ ಸಾಬೀತಾಗಿರುವುದು ಎಲ್ಲರಿಗೂ ತಿಳಿದದ್ದೆ. ಇಂತಹ ಪರಿಸ್ಥಿತಿಯು ಸಹ ಕನ್ನಡದ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನೇ ನಿರ್ಮಿಸುತ್ತದೆ. ಮತ್ತೊಂದು ಭಾಷೆಯ ಅರಿವು ವ್ಯಕ್ತಿಯ ಜ್ಞಾನಾಭಿವೃದ್ಧಿಗೆ ಸಹಾಯಕ ಮತ್ತು ಆಲೋಚನೆಯ ಪರಿಧಿಯನ್ನು ವಿಸ್ತರಿಸುತ್ತದೆ ಎನ್ನುವುದು ನಿರ್ವಿವಾದ. ಇದೇ ಕಾರಣಕ್ಕೆ ಕನ್ನಡದೊಂದಿಗೆ ಇಂಗ್ಲೀಷನ್ನು ಕಲಿತ ಬಿ.ಎಮ್.ಶ್ರೀ, ಕುವೆಂಪು, ಡಿ.ವಿ. ಜಿ ಇತರರು ಮಹತ್ಸಾಧನೆ ಮಾಡಲು ಸಾಧ್ಯವಾಯಿತು. . ಇದು ಅನುವಾದಗಳಿಗೂ ಪ್ರೇರೇಪಿಸಿ ನಮ್ಮ ಭಾಷಿಗರಿಗೆ ಅನ್ಯ ಭಾಷೆಯ ಜ್ಞಾನ, ಸೊಗಡು ಇತ್ಯಾದಿಗಳನ್ನು ಪರಿಚಯಿಸಲು ಸೂಕ್ತ ವೇದಿಕೆಯನ್ನು ನಿರ್ಮಿಸುತ್ತದೆ. ಪ್ರಪಂಚದ ಹಲವಾರು ದೇಶಗಳು (ಇಸ್ರೇಲ್, ಸ್ವೀಡನ್, ಡೆನ್ಮಾರ್ಕ್, ಜರ್ಮನಿ,ಫ಼್ರಾನ್ಸ್,ಜಪಾನ್, ತೈವಾನ್,ಸ್ಪೈನ್)  ಈ ಮಾದರಿಯನ್ನೇ ಅಲವಡಿಸಿಕೊಂಡು `ಹೊಸಚಿಗುರು-ಹಳೆ ಬೇರು`  ಗಳಿಂದ ಕೂಡಿದ ಸೊಗಸಾದ ಸಂಸ್ಕೃತಿಯ ಕಲ್ಪವೃಕ್ಷವನ್ನು ಕಾಪಾಡಿಕೊಂಡು ಬಂದಿವೆ.

ಕೆಳಗಿನ  ರೇಖಾಚಿತ್ರ ಈ ಪರಿಸ್ಥಿತಿಯ ಸಾರಾಂಶ ಹೇಳುತ್ತದೆ.

Untitledಮೇಲಿನ ಚಿತ್ರವನ್ನು ಗಮನಿಸಿದರೆ ನಿಮಗೆ ಒಂದು ಅಂಶ ಸ್ಪಷ್ಟವಾಗುತ್ತದೆ. ನಮ್ಮ ಕನ್ನಡ ಜೀವನದ ಒಳಭಾಗವನ್ನು ಆವರಿಸಿಕೊಂಡು ತನ್ಮೂಲಕ ಅವಷ್ಯಕತೆಗಳ ಶ್ರೇಣಿಯಲ್ಲಿ ಜನಗಳಿಗೆ ಬೇಕಾದದ್ದನ್ನು ಬಹುತೇಕ ಪೂರೈಸುವ ಕೆಲಸ ಮಾಡುತ್ತದೆ. ಇಂಗ್ಲೀಷ್ ಭಾಷೆ ಹಲವು ಆಯಾಮಗಳಲ್ಲಿ ಹೊಕ್ಕರೂ ಅದರ ಸ್ಥಾನ ಹೊರವಲಯದಲ್ಲಿ ಇರುವುದರ ಕಾರಣದಿಂದ ಸಂಸ್ಕೃತಿ /ಸಾಹಿತ್ಯ /ಸಂಗೀತ /ಆಚರಣೆ /ಪರಂಪರೆ  ಇತ್ಯಾದಿಗಳಲ್ಲಿ ಅದು ಪೂರಕ ಪಾತ್ರವೇ ಹೊರತು ಮಾರಕ ವಾಗಿರುವುದಿಲ್ಲ. ಈ ಸರಹದ್ದನ್ನು  ಎರಡನೇ ಭಾಷೆ (ಇಂಗ್ಲೀಷ್) ದಾಟಿದರೆ ಭಾಷೆಯನ್ನು ಭಾಷೆ ನುಂಗುವ ಸಾಧ್ಯತೆ ಉಂಟಾಗಿ ನುಡಿ ನಲುಗುತ್ತದೆ.

ಕನ್ನಡದ ಮಟ್ಟಿಗೂ, ಈ ಸುಭದ್ರ ಪರಿಸ್ಥಿತಿಯನ್ನು ನಿರ್ಮಿಸಲು ಸಾಧ್ಯ. ಇಂಗ್ಲೀಷ್ ಇಂದಿನ ಜಾಗತೀಕರಣದ ವ್ಯವಸ್ಥೆಯಲ್ಲಿ ಅನಿವಾರ್ಯ ಭಾಷೆಯಾಗಿರುವುದು ಖಂಡಿತ. ಆದರೆ ಅದನ್ನು ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಸಿಕೊಂಡು  ನಮ್ಮ ಕನ್ನಡವನ್ನು ಹೊಸಕಿ ಕೊಂದುಹಾಕುವುದು ಎಷ್ಟರಮಟ್ಟಿಗೆ ಶ್ರೇಯಸ್ಕರ ಹಾಗೂ ಸಮಂಜಸ ಮತ್ತು ಅವಶ್ಯಕವೇ ಎನ್ನುವ ಪ್ರಶ್ನೆಯನ್ನು ನಾವೆಲ್ಲರೂ ಕೇಳಿಕೊಳ್ಳಬೇಕಾಗಿದೆ. ಇಂಗ್ಲೀಷಿನ ಜೊತೆಗೇ  ಕಡ್ಡಾಯ ಕನ್ನಡವನ್ನೂ ಕಲಿಯುವುದು ಸಾಧ್ಯ ಹಾಗೂ ಸಾಧುವಾದ ಕಾರ್ಯವೂ ಹೌದು.

ತಮ್ಮ ಮಕ್ಕಳಿಗೆ ಲ್ಯಾಟಿನ್, ಸ್ಪ್ಯಾನಿಷ್, ಫ್ರೆಂಚ್  ಭಾಷೆಗಳನ್ನು ಕಲಿಸಲು ತೋರುವ ಉತ್ಸುಕತೆ ಇಂದಿನ ಕನ್ನಡಿಗರಲ್ಲಿ ಕನ್ನಡವನ್ನು ಮಕ್ಕಳಿಗೆ ಕಲಿಸುವುದರಲ್ಲಿ ಇಲ್ಲವೆಂಬುದು ಎದೆ ಬಿರಿಯುವ ವಿಚಾರ.

ದ್ವಿಭಾಷಾ ಪರಿಸರ– (ಎರಡು ಭಾಷೆಗಳಿಗೆ ಸಮಾನ ಸ್ಥಾನ ನೀಡುವಲ್ಲಿ)

ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಇಂಗ್ಲೀಷ್  ಪ್ರಾತಿನಿಧ್ಯ ಪಡೆದು ಮೇಲುಗೈ ಸಾಧಿಸಿದಾಗ

ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇಂಗ್ಲೀಷ್ ಪ್ರಾಥಮಿಕ ಮಾಧ್ಯಮವಾಗಿ ಕನ್ನಡ ಒಂದು ಭಾಷೆಯಷ್ಟೇ ಆಗಿ ಕಲಿಸಲ್ಪಟ್ಟರೆ ಹಲವಾರು ಅನಪೇಕ್ಷಿತ ದುಷ್ಪರಿಣಾಮಗಳು ಭಾಷೆಯ ಮೇಲೂ ಅದನ್ನು ಆಡುವ ಜನ ಸಮುದಾಯದ ಮೇಲೂ ಆಗುತ್ತವೆ.

  1. ಕನ್ನಡ ಪ್ರಥಮ, ದ್ವಿತೀಯ, ತೃತೀಯ ಸ್ಥಾನಕ್ಕೆ ನೂಕಲ್ಪಡುತ್ತದೆ
  2. ಕನ್ನಡ ಭಾಷೆಯ ಕಲಿಕೆ ಕಡ್ಡಾಯ ಆಗದಿದ್ದ ಪಕ್ಷದಲ್ಲಿ ಅದನ್ನು ವರ್ಜಿಸಲೂ ಬಹುದು
  3. ಹೀಗೆ ಕಲಿಯುವ ಕನ್ನಡ ಭಾಷೆಗೆ ವ್ಯಾವಹಾರಿಕ ಸ್ಥಾನಮಾನ ಸಿಗದೇ ಹೋದಲ್ಲಿ ಕಾಟಾಚಾರಕ್ಕೆ ಕಲಿಯುವ ಪ್ರಕ್ರಿಯೆಗೆ ಚಾಲನೆ ಸಿಗುತ್ತದೆ. ಕಾಟಾಚಾರಕ್ಕೆ ಕಲಿತದ್ದು ಅಭಿಮಾನ ಹೇಗೆ ತಾನೇ ಮೂಡಿಸಬಲ್ಲದು?
  4. ಕನ್ನಡ ಭಾಷೆಯಲ್ಲಿ ಅನ್ಯ ಭಾಷೆಯ ಪರಿಣಾಮೆ ಸಹಜವಾಗಿಯೇ ಹೆಚ್ಚುತ್ತಾ ಹೋಗುತ್ತದೆ- ಇದಕ್ಕೆ ಕಾರಣ ಮಾನವನ ಸಹಜ ಸೋಂಬೇರೀ ಪ್ರವೃತ್ತಿ. ಮಾಧ್ಯಮದಲ್ಲಿ ಕಲಿಯದಿದ್ದಾಗ ಸಮಾನಾರ್ಥಕ ಪಾರಿಭಾಷಿಕ ಪದಗಳ ಜ್ಞಾನ ಕಡಿಮೆ ಇರುವ ಕಾರಣ, ಇಂಗ್ಲೀಷಿನ ಪದಗಳನ್ನು ಸೇರಿಸಿ ಕನ್ನಡ ಮಾತನಾಡುವ ಅಭ್ಯಾಸ ಪ್ರಾರಂಭವಾಗಿ ಸೋಂಕುರೋಗದ ರೂಪದಲ್ಲಿ ಸರ್ವವ್ಯಾಪಿಯಾಗಿ ಹರಡುತ್ತದೆ. ಇಂದು ಕನ್ನಡದ ಪರಿಸ್ಥಿತಿ ಇದೇ ಆಗಿರುವುದು ಸರ್ವ ವೇದ್ಯ.
  5. ಮಾಧ್ಯಮ ಭಾಷೆಯಾಗಿ ಇಂಗ್ಲೀಷ್ ಪ್ರಾಧಾನ್ಯತೆ ಪಡೆದ ನಂತರ ವಿದ್ಯಾಭ್ಯಾಸದಲ್ಲೂ, ಕೆಲಸ ಕಾರ್ಯಗಳಲ್ಲೂ, ಉನ್ನತ ಶಿಕ್ಷಣದಲ್ಲೂ ನುಸುಳುವ ಅನಿವಾರ್ಯತೆಯಿಂದಾಗಿ, ಮಾತೃಭಾಷೆಯ ಕಲಿಕೆ ಕೇವಲ ಹೇರಿಕೆಯಂತೆ ಕಂಡು ಬರುವುದು ಸಾಧ್ಯ. ಪೋಷಕರೂ, ಮಕ್ಕಳೂ ಈ ಭಾಷೆಯನ್ನು ಕಲಿಯುವುದರ ಪ್ರಸ್ತುತತೆಯನ್ನು ಪ್ರಶ್ನಿಸಲು ಪ್ರಯತ್ನಿಸುವರು.

ಈ ಬದಲಾವಣೆಗಳು ದೇಹಕ್ಕೆ ಸುಳಿವು ಕೊಡದೆ ಬೆಳೆಯುವ ಮಾರಣಾಂತಿಕ ಕ್ಯಾನ್ಸರ್ (ಅರ್ಭುದ) ಖಾಯಿಲೆಯಂತೆ ನಿಧಾನವಾಗಿ ನಡೆಯುವ ಪ್ರಕ್ರಿಯೆ ಆದ್ದರಿಂದ ಕನ್ನಡ ಭಾಷೆಯ ಸ್ವಾಸ್ಥ್ಯ ಕಾಪಾಡಲು ಈ ರೀತಿಯ ಬದಲಾವಣೆಗಳ ಮೇಲೆ ಗಮನ ಇಡುವುದು ಅವಶ್ಯಕವಾಗುತ್ತದೆ. ಈ ಕನ್ನಡ ನುಡಿ ಮರಣದ ಪ್ರಕ್ರಿಯೆಯನ್ನು ಈ ಕೆಳಗಿನ ರೇಖಾಚಿತ್ರದಲ್ಲಿರುವಂತೆ ವಿಶ್ಲೇಷಿಸಬಹುದು ಯಾವುದೇ ಭಾಷೆ ಸಧೃಢವಾಗಿರಬೇಕಾದರೆ ಅದನ್ನು ಬಳಸುವ ಯುವ ಪೀಳಿಗೆಯ ಸಂಖ್ಯೆ ದೊಡ್ಡದಿರಬೇಕು. ಯುವ ಪೀಳಿಗೆಯು ಕನ್ನಡದಿಂದ ವಿಮುಖವಾದರೆ ಬಳಕೆದಾರರಿಲ್ಲದೆ ಸೊರಗುವ ಉದ್ಯಮದಂತೆ ಭಾಷೆಯೂ ಸೊರಗುತ್ತಾ ಹೋಗುತ್ತದೆ.

ಹಂತಗಳನ್ನು ಕೆಳಗಿನಂತೆ ವರ್ಗೀಕರಿಸಬಹುದು.

 Untitledಈ ಮೊದಲು ಮೇಲೆ ವಿವರಿಸಿದ ದ್ವಿಭಾಷಾ ನೀತಿಯು ಸಮಾಜವನ್ನು ಒಡೆಯಬಹುದಾದ ಸಾಧ್ಯತೆಯನ್ನು ನೋಡಿದೆವು.ಈ ರೀತಿಯ ಶ್ರೇಣೀಕೃತ ಸಮಾಜ ಕೇವಲ ಭಾಷಾ ಮಾಧ್ಯಮದ ಕೃತಕ ಸೃಷ್ಟಿಯಾದ   ಸನ್ನಿವೇಶವನ್ನು ಖಾಸಗೀ ಸಂಘ ಸಂಸ್ಥೆಗಳು, ಪಟ್ಟಭದ್ರ ಹಿತಾಸಕ್ತಿಗಳು, ಅವಿವೇಕೀ ರಾಜಕಾರಿಣಿಗಳು,  ದುರುಪಯೋಗಪಡಿಸಿಕೊಂಡು ಜೀವನದ ಯಶಸ್ಸಿನ ಹುಡುಕಾಟದಲ್ಲಿರುವ ಪ್ರಜೆಗಳ ಆತಂಕವನ್ನೇ ಬಂಡವಾಳವಾಗಿಸಿಕೊಂಡು ಆಂಗ್ಲ ಮಾಧ್ಯಮಶಾಲೆಗಳನ್ನು ಎಲ್ಲೆಲ್ಲಿಯೂ ತೆರೆಯುತ್ತಿರುವುದನ್ನು ನಾವಿಂದು ಕಾಣುತ್ತಿದ್ದೇವೆ. ಶಿಕ್ಷಣ ಮೌಲ್ಯಾಧಾರಿತವಾಗಿರದೆ ಹಾಗೂ  ಗುಣಮಟ್ಟದಿಂದ ಕೂಡಿರದಿದ್ದಾಗ್ಯೂ ಹಣ ಸುಲಿಯುವ ವ್ಯಾಪಾರೀ ವೃತ್ತಿಯನ್ನಾಗಿ ಮಾಡಿಕೊಂಡಿರುವುದು ಸರ್ವವಿದಿತ. ೮೦-೯೦ ರ ದಶಕಗಳಲ್ಲಿ ದೊಡ್ಡ ನಗರ ಪ್ರದೇಶಗಳಲ್ಲಿದ್ದ ಉತ್ತಮ ದರ್ಜೆಯ ಖಾಸಗೀಶಾಲೆಗಳು ರ್ಯಾಂಕ್ ವಿಜೇತರ ಪಟ್ಟಿ ಪ್ರಕಟಿಸಿ ಪ್ರಚಾರ ಗಿಟ್ಟಿಸಿಕೊಂಡಿದ್ದು ಖಾಸಗೀ ಶಾಲೆಗಳೆಂದರೆ ಯಶಸ್ವೀ ವಿದ್ಯಾಭ್ಯಾಸದ ತಾನಗಳೆಂಬ ಭಾವನೆ ಜನಗಳಲ್ಲಿ ಮೂಡಿತು. ಇದಕ್ಕೆ ವ್ಯತಿರಿಕ್ತವಾಗಿ ಸರಕಾರೀ ಶಾಲೆಯ ಮಕ್ಕಳಿಗೆ ಯಾವ ಪ್ರಚಾರವೂ ದೊರೆಯದಾಯಿತು. ಜೊತೆಗೆ ಸರಕಾರಗಳ ನಿರ್ಲಕ್ಷ್ಯ, ಅನರ್ಹ ಶಿಕ್ಷಕರ ನೇಮಕ ಮುಂತಾದ ದೊಂಬರಾಟಗಳಿಂದ ಜನ ಕನ್ನಡ ಶಾಲೆಗಳಿಂದ ವಿಮುಖರಾಗುರತ್ತ ನಡೆದರು. ಸರಕಾರೀ ಶಾಲೆಯಲ್ಲಿ ಓದಿದ (ನನ್ನನ್ನೂ ಒಳಗೊಂಡು) ಎಷ್ಟೋ ಜನ ಖಾಸಗೀ ಶಾಲೆಯ ಮಕ್ಕಳಿಗೆ ಸಮನಾಗಿ ಸಾಧನೆ ಮಾಡಿದ್ದಾರೆ. ಆದರೆ ಅದರ ತಿಳಿವು ಪ್ರಜೆಗಳಿಗೆ ಇಂದು ಇಲ್ಲವಾಗಿದೆ.

ಖಾಸಗೀ ಅಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಸ್ಫರ್ಧಾತ್ಮಕ ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಹಾಗೂ ಗ್ರಾಮ ಮೂಲದ ಸರಕಾರೀ ಕನ್ನಡ ಶಾಲೆಯ ಮಕ್ಕಳು ಹಿಂದೆ ಬೀಳುವ ಮೂಲ ಕಾರಣಗಳನ್ನು ಹುಡುಕೋಣ

  • ಬುದ್ಧಿವಂತಿಕೆ: ಇದು ಯಾರೊಬ್ಬರ ಸ್ವತ್ತೂ ಅಲ್ಲ. ಈ ಮಕ್ಕಳ ತಂದೆ-ತಾಯಿಯರು ಬಹುತೇಕ ವಿದ್ಯಾವಂತರಾಗಿದ್ದು ಮಕ್ಕಳ ಕಲಿಕೆಯಲ್ಲಿ ವೈಯಕ್ತಿಕ ಆಸಕ್ತಿ ತೋರುವುದರ ಫಲ. ಅದು ಅಲ್ಲದೆ ಇವರಲ್ಲಿ ಸಂಪನ್ಮೂಲಗಳು ಇರುವ ಕಾರಣದಿಂದ ಹೆಚ್ಚುವರಿ ಪಾಠ- ಪ್ರವಚನಗಳನ್ನು ಮಕ್ಕಳಿಗೆ ಕೊಡಿಸಬಲ್ಲವರಾಗಿರುತ್ತಾರೆ. ಶಾಲೆಯಲ್ಲಿ ಸಿಕ್ಕದ ಬೋಧನೆ ಮತ್ತು ಕಲಿಕೆ ಹೊರಗಿನ ಪಾಠಗಳಿಂದ ಲಭ್ಯವಾಗುತ್ತದೆ.
  • ಇಂಗ್ಲೀಷ್ ಸುಯೋಗ– ಕಲಿಕೆ ಸರಾಗ: ಇದು ಸ್ವಲ್ಪ ಮಟ್ಟಿಗೆ ಸತ್ಯವಾದರೂ ಪೂರ್ಣ ಅಲ್ಲ. ಇಂಗ್ಲೀಷ್ ಕಲಿತ ಮಕ್ಕಳು ಮೊದ ಮೊದಲಲ್ಲಿ ಸ್ವಲ್ಪ ಮುಂಚೂಣಿಯಲ್ಲಿದ್ದರೂ, ಸತತ ಪರಿಶ್ರಮದಿಂದ ಈ ಅಂತರವನ್ನು ಮೀರುವ ಸಾಮರ್ಥ್ಯ ಕನ್ನಡದಲ್ಲಿ ಕಲಿತ ಮಕ್ಕಳಿಗೂ ಇರುತ್ತದೆ. ಸಾಧನೆ ಮಾಡಿದ ಮಹನೀಯರಲ್ಲಿ ಅನೇಕ ಜನ ತಮ್ಮ ತಾಯಿ ಭಾಷೆಯಲ್ಲಿ ಓದಿದವರೇ ಆಗಿರುತ್ತಾರೆ. ಇಂಗ್ಲೀಷ್ ಶಾಲೆಗೆ ಹೋಗಿ ಸಫಲರಾದ ವಿದ್ಯಾರ್ಥಿಗಳ ಸಮಾಜಿಕ ಹಾಗೂ ಕೌಟುಂಬಿಕ ಪರಿಸರವನ್ನು ಗಮನಿಸಿದಾಗ ಅವರ ಅರ್ಥಿಕ ಚೈತನ್ಯ, ಪೋಷಕರ ಸಹಕಾರ, ಮಾರ್ಗದರ್ಶನ, ಹೆಚ್ಚುವರಿ ಮನೆ ಪಾಠ, ಹೊರಗಿನ ತರಬೇತಿ, ಸಂಪನ್ಮೂಲಗಳ ಹರಿವು ಎಲ್ಲವೂ ಇವರಿಗೆ ಒದಗಿರುವುದು ಸ್ಪಷ್ಟ.
  • ಇದಕ್ಕೆ ವಿರುದ್ಧವಾಗಿ ಸರಕಾರೀ ಶಾಲೆಗೆ ಹೋಗುವ ಮಕ್ಕಳಿಗೆ ಹಲವಾರು ಸವಾಲುಗಳು ಎದುರಾಗುತ್ತವೆ. ಇಲ್ಲಿ ಭಾಷಾಮಾಧ್ಯಮ ಬೆದರುಬೊಂಬೆಯ ರೂಪದಲ್ಲಿ ಬಲಿಪಶು ಆಗುವುದು ಆಧುನಿಕ ಜಗತ್ತಿನ, ಸತ್ಯವನ್ನು ಅರಸದೆ ಸುಲಭ ಸುಳ್ಳಿಗೆ ಬಲಿಯಾಗುವ ಸಮಾಜದ ಮೌಢ್ಯ ಪ್ರವೃತ್ತಿಯ ವಿಪರ್ಯಾಸ.
    • ಪೋಷಕರ ಆರ್ಥಿಕ ಮುಗ್ಗಟ್ಟು
    • ಶಾಲೆಗಳಲ್ಲಿ ಸಂಪನ್ಮೂಲಗಳ ಕೊರತೆ
    • ಉತ್ತಮ ಶಿಕ್ಷಕರ ಕೊರತೆ
      • ನೇಮಕಾತಿಯಲ್ಲಿ ಅರ್ಹತೆಯ ಕಡೆಗಣನೆ
      • ಜಾತಿ- ಲಂಚ-ವಶೀಲಿಗೆ ಮಣೆ
      • ಹಳ್ಲಿಗಳಿಗೆ ಹೋಗಲು ಶಿಕ್ಷಕರ ನಿರಾಕರಣೆ
    • ಮನೆ ಪಾಠ- ಹೆಚ್ಚುವರಿ ಬೋಧನೆಯ ಕೊರತೆ
    • ಅವಿದ್ಯಾವಂತ ಪೋಷಕರು

ಈ ಎಲ್ಲ ಅವ್ಯವಸ್ಥೆಗಳ ನಡುವೆಯೂ ಅರಳಿದ ಎಷ್ಟೋ ಪ್ರತಿಭೆಗಳು ಇಂದಿಗೂ ನಮ್ಮ ಕಣ್ಮುಂದೆ ಇವೆ. ಆದರೆ ಪ್ರತಿಷ್ಟೆ ಹಾಗೂ ಮಾಧ್ಯಮದ -ಭಾಷೆಯ ಮೇಲಿನ ಹುಸಿ ಅಪನಂಬಿಕೆಯಿಂದ ಲಕ್ಷಾಂತರ ರುಪಾಯಿಗಳನ್ನು ನೀರಿನಂತೆ ಖರ್ಚು ಮಾಡುವ ಸಮಾಜ ನಮ್ಮಲ್ಲಿ ಈಗ ಸೃಷ್ಟಿಯಾಗಿದೆ.

ದ್ವಿಭಾಷಾ ವ್ಯವಸ್ಥೆಯ ಮುಂಪರಿಣಾಮಗಳು.

ಕನ್ನಡ ಕಂಗ್ಲೀಷ ಆಗುವುದರ ವೈಪರೀತ್ಯಗಳು

Untitled

ತೋಟದಂಚಿನಲೆಲ್ಲೊ ಬೆಳೆದಿದ್ದ ಕಳೆಹುಲ್ಲು
ನೋಟವನು ತಪ್ಪಿಸುತ ಒಳನುಗ್ಗುತಿಹುದಲ್ಲೊ
ದಿಟವಾಗಿ ಕಿತ್ತೆಸೆದು ತೊಡೆಯದಿರೆ ನೀನು
ಕಾಟಕ್ಕೆ ಗಿಡಬಳ್ಳಿ  ಸೊರಗದಿಹವೇನು?

ಆಂಗ್ಲ ಭಾಷೆಯ ಪದವು ಕನ್ನಡದಿ ಬೆರೆತಿರಲು
ಆಂಗ್ಲ ಪದಗಳೆ ನಮ್ಮ ಮಾತೆಲ್ಲ ತುಂಬಿರಲು
ಕಳೆ ಬೆಳೆದ ತೋಟದಂತೆಮ್ಮ ನುಡಿ ಸೊರಗಿರಲು
ಗೆಳೆಯ ಬರುವೆಯ ಜೊತೆಗೆ ಕಳೆಯ ಕಿತ್ತೊಗೆಯಲು!

Untitled

ಇಂಗ್ಲೀಷ್ ಪ್ರಾಬಲ್ಯ ಹೆಚ್ಚುವ ಕಾರಣಗಳು:

Untitled


ಜಾಗತೀಕರಣ
ಹಾಗೂ ಕನ್ನಡದ ಅವಗಣನೆ:

Untitled

ನುಡಿ ಪಯಣ ( ಜನನದಿಂದ ಮರಣದ ವರೆಗೆ).

ಮೊದಲು ಹೇಳಿದಂತೆ ಅಕ್ಷರಗಳಿಂದಾದ ಕನ್ನಡ ಭಾಷೆಗೆ ಕ್ಷರವಾಗದೆ ಉಳಿಯುವ ಸಾಮರ್ಥ್ಯ, ಚೈತನ್ಯ, ಜೀವಂತಿಕೆ ಎಲ್ಲವೂ ಇವೆ ಆದರೆ ಭಾಷೆ ಬಳಕೆಯಲ್ಲಿದ್ದಾಗ ಮಾತ್ರ ಇದು ಸತ್ಯ ಸಾಧ್ಯ. ಇಲ್ಲವಾದಲ್ಲಿ ಭಾಷೆಯು ಮರಣಹೊಂದುತ್ತದೆ.

ಹಾಗಾದರೆ ಈ ಭಾಷೆಯನ್ನು ಕೊಲ್ಲುವವರು ಯಾರು?

ಎಂದರೆ ಉತ್ತರ ಸ್ಪಷ್ಟ– ಭಾಷೆಯ ಜನರೇ ಅದನ್ನು ಕೊಲ್ಲುವುದು. ತಾಯಿಯನ್ನು ತೊರೆದ ಮಕ್ಕಳ ರೀತಿಯಲ್ಲಿ. ಇದಕ್ಕೆ ಬೇರೆ ಭಾಷೆ, ಸಂಸ್ಕೃತಿ, ಆಕ್ರಮಣ ಇತ್ಯಾದಿಗಳು ನೆಪ ಮಾತ್ರ. ಮೂಲ ದೋಷ ಕನ್ನಡವನ್ನಾಡುವ ಜನರಲ್ಲೇ ಇರಲು ಬೇರಯವರನ್ನು ದೂಷಿಸುವ ದುಸ್ಸಾಹಸವೇಕೆ?

ಹರ ಕೊಲ್ಲಲ್ ಪರ ಕಾಯ್ವನೇ???

ಕನ್ನಡ ಭಾಷೆ ಸಧೃಢ-ಸಮೃದ್ಧ-ಸ್ವಸ್ಥ ವಾಗಿರಬೇಕಾದರೆ ಅದನ್ನು ನುಡಿಯಬಲ್ಲ, ಬಳಸಬಲ್ಲ, ಆದರಿಸಿ ಪೋಷಿಸಬಲ್ಲ ಯುವ ಪೀಳಿಗೆ ಇರುವುದು ಅತಿ ಮುಖ್ಯ ಅಂಶ. ಇಂದು ನಾವುಗಳು ಎಡವುತ್ತಿರುವುದು ಈ ವಿಷಯದಲ್ಲೇ. ನಮ್ಮ ಮಕ್ಕಳು, ಯುವಜನತೆಯಲ್ಲಿ ಅಭಿಮಾನ ಮೂಡಿಸಿ ಪ್ರಚೊದಿಸುವಲ್ಲಿ ಸೋಲುತ್ತಿದ್ದೇವೆ. ಭಾಷಾ ಮಾಧ್ಯಮ ಕುರಿತ ತೀರ್ಪು ಇದೇ ಕಾರಣಕ್ಕೆ ಮಹತ್ವ ಪಡೆದುಕೊಳ್ಳುತ್ತದೆ. ಹೀಗೆ ಯುವ ಪೀಳಿಗೆಯಿಂದ ಕಡೆಗಣಿಸಲ್ಪಟ್ಟ ಭಾಷೆಯಾಗಿ ಕನ್ನಡ ಹೇಗೆ ಮರಣದೆಡೆಗೆ ಸಾಗುತ್ತದೆಂಬುದನ್ನು ಈಗ ವಿವೇಚಿಸೋಣ.

ಧನಾತ್ಮಕ ಹಂತಗಳು ( ಊರ್ಧ್ವಮುಖ ಬೆಳವಣಿಗೆಗಳು)

  • ಮೂಲದಲ್ಲಿ ಮಾತಾ-ಪಿತ-ಮಕ್ಕಳ ಸಂವಹನ
  • ಭಾಷೆಯ ಜನನ- ಪಾಲನ
  • ಭಾಷೆಯ ವಿಕಾಸ-ಬೆಳವಣಿಗೆ

ಮ್ಯಾಸ್ಲೋ ನ ಅವಶ್ಯಕತೆಗಳ ಶ್ರೇಣಿಯ ಆಧಾರದ ಮೇಲೆ ಭಾಷೆಯ ಬೆಳವಣಿಗೆ ಮತ್ತು ವಿಕಾಸವನ್ನು ಆಗಲೆ ವಿವರಿಸಿದ್ದಾಗಿದೆ.

ಭಾಷಾ ಸ್ಥಿತ್ಯಂತರದ ಹಂತಗಳು

  • ಎರಡನೇ ಭಾಷೆಯ ಆಗಮನ (ಕನ್ನಡ ಮತ್ತು ಇಂಗ್ಲೀಷ್)
  • ಇಂಗ್ಲೀಷಿಗೆ ವ್ಯಾಮೋಹ ಮತ್ತು ಅತ್ಯಾದರ

ಮುಂಚಿನ ಸಾಲುಗಳಲ್ಲಿ ಇಂಗ್ಲೀಷು, ಕನ್ನಡವನ್ನುಕಡೆಗಣಿಸಲು ಹೇಗೆ ಸಹಕಾರಿಯಾಗುತ್ತದೆಂಬುದನ್ನು  ವಿವರಿಸಲಾಗಿದೆ.

ಋಣಾತ್ಮಕ  ಹಂತಗಳು (ಅಧೋಮುಖ ಬೆಳವಣಿಗೆಗಳು)

ದ್ವಿಭಾಷಾ ಪದ್ಧತಿ ಸ್ವೀಕರಿಸಿ ಸ್ಥಿತ್ಯಂತರದ ಹಂತಗಳನ್ನು ಮುಟ್ಟಿದರೆ ಮತ್ತು ಪರಿಸರವನ್ನು  ಎಚ್ಚರಿಕೆಯಿಂದ ನಿಭಾಯಿಸದೇ ಇದ್ದ ಪಕ್ಷದಲ್ಲಿ ಇಂಗ್ಲೀಷ್ ಭಾಷೆಯು ಕನ್ನಡದ ನುಡಿಮರಣದ ವೇದಿಕೆಯನ್ನು (ಶವ ಪೆಟ್ಟಿಗೆ) ಸಿದ್ಧಗೊಳಿಸುತ್ತದೆ. ಕನ್ನಡದ ಪದಗಳಿಗೆ ಬದಲಾಗಿ ನಾವು ಬಳಸುವ ಭಾಷೆಯಲ್ಲಿ ಸೇರುವ ಪ್ರತಿಯೊಂದು ಕನ್ನಡದ್ದಲ್ಲದ (ಇಂಗ್ಲೀಷಿನ) ಪದಗಳೂ ಈ ಶವ ಪಟ್ಟಿಗೆಗೆ ಹೊಡೆಯುವ ಮೊಳೆಗಳೇ ಸರಿ. ಈ ಪ್ರಕ್ರಿಯೆ ಸುಪ್ತವಾಗಿ ಆರಂಭವಾಗಿ ಗುಪ್ತವಾಗಿ ಹರಡುವುದರಿಂದ ಜನಮಾನಸದ ಅರಿವಿಗೆ ಬರದಂತೆ ಒಂದು ಭಾಷೆ(ಇಂಗ್ಲೀಷ್)  ಇನ್ನೊಂದು ಭಾಷೆಯನ್ನು (ಕನ್ನಡವನ್ನು) ತಿಂದು ಹಾಕತೊಡಗುತ್ತದೆ. ಇದು ಅರಿವಾಗುವ ವೇಳೆಗೆ ಬಹಳ ಸಂದರ್ಭಗಳಲ್ಲಿ ಕಾಲ ಮಿಂಚಿಹೋಗಿರುತ್ತದೆ. ಭಾಷೆಯ ಮರಣ ಏಕಾಏಕಿ ಆಗುವುದಿಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ ಈ ನುಡಿಮರಣದ ಪ್ರಕ್ರಿಯೆಯಲ್ಲಿ ಹಲವು ಹಂತಗಳನ್ನು ಗುರುತಿಸಬಹುದು.

  • ಭಾಷಾ ವಿಕಾಸ ಸ್ಥಂಭನ
  • ಭಾಷಾ ಸ್ಥಂಭನ
  • ನುಡಿ ತಲ್ಲಣ/ನುಡಿ ಕಂಪನ
  • ನುಡಿ ಪಲ್ಲಟ
  • ನುಡಿ ಕ್ಷೀಣತೆ ( ಭಾಷಾ ಸವಕಳಿ)
  • ನುಡಿ ಹೀನತೆ
  • ನುಡಿ ಮರಣ

ಪ್ರತಿಯೊಂದು ಹಂತವನ್ನೂ ಈಗ ವಿಶ್ಲೇಷಿಸೋಣ:

  • ಭಾಷಾ ವಿಕಾಸ ಸ್ಥಂಭನ

ಕನ್ನಡದಲ್ಲಿ ಮಾತನಾಡುವ/ಓದುವ ಪ್ರಜೆಗಳ ಸಂಖ್ಯೆ ಕ್ಷೀಣಿಸುತ್ತಿದ್ದಂತೆ ಹೊಸ ಹೊಸ ಬದಲಾವಣೆಗೆ ತೆರೆದುಕೊಳ್ಳುವ, ಅದನ್ನು ನಮ್ಮ ಭಾಷೆಯಲ್ಲಿ ಓದಿ ತಿಳಿಯುವವರು ಕಡಿಮೆಯಾಗುತ್ತದೆ. ಹೀಗಾಗಿ ಈ ಬೆಳವಣಿಗೆಗಗಳನ್ನು ತಿಳಿಸಬಲ್ಲ ಪಠ್ಯಗಳು, ಪುಸ್ತಕಗಳು, ಲೇಖನಗಳು, ಪಾರಿಭಾಷಿಕ ಪದಗಳು, ತರಬೇತಿ ಕಾರ್ಯಾಗಾರಗಳು ಎಲ್ಲವೂ ಇಂಗ್ಲೀಷಿನಲ್ಲೇ ನಡೆಯುವ ಕಾರಣ ಭಾಷೆಯ ವಿಕಾಸ ನಿಂತು ಹೋಗುತ್ತದೆ. ತನ್ನ ಪರಿಮಿತಿಗಳನ್ನು ವಿಸ್ತರಿಸಿಕೊಳ್ಳದ ಭಾಷೆ ಮನುಷ್ಯನ ಮೂಲಭೂತ ಅವಶ್ಯಕತೆಗಳನ್ನು ಬೇಕೆಂದವರಿಗೂ ದೊರಕಿಸಿ ಕೊಡುವಲ್ಲಿ ವಿಫಲವಾಗುವುದರಿಂದ ಕನ್ನಡ ಭಾಷಿಕರೂ ಇಂಗ್ಲೀಷಿನ ಮೊರೆ ಹೋಗುವ ಅನಿವಾಯರ್ಯತೆ ಮೂಡುತ್ತದೆ. ಭಾಷೆಯ ವಿಸ್ತಾರ ಇಲ್ಲದಾಗಿ ನಿಂತ ನೀರಾಗುತ್ತದೆ.

  • ಭಾಷಾ ಸ್ಥಂಭನ:

ಈ ಹಂತದಲ್ಲಿರುವ ಕನ್ನಡ ಭಾಷೆ ಬೆಳೆಯದೆ ನಿಂತು ಬಿಡುತ್ತದೆ. ಹೊಸ ಸಾಹಿತ್ಯ/ಸಂಗೀತ , ಪ್ರಯೋಗಗಳು ಅಗದೆ ಇರುವ ಚರ್ವಿತ ಚರ್ವಣವನ್ನೇ ಭಾಷಿಕರಿಗೆ ಬಡಿಸಲಾಗುತ್ತದೆ. ಹೊಸತನ್ನು, ಬದಲಾವಣೆಯನ್ನು ಬಯಸುವ ಮನಸ್ಸು ಹೀಗೆ ಹಳಸಿದ ಭಾಷಾ ಸರಕಿನಿಂದ ದೂರ ಸರಿಯಲ್ಲರಂಭಿಸುತ್ತದೆ. ಮೊದಲೇ ಪಾಂಡಿತ್ಯ ಇಲ್ಲದ ಪ್ರತಿಭೆಗಳು ಈಗ ಪೋಷಣೆಯೂ ಇಲ್ಲದೆ ಸೊರಗುವುದರಿಂದ, ಆರ್ಥಿಕವಾಗಿಯೂ ಲಾಭವಿಲ್ಲದ್ದರಿಂದ ಸೃಷ್ಟಿಪ್ರಕ್ರಿಯೆಯಿಂದ ಹಿಂದೆ ಸರಿದು ಅಳಿಯದೆ ಉಳಿದ ಹಳೆಯ ಸರಕುಗಳಷ್ಟೇ ಭಾಷೆಯ ಆಸ್ತಿಯಾಗಿರುವ ಪರಿಸ್ಥಿತಿ ನಿರ್ಮಾಣವಾಗುವುದು ಈ ಹಂತದ ಲಕ್ಷಣ.

  • ನುಡಿ ತಲ್ಲಣ/ನುಡಿ ಕಂಪನ

ಈ ಪರಿಸ್ಥಿತಿಯು ಮೊದಲ ಎರಡು ಹಂತಗಳ ನಂತರವೇ ಅಗಬೇಕೆಂದಿಲ್ಲ. ಇಂಗ್ಲೀಷ್ ಭಾಷೆಯು ಕನ್ನಡದ ಮೇಲೆ ನಡೆಸುವ ಅಕ್ರಮಣದಿಂದ ಮೊದಲು ಕನ್ನಡ ನುಡಿ ಕಂಪನ ಅಥವಾ ತಲ್ಲಣ ನಡೆದು ನಂತರ ಭಾಷೆಯ ಸ್ಥಂಭನವೂ ಅಗಬಹುದು. ಕನ್ನಡದ ಈಗಿನ ಪರಿಸ್ಥಿತಿಯನ್ನು ನುಡಿಕಂಪನ ಪ್ರತಿನಿಧಿಸುತ್ತಿದೆ. ಅತಿಯಾದ ಇಂಗ್ಲೀಷ್ ವ್ಯಾಮೋಹ, ಕನ್ನಡದಲ್ಲಿ ಕಲಿತರೆ ಉಳಿಗಾಲವೇ ಇಲ್ಲವೇನೋ ಎಂಬ ಆತಂಕ, ಅಜ್ಞಾನ ಭಾಷೆಯನ್ನು ಅಲುಗಾಡಿಸುತ್ತಿರುವುದು ಮುಂದೆ ಭಾಷೆಯು ಕಾಲ ಪ್ರವಾಹದಲ್ಲಿ ಕೊಚ್ಚಿ ಹೋಗಬಹುದಾದುದರ ಮುನ್ಸೂಚನೆಯಂತಿರುತ್ತದೆ. ಕನ್ನಡ ಭಾಷೆಯನ್ನು ಹಿಡಿದೆತ್ತಿ ನಿಲ್ಲಿಸಿ ಭದ್ರ ನೆಲೆ ನೀಡಿ ವೈಭವವನ್ನು ಪುನರ್ಸ್ಥಾಪಿಸಲು ಇದು ಸೂಕ್ತ ಕಾಲ. ಈ ಹಂತವನ್ನು ದಾಟಿದ ಭಾಷೆ ಮರಳಿ ತನ್ನ ಮೂಲ ಸ್ವರೂಪದಲ್ಲಿ ಸ್ವತಂತ್ರವಾಗಿ ಇರಲಾರದು.

  • ನುಡಿ ಪಲ್ಲಟ

ಮೇಲಿನ ಮೂರೂ ಹಂತಗಳು ದಾಟಿ ಅಧೋಗತಿಯಲ್ಲಿ ಸಾಗುತ್ತಿರುವ ಭಾಷೆ ತನ್ನ ಎದುರಾಳಿ ಭಾಷೆಗೆ ಸೋಲೊಪ್ಪಿಕೊಂಡಾಗಿನ ಪರಿಸ್ಥಿತಿ ನುಡಿ ಪಲ್ಲಟ. ಕನ್ನಡವು ಈ ಹಂತವನ್ನು ಪ್ರವೇಶಿಸುತ್ತಿರುವುದು ಆತಂಕಕಾರೀ ಬೆಳವಣಿಗೆ.

ಈ ಹಂತದಲ್ಲಿ ಕನ್ನಡವು ಭಾಷಿಕರ ದೈನಂದಿನ ಜೀವನದಲ್ಲಿ ಯಾವುದೇ ಸಂವೇದನೆಯನ್ನೂ, ಸಾಂಸ್ಕೃತಿಕ, ಭಾವನಾತ್ಮಕ ತರಂಗಗಳನ್ನೂ ಎಬ್ಬಿಸುವಲ್ಲಿ ಸೋತಿರುತ್ತದೆ. ಕನ್ನಡ ಇರುವಿಕೆಗೆ ನಮ್ಮ ಕಣ್ಣುಗಳು ಕುರುಡಾಗಿರುತ್ತದೆ. ಇಂದಿನ ನಮ್ಮ ಜನಾಂಗ ಸಂಸ್ಕೃತದ ಬಗೆಗೋ , ಬುದ್ಧನ ಪಾಳೀ ಭಾಷೆಯ ಬಗೆಗೋ,ನಮ್ಮದಲ್ಲದ ಬೇರೆ ಯಾವುದೋ ಭಾಷೆಯ ಕುರಿತು ಈಗಿನ ದಿವ್ಯ ನಿರ್ಲಕ್ಷ್ಯಕ್ಕೆ ಆಗ ಕನ್ನಡ ತುತ್ತಾಗಿರುತ್ತದೆ.  ಈ ನಿರ್ಭಾವುಕ ನಿಲುವು ಕನ್ನಡದ ಬಗೆಗೆ ಬೆಳೆದಾಗ ,ಕನ್ನಡವೆಂಬುದೊಂದು ಇದೆ ಆದರೆ, ನಮಗೆ ಅದರ ಗೊಡವೆ ಬೇಡ, ಇಂಗ್ಲೀಷೇ ಸಾಕು ಎನ್ನುವ ಧೋರಣೆ ಸರ್ವಾಂತರ್ಯಾಮಿಯಾಗಿರುವುದು ಈ ಸ್ಥಿತಿಯಲ್ಲಿರುವ ಜನಗಳ ಲಕ್ಷಣ. ನಗರ ಪ್ರದೇಶಗಳಲ್ಲಿ ಈ ಪ್ರವೃತ್ತಿಯನ್ನು ಜನಗಳಲ್ಲಿ ಇಂದು ಕಾಣುತ್ತಿದ್ದೇವೆ.

  • ನುಡಿ ಕ್ಷೀಣತೆ

ಇಲ್ಲಿ ಭಾಷೆಯನ್ನು ಬಳಸುವವರ, ಬಳಸಿದವರ ನುಡಿಯಲ್ಲೂ ಕನ್ನಡದ ಪದಗಳ ವ್ಯಾಪ್ತಿ ಮತ್ತು ಸಂಖ್ಯೆ ತೀವ್ರವಾಗಿ ಕುಸಿದಿದ್ದು ಕೆಲವೇ ಸೀಮಿತ ಪದಗಳ ಬಳಕೆ ಆಗುತ್ತಿರುತ್ತದೆ. ಕನ್ನಡ ಭಾಷೆಯ ಆರೋಗ್ಯ ಗಂಭೀರ ಪರಿಸ್ಥಿತಿ ತಲುಪಿದ್ದ್ದು ಈ ಹಂತದಿಂದ ಭಾಷೆಯನ್ನು ಪುನರುತ್ಥಾನ ಗೊಳಿಸುವುದು ಅಸಾಧ್ಯ. ಲಿಪಿಯ ಬಳಕೆ ಬಹುತೇಕ ಇಲ್ಲವಾಗಿರುತ್ತದೆ.

  • ನುಡಿ ಹೀನತೆ

ನಡೆ, ನುಡಿ, ಆಡಳಿತ, ವ್ಯವಹಾರ, ವಿದ್ಯಾಭ್ಯಾಸ, ಮನೆ ಮನಗಳಲ್ಲಿ  ಕನ್ನಡ ಭಾಷೆ ಅಳಿಸಿ ನಶಿಸಿ ಹೋಗಿರುತ್ತದೆ. ಆದರೂ ಯಾವುದೋ ಊರಿನಲ್ಲಿ, ಮೂಲೆಯಲ್ಲಿ ಬೆರಳೆಣಿಕೆಯಷ್ಟು ಜನ ಇನ್ನೂ ಮಾತನಾಡುತ್ತಿರಬಹುದೆಂದು ಎಣಿಸಿದರೂ, ಒಂದು ಪ್ರಾಂತ್ಯದ ಮೊದಲ ಭಾಷೆಯಾಗಿದ್ದ ಕನ್ನಡವು ಇಂದು ಜನಜೀವನದಿಂದ ಮರೆಯಾಗಿ ಹೋಗಿರುವ ಸಂದರ್ಭ. ಮರಣಶಯ್ಯೆಯಲ್ಲಿ ತನ್ನ ದಿನಗಳನ್ನು ದೂಡುತ್ತಿರುವ ರೋಗಿಯ ಪರಿಸ್ಥಿತಿಯಲ್ಲಿ ಕನ್ನಡ ಇರುವಂಥ ಪರಿಸ್ಥಿತಿ ಇದು. ಇಂತಹ ಹಂತದಲ್ಲಿ ಲಿಪಿಯ ಬಳಕೆ ಆದಾಗಲೇ ನಿಂತುಹೋಗಿರುತ್ತದೆ.

  • ನುಡಿ ಮರಣ

ಭಾಷೆಯನ್ನು ಬಳಸಬಲ್ಲ ಕೊನೆಯ ವ್ಯಕ್ತಿ ಮರಣ ಹೊಂದಿ ಕನ್ನಡವನ್ನು ಮಾತನಾಡುವವರೇ ಪ್ರಪಂಚದಲಿ ಇಲ್ಲವೆಂದು ಅಧಿಕೃತವಾಗಿ ಘೋಷಿಸಪಲ್ಪಟ್ಟಾಗ ಭಾಷೆ ಮರಣಹೊಂದಿದೆ ಎಂದು ದಾಖಲಾಗುತ್ತದೆ. ಇದು ಕೇವಲ ಅಂಕಿ ಅಂಶಗಳ ಸಲುವಾಗಿ, ದಾಖಲುಗೊಳಿಸುವ ಪ್ರಕ್ರಿಯೆ ಅಷ್ಟೆ. ವಾಸ್ತವಿಕವಾಗಿ ನುಡಿ ಪಲ್ಲಟವಾದಾಗಲೇ ಅಥವಾ ನುಡಿ ಕ್ಷೀಣತೆ ಪ್ರಾರಂಭವಾದಾಗಲೇ ನುಡಿಮರಣ ಸಂಭವಿಸಿರುತ್ತದೆ ಏಕೆಂದರೆ ಭಾಷೆಯನ್ನು ಪುನರ್ಜೀವನಗೊಳಿಸಲಾರದಷ್ಟು ಅದು ಅವನತಿ ಹೊಂದಿರುತ್ತದೆ; ಆದರೆ ಡಾಕ್ಟರು ಹಾಗೆ ಪ್ರಕಟಪಡಿಸಿರುವುದಿಲ್ಲ ಅಷ್ಟೆ!

ಅದರ ಜೊತೆಯಲ್ಲಿ ಸಾವಿರಾರು ವರ್ಷಗಳಿಂದ ಬೆಳೆದುಬಂದ ಸಾಹಿತ್ಯ, ಸಂಗೀತ, ಗಾದೆಗಳು, ನುಡಿಗಟ್ಟುಗಳು, ಜೀವನಧರ್ಮಗಳು,ಜೀವನರೀತಿ,ಬುದ್ಧಿವಂತಿಕೆ, ಒಗಟುಗಳು, ಕಥೆ ಕಾವ್ಯಗಳು, ಪುರಾಣ, ಆದರ್ಶಗಳು, ಸ್ವಂತಿಕೆ,ಇತಿಹಾಸ, ಧರ್ಮ, ಸಮಾನ ಮನೋರೀತಿ ಎಲ್ಲವೂ ಜಗದ ತೆರೆಯಿಂದ ಮರೆಗೆ ಸರಿದು  ಸಮಾಧಿ ಸೇರಿ ಪೀಳಿಗೆಗಳ ಪಾಲಿಗೆ ಇಲ್ಲವಾಗುತ್ತವೆ.

ನುಡಿಮರಣ– ಒಂದು ಪ್ರಾಪಂಚಿಕ(ಜಾಗತಿಕ) ವಿದ್ಯಮಾನ:

ಪ್ರಧಾನವಾಗಿ ಕನ್ನಡವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಾನು ಬರೆಯುತ್ತಿರುವುದಾದರೂ ಕನ್ನಡ ಭಾಷೆ ಮಾತ್ರವೇ ಇಂದು ಈ ಅಳಿವಿನ ಸಮಸ್ಯೆ ಎದುರಿಸುತ್ತಿದೆ ಎಂದು ತಿಳಿಯಬೆಕಾಗಿಲ್ಲ. ಇದೊಂದು ಜಾಗತಿಕ ವಿದ್ಯಮಾನ.

ಇಂದು ಅಳಿವನ್ನು ಎದುರಿಸುತ್ತಿರುವ ಭಾಷೆಗಳು ಒಂದೆರೆಡಲ್ಲ- ನೂರಾರು-ಸಾವಿರಾರು. ಕಳೆದ ಶತಮಾನದ ಆರಂಭದಲ್ಲಿ ಒಟ್ಟು ಹನ್ನೆರೆಡು ಸಾವಿರ ಭಾಷೆಗಳಿದ್ದುವೆಂದು ಅಂದಾಜಿಸಿದ್ದು, ಇಂದು ಕೇವಲ ೬೦೦೦ ಕ್ಕೂ ಕಡಿಮೆ ಭಾಷೆಗಳು ಬಳಕೆಯಲ್ಲಿವೆ ಅವುಗಳಲ್ಲಿ ೩೦೦೦ ಭಾಷೆಗಳು ತೀವ್ರ ಸಂಕಟ ಅನುಭವಿಸುತ್ತಿದ್ದು ಅಳಿವಿನಂಚಿನಲ್ಲಿವೆ. ಎಲ್ಲಾ ಭಾಷೆಗಳಿಗೆ ತಮ್ಮದೇ ಲಿಪಿ ಇಲ್ಲ. ಕೇವಲ ೩೫೦ ಭಾಷೆಗಳಿಗೆ ಮಾತ್ರ ತಮ್ಮದೇ ಲಿಪಿ ಇದೆ. ಲಿಪಿ ಇರುವ ಭಾಷೆಗಳು ಅಳಿವಿನಿಂದ ಸ್ವಲ್ಪ ಸುರಕ್ಷಿತವಾಗಿದ್ದರೂ ಪೂರ್ಣ ರಕ್ಷಣೆ ಇಲ್ಲ.

  • ಕೇವಲ% ಭಾಷೆಗಳನ್ನು ೯೪% ಜನ ಮಾತಾಡ್ತಾರೆ
  • ೯೪% ಭಾಷೆಗಳನ್ನು ಬರೀ ೬% ಜನ ಮಾತಾಡ್ತಾರೆ
  • ಪ್ರಪಂಚದಲ್ಲಿ ಅತಿ ಹೆಚ್ಚು ಜನ ಮಾತನಾಡುವ ಭಾಷೆಗಳು
    • ಮ್ಯಾಂಡರಿನ್ ೮೪೫ ಮಿಲ್ಲಿಯನ್
    • ಸ್ಪಾನಿಷ್ ೩೨೯ ಮಿಲ್ಲಿಯನ್
    • ಇಂಗ್ಲೀಷ್ ೩೨೮ ಮಿಲ್ಲಿಯನ್
    • ೧೩೩ ಭಾಷೆಗಳನ್ನು ಕೇವಲ ಹತ್ತು ಅಥವ ಅದಕ್ಕಿಂತ ಕಡಿಮೆ ಜನ ಮಾತಾಡ್ತಾರೆ.
  • ಪ್ರತಿ ಹದಿನೈದು ದಿನಕ್ಕೆ ಒಂದು ಭಾಷೆ ಸಾಯುತ್ತಿದೆ!!!! (ಆಘಾತಕರ ಸತ್ಯ)
  • ಕನ್ನಡವನ್ನು ಮಾತನಾಡುವವರು ಕೂಡಾ ಇಂದು ಸಂಖ್ಯೆಯಲ್ಲಿ ಕ್ಷೀಣಿಸುತ್ತಿದ್ದಾರೆ

ತಮ್ಮ ಪರಂಪರೆಯನ್ನು ಕಾಯ್ದುಕೊಂಡು ಬಂದಿರದ ಯಾವುದೇ ಕುಟುಂಬ ವ್ಯವಸ್ಥೆಯಲ್ಲಿ ಎರಡನೇ ಪೀಳಿಗೆಯಿಂದಾಚೆಗೆ ಸಾಫಲ್ಯ ಹಾಗೂ ಯಶಸ್ಸಿನ ಪ್ರಮಾನ ಗಣನೀಯವಾಗಿ ಕುಸಿಯುವುದೆಂದು ಜಗದಾದ್ಯಂತ ನಡೆದ ಸಂಶೋಧನೆಗಳಿಂದ ತಿಳಿದಿದೆ. ಹಾಗಾಗಿ, ನಮ್ಮ ಮುಂದಿನ ಸ್ವಂತದ ಪೀಳಿಗೆಗಳು ಯಶಸ್ಸನ್ನು ಕಾಣಬೇಕೆಂಬ ಸ್ವಾರ್ಥಪರ ಉದ್ದೇಶದಿಂದಲಾದರೂ ಭಾಷೆಯನ್ನು ಉಳಿಸಿ ಬೆಳೆಸುವ ಹಾಗೂ ಅದರ ಮೂಲಕ ನಮ್ಮ ಪರಂಪರೆ, ಪುರಾಣೇತಿಹಾಸಗಳ ಪರಿಚಯ ಮಾಡಿಕೊಡುವ ಗುರುತರ ಹೊಣೆ ನಮ್ಮದಾಗಿದೆ.

ಹೇಗೆ ಅದನ್ನು ಕಾರ್ಯ ರೂಪಕ್ಕೆ ತರಬಹುದೆಂದು ಯೋಚಿಸೋಣ.

ಹೊಸಚಿಗುರಿಗೆ ಹಳೆ ಬೇರು ಕೂಡಿದರೆ ಮರ ಸೊಗಸು

ಪಂಪರೆಯ ಮರೆತು ನಡೆಯೆ ನನಸಾಗದು ಕನಸು

ಕನ್ನಡವನೆ ನುಡಿಯಿರಿ ಬಳಸಿ ಅದರ ಪದಸಿರಿ

ಬೆರಕೆ ಇರದ ಭಾಷೆ ಬಳಸಿ ಪರಂಪರೆಯ ಉಳಿಸಿರಿ

ಮಾಸಕೊಮ್ಮೆ ದೊರೆವ ಹಣವೆ ಆಂಗ್ಲ ಭಾಷೆ ಪ್ರಕೃತಿ

ಜೀವವಿಮೆಯ ಶ್ರೀ ರಕ್ಷೆಯು ಕನ್ನಡದ ಸುಸಂಸ್ಕೃತಿ

ಸರ್ವ ಶಕ್ತ ನಮ್ಮ ಭಾಷೆ ನಮಗೆ ಇರಲಿ ಗರ್ವವು

ಕನ್ನಡವನೆ ಬಳಸಿ ಗೆಲ್ಲು ಉದಯಿಸಲಿ ಹೊಸ ಪರ್ವವು.

ಕನ್ನಡವನ್ನು ಉಳಿಸಿ ಬೆಳೆಸುವ ಮಾರ್ಗೋಪಾಯಗಳು.

ಮೇಲೆ ನಾವು ಚರ್ಚಿಸಿದ ಎಲ್ಲಾ ಅಂಶಗಳನ್ನು ಕಾರ್ಯರೂಪಕ್ಕೆ ತಂದು ಪ್ರಯೋಜನ ಒದಗಿಸದಿದ್ದರೆ ಆ ಎಲ್ಲ ಮಾಹಿತಿ ಹಾಗೂ ಜ್ಞಾನಸಂಪಾದನೆ ಅರ್ಥಿಹೀನವೆನಿಸುತ್ತದೆ.

‘’ಸಾವಿರ ಪುಸ್ತಕಗಳ ಜ್ಞಾನಕ್ಕಿಂತಲೂ ಕೃತಿಗಿಳಿದ ಒಂದು ಅಲೋಚನೆಯೇ ಮೇಲು’’ ಎಂದು ಬಲ್ಲವರು ಹೇಳಿರುತ್ತಾರೆ. ಅದರಂತೆ ನಾವೀಗ ನಮ್ಮ ಮುಂದಿರುವ ಸಮಸ್ಯೆಗೆ ಪರಿಹಾರವನ್ನು ಹುಡುಕುವ.

ಲೇಖನದ ಮೊದಲಲ್ಲಿ ಕವಿತಾ ಸಂಭಾಷಣೆಯ ಮುಂದುವರಿದ ಭಾಗ ( ಪರಿಹಾರ)

ಕನ್ನಡಿಗ:

ಹೆತ್ತ ತಾಯಿಯ ಋಣವ ತೀರಿಸದ ನಾನು

ಎಲ್ಲ ಭೋಗವ ಪಡೆದು ಬದುಕಿದ್ದರೇನು

ಹಸಿವ ಕಳೆಯುವುದೆಂತು ಹೇಳು ನೀ ನನಗೆ

ಮೂ ಲೋಕ ನಾ ಸುತ್ತಿ ತರುವೆ ಪದದಡಿಗೆ

ಭುವನೇಶ್ವರಿ:

ಅಕ್ಷರದ ಕಣಜದಿಂ ಪದಗಳಕ್ಕಿಯನಳೆದು

ಕಲಬೆರಕೆ ಕಲ್ಲುಗಳನದರಿಂದ ಕಳೆದು

ವ್ಯಾಕರಣದುದಕದಿಂ ಅಕ್ಕಿಯನೆ ತೊಳೆದು

ಬೇಯಿಸಲು ಅದು ನನ್ನ ಹಸಿವ ಕಳೆಯುವುದು

ಹೃದಯದಾ ಪಾತ್ರೆಯಲಿ ಅಕ್ಕಿಯನು ಇಟ್ಟು

ನಿನ್ನೆದೆಯ ಕುಲುಮೆಗೆ ಬೆಂಕಿಯನು ಒಟ್ಟು

ನಿನ್ನುಸಿರ ಬಿಸಿಗಾಳಿ ಊದುತಲಿ ನಿರತ

ನೀಡುವೆಯ ನೀ ಎನಗೆ ಭಿಕ್ಷೆ ಅನವರತ

ಕನ್ನಡಿಗ:

ನಿನ್ನ ಮಣ್ಣಿನ ಋಣವು ನನ್ನ ಮೇಲಿರಲು

ನಿನ್ನ ಅನ್ನವನುಂಡು ನಾನು ಬೆಳೆದಿರಲು

ಭಿಕ್ಷೆಯನು ನೀಡೆಂದು ಬೇಡದಿರು ತಾಯೆ

ನನ್ನ  ಸೇವೆಯನುಂಡು ಪ್ರೇಮದಲಿ ಪೊರೆಯೆ

ದೀಕ್ಷೆಯಾ ಕುಲುಮೆಗೆ ಸಂಕಲ್ಪದಿಟ್ಟಿಗೆ

ಉರಿವ ಬೆಂಕಿಗೆ ನನ್ನ ಕೈಗಳೇ ಕಟ್ಟಿಗೆ

ಬೇಯಿಸುವೆ ಅನ್ನವನು ನಾನಿನ್ನ ಹೊಟ್ಟೆಗೆ

ಮನೆಗೆ ಬರುವೆಯ  ತಾಯಿ ನೀ ಎನ್ನ ಒಟ್ಟಿಗೆ

ನಾನಿನ್ನ ಮಗನಾಗಿ ಬದುಕಿರುವ ವರೆಗೂ

ಪರದೇಶಿ ನೀನಲ್ಲ ಬಿಡು ನಿನ್ನ ಕೊರಗು

ದುಡಿಯುತಲಿ ಮರಳಿಸುವೆ ನಿನಗೆ ವೈಭವವ

ಭುವನೇಶ್ವರಿ ನೀ ಆಳು ಮತ್ತೆ ಈ ಜಗವ.

ಎಲ್ಲರೂ ಸಂಕಲ್ಪವನ್ನು ತೊಟ್ಟು ಧನ್ಯತೆಯನ್ನು ಕಾಣುವ ಹಂಬಲದೊಂದಿಗೆ ದುಡಿದರೆ ಈ ಕಾರ್ಯ ಅಸಾಧ್ಯವಲ್ಲ. ಈ ಬಗೆಗೆ ನೋಡೋಣ:

ಕನ್ನಡಕ್ಕಾಗಿ ಹೋರಾಡುವಲ್ಲಿ ಸವಾಲು-ಸಮಸ್ಯೆಗಳು:

ಕೆಲಸವನ್ನು ಮಾಡುವಲ್ಲಿ ಹಲವು ಸಮಸ್ಯೆಗಳು, ಸವಾಲುಗಳು ಎದುರಾಗುವುದು ಸಹಜ.ಕನ್ನಡವನ್ನು ಪುನರುತ್ಥ್ಹಾನ ಗೊಳಿಸುವ ಕಾರ್ಯ ಒಬ್ಬರಿಂದ ಪ್ರಾರಂಭವಾದರೂ ಅದೊಂದು ಸಾಮೂಹಿಕ ಯಜ್ಞ. ಸಮೂಹವೆಂದಾಗ, ಗುಂಪಿನಲ್ಲಿರುವ ಪ್ರತಿಯೊಬ್ಬರೂ ತಮ್ಮದೇ ಆದ ಕಾರ್ಯ ವೈಖರಿಯನ್ನೂ, ಆಲೋಚನೆಗಳನ್ನೂ ಹೊಂದಿರುವುದು ವಾಸ್ತವ. ಆದರ್ಶವಾದ ಹಲವರ ಆಶಯವಾದರೆ ವಾಸ್ತವ ವಾದ ಉಳಿದವರಿಗೆ ಸರಿ ಎನ್ನಿಸಬಹುದು.ಸಾರ್ವತ್ರಿಕ ಹಿತ ಒಬ್ಬರ ಧ್ಯೇಯವಾದರೆ, ವೈಯಕ್ತಿಕ ಹಿತಾಸಕ್ತಿ ಮತ್ತೊಬ್ಬರಲ್ಲಿ ಮನೆ ಮಾಡಿರಬಹುದು.  ಮನುಷ್ಯನ ಮೂಲಭೂತ ಗುಣ,` ತಾನು ನಂಬಿರುವುದು ಮಾತ್ರ ಸತ್ಯ ಉಳಿದವರದ್ದು ಅಲ್ಲ` ಎನ್ನುವ ಧೋರಣೆಯಿಂದ ಭಿನ್ನಭಿಪ್ರಾಯಗಳು ಮೂಡಿ ಆಗಬೇಕಾದ ಕೆಲಸದ ಮೂಲ ಉದ್ದೇಶವನ್ನು ಮರೆತು ಒಡೆದು ಚೆದುರಿ ಹೋದ ಎಷ್ಟೋ ನಿದರ್ಶನಗಳು ನಮ್ಮ ಮುಂದಿವೆ. ಹೀಗಾಗಿ ಸಮಾಧಾನ, ಸಮಾಲೋಚನೆ, ಒಮ್ಮತ ಸಮ್ಮತದಿಂದ ಕಾರ್ಯ್ಪ್ರವೃತ್ತರಾಗಿ ದುಡಿಯುವ ಗುರುತರ ಹೊಣೆ ಇಂದು ನಮ್ಮದಿದೆ.

“ಇರಲಿ ಕನ್ನಡವೇ ಧ್ಯೇಯ, ಬಿಡಿ ನಿಮ್ಮೆಲ್ಲ ಭಿನ್ನಾಭಿಪ್ರಾಯ“

ಇನ್ನು ಸರಕಾರ ಹಾಗೆ ಹೀಗೆ, ಪ್ರಾಧಿಕಾರ ಸರಿಯಿಲ್ಲ,  ಸರಕಾರಿ ಶಾಲೆಗಳು ಉಪಯೊಗವಿಲ್ಲ, ಸುಪ್ರೀಂ ಕೋರ್ಟು ಪುನಃ ಪರಿಶೀಲಿಸಲಿ, ಸಂವಿಧಾನ ಬದಲಾಗಲಿ .. ಹೀಗೆ ನಾನಾ ರೀತಿಯ ಕೂಗು, ಹೇಳಿಕೆ,ಘೋಷಣೆ ಮಾಡಬಹುದು. ವಾಸ್ತವವಾಗಿ ಅವು ಯಾವುದರಿಂದಲೂ ಕನ್ನಡದ ಇಂದಿನ ಪರಿಸ್ಥಿತಿ ಸುಧಾರಿಸದು. ಆಗದ ಹೋಗದ ಈ ಆಶಯಗಳಿಂದ ಯಾವುದೇ ಲಾಭವಿಲ್ಲ. ಈ ನಿಟ್ಟಿನಲ್ಲ್ಲಿನಾವು ಸುಲಭ ಸಾಧ್ಯವಾಗಿ, ಹೆಚ್ಚು ಖರ್ಚಿನ ತೊಂದರೆಯಿಲ್ಲದೆ, ಯಾರ ಕೃಪಾಕಟಾಕ್ಷದ ಹಂಗೂ ಇಲ್ಲದೆ ನಾವುಗಳು ಎಲ್ಲರೂ ನಮ್ಮ ನಮ್ಮ ಶಕ್ತಿ ಸಾಮರ್ಥ್ಯಗಳ ಪರಿಮಿತಿಯಲ್ಲಿಯೇ ಮಾಡಬಹುದಾದ ಕೆಲಸಗಳನ್ನು ವಿವೇಚಿಸೋಣ.ಜೊತೆ ಜೊತೆಗೇ ಕನ್ನಡದ ಬಗೆಗಿರುವ ಜನಗಳ ತಿಳುವಳಿಕೆಯನ್ನು ಬೆಳೆಸೋಣ

ವಿದ್ಯಾಭ್ಯಾಸ

Untitled

Untitled

ಕನ್ನಡ ಭಾಷೆ ಬಳಕೆ ಮತ್ತು ಇಂದಿನ ಜನಜೀವನ

Untitled
ಕನ್ನಡ ಮತ್ತು ತಂತ್ರಜ್ಞಾನ
(ಟೆಕ್ನಾಲಜಿ):

Untitled

 

ಕನ್ನಡಕ್ಕಾಗಿ ಆರ್ಥಿಕ ಬೆಂಬಲ:

1.   ಕನ್ನಡದ ಪತ್ರಿಕೆಗಳನ್ನು ಕೊಂಡು ಓದಿ
2.   ಒಂದು ಮಸಾಲೆ ದೋಸೆಯ ಬದಲು ತಿಂಗಳಿಗೆ ಒಂದು ಪತ್ರಿಕೆ ಕೊಂಡರೂ ಸಾಕು
3.   ಚೈತನ್ಯವಿದ್ದಲ್ಲಿ ಬೆಂಬಲ ಇನ್ನೂ ಇರಲಿ
4.   ಕನ್ನಡದ ಪುಸ್ತಕಗಳನ್ನು ಖರೀದಿಸಿ ಕಾಣಿಕೆ ಕೊಡಿ
5.   ಸ್ಥಳೀಯ ಶಾಲೆಗಳಲ್ಲಿ ಕನ್ನಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಇರಲಿ
6.   ಕನ್ನಡ ಕುರಿತಾದ ಕಮ್ಮಟಗಳಲ್ಲಿ ಭಾಗವಹಿಸಿ
7.   ನಮ್ಮ ನಾಡು-ನುಡಿ ವೈಭವ ತಿಳಿಸುವ ಚರಿತ್ರಾರ್ಹ ಸ್ಠಳಗಳಿಗೆ ಮಕ್ಕಳನ್ನು ಕರೆದೊಯ್ದು ನಮ್ಮ ಪರಂಪರೆಯ ಪರಿಚಯ ಮಾಡಿಕೊಡಿ. ಸ್ಥಳೀಯ ಕೈಗಾರಿಕೆ, ವಾಣಿಜ್ಯ ಬೆಂಬಲಿಸಿ.
8.   ಕನ್ನಡದ ನುಡಿತಾಣಗಳಿಗೆ ಭೇಟಿ ಕೊಡುತ್ತಿರಿ. ಹೆಚ್ಚು ಹೆಚ್ಚು ಜನ ಇವುಗಳನ್ನು ಸಂದರ್ಶಿಸಿದಷ್ಟೂ ಕನ್ನಡದ ವಾಣಿಜ್ಯಿಕ ಪ್ರತಿಷ್ಠೆ ಹೆಚ್ಚುತ್ತದೆ.

ಸರಕಾರ-ವಿದ್ಯಾಸಂಸ್ಥೆಗಳ ಹೊಣೆ:ಕನ್ನಡಕ್ಕಾಗಿ ಆರ್ಥಿಕ ಬೆಂಬಲ:

ಇದು ಆದರ್ಶಪೂರ್ವಕವಾದ ನಿರೀಕ್ಷೆ. ಆದರೆ ಇದರಲ್ಲಿ ಹಲವಾರು ಒಳಸಂಚುಗಳು/ಹಿತಾಸಕ್ತಿಗಳು ಸಮ್ಮಿಳಿತವಾಗಿರುವ ಕಾರಣ ಯಾವುದೇ ಹಂತದಲ್ಲೂ ವಿಫಲಗೊಳಿಸುವ ಪ್ರಯತ್ನ ನಡೆದೇ ಇರುತ್ತದೆ. ಸರಕಾರಗಳು ಬದ್ಧತೆ ತೋರಬೇಕೆಂದರೆ ಕನ್ನಡದ ಕೂಗು ಸರಕಾರದ ಅಳಿವು-ಉಳಿವನ್ನು ನಿರ್ಧರಿಸುವ ಮಟ್ಟಕ್ಕೆ ಬಲಾಢ್ಯವಾಗಿದ್ದರೆ ಮಾತ್ರ ಸಾಧ್ಯ. ಆಗ ವಿದ್ಯಾಸಂಸ್ಥೆಗಳೆಂದು ಕರೆಯಲ್ಪಡುವ ಖಾಸಗೀ ವಲಯ ತಾನೇ ತಾನಾಗಿ ದಾರಿಗೆ ಬರುತ್ತದೆ,. ಈ ಪ್ರಕ್ರಿಯೆಯು ಜನರಲ್ಲಿ ಜನರ ಒಳಗಡೆಯಿಂದಲೇ ಅಂತರಾಗ್ನಿಯ ರೂಪದಲ್ಲಿ ಉದಿಸಿ ಹರಡಿದಾಗ ಕೈಗೂಡುವ ಸಂಭವ ಇರುತ್ತದೆ. ನಮ್ಮೆಲ್ಲರ ಕ್ರಿಯೆಗಳು ಈ ದಿಶೆಯಲ್ಲಿ ಪ್ರವೃತ್ತವಾಗಬೇಕು;ಶಕ್ತಿ ಈ ದಿಶೆಯಲ್ಲಿ ಸಂಚಯಿಸಬೇಕು.

●     ಸರಕಾರಗಳು ಕನ್ನಡವನ್ನು ಅನ್ನ ಕೊಡಬಲ್ಲ ಮೂಲವನ್ನಾಗಿ ಮಾಡಬೇಕು
○     ಕನ್ನಡ ಮಾಧ್ಯಮ ಕಡ್ಡಾಯ ಸರಕಾರೀ ಕೆಲಸಗಳಿಗೆ
○     ಕನ್ನಡದ ನೆಲ ಜಲ ಸಂಪನ್ಮೂಲಗಳನ್ನು ಬಳಸಿದಲ್ಲಿ ಕನ್ನದವನ್ನು ಪ್ರಥಮಭಾಶೆಯಾಗಿ ಕಲಿಸುವ ನಿಯಮ
○     ಪ್ರತಿಯೊಂದು ವ್ಯವಹಾರವೂ ಕನ್ನಡದಲ್ಲೇ ನಡೆಯತಕ್ಕದ್ದು . ಇಂಗ್ಲೀಷಿನ ಪ್ರತಿ ಬೇಕಾದಲ್ಲಿ ಶುಲ್ಕ ವಿಧಿಸತಕ್ಕದ್ದು ಆ ಹಣವನ್ನು ಕನ್ನಡಪರ ಕಾರ್ಯಗಳಿಗೆ ಬಳಸತಕ್ಕದ್ದು
○     ಉನ್ನತ ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಮಕ್ಕಳಿಗೆ ಆದ್ಯತೆ
○     ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಕನ್ನಡವನ್ನು ಕಡ್ಡಾಯ ವಿಷಯವಾಗಿಸುವುದು
○     ಸರಕಾರದ ಪ್ರತಿ ನೌಕರಿಗೂ ಕನ್ನಡ ಪ್ರಥಮ ಭಾಷೆಯಲ್ಲಿ ಕಲಿತಿರತಕ್ಕ ನಿಯಮ ರೂಪಿಸುವುದು
○     ಖಾಸಗೀ ಸಂಸ್ಥೆಗಳಲ್ಲೂ ಕೆಲಸಕ್ಕೆ ಸೇರಲು ಕನ್ನಡದ ಕನಿಷ್ಠ ಜ್ಞಾನದ ಅಗತ್ಯ
○     ಕನ್ನಡವನ್ನು ಅಧಿಕೃತವಾಗಿ ಬಳಸುವ/ಪೋಷಿಸುವ ಸಂಸ್ಥೆಗಳಿಗೆ ವಿಶೇಷ ರಿಯಾಯಿತಿಗಳು.
●     ಕನ್ನಡ ಶಾಲೆಗಳು- ಕಾಲೇಜುಗಳು
○     ವೃತ್ತಿಪರ ಶಿಕ್ಷಣದಲ್ಲೂ ಕನ್ನಡ ಭಾಷೆ ಒಂದು ಕಡ್ಡಾಯ ವಿಷಯ. ಇಲ್ಲಿ ಭಾಷೆಯ ಹರಹು ಮತ್ತು ಸೌಂದರ್ಯಕ್ಕೆ ಮಹತ್ವ ನೀಡಿ ಅದನ್ನು ಆಸಕ್ತಿಕರವಾಗಿಡುವ ಪಠ್ಯವಾಗಿಡುವುದು. ಒಣ-ನೀರಸ ಪಠ್ಯ ಬೇಡ.
○     ಕನ್ನಡ ಶಾಲೆಗಳ ಮೌಲ್ಯ ಹಾಗೂ ಸವಲತ್ತುಗಳನ್ನು ಅಭಿವೃದ್ಧಿಗೊಳಿಸುವುದು
○     ಅರ್ಹರನ್ನು ಉತ್ತಮ ಸಂಬಳದ ಮೇಲೆ ಕೆಲಸಕ್ಕೆ ನೇಮಿಸುವುದು
●     ಪಠ್ಯ ಪುಸ್ತಕಗಳನ್ನು ಸಕಾಲಕ್ಕೆ ಒದಗಿಸುವುದು
●     ಯಾವುದೇ ಲಾಬಿಗೆ ಬಲಿಯಾಗದೆ ಭಾಷೆಯನ್ನು ರಕ್ಷಿಸುವ ಧ್ಯೇಯದಿಂದಲೇ ಕಾನೂನುಗಳನ್ನು ರೂಪಿಸುವುದು
●     ಇನ್ನೂ ಬೇಕಾದಷ್ಟು- ಮಾಡ ಬೇಕೆಂದರೆ ಮಾಡಬಹುದು…… ಅದರೆ ಅಲ್ಲೊಂದು  ದೊಡ್ಡ ‘ಆದರೆ’ ‘ಇದೆ!!!

ಇದು ನಮ್ಮ ಬದ್ಧತೆ, ಅಭಿಮಾನ, ಕಾರ್ಯಕ್ಷಮತೆ ಹಾಗೂ ಏಕತೆಯನ್ನು ಅವಲಂಬಿಸಿರುತ್ತದೆ.
ಆಶಾದಾಯಕ
ಬೆಳವಣಿಗೆಗಳುಇವು ಯಾವುದೂ ನಮ್ಮ ಕೈಲಿಲ್ಲ. ನೆರವಾಗಿ ನಾವು ಇವುಗಳನ್ನು ಅನುಷ್ಠಾನಗೊಳಿಸಲಾಗದು. ದೂರಗಾಮೀ ಯೋಜನೆಗಳೆಂದು ಇವುಗಳನ್ನು ಪರಿಗಣಿಸಿ ನಮ್ಮ ಹತೋಟಿಯಲ್ಲಿ ಇರುವ ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸಿಕೊಳ್ಳಬೇಕಾಗಿದೆ. ಈ ಬಗೆಯ ಹಲವು ಆಶಾದಾಯಕ ಬೆಳವಣಿಗೆಗಳು ಉದಾಹರಣೆಯಾಗಿ  ನಮ್ಮ ಮುಂದಿವೆ.

  • ಅಳಿಯುತ್ತಿದ್ದ ಭಾಷೆಗಳನ್ನು ಮತ್ತೆ ಉಳಿಸಿ ಬೆಳೆಸಿದ ಉದಾಹರಣೆಗಳಿವೆ
  • ವೆಲ್ಷ್ ( ವೇಲ್ಸ್ ದೇಶ, ಯುನೈಟೆಡ್ ಕಿಂಗ್ಡಂ), ಕೊರ್ನಿಶ್ ( ಕರನ್ ವಾಲ್ ಪ್ರಾಂತ್ಯ), ಯುನೈಟೆಡ್ ಕಿಂಗ್ ಡಂ), ಫ್ರೆಂ ಚ್ ( ಫ಼್ರಾನ್ಸ್ ದೇಶದ ವಸಾಹತು ದೇಶಗಳಲ್ಲಿ), ಹೀಬ್ರೂ ( ಇಸ್ರೇಲ್ ದೇಶ)

ಕನ್ನಡವನ್ನೂ ಮತ್ತೆ ಪ್ರವರ್ಧಮಾನಕ್ಕೆ ತರುವುದು ಅಸಂಭವವೇನಲ್ಲ. ಈಗಾಗಲೇ ಈ ದಿಶೆಯಲ್ಲಿ ಹಲವಾರು ಧನಾತ್ಮಕ ಬೆಳವಣಿಗೆಗಳು ಆಗುತ್ತಿದ್ದು, ಬೆಂಗಳೂರಿನಲ್ಲಿರುವ ಹಲವಾರು ಇಂಜಿನಿಯರುಗಳು ತಮ್ಮ ತನು,  ಮನ, ಧನಗಳನ್ನು ಕನ್ನಡಕ್ಕಾಗಿ ಧಾರೆಯೆರೆಯುತ್ತಿದ್ದಾರೆ. ಉನ್ನತ ಶಿಕ್ಷಣವೂ ಕನ್ನಡದಲ್ಲಿ ಸಾಧ್ಯವಾಗುವಂತೆ, ಇಂಗ್ಲೀಷ್ ಭಾಷೆಯ ಹಂಗಿಲ್ಲದೆಯೂ ಅರ್ಥ ಮಾಡಿಕೊಳ್ಳಬಲ್ಲ ವಿಜ್ಞಾನದ ವಿವಿಧ ಶಾಖೆಗಳ ಅಧ್ಯಾಯಗಳನ್ನು, ವಿಷಯಗಳನ್ನೂ ಕನ್ನಡದಲ್ಲೇ, ಕನ್ನಡಿಗರಿಗೆ ಅರ್ಥವಾಗುವಂಥ ರೀತಿಯಲ್ಲೇ ಹೊಸ ಹಾಗೂ ಹಳೆಯ ಕನ್ನಡ ಪದಗಳನ್ನು ಬಳಸಿ ಬರೆಯುತ್ತಿದ್ದಾರೆ. ಗ್ರಾಹಕ ಆಂದೋಲನದ ಮಾದರಿಯಲ್ಲಿ ಕನ್ನಡಕ್ಕಾಗಿ ಚಳುವಳಿಗಳನ್ನು ಮಾಡುತ್ತಿದ್ದಾರೆ. ಇವೆಲ್ಲಕ್ಕೂ ನಮ್ಮೆಲ್ಲೆರ ಪುಟ್ಟ ಅಳಿಲುಸೇವೆಯ ಮಾದರಿಯಲ್ಲಿ ಕೈ ಜೋಡಿಸುವಂತಾದರೆ ನಮ್ಮ ಕನ್ನಡದ ಋಣ ತೀರಿಸಿದಂತಾಗುವುದಿಲ್ಲವೇ??

2

 ತ್ವರಿತವಾಗಿ ಆಗಬೇಕಾದ ಕೆಲಸ

ಮಕ್ಕಳು ಹಾಗೂ ಯುವ ಪೀಳಿಗೆಗಳನ್ನು ಕನ್ನಡದತ್ತ ಸೆಳೆಯುವ ಕಾರ್ಯ

2

ಕೊನೆ ಹನಿ:

ಮನುಷ್ಯನ ಮೆದುಳಿನಲ್ಲಿ ದರ್ಪಣಾ ನರವ್ಯೂಹವೆಂಬುದೊಂದು ಇರುತ್ತದಂತೆ. ಇದರ ಕೆಲಸ ನಾವು ಎದುರಲ್ಲಿರುವ ವ್ಯಕ್ತಿಯ ಮನೋಸ್ಥಿತಿ, ದೇಹದ ಭಾವ-ಭಂಗಿ (ಆಸನ) ಇವುಗಳನ್ನು ಗುರುತಿಸಿ ಅದರಂತೆ ತನ್ನ ಪ್ರತಿಕ್ರಿಯೆಯನ್ನೂ , ದೇಹ ಮನಸ್ಸುಗಳನ್ನೂ ಬದಲಾಯಿಸಿ ಮಾರ್ಪಡಿಸಿಕೊಳ್ಳಲು ನೆರವಾಗುವುದು. ಇದರ ನೆರವಿನಿಂದ ನಾವು ವ್ಯವಹರಿಸುತ್ತಿರುವ ವ್ಯಕ್ತಿಗಳೊಂದಿಗೆ ಸ್ನೇಹಮಯ ಸಂವಹನವನ್ನೋ, ಇಲ್ಲವೇ ಆಪತ್ತಿನ ಮುನ್ಸೂಚನೆ ಕಂಡು ಆ ವ್ಯಕ್ತಿ/ಸನ್ನಿವೇಶದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಸಜ್ಜಾಗಲು ನೆರವಾಗುತ್ತದೆ. ನಮ್ಮ ದೈನಂದಿನ ವ್ಯವಹಾರಗಳಲ್ಲಿ  ನಮ್ಮ ಸುತ್ತಲಿನ ಪರಿಸರದ ಪ್ರಭಾವಕ್ಕೊಳಗಾಗಿ ನಮ್ಮ ಮನಸ್ಥಿತಿ ಬದಲಾಗುವುದನ್ನು ನಾವೆಲ್ಲರೂ ಅರಿತೇ ಇರುತ್ತೇವೆ. ಹಲವಾರು  ಸಂದರ್ಭಗಳಲ್ಲಿ ಇತರರ ಸಿಟ್ಟು, ಸಂತೋಷ, ಹುರುಪು, ಹತಾಶೆ ಮುಂತಾದ ಮನೋಭಾವನೆಗಳನ್ನು ಮೈಮನಗಳ ಮೇಲೆ ಆರೋಪಿಸಿಕೊಂಡೇ ಇರುತ್ತೇವೆ.ಇದನ್ನು ಕನ್ನಡದ ಉಳಿವು -ಬೆಳವಣಿಗೆಗೆ ಅಳವಡಿಸಿಕೊಳ್ಳಬಹುದೆಂದು ನನ್ನ ಆಳವಾದ ನಂಬಿಕೆ. ಇದೇ ಕಾರಣಕ್ಕೆ ನಾವು ಉಳಿದವರೊಂದಿಗೆ ಮಾತನಾಡುವಾಗ ಅವರ ಕಂಗ್ಲೀಷಿನ ಪ್ರಭಾವಕ್ಕೆ ಒಳಗಾಗದೆ ಕನ್ನಡದಲ್ಲಿ ವ್ಯವಹರಿಸಿದರೆ ಎದುರಾಳಿಯ ದರ್ಪಣಾವ್ಯೂಹ ಅವರನ್ನು ಕಂಗ್ಲೀಷ-ಇಂಗ್ಲೀಷಿನಿಂದ ಕನ್ನಡದೆಡೆಗೆ ಸೆಳೆಯಬಹುದೆಂಬ ಮಹದಾಶೆ ನನ್ನದು.

ಉಪಸಂಹಾರ ಮತ್ತು ಪರಿಸಮಾಪ್ತಿ:

ಬೆರಕೆಯ ಭಾಷೆಯಿಂದ ನಮ್ಮ ಮಾತಿನಲ್ಲಿ ಸೇರ್ಪಡೆಯಾಗುವೆ ಪ್ರತಿಯೊಂದು ಅನ್ಯ ಭಾಷಿಕ ಪದವೂ ಕನ್ನಡದ ಅಧಿಕೃತ ಪದಗಳನ್ನು ಮರೆಸುವುದರಿಂದ ಕನ್ನಡ ಭಾಷೆಯ ಶವ ಪೆಟ್ಟಿಗೆಗೆ ಹೊಡೆವ ಮೊಳೆಗಳಂತೆ, ಅನ್ನದಲ್ಲಿ ಸಿಗುವ ಕಲ್ಲಿನಂತೆ, ತೋಟದಲ್ಲಿ ಬೆಳೆದ ಕಳೆಗಳಂತೆ. ಈ ಉಪಮೆ/ರೂಪಕವನ್ನು ಬಳಸಿದ  ಕೆಳಗಿನ ಕೆಲವು ಕವಿತೆಯ ಸಾಲುಗಳ ಜೊತೆಗೆ ಈ ದೀರ್ಘ ಲೇಖನವನ್ನು ಮುಗಿಸುತ್ತಿದ್ದೇನೆ. ಓದಿದ ನಿಮಗೆ ಧನ್ಯವಾದಗಳು. ನಿಮ್ಮಲ್ಲಿ ಶೇಕಡಾ ೨೦-೨೫ ರಷ್ಟು ಬದಲಾವಣೆ ಕಂಡರೆ ಕನ್ನಡಮಾತೆ ಧನ್ಯಳು!!

ತುತ್ತಲೊಂದು ಕಲ್ಲು ಸಿಗಲು ಉಗಿಯಬಹುದು ದೂರಕೆ
ತುತ್ತತುಂಬ ಕಲ್ಲೆ ಇರಲು ಒಗ್ಗಲಹುದೆ ದೇಹಕೆ
ಕಲ್ಲು ತುಂಬಿದನ್ನದಂತೆ ಬೆರಕೆಯಾದ ಭಾಷೆಯು
ಕೀಳರಿಮೆಗೆ ಆಲಸ್ಯವು ಸೇರಿ ಬೆಳೆದ ಕ್ಲೀಷೆಯು

ಕನ್ನಡವನೆ ನುಡಿಯಿರಿ ಬಳಸಿ ಅದರ ಪದಸಿರಿ
ಶುದ್ಧವಾದ ಭಾಷೆ ಬಳಸಿ ಪರಂಪರೆಯ ಉಳಿಸಿರಿ

ಕನ್ನಡವ ನುಡಿವಲ್ಲಿ ಶುದ್ಧಕನ್ನಡ ನುಡಿದು
ಕನ್ನಡದ ಪದಸಿರಿಯ ಮನದಾಳದಿಂದಗೆದು
ಕನ್ನಡವ ಕನ್ನಡದ ಸೊಗಡಿನಲೆ ಬಳಸಿದರೆ
ಕನ್ನಡದ ತೋಟದೋಳ್ ಹರಿಯದೇ ಶುಭ್ರ ತೊರೆ

ಕನ್ನಡದ ನುಡಿತೋಟ ನಿನ ಸೇವೆ ಬೇಡುತಿದೆ
ಮನ್ನಿಸು ಕನ್ನಡದ ಕೋರಿಕೆಯ ಗೆಳೆಯಾ
ನಿನ್ನ ಮನೆಯಲಿ ದಿನವು ನೀವಾಡೊ ಮಾತಿನಲಿ
ಕನ್ನಡದ ಪದಗಳನೆ ಬಿಡದೆ ಬಯಸುವೆಯಾ

_______________________________________________________________

ತನು ಕನ್ನಡ , ಮನ ಕನ್ನಡ , ನುಡಿ ಕನ್ನಡ ಎಮ್ಮವು

ಹೆಚ್ಚಿನ ತಿಳಿವಿಗಾಗಿ: (ಕನ್ನಡ ಸಂಪತ್ತಿನ ಆಕರಗಳು)

೧.೨. ಬನವಾಸಿ ಕನ್ನಡ ಬಳಗ ಅವರ ಜಾಲ ಜಗುಲಿಯನ್ನು ಜಾಲಾಡಿ
೩. ‘ಗಾಂಚಾಲಿ ಬಿಡಿ ಕನ್ನಡ ಮಾತಾಡಿ’ ಎಂಬ ಜಾಲತಾಣ ನೋಡಿ
೪. ಪ್ರೊ. ಜಿ. ವೆಂಕಟಸುಬ್ಬಯ್ಯನವರ ಮೂರು ಸಂಪುಟಗಳ ನಿಘಂಟು
೫. “ವಸಂತಬಂದಾ” ಎನ್ನುವ ಬ್ಲಾಗುತಾಣ
೬. ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ ದ ಮಿನ್ನೆಲ (ಮಿಂಚು ನೆಲ/ ವೆಬ್ ಸೈಟ್).
೭. ‘ಕನ್ನಡ ಡಿಂಡಿಮ’ ಜಾಲ ತಾಣ

ಕೃತಜ್ಞತೆಗಳು:

೧. ಡಾ. ವೆಂಕಟೇಶ್.ಎಂ. ರಾವ್
೨. ಡಾ.ಉಮಾ ವೆಂಕಟೇಶ್
೩. ಡಾ. ರವೀಂದ್ರ .ಪಿ
೪. ಡಾ.ಸಾಯಿ ಪ್ರಸಾದ್
೫. ಶ್ರೀಮತಿ. ವೀಣಾ ಕಟ್ಟಿ.
೬. ಡಾ.ಶ್ರೀವತ್ಸ ದೇಸಾಯಿ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments