ಶಬರಿಮಲೆ: ಇದು ಹಿಂದೂಗಳ ಸೋಲೇ ?
– ವರುಣ್ ಕುಮಾರ್
ಪುತ್ತೂರು
ಕಳೆದ ಕೆಲ ತಿಂಗಳುಗಳಿಂದ ಚರ್ಚೆಗೆ ಗ್ರಾಸವಾಗಿರುವ ಸುದ್ದಿ ಎಂದರೆ ಅದು ಶಬರಿಮಲೆಗೆ ಮಹಿಳಾ ಪ್ರವೇಶದ ಕುರಿತಾಗಿ ಬಂದಂತಹ ತೀರ್ಪು. ಈ ಕುರಿತಾಗಿ ಚರ್ಚೆಗಳು, ವಾದ- ವಿವಾದಗಳು,ಸಂಭಾಷಣೆಗಳು ಈಗ ಅತಿ ಸಾಮಾನ್ಯ. ಆದರೆ ಶಬರಿಮಲೆಯು ಇಂತಹ ಚರ್ಚೆಗಳಿಗೆ ಗುರಿಯಾಗುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಇದರ ಕುರಿತಾದ ಒಂದು ಸಣ್ಣ ಅವಲೋಕನೆಯು ಈ ಕೆಳಗಿನಂತಿದೆ.
ನಮಗೆಲ್ಲ ಗೊತ್ತಿರುವ ಹಾಗೆ ಶಬರಿಮಲೆಯಲ್ಲಿ ಈಗಾಗಲೆ ಇಬ್ಬರು ಮಹಿಳೆಯರ ಪ್ರವೇಶವಾಗಿ, ದೇವಾಲಯದ ಬಾಗಿಲು ಮುಚ್ಚಿ, ಶುದ್ಧಿ ಕ್ರಿಯೆ ನಡೆದು ಮತ್ತೊಮ್ಮೆ ಬಾಗಿಲು ತೆರೆದು ಭಕ್ತರಿಗೆ ದರ್ಶನವನ್ನು ಅನುವು ಮಾಡಿಕೊಟ್ಟಿದೆ. ಇದೊಂದು ಇತಿಹಾಸದಲ್ಲಿ ದಾಖಲಾದ ಕರಾಳ ಅಧ್ಯಾಯ ಎನ್ನದೆ ವಿಧಿಯಿಲ್ಲ. ಬೆಳ್ಳಂಬೆಳ್ಳಗೆ ಎಲ್ಲ ಭಕ್ತರು ಮಲಗಿರುವ ಸಂಧರ್ಭದಲ್ಲಿ ಎಲ್ಲರ ಕಣ್ಣಿಗೆ ಮಣ್ಣೆರಚಿ ದೇವರ ದರ್ಶನ ಮಾಡಿದ್ದಾರೆಂದರೆ ಅದರ ಅರ್ಥ ಭಕ್ತಿಯಲ್ಲ. ಅದು ಸರಕಾರ ಮಾಡಿದ ಕುಯುಕ್ತಿ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣಿಸುತ್ತದೆ. ಈ ವಿವಾದಕ್ಕೆ ಮುಖ್ಯ ಕಾರಣವೇನು ಎಂದು ನೋಡಬೇಕಾದರೆ ನಾವು ಶಬರಿಮಲೆಯಲ್ಲಿ ನಡೆದ ಹಿಂದಿನ ಘಟನೆಗಳನ್ನು, ಅದೇ ರೀತಿ ಆ ಘಟನೆಗಳಿಗೆ ಹಿಂದೂಗಳ ಪ್ರತಿಕ್ರಿಯೆಯನ್ನು ಮೆಲುಕು ಹಾಕಬೇಕಾಗುತ್ತದೆ.
ಮೊದಲನೆಯದಾಗಿ ದಾಳಿ ನಡೆದದ್ದು ೧೯೫೦ರ ದಶಕದಲ್ಲಿ. ಆಗ ಕಮ್ಯೂನಿಸ್ಟ್ ಸಿದ್ದಾಂತವು ಅತ್ಯಂತ ವೇಗವಾಗಿ ಕೇರಳಾದಾದ್ಯಂತ ಹರಡುತ್ತಿತ್ತು. ಆಗಿನ ಕೆಲ ಕಮ್ಯೂನಿಸ್ಟ್ ನಾಯಕರು ಶಬರಿಮಲೆ ದೇಗುಲವು ಕೆಳ ಜಾತಿಯವರಿಗೆ ಸೇರಿದ್ದು ಇದರಲ್ಲಿ ಮೇಲ್ವರ್ಗ ಹಿಂದೂಗಳಿಗೆ ಯಾವುದೆ ಹಕ್ಕಿಲ್ಲ ಎಂದೂ ಹಿಂದೂಗಳನ್ನೇ ವಿಭಾಗಿಸಿದರು. ಅಲ್ಲದೆ ಕೆಲ ಕಮ್ಯೂನಿಸ್ಟ್ ಕಿಡಿಗೇಡಿಗಳು ದೇಗುಲವನ್ನೆ ಸುಟ್ಟು ಹಾಕುವ ಪ್ರಯತ್ನ ಮಾಡಿದರೆಂದು ಇತಿಹಾಸ ಹೇಳುತ್ತದೆ. ಆದರೆ ಹಿಂದೂಗಳು ಮಾತ್ರ ತಮ್ಮದೇ ಸಮಸ್ಯೆಗಳಲ್ಲಿ, ಬಹುಮುಖ್ಯವಾಗಿ ಜಮಿನ್ದಾರಿ ಪದ್ದತಿಗಳು, ಊಳಿಗಮಾನ್ಯ ಪದ್ದತಿಗಳಿಂದ ಜಾತಿ ವ್ಯವಸ್ಥೆಯ ಬೇಲಿಗಳಿಂದ ಹೊರಬರಲಾರದೆ ನರಳುತ್ತಿದ್ದರಿಂದ ಯಾವುದೆ ಪ್ರತಿರೋಧ ವ್ಯಕ್ತ ಪಡಿಸಲಾರದೆ ಸೋತು ಹೋದರು.
ಎರಡನೆಯ ಬಹುದೊಡ್ಡ ಆಘಾತ ಶಬರಿಮಲೆ ಹಾಗೂ ಸುತ್ತಮುತ್ತಲಿನ ಪರಿಸರಕ್ಕೆ ಉಂಟಾಗಿದ್ದು ಕ್ರಿಶ್ಚಿಯನ್ ಮಂತಾಂತರಿಗಳಿಂದ. ಅದು ೮೦ ರ ದಶಕದ ಸಮಯ. ಕ್ರಿಶ್ಚಿಯನ್ ಮಿಷಿನರಿಗಳು ಕೇರಳ ಸರ್ಕಾರದ ಕೃಪಾಕಟಾಕ್ಷದಲ್ಲಿ ಹಿಂದೂಗಳನ್ನು ಆಮೀಷಕ್ಕೆ ಒಳ ಪಡಿಸಿ ಮತಾಂತರಗೊಳಿಸುತ್ತಿದ್ದರು. ಆದರೆ ನೀಲಕಲ್ಲು ಹಾಗೂ ಇತರೆ ಶಬರಿಮಲೆ ಪರಿಸರದಲ್ಲಿ ಇವರಿಗೆ ಪ್ರವೇಶ ಕಷ್ಟಸಾಧ್ಯವಾಗಿತ್ತು. ಆಗ ಕೆಲ ಪಾದ್ರಿಗಳು ನೀಲಕಲ್ಲು ಭಾಗದ ದೇಗುಲದ ಸಮೀಪ ರಾತ್ರಿ ಸಮಯದಲ್ಲಿ ಮಣ್ಣನ್ನು ಅಗೆದು ಹಳೆ ಶಿಲುಬೆ ಹಾಗೂ ಸಂತನನ್ನು ಹೂತಿಟ್ಟು ಬೆಳಗಿನ ಸಂದರ್ಭ ಎಲ್ಲ ಜನರನ್ನು ಕರೆಸಿ ಮಣ್ಣನ್ನು ತೆಗೆಸಿ ಇಲ್ಲಿ ಸಂತನ ಪವಾಡ ನಡೆದಿದೆಯೆಂದು ಅಲ್ಲಿಯ ಮೂಕ ಹಿಂದೂಗಳನ್ನು ನಂಬಿಸಿದರು. ಈ ಸಂದರ್ಭದ ಲಾಭ ಪಡೆದ ಪಾದ್ರಿಗಳು ರಾತ್ರೋ ರಾತ್ರಿ ಅಲ್ಲಿ ತಾತ್ಕಲಿಕವಾಗಿ ಚರ್ಚನ್ನು ಕಟ್ಟಿ, ಧ್ವನಿವರ್ದಕಗಳನ್ನು ಕಟ್ಟಿ, ಯೇಸುವಿನ ಸ್ತುತಿಯನ್ನು ಜಪಿಸತೊಡಗಿದರು. ಆದರೆ ಈ ಬಾರಿ ಹಿಂದೂಗಳು ಸುಮ್ಮನಿದ್ದರೂ, ನಮ್ಮ ಈಗಿನ ಮೀಜೊರಂ ರಾಜ್ಯಪಾಲ ಮಾಜಿ ಬಿಜೆಪಿ ಅಧ್ಯಕ್ಷ ಕುಮ್ಮನಂ ರಾಜಶೇಖರ್ ಅವರು ಸುಮ್ಮನಿರಲ್ಲಿಲ್ಲ. ಈ ಬೂಟಾಟಿಕೆಯನ್ನು ಹೊರತರಲು ಅಲ್ಲಿಯ ಜನರನ್ನು ಒಗ್ಗೂಡಿಸಿ ಸಮಿತಿಗಳನ್ನು ರಚಿಸಿ ಪ್ರತಿಭಟನೆಗಳನ್ನು ನಡೆಸಿದರು. ದುರಾದೃಷ್ಟವಶಾತ್ ಶಾಂತಿಯಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಚದುರಿಸಲು ಲಾಠಿ ಪ್ರಹಾರ, ಗೋಲಿಬಾರನ್ನು ಸರಕಾರ (ಆಗ ಕಾಂಗ್ರೆಸಿನ ಕರುಣಾಕರನ್ ಸರಕಾರವಿತ್ತು ) ನಡೆಸಿ ೩ ಜೀವವನ್ನು ತೆಗೆಸಿತು. ಆದರೆ ಸರಕಾರಕ್ಕೆ ಈ ಘಟನೆಯು ಕಪ್ಪುಚುಕ್ಕೆಯಾಗಿ ಪರಿಣಮಿಸಿದ ಪರಿಣಾಮ ಪ್ರತಿಭಟನೆಕಾರರ ಒತ್ತಡಕ್ಕೆ ಮಣಿದು ಚರ್ಚನ್ನು ನೀಲಕಲ್ಲಿನಿಂದ ಸ್ಥಳಾಂತರಿಸಲು ಒಪ್ಪಿದರು. ಇದು ಹಿಂದೂಗಳ ತಾತ್ಕಲಿಕ ವಿಜಯವಾದರೂ ಕುಮ್ಮನಂ ರಾಜಶೇಖರರಂತಹ ನಾಯಕರನ್ನು ಹಿಂದೂಗಳು ಮರೆತರು. ತನ್ನ ಜೀವನವನ್ನು ಹಿಂದೂಗಳ ಏಕೀಕರಣಕ್ಕಾಗಿ ಮುಡಿಪ್ಪಿಟ್ಟರೂ ಚುನಾವಣೆಗಳಲ್ಲಿ ಹಿಂದೂಗಳು ಇವರನ್ನು ಸೋಲಿಸುತ್ತಾ ಬಂದರು. ತೀರ ಇತ್ತೀಚಿನವರೆಗೂ ಸಕ್ರಿಯರಾಗಿದ್ದ ಇವರು ಈಗ ರಾಜ್ಯಪಾಲರಾಗಿ ಮಿಜೋರಾಂನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಆಚಾರ ಉಲ್ಲಂಘನೆ :
ಶಬರಿಮಲೆಯಲ್ಲಿ ಆಚಾರ ಉಲ್ಲಂಘನೆ ಎಂಬುವುದು ಇದು ಇಂದು ನಿನ್ನೆಯದಲ್ಲ. ಕಳೆದ ಕೆಲ ದಶಕಗಳಿಂದ ದೇಗುಲದ ಭಂಡಾರಕ್ಕೆ ಬೊಕ್ಕಸ ತುಂಬಬೇಕೆಂಬ ದುರಾಸೆಯಲ್ಲಿ ಅಲ್ಲಿ ದೇವಸ್ವಂ ಮಂಡಳಿ ವೃತಾಚರಣೆಗಳಲ್ಲಿ ಕೆಲ ಮಾರ್ಪಾಡುಗಳನ್ನು ತಂದಿದ್ದು, ಮಾನಸಿಕವಾಗಿ ಉದಾಸೀನರಾಗಿ ಪರಿಣಮಿಸಿದ ಹಿಂದೂಗಳಿಗೆ ವರದಾನವಾಗಿ ಪರಿಣಮಿಸಿತು. ಉದಾಹರಣೆಗೆ ನೋಡುವುದಾದರೆ ಮೊದಲನೆಯದಾಗಿ ಕಠಿಣ ವೃತ. ೪೧ ದಿನಗಳ ಮಾಲೆ ಧರಿಸಿ ವೃತಾಚರಣೆ ಬದಲಾಗಿ ಕೇವಲ ಹಿಂದಿನ ದಿನ ಮಾಲೆ ತೊಟ್ಟು ವೃತ ಕೈಗೊಳ್ಳಬಹುದು ಎಂಬ ನಿಯಮ ಜಾರಿ ತಂದಿದ್ದು, ಭಕ್ತರು ಯಾವುದೇ ಪ್ರತಿರೋಧ ವ್ಯಕ್ತಪಡಿಸದೆ ಮೌನವಾಗಿ ಅದನ್ನು ಸ್ವೀಕಾರ ಮಾಡಿದರು. ಅಲ್ಲದೆ ಪ್ರತಿ ತಿಂಗಳಿನ ಮೊದಲನೆ ತಾರೀಖಿನಂದು ಬಾಗಿಲು ತೆರೆದು ಅಯ್ಯಪ್ಪನ ದರ್ಶನವನ್ನು ಮಾಡಬಹುದು ಎಂಬ ನಿಯಮ ಕೇವಲ ಬೊಕ್ಕಸ ತುಂಬಿಸುವ ಕೆಲಸವೆಂದು ಯಾವುದೇ ಹಿಂದೂಗಳಿಗೂ ಗೊತ್ತಾಗಲಿಲ್ಲ. ಇಲ್ಲಿ ಸಹ ಮೌನವಾಗಿ ಆಚಾರ ಉಲ್ಲಂಘನೆಯನ್ನು ಹಿಂದೂಗಳಿಂದಲೇ ಸರಕಾರ ಮಾಡಿಸಿತು. ಈ ಮೋಸವನ್ನು ಹಿಂದೂಗಳು ಈಗಲೂ ಸಹ ಅರಿಯದೆ ಇದ್ದದ್ದು ದುರಾದೃಷ್ಟ.
ಮಹಿಳೆಯರ ಸನ್ನಿಧಿ ಪ್ರವೇಶ:
ಈಗ ಶಬರಿಮಲೆ ಮುನ್ನಲೆಗೆ ಬಂದಿರುವುದು ಮಹಿಳಾ ಪ್ರವೇಶದ ಕುರಿತು ಬಂದಂತಹ ಸುಪ್ರೀಂ ಕೋರ್ಟಿನ ತೀರ್ಪು. ಆದರೆ ಈ ತೀರ್ಪು ಕೊಡಲು ಹಿಂದೂಗಳನ್ನು ನಾಶಪಡಿಸಬೇಕು ಎಂಬ ಕಾರಣವಲ್ಲ. ಇದಕ್ಕೆ ನಾವು ಶಬರಿಮಲೆಯಲ್ಲಿ ನಡೆದ ಮತ್ತೊಂದು ಘಟನೆಯನ್ನು ನೆನಪಿಸಬೇಕು. ಅದೇನೆಂದರೆ ಈ ಹಿಂದೆ ಶಬರಿಮಲೆಯಲ್ಲಿ ನಡೆದ ಮಹಿಳಾ ಪ್ರವೇಶ. ಹೌದು ! ಆಶ್ಚರ್ಯವಾದರೂ ಇದು ಸತ್ಯ. ನಿಮಗೆಲ್ಲಾ ನೆನಪಿರಬಹುದು ಸ್ವಲ್ಪ ವರ್ಷಗಳ ಹಿಂದೆ ಜಯಮಾಲ ಎಂಬ ನಟಿ ಶಬರಿಮಲೆಯಲ್ಲಿ ದೇವರ ದರ್ಶನ ಮಾಡಿದ್ದೇನೆ ಎಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು. ಅವರ ಹೇಳಿಕೆಯಲ್ಲಿ ವಾಸ್ತವಾಂಶ ಇಲ್ಲ ಎಂದು ಎಲ್ಲರೂ ಅದನ್ನು ಕಡೆಗಣಿಸಿದ್ದರು. ಆದರೆ ೧೯೮೯ ರಿಂದ ೧೯೯೧ ರವರೆಗೆ ವಿ.ಐ.ಪಿ.ಕುಟುಂಬದ ಹಿನ್ನೆಲೆಯುಳ್ಳ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟಿದ್ದರು ಎಂಬ ಆಘಾತಕಾರಿ ಅಂಶ ಇತ್ತೀಚಿಗೆ ಹೊರಬಂದಿತ್ತು. ಇದನ್ನೆಲ್ಲ ನೋಡಿಯೂ ನೋಡದಂತೆ ಇದ್ದು, ನಟಿಸಿ ತನಗೇನೂ ಸಂಭವಿಸಿಲ್ಲವೆಂಬಂತೆ ಹಿಂದೂಗಳು ಸುಮ್ಮನಿದ್ದರು. ಆದರೆ ತದನಂತರ ಶಬರಿಮಲೆಯಲ್ಲಿ ಹಲವು ಅನಿರೀಕ್ಷಿತ ಘಟನೆಗಳು ಹಾಗೂ ವಿಘ್ನಗಳು ಎದುರಾಗತೊಡಗಿದವು. ಇದನ್ನು ಅಷ್ಟಮಂಗಲ ಪ್ರಶ್ನೆಯಲ್ಲಿ ಕೇಳಿದಾಗ ಇದಕ್ಕೆ ಮಹಿಳೆಯರ ಪ್ರವೇಶವೇ ಕಾರಣವೆಂದು ಗೊತ್ತಾಗಿ ಶುದ್ದೀಕರಣಕ್ಕೆ ಬೇಕಾದ ಪ್ರಕ್ರಿಯೆಗಳನ್ನು ಮಾಡುವಂತೆ, ಹಾಗೆಯೇ ಮಹಿಳೆಯರ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸುವಂತೆ ಪರಿಹಾರದಲ್ಲಿ ತಿಳಿಸಲಾಯಿತು. ಅಲ್ಲದೆ ಕಾನೂನಾತ್ಮಕವಾಗಿ ಒಬ್ಬ ಭಕ್ತ (ಹೆಸರು ತಿಳಿದಿಲ್ಲ) ಕೇರಳದ ಹೈಕೊರ್ಟಿನಲ್ಲಿ ಶಬರಿಮಲೆಯಲ್ಲಿ ದೇವಸ್ವಂ ಹಾಗೂ ಅರ್ಚಕರ ಸಹಮತದಲ್ಲಿ ಮಹಿಳೆಯರ ಪ್ರವೇಶವಾಗಿದ್ದು ಸ್ಪಷ್ಟವಾಗಿ ಆಚರಣೆಯ ಉಲ್ಲಂಘನೆಯೆಂದೂ, ಈ ಕೂಡಲೇ ಕೋರ್ಟ್ ಪ್ರವೇಶಿಸಿ ಇದನ್ನು ನಿಲ್ಲಿಸಬೇಕೆಂದು ಕೋರಿದಾಗ ಹೈಕೋರ್ಟ್ ಇದನ್ನು ಗಂಭೀರವಾಗಿ ಪರಿಗಣಿಸಿ ಮೊದಲಿನ ಆಚರಣೆಯನ್ನು ಯಥಾಸ್ಥಿತಿಗೆ ತರಬೇಕೆಂದು ದೇವಸ್ವಂ ಮಂಡಳಿಗೆ ತಾಕೀತುಮಾಡಿತ್ತು.
ಇತ್ತೀಚಿಗಿನ ತೀರ್ಪನ್ನು ಗಮನಿಸಿದರೆ ತಿಳಿಯುತ್ತದೆ ಮಹಿಳಾ ಪ್ರವೇಶದ ಕುರಿತಾದ ೧೯೮೯-೯೧ ರ ತೀರ್ಪನ್ನು ಮಾತ್ರ ಕೋರ್ಟಿನ ಮುಂದಿರಿಸಿ, ಕೋರ್ಟಿನ ಕಣ್ಣಿಗೆ ಮಣ್ಣೆರಚಿ, ಈಗಿನ ಸರಕಾರ ತೀರ್ಪನ್ನು ತನ್ನ ಪರವಾಗಿ ಬರುವಂತೆ ಮಾಡಿದೆ.. ವಾಸ್ತವವಾಗಿ ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಮಾರು ೧೨ ವರ್ಷಗಳ ಹಿಂದಿನ ಅಚ್ಯುತಾನಂದನ್ ಸರ್ಕಾರ ಹೈಕೊರ್ಟಿಗೆ ಹಾಕಿದ್ದು ಆ ಸಂಧರ್ಭದಲ್ಲೆ ಹಿಂದೂಗಳು ಎಚ್ಚೆತ್ತುಕೊಂಡಿದ್ದರೆ ಇಂತಹ ದುರ್ಗತಿ ಬಂದಿರಲ್ಲಿಲ್ಲ. ಹೌದು ಅಲ್ಲಿಯ ಹಿಂದೂಗಳು ಒಟ್ಟಾಗಿದ್ದಾರೆಂಬುದು ಬೇರೆ ಮಾತು. ಆದರೆ ಕಮ್ಯೂನಿಸ್ಟ್ ಮಾನಸಿಕತೆ ಹೊಂದಿದ ಅದೆಷ್ಟೋ ಹಿಂದೂಗಳು ಕೇರಳದಲ್ಲೂ, ಹಾಗೆಯೇ ದೇಶದಲ್ಲೂ ಇನ್ನೂ ಇದ್ದಾರೆ. ಮಹಿಳೆಯರ ಪ್ರವೇಶ ಮಾಡಿದರೆ ನಿಮ್ಮ ಗಂಟು ಏನು ಹೋಗುತ್ತೇ ಅನ್ನುವ ಕೆಲ ಅರೆಬರೆ ಜ್ಙಾನವನ್ನು ಹೊಂದಿರುವ ವ್ಯಕ್ತಿಗಳೂ ಇದ್ದಾರೆ. ಅವರಿಗೆ ನಮ್ಮ ಜಾಣ ಮೌನವೇ ಉತ್ತರ.
ಸ್ವಾಮಿಯೇ ಶರಣಂ ಅಯ್ಯಪ್ಪ…
ಕೃಪೆ: ಜನಂ ಟಿ.ವಿ. (೧೯೫೦ ಹಾಗೂ ೧೯೮೦ ಘಟನೆಗಳನ್ನು ಜನಂ ಟಿ.ವಿ. ಮಲಯಾಳಂ ಚಾನಲಿನ ಶಬರಿಮಲೆಗೆ ಸಂಬಂಧಪಟ್ಟ ಸಾಕ್ಷ್ಯ ಚಿತ್ರದಿಂದ ಆರಿಸಲಾಗಿದೆ)
Super Varun Kumar Puttur……
ಸರಿಯಾದ ಮಾತು ವರುಣ್ ಸರ್…
ಮೊದಲನೆಯದಾಗಿ ನಮ್ಮ ಸಮಸ್ಯೆಗೆ ನಾವೇ ಕಾರಣ..
ನಂತರ ನಮ್ಮ ಕಾನೂನು ವ್ಯವಸ್ಥೆ..