ದನಗಾಹಿ ಬಾಲಕ ರಾಷ್ಟ್ರರಥ ಚಾಲಕನಾದಲ್ಲಿ ಇದರಲ್ಲೇನಿದೆ ಅಚ್ಚರಿ?
– ಸಂತೋಷ್ ತಮ್ಮಯ್ಯ
ಆಚಾರ್ಯ ಚಾಣಕ್ಯರಿಗೆ ಚಂದ್ರಗುಪ್ತ ಮೌರ್ಯ ಸಿಗುವವರೆಗೂ ಆತ ಯಕಶ್ಚಿತ್ ಒಬ್ಬ ದನಗಾಹಿ ಬಾಲಕ. ವಿದ್ಯಾರಣ್ಯರು ಭೇಟಿಯಾಗುವವರೆಗೂ ಹಕ್ಕ-ಬುಕ್ಕರು ಗುರಿ ಇಲ್ಲದೆ ಕಾಡುಮೇಡುಗಳನ್ನು ಅಲೆಯುತ್ತಿದ್ದ ವೀರರು. ಅಷ್ಟೇ ಏಕೆ? ಸುದತ್ತ ಮುನಿಗಳು “ಪೊಯ್ ಸಳ” ಎನ್ನುವವರೆಗೂ ಸಳನೆಂಬವನು ಇನ್ನೂ ಹಾಲುಗಲ್ಲದ ಬಾಲಕ. ಗುರುಗೋವಿಂದ ಸಿಂಹರು ಬಲಿದಾನಕ್ಕೆ ಕರೆ ನೀಡದೇ ಇರುತ್ತಿದ್ದರೆ ‘ಪಂಚಪ್ಯಾರೇ’ಗಳೂ ಹುಟ್ಟುತ್ತಿರಲಿಲ್ಲ, ವೀರ ಖಾಲ್ಸಾ ಪರಂಪರೆಯೂ ಮುಂದುವರಿತ್ತಿರಲಿಲ್ಲ. ಹೀಗೆ ಭಾರತದ ಪ್ರತೀಯೊಂದು ಪರಂಪರೆಯ, ಪ್ರತೀಯೊಂದು ಸಂಸ್ಥಾನಗಳ, ಪ್ರತೀಯೊಂದು ರಾಜ ಮನೆತನಗಳ, ಪ್ರತೀಯೊಂದು ಚರಿತ್ರೆಯ ಹಿಂದೆ ಇಂಥದ್ದೊಂದು ವಿಶೇಷತೆ ಇದ್ದೇ ಇರುತ್ತದೆ. ಹಾಗಾಗಿ ನಮಗೆ ಕೃಷ್ಣದೇವರಾಯನಂತೆ ಆತನ ತಂದೆಯ ಹೆಸರು ಗೊತ್ತಿಲ್ಲ, ವಿಕ್ರಮಾತ್ಯನ ಅಪ್ಪನ ಹೆಸರೂ ತಿಳಿದಿಲ್ಲ! ಚರಿತ್ರೆಯೂ ಅವರ ಹೆಸರನ್ನು ಒಡಲಲ್ಲಿಟ್ಟುಕೊಂಡಿಲ್ಲ. ಅದಕ್ಕೆ ಅದನ್ನು ನೆನಪಿಟ್ಟುಕೊಳ್ಳುವ ಆವಶ್ಯಕತೆಯೇ ಬಂದಿಲ್ಲ. ಏಕೆಂದರೆ ಭಾರತವೆಂಬ ಈ ನೆಲ ದನಗಾಹಿ ಬಾಲಕರನ್ನೇ ರಾಷ್ಟ್ರರಥ ಚಾಲಕರನ್ನಾಗಿ ಮಾಡಿದ್ದೇ ಹೆಚ್ಚು. ಮತ್ತು ಹಾಗೆ ಮಾಡಿದ ಜಗತ್ತಿನ ಮೊದಲ ಹಾಗೂ ಅಪರೂಪದ ನೆಲ ಈ ಭಾರತ. ಇಂಥ ಪರಂಪರೆ ಕಾಲಕಾಲಕ್ಕೆ ಮುಂದುವರಿಯುತ್ತಾ ಅವಿಚ್ಛಿನ್ನವಾಗಿ ಬಂದಿದೆ ಎನ್ನುವುದೂ ಈ ನೆಲದ ಇನ್ನೊಂದು ವಿಶೇಷತೆ. ಭಾರತವನ್ನು ಭಾರತವನ್ನಾಗಿ ಉಳಿಸಿದ್ದು ಕೂಡಾ ನೆಲದ ಈ ಗುಣವೇ ಎಂಬುದಕ್ಕೆ ಇಲ್ಲಿ ಸಾಕ್ಷಿಗಳು ಕೂಡಾ ಹಲವು.
ಆಧುನಿಕ ರಾಜಕಾರಣದಲ್ಲಿ ಮೊನ್ನೆ ನಡೆದ ವಿದ್ಯಮಾನವೊಂದು ಅಂಥ ಪರಂಪರೆ ಮುಂದುವರಿಯುತ್ತಿದೆ ಎಂಬುದಕ್ಕೆ ಒಂದು ಉದಾಹರಣೆ ಮಾತ್ರ. ಅಂಥಲ್ಲಿ ಭಾರತೀಯ ಜನತಾ ಪಕ್ಷ ತನ್ನ ಇಬ್ಬರು ಅನಾಮಿಕ ಕಾರ್ಯಕರ್ತರನ್ನು ರಾಜ್ಯಸಭೆಗೆ ಕಳುಹಿಸುತ್ತಿದೆ ಎಂದಾಗ ಅದರಲ್ಲಿ ಮಹದಾಶ್ಚರ್ಯ ಪಡುವಂಥಾದ್ದೇನಿದೆ? ಭಾರತದ ಪರಂಪರೆ ಇರುವುದೇ ಹಾಗೆ ಮತ್ತು ಅಂಥದ್ದೇ ಪರಂಪರೆಯ ಮುಂದುವರಿಕೆಗಾಗಿ ಸ್ಥಾಪನೆಯಾದ ಪಕ್ಷವೊಂದು ತನ್ನ ಸಿದ್ಧಾಂತದ ಆಧಾರದಲ್ಲಿ ಅಂಥದ್ದೊಂದು ನಿರ್ಣಯವನ್ನು ಕೈಗೊಂಡಾಗ ಅಪಾರ್ಥವನ್ನೂ, ಗೊಂದಲವನ್ನೂ ಕಲ್ಪಿಸುವ ಅಗತ್ಯವೇನಿದೆ? ಬಿಜೆಪಿಯಂಥಾ ಪಕ್ಷ ತನ್ನ ಅನಾಮಿಕ-ಸಾಮಾನ್ಯ ಕಾರ್ಯಕರ್ತರನ್ನು ರಾಜ್ಯಸಭೆಗೆ ಕಳುಹಿಸುವುದು ಯಾವ ಕೋನದಲ್ಲಿ ಒಬ್ಬ ನಾಯಕ, ಮತ್ತೊಬ್ಬ ನಾಯಕನ ಮೇಲೆ ಹೂಡಿದ ವಿಷ ಬಾಣವಾಗುತ್ತದೆ? ಯಾವ ರೀತಿಯಲ್ಲಿ ಅದು ಸೇಡು ತೀರಿಸಿಕೊಂಡಂತಾಗುತ್ತದೆ? ಬಹುಶಃ ಆಧುನಿಕ ರಾಜಕಾರಣವನ್ನು ಕಾಂಗ್ರೆಸ್ ಕಣ್ಣಿನಿಂದ ನೋಡುವವರಿಗೆ ಹೀಗನ್ನಿಸಬಹುದೇನೋ! ಆದರೆ ವಾಸ್ತವದಲ್ಲಿ ಈ ನಿರ್ಣಯ ಭಾರತೀಯ ಪರಂಪರೆಯ ಮೂಲ ಪಾಠವನ್ನು ಕೊಂಚವಾದರೂ ಅರಿತವರಿಗೆ ಅಚ್ಚರಿಯೆನಿಸುವುದಿಲ್ಲ. ಯಾರಿಗೆ ಯಾರೂ ಬಾಣ ಹೂಡಿದಂತೆಯೂ ಅನಿಸುವುದಿಲ್ಲ. ಅಸಲಿಗೆ ಭಾರತೀಯ ಜನತಾ ಪಕ್ಷದ ಹುಟ್ಟೇ ಹಾಗಿಲ್ಲ. ಆ ಮೂಲ ‘ಆನಂದ ಭವನ’ವನ್ನು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ್ದರೆಂಬ ಒಂದೇ ಕಾರಣಕ್ಕೆ ಮಗನನ್ನು, ಮೊಮ್ಮಗಳನ್ನು, ಮರಿಮಕ್ಕಳನ್ನು ಪ್ರಧಾನಮಂತ್ರಿಗಳಾಗಿ ಮಾಡುವ ಉದ್ದೇಶದಂತಲ್ಲ ಎಂಬುದನ್ನು ರಾಜಕೀಯ ವಿಶ್ಲೇಷಕರು ಅರ್ಥೈಸಿಕೊಳ್ಳಬೇಕಿತ್ತು. ಆದರೆ ಮಹಾ ಭಯಂಕರವೆಂದುಕೊಳ್ಳುವ ವಿಶ್ಲೇಷಕರುಗಳು ಅದನ್ನರಿಯುವಲ್ಲೇ ಎಡವಿದರು. ವಿಶ್ಲೇಷಕರ ಅರಿವಿನ ಕೊರತೆಯನ್ನು ನೀಗಿಸಲು ಆಧುನಿಕ ರಾಜಕೀಯ ಚರಿತ್ರೆಯಲ್ಲೇ ಹಲವು ಸಾಕ್ಷಿಗಳಿವೆ.
ಇದು ಅಂಥಾ ಸಾಕ್ಷಿಗಳಲ್ಲೊಂದು.
1950ರಲ್ಲಿ ಕಟ್ಟರ್ ಕಾಂಗ್ರೆಸಿಗ, ಹಿರಿಯ ನಾಯಕ ಪುರುಷೋತ್ತಮದಾಸ್ ಟಂಡನ್ ಕಾಂಗ್ರೆಸಿನ ಅಧ್ಯಕ್ಷರಾದರು. ನೆಹರೂ ಜನಪ್ರೀಯತೆ, ಕಾಂಗ್ರೆಸಿನ ಅಸಾಧಾರಣವಾದ ಅಬ್ಬರದ ಅಲೆ ಇದ್ದರೂ ಟಂಡನ್ ಅವರು ರಾಜಕಾರಣದಲ್ಲಿ ಭಾರತೀಯತೆಯನ್ನು ಪ್ರತಿಪಾದಿಸುವ ಅಪರೂಪದ ನಾಯಕರಾಗಿದ್ದರು. ಗಾಂಧೀವಾದಿಗಳಾಗಿದ್ದ ಟಂಡನ್, ಗಾಂಧೀಜಿಯವರ “ವಿಭಿನ್ನ ವಿಚಾರಧಾರೆಯ ಹಲವು ಪಕ್ಷಗಳು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುತ್ತವೆ” ಎಂಬ ವಿಚಾರದಲ್ಲಿ ನಂಬಿಕೆಯನ್ನಿರಿಸಿದ್ದರು. ಈ ಉದ್ದೇಶದಿಂದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಟಂಡನ್ ಆರೆಸ್ಸೆಸ್ ಸ್ವಯಂಸೇವಕರನ್ನು ಕಾಂಗ್ರೆಸಿನೊಳಗೆ ಸೇರಿಸಿಕೊಳ್ಳಬೇಕು ಎಂಬ ಪ್ರಸ್ಥಾವವನ್ನು ಮಂಡಿಸಿದ್ದರು. ಗಾಂಧಿ ಹಂತಕರೆಂಬ ವ್ಯರ್ಥಾರೋಪ ಮತ್ತು ನೆಹರೂ ನರಿಬುದ್ಧಿಯ ಕಾರಣದಿಂದ ಟಂಡನ್ ಅವರ ಪ್ರಸ್ಥಾವಕ್ಕೆ ಕಾಂಗ್ರೆಸಿನಲ್ಲಿ ಭಾರೀ ವಿರೋಧ ವ್ಯಕ್ತವಾಯಿತು. ಸ್ವತಃ ನೆಹರೂ ಅವರೇ ಟಂಡನ್ ಅವರನ್ನು ಕಟುವಾಗಿ ಟೀಕಿಸಿದರು. ಇದರಿಂದ ಟಂಡನ್ ಎಷ್ಟೊಂದು ನೊಂದುಕೊಂಡರೆಂದರೆ ಕಾಂಗ್ರೆಸಿನ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆಯನ್ನು ಸಲ್ಲಿಸಿ ರಾಜಕೀಯ ಸನ್ಯಾಸಕ್ಕೆ ಹೊರಟುಹೋದರು.
ಅಲ್ಲಿಗೆ ರಾಜಕೀಯದಲ್ಲೂ ಭಾರತೀಯತೆ ಇರಬೇಕೆನ್ನುತ್ತಿದ್ದ ಆರೆಸ್ಸೆಸ್ಸಿಗೆ ಕಾಂಗ್ರೆಸಿನ ಬಾಗಿಲು ಶಾಶ್ವತವಾಗಿ ಮುಚ್ಚಿತು.
ಸರಿಯಾಗಿ ಅದೇ ಸಮಯದಲ್ಲಿ ಕಾಂಗ್ರೆಸಿನ ಹಿರಿಯ ನಾಯಕರೂ, ಕೇಂದ್ರ ಸಚಿವರೂ ಆಗಿದ್ದ ಡಾ।। ಶಾಮಪ್ರಸಾದ್ ಮುಖರ್ಜಿಯವರಿಗೂ ಕಾಂಗ್ರೆಸಿನಲ್ಲಿ ವಂಶವಾದವೆಂಬುದು ಅಂಟುಜಾಡ್ಯವಾಗಿ ಬಹುವರ್ಷಗಳ ಕಾಲ ಕಾಡಲಿದೆ ಎಂಬ ವಾಸನೆ ಹತ್ತಿತು. ಅವರೂ ಕಾಂಗ್ರೆಸಿಗೆ ರಾಜಿನಾಮೆ ನೀಡಿ ನೇರ ಬಂದಿದ್ದು ನಾಗಪುರದ ಸಂಘದ ಅಂಗಳಕ್ಕೆ. ಎಲ್ಲಾ ಕ್ಷೇತ್ರಗಳಲ್ಲಿ ರಾಷ್ಟ್ರೀಯತೆ ವ್ಯಾಪಿಸಬೇಕು ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದ ಸಂಘದ ಅಂದಿನ ಸರಸಂಘಚಾಲಕ್ ಗುರೂಜಿ ಗೋಳ್ವಾಲ್ಕರ್ ರೊಡನೆ ಮಾತುಕತೆ ನಡೆಸಿದ ಮುಖರ್ಜಿಯವರಿಗೆ ದಾರಿಯೇನೋ ಸ್ಪಷ್ಟವಾಯಿತು. ಸಂಘದ ಬೆಂಬಲವೂ ಸಿಕ್ಕಿತು. ಆದರೆ ಅಧಿಕಾರದ ಮದ ಮತ್ತು ಶ್ರೀಮಂತ ರಾಜಕಾರಣದ ಅಬ್ಬರದೆದುರಲ್ಲಿ ಸೆಣಸಬಲ್ಲ ಕಾರ್ಯಕರ್ತರು ಮತ್ತು ನಾಯಕರನ್ನೆಲ್ಲಿ ತರುವುದೆಂಬ ಬೃಹದಾಕಾರದ ಪ್ರಶ್ನೆಯೊಂದು ಎದುರಾಯಿತು. ಅದಕ್ಕೂ ಗುರೂಜಿಯವರ ಬಳಿ ಉತ್ತರವಿತ್ತು. ಅವರು ಕೆಲ ಸ್ವಯಂಸೇವಕರನ್ನು ಮುಖರ್ಜಿಯವರೊಡನೆ ಕೆಲಸ ಮಾಡಲು ಸೂಚಿಸಿದರು. ಆದರೆ ಅವರಾರಿಗೂ ರಾಜಕಾರಣದ ಗಂಧಗಾಳಿಯೇ ತಿಳಿದಿರಲಿಲ್ಲ. ಮುಖರ್ಜಿಯವರಾದರೋ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದವರು, ಅಲ್ಲದೆ ಮಂತ್ರಿಗಳಾಗಿದ್ದವರು! ಆದರೆ ಅವರ ಹಿಂದಿರುವವರು ರಾಜಕಾರಣದ L ಬೋರ್ಡುಗಳು! ಅಂದು ಗುರೂಜಿಯವರು ಹಾಗೆ ಕಳುಹಿಸಿದ ಸ್ವಯಂಸೇವಕರಲ್ಲೊಬ್ಬರು ಪಂ.ದೀನದಯಾಳ ಉಪಾಧ್ಯಾಯರು. ವೈಯಕ್ತಿಕ ಬದುಕೆಂಬುದೇ ಇಲ್ಲದ, ಉಟ್ಟಬಟ್ಟೆಯೊಂದನ್ನು ಬಿಟ್ಟು ಬೇರೇನೂ ಇಲ್ಲದ, ಸಂಘದ ಶಾಖೆಯಲ್ಲಿ ಮಕ್ಕಳೊಡನಾಡುತ್ತಿದ್ದ ದೀನದಯಾಳರು ಮುಖರ್ಜಿಯವರ ಜೊತೆ ಕೆಲಸ ಮಾಡಲು ಹೋದಾಗ ಅಹಂಕಾರಿ ಕಾಂಗ್ರೆಸಿಗರು ಮತ್ತು ಮಾತಿನಲ್ಲಿ ಚತುರರಾಗಿದ್ದ ಕಮ್ಯುನಿಸ್ಟರು ಅಂದು ಹೇಗೆ ಹಂಗಿಸಿದ್ದರೆಂದರೆ ಇಂದು ಗಸ್ತಿ ಮತ್ತು ಕಡಾಡಿಯವರನ್ನು ಬಿಜೆಪಿ ರಾಜ್ಯಸಭೆಗೆ ಕಳುಹಿಸಲಿದೆ ಎಂದಾಗ ಹಂಗಿಸಿದಂತೆ!
ಅಂದು ಗುರೂಜಿಯವರು ಕೈಗೊಂಡ ನಿರ್ಧಾರ ಎಷ್ಟೊಂದು ಕಠೋರವಾಗಿತ್ತೆಂದರೆ, ಸ್ವತಃ ದೀನದಯಾಳರಿಗೇ ಅಳುಕು ಆರಂಭವಾಗತೊಡಗಿತ್ತು. ದೀನದಯಾಳರಿಗೆ ತಮ್ಮ ಮಿತಿಯ ಅರಿವಿತ್ತು. ಅದನ್ನು ನೇರ ಗುರೂಜಿಯವರಲ್ಲೇ ಹೇಳಿಕೊಂಡರು. “ನಾನೊಬ್ಬ ಸಂಘದ ಪ್ರಚಾರಕ, ನನಗೆ ರಾಜಕೀಯದ ಬಗ್ಗೆ ಏನೆಂದರೆ ಏನೂ ತಿಳಿಯದು. ಅಲ್ಲಿ ನಾನೇನನ್ನು ತಾನೇ ಮಾಡಬಲ್ಲೆ?” ಅದಕ್ಕೆ ಗುರೂಜಿಯವರ ಉತ್ತರ ಹೀಗಿತ್ತು, “ನಿನಗೆ ರಾಜಕೀಯದ ಬಗ್ಗೆ ಏನೂ ತಿಳಿಯದೆಂದೇ ನಿನ್ನನ್ನು ಅಲ್ಲಿಗೆ ಕಳುಹಿಸುತ್ತಿರುವೆ!”
ಪರಿವ್ರಾಜಕನಿಗೆ ಯಾವ ಕ್ಷೇತ್ರವಾದರೇನು? ರಾಜಕೀಯದ ಬಗ್ಗೆ ಏನನ್ನೂ ತಿಳಿಯದಿದ್ದ ದೀನದಯಾಳರು ಒಂದೂವರೆ ವರ್ಷದಲ್ಲಿ ಹೇಗೆ ಬೆಳೆದರೆಂದರೆ 1952ರಲ್ಲಿ ಜನಸಂಘದ ಪ್ರಧಾನ ಕಾರ್ಯದರ್ಶಿಯಾದರು, ಇತಿಹಾಸಕಾರರಾದರು, ಶಿಕ್ಷಣ ತಜ್ಞರಾದರು, ವಿದೇಶಾಂಗ ನೀತಿನಿಪುಣರಾದರು, ಪ್ರಧಾನ ಮಂತ್ರಿಗಳಿಗೆ ಸಲಹೆ ನೀಡುವಂಥಾದರು, ಸಂಘಟನಾ ಕುಶಲರಾದರು. ಸ್ವತಃ ಮುಖರ್ಜಿಯವರೇ “ನನಗೇನಾದರೂ ಇಬ್ಬರು ದೀನದಯಾಳರು ಸಿಗುವುದಾದರೆ ನಾನು ಭಾರತದ ನಕಾಶೆಯನ್ನೇ ಬದಲಿಸುತ್ತೇನೆ” ಎಂದರು.
ದೀನದಯಾಳರು ರಾಜಕಾರಣದಲ್ಲಿ ಸಾಂಸ್ಕೃತಿಕ ರಾಯಭಾರಿಯಾದರು. ಎಲ್ಲಾ ಕಾಲಕ್ಕೂ ರಾಜಕಾರಣದಲ್ಲಿರಲೇಬೇಕಾದ ಒಂದು ಸ್ಥಾನವನ್ನು ಅವರು ಅಂದು ತುಂಬಿದ್ದರು. 1962ರ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಪ್ರದೇಶದ ಜೌನ್ ಪುರದಲ್ಲಿ ಸ್ಪರ್ಧಿಸಿದಾಗ ರಜಪೂತರ ವಿರುದ್ಧ ಬ್ರಾಹ್ಮಣರನ್ನು ಎತ್ತಿಕಟ್ಟಿ ಸುಲಭವಾಗಿ ಗೆಲ್ಲಬಹುದಾದ ಕ್ಷೇತ್ರವನ್ನು ಸೋತು ಸಿದ್ಧಾಂತವನ್ನು ಗೆಲ್ಲಿಸಿದ್ದರು. ಜನಸಂಘ ಉಳಿದ ಪಕ್ಷಗಳ ರಾಜಕಾರಣಕ್ಕಿಂತ ಸಂಪೂರ್ಣ ವಿಭಿನ್ನ ಎಂಬುದನ್ನು ನಿರೂಪಿಸಿದರು. ಅಂಥಾ ಹಿನ್ನೆಲೆಯ ಸಿದ್ಧಾಂತ ಭಾರತೀಯ ಜನತಾ ಪಕ್ಷದಲ್ಲಿ ಗುಪ್ತಗಾಮಿಯಂತೆ ಹರಿಯುತ್ತದೆ ಎಂಬುದಕ್ಕೆ ರಾಜ್ಯಸಭೆಗೆ ಆರಿಸಿದ ಅಭ್ಯರ್ಥಿಗಳ ಪ್ರಕರಣ ಉದಾಹರಣೆ ಎನಿಸುವುದಿಲ್ಲವೇ? ಎನಿಸಿದರೂ ಕೆಲವರಿಗೆ ಅದನ್ನು ಒಪ್ಪಿಕೊಳ್ಳಲೇಕೆ ಕಷ್ಟವಾಗುತ್ತಿದೆ? ಗಸ್ತಿಯವರ ಉದಾಹರಣೆಯನ್ನೇ ತೆಗೆದುಕೊಳ್ಳಿ, ಕರ್ನಾಟಕದಲ್ಲಿ ಸವಿತಾ ಸಮಾಜ ಯಾವುದೇ ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರಲ್ಲ. ಬಿಜೆಪಿಗೆ ಸವಿತಾ ಸಮಾಜವನ್ನು ಓಲೈಸುವ ಅನಿವಾರ್ಯತೆಯೇ ಇರಲಿಲ್ಲ. ಒಂದು ವೇಳೆ ಇದ್ದಿದ್ದರೂ ಗಸ್ತಿಯವರನ್ನು ಯಾವುದೋ ಪ್ರಾಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಕೈತೊಳೆದುಕೊಳ್ಳಬಹುದಿತ್ತು. ಆದರೆ ಪಕ್ಷ ಅವರನ್ನು ರಾಜ್ಯಸಭೆಗೆ ಕಳುಹಿಸಿ ದೀನದಯಾಳರು ರೂಪಿಸಿದ ಸಂಹಿತೆಯನ್ನು ಪಾಲಿಸಿತು.
ನಿಜ, ದೀನದಯಾಳರ ಕಾಲಾನಂತರ ಭಾರತೀಯ ರಾಜಕಾರಣದಲ್ಲಿ ಸಾಕಷ್ಟು ನೀರು ಹರಿದಿದೆ. ಕಾಂಗ್ರೆಸ್ ನಿರ್ಮಿಸಿದ ರಾಜಕಾರಣದ ನೆಲೆಗಟ್ಟು ರಾಜಕಾರಣದ ಮೇಲೆ ಅದೆಷ್ಟು ಪ್ರಭಾವವನ್ನು ಬೀರಿದೆಯೆಂದರೆ ಕ್ರಮೇಣ ಉಳಿದ ಪಕ್ಷಗಳೂ ಕಾಂಗ್ರೆಸಿನಂತೆಯೇ ಯೋಚಿಸಲಾರಂಭಿಸಿದವು. ಕುದುರೆ ರೇಸಿನಲ್ಲಿ ಗೆಲ್ಲುವ ಕುದುರೆಗೆ ಮಾತ್ರ ಬಾಜಿ ಕಟ್ಟುವಂತೆ ಎಲ್ಲಾ ಪಕ್ಷಗಳೂ ಗೆಲ್ಲುವ ಕುದುರೆಯ ಹಿಂದೋಡಿದವು. ರಾಜಕಾರಣದಲ್ಲಿ ಸಾಂಸ್ಕೃತಿಕತೆಗಿಂತ ಸಂಖ್ಯಾಬಲವೇ ಮುಖ್ಯ ಎಂಬುದು ಬಲವಾಯಿತೋ ಅದರೊಂದಿಗೆ ವ್ಯಕ್ತಿಪೂಜೆಯೂ ಪುಕ್ಕಟೆಯಾಗಿ ಬಂದವು. ಅಂದು ಜೌನ್ಪುರದಲ್ಲಿ ಗೆದ್ದ ಸಿದ್ಧಾಂತ ಜಾತಿ-ಪ್ರಾದೇಶಿಕತೆ-ವಂಶವಾದದೆದುರಲ್ಲಿ ಮಕಾಡೆ ಮಲಗಿತೋ ಎಂದು ಕಾರ್ಯಕರ್ತರು ಮರುಕಪಟ್ಟರು. ಪುಣ್ಯವಶಾತ್ ಬಿಜೆಪಿಯಂಥಾ ಪಕ್ಷ ಇತರರಂತೆ ಸಂಪೂರ್ಣ ಕೆಟ್ಟುಹೋಗುವ ಪಕ್ಷವಲ್ಲ ಎಂಬುದನ್ನು ರಾಜ್ಯಸಭಾ ಅಭ್ಯರ್ಥಿ ಪ್ರಕರಣ ತೋರಿಸಿಕೊಟ್ಟಿದೆ. ಮತ್ತು ರಾಜಕಾರಣದ ಸಿದ್ಧ ಚೌಕಟ್ಟನ್ನು ಮುರಿಯಲು ಬಿಜೆಪಿಯಂಥಾ ಪಕ್ಷಕ್ಕೆ ಮಾತ್ರ ಸಾಧ್ಯ ಎಂಬ ಸಂದೇಶವನ್ನೂ ಈ ಘಟನೆ ನಿರೂಪಿಸಿದೆ. ನಾಯಕನಾದವನೊಬ್ಬನಲ್ಲಿ ನೈತಿಕತೆ, ನಿಸ್ವಾರ್ಥ ಗುಣಗಳಿದ್ದರೆ ಇಂಥವು ರಾಜಕಾರಣದಲ್ಲಿ ತನ್ನಿಂದ ತಾನೇ ಆರಂಭವಾಗುತ್ತವೆ. ಅಂಥಾ ನೈತಿಕತೆಯನ್ನು ವ್ಯಕ್ತಿ ನಿರ್ಮಾಣದ ಮೂಲಕ ಸೃಷ್ಟಿ ಮಾಡುವ ಬಿಜೆಪಿಯಲ್ಲಿ ಮಾತ್ರ ಇದು ಸಾಧ್ಯ. ಹಾಗಾಗಿ ಈ ರಾಜ್ಯಸಭಾ ಸೀಟುಗಳು ಕೇವಲ ಲೆಕ್ಕಾಚಾರದ ಸಂಗತಿಯಾಗಿ ಮಾತ್ರ ಕಾಣುವುದಿಲ್ಲ. ಅದನ್ನು ಭಾರತೀಯ ಪರಂಪರೆಯ ಅವಿಚ್ಛಿನ್ನ ಪರಂಪರೆಯ ಗುಪ್ತಗಾಮಿ ರೂಪವೆನ್ನದೆ ಇರಲಾಗುವುದಿಲ್ಲ.
ಇವೆಲ್ಲವೂ ಸಂಖ್ಯಾಬಲದಿಂದ ರಾಜಕಾರಣವನ್ನು ವಿಶ್ಲೇಷಿಸುವವರಿಗೆ ಪೇಲವ ವಾದಗಳಾಗಿ ಕಾಣಿಸಬಹುದು. ಸಾಮಾನ್ಯ ಕಾರ್ಯಕರ್ತರಿಗೆ ಟಿಕೇಟು ಕೊಟ್ಟರೆ ಅಭಿವೃದ್ಧಿಯಾಗುವುದೇ ಎಂಬ ಪ್ರಶ್ನೆಯೂ ಬರಬಹುದು, ರಾಜ್ಯದ ಪರವಾದ ಸಮರ್ಥ ಮಂಡನೆ ಇಂಥವರಿಂದ ಸಾಧ್ಯವೇ ಎಂಬ ಪ್ರಶ್ನೆಯೂ ಮೂಡಬಹುದು. ಆದರೆ ಏನೂ ನಡೆಯದಿದ್ದರೂ ಚಿಂತೆಯಿಲ್ಲ. ಈ ಎರಡು ಅಭ್ಯರ್ಥಿಗಳ ಘೋಷಣೆ ಜಾತಿಯನ್ನು ಮೀರಿದೆ, ಪ್ರಾದೇಶಿಕತೆಯನ್ನು ಲೆಕ್ಕಿಸದೆ ಮುನ್ನಡೆದಿದೆ, ವಂಶವಾದಕ್ಕೆ ಸೆಡ್ಡುಹೊಡೆದಿದೆ. ದರ್ಪ-ದೌಲತ್ತುಗಳಿಗೆತಪರಾಕಿ ಕೊಟ್ಟಿದೆ. ವ್ಯಕ್ತಿಪೂಜೆ ನಡೆಯದು ಎಂಬುದನ್ನು ಸಾರಿದೆ, ಸಿದ್ಧಾಂತದೆದುರು ಯಾರೂ ದೊಡ್ಡವರಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪರಂಪರೆ ಗುಪ್ತಗಾಮಿನಿಯಾಗಿ ಹರಿದಿದೆ ಎಂಬ ಸಂದೇಶವನ್ನು ನೀಡಿದೆ. ಏಕೆಂದರೆ ಬಾಳಾಸಾಬ್ ದೇವರಸರು ಕರೆತಂದ ಯುವಕ ವಾಜಪೇಯಿಯಾಗುತ್ತಾನೆಂದು ಅಂದು ಯಾರೂ ಭಾವಿಸಿರಲಿಲ್ಲ, ಲಕ್ಷ್ಮಣರಾವ್ ಇನಾಂದಾರ್(ವಕೀಲ್ ಸಾಬ್)ಅವರ ಹುಡುಗ ಮೋದಿಯಾಗುವನು ಎಂದು ಯಾರೂ ಭಾವಿಸಿರಲಿಲ್ಲ. ಶಾಖೆಯಲ್ಲಿ ಕಬಡ್ಡಿಯಾಡುತ್ತಿದ್ದ ಹುಡುಗ ಸಿ.ಟಿ ರವಿಯಾಗುವನು ಎಂದು ಯಾರೂ ಅಂದುಕೊಂಡಿರಲಿಲ್ಲ. ಅಂಕಣ ಬರೆಯುತ್ತಿದ್ದ ಪತ್ರಕರ್ತನೊಬ್ಬ ಸಂಸದನಾಗುವನು ಎಂದು ಯಾರೂ ಅಂದುಕೊಂಡಿರಲಿಲ್ಲ. ಅಷ್ಟೇ ಏಕೆ ನಮ್ಮ ಕರ್ನಾಟಕದಲ್ಲೇ ಅರಕಲಿ ನಾರಾಯಣ, ಬೆನಕ ಭಟ್, ಪ್ರಭಾಕರ ಭಟ್ಟರಂಥ ವ್ಯಕ್ತಿ ನಿರ್ಮಾಣದ ಅದ್ವೈರ್ಯುಗಳಿಲ್ಲದಿರುತ್ತಿದ್ದರೆ ಇಂದಿನ ಹಲವು ನಾಯಕರುಗಳೇ ಹುಟ್ಟುತ್ತಿರಲಿಲ್ಲ ಎಂಬ ಉದಾಹರಣೆಯೂ ನಮ್ಮ ಮುಂದಿದೆ. “ನಡೆಯಲಾರದೆ ತೆವಳುತ್ತಿದ್ದೆನು ನಡಿಗೆ ಕಲಿಸಿತು ಸಂಘವು, ನುಡಿಯಲಾರದೆ ತೊದಲುತ್ತಿದ್ದೆನು ಮಾತು ಕಲಿಸಿತು ಸಂಘವು” ಎಂಬ ಗೀತೆಯೇ ಎಲ್ಲವನ್ನೂ ಹೇಳುತ್ತದೆ. ಹಾಗಾಗಿ ಇದರಲ್ಲೇನೂ ಅಚ್ಚರಿಯಲ್ಲ! ಇದೇನು ಮೊದಲಲ್ಲ, ಕೊನೆಯೂ ಅಲ್ಲ.
ಮೌಲ್ಯಾಧಾರಿತ ಪತ್ರಿಕೋದ್ಯಮ ಮೌಲ್ಯಾಧಾರಿತ ರಾಜಕಾರಣಿಯನ್ನು ಕಾಣಬೇಕಾದುದು ಹೇಗೆ?
– ವಿನುತಾ ಗೌಡ
ಕೆಲವು ದಿನಗಳ ಹಿಂದೆ ಕನ್ನಡದ ಸುದ್ದಿವಾಹಿನಿಯೊಂದು ತಿಪಟೂರಿನ ಶಾಸಕ ಬಿ.ಸಿ.ನಾಗೇಶ್ರ ಬಗ್ಗ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿ ಅವರ ತೇಜೋವಧೆಯ ಪ್ರಯತ್ನವನ್ನು ನಡೆಸಿತ್ತು. ಆ ಸಂದರ್ಭದಲ್ಲಿ ತಿಪಟೂರು ಮಾತ್ರವಲ್ಲ, ಶಾಸಕರನ್ನು ಅರಿತಿದ್ದ, ಮೌಲ್ಯಾಧಾರಿತ ರಾಜಕಾರಣವೆಂದರೇನೆಂದು ಅರಿವಿದ್ದ ನಾಗರಿಕರು ಆ ವಾಹಿನಿಯ ಕ್ರಮಕ್ಕೆ ಅಪಾರವಾಗಿ ನೊಂದುಕೊಂಡರು. ಪಕ್ಷ ಭೇದವಿಲ್ಲದೆ ಶಾಸಕ ನಾಗೇಶ್ ಅವರ ಬೆಂಬಲಕ್ಕೆ ನಿಂತರು. ವೈಚಾರಿಕವಾಗಿ ಅವರನ್ನು ಪನಿಧಿಸುವ ಸಂಘಟನೆಯನ್ನು ವಿರೋಧಿಸುವ ಸಮಾಜದ ಅನೇಕ ಪ್ರಮುಖರೂ ಅವರ ಬೆಂಬಲಕ್ಕೆ ನಿಂತರು. ಇಂತಹವರೆಲ್ಲರುಗಳ ಬೆಂಬಲ ಅದೆಷ್ಟು ತೀವ್ರವಾಗಿತ್ತೆದರೆ ಇವರುಗಳೆಲ್ಲರೂ ಶಾಸಕ ನಾಗೇಶ್ ಅವರ ವಕ್ತಾರರಂತೆ ಅವರನ್ನು ಸಮರ್ಥಿಸಿಕೊಂಡರು. ಶಾಸಕರ ತೇಜೋವಧೆಯ ಹುನ್ನಾರವಿದ್ದ ಈ ಘಟನೆ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಯಿತು. ಈ ಘಟನೆಯ ಮೂಲಕ ಇಂತಹ ಒಬ್ಬ ಶಾಸಕರಿದ್ದಾರೆಂಬುದೂ ಜನಜನಿತವಾಯಿತು.
ನಾನೇನು ತಿಪಟೂರಿನ ಮತದಾರಳಲ್ಲ, ನಾಗೇಶ್ ಅವರಿಂದ ಪ್ರಯೋಜನ ಪಡೆದುಕೊಂಡವಳೂ ಅಲ್ಲ. ಆದರೆ ಗಾಂಧೀಜಿ ಹೇಳಿದ, ಅಂಬೇಡ್ಕರ್ ಭೋದಿಸಿದ, ಪಂಡಿತ್ ದೀನದಯಾಳ ಉಪಾಧ್ಯಾಯರು ಜೀವನದಲ್ಲಿ ಅಳವಡಿಸಿಕೊಂಡ ಮೌಲ್ಯಾಧ್ಯಾರಿತ ರಾಜಕಾರಣದ ಬಗ್ಗೆ ಒಂದಿಷ್ಟು ಓದಿಕೊಂಡಿದ್ದೇನೆ. ಹಾಗಾಗಿ ಒಂದಷ್ಟು ವಿಷಯವನ್ನು ಹೇಳಲೇಬೇಕೆನಿಸುತ್ತದೆ. ಜೊತೆಗೆ ನಾಗೇಶ್ ಅವರು ಯಾವ ಪಕ್ಷದವರೆನ್ನುವುದೂ ಅವರ ವ್ಯಕ್ತಿತ್ವದ ಎದುರಲ್ಲಿ ನಗಣ್ಯವಾಗಿ ಬಿಡುತ್ತದೆ. ಎಲ್ಲಾ ಪಕ್ಷಗಳಲ್ಲಿ ಇವರಂತಹ ರಾಜಕಾರಣಿಗಳಿರಬೇಕು ಎನಿಸತೊಡಗುತ್ತದೆ. ಅಂತಹವರುಗಳೇ ಜನಪ್ರತಿನಿಧಿಗಳಾಗಬೇಕು ಎನಿಸುತ್ತದೆ. ಸಂಧಿಗ್ಧತೆಯಲ್ಲೂ ಬಹುಜನರು ತಮ್ಮೆಲ್ಲಾ ಗಡಿಗಳನ್ನು ದಾಟಿ ನಾಗೇಶ್ ಪರ ನಿಂತಿದ್ದಕ್ಕೆ ಕಾರಣ ಇಂತಹುದೊಂದು ವ್ಯಕ್ತಿತ್ವವೇ ಕಾರಣ ಎಂದೂ ಅನಿಸುತ್ತದೆ.
ದೇಶದ ಕೆಲವು ರಾಜಕಾರಣಿಗಳ ಬಗ್ಗೆ ಎಲ್ಲರಂತೆ ನನಗೂ ಕುತೂಹಲವಿದೆ.ರಾಜ್ಯದ ಅಂಥಾ ಕೆಲವರನ್ನು ಸುಮ್ಮನೆ ಕುತೂಹಲಕ್ಕೆಂದೇ ಭೇಟಿಯಾಗಿದ್ದೇನೆ. ನಾನು ನಾಗೇಶ್ ಅವರನ್ನು ಭೇಟಿಯಾಗಿದ್ದು ಕೂಡಾ ಹಾಗೆಯೇ. ಆ ಪರಿಚಯ, ಕಂಡ ವಿಶೇಷತೆ, ಆ ವಿಶೇಷತೆಯಿಂದ ಕಂಡರಿದ ಕೆಲವು ಸಂಗತಿಗಳನ್ನು ಬಿಚ್ಚಿಡಬೇಕೆನಿಸುತ್ತದೆ.
ಅಷ್ಟಕ್ಕೂ ಆಗಬೇಕಿರುವುದು ಅವರಿಗೇನೂ ಇಲ್ಲ!
– ಸಂಕೇತ್ ಡಿ ಹೆಗಡೆ
ಕಳೆದೆರಡು ದಿನಗಳಿಂದ ಸಾವರ್ಕರ್ ಕುರಿತ ಬರಹಗಳಿಂದ ಫೇಸ್ಬುಕ್ ತುಂಬಿ ಹೋಗಿದೆ. ಬಹಳ ಒಳ್ಳೆಯ ವಿಷಯ.
ಅಷ್ಟಕ್ಕೂ ಸಾವರ್ಕರ್ ರಿಗೆ ನಮ್ಮ-ನಿಮ್ಮ ಪ್ರೀತಿ ಬೇಕಿಲ್ಲ. ಸ್ವಾತಂತ್ರ್ಯ ಒಂದು ಮುಗಿದ ವಿಷಯ. ನೀವು ಈಗ ಅವರಿಗೆ ಎಷ್ಟು ಗೌರವ ತೋರಿಸುತ್ತೀರಿ ಎಂಬುದರ ಮೇಲೆ ಅವರ ಬದುಕು ಬದಲಾಗುವುದಿಲ್ಲ. ನೀವು ಫ಼್ಲೈ-ಓವರ್ ಗೆ ಹೆಸರಿಟ್ಟ ಮಾತ್ರಕ್ಕೆ ಅವರ ಗೌರವ ಏರುವುದೋ ಅಥವಾ ತಗ್ಗುವುದೋ ಆಗುವುದಿಲ್ಲ.
ಆದರೆ ನಾವು ಇವತ್ತು ಹೀಗೆ ಬದುಕುತ್ತಿರಲು ಕಾರಣವಾದ ಅಸಂಖ್ಯಾತ ಜೀವಿಗಳ ಬಗ್ಗೆ ಚೂರು ಗೌರವಾದಾರಗಳಿಲ್ಲದೇ ಬದುಕಿದರೆ, ನಷ್ಟವಾಗುವುದು ನಮಗೆ. ಸೃಷ್ಟಿ ನಮಗೆ ಇಂಥದ್ದೊಂದು ಹೃದಯ, ಇಂಥದ್ದೊಂದು ತಲೆ, ನೆನಪಿನ ಶಕ್ತಿ, ಭಾವಿಸುವ ಶಕ್ತಿ ಇದನ್ನೆಲ್ಲ ಧಾರೆಯೆರೆಯಿತಲ್ಲ? ಅದನ್ನೆಲ್ಲ ಮೊಟಕುಗೊಳಿಸಿ, ಅಂಥವರ ಕುರಿತು ಚೂರು ಕೃತಜ್ಞತೆಯಿಲ್ಲದೇ ಬದುಕಿದರೆ, ನಷ್ಟವಾಗುವುದು ನಮಗೆ.
ಸಾವರ್ಕರ್ ಒಬ್ಬ ದೇಶಭಕ್ತಿಯ, ದೇಶಕ್ಕಾಗಿ ಮಾಡಬಲ್ಲ ತ್ಯಾಗದ, ಇತರರ ಒಳಿತಿಗಾಗಿ ಒಬ್ಬ ಮನುಷ್ಯ ಹೋಗಬಲ್ಲ ತೀವ್ರತೆಯ ಕುರಿತು ಒಂದು ಅಪ್ರತಿಮ ಉದಾಹರಣೆಯಷ್ಟೇ. ನೀವು ಗೌರವ ಕೊಡುವುದರಿಂದ ಅಥವಾ ಕೊಡದಿರುವುದರಿಂದ ಅವರಲ್ಲೇನು ಬದಲಾಗುವುದಿಲ್ಲ. ಬದಲಾಗುವುದು ನಮ್ಮ ಪ್ರಜ್ಞೆಯಲ್ಲಿ ಮತ್ತು ನಾವು ಬದುಕುತ್ತಿರುವ ಮಟ್ಟದಲ್ಲಿ ಅಷ್ಟೇ.
ಅಷ್ಟಕ್ಕೂ ಈ ದೇಶದ ಇತಿಹಾಸವನ್ನು ನಮಗೆ ಕಲಿಸಿದವರ್ಯಾರು? ಬ್ರೀಟೀಷರು ಬಿಟ್ಟುಹೋದ ಹಾಳುಮೂಳನ್ನೇ ಹೌದೌದೆಂದು ನಂಬಿಕೊಂಡು ಬರುತ್ತಿರುವ ಜನಸಮೂಹವಲ್ಲವೇ ನಾವು? ಊಹೂಂ, ನಾವು ಹೀಗೆ ಇರಲಿಲ್ಲ. ಈ ದೇಶದ ಕಾಲಮಾನದಲ್ಲಿ ಸ್ವಲ್ಪವೇ ಹಿಂದೆ ಹೋದರೆ, ನಾವು ಹೀಗಿರಲಿಲ್ಲ.
ಜಗತ್ತಿನ ಬೇರೆಡೆಗಳಲ್ಲಿ ಇನ್ನೂ ನಾಗರೀಕತೆಗಳ ಶುರುವಿಲ್ಲದಾಗ – ಅಧ್ಯಾತ್ಮ, ವಿಜ್ಞಾನ. ಗಣಿತ, ಖಗೋಳ, ವೈದ್ಯಕೀಯ, ಯೋಗ ಶಾಸ್ತ್ರಗಳಲ್ಲಿ ಔನ್ನತ್ಯವನ್ನು ಸಾಧಿಸಿದ್ದ ನೆಲವಿದು. ವಿಶ್ವವೇ ನಿಬ್ಬೆರಗಾಗುವಂತ ಸಾಮ್ರಾಜ್ಯಗಳು, ರಾಜಾಡಳಿತ ಪರಂಪರೆಗೆ ಮುಕುಟವಾಗಬಲ್ಲ ರಾಜರುಗಳು, ಮಾನವ ವ್ಯವಸ್ಥೆಯನ್ನು ಪರಿಶೋಧಿಸಿದ ಅತ್ಯುತ್ಕೃಷ್ಟ ಯೋಗಿಗಳು, ವಿಜ್ಞಾನಿಗಳು ಆಗಿಹೋದ ನೆಲವಿದು. ಮಾರ್ಕ್ ಟ್ವೇನ್ ಒಂದು ಕಡೆ ‘Anything that can ever be done either by man or God has been done in this land’ ಎಂದಿದ್ದ ಈ ದೇಶದ ಕುರಿತು!
ಹೀಗಿದ್ದಿದ್ದ ಈ ದೇಶ, ಕಳೆದ ಸಹಸ್ರಮಾನದಲ್ಲಿ ತೀವ್ರ ಆಕ್ರಮಣಗಳಿಗೆ, ಲೂಟಿಗಳಿಗೆ, ಹೇರಿಕೆಗಳಿಗೆ ಒಳಗಾಯಿತು. ಜೇನು ಸವಿಯಲು ಜಂತುಗಳು ಬರುವುದು ಸಾಮಾನ್ಯವಲ್ಲವೇ? ತೀವ್ರ ದಾಳಿಗಳಿಗೆ ಒಳಗಾಗಬೇಕಾಯಿತು. Exploration ಮನಸ್ಥಿತಿಯಿದ್ದ ಇಂಥ ದೇಶ, ಇಂಥ ಖಂಡ ಭಾರತ ಮೇಲೆ ಆಕ್ರಮಣ ಮಾಡಿಲ್ಲ ಅಂತ ಇಲ್ಲ. ಅಷ್ಟು ದೇಶಗಳ ಜನರು ಇಲ್ಲಿ ಬಂದು ತಮ್ಮ ನೆಲೆ ಸ್ಥಾಪಿಸಲು ಪ್ರಯತ್ನಿಸಿದರು.
ಅದರಲ್ಲೆಲ್ಲ ಅತ್ಯಂತ ನಿರ್ದಯಿ, ಕ್ರೂರಿ ಸಾಮ್ರಾಜ್ಯಗಳಲ್ಲಿ ಆಂಗ್ರರ ದಂಡೂ ಒಂದು. ಇವರದ್ದು sophesticated ತಂತ್ರಗಾರಿಕೆ. ತಮ್ಮ ಸೈನಿಕರನ್ನೇ ತಂದು, ಅದೆಂಥದೋ ಯುದ್ಧವಾಡಿ, ಒಂದಷ್ಟು ಕಬಳಿಸಿ, ಲೂಟಿ ಹೊಡೆದು ಹೋಗುವ ಕ್ರೂಡ್ ಜನರಲ್ಲ. ಸಣ್ಣಗೆ ಒಳನುಸುಳುತ್ತಾರೆ. ನಿಧಾನವಾಗಿ ಪೂಸಿಹೊಡೆಯುತ್ತಾರೆ. ನಮ್ಮವರನ್ನೇ ನಮ್ಮ ವಿರುದ್ಧವಾಗಿ ತಿರುಗಿಸುತ್ತಾರೆ. ನಮ್ಮ ನಮ್ಮಲ್ಲೇ ಜಗಳ ಹಚ್ಚುತ್ತಾರೆ. ನಮ್ಮ ಸಂಸ್ಕೃತಿಯನ್ನು ವಿವಿಧ ಹಂತಗಳಲ್ಲಿ ನಾಶ ಮಾಡಲು ಪ್ರಯತ್ನಿಸುತ್ತಾರೆ. ವಿವಿಧ ಮಾರ್ಗಗಳಲ್ಲಿ ನಾವು ತುಚ್ಛರು, ಅವರು ಶ್ರೇಷ್ಠರು ಎಂದು ನಮ್ಮನ್ನೇ ನಂಬಿಸುತ್ತಾರೆ. ನಮ್ಮನ್ನು ಉಪವಾಸ ಕೆಡುಗಿ ತಮ್ಮ ದೇಶದಲ್ಲಿ ಐಶಾರಾಮಿ ಜೀವನ ನಡೆಸುತ್ತಾರೆ. ಇದು ನಯವಂಚಕ ಸಾಮ್ರಾಜ್ಯ!
ಇದು ಭಾರತೀಯರಿಗೆ ಅರ್ಥವಾದರೂ, ಅವರ ತಂತ್ರಗಾರಿಕೆಯ ಮುಂದೆ ವ್ಯವಸ್ಥಿತವಾದ ಹೋರಾಟ ಮಾಡಿ ಅವರನ್ನು ಓಡಿಸಲು ಎಷ್ಟು ವರ್ಷ ಬೇಕಾಯಿತು ನೋಡಿ. ಅದು ಆ ಸಾಮ್ರಾಜ್ಯದ ‘ಹರಿತ’ಕ್ಕೆ ಹಿಡಿದ ಕನ್ನಡಿ.
ಹಾಗಂತ ಭಾರತೀಯರೇನು ಸುಮ್ಮನೆ ಕುಳಿತಿರಲಿಲ್ಲ. ಎಲ್ಲರೂ ಅವರವರಿಗೆ ತೋಚಿದ ಮಾರ್ಗದಲ್ಲಿ ಪ್ರತಿಭಟನೆಗೆ ಇಳಿದರು. ಕೆಲವರು ಕ್ರಾಂತಿಕಾರಿಗಳಾದರು, ಕೆಲವರು ರಾಜಕೀಯ ಚಳುವಳಿಗಳ ನೇತಾರರಾದರು, ಕೆಲವರು ಜಾಗತಿಕ ಮಟ್ಟದಲ್ಲಿ ಶಮಿಸಿದರು. ಇನ್ನು ಕೆಲವರು ಬಂದ್, ಹರತಾಳ, ಉಪವಾಸಗಳ ರೂಪದಲ್ಲಿ ದೊಡ್ಡ ಅಲೆಯನ್ನು ಸೃಷ್ಟಿಸಿದರು. ಅವರವರು ಅವರವರಿಗೆ ಅತ್ಯುತ್ತಮ ಅನ್ನಿಸಿದ ಮಾರ್ಗದಲ್ಲಿ ರಕ್ತ ಕೊಟ್ಟರು.
ಸಾವರ್ಕರ್ ಅಂದಾಗ ನೆನಪಿಗೆ ಬರುವುದೇ ಅವರು ಅನುಭವಿಸಿದ ಕರಾಳ ಕಷ್ಟಗಳು. 50 ವರ್ಷ ಕಾಲಾಪಾನಿ! ಇದು ಆಂಗ್ಲರು ಅವರಿಗೆ ವಿಧಿಸಿದ ಶಿಕ್ಷೆ. ಸರಿಯಾದ ಊಟವಿಲ್ಲ, ನಿದ್ದೆಯಿಲ್ಲ, ಗಾಣಕ್ಕೆ ಎತ್ತು ಕಟ್ಟಿದಂತೆ ಕಟ್ಟಿ ಎಣ್ಣೆ ತೆಗೆಯುವ ಕೆಲಸ. ಇಷ್ಟೇ ನೀರು ಕುಡಿಯಬೇಕು, ಇಷ್ಟೇ ತಿನ್ನಬೇಕು, ನಿದ್ದೆಯೋ ದೇವರಿಗೇ ಪ್ರೀತಿ. ಬೆಳಿಗ್ಗೆ ತಿಂಡಿ ತಿನ್ನದೇ ಮಧ್ಯಾಹ್ನವಾಗುವಷ್ಟರಲ್ಲಿ ಹಸಿಯುತ್ತೇವೆ ನಾವು. ಮಧ್ಯಾಹ್ನವೂ ಏನಾದರೂ ತಪ್ಪಿಹೋಯಿತು ಅಂದುಕೊಳ್ಳಿ. ಅಷ್ಟೇ! ಸಂಜೆಯಾಗುವಷ್ಟರಲ್ಲಿ ಹೈರಾಣಾಗುತ್ತೇವೆ ನಾವು. ’ಗಾಣ ತಿರುಗಿಸಿ ಇಷ್ಟು ಎಣ್ಣೆ ತೆಗೆಯಬೇಕು, ಇಲ್ಲವಾದರೆ ನಿನಗೆ ಊಟವಿಲ್ಲ’ ಅಂದರೆ ಹೇಗಿರುತ್ತೆ ಹೇಳಿ? ಸಾವರ್ಕರ್ ಅನುಭವಿಸಿದ್ದು ಅದನ್ನು. ಎರಡು ಸೊಳ್ಳೆಗಳು ಹಾರಾಡುತ್ತಿದ್ದರೆ ಮಲಗುವುದು ಕಷ್ಟ. ಸಾವರ್ಕರ್ ಮಲಗಿದ್ದು ಎಂಥ ಪರಿಸ್ಥಿತಿಯಲ್ಲಿರಬಹುದು ಹೇಳಿ? ಅದೂ ಒಂದೆರಡು ದಿನವೇ?
ಇಲ್ಲ, ಅವರ ಕಷ್ಟಗಳನ್ನು ಹೇಳಲು ಇದನ್ನೆಲ್ಲ ಹೇಳುತ್ತಿಲ್ಲ. ಅವರಿಂದ ಸ್ವಾತಂತ್ರ್ಯ ಪೂರ್ಣವಾಗಿ ಬಂತು ಎಂಬ ಲೋಕವನ್ನೂ ನಿಮ್ಮ ಮುಂದೆ ತೆರೆದಿಡುತ್ತಿಲ್ಲ. ಆದರೆ ಒಬ್ಬ ಮನುಷ್ಯ ತನ್ನ ದೇಶಕ್ಕಾಗಿ, ತನ್ನ ದೇಶದ ಜನರಿಗಾಗಿ ಈ ರೀತಿಯ ಬದುಕನ್ನು ತನ್ನದಾಗಿಸಿಕೊಳ್ಳುತ್ತಾನೆ ಅಂದರೆ ನಿಮಗೆ ಊಹಿಸಲು ಸಾಧ್ಯವೇ? ಸಾವರ್ಕರ್ ಮಾಡಿದ್ದು ಅದನ್ನ. ತಮ್ಮ ಸಾಮರ್ಥ್ಯದಲ್ಲಿ ಏನೇನನ್ನೆಲ್ಲ ಮಾಡಬಹುದೋ, ಅದನ್ನ ಶಕ್ತಿ ಮೀರಿ ಮಾಡಿದರು. ಮನುಷ್ಯರು ಒಳಹೋಗಬಾರದ ಕಷ್ಟಗಳನ್ನೆಲ್ಲ ತಮ್ಮದಾಗಿಸಿಕೊಂಡರು.
‘ಅವರು ಕ್ಷಮಾಪಣೆ ಪತ್ರ ಬರೆದರು’ ಅನ್ನುತ್ತಾರೆ. ಮೇಲಿನ ಸ್ಥಿತಿಯಲ್ಲಿ 9 ವರ್ಷ ಜೈಲಿನಲ್ಲಿದ್ದರೆ ನೀವೇನು ಮಾಡುತ್ತಿದ್ದಿರಿ? ನಾನೇನು ಮಾಡುತ್ತಿದ್ದೆ? ಇಲ್ಲ, ಅವರು ಕ್ಷಮಾಪಣೆಯನ್ನು ಕೇಳಿದರು ಎಂದು ನಾನು ಹೇಳುತ್ತಿಲ್ಲ. ಅದು ತಂತ್ರಗಾರಿಕೆಯ ನಡೆ. ಅದು ಬಿಡಿ, ಕಾಂಗ್ರೆಸ್ ಮುಟ್ಠಾಳರಿಗೆ ಎಂದಿಗೂ ಅರ್ಥವಾಗುವುದಿಲ್ಲ. ಸಾವರ್ಕರ್ ಸ್ಥಾನದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ? ಟಿವಿ ಸ್ಟುಡಿಯೋಗಳಲ್ಲಿ ಬಂದು ಮಾತನಾಡುವುದು ಸುಲಭ. ಆದರೆ ಇವರುಗಳೇ ಆ ಸ್ಥಾನದಲ್ಲಿದ್ದರೆ ಏನು ಮಾಡುತ್ತಿದ್ದರು?
ಬಿಡಿ, ಇದಕ್ಕೆಲ್ಲ ಅರ್ಥವಿಲ್ಲ. ನೂರುವರ್ಷದ ಹಿಂದೆ ಇದ್ದ ಸ್ವಾತಂತ್ರ್ಯ ಹೋರಾಟಗಾರನನ್ನು ಗೌರವಿಸುವುದೋ, ಬೇಡವೋ ಎಂಬ ದ್ವಂದ್ವದಲ್ಲೇ ನನಗೆ ಹುರುಳು ಕಾಣಿಸುತ್ತಿಲ್ಲ. It’s a shame we’re still thinking about it. ಅವರನ್ನು ಹೃದಯದಲ್ಲಿಟ್ಟುಕೊಂಡು, ಕೃತಜ್ಞರಾಗಿ, ದೇಶದ ಇನ್ನುಳಿದ ಸಮಸ್ಯೆಗಳನ್ನು ಬಗೆಹರಿಸುವುದನ್ನು ನೋಡುವ ಬದಲು ಇದನ್ನು ಒಂದು ವಿವಾದವನ್ನಾಗಿ ಮಾಡಿ ಎಲ್ಲರ ಸಮಯ ವ್ಯರ್ಥಮಾಡುತ್ತಿದ್ದೀರಲ್ಲ, ನಿಮಗೆ ಏನು ಹೇಳುವುದು? ಸಾವಿರಾರು ಸ್ಮಾರಕಗಳು , ಫ್ಲೈ ಓವರ್ ಗಳು ಇವೆ. ಗೌರವಾರ್ಥವಾಗಿ ನಾವು ಹೆಸರುಗಳನ್ನು ಇಡುತ್ತೇವೆ. ಇದಕ್ಕೆ ಸಾವರ್ಕರ್ ಹೆಸರಿಡುತ್ತಿದ್ದೇವೆ. ಮತ್ತೊಂದಕ್ಕೆ ಗಾಂಧಿ ಹೆಸರಿಡುತ್ತೇವೆ. ಇದು ನಮ್ಮ ಕೃತಜ್ಞತಾ ಭಾವದ ಸಮರ್ಪಣೆಯೇ ಹೊರತು, ಅವರಿಗೆ ಇದರಿಂದ ಯಾವ ಪ್ರಯೋಜನವೂ ಇಲ್ಲ. ಇಟ್ಟು ಮುಂದೆ ಸಾಗುತ್ತೇವೆ. ದೇಶದ ಇತರ ಸವಾಲುಗಳ ಬಗ್ಗೆ ಗಮನಹರಿಸುತ್ತೇವೆ. ಊಹೂಂ, ಇದಿಲ್ಲ! ಇದು ನಿಜವಾಗಿಯೂ ಶೋಚನೀಯ.
ನಾವು ಇಂಥವುಗಳಿಗೆ ಸೊಪ್ಪು ಹಾಕಬಾರದು. ಇಲ್ಲವಾದರೆ 10 ವರ್ಷಗಳಲ್ಲಿ ಸಾಧಿಸಬಹುದಾದ ಪ್ರಗತಿಯನ್ನು ಸಾಧಿಸಲು 100 ವರ್ಷಗಳು ಬೇಕಾಗುತ್ತವೆ!
ಹಲಾಲ್ ಉದ್ಯಮದ ಒಳಸುಳಿಗಳು
– ರಾಕೇಶ್ ಶೆಟ್ಟಿ
ಹಲಾಲ್ ಅಂದರೆ ಕೋಳಿ ಮತ್ತಿತ್ತರ ಪ್ರಾಣಿಗಳನ್ನು ಕತ್ತರಿಸುವ ಒಂದು ವಿಧಾನ ಅಷ್ಟೇ ಅಲ್ವಾ? ಅದಕ್ಕೇಕೆ ನಿಮ್ಮ ತಕರಾರು…? ಇದು ಹಲವರ ಪ್ರಶ್ನೆ
ನಾವ್ ವೆಜಿಟೆರಿಯನ್ಸ್ ನಮಗೆ ಈ ಹಲಾಲ್ ನಿಂದೇನೂ ಚಿಂತೆ ಇಲ್ಲಪ್ಪ. ಇದು ಒಂದಿಷ್ಟು ಜನರ ವಾದ…
ಹಲಾಲ್ ಅಂದರೆ ಕೇವಲ ಕೋಳಿಯನ್ನು ಕುಯ್ಯುವ ಒಂದು ವಿಧಾನ ಆಗಿದ್ದಿದ್ದರೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಹೀಗೊಂದು ಹತ್ತು ವರ್ಷಗಳ ಹಿಂದೆ ಹಾಗೆಯೇ ಇದ್ದಾಗ ಯಾರೂ ತಲೆಕೆಡಿಸಿಕೊಳ್ಳುತ್ತಲೂ ಇರಲಿಲ್ಲ. ಈಗಲೂ ಅವರ ಅಂಗಡಿಯಲ್ಲಿ ಹೋಗಿ ತೆಗೆದುಕೊಂಡು ಬರುವವರಿಗೇನು ಕಡಿಮೆಯೇ? ಸಮಸ್ಯೆ ಮತ್ತು ವಿರೋಧ ಇರೋದು ಅವರ “Religion ಆಚರಣೆ” ಬಗ್ಗೆ ಅಲ್ಲ. ಆಚರಣೆ ನೆಪದಲ್ಲಿ “ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುವ, ತಮ್ಮವರಿಗೆ ಮಾತ್ರ ಉದ್ಯೋಗ ದಕ್ಕಿಸಿ ಇತರರ (ಮುಖ್ಯವಾಗಿ ಹಿಂದುಳಿದ,ದಲಿತ ವರ್ಗ) ಉದ್ಯೋಗವನ್ನು ಕಸಿದುಕೊಳ್ಳುವ Long Term ನೀತಿಯ” ಬಗ್ಗೆ.
ಮೊದಲೆಲ್ಲಾ ಅವರ ಅಂಗಡಿಗಳಲ್ಲಿ ಮಾತ್ರ ಆ ಆಚರಣೆ ಆಗ್ತಾ ಇತ್ತು. ನಂತರ ಮಾಂಸದ ಹೋಟೆಲುಗಳ ಬೋರ್ಡುಗಳಲ್ಲಿ ‘ಹಲಾಲ್ ಚಿಕನ್/ಮಟನ್’ ದೊರೆಯುತ್ತದೆ ಎನ್ನುವಲ್ಲಿಗೆ ಬಂತು. ಆ ನಂತರ ದೊಡ್ಡ ಮಟ್ಟದಲ್ಲಿ ಹಲಾಲ್ ಸರ್ಟಿಫಿಕೇಟು (ವರ್ಷ ವರ್ಷಕ್ಕೆ Renew ಮಾಡುವ ಕರಾರಿನೊಂದಿಗೆ) ಉದ್ಯಮ ಆರಂಭವಾಗಿ ಇವತ್ತಿಗೆ ಆ ಸರ್ಟಿಫಿಕೇಟಿನ ಕಬಂಧ ಬಾಹು ಗೋಧಿ, ಮೈದಾ, ಬಿಸ್ಕೆಟ್ಸ್, ಚಾಕೊಲೇಟ್ಸ್, ಸೌಂದರ್ಯವರ್ಧಕ ವಸ್ತುಗಳು, ಹಾಸ್ಪಿಟಲ್,ಟೂರಿಸಂ,ಲಾಜಿಸ್ಟಿಕ್ಸ್, ಏರ್ಲೈನ್ಸ್ ಕ್ಯಾಟರಿಂಗ್, ಕ್ಯಾಟರಿಂಗ್,ಫಾರ್ಮಾಸೆಟಿಕಲ್ಸ್ ಹೀಗೆ ಪಟ್ಟಿ ಬೆಳೆದು ನಿಂತಿದೆ. ಕಂಪೆನಿಗಳು ಪ್ರತಿವರ್ಷ ಹಲಾಲ್ ಸರ್ಟಿಫಿಕೇಟನ್ನು ಪಡೆಯಲು ಇಂತಿಷ್ಟು ಹಣ ಕಟ್ಟಬೇಕಾಗುತ್ತದೆ,ಅದರ ಮೇಲೆ ಯಾವೆಲ್ಲ ವಸ್ತುಗಳಿಗೆ ಹಲಾಲ್ ಸೀಲ್ ಬೇಕೋ ಅದಕ್ಕೆ ಪ್ರತ್ಯೇಕ ಅಂತೆಲ್ಲ ಇದೆ. ಇದು ಒತ್ತಟ್ಟಿಗಿರಲಿ. ಈ ಸರ್ಟಿಫಿಕೇಟ್ ಯಾಕೆ ಅಪಾಯಕಾರಿ ಎನ್ನುವ ಉದಾಹರಣೆ ನೋಡೋಣ
ಕೊರೊನಾ ಯುದ್ಧ – ವಿಶ್ವಕ್ಕೆ ಭಾರತ ತೋರಿಸಿದ ಹಾದಿಯೇನು?
ಭಾರತೀಯ ಜೀವನ ಪದ್ಧತಿ, ನಮಸ್ಕಾರ, ಯೋಗ ಮತ್ತು ಆಯುರ್ವೇದ ಇತ್ಯಾದಿಗಳು ವಿಶ್ವವ್ಯಾಪಿ ಮಹತ್ವ ಪಡೆಯುತ್ತಿವೆ
ಅಂತರರಾಷ್ಟ್ರೀಯ ತೈಲ ಮಾರುಕಟ್ಟೆ, ಭಾರತ ಮತ್ತು ಮೋದಿ – ಭಾಗ 2
– ಪ್ರಶಾಂತ್ ಪದ್ಮನಾಭ
ಭಾಗ 1 – ಜಾಗತಿಕ ಕಚ್ಚಾ ತೈಲದ ಬೆಲೆ ಮೈನಸ್ ಆಗಿರುವುದೇಕೆ? ಅದರ ಅರ್ಥವೇನು?
ಮೊದಲನೇ ಪೋಸ್ಟ್ನಲ್ಲಿ ಕಾಂಮೆಂಟ್ನಲ್ಲಿ ಯಾರೋ ಕೇಳಿದ ಪ್ರಶ್ನೆಗಳು, ಹಾಗು ಅದರ ಉತ್ತರ ಎಲ್ಲರಿಗೂ ತಲುಪಲಿ ಅನ್ನೋ ಉದ್ದೇಶದಿಂದ ಹೊಸ ಪೋಸ್ಟ್ ಹಾಕಿದ್ದೀನಿ. ಮೊದಲ ಪೋಸ್ಟ್ ನ ಉದ್ದೇಶ ಅಮೇರಿಕಾದಲ್ಲಿ WTI ನ ಬೆಲೆ ಹೇಗೆ ನೆಗೆಟಿವ್ ಆಯಿತು, ಹಾಗೆ ಆಗಿದ್ದಿರಿಂದ ಭಾರತದಲ್ಲೂ ಕಮ್ಮಿ ಮಾಡಿಯೆಂದು ಕೇಳುವುದು ಅವಿವೇಕತನ ಎಂಬುದಾಗಿತ್ತು. (ಅಮೇರಿಕಾದಲ್ಲಿ ಮಳೆಯಾದರೆ, ಮೋದಿ ಭಾರತದಲ್ಲಿ ಯಾಕೆ ಕೊಡೆ ಹಿಡಿಯಲ್ಲಿಲ್ಲ ಅಂತ ಕೇಳುವ ಕಾಂಗ್ರೆಸ್ ಗೆ ಬಹುಪರಾಕ್ ಹೇಳವ ಮನಸ್ಥಿತಿಗೆ ಉತ್ತರ ಹೇಳುವುದು)
ಇದನ್ನೂ ಕೂಡ ಜಾಸ್ತಿ ಟೆಕ್ನಿಕಲಿಯಾಗಿ ಹೇಳದೆ, ಸರಳ ಭಾಷೆಯಲ್ಲಿ ಹೇಳುವ ಪ್ರಯತ್ನ ಮಾಡಿದ್ದೀನಿ.
ಪ್ರಶ್ನೆ:
1. ಜಗತ್ತಿನ ಕಚ್ಚಾ ತೈಲದ ಕ್ವಾಲಿಟಿ ನಿರ್ಧಾರವಾಗುವುದು 2 ಅಂಶಗಳಿಂದ. Low Sulphur ಕಂಟೆಂಟ್ ಮತ್ತು Low Density (Higher API). ಈ ಎರಡು ಅಂಶಗಳನ್ನ ಪರಿಗಣಿಸಿ Brent ಹಾಗೂ WTI compare ಮಾಡಿದ್ರೆ WTI ಗುಣಮಟ್ಟವೇ ಉತ್ತಮ.
2. ಎರಡನೆಯದು ತೈಲ its self is commodity. ಶೇರು ವ್ಯವಹಾರವನ್ನ ಸರಿಯಾಗಿ ಅರ್ಥ ಮಾಡ್ಕೊಳ್ಳಿ.
3. ಮೂರನೆಯದು WTI ಸೀಮಿತವಾಗಿ ಹೇಳೋದಾದ್ರೆ..ಅಲ್ಲಿರುವ Future Trading Agreement ಇರುವುದು Every 1000 Barrels ಗೆ. ಹಾಗಾಗಿ ಅದು negative Trade ಆದ್ರು ಅದನ್ನ ಕೊಂಡುಕೊಳ್ಳುವುದು ಕಷ್ಟ.
4. ನಾಲ್ಕನೆಯದು ಭಾರತದಲ್ಲಿ Oil rate ಏರಿರಲು ಮಖ್ಯ ಕಾರಣ ನಮ್ಮ Tax ವ್ಯವಸ್ಥೆ.
5. ಅಂತರರಾಷ್ಟೀಯ ಕಚ್ಚಾ ತೈಲದ ವೇಳೆ 20 ಡಾಲರ್ ಪ್ರತಿ ಬ್ಯಾರೆಲ್ ಆಗಿದೆ. ಹಾಗಾದ್ರೆ ಪೆಟ್ರೋಲ್ ಬೆಲೆ ಇನ್ನಷ್ಚು ಇಳಿಯಬೇಕಿತ್ತಲ್ಲವೇ..?
ಉತ್ತರ: ಮತ್ತಷ್ಟು ಓದು
ದೇಶ ಹಾಳಾದರೂ ‘ಅವರಿಗೆ’ ನೋವಾಗಬಾರದು ನೋಡಿ
– ಅಜಿತ್ ಶೆಟ್ಟಿ ಹೆರಂಜೆ
ಇವತ್ತು ಇಡೀ ವಿಶ್ವ ಕೊರೋನಾ ಮಹಾ ಮಾರಿಯ ವಿರುದ್ಧ ಯುದ್ಧ ಮಾಡುತ್ತಿದೆ.ವಿಶ್ವದ ದಿಗ್ಗಜ ರಾಷ್ಟ್ರಗಳೇ ಇದರ ವಿರುದ್ದ ಮಂಡಿಯೂರಿ ಕುಳಿತಿವೆ. ರೋಗದ ಪಸರುವಿಕೆ ಮತ್ತು ರೋಗದಿಂದ ಆಗುತ್ತಿರುವ ಸಾವು ಇವೆರಡನ್ನು ತಹಬಂದಗಿ ತರುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇಂತಹಾ ಸಮಯದಲ್ಲಿ ಭಾರತ ಈ ಮಹಾಮಾರಿಯ ವಿರುದ್ಧ ಸಮರ್ಥವಾಗಿ ಸೆಣಸುತ್ತಿದೆ. ಇದು ಸಾಧ್ಯವಾಗಿದ್ದು ಮೋದಿಯವರ ಸಮರ್ಥ ನಾಯಕತ್ವದ ಜೊತೆಗೆ ಮೋದಿಯಂತಹ ನಾಯಕನಿಗೆ ಹೆಗಲಿಗೆ ಹೆಗಲು ಕೊಟ್ಟು ನೆಡೆಯುತ್ತಿರುವ ಬಹುಸಂಖ್ಯಾತ ಭಾರತಿಯರು ಸಹಕಾರದಿಂದ, ಇವರು ಪ್ರದರ್ಶನ ಮಾಡತ್ತಿರುವ ಸಾಮಾಜಿಕ ಬದ್ದತೆಯಿಂದಾಗಿ ಇದು ಸಾಧ್ಯವಾಗಿದ್ದು. ಎಲ್ಲದರಲ್ಲೂ ತಾನು ದೊಡ್ಡವ ಎನ್ನುವ ಅಮೇರಿಕಾದಲ್ಲಿ ಜನ ಲಾಕ್ ಡೌನ್ ಗೆ ಸಮ್ಮತಿಸುತ್ತಿಲ್ಲ. ಅಲ್ಲಿಯ ನಾಗರೀಕರಿಗೆ ತಮ್ಮ ಉದ್ಯೋಗ ಮತ್ತು ಹಣದ ಚಿಂತೆ ಬಿಟ್ಟರೆ, ಸಮಾಜ ಹಾಗು ದೇಶದ ಬಗ್ಗೆ ಯಾವುದೆ ಬದ್ದತೆ ಇದ್ದಂತೆ ತೋರುತ್ತಿಲ್ಲ. ಬಹುಶಃ ಇದೆ ಕಾರಣಕ್ಕೆ ಇವತ್ತು ಅಮೇರಿಕಾದಲ್ಲಿ ವಿಶ್ವದಲ್ಲೇ ಅತ್ಯಂತ ಹೆಚ್ಚು ಕೊರೋನಾ ಸೋಂಕಿತರು ಇರುವುದು ಮತ್ತು ಸಾವು ಆಗಿರೋದು.
ತಬ್ಲಿಕಿ ಜಮಾತ್ ಕೊಟ್ಟ ಉಪಟಳದ ಮಧ್ಯೆಯೂ, ಕೊರೋನಾ ಸಮಸ್ಯೆಯನ್ನು ಭಾರತ ಇಲ್ಲಿಯ ತನಕ ಸಮರ್ಥವಾಗಿಯೇ ಎದುರಿಸುತ್ತಿದೆ. ಭಾರತದ ಬಹುಸಂಖ್ಯಾತ ಹಿಂದುಗಳೇ ಇರಲಿ ಅಥವ ಅಲ್ಪಸಂಖ್ಯಾತರಾದ ಸಿಖ್,ಜೈನ,ಬೌದ್ಧ,ಕ್ರೈಸ್ತರೇ ಇರಲಿ ಎಲ್ಲರೂ ತಮ್ಮ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳನ್ನು ಸರ್ಕಾರ ಪ್ರಸ್ತುತ ಹೊರಡಿಸಿರುವ ಆದೇಶದ ಅನ್ವಯ ಅದಕ್ಕೆ ಚ್ಯುತಿ ಬಾರದ ರೀತಿಯಲ್ಲಿ ನಡೆಸಿಕೊಂಡು ಬರುತ್ತಿವೆ. ಹೌದು ಮೊದಮೊದಲಿಗೆ ಇದು ಕೊಂಚ ಕಷ್ಟ ಅನಿಸಿದರೂ ಬರಬರುತ್ತ ಇದನ್ನು ಬಹುತೇಕರು ರೂಢಿಸಿಕೊಂಡರು.ಈ ಸಂಬಂಧ ಮೋದಿಯವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದನ್ನೇ ಇವರೆಲ್ಲ ಪಾಲಿಸಿದರು. ಅಂದ ಹಾಗೆ ಈ ಸಂದರ್ಭದಲ್ಲಿ ಸಮುದಾಯ ನೆಡೆದುಕೊಳ್ಳಬೇಕಾದ ರೀತಿ ರಿವಾಜುಗಳ ಬಗ್ಗೆ ಯಾವುದೇ ಸಮುದಾಯದ ಮುಖಂಡರ ಮುಖಾಂತರ ಸರ್ಕಾರ ಮಾರ್ಗಸೂಚಿಗಳನ್ನೇನು ತಲುಪಿಸಲಿಲ್ಲ. ಅಥವ ಅವರ ಸಮಾಜದ ಮುಂಡರನ್ನು ವಿಶೇಷವಾಗಿ ಕರೆದು ಮಾತಾಡಿಸಿ ದೇಶ ಇರುವ ಈ ಸಂದಿಗ್ದ ಸಮಯದಲ್ಲಿ ನಿಮ್ಮ ಸಮಾಜದ ಸಹಕಾರ ಬೇಕು ಎಂದ ಪ್ರತ್ಯೇಕವಾಗಿ ಕೂರಿಸಿ ಮಾತಾಡಿಸಲಿಲ್ಲ.
ಆದರೆ ಆ ಒಂದು ಸಮಾಜ.., ಹೌದು ಅದನ್ನ ಇವತ್ತು ನಾನು ಹಾಗೆಯೇ ಕರೆಯಬೇಕಾಗಿದೆ. ಕಾರಣ, #ಅವರ ಹೆಸರು ಹೇಳಿದರೆ ಬಹಳಷ್ಟು ಜನರಿಗೆ ಬಹಳ ಜಾಗದಲ್ಲಿ ಉರಿ ಹತ್ತುತ್ತದೆ. ಅಂತಹಾ ಆ ಒಂದು ಸಮಾಜ ಮಾತ್ರಾ ಯಾಕೋ ನಾವು ಭಾರತದಲ್ಲಿ ತಮ್ಮನ್ನ ತಾವು ಅತಿ ವಿಶಿಷ್ಟರು, ನಾವು ಈ ದೇಶದ ಮಕ್ಕಳಲ್ಲ #ಅಳಿಯಂದಿರು ಅಂದುಕೊಂಡಿದ್ದಾರೆ. ನಮಗೆ ದೇಶದ ಎಲ್ಲಾ ಸವಲತ್ತು ಸಿಗಬೇಕು ಬಿಟ್ರೆ ನಾವು ದೇಶಕ್ಕೆ ಏನೂ ಕೊಡೋದಿಲ್ಲ. ಎಲ್ಲಿಯ ತನಕ ಕೊಡೋದಿಲ್ಲ ಅಂದ್ರೆ ನೀವು ದೇಶದ ನಾಗರೀಕರೋ ಅಂತ ಕೇಳಿದರೆ ಅದಕ್ಕೆ ದಾಖಲೆಯನ್ನೂ ಕೊಡೋದಿಲ್ಲ ಅನ್ನುವಷ್ಟರಮಟ್ಟಿಗಿನ ಉದ್ದತಟತನ ಪ್ರದರ್ಶನ ಮಾಡುತ್ತದೆ. (ಇವರಲ್ಲಿ ಇರುವ ಒಂದಷ್ಟು ರಾಷ್ಟ್ರ ಭಕ್ತರನ್ನು ಹೊರತುಪಡಿಸಿ) ಇವರಲ್ಲೂ ಈ ತಬ್ಲಿಗಿಗಳು ಅನ್ನುವ ವರ್ಗವೋ..ಇವುಗಳ ಉಪಟಳ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಕೆಲವು ಪತ್ರಿಕೆಗಳ ವರದಿಗಳ ಪ್ರಕಾರ ಇವರ ಹಾವಳಿಯಿಂದ ಇಡೀ ದಕ್ಷಿಣ ಏಶ್ಯಾದ ರಾಷ್ಟ್ರಗಳೇ ಕಂಗೆಟ್ಟಿವೆ.ಇವರನ್ನು ನಿಯಂತ್ರಿಸಲು ದೇಶದ ಬಹುತೇಕ ರಾಜ್ಯ ಸರ್ಕಾರಗಳು ಇವರ ಸಮುದಾಯದ ಮುಖಂಡರ ಜೊತೆ ಸಭೆ ಮಾಡಿ ನಿಮ್ಮ ಸಮುದಾಯದ ಸಹಕಾರ ದೇಶಕ್ಕೆ ಕೊರೋನಾ ನಿಯಂತ್ರಣ ಮಾಡೋದಕ್ಕೆ ಬೇಕು ಅಂತ ಕೇಳಿಕೊಳ್ಳುವ ಪ್ರಸಂಗ ಎದರಾಯಿತು.
ಯುಎಇ ನಿಜಕ್ಕೂ ಅಷ್ಟೊಂದು ಅಸಹಿಷ್ಣು ದೇಶವೇ?
– ರಾಘವೇಂದ್ರ ಎಮ್ ಸುಬ್ರಹ್ಮಣ್ಯ
ಕಳೆದೆರಡು ವಾರದಿಂದ ಗಲ್ಫ್ ದೇಶಗಳಲ್ಲಿರುವ ಹಿಂದೂಗಳ ಕೆಲಸಕ್ಕೆ ಕುತ್ತು ತರುವ ವ್ಯವಸ್ಥಿತ ಸಂಚುಗಳು ನಡೆದಿವೆ. ದೆಹಲಿಯ ತಬ್ಲೀಗೀ ಜಮಾತ್’ನವರ ವರ್ತನೆಯನ್ನು ಖಂಡಿಸಿ ಏನನ್ನಾದರೂ ಬರೆದರೆ ಅದೇ ದೊಡ್ಡ ತಪ್ಪು ಎಂಬಂತೆ ಬಿಂಬಿಸಿ, ಪೋಲಿಸರಿಗೆ ದೂರು ನೀಡುವ ಕೆಲಸ ನಡೆದಿದೆ. ಹಾಗಾದರೆ ಯುಎಇಯಲ್ಲಿ ಅಷ್ಟೆಲ್ಲಾ ಸುಲಭಕ್ಕೆ ಯಾರನ್ನಾದರೂ ಅರೆಸ್ಟ್ ಮಾಡಿಸಬಹುದೇ? ಇಸ್ಲಾಂ ಬಗ್ಗೆ ಏನೂ ಕೆಟ್ಟದಾಗಿ ಬರೆಯದೇ, ಭಾರತದ ಕೆಲ ಮುಸ್ಲಿಮರ ತಪ್ಪುಗಳ ಬಗ್ಗೆ ಬರೆದರೆ ಅದು ಶಿಕ್ಷಾರ್ಹ ಅಪರಾಧವೇ?
ಹೆಚ್ಚಿನವರಿಗೆ ಅರಬ್ ರಾಷ್ಟ್ರಗಳೆಂದರೆ ಬಹಳಷ್ಟು ತಪ್ಪು ಅಭಿಪ್ರಾಯಗಳಿವೆ. ತಪ್ಪು ಮಾಡಿದರೆ ಸಾರ್ವಜನಿಕವಾಗಿ ಛಡಿಯೇಟು ಬೀಳುತ್ತದೆ, ಕೈ ಕಾಲು ತಲೆ ಕಡಿಯುತ್ತಾರೆ ಎಂಬೆಲ್ಲಾ ಅನಿಸಿಕೆಗಳಿವೆ. ಆದರೆ ಈ ಎಲ್ಲಾ ಹೆಚ್ಚಿನ ಅಭಿಪ್ರಾಯಗಳು ಬಂದಿರುವುದು ಸೌದಿ ಅರೇಬಿಯಾದಿಂದ. ಯಾಕೆಂದರೆ ಇವೆಲ್ಲಾ ಹೆಚ್ಚಾಗಿ ನಡೆಯುವುದು ಅಲ್ಲಿ ಮಾತ್ರ. ಆದರೆ ಎಲ್ಲಾ ಅರಬ್ ದೇಶಗಳೂ ಹೀಗಿಲ್ಲ. ಇಲ್ಲಿ ಇಸ್ಲಾಂ ನಿಂದನೆಯನ್ನು ಯಾರೂ ಸಹಿಸುವುದಿಲ್ಲವಾದರೂ, ಒಮಾನ್, ಬಹರೈನ್ ಮತ್ತು ಯುಎಇ ದೇಶಗಳು ಸಹಿಷ್ಣುತೆಯಲ್ಲಿ ಹೊಸ ಅಧ್ಯಾಯಗಳನ್ನೇ ಬರೆದಿವೆ. ಮತ್ತಷ್ಟು ಓದು
CAA ಮತ್ತು NRC: ಬೆಂಕಿಯ ಭ್ರಮೆಯಲ್ಲಿ ಬಾವಿಗೆ ಧುಮುಕುವುದೇಕೆ?
– ಸಂಕೇತ್ ಡಿ ಹೆಗಡೆ
‘Citizenship Amendment Bill’ – ಇಂಥದ್ದೊಂದು ಬಾಂಬ್ ಅನ್ನೇ ಅಮಿತ್ ಶಾ ಆವತ್ತು ಪಾರ್ಲಿಮೆಂಟ್ ನಲ್ಲಿ ಹಾಕಿದರು. ಇದು ಇಷ್ಟೊಂದು ಶಕ್ತಿಯುತ ಬಾಂಬ್ ಎಂದು ಬಹುಶಃ ಗೃಹಮಂತ್ರಿಯಾಗಿ ಸ್ವತಃ ಅವರೂ ಯೋಚಿಸಿರಲಿಕ್ಕಿಲ್ಲ. ಡಿಸೆಂಬರ್ ನಾಲ್ಕಕ್ಕೆ ಕ್ಯಾಬಿನೆಟ್ ಅನುಮೋದನೆ ಪಡೆದ ಈ ಮಸೂದೆ, 9 ಡಿಸೆಂಬರ್ ರಂದು ಲೋಕಸಭೆಯಲ್ಲಿ ಮಂಡನೆಯಾಯಿತು. ಮರುದಿನ ಅಲ್ಲಿ ಸಲೀಸಾಗಿ ಅನುಮೋದನೆಯಾದ ಈ ಪ್ರಸ್ತಾವನೆ, ’ರಾಜ್ಯಸಭೆ’ಯಲ್ಲೂ ಈಜಿ ದಡ ಸೇರುವುದೇ ಎಂಬುದೇ ಎಲ್ಲರ ಪ್ರಶ್ನೆಯಾಗಿತ್ತು. ಆದರೆ ಡಿಸೆಂಬರ್ 11ರಂದು 20 ಮತಗಳ ಅಂತರದಲ್ಲಿ ಇದು ರಾಜ್ಯಸಭೆಯಲ್ಲೂ ಅನುಮೋದನೆಗೊಂಡಿತು. ಮರುದಿನವೇ ರಾಷ್ಟ್ರಪತಿಗಳ ಅಂಕಿತವೂ ಬಿದ್ದು, ’Bill’ ಇದ್ದದ್ದು ‘Act’ ಆಯಿತು. ‘ಮಸೂದೆ’ ಅಧಿಕೃತವಾಗಿ ಕಾಯಿದೆಯಾಯಿತು. ಈಗ ಶುರುವಾಯಿತು ನೋಡಿ ಈ ಬಾಂಬಿನ ಆಟಾಟೋಪ!
ಇದ್ದಕ್ಕಿದ್ದಂತೆ ಯೂನಿವರ್ಸಿಟಿಗಳು ರಣಾಂಗಣಗಳಾದವು. ’ಜಾಮಿಯಾ ಇಸ್ಲಾಮಿಯಾ’ ವಿಶ್ವವಿದ್ಯಾಲಯದ ಒಳಬದಿಯಿಂದ ಕಲ್ಲುಗಳು ತೂರಿಬಂದವು. ಇಂಥವುಗಳಿಗೆ ಸದಾ ’ಹೆಸರುವಾಸಿ’ಯಾದ ಜೆಎನ್ಯೂ ಸುಮ್ಮನಿರಲು ಸಾಧ್ಯವೇ? ಅಲ್ಲಿಯೂ ಪರಿಸ್ಥಿತಿ ಭುಗಿಲೆದ್ದಿತು. ’ಜಾಮಿಯ’ದಿಂದ ಶುರುವಾದದ್ದು ಸಾಂಕ್ರಾಮಿಕ ರೋಗದಂತೆ ’ಆಲಿಗಡ್ ಮುಸ್ಲಿಮ್ ಯುನಿವರ್ಸಿಟಿ’, ‘ನಾದ್ವಾ’ ಹೀಗೆ ದೇಶದ ಅನೇಕ ಯೂನಿವರ್ಸಿಟಿಗಳಿಗೆ ಹಬ್ಬಿತು. ಅದಲ್ಲದೇ ಯೂನಿವರ್ಸಿಟಿಗಳ ಹೊರಗೂ, ಸದ್ಯದ ಕೇಂದ್ರ ಸರ್ಕಾರದ ಸೈದ್ಧಾಂತಿಕ ವೈರಿಗಳ ಸಕಲ ಗುಂಪುಗಳಿಂದ ದೊಡ್ಡ ಹಿಂಸಾಚಾರಗಳೇ ನಡೆದವು. ಇಂಥ ಕಾಯ್ದೆಯೊಂದು ಈ ಮಟ್ಟಿಗೆ ಪ್ರತಿಕ್ರಿಯೆಗಳನ್ನು ಪಡೆಯಬೇಕಾಗುತ್ತದೆ ಎಂಬುದನ್ನು ಬಹುಶಃ ನೀರಿಕ್ಷಿಸದಿದ್ದ ಸರ್ಕಾರಕ್ಕೆ, ಇದೊಂದು ಆಘಾತವೇ ಸರಿ. ನೇಮಿಸಿದ್ದ ಪೋಲೀಸ್ ತುಕಡಿಗಳು ಸಾಕಾಗಲಿಲ್ಲ. ಬೆರಳೆಣಿಕೆಯಷ್ಟಿದ್ದ ಪೋಲೀಸರು ಸಾವಿರ ಸಂಖ್ಯೆಗಳಲ್ಲಿದ್ದ ಗಲಭೆನಿರತರನ್ನು ಸಂಭಾಳಿಸಲು ಸಾಧ್ಯವಾಗಲಿಲ್ಲ. ಪೋಲೀಸರು ದೇಶದ ಅನೇಕ ಕಡೆ ಹೊಡೆತ ತಿಂದರು, ಗಾಯಗೊಂಡರು. ಲಕ್ನೋ ನಗರದಲ್ಲೊಂದರಲ್ಲೇ 250ಕ್ಕೂ ಅಧಿಕ ಪೋಲಿಸರು ಗಾಯಗೊಂಡರು ಮತ್ತು ದೇಶವೇ ನಿಬ್ಬೆರಗಾಗುವಂತೆ 50ಕ್ಕೂ ಹೆಚ್ಚು ಪೋಲಿಸರಿಗೆ ಗುಂಡೇಟಾಯಿತು. ಪೋಲೀಸರಿಗೆ ಗುಂಡೇಟಾಯಿತು! ಪ್ರತಿಭಟನಾಕಾರರ ಕಿಸೆಯಲ್ಲಿ ಗುಂಡು ತುಂಬಿ, ಮರೆಯಲ್ಲೆಲ್ಲೋ ಕೈಯಲ್ಲಿ ಬಂದೂಕು ಕೊಟ್ಟದ್ದು ಯಾರು ಅಂತ ಮಾತ್ರ ’ಜಾಮಿಯಾ’, ’ಜೆ ಎನ್ಯೂ’ಗಳಲ್ಲಿ ಪಿಎಚ್ಡಿ ಮಾಡುತ್ತಿರುವವರಿಗೇ ಗೊತ್ತಿರಬೇಕು, ನನಗಂತೂ ಗೊತ್ತಿಲ್ಲ.
ಇಂಥ ಭಯಾನಕ ಗಲಭೆಗಳು ಅನೀರಿಕ್ಷಿತವಾಗಿ ನಡೆದಾಗ, ಇದ್ದಬದ್ದ ಪೋಲೀಸರೇ ಹೊಡೆತ ತಿಂದಾಗ, ಸಹಜವಾಗಿ ಹೆಚ್ಚುವರಿ ತುಕಡಿಗಳು ಪ್ರತಿಭಟನಾ ಸ್ಥಳವನ್ನು ತಲುಪುತ್ತವೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಕಾರಣದಲ್ಲಿ, ಅಲ್ಲಿ ಪೋಲೀಸ್ ಹಿಂಸಾಚಾರ ಕೂಡ ನಡೆಯುತ್ತದೆ. ಲಾಠಿ ಚಾರ್ಜ್ ಗಳಾಗುತ್ತವೆ, ಅಶ್ರುವಾಯುಗಳು ಸಿಡಿಯುತ್ತವೆ, ಗಾಳಿಯಲ್ಲಿ ಗುಂಡು ಹಾರುತ್ತದೆ, ಕೆಲವೊಮ್ಮೆ ಗೋಲೀಬಾರ್ ಕೂಡ ನಡೆದುಹೋಗುತ್ತದೆ. ದುರದೃಷ್ಟಕರವಾಗಿ ಎಲ್ಲವೂ ಹೀಗೇ ಆಯಿತು. ಇವೇನು ವಿಶ್ವವಿದ್ಯಾಲಯಗಳೋ, ಯುದ್ಧಭೂಮಿಗಳೋ ಎಂದು ಜನರಿಗೆ ಗೊಂದಲವಾಗುವಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿತ್ತು. ಅದು ದೇಶಕ್ಕೆ ಒಳಿತಿರಲಿ ಅಥವಾ ಕೆಡುಕಿರಲಿ, ಏನೇ ಇರಲಿ, ಈ ಸರ್ಕಾರ ಯಾವ ಹೆಜ್ಜೆಯಿಟ್ಟರೂ ದೇಶದಲ್ಲಿ ‘ಕೆಂಪು’ ರಕ್ತ ಹರಿಸಬೇಕು ಎಂದು ಸದಾಕಾಲ ಕಾದುಕುಳಿತಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಟ್ಟೆಂದು ಎದ್ದುನಿಂತವು. ಪರಿಸ್ಥಿತಿ ವಿಕೋಪಕ್ಕೆ ಹೋಗಲು ಏನೇನು ಮಾಡಬಹುದೋ ಅದನ್ನೆಲ್ಲ ಚಾಚೂ ತಪ್ಪದೇ ಮಾಡಿದವು. “ನಿಮ್ಮ ಅಸ್ತಿತ್ವವೇ ಅಪಾಯದಲ್ಲಿದೆ” ಎಂಬ ತಪ್ಪುಸಂದೇಶವನ್ನು ಅತ್ಯಂತ ಅಚ್ಚುಕಟ್ಟಾಗಿ ಒಂದು ನಿರ್ದಿಷ್ಟ ಸಮುದಾಯಕ್ಕೆ ತಲುಪುವ ಹಾಗೆ ನೋಡಿಕೊಂಡವು. ’ಇನ್ನೇನು ನಿಮ್ಮನ್ನು ದೇಶದಿಂದ ಹೊರಹಾಕಿಯೇ ಬಿಡುತ್ತಾರೆ’ ಅಂತ ಹುಚ್ಚು ಕಲ್ಪನೆಯನ್ನು ಒಂದು ದೊಡ್ಡ ಸಂಖ್ಯೆಯ ಜನರ ತಲೆಯಲ್ಲಿ ವ್ಯವಸ್ಥಿತವಾಗಿ ತೂರಿಬಿಟ್ಟರು. ಆಹ್.. ಹೊತ್ತುತ್ತಿದ್ದ ಬೆಂಕಿಗೆ ಗಾಳಿ ಊದಿದಂತಾಯಿತು.
ಹ್ಮ್… ಇಷ್ಟೆಲ್ಲ ಏಕಾಯಿತು? ಅಂಥ ’ಸ್ಫೋಟಕ ವಸ್ತು’ ಈ ಕಾಯ್ದೆಯಲ್ಲಿದೆಯೇ? ಇದು ಅಸಾಂವಿಧಾನಿಕವೇ? ಇದು ಧರ್ಮಗಳ ನಡುವೆ ಪಕ್ಷಾತೀತ ಮಾಡುವ ಹುನ್ನಾರವೇ? ನಾಳೆ ನಮ್ಮನ್ನೂ ಹೊರಹಾಕಿಬಿಡುತ್ತಾರೆಯೇ?
ಇಂಥ ಪ್ರಶ್ನೆಗಳನ್ನೆಲ್ಲ ಕೇಳಿದಾಗ ಅಳಬೇಕೋ ನಗಬೇಕೋ ಗೊತ್ತಾಗುವುದಿಲ್ಲ. ಆದರೆ ಇಂಥ ಅಸಂಬದ್ಧಗಳನ್ನೇ ಅಷ್ಟು ವ್ಯವಸ್ಥಿತವಾಗಿ ಒಂದಿಷ್ಟು ಜನರ ತಲೆಗೆ ನಮ್ಮೆದುರೇ ತುಂಬಿ ಹುಯಿಲೆಬ್ಬಿಸಿಬಿಟ್ಟರಲ್ಲ ಎಂದು ನೆನೆಸಿಕೊಂಡರೆ ಬೇಸರವಾಗುತ್ತದಷ್ಟೇ. ಸರಿ ಈಗ ಕಾಯ್ದೆಯ ವಿಷಯಕ್ಕೆ ಬರೋಣ.
ಈ ಕಾಯ್ದೆ ಏನು ಹೇಳುತ್ತದೆ ಎಂದು ಬಹುಶಃ ನೀವೆಲ್ಲ ಇಷ್ಟುದಿನದಲ್ಲಿ ಖಂಡಿತವಾಗಿ ತಿಳಿದುಕೊಂಡಿರುತ್ತೀರಿ. ಆದರೂ ಒಂದು ಚಿಕ್ಕ ವಿವರಣೆ ಕೊಡುವುದು ನನ್ನ ಕರ್ತವ್ಯ. ಇದು ನಮ್ಮ ನೆರೆಹೊರೆಯಲ್ಲಿರುವ 3 ರಾಷ್ಟ್ರಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ, ಅವರು ಅಲ್ಲಿ ಧಾರ್ಮಿಕ ನೆಲೆಗಟ್ಟಿನಲ್ಲಿ ಹಿಂಸೆಗೊಳಗಾಗಿ ಭಾರತಕ್ಕೆ ಐದು ವರ್ಷಗಳ ಹಿಂದೆ – ಅಂದರೆ ಡಿಸೆಂಬರ್ 31, 2014ಕ್ಕೂ ಮೊದಲು ಓಡಿ ಬಂದಿದ್ದರೆ, ಅವರಿಗೆ ಭಾರತೀಯ ಪೌರತ್ವವನ್ನು ದಯಪಾಲಿಸುವ ಕಾಯ್ದೆ. ಈ ಕಾಯ್ದೆಯಡಿ ಆ ದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಅನ್ನಿಸಿಕೊಂಡಿರುವ ಆರು ಧರ್ಮಗಳನ್ನು ಪಟ್ಟಿಮಾಡಲಾಗಿದೆ – ಹಿಂದು, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ. ಈ ಧರ್ಮಗಳ ಜನರು ತಾವು ಇತರ ಧರ್ಮದವರು ಎಂಬ ಏಕೈಕ ಕಾರಣಕ್ಕೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾಗಿ, ಅಪಕೃತ್ಯ- ಅತ್ಯಾಚಾರಗಳಿಗೆ ಒಳಗಾಗಿ ಭಾರತದ ಗಡಿಯೊಳಗೆ ದಾಖಲೆಗಳಿಲ್ಲದೆ, ಅನುಮತಿಯಿಲ್ಲದೆ ಓಡಿ ಬಂದಿದ್ದರೂ – ಮಾನವೀಯ ನೆಲೆಗಟ್ಟಿನಲ್ಲಿ ನಾವು ಅವರಿಗೆ ಪೌರತ್ವ ಕೊಡುತ್ತೇವೆ ಎಂಬುದು ಈ ಕಾಯ್ದೆಯ ವಾಗ್ದಾನ. ‘ಮುಸ್ಲೀಮರನ್ನೇಕೆ ಹೊರಗಿಟ್ಟಿರಿ?’ ಆಯ್ತು, ಅಲ್ಲಿಗೇ ಬರೋಣ.
1947ರಲ್ಲಿ ದೇಶದ ವಿಭಜನೆ ನಡೆಯಿತು. ಯಾಕೆ ನಡೆಯಿತು, ಅದು ಸರಿಯೇ, ತಪ್ಪೇ, ಮಾಡಬಾರದಿತ್ತೇ? ಇವೆಲ್ಲ ಪೋಸ್ಟ್ ಮಾರ್ಟಮ್ ಗಳಿಗೆ ನಾನು ಹೋಗುವುದಿಲ್ಲ. ಹೌದು, 70 ವರ್ಷಗಳ ಹಿಂದೆ ಅಂಥದ್ದೊಂದು ಭಯಾನಕ ಘಟನೆ ನಡೆದುಹೋಯಿತು. ಕೋಟ್ಯಂತರ ಜನ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹಾದು ಬಂದರು. ಮೊದಲೇ ಬ್ರಿಟೀಷರು ನುಂಗಿ-ನೀರ್ಕುಡಿದಿದ್ದ ಆರ್ಥಿಕ ಪರಿಸ್ಥಿತಿ, ಅದರ ಮೇಲೆ ’ವಿಭಜನೆ’ ಎಂಬ ಬರೆ! ಲಕ್ಷಾಂತರ ಜನ ಹಾದಿ ಮಧ್ಯೆ ಸತ್ತರು, ಹಸಿದು ದಣಿದು ಸತ್ತರು. ಎರಡೂ ಕಡೆ ನಡೆಯಲೇಬಾರದಂತಹ ಘಟನೆಗಳು ನಡೆದುಹೋದವು. ಆದರೆ ಎರಡೂ ಕಡೆ, ನೂರಾರು ವರ್ಷಗಳಿಂದ, ತಲೆತಲೆಮಾರುಗಳಿಂದ ಅಲ್ಲೇ ವ್ಯವಸಾಯ ಮಾಡಿ, ಅಲ್ಲೇ ಬದುಕುಕಟ್ಟಿಕೊಂಡಿರುವವರಲ್ಲಿ ಅನೇಕರಿಗೆ ಅದನ್ನು ಬಿಟ್ಟುಬರಲಾಗಲಿಲ್ಲ. ಹೌದು! ಯಾರೋ ಎಲ್ಲೋ ದೊಡ್ಡ ಮಟ್ಟದಲ್ಲಿ, ಸಹಿಹಾಕಿದರು, ಒಪ್ಪಂದಕ್ಕೆ ಬಂದರು ಎಂಬ ಮಾತ್ರಕ್ಕೆ – it simply doesn’t make any sense to normal people living around, striving for a livelihood everyday to just leave everything and migrate to some unknown land. ಅಂಥವರು ಅಲ್ಲೇ ಉಳಿದರು. ಆಗಿನ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳಾಗಿ ಒಂದೇ ದೇಶವೆನಿಸಿಕೊಂಡಿದ್ದ ಈಗಿನ ಬಾಂಗ್ಲಾ ಮತ್ತು ಪಾಕಿಸ್ತಾನಗಳು ಅವರ ನೆಲೆಬೀಡಾದವು. ಆದರೆ ತಾನು ’ಇಸ್ಲಾಮಿಕ್ ಗಣರಾಜ್ಯ’ ಎಂದು ಅಧಿಕೃತವಾಗಿ ಘೋಷಿಸಿಕೊಂಡಿತು ನೋಡಿ ಪಾಕಿಸ್ತಾನ – ಅಲ್ಲಿನ ಮತೀಯ ಮೃಗಗಳಿಗೆ ಸರ್ಕಾರದ ಬೆಂಬಲ ಸಿಕ್ಕಂತಾಯಿತು. ‘ಕಾಫಿರ’ರ ಮೇಲೆ ದೌರ್ಜನ್ಯ ಮಾಡುವುದು ಒಂಥರಾ ಕಾನೂನಿಗೆ ವಿರುದ್ಧವಲ್ಲದ ಸಂಗತಿ ಎಂಬಂತಾಗಿಹೋಯಿತು. ಏಕೆಂದರೆ ಇಸ್ಲಾಮ್ ರಾಷ್ಟ್ರೀಯ ಧರ್ಮ ನೋಡಿ. ಆ ದೇಶ ತನ್ನನ್ನು ಗುರುತಿಸಿಕೊಳ್ಳುವುದೇ ಧರ್ಮದ ಆಧಾರದ ಮೇಲೆ – ಪಾಕಿಸ್ತಾನದ ಧ್ವಜವನ್ನು ನೋಡಿದರೆ ನಿಮಗೆಲ್ಲವೂ ಅರ್ಥವಾಗಿಬಿಡಬೇಕು.
ಪಾಕಿಸ್ತಾನದಲ್ಲಿ 1947ರಲ್ಲಿ 22%ರಷ್ಟು ಇದ್ದ ಇಸ್ಲಾಮೇತರ ಜನಸಂಖ್ಯೆ 2011ರ ವೇಳೆಗೆ 7.8% ಗೆ ಇಳಿದಿತ್ತು ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ. ಈಗಿನ ಅಂದಾಜಿನ ಪ್ರಕಾರ 3.1% ಗೆ ಇಳಿದಿದೆ. ಇವೆಲ್ಲ ಅಧಿಕೃತ ಲೆಕ್ಕಗಳಾದರೆ ವಾಸ್ತವವಾಗಿ ಇನ್ನೆಂಥ ದುಸ್ವಪ್ನವಿದೆಯೋ! ಹೀಗೊಂದು ವ್ಯವಸ್ಥಿತ ನರಮೇಧ ಆ ನೆಲಗಳಲ್ಲಿ ನಡೆದಿದೆ. 2017ರ ವರೆಗೆ ಪಾಕಿಸ್ತಾನದಲ್ಲಿ ಹಿಂದೂ ಪದ್ಧತಿಯ ಮದುವೆಗಳು ಕಾನೂನುಬಾಹಿರವಾಗಿದ್ದವು ಎಂಬ ವಿಷಯ ನಿಮಗೆ ಗೊತ್ತೇ? ಒಬ್ಬನು ಹಿಂದೂ ರೀತಿಯಲ್ಲಿ ಮದುವೆಯಾಗಿದ್ದರೆ, ಅದನ್ನು ಕಾನೂನು ಗುರುತಿಸುವುದಿಲ್ಲ. ನಾಳೆ ಯಾರೋ ಬಂದು ಆತನ ಪತ್ನಿಯನ್ನು ಅವನ ಕಣ್ಣೆದುರೇ ಅಪಹರಿಸಿಕೊಂಡುಹೋದರೂ ಕಾನೂನು ಅವನ ಸಹಾಯಕ್ಕೆ ಬರದು! ಇಂಥ ಸಾವಿರಾರು ಕಥನಗಳು, ಅಮಾನುಷ ಘಟನೆಗಳಿಗೆ ಆ ನೆಲಗಳು ಕಳೆದ 70 ವರ್ಷಗಳಲ್ಲಿ ಸಾಕ್ಷಿಯಾಗಿವೆ. ಪತ್ನಿಯನ್ನು ಕದ್ದೊಯ್ದರೂ, ಮನೆಯ ಮಕ್ಕಳನ್ನು ಅತ್ಯಾಚಾರಕ್ಕೊಳಪಡಿಸಿದರೂ, ಕೊನೆಗೆ ಬಂದು ತನ್ನನ್ನು ಕೊಂದು ಹೋದರೂ ದೇಶ ಅಥವಾ ಕಾನೂನು ಸಹಾಯಕ್ಕೆ ಬರುವುದಿಲ್ಲ ಎಂದು ಗೊತ್ತಾದಮೇಲೆ, ಜೀವಿಸುವ ಪರಿಸರ ಮತ್ತು ಪರಿಸ್ಥಿತಿ ದಿನದಿನಕ್ಕೂ ವಿಷಮವಾಗುತ್ತ ಹೋದಮೇಲೆ ಅನೇಕರು ಅಲ್ಲಿಂದ ಇಲ್ಲಿಗೆ ಗುಳೆ ಬರಲು ಪ್ರಾರಂಭಿಸಿದರು. ಅವರೇ ನಾವು ಮಾತನಾಡುತ್ತಿರುವ ನಿರಾಶ್ರಿತರು. ಅವರಿಗೇ ನಾವು ಮಾನವೀಯ ನೆಲೆಗಟ್ಟಿನಲ್ಲಿ ಪೌರತ್ವವನ್ನು ಕೊಡಲು ಸಿದ್ಧರಿದ್ದೇವೆ ಎನ್ನುತ್ತಿರುವುದು.
ಹಾಗಿದ್ದರೆ ‘ಇಸ್ಲಾಂ’ ಧರ್ಮವನ್ನು ಈ ಕಾಯ್ದೆಯಿಂದ ಹೊರಗಿಟ್ಟಿರುವುದೇಕೆ? ಸರಿ ಆ ವಿಷಯಕ್ಕೆ ಬರೋಣ. ಈ ಕಾಯ್ದೆ ಇರುವುದು ಆ ಮೂರು ದೇಶಗಳಲ್ಲಿ ಧಾರ್ಮಿಕ ನೆಲೆಗಟ್ಟಿನಲ್ಲಿ ತುಳಿತಕ್ಕೊಳಗಾದ ಅಲ್ಪಸಂಖ್ಯಾತರನ್ನು ಉದ್ದೇಶಿಸಿ. ಅಲ್ಲಿಗೆ ಆ ದೇಶಗಳಲ್ಲಿ ಮುಸ್ಲೀಮರು ಅಲ್ಪಸಂಖ್ಯಾತರೂ ಅಲ್ಲ, ಶೋಷಿತರೂ ಅಲ್ಲ. ಹಾಗಿದ್ದರೆ ಅಹ್ಮದಿಯರೂ, ಶಿಯಾಗಳು ಮೇಲೂ ಅಲ್ಲಿ ದೌರ್ಜನ್ಯಗಳಗುತ್ತವಲ್ಲ? ಅವರನ್ನೂ ಸೆಳೆದುಕೊಳ್ಳಬಹುದಲ್ಲ? ಮಾಡಬಹುದೇನೋ.. ಆದರೆ ಇದು ಈ ಕಾಯ್ದೆಯಡಿ ಬರುವುದಿಲ್ಲ. ಏಕೆಂದರೆ ಭಾರತದ ಅತ್ಯುತ್ಕೃಷ್ಟ ಕಾನೂನು ತಜ್ಞರಲ್ಲಿ ಒಬ್ಬರಾದ ಹರೀಶ್ ಸಾಳ್ವೆ ಅವರೇ ಹೇಳುವಂತೆ – ಒಂದು ದೇಶದಲ್ಲಿ ಅನೇಕ ಕಾರಣಗಳಿಂದ ನಿರ್ದಿಷ್ಟ ಗುಂಪಿನ ಜನರು ಕಿರುಕುಳಕ್ಕೆ ಒಳಗಾಗಿರಬಹುದು. ಸಾಮಾಜಿಕ ಕಾರಣಗಳಿರಬಹುದು, ಆರ್ಥಿಕ ಕಾರಣಗಳಿರಬಹುದು, ನಂಬಿಕೆಯ ಆಧಾರದ ಮೇಲೆ ಮೇಲು-ಕೀಳೆಂಬ ಭೇದದಿಂದಿರಬಹುದು. ಆದರೆ ಈ ಕಾಯ್ದೆ ಉದ್ದೇಶಿಸುತ್ತಿರುವ ಸಮೂಹ ‘ಧಾರ್ಮಿಕ ನೆಲೆಗಟ್ಟಿನಲ್ಲಿ’ ಕಿರುಕುಳಕ್ಕೆ ಒಳಗಾದವರನ್ನು ಮಾತ್ರ. ಅಹ್ಮದೀಯರಿರಲಿ, ಶಿಯಾಗಳಿರಲಿ ‘ಧಾರ್ಮಿಕ ನೆಲೆಗಟ್ಟಿನಲ್ಲಿ’ ಕಿರುಕುಳಕ್ಕೆ ಒಳಗಾದವರಲ್ಲ. ಏಕೆಂದರೆ ಅವರ ಧರ್ಮ ಬೇರೆಯದು ಎಂದು ಕಾನೂನು ಪರಿಗಣಿಸುವುದಿಲ್ಲ. ಅವರ ಧರ್ಮವೂ ಇಸ್ಲಾಮೇ. ಒಳಗಿನ ಕೆಲವು ನಂಬಿಕೆಗಳಿಂದ ಅಲ್ಲವರು ಕಿರುಕುಳಕ್ಕೆ ಒಳಗಾಗಿರಬಹುದು. ಆದರೆ ಈ ಕಾಯ್ದೆ ಅದನ್ನು ಉದ್ದೇಶಿಸುವುದಿಲ್ಲ.
ಅವರನ್ನೂ ಸೇರಿಸಬಹುದಲ್ಲ? ಏಕೆ ಬಿಡುತ್ತೀರಿ? ಮತ್ತು ಮೂರೇ ದೇಶಗಳು ಏಕೆ? ಮಯನ್ಮಾರನ್ನೂ ಸೇರಿಸಿ.. ರೊಹಿಂಗ್ಯಾಗಳಿಗೂ ಕೊಡಿ. ಚೀನಾದಲ್ಲಿ ಕಿರುಕುಳಾಕ್ಕೊಳಗಾದ ಮುಸ್ಲೀಮರಿಗೆ ಕೊಡಿ ಅನ್ನೋದು ಇನ್ನು ಕೆಲವರ ವಾದ. ಅಲ್ಲೇ ಅವರು ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳದೇ ಇರುವುದು. ಈ ಕಾಯ್ದೆ ಯಾವ ಉದ್ದೇಶಕ್ಕೆ ತರಲ್ಪಟ್ಟಿತು ಎಂಬುದನ್ನೇ ಮರೆತಿರುವುದು. ಇದು ದೇಶ ವಿಭಜನೆಯಾದ ಕಾಲದಲ್ಲಿ ಇಲ್ಲಿ ಬರಲಾಗದೇ ಅಲ್ಲೇ ಉಳಿದುಕೊಂಡರಲ್ಲ, ನಂತರ ಪರಿಸ್ಥಿತಿ ವಿಷಮವಾದಾಗ ಇಲ್ಲಿಗೆ ಗುಳೆ ಬಂದರಲ್ಲ, ಆ ಸಮಸ್ಯೆಯನ್ನು ಬಗೆಹರಿಸಲು ರಚಿಸಲ್ಪಟ್ಟಿದ್ದು. ಹಾಗೂ ಅಫಘಾನಿಸ್ತಾನದಲ್ಲೂ ಕೊಂಚ ಹರಡಿಕೊಂಡಿದ್ದ ಹಿಂದೂ, ಸಿಖ್ ಮುಂತಾದ ಜನಾಂಗಗಳು ದಶಕಗಳ ಕಾಲ ನಡೆದ ’ಆಫ್ಘನ್ ಯುದ್ಧ’ದಲ್ಲಿ ನರಳಿದ್ದರಲ್ಲ, ಅವರನ್ನು ಉದ್ದೇಶಿಸಲು. ಜಗತ್ತಿನ ಎಲ್ಲಾ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾದವರ ಸಮಸ್ಯೆಯನ್ನು ಬಗೆಹರಿಸಲು ರಚಿಸಿದ್ದಲ್ಲ. 1947ರಲ್ಲಿ ಈ ದೇಶದಿಂದ ವಿಭಜನೆಯಾದದ್ದು ಯಾವುವು? ಪಾಕಿಸ್ತಾನ ಮತ್ತು ಬಾಂಗ್ಲಾ. ಮಯನ್ಮಾರ್ ಆಗಲೀ, ಶ್ರೀಲಂಕಾವಾಗಲೀ, ಚೀನಾವಾಗಲೀ ಸ್ವಾತಂತ್ರ್ಯ ಸಿಕ್ಕಾಗ ನಡೆದ ನಮ್ಮಿಂದ ವಿಭಜಿತವಾದ ರಾಷ್ಟ್ರಗಳಲ್ಲ. ಈ ಕಾಯ್ದೆ ಬಹುವಾಗಿ ಆಗ ನಡೆದ ಘನಘೋರ ವಿಭಜನೆಯ ಸಂತ್ರಸ್ತರೂ ಅಲ್ಲ. ಈ ಕಾಯ್ದೆ ಆಗ ನಡೆದ ವಿಭಜನೆಯ ಸಂತ್ರಸ್ತ ಕುಟುಂಬಗಳಿಗೇ ಹೊರತು ನೀವಂದುಕೊಂಡಿರುವ ಹಾಗೆ ಜಗತ್ತಿನ ಎಲ್ಲಾ ಸಂತ್ರಸ್ತರಿಗೂ ಅಲ್ಲ.
ಇಷ್ಟು ಹೇಳಿದ ಮೇಲೂ, ಇನ್ನೂ ಕೆಲವರು ಮತ್ತೂ ಮುಂದೆ ಹೋಗಿ ‘ಇರಲಿ. ಇವರು ವಿಭಜನೆಯ ಸಂತ್ರಸ್ತರಲ್ಲದಿರಬಹುದು. ಎಲ್ಲರಿಗೂ ಪೌರತ್ವ ಕೊಡೋಣ. ಎಲ್ಲಿಂದ ಬಂದರೂ ಕೊಡೋಣ’ ಎನ್ನಬಹುದು. ಸ್ವಾಮಿ, ನೀವು ಮಹಾ ಮನವತಾವಾದಿಯೇ ಇರಬಹುದು. ಆದರೆ ದಯವಿಟ್ಟು ಲ್ಯಾಪ್ ಟಾಪ್, ಫೇಸ್ಬುಕ್, ಟ್ವಿಟ್ಟರ್ ಬಿಟ್ಟು ಮನೆಯಿಂದ ಹೊರಬಂದು ನಮ್ಮ ದೇಶವನ್ನೊಮ್ಮೆ ಕಣ್ಣುಬಿಟ್ಟು ನೋಡಿ. ಈ ದೇಶದಲ್ಲಿ ಇನ್ನೂ ಅರ್ಧಕ್ಕರ್ಧ ಜನ ಹಸಿವಿನಿಂದಿದ್ದಾರೆ. ಶಿಕ್ಷಣದ ಮಟ್ಟ ಸುಧಾರಿಸಬೇಕಾಗಿದೆ. ಭ್ರಷ್ಟಾಚಾರವಿದೆ. ಬಡತನವಿದೆ. ನಿರುದ್ಯೋಗವಿದೆ. ಸ್ವಚ್ಛತೆಯ ಸಮಸ್ಯೆಯೂ ಇದೆ. ಇಲ್ಲೇ ಜನರಿಗೆ ಮೂಲಭೂತ ಸೌಕರ್ಯವನ್ನು ತಕ್ಕ ಮಟ್ಟಿಗೆ ಒದಗಿಸಲು ನಮ್ಮಿಂದ ಸಾಧ್ಯವಾಗಿರದೇ ಇರುವಾಗ, ಜಗತ್ತಿನ ಎಲ್ಲೆಡೆಯಿಂದ ಜನರನ್ನು ಬರಮಾಡಿಕೊಳ್ಳೋಣವೇನು? ನಿಮಗೆ ಒಂದು ದೇಶ ಹೇಗೆ ಕಾರ್ಯನಿರ್ವಹಿಸುತ್ತದೆ, ಒಂದು ಸಮಾಜ ಸುಸ್ಥಿತಿಯಲ್ಲಿರಲು ಏನೇನು ಮಾಡಬೇಕಾಗುತ್ತದೆ ಎಂಬ ಕಿಂಚಿತ್ತು ಅರಿವಾದರೂ ಇದೆಯೇ? ನಮ್ಮ ಜನರಲ್ಲೇ ಎಲ್ಲರಿಗೂ ನಾವು ಎರಡು ಹೊತ್ತು ಊಟ ಕೊಡಲು ಸಾಧ್ಯವಾಗದೇ ಇರುವಾಗ, ಅವರನ್ನೂ ಬರಮಾಡಿಕೊಂಡರೆ – ಇಲ್ಲಿರುವ ಹಾಗೂ ಹೊಸತಾಗಿ ಬರುವ ಇಬ್ಬರಿಗೂ ಗೌರವಯುತ ಜೀವನವನ್ನು ಒದಗಿಸಲು ನಮಗೆ ಸಾಧ್ಯವಾಗುವುದಿಲ್ಲ. ಅದು ಖಂಡಿತ ಮಾನವೀಯತೆಯಲ್ಲ.ಈಗ ನಾವು ಬರಮಾಡಿಕುಳ್ಳುತ್ತಿರುವವರು, ಬಹುವಾಗಿ 70 ವರ್ಷದ ಹಿಂದೇ ನಮ್ಮಲ್ಲಿಗೆ ಬರಬೇಕಾಗಿದ್ದು, ಕಾರಣಾಂತರಗಳಿಂದ ಬರದೇ, ಅಲ್ಲಿ ಪರಿಸ್ಥಿತಿ ವಿಷಮವಾಗಿ ಬದುಕಲು ಸಾಧ್ಯವಾಗದೇ ಗುಳೆ ಬಂದವರಿಗಾಗಿ.
ಒಂದು ಜವಾಬ್ದಾರಿಯುತ ದೇಶವಾಗಿ ಅಷ್ಟೂ ಮಾಡದಿದ್ದರೆ, ಅದು ನಮ್ಮ ಮಾನವೀಯತೆನ್ನು ನಾವೇ ಅಪಹಾಸ್ಯ ಮಾಡಿಕೊಂಡಂತೆ. ಕೇವಲ ಅಜೆಂಡಾಗಳನ್ನು, ಐಡಿಯಾಲಜಿಗಳನ್ನು ಹೊತ್ತುಕೊಂಡು ಮೂರುಹೊತ್ತೂ ಪ್ರತಿಭಟಿಸುವವರಿಗೆ, ಏನೋ ಮಾಡುತ್ತೇನೆ ಎಂದು ಅಂದುಕೊಂಡಿರುವವರಿಗೆ ವಾಸ್ತವಗಳು ಅರ್ಥವಾಗುವುದು ಕಷ್ಟ. ಅಥವಾ ಒಂದು ಮಾನವೀಯ ಮತ್ತು ಸುಭದ್ರ ದೇಶವನ್ನು ಕಟ್ಟುವ ಯಾವ ಆಸಕ್ತಿಯೂ ಇವರಿಗೆ ಇಲ್ಲ ಎಂದೆನಿಸುತ್ತದೆ. ತಾವು ಸುಭಗರು ಎನ್ನಿಸಿಕೊಳ್ಳಬೇಕು, ತಾವು ಪ್ರಸಿದ್ಧಿ ಪಡೆಯಬೇಕು, ತಮ್ಮ ಮೂಗಿನ ನೇರಕ್ಕೇ ಎಲ್ಲವೂ ನಡೆಯಬೇಕು ಎಂದಾಗಲು ಇವರು ದೇಶದ ತಲೆಯಮೇಲೆ ಕಲ್ಲು ಜರುಗಿಸಲೂ ಸಿದ್ಧ! ತಮ್ಮ ಹುಚ್ಚು ಚಪಲಗಳಿಗೆ ದೇಶದ ಹಿತಾಸಕ್ತಿಯನ್ನು, ಭದ್ರತೆಯನ್ನು ಬಲಿಕೊಡಲು ಸಿದ್ಧ. ದೇಶದೊಳಗೇ ಸುಳ್ಳುಸುದ್ದಿಗಳನ್ನು ಬಿಟ್ಟು, ಜನರನ್ನು ತಪ್ಪು ದಾರಿಗೆಳೆದು ಅಸ್ಥಿರತೆ ಸೃಷ್ಟಿಸುತ್ತಿರುವ ಇಂಥವರ ಮೇಲೆ ನಿಗಾ ಇಡುವುದು ಒಳಿತು. ಈ ನಾಟಕಗಳು ತುಂಬಾ ಬೆಳೆಯಲು ಬಿಟ್ಟರೆ, ಮುಂದೆ ನಮಗೇ ಅಪಾಯ. ಏಕೆಂದರೆ, ದೇಶವಿದ್ದರೆ ಮಾತ್ರ ನಾನು, ನೀವು. ದೇಶ ಅಸ್ಥಿರವಾದರೆ ನಮಗೇ ಮುಂದೊಂದು ದಿನ ಮತ್ತೊಂದು ದೇಶ CAA ಮಾಡಬೇಕಾದೀತು!
ಅಥೆನ್ಸ್ನಲ್ಲಿಲ್ಲದ ಒಂದು ಅಯೋಧ್ಯೆಯಲ್ಲಿತ್ತು! ಅದೇ ಧರ್ಮ
– ಸಂತೋಷ್ ತಮ್ಮಯ್ಯ
ಆಧುನಿಕ ವಾಸ್ತು ಪ್ರಾಕಾರಗಳಲ್ಲಿ ಅತ್ಯಂತ ಜನಪ್ರೀಯತೆಯನ್ನು ಗಳಿಸಿರುವ ಶೈಲಿಗಳಲ್ಲಿ ಗ್ರೀಕ್ ಶೈಲಿಯೂ ಒಂದು. ಅಮೆರಿಕಾದ ವೈಟ್ ಹೌಸಿನಿಂದ ಹಿಡಿದು ಕರ್ನಾಟಕದ ಮಹಾನಗರಗಳ ಪುರಭವನಗಳವರೆಗೂ ಗ್ರೀಕ್ ವಾಸ್ತುಶೈಲಿ ತನ್ನ ಛಾಪನ್ನು ಒತ್ತಿದೆ. ಬೃಹದಾಕಾರದ ಉದ್ದನೆಯ ಕಂಬಗಳು, ಏನೋ ಒಂದು ಗಾಂಭೀರ್ಯವನ್ನೂ ರಾಜಕಳೆಯನ್ನೂ ಒಡಲಲ್ಲಿಟ್ಟುಕೊಂಡ ಈ ಶೈಲಿಯ ಕಟ್ಟಡಗಳು ಕೊಂಚ ಅಧ್ಯಾತ್ಮದ ಭಾವವನ್ನೂ, ಕೊಂಚ ಭೀತಿಯ ಲಕ್ಷಣವನ್ನೂ ಸೂಸುತ್ತಿರುವಂತೆ ಕಾಣಿಸುತ್ತವೆ. ಇಂಥ ಕಟ್ಟಡಗಳು ಇಂದು ಜಗತ್ತಿನ ಸಾಮಾಜಿಕ ಸಂರಚನೆಯನ್ನೂ ಮೀರಿ, ರಾಜಕೀಯ ವಾತಾವರಣವನ್ನೂ ದಾಟಿ, ಪ್ರಾದೇಶಿಕತೆಯ ಶೈಲಿಗಳೆಡೆಯಲ್ಲೂ ಜನಪ್ರೀಯತೆಯನ್ನು ಪಡೆದುಕೊಂಡಿವೆ. ಪುರಾತನ ಗ್ರೀಕ್ ಸಂಸ್ಕೃತಿಗೆ ಮೆರುಗನ್ನೂ ಆಧುನಿಕ ವಾಸ್ತುಶೈಲಿಗೆ ಸವಾಲನ್ನೂ ಒಡ್ಡಿರುವ ಈ ಶೈಲಿ ಗ್ರೀಕ್ ನಾಗರಿಕತೆ ಅಳಿದರೂ ತಾನು ಅಳಿಯದೆ ಉಳಿದುಕೊಂಡಿದೆ. ಅಷ್ಟೇನೂ ಸೂಕ್ಷ್ಮತೆಯಿಲ್ಲದ, ನಾಜೂಕುತನವಿಲ್ಲದ, ಹೆಚ್ಚೇನೂ ಕೌಶಲ್ಯವಿಲ್ಲದಂತೆ ಕಾಣುವ ಗ್ರೀಕ್ ಶೈಲಿ ತನ್ನ ಸರಳತೆಯಿಂದಲೂ ಯೂರೋಪನ್ನು ದಾಟಿ ದೂರದ ಕೊಡಗು-ಚಿಕ್ಕಮಗಳೂರಿನ ಕಾಫಿ ಪ್ಲಾಂಟರುಗಳ ಬೃಹತ್ ಬಂಗಲೆಗಳಲ್ಲೂ ಪ್ರಾತಿನಿಧ್ಯವನ್ನು ಪದೆದುಕೊಂಡಿವೆ. ಜಗತ್ತಿನ ಚಿತ್ರರಂಗದ ಸಿನೆಮಾ ಸೆಟ್ಟುಗಳಲ್ಲಿ, ಕಾವ್ಯ-ಕಥೆಗಳಲ್ಲಿ ರೂಪಕದಂತೆಯೂ ಬಳಕೆಯಾಗಿದೆ. ಭಗ್ನ ಪ್ರೇಮದ ಸಂಕೇತಗಳಂತೆಯೂ ಬಳಕೆಯಾಗಿದೆ ಎಂದರೆ ಅದರ ಜನಪ್ರೀಯತೆಯನ್ನು ಅಂದಾಜಿಸಬಹುದು. ವಸಹಾತುಷಾಹಿ ಬುದ್ಧಿಯ ಬ್ರಿಟಿಷ್,ಫ್ರೆಂಚ್,ಡಚ್ ಜನಗಳ ಕಡಲು ದಾಟಿ ಮೆರೆಯುವ ಜಾಯಮಾನಗಳಿಂದ ಆ ಶೈಲಿ ವಿಶ್ವವ್ಯಾಪಿಯಾಗಿದ್ದೇನೋ ನಿಜ. ಆದರೆ ಅದನ್ನು ಜಗತ್ತು ಗುರುತಿಸುವುದು ಗ್ರೀಕ್ ಶೈಲಿ ಎಂದೇ.
ಇಂಥಾ ವಿಖ್ಯಾತ ವಾಸ್ತು ಶೈಲಿಯ ಮೂಲವಿರುವುದು ಪುರಾತನ ಅಥೆನ್ಸಿನ ಪಾರ್ಥೆನಾನ್ ದೇವಿ ಮಂದಿರದಲ್ಲಿ. ತನ್ನ ಶೈಲಿ ಜಗತ್ತಿನಾದ್ಯಂತ ಹರಡಿದ್ದರೂ ಇಂದಿಗೂ ಪಾರ್ಥೆನಾನ್ ಒಂದು ಮುರುಕು ಮಂಟಪವೇ. ತನ್ನತನವನ್ನು ಜಗತ್ತಿಗೆ ಹರಡಿದ ಮೇಲೆ ಇನ್ನು ಕೆಲಸವೇನಿದೆ ಎಂಬಂತೆ ಒಂದು ಕಾಲದ ಪಾರ್ಥೆನಾನ್ ಅದೇ ಗ್ರೀಸಿನ ಅಕ್ರೊಪೊಲೀಸ್ ಬೆಟ್ಟದ ಮೇಲೆ ನಿಡುಸುಯ್ಯುವಂತೆ ಬಿದ್ದುಕೊಂಡಿದೆ. ಇಷ್ಟೇ ಆಗಿದ್ದರೆ ಅದರಲ್ಲೇನೋ ವಿಶೇಷವಿರುತ್ತಿರಲಿಲ್ಲ. ಕೇವಲ ವಾಸ್ತು ಶಾಸದ ಶೈಲಿಯೊಂದರ ಬಣ್ಣನೆ ಸದ್ಯದ ಆವಶ್ಯಕತೆಯಂತೂ ಖಂಡಿತಾ ಅಲ್ಲ.