“ಅನ್ವೇಷಣೆ..!”
– ಭಾಸ್ಕರ ಭೀಮರಾವ್ ಖಾಂಡ್ಕೆ
ಸಾಗರ
ಬಹುಶಃ ಜೀವನವೇ ಹೀಗೆ, ಯಾವುದೋ ಸಮಸ್ಯೆ ಯಾವುದಕ್ಕೋ ಪರಿಹಾರ, ಯಾವುದೋ ಪ್ರಶ್ನೆ ಯಾವುದಕ್ಕೋ ಉತ್ತರವಾಗಿ ಬಿಡುತ್ತದೆ
ಇಂದು ಏಕಾಂತದ ಮಿತ್ರನೊಂದಿಗೆ ಸಂಭಾಷಣೆ ನಡೆಸುವ ಅವಕಾಶ ಸಿಕ್ಕಿಬಿಟ್ಟಿತು. ಮಾತಿಗೆ ಮಾತು ಬೆಳೆಯುತ್ತಾ ನನ್ನೊಳಗೆ ಶೂನ್ಯ ತುಂಬಿದ ಭಾವನೆ…ಛಲಬಿಡದ ತಿವಿಕ್ರಮನಂತೆ ಶೂನ್ಯದೊಂದಿಗೆ ಸೆಣಸಾಡುತ್ತಾ ನನ್ನೊಳಗೆ ಅಡಗಿರಬಹುದಾದ ಸತ್ಯದ ಅನ್ವೇಷಣೆಯ ಪ್ರಯತ್ನದ ಫಲವೇ ಈ ಸಾಹಿತ್ಯ , ಬಹುಶಃ ಇದು ಸಾಹಿತ್ಯವಲ್ಲಾ ನಮ್ಮೆಲ್ಲರೊಳಗೆ ಹುದುಗಿರುವ ಆದ್ಯಾತ್ಮದ ಒಂದು ಸಣ್ಣ ಹನಿ…
“ಅನ್ವೇಷಣೆ”
ನನ್ನ ಬಲ್ಲವರಿಗೆ
ನಾ ಪರಿಚಿತ
ತುಂಬಾ ಹತ್ತಿರದಿಂದ ಅರಿತವರಿಗೆ
ನಾ ಚಿರಪರಿಚಿತ
ನನ್ನ ನಾ ಬಲ್ಲ ಹೊರಟರೆ
ಅಡಗಿದ್ದಾನೆ ನನ್ನೊಳಗೊಬ್ಬ ಆಗಂತುಕ
ತುಂಬಾ ಆಳಕ್ಕೆ ಇಳಿದಷ್ಟೂ
ನನಗೇ ನಾ ಅಪರಿಚಿತ
ಹಾರಿ ಹೋಗಿ ಬಿಡಲೇ..???
ನನ್ನಿಂದ ನಾ ಕಳೆದುಹೋಗುವ ಮುನ್ನಾ
ಬಾನು ಸೇರಿ ಬಿಡಲೇ…???
ಗೂಡು ಪಂಜರವಾಗುವ ಮುನ್ನಾ
ಸಂಬಂಧಗಳಿಂದ ನಿರೀಕ್ಷೆ ನನಗೇಕೆ ?
ಬಂಧಗಳ ಬೆಸುಗೆಯ ಹಂಗೇಕೆ ?
ಗರಿಗೆದರ ಹೋದರೆ ಅರಿವಾಗುತ್ತಿದೆ
ಒಂದೊಂದು ಗರಿಗೂ ಒಂದೊಂದು ಸಂಬಂಧ …!!!
ಬಂಧಗಳ ಬಂಧನ ಕಳಚದೆ
ಹಾರುವ ಹಾಗಿಲ್ಲಾ
ಸಂಬಂಧಗಳ ಗರಿ ಕಳಚಿದಂತೆ
ಹಾರುವ ರೆಕ್ಕೆಗಳಿಗೆ ಬಲವಿಲ್ಲಾ
ಉಳಿದು ಬಿಡಲೇ ಹೀಗೆ
ಬಲ್ಲವರಿಗೆ ಪರಿಚಿತನಾಗಿ
ಅರಿತವರಿಗೆ ಚಿರಪರಿತನಾಗಿ
ನನ್ನೊಳಗಿನ ಅಪರಿಚಿತನನ್ನು ಮರೆತು ?
ಬಂಧನಗಳಿಂದಲೇ ಈ ಬಾಳು
ಬಾಳಿನಿಂದಲೇ ಈ ಬಂಧನಾ
ಅನ್ವೇಷಣೆಯ ಪ್ರಯತ್ನವೇ ವ್ಯರ್ಥ
ಬಹುಶಃ ಇದೇ ಜೀವನದ ಸತ್ಯ