ಪುಲ್ವಾಮ ದಾಳಿ: ಭಾರತ ಕಲಿತ ಪಾಠ
– ವರುಣ್ ಕುಮಾರ್
ಫೆಬ್ರವರಿ ೧೪ನೇ ತಾರೀಖು ಭಾರತದ ಸೈನಿಕರ ಪಾಲಿಗೆ ಅತ್ಯಂತ ಕರಾಳ ದಿನ. ಕಳೆದ ದಶಕದಲ್ಲಿಯೇ ನಡೆದ ಅತ್ಯಂತ ಘೋರ ಉಗ್ರರ ದಾಳಿ ಅಮಾಯಕ ಸೈನಿಕರ ಸಾವಿಗೆ ಕಾರಣವಾಗಿ ಇಡೀ ದೇಶವೇ ಮಮ್ಮಲ ಮರುಗಿತು. ಪ್ರಪಂಚದೆಲ್ಲೆಡೆಯಿಂದ ಈ ಘಟನೆಯ ಬಗ್ಗೆ ಖಂಡನೆ ವ್ಯಕ್ತವಾಗಿ ಭಾರತದ ಜೊತೆ ನಾವಿದ್ದೇವೆ ಎಂಬ ಸಂದೇಶವನ್ನು ರವಾನಿಸಿ ಬೆಂಬಲವನ್ನು ವ್ಯಕ್ತಪಡಿಸಿದರು. ಈ ದಾಳಿಯ ಬಳಿಕ ಭಾರತದಲ್ಲಿ ನಡೆದ ಬೆಳವಣಿಗೆಗಳ ಹಾಗೂ ಈ ದಾಳಿಯಿಂದ ಭಾರತ ಕಲಿಯಬೇಕಾದ ಪಾಠಗಳೇನು ಎಂಬುದಾಗಿ ವಿಶ್ಲೇಷಿಸೋಣ.
ಭಾರತದೊಳಗಿನ ಉಗ್ರರು:
ಹೌದಲ್ಲವೇ, ನಮಗೆ ಈ ಉಗ್ರರದಾಳಿಯ ಬಳಿಕ ಹಲವಾರು ಉಗ್ರರು ನಮ್ಮ ದೇಶದೊಳಗೆ ಅಣಬೆಗಳಂತೆ ಹುಟ್ಟಿಕೊಳ್ಳತೊಡಗಿದರು. ಪಾಕಿಸ್ತಾನ್ ಜಿಂದಾಬಾದ್, ಇದು ನಿಜವಾದ ಸರ್ಜಿಕಲ್ ಸ್ಟ್ರೈಕ್ ಇತ್ಯಾದಿ ಬರಹಗಳನ್ನು ಒಳಗೊಂಡ ಅನೇಕ ದೇಶದ್ರೋಹಿ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾರಂಭಿಸಿದರು. ಪಂಜಾಬ್ ಎಂದಿಗೂ ದೇಶಪ್ರೇಮಿಗಳನ್ನು ಕೊಟ್ಟಂತಹ ರಾಜ್ಯ ಆದರೆ ಅದೇ ರಾಜ್ಯದ ಸಚಿವನಾದ ಸಿಧುರವರು ಪಾಕಿಸ್ತಾನದ ಜೊತೆ ಮಾತುಕತೆ ಭಾರತ ಮುಂದಾಗಬೇಕು ಎಂದು ಸಲಹೆ ನೀಡಿದರು. ಇದರ ಬೆನ್ನಿಗೆ ಸಮಯಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ಪ್ರಕಾಶ್ ರೈ ಒಂದು ಹಂತದಲ್ಲಿ ಭಾರತದ ಜೊತೆ ನಾವಿದ್ದೇವೆ ಎಂದು ಬೆಂಬಲ ನೀಡಿದರು. ಆದರೆ ಮರುದಿನ ಬಿಜೆಪಿಯ ಬಗ್ಗೆ ಮೋದಿಯವರ ಬಗ್ಗೆ ಟೀಕಿಸಿ ಘಟನೆಯನ್ನು ರಾಜಕೀಯಗೊಳಿಸಿದರು. ಕಮಲ್ ಹಾಸನ್ ಅಂತಹ ಸ್ವಯಂಘೋಷಿತ ನಾಯಕರು ಸೈನಿಕರು ಸಾಯಲೆಂದೇ ಸೇನೆಗೆ ಸೇರುತ್ತಾರೆ ಎಂದು ಹೇಳಿಕೆಗಳನ್ನು ಕೊಟ್ಟಾಗ ಇದು ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಯಾವ ರೀತಿ ನೋವಾಗಬಹುದು ಎಂಬ ಕಾಳಜಿಯಿಲ್ಲದೆ ಮಾತನಾಡಿದರು.
ಅಷ್ಟೇ ಯಾಕೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಅಂತೂ ಮುಸ್ಲೀಮರು ಹೆಚ್ಚಿರುವ ಪ್ರದೇಶದಲ್ಲಿ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಬೇಡಿ ಎಂದು ಫರ್ಮಾನು ಹೊರಡಿಸಿದರು. ಹೀಗೇ ಒಂದೇ ಎರಡೇ ಇಂತಹ ಎಡಬಿಡಂಗಿ ಹೇಳಿಕೆಗಳನ್ನು ಬರಹಗಳನ್ನು ನೋಡಿದರೆ ನಮ್ಮ ಸಂವಿಧಾನ ಕೊಟ್ಟಿರುವ ಅಭಿಪ್ರಾಯ ಸ್ವಾತಂತ್ರ್ಯದ ಹಕ್ಕಿನ ಸಂಪೂರ್ಣ ದುರುಪಯೋಗವಾಗುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇಂತಹ ಹೇಳಿಕೆಗಳನ್ನು ಕೊಟ್ಟಂತಹ ವ್ಯಕ್ತಿಗಳಿಗೆ ದೇಶದ್ರೋಹದ ಆರೋಪ ಕೇಸು ದಾಖಲು ಮಾಡಿದರೂ ಜಾಮೀನು ಬಹಳ ಸುಲಭದಲ್ಲಿ ದೊರಕಿ ನಂತರ ಅದೇ ವರಸೆ ತೋರಿಸಿ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡತೊಡಗುತ್ತಾರೆ. ದೇಶದ್ರೋಹದ ಹೇಳಿಕೆಗಳ ವಿರುದ್ಧದ ಕಾನೂನು ಸಹಜವಾಗಿ ದುರ್ಬಲದಿಂದಾಗಿ ಇಂತಹ ಕ್ರಿಮಿಗಳು ಪದೇ ಪದೇ ಭಾರತದ ವಿರುದ್ಧ ವಿಷಕಾರಿ ಭಾರತದ ಐಕ್ಯತೆಗೆ ಧಕ್ಕೆ ಇಡುವ ಕೆಲಸವನ್ನು ಮಾಡುತ್ತಲೇ ಇರುತ್ತಾರೆ.
ಕೇಂದ್ರ ಸರ್ಕಾರದ ಲೋಪಗಳು:
ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಕಾಶ್ಮೀರಕ್ಕೆ ವಿಶೇಷವಾದ ಗಮನವನ್ನು ನೀಡಿದರೂ ಅಂತಹ ಮಹತ್ವದ ಬದಲಾವಣೆಗಳೇನೂ ಕಾಣಲಿಲ್ಲ. ಜಮ್ಮುಕಾಶ್ಮೀರದಲ್ಲಿ ಅತಂತ್ರ ಸರ್ಕಾರ ಬಂದಾಗ ಸಂಧರ್ಭದ ಲಾಭವನ್ನು ಬಳಸಿ ಪಿ.ಡಿ.ಪಿ. ಜೊತೆಗೆ ಸಮ್ಮಿಶ್ರ ಸರ್ಕಾರ ರಚಿಸಿದರು. ಆರಂಭದಲ್ಲಿ ತುಂಬಾ ಉತ್ತಮ ರೀತಿಯಲ್ಲಿ ಆಡಳಿತ ನಡೆಸಿದರೂ ಮೆಹಬೂಬ ಮುಫ್ತಿಯವರು ಮುಖ್ಯಮಂತ್ರಿಯಾದ ಬಳಿಕ ಆಡಳಿತದ ಹಾದಿ ತಪ್ಪಿತು. ಕಾಶ್ಮೀರದ ಕೆಲ ಕಿಡಿಗೇಡಿ ಯುವಕರು ಸೈನಿಕರ ಮೇಲೆ ಕಲ್ಲೇಟಿನಿಂದ ಹೊಡೆದು ಸಾಯಿಸಿದರೂ ಕೇಂದ್ರಸರ್ಕಾರ ಪ್ರತಿಭಟನಾಕಾರರ ಜೊತೆ ಯಾವುದೇ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತರು. ಒಂದು ಹಂತದಲ್ಲಿ ಪ್ರತಿಭಟನೆಯ ಸ್ವರೂಪ ಹಿಂಸಾಚಾರಕ್ಕೆ ತಿರುಗಿ ಒಬ್ಬ ಪೊಲೀಸ್ ಅಧಿಕಾರಿಯನ್ನು ಥಳಿಸಿ ಕೊಂದಾಗಲೂ ಕೇಂದ್ರಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿತು. ಉರಿದಾಳಿಯ ನಂತರ ಭಾರತೀಯ ಸೈನಿಕರು ಸರ್ಜಿಕಲ್ ಸ್ಟ್ರೈಕ್ ಮೂಲಕ ಉಗ್ರರನ್ನು ಸೆದೆಬಡಿದರೂ ಉಗ್ರರ ದಾಳಿ ಅಲ್ಲಲ್ಲಿ ನಡೆಯುತ್ತಲೇ ಇತ್ತು. ಕರ್ನಲ್ಜಿ.ಡಿ.ಭಕ್ಷಿಯವರು ತನ್ನ ಟಿ.ವಿ. ಸಂದರ್ಶನವೊಂದರಲ್ಲಿ ಹಿಂದೆ ಮೂರರಿಂದ ನಾಲ್ಕು ಸೇನೆಯ ಚೆಕ್ ಪೋಸ್ಟ್ಗಳು ವಾಹನಗಳನ್ನು ತಪಾಸಣೆಯನ್ನು ನಡೆಸಿ ಭದ್ರತೆಯನ್ನು ಬಿಗಿಗೊಳಿಸಿದ್ದರು. ಆದರೆ ಮೆಹಬೂಬ ಮುಫ್ತಿಯ ಬೆಂಗಾವಲು ಪಡೆಯ ಕಾರು ನೇರವಾಗಿ ಈ ಚೆಕ್ಪೋಸ್ಟ್ ಗಳನ್ನು ಹೊಡೆದು ಉರುಳಿಸಿದಾಗ ಸೇನೆಯು ಉಗ್ರರಿರಬಹುದೆಂಬ ಸಂದೇಹದಲ್ಲಿ ಗುಂಡು ಹೊಡೆದು ಕೊಂದು ಹಾಕಿದರು. ಇದರಿಂದ ಕುಪಿತಗೊಂಡ ಮೆಹಬೂಬಮುಫ್ತಿ ಈ ಯೋಧರ ವಿರುದ್ಧ ಕೇಸನ್ನು ದಾಖಲಿಸಿ ಇಬ್ಬರು ಯೋಧರನ್ನು ಜೈಲಿಗೆ ಅಟ್ಟಿದರು ಎಂದು ಜಿ.ಡಿ. ಭಕ್ಷಿಯವರು ಹೇಳಿದ್ಧರು. ಈ ಘಟನೆಯ ನಂತರ ಈ ಪ್ರದೇಶದಲ್ಲಿ ಚೆಕ್ ಪೋಸ್ಟ್ ಗಳಿಲ್ಲದೆ ಆರಾಮವಾಗಿ ಉಗ್ರರು ಪುಲ್ವಾಮದಲ್ಲಿ ದಾಳಿ ಮಾಡಲು ನೆರವಾಯಿತು. ಆದರೆ ಜೈಲಿಗೆ ಹೋದ ಯೋಧರ ಪರವಾಗಿ ಕೇಂದ್ರಸರ್ಕಾರ ನಿಲ್ಲದೆ ಇರುವುದು ವಿಪರ್ಯಾಸದ ಸಂಗತಿ.
ಕೇಂದ್ರ ಸರ್ಕಾರದ ಪ್ರಮುಖ ಅಜೆಂಡಾಗಳಲ್ಲಿ ಕಾಶ್ಮೀರದಲ್ಲಿ ೩೭೦ನೆ ವಿಧಿಯದ್ಧು. ಆದರೆ ಇದರ ಬಗ್ಗೆ ನಿಖರವಾಗಿ ನಿರ್ಧಾರ ತೆಗೆದುಕೊಳ್ಳದೆ ಮೌನವಹಿಸಿದ್ಧು ಎಲ್ಲರ ಟೀಕೆಗೆ ಗುರಿಯಾಗಿದೆ. ವಾಸ್ತವದಲ್ಲಿ ೩೭೦ ನೇವಿಧಿಯನ್ನು ರದ್ಧು ಮಾಡಲು ರಾಜ್ಯ ಸರ್ಕಾರದಲ್ಲಿ ಮಸೂದೆಯನ್ನು ಅನುಮೋದಿಸಿ ನಂತರ ಕೇಂದ್ರ ಸರ್ಕಾರ ಅಂಕಿತವನ್ನು ಹಾಕಬೇಕು. ಆದರೆ ಪಿ.ಡಿ.ಪಿ. ಜೊತೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಈ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳದೆ ಇದ್ದದ್ಧು ಎಲ್ಲರ ಕಂಗೆಣ್ಣಿಗೆ ಗುರಿಯಾಯಿತು, ಅಲ್ಲದೆ ರಾಜ್ಯಪಾಲರ ಆಡಳಿತ ಬಂದ ತಕ್ಷಣ ಸುಗ್ರಿವಾಜ್ಞೆ ಮೂಲಕ ೩೭೦ ನೇವಿಧಿಯನ್ನು ರದ್ದು ಮಾಡುವ ಸುವರ್ಣಾವಕಾಶ ಕೇಂದ್ರ ಸರ್ಕಾರಕ್ಕೆ ಲಭಿಸಿದರೂ ಅದನ್ನು ಮಾಡಲಿಲ್ಲ.
ನಿಮಗೆಲ್ಲಾ ನೆನಪಿರಬಹುದು, ನರೇಂದ್ರ ಮೋದಿಯವರು ೨೦೧೫ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಪ್ರತ್ಯೇಕ ರಾಷ್ಟ್ರಕ್ಕೆ ನಡೆಯುತ್ತಿದ್ದ ಪ್ರತಿಭಟನೆಗೆ ತನ್ನ ಬೆಂಬಲವನ್ನು ಬಹಿರಂಗವಾಗಿಯೇ ಘೋಷಣೆ ಮಾಡಿದ್ದು ಗೊತ್ತಿರಬಹುದು. ಇದು ಪಾಕಿಸ್ತಾನಕ್ಕೆ ರಾಜತಾಂತ್ರಿಕವಾಗಿ ಭಾರತ ಕೊಟ್ಟ ಅತಿ ದೊಡ್ಡ ಹೊಡೆತವೆಂದು ತಜ್ಞರು ಪರಿಗಣಿಸಿದ್ದರು. ಆದರೆ ಆ ಬಗ್ಗೆ ಬೇರೆ ಯಾವುದೇ ಬೆಳವಣಿಗೆಗಳು ನಡೆಯಲಿಲ್ಲ. ಭಾರತ ಬಲೂಚಿಸ್ತಾನಕ್ಕೆ ಸಂಪೂರ್ಣ ಬೆಂಬಲ ನೀಡಿ ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡುಬಿಟ್ಟಿದ್ದರೆ ಪಾಕಿಸ್ತಾನ ಮತ್ತೊಮ್ಮೆ ಹೋಳಾಗಿ ಇಬ್ಭಾಗವಾಗುತ್ತಿತ್ತು. ಆದರೆ ಆ ಅವಕಾಶವನ್ನು ಭಾರತ ಕಳೆದುಕೊಂಡಿತು.
ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ ರಾಜ್ಯಪಾಲ ಆಡಳಿತವನ್ನು ಜಾರಿಗೊಳಿಸಿದಾಗ ಸೇನೆಯು ಆಪರೇಷನ್ ಆಲ್ ಔಟ್ ಎಂದು ಉಗ್ರರ ವಿರುದ್ದ ಕಾರ್ಯಚಾರಣೆಯನ್ನು ಶುರುಮಾಡಿದರು. ಆರಂಭದಲ್ಲಿ ಅತ್ಯುತ್ತಮವಾಗಿ ಕೆಲಸವನ್ನು ನಿರ್ವಹಿಸಿದರೂ ಕೇವಲ ಗಡಿ ನುಸುಳಿ ಬರುವ ಉಗ್ರರಿಗೆ ಸೀಮಿತವಾಯಿತೇ ಹೊರತು ಉಗ್ರರ ನೆಲೆಗಳಿಗೆ ದಾಳಿ ಮಾಡುವ ಯಾವುದೇ ಪ್ರಯತ್ನ ನಡೆಯಲಿಲ್ಲ.
ಮುಂದೆ ಏನು ?
ಒಂದಂತೂ ಒಪ್ಪಿಕೊಳ್ಳಲೇ ಬೇಕು ಸೇನೆಯ ಹಾಗೂ ಕೇಂದ್ರದ ಕೆಲ ಕಠಿಣ ಕ್ರಮಗಳಿಂದ ಉಗ್ರ ಸಂಘಟನೆಗೆ ಸೇರುವ ಕಾಶ್ಮೀರಿ ಯುವಕರ ಸಂಖ್ಯೆ ಕಡಿಮೆಯಾಗಿ ಮುಖ್ಯವಾಹಿನಿಗೆ ಬರುವಲ್ಲಿ ಯಶಸ್ವಿಯಾದರು. ೨೦೧೭-೧೮ ರಲ್ಲಿ ಜೈಶ್-ಏ-ಮೊಹಮ್ಮದ್ ಸಂಘಟನೆ ಹಾಗೂ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯಲ್ಲಿ ಒಟ್ಟು ಉಗ್ರರ ಸಂಖ್ಯೆ ಕೇವಲ ೧೦ಕ್ಕೆ ಇಳಿದಿತ್ತು. ಸೇನೆಯ ಕಾರ್ಯಚರಣೆಗಳಿಗೆ ಪತರಗುಟ್ಟಿದ್ದ ಉಗ್ರ ಸಂಘಟನೆಗಳು ಭದ್ರತೆಯ ಲೋಪದ ಲಾಭವನ್ನು ಪಡೆದು ವಿಧ್ವಂಸಕ ಕೃತ್ಯಗಳನ್ನು ನಡೆಸಿ ತಮ್ಮ ಇರುವಿಕೆಯನ್ನು ತೋರಿಸಿದರು.
ಇನ್ನು ಕೇಂದ್ರ ಸರ್ಕಾರ ಕೈ ಕಟ್ಟಿ ಕೂರುವ ಹಾಗಿಲ್ಲ, ಈಗಾಗಲೇ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟು ಸೈನಿಕರ ಮನೋಬಲವನ್ನು ಹೆಚ್ಚಿಸಿದ್ಧಾರೆ. ಅಲ್ಲದೆ ರಾಜತಾಂತ್ರಿಕವಾಗಿ ಆಮದು ಶುಲ್ಕವನ್ನು ಹೆಚ್ಚಿಸಿ ಪಾಕಿಸ್ತಾನಕ್ಕೆ ಭಾರತವು ಬಿಸಿಯನ್ನೇ ಮುಟ್ಟಿಸಿದೆ. ಸರ್ಜಿಕಲ್ ಸ್ಟ್ರೈಕ್ ಅಂತಹ ಕಾರ್ಯಚರಣೆಗೆ ಹಲವಾರು ರೀತಿಯ ಯೋಜನೆಗಳು ಬೇಕಾಗಿರುವುದರಿಂದ ಇನ್ನಷ್ಟು ವ್ಯವಸ್ಥಿತವಾಗಿ ಯೋಜನೆಗಳು ರೂಪಿಸಿ ಉಗ್ರರನ್ನು ಬೇರು ಸಮೇತ ಕಿತ್ತು ಹಾಕಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ದೇಶದೊಳಗಿನ ಉಗ್ರರನ್ನು ಮಟ್ಟ ಹಾಕಲು ದೇಶದ್ರೋಹದ ಕಾನೂನಿನ ಬಿಗಿಯನ್ನು ಮತ್ತಷ್ಟು ಬಲಗೊಳಿಸಿ ಅಂತಹವರನ್ನು ಮಟ್ಟ ಹಾಕುವ ಕೆಲಸವಾಗಬೇಕು. ಇಲ್ಲವಾದರೆ ಇದೇ ವ್ಯಕ್ತಿಗಳು ನಾಳೆ ನಮಗೆ ನಮ್ಮ ಭಾರತದಲ್ಲಿ ಮತ್ತೊಂದು ಪಾಕಿಸ್ತಾನ ಬೇಕೆಂದು ಬೊಬ್ಬೆ ಹಾಕಿ ನಮ್ಮ ಐಕ್ಯತೆಗೆ ಭಂಗ ತರುವ ಕೆಲಸವನ್ನು ಮಾಡದೆ ಇರಲಾರರು.