ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 24, 2017

3

ವಿಶ್ವ ಭೂ ದಿನ..

‍ನಿಲುಮೆ ಮೂಲಕ

– ಗೀತಾ ಹೆಗ್ಡೆ

ವಿಶ್ವ ಭೂ ದಿನಾಚರಣೆಯನ್ನು 90ರ ದಶಕದಲ್ಲಿ ಕೇವಲ ಅಮೇರಿಕಾ ದೇಶದವರು ಮಾತ್ರ ಆಚರಿಸುತ್ತಿದ್ದರು. ಕ್ರಮೇಣ ಇನ್ನಿತರ ದೇಶಗಳು ಈ ನಿಟ್ಟಿನಲ್ಲಿ ತಮ್ಮ ತಮ್ಮ ಪ್ರದೇಶದಲ್ಲಿ ಪ್ರಚಾರ ಪಡಿಸುತ್ತ 1970 ರಿಂದ 192 ರಾಷ್ಟ್ರಗಳು ವಿಶ್ವ ಭೂ ದಿನಾಚರಣೆಯನ್ನು ಏಪ್ರಿಲ್ 22 ರಂದು ಆಚರಿಸುತ್ತ ಬಂದಿವೆ. ಆದರೆ ಈ ಕಾಳಜಿ ಕೇವಲ ಒಂದು ದಿನಕ್ಕೆ ಮುಗಿಯದೆ ಪ್ರತಿ ದಿನ ಪ್ರತಿಯೊಬ್ಬರಲ್ಲೂ ಪ್ರತಿ ಮನೆ ಮನೆಗಳಲ್ಲೂ ಜಾಗೃತವಾಗಿರಬೇಕು. ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಲ್ಲಿ ಕೂಡ ಈ ದಿನ ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ‌ಸಂತೋಷದ ಸಂಗತಿ. ಮಕ್ಕಳಿಗೆ ಮನೆಯೆ ಮೊದಲ ಪಾಠ ಶಾಲೆ ಅನ್ನುವಂತೆ ಚಿಕ್ಕಂದಿನಿಂದಲೆ ಅವರಲ್ಲಿ ಭೂಮಿ ಅಂದರೆ ಏನು, ಅದನ್ನು ಸ್ವಚ್ಛವಾಗಿರಿಸಿಕೊಳ್ಳುವ ಬಗ್ಗೆ, ಪರಿಸರ ಕಾಳಜಿ, ಗಿಡ ಮರಗಳ ಬಗ್ಗೆ ಪ್ರೀತಿಯ ಭಾವನೆ ಬೆಳೆಸುವುದು ಹೆತ್ತವರ ಕರ್ತವ್ಯ ಕೂಡಾ.

“ಭೂಮಿ” ಈ ಶಬ್ದವನ್ನು ಒಂದತ್ತು ಸಾರಿ ಕಣ್ಣು ಮುಚ್ಚಿಕೊಂಡು ಮನಸ್ಸಿನಲ್ಲಿ ಹೇಳಿಕೊಳ್ಳಿ. ಏನನ್ನಿಸುತ್ತದೆ ನೋಡಿ. ನಮಗರಿವಿಲ್ಲದಂತೆ ಇಡೀ ಬ್ರಹ್ಮಾಂಡದ ಕಲ್ಪನೆ ಚಿತ್ರ ತನ್ನಷ್ಟಕ್ಕೆ ಹಾದು ಹೋದಂತೆ ಅನಿಸುತ್ತದೆ. ಯಾಕೆ ಹೀಗೆ ಎಂದು ಹಲವಾರು ಬಾರಿ ನನಗೇ ನಾನು ಪ್ರಶ್ನೆ ಮಾಡಿಕೊಂಡಿದ್ದಿದೆ. ಆದರೆ ಎಷ್ಟು ಯೋಚಿಸಿದರೂ ಉತ್ತರ ಸಿಗದೆ ಒದ್ದಾಡಿದ್ದಿದೆ. ಕಾರಣ ಈ ಮೊದಲು ನನಗೆ ಈ ಭೂಮಿಯ ಬಗ್ಗೆ ಅಷ್ಟೊಂದು ಕಾಳಜಿ ಇರಲಿಲ್ಲವೆ? ಪ್ರೀತಿ ಇರಲಿಲ್ಲವೆ? ಯಾಕೆ ನನಗೆ ಉತ್ತರ ಹೊಳೆಯುತ್ತಿಲ್ಲ? ಬರೀ ಚಿತ್ರ ಮಾತ್ರ ಕಾಣುತ್ತಿದೆಯಲ್ಲ? ಇದರ ಸ್ಪಷ್ಟತೆ ಏನು?

ನಿಜ ನನ್ನಲ್ಲಿರುವ ಈ ತಿಳುವಳಿಕೆಯ ಕೊರತೆ ಹೀಗಾಗಲು ಕಾರಣ. ಇದು ನನ್ನ ವಾದ. ಎದುರಾಳಿ ಏನೇ ಹೇಳಿದರೂ ಕೇಳುವಷ್ಟು ತಾಳ್ಮೆ ಈಗ ನನಗಿಲ್ಲ. ಕಾರಣ ನಾನು ಈ ಭೂಮಿ ಜೊತೆ ಈ ಪರಿಸರದ ಜೊತೆ ಅಷ್ಟು ಬೆರೆತು ಹೋಗಿದ್ದೇನೆ. ನನಗೆ ಯಾವಾಗಿಂದ ಈ ಭೂಮಿಯ ಬಗ್ಗೆ ಇಷ್ಟು ವಾತ್ಸಲ್ಯ ಬಂದಿತೊ ಗೊತ್ತಿಲ್ಲ. ಆದರೆ ನನಗರಿವಿಲ್ಲದಂತೆ ಪರಕಾಯ ಪ್ರವೇಶ ಮಾಡಿದ ಈ ಭೂಮಿಯ ನಂಟು ಗಿಡ ಮರಗಳ ಬಗ್ಗೆ ಪ್ರೀತಿ ಪ್ರತಿ ದಿನ ಒಂದಿಲ್ಲೊಂದು ರೀತಿಯಲ್ಲಿ ಸೇವೆ ಮಾಡುವ ತವಕ ಉಂಟು ಮಾಡಿದೆ.

ಅದೇನೊ ಹೇಳುತ್ತಾರಲ್ಲ; “ಬರಗಾಲದಲ್ಲಿ ಮಗ ಊಟ ಮಾಡೋದು ಕಲಿತಿದ್ದನಂತೆ”, “ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಕ್ಕೆ ಮಲ್ಲಿಗೆ ಕೇಳಿದಂತೆ” ಅಲ್ವೆ ಮತ್ತೆ ಈ ಸಿಟಿಯಲ್ಲಿ ನೀರಿಲ್ಲದ ಕಾಲದಲ್ಲಿ. ನಮ್ಮ ಹಿರಿಯರು ಸುಮ್ಮನೆ ಗಾದೆ ಮಾಡಿಟ್ಟಿದ್ದಾರಾ? ನನ್ನಂಥವರನ್ನು ನೋಡೆ ಮಾಡಿರಬೇಕು. ಆದರೆ ನನಗೆ ಹೇಳಿಕೊಳ್ಳಲು ಸ್ವಲ್ಪವೂ ಬೇಜಾರಿಲ್ಲ. ಏಕೆಂದರೆ ನನ್ನ ಕೈಲಾದಷ್ಟು ಈ ಭೂಮಿಯ ಸೇವೆ ಮಾಡುವ ಉತ್ಸಾಹ ನನ್ನದು. ದೇಹದಲ್ಲಿ ಶಕ್ತಿ ಇರುವವರೆಗೂ ಈ ತಾಯಿಯ ಸೇವೆ ಮಾಡಬೇಕು‌ ಹೇಗೆ? ಇದು ನನ್ನಷ್ಟಕ್ಕೆ ನಾನೇ ಕಂಡುಕೊಂಡ ದಾರಿ.

ಕಡಲ ತಡಿಯಲ್ಲಿ ಅಡಗಿದ ಸೂರ್ಯ ಜಗತ್ತನ್ನೆಲ್ಲ ಮಲಗಿಸಿ ಯಾರಂಕುಶವಿಟ್ಟರೊ ಕಾಣೆ ನಿಯತ್ತಾಗಿ ತನ್ನ ದಿಕ್ಕು ಕಿಂಚಿತ್ತೂ ಬದಲಾಯಿಸದೆ ತನ್ನ ದಿನ ನಿತ್ಯದ ಕಾಯಕ ಶುರು ಮಾಡುವ ಹೊತ್ತು. ನಾನೂ ಏಳುವುದು ಅದೇ ಹೊತ್ತು. ತಣ್ಣನೆಯ ಭುವಿಯ ಸ್ಪರ್ಶ ಮಾಡಿ ಕೈ ಮುಗಿದು ಮೇಲೆಳುವಾಗೆಲ್ಲ ದೇಹದಲ್ಲಿ ನವ ಚೈತನ್ಯ. ಈ ಚೈತನ್ಯ ಕೊಟ್ಟು ಈ ಭೂಮಿಯ ಮೇಲೆ ನನ್ನ ಈ ದಿನದ ಬೆಳಗು ನೋಡುವಂತೆ ಮಾಡಿದ ಆ ಭಗವಂತನಿಗೆ ಅಂದರೆ ಪ್ರತ್ಯಕ್ಷ ದೇವರೇ ಈ ಉದಯದ ಸೂರ್ಯ, ಅವನ ಶ್ಲೋಕ “ಆದಿದೇವ ನಮಸ್ತುಭ್ಯಂ| ಪ್ರಸೀದ ಮಮ ಭಾಸ್ಕರ…….” ನಾಮ ಸ್ಮರಣೆ ಮಾಡಿ ಮುಂದಿನ ಕೆಲಸಕ್ಕೆ ಅಣಿ.

ತಂಗಾಳಿಗೆ ತರಗೆಲೆಗಳ ಚೆಲ್ಲಾ ಪಿಲ್ಲಿ ಮನೆ ಮುಂದಿನ ಅಂಗಳದ ತುಂಬಾ. ನನಗೂ ಇದೊಂದು ರೀತಿ ಖುಷಿ. ಏಕೆ ಗೊತ್ತಾ ? ಪೊರಕೆ ಹಿಡಿದು ಗುಡಿಸುವಾಗೆಲ್ಲ ಅದೊಂದು ರೀತಿ ಶಬ್ದ ನನ್ನ ಮನಸ್ಸನ್ನು ನನ್ನೂರಿಗೆ ಎಳೆದೊಯ್ಯುತ್ತದೆ. ಊರು ಅಂದರೆ ನಮ್ಮಳ್ಳಿ ಮಲೆನಾಡು. ಅಲ್ಲಿ ಅಡಿಕೆ ತೋಟದ ಸುತ್ತ ಗಿಡ ಮರಗಳಿರುವ ಬೆಟ್ಟ. ಬೇಸಿಗೆ ಮುಗಿಯುತ್ತ ಬಂದಂತೆ ಕೆಲಸದ ಹೆಣ್ಣಾಳುಗಳು ಗಿಡದ ಟೊಂಗೆಯಿಂದ ಮಾಡಿದ ವಿಶಿಷ್ಟ ಪೊರಕೆಯಲ್ಲಿ ಬೆಟ್ಟವನ್ನೆಲ್ಲ ಗುಡಿಸುತ್ತಿದ್ದರು. ಈ ಗುಡಿಸುವಿಕೆ ಚಿಕ್ಕವಳಿದ್ದಾಗ ತೋಟದಲ್ಲಿ ಅಪ್ಪನ ಜೊತೆ ಕುಳಿತು ಆಲಿಸುತ್ತಿದ್ದೆ. ಅಲ್ಲಿಂದ ಒಂದು ರೀತಿ ಸರಪರ ಶಬ್ಧ ನನ್ನ ಕಿವಿಯಲ್ಲಿನ್ನು ಇದೆ. ಈ ನಂಟು ನನಗೆ ಖುಷಿ ತರಿಸುತ್ತದೆ ಪ್ರತಿ ದಿನ. ಇರುವ ಜಾಗದಲ್ಲೆ ಒಂದಷ್ಟು ಗಿಡಗಳ ನಿರ್ವಹಣೆ ಮನೆ ಮುಂದಿನ ಪುಟ್ಪಾತು ಆವರಿಸಿದೆ. ಬಿಬಿಎಂಪಿಯವರು ರಸ್ತೆ ಸರಿ ಮಾಡುವಾಗ ಎಲ್ಲಿ ಎಲ್ಲವನ್ನೂ ಕಿತ್ತಾಕುತ್ತಾರಾ? ಅಕ್ಕ ಪಕ್ಕದ ಕೆಲವರ ಕೆಂಗಣ್ಣು, ಅಸಹನೆ ಇವೆಲ್ಲ ನಾಶವಾದರೆ ಅಂತ ಒಳಗೊಳಗೆ ಆತಂಕ. ” ಸರ್ ತೊಂದರೆಯಾದರೆ ಎಲ್ಲ ಕಿತ್ತಾಕಿ” ಅಂತ ತುದಿ ಬಾಯಲ್ಲಿ ನಾನೆ ಹೇಳಿದರೂ “ಛೆ! ಮೇಡಮ್ಮವರೆ, ಎಷ್ಟು ಮುತವರ್ಜಿಯಿಂದ ಬೆಳೆಸಿದ್ದೀರಾ, ಇದೇನು ಮೇನ್ ರೋಡ್ ಅಲ್ಲ, ಇರಲಿ ಬಿಡಿ, ತಂಪಾಗಿರುತ್ತದೆ” ಎಂದನ್ನಬೇಕಾ! ಅವರೂ ಕೂಡಾ ಗಿಡಮರಗಳ ಪ್ರೇಮಿಗಳಾಗಿರುವುದು ನನಗೋ ಆಶ್ಚರ್ಯ ಸಂತೋಷ ಒಟ್ಟಿಗೆ. ಈಗ ಹದಿನೇಳು ವರ್ಷಗಳಿಂದ ನಾ ಬೆಳೆದ ಗಿಡಗಳು ತಂಗಾಳಿ ಬೀಸುತ್ತಿವೆ. ರೆಂಬೆ ಕೊಯ್ಯಲು ಬಂದ ಕೆಇಬಿಯವರು ಇದು ಯಾವ ಮರವೆಂದು ಗೊತ್ತಿಲ್ಲದೆ ಹೆಚ್ಚಿನ ರೆಂಬೆ ಕಟ್ ಮಾಡಿ ಆಮೇಲೆ ನನ್ನ ನೋಡಿ “ಮೇಡಮ್ಮವರೆ ಇದು ಎಂಥಾ ಮರ, ಮನೆ ಗೋಡೆ ಪಕ್ಕನೆ ಕಂಪೌಂಡೊಳಗೆ ಬೆಳೆಸಿದ್ದೀರಲ್ಲಾ? “ಇದು ಬಟರ್ ಫ್ರೂಟ್ (ಬೆಣ್ಣೆ ಹಣ್ಣು) ಗಿಡ ಅಂದಾಗ “ಅಯ್ಯೋ ಎಷ್ಟೆಲ್ಲಾ ರೆಂಬೆ ಕಡಿದು ಬಿಟ್ವಿ, ಪಕ್ಕದವರು ಕಂಪ್ಲೇಂಟು ಮಾಡಿದರು ಅಂತಾ. ಛೆ! ಎಂದು ಪರಿತಪಿಸಿದಾಗ “ಯೋಚಿಸಬೇಡಿ, ಚಿಗುರುತ್ತದೆ ಮತ್ತೆ” ಅಂದ ದಿನದಿಂದ ಇವತ್ತಿನವರೆಗೂ ಈ ಮರ ಅವರ ಪ್ರೀತಿಗೂ ಪಾತ್ರವಾಗಿದೆ. ಇದ್ಯಾವ ಗೊಡವೆ ಬೇಡವೆಂದೊ ಏನೋ ಈ ಮರ ತಂತಿ ಬಿಟ್ಟು ಮೇಲೆ ಮೇಲೆ ಬೆಳೆಯುತ್ತಿದೆ. ವರ್ಷಕ್ಕೆ ತಿಂದು ಮಾರುವಷ್ಟು ಹಣ್ಣು ಕೊಟ್ಟು ಋಣ ತೀರಿಸುತ್ತಿದೆ.

ಇನ್ನು ಇಷ್ಟೆಲ್ಲಾ ಗಿಡಗಳ ನಿರ್ವಹಣೆಗೆ ನೀರು ಗೊಬ್ಬರ ಒದಗಿಸುವ ಪಾಳಿ ಮುಂಜಾನೆಯ ಎದ್ದ ಗಳಿಗೆಯಲ್ಲಿ. ಬೀಡಾಡಿ ಹಸುಗಳು ಮನೆ ಮುಂದಿನ ಹಾದಿಯಲ್ಲಿ ಬಂದಾಗ ಸಿಗುವ ಸಗಣಿ ಉತ್ತಮ ಆಹಾರ ಹೂ ಬಿಡುವ ಗಿಡಗಳಿಗೆ. ಬಕೆಟ್ ನೀರಲ್ಲಿ ಕರಡಿ ಅದಕ್ಕೊಂದಿಷ್ಟು ಮನೆಯ ತ್ಯಾಜ್ಯವಾದ ತರಕಾರಿ ಸಿಪ್ಪೆ, ತೊಳೆದ ಅಕ್ಕಿ ನೀರು, ಮಾಡಿದ ಚಹಾ ಕಾಫಿ ಗಸಟು, ಉಳಿದ ಅಡಿಗೆ ಪದಾರ್ಥ ಇತ್ಯಾದಿ ಒಂದು ವಾರ ಕೊಳೆಯಲು ಬಿಟ್ಟು ಎಲ್ಲವನ್ನೂ ಸೇರಿಸಿ ಪ್ರತಿ ಗಿಡಕ್ಕೆ ಹಾಕುವುದು ವಾರಕ್ಕೊಮ್ಮೆ. ಈ ಗೊಬ್ಬರದಲ್ಲೆ ದಾಳಿಂಬೆ ಗಿಡದಲ್ಲಿ ನಳನಳಿಸಿದ ಹಣ್ಣುಗಳು ನನ್ನ ಕಲ್ಪನೆಗೂ ಮೀರಿದ್ದು.

ಮಿಕ್ಕಿದ ದಿನಗಳಲ್ಲಿ ತರಕಾರಿ ತೊಳೆದ ನೀರು, ವಾಷಿಂಗ್ ಮೆಷಿನ್ ನೀರು, ನೆಲ ಒರೆಸಿದ ನೀರು ಇತ್ಯಾದಿ ತೊಳೆದ ನೀರೆಲ್ಲ ಗಿಡಗಳಿಗೆ ಹಾಕುವ ನೆವದಲ್ಲಿ ಭೂಮಿ ಸೇರಿ ಭೂಮಿಯನ್ನು ತಂಪು ಮಾಡುವ ಕಸರತ್ತು ನನ್ನದು. ಸ್ವಲ್ಪ ಸಮಯ ವ್ಯರ್ಥ ಮಾಡಬೇಕು ಎಲ್ಲವನ್ನೂ ಸಂಗ್ರಹಿಸಿಡಲು. ಆದರೂ ಚಿಂತೆಯಿಲ್ಲ. ದೇಹಕ್ಕೆ ಒಳ್ಳೆಯ ವ್ಯಾಯಾಮ ಇದರಿಂದ ಸಿಗುತ್ತಿದೆ. ಚಿಮುಕಿಸಿದ ನೀರು ಮನೆಮುಂದೆ ರಂಗೋಲಿ ಇಕ್ಕಿ ಪೂಜೆಗೆ ಹೂ ಕೊಯ್ದು ಒಳ ಬರುವಾಗ ಮತ್ತೆ ಒಮ್ಮೆ ನಿಂತು ನೋಡುತ್ತೇನೆ. ಮನಸ್ಸಿಗೆ ಹಾಯ್ ಎನಿಸುತ್ತದೆ ನೀರ ಕುಡಿದ ಭೂತಾಯ ಮಡಿಲಲ್ಲಿ ಓಲಾಡುವ ಗಿಡಗಳ ಕಂಡು. ಇದೇ ಭಾವ ಉಕ್ಕಿ ಉತ್ಸಾಹದಲ್ಲಿ ಬೆಳಗಿನಲ್ಲೆ ಹೆಚ್ಚಿನ ಬರಹಗಳು ಹೊರ ಹೊಮ್ಮುವುದು. ಅವುಗಳಲ್ಲಿ ಈ ಕವನವೂ ಒಂದು.

ಬಿಳಿ ಮುತ್ತಿನ ಸಾಲಲ್ಲಿ
ಅಡಗಿ ಕುಳಿತ ನನ್ನ ಮನೆ
ಮುಂದಿನ ರಂಗೋಲಿ ನೀನು.

ಮುಂಜಾನೆಯ ಚಳಿಯಲ್ಲಿ
ತೊಟ್ಟಿಕ್ಕುವ ಮುದ್ದಾದ
ಇಬ್ಬನಿಯ ಹನಿ ನೀನು.

ಹೂ ಗಿಡಗಳ ಮರೆಯಲ್ಲಿ
ಇಣುಕಿ ಹಾಕುವ
ಮರಿ ಗುಬ್ಬಚ್ಚಿ ನೀನು.

ಸ್ವಾತಿ ಮಳೆ ಚಳಿಯಲ್ಲಿ
ಬೆಚ್ಚನೆಯ ಕಾವು ಕೊಡುವ
ನನ್ನ ಕಂಬಳಿ ನೀನು.

ಹೊತ್ತಿಲ್ಲದ ಹೊತ್ತಲ್ಲಿ
ಬೆನ್ನತ್ತಿ ಬರುವ
ನನ್ನೊಳಗಿನ ಮನಸ್ಸು ನೀನು.

ದಿನವೆಲ್ಲ ತಲೆ ಕೊರೆದು
ವಿಷಯಾಸಕ್ತಿಗೆ ತಳ್ಳುವ
ಅಪರೂಪದ ಗೆಳತಿ ನೀನು.

ಹಗಲಲ್ಲು ಇರುಳಲ್ಲು
ನನ್ನೊಂದಿಗೆ ಹೆಜ್ಜೆ ಹಾಕುತ್ತಿರುವ
ನನ್ನೊಳಗಿನ ಕವನವಲ್ಲವೆ ನೀನು?

ಈ ಬುಗಿಲೇಳುವ ಬರಹಗಳ ಸಂಗಾತಿ ಈ ಪರಿಸರ. ಎಲ್ಲವನ್ನೂ ಹೊತ್ತು ನಿಂತ ಈ ಭೂತಾಯಿ ಮಡಿಲಿಗೆ ಬದುಕಿರುವ ನಾವು ಏನು ಕೊಟ್ಟೇವು? ಸದಾ ಗಲೀಜು ಮಾಡುತ್ತ ಪರಿಸರವನ್ನೆ ಹಾಳು ಮಾಡುತ್ತಿರುವ ಎಲ್ಲೆಂದರಲ್ಲಿ ಕಸ ಬಿಸಾಕುವ ಅನೇಕ ಜನರನ್ನು ಕಂಡಾಗ “ಯಾಕೆ ಕಸ ತಂದು ಹೀಗೆ ಬಿಸಾಕುತ್ತೀರಾ? ಹಾಕಬೇಡಿ ದಯವಿಟ್ಟು”.. ” ನಿಮಗ್ಯಾಕ್ರಿ, ನಾನೇನು ನಿಮ್ಮನೆ ಮುಂದೆ ಹಾಕಿದ್ನಾ” ಅವರ ಹತ್ತಿರ ಬಾಯಿಗೆ ಬಂದಾಗೆ ಉಗಿಸಿಕೊಂಡು ಮನಸ್ಸು ಕೆಡಿಸಿಕೊಂಡ ಸಂದರ್ಭ ಹಲವಾರಿದೆ. ಕಾರಣ ಈ ಶ್ವಾನವನ್ನು ಸಾಕಿಕೊಂಡು ಬೆಳಗ್ಗೆನೆ ಮೆರವಣಿಗೆ ಹೊರಡಲೇ ಬೇಕು ಇವರುಗಳು ಕಸ ಬಿಸಾಕೋದು ಅದೇ ವೇಳೆ, ಕಣ್ಣಿಗೆ ಕಂಡ ಮೇಲೆ ಹೇಳದೆ ಇರೋಕಾಗದೆ ಒದ್ದಾಡೋದು. ಬೇಕಿತ್ತಾ ನಿನಗೆ ಈ ಉಸಾಪರಿ ಅಂತ ಒಳ ಮನಸ್ಸು ಉಗಿದರೂ ಹೇಳೋದು ಬಿಟ್ಟಿಲ್ಲ. ಸಧ್ಯಕ್ಕೆ ನನ್ನ ಕಂಡರೆ ಮಾಮೂಲಿ ಗಿರಾಕಿಗಳು ಸ್ವಲ್ಪ ಮುಂದೆ ಅಂತೂ ಹೋಗುತ್ತಿದ್ದಾರೆ ಕೈಯ್ಯಲ್ಲಿರೊ ಕಸದ ಚೀಲದೊಂದಿಗೆ. ಮನಸ್ಸಲ್ಲಿ ಅದೆಷ್ಟು ಬೈಕೋತಾರೊ ಕಾಣೆ.. ಇರಲಿ, ಇದು ನನ್ನ ಅಳಿಲು ಸೇವೆ ಎಂದು ನಕ್ಕು ಬಿಡುತ್ತೇನೆ.

ಇನ್ನೊಂದು ರೀತಿಯ ಕಾಳಜಿ ಈಗೆರಡು ವರ್ಷದಲ್ಲಿ ಹುಟ್ಟಿಕೊಂಡಿದ್ದು. ಅದೇ ಬೀಜಗಳನ್ನು ಸಂಗ್ರಹಿಸಿಡೋದು. ದಿನ ನಿತ್ಯ ಉಪಯೋಗಿಸುವ ಯಾವುದೆ ಹಣ್ಣು, ತರಕಾರಿ, ಹೂಗಳ ಬೀಜಗಳನ್ನು ಮುತುವರ್ಜಿಯಿಂದ ತೊಳೆದು ನೆರಳಲ್ಲಿ ಒಣಗಿಸಿ ಬೇರೆ ಬೇರೆ ಪೇಪರ್ ಕವರಿನಲ್ಲಿ ಕೂಡಿಟ್ಟು ಊರಿಗೆ ಹೋದಾಗ ಅಲ್ಲಿ ಅಣ್ಣನಿಗೆ ಕೊಟ್ಟು ಇಂಥಿಂತಾ ಬೀಜ ನೋಡು ಎಂದಾಗ ಆಶ್ಚರ್ಯದಿಂದ ಕಣ್ಣರಳಿಸಿ “ಇದೇನೆ ಇದು ಬೆಂಗಳೂರಲ್ಲಿ ಇದ್ದು ಇಷ್ಟೊಂದು ಬೀಜ ಸಂಗ್ರಹ ಮಾಡಿದ್ಯಲ್ಲೆ” ಅಂದಾಗ ಖುಷಿಯಿಂದ ಬೀಗುತ್ತೇನೆ. ಅಷ್ಟೆ ಆಸಕ್ತಿಯಿಂದ ಅವುಗಳನ್ನು ಎಲ್ಲೆಲ್ಲಿ ಹಾಕಬೇಕೆನ್ನುವ ಮುತುವರ್ಜಿ ವಹಿಸುವುದು ಅವರ ಕೆಲಸ.

ಇತ್ತೀಚೆಗೆ ದಕ್ಷಿಣ ಕನ್ನಡದ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಪರಿಸರ ಬೆಳೆಸುವ ಕಾರ್ಯಕ್ರಮ ಟೀವಿಯಲ್ಲಿ ನೋಡಿ ನನ್ನಲ್ಲಿ ಇನ್ನೂ ಹೆಚ್ಚಿನ ಬೀಜ ಸಂಗ್ರಹಿಸಿ ಬೆಳೆಯುವ ಭೂಮಿಗೆ ಹಾಕುವ ಆಸಕ್ತಿ ಹೆಚ್ಚಾಗಿದೆ‌. ಅದರಲ್ಲೂ ನಾವು ತಿನ್ನುವ ನೇರಳೆ, ಹಲಸು, ಮಾವು ಇವುಗಳು ದೊಡ್ಡ ಮರವಾಗಿ ಬೆಳೆಯುವುದರಿಂದ ಯಾವುದಾದರೂ ಊರಿಗೆ ಹೋಗುವಾಗ ಕೊಂಡೊಯ್ದು ದಾರಿಯಲ್ಲಿ ಸಿಗುವ ವನಗಳಲ್ಲಿ ಎಸೆದರೆ ಮಳೆ ಬಂದಾಗ ಮೊಳಕೆಯೊಡೆದು ಮೇಲೆ ಬರಬಹುದೆನ್ನುವ ದೂರದ ನಂಬಿಕೆ. ಇಂತಹ ಅನೇಕ ರೀತಿಯ ಪ್ರಯತ್ನ ಪರಿಸರ ಸಂರಕ್ಷಣೆ, ಭೂಮಿಯನ್ನು ತಂಪಾಗಿಸುವತ್ತ ಎಲ್ಲರೂ ಕಾಳಜಿ ವಹಿಸಿದರೆ ಏರುತ್ತಿರುವ ತಾಪ ಮಾನ ಸ್ವಲ್ಪವಾದರೂ ಕಡಿಮೆ ಮಾಡಬಹುದೆ? ಆದರೆ ಎಲ್ಲರೂ ಈ ಕುರಿತು ಮನಸ್ಸು ಮಾಡಬೇಕು ಅಷ್ಟೆ.

ನಮ್ಮ ಹಳ್ಳಿಯಲ್ಲಿ ಊರವರು ಅಕ್ಕಪಕ್ಕದ ಹಳ್ಳಿಯವರೆಲ್ಲ ಸೇರಿ ವನ ಮಹೋತ್ಸವ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೆವು. ಹತ್ತಿರದಲ್ಲೇ ಇರುವ ಹೊಳೆಯ ಪಕ್ಕದಲ್ಲಿ ಈ ಆಚರಣೆ. ಇದನ್ನು ಹೊಳೆ ಊಟ ಅಂತಲೂ ಕರೆಯುತ್ತಿದ್ದೆವು. ಕಾರಣ ಈ ದಿನ ಹಿರಿಯ ಕಿರಿಯರೆನ್ನದೆ ಹೆಂಗಸರು ಗಂಡಸರು ಅನ್ನುವ ಭೇದ ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಮಾಡುವ ಅಡುಗೆಯ ಕೆಲಸ ಅದೂ ಹೊಳೆಯಂಚಿನಲ್ಲಿ. ಪಾತ್ರೆ, ಅಡುಗೆ ಸಾಮಾನು ಇನ್ನಿತರ ಪರಿಕರಗಳೊಂದಿಗೆ ಬೆಳಗ್ಗೆ ಬೇಗನೆ ಎಲ್ಲರೂ ಹೊಳೆಗೆ ಹೋಗಿ ಅಲ್ಲೇ ಎಲ್ಲರ ಸ್ನಾನ. ಈಜುವವರ ಕೇಕೇ ಮೋಜಿನ ಕ್ಷಣ ಸಖತ್ ಗಲಾಟೆ. ನಂತರ ಒಂದಷ್ಟು ಜನರೆಲ್ಲ ಸೇರಿ ಅಡುಗೆ ತಯಾರಿ ನಡೆಸುತ್ತಿದ್ದರೆ ಈ ಕಡೆ ಉರುವಲಿಗೆ ಅಕ್ಕ ಪಕ್ಕ ಸಿಗುವ ಒಣ ಕಟ್ಟಿಗೆ ಎರಡು ದೊಡ್ಡ ಕಲ್ಲು ಇಟ್ಟು ಒಲೆಯ ಆಕಾರ ನೀಡಿ ಉರಿ ಹೊತ್ತಿಸುವುದು ಇನ್ನೊಂದು ತಂಡ. ಸ್ವಲ್ಪ ವಯಸ್ಸಾದವರು ತಮ್ಮ ಹಳೆಯ ಅನುಭವದ ‘ಹೊಳೆ ಊಟ’ದ ವರ್ಣನೆ. ಹೀಗೆ ಅಂತೂ ಸಿಹಿ ಪಾಯಸದ ಅಡುಗೆಯೊಂದಿಗೆ ಮುಗಿಸಿದ ಊಟ ಮುಗಿದ ಮೇಲೆ ಮನರಂಜನೆ ಕಾರ್ಯಕ್ರಮ. ಏಕ ಪಾತ್ರಾಭಿನಯ, ಯಕ್ಷಗಾನದ ಹಾಡು, ಹಾಸ್ಯ ಚಟಾಕಿ ಇತ್ಯಾದಿಗಳ ಸಂಭ್ರಮದಲ್ಲಿ ಹೊತ್ತು ಮುಳುಗುತ್ತಿರುವ ಸೂರ್ಯ ಮರೆಯಾಗುವ ಸೂಚನೆ ಕಂಡಾಗ ಎಲ್ಲರೂ ಮನೆಯತ್ತ ಪಯಣ ದಾರಿಯುದ್ದಕ್ಕೂ ಮಾತು ಮಾತು ಮಾತು. ಎಂತಹ ಚಂದದ ದಿನ. ಅಂದರೆ ಇಲ್ಲಿ ವರ್ಷವೆಲ್ಲ ತೋಟ ಬೆಟ್ಟ ಅಂತ ದುಡಿದ ಜೀವಗಳ ಒಂದು ದಿನದ ಸಂತೋಷದ ಕ್ಷಣ ಎಲ್ಲರೂ ಒಟ್ಟಿಗೆ ಸವಿಯುವುದು. ಮೈ ಮನವೆಲ್ಲ ಹಗುರ. ಇಂದಿಗೂ ಹಲವು ಹಳ್ಳಿಗಳಲ್ಲಿ ಈ ರೂಢಿಯಿದೆ.

ಇವೆಲ್ಲ ಅನುಭವ, ಸ್ವ ಪ್ರಯತ್ನದ ಕಸರತ್ತು ಹೇಳಿದ ಉದ್ದೇಶ ಇಷ್ಟೆ. ಈ ದಿನವನ್ನು ಎಲ್ಲರೂ ಅರ್ಥ ಪೂರ್ಣವಾಗಿ ಆಚರಿಸುವಂತಾಗಲಿ. ಎಲ್ಲರ ಚಿತ್ತ ಪರಿಸರದ ಕಾಳಜಿತ್ತ ಸದಾ ಇರಲಿ. ಸರಕಾರದ ಸ್ವಚ್ಛತಾ ಕಾರ್ಯಕ್ರಮಕ್ಕೆ ನಾವೂ ಕೈ ಜೋಡಿಸೋಣ. ಭೂ ತಾಯಿಯ ಒಡಲು ಧಗ ಧಗ ಉರಿಯುತ್ತಲಿದೆ. ದಿನ ದಿನ ಭೂಮಿಯ ಶಾಖ ಹೆಚ್ಚುತ್ತಿದೆ. ಒಂದಿನಿತೂ ನೀರು ಪೋಲು ಮಾಡದೆ ಆದಷ್ಟು ಗಿಡ ಮರ ಬೆಳೆಸಿ ಪರಿಸರ ಉಳಿಸೋಣ. ಭೂಮಿ ತಂಪಾಗಿರುವಂತೆ ನೋಡಿಕೊಳ್ಳೋಣ. ಇದೆ ನನ್ನ ಆಶಯ, ಕನಸು.

3 ಟಿಪ್ಪಣಿಗಳು Post a comment
  1. ಭೂಮಿತಾಯಿ ನಮ್ಮ 10 ಹೊತ್ತು ಸಾಕಿ ಸಲಹುತ್ತಿರುವ ಒಡಲು ಮಡಿಲು ತವನಿದಿ.

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ

    ಉತ್ತರ
  2. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ

    ಉತ್ತರ

Trackbacks & Pingbacks

  1. ವಿಶ್ವ ಭೂ ದಿನ.. | ನಿಲುಮೆ – Sandhyadeepa….

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments