ಲಡಾಖ್ನಲ್ಲಿ ಚೀನೀ ಕಾಸೂ ಕೇಡು, ತಲೆಯೂ ಬೋಳು?
– ಪ್ರೇಮಶೇಖರ
ಭಾಗ – 2
ಜೂನ್ 15ರ ಘರ್ಷಣೆ ಮತ್ತು ಅದರಿಂದಾಗಿ ಎರಡೂ ಕಡೆ ಘಟಿಸಿದ ಪ್ರಾಣಹಾನಿಯಿಂದಾಗಿ ಉಂಟಾದ ವಿಷಮ ಪರಿಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಭಾರತೀಯ ಮತ್ತು ಚೀನೀ ಸೇನೆಗಳ ನಡುವೆ ಜೂನ್ 22ರಂದು ಲೆಫ್ಥಿನೆಂಟ್ ಜನರಲ್ ಮಟ್ಟದ ಮಾತುಕತೆಗಳು ನಡೆದು, ಹತೋಟಿ ರೇಖೆಯಲ್ಲಿ ಮುಖ್ಯವಾಗಿ ಗಲ್ವಾನ್ ಕಣಿವೆಯಲ್ಲಿ ಶಾಂತಿ ಕಾಪಾಡಲು ಎರಡೂ ಪಕ್ಷಗಳು ಒಮ್ಮತಕ್ಕೆ ಬಂದವು. ಜೂನ್ 6ರ ಒಪ್ಪಂದವನ್ನು ಚೀನಾ ಉಲ್ಲಂಘಿಸಿ ಘರ್ಷಣೆಗಳಿಗೆ ಕಾರಣವಾಗಿದ್ದರ ಹಿನ್ನೆಲೆಯಲ್ಲಿ ಹೊಸ ಒಪ್ಪಂದದ ಬಾಳಿಕೆಯ ಬಗ್ಗೆ ಪ್ರಶ್ನೆಗಳೆದ್ದರೂ ಈ ಬಾರಿ ಚೀನಾದಿಂದ ಹಿಂದಿನ ವಿಶ್ವಾಸಘಾತಕತನ ಮರುಕಳಿಸಲಾರದು ಎಂಬ ಆಶಾಭಾವನೆಯನ್ನೂ ಮೂಡಿಸುವ ಕಾರಣಗಳು ನಮ್ಮೆದುರಿಗಿದ್ದವು.
ವಸ್ತುಸ್ಥಿತಿಯನ್ನು ಹೊರಜಗತ್ತಿನಿಂದ ಮುಚ್ಚಿಡಲು ಚೀನಾ ಅದೆಷ್ಟೇ ಹೆಣಗಿದರೂ ಜೂನ್ ತಿಂಗಳಲ್ಲಿ ದೇಶದ ಆಂತರಿಕ ಸಂಕಷ್ಟಗಳು ಮಿತಿಮೀರಿದ ಬಗೆಗಿನ ವಿವರಗಳು ನಮಗೆ ತಿಳಿಯತ್ತಲೇ ಇವೆ. ಜೂನ್ 11ರಂದು ಆರಂಭವಾದ ವಾರ್ಷಿಕ ಮಳೆ ದೇಶದ ಮೂರನೆಯ ಎರಡು ಭಾಗಗಳಲ್ಲಿ ಅಗಾಧ ಪ್ರಮಾಣದ ಪ್ರವಾಹ ಮತ್ತು ಭೂಕುಸಿತಗಳನ್ನುಂಟು ಮಾಡುತ್ತಿದೆ. ಇಂತಹ ಭಾರಿ ಮಳೆಯನ್ನು ಚೀನಾ ದೇಶ 1940ರ ನಂತರ ಕಂಡಿರಲಿಲ್ಲಂತೆ. ಈ ಪ್ರಾಕೃತಿಕ ವಿಕೋಪ ಬೆಳೆಗಳಿಗೆ ವ್ಯಾಪಕ ಹಾನಿ ಮಾಡುವುದರ ಜತೆಗೆ ಸಾರಿಗೆ ಸಂಪರ್ಕವ್ಯವಸ್ಥೆಯನ್ನೂ ಹಾಳುಗೆಡವಿದೆ. ಇದು ಈಗಾಗಲೇ ಕೆಟ್ಟಿರುವ ಆಹಾರಪೂರೈಕೆಯನ್ನು ಮತ್ತಷ್ಟು ಬಿಗಡಾಯಿಸಿದೆ. ಈ ನಡುವೆ ಯಾಂಗ್ಟ್ಝೆ ನದಿಗೆ ಕಟ್ಟಲಾಗಿರುವ ಬೃಹತ್ ಅಣೆಕಟ್ಟು ಕುಸಿಯುವ ಅಪಾಯ ಉಂಟಾಗಿದೆ. ಜಗತ್ತಿನ ಅತಿ ದೊಡ್ಡ ಅಣೆಕಟ್ಟುಗಳಲ್ಲೊಂದಾದ ಈ “ತ್ರೀ ಗಾರ್ಜಸ್ ಡ್ಯಾಮ್” ನಿಜಕ್ಕೂ ಕುಸಿದರೆ 24 ಪ್ರಾಂತ್ಯಗಳ ನಲವತ್ತು ಕೋಟಿ ಜನರ ಜೀವಗಳು ಅಪಾಯಕ್ಕೀಡಾಗುತ್ತವೆ. ಅಪಾಯವನ್ನು ತಡೆಯುವ ಕ್ರಮವಾಗಿ ಅಣೆಕಟ್ಟೆಯ ಮೇಲಿನ ನೀರಿನ ಒತ್ತಡವನ್ನು ಕಡಿಮೆಗೊಳಿಸಲೆಂದು ಸರ್ಕಾರ ಜೂನ್ 29ರಂದು ಏಕಾಏಕಿ ಗೇಟ್ಗಳನ್ನು ತೆರೆದಿದೆ. ಆದರೆ ಮುನ್ಸೂಚನೆ ನೀಡದೆ ಹಾಗೆ ಮಾಡಿದ್ದರಿಂದಾಗಿ ನದಿಯುದ್ದಕ್ಕೂ ಉಕ್ಕಿದ ಪ್ರವಾಹಕ್ಕೆ ಹಲವಾರು ಹಳ್ಳಿ ಪಟ್ಟಣಗಳ ಲಕ್ಷಾಂತರ ಜನ ಸಿಲುಕಿಹೋದರು. ಪ್ರವಾಹ ಮತ್ರು ವಿದ್ಯುದಾಘಾತದಿಂದ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ.
ಇದರ ಜತೆಗೆ ಕೊರೋನಾ ಸೋಂಕು ದೇಶದೆಲ್ಲೆಡೆ ಮತ್ತಷ್ಥು ಉಗ್ರವಾಗಿದೆ. ರಾಜಧಾನಿ ಬೀಜಿಂಗ್ ದೊಡ್ಡ ವೂಹಾನ್ ಆಗಿ ಬದಲಾಗಿಹೋಗಿದೆ. ದಿನೇ ದಿನೇ ಅಂಕೆಮೀರಿ ಹೆಚ್ಚುತ್ತಲೇ ಇರುವ ಸೋಂಕಿತರನ್ನು ಉಪಚರಿಸಲು ರಾಜಧಾನಿಯ ಆಸ್ಪತ್ರೆಗಳಿಗೆ ಸಾಧ್ಯವಾಗುತ್ತಿಲ್ಲ. ನಗರದ 70% ಜನತೆಗೆ ಆಹಾರಪದಾರ್ಥಗಳನ್ನು ಪೂರೈಸುವ ಮಾರುಕಟ್ಟೆಗಳು ಸೋಂಕಿನ ಪರಿಣಾಮವಾಗಿ ಜೂನ್ ಆರಂಭದಲ್ಲಿ ಮುಚ್ಚಲ್ಪಟ್ಟ ಕಾರಣ ಸಾಮಾನ್ಯ ಜನತೆ ಅತೀವ ಕಷ್ಥಕ್ಕೀಡಾಗಿದ್ದಾರೆ. ಈ ನಡುವೆ ಲಾಕ್ಡೌನ್ ಜಾರಿಗೊಳಿಸುವ ಅತ್ಯುತ್ಸಾಹದಲ್ಲಿಯೋ ಅಥವಾ ಸರ್ಕಾರೀ ಆದೇಶದ ಪಾಲನೆಯ ಮೇರೆಗೋ ಪೊಲೀಸರು ನಗರದ ಕೆಲವೆಡೆ ಜನರನ್ನು ಮನೆಗಳೊಳಗೆ ಕೂಡಿಹಾಕಿ ಅಪಾರ್ಟ್ಮೆಂಟ್ ಕಟ್ಟಡಗಳ ಪ್ರವೇಶದ್ವಾರಗಳನ್ನು ಕಬ್ಬಿಣದ ಪಟ್ಟಿಗಳಿಂದ ಬಂದ್ ಮಾಡಿದ ಕಾರಣ ಜನರ ಸಂಕಷ್ಟಗಳು ಇನ್ನಷ್ಟು ಹೆಚ್ಚಿವೆ. ಈ ನಡುವೆ ಕಮ್ಯೂನಿಸ್ಟ್ ಪಾರ್ಟಿಯ ನೇತಾರರಿಗಷ್ಟೇ ಮೀಸಲಾದ “ಮಿಲಿಟರಿ ಹಾಸ್ಪಿಟಲ್ 301”ಗೇ ಕೊರೋನಾ ಸೋಂಕು ಹರಡಿದ ಸುದ್ಹಿ ಬಂದಿದೆ.
ಎಲ್ಲಕ್ಕಿಂತ ಹೆಚ್ಚು ಕುತೂಹಲಕರ ವಿಷಯವೆಂದರೆ ದೇಶದ ಆಡಳಿತವನ್ನು ತಮ್ಮಲ್ಲಿ ಕೇಂದ್ರೀಕರಿಸಿಕೊಂಡಿರುವ ಅಧ್ಯಕ್ಷ ಕ್ಷಿ ಜಿನ್ಪಿಂಗ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಪಾಲಿಟ್ ಬ್ಯೂರೋ ಸ್ಟ್ಯಾಂಡಿಂಗ್ ಕಮಿಟಿಯ ಏಳು ಜನ ಸದಸ್ಯರು ಎಲ್ಲಿದ್ದಾರೆಂಬುದು! ಅಧ್ಯಕ್ಷ ಜಿನ್ಪಿಂಗ್ ಅವರನ್ನೇ ತೆಗದುಕೊಳ್ಳುವುದಾದರೆ ಅವರು ರಾಜಧಾನಿಯಲ್ಲಿ ಕೊನೆಯ ಬಾರಿ ಕಾಣಿಸಿಕೊಂಡದ್ದು ಜೂನ್ 2ರಂದು, ವಿದ್ವಾಂಸರು ಮತ್ತು ಸಂಶೋಧಕರ ಸಿಂಪೋಸಿಯಂ ಒಂದರಲ್ಲಿ ಮಾತಾಡಿದಾಗ. ಆ ನಂತರ ಅವರು ದೇಶದಲ್ಲಿ ಸಾರ್ವಜನಿಕವಾಗಿ ಕೊನೆಯ ಬಾರಿ ಕಾಣಿಸಿಕೊಂಡದ್ದು ಜೂನ್ 8-10ರ ಆವಧಿಯಲ್ಲಿ, ವಾಯುವ್ಯದ ನಿಂಗ್ಷಿಯಾದಲ್ಲಿ ವ್ಯವಸಾಯ ಮತ್ತು ಪರಿಸರ ಸಂರಕ್ಷಣೆಯ ಕಾರ್ಯಕ್ರಮವೊಂದನ್ನು ಪರಿಶೀಲಿಸಿದಾಗ. ಅದಾದ ಮೇಲೆ ಅವರು ಎಲ್ಲಿಯೂ ಸಾರ್ವಜನಿಕವಾಗಿ ಕಾಣಸಿಕೊಂಡಿಲ್ಲ. ಎರಡು ಬಾರಿ ಆನ್ಲೈನ್ನಲ್ಲಿ ಕಾಣಿಸಿಕೊಂಡಿದ್ದಾರೆ ಅಷ್ಟೇ, ಜೂನ್ 17ರಂದು, “ಚೈನಾ – ಆಫ್ರಿಕಾ ಆಂಟಿ-ಎಪಿಡೆಮಿಕ್ ವಿಡಿಯೋ ಸಮ್ಮಿಟ್”ನಲ್ಲಿ ಮತ್ತು ಜೂನ್ 22ರಂದು “ಚೈನಾ – ಯೂರೋಪ್ ವಿಡಿಯೋ ಸಮ್ಮಿಟ್”ನಲ್ಲಿ. ಈ ಆನ್ಲೈನ್ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದರೂ, ಯಾವ ಸ್ಥಳದಿಂದ ಎಂದು ಕಮ್ಯೂನಿಸ್ಟ್ ಪಾರ್ಟಿಯಾಗಲೀ, ಸರ್ಕಾರವಾಗಲೀ, ಮಾಧ್ಯಮಗಳಾಗಲೀ ಹೇಳಿಲ್ಲ. ಹೀಗೆ ಅಧ್ಯಕ್ಷರು ಎಲ್ಲಿದ್ದಾರೆ ಎಂದು ಹೇಳಲಾಗದ ಸ್ಥಿತಿಯಲ್ಲಿ ಚೀನಾ ಇದೆ ಅಂದರೆ ಒಂದೋ ಅವರು ಕೊರೋನಾ ಸೋಂಕಿಗೊಳಗಾಗಿ ರಾಜಧಾನಿಯ ಮಿಲಿಟರಿ ಹಾಸ್ಪಿಟಲ್ 301ನಲ್ಲಿ ಚಿಕಿತ್ಸೆ ಪಡೆಯುತ್ತಿರಬಹುದು ಅಥವಾ ಕೊರೋನಾ ಸೋಂಕು ಬೀಜಿಂಗ್ ನಗರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವುದರಿಂದ ಅವರು ರಾಜಧಾನಿಯನ್ನೇ ತೊರೆದು ತಮ್ಮ ಪಾಲಿಟ್ ಬ್ಯೂರೋ ಸಹಚರರೊಂದಿಗೆ ಬೇರೊಂದು ಅಜ್ಞಾತ ಸ್ಥಳದಲ್ಲಿ ಸುರಕ್ಞಿತವಾಗಿರಬಹುದು. ಇಂತಹ ಸ್ಥಿತಿಯಲ್ಲಿ ಭಾರತದೊಡನೆ ಯುದ್ಧಕ್ಕಿಳಿಯುವುದು ಉಚಿತವಲ್ಲ ಎಂದು ಚೀನೀ ನಾಯಕತ್ವ ತಿಳಿಯುತ್ತದೆ ಮತ್ತು ಜೂನ್ 22ರ ಒಪ್ಪಂದಕ್ಕೆ ಬದ್ಧವಾಗಿ ಲಡಾಕ್ನ ಹತೋಟಿ ರೇಖೆಯಲ್ಲಿ ಶಾಂತಿ ಕಾಪಾಡಲು ಚೀನೀ ಸೇನೆ ಮನಸ್ಸು ಮಾಡುತ್ತದೆ ಎಂಬ ನಿರೀಕ್ಷೆ ಮೂಡಿತ್ತು. ಆದರೆ ಮೂರೇ ದಿನಗಳಲ್ಲಿ ಈ ಎಲ್ಲಾ ನಿರೀಕ್ಷೆಗಳು ಹುಸಿಯಾದವು.
ಗಲ್ವಾನ್ ಕಣಿವೆಯಲ್ಲಿನ ಪೆಟ್ರೋಲ್ ಪಾಯಿಂಟ್ (ಪಹರೆ ಬಿಂದು) 14ರಲ್ಲಿ ಯಾವ ಚೀನೀ ಶಿಬಿರವನ್ನು ಭಾರತೀಯ ಸೇನೆ ನಾಶಮಾಡಿ ನಂತರ ಚೀನೀ ಸೇನೆಯನ್ನು ಎದುರಿಸಿತ್ತೋ ಆ ಶಿಬಿರ ಜೂನ್ 25ರಂದು ಮತ್ತೆ ತಲೆಯೆತ್ತಿತು ಮತ್ತು ಅದನ್ನು ‘ರಕ್ಷಿಸಲು’ ಸುಮಾರು ಹತ್ತು ಸಾವಿರ ಚೀನೀ ಸೈನಿಕರು ಅಲ್ಲಿ ಕಾಣಿಸಿಕೊಂಡರು! 1962ರ ಯದ್ಧದ ನಂತರ ಹತೋಟಿ ರೇಖೆಯಲ್ಲಿ ಇಷ್ಟು ಭಾರಿ ಪ್ರಮಾಣದ ಸೇನಾ ಜಮಾವಣೆಯನ್ನು ಚೀನೀಯರು ಮಾಡಿದ್ದು ಇದೇ ಮೊದಲು. ಇನ್ನೂ ಅತಂಕಕಾರಿ ವಿಷಯವೆಂದರೆ ಚೀನೀ ಸೇನೆ ಉತ್ರರದ ದೆಪ್ಸಂಗ್ ಪ್ರದೇಶದಲ್ಲಿ ಹೊಸದಾಗಿ ಅತಿಕ್ರಮಣಕ್ಕೆ ಮುಂದಾಯಿತು. ಅಂದರೆ ಚೀನೀ ಸೇನೆ ಮೂರೇ ದಿನಗಳ ಹಿಂದಿನ ಒಪ್ಪಂದವನ್ನು ಗಾಳಿಗೆ ತೂರಿ ಭಾರಿ ಪ್ರಮಾಣದ ಸೇನಾ ಕಾರ್ಯಾಚರಣೆಗೆ ತಯಾರಾಗಿದೆ ಎನ್ನುವುದು ಸಿದ್ಧವಾಯಿತು. ಆಂತರಿಕ ಪ್ರಾಕೃತಿಕ ವಿಕೋಪ ಹಾಗೂ ಉಲ್ಪಣಗೊಂಡ ಮಹಾಮಾರಿ, ಪೂರ್ವ ತೀರದಲ್ಲಿ ಸಜ್ಜಾಗಿ ನಿಂತಿರುವ ಶತ್ರುಗಳ ಸೇನೆ ಚೀನೀಯರನ್ನು ಧೃತಿಗೆಡಿಸಿಯೇ ಇಲ್ಲ!
ಚೀನಾದ ಈ ಧೂರ್ತ ಹಾಗೂ ಹೊರನೋಟಕ್ಕೆ ಹುಚ್ಚು ಉತ್ಸಾಹದಂತೆ ಕಾಣುವ ನಡೆಗಳನ್ನೊಮ್ಮೆ ಸೂಕ್ಷ್ಮವಾಗಿ ವಿಶ್ಲೇಸಿಸೋಣ. 1962ರ ಯುದ್ಧದಲ್ಲಿ ಪೂರ್ವ ವಲಯದ ಅರುಣಾಚಲ ಪ್ರದೇಶಲ್ಲಿ ಚೀನೀಯರು ಬಹುದೂರ ಒಳನುಗ್ಗಿ ಬಂದರೂ ಹಿಮಾಲಯದ ದಕ್ಷಿಣದ ಯಾವುದೇ ಪ್ರದೇಶವನ್ನು ಚಳಿಗಾಲದಲ್ಲಿ ತಮ್ಮ ಕೈಯಲ್ಲಿಟ್ಟುಕೊಳ್ಳುವುದು ಸಾಧ್ಯವಾಗಲಾರದು ಎಂದರಿವಾದ್ದರಿಂದ ಎಲ್ಲ ಆಕ್ರಮಿತ ಪ್ರದೇಶಗಳನ್ನೂ ತೊರೆದು ಓಡಿಹೋದರು. ನಂತರವೂ ಅವರ ಆಟಗಳು ನಡೆಯದೇ ಹೋದದ್ದು ಪೂರ್ವ ವಲಯದಲ್ಲೇ. 1967ರಲ್ಲಿ ಸಿಕ್ಕಿಂ ಗಡಿಯಲ್ಲಿ ಅವರು ದುಸ್ಸಾಹಸ ಪ್ರದರ್ಶಿಸಹೊರಟಾಗ ಭಾರತೀಯ ಸೇನೆಯಿಂದ ಭಾರಿ ಹೊಡೆತ ತಿಂದದ್ದಲ್ಲದೇ ಒಂದಷ್ಟು ಪ್ರದೇಶವನ್ನೂ ಕಳೆದುಕೊಂಡರು. 1986-87ರ ಚಳಿಗಾಲದಲ್ಲಿ ಅರುಣಾಚಲ – ಟಿಬೆಟ್ ಗಡಿಯಲ್ಲಿ ಘಟಿಸಿದ ಘರ್ಷಣೆಗಳಲ್ಲಿ ಚೀನೀಯರು ನೆಲವನ್ನು ಕಳೆದುಕೊಳ್ಳದಿದ್ದರೂ ಸೈನಿಕರ ಸಾವುನೋವನ್ನಂತೂ ಭಾರತೀಯ ಸೇನೆಗಿಂತಲೂ ಹೆಚ್ಚಾಗಿ ಅನುಭವಿಸಬೇಕಾಯಿತು. ಹೀಗೆ ಪೂರ್ವ ವಲಯದಲ್ಲಿ ಮತ್ತೆಮತ್ತೆ ಹಿನ್ನಡೆ ಅನುಭವಿಸಿದರೆ ಅವರೆಲ್ಲಾ ಯೋಜನೆಗಳು ಯಶಸ್ವಿಯಾದದ್ದು ಪಶ್ಚಿಮ ವಲಯದಲ್ಲಿ. 1962ರ ಯದ್ಧದಲ್ಲಿ ಚೀನೀ ಸೇನೆ ಬೇಕಾಬಿಟ್ಡಿಯಾಗಿ ಮೇಲುಗೈ ಸಾಧಿಸಿಕೊಂಡು ತಮಗೆ ಬೇಕಾದ ಪ್ರದೇಶಗಳಲ್ಲವನ್ನೂ ನಿರಾಯಾಸವಾಗಿ ಆಕ್ರಮಿಸಿಕೊಂಡದ್ದು ಪಶ್ಚಿಮ ವಲಯದ ಲಡಾಕ್ನಲ್ಲಿ. ಆ ನಂತರವೂ 1999 (ಪಂಗೊಂಗ್ ತ್ಸೋ), 2008 (ಕೊಂಗ್ಕಾ), 2013(ದೆಪ್ಸಂಗ್) ಇಲ್ಲೆಲ್ಲಾ ಭಾರತೀಯ ಸೇನೆಯ ಮೇಲೆ ಅವರು ಮೇಲುಗೈ ಸಾಧಿಸಿದ್ದು ಲಡಾಕ್ನಲ್ಲೇ. ಅವರ ಈ ಮೇಲುಗೈ ಮೊತ್ತಮೊದಲ ಬಾರಿಗೆ ಸಡಿಲಾಗುತ್ತಿರುವುದು ಈಗ.
ಪಶ್ಚಿಮ ವಲಯದಲ್ಲಿನ ಅಸಮತೋಲನವನ್ನು ಸರಿದೂಗಿಸಿಕೊಳ್ಳಲು ಭಾರತ 1962ರ ಯುದ್ಧದ ಮರುಕ್ಷಣವೇ ಪ್ರಯತ್ನಿಸಿತೇನೋ ನಿಜ. ಕಾರಾಕೊರಂ ಕಣಿವೆಗೆ ಹತ್ತಿರದ ದೌಲತ್ ಬೇಗ್ ಓಲ್ದಿ(ಡಿಬಿಓ)ಯಲ್ಲಿ ಭಾರತ ಸೇನಾ ಠಿಕಾಣೆಯ ಜತೆಗೆ ಯುದ್ಧವಿಮಾನಗಳಿಗೆ ಅನುಕೂಲವಾಗುವ ರನ್ವೇಯನ್ನು 1964ರಲ್ಲಿ ನಿರ್ಮಿಸಿತು. ಅಂದು ಪಾಕಿಸ್ತಾನಿ ಹಿಡಿತದಲ್ಲಿದ್ದ ಸಿಯಾಚಿನ್ ಗ್ಲೇಷಿಯರ್ ಮತ್ತು ಚೀನೀ ಆಕ್ರಮಿತ ಆಕ್ರಮಿತ ಅಕ್ಸಾಯ್ ಚಿನ್ಗಳ ನಡುವಿರುವ ಡಿಬಿಓ ಸಾಮರಿಕವಾಗಿ ಬಾರತಕ್ಕೆ ಬಹಳ ಅನುಕೂಲವಾದ ಆಯಕಟ್ಟಿನ ಸ್ಥಳವೇನೋ ನಿಜ. ಆದರೆ ಅಲ್ಲಿಗೆ ತಲುಪುವುದೇ ಭಾರತೀಯರಿಗಿದ್ದ ಬಹುದೊಡ್ಡ ತೊಡಕು. ರಸ್ತೆಯಂತೂ ಇರಲೇ ಇಲ್ಲ, ಪುಟ್ಟ ರನ್ವೇ ಇದ್ದರೂ ಪ್ರತಿಕೂಲ ಹವಾಮಾನದಿಂದಾಗಿ ಅಲ್ಲಿ ವಿಮಾನಗಳು ಬೇಕೆಂದಾಗ ಇಳಿಯಲೂ ಅವಕಾಶವಿರಲಿಲ್ಲ. ಪರಿಣಾಮವಾಗಿ ನಾಲ್ಕೂವರೆ ದಶಕಗಳವರೆಗೆ ಡಿಬಿಓ ಠಿಕಾಣೆಯನ್ನು ಭಾರತೀಯ ಸೇನೆ ಸರಿಸುಮಾರು ಮರೆತೇಬಿಟ್ಟಿತ್ತು. ಹೀಗಾಗಿ ಹತೋಟಿ ರೇಖೆಯುದ್ಕಕ್ಕೂ ಚೀನೀಯರದೇ ನಿರಂತರ ಮೇಲುಗೈ.
ಡಿಬಿಓನತ್ತ ಭಾರತ ಮತ್ತೆ ಹೊರಳಿದ್ದು 200-08ರಲ್ಲಿ. ಲೆಹ್ನಿಂದ ಅಲ್ಲಿಗೆ ರಸ್ತೆ ನಿರ್ಮಿಸಲು ಪ್ರಧಾನಿ ಮನಮೋಹನ್ ಸಿಂಗ್ ಮುಂದಾದರೂ ಅವರದೇ ಸಹೋದ್ಯೋಗಿಗಳು ಅವರ ಯೋಜನೆಗೆ ಅಡ್ಡಗಾಲು ಹಾಕಿದರು. ಕಾಂಗ್ರೆಸ್ ಮತ್ತು ಚೀನೀ ಕಮ್ಯೂನಿಸ್ಡ್ ಪಾರ್ಟಿಯ ನಡುವೆ 2008ರಲ್ಲಿ ನಡೆದ, ರಾಹುಲ್ ಗಾಂಧಿ ಸಹಿ ಹಾಕಿದ ರಹಸ್ಯ ಒಪ್ಪಂದ ಇದಕ್ಕೆ ಕಾರಣವಿರಬಹುದು. ಆದರೆ ಮೋದಿ ಸರ್ಕಾರ 2015ರಲ್ಲಿ ರಸ್ತೆ ನಿರ್ಮಾಣವನ್ನು ಕೈಗೆತ್ತಿಕೊಂಡು ಇಂದು ಯಶಸ್ವಿ ಮುಕ್ತಾಯದ ಹಂತಕ್ಕೆ ತಂದು ನಿಲ್ಲಿಸಿದೆ. ನೂರಾರು ಕಲ್ವರ್ಟ್ಗಳು ಮತ್ತು ಸೇತುವೆಗಳ ಮೇಲೆ ಸಾಗುವ 255 ಕಿಲೋಮೀಟರ್ ಉದ್ದದ ಈ ದರ್ಪುಕ್-ಶೈಯೋಕ್-ದೌಲತ್ ಬೇಗ್ ಓಲ್ದಿ ರಸ್ತೆ (ಡಿಎಸ್ಡಿಬಿಓ ರೋಡ್) ಒಂದು ಎಂಜಿನೀರಿಂಗ್ ಅದ್ಭುತ. ಹಿಂದೆ ಲೆಹ್ನಿಂದ ಗಲ್ವಾನ್ ಕಣಿವೆಗೆ ತಲುಪಲು ನಮ್ಮ ಸೈನಿಕರಿಗೆ 15-16 ದಿನಗಳು ತಗುಲುತ್ತಿದ್ದವು ಮತ್ತು ಅವರು ಬಹಳಷ್ಟು ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಬೇಕಾಗುತ್ತಿತ್ತು. ಇಂದು ಅದೇ ದೂರವನ್ನವರು ಮಿಲಿಟರಿ ವಾಹನದಲ್ಲಿ 2-3 ದಿನಗಳಲ್ಲಿ ಕ್ರಮಿಸಿಬಿಡಬಹುದು. ಹೀಗಾಗಿ ಪಶ್ಚಿಮ ವಲಯದ ಹತೋಟಿ ರೇಖೆಯ ಮೇಲೆ ತಮ್ಮ ಹಿಡಿತ ಕಳೆದುಹೋಗಬಹುದೆಂಬ ಭಯ ಚೀನೀಯರನ್ನೀಗ ಮೊಟ್ಟಮೊದಲ ಬಾರಿಗೆ ಕಾಡತೊಡಗಿದೆ, ಅದೂ ಪಾಕ್ ಆಕ್ರಮಿತ ಕಾಶ್ಮೀರವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಭಾರತ ಕಾರ್ಯಯೋಜನೆ ರೂಪಿಸುತ್ತಿರುವಾಗ! ಒಂದುವೇಳೆ ಗಿಲ್ಗಿಟ್-ಬಾಲ್ಟಿಸ್ತಾನ್ ಭಾರತದ ವಶವಾಗಿ ಲಡಾಕ್ ನ ಭಾಗವಾದರೆ ಅಲ್ಲಿಗೆ ಚೀನಾ-ಪಾಕಿಸ್ತಾನ್ ಸಂಪರ್ಕ ಕತ್ತರಿಸಿಹೋಗುತ್ತದೆ, ಅದರೊಂದಿಗೆ “ಚೈನಾ – ಪಾಕಿಸ್ತಾನ್ ಇಕನಾಮಿಕ್ ಕಾರಿಡಾರ್” ಹಾಳುಬಿದ್ದು ಅದರ ಮೇಲೆ ತಾನು ಸುರಿದಿರುವ 60 ಬಿಲಿಯನ್ ಡಾಲರ್ ಅಗಾಧ ಮೊತ್ತವನ್ನು ಚೀನಾ ಮರೆತುಬಿಡಬೇಕಾಗುತ್ತದೆ! ಜತೆಗೆ ಭಾರತದ ಹೊಸ ರಸ್ತೆಯಿಂದಾಗಿ ಎಲ್ಎಸಿಯಲ್ಲೂ ತನ್ನ ಮೇಲುಗೈಯನ್ನು ಚೀನಾ ಕಳೆದುಕೊಳ್ಳುತ್ತದೆ. ಕಾಸೂ ಕೇಡು, ತಲೆಯೂ ಬೋಳು ಎನ್ನುವಂತಹ ಪರಿಸ್ಥಿತಿ ಇದು.
ಹೀಗಾಗಿಯೇ ಚೀನಾ ಡಿಎಸ್ಡಿಬಿಓ ರಸ್ತೆಯನ್ನು ಹಾಳುಗೆಡವಲು, ಸಾಧ್ಯವಾದರೆ ಅದನ್ನು ತನ್ನ ನಿಯಂತ್ರಣಕ್ಕೇ ತೆಗೆದುಕೊಳ್ಳಲು ಶತಾಯಗತಾಯ ಪ್ರಯತ್ನ ಆರಂಭಿಸಿದೆ. ಗಲ್ವಾನ್ ಕಣಿವೆಯಲ್ಲಿ ಹತೋಟಿ ರೇಖೆಯಿಂದ ಶೈಯೋಕ್ ನದಿ – ಗಲ್ವಾನ್ ನದಿ ಸಂಗಮಕ್ಕೆ ಎಂಟು ಕಿಲೋಮೀಟರ್ ಅಷ್ಟೇ ಅಂತರ. ತಾನು ಅಲ್ಲಿಯವರೆಗೆ ತಲಪಿದರೆ ಡಿಎಸ್ಡಿಬಿಓ ರಸ್ತೆಯ ಕೊರಳು ತನ್ನ ಕೈಗೆ ಸಿಕ್ಕಿದಂತೆ ಎಂದು ಚೀನಾ ಸರಿಯಾಗಿಯೇ ಲೆಕ್ಕಹಾಕಿದೆ. ಅದಕ್ಕಾಗಿ ಪೂರ್ಣ ತಯಾರಿಯೊಂದಿಗೆ ಚೀನೀ ಸೇನೆ ಮೇ ಅಂತ್ಯದ ಹೊತ್ತಿಗೆ ಹತೋಟಿ ರೇಖೆ ದಾಟಿ ಐದು ಕಿಲೋಮೀಟರ್ ಒಳನುಗ್ಗಿ ಬಂದಿದೆ. ಶೈಯೋಕ್ ನದಿಗೆ ಇನ್ನು ಮೂರು ಕಿಲೋಮೀಟರ್ ಅಷ್ಟೇ! ಶೈಯೋಕ್ ಅಂದರೆ ಲದಾಖಿ ಭಾಷೆಯಲ್ಲಿ ಸಾವು ಎಂದರ್ಥ. ಜೂನ್ ಮೊದಲವಾರದಲ್ಲಿ ಚೀನೀ ಸೇನೆಯನ್ನು ಹಿಂದಕ್ಕಟ್ಟಿದ ಭಾರತೀಯ ಸೇನೆ ಜೂನ್ 15ರಂದು ಅವರ ಎಲ್ಲೆಯೊಳಗೇ ನುಗ್ಗಿ ಚೀನೀಯರಿಗೆ 1987ರ ನಂತರ ಮೊಟ್ಟ ಮೊದಲ ಬಾರಿಗೆ ‘ಶೈಯೋಕ್’ನ ಅಂದರೆ ಸಾವಿನ ರುಚಿ ತೋರಿಸಿದೆ.
ಯಾವುದೇ ಕಾರಣದಿಂದ ಇಂದು ತಾವು ಹಿಂತೆಗೆದರೆ ಅತಿಶೀಘ್ರದಲ್ಲಿ ಅಕ್ಸಾಯ್ ಚಿನ್ ಮೇಲಿನ ಹತೋಟಿಯಷ್ಟೇ ಅಲ್ಲ, ಪಾಕಿಸ್ತಾನದ ಜತೆಗಿನ ತಮ್ಮ ಸಂಪರ್ಕವೂ ಕಡಿದುಹೋಗಬಹುದು ಎಂಬ ಆತಂಕ ಚೀನೀ ಸರ್ಕಾರವನ್ನು ಕಾಡುತ್ತಿದೆ. ಹೀಗಾಗಿಯೇ ಅವರು ಕೊರೋನಾ ಸಂಕಷ್ಟ, ಪ್ರಾಕೃತಿಕ ವಿಕೋಪ, ಅಮೆರಿಕಾದ ಬೆದರಿಕೆ ಎಲ್ಲವನ್ನೂ ನಿರ್ಲಕ್ಷಿಸಿ ಭಾರತದ ವಿರುದ್ಧ ಹಠ ತೊಟ್ಟು ನಿಂತಿದ್ದಾರೆ. ಅವರ ತಯಾರಿಗಳೇನು, ಅವುಗಳಿಗೆ ಭಾರತದ ಪ್ರತಿಕ್ರಿಯೆ ಹೇಗಿದೆ, ಹೇಗಿರಬೇಕು ಮತ್ತು ಭಾರತ – ಚೀನಾ ಘರ್ಷಣೆಯಿಂದಾಗಿ ಜಾಗತಿಕ ರಾಜಕಾರಣ ಹಿಡಿಯಬಹುದಾದ ದಿಕ್ಕು- ಇವುಗಳ ವಿಶ್ಲೇಷಣೆ ಮುಂದಿನವಾರ, ಲೇಖನದ ಮೂರನೆಯ ಹಾಗೂ ಕೊನೆಯ ಕಂತಿನಲ್ಲಿ.