ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 30, 2016

8

ನೋಟು ರದ್ದತಿಯ ಪೂರ್ವ ತಯಾರಿ ಮತ್ತು ದೂರ ದೃಷ್ಟಿತ್ವ…!

‍ನಿಲುಮೆ ಮೂಲಕ

– ಶ್ರೇಯಾಂಕ ಎಸ್ ರಾನಡೆ

untitledಕಳೆದ ೭೦ ವರ್ಷಗಳಲ್ಲಿ ಭಾರತದ ಪ್ರತೀ ಪ್ರಜೆಗೆ ಬ್ಯಾಂಕ್ ಒಂದರಲ್ಲಿ ಖಾತೆ ತೆರೆಯುವಂತಾಗಲು ಹಿಂದಿನ ಸರಕಾರದ ‘ಸ್ವಾಭಿಮಾನ್’ದಂತಹ ಯೋಜನೆಯಿಂದಲೂ ಸಾಧ್ಯವಾಗಲಿಲ್ಲ. ಅದಕ್ಕೆ ಜನಧನ್ ಯೋಜನೆ ಬರಬೇಕಾಯಿತು. ಇದು ಉದ್ಯೋಗ ಖಾತ್ರಿಯಂತಹ ಸರಕಾರದ ೨೬ ಯೋಜನೆಗಳಲ್ಲಿ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆಯಾಗುವುದರಿಂದ ಆನೇಕ ರೀತಿಯ ಸೋರಿಕೆ, ಭ್ರಷ್ಟಾಚಾರ ಹಾಗೂ ದಾಖಲೆಗಳ ಕೊರತೆ ಎಲ್ಲದಕ್ಕೂ ಕಡಿವಾಣ ಹಾಕಿದಂತಾಯಿತು. ಅದಕ್ಕೆ ಪೂರಕವಾಗಿ ಕಳೆದ ವರ್ಷದಿಂದ ಜಾರಿಗೆ ತಂದ “ಜಾಮ್ ಟ್ರಿನಿಟಿ” ಯೋಜನೆ, ಅಂದರೆ ವ್ಯಕ್ತಿಯೊಬ್ಬರ ಜನ್ ಧನ್ ಖಾತೆ- ಆಧಾರ್ ಸಂಖ್ಯೆ-ಮೊಬೈಲ್ ಸಂಖ್ಯೆ. ಇವುಗಳನ್ನು ಬೆಸೆಯುವ ಮಹತ್ವದ ಕಾರ್ಯದಿಂದ ಸೋರಿಕೆ, ನಕಲಿ ಫಲಾನುಭವಿಗಳು, ನಕಲಿ ಖಾತೆಯಿಂದ ನಡೆಸಬಹುದಾದ ಮಾರಕ ವ್ಯವಹಾರಗಳನ್ನು ತಡೆಯಲು ಸಾಧ್ಯವಾಗಲಿದೆ. ಇದನ್ನೇ ಭಾನುವಾರ ಪ್ರಧಾನಿಯವರು ವ್ಯಕ್ತಪಡಿಸಿರುವ ದೂರದೃಷ್ಟಿಯ ಮನಿ ಕಿ ಬಾತ್. ಇಡೀ ದೇಶವೇ ಮೊಬೈಲ್ ಮೂಲಕ ನೋಟು ರಹಿತ ಆರ್ಥಿಕ ವ್ಯವಹಾರದತ್ತ ಸಾಗಬೇಕೆಂಬ ಇಂಗಿತಕ್ಕೆ ಪೂರಕವಾಗಿ ಬಹಳ ಅಚ್ಚುಕಟ್ಟಾಗಿ ಸಜ್ಜುಗೊಳಿಸಿದ ಡಿಜಿಟಲ್ ಬ್ಯಾಂಕಿಂಗ್ ಗೆ ಪೂರ್ವಭೂಮಿಕೆ.

ಡಿಜಿಟಲ್ ಬ್ಯಾಂಕಿಂಗ್ ಎಂಬುದು ಸದಾ ಸಣ್ಣ ವ್ಯಾಪಾರದಿಂದ ದೊಡ್ಡ ಬಟವಾಡೆಯವರೆಗೂ ನೋಟಿನ ಮೂಲಕವೇ ವ್ಯವಹಾರ ಮಾಡಿಕೊಂಡು ಬರುತ್ತಿರುವ ನಮಗೆ ಹೊಸಪರಿಕಲ್ಪನೆಯಂತೆ ತೋರಬಹುದು. ಆದರೆ ಸ್ವಲ್ಪ ಸಮಯ, ಒಂದಷ್ಟು ತಾಳ್ಮೆ ಹಾಗೂ ಕನಿಷ್ಟ ಕಲಿಕೆಯಿಂದ ಮೊಬೈಲ್ ಮೂಲಕವೇ ಹೆಚ್ಚಿನ ಬ್ಯಾಂಕಿಂಗ್ ವ್ಯವಹಾರವನ್ನು ಮುಗಿಸಿಬಿಡಬಹುದು. ಇದಕ್ಕಾಗಿ ಬ್ಯಾಂಕ್ ಗಳಲ್ಲಿ ಸಾಲುಗಟ್ಟಿ ನಿಲ್ಲಬೇಕಿಲ್ಲ. ಚಿಲ್ಲರೆಗಾಗಿ ಯಾರ ಮುಂದೆಯೂ ಕೈಯೊಡ್ಡುವ ಅಗತ್ಯವಿರುವುದಿಲ್ಲ. ನಮ್ಮೆಲ್ಲ ವ್ಯವಹಾರಗಳ ಪಾರದರ್ಶಕತೆಯ ಜೊತೆ ನಮ್ಮ ಹಣಕಾಸಿನ ಖರ್ಚುವೆಚ್ಚದ ಮೇಲೆ ನಿಗಾ ಇಡಬಹುದು. ಮುಂದುವರೆದ ದೇಶಗಳಲ್ಲಿ ದೈನಂದಿನ ಖರ್ಚುಗಳಿಗೆ ನೋಟಿನ ಬಳಕೆಯೇ ಕಡಿಮೆ. ಖಂಡಿತ ಭಾರತ ಅಷ್ಟು ಮುಂದುವರೆದಿಲ್ಲ. ಮೇಲಾಗಿ ನಗರಗಳಲ್ಲಿ ಅವಕಾಶವಿರುವಂತೆ ಗ್ರಾಮಭಾರತ ಡಿಜಿಟಲೀಕರಣಗೊಂಡಿಲ್ಲ. ಆದರೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಭವಿಷ್ಯವಾಗಲಿದೆ. ದೇಶದ ಪ್ರತೀ ಬ್ಯಾಂಕ್ ಕೂಡ ಈ ದಿಶೆಯಲ್ಲಿಯೇ ಹೆಜ್ಜೆ ಇಡುತ್ತಿವೆ. ಡಿಜಿಟಲ್ ಕನಸಿನ ಸಾಕಾರಕ್ಕೆ ಸರಕಾರ ರಿಸರ್ವ್ ಬ್ಯಾಂಕ್ ಮೂಲಕ ಸೂಕ್ತ ನಿಯಮಗಳನ್ನು ರೂಪಿಸುತ್ತಿದೆ.

ಇದನ್ನು ಸಾಕಾರಗೊಳಿಸಲಿಕ್ಕಾಗಿಯೇ ಡಿಜಿಟಲ್ ಇಂಡಿಯಾ ಯೋಜನೆಯ ಅಡಿಯಲ್ಲಿ ಪ್ರತೀ ಗ್ರಾಮಕ್ಕೂ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುವ ಜೊತೆ ಡಿಜಿಟಲ್ ಬದುಕು, ಡಿಜಿಟಲ್ ಬ್ಯಾಂಕಿಂಗ್ ಕುರಿತೂ ಶಿಕ್ಷಣ ನೀಡುವ ಕಾರ್ಯವನ್ನು ೨೦೧೫ರಿಂದಲೇ ಪ್ರಾರಂಭಿಸಿದೆ. ಮಾಸ್ಟರ್, ವೀಸಾ ಇತ್ಯಾದಿ ವಿದೇಶಿ ಕಾರ್ಡ್ ಗಳನ್ನು ಪ್ರತೀ ಬಾರಿ ಬಳಸಿದಾಗ ಅದರ ಕಮಿಷನ್ ಶುಲ್ಕ ವಿದೇಶಗಳಿಗೆ ಹೋಗುತ್ತಿತ್ತು. ಆದರೆ ಅದನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರಕಾರ ಸ್ವದೇಶಿ “ರೂಪೇ” ಕಾರ್ಡ್ ಗಳನ್ನು ಜಾರಿಗೆ ತಂದಿದೆ. ಆ ಮೂಲಕ ರೈಲ್ವೆ, ಪೋಸ್ಟ್, ಜನಧನ್ ಖಾತೆಯವರಿಗೆ, ಕೆಲವು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಹಾಗೂ ಕೆಲವು ಸ್ವಸಹಾಯ ಬ್ಯಾಂಕ್ ಗಳಲ್ಲಿ ಆಟೊಮೆಟೆಡ್ ಟೆಲ್ಲರ್ ಯಂತ್ರದ (ಎ.ಟಿ.ಎಂ. ಡೆಬಿಟ್ ಕಾರ್ಡ್) ಸೌಲಭ್ಯವನ್ನು ಒದಗಿಸಿ ಡಿಜಿಟಲ್ ಬ್ಯಾಂಕಿಂಗ್ ನ ಮಹತ್ವದ ಮೈಲಿಗಲ್ಲಾದ ಕಾರ್ಡ್ ಬ್ಯಾಂಕಿಂಗ್ ನ ವೆಚ್ಚ ತಗ್ಗಿಸಿ ಜನರಿಗೆ ನೋಟುರಹಿತ ವ್ಯವಹಾರವನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಕೇವಲ ನೋಟಿನ ಕಾರಣದಿಂದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ನಿರಾಕರಣೆಯಾಗುವುದಿಲ್ಲ. ಶಾಲಾ ಕಾಲೇಜುಗಳಲ್ಲಿ, ದಿನನಿತ್ಯದ ವ್ಯವಹಾರಗಳಲ್ಲಿ ಯಾವುದೇ ತೋಡಕಾಗುವುದಿಲ್ಲ. ಇವೆಲ್ಲವು ನೋಟಿನ ರದ್ಧತಿಯ ಹಂದಿನ ಪೂರ್ವತಯಾರಿಯಂತೇಕೆ ತೋರುವುದಿಲ್ಲ?

ನಾವು ಫೇಸ್ ಬುಕ್, ಟ್ವಿಟರ್ ನಂತಹ ಸಾಮಾಜಿಕ ಜಾಲತಾಣದ ಉದ್ದಗಲವನ್ನು ಕಲಿತು ಅದಕ್ಕೆ ಜೋತುಬಿದ್ದಿದ್ದೇವೆ. ಆದರೆ ಮೊಬೈಲ್ ಮೂಲಕ ಬ್ಯಾಂಕಿಂಗ್ ಮಾಡಲು ಹಿಂದೇಟಾಕುತ್ತೇವೆ. ಮಾಹಿತಿ ಸುರಕ್ಷತೆಯ ಕಾಳಜಿ ನಿಜವಾದರೂ ಬಳಸಲು ಒಪ್ಪದ ಸಾಂಪ್ರದಾಯಿಕ ಮನಸ್ಥಿತಿಯೇ ಇದಕ್ಕೆ ಮೂಲ ಕಾರಣ. ನಾವು ನೋಟನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವಾಗ ಜಾಗೃತರಾಗಿರುವುದಿಲ್ಲವೆ? ಹಾಗೆಯೇ ಇದಕ್ಕೂ ಗರಿಷ್ಟ ಜಾಗೃತಿಯ ಅಗತ್ಯವಿದೆ. ಆದರೆ ಒಮ್ಮೆ ಖಾತೆಗೆ ಜಮಾ ಆದ ಹಣ ಬೇಜವಾಬ್ದಾರಿತನದಿಂದಲ್ಲದೆ ಯಾರೂ ತೆಗೆದುಕೊಳ್ಳುತ್ತಾರೆಂಬ ಭಯವಿಲ್ಲ. ಬಡ ಹಾಗೂ ಮಧ್ಯಮವರ್ಗಕ್ಕೆ ಅಂತರ್ಜಾಲದಲ್ಲಿ ನಂಬಿಕಸ್ಥ ತಾಣಗಳಿಂದ ವ್ಯಾಪಾರ ಮಾಡುವುದರಿಂದ ಭೌತಿಕ ಮಾರುಕಟ್ಟೆಯಲ್ಲಿ ಸಿಗುವ ಲಾಭಗಳಿಗಿಂತ ಹೆಚ್ಚಿನ ಲಾಭವಾಗುತ್ತದೆ. ವಿದ್ಯುತ್ ಬಿಲ್, ನೀರಿನ ಬಿಲ್, ಗ್ಯಾಸ್ ಬಿಲ್… ಹೀಗೆ ಬೆಳೆಯುವ ಬಿಲ್ ಗಳನ್ನು ಪಾವತಿಸುವುದಕ್ಕಾಗಿ ವಿನಿಯೋಗಿಸುವ ಸಮಯದ, ಶ್ರಮದ ಕಾಲುಭಾಗ ಡಿಜಿಟಲ್ ಬ್ಯಾಂಕಿಂಗ್ ಗೆ ತಗಲುತ್ತದೆ. ಮೇಲಾಗಿ ತರವೇಹಾರಿ ಕಡಿತ, ಹಣ ಮರುಪಾವತಿಯ ಲಾಭಗಳು. ಇವೆಲ್ಲ ಕೇವಲ ನಮ್ಮ ಲಾಭಕ್ಕಾಗಿ ಮಾತ್ರವಲ್ಲ, ಕಪ್ಪುಹಣ ರೂಪುಗೊಳ್ಳುವಿಕೆಯ ರಹದಾರಿಯೊಂದನ್ನೇ ಕೊನೆಗಾಣಿಸಿ ದೇಶದ ಆರ್ಥಿಕ ಸ್ವಾಸ್ಥ್ಯದ ಹಿತವನ್ನೇ ಕಾಪಾಡುವ ದೇಶಸೇವೆಯ ಕಾರ್ಯವೂ ಕೂಡ. ದೇಶದ ಆರ್ಥಿಕ ಪ್ರಗತಿಯ, ಸಾಮಾಜಿಕ ಬೆಳವಣಿಗೆಗೂ ಉಪಯೋಗಕಾರಿ.

ಕಪ್ಪು ಹಣ ಎಂಬುದೇ ಅವಾಸ್ತವಿಕ, ಅದರ ಹೆಸರನ್ನು ಹೇಳಲೂ ಮುಖ ಕಪ್ಪಾಗಿಸಿಕೊಳ್ಳುತ್ತಿದ್ದ ಜನನಾಯಕರ ನಡುವೆ ಅಧಿಕಾರ ಸ್ವೀಕರಿಸಿದ ತಕ್ಷಣ ಮೊತ್ತ ಮೊದಲಿಗೆ ವಿದೇಶದಲ್ಲಿರುವ ಕಪ್ಪುಹಣದ ಕುರಿತು ತನಿಖೆ ನಡೆಸಲು ಸ್ಪೆಶಲ್ ಇನ್ವೆಸ್ಟಿಗೇಶನ್ ಟೀಮ್(ಎಸ್.ಐ.ಟಿ.) ರಚಿಸಿದ್ದು ದಕ್ಷ ಸರಕಾರ ಮಾತ್ರ ಮಾಡುವ ಕೆಲಸ. ಮೊದಲ ವರ್ಷದಲ್ಲೇ ಜಿ೨೦ ದೇಶಗಳ ಜೊತೆಗೂಡಿ, ಆಯಾ ದೇಶಗಳಲ್ಲಿರುವ ಭಾರತದ ಕಪ್ಪುಹಣದ ಮಾಹಿತಿ ವಿನಿಮಯಕ್ಕೆ ಪ್ರಯತ್ನಿಸಿದ್ದು ಸಣ್ಣ ಸಾಧನೆಯೇನಲ್ಲ. ಮಾರಿಷಸ್ ನಂತರ ಸೈಪ್ರಸ್ ದೇಶದೊಂದಿಗೆ ತೆರಿಗೆ ಅನ್ವಯ ಒಪ್ಪಂದವನ್ನು ಜಾರಿಗೆ ತಂದಿದ್ದು ಕಪ್ಪುಹಣವೆಂಬ ಬೃಹತ್ ಕಣಿವೆಯನ್ನು ಬಗೆಯುವ ಪ್ರಾರಂಭಿಕ ಹೆಜ್ಜೆಗಳು. ಹಾಗೆಯೇ ಕಪ್ಪು ಹಣ ಹೊಂದಿರುವವರು ತಾವೇ ಸ್ವಪ್ರೇರಣೆಯಿಂದ ದಂಡ ಕಟ್ಟಿ ಎಂದು ಕರೆಕೊಟ್ಟು, ೩೦ ಸೆಪ್ಟೆಂಬರ್ ೨೦೧೬ರ ವರೆಗೂ ಗಡುವು ಕೊಟ್ಟಿದ್ದು ಸರಕಾರ ಈ ದೆಸೆಯಲ್ಲಿ ಪ್ರಾರಂಭದಿಂದಲೂ ಸಾಗುತ್ತಿತ್ತು ಎಂಬುದಕ್ಕೆ ಸಾಕ್ಷಿ. ಮುಂದಿನ ನಡೆ ಏನಿರಬಹುದು ಎಂಬುದು ಬೃಹತ್ ಉದ್ದಿಮೆದಾರರಿಗೂ, ರಾಜಕೀಯ ಪಕ್ಷಗಳಿಗೂ, ಕಾಳಧನಿಕರಿಗೂ ಸೂಚನೆ ದೊರೆತಿತ್ತು. ಆದರೆ ಯಾರೊಬ್ಬರೂ ೫೦೦, ೧೦೦೦ದ ನೋಟುಗಳನ್ನು ಈ ಪರಿಯ ಮನೋವೇಗದಲ್ಲಿ ರದ್ದಾಗಿಸಬಹುದೆಂದು ಊಹಿಸಿರಲಿಲ್ಲ. ಎಷ್ಟರ ಮಟ್ಟಿಗೆ ಎಂದರೆ ಯೋಜನೆ ಘೋಷಿಸುವ ಮುನ್ನ ನಡೆದ ಕ್ಯಾಬಿನೆಟ್ ಸಭೆಯ ತನಕವೂ ಸ್ವತಃ ವಿತ್ತ ಸಚಿವರಿಗೇ ಅದರ ಬಗ್ಗೆ ಮಾಹಿತಿ ಇರಲಿಲ್ಲ ಅಂದರೆ ಇದು ಎಂತಹ ಕಾರ್ಯಯೋಜನೆಯಿರಬೇಕು..! ಪಾಕಿಸ್ತಾನದ ಮೇಲೆ ಚಿಕಿತ್ಸಕ ದಾಳಿ ನಡೆದಷ್ಟೇ ಒಪ್ಪವಾಗಿ, ಪ್ರತಿಯೋಚನೆ ಮಾಡುವುದಕ್ಕೂ ಅವಕಾಶವಿಲ್ಲದಂತೆ ನಡೆಸಿದ ದಾಳಿ ೧೯೯೧ರ ನಂತರ ಈ ದೇಶದ ಅತೀ ಮಹತ್ವದ ಆರ್ಥಿಕ ಸುಧಾರಣೆ. ಕಳೆದ ೭೦ ವರ್ಷಗಳ ಭಾರತದ ರಾಜಕಾರಣದ ಜಡ್ಡು ವ್ಯವಸ್ಥೆಯನ್ನೇ ಈಗಿನ ಪ್ರಧಾನಿಗಳಿಗೂ ಸಮೀಕರಿಸಿ, ಕೊನೆಗೆ ಇವರೂ ರಾಜಕಾರಣಿಯೇ. ಹಾಗಾಗಿ ಇವರು ಅಂತಹ ನಿರ್ಣಯವನ್ನು ಕೈಗೊಳ್ಳುವುದೇ ಇಲ್ಲ ಎಂದು ನಿರ್ಧರಿಸಿ ನವೆಂಬರ್ ೮ ರವರೆಗೂ ಅನೇಕರು ಹಾಗೂ ಈಗ ಭಾರತ್ ಬಂದ್ ಗೆ ಕರೆನೀಡಿರುವ ಪಕ್ಷಾತೀತ, ಧರ್ಮನಿರಪೇಕ್ಷ, ಸಮಾಜವಾದಿ, ಬಹುಜನರು, ಭ್ರಷ್ಟಾಚಾರ ವಿರೋಧಿ ಆಂಡೋಲನವನ್ನೇ ತಮ್ಮ ರಾಜಕೀಯ ಬಂಡವಾಳ ಮಾಡಿಕೊಂಡ ಸಮಸ್ತ ಬಾಂಧವರೂ ಮೈಮರೆತಿದ್ದರು. ಬುದ್ಧಿವಂತರು, ಪ್ರಧಾನಿಯವರ ಸಾಮರ್ಥ್ಯವನ್ನು ಮೊದಲೇ ಊಹಿಸಿದವರು ‘ಜಿಯೋ’ ಎಂದರು. ಉಳಿದವರು ಈಗ ಎಚ್ಚೆತ್ತು ‘ಜಿಯಾ’ ಎನ್ನುತ್ತಿದ್ದಾರೆ.

ಸುಖಾ ಸುಮ್ಮನೆ ಯಾವುದೇ ಪೂರ್ವ ತಯಾರಿಯಿಲ್ಲದೆ ಈ ನಿರ್ಣಯ ಕೈಗೊಳ್ಳಲಾಗಿದೆ ಎಂಬುವರು ಮೇಲಿನ ಮಾಹಿತಿಯನ್ನು ಓದಿ ತಮ್ಮನ್ನು ಸರಿಪಡಿಸಿಕೊಳ್ಳುವುದು ಉತ್ತಮ. ಇನ್ನು ಬ್ಯಾಂಕಿಂಗ್ ವ್ಯವಹಾರದಲ್ಲಿ ಆಗುತ್ತಿರುವ ಹೊಸ ನೋಟಿನ ಕೊರತೆ ಹಾಗೂ ವಿತರಣೆ, ಸಿಬ್ಬಂದಿ ಕೊರತೆ ಇತ್ಯಾದಿ ಹೆಚ್ಚಿನ ತೊಡಕುಗಳಿಗೆ ಬ್ಯಾಂಕ್ ಗಳ ನಾನ್ ಪರ್ಫಾಮಿಂಗ್ ಅಸೆಟ್ ರೀತಿಯ ಅನೇಕ ಆಂತರಿಕ, ಆಡಳಿತಾತ್ಮಕ ಸಾಂಸ್ಥಿಕ ತೊಡಕುಗಳೇ ನೇರವಾಗಿ ಕಾರಣವೇ ಹೊರತು ಎಲ್ಲದಕ್ಕೂ ಸರಕಾರವೇ ನೇರವಾಗಿ ಹಾಗೂ ಪೂರ್ಣವಾಗಿ ಹೊಣೆಯಲ್ಲ. ಬ್ಯಾಂಕ್ ನೌಕರರನೇಕರು ಉತ್ತಮ ರೀತಿಯಲ್ಲಿ ಸೇವೆಯನ್ನು ನೀಡುತ್ತಿದ್ದಾರೆ. ಅದೇ ರೀತಿ ಜನರೊಂದಿಗೆ ಬೇಜವಾಬ್ದಾರಿಯಾಗಿ, ಅಹಂಕಾರದಿಂದ ವರ್ತಿಸುವ ಕೆಲವಾರು ಅಧಿಕಾರಿ, ಸಿಬ್ಬಂದಿಗಳು ಅನೇಕ ಜನರನ್ನು ಹತಾಶೆಗೊಳಿಸಿದ್ದು ಸುಳ್ಳಲ್ಲ. ಅದೇ ಕಾರಣದಿಂದ ಜನರು ಬ್ಯಾಂಕ್ ಗಳತ್ತ ಮುಖ ಮಾಡಲೂ ಹೆದರುತ್ತಿರುವುದು. ಗ್ರಾಮೀಣ ಭಾಗದಲ್ಲಿ ಬ್ಯಾಂಕೇತರ ಆರ್ಥಿಕತೆ ರೂಪುಗೊಳ್ಳುವುದಕ್ಕೆ ಇಂತಹ ವರ್ತನೆಯೂ ಕಾರಣ. ತಪ್ಪು ಮಾಹಿತಿ, ಸುಳ್ಳು ಸುದ್ದಿ ಹಾಗೂ ಬ್ಯಾಂಕಿಗ್ ಸೇವೆಯಿಂದ ವಂಚಿತರಾಗಿ ವಿಚಲಿತರಾಗುವ ಜನರು ತಮ್ಮ ಪ್ರಾಣ ಕಳೆದುಕೊಳ್ಳುವ ನಿರ್ಧಾರ ಕೈಗೊಂಡಿದ್ದರೆ ಅದಕ್ಕೆ ಬ್ಯಾಂಕ್ ಗಳ ಕಾರ್ಯನಿರ್ವಹಣೆಯ ರೀತಿ ಕಾರಣ. ಸರಕಾರದ ಸರಿಯಾದ ನಿರ್ಧಾರವಲ್ಲ.

ಬೇನಾಮಿ ಸಂಪತ್ತು ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಅಕ್ರಮ ಸಂಪತ್ತು, ಹಣ, ಸೈಟು-ಭೂಮಿಗಳ ಮೇಲೆ ರಿಯಲ್ ಎಸ್ಟೇಟ್ ನವರು ತೊಡಗಿಸಿರುವ ಕಪ್ಪುಹಣದ ಮತ್ತೊಂದು ಮೂಲದ ಜಾಡನ್ನು ಬಗೆಯುವ ಪ್ರಯತ್ನವೂ ನಡೆಯಲಿದೆ. ಆದರೆ ಈ ಕ್ರಮ ತತ್ಕಾಲಿಕವಾಗಿ ಯಶಸ್ವಿಯಾಗಿ ತೋರುತ್ತದೆಯಷ್ಟೆ. ಚಿನ್ನ, ವಿದೇಶಿ ಕರೆನ್ಸಿ ವಿನಿಮಯ, ಹವಾಲ, ಪಾರ್ಟಿಸಿಪೇಟರಿ ನೋಟ್ಸ್, ವಿದೇಶಗಳಲ್ಲಿ ಹೂಡಿರುವ ಸಂಪತ್ತು, ಕಾಳಧನ ಹಾಗೂ ಇನ್ನಿತರ ಮೂಲಗಳಿಂದ ಕಾಳಧನದ ಚಟುವಟಿಕೆಗಳು ಮುಂದುವರೆಯಲಿದೆ. ನೋಟಿನ ರದ್ದತಿಯ ನಿರ್ಧಾರ ನಿರ್ಣಾಯಕವೂ ಅಲ್ಲ. ಅಂತಿಮವೂ ಅಲ್ಲ. ಈ ಯೋಜನೆಯಿಂದ ಕಪ್ಪುಹಣ ಈ ದೇಶದಿಂದ ಸರ್ವಸಮಗ್ರವಾಗಿ ತೊಲಗುವುದಿಲ್ಲ. ಅದಕ್ಕಾಗಿ ಸರಕಾರ ಅನೇಕ ಸಾಂಸ್ಥಿಕ ಸುಧಾರಣೆಗಳನ್ನು ಸಮಯದಿಂದ ಸಮಯಕ್ಕೆ ಸರಿಯಾಗಿ ಜಾರಿಗೊಳಿಸದ ಹೊರತು ಕಪ್ಪು ಹಣ ಮತ್ತೊಂದು ಸ್ವರೂಪದಲ್ಲಿ ತನ್ನ ಕಬಂಧಬಾಹುವನ್ನು ವಿಸ್ತರಿಸಿ ಪರ್ಯಾಯ ಆರ್ಥಿಕತೆಯನ್ನು ಮುಂದುವರೆಸಲಿದೆ. ಆದರೆ ಇರುವ ಸಾಧ್ಯತೆಯಲ್ಲಿಯೇ ಸುಧಾರಣೆ ತರುವುದು, ಮಾಡಿದ ಉತ್ತಮ ಕಾರ್ಯಕ್ಕೆ ಅಡ್ಡಗಾಲು ಹಾಕುವುದಕ್ಕಿಂತ ಲಕ್ಷ ಪಾಲು ಉತ್ತಮ. ಹೀಗೆ ತನು, ಮನ, ‘ಧನ’ ತ್ರಿಕರಣಗಳ ಶುದ್ಧಿಯ ಮುಖೇನ ದೇಶದೊಳಗಿನ ಕಾಳಧನದ ಸ್ವಚ್ಛತೆ ಸಾಧ್ಯವಾಗಲಿದೆ. ಈ ಸೂಚನೆಯ ಜಾರಿಯನ್ನು ‘ಧನಾ’ತ್ಮಕವಾಗಿ ಗಮನಿಸಿದಾಗ ‘ಸ್ವಚ್ಛ ಭಾರತ್’ ಮತ್ತೊಂದು ಆಯಾಮವನ್ನು ಪಡೆದು ನಿಂತಿರುವಂತೆ ಕಾಣುತ್ತದೆ.

8 ಟಿಪ್ಪಣಿಗಳು Post a comment
  1. Avinash
    ನವೆಂ 30 2016

    “ಆಧಾರ್ ಸಂಖ್ಯೆ-ಮೊಬೈಲ್ ಸಂಖ್ಯೆ. ಇವುಗಳನ್ನು ಬೆಸೆಯುವ ಮಹತ್ವದ ಕಾರ್ಯ” ಅಂದ್ರಾ! ಹ್ಮ್ಮ್… ಇದನ್ನು ಒಮ್ಮೆ ಓದಿ ಬಿಡಿ ಹಾಗೆ:https://nilume.net/2016/07/28/%E0%B2%A8%E0%B2%A8%E0%B3%8D%E0%B2%A8-%E0%B2%8A%E0%B2%B0%E0%B3%81-%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81-%E0%B2%87%E0%B2%82%E0%B2%A4%E0%B2%BF/

    ಉತ್ತರ
  2. Avinash
    ನವೆಂ 30 2016

    “…(ಎ.ಟಿ.ಎಂ. ಡೆಬಿಟ್ ಕಾರ್ಡ್) ಸೌಲಭ್ಯವನ್ನು ಒದಗಿಸಿ ಡಿಜಿಟಲ್ ಬ್ಯಾಂಕಿಂಗ್ ನ ಮಹತ್ವದ ಮೈಲಿಗಲ್ಲಾದ ಕಾರ್ಡ್ ಬ್ಯಾಂಕಿಂಗ್ ನ ವೆಚ್ಚ ತಗ್ಗಿಸಿ ಜನರಿಗೆ ನೋಟುರಹಿತ ವ್ಯವಹಾರವನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಕೇವಲ ನೋಟಿನ ಕಾರಣದಿಂದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ನಿರಾಕರಣೆಯಾಗುವುದಿಲ್ಲ. ಶಾಲಾ ಕಾಲೇಜುಗಳಲ್ಲಿ, ದಿನನಿತ್ಯದ ವ್ಯವಹಾರಗಳಲ್ಲಿ ಯಾವುದೇ ತೋಡಕಾಗುವುದಿಲ್ಲ. ಇವೆಲ್ಲವು ನೋಟಿನ ರದ್ಧತಿಯ ಹಂದಿನ ಪೂರ್ವತಯಾರಿಯಂತೇಕೆ ತೋರುವುದಿಲ್ಲ? ನಾವು ಫೇಸ್ ಬುಕ್, ಟ್ವಿಟರ್ ನಂತಹ ಸಾಮಾಜಿಕ ಜಾಲತಾಣದ ಉದ್ದಗಲವನ್ನು ಕಲಿತು ಅದಕ್ಕೆ ಜೋತುಬಿದ್ದಿದ್ದೇವೆ. ಆದರೆ ಮೊಬೈಲ್ ಮೂಲಕ ಬ್ಯಾಂಕಿಂಗ್ ಮಾಡಲು ಹಿಂದೇಟಾಕುತ್ತೇವೆ.”

    (೧) ಕಾರ್ಡ್ ಬ್ಯಾಂಕಿಂಗ್ ನ ವೆಚ್ಚ ತಗ್ಗಿಸಿರುವುದು ಡಿಸೆಂಬರ್ ತನಕ ಮಾತ್ರ. ಅನಂತರ ಇದು ಒಂದು ಅನಗತ್ಯ ಹೊರೆ. ಇನ್ನು ಮುಂದೆ ನಮ್ಮ ತೋಟದಲ್ಲಿ ೨೫೦೦ ರೂ ಕೂಲಿಗೆ ಕೆಲಸ ಮಾಡುವ ಹೆಂಗಸೂ ಸಹ ಏಟಿಎಂ ಚಾರ್ಜ್ ಇತ್ಯಾದಿ ಕಟ್ಟಬೇಕು.

    (೨) ಕರ್ನಾಟಕದ ಎಷ್ಟು ಆಸ್ಪತ್ರೆಗಳಲ್ಲಿ ಮತ್ತು ಶಾಲೆಗಳಲ್ಲಿ ಎಟಿಎಂ ಕಾರ್ಡ್ ಬಳಸಲಾಗುತ್ತಿದೆ ಎಂದು ಒಮ್ಮೆ ನಿಮ್ಮ ಕಾರ್ನಿಂದ ಇಳಿದು ಹೋಗಿ ನೋಡಿಕೊಂಡು ಬನ್ನಿ ಮತ್ತು ಅನಂತರ ಬೊಗಳೆ ಬಿಡಿ.

    (೩) ನಮ್ಮ ತೋಟಕ್ಕೆ ಬರುವ ಯಾವ ಹೆಂಗಸೂ ಈ ಫೇಸ್ ಬುಕ್, ಟ್ವಿಟರ್ ನಂತಹ ಸಾಮಾಜಿಕ ಜಾಲತಾಣದ ಉದ್ದಗಲವನ್ನು ಕಲಿತಿಲ್ಲ. ಹಾಗೆ ಆ ಚರಂಡಿ ತೊಳೆಯುವ ಗಂಡಸು, ಅಡಿಕೆ ಸುಲಿಯುವ ಮುದುಕಿ. ಥೂ, ಈ ಹಾಳಾದ ಇಂಥ ಜನರಿಂದಲೇ ಭಾರತ ಹಿಂದೆ ಉಳಿದದ್ದು ಸಾರ್. ಏನ್ಮಾಡೋದು?

    ಉತ್ತರ
  3. Avinash
    ನವೆಂ 30 2016

    “ಇನ್ನು ಬ್ಯಾಂಕಿಂಗ್ ವ್ಯವಹಾರದಲ್ಲಿ ಆಗುತ್ತಿರುವ ಹೊಸ ನೋಟಿನ ಕೊರತೆ ಹಾಗೂ ವಿತರಣೆ, ಸಿಬ್ಬಂದಿ ಕೊರತೆ ಇತ್ಯಾದಿ ಹೆಚ್ಚಿನ ತೊಡಕುಗಳಿಗೆ ಬ್ಯಾಂಕ್ ಗಳ ನಾನ್ ಪರ್ಫಾಮಿಂಗ್ ಅಸೆಟ್ ರೀತಿಯ ಅನೇಕ ಆಂತರಿಕ, ಆಡಳಿತಾತ್ಮಕ ಸಾಂಸ್ಥಿಕ ತೊಡಕುಗಳೇ ನೇರವಾಗಿ ಕಾರಣವೇ ಹೊರತು ಎಲ್ಲದಕ್ಕೂ ಸರಕಾರವೇ ನೇರವಾಗಿ ಹಾಗೂ ಪೂರ್ಣವಾಗಿ ಹೊಣೆಯಲ್ಲ.”

    ಹೌದು ಸಾರ್. ಬರೀ ಆ ಹಾಳಾದ ಹಂಗಾಸು, ಮುದುಕಿಯರು ಮಾತ್ರ ಅಲ್ಲ, ಈ ಭಾರತದ ಸಮಸ್ಯೆಗಳಿಗೆ ಈ ಬ್ಯಾಂಕಿನ ಜನರೂ ಕಾರಣ. ಥೂ ಮುಂಡೇವು.

    ಉತ್ತರ
  4. Chandan
    ನವೆಂ 30 2016

    ಈ ಲೇಖನ ಬರೆದವರಿಗೆ ಬರೀ ಕಣ್ಣು ಮಾತ್ರವಲ್ಲ ಹೃದಯವೂ ಇಲ್ಲ. ನನಗೇಕೋ ಇವರು ಯೋಚಿಸುವುದು ತಲೆಯಿಂದ ಅಲ್ಲ ಬೇರೆಲ್ಲಿಂದಲೋ ಎಂಬ ಅನುಮಾನ.

    ಉತ್ತರ
  5. sudarshana gururajarao
    ನವೆಂ 30 2016

    ಮೊದಲಬಾರಿಗೆ ಮಾರ್ಗರೇಟ್ ಥ್ಯಾಚರ್ ಈಗ ಬಹು ಬಳಕೆಯಲ್ಲಿರುವ ring road ಪರಿಕಲ್ಪನೆ ಮುಂದಿಟ್ಟು ಲಂಡನ್ ನಗರದ ಸುತ್ತಾ M25 ಎಂಬ ಮೋಟರ್ ವೇ ಕಟ್ಟಿದಾಗ ಅದನ್ನು road to no where ಎಂದು ವಿರೋಧಿಸಿ ಗೇಲಿ ಮಾಡಿದ್ದರು ಕೆಲವರು ಮೂರ್ಖರು.

    ಉತ್ತರ

ನಿಮ್ಮದೊಂದು ಉತ್ತರ Chandan ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments