ರಾಷ್ಟ್ರಕ್ಕೆ ರಕ್ಷಣೆ ಹೆಣ್ಣು ನೀಡಬಲ್ಲಳಾದರೆ ತನ್ನನ್ನು ತಾನೂ ರಕ್ಷಿಸಿಕೊಳ್ಳಬಲ್ಲಳು..
– ತನ್ಮಯೀ ಪ್ರೇಮ್ ಕುಮಾರ್
ಪ್ರತಿ ವರ್ಷದ ಹಾಗೆ ಈ ವರ್ಷವೂ ಮತ್ತೊಂದು ಮಹಿಳಾ ದಿನಾಚರಣೆಯ ಹೊಸ್ತಿಲಲ್ಲಿ ನಿಂತಿದ್ದೇವೆ.ಮಹಿಳೆಯ ಹರಹಿನ ವಿಸ್ತಾರ ಅಗಾಧವಾಗಿ ಬೆಳೆದು ನಿಂತಿದೆ. ಸಮಾಜದ ಮುಖ್ಯ ವಾಹಿನಿಯಲ್ಲಿಯೂ ಮಹಿಳೆಯ ನಾಗಾಲೋಟ ಭರದಿಂದಲೇ ಸಾಗುತ್ತಿದೆ.ಆದರೆ ಎತ್ತ?? ಆಕೆಗೆ ಸುರಕ್ಷಿತವಾಗಿ ನಿರ್ಭಿಡೆಯಿಂದ ಕೆಲಸ ಮಾಡಲು,ಓಡಾಡಲು, ಸ್ವತಂತ್ರವಾಗಿರಲು ಅನುವು ಮಾಡಿಕೊಟ್ಟಿದ್ದೇವಾ?? ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಆಕೆಗೆ ರಕ್ಷಣೆ ಒದಗಿಸಿದ್ದೇವಾ?? ನಮ್ಮೊಳನಗಿನ ನಮ್ಮ ನಾಡಿನ ಆಂತರ್ಯವನ್ನು ಪ್ರಶ್ನಿಸಿಕೊಂಡಾಗಲಂತೂ ಅತ್ಯಂತ ಹೇಸಿಗೆಯಿಂದ ತಲೆ ಬಗ್ಗಿಸಬೇಕಾದ ಪರಿಸ್ಥಿತಿ ನಿರ್ಮಿಸಿಕೊಂಡಿದ್ದೇವೆ. ಮಹಿಳಾವಾದ ,ಸಮಾನತೆ,ಹಕ್ಕುಗಳು ಹೀಗೆ ರೋಮ್ಯಾಂಟಿಕ್ ಶಬ್ದಗಳ ಆಚೆಗೆ ಹೆಣ್ಣಿಗೆ ಸಿಗಬೇಕಿದ್ದ ಕನಿಷ್ಟ ಸುರಕ್ಷತೆಯ ಭರವಸೆ ತಂದಿದ್ದೇವಾ?
ನಮ್ಮ ನಡುವಯೇ ಪ್ರಾಮಾಣಿಕವಾಗಿ ಕೆಲಸ ಮಾಡುವ ದಕ್ಷ ಅಧಿಕಾರಿಣಿಯರಿಗೆ ರಕ್ಷಣೆ ಎಲ್ಲಿದೆ? ಒಂದೆಡೆ ತಮಿಳುನಾಡಿನ ಭೃಷ್ಟ ಚಿನ್ನಮ್ಮ ಜೈಲಿನಲ್ಲಿ ವೈಭೋಗದ ಜೀವನ ನಡೆಸುತ್ತಾರೆ.ಮತ್ತು ಆ ಜೈಲಿನ ಅಕ್ರಮವನ್ನು ಬಯಲಿಗೆಳೆದ,ಭೃಷ್ಟ ಸಸಿಕಲಾರ ಐಶಾರಾಮಿ ಜೀವನವನ್ನು ತೆರೆದಿಟ್ಟ ಡಿ.ಐ.ಜಿ ರೂಪಾರಂತವರಿಗೆ ಕರುಕುಳ ನೀಡಲಾಗುತ್ತದೆ. ರೂಪಾರಂತಹ ದಿಟ್ಟ ಅಧಿಕಾರಿಗಳನ್ನ ಸರಕಾರ ನಡೆಸಿಕೊಂಡ ರೀತಿ ನಿಜಕ್ಕೂ ಅತ್ಯಂತ ವಿಷಾದನೀಯ.
ಪ್ರಾಮಾಣಿಕ ಅಧಿಕಾರಿ ಶಿಖಾ 20ದಿನಗಳಲ್ಲಿ ಎರೆಡೆರೆಡು ಕಡೆ ವರ್ಗಾವಣೆಗೊಳ್ಳುತ್ತಾರೆ ಮಹಾಮಸ್ತಕಾಭಿಷೇಕದ ಹೊಸ್ತಿಲಲ್ಲಿ ಹಾಸನದ ಜಿಲ್ಲಾಧಿಕಾರಿಣಿಯಾಗಿದ್ದ ರೋಹಿಣಿ ಸಿಂಧೂರಿಯವರನ್ನ ಇದ್ದಕ್ಕಿದ್ದಂತೆ ವರ್ಗಾವಣೆ ಮಾಡಿಬಿಡುತ್ತಾರೆ..ಆಡಳಿತ ತರಬೇತಿ ಕೇಂದ್ರದಲ್ಲೇ ದುಷ್ಕರ್ಮಿಗಳು ಐಎಎಸ್ ಅಧಿಕಾರಿಣಿ ರಶ್ಮಿಯವರ ಮೇಳೆ ದಾಳಿ ಮಾಡುತ್ತಾರೆ.ಆದರೆ ಯಾವುದೋ ಸಿಲ್ಲಿ ಕಾರಣ ನೀಡಿ ಸರಕಾರ ಅವರ ಮೇಲೆಯೇ ಶೋಕಾಸ್ ನೋಟಿಸ್ ಜಾರಿ ಮಾಡುತ್ತದೆ.ಸ್ಥಳೀಯ ಗಣಿಗಾರಿಗಳ ಅಕ್ರಮವನ್ನು ಎದುರಿಸಿ ನಿಂತ ಅನುಪಮಾ ಶೆಣೈರಿಗೆ ರಾಜಿನಾಮೆ ನೀಡುವಷ್ಟು ಕಿರುಕುಳವನ್ನು ನೀಡಲಾಯಿತು.ನಾಗರಿಕ ಸಮಾಜ ಇಂತಹ ನಡೆಗಳನ್ನು ಒಪ್ಪಿಕೊಳ್ಳಬಹುದಾದರೂ ಹೇಗೆ ??
ಸಮಾಜದ ಆಯಕಟ್ಟಿನ ಜಾಗದಲ್ಲಿ,ಜವಾಬ್ದಾರಿಯುತ ಸ್ಥಾನದಲ್ಲಿ ಕೂತು ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿರುವ ಮಹಿಳೆಯರಿಗೇ ರಕ್ಷಣೆ ಮರೀಚಿಕೆಯಾಗಿದರೆ ಇನ್ನು ಸಾಮಾನ್ಯ ಹೆಣ್ಣುಮಕ್ಕಳ ಪರಿಸ್ಥಿತಿ ಇನ್ನೂ ದುರ್ಭರ. “ಗಾಂಧೀಜಿ ಕನಸು-ಕರ್ನಾಟಕದಲಿ ನನಸು” ಅಂತ ಜಾಹಿರಾತು ಬರುವಾಗಲೆಲ್ಲ ಹಾಗಾದರೆ ಇವತ್ತು ಹೆಣ್ಣುಮಗಳಾದ ನಾನು ರಾತ್ರಿ ಹನ್ನೆgಡು ಗಂಟೆಗೂ ನಿರ್ಭೀತಿಯಿಂದ ಓಡಾಡಬಹುದಾ? ಸಾಧ್ಯವೇ ಇಲ್ಲ!! ಇವತ್ತು ಸುಸಂಸ್ಕøತವಾದ ಸಮಾಜ ತಲೆತಗ್ಗಿಸುವ ಪರಿಸ್ಥಿತಿಯಲ್ಲಿದೆ ಕರ್ನಾಟಕ.
ಸಮಾಜದ ಅರ್ಧಭಾಗವಾದ ಹೆಣ್ಣುಮಕ್ಕಳ ರಕ್ಷಣೆಯಲ್ಲಿ ವಿಫಲವಾಗಿ ಕುಸಿದು ಹೋಗಿರುವ ಆಡಳಿತ ಯಂತ್ರ.ಅಸಹಾಯಕ ತಾಯಂದಿರ ಕಣ್ಣೀರಿಗೆ ಮಿಡಿಯದ ಚುನಾಯಿತ ಪ್ರತಿನಿಧಿಗಳು, ಸಮಾಜವೆಂದ ಮೇಲೆ ಇವೆಲ್ಲವೂ ನಡೆದೇನಡೆಯುತ್ತದೆ ಎಂಬ ಜವಾಬ್ದಾರಿತನವಿರುವ ಸಚಿವರ ಉಡಾಫೆಯ ಹೇಳಿಕೆ, ನೊಂದ ಮಹಿಳೆಯರ ಆಕ್ರಂದನಕ್ಕೆ ದಪ್ಪ ಚÀರ್ಮವಾಗಿರುವ ಸರಕಾರಿ ಇಲಾಖೆ,ಮತ್ತು ಅದರೊಳಗೇ ನಡೆಯುತ್ತಿರುವ ದೌರ್ಜನ್ಯಗಳು ಸಮಾಜಕ್ಕೆ ಹಿಡಿಯುತ್ತಿರುವ ಕೈಗನ್ನಡಿಯಷ್ಟೆ.
ದಕ್ಷ ಅಧಿಕಾರಿ ಡಿಕೆ ರವಿಯವರ ತಾಯಿ ವಿಧಾನಸೌಧದ ಎದುರು ತನ್ನ ಮಗನ ಸಾವಿಗೆ ನ್ಯಾಯ ಕೇಳಲು ಬಂದಾಗ ಸಿಬಿಐಗೆ ಒಪ್ಪಿಸದ ನಾಡಿನ ದೊರೆಗಳು ಸಾರ್ವಜನಿಕ ಆಕ್ರೋಶದ ನಂತರ ಸಿಬಿಐಗೆ ತನಿಖೆಗೆ ಒಪ್ಪಿಗೆ ನೀಡುತ್ತಾರೆ.ಆ ತಾಯಿಯ ಮನವಿಗೆ ಸ್ಪಂದಿಸಲಾರದಷ್ಟು ಜಿಡ್ಡುಗಟ್ಟಿ ಹೋದ ಆಡಳಿತ ವ್ಯವಸ್ಥೆಯಲ್ಲಿದ್ದೇವೆ.ಡಿವೈಎಸ್ಪಿ ಗಣಪತಿಯವರ ಪತ್ನಿ ಪಾವನ ಕಣ್ಣೀರು ಹಾಕುತ್ತಾ ನನ್ನ ಪತಿಯ ಸಾವಿಗೆ ನ್ಯಾಯ ಬೇಕು,ತನಿಖೆಯನ್ನ ಸಿಬಿಐಗೆ ಒಪ್ಪಿಸಬೇಕು ಎಂದು ರೋಧಿಸಿದಾಗಲೂ ಮಂತ್ರಿಮಂಡಲದಲ್ಲಿದ್ದ ತಪ್ಪಿತಸ್ತರನ್ನು ಕಾಯುವ ಕೆಲಸಕ್ಕೆ ಸರಕಾರ ನಿಂತುಬಿಟ್ಟಿತು. ತಂದೆಯನ್ನು ಕಳೆದುಕೊಂಡ ರುದ್ರೇಶರ ಮಗಳ ಗತಿಯೇನು?ಕೋಮುಗಲಭೆಯಲ್ಲಿ ಸತ್ತ ದೀಪಕ್ ರಾವ್ನ ವೃದ್ಧ ತಾಯಿಗ್ಯಾರು ಗತಿ? ಬಷೀರ್ರ ಪತ್ನಿಯ ಹೊಣೆ ಯಾರದು?? ಅವರೆಲ್ಲರ ಕಣ್ಣೀರು ಈ ನಾಡನ್ನು ತಟ್ಟದೇ ಉಳಿದೀತೆ? ಮುಗ್ಧ ಅಸಹಾಯಕ ತಾಯಂದಿರ ನಿಟ್ಟುಸಿರು ಆಕ್ರಂದನ ಮನಸಿನ ಪಟಲದಲ್ಲಿ ಹಾಗೇ ಉಳಿದುಬಿಟ್ಟಿದೆ.ಅವರ ಕೂಗಿಗೆ ದನಿ ಎಲ್ಲಿದೆ?
ಮಹಿಳಾ ಆಯೋಗದ ವರದಿಗಳು ಬೆಚ್ಚಿ ಬೀಳಿಸುತ್ತವೆ.ಪ್ರತಿ ತಿಂಗಳೂ 230 ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿದೆ.ಮತ್ತು 2017ಒಂದರಲ್ಲೆ ಸುಮಾರು 3100 ಪ್ರಕರಣಗಳು ದಾಖಲಾಗಿದೆ.ಮತ್ತು ಅದರಲ್ಲಿ ಅಂತ್ಯ ಕಂಡವು ಕೇವಲ 500 ಪ್ರಕರಣಗಳಷ್ಟೆ. ತುಮಕೂರಿನಲ್ಲಿ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ “ಯುವತಿಯರನ್ನ ಅಪಹರಣ ಮಾಡಿ ವಾರಗಟ್ಟಲೆ ಅತ್ಯಾಚಾರ ನಡೆಸಿ ವಾಪಾಸ್ ತಂದುಬಿಡುವ ಗೂಂಡಾಗಳಿದ್ದಾರೆ. ಪಾವಗಡ ತಾಲೂಕಿನ ನಿಡಗಲ್ಲು ಸುತ್ತಮುತ್ತ ಗ್ರಾಮದಲ್ಲಿ ಇಂತಹ ಐದಾರು ಪ್ರಕರಣಗಳು ಬೆಳಕಿಗೆ ಬಂದಿವೆ.ಮತ್ತು ಪೋಲೀಸರಿಗೆ ದೂರು ನೀಡದಂತೆ ಬೆದರಿಕೆ ಒಡ್ಡಲಾಗಿದೆ” ಎಂದಿದ್ದಾರೆ.ಅಲ್ಲದೆ ಸ್ವತಃಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಬಾಯಿಯವರಿಗೇ ಬೆದರಿಕೆ ಒಡ್ಡಲಾಗಿದೆ. ಅಸಹಾಯಕ ಮಹಿಳೆಯರ ರಕ್ಷಣೆ ಮಾಡಬೇಕಿದ್ದ ಮಹಿಳಾ ಆಯೋಗದ ಅಧ್ಯಕ್ಷರಿಗೇ ಬೆದರಿಕೆ ಬಂದಿರುವುದು ರಾಜ್ಯದಲ್ಲಿನ ಹೆಣ್ಣುಮಕ್ಕಳ ಸುರಕ್ಷೆಯ ಅಧೋಗತಿಯ ಅರಿವಾಗಬಹುದು.ಇನ್ನು ಸದನದಲ್ಲಿನ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಗೃಹ ಸಚಿವ ರಾಮಲಿಂಗಾರೆಡ್ಡಿಯವರುÀ ಕಳೆದ ನಾಲ್ಕೂವರೆ ವರ್ಷದಲ್ಲಿ 801 ದಲಿತ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಮತ್ತು 9080 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂಬ ಅಂಕಿ ಅಂಶ ನೀಡುತ್ತಾರೆ.
ಮಹಿಳೆಯರನ್ನು ಪ್ರಜಾಪ್ರಭುತ್ವದ ಮೂಲಕ ಪ್ರತಿನಿಧಿಸುವ ಮಹಿಳಾ ಜನಪ್ರತಿನಿಧಿಗಳೇನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಬಂದರೆ ವಿಷಾದಿಸಬೇಕೋ,ಸಿಟ್ಟಿಗೇಳಬೇಕೋ ಗೊಂದಲದಲ್ಲಿ ಬೀಳುತ್ತೇವೆ.ಅವರು ಪ್ರತಿನಿಧಿಸುವ ಸಮಾಜದ ಭಾಗದ ಸುರಕ್ಷತೆಯಿರಲಿ,ಮೊದಲು ನಮ್ಮನ್ನಾಳುವ ಮಹಿಳಾ ಜನಪ್ರತಿನಿಧಿಗಳೇ ಸುರಕ್ಷಿತರಿದ್ದಾರೇನು? ಕೆಲವು ದಿನಗಳ ಹಿಂದೆ ಬಿಬಿಎಂಪಿಯ ಚುನಾಯಿತ ಪ್ರತಿನಿಧಿಗಳಾದ ಜೆಡಿಎಸ್ನ ಮಂಜುಳಾ ನಾರಾಯಣ ಸ್ವಾಮಿಯವರ ಮೇಲೆ ಸಿಎಂ ಭಾಗವಹಿಸಿದ್ದ ಕಾರ್ಯಕ್ರಮದಲ್ಲೇ ದೌರ್ಜನ್ಯ ನಡೆದಿದೆ.ಶಾಸಕ ಮುನಿರತ್ನರ ಬೆಂಬಲಿಗರು ಆಕೆಯ ಸೀರೆ ಸೆರೆಗಿಗೆ ಕೈಹಾಕಿ ಜಗ್ಗಾಡಿದ್ದಾರೆ.ಬಿಜೆಪಿಯ ಮಮತಾ ವಾಸುದೇವ್ ಹಾಗೂ ಹೆಎಚ್ಎಂಟಿ ವಾರ್ಡಿನ ಪಾಲಿಕೆ ಸದಸ್ಯೆ ಆಶಾ ಸುರೇಶ್ ಕೂಡ ಶಾಸಕ ಮುನಿರತ್ನರ ಬೆಂಬಲಿಗರಿಂದ ಹಲ್ಲೆಯಾಗಿದೆ ಎಂಬ ದೂರು ನೀಡಿದ್ದಾರೆ.ಈ ಸಂಬಂಧ ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಹೋದರೆ ಭೇಟಿಯಾಗಲು ಸಮಯವಿಲ್ಲವೆಂಬ ಉತ್ತರ!! ಇನ್ಯಾರಿಂದ ಅಪೇಕ್ಷಿಸೋಣ ?? ಮಹಿಳಾ ಪೋಲಿಸರಿಂದ ? ಮಹಿಳಾ ಪೋಲಿಸರ ಲಾಠಿಯನ್ನು ಕಿತ್ತುಕೊಂಡು ಪುಂಡಾಟ ಮಾಡಿದ ಘಟನೆಯೂ ಬೆಂಗಳೂರಿನಲ್ಲಿ ವರದಿಯಾಗಿದೆ.ಮೈಸೂರಿನಲ್ಲಿ ಮಹಿಳಾ ಪೋಲಿಸ್ಗೇ ಮದುವೆಯಾಗುವುದಾಗಿ ವಂಚಿಸಿದ ಪ್ರಕರಣ ದಾಖಲಾಗಿದೆ.
ಅತ್ಯಂತ ಸುರಕ್ಷಿತ ತಾಣವಾಗಿದ್ದ ಬೆಂಗಳೂರು ಇಂದು ಇಡೀ ದೇಶದಲ್ಲಿ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಮೂರನೆಯ ಅಸುರಕ್ಷಿತ ನಗರವಾಗಿ ಹೊರಹೊಮ್ಮಿದೆ,ಸರಗಳ್ಳತನದ ಪ್ರಮಾಣ32% ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಒಟ್ಟು 1929 ದೌರ್ಜನ್ಯ ಪ್ರಕರಣಗಳು ದಾಖಲಾಗಿದೆ.ಅದರಲ್ಲಿ 75 ಆರೋಪಿಗಳನ್ನು ಮಾತ್ರ ಬಂಧಿಸಲಾಗಿದೆ.ಉಳಿದ 1850 ಅಪರಾಧಿಗಳು ಬೆಂಗಳೂರಿನ ಬೀದಿಗಳಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಮತ್ತೊಮ್ಮೆ ಸುರಕ್ಷಿತ ಬೆಂಗಳೂರು ಬೇಕಿದೆ. ಹಿರಿಯ ವೈದ್ಯರಾದ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಮಾತನಾಡುತ್ತ ಈ ಹಿಂದೆ ಓದುವಾಗ ಬೆಳಗಿನ ಐದು ಗಂಟೆಗೂ ಒಬ್ಬಳೇ ಓಡಾಡಲು ಭಯವಿರಲಿಲ್ಲ ಆದರೀಗ ಹಾಡು ಹಗಲೇ ಭಯದಿಂದ ಓಡಾಡುವ ಹಾಗಾಗಿದೆ ಎನ್ನುತ್ತಾರೆ.
ಈ ಹಿಂದೆ ರಾಜ್ಯದಲ್ಲಿ ನಡೆದಿದ್ದÀ ಬಾಲಕಿ ನಂದಿತಾ ಅತ್ಯಾಚಾರ ಪ್ರಕರಣದಿಂದ ಹಿಡಿದು ಮೊನ್ನೆಯ ದಾನಮ್ಮನ ಪ್ರಕರಣ,ಬೀದರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದವರೆಗೂ ಯಾವ ಅಪರಾಧಿಗೂ ಶಿಕ್ಷೆಯಾಗಿಲ್ಲದಿರುವುದು ಖೇದಕರವಾ ಸಂಗತಿ.ಮತ್ತು ಎಲ್ಲರೂ ಇವತ್ತಿಗೂ ಸಮಾಜದಲ್ಲಿ ಎದೆಯುಬ್ಬಿಸಿ ಓಡಾಡುತ್ತಿದ್ದಾರೆ ಎನ್ನುವುದು ಇನ್ನೂ ಕಳವಳಕಾರಿ ವಿಚಾರ.
ಶಾಸಕ ಹ್ಯಾರಿಸ್ನ ಪುತ್ರ ಮೊಹಮ್ಮದ್ ನಲಪಾಡ್ ಮತ್ತವನ ಬೆಂಬಲಿಗರು ನಡೆಸಿದ ದೌರ್ಜನ್ಯದ ವಿರುದ್ಧ ಪೋಲಿಸ್ ಠಾಣೆಯಲ್ಲಿ ದೂರು ತೆಗೆದುಕೊಳ್ಳಲು ನಿರಾಕರಿಸಿದ ಘಟನೆಯನ್ನು ಸ್ವತಃ ಮಹಿಳೆ ವಿಡಿಯೋ ಚಿತ್ರೀಕರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.ಇನು ನಮ್ಮ ಜಾಲತಾಣದ ಗೋಡೆಗಳಲ್ಲಿ ಮಿ ಟೂ ಹ್ಯಾಶ್ ಟ್ಯಾಗಿನೊಂದಿಗೆ ನಮಗೂ ಲೈಂಗಿಕ ದೌರ್ಜನ್ಯದ ಕಹಿ ಅನುಭವಗಳಾಗಿವೆ ಎಂಬುದನ್ನ ಹಾಕಿಕೊಳ್ತಿದ್ದೇವೆ. ದಿನಬೆಳಗಾದರೆ ಸಣ್ಣ ಸಣ್ಣ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ.
ಸುಭದ್ರ ಸಮಾಜದ ನಿರ್ಮಾಣಕ್ಕೆ ಹೊಸದೊಂದು ಸಂಕಲ್ಪ ಬೇಕಿದೆ.ಹಿಂಸೆಯಿಲ್ಲದ, ದೌರ್ಜನ್ಯವಿಲ್ಲದ, ಅತ್ಯಾಚಾರಮುಕ್ತ ಸಮಾಜದ ಅಡಿಪಾಯ ಹಾಕುವ ಕಾಲ ಸನ್ನಿಹಿತವಾಗಿದೆ. ಯಾವ ಮಹಿಳೆ ಗ್ರಾಮದೇವತೆಯಾಗಿ,ಕಾಳಿಯಾಗಿ,ದುರ್ಗೆಯಾಗಿ ಸಮಾಜವನ್ನು ರಕ್ಷಿಸಿಕೊಳ್ಳುತ್ತಿದ್ದಳೋ ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಅದರ ವಾರಸುದಾರರಾಗಿ ಎದ್ದು ನಿಲ್ಲುವ ಶಕ್ತಿಯನ್ನು ಮಹಿಳೆ ತನ್ನದಾಗಿಸಿಕೊಳ್ಳಬೇಕು. ಸೆಲ್ಫೀ ಮೋಡಿನಿಂದ ಸ್ವರಕ್ಷಣೆಯ ಮೋಡಿಗೆ ಬದ್ಧರಾದಾಗ ಮಾತ್ರ ಪರಿಹಾರದ ದಾರಿ ಗೋಚರವಾಗಬಲ್ಲದು. ರಾಷ್ಟ್ರಕ್ಕೆ ರಕ್ಷಣೆ ಹೆಣ್ಣು ನೀಡಬಲ್ಲಳಾದರೆ ತನ್ನನ್ನು ತಾನೂ ರಕ್ಷಿಸಿಕೊಳ್ಳಬಲ್ಲಳು !!
ಚಿತ್ರ ಕೃಪೆ :- http://newsonair.nic.in/
ರಾಜ್ಯದ ಸದ್ಯದ ಸ್ಥಿತಿಯನ್ನು ವಿವರಿಸಿದ ಉತ್ತಮ ಲೇಖನ