ಈ ದೇಶದಲ್ಲಿ ಫಾರೂಕ್ ಯಾಕೆ ಹುತಾತ್ಮ ಅನ್ನಿಸಿಕೊಳ್ಳುವುದಿಲ್ಲ..?
– ಅಜಿತ್ ಹನುಮಕ್ಕನವರ್
ಫಸ್ಟ್ ಆಫ್ ಆಲ್, ಈ ಫಾರೂಕ್ ಯಾರು ಅನ್ನೋದನ್ನ ಒಮ್ಮೆ ಹೇಳಿಬಿಡ್ತೀನಿ. ಆತ ಮೂಲತಃ ತಮಿಳುನಾಡಿನ ಕೊಯಮತ್ತೂರು ಕಡೆಯವನು. ವಯಸ್ಸು ಮೂವತ್ತೊಂದು. ಮದುವೆ ಆಗಿ ಎರಡು ಮಕ್ಕಳ ತಂದೆಯೂ ಆಗಿದ್ದ ಕಬ್ಬಿಣದ ವ್ಯಾಪಾರಿ. ಮೊನ್ನೆ ಹದಿನಾರನೇ ತಾರೀಖು ರಾತ್ರಿ, ಏನೋ ಅರ್ಜೆಂಟ್ ಕೆಲಸ ಇದೆ ಆತನನ್ನ ಮನೆಯಿಂದ ಹೊರಗೆ ಕರೆಸಿಕೊಂಡ ನಾಲ್ಕು ಜನ ನಡುರಸ್ತೆಯಲ್ಲಿ ಕತ್ತರಿಸಿ ಕೊಂದುಬಿಟ್ಟರು.
ಆತ ಮಾಡಿದ್ದ ತಪ್ಪು..? ದೇವರಿಲ್ಲ ಅಂತ ನಂಬಿದ್ದು. ತನ್ನ ನಂಬಿಕೆಯನ್ನು ಭಯವಿಲ್ಲದೇ ಹೇಳಿಕೊಂಡಿದ್ದು. ತನ್ನ ಮಕ್ಕಳನ್ನು ನಾಸ್ತಿಕರನ್ನಾಗಿ ಬೆಳೆಸುವುದಕ್ಕೆ ಹೊರಟಿದ್ದು. ತನ್ನೆಲ್ಲ ಆಲೋಚನೆಗಳನ್ನು ವಾಟ್ಸ್ ಆಪ್ ಗ್ರೂಪ್ಗಳಲ್ಲಿ ಹಂಚಿಕೊಂಡಿದ್ದು. ಅಂತಿಮ ಕಾರಣ ಅಂದರೆ, ತನ್ನ ಮಗಳ ಕೈಯಲ್ಲಿ “ದೇವರಿಲ್ಲ, ದೇವರಿಲ್ಲ, ದೇವರಿಲ್ಲ” ಅಂತ ಬರೆಯಲಾಗಿದ್ದ ಭಿತ್ತಿ ಪತ್ರ ಕೊಟ್ಟು, ಅದರ ಫೋಟೊ ತೆಗೆದು ಫೇಸ್ ಬುಕ್ಕಿಗೆ ಹಾಕಿದ್ದು.
ಆತ ಒಬ್ಬ ವಿಚಾರವಾದಿ – ಪ್ರಗತಿಪರ. ಆದರೆ, ಫಾರೂಕ್ನ ಬರ್ಬರ ಕೊಲೆ, ಯಾವ ವಿಚಾರವಾದಿ, ಪ್ರಗತಿಪರ, ಜೀವಪರ, ಮಾನವಹಕ್ಕು ಪರರ, ಬುದ್ಧಿಜೀವಿಗಳು ಒಡಲಾಳದ ಸೂಕ್ಷ್ಮ ತಂತುಗಳನ್ನು ಮೀಟುವುದೇ ಇಲ್ಲ. ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ ಮತ್ತು ಎಂ.ಎಂ ಕಲಬುರ್ಗಿಯವರ ಹತ್ಯೆ ನಡೆದಾಗ ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ ಅಂತ ಬೊಬ್ಬೆ ಹೊಡೆದು ದೇಶದಾದ್ಯಂತ ಬೀದಿಗಿಳಿದ ಅನೇಕರ ಫೇಸ್ಬುಕ್ಕು – ಟ್ವಿಟರ್ ಅಕೌಂಟುಗಳನ್ನು ಜಾಲಾಡಿ ನೋಡಿದೆ. ಫಾರೂಕನಿಗೆ ಕೊನೆ ಪಕ್ಷ ಒಂದು ಶ್ರದ್ಧಾಂಜಲಿ ಕೂಡ ಇಲ್ಲ ಅವುಗಳಲ್ಲಿ. ಮಂಗಳೂರಿನಲ್ಲಿ ಮತ್ತೊಬ್ಬ ವಿಚಾರವಾದಿ ನರೇಂದ್ರ ನಾಯಕರ ಮೇಲೆ ನಡೆಯಿತೆನ್ನಲಾದ ಕೊಲೆ ಪ್ರಯತ್ನವನ್ನು ಖಂಡಿಸಿ, ಕಳವಳ – ಆಕ್ರೋಶ ವ್ಯಕ್ತಪಡಿಸಿ ಪುಂಖಾನುಪುಂಖವಾಗಿ ಬರೆದುಕೊಂಡಿರುವವರ ದೃಷ್ಟಿಯಲ್ಲಿ ಪಾಪದ ಫಾರೂಕ್, ಒಂದು ಅನುಕಂಪಕ್ಕೂ ಯೋಗ್ಯನಾಗಿ ಕಾಣಿಸಲಿಲ್ಲ.
ಅಂದಹಾಗೆ, ಫಾರೂಕನ ಕೊಲೆ ಕೇಸಿನಲ್ಲಿ ಐದು ಜನ ನೇರವಾಗಿ ನ್ಯಾಯಾಧೀಶರ ಎದುರಿಗೆ ಶರಣಾಗಿದಾರೆ. ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಕಾರಣಕ್ಕಾಗಿಯೇ ಆತನನ್ನ ಕೊಂದೆವು ಅಂತ ಹೇಳಿಕೊಂಡಿದ್ದಾರೆ. ಅವರ ಪೈಕಿ ಒಬ್ಬ ಬೆಂಗಳೂರು ಜೈಲಿಗೆ ಬಂದು. ಇಲ್ಲಿ ಮಲ್ಲೇಶ್ವರಂ ಬಾಂಬ್ ಬ್ಲಾಸ್ಟಿನ ಕೇಸಿನಲ್ಲಿ ಒಳಗಿರುವ ಅಲ್ – ಉಮಾ ಸಂಘಟನೆಯ ಮುಖಂಡನ ಜತೆ ಮಾತನಾಡಿ, ಅಂತಿಮ ಪ್ಲಾನಿಗೆ ಒಪ್ಪಿಗೆ ಪಡೆದು ಹೋಗಿದ್ದ ಅನ್ನೋದು ತನಿಖೆಯಲ್ಲಿ ಖಚಿತವಾಗಿದೆ. ಅಷ್ಟೆಲ್ಲ ಇದ್ದಾಗಲೂ ಇದು ಧಾರ್ಮಿಕ ಅಸಹಿಷ್ಣುತೆಯ ಕಾರಣಕ್ಕಾಗಿ ನಡೆದ ಹತ್ಯೆ ಅಂತ ಹೇಳುವುದಕ್ಕೆ ನಮ್ಮ ಬುದ್ಧಿಜೀವಿಗಳಿಗೆ ನಾಲಗೆ ಹೊರಳುತ್ತಿಲ್ಲ. ಹಂತಕರಾರು ಅನ್ನುವುದೇ ಖಚಿತವಿಲ್ಲದ ಪ್ರಕರಣಗಳನ್ನು ವರ್ಷಗಟ್ಟಲೆ ಜೀವಂತವಾಗಿಡಲು ಏನೇನು ಬೇಕೋ ಎಲ್ಲ ಮಾಡಿದರು.
ಇದನ್ನು ಆಷಾಢಭೂತಿತನ ಅನ್ನದೇ ಇನ್ನೇನನ್ನ ಬೇಕು..? ವಿಚಾರವಾದಿಗಳಾಗಿದ್ದ ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ ಕಲಬುರ್ಗಿಯವರು ತಮ್ಮ ಪ್ರಗತಿಪರ ಧೋರಣೆಗಳಿಂದಲೇ ಕೊಲೆಯಾದರು ಅನ್ನುವುದಾದರೆ, ಫಾರೂಕ ಕೊಲೆಯಾದದ್ದು ತಮಾಷೆಗಾ..? ಆತನ ಹತ್ಯೆ, ಯಾಕೆ ಅಸಹಿಷ್ಣುತೆಯ ದ್ಯೋತಕವಾಗುವುದಿಲ್ಲ. ಅದನ್ನು ಖಂಡಿಸಿ ಜೆ.ಎನ್.ಯುನಲ್ಲಿ ವಿಚಾರ ಸಂಕಿರಣಗಳು, ಟೌನ್ ಹಾಲಿನ ಎದುರು ಮೌನ ಪ್ರತಿಭಟನೆಗಳು, ಹತ್ಯೆಯಾದವನ ಕುಟುಂಬದ ಜತೆ ಸೇರಿಕೊಂಡು ಮೊಂಬತ್ತಿ ಮೆರವಣಿಗೆಗಳು ನಡೆಯುವುದಿಲ್ಲ..? ಫಾರೂಕನಿಗೆ ಬೇರೆ ಯೋಗ್ಯತೆಗಳು ಏನಿದ್ದವೋ ಇಲ್ಲವೋ – ಕೊನೆಪಕ್ಷ, ದಾಬೋಲ್ಕರರು, ಪನ್ಸಾರೆ, ಕಲಬುರ್ಗಿಯವರ ಸಾಲಿನಲ್ಲಿ ಗೌರವ ಪಡೆಯುವ, ಹುತಾತ್ಮ ಅನ್ನಿಸಿಕೊಳ್ಳುವ ಯೋಗ್ಯತೆಯೂ ಇಲ್ಲವಾ..?