ಅಬ್ಬಾ..ಈ ದೇಶದಲ್ಲಿ ಅದೆಂತಹ ಅಸಹಿಷ್ಣುತೆ..!
– ವರುಣ್ ಕುಮಾರ್
ಪುತ್ತೂರು
- ಈ ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ – ಶಾರುಖ್ ಖಾನ್
- ನನ್ನ ಪತ್ನಿಗೆ ಮತ್ತು ನನಗೆ ಈ ದೇಶದಲ್ಲಿ ಇರಲು ಭಯವಾಗುತ್ತಿದೆ, ಯಾಕೆಂದರೆ ಇಲ್ಲಿ ಅಸಹಿಷ್ಣುತೆ ಇದೆ – ಅಮೀರ್ ಖಾನ್
- ನನ್ನ ಮೊಮ್ಮಕ್ಕಳಿಗೆ ಈ ದೇಶದಲ್ಲಿರಲು ಭಯವಾಗುತ್ತಿದೆ – ನಾಸೀರುದ್ದಿನ್ ಷಾ
ಹೌದಲ್ಲವೇ, ಇವರು ಹೇಳಿದಂತೆ ಕಳೆದ ನಾಲ್ಕೂವರೆ ವರ್ಷಗಳಿಂದ ಎಷ್ಟೊಂದು ಅಸಹಿಷ್ಣುತೆ ಇದೆಯಲ್ಲವೆ, ಎಲ್ಲ ಕಡೆಗಳಲ್ಲಿ ಗೋವಿನ ಹೆಸರಲ್ಲಿ ಕೊಲೆ,ಸುಲಿಗೆ ಧರ್ಮದ ಹೆಸರಲ್ಲಿ ಗಲಭೆ, ಅಲ್ಪಸಂಖ್ಯಾತರಿಗಂತೂ ಉಸಿರುಗಟ್ಟಿದ ಸ್ಥಿತಿ. ಒಂದೇ ಎರಡೇ, ಇದಕ್ಕೆಲ್ಲ ಯಾರು ಮುಖ್ಯ ಕಾರಣ ಕೇಂದ್ರ ಸರ್ಕಾರ. ಅದರಲ್ಲೂ ಮುಖ್ಯವಾಗಿ ಮೋದಿ. ಈ ಮನುಷ್ಯ ಬಂದ ಮೇಲಂತೂ ಈ ದೇಶದ ಬಗ್ಗೆ ತಾತ್ಸರ ಮೂಡುವಂತೆ ಮಾಡಿದ್ದಾನೆ. ಅಲ್ಲವೇ.. ಅಷ್ಟಕ್ಕೂ ಮೋದಿಯ ಬಗ್ಗೆ ಈ ನಮ್ಮ ದೇಶಭಕ್ತ(?)ರಿಗೆ ಯಾಕೆ ಇಷ್ಟೊಂದು ಕೋಪ ಸ್ವಲ್ಪ ಮೆಲುಕು ಹಾಕೋಣ.
ಅದು ಫೆಬ್ರವರಿ ೨ ೨೦೦೨ ರ ಬೆಳಗ್ಗಿನ ಸಮಯ.. ಗುಜರಾತಿನ ರೈಲ್ವೆ ಸ್ಟೇಶನ್ ನಿಂದ ಇನ್ನೇನು ರೈಲು ಹೊರಟಿತು ಎನ್ನುವಷ್ಟರಲ್ಲಿ ಯಾರೋ ರೈಲಿನ ಚೈನನ್ನು ಎಳೆದು ರೈಲನ್ನು ನಿಲ್ಲಿಸಿದರು; ಕಣ್ಣು ಮಿಟುಕುವಷ್ಟರಲ್ಲಿ ರೈಲಿಗೆ ಪೆಟ್ರೋಲ್ ಸುರಿದು ೫೭ ಕರಸೇವಕರ ಸಹಿತ ಮಹಿಳೆಯರನ್ನು ಸುಟ್ಟು ಕರಕಲು ಮಾಡಿದರು. ಆಮೇಲೆ ನಡೆದ ಕೋಮುಗಲಭೆಗಳು ಸಾವು, ನೋವುಗಳು ಕರಾಳ ಇತಿಹಾಸಕ್ಕೆ ಸಾಕ್ಷಿಯಾಯಿತು. ಇದೇ ಸಂಧರ್ಭದಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದವರು ಇದೇ ಮೋದಿ; ಮೋದಿಯೇ ಈ ಕೋಮುಗಲಭೆಗಳಿಗೆ ಪ್ರೋತ್ಸಾಹಿಸಿ ಮುಸ್ಲಿಂರನ್ನು ಕೊಲ್ಲಲು ಹಿಂದೂಗಳಿಗೆ ಆದೇಶ ಕೊಟ್ಟರೆಂದು ಪತ್ರಕರ್ತರ ಸಮೂಹವೇ ಮೋದಿಯವರನ್ನು ಅಪರಾಧಿ ಸ್ಥಾನದಲ್ಲಿ ತಂದು ಕೂರಿಸಿದರು, ಸತ್ವಃ ತನ್ನ ಪಕ್ಷದ ನಾಯಕರೇ ಮೋದಿಯ ಮೇಲೆ ಅಸಹಿಷ್ಣುತೆಯನ್ನು ವ್ಯಕ್ತಪಡಿಸಿದರು. ಚಿತ್ರನಟರು, ರಾಜಕಾರಣಿಗಳು, ಸಾಹಿತಿಗಳು, ಪತ್ರಕರ್ತರು ಹೀಗೆ ಎಲ್ಲರೂ ಮೋದಿಯನ್ನು ನಿಂದಿಸತೊಡಗಿದರು,ಅವಹೇಳನ ಮಾಡಿದರು. ಅಷ್ಟೇ ಏಕೆ ಇದೇ ೨೦೦೨ ರ ಘಟನೆಯ ಕುರಿತಾದ ನಾಸೀರುದ್ದಿನ್ ಷಾ ಅಭಿನಯದ ಚಲನಚಿತ್ರವನ್ನು (ಫರ್ಜಾನಿಯ) ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟ ಚಲನಚಿತ್ರ ಉತ್ಸವದಲ್ಲಿ ಪ್ರದರ್ಶಿಸಿ ಗುಜರಾತಿನ ಹೆಸರಿಗೆ ಕಳಂಕ ತರಲು ಪ್ರಯತ್ನಿಸಿದರೂ ಮೋದಿಯವರು ಮಾತ್ರ ತುಟಿಕ್ ಪಿಟಿಕ್ ಅನ್ನಲಿಲ್ಲ. ಆದರೆ ಅದೇ ನಾಸಿರುದ್ದಿನ್ ಷಾ ಮೋದಿಗೆ ಬೈಯುವ ನೆಪದಲ್ಲಿ ದೇಶವನ್ನೇ ಅಸಹಿಷ್ಣು ಅಂದು ಬಿಟ್ಟರು.
ಶಾರುಖ್ ಖಾನ್ ಅಭಿನಯದ ಮೈ ನೇಮ್ ಇಸ್ ಖಾನ್ ಚಲನಚಿತ್ರಕ್ಕೆ ಗುಜರಾತಿನಲ್ಲಿ ಭೀತಿ ಎದುರಾದಾಗ ನಿರ್ಮಾಪಕ ನಿರ್ದೇಶಕ ಕರಣ್ ಜೋಹರ್ ಮೋದಿಯವರ ಬಳಿ ಸಹಾಯ ಯಾಚಿಸಿದರು. ತಕ್ಷಣ ಪ್ರವೃತ್ತರಾದ ಮೋದಿ ಈ ಚಿತ್ರಕ್ಕೆ ಬೇಕಾದ ಎಲ್ಲ ಭದ್ರತೆಯನ್ನು ಒದಗಿಸಿ ಸುರಕ್ಷಿತವಾಗಿ ಚಿತ್ರ ಬಿಡುಗಡೆಗೊಳಿಸುವಂತೆ ಮಾಡಿದರು. ಆದರೆ ಅದೇ ಶಾರುಖ್ ಖಾನ್ ಗೆ ಮೋದಿ ಅಂದರೆ ಭಯ, ನಮ್ಮ ದೇಶವೆಂದರೆ ಭಯ. ನರ್ಮದಾ ನದಿಯ ಅಣೆಕಟ್ಟನ್ನು ಎತ್ತರಗೊಳಿಸುವ ನಿರ್ಧಾರವನ್ನು ಗುಜರಾತ್ ಸರ್ಕಾರ ನಿರ್ಣಯ ಕೈಗೊಂಡ ಸಮಯವದು. ನಿರಾಶ್ರಿತರಿಗೆ ಸರಿಯಾದ ಪರಿಹಾರ ಲಭ್ಯವಾಗಲಿಲ್ಲವೆಂದು ಮೇಧಾ ಪಾಟ್ಕರ್ ಅವರು ಉಪವಾಸ ಕುಳಿತಾಗ ಈ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳಲು ಬಂದ ಇನ್ನೊಬ್ಬ ನಟನೆಂದರೆ ಅಮೀರ್ ಖಾನ್. ಆದರೆ ಯಾವಾಗ ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಸರ್ಕಾರದ ಪರವಾಗಿ ನಿಂತಾಗ ಅಮೀರ್ ಖಾನ್ ಗೆ ಮಾತ್ರ ಅವಮಾನ ಸಹಿಸಲಾರದೆ ಇದ್ದರು. ಅವಕಾಶಕ್ಕಾಗಿ ಕಾದು ಮೋದಿ ಪ್ರಧಾನಿಯಾದ ಕೆಲ ತಿಂಗಳಲ್ಲೇ ಇವರ ಕುಟುಂಬಕ್ಕೆ ದೇಶದಲ್ಲಿರಲು ಸಾಧ್ಯವಾಗದ ಪರಿಸ್ಥಿತಿ ಇದೆ. ಯಾಕೆಂದರೆ ಅಸಹಿಷ್ಣುತೆ ತು0ಬಿ ತುಳುಕುತ್ತಿದೆ ಎಂದು ಮಾಧ್ಯಮದವರನ್ನು ಕರೆಸಿ ಹೇಳಿಕೆಯನ್ನು ಕೊಟ್ಟೇ ಬಿಟ್ಟರು. ಮಾಧ್ಯಮದವರು ಇದನ್ನೇ ಬಂಡವಾಳವಾಗಿಟ್ಟುಕೊಂಡು ಚರ್ಚೆಗಳನ್ನು ಮಾಡಲು ಶುರು ಹಚ್ಚಿದರು.. ಆದರೆ ಮೋದಿ ಮಾತ್ರ ಯಾರ ವಿರುದ್ಧವು ಅಸಹಿಷ್ಣುತೆ ತೋರಿಸಲಿಲ್ಲ..
ಮೋದಿಗೆ ಅಭಿವೃದ್ದಿ ಮೇಲೆ ಅಸಹಿಷ್ಣುತೆಯೇ?
ಈಗ ಈ ಅಸಹಿಷ್ಣು ತಂಡದ ಸರದಿ ಮೋದಿಯವರ ಅಭಿವೃದ್ದಿ ಮೇಲೆ. ದೇಶದೆಲ್ಲೆಡೆ ಗುಜರಾತ್ ಮಾಡೆಲ್ ಬಗ್ಗೆ ಮಾತನಾಡಿದರೆ ಇದು ಕೇವಲ ಗಿಮಿಕ್ ಎಂದು ಪ್ರಚಾರ ಮಾಡತೊಡಗಿದರು. ಅಷ್ಟಕ್ಕೂ ಅವರು ಅಧಿಕಾರಕ್ಕಾಗಿ ಬಂದ ನಂತರ ಅವರ ಕಾರ್ಯವನ್ನು ಗಮನಿಸೋಣ.
ಕೇವಲ ೫ ವರ್ಷಗಳಲ್ಲಿ ಲಕ್ಷ ಕೋಟಿ ರೂಪಾಯಿಗಳ ಬಂಡವಾಳವನ್ನೇ ಹರಿಸಿದರು. ನಾವೆಲ್ಲ ಲೋಡ್ ಶೆಡ್ಡಿಂಗ್ ಬಗ್ಗೆ ಚರ್ಚೆ ಮಾಡುವಾಗ ಗುಜರಾತ್ನಲ್ಲಿ ೨೪ ಘಂಟೆ ಹಳ್ಳಿ ಹಳ್ಳಿಗೂ ವಿದ್ಯುತ್ ಅನ್ನು ಹರಿಸಿ ಸೈ ಎನಿಸಿಕೊಂಡರು. ಪ್ರತಿ ಮನೆಗಳಿಗೂ ೨೪ ಘಂಟೆ ನೀರನ್ನು ಕೊಡಿಸುವ ವ್ಯವಸ್ಥೆ ಮಾಡಿಸಿದರು, ಪ್ರವಾಸಿ ತಾಣವನ್ನಾಗಿ ಗುಜರಾತನ್ನು ಅಭಿವೃದ್ದಿಪಡಿಸಿದರು. ಕೇವಲ ೫ ವರುಷಗಳಲ್ಲಿ ಕೋಮುಗಲಭೆಯ ಪಟ್ಟಿಯಿಂದ ಗುಜರಾತ್ ರಾಜ್ಯವನ್ನು ತೆಗೆದು ಉದ್ಯಮಿ ಸ್ನೇಹಿ ರಾಜ್ಯ ಎಂಬ ಹೆಗ್ಗಳಿಕೆಯನ್ನು ತಂದುಕೊಟ್ಟರು. ಆದರೆ ಮೋದಿಯನ್ನು ಸದಾ ಹೀಗಳೆಯುವ ವ್ಯಕ್ತಿಗಳಿಗೆ ಮಾತ್ರ ಇದಾವುದು ಕಣ್ಣಿಗೆ ಕಾಣಲಿಲ್ಲ. ಕೋಮುವಾದಿ ಸಾವಿನ ವ್ಯಾಪಾರಿ, ಸಿ.ಎಮ್. (ಚೀಫ್ ಮಾನ್ ಸ್ಟರ್) ಎಂದೆಲ್ಲ ಹೀಯಾಳಿಸಿದಾಗ ಗುಜರಾತಿನ ಜನತೆ ಮಾತ್ರ ಸುಮ್ಮನಿರಲಿಲ್ಲ. ೨೦೦೭, ೨೦೧೨ ರ ಚುನಾವಣೆಗಳಲ್ಲಿ ಮತ್ತೊಮ್ಮೆ ಆರಿಸಿ ಅಸಹಿಷ್ಣುಗಳಿಗೆ ಸರಿಯಾದ ತಪರಾಕಿಯನ್ನು ಕೊಟ್ಟಿದ್ದರು.
ಆದರೂ ಮೋದಿಯನ್ನು ಸುಮ್ಮನೆ ಬಿಡುವ ಲಕ್ಷಣಗಳು ಕಾಣಿಸಲಿಲ್ಲ. ಯಾವಾಗ ೨೦೧೪ ರ ಲೋಕಸಭೆ ಚುನಾವಣೆಗೆ ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿಯಿಂದ ಘೋಷಣೆಯಾಯಿತು ನೋಡಿ ಆಗ ಮತ್ತೊಮ್ಮೆ ವಿರೋಧಿಗಳು ಒಂದಾದರು. ಈಗ ಮೋದಿ ವಿರೋಧಿ ಕೂಗು ಎಲ್ಲಿವರೆಗೂ ಇತ್ತೆಂದರೆ ಆಗಿನ ಅಮೇರಿಕಾದ ಅಧ್ಯಕ್ಷರಿಗೆ ಪತ್ರ ಬರೆದು ಈತ ಪ್ರಧಾನಿಯಾದರೆ ದಯವಿಟ್ಟು ಅಮೇರಿಕಾಗೆ ಭೇಟಿ ಮಾಡಲು ವೀಸಾ ಕೊಡಬೇಡಿ ಎಂದು ಮನವಿ ಮಾಡಿಕೊಂಡರು. ಕೆಲಸಾಹಿತಿಗಳು ದೇಶ ಬಿಟ್ಟು ಹೋಗುವ ಮಾತನಾಡಿದರು, ನರಹಂತಕ ಎಂದು ಜರೆದರು, ಪತ್ನಿಯನ್ನು ನೋಡದವ ದೇಶವನ್ನೇನು ನೋಡಿಕೊಳ್ಳುತ್ತಾನೆ ಹೀಗೇ ಒಂದೇ ಎರಡೇ. ಆದರೆ ಜನತೆ ಮಾತ್ರ ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯಾಗಿ ಚುನಾವಣೆಯಲ್ಲಿ ಆರಿಸಿ ದೇಶವನ್ನು ಮುನ್ನಡೆಸಲು ಅವಕಾಶವನ್ನು ಮಾಡಿಕೊಟ್ಟರು. ಆದರೆ ನೋಡಿ ವಿಷಜಂತುಗಳು ಮಾತ್ರ ಮೋದಿ ಪ್ರಧಾನಿಯಾದ ವರುಷದೊಳಗೆ ಮತ್ತೊಮ್ಮೆ ಅಸಹಿಷ್ಣುತೆಯ ಕೂಗನ್ನು ಶುರುಮಾಡಿದರು. ಬೇಳೆ ಬೇಯಲಿಲ್ಲವೆಂದು ಪ್ರಶಸ್ತಿಯನ್ನು ವಾಪಸ್ಸು ನೀಡಲು ಪ್ರಾರಂಭಿಸಿದರು. ದೇಶದಲ್ಲಿ ಎಲ್ಲೆ ಗಲಭೆಗಳಾಗಲಿ, ಗುಂಪು ಹತ್ಯೆ ಆಗಲಿ, ಕೊಲೆಗಳಾಗಲಿ ಎಲ್ಲದಕ್ಕೂ ಮೋದಿಯೇ ಕಾರಣವೆಂದು ಜರೆಯಲು ಶುರು ಮಾಡಿದರು. ಅಷ್ಟೇ ಏಕೆ ಇವರಿಗೆ ಮೋದಿ ವಿದೇಶಕ್ಕೆ ಹೋದರೂ ಇವರಿಗೆ ಸಮಸ್ಯೆನೇ. ಆದರೆ ಮೋದಿ ಮಾತ್ರ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಸೈನಿಕರಿಗೆ ಆತ್ಮಸ್ಥೈರ್ಯವನ್ನು ತುಂಬಿಸಿದರು, ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಿದರು. ಯಾವ ಸರ್ಕಾರವು ತಲೆಹಾಕದ ಆರೋಗ್ಯ ಕ್ಷೇತ್ರಕ್ಕೆ ಇವರು ಗಮನ ನೀಡಿ ಕ್ರಾಂತಿಯನ್ನೇ ಸೃಷ್ಟಿಸಿದರು. ಹೀಗೆ ಹತ್ತು ಹಲವು ಯಶಸ್ವಿ ಕಾರ್ಯಕ್ರಮಗಳನ್ನು ಕೊಡುವ ಮೂಲಕ ಜನತೆಗೆ ಹತ್ತಿರವಾದರು. ಈಗ ೨೦೧೯ ಬಂದಿದೆ ಚುನಾವಣೆ ಸಮೀಪಿಸುತ್ತಿದೆ, ವಿರೋಧಿಗಳು ಒಂದಾಗುತ್ತಿದ್ದಾರೆ.. ಈಗ ನಾಸಿರುದ್ದೀನ್ ಷಾ, ನಾಳೆ ಮತ್ತೊಬ್ಬ, ಹೀಗೆ ಮೋದಿಯನ್ನು ಹೀಗಳೆಯುವ ಮಂದಿ ಹೆಚ್ಚುತ್ತಲೇ ಇರುತ್ತಾರೆ.. ಆದರೆ ಮೋದಿ ಮಾತ್ರ ದೇಶದ ಬಗ್ಗೆ ಚಿಂತಿಸಿ ನಮ್ಮನ್ನು ದೇಶದ ಚಿಂತನೆಗೆ ಒಳಪಡಿಸುತ್ತಿದ್ದಾರೆ.