ಸ್ತ್ರೀ ಸ್ವಾತಂತ್ರ್ಯ ಮತ್ತು ವರ್ತಮಾನದ ತಲ್ಲಣಗಳು
– ಶ್ರೀಶೈಲ್ ಮಗದುಮ್ಮ
ಬಹುಷಃ ಹಲವಾರು ಶತಮಾನಗಳಿಂದ ಚರ್ಚಿವಾಗುತ್ತಿರುವ ವಿಷಯಗಳಲ್ಲಿ ಸ್ತ್ರೀ ಸ್ವಾತಂತ್ರ್ಯವೂ ಕೂಡ ಒಂದು. ಈಗ ಹಲವಾರೂ ವರ್ಷಗಳಿಂದ ಆಂತರಿಕ ಸ್ವಾತಂತ್ರ್ಯದಿಂದ ಬಾಹ್ಯ ಸ್ವಾತಂತ್ರ್ಯದ ಬಗ್ಗೆ ಹಲವಾರು ಚರ್ಚೆಗಳು ಶುರುವಾಗಿವೆ. ಅದರಲ್ಲಿ ನನ್ನ ಬಟ್ಟೆ ನನ್ನ ಆಯ್ಕೆ, ನಾವು ಯಾವಾಗ ಬೇಕಾದರೂ ಎಲ್ಲಿಗೆ ಬೇಕಾದರೂ ಹೋಗುತ್ತೇವೆ ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ ಅನ್ನುವ ಚರ್ಚೆಗಳು. ಇರಲಿ ಯಾರು ಯಾವ ಬಟ್ಟೆಯನ್ನಾದರೂ ಹಾಕಲಿ, ಯಾರು ಎಲ್ಲಿಗಾದರೂ ಹೋಗಲಿ ಅದು ಅವರ ಇಷ್ಟ, ಇದನ್ನು ಪ್ರಶ್ನಿಸುವುದು ಕೂಡ ಆಕ್ಷೇಪಾರ್ಹವಾದದ್ದು. ಆದರೆ ಈ ವಾದವನ್ನು ಇಟ್ಟುಕೊಂಡು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮಾಜವನ್ನು ಯಾವ ಕಡೆಗೆ ತಗೆದುಕೊಂಡು ಹೋಗುತ್ತಿದ್ದಾರೆ ಎನ್ನುವ ಕಡೆ ಗಮನಹರಿಸಬೇಕಾಗಿದೆ.
ಮನುಷ್ಯ ಮೂಲತಃ ಸಮಾಜ ಜೀವಿ. ಸಮಾಜವನ್ನು ಹೊರತು ಪಡಿಸಿ ಬಾಳುವ ವ್ಯಕ್ತಿ ಮನುಷ್ಯನಲ್ಲ ಅವ ದೇವರವಾಗಿರಬೇಕು ಇಲ್ಲ ದೆವ್ವವಾಗಿರಬೇಕು ಅನ್ನುವುದುನ್ನು ಅರಿಷ್ಟಾಟಲ್ ಸಾವಿರಾರು ವರ್ಷಗಳ ಹಿಂದೆ ಹೇಳಿದ್ದರೂ ಆ ಮಾತನ್ನೂ ಯಾರೂ ಕೂಡ ತೆಗೆದುಹಾಕಲು ಬರುವುದಿಲ್ಲ. ಸಮಾಜವೆಂಬ ಯಂತ್ರಾಂಶದಲ್ಲಿ ವಾಸಿಸತಕ್ಕಂತ ವ್ಯಕ್ತಿ ನಾಗರಿಕತೆಯೆಂಬ ತಂತ್ರಾಂಶದಲ್ಲಿ ತನ್ನ ಜೀವನವನ್ನು ನಡೆಸಿದರೆ ಸಮಾಜದಲ್ಲಿ ಆರೋಗ್ಯಕರವಾಗಿ ಬಾಳಬಹುದು. ಯಾವ ವ್ಯಕ್ತಿ ತಾನಿರುವ ನಾಗರಿಕತೆಯನ್ನು ಮೀರಿ ಬೆಳೆಯಲು ಪ್ರಯತ್ನಪಡುತ್ತಾನೋ ಆವಾಗ ಸಾಮಾಜಿಕ ತಲ್ಲಣಗಳು ಶುರುವಾಗುತ್ತವೆ. ನಮ್ಮ ಹಳ್ಳಿಗಳಲ್ಲಿ ಇಂದಿಗೂ ಹಲವಾರೂ ಕುಟುಂಬಗಳಲ್ಲಿ ಎರಡೇ ಜೊತೆ ಬಟ್ಟೆಗಳನ್ನಿಟ್ಟು ಜೀವನ ಸಾಗಿಸುವಂಥ ಪರಿಸ್ಥಿತಿ ಇದೆ. ಅಂಥಹ ಸಂದರ್ಭದಲ್ಲಿ ನಗರದಲ್ಲಿ ಹಾಕುವ ತುಂಡು ಬಟ್ಟೆಗಳನ್ನು ಹಳ್ಳಿಗಳಲ್ಲಿ ಹಾಕಿದಾಗ ಹಾಗೂ ಶಹರದಲ್ಲಿ ತುಂಡುಬಟ್ಟೆಗಳನ್ನು ಹಾಕಿಕೊಂಡಾಗ, ಅದನ್ನು ಇನ್ನೂ ಹಳ್ಳಿಯ ಮಟ್ಟದ ಮನಸ್ತಿತಿಯಲ್ಲಿರುವ ವ್ಯಕ್ತಿಗಳು ಅದನ್ನು ಮುಜುಗರದಿಂದ ನೋಡಿದಾದ, ಅವರನ್ನು ಕೀಳುಮಟ್ಟದ ವ್ಯಕ್ತಿಗಳು ಅಂತ ಬಿಂಬಿಸುವುದು ಎಷ್ಟು ಸರಿ. ಅದರಲ್ಲಿ ಇನ್ನೂ ಆ ಮನಸ್ತಿತಿಯಲ್ಲಿರುವವರ ಮನೆಯಲ್ಲಿ ತಮ್ಮ ಹೆಣ್ಣುಮಕ್ಕಳಿಗೆ ಮೈತುಂಬಾ ಬಟ್ಟೆಹಾಕಬೇಕು ಅಂತ ಅವರು ಕಟ್ಟುನಿಟ್ಟು ವಿಧಿಸಿರುವುದು ಅವರ ಮನಸ್ತಿತಿಗೂ ಬೆಳಕಿನ ವೇಗದಲ್ಲಿ ಬೆಳೆಯುತ್ತಿರುವ ನಾಗರಿಕತೆಗೂ ಅಜಗಜಾಂತರ ವ್ಯತ್ಯಾಸವಿದೆ. ಅದನ್ನು ಅರ್ಥಮಾಡಿಕೊಳ್ಳದೆ ಅವರು ಸ್ತ್ರೀ ಸ್ವಾತಂತ್ರ್ಯದ ವಿರೋಧಿಗಳು ಎಂದು ಜರಿದರೆ ಅವರ ನಾಗರಿಕತೆ ಮಾತ್ರ ಅಫ್ಡೇಟ್ ಆಗಿದೆ, ವಿಚಾರಶಕ್ತಿ ಇನ್ನೂ ಕೆಳಹಂತದದಲ್ಲೇ ಇದೆ ಎಂದೂ ಎಂಥವರು ಕೂಡ ತಿರ್ಮಾನಿಸಬಹುದು.
ಇನ್ನೂ ಸಿಗರೇಟ್ ಸೇದುವ, ಬಾರ್ ಗಳಿಗೆ ಹೆಣ್ಣುಮಕ್ಕಳು ಹೋಗುವ ವಿಚಾರದ ಬಗ್ಗೆ ಮಾತನಾಡುವುದಾದರೆ ಅದರ ಬಗ್ಗೆ ಮಾತನಾಡುವುದಕ್ಕೇ ನೀವ್ಯಾರ್ರಿ? ಅವರ ದುಡ್ಡು, ಅವರ ಸಮಯ ಅವರು ಎಲ್ಲಿಯಾದರೂ ಹೋಗ್ತಾರೆ ಎನ್ನುವ ಡೈಲಾಗ್ ಬಂದೇ ಬರುತ್ತದೆ. ಬಾರ್ ಗಳಿಗೆ ಹೋಗುವ ಸಿಗರೇಟ್ ಸೇದುವ ವಿಚಾರಕ್ಕೆ ಬಂದಾಗ ತಂದೆ, ಗಂಡನನ್ನೇ ತರಾಟೆಗೆ ತಗೆದುಕೊಳ್ಳುವ ಈ ಸಮಾಜದಲ್ಲಿ ತಮ್ಮ ಮಗಳು (ಇಲ್ಲಿ ಮಗ ಕೂಡ) ಕುಡಿದು ಕುಪ್ಪಳಿಸಿ, ಸಿಗರೇಟ್ ಸೇದ್ತಾ ಮಜಾ ಮಾಡುವವರನ್ನು ತಂದೆ ತಾಯಿಗಳೂ ವಿರೋಧಿಸಿಯೇ ವಿರೋಧಿಸ್ತಾರೆ. ಇದನ್ನು ಇಟ್ಟುಕೊಂಡು ಸ್ತ್ರೀ ಸ್ವಾತಂತ್ರಕ್ಕೆ ಅಡ್ಡಿ, ‘ಅವರ ದುಡ್ಡು, ಅವರ ಇಷ್ಟ’ ಎಂದು ಭಾಷಣ ಬಿಗಿಯುವ ಪರಿಸ್ಥಿತಿ ಬಂದಿದೆಯೆಂದರೆ ನಾವು ಎತ್ತ ಸಾಗುತ್ತಿದ್ದೇವೆ ಎಂಬುದುನ್ನು ಮನನಃ ಮಾಡಿಕೊಳ್ಳಬೇಕಾಗಿದೆ. ಮಕ್ಕಳು ಬಾರ್ ಗೆ ಹೋಗುವುದು, ಸಿಗರೇಟ್ ಸೇದುವ ಕ್ರಿಯೆಯನ್ನು ಸಮಾಜ ಯಾಕೆ ವಿರೋಧಿಸುತ್ತದೆ ಎಂದರೆ ಆ ಮಕ್ಕಳು ಇನ್ನೊಬ್ಬರ ಮೇಲೆ ಪ್ರಭಾವ ಬೀರಬಾರದು ಎನ್ನುವ ಸದುದ್ದೇಶ ಕೂಡ ಇರುತ್ತದೆ ಎನ್ನುವ ಸಾಮಾನ್ಯ ಜ್ಞಾನವನ್ನು ಕೂಡ ನಾವು ಹೊಂದಬೇಕಾಗಿದೆ.
ಇನ್ನು ತುಂಡುಡುಗೆ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದ ವಿಚಾರಕ್ಕೆ ಬರುವುದಾದರೆ ಸಮಾಜದಲ್ಲಿ ಎಲ್ಲರೂ ಉತ್ತಮ ಸಂಸ್ಕಾರವನ್ನು ಹೊಂದಿರುವ ವ್ಯಕ್ತಿಗಳು ಮಾತ್ರ ಇರುತ್ತಾರೆ ಎನ್ನುವುದು ಭಾವಿಸುವುದು ತಪ್ಪು. ಮೈತುಂಬಾ ಆಭರಣಗಳನ್ನು ಹಾಕಿಕೊಂಡು ಅದನ್ನು ಪ್ರದರ್ಶನಕ್ಕೆ ಇಡುವವರ ತರಹ ಹೊರಗಡೆ ಹೋಗುವುದು ಒಳ್ಳೆಯದಲ್ಲ ಎಂದು ಹೇಳುವುದು ಕಳ್ಳಕಾಕರಿಂದ ಆಭರಣಗಳನ್ನು ಹಾಗೂ ಅದನ್ನು ಹಾಕಿಕೊಂಡ ಮಹಿಳೆಯ ರಕ್ಷಣೆಯ ಹಿತದೃಷ್ಟಿಯಿಂದ. ಆದರೆ ಮದುವೆ ಹಾಗೂ ಇನ್ನೀತರ ಸಮಾರಂಭಗಳಲ್ಲಿ ಅದನ್ನು ಹಾಕಿದರೆ ಅದಕ್ಕೆ ಯಾವ ಪರಿಣಾಮವೂ ಬೀರುವುದಿಲ್ಲ. ಅದರ ಹಾಗೇಯೆ ತುಂಡುಡುಗೆಯನ್ನು ತೊಟ್ಟು ಎಲ್ಲಿ ಬೇಕಾದರೂ ತಿರುಗಾಡುತ್ತೇನೆ ಎನ್ನುವ ಮನಸ್ತಿತಿಯವರೂ ಅರ್ಥಮಾಡಿಕೊಳ್ಳಬೇಕು. ಕೆಲವೊಂದು ದುರ್ಬಲ ಮನೋಸ್ತಿತಿಯ, ಪಾನಮತ್ತರಾದ, ಹುರುಟು ಸ್ವಭಾವದ ಕೆಲವೇ ಕೆಲವು ವ್ಯಕ್ತಿಗಳಿಂದ ಮಹಿಳೆಯರ ಮೇಲೆ ಕೈಹಾಕುವ ಪ್ರಸಂಗಗಳು ಬರಬಹುದು (ಅವರನ್ನು ಕಾಪಾಡಲು ಕಾನೂನು, ಪೊಲೀಸ್ ವ್ಯವಸ್ಥೆ ಇದೆಯಾದರೂ ಅವರು ಎಲ್ಲ ಸಮಯದಲ್ಲಿ, ಎಲ್ಲ ಸ್ಥಳದಲ್ಲಿ ಇರಲು ಸಾಧ್ಯವಾಗಲಿಕ್ಕಿಲ್ಲ) ಅದಕ್ಕೆ ಆ ತರಹದ ಬಟ್ಟೆಗಳನ್ನು ಎಲ್ಲಿ ಹಾಕಬೇಕು ಎನ್ನುವ ಸಾಮಾನ್ಯ ಜ್ಞಾನವೂ ಕೂಡ ಬೇಕಾಗುತ್ತದೆ. ಹೆಣ್ಣನ್ನ ಹೆಣ್ಣಣ್ಣಾಗಿ ನೋಡದೇ ತಾಯಿ, ತಂಗಿ, ಮನೆಮಗಳು ಎಂದು ನೋಡುವ ವ್ಯಕ್ತಿಗಳಿಗೆ ಇದು ಅರ್ಥವಾಗುತ್ತದೆ.
ಹೆಣ್ಣುಮಕ್ಕಳ ಶಿಕ್ಷಣ, ಉದ್ಯೋಗ, ರಾಜಕೀಯದಲ್ಲಿ ಪಾಲ್ಗೊಳ್ಳುವಿಕೆ, ಔದ್ಯೋಗಿಕ ಕ್ಷೇತ್ರಗಳಲ್ಲಿ ಸ್ತ್ರೀ ಪಾಲ್ಗೊಳ್ಳುವುದು ಚರ್ಚೆಯಾಗಬೇಕಾದ ಈಗಿನ ಕಾಲದಲ್ಲಿ ಅವಳು ಧರಿಸುವ ಬಟ್ಟೆ, ಪುರುಷನಷ್ಟು ಸಮಾನವಾಗಿ ಬಾರ್ ನಲ್ಲಿ ಕುಡಿಯುವುದು, ಸಿಗರೇಟ್ ಸೇದುವುದು ಸ್ತ್ರೀ ಸ್ವಾತಂತ್ರ್ಯದ ಮಟ್ಟವನ್ನು ನಿರ್ಧರಿಸುವುದಾದರೆ ಅದನ್ನು ಪ್ರತಿಪಾದಿಸುವವರ ಬಗ್ಗೆ ಆಲೋಚನೆಯ ಮಟ್ಟದ ಬಗ್ಗೆ ನಾವು ಯೋಚಿಸಬೇಕಾಗಿದೆ.
ತುಂಡುಡುಗೆ ತೊಡುವುದು, ಬಾರ್ ನಲ್ಲಿ ಕುಡಿಯುವುದು, ಸಿಗರೇಟ್ ಸೇದುವುದು ಇಂತಹ ಸಮಾಜದ ಮೇಲೆ ಕೆಟ್ಟಪರಿಣಾಮ ಬೀರುವ ಅಂಶಗಳಾದ ಬಾಹ್ಯ ಅಂಶಗಳು ಸ್ತ್ರೀ ಸ್ವಾತಂತ್ರ್ಯ ನಿರ್ಧಾರ ಮಾಡದೇ ಆಂತರಿಕವಾಗಿ ಸ್ತ್ರೀಯನ್ನು ಗೌರವಿಸಿ ಸ್ವಾತಂತ್ರ್ಯದ ಕಡೆಗೆ ಕೊಂಡೊಯ್ಯುವಂತೆ ಮಾಡುವ ಆರೊಗ್ಯಕರವಾದ ಚರ್ಚೆಗಳು ಬರಲಿ. ಹಾ ಒಂದು ಮಾತು ಎಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೋ, ಅಲ್ಲಿಯೇ ದೇವತೆಗಳಿರುತ್ತಾರೆ ಎಂಬ ದೇಶದ ಸಂಸ್ಕೃತಿ ನಮ್ಮದು.
ಮಾನ್ಯರೇ ನಿಮ್ಮ ಕೊನೆ ವಾಕ್ಯದಿಂದ ನನ್ನ ಪ್ರತಿಕ್ರಿಯೆ ಆರಂಭಿಸುತ್ತಿದ್ದೇನೆ.
ಹಾ ಒಂದು ಮಾತು ಎಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೋ, ಅಲ್ಲಿಯೇ ದೇವತೆಗಳಿರುತ್ತಾರೆ ಎಂಬ ದೇಶದ ಸಂಸ್ಕೃತಿ ನಮ್ಮದು. ಹೀಗೆ ಅಂತ ನಾವು ಸಮಾಜವಾಗಿ ಗುಂಡು ಮಕ್ಕಳಿಗೆ ಬಾಲ್ಯದಿಂದಲೂ ಹೇಳಿಕೊಡುತ್ತಿದ್ದೇವೆಯೆ?
ಎರಡನೆಯದು “ಕೆಲವೊಂದು ದುರ್ಬಲ ಮನೋಸ್ತಿತಿಯ, ಪಾನಮತ್ತರಾದ, ಹುರುಟು ಸ್ವಭಾವದ ಕೆಲವೇ ಕೆಲವು ವ್ಯಕ್ತಿಗಳಿಂದ ಮಹಿಳೆಯರ ಮೇಲೆ ಕೈಹಾಕುವ ಪ್ರಸಂಗಗಳು ಬರಬಹುದು” ಇವರು ಯಾರು? ನಿಮಗೆ ಅವರ ಬಗ್ಗೆ ಪಾಪ ಅನ್ನುವ ಭಾವನೆಯೆ? ದುರ್ಬಲ ಮನಸ್ಥಿತಿ ಅವರು ಎಸಗುವ ಕಾರ್ಯಗಳಿಗೆ ಕ್ಷಮೆಯೆ? ಸುಮಾರು ೨೫ ವರ್ಷಗಳ ಹಿಂದೆ ತನ್ನ ಪಕ್ಕದ ಮನೆಯ ಹುಡುಗಿಯನ್ನೆ ದೋಣಿ ದಾಟುವಾಗ ಚುಡಾಯಿಸುತ್ತಿದ್ದ ಹ್ಡುಗರು ರಾತ್ರಿ ರಾಮ ಮಂದಿರಕ್ಕೆ ಇಟ್ಟಿಗೆ ಒಟ್ಟು ಹಾಕುವ ದೇಶಪೇಮಿಗಳಾಗಿ ನನ್ನ ಮಂದೆ ಬಂದಾಗ ಅವರ ನೇತೃತ್ವ ವಹಿಸಿದ ನಾಯಕನಿಗೆ ನನ್ನ ಮೇಲಿನ ಘಟನೆಗೆ ವಿವರ ಕೊಡಲು ತೋಚಲಿಲ್ಲ. ಒಟ್ಟಿಗೆ ಬೆಳೆಯುತ್ತಿದ್ದರೂ ಕೂಡ ಹೆಣ್ಣುಮಕ್ಕನ್ನು ಚುಡಯಿಸುವುದಕ್ಕೆ ಮಾದಕ ಪದಾರ್ಥಗಳ ಸಾಥ್ ಬೇಡ ಆಧುನಿಕತೆಯ ಮ್ಯಾನ್ ಹುಡ್ ಖಯಾಲಿ ಸಾಕು. ಅಪ್ರಾಪ್ರ ವಯಸ್ಕ ಮಕ್ಕಳ ಮೇಲೆ ಆಗುತ್ತಿರುವ ಅಪಚಾರ ಎಸಗುವವರು ಸಾಮಾನ್ಯ ಮನುಷ್ಯರು. ಅಮಲುಕೋರರಲ್ಲ. ಬಡಪಾಯಿ ಮಕ್ಕಳು ತುಂಡು ಉಡುಗೆ ಉಟ್ಟವರಲ್ಲ. ಸ್ಾಮಾಜ ಒಟ್ಟಾರೆ ಹೋಗುವತ್ತ ಗಮನ ಹರಿಸಿ ನಮ್ಮ ಮನೆಯ ಗಂಡು ಮಕ್ಕಳ/ ಗಂಡಸರ ಸಾಹಸಗಳ ವಿಚಾರಣೀ ಮಾಡುವ ಸಣ್ಣ ಕೆಲಸದ ಜೊತೆ ನಿಮ್ಮ ಲೇಖನದ ಕೊನೆಯ ವಾಕ್ಯವನ್ನು ಕಲಿಸಿದ್ಅರೆ ಬಹುಪಾಲು ಸಮಸ್ಯೆಗಳು ಉಂಟಾಗಲಾರವು.