ನಂಬಿಕೆ
– ಗೀತಾ ಹೆಗಡೆ
ಬದುಕೆಂಬ ಪಯಣದಲ್ಲಿ ಸಾವಿರಾರು ಜನರ ಪರಿಚಯ ಒಡನಾಟ ನಮಗಾಗುವುದು ಸಹಜ. ಈ ಸಹಜತೆಯಲ್ಲಿ ಎದುರಾಗುವ ಘಟನೆಗಳು ಹಲವಾರು. ಈ ಘಟನೆಗಳು ಮಹತ್ವ ಪಡೆಯುವುದು ಆಳವಾಗಿ ಮನಸ್ಸಿಗೆ ನಾಟಿದರೆ ಮಾತ್ರ ಸಾಧ್ಯ. ಅದಿಲ್ಲವಾದರೆ ಅದಲ್ಲಿಗೆ ಮರೆತು ಹೋಗುತ್ತದೆ. ಹಾಗಾದರೆ ಈ ಘಟನೆಗಳ ಹಿಂದೆ ಇರುವ ವಿಷಗಳಿಗೆಗೆ ಕಾರಣರಾದವರ ಮೇಲಿನ ನಂಬಿಕೆ ಎಲ್ಲರ ಬಗ್ಗೆ ಯಾಕೆ ಉಂಟಾಗುವುದಿಲ್ಲ? ಕೇವಲ ಕೆಲವು ಮನುಷ್ಯರ ಬಗ್ಗೆ ಮಾತ್ರ ಏಕೆ ನಂಬಿಕೆ ಉಂಟಾಗುತ್ತದೆ? ಕಾರಣ ಏನು? ಏಕೆ ಹೀಗೆ? ಆ ಭಾವನೆ ಯಾವ ಹಂತದಲ್ಲಿ ಮನಸ್ಸನ್ನು ಕಾಡುತ್ತದೆ?
ಉತ್ತರ ಹುಡುಕುವುದು ಸ್ವಲ್ಪ ಕಷ್ಟ. ಏಕೆಂದರೆ ಮನಸ್ಸನ್ನು ಹೊಕ್ಕಿ ಕೆದಕಿದಷ್ಟೂ ಅದು ನಿಗೂಢವಾಗುತ್ತ ಹೋಗುತ್ತದೆ. ಒಬ್ಬೊಬ್ಬರ ವಿಚಾರ ಒಂದೊಂದು ರೀತಿ. ಆದರೂ ಎಲ್ಲದಕ್ಕೂ ಮನುಷ್ಯ ಮುಂದುವರಿಯುವುದು, ಬದುಕುತ್ತಿರುವುದು ಈ ನಂಬಿಕೆಯೆಂಬ ಬುನಾದಿಯ ಮೇಲೆ. ಈ ನಂಬಿಕೆ ಮೊದಲು ನಮ್ಮ ಬಗ್ಗೆ ನಮ್ಮಲ್ಲಿ ಉಂಟಾಗಬೇಕು. ನಾನು ಏನು? ನನ್ನ ಸಾಮರ್ಥ್ಯ ಏನು? ನನಗೆ ಯಾವುದರಲ್ಲಿ ಆಸಕ್ತಿ ಇದೆ? ಹೀಗೆ ಹಲವಾರು ವಿಷಯವಾಗಿ ನಮ್ಮನ್ನೇ ನಾವು ಒರೆಗೆ ಹಚ್ಚಿ ಮನಸ್ಸಿನಲ್ಲಿ ಧೃಡತೆ ತಂದುಕೊಳ್ಳಬೇಕು. ನಮ್ಮನ್ನು ನಾವು ಆದಷ್ಟು ಮೌನಕ್ಕೆ ಶರಣಾಗಿಸಿ ನಮ್ಮೊಳಗಿನ ನಂಬಿಕೆ ಬಡಿದೆಬ್ಬಿಸಬೇಕು. ಮನಸ್ಸಿನಲ್ಲಿ ಉಂಟಾಗುವ ಛಲ, ಅದೇ ನಮ್ಮ ಮೇಲಿನ ನಂಬಿಕೆ ಬಲ ಪಡಿಸುತ್ತದೆ. ನಮ್ಮ ಮೇಲಿನ ನಂಬಿಕೆಯ ಹಾದಿಯಲ್ಲಿ ನಡೆಯುವಾಗ ಅನೇಕ ಅಡೆತಡೆಗಳು, ಬೇರೆಯವರಿಂದ ಕೀಳರಿಮೆಗಳ ಪ್ರಹಾರ, ಟೀಕೆ ಟಿಪ್ಪಣಿ ಎದುರಾಗುವುದು ಸಾಮಾನ್ಯ. ಆದರೆ ಅದರ ಕುರಿತು ತಲೆ ಕೆಡಿಸಿಕೊಳ್ಳದೆ ಮುನ್ನಡೆದಾಗ ಮಾತ್ರ ಬದುಕಲ್ಲಿ ಎದುರಾಗುವ ಕೆಲವರಿಂದಲಾದರೂ ಬೆನ್ನು ತಟ್ಟಿ ಹುರಿದುಂಬಿಸುವ ಗಳಿಗೆಗಳು ನಮ್ಮದಾಗುವುದರಲ್ಲಿ ಅನುಮಾನವಿಲ್ಲ. ಆತ್ಮವಿಶ್ವಾಸ ಬೆಳೆಯಲು ಪ್ರಾರಂಭವಾಗುತ್ತದೆ. ಟೀಕಿಸಿದವರು ಹಿಂದಡಿಯಿಡುತ್ತಾರೆ.
ಈ ಒಂದು ಬೆಳವಣಿಗೆಗೆ ಆಧಾರವಾಗಬಲ್ಲ ಅಥವಾ ನಮ್ಮ ಭಾವನೆಗಳಿಗೆ ಸರಿ ಹೊಂದಬಲ್ಲ ಮನುಷ್ಯರಲ್ಲಿ ನಮಗೆ ನಂಬಿಕೆ ಉಂಟಾಗುತ್ತದೆ. ಇದಕ್ಕೆ ದೀರ್ಘ ಕಾಲದ ಒಡನಾಟದ ಅಗತ್ಯ ಇಲ್ಲ. ವಯಸ್ಸಿನ ಹಂಗಿಲ್ಲ. ವಿದ್ಯೆ, ಜಾತಿ ಮತದ ಅಡಚಣಿ ಇರುವುದಿಲ್ಲ. ನೋಡಲಿ ಅಥವಾ ನೋಡದೆ ಇರಲಿ ಅವರೊಂದಿಗಿನ ಸಂಭಾಷಣೆಯಲ್ಲೋ, ಬರವಣೆಗೆಯಲ್ಲೋ ಅಥವಾ ಅವರಲ್ಲಿನ ಪ್ರತಿಭೆಯೋ ನಮ್ಮ ಮನಸ್ಸನ್ನು ಸೆಳೆಯುತ್ತದೆ. ಏಕೆಂದರೆ ಮನಸ್ಸೇ ಹಾಗೆ. ನೀವು ಕೇಳಿರಬಹುದು “ನನಗೆ ತುಂಬಾ ಇಷ್ಟ ಆಯಿತು ಮೊದಲ ಭೇಟಿಯಲ್ಲಿ, ಅಥವಾ ಮೊದಲ ನೋಟದಲ್ಲಿ. ಹೃದಯ ಸ್ಪಂಧಿಸಿತು. ನೋಡದೆ ಇದ್ರೂ ಅವರು ಒಳ್ಳೆಯವರು ಅಂತ ನನ್ನ ಮನಸ್ಸು ಹೇಳುತ್ತಿದೆ”. ಇದಕ್ಕೆ ಕಾರಣ ನಮ್ಮ ಒಳ ಮನಸ್ಸು ಗುಪ್ತವಾಗಿ ನಮಗರಿವಿಲ್ಲದಂತೆ ಅಂಥಹ ವ್ಯಕ್ತಿಯ ಪರಿಚಯದ ನಿರೀಕ್ಷೆಯಲ್ಲಿರುತ್ತದೆ. ವ್ಯಕ್ತಿಯ ರೂಪರೇಶೆ ಮುಖ್ಯವಾಗುವುದಿಲ್ಲ ಇಲ್ಲಿ. ಬರೀ ಹೃದಯದ ಭಾವನೆ ಮನಸ್ಸು ಕೇಳುವುದು. ಅದು ಬೇರೆಯವರಿಗೆ ಅದೇನು ಕಂಡು ಮೆಚ್ಚಿತೋ ಅನ್ನುವಂತಾಗಬಹುದು. ಆದರೆ ಈ ನಂಬಿಕೆ ಯಾರನ್ನೂ ಕೇರ್ ಮಾಡುವುದಿಲ್ಲ. ಒಂದಲ್ಲಾ ಒಂದು ವಿಷಯದ ಕುರಿತು ಹುಟ್ಟುವ ಹಲವರ ಬಗೆಗೆ ಉಂಟಾದ ನಂಬಿಕೆ ಕೃತಜ್ಞತೆಯ ರೂಪ ತಾಳುತ್ತದೆ. ಅವರಿಂದ ಯಾವುದೆ ರೀತಿಯ ಸಹಾಯ, ಸಲಹೆಗಳನ್ನು ಪಡೆದಾಗಲೆಲ್ಲ ಕೃತಜ್ಞತೆ ಸಲ್ಲಿಸಲು ಮನಸ್ಸು ಹಾತೊರೆಯುತ್ತದೆ. ಎಲ್ಲಾದರು ಕೃತಜ್ಞತೆ ಹೇಳಲು ಅವಕಾಶ ಆಗದೆ ಇರುವ ಸಂದರ್ಭದಲ್ಲಿ ಮನಸ್ಸು ತಪ್ಪು ಮಾಡಿದವರಂತೆ ಹಪಹಪಿಸುತ್ತದೆ. ಎಷ್ಟೋ ವರ್ಷ ಭೇಟಿಯಾಗದೆ ಇದ್ದರು ನೆನಪು ಮಾಸುವುದಿಲ್ಲ. ಅಪರೂಪಕ್ಕೆ ಭೇಟಿಯಾದರು ಆಗಿನ ಸಂಭ್ರಮವೇ ಬೇರೆ. ಆ ಭೇಟಿ ಮತ್ತೆ ನೆನಪಲ್ಲಿ ಸೇರಿ ಆಗಾಗ ಸಂಭ್ರಮಿಸುತ್ತದೆ.
ಹಾಗಾದರೆ ಎಲ್ಲರ ಬಗ್ಗೆ ಈ ಕೃತಜ್ಞತೆಯ ಭಾವ ಯಾಕೆ ಹಪಹಪಿಸೋದಿಲ್ಲ? ಬರೀ ಒಂದು ಥ್ಯಾಂಕ್ಸ್ ನಲ್ಲಿ ಸಮಾಪ್ತಿಯಾಗುತ್ತದೆ..! ಅದಲ್ಲಿಗೆ ಮರೆತುಬಿಡುತ್ತೇವೆ ಯಾಕೆ? ಏಕೆಂದರೆ ಮನಸ್ಸು ಒಪ್ಪಿಕೊಂಡಿರುವುದಿಲ್ಲ. ಮೂರನೆಯ ವ್ಯಕ್ತಿ ಎಂದು ಪರಿಗಣಿಸಿಬಿಡುವ ಮನಸ್ಸು ಅಲ್ಲಿಗೆ ನೆಮ್ಮದಿ ಪಡೆಯುತ್ತದೆ. ಮರೆತುಬಿಡುತ್ತದೆ. ಆತ್ಮೀಯ ಭಾವನೆಗೆ ಅಲ್ಲಿ ಅವಕಾಶ ಕೊಟ್ಟಿರುವುದಿಲ್ಲ ಮನಸ್ಸು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನಮ್ಮ ಆಸಕ್ತಿ ಗಳು ಅವರಲ್ಲೂ ಮನೆ ಮಾಡಿದ್ದರೆ ಇಬ್ಬರ ವಿಚಾರಗಳು ಒಂದೇ ಆಗಿದ್ದರೆ ಇಬ್ಬರ ಮನಸ್ಸಿನ ಬಾಗಿಲು ತಟ್ಟುತ್ತದೆ. ಅಲ್ಲಿ ಮಾತು ಆಡಿದಷ್ಟೂ ಮುಗಿಯುವುದಿಲ್ಲ, ಬೇಸರವೂ ಬರುವುದಿಲ್ಲ. ಇಬ್ಬರಲ್ಲೂ ವಿಶ್ವಾಸ ಮನೆ ಮಾಡಿ ಅಜೀವ ಗೆಳೆತನದ ಸಂಬಂಧ ಏರ್ಪಡುತ್ತದೆ. ನಂಬಿಕೆ ಬೆಳೆಯುತ್ತ ಹೋದಂತೆ ಮನದಲ್ಲಿ ಅಂತಹ ವ್ಯಕ್ತಿಯ ಬಗ್ಗೆ ಕೃತಜ್ಞತೆ ಬೆಳೆಯುತ್ತದೆ. ಮೌನವಾಗಿ ನೆನಪಿಸಿಕೊಳ್ಳುತ್ತೇವೆ ಸುಃಖವಿರಲಿ ದುಃಖವಿರಲಿ.
ಈ ನಂಬಿಕೆ ಕೃತಜ್ಞತೆ ಒಂದಕ್ಕೊಂದು ಮಿಳಿತವಾಗಿದ್ದರೆ ಸಂಸಾರದ ಬಂಡಿ ಸುಗಮವಾಗಿ ಸಾಗುತ್ತದೆ. ಒಬ್ಬರಿಗೊಬ್ಬರು ಹೊಂದಿಕೊಂಡು ಬಾಳಲು ಸಾಧ್ಯ. ನಮ್ಮ ಬದುಕಿನ ಬಗ್ಗೆ ನಮಗೆ ನಂಬಿಕೆ ಇರಬೇಕು. ನಮಗಿರುವ ನಂಬಿಕೆಯ ಜನರ ಒಡನಾಟದಲ್ಲಿ ಬೆರೆತು ಸುಃಖ ದುಃಖ ಹಂಚಿಕೊಂಡು ಸಂಭ್ರಮಿಸೋಣ. ಈ ಆತ್ಮವಿಶ್ವಾಸ ಕಾಯಿಲೆಯನ್ನೂ ಗುಣಪಡಿಸುವ ದಿವ್ಯ ಔಷಧಿ. ಬದುಕಿನ ಕೊನೆವರೆಗೂ ನನ್ನ ಜೀವನ ನನಗೆ. ನಾನು ಸದೃಡವಾಗಿ ನನ್ನ ಕೆಲಸ ನಾನು ಮಾಡಿಕೊಂಡು ಜೀವಿಸಬಲ್ಲೆ. ಯಾರ ಅಧೀನದಲ್ಲೂ ಬದುಕು ನಡೆಸುವುದು ಬೇಡ಼. ಸ್ವತಂತ್ರ ಪೃವೃತ್ತಿಯ ಬದುಕನ್ನು ನಂಬಿಕೆಯೆಂಬ ಅಡಿಪಾಯದಲ್ಲಿ ನೆಟ್ಟು ಆ ದೇವನಿಗೂ ಕೃತಜ್ಞತೆ ಸಲ್ಲಿಸೋಣ!
Houdu ellavu namma nambikeya mele ninthiruthave.., thrupthigu ade spurthi… ee lekhana baredavarige nanna abhinandane.
Nambike huttodu estu kastano, adannu alisuvude aste kasta…Baduku andre Nambike …Nambike andre Baduku…adare adara indene siguva novu maatra namma palige uliyodu konege……
ಬರಹ ಓದಿ ಉತ್ತಮ ಪ್ರತಿಕ್ರಿಯೆ ನೀಡಿರುವುದಕ್ಕೆ ಧನ್ಯವಾದಗಳು ಶಿವ ಮೂತಿ೯ ಮತ್ತು ಸ್ನೇಹರವರಿಗೆ