ಮಾನವೀಯತೆಯ ಹೊಸ ಮುಖವಾಡ – #notinmyname
– ಪಲ್ಲವಿ ಭಟ್, ಬೆಂಗಳೂರು
ಕಳೆದೊಂದೆರಡು ದಿನಗಳಿಂದ ಫೇಸ್ಬುಕ್ ವಾಲ್ ಗಳಲ್ಲಿ ಹರಿದಾಡುತ್ತಿರುವ ಒಂದು ಹ್ಯಾಷ್ ಟ್ಯಾಗ್ ಬೇಡ ಬೇಡವೆಂದರೂ ನನ್ನ ಗಮನ ಸೆಳೆಯತೊಡಗಿತು. ಕೇರಳದ ಖ್ಯಾತ ನಟಿಯೊಬ್ಬರು ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದಿದ್ದು ಹೀಗೆ “ಸಾಮೂಹಿಕ ಹಿಂಸಾಚಾರ ಮತ್ತು ನಿಮ್ಮ ದೇಶದಾದ್ಯಂತ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಬಗ್ಗೆ ನೀವು ಚಿಂತಿಸುತ್ತಿದ್ದರೆ, ಮೌನವನ್ನು ಮುರಿಯುವ ಸಮಯ ಇದು. #notinmyname”. ಯಾರ ಮೇಲೆಯೇ ಆಗಲಿ ದೌರ್ಜನ್ಯ ಒಂದು ನಡೆದರೆ ಅದನ್ನು ಖಂಡಿಸುವವರು ನಾವು ಭಾರತೀಯರು. ಅದು ನಮ್ಮ ಧರ್ಮ ಎಂಬುವುದು ನಮ್ಮ ನಂಬಿಕೆ. ಆದರೆ ಇದೇನಿದು “ದೇಶದಾದ್ಯಂತ ಅಲ್ಪಸಂಖ್ಯಾತರ ಮೇಲಿನ ದಾಳಿ” ?? . ಹಿಂಸಾಚಾರವನ್ನು ಖಂಡಿಸುವ ಒಳ್ಳೆ ಮನಸ್ಸಾಗಿದ್ದರೆ “ಅಲ್ಪಸಂಖ್ಯಾತರು” ಎಂಬ ಈ ಪದದ ಅಗತ್ಯವಿಲ್ಲ. ನಾವು ಹಿಂಸಾಚಾರದ ವಿರುದ್ಧ ಎಂದರಷ್ಟೇ ಸಾಕು. ಅಥವಾ ಹಿಂಸಾಚಾರವು ಬರೀ ಅಲ್ಪಸಂಖ್ಯಾತರ ಮೇಲಷ್ಟೇ ನಡೆಯಲು ಸಾಧ್ಯವೇ? ಹಾಗನಿಸುವಂತಿದೆ ಆ ಹೇಳಿಕೆ.
ಕಳೆದ ಎಷ್ಟೋ ವರುಷಗಳಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಇವರಾರು ಚಿಂತಿಸಿಲ್ಲ. 90ರ ದಶಕದಲ್ಲಿ 1.7 ಲಕ್ಷಗಳಷ್ಟು ಪಂಡಿತರು ಕಾಶ್ಮೀರದಲ್ಲಿದ್ದಿದ್ದರೆ ಇಂದವರ ಸಂಖ್ಯೆ ಕೇವಲ 3 ಸಾವಿರಕ್ಕೂ ಕಡಿಮೆ. ತಮ್ಮ ನೆಲೆಯನ್ನು ಕಳೆದುಕೊಂಡ ಅದೆಷ್ಟೋ ಕಾಶ್ಮೀರಿ ಪಂಡಿತರು ಇನ್ನೂ ನಿರಾಶ್ರಿತ ಶಿಬಿರಗಳಲ್ಲಿದ್ದಾರೆ. ಕನಿಕರದ ಒಂದು ಮಾತೂ ದೊರೆತಿಲ್ಲ ಅವರಿಗೆ ಇಲ್ಲಿಯ ತನಕ. ಇದೆಲ್ಲಾ ಉಗ್ರಗಾಮಿಗಳ ಕೆಲಸ ಎಂದು ಹೇಳಲೂ ಸಾಕು ನಮ್ಮೀ ಹೋರಾಟಗಾರರು.
ಬಹುಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಬರೀ ಕಾಶ್ಮೀರಕ್ಕೆ ಅಷ್ಟೇ ಸೀಮಿತವೇನಲ್ಲ. ಬುದ್ದಿವಂತರ ನಾಡೆಂದು ಸ್ವಯಂ ಬೆನ್ನು ತಟ್ಟುವ ಕೇರಳದಲ್ಲಿ ನಡೆಯುತ್ತಿರುವುದು ಏನು? ಇಲ್ಲಿ ದಿನಂಪ್ರತಿ ನಡೆಯುವ ಹಿಂಸಾಚಾರವೆಲ್ಲಾ ಲೆಕ್ಕಕ್ಕೆ ಸೇರಲ್ಲವೇ? ಸುಮಾರು ೨೫೦ಕ್ಕೂ ಹೆಚ್ಚು ಕೊಲೆಗಳನ್ನು ಮರೆಯುವುದು ಅಷ್ಟೊಂದು ಸುಲಭವೇ ? ಪಾಠ ಹೇಳಿ ಕೊಡುತ್ತಿದ್ದ ಅಧ್ಯಾಪಕರೊಬ್ಬರನ್ನು ಪುಟ್ಟ ಮಕ್ಕಳ ಮುಂದೆ ಬರ್ಬರವಾಗಿ ಕೊಲೆಗೈದ ಘಟನೆಯನ್ನು ಈ ಬುದ್ದಿವಂತರೆಲ್ಲಾ ಮರೆತಿರಬಹುದು. ಆದರೆ ಆ ಪುಟಾಣಿ ಮನಸ್ಸುಗಳಲ್ಲಿ ಹುಟ್ಟಿರಬಹುದಾದ ಭೀತಿ, ಭಯೋತ್ಪಾದಕರು ಹುಟ್ಟುಹಾಕಿದ ಭೀತಿಗಿಂತಲೂ ಭೀಕರವೆನ್ನುವುದಂತೂ ನಿಜ. ಅವರು ಅಲ್ಪಸಂಖ್ಯಾತರಲ್ಲ ಎಂಬ ಒಂದೇ ಒಂದು ಕಾರಣಕ್ಕಾಗಿ ಅದು ಹಿಂಸೆಯೆಲ್ಲಾ ಎಂದಾಗುತ್ತದಾ? ಇದ್ಯಾವುದಕ್ಕೂ #notinmyname ಎಂಬ ಹ್ಯಾಷ್ ಟ್ಯಾಗ್ಗಳು ಹುಟ್ಟಿರಲಿಲ್ಲ, ಘೋಷಣೆಗಳೂ ಮೊಳಗಿರಲಿಲ್ಲ. ಕನಿಷ್ಠ ಪಕ್ಷ ದೇಶ ಕಾಯುವ ಸೈನಿಕರ ಮೇಲೆ ನಡೆಯುತ್ತಿರುವ ಕಲ್ಲುತೂರಾಟದ ಬಗ್ಗೆಯೂ ಇವರುಗಳು ಮಾತೆತ್ತಿಲ್ಲ.
ನಿಜವಾದ ಅಹಿಂಸಾವಾದಿಗಳಾಗಿದ್ದಲ್ಲಿ ಇದನೆಲ್ಲವನ್ನೂ ಖಂಡಿಸುವ ಇಚ್ಛೆ ಇವರಿಗೆ ಇರಬೇಕಿತ್ತು. ಆದರೆ ಇವರುಗಳಿಗೆ ಬೇಕಾಗಿರುವುದು ಬರೀ ಪ್ರಚಾರ ಹಾಗು ರಾಜಕೀಯ ಲಾಭ. ಹಿಂದೊಮ್ಮೆ ದಿಡೀರೆಂದು ಅಸಹಿಷ್ಣುತೆಯ ರಾಗವೆತ್ತಿದ್ದರು. ಮತ್ತೆ ದೇಶ ವಿರೋಧಿ ಘೋಷಣೆಗಳು ಅವರ ಹಕ್ಕಾಯಿತು. ಜಾತ್ಯತೀತತೆಯ ಹೆಸರಿನಲ್ಲಿ ಒಂದಷ್ಟು ಮೂಕ ಪ್ರಾಣಿಗಳ ಹತ್ಯೆಯೂ ಆಯಿತು. ವಿರೋಧಿ ದೇಶದ ಕ್ರೀಡಾ ಗೆಲುವನ್ನು ಆಚರಿಸಿ ಸೌಹಾರ್ದತೆಯನ್ನು ಸಾರಿಯೂ ಆಯಿತು. ಇದೀಗ ಹೊಸದಾಗಿ ಮೂಡಿರುವ ಮಾನವೀಯತೆಯೇ ಹೆಸರೇ- “#notinmyname “. ತಮ್ಮ ಚಾಳಿಯಂತೆ ಇದುವೂ ಒಂದು ಏಕಪಕ್ಷೀಯ ನಿಲುವು ಎಂಬುದರಲ್ಲಿ ಸಂಶಯ ಬೇಡ. ಇನ್ನೂ ಹೊಸ ತತ್ವಗಳು ಬರಬಹುದು. ಪೊಳ್ಳು ರಾಜಕೀಯಕ್ಕೆ ತಮ್ಮ ಸುಳ್ಳು ನೈತಿಕತೆಯ ಮುಖವಾಡವನ್ನು ಹೊತ್ತು ಜಂತರ-ಮಂತರಲ್ಲೋ, ಇಂಡಿಯಾ ಗೇಟ್ ಬಳಿಯೋ, ರಾಷ್ಟ್ರಪತಿ ಭವನದ ಮುಂದೆಯೋ ಇವರುಗಳನ್ನು ಕಾಣಬೇಕಾಗುವುದು ನಿಶ್ಚಿತ.