ಸಾಹಿತ್ಯಕ್ಷೇತ್ರದ ಒಳಹೊರಗು-6
– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ
ಸಾಹಿತ್ಯ ಕ್ಷೇತ್ರದ ಒಳಹೊರಗು – 1
ಸಾಹಿತ್ಯ ಕ್ಷೇತ್ರದ ಒಳಹೊರಗು – 2
ಸಾಹಿತ್ಯ ಕ್ಷೇತ್ರದ ಒಳಹೊರಗು – 3
ಸಾಹಿತ್ಯ ಕ್ಷೇತ್ರದ ಒಳಹೊರಗು – 4
ನಾವಿಂದು ಬಹುಶಿಸ್ತು, ಬಹುಜ್ಞಾನದ ಯುಗದಲ್ಲಿದ್ದೇವೆ. ಅದರಲ್ಲೂ ಇದು ವಿಶೇಷಜ್ಞತೆಯ ಕಾಲ. ಎಲ್ಲದಕ್ಕೂ ಸ್ಪೆಶಲೈಸೇಶನ್ ಇರಬೇಕೆಂದು ಬಯಸುತ್ತೇವೆ. ಉಳಿದೆಲ್ಲ ಕ್ಷೇತ್ರಗಳಂತೆ ಸಾಹಿತ್ಯವನ್ನೂ ಇದು ಆವರಿಸಿದೆ. ಇಂಥ ವಿಶೇಷಜ್ಞತೆಯಲ್ಲಿ ಲಾಭವೂ ಇದೆ, ನಷ್ಟವೂ ಇದೆ. ಆಧುನಿಕ ಶಿಕ್ಷಣ ವ್ಯವಸ್ಥೆ ಬ್ರಿಟಿಷರ ಬಳುವಳಿಯಾಗಿ ನಮಗೆ ಬರುವವರೆಗೂ ಎಲ್ಲ ಜ್ಞಾನವನ್ನೂ ತತ್ತ್ವಶಾಸ್ತ್ರದ ಅಡಿಯಲ್ಲೇ ಅಧ್ಯಯನ ಮಾಡಲಾಗುತ್ತಿತ್ತು. ಆಗ ಗಣಿತ, ಸಾಹಿತ್ಯ, ಇತಿಹಾಸ, ಭಾಷೆ ಎಂದು ಬೇರ್ಪಡಿಸಿ ನೋಡುವ ಕ್ರಮ ಇರಲಿಲ್ಲ. ಇದರಿಂದ ಭಿನ್ನ ಜ್ಞಾನಗಳು ಒಂದೇ ಮರದ ವಿವಿಧ ಶಾಖೆಗಳಂತೆ ಪರಸ್ಪರ ಸಂಬಂಧವಿಟ್ಟುಕೊಳ್ಳಲು ಹಾಗೂ ಆ ಮೂಲಕ ಎಲ್ಲ ವಿಷಯಗಳಲ್ಲೂ ಮಾಹಿತಿ ಸಮವಾಗಿಯೂ ಸಮಗ್ರವಾಗಿಯೂ ಇರಲು ಅನುಕೂಲವಾಗುತ್ತಿತ್ತು. ಉದಾಹರಣೆಗೆ ಸಾಹಿತ್ಯ ಅಧ್ಯಯನದಲ್ಲಿ ಪ್ರಾಚೀನ ಕವಿಯೊಬ್ಬನ ಇತಿವೃತ್ತ ಹೇಳುವಾಗ ಅದಕ್ಕೆ ಇತಿಹಾಸ, ಹಸ್ತಪ್ರತಿಶಾಸ್ತ್ರ ಹಾಗೂ ಶಾಸನಶಾಸ್ತ್ರಗಳ ನೆರವು ಬೇಕೇ ಬೇಕು. ಸಾಹಿತ್ಯದ ವಿದ್ಯಾರ್ಥಿಗೆ ಈಗ ಬೇರೆಯಾಗಿರುವ ಈ ಎಲ್ಲ ಶಾಸ್ತ್ರಗಳ ಅರಿವೂ ಅಪೇಕ್ಷಣೀಯ. ಈಗೀಗ ಏನಾಗುತ್ತಿದೆ ನೋಡೋಣ. ವಿಶ್ವವಿದ್ಯಾನಿಲಯವೊಂದರಲ್ಲಿ ಇತಿಹಾಸ ವಿಭಾಗದ ಸಮ್ಮೇಳನವೋ ವಿಚಾರ ಸಂಕಿರಣವೋ ಅಥವಾ ಗೋಷ್ಠಿಯೋ ನಡೆಯುತ್ತದೆ. ಅದರಲ್ಲಿ ಇತಿಹಾಸ ವಿಭಾಗದವರದ್ದೇ ಮಾತು-ಚರ್ಚೆ. ಸಾಹಿತ್ಯ, ಶಾಸನಶಾಸ್ತ್ರ ವಿಭಾಗದವರು ಬೇಕಿದ್ದರೆ ತಾವೇ ಅಂಥದ್ದೊಂದು ಸಮ್ಮೇಳನ ಆಯೋಜಿಸಿಕೊಳ್ಳಬೇಕು. ತಮ್ಮ ಸಮ್ಮೇಳನಕ್ಕೆ ಬರಬೇಡಿ ಎಂದು ಇತಿಹಾಸದವರೇನೂ ಹೇಳುವುದಿಲ್ಲ. ಹಾಗಾಗಿ ಆ ಸಮ್ಮೇಳನದಲ್ಲಿ ಪ್ರೇಕ್ಷಕರಾಗಿ ಕುಳಿತೆದ್ದುಬರಬಹುದು. ವಿಜಯನಗರ ಅರಸರ ಕುರಿತ ಸಮ್ಮೇಳನವನ್ನು ಇತಿಹಾಸ ವಿಭಾಗ ಆಯೋಜಿಸಿದರೆ ಅಲ್ಲಿ ಶಾಸನತಜ್ಞರು, ಸಾಹಿತಿಗಳು ಇರಬೇಕಾದುದು ಅಗತ್ಯ. ಇಲ್ಲವಾದಲ್ಲಿ ಶಾಸನದವರು ತಮ್ಮ ಪಾಡಿಗೆ ಶಾಸನ ಓದಿ ಪಠ್ಯ ಬರೆದಿಡುವುದು, ಸಾಹಿತ್ಯದವರು ವಿಜಯನಗರ ಕಾಲದ ಸಾಹಿತ್ಯವನ್ನು ಸುಮ್ಮನೇ ಓದಿ ಇಡುವುದು, ಇತಿಹಾಸದವರು ಲಭ್ಯ ಐತಿಹಾಸಿಕ ದಾಖಲೆಗಳ ಪ್ರಕಾರ ತಮ್ಮ ಪಾಡಿಗೆ ತಾವು ಆ ಕಾಲದ ವಿಷಯವನ್ನು ದಾಖಲಿಸುವುದು ನಡೆದರೆ ಒಂದೊಂದು ವಿಷಯದಲ್ಲಿ ಒಂದೊಂದು ಮಾಹಿತಿಯ ಜೊತೆಗೆ ಅಸಮಗ್ರತೆಗೆ ದಾರಿಯಾಗಬಹುದು.
ಸಾಹಿತ್ಯ ಕ್ಷೇತ್ರದ ಒಳಹೊರಗು – 5
– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ
ಸಾಹಿತ್ಯ ಕ್ಷೇತ್ರದ ಒಳಹೊರಗು – 1
ಸಾಹಿತ್ಯ ಕ್ಷೇತ್ರದ ಒಳಹೊರಗು – 2
ಸಾಹಿತ್ಯ ಕ್ಷೇತ್ರದ ಒಳಹೊರಗು – 3
ಸಾಹಿತ್ಯ ಕ್ಷೇತ್ರದ ಒಳಹೊರಗು – 4
ಏನ ಬಂದಿರಿ, ಹದುಳವಿದ್ದಿರೆ ಎಂದೊಡೆ ನಿಮ್ಮ ಮೈಸಿರಿ ಹಾರಿ ಹೋಹುದೆ? ಎಂದು ಬಸವಣ್ಣನವರು ಅಂದೇ ಕೇಳಿದ್ದರು. ನಮ್ಮ ಜನರ ವರ್ತನೆಯನ್ನು ಅವರು ಚೆನ್ನಾಗಿ ಬಲ್ಲವರಾಗಿದ್ದರು ಎನಿಸುತ್ತದೆ. ಮನೆಗೆ ಬಂದವರನ್ನು ಉಪಚರಿಸುವ ಸಂದರ್ಭದಲ್ಲಿ ಅವರು ಹೇಳಿದ ಜನರ ಸಣ್ಣತನದ ವರ್ತನೆ ಕುರಿತ ಈ ಮಾತಿನ ಆಶಯವನ್ನು ಬೇರೆ ಬೇರೆ ಕಡೆಗಳಲ್ಲೂ ಅನ್ವಯಿಸಬಹುದು. ಸಾಹಿತ್ಯ ಕ್ಷೇತ್ರದಲ್ಲಂತೂ ಇದಕ್ಕೆ ಮತ್ತೆ ಮತ್ತೆ ನಿದರ್ಶನಗಳು ದೊರೆಯುತ್ತವೆ. ಒಂದು ಘಟನೆ. ಸಮ್ಮೇಳನವೊಂದರಲ್ಲಿ ಹೊಸಬರೊಬ್ಬರು ಪ್ರಬಂಧ ಮಂಡಿಸಿದ್ದರು. ಉತ್ತಮ ಪ್ರಬಂಧವೆಂದು ಆ ಗೋಷ್ಠಿಯ ಅಧ್ಯಕ್ಷರೊಬ್ಬರು ಸಕಾರಣವಾಗಿ ವಿಶ್ಲೇಷಿಸಿ, ಅಭಿನಂದಿಸಿದರು. ಅದೇ ಪ್ರಬಂಧಕಾರರೊಂದಿಗೆ ಮತ್ತೆ ಮೂವರು ಪ್ರಬಂಧ ಮಂಡಿಸಿದ್ದರು. ಅವುಗಳಲ್ಲಿ ಒಂದು ಪ್ರಬಂಧ ನೀಡಲಾದ ವಿಷಯಕ್ಕೆ ಸಂಬಂಧವೇ ಇಲ್ಲದಂತಿದ್ದರೆ, ಮತ್ತೊಬ್ಬರು ಏನನ್ನೂ ಬರೆದುಕೊಂಡು ಬಂದಿರದೇ ಆಶುಕವಿತ್ವದಂತೆ ಅಲ್ಲೇ ತೋಚಿದ್ದನ್ನು ಒಂದಿಷ್ಟು ಹೇಳಿದ್ದರು. ಇನ್ನೊಬ್ಬರು ತಕ್ಕಮಟ್ಟಿಗೆ ವಿಷಯಕ್ಕೆ ನ್ಯಾಯ ಒದಗಿಸಿದ್ದರೆಂದು ಅಧ್ಯಕ್ಷತೆ ವಹಿಸಿದ್ದ ಹಿರಿಯರು ಹೇಳಿ ಅಂಥ ಗಂಭೀರ ಸಮ್ಮೇಳನಗಳಲ್ಲಿ ವಿಷಯ ಮಂಡನೆ ಹೇಗಿರಬೇಕೆಂದೂ ತಿಳಿಸಿದರು. ವೇದಿಕೆಯಿಂದ ಇಳಿದ ಮೇಲೆ ಉಳಿದ ಪ್ರಬಂಧಕಾರರು ಉತ್ತಮ ಪ್ರಬಂಧ ಮಂಡಿಸಿದ್ದ ವ್ಯಕ್ತಿಯನ್ನು ಅಭಿನಂದಿಸುವುದಿರಲಿ, ಸೌಜನ್ಯಕ್ಕೂ ಮಾತನಾಡಿಸದೇ ಆಜನ್ಮ ವೈರಿಯಂತೆ ಕಂಡು ಮುಖ ತಿರುಗಿಸಿಕೊಂಡು ಹೊರಟೇಹೋದರಂತೆ. ಅಧ್ಯಕ್ಷತೆ ವಹಿಸಿದ್ದವರಿಗೂ ಉತ್ತಮ ಪ್ರಬಂಧ ಮಂಡಿಸಿದ್ದವರಿಗೂ ಉಳಿದ ಪ್ರಬಂಧಕಾರರಿಗೂ ಮೊದಲು ಪರಿಚಯವೇ ಇರಲಿಲ್ಲ. ವೇದಿಕೆಯಲ್ಲೇ ಅವರೆಲ್ಲ ಮೊದಲಬಾರಿ ಮುಖ ನೋಡಿಕೊಂಡಿದ್ದು. ವಸ್ತುನಿಷ್ಠವಾಗಿ ಅಧ್ಯಕ್ಷರು ಹೇಳಿದ್ದರು ಅಷ್ಟೆ. ಆದರೆ ಅನಂತರ ಹೊರಗೆ ಖಾಸಗಿಯಾಗಿ ಉಳಿದ ಪ್ರಬಂಧಕಾರರು ಮಾತನಾಡುತ್ತ ಆ ಪ್ರಬಂಧ ಚೆನ್ನಾಗಿತ್ತು ಕಣ್ರೀ, ಅಲ್ಲೇ ಅವರಿಗೆ ಹೇಳಿದ್ದರೆ ಸುಮ್ಮನೇ ಅವರಿಗೆ ಸ್ಕೋಪು ಕೊಟ್ಟಂತಾಗುತ್ತದೆ ಎಂದು ಹೇಳಿಲ್ಲ ಅಷ್ಟೆ ಅಂದರಂತೆ! ಅದೇನೇ ಇರಲಿ. ಅಧ್ಯಕ್ಷತೆ ವಹಿಸಿದವರು ಹೇಳಿದ ಮಾತಿನಲ್ಲಿ ಹುರುಳಿರಲಿಲ್ಲ, ಅದೊಂದು ಕೆಟ್ಟ ಪ್ರಬಂಧವಾಗಿತ್ತು ಎಂದಾದರೆ ಅದರ ಚರ್ಚೆಗೆ ಅವಕಾಶವಿತ್ತು. ಆ ಕುರಿತು ಪ್ರಶ್ನೆಯೇ ಇರದಿದ್ದರೆ ಉತ್ತಮ ಪ್ರಬಂಧ ಮಂಡಿಸಿದವರನ್ನು ಅಭಿನಂದಿಸುವ ಔದಾರ್ಯವಾದರೂ ಬೇಡವೇ ಎಂಬುದು ಇಲ್ಲಿರುವ ಪ್ರಶ್ನೆ.
ಸಾಹಿತ್ಯಕ್ಷೇತ್ರದ ಒಳಹೊರಗು – 4
– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ
ಡಿವಿಜಿ ಹೇಳಿದರು: ಹಳೆ ಬೇರು ಹೊಸ ಚಿಗುರು ಕೂಡಿರಲು ಮರಸೊಗಸು! ಎಂಥಾ ಮಾತು! ಇದನ್ನು ಸಮಾಜ-ಕುಟುಂಬ ಸೇರಿದಂತೆ ಯಾವ ಕ್ಷೇತ್ರಕ್ಕೂ ಅನ್ವಯಿಸಬಹುದು. ಹಾಗೆಯೇ ಸಂಗೀತ, ಸಾಹಿತ್ಯಕ್ಕೂ ಅನ್ವಯಿಸಿ ನೋಡಬಹುದು. ಇದರಿಂದ ನಿರಾಸೆ ಕಾದಿದ್ದರೂ ಅಚ್ಚರಿ ಇಲ್ಲ.
ಮೈಸೂರಿನಲ್ಲಿ ವರ್ಷಗಳ ಹಿಂದೆ ಒಂದು ಕಾರ್ಯಕ್ರಮ. ಖ್ಯಾತ ನೃತ್ಯಗುರು, ಹಿರಿಯ ಕಲಾವಿದೆ ಡಾ. ವಸುಂಧರಾ ದೊರೆಸ್ವಾಮಿ ಅವರಿಗೆ ಶಿಷ್ಯವೃಂದದಿಂದ ಅಭಿನಂದನೆ. ಆಮೇಲೆ ಅವರು ಮಾತನಾಡುತ್ತ, ನನ್ನ ಬಳಿ ಭರತ ನಾಟ್ಯ ಕಲಿಯಲು ಉತ್ಸಾಹದಿಂದಲೇ ಹೊಸಬರು ಬರುತ್ತಾರೆ. ನಾಲ್ಕಾರು ಹೆಜ್ಜೆಗಳನ್ನು, ಒಂದಿಷ್ಟು ಅಂಗಾಭಿನಯ ಕಲಿತು ವಿದೇಶಕ್ಕೆ ಹೋಗಿಬಿಡುತ್ತಾರೆ. ಹಣ ಮಾಡುವ ಹುಮ್ಮಸ್ಸು. ನಾಟ್ಯ, ನಟುವಾಂಗಗಳ ಬಗ್ಗೆ ಸಮಗ್ರ ಪರಿಜ್ಞಾನ ಪಡೆಯುವ ವ್ಯವಧಾನವೇ ಇಂದಿನ ತಲೆಮಾರಿನಲ್ಲಿ ಇಲ್ಲ ಎಂದು ಹೇಳಿದರು. ಅಸಾಧಾರಣ ಕಲಾವಿದೆಯಾದ ಅವರು ವಿಷಾದದಿಂದಲೇ ಈ ಮಾತು ಹೇಳಿದ್ದರು. ಕಲಿಕೆಯಲ್ಲಿನ ಶ್ರದ್ಧೆ ಕುರಿತ ಇದೇ ಮಾತು ಸಾಹಿತ್ಯಕ್ಕೂ ಸಲ್ಲುತ್ತದೆ. ಸಾಹಿತ್ಯ ಕ್ಷೇತ್ರ ಪ್ರವೇಶಿಸುವವರೆಲ್ಲ ವಿದೇಶಕ್ಕೆ ಹೋಗಿಬಿಡುವುದಿಲ್ಲ. ಕನ್ನಡ ಸಾಹಿತ್ಯ ಓದುದವವರ ಕಾರ್ಯವ್ಯಾಪ್ತಿಯೂ ದೇಶ, ಭಾಷೆಗಳ ಕಾರಣದಿಂದ ಸೀಮಿತವಾಗಿಹೋಗಿದೆ; ಅಥವಾ ಹಾಗೆ ಭಾವಿಸಲಾಗಿದೆ; ಅಥವಾ ತಮಗೆ ತಾವೇ ಮಿತಿಯನ್ನು ಇವರೇ ವಿಧಿಸಿಕೊಂಡುಬಿಡುತ್ತಾರೆ. ಸ್ನಾತಕೋತ್ತರ ಪದವಿ ಅಥವಾ ಪಿಎಚ್.ಡಿ ಪದವಿಯಲ್ಲಿ ಭಾಷಾ ಪ್ರಯೋಗವನ್ನು ಅರ್ಧಂಬರ್ಧ ಕಲಿತು ತಾವು ಚಿಂತಕರೆಂದೋ ಸಾಹಿತಿಗಳೆಂದೋ ಇಲ್ಲವಾದಲ್ಲಿ ಕೊನೆಗೆ ಲೇಖಕರೆಂದೋ ಬೋರ್ಡು ಹಾಕಿಕೊಂಡೇಬಿಡುತ್ತಾರೆ. ಜೊತೆಗೆ ಪತ್ರಿಕೆ, ಟಿವಿ ಕಾರ್ಯಕ್ರಮ ಇತ್ಯಾದಿಗಳ ಲಾಬಿ ಶುರು ಮಾಡಿ ಪ್ರಚಾರದ ಹಿಂದೆ ಹೋಗುತ್ತಾರೆ. ಅಲ್ಲಿಗೆ ಅವರ ಕಲಿಕೆ ಮುಗಿದಂತೆ. ಹಳೆಯದನ್ನು ತಿರುಗಿಯೂ ನೋಡದೇ ಹೊಸದನ್ನು ಅರಗಿಸಿಕೊಳ್ಳದೇ ಕಲಿತಷ್ಟೇ ವಿದ್ಯೆಯನ್ನು ತಿರುಚುತ್ತ ಚಾಲ್ತಿಯಲ್ಲಿ ಇರಲು ಬಯಸುತ್ತಾರೆ. ಇದು ಯುವ ಸಾಹಿತ್ಯಾಸಕ್ತರ ಒಂದು ಮುಖ.
ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೩
-ಡಾ.ಶ್ರೀಪಾದ ಭಟ್, ತುಮಕೂರು
ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೧
ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೨
ಸಾಹಿತ್ಯದ ಮಾರ್ಕೆಟಿಂಗ್!
ಇಂದು ಎಲ್ಲ ಕ್ಷೇತ್ರಕ್ಕೂ ಅನಿವಾರ್ಯವಾದ ಮಾರ್ಕೆಟಿಂಗ್ ಸಾಹಿತ್ಯವನ್ನು ಬಿಡುತ್ತದೆಯೇ? ಹೇಳಿಕೇಳಿ ಸಾಹಿತ್ಯ ಎಂಬುದು ಪುಸ್ತಕೋದ್ಯಮದ ಭಾಗವಾಗಿ ಹೋಗಿದೆ. ಉದ್ಯಮ ಎಂದ ಮೇಲೆ ಮುಗೀತು. ಆದರ್ಶಗಳು ಏನಿದ್ದರೂ ಅದನ್ನು ಹಿಂಬಾಲಿಸಬೇಕಷ್ಟೆ. ಸಾಹಿತಿಗಳೆನಿಸಿಕೊಂಡವರು ಈ ಉದ್ಯಮವನ್ನು ಹಿಂಬಾಲಿಸುತ್ತಿದ್ದಾರೆ. ಕೆಲವೊಮ್ಮೆ ಇದು ಉಲ್ಟಾ ಆಗಿ ತಮಾಷೆಗಳೂ ಆಗುವುದುಂಟು. ಕನ್ನಡದಲ್ಲಿ ಎಲ್ಲೂ ಹೆಸರೇ ಕೇಳಿರದ ಸಂಪತ್ತೈಯ್ಯಂಗಾರ್ ಎಂಬ ಎಪ್ಪತ್ತು ದಾಟಿದ ವೃದ್ಧರೊಬ್ಬರಿಗೆ ತಮ್ಮ ಅರುವತ್ತು ವರ್ಷದ ಪಾಕಶಾಸ್ತ್ರದ ಪ್ರಾವೀಣ್ಯವನ್ನು ಕನ್ನಡದಲ್ಲಿ ದಾಖಲಿಸಬೇಕೆಂಬ ಹಂಬಲ ಹುಟ್ಟಿತು. ಅನುಭವವನ್ನು ಬರೆದರು. ಒಂದಿಷ್ಟು ಪುಟಗಳಾದವು. ಆಸಕ್ತರಿಗೆ ಓದಲು ನೀಡಿ ಸಲಹೆ ಕೇಳಿದರು. ಅದರಂತೆ ತಿದ್ದಿ ತೀಡಿ ಮತ್ತೆ ಬರೆದು ಒಂದು ಪುಸ್ತಕವಾಗುವಷ್ಟು ಬರೆದರು. ಅಚ್ಚುಮಾಡಿಸಲು ಹೆಸರಾಂತ ಪ್ರಕಾಶಕರ ಅಂಗಡಿ ಮುಂದೆ ದಿನಗಟ್ಟಲೆ ನಿಂತರು. ಅವರು ಕಾಣದ ಪ್ರಕಾಶಕರಿಲ್ಲ. ಆದರೆ ಎಲ್ಲರದೂ ಒಂದೇ ಉತ್ತರ-ಆಗಲ್ಲ ಹೋಗಿ. ಪುಟ ತೆರೆದು ನೋಡುವ ವ್ಯವಧಾನವೂ ಪ್ರಕಾಶಕರಿಗಿಲ್ಲ. ಯಾಕೆಂದರೆ ಈ ಅಯ್ಯಂಗಾರರು ಹೆಸರಾಂತ ಸಾಹಿತಿಗಳ ಶಿಫಾರಸು ಇಟ್ಟುಕೊಂಡವರಲ್ಲ, ಈಗಾಗಲೇ ಪಾಕಶಾಸ್ತ್ರದಲ್ಲಿ ಮಾಧ್ಯಮಗಳಲ್ಲಿ ಹೆಸರು ಮಾಡಿದವರೂ ಅಲ್ಲ. ಬೇರೆ ದಾರಿ ಕಾಣದೇ ಅಯ್ಯಂಗಾರರು ಸ್ವತಃ ಅಚ್ಚು ಹಾಕಿಸಲು ಮುಂದಾದರು. ಸ್ವಂತ ಹಣವಿಲ್ಲ. ಯಾವುದೋ ಡಿಟಿಪಿ ಸೆಂಟರಿಗೆ ಹಸ್ತಪ್ರತಿ ಕೊಟ್ಟರು. ಮೂರ್ನಾಲ್ಕು ತಿಂಗಳು ಅಲೆಸಿದ ಅಂಗಡಿಯಾತ ಟೈಪು ಮಾಡುವುದಿರಲಿ, ಮೂಲ ಹಸ್ತಪ್ರತಿಯನ್ನೇ ಕಳೆದು ಕೈಝಾಡಿಸಿದ!
ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೨
-ಡಾ.ಶ್ರೀಪಾದ ಭಟ್, ತುಮಕೂರು
ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೧
ಕವಿಕಾಣದ್ದನ್ನು ವಿಮರ್ಶಕ ಕಂಡ!
ಕಾವ್ಯದಲ್ಲಿ ಕವಿ ಊಹಿಸದೇ ಇರುವ ಸಂಗತಿಯನ್ನು ಕೂಡ ವಿಮರ್ಶಕ ಖಚಿತವಾಗಿ ಹೇಳಬಲ್ಲ ಎಂಬ ಕಾರಣಕ್ಕೆ ಈ ಮಾತು. ಕುವೆಂಪು ಅವರು ಹೇಳಿದ್ದು: ರವಿ ಕಾಣದ್ದನ್ನು ಕವಿ ಕಂಡ. ಇದನ್ನು ಮುಂದುವರೆಸಿದ ಹಿರಣ್ಣಯ್ಯ ಕವಿ ಕಾಣದ್ದನ್ನು ಕುಡುಕ ಕಂಡ ಎಂದಿದ್ದರು. ಕನ್ನಡ ವಿಮರ್ಶೆಗಳನ್ನು ಅವಲೋಕಿಸಿದವರು ಆರಂಭದ ನನ್ನ ಮಾತನ್ನು ಒಪ್ಪಬಹುದು. ಇದಕ್ಕೆ ನಿದರ್ಶನವೊಂದಿದೆ. ಮೈಸೂರಿನಲ್ಲಿ ಕೆ.ಎಸ್ ನರಸಿಂಹಸ್ವಾಮಿಯವರ ಕಾವ್ಯ ಕುರಿತ ವಿಚಾರಗೋಷ್ಠಿ ನಡೆದಿತ್ತು. ಖ್ಯಾತರಾದ ಸ್ಥಾಪಿತ ವಿಮರ್ಶಕರೊಬ್ಬರು ಕೆಎಸ್ನ ಕಾವ್ಯದ ಜನಪ್ರಿಯ ಗೀತೆಯ ’ಪದುಮಳು ಒಳಗಿಲ್ಲ’ ಎಂಬ ಸಾಲನ್ನು ವಿಮರ್ಶಿಸುತ್ತ ಪದುಮ ಹೆಣ್ಣು ಕುಲದ ಪ್ರತೀಕ. ಗಂಡಸರು ಹೆಣ್ಣನ್ನು ಎಂದೂ ಒಳಗೆ ಬಿಟ್ಟುಕೊಂಡೇ ಇಲ್ಲ. ಆದ್ದರಿಂದ ಪದುಮಳು ಒಳಗಿಲ್ಲ ಎಂದರೆ ಹೆಣ್ಣನ್ನು ಗಂಡಸರು ತಮ್ಮ ವ್ಯಾವಹಾರಿಕ ಪ್ರಪಂಚದಿಂದ ಯಾವಾಗಲೂ ಹೊರಗೇ ಇಟ್ಟಿದ್ದಾರೆ ಎಂದರ್ಥ! ಎನ್ನುತ್ತ ವಿಶೇಷ ವ್ಯಾಖ್ಯಾನ ಮಾಡಿದರು. ಕೆಎಸ್ನ ಅವರನ್ನು ಒಮ್ಮೆ ಭೇಟಿಯಾದಾಗ ಪದ್ಯದ ಅರ್ಥ ಹಿಂಗಂತಲ್ಲಾ ಸಾರ್? ಅಂದೆ. ಅದೇನೋಪ್ಪ, ನಾನಂತೂ ಪದ್ಯ ಬರೆಯುವಾಗ ಅದನ್ನೆಲ್ಲ ಖಂಡಿತ ಯೋಚಿಸಿರಲಿಲ್ಲ. ಅದೇನಿದ್ದರೂ ಮುಟ್ಟು-ಮೈಲಿಗೆ ಅರ್ಥದಲ್ಲಿ ಹೊಳೆದ ಸಹಜ ಸಾಲು ಎಂದಿದ್ದರು. ಹೀಗಾಗಿಯೇ ಹೇಳಿದ್ದು: ಕವಿ ಕಾಣದ್ದನ್ನು ವಿಮರ್ಶಕ ಕಂಡ ಎಂದು. ಇರಬಹುದು. ಅನೇಕಾರ್ಥಗಳನ್ನು ಹೊಳೆಸಿದಾಗಲೇ ನಿಜವಾದ ಕಾವ್ಯವಾಗುವುದು. ಅಲ್ಲವೇ?
ಸಾಹಿತ್ಯ ಕ್ಷೇತ್ರದ ಒಳಹೊರಗು
-ಡಾ.ಶ್ರೀಪಾದ ಭಟ್, ತುಮಕೂರು
ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ವರ್ಷಗಟ್ಟಲೆ ಸೂತ್ರಧಾರರಿರಲಿಲ್ಲ. ಇದೀಗ ಪ್ರೊ. ಮಾಲತಿ ಪಟ್ಟಣಶೆಟ್ಟಿಯವರನ್ನು ಸರ್ಕಾರ ಅಧ್ಯಕ್ಷರಾಗಿ ಆಯ್ಕೆ ಮಾಡಿದೆ. ಇವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಪತ್ರಕರ್ತನೊಬ್ಬ ಅವರನ್ನು ಸಂದರ್ಶನ ಮಾಡಿದ. ಚಾನೆಲ್ಲೊಂದರಲ್ಲಿ ಅದು ಪ್ರಸಾರವಾಯಿತು. ಆತ ಅವರ ಯೋಜನೆಗಳ ಬಗ್ಗೆ ಪ್ರಶ್ನೆ ಕೇಳಿದ. ಯುವ ಜನತೆಯನ್ನು, ಹೊಸಬರನ್ನು ಕನ್ನಡ ಭಾಷೆ, ಸಾಹಿತ್ಯದತ್ತ ಸೆಳೆಯುವ ತಮ್ಮ ಪ್ರಾಮಾಣಿಕ ಅನಿಸಿಕೆಯನ್ನು ಪ್ರೊ. ಮಾಲತಿಯವರು ಹೇಳಿದರು. ನೀವು ಸಾಹಿತ್ಯದಲ್ಲಿ ಎಡಪಂಥದ ಸಾಹಿತಿಗಳಿಗೆ ಮನ್ನಣೆ ನೀಡುವಿರೋ ಬಲಪಂಥದವರಿಗೋ ಎಂದು ಆತ ಕೇಳಿದ. ನನಗೆ ಕನ್ನಡಕ್ಕೆ ಯಾರು ಏನು ಕೊಡುಗೆ ನೀಡಿದ್ದಾರೆ ಎಂಬುದು ಮುಖ್ಯವೇ ವಿನಾ ಎಡ, ಬಲ ಪಂಥಗಳಲ್ಲ ಎಂದು ಒಬ್ಬ ನಿಜವಾದ ಸಾಹಿತ್ಯಪ್ರೇಮಿ ಹೇಳುವ ಮಾತನ್ನು ಮಾಲತಿಯವರು ಉತ್ತರವಾಗಿ ನೀಡಿದರು. ಇಂಥ ಸಮ ದೃಷ್ಟಿಕೋನ ಎಷ್ಟು ಜನರಿಗೆ ಇರಬಹುದು? ಹೇಳುವುದು ಕಷ್ಟ.
ಕನ್ನಡ ಸಾಹಿತ್ಯದ ಇಂದಿನ ಪರಿಸ್ಥಿತಿಯನ್ನು ಪತ್ರಕರ್ತನ ಪ್ರಶ್ನೆ ಪ್ರತಿನಿಧಿಸುತ್ತದೆ. ಇದು ನಿಜಕ್ಕೂ ಸಾಹಿತ್ಯಕ ದುರಂತ. ಸಾಹಿತ್ಯ ರಚಿಸುವವರು, ಸಾಹಿತ್ಯ ಓದುವವರು ಇಬ್ಬರೂ ತಾವು ಎಡಪಂಥದವರೋ, ಬಲಪಂಥದವರೋ ಎಂದು ಮೊದಲೇ ನಿರ್ಧರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಈಗಾಗಲೇ ಆಯಾ ಪಂಥೀಯರು ಅಥವಾ ಮಾಧ್ಯಮದವರು ಅಥವಾ ಕೊನೆಗೆ ವಿಮರ್ಶಕರು ನಿಮಗೆ ಹಣೆಪಟ್ಟಿ ಹಚ್ಚಿಯೇಬಿಡುತ್ತಾರೆ! ಹೀಗೆ ಹಣೆಪಟ್ಟಿ ಅಂಟಿಸಿಕೊಳ್ಳದವ ಸಾಹಿತಿಯೂ ಆಗಲಾರ ಓದುಗನೂ ಆಗಲಾರ!
ಸುಮ್ಮನೆ ಓದುವ, ಬರೆಯುವ ಪ್ರೀತಿಗಾಗಿ ಸಾಹಿತ್ಯ ಲಭ್ಯವಿಲ್ಲವೇ? ಒಬ್ಬ ನಿಜವಾದ ಸಾಹಿತ್ಯಪ್ರೇಮಿಗೆ ಯಾವ ಪಂಥಗಳೂ ಮುಖ್ಯವಾಗದು. ಆತ ಆ ವಿಷಯ, ಈ ವಿಷಯ, ಆ ಸಿದ್ಧಾಂತ, ಈ ಸಿದ್ಧಾಂತ ಎಂದೆಲ್ಲ ನೋಡಲಾರ. ತನಗೆ ಯಾವುದು ಇಷ್ಟವೋ, ಆಸಕ್ತಿಯೋ ಅದನ್ನೆಲ್ಲ ಆತ ಓದಿ ಅರಗಿಸಿಕೊಳ್ಳುತ್ತಾನೆ, ತನ್ನದೇ ಒಂದು ನಿಲುವಿಗೆ ಆತ ಬರಬಹುದು, ಬರದೆಯೂ ಇರಬಹುದು. ಹೀಗೆ ಯಾವ ಪಂಥ, ಸಿದ್ಧಾಂತಕ್ಕೂ ತನ್ನನ್ನು ಅಡವಿಟ್ಟುಕೊಳ್ಳದ ಸಾಹಿತಿ ಅಥವಾ ಓದುಗನೇ ನಿಜವಾದ ಸಾಹಿತಿ ಅಥವಾ ಓದುಗನಾಗಬಲ್ಲ. ಜನಪ್ರೀತಿಯ ಕವಿ ಜಿಎಸ್ಎಸ್ ಅವರ ಕಾವ್ಯವನ್ನು ನವೋದಯ, ನವ್ಯ, ದಲಿತ-ಬಂಡಾಯ ಹೀಗೆ ಯಾವುದಕ್ಕಾದರೂ ತಗುಲಿಸಲೇಬೇಕು ಎಂಬ ವಿಮರ್ಶಕರ, ಮಾಧ್ಯಮದವರ ಹಠ ಕೊನೆಗೂ ಈಡೇರಲೇ ಇಲ್ಲ. ಯಾವುದೂ ದಾರಿ ಕಾಣದೇ ಅವರಿಗೆ ಕೊನೆಗೆ ಸಮನ್ವಯ ಕವಿ ಎಂಬ ಹಣೆಪಟ್ಟಿ ಕಟ್ಟಿದರು. ಜಿಎಸ್ಎಸ್ ಅವರಿಗೇ ಸ್ವತಃ ಇದು ಇರಿಸುಮುರಿಸು ತಂದರೂ ನಾವು ಅವರನ್ನು ಹಾಗೆ ಕರೆಯುವುದನ್ನು ಬಿಡಲಿಲ್ಲ! ಜನರನ್ನು ಪ್ರೀತಿಯಿಂದ ಆವರಿಸಿದ ಕೆಎಸ್ನ ಅವರನ್ನು, ಅವರದು ಪುಷ್ಪಕಾವ್ಯ, ಅವರು ಕವಿಯೇ ಅಲ್ಲ, ಅವರು ಪುಷ್ಪಕವಿ ಎಂದೆಲ್ಲ ಗೇಲಿ ಮಾಡಲಾಯಿತು. ಕನ್ನಡ ಪ್ರಾಧ್ಯಾಪಕರಾಗಿರದೇ, ಯಾವ ಸಿದ್ಧಾಂತಕ್ಕೂ ಕಟ್ಟುಬೀಳದೇ ಒಬ್ಬ ಸಾಹಿತ್ಯ ಪ್ರೀತಿಯ ಸರ್ಕಾರಿ ನೌಕಕರಾಗಿ ಅವರು ರಚಿಸಿದ ಕಾವ್ಯ ಪಡೆದ ಜನಮನ್ನಣೆ ಸಾಹಿತ್ಯದ ಅಧಿಕೃತ ಗುತ್ತಿಗೆ ಪಡೆದವರ ಹೊಟ್ಟೆಯುರಿಗೆ ಕಾರಣವಾಯಿತೋ ಅಥವಾ ಯಾವುದೇ ಪಂಥಗಳ ಲಕ್ಷಣ ಕಾಣಿಸದೇ ಎರಡೂ ಪಂಥದವರು ಅವರನ್ನು ವ್ಯವಸ್ಥಿತವಾಗಿ ನಿರಾಕರಿಸಲು ಹವಣಿಸಿದರೋ-ಎರಡೂ ಇರಬಹುದು. ಆದರೆ ಇಂದಿಗೂ ಜನ ಮಾತ್ರ ಅವರ ಪುಷ್ಪಕಾವ್ಯ ಪ್ರೀತಿಸುವಷ್ಟು ಸಿಡಿಲ ಕಾವ್ಯವನ್ನು ಪ್ರೀತಿಸುತ್ತಿಲ್ಲ. ಇವೆಲ್ಲ ಸಾಹಿತ್ಯದಲ್ಲಿ ರಾಜಕೀಯ, ಸಾಮಾಜಿಕ ಸಿದ್ಧಾಂತಗಳು ಸೇರಿ ಸಾಹಿತ್ಯವನ್ನು ಕೇವಲ ಸಾಹಿತ್ಯವಾಗಿ ಇರಲು ಬಿಡದಂತೆ ಮಾಡಿದುದರ ಲಕ್ಷಣಗಳು.