ಮೋಹಕ ತಾರೆ ರಮ್ಯಾಳಿಗೊಂದು ಪ್ರೀತಿಯ ಓಲೆ..
ಶಿವಾನಂದ ಶಿವಲಿಂಗ ಸೈದಾಪೂರ.
ಎಂ.ಎ. ವಿದ್ಯಾರ್ಥಿ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ,
ಬೆಳಗಾವಿ.
ರಮ್ಯಾ ಮೇಡಮ್, ಬರೆಯೋದು ಸ್ವಲ್ಪ ತಡವಾಯಿತು. ಅಭಿಮಾನಿಯೊಬ್ಬ ಹೀಗೆ ಬರೆಯೋದು ಏಷ್ಟು ಸರಿಯೋ, ತಪ್ಪೋ ಗೊತ್ತಿಲ್ಲ. ನೀವು ನನ್ನಂತ ಹಲವಾರು ಯುವಕರ ನೆಚ್ಚಿನ ಹೀರೊಯಿನ್, ಕೆಲವೊಂದು ಜನರಿಗೆ ನಿಮ್ಮನ್ನು ನೋಡಿ ಇನ್ಸ್ಪೈರ್ ಆಗುವಂತಹ ಮೋಹಕ ಶಕ್ತಿ ನಿಮಗಿದೆ. ಕೆಲವರು ಆಗಿದ್ದಾರೆ; ಇನ್ನು ಕೆಲವರು ಆಗುವವರು ಇದ್ದಾರೆ. ಅತಿ ಕಡಿಮೆ ವಯಸ್ಸಲ್ಲಿ (ರಾಜಕೀಯದಲ್ಲಿ) ಮೇಲೆ ಬಂದವರು. ಕನ್ನಡ ಭಾಷೆ ಸೇರಿ ಹಲವಾರು ಭಾಷೆಯಲ್ಲಿ ನಟನೆ ಮಾಡಿದ್ದಿರಿ. ಅದಕ್ಕೆ ಏನೊ ಗೊತ್ತಿಲ್ಲ ನಿಮ್ಮನ್ನು ಕಂಡರೆ ನನಗೆ ಕೂಡ ಎಲ್ಲಿಲ್ಲದ ಪ್ರೀತಿ. ಎಲ್ಲರಗಿಂತ ನಿಮ್ಮ ಮೇಲೆ ಅತಿ ಅಭಿಮಾನ. ಜನರೆಲ್ಲ ನಿಮ್ಮನ್ನು ಪ್ರೀತಿಯಿಂದ ಮೋಹಕ ತಾರೆಯೆಂದು ಕರೆಯುತ್ತಾರೆ.. ಅದರಲ್ಲಿ ನಾನು ಕೂಡ ಒಬ್ಬ. ಆದರೆ ನೀವು ಇತ್ತೀಚೆಗೆ ಮಾಡುತ್ತಿರುವುದಾದರೂ ಏನು?. ಸಾವರ್ಕರ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿ ಒಬ್ಬ ನಿಸ್ವಾರ್ಥ ನಿಷ್ಠಾವಂತ ದೇಶಭಕ್ತನಿಗೆ ನೀವು ಅಪಮಾನ ಮಾಡಿದ್ದಿರಲ್ಲ ಏನನ್ನನಬೆಕು ನಿಮಗೆ. ರಾಜಕೀಯದಲ್ಲಿದ್ದು ದಿನಕ್ಕೊಂದು ಡೊಂಬರಾಟ ಆಡುತಿದ್ದಿರಿ. ಮಾತು ಮಾತಿಗೆ ನಾವು ದೇಶಕ್ಕೆ ಸ್ವತಂತ್ರ ತಂದು ಕೊಟ್ಟವರೆಂದು ಬೊಬ್ಬೆ ಹೊಡಿಯುತ್ತಿರುವ ನಿಮ್ಮ ಕಾಂಗ್ರೇಸಿನಿಂದ ಏಷ್ಟು ಜನ ಗಲ್ಲಿಗೇರಿದ್ದಾರೆ, ಏಷ್ಟು ಜನ ಅಂಡಮಾನ ಜೈಲಿಗೆ ಹೋಗಿ ಕರಿ ನೀರಿನ ಶಿಕ್ಷೆ ಅನುಭವಿಸಿದ್ದಾರೆ ಹೇಳುವಿರಾ? ಯಾವುದು ನೀವು ಓದಿರುವ ಇತಿಹಾಸ?
ಸಾಮಾನ್ಯವಾಗಿ ರಾಜಕೀಯದಲ್ಲಿದ್ದುಕೊಂಡು ಇತರ ಪಕ್ಷಗಳನ್ನು ವಿರೋಧಿಸುವುದು ರಾಜಕೀಯ ಗುಣ. ಹಾಗಂತ ಜೀವದ ಹಂಗು ತೊರೆದು ಹೋರಾಡಿದವರನ್ನು ತೆಗಳುವ ಕೀಳು ಮಟ್ಟಕ್ಕೆ ಇಳಿದಿದ್ದೀರಲ್ಲಾ? ಇದೇನಾ ನಿಮ್ಮ ರಾಷ್ಟ್ರ ಪ್ರೇಮ? ಅಥವಾ ರಾಜಕಾರಣ ಅಂದರೆ ಹೀಗೆ ಅಂತ ತೋರಿಸುವುದಕ್ಕೆ ಹೊರಟಿದ್ದಿರಾ?. ಇಷ್ಟಕ್ಕೂ ನೀವು ಬರಿ ನಟನೆಯಿಂದ ಮೋಹಕ ತಾರೆಯೆಂಬ ಬಿರುದು ಪಡೆದುಕೊಂಡಿದ್ದೀರಿ. ನೆನಪಿರಲಿ, ಸಾವರ್ಕರೆಂಬ ರಿಯಲ್ ಹೀರೊ ನಟನೆ ಮಾಡಿದವರಲ್ಲ. ಸ್ವಾತಂತ್ರಕ್ಕಾಗಿ ತನ್ನ ರಕ್ತ ಬಸಿದು “ವೀರ” ಎಂಬ ಬಿರುದು ಪಡೆದಿದ್ದಾರೆ. ಒಂದೇ ಸಲ ಯೋಚಿಸಿ.. ನೀವು ಬಣ್ಣ ಬಿಟ್ಟ ಮೇಲೆ ನಿಮ್ಮ ಬಿರುದು ಅಳಿಸಿ ಹೋಗಿದೆ. ಈಗ ನಿಮ್ಮನ್ನು ಯಾರು ಕೂಡ ಮೋಹಕ ತಾರೆ ರಮ್ಯಾ ಎಂದು ಕರೆಯುವುದಿಲ್ಲ. ಆದರೆ ಸಾವರ್ಕರವರನ್ನು ನೋಡಿ ತಾನಾಗಿಯೇ ಅವರ ಹೆಸರಿನ ಮುಂದೆ “ವೀರ” ಬಂದು ಸೇರಿಕೊಳ್ಳುತ್ತದೆ. ವೀರ ಸಾವರ್ಕರ ಅಂದಾಕ್ಷಣ ಅವರ ಹೆಸರಿಗೆ ಬಾಣೆತ್ತರದ ಭಾವನೆ ಹೃದಯದಿಂದ ಬರುತ್ತದೆ. ಮೋಹಕ ತಾರೆ ಎಂದರೆ ಈ ಹಿಂದೆ ಇದ್ದ ನಿಮ್ಮ ಮೇಲೆ ಯಾವ ಮೋಹವು ಉಕ್ಕಿ ಬರುತ್ತಿಲ್ಲ. ಎಲ್ಲವೂ ಕಳೆದು ಹೋಗಿದೆ. ನಿಮಗೂ ಅವರಿಗೂ ಇರುವುದು ಇದೆ ವ್ಯತ್ಯಾಸ.
ನಮಗೆ ಗೊತ್ತು.. ರಾಜಕೀಯದಲ್ಲಿರುವ ನಿಮಗೆ ನಿರಂತರವಾಗಿ ಪ್ರಚಾರ ಬೇಕೆಂಬುವುದು. ಸುದ್ಧಿಯಲ್ಲಿರಬೇಕಾದರೆ ಸಾಧನೆ ಮಾಡಿ ಜನರ ಮುಂದೆ ಬನ್ನಿ, ಜನ ನಿಮ್ಮನ್ನು ತಾನಾಗಿಯೇ ಒಪ್ಪಿಕೊಳ್ಳುತ್ತಾರೆ. ಆದರೆ ನೀವೇನು ಮಾಡುತಿದ್ದೀರಿ? ಸಾಮಾಜಿಕ ಜಾಲತಾಣಗಳ ಜವಾಬ್ದಾರಿ ಸಿಕ್ಕಿತ್ತೆಂಬ ಹುಮ್ಮಸ್ಸಿನಿಂದ ಒಬ್ಬ ನಿಷ್ಠಾವಂತ ಸ್ವಾತಂತ್ರ್ಯ ಹೋರಾಟಗಾರನಿಗೆ ಅತಿ ಕೀಳು ಮಟ್ಟಕ್ಕಿಳಿದು ಅವಮಾನ ಮಾಡುತಿದ್ದಿರಿಲ್ಲ; ಇದೇನಾ ನಿಮ್ಮ ನೈತಿಕತೆ? ಇದೇನಾ ನೀವು ಸ್ವಾತಂತ್ರ್ಯ ಹೋರಾಟಗಾರರಿಗೆ ಕೊಡುವ ಗೌರವ? ಇಷ್ಟಕ್ಕೂ ನೀವು ಯಾವ ಇತಿಹಾಸ ಓದಿದ್ದೀರಿ? ಸಾವರ್ಕರರ ವ್ಯಕ್ತಿತ್ವ ಎಂತದ್ದು ಅಂತಾ ಗೊತ್ತಾ ನಿಮಗೆ? ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ 1902ರಲ್ಲಿ 19ನೇ ವಯಸ್ಸಿಗೆ ಹೋರಾಟಕ್ಕೆ ದುಮುಕಿ, ಮುಂದೆ ದೇಶಭಕ್ತಿಯ ಅಪರಾಧಕ್ಕಾಗಿ ಭಾರತೀಯ ಮಹಾವಿದ್ಯಾಲಯದ ಹಾಸ್ಟೇಲನಿಂದ ಹೊರದೂಡಲ್ಪಟ್ಟ ಏಕೈಕ ಮತ್ತು ಮೊದಲ ವಿದ್ಯಾರ್ಥಿ. ನಮ್ಮ ದೇಶದಲ್ಲಿ ವಿದೇಶಿ ಬಟ್ಟೆಗೆ ಬೆಂಕಿ ಇಟ್ಟು ಹೋಳಿ ಆಚರಿಸಿದ ಮೊಟ್ಟ ಮೊದಲ ಸ್ವದೇಶದ ಅಭಿಮಾನಿ. ಸ್ವದೇಶ, ಸ್ವರಾಜ್ಯ ಎಂದು ಉಚ್ಚರಿಸುವುದೇ ಮಹಾಪರಾಧವಾಗುತಿದ್ದ ಕಾಲದಲ್ಲಿ ‘ಸಂಪೂರ್ಣ ಸ್ವಾತಂತ್ರ್ಯವೇ ಭಾರತದ ಧ್ಯೇಯ’ ಎಂದು ಘೋಷಿಸಿದ ಮೊಟ್ಟಮೊದಲ ರಾಜಕೀಯ ಮುಂದಾಳು. ದಾಸ್ಯ ರಕ್ಕಸನ ಎದೆ ಮೆಟ್ಟಲು ಪ್ರಯತ್ನ ಪಟ್ಟುದಕ್ಕಾಗಿ ತಾನು ಗಳಿಸಿದ್ದ ಬಿ.ಎ. ಪದವಿಯನ್ನು ಕಳೆದುಕೊಂಡ ಮೊಟ್ಟಮೊದಲ ಪದವೀಧರ. ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಿದ ಕಾರಣಕ್ಕಾಗಿ ಬ್ರಿಟಿಷರಿಂದ ಬ್ಯಾರಿಸ್ಟರ್ ಪದವಿ ನಿರಾಕರಿಸಲ್ಪಟ್ಟ ಮೊಟ್ಟಮೊದಲ ಬ್ಯಾರಿಸ್ಟರ್. ಹಿಂದುಸ್ತಾನದ ಸ್ವಾತಂತ್ರ್ಯದ ಪ್ರಶ್ನೆಯು ಬೇರೆ ಬೇರೆ ರಾಷ್ಟ್ರಗಳಲ್ಲಿಯೂ ಕೂಡ ಮಹತ್ವ ಪಡೆಯುವಂತೆ ಮಾಡಿದ ಮೊಟ್ಟ ಮೊದಲ ಭಾರತೀಯ ತರುಣ. ಪ್ರಕಟಣೆಗೂ ಮೊದಲೇ ಎರಡು ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟ ಗ್ರಂಥ ರಚಿಸಿದ ಜಗತ್ತಿನ ಏಕೈಕ ಲೇಖಕ. ಬ್ರಿಟಿಷರ ನ್ಯಾಯಲಯವನ್ನು ತಾನು ಪುರಸ್ಕರಿಸುವುದಿಲ್ಲವೆಂದು ಸಾರಿದ ರಾಜಕೀಯ ಆರೋಪಿ. ಜಗತ್ತಿನ ರಾಜಕೀಯ ಇತಿಹಾಸದಲ್ಲೇ, ಹೇಗ್ ಅಂತರರಾಷ್ಟ್ರೀಯ ನ್ಯಾಯಲಯದೆದುರು ತನ್ನ ಮೊಕದ್ದಮೆಯನ್ನು ನಡೆಸುವಂತೆ ಮಾಡಿದ ಮೊಟ್ಟ ಮೊದಲನೆಯ ರಾಜಕೀಯ ಕೈದಿ. ಜಗತ್ತಿನ ರಾಜಕೀಯ ಚರಿತ್ರೆಯಲ್ಲೇ ಐವತ್ತು ವರ್ಷಗಳ ಕಾಲ ಕರಿನೀರಿನ ಶಿಕ್ಷೆಗೆ ಗುರಿಯಾದ ಮೊಟ್ಟ ಮೊದಲು ರಾಜಕೀಯ ಸೆರೆಯಾಳು. ಬರವಣಿಗೆಗೆ ಅಗತ್ಯವಾದ ಸಾಮಗ್ರಿ ಸೌಲಭ್ಯಗಳಾಗಲಿ ಇಲ್ಲದಿದ್ದರೂ, ಖೈದಿಗಳಿಗೆ ಬರೆಯುವುದನ್ನು ನಿಷೇಧಿಸಿದ್ದರೂ ಜೈಲುಖಾನೆಯ ಗೋಡೆಗಳ ಮೇಲೆ ಮೊಳೆಯಿಂದಲೇ ಹತ್ತು ಸಹಸ್ರ ಸಾಲುಗಳಷ್ಟು ಕಾವ್ಯ ರಚಿಸಿ, ಬಾಯಿಪಾಠ ಮಾಡಿ ಹದಿನಾಲ್ಕು ವರ್ಷದ ಸೆರೆವಾಸದ ನಂತರ ಅದನ್ನು ಸುರಕ್ಷಿತವಾಗಿ ದೇಶಕ್ಕೆ ಒಪ್ಪಿಸಿದ ವಿಶ್ವದ ಮೊಟ್ಟಮೊದಲ ಮಹಾಕವಿ! ಇಷ್ಟೆಲ್ಲಾ ಓದದಿದ್ದರೂ ಚಿಂತೆಯಿಲ್ಲ. ಟ್ವೀಟ್ ಮಾಡುವ ಮೊದಲು ಒಂದೇ ಒಂದು ಸಾರಿ ಸಾವರ್ಕರ್ ಬಗ್ಗೆ ಇಂದಿರಾಗಾಂಧಿಯವರ ಅಭಿಪ್ರಾಯವನ್ನಾದರೂ ಅರಿತಿದ್ದರೆ ಚೆನ್ನಾಗಿರುತಿತ್ತು.
ವಸಾಹತುಶಾಹಿ ಕಾಲಘಟ್ಟದಲ್ಲಿ ಭಾರತೀಯರನ್ನು ಭೌದ್ಧಿಕ ಗುಲಾಮರನ್ನಾಗಿ ಸೃಷ್ಠಿಸಲೆಂದೇ ಆರಂಭವಾದ ಶೈಕ್ಷಣಿಕ ಪದ್ಧತಿಯನ್ನು ಸ್ವಾತಂತ್ರ್ಯ ಗಳಿಸಿಕೊಂಡ ನಂತರವೂ ಅದನ್ನೇ ಬುದ್ಧಿಜೀವಿ ಪಡೆ ಮುಂದುವರೆಸಿಕೊಂಡು ಬಂದಿದೆ. ಅತಿ ಬುದ್ಧಿವಂತರೆನಿಸಿಕೊಂಡ ಕೆಲವು ಗಂಜಿ ಗಿರಾಕಿಗಳು ಅದನ್ನೇ ತಮ್ಮ ಬಂಡವಾಳ ಮಾಡಿಕೊಂಡಿದಲ್ಲದೇ ಶುದ್ಧ ಇತಿಹಾಸ ತಿರುಚಿ ಹೊಟ್ಟೆ ತುಂಬಿಸಿಕೊಳ್ಳುತ್ತ ಪ್ರಜ್ಞಾವಂತರ ದಾರಿ ತಪ್ಪಿಸುತ್ತಿದ್ದಾರೆ. ಅತಿ ಕಡಿಮೆ ಬೆಲೆಯಲ್ಲಿ ಪುಸ್ತಕ ಪ್ರಕಟಿಸಿ ಬೇರೆಯವರಿಂದ ದುಡ್ಡು ಹೊಂದಿಸಿ ಉಚಿತ ವಿತರಣೆ ಮಾಡಿ ಬೌದ್ಧಿಕ ದಾಳಿ ಮಾಡುತ್ತಿರುವುದಲ್ಲದೆ, ಅಹಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದಾರೆ. ನಮ್ಮ ವರ್ತಮಾನದ ಯುವಕರು ಇಂದು ಮಾನಸಿಕವಾಗಿ, ವೈಚಾರಿಕವಾಗಿ, ಬೌದ್ಧಿಕವಾಗಿ ಸ್ವಂತಿಕೆಯನ್ನು ಬಿಟ್ಟು ಮಾರಕ ಸಿದ್ಧಾಂತಗಳ ಗುಲಾಮರಾಗುತ್ತಿದ್ದಾರೆ.
ಇದುವರೆಗು ಗಳಿಸಿರುವ ಜನರ ಪ್ರೀತಿ ನಿಮ್ಮನ್ನು ತೊರೆದು ಹೋಗಿದೆ. ನೀವೀಗ ಮಾಜಿ ಸಂಸದೆ. ಜನರ ಪ್ರೀತಿ ಗಳಿಸಿ ಹಾಲಿಯಾಗೊದನ್ನಾ ನೋಡಿ. ನೀವು ನಟನೆಯಿಂದ ರಾಜಕೀಯಕ್ಕೆ ಬಂದವರು. ಅರ್ಥಾರ್ತ ಸುಳ್ಳಿಗೆ ಬಣ್ಣದ ಲೇಪನ ಮಾಡಿ ಪ್ರಚಾರಗೊಂಡವರು. ಅದೇ ಬಣ್ಣವನ್ನು ವಾಸ್ತವ ಇತಿಹಾಸದ ಮೇಲೆ ಚೆಲ್ಲಿ ಸತ್ಯ ಮರೆಮಾಚಬೇಡಿ. ಪ್ರೀತಿಯಿಂದ ಜನರ ಜೋತೆ ಬೆರೆತು ಜನರ ಮನಸ್ಸು ಗೆಲ್ಲಿ. ಇಂತಹ ತಪ್ಪುಗಳನ್ನು ಪದೇ ಪದೇ ಮಾಡಿ ಇಕ್ಕಟ್ಟಿಗೆ ಸಿಲುಕಬೇಡಿ. ತಾಯಿ ಭಾರತಮಾತೆ ನಿಮಗೆ ಒಳ್ಳೆಯದು ಮಾಡಲಿ. ಹಾಗೆಯೇ ನಿಮ್ಮ ರಾಜಕೀಯ ಭವಿಷ್ಯ ಚೆನ್ನಾಗಿರಲೆಂದು ಹಾರೈಸುವ ಒಬ್ಬ ಅಭಿಮಾನಿಯಾಗಿ ನಿಮಗೊಂದು ಈ ಪ್ರೀತಿಯ ಒಲೆಯನ್ನು ಬರದಿದ್ದೇನೆ.
tagondu hodadang ide tamma gud
ಚಿಕ್ಕದಾಗಿ ಚೊಕ್ಕದಾಗಿ ಹೇಳಿರುವ ಬುದ್ಧಿಮಾತು ಅವರ ಕಿವಿಗೆತ್ತಲಿ.