ಉತ್ತರೆಯರನ್ನು ದಕ್ಷಿಣೆಯರೊಟ್ಟಿಗೆ ಸೇರಿಸುವ ಸಾಹಸದ ಘಳಿಗೆಯಲ್ಲಿ…
– ಸುಜಿತ್ ಕುಮಾರ್
ಉತ್ತರದ ಅತಿವೃಷ್ಟಿ ಹಾಗು ದಕ್ಷಿಣದ ಅನಾವೃಷ್ಟಿ, ಎರಡೂ ದೇಶವನ್ನು ಕಾಡುತ್ತಿರುವ ಬಹುಮುಖ್ಯವಾದ ಸಮಸ್ಯೆಗಳು. ಶತಮಾನಗಳಿಂದ ಜನಜೀವನಗಳನ್ನು ಬಹುವಾಗಿ ಕಾಡುತ್ತಾ ಬಂದಿರುವ ಈ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಇತಿಶ್ರೀ ಹಾಡುತ್ತೇನೆಂದು ಆತ್ಮವಿಶ್ವಾಸದಿಂದ ಹೇಳುತ್ತಿದೆ. ಆ ಆತ್ಮವಿಶ್ವಾಸದ ಮಾತಿನ ಹಿಂದಿರುವ ಯೋಜನೆಯೇ ನದಿ ಜೋಡಣೆ. ಉತ್ತರದ ನದಿಗಳನ್ನು ಕಾಲುವೆ, ಆಣೆಕಟ್ಟುಗಳ ಮೂಲಕ ದಕ್ಷಿಣದ ನದಿಗಳ ಹರಿವಿನೊಟ್ಟಿಗೆ ಸೇರಿಸಿ, ಹಿಗ್ಗಿ ಒಡೆದು ಹೋಗುವ ಪ್ರವಾಹವನ್ನು ಕುಗ್ಗಿ ಸೊರಗಿ ಹೋಗುವ ಧಾರೆಯೊಟ್ಟಿಗೆ ಸೇರಿಸುವ ಪ್ರಕ್ರಿಯೆ. ಹಿಂದೆಲ್ಲ ಜನರು ಗಂಗೆಯನ್ನು ಕಾಣಲು ಅವಳ ಬಳಿಗೆ ಹೋದರೆ ಮುಂದೊಂದು ದಿನ ಇಂತಹ ಯೋಜನೆಗಳ ಮೂಲಕ ಆಕೆಯೇ ನಮ್ಮ ಮನೆಬಾಗಿಲಿಗೆ ಬಂದರೂ ಆಶ್ಚರ್ಯಪಡಬೇಕಾಗಿಲ್ಲ! ಸರಿಸುಮಾರು 30 ನದಿಗಳನ್ನು ಸುಮಾರು 5.6 ಲಕ್ಷ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಜೋಡಿಸಲ್ಪಡುವ ಯೋಜನೆ ಇದಾಗಿದೆ. ಪ್ರಸ್ತುತ ಶತಮಾನದ ಶುರುವಿನಲ್ಲೂ ಆಗಿನ ಸರ್ಕಾರ ಇದೇ ಯೋಜನೆಯನ್ನು ಜಾರಿಗೆ ತರಲು ತುದಿಗಾಲಲ್ಲಿ ನಿಂತಿತ್ತಾದರೂ ಅದ್ಯಾಕೋ ಯೋಜನೆಯ ಬಂಡಿ ಶುರುವಾಗಲೇ ಇಲ್ಲ. ವಿದೇಶಗಳಲ್ಲೂ ಇಂತಹ ಅದೆಷ್ಟೋ ನದಿಜೋಡಣೆ ಯೋಜನೆಗಳು ವೈಭವಪೂರಿತವಾಗಿ ಶುರುವಾಗಿ ಕೊನೆಯಲ್ಲಿ ನೆಲಕಚ್ಚಿರುವುದೂ ಉಂಟು. ಇವುಗಳ ಹಿನ್ನಲೆಯಲ್ಲಿ ದೇಶದ ಅತಿ ದೊಡ್ಡ ಯೋಜನೆಗಳಲ್ಲೊಂದೆನಿಸಿಕೊಂಡಿರುವ ನದಿಜೋಡಣೆ ಯೋಜನೆಯ ಪೂರ್ವಪರಗಳ ಚಿಂತನ ಮಂಥನ ಸರಿಯಾಗಿ ಆಗಿದೆಯೇ ಎಂಬುದು ಗಂಭೀರವಾದ ವಿಚಾರ. ಇಲ್ಲವೇ ಇತ್ತೀಚೆಗಷ್ಟೇ ಕಣ್ಣು ಮಿಟುಕಿಸುವುದರೊಳಗೆ ಜಾರಿಗೊಳಿಸಿ, ಅನುಷ್ಠಾನದಲ್ಲಿ ಬಹುವಾಗಿ ಹೊಡೆತ ತಿಂದ ‘ಇತರೆ ಎರಡು’ ಯೋಜನೆಗಳಂತೆಯೇ ಈ ಯೋಜನೆಯೂ ಆಗುವ ಸಂಭವವಿದೆಯೇ ಎಂಬುದನ್ನು ಚರ್ಚಿಸಿ ಹೆಜ್ಜೆಹಿಡಬೇಕಿದೆ.
ಭಾರತ ಕೃಷಿ ಪ್ರಧಾನ ದೇಶ. ಮಾನ್ಸೂನ್ ಮಾರುತಗಳು ಅಥವ ಸರಳವಾಗಿ ಹೇಳುವುದಾದರೆ ನೈಸರ್ಗಿಕ ಮಳೆಯೇ ಬಹುಪಾಲು ಕೃಷಿಯ ಮಹಾಧಾರ. ಅದರೆ ಸ್ವಾತಂತ್ರ್ಯ ಬಂದು 70 ವರ್ಷಗಳ ನಂತರದ ದೇಶವೊಂದು ಇಂದಿಗೂ ತನ್ನ ಕೃಷಿ ಚಟುವಟಿಕೆಗಳಿಗೆ ಮಾನ್ಸೂನ್ ಮಾರುತಗಳನ್ನೇ ಬಹುವಾಗಿ ಅವಲಂಬಿಸಿದೆ ಎಂದರೆ ಅದು ಸೋಜಿಗದ ವಿಚಾರ. ಅದಾಗಲೇ ಇಂತಹ ಮಾರುತಗಳ ಏರಿಳಿತ, ಕಾಣೆಯಾಗುವಿಕೆಗಳಿಂದ ಪ್ರಸ್ತುತ ಕೃಷಿ ವಲಯದಲ್ಲಿ ಬೀರಿರುವ ವ್ಯತಿರಿಕ್ತ ಪರಿಣಾಮಗಳ ಉದಾಹರಣೆಗಳು ನಮ್ಮ ಮುಂದೆಯೇ ಹಲವಿವೆ. ದೇಶದ ಆಹಾರ ಭದ್ರತೆಯ ವಿಚಾರದಲ್ಲಿ ಸದೃಢವಾಗಬೇಕಾದ ಕಾಲದಲ್ಲಿ ಇನ್ನೂ ಸಹ ನೈಸರ್ಗಿಕ ಮಾರುತಗಳ ಸಹಕಾರವನ್ನೇ ನೆಚ್ಚಿಕೊಂಡು ಕೂರುವುದು ಸೋಜಿಗವೆನಿಸದಿರದು. ನದಿ ಜೋಡಣೆ ಇಂತಹ ಅವಲಂಬಿತ ಕೃಷಿ ಪದ್ದತಿಗೆ ವರದಾನವಾಗಬಹುದು. ಅತಿಯಾಗಿ ಸುರಿಯುವ ಮಳೆ ಪ್ರದೇಶದಿಂದ ಕಾಲುವೆ ಹಾಗು ಅಣೆಕಟ್ಟುಗಳ ಮೂಲಕ ನಿಯಂತ್ರಿತವಾದ ನೀರಿನ ಸರಬರಾಜು ಈ ಯೋಜನೆಯ ಮೂಲಕ ಸಾಧ್ಯವಾಗಬಹುದು. ಮಾನವನ ಹುಚ್ಚಾಟದಿಂದಲೇ ಹೆಚ್ಚಾಗಿ ಇಂದು ಕಣ್ಣಾಮುಚ್ಚಾಲೆ ಆಡುವ ಮಳೆಯನ್ನು ಅತಿಯಾಗಿ ನಂಬಿಕೊಂಡು ಕೂರುವುದನ್ನು ಈ ಮೂಲಕ ಕಡಿಮೆಗೊಳಿಸಬಹುದು.
ಇನ್ನು ವಿಶ್ವದ ನಾಲ್ಕನೇ ಅತಿ ದೊಡ್ಡ ‘ಗ್ರೀನ್ ಹೌಸ್’ ಅನಿಲಗಳ ಹೊರ ಸೋಸುವಿಕೆಯ ದೇಶವಾಗಿರುವ ಭಾರತ ‘ಪ್ಯಾರಿಸ್ ಒಪ್ಪಂದ’ದ ಬಳಿಕ ದೇಶದ ಒಟ್ಟು ಶಕ್ತಿಯ ಉತ್ಪಾದನೆಯಲ್ಲಿ 40% ರಷ್ಟನ್ನು ನವೀಕರಿಸಬಹುದಾದ (Renewable) ಹಾಗು ಶುದ್ಧ ಶಕ್ತಿಯ (Clean Energy) ಮೂಲಗಳಿಂದಲೇ ಉತ್ಪಾದಿಸುತ್ತದೆಂದು ಹೇಳಿಕೊಂಡಿದೆ ಹಾಗು ಅದನ್ನು ಮಾಡಿಯೂ ತೋರಿಸಬೇಕಾದ ಅನಿವಾರ್ಯತೆ ಇದೆ! ಇಂತಹ ‘ಕ್ಲೀನ್ ಎನರ್ಜಿ’ ಯೋಜನೆಗಳಲ್ಲಿ ಜಲವಿದ್ಯುತ್ (Hydro Energy) ಯೋಜನೆಯೂ ಸಹ ಒಂದು. ನದಿ ಜೋಡಣೆಯ ಹಾದಿಯ ಸೂಕ್ತ ಸ್ಥಳಗಳಲ್ಲಿ ನಿರ್ಮಾಣವಾಗುವ ಅಣೆಕಟ್ಟುಗಳ ಮೂಲಕ ಜಲವಿದ್ಯುತ್ತನ್ನೂ ಉತ್ಪಾದಿಸುವುದು ಸಾಧ್ಯವಿದೆ. ಸದ್ಯಕ್ಕೆ ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ 15% ರಷ್ಟು ಮಾತ್ರ ಜಲವಿದ್ಯುತ್ ನ ಮೂಲಕ ಸಾಧ್ಯವಾಗುತ್ತಿದೆ. ಆದ ಕಾರಣ ಕೇಂದ್ರ ಸರ್ಕಾರಕ್ಕೆ ತನ್ನ ನದಿಜೋಡಣೆ ಯೋಜನೆಯನ್ನು ಸಮರ್ಥಿಸಿಕೊಳ್ಳಲು ಈ ಒಂದು ಕಾರಣವೂ ಹೆಚ್ಚಾಗಿ ಸಹಕಾರಿಯಾಗಲಿದೆ. ಅಲ್ಲದೆ ಮೊದಲೇ ಹೇಳಿದಂತೆ ಪ್ರವಾಹವೆಂಬ ಅತಿವೃಷ್ಟಿಯಿಂದ ಪಾರಾಗಲು, ಬರಪೀಡಿತ ಸ್ಥಳಗಳಲ್ಲಿ ಹಸಿರು ಕ್ರಾಂತಿಯನ್ನು ಮೂಡಿಸಲು, ಕುಡಿಯುವ ನೀರಿನ ಆಹಾಕಾರಕ್ಕೆ, ಅಲ್ಲದೆ ಸದ್ಯಕ್ಕೆ ತಲೆದೋರಿರುವ ನಿರುದ್ಯೋಗ ಸಮಸ್ಯೆಗೂ ಒಂತಿಷ್ಟು ಪರಿಹಾರವನ್ನು ಕಂಡುಕೊಳ್ಳಲು ನದಿ ಜೋಡಣೆ ಯೋಜನೆ ಪೂರಕವಾಗಲಿದೆ. ಆದರೆ, ಈ ಮೊದಲು ದೇಶದ ಹಾಗು ವಿಶ್ವದ ಹಲವೆಡೆ ಇಂತಹದ್ದೇ ಯೋಜನೆಗಳು ಜಾರಿಗೊಂಡು, ನಿಸರ್ಗನಾಶ, ಪರಿಸರ ವ್ಯವಸ್ಥೆಯ ಅಸ್ತವ್ಯಸ್ತೆ, ರಾಜಕೀಯ ಕಚ್ಚಾಟಗಳು ಎಂಬ ಮತ್ತೊಂದು ಮಗದೊಂದು ಕಾರಣಗಳ ಮೂಲಕ ಬಹುವಾಗಿ ಟೀಕೆಗೆ ಒಳಪಟ್ಟಿರುವ ನಿದರ್ಶನಗಳೂ ಇವೆ.
ಉತ್ತರಪ್ರದೇಶ ಹಾಗು ಮಧ್ಯಪ್ರದೇಶ ರಾಜ್ಯಗಳ ಕೆನ್ ಹಾಗು ಬೆಟ್ವಾ ನದಿಗಳ ಜೋಡಣೆಗೆ ಶುರುವಿಟ್ಟುಕೊಂಡಿರುವ ಕೇಂದ್ರ ಸರ್ಕಾರ ಅದಾಗಲೇ ಸ್ಥಳೀಯರಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಯೋಜನೆಯ ಹಾದಿಯಲ್ಲಿ ಬರುವ ಪನ್ನಾ ರಾಷ್ಟೀಯ ಉದ್ಯಾನದ ಸುಮಾರು 55.75 ಚದರ ಕಿಲೋಮೀಟರ್ನಷ್ಟು ಹುಲಿ ಮೀಸಲು (Tiger Reserve) ಜಾಗ ಸಂಪೂರ್ಣ ಜಲಾವೃತಗೊಳ್ಳಲಿದೆ. ಅದಾಗಲೇ ಹತ್ತು ಹಲವು ಕಾರಣಗಳಿದ ಕ್ಷೀಣಿಸುತ್ತಿರುವ ರಾಷ್ಟ್ರೀಯ ಉದ್ಯಾನಗಳು ಹಾಗು ಹುಲಿ ಮೀಸಲು ಅರಣ್ಯಗಳು ಇಂತಹ ನಿಖರ ಫಲಿತಾಂಶವಿಲ್ಲದ ಯೋಜನೆಗಳಿಗೆ ಬಲಿಪಶುವಾಗುವುದು ಶೋಚನೀಯ ಸಂಗತಿ. ಹೀಗೆಯೇ ನದಿ ಜೋಡಣೆಯಲ್ಲಿ ಬರುವ ಅದೆಷ್ಟೋ ದಟ್ಟಾರಣ್ಯಗಳು, ಹಳ್ಳಿಗಳು, ಮೀಸಲು ಅರಣ್ಯಗಳ ಉಳಿವಿಕೆ ಅದೆಷ್ಟರ ಮಟ್ಟಿಗೆ ಸಾಧ್ಯವಾಗಲಿದೆ ಎಂದು ಕಾದು ನೋಡಬೇಕು. ಜಾಗತಿಕವಾಗಿ ನೋಡುವುದಾದರೆ ಕಝಕಿಸ್ತಾನ ಹಾಗು ಉಜ್ಬೇಕಿಸ್ತಾನ್ ಗಳಲ್ಲೂ ಅಮು ದರ್ಯಾ ಹಾಗು ಡೈರ್ ದರ್ಯಾ ಎಂಬ ನದಿಗಳ ಹರಿವನ್ನು ಬದಲಿಸಿ ಪರಿಸರ ವ್ಯವಸ್ಥೆಯಲ್ಲಿ ಭಾರಿ ಅಲ್ಲೊಲ್ಲ ಕಲ್ಲೋಲವಾದ ಹಲವು ಯೋಜನೆಗಳನ್ನೂ ಇಲ್ಲಿ ಉಲ್ಲೇಖಿಸಬಹುದು.
ದೇಶದಲ್ಲಿ ನದಿ ಜೋಡಣೆ ಯೋಜನೆಯ ರೂಪುರೇಶೆ ಇಂದು ನೆನ್ನೆಯದಲ್ಲ. ಎಂಬತ್ತರ ದಶಕದಲ್ಲೇ ಅಂದಿನ ಸರ್ಕಾರಗಳು ಇದಕ್ಕೆ ಒಲವನ್ನು ತೋರಿಸಿದವಾದರೂ ಕಾರಣಾಂತರಗಳಿಂದ ದೇಶದ ಎಲ್ಲೆಡೆ ಇದು ಜಾರಿಯಾಗಲಿಲ್ಲ. ಅಲ್ಲದೆ ಅಂದೆಲ್ಲ ದೇಶದ ಉತ್ತರದಲ್ಲಿ ಬೀಳುತ್ತಿದ್ದ ಧಾರಾಕಾರ ಮಳೆಯ ಪ್ರಮಾಣವನ್ನು ಇಂದಿನ ಸಮಯಕ್ಕೆ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸವಿರುವುದು ತಿಳಿದಿರುವ ವಿಷಯವೇ. ಅಂತಹದರಲ್ಲಿ ಬಹುಪಾಲು ಅಂದಿನ ಯೋಜನೆಯ ನೀಲನಕ್ಷೆಯನ್ನೇ ಹಿಡಿದುಕೊಂಡು, ಲಕ್ಷಾಂತರ ಕೋಟಿ ರೂಪಾಯಿಗಳನ್ನು ಕಣ್ಣಾಮುಚ್ಚಾಲೆಯಾಡುವ ವರುಣನನ್ನು ನೆಚ್ಚಿ ಸುರಿಯುವುದು ವಿಮರ್ಶಿಸಬೇಕಾದ ವಿಚಾರ. ಸದ್ಯದ ಅಂಕಿಅಂಶಗಳ ಪ್ರಕಾರ ಈ ಯೋಜನೆಗೆ ತಗುಲುವ ಒಟ್ಟು ಮೊತ್ತ ಸುಮಾರು 5 ರಿಂದ 6 ಲಕ್ಷ ಕೋಟಿ ರೂಪಾಯಿಗಳು. ಇದು ನಮ್ಮ ದೇಶದ ಜಿಡಿಪಿಯ ಅಂದಾಜು 4% ನಷ್ಟು ಮೊತ್ತ! ಇನ್ನು ಸರ್ಕಾರದ ಯಾವ ಯೋಜನೆ ತಾನೇ ಹೇಳಿದ ಸಮಯಕ್ಕಿಂತ ಹಾಗು ಅಂದಾಜಿಸಿದ ಹಣಕ್ಕಿಂತ ಮೊದಲೇ ಆಗಿವೆ?! ಹಾಗಾಗಿ ಈಗ ಹೇಳುತ್ತಿರುವ ಮೊತ್ತ ದಲ್ಲಾಳಿ ಹಾಗು ಭ್ರಷ್ಟ ಅಧಿಕಾರಿಗಳ ‘ಸೇವೆ’ಯಲ್ಲಿ ಇನ್ನೂ ಹೆಚ್ಚಾಗುವುದರಲ್ಲಿ ದೂಸರಾ ಮಾತೇ ಇಲ್ಲ. ಅಲ್ಲದೇ ನಮ್ಮಲ್ಲಿ ನದಿಜೋಡಣೆ ಎಂಬುದು ರಾಜ್ಯ ರಾಜ್ಯಗಳ ನಡುವಿನ ಸಹಕಾರದ ವಿಷಯ. ಕೇಂದ್ರ ಸರ್ಕಾರ ಅದೆಷ್ಟೇ ಪಾರದರ್ಶಕವಾಗಿ ಯೋಜನೆಯನ್ನು ಶುರುವಿಟ್ಟುಕೊಂಡರೂ ರಾಜಕೀಯದ ಚದುರಂಗದ ಆಟ ಇಲ್ಲಿ ನಡೆದೇ ನಡೆಯುತ್ತದೆ. ಕೆಲ ರಾಜ್ಯಗಳು ಇದರಿಂದ ಅದೆಷ್ಟೇ ಒಳಿತಿದ್ದರೂ ಬೇಕಂತಲೇ ಕ್ಯಾತೆ ತೆಗೆದು ಸುಪ್ರೀಂಕೋರ್ಟಿನ ಮೊರೆಯನ್ನು ಹೋಗುವ ಸಂಭವವನ್ನೂ ಸಹ ತಪ್ಪಿಸಲಾಗುವುದಿಲ್ಲ. ಇವೆಲ್ಲ ತಕರಾರುಗಳು ಇತ್ಯರ್ಥವಾಗಿ ಶುರುವಾದ ಯೋಜನೆ ಕೊನೆಗಾಣುವುದರ ಒಳಗೆ ಅದೆಷ್ಟು ತಲೆಮಾರುಗಳು ಉರುಳುವವೋ ಅಥವಾ ಅದೆಷ್ಟರ ಮಟ್ಟಿನ ಹೊರೆಯನ್ನು ಜನಸಾಮಾನ್ಯ ಹೊರಬೇಕಾಗುವುದೋ ಕಾದು ನೋಡಬೇಕು.
ಹಾಗಾದರೆ ದೇಶದ ನೀರಿನ ಸಮಸ್ಯೆಗಳಿಗೆ ಬಹುಕೋಟಿ ರೂಪಾಯಿಗಳ ನದಿಜೋಡಣೆಯೊಂದೇ ಸೂಕ್ತ ಪರಿಹಾರವೇ? ಮಳೆ ನೀರಿನ ಸಂಗ್ರಹ, ಅಂತರ್ಜಲ ವೃದ್ಧಿ, ಡಿಸಾಲೆನೇಷನ್, ಅರಣ್ಯೀಕರಣ, ಹನಿ ನೀರಾವರಿ ಪದ್ದತಿ, ಹೀಗೆ ಇನ್ನೂ ಹಲವು ಸರಳ ಖರ್ಚಿನ ನಿಖರ ಫಲಿತಾಂಶದ ಯೋಜನೆಗಳೂ ಏತಕ್ಕೆ ಉತ್ತರಗಳಾಗಬಾರದು? ಪ್ರಸ್ತುತ ಕುಂಠಿತ ಜಿಡಿಪಿಯ ದರದಲ್ಲಿ, ಮಾತೆತ್ತಿದರೆ ಕೇಳಿದವನು ಸುಸ್ತಾಗಿ ಕುಸಿದು ಬೀಳುವಂತಹ ಬಂಡವಾಳದ, ಒಂದಲ್ಲ ಒಂದು ಬಗೆಯಲ್ಲಿ ಜನರ(ಸರ್ಕಾರದ) ಬೊಕ್ಕಸದ ಮೇಲೆ ತೀವ್ರವಾಗಿ ಹೊರೆಯಾಗುವ ಯೋಜನೆಗಳೇ ಏತಕ್ಕೆ ಸರ್ಕಾರದ ಪ್ರಣಾಳಿಕೆಗಳಲ್ಲಿ ಮೂಡುತ್ತಿವೆಯೋ ತಿಳಿಯದು. ಎಷ್ಟಾದರೂ ನಾವುಗಳು ದಿನನಿತ್ಯದ ಅತಿಸಾಮಾನ್ಯ ವಿಷಯಗಳಲ್ಲೇ ಮುಳುಗಿ ಮರೆಯಾಗಿರುವ ಜನಸಾಮಾನ್ಯರು. ಮೇಲಿನವರು ಅದೇನೂ ಮಾಡಿದರೂ ತಿಳಿದು, ಅರಿತು, ಯೋಚಿಸಿ, ವಿಮರ್ಶಿಸಿ ಮಾಡುವವರು! ನಾವೇನಿದ್ದರೂ ಕೇಳುಗರು. ಹೇಳುಗರ ಮಾತಿಗೆ ಕಿವಿಯೊಡ್ಡುವರು, ತಲೆಬಾಗಿ ‘ಜೈ’ ಎನ್ನುವವರು!
ನದಿ ಜೋಡಣೆ ಮನುಷ್ಯನ ಅಹಂಕಾರವನ್ನು ಎತ್ತಿ ತೋರಿಸುತ್ತದಷ್ಟೇ . ನಿಸರ್ಗಕ್ಕೆ ಸಹಜವಾಗಿ , ಜಾಣ್ಮೆಯಿಂದ ಹೊಂದಿಕೊಂಡು ಹೋಗುವದೇ ಒಳ್ಳೆಯ ದಾರಿ . ನದಿ ಜೋಡಣೆಎಂಬುದು ಆತ್ಮ ಘಾತುಕ ಕೆಲಸ …….ನೀರಿಗಾಗಿ ಅನೇಕ ದಾರಿಗಳಿರುವಾಗ ಭ್ರಷ್ಟ ಕೂಪಕ್ಕೆ ತಳ್ಳುವ ನದಿ ಜೋಡಣೆ ಬೇಕೇ?
ಇದು ಅನೇಕ ಸಂಕಷ್ಟಗಳಿಗೆ ಎಡೆಮಾಡುತ್ತದೆ. ದಯಾ ಮಾಡಿ ಯಾರು ಇದಕ್ಕೆ ಒಪ್ಪಬಾರದು