ಡಿಕೆ ಶಿವಕುಮಾರ್ ಅವರ ಗುರಿಯೇನು?
– ಅಜಿತ್ ಶೆಟ್ಟಿ ಹೆರಂಜೆ
ಡಿಕೆಶಿಯವರು ಮೊದಲು ಯಾರೊಡೊನೆ ಜಗಳವಾಡಬೇಕು ಎಂದು ತೀರ್ಮಾನ ಮಾಡಬೇಕು. ವರ್ತಮಾನದ ರಾಜಕಾರಣದಲ್ಲಿ ಅವರಿಗೆ ತಮ್ಮ ಸ್ವಪಕ್ಷೀಯರ ಜೊತೆಗೆ ಜಗಳವಾಡುವುದು ಮುಖ್ಯವೋ ಅಥವಾ ತಮ್ಮ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವುದು ಮುಖ್ಯವೋ ಎಂಬ ತೀರ್ಮಾನಕ್ಕೆ ಅವರ ಮೊದಲು ಬರಬೇಕು. ಈ ಎರಡೂ ಒಟ್ಟಿಗೆ ಹೋಗಲು ಸಾಧ್ಯವಿಲ್ಲ. ಅವರೊಬ್ಬರೇ ಇಡೀ ಕೆಪಿಸಿಯನ್ನು ತಲೆಯಲ್ಲಿ ಹೊತ್ತವರಂತೆ ಆಡುತ್ತಿರುವುದು ಇತ್ತೀಚೆಗೆ ಕಾಣುತ್ತಿದೆ. ತನ್ನನ್ನ ತಾನು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ ಪಾಪವನ್ನೆಲ್ಲಾ ತೊಳೆಯಲು ಅವತಾರ ಎತ್ತಿ ಬಂದಿದ್ದಾರೋ ಎಂಬಂತೆ ವರ್ತಿಸಿಸುತ್ತಿದ್ದಾರೆ. ಡಿಕೆಶಿ, ಕರ್ನಾಟಕ ಕಾಂಗ್ರೆಸ್ ಪಕ್ಷದ ಮೊದಲ ಪ್ರದೇಶಾಧ್ಯಕ್ಷರೂ ಅಲ್ಲ, ಕೊನೆಯವರೂ ಆಗುವುದಿಲ್ಲ. ಸೋಜಿಗದ ಸಂಗತಿ ಅಂದರೆ ಇವರ ವರ್ತನೆ ಹಾಗಿದೆ. ಇಲ್ಲದೇ ಹೋದರೆ ಒಂದು ರಾಷ್ಟ್ರೀಯ ಪಕ್ಷದ ರಾಜ್ಯಧ್ಯಾಕ್ಷನೊಬ್ಬ ಹೀಗೆ ವರ್ತಿಸವುದು ಎಷ್ಟು ಸರಿ?

ಅವರ ಪಕ್ಷದೊಳಗೆ ಗುರುತರವಾದ ಜವಾಬ್ದಾರಿ ಇರುವ ವ್ಯಕ್ತಿಯೊಬ್ಬ ಇನ್ನೊಂದು ರಾಜಕೀಯ ಪಕ್ಷದ ನಾಯಕರನ್ನು ಭೇಟಿಯಾದರೆ, ಮತ್ತು ಅದು ಪಕ್ಷ ವಿರೋಧಿ ಚಟುವಟಿಕೆ ಅಂತ ಅನ್ನಿಸದರೆ ಅವರು ಆ ವ್ಯಕ್ತಿಯ ಬಳಿ ನೇರವಾಗಿ ಮಾತನಾಡಿ ವಿಷಯವನ್ನು ಬಗೆಹರಿಸಿಕೊಳ್ಳಬಹುದು ಅಲ್ವೆ? ಅವರ ಪಕ್ಷದ ನಾಯಕರೊಡನೆ ಮಾತನಾಡಲೂ ಡಿಕೆಶಿ ಅವರಿಗೆ ಮಾಧ್ಯಮದ ಅಗತ್ಯ ಬಂತು ಅಂದರೆ, ಅವರ ಪಕ್ಷದೊಳಗೆ ಸಂಬಂಧ ಬಹಳ ಹದಗೆಟ್ಟಿದೆ ಅಂತ ತಾನೆ ಅರ್ಥ. ಅಷ್ಟಕ್ಕೂ ಎಂ ಬಿ ಪಾಟೀಲರು ಕಾಂಗ್ರೆಸ್ ಪಕ್ಷದಲ್ಲಿ ಅಂತಿಂತಾ ಕಾಂಜೀ ಪೀಂಜಿ ನಾಯಕರಲ್ಲ. ಅವರು ಕರ್ನಾಟಕ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರು. ಅರಮನೆ ಮೈದಾನದಲ್ಲಿ ಅವರ ಪದಗ್ರಹಣ ಸಮಾರಂಭ ನೋಡಿದವರಿಗೆ, ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಭೆಗಿಂತಲೂ ಅದು ಜೋರಾಗೆ ಇತ್ತು ಅನಿಸಿದರೆ ತಪ್ಪೇನಿಲ್ಲ. ಈ ಸಮಾರಂಭ ಕರ್ನಾಟಕ ಕಾಂಗ್ರೇಸಿನಲ್ಲಿ ಎಲ್ಲವೂ ಸರಿ ಇಲ್ಲ ಜೊತೆಗೆ ಪಕ್ಷದ ಹೈ ಕಮಾಂಡ್ ಕೂಡ ಎಲ್ಲವನ್ನೂ ಡಿಕೆಶಿ ಅವರ ಹಗಲ ಮೇಲೆ ಹಾಕಿ ಸುಮ್ಮನೆ ಕೂರುವ ರಿಸ್ಕ್ ತೆಗೆದುಕೊಳ್ಳುವ ಕೆಲಸಕ್ಕೆ ಕೈ ಹಾಕಿಲ್ಲ ಎಂಬುದು ಸ್ಪಷ್ಟವಾಗಿಸುತ್ತದೆ. ಆ ಕಾರಣಕ್ಕೆ power ಬ್ಯಾಲೆನ್ಸಿಗಾಗಿ ಡಿಕೆಶಿಯ ವಿರೋಧ ಬಣಕ್ಕೂ ಸ್ವಲ್ಪ ಅಧಿಕಾರದ ಹಂಚಿಕೆ ಆಗಬೇಕು ಎಂಬ ಕಾರಣಕ್ಕೇ ಎಂ.ಬಿ ಪಾಟೀಲರಿಗೆ ಕೆಪಿಸಿಸಿ ಅಧ್ಯಕ್ಷರಿಗೆ ಸಮಾನಾಂತರವಾದ ಅಧಿಕಾರ ಇರುವ ಇನ್ನೊಂದು ಹುದ್ದೆಯನ್ನ ಸೃಷ್ಟಿ ಮಾಡಿಕೊಟ್ಟಿದ್ದು. ಅಲ್ಲಿಗೆ ರಾಜ್ಯ ಕಾಂಗ್ರೆಸ್ ಪಕ್ಷದ ಚುಕ್ಕಾಣಿಯನ್ನ ಕೈ ಕಮಾಂಡ್ ಪೂರ್ಣ ಪ್ರಮಾಣದಲ್ಲಿ ಡಿಕೆಶಿ ಕೈಗೂ ಕೊಡದೇ ಸಿದ್ದರಾಮಯ್ಯನವರ ಬಣಕ್ಕೂ ಕೊಡದೆ ಆಟ ಆಡುತ್ತಿದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಹಗ್ಗದ ಎರಡೂ ತುದಿಗೆ ಬೆಂಕಿ ಹಾಕಿದೆ. ಈ ಬೆಂಕಿಯಲ್ಲಿ ಯಾರು ಸುಡುತ್ತಾರೆ? ಯಾರು ಪಾರಾಗುತ್ತಾರೆ ಎಂಬುದನ್ನ ಸಮಯವೇ ನಿರ್ಧರಿಸಬೇಕು.
ಇನ್ನು ಡಿಕೆಶಿಯವರಿಗೆ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದರೆ, ತಾನೇ ಮುಖ್ಯಮಂತ್ರಿ ಆಗಬೇಕು ಎಂಬ ಎಲ್ಲಿಲ್ಲದ ತುಡಿತ ಇದೆ. ಆದರೆ ಅವರ ಬಗ್ಗೆ ಮಾತನಾಡುವ, ಅವರ ಬಗ್ಗೆ ಲಾಭಿ ಮಾಡುವ ಪ್ರಭಾವಿ ನಾಯಕರ ಸಂಖ್ಯೆ ರಾಜ್ಯದಲ್ಲೂ ಕೇಂದ್ರದಲ್ಲೂ ದಿನೇ ದಿನೇ ಕಡಿಮೆ ಆಗುತ್ತಿದೆ. ಈ ಮಧ್ಯೆ ಸಿದ್ದರಾಮಯ್ಯನವರು ತಾನೇ ಮುಂದಿನ ಮುಖ್ಯಮಂತ್ರಿ ಎಂದು ಒಂದಷ್ಟು ಭಾರಿ ನೇರವಾಗಿ ಹೇಳಿಕೊಂಡರೆ ಒಂದಷ್ಟು ಸಾರಿ ಅವರ ಬೆಂಬಲಿಗರ ಮುಖಾಂತರ ಹೇಳಿಸುತ್ತಾರೆ. ಬೆಂಬಲಿಗರು ಅಂದ್ರೆ ಸಾಮಾನ್ಯ ನಾಯಕರಲ್ಲ. ಜಮೀರ್ ಅಹ್ಮದ್ ಮುಖಾಂತರವೇ ಬಹಳಷ್ಟು ಸಾರಿ ಹೇಳಿಸಿದ್ದಾರೆ. ಇನ್ನು ಈ ವಾದ ತೀರಾ ಅತಿರೇಕಕ್ಕೆ ಹೋದಾಗ ದಲಿತ ಮುಖ್ಯಮಂತ್ರಿ ಆಗಬೇಕು ಎಂಬ ವಿತಂಡ ವಾದನ್ನೂ ಅವರೇ ಅನೇಕ ಸಾರಿ ಮಾಡಿದ್ದಾರೆ. ಕೊನೆಗೆ ಅದೂ ತಾರಕಕ್ಕೆ ಹೋದಾಗ ತಾನೂ ಕೂಡ ದಲಿತನೇ ಎಂಬ ಹೇಳಿಕೆ ಕೊಟ್ಟಿದ್ದಾರೆ. ಇದರ ಬಗ್ಗೆ ಬಂದ ತೀರಾ ಇತ್ತಿಚೀಗಿನ ಹೇಳಿಕೆ ಎಂದರೆ ಕೆಪಿಸಿಸಿಯ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂಬಿ ಪಾಟೀಲರದ್ದು. ಅವರೂ ಕೂಡ ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಎಂಬ ಹೇಳಿಕೆ ಕೊಟ್ಟರು. ಇದು ಹಿಂದಿನಿಂದಲೂ ತೆರೆಯ ಮರೆಯಲ್ಲಿ ಎಂ.ಬಿ ಪಾಟೀಲರು, ಡಿಕೆಶಿ ನಡುವೆ ಇದ್ದ ರಾಜಕೀಯ ಕುಸ್ತಿ ತೆರೆಯ ಮುಂದೆ ಬರಲು ಪ್ರಮುಖ ಕಾರಣ ಆಯಿತು, ಒಂದಷ್ಟು ಹೊಸ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಕಳೆದ ಭಾನುವಾರ ಸುವರ್ಣ ಸುದ್ದಿವಾಹಿನಿಯಲ್ಲಿ ಡಿಕೆಶಿಯವರನ್ನ ನೇರವಾಗಿ ಪ್ರಶ್ನೆ ಮಾಡುವ ಅವಕಾಶ ನನಗೆ ಸಿಕ್ಕಿತು. ಸಮಯದ ಅಭಾವದ ಕಾರಣಕ್ಕೆ ಅಲ್ಲಿ ಚರ್ಚೆಯ ಪೂರ್ಣ ಭಾಗವನ್ನು ಪ್ರಸಾರ ಮಾಡಿಲ್ಲ. ಇಲ್ಲಿ ಕೂಡ ಅಜಿತ್ ಹನಮಕ್ಕನವರ್ ಅವರು ಡಿಕೆಶಿ ಅವರಿಗೆ ಒಂದಷ್ಟು ಮುಜುಗರ ತರುವ ಪ್ರಶ್ನೆಗಳನ್ನ ಕೇಳಿದರು, ಅದಕ್ಕೆ ಡಿಕೆಶಿ ಅಡ್ಡ ಗೋಡಯ ಮೇಲೆ ದೀಪ ಇಟ್ಟ ಹಾಗೆ ಉತ್ತರ ಕೊಟ್ಟರು. ಹಿಂದುತ್ವದ ವಿಚಾರ ಬಂದಾಗ ನೀವು ಯಾಕೆ ಡಬ್ಬಲ್ ಸ್ಟಾಂಡರ್ಡ್ ತಗೊಂತೀರಿ ಅನ್ನುವ ಪ್ರಶ್ನೆಗೆ ಡಿಕೆಶಿ ಬಹಳಾ ವಿದ್ವಾಂಸನಂತೆ ಉತ್ತರ ಕೊಡುವ ಪ್ರಯತ್ನ ಮಾಡಿದರು. ಅಸಲಿಗೆ ವಿಷಯ ಅದಲ್ಲ. ಈ ವಿಚಾರದಲ್ಲಿ ಪಕ್ಷದೊಳಗೆಯೇ ಅವರ ನಿಲುವು ಮತ್ತು ಅವರ ಅವರ ವಿರೋಧಿ ಬಣದ ನಿಲುವು ಬೇರೆ ಬೇರೆ. ಸಿದ್ದರಾಮಯ್ಯ ತಾನು ಮುಸಲ್ಮಾನರ ಪರ ಎಂದು ತಮ್ಮ ನಡೆ ನುಡಿಗಳ ಮೂಲಕ ನೇರವಾಗಿ ತೋರಿಸಿಕೊಂಡು ಬರುತ್ತಾರೆ. ಆದರೆ ಡಿಕೆಶಿಯವರ ಅಭಿಪ್ರಾಯ ತಾವು ಕಳೆದ ಸಾರಿ ಚುನಾವಣೆಯಲ್ಲಿ ಸೋಲಲು ಮುಖ್ಯ ಕಾರಣವೆ ಸರ್ಕಾರದ ಹಿಂದೂ ವಿರೋಧಿ ನೀತಿ ಎಂಬುದು. ಈ ಭಾರಿಯೂ ಅಂತಹ ನಿಲುವನ್ನು ತೆಗೆದುಕೊಂಡರೆ ಮತ್ತೆ ಪಕ್ಷಕ್ಕೆ ಹಾನಿಯಾಗಾಲಿದೆ. ಈಗ ತಾನೇ ಅಧ್ಯಕ್ಷ ಬೇರೆ. ಪಕ್ಷ ಈ ಭಾರಿಯೂ ಸೋತರೆ ತಾವು ಮುಖ್ಯಮಂತ್ರಿ ಆಗುವ ಕನಸು ಕನಸಾಗಿಯೇ ಉಳಿಯಲಿದೆ ಎಂಬದು ಅವರಿಗೆ ಗೊತ್ತಾಗಿದೆ. ಹಾಗಾಗಿ, ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಕಾಂಗ್ರೆಸ್ ಸಂಪೂರ್ಣವಾಗಿ ಹಿಂದುಗಳನ್ನು ವಿರೋಧಿಸುವ ಸಾಹಸಕ್ಕೆ ಹೋಗಲಿಲ್ಲ, ಜೊತೆಗೆ ತಮ್ಮ ಪಕ್ಷದ ಎಲ್ಲರಿಗೂ ಹಾಗೆಯೇ ವ್ಯವಹರಿಸಲೂ ಆದೇಶ ಕೊಟ್ಟರು. ಆದರೆ ಅವರನ್ನ ವಿರೋಧಿಸಲೆಂದೇ ಇರುವ, ಅವರಿಗೆ ಮುಜಗರ ಉಂಟು ಮಾಡಲೇಬೇಕು ಎಂದು ಇರುವ ಇನ್ನೊಂದು ಬಣ ಇವರ ಮಾತನ್ನ ದಿಕ್ಕರಿಸಿ ಅಗೊಮ್ಮೆ ಈಗೊಮ್ಮೆ ಇವರು ಹಾಕಿದ ಬೇಲಿ ದಾಟಿ ಡಿಕೆಶಿ ಅವರಿಗೆ ಮುಜುಗರ ಮಾಡುತ್ತಲೇ ಇದೆ. ಈ ಬೆಳವಣಿಗೆಯ ಕಾರಣಕ್ಕೆ ಒಂದು ಕಡೆ ಕಾಂಗ್ರೆಸ್ ಪಕ್ಷವನ್ನು ಹಿಂದೂಗಳೂ ನಂಬದ, ಇನ್ನೊಂದು ಕಡೆ ಅವರ ಪಾರಂಪರಿಕೆ ಮತದಾರರಾದ ಮುಸಲ್ಮಾನರೂ ನಂಬದ ಒಂದು ಇಕ್ಕಟ್ಟಿನ ಪರಿಸ್ಥಿತಿ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿದೆ ಎಂಬುದ ಕಾಂಗ್ರೆಸ್ ವಲಯದಲ್ಲಿ ಬಹಳಷ್ಟು ಜನರಿಗೆ ನೋವು ಕೂಡ ತಂದಿದೆ.
ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯನವರ ನಡುವೆ ಎಲ್ಲವೂ ಸರಿ ಇಲ್ಲ, ಇದು ಮಾದ್ಯಮಗಳು ಕಟ್ಟಿದ ಕಟ್ಟು ಕಥೆ ಅಲ್ಲ, ಸತ್ಯ ವಿಚಾರ ಎಂಬುದು ನನಗೂ ಅನುಭವಕ್ಕೆ ಬಂತು. ಅಜಿತ್ ಹನಮಕ್ಕನವರ್ ಕೇಳಿದ ಒಂದು ಪ್ರಶ್ನಯಲ್ಲಿ ನೀವು ಯಾಕೆ ಮುಸಲ್ಮಾನರ ಪರ ಮಾತನಾಡಲಿಲ್ಲ? ಸಿದ್ದರಾಮಯ್ಯ ಒಂದು ಸ್ಟ್ಯಾಂಡ್ ತೆಗೆದುಕೊಂಡ್ರು ಎಂದಾಗ, ಡಿಕೆಶಿ ಅದಕ್ಕೆ ಸಿದ್ದರಾಮಯ್ಯನವರು ಮಾತನಾಡಿದರೆ ಅದು ಕಾಂಗ್ರೆಸ್ ಪಕ್ಷ ಮಾತನಾಡಿದಂತೆ ಅಲ್ವಾ ಎಂದು ಮರು ಪ್ರಶ್ನೆ ಹಾಕಿದರು. ಅವರು ಆ ಉತ್ತರಕ್ಕೆ ನಾನು ಹಿಂದೆ ಸಿದ್ದರಾಮಯ್ಯ ತೆಗೆದುಕೊಂಡ ಹಿಂದೂ ವಿರೋಧಿ ನೀತಿಗಳ ಬಗ್ಗೆ ಪ್ರಸ್ತಾಪ ಮಾಡಿದಾಗ ಅದೇ ಲಾಜಿಕ್ಕಿನಲ್ಲಿ ಉತ್ತರ ಕೊಡಲಾಗದ ಡಿಕೆಶಿ ನೀವು ಅದನ್ನ ಸಿದ್ದರಾಮಯ್ಯನವರ ಬಳಿಯೇ ಕೇಳಿ ಎಂದು ಹೇಳುತ್ತಾರೆ. (ಚರ್ಚೆಯ ಆ ಭಾಗ ವಾಹಿನಿಯಲ್ಲಿ ಪ್ರಸಾರ ಆಗಲಿಲ್ಲ, ಬಹುಶಃ ಸಮಯದ ಅಭಾವದ ಕಾರಣಕ್ಕೆ ಇರಬೇಕು) ಹೀಗೆ ಸಾಗಿದ ಚರ್ಚೆಯ ಒಂದು ಭಾಗದಲ್ಲಿ, ಕಾಂಗ್ರೆಸ್ ಪಕ್ಷದ ಎನ್ ಎಸ್ ಯು ಐ ನ ಅದ್ಯಕ್ಷನೊಬ್ಬ ನೀವು ಮುಂದೆ ಮುಖ್ಯಮಂತ್ರಿ ಆದರೆ ಎಂತಹಾ ಯೊಜನೆಗಳನ್ನ ಜಾರಿಗೆ ತರುತ್ತೀರಿ ಎಂದು ಕೇಳಿದಾಗ ತಕ್ಷಣವೇ ಆತನನ್ನು ನಿಲ್ಲಿಸಿದ ಅಜಿತ್ ಹನಮಕ್ಕನವರ್ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಯಾರು ಎಂಬುದರ ಬಗ್ಗೆಯೇ ಗೊಂದಲ ಇದೆ. ನಿಮಗೆ ಯಾರು ಮುಖ್ಯಮಂತ್ರಿ ಆಗಬೇಕು ಅಂದಾಗ ಆತ ಸ್ವಲ್ಪ ಅಳುಕುತ್ತಲೇ ಡಿಕೆಶಿ ಅಂದ. ಹಿಂದೆ ನಮ್ಮದು ಸಾಮೂಹಿಕ ನಾಯಕತ್ವ, ಪಕ್ಷ ಮುಖ್ಯಮಂತ್ರಿಯ ತೀರ್ಮಾನ ಮಾಡಲಿದೆ ಎಂಬ ನೈತಿಕತೆಯ ಮಾತನಾಡಿದ್ದ ಡಿಕೆಶಿಗೆ ಹುಡುಗನ ಈ ಮಾತು ಖುಷಿಕೊಟ್ಟಿತು ಎಂಬುದು ಅವರ ಮುಖಭಾವದಿಂದ ನನಗೆ ಅರ್ಥವಾಯಿತು. ಆ ಕ್ಷಣದಲ್ಲಿ ಅವರಿಗೆ ಕೆಲವೇ ನಿಮಿಷಗಳ ಹಿಂದೆ ಅವರೇ ಹೇಳಿದ ಪಕ್ಷದ ತೀರ್ಮಾನದ ಮಾತು ಅವರಿಗೆ ನೆನಪು ಇರಲಿಲ್ಲ. ಈ ಮದ್ಯೆ ನಾನು ಮಾತನಾಡಿ (ಹಾಗೆ ಮಾತನಾಡುವುದು ಚರ್ಚೆಯ ನಿಯಮಕ್ಕೆ ವಿರುದ್ಧವಾಗಿತ್ತು. ಆದರೂ ತಡೆಯಲಾಗದೆ ಒಂದು ಪ್ರಶ್ನೆ ಕೇಳಿದೆ) ಎರಡು ದಿನದ ಹಿಂದೆ ಎಂ.ಬಿ ಪಾಟೀಲರೇ ಸಿದ್ದರಾಮಯ್ಯನವರು ಮುಂದಿನ ಮುಖ್ಯಮಂತ್ರಿ ಅಂದಿದ್ದಾರೆ ಅಂದಾಗ ಅವರ ಮುಖದಲ್ಲೊಂದು ಅಹಸನೆ ಗೆರೆ ಮೂಡಿದ್ದನ್ನು ಗಮನಿಸಿದೆ. ಅಂದಹಾಗೆ ಈ ಪ್ರಶ್ನೆಯನ್ನು ನಾನು ಚರ್ಚೆಯ ನಿಯಮಕ್ಕೆ ವಿರುದ್ದವಾಗಿ ಕೇಳಿದ ಕಾರಣ ಅದೂ ಕೂಡ ಪ್ರಸಾರ ಆಗಿಲಿಲ್ಲ.
ಒಟ್ಟಿನಲ್ಲಿ ಡಿಕೆಶಿ ಅವರ ಜೊತೆಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಇದ್ದ ನನಗೆ ಒಂದಷ್ಟು ವಿಚಾರಗಳು ಸ್ಪಷ್ಟವಾಗಿ ಕಾಣಿಸಿತು. ಅವರಲ್ಲಿ ಬೌದ್ಧಿಕ ಚರ್ಚೆ ಮಾಡುವ ಸಾಮರ್ಥ್ಯ ಮತ್ತು ವ್ಯವಧಾನ ಎರಡೂ ಇಲ್ಲ ಅವರದ್ದೇನಿದ್ದರೂ “ಸ್ಕೋರ್ ಸೆಟಲ್” ಮಾಡುವ ರಾಜಕಾರಣ. ಜೊತೆಗೆ ಅವರು ಮುಖ ಭಾವದಲ್ಲಿ ಸಿದ್ದರಾಮಯ್ಯನವರ ಮುಸಲ್ಮಾನರ ತುಷ್ಟಿಕರಣದ ರಾಜಕಾರಣದಿಂದಾಗಿ ಹಿಂದುಗಳ ವಿರುದ್ಧ ಮಾಡಿರುವ ಅನ್ಯಾಯದ ಪಾಪದ ಮೂಟೆಯನ್ನ ಇಡೀ ಪಕ್ಷದಲ್ಲಿ ತಾನೊಬ್ಬನೇ ಹೊತ್ತು ನಡೆಯುತ್ತಿದ್ದೇನೆ ಎಂಬ ಭಾವ ಸ್ಪಷ್ಟವಾಗಿ ಕಾಣಿಸುತ್ತಿದೆ. ಇದರ ಜೊತೆಗೆ ಅವರು ಪಕ್ಷದೊಳಗೆ ಮತ್ತು ಪಕ್ಷದ ಹೊರಗೆ ಒಬ್ಬಂಟಿ ಎರಡೂ ಕಡೆ ಪ್ರವಾಹದ ವಿರುದ್ದ ಈಜಾಡುತ್ತಿದ್ದಾರೆ, ಅದರಲ್ಲಿ ಬಳಲಿ ಬೆಂಡಾಗಿರುವುದೂ ಅವರ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಹೀಗಿರುವಾಗ “ಸ್ಕೋರ್ ಸೆಟಲ್” ಮಾಡುವ ರಾಜಕಾರಣದಿಂದ ಹೊರಗೆ ಬಂದು, ವೈಯಕ್ತಿಕ ಪ್ರತಿಷ್ಠೆ ಬಿಟ್ಟು, ಪಕ್ಷ ಕಟ್ಟುವ ರಾಜಕಾರಣ ಮಾಡಿದರಷ್ಟೆ ಪಕ್ಷಕ್ಕೆ ಮತ್ತು ಪಕ್ಷದ ಪ್ರಾದೇಶಿಕ ಅಧ್ಯಕ್ಷರಿಗೆ ಉಳಿಗಾಲ. ಇಲ್ಲದೇ ಹೋದರೆ ಇವರು ದಿನಂಪ್ರತಿ ವಿರೋಧ ಪಕ್ಷಗಳಿಗಿಂತ ಸ್ವ ಪಕ್ಷದವರ ಜೊತೆಗೆ ಹೆಚ್ಚು ಜಗಳವಾಡಬೇಕಾಗುತ್ತದೆ. ಅದರ ಪರಿಣಾಮವೇನು ಎಂಬುದಕ್ಕೆ ಮಹಾ ಭಾರತದ ಕರ್ಣನಿಗಿಂತ ಬೇರೆ ನಿದರ್ಶನ ಬೇಕಿಲ್ಲ ಅಲ್ಲವೆ?
ದಲಿತರ ಹೆಗಲ ಮೇಲೆ ಬಂದೂಕಿಟ್ಟಿರುವ ಕೈಗಳು ಯಾರದ್ದು?
– ರಾಕೇಶ್ ಶೆಟ್ಟಿ
‘ಅಧಿಕಾರದಲ್ಲಿರುವ ಕಾಂಗ್ರೆಸ್ಸಿಗಿಂತಲೂ, ಅಧಿಕಾರದಲ್ಲಿರದ ಕಾಂಗ್ರೆಸ್ಸ್ ದೇಶಕ್ಕೆ ಅಪಾಯಕಾರಿ’ ಅಂತ ಗೆಳೆಯನೊಬ್ಬ ಆಗಾಗ್ಗೆ ಹೇಳ್ತಾ ಇರ್ತಾನೆ. 2014ರ ಮೇ 16 ರಂದು ಬಿಜೆಪಿ ಅಧಿಕಾರ ಹಿಡಿದ ದಿನದಿಂದ ಇವತ್ತಿನವರೆಗೂ ಕಾಂಗ್ರೆಸ್ಸ್ ಪಕ್ಷದವರ ಆರ್ಭಟಗಳನ್ನು ನೋಡಿದರೇ, ಗೆಳೆಯನ ಮಾತು ನಿಜವೆನಿಸುತ್ತದೆ. 2014ರ ಲೋಕಸಭಾ ಚುನಾವಣೆಯ ಫಲಿತಾಂಶ ಈ ಹಿಂದಿನ ಯಾವುದೇ ಚುನಾವಣೆಗಳಂತಿರಲಿಲ್ಲ. ಕಾಂಗ್ರೆಸ್ ಎಂಬ ಪುರಾತನ ಪಕ್ಷ ಮಕಾಡೆ ಮಲಗಿದರೇ, ಉಳಿದ ಅವಕಾಶವಾದಿ ಪ್ರಾದೇಶಿಕ, ಕೌಟುಂಬಿಕ, ಸೆಕ್ಯುಲರ್, ಕಮ್ಯುನಿಸ್ಟ್ ಪಕ್ಷಗಳು ಹೇಳ ಹೆಸರಿಲ್ಲದಂತಾದವು. ಮತ್ತಷ್ಟು ಓದು
ತುಘಲಕ್ ದರ್ಬಾರಿನ ಕುರಿತು ಓದಿದ್ದೆವು ಈಗ ನೋಡುತಿದ್ದೇವೆ
– ರಾಕೇಶ್ ಶೆಟ್ಟಿ
೨೦೧೩ರಲ್ಲಿ ಕೇಂದ್ರದಲ್ಲಿ ತನ್ನ ಕೊನೆಯ ದಿನಗಳನ್ನು ಎಣಿಸುತಿದ್ದ ಯುಪಿಎ ಸರ್ಕಾರ,ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಿವಿ ಶುರು ಮಾಡುತ್ತೇವೆ ಎಂಬ ಪುಡಿ ಓಟ್ ಬ್ಯಾಕ್ ರಾಜಕೀಯ ಶುರು ಮಾಡಿತ್ತು.ಅದಕ್ಕೆ ಪ್ರಬಲವಾದ ವಿರೋಧದ ಅಲೆಯೆದ್ದಿತ್ತು.ಆ ಸಮಯದಲ್ಲಿ “ಕರ್ನಾಟಕದಲ್ಲಿ ಅಶಾಂತಿಯ ಗಾಳಿ ಬೀಸಬೇಕೆಂದು ಕಾಂಗ್ರೆಸ್ಸ್ ನಿರ್ಧರಿಸಿದೆಯೇ?” ಎಂದು ಲೇಖನವೊಂದನ್ನು ಬರೆದಿದ್ದೆ. ೨೦೧೪ರ ಚುನಾವಣೆಯ ನಂತರ ಯುಪಿಎ ಸರ್ಕಾರದಂತೇ,ಅವರ ಸಮಾಜ ವಿಭಜನೆಯ ಯೋಜನೆಗಳೂ ಕಸದ ಬುಟ್ಟಿ ಸೇರಿದ್ದು ಇತಿಹಾಸ.
ಆಗ ಟಿಪ್ಪುವಿನ ಮೂಲಕ ಕರ್ನಾಟಕದಲ್ಲಿ ಅಶಾಂತಿಯೆಬ್ಬಿಸಲು ಕಾಂಗ್ರೆಸ್ಸಿಗೆ ಸಾಧ್ಯವಾಗಿರಲಿಲ್ಲ.ಆದರೆ ಇತ್ತೀಚೆಗೆ ಸರ್ಕಾರವೇ ಮುಂದೆ ನಿಂತು ಟಿಪ್ಪುಸುಲ್ತಾನನ ಜಯಂತಿ ಆಚರಣೆಗೆ ಮುಂದಾಗುವ ಮೂಲಕ ಸಮಾಜದ ಶಾಂತಿಗೆ ಧಕ್ಕೆ ತಂದಿತು. ಆಳುವ ಸರ್ಕಾರವೇ ಮುಂದೆ ನಿಂತು ಗಲಭೆ ಎಬ್ಬಿಸಿದ್ದು ಬಹುಷಃ ಕರ್ನಾಟಕದ ಇತಿಹಾಸದಲ್ಲಿಯೇ ಮೊದಲಿರಬೇಕು.ಈ ಹಿಂದೆ ನಾವೆಲ್ಲ ತುಘಲಕ್ ದರ್ಬಾರಿನ ಬಗ್ಗೆ ಓದಿದ್ದೆವು,ಈಗ ಕಣ್ಣಾರೆ ನೋಡುವಂತಾಗಿದೆಯಷ್ಟೇ.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗ ಬಹಳಷ್ಟು ನಿರೀಕ್ಷೆಗಳಿದ್ದವು.ಆ ನಿರೀಕ್ಷೆಗಳಿಗೆಲ್ಲ ಅವರು ಈ ಹಿಂದೆ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳು ಸಾಕ್ಷಿಯಾಗಿದ್ದವು.ಈ ಬಾರಿ ಮುಖ್ಯಮಂತ್ರಿಯಾಗುವ ಮೊದಲೇ ತಮ್ಮ ಸುತ್ತ ಪರಾವಲಂಬಿ ಸೆಕ್ಯುಲರ್ ಬುದ್ಧಿಜೀವಿಗಳ ಸಮೂಹವೊಂದನ್ನು ಕಟ್ಟಿಕೊಂಡೇ ಪಟ್ಟಕ್ಕೇರಿದರು.ಪಟ್ಟಕ್ಕೇರಿದ ದಿನವೇ ಅನ್ನಭಾಗ್ಯದ ಘೋಷಣೆ ಮಾಡಿದರು.ಆ ಯೋಜನೆಯಿಂದ ಬಡವರಿಗೇನೋ ಅನ್ನ ಸಿಕ್ಕುತ್ತಿರುವುದು ನಿಜವೇ.ಆದರೆ,ಗ್ರಾಮೀಣ ಪ್ರದೇಶದಲ್ಲಿ ಅದರಿಂದ ಆಗಿರುವ ಅನಾಹುತಗಳೇ ಹೆಚ್ಚು.ಸುಲಭವಾಗಿ ಸಿಗುವಾಗ ಕಷ್ಟವೇಕೆ ಪಡಬೇಕು ಎಂಬುದು ಜನರ ಸ್ವಾಭಾವಿಕ ನಿಲುವಾಗಿರುತ್ತದೆ. ಸ್ವಾಭಿಮಾನದ ಬದುಕು ಕಟ್ಟಿಕೊಡಬೇಕಾಗಿದ್ದ ಸರ್ಕಾರ ಜನರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಕೈಯೊಡ್ಡುವಂತೆ ಮಾಡುತ್ತಿದೆ.
ಮತ್ತಷ್ಟು ಓದು
ಸುದ್ಧಿಮಾಧ್ಯಮ: ದೇಶ ಬೆನ್ನಿಗೆ ಕಟ್ಟಿಕೊಂಡ ಕೆಂಡ
– ಪ್ರೇಮಶೇಖರ
26/11ರ ಮುಂಬೈ ಧಾಳಿಗಳ ರೂವಾರಿಯೊಬ್ಬ ಕರಾಚಿಯಿಂದ ಹೊರಡುತ್ತಿದ್ದ ಅಜ್ಮಲ್ ಕಸಾಬ್ ಸೇರಿದಂತೆ ಹತ್ತು ಭಯೋತ್ಪಾದಕರಿಗೆ ನೀಡಿದನೆನ್ನಲಾದ ‘ಉಪದೇಶ’ ಹೀಗಿತ್ತು: “ತಾಜ್ ಹೋಟೆಲ್ ಆಕ್ರಮಿಸಿಕೊಂಡ ನಂತರ ಯಾವುದಾದರೊಂದು ಕೋಣೆ ಸೇರಿ ಅಲ್ಲಿರುವ ಟೀವಿ ಚಾಲೂ ಮಾಡಿ ಭಾರತೀಯ ನ್ಯೂಸ್ ಚಾನಲ್ ಒಂದನ್ನು ನೋಡಿ. ಭಾರತೀಯ ಭದ್ರತಾ ಪಡೆಗಳು ನಿಮ್ಮ ವಿರುದ್ಧ ಕೈಗೊಳ್ಳುತ್ತಿರುವ ತಂತ್ರಗಳ ಇಡೀ ವಿವರ ಅದರಲ್ಲಿ ನಿಮಗೆ ದೊರೆಯತೊಡಗುತ್ತದೆ. ಅದಕ್ಕನುಗುಣವಾಗಿ ನಿಮ್ಮ ಪ್ರತಿತಂತ್ರಗಳನ್ನು ನೀವು ರೂಪಿಸಿಕೊಳ್ಳಬಹುದು.” ನಮ್ಮ ಮಾಧ್ಯಮಗಳು ಅತ್ಯುತ್ಸಾಹದಿಂದ ಪ್ರಸಾರ ಮಾಡುತ್ತಿದ್ದ ವಿವರಗಳೇ ತಾಜ್ ಹೋಟೆಲ್ ಮೇಲೆ ಪಾಕ್ ಉಗ್ರರ ಹಿಡಿತ ದೀರ್ಘವಾಗಲು ಕಾರಣವಾಯಿತು ಎಂಬ ಕಟುವಾಸ್ತವದ ಹಿನ್ನೆಲೆಯಲ್ಲಿ ಆ ಪಾಕ್ ಭಯೋತ್ಪಾದಕ ನಮ್ಮ ಮಾಧ್ಯಮಗಳ ನಾಡಿಮಿಡಿತವನ್ನು ಅದೆಷ್ಟು ಚೆನ್ನಾಗಿ ಅರಿತಿದ್ದ ಎಂಬ ಕಹಿಸತ್ಯ ಎದೆಗೆ ನಾಟುತ್ತದೆ. ಈ ಪೀಠಿಕೆಯೊಂದಿಗೆ ಭಯೋತ್ಪಾದನೆಯ ವಿಷಯದಲ್ಲಿ ನಮ್ಮ ಮಾಧ್ಯಮಗಳು ಅನುಸರಿಸುವ ಕುನೀತಿಯ ಪರಿಚಯ ಮಾಧ್ಯಮಗಳ ಬಗೆಗಿನ ಲೇಖನದ ಮೂರನೆಯ ಹಾಗೂ ಅಂತಿಮ ಕಂತಿನ ವಸ್ತುವಿಷಯ. ನನ್ನ ಅವಲೋಕನವನ್ನು ಕಾಲು ಶತಮಾನದಷ್ಟು ದೀರ್ಘವಾದ ಕಾಶ್ಮೀರದಲ್ಲಿನ ಭಯೋತ್ಪಾದನೆಯೊಂದಿಗೆ ಪ್ರಾರಂಭಿಸುತ್ತೇನೆ.
ಹಿಂದೂ-ವಿರೋಧಿ ಮಾಧ್ಯಮ: ಸೃಷ್ಟಿ ಮತ್ತು ಸ್ಥಿತಿ
– ಪ್ರೇಮಶೇಖರ
ಪ್ರಕರಣ ೧: ಪ್ರಮುಖ ಕನ್ನಡ ದೈನಿಕವೊಂದರಲ್ಲಿ ಸೌದಿ ಅರೇಬಿಯಾದ ಬಗ್ಗೆ ಪರಿಚಯಾತ್ಮಕ ಲೇಖನವೊಂದು ಪ್ರಕಟವಾಗುತ್ತದೆ. ಅಚ್ಚರಿಯೆಂದರೆ ಮರುದಿನವೂ ಅದೇ ಲೇಖನ ಮತ್ತೆ ಕಾಣಿಸಿಕೊಳ್ಳುತ್ತದೆ! ಅದರ ಕೆಳಗೆ ಹೀಗೊಂದು ವಿವರಣೆ: “ನಿನ್ನೆಯ ದಿನ ಸೌದಿ ಅರೇಬಿಯಾವನ್ನು ಕುರಿತು ನೀಡಿದ ವಿವರಣೆಯಲ್ಲಿ ಮಹಮದ್ ಪೈಗಂಬರ್ ಮೆಕ್ಕಾದಿಂದ ಮದೀನಾಕ್ಕೆ ಕ್ರಿ.ಶ. ೬೨೨ರಲ್ಲಿ ಓಡಿಹೋದರು. ಅಂದಿನಿಂದ ಹಿಜ್ರಾ ಶಕೆ ಪ್ರಾರಂಭವಾಗುತ್ತದೆ ಎಂದು ಪ್ರಕಟವಾಗಿತ್ತು.ಇದರಿಂದ ಅನೇಕರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ತಿಳಿದುಬಂದಿದೆ. ಅದಕ್ಕಾಗಿ ಪತ್ರಿಕೆ ಕ್ಷಮೆ ಯಾಚಿಸುತ್ತದೆ ಹಾಗೂ ಇಂದು ಅದೇ ಲೇಖನವನ್ನು ತಿದ್ದಿ ಪ್ರಕಟಿಸಲಾಗಿದೆ.” ಮರುಪ್ರಕಟವಾಗಿದ್ದ ಲೇಖನದಲ್ಲಿ ಪೈಗಂಬರರು ಮದೀನಾಗೆ ಓಡಿಹೋದ ಬಗೆಗಿನ ಒಂದು ಸಾಲು ಮಾಯವಾಗಿರುತ್ತದೆ.
ಪ್ರಕರಣ ೨: ಕೆಲದಿನಗಳ ನಂತರ ಅದೇ ಪತ್ರಿಕೆಯಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆ ಲೇಖನವೊಂದು ಪ್ರಕಟವಾಗುತ್ತದೆ.ವಿವೇಕಾನಂದರ ದೈಹಿಕ ಸಮಸ್ಯೆಗಳು,ಬಲಹೀನತೆಗಳ ಬಗ್ಗೆ ಅದರಲ್ಲಿನ ವಿಷಯಗಳಾವುವೂ ಹೊಸದಾಗಿರುವುದಿಲ್ಲ. ಅವೆಲ್ಲವೂ ಕೊಲ್ಕತಾದ ರಾಮಕೃಷ್ಣ ಮಿಶನ್ ಮತ್ತು ಅಲ್ಮೋರಾದ ಅದ್ವೈತಾಶ್ರಮಗಳ ಪ್ರಕಟಣೆಗಳಲ್ಲೇ ಇವೆ.ಆದರೆ ಲೇಖನದ ಭಾಷೆ, ಕೆಲ ಪದಗಳು ಅಕ್ಷೇಪಾರ್ಹವಷ್ಟೇ ಅಲ್ಲ, ಪತ್ರಿಕೆಯ ಘನತೆಗೂ ಶೋಭೆ ತರುವಂತಿರುವುದಿಲ್ಲ.ಇದರಿಂದಾಗಿ ಹಲವರ ಭಾವನೆಗಳಿಗೆ ಧಕ್ಕೆಯಾಗುತ್ತದೆ.ಅದು ರಾಜ್ಯದ ವಿವಿಧೆಡೆ ಸಾರ್ವಜನಿಕವಾಗಿಯೂ ವ್ಯಕ್ತವಾಗುತ್ತದೆ.ಅದಕ್ಕೆ ಪತ್ರಿಕೆಯ ಪ್ರತಿಕ್ರಿಯೆ? ಒಂದಕ್ಷರದ ಕ್ಷಮಾಯಾಚನೆಯೂ ಇಲ್ಲ!
ರಾಮ ಜನ್ಮಭೂಮಿ/ಬಾಬರಿ ವಿವಾದ : ಭೂತಕಾಲದ ತಪ್ಪುಗಳು ಭವಿಷ್ಯಕ್ಕೆ ಭಾರವಾಗಬಾರದು
– ರಾಕೇಶ್ ಶೆಟ್ಟಿ
ಮುಂಬೈನಿಂದ ನಾನು ಬೆಂಗಳೂರಿಗೆ ಹೊರಟಿದ್ದ ಸೆಪ್ಟಂಬರ್ ೩೦,೨೦೧೦ರ ಗುರುವಾರದ ಆ ದಿನ ಉಳಿದ ದಿನಗಳಂತೆ ಇರಲಿಲ್ಲ.ಒಂದು ಬಗೆಯ ಕುತೂಹಲ,ಕಾತರ,ಆತಂಕಗಳು ಭಾರತದ ಬಹುತೇಕರಲ್ಲಿ ಮನೆ ಮಾಡಿದ್ದ ದಿನವದು.ಅಲಹಬಾದ್ ಉಚ್ಚ ನ್ಯಾಯಾಲಯ ಅಯೋಧ್ಯೆಯ “ರಾಮ ಜನ್ಮ ಭೂಮಿ/ಬಾಬರಿ ಮಸೀದಿ” ವಿವಾದದ ಕುರಿತು ತೀರ್ಪು ನೀಡುವ ದಿನವಾಗಿತ್ತದು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಹಳಷ್ಟು ಮುನ್ನೆಚ್ಚರಿಕೆಯ ಕ್ರಮ ಕೈಗೊಂಡಿದ್ದವು,ಸೂಕ್ಷ್ಮ,ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಖಾಕಿ ಪಡೆಯ ಕಣ್ಗಾವಲಿತ್ತು.ಜನರ ಜೊತೆಗೆ ವಿಶೇಷವಾಗಿ ಟಿ.ಆರ್.ಪಿ ಮಾಧ್ಯಮಗಳು ಕೂಡ ಸಂಯಮದಿಂದ ವರ್ತಿಸಬೇಕು ಎನ್ನುವ ಮನವಿಗಳು ಸರ್ಕಾರದಿಂದಲೇ ಬರುತಿತ್ತು.ಮಧ್ಯಾಹ್ನ ೩.೩೦ರ ಸುಮಾರಿಗೆ ತೀರ್ಪು ಹೊರಬರಲಿದೆ ಎನ್ನುವ ಸುದ್ದಿಗಳು ಹರಿದಾಡುತಿದ್ದವು.ನನ್ನ ವಿಮಾನವಿದ್ದಿದ್ದು ಸಂಜೆಯ ವೇಳೆಗೆ.ಆದರೆ,ಬಾಬರಿ ಮಸೀದಿ ಧರಾಶಾಹಿಯಾದ ಮೇಲೆ ಭೀಕರ ದಂಗೆಗೆ ಸಾಕ್ಷಿಯಾಗಿದ್ದ ಮುಂಬೈನಲ್ಲಿ ತೀರ್ಪು ಹೊರಬಂದ ಮೇಲೆ ಏನಾದರೂ ಆಗಬಾರದ್ದು ಶುರುವಾದರೇ,ಅದಕ್ಕೂ ಮುಖ್ಯವಾಗಿ ನಾನು ಹೋಗಬೇಕಾದ ದಾರಿಯಲ್ಲೇ “ಅತಿ ಸೂಕ್ಷ್ಮ ಪ್ರದೇಶ”ಗಳು ಇದ್ದವಾದ್ದರಿಂದ,ಸೇಫರ್ ಸೈಡ್ ಎಂಬಂತೆ ತುಸು ಬೇಗವೇ ನಾನು ಮತ್ತು ನನ್ನ ಸಹುದ್ಯೋಗಿ ಕ್ಯಾಬ್ ಹತ್ತಿಕೊಂಡೆವು.
ಕ್ಯಾಬ್ ಹೊರಟಂತೇ,ಡ್ರೈವರ್ ಅನ್ನು ಮಾತಿಗೆಳೆದೆ.”ಇವತ್ತು ತೀರ್ಪು ಬರಲಿಕ್ಕಿದೆಯಲ್ಲ.ನಿಮಗೇನನ್ನಿಸುತ್ತದೆ,ಆ ಜಾಗ ಯಾರಿಗೆ ಸೇರಿಬೇಕು ನಿಮ್ಮ ಪ್ರಕಾರ?”.ಅವರು ನನ್ನತ್ತ ತಿರುಗಿ “ತಪ್ಪು ತಿಳಿಯಬೇಡಿ ಸರ್.ನಿಮ್ಮ ಪ್ರಶ್ನೆಯೇ ಸರಿಯಿಲ್ಲ.ಜಾಗ ಯಾರಿಗೆ ಸೇರಬೇಕು ಎನ್ನುವುದು ‘ಅಹಂ’ನ ಪ್ರಶ್ನೆಯಾಗುತ್ತದೆ.ಆ ಅಹಂ ಮುಂದೇ ಪ್ರತಿಷ್ಟೆ, ದ್ವೇಷವನ್ನಷ್ಟೇ ಹೊರಡಿಸುತ್ತದೆ.ಅಸಲಿಗೆ ಇದು “ನಂಬಿಕೆ”ಯ ಪ್ರಶ್ನೆ.ಈ ಸಮಸ್ಯೆಯ ಪರಿಹಾರವಾಗಬೇಕಿರುವುದು ಪರಸ್ಪರ ಸಂವಾದ,ಸಾಮರಸ್ಯ,ಶಾಂತಿಯ ಅನುಸಂಧಾನದಿಂದಲೇ ಹೊರತು, ಇದು ಸರ್ಕಾರ,ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ವಿಷಯವಲ್ಲ.ಆ ಜಾಗ ರಾಮ ಜನ್ಮಭೂಮಿಯೆಂಬುದು ಹಿಂದೂಗಳ ನಂಬಿಕೆಯಾಗಿದೆ.ಮೊಘಲ ಬಾಬರ್ ಆದೇಶಂತೆ ಅಲ್ಲಿದ್ದ ಮಂದಿರವೊಂದನ್ನು ಕೆಡವಿ ಅದರ ಮೇಲೆ ಮಸೀದಿಯನ್ನು ನಿರ್ಮಿಸಲಾಗಿರುವ ವಾದವಿದೆಯಲ್ಲ ಸರ್ ಅದು ನಿಜವೇ ಆದರೆ,ಅಲ್ಲಿ ಮಂದಿರವೇ ನಿರ್ಮಾಣವಾಗಬೇಕು.ಯಾಕೆಂದರೆ ರಾಮ,ರಾಮಾಯಣ,ಕೃಷ್ಣ,ಮಹಾಭಾರತವೆಲ್ಲ ಈ ದೇಶದ ಜನರಿಗೆ ಕೇವಲ ಪುರಾಣಗಳಲ್ಲ.ಅವು ಜನರ ಜೀವನದ ಭಾಗಗಳು.ಹೀಗಿರುವಾಗ ಅಲ್ಲಿನ ಜನರ ನಂಬಿಕೆಗಳಿಗೆ ಬೆಲೆ ಕೊಟ್ಟು ಬಾಬರಿನಿಂದ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು” ಎಂದ.
ಭಾರತವನ್ನು “ಕಾಂಗ್ರೆಸ್ಸ್ ಮುಕ್ತ”ವಾಗಿಸಲು,ಕರ್ನಾಟಕದಲ್ಲಿ “ಬಿಜೆಪಿಯೇ ಇಲ್ಲ”!
– ರಾಕೇಶ್ ಶೆಟ್ಟಿ
ಕುರುಕ್ಷೇತ್ರದ ಯುದ್ದಕ್ಕೆ ಬೆಂಬಲ ಕೋರಿ ಬಂದ ಅರ್ಜುನನಿಗೆ,”ನಾರಾಯಣ ಬೇಕೋ?”,”ನಾರಾಯಣಿ ಸೈನ್ಯ ಬೇಕೋ?” ಎಂದು ಕೇಳುತ್ತಾನೆ ಶ್ರೀಕೃಷ್ಣ.’ಸಂಖ್ಯೆ’ ಗಿಂತ ‘ವ್ಯಕ್ತಿ’ ಮತ್ತು ‘ವ್ಯಕ್ತಿ’ಗಿಂತ ‘ವ್ಯಕ್ತಿತ್ವ’ದ ಮಹತ್ವ ಅರಿತಿದ್ದ ಅರ್ಜುನ “ನಾರಾಯಣ” ಎನ್ನುತ್ತಾನೆ. ಅರ್ಜುನನೆಡೆಗೆ ಕನಿಕರ ತೋರಿದ ದುರ್ಯೋಧನ “ನಾರಾಯಣಿ ಸೈನ್ಯ” ಪಡೆದು ಹೋಗುತ್ತಾನೆ.ಕಡೆಗೆ ಯುದ್ಧದಲ್ಲಿ ಗೆದ್ದಿದ್ದು ಯಾರು ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಇಲ್ಲಿ ನನ್ನ ಗಮನವಿರುವುದು ಯುದ್ಧದ ಮೇಲಲ್ಲ.ಯುದ್ಧಕ್ಕೆ ಹೊರಟು ನಿಂತವನು ಮಾಡಿಕೊಳ್ಳುವ ತಯಾರಿಯ ಮೇಲೆ.ಕುರುಕ್ಷೇತ್ರದ ಯುದ್ಧಕ್ಕೆ ಕಾರಣನಾದ ದುರ್ಯೋಧನ,ಯುದ್ಧಕ್ಕೆ ಬೇಕಾದ ಜನರನ್ನು (ಸಂಖ್ಯೆ) ಒಟ್ಟುಗೂಡಿಸಿಕೊಂಡು ಹೊರಟು ನಿಂತನೇ ಹೊರತು,ಯುದ್ದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಿಲ್ಲ.
ಬಹುಷಃ, ತನ್ನ ಜೊತೆಗೆ ಭೀಷ್ಮ,ದ್ರೋಣಾಚರ್ಯರಂತ ಅಸಾಧಾರಣ ಸಾಮರ್ಥ್ಯದ “ವ್ಯಕ್ತಿ”ಗಳಿದ್ದಾರೆ ಎನ್ನುವ ಅಹಂ ದುರ್ಯೋಧನನಿಗಿದ್ದೀತು.ವ್ಯಕ್ತಿಗಳಿದ್ದರೇನಂತೆ “ವ್ಯಕ್ತಿತ್ವ” ಇರಲಿಲ್ಲವಲ್ಲ!
ಏನಿದು,ಭೀಷ್ಮನಂತ ಭೀಷ್ಮ,ದ್ರೋಣಾಚಾರ್ಯರಿಗೆ ವ್ಯಕ್ತಿತ್ವವಿರಲಿಲ್ಲ ಎನ್ನುತ್ತಿದ್ದೇನೆ ಎನ್ನಿಸಬಹುದು.ಧರ್ಮ-ಅಧರ್ಮದ ಪ್ರಶ್ನೆ ಬಂದಾಗ ಅದಿನ್ನೇನೋ ಸಬೂಬು ಕೊಟ್ಟು ಅಧರ್ಮದ ಪರ ನಿಲ್ಲುವ ವ್ಯಕ್ತಿಯ “ವ್ಯಕ್ತಿತ್ವ”ಕ್ಕೆ ಬೆಲೆ ಉಳಿಯುತ್ತದೆಯೇ? ಕಡೆಗೂ ಮಹಾಭಾರತದ ಯುದ್ಧದಲ್ಲಿ ಗೆದ್ದಿದ್ದು ಧರ್ಮದ ಪರನಿಂತ ವ್ಯಕ್ತಿಗಳೇ.
ರಾಜಕೀಯ ಪಕ್ಷಗಳಿಗೆ ಬೇಕು, RTI ಬ್ರೇಕು!
– ತುರುವೇಕೆರೆ ಪ್ರಸಾದ್
ನಾವು ಮತ್ತೊಂದು ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿದ್ದೇವೆ.ರಾಜಕೀಯ ಪಕ್ಷಗಳು ತಮ್ಮ ಮಾಮೂಲಿ ಬೂಟಾಟಿಕೆ ಹಾಗೂ ಡೋಂಗಿ ಮಾತುಗಳೊಂದಿಗೆ ಮತದಾರರನ್ನು ಸೆಳೆಯಲು ಕಸರತ್ತು ನಡೆಸಿವೆ. ಆಶ್ವಾಸನೆಗಳ ಸುರಿಮಳೆಯನ್ನೇ ಸುರಿಸುತ್ತಿವೆ. ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತದ ಭರವಸೆಗಳ ಮಹಾಪೂರವೇ ಹರಿಯುತ್ತಿದೆ. ಆದರೆ 9ತಿಂಗಳ ಹಿಂದೆ ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ) ಕಾಂಗ್ರೆಸ್, ಬಿಜೆಪಿ,ಸಿಪಿಐ, ಸಿಪಿಐ-ಎಂ, ಬಿಎಸ್ಪಿಷ ಹಾಗೂ ಎನ್ಸಿಿಪಿ-ಈ 6ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಯಡಿ ಸಾರ್ವಜನಿಕ ಸಂಸ್ಥೆಗಳು ಎಂದು ಘೋಷಿಸಿತ್ತು. ಸಿಐಸಿಯ ಆ ಆದೇಶವನ್ನು ಎಲ್ಲಾ ರಾಜಕೀಯ ಪಕ್ಷಗಳು ಧಿಕ್ಕರಿಸಿವೆ. ಆ ಬಗ್ಗೆ ಚಕಾರವೆತ್ತದೆ ಮತದಾರರೂ ಎಲ್ಲಾ ಮರೆತಂತಿದ್ದಾರೆ.
ಮಾಹಿತಿ ಹಕ್ಕು ಕಾರ್ಯಕರ್ತರಾದ ಸುಭಾಷ್ ಅಗರ್ವಾದಲ್ ಮತ್ತು ಅನಿಲ್ ಬೈರ್ವಾೋಲ್ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಸಿಪಿಐ-ಎಂ ಪಕ್ಷಗಳ ದೇಣಿಗೆ ಸ್ವೀಕೃತಿ ಹಾಗೂ ಖರ್ಚು-ವೆಚ್ಚಗಳ ಮಾಹಿತಿ ಕೋರಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ತಾವು ಸಾರ್ವಜನಿಕ ಸಂಸ್ಥೆಗಳಲ್ಲ ಹಾಗೂ ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಯಡಿ ಬರುವುದಿಲ್ಲ ಎಂದು ತಿಳಿಸಿದ್ದವು. ಆದರೆ ಮಾಹಿತಿ ಹಕ್ಕು ಕಾರ್ಯಕರ್ತರು ರಾಜಕೀಯ ಪಕ್ಷಗಳನ್ನೂ ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 2(ಎಚ್) ಅಡಿ ಸಾರ್ವಜನಿಕ ಸಂಸ್ಥೆಗಳೆಂದು ಘೋಷಿಸಬೇಕೆಂದು ಸಿಐಸಿಗೆ ಮನವಿ ಮಾಡಿದ್ದರು.ಅದರಂತೆ ಆಯೋಗದ ಪೂರ್ಣ ಪೀಠ ಜೂನ್ 3, 2013ರಂದು ಮೇಲಿನ 6ರಾಜಕೀಯ ಪಕ್ಷಗಳು ಸಾರ್ವಜನಿಕ ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಅವು ಉತ್ತರದಾಯಿತ್ವ ಹೊಂದಿವೆ ಎಂದು ಆದೇಶ ನೀಡಿತು. ಅದಕ್ಕೆ ಸಿಐಸಿ ಕಾರಣಗಳನ್ನೂ ನೀಡಿತ್ತು. ಎಲ್ಲಾ 6ರಾಜಕೀಯ ಪಕ್ಷಗಳು ಪರೋಕ್ಷವಾಗಿ ಕೇಂದ್ರ ಸರ್ಕಾರದಿಂದ ಸಹಾಯ ಧನ ಪಡೆದಿದ್ದವು. ದೆಹಲಿಯ ಹೃದಯ ಭಾಗದಲ್ಲಿ ಅತಿ ಕಡಿಮೆ ಅಥವಾ ಪುಕ್ಕಟೆಯಾಗಿ ನಿವೇಶನ/ಕಟ್ಟಡಗಳನ್ನು ಪಡೆದಿದ್ದವು. ಎಲ್ಲಾ ಪಕ್ಷಗಳಿಗೂ ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ರೂ.28.56ಲಕ್ಷ ಮೌಲ್ಯದ ಉಚಿತ ಪ್ರಸಾರ ಸೇವೆ ನೀಡಲಾಗಿತ್ತು. 2006-09ರ ಅವಧಿಯಲ್ಲಿ ಎಲ್ಲಾ ಪಕ್ಷಗಳಿಗೆ ಒಟ್ಟಾರೆ 510ಕೋಟಿ ಆದಾಯ ಕರ ವಿನಾಯತಿಯನ್ನು ನೀಡಲಾಗಿತ್ತು.
೨೦೧೪ರ ಚುನಾವಣ ಕಣದ ಸುತ್ತ
– ಡಾ.ಕಿರಣ್ ಎಂ ಗಾಜನೂರು
ಭಾರತದಲ್ಲಿ ಲೋಕಸಭಾ ಚುನಾವಣೆಗೆ ವೇದಿಕೆ ಸಜ್ಜುಗೊಂಡಿದೆ.ಹಾಗೆ ನೋಡುವುದಾದರೆ ಭಾರತದಲ್ಲಿ ಇದುವರೆಗೆ ನಡೆದ ಲೋಕಸಭಾ ಚುನಾವಣೆಗಳಿಗಿಂತ ೨೦೧೪ರ ಈ ಲೋಕಸಭಾ ಚುನಾವಣೆ ಹೆಚ್ಚು ಚರ್ಚೆಯಲ್ಲಿದೆ ಮತ್ತು ಜನ ಸಮಾನ್ಯರಲ್ಲಿಯು ಒಂದು ಸಹಜ ಕುತೂಹಲವನ್ನು ಈ ಚುನಾವಣೆ ಹುಟ್ಟುಹಾಕಿದೆ.ಭಾರತದಲ್ಲಿನ ಪ್ರಮುಖ ರಾಜಕೀಯ ಚಿಂತಕರು,ಮಾಧ್ಯಮಗಳು ಈ ವಿದ್ಯಮಾನಕ್ಕೆ ಹಲವಾರು ಕಾರಣಗಳನ್ನು ಗುರುತಿಸಿದ್ದಾರೆ ಅದರಲ್ಲಿ ಬಹಳ ಮುಖ್ಯವಾದದ್ದು
೧) ಆಡಳಿತಾತ್ಮಕ ಮತ್ತು ಭ್ರಷ್ಟಾಚಾರದ ಕಾರಣಕ್ಕಾಗಿ (ಮುಖ್ಯವಾಗಿ ಬೆಲೆ ಎರಿಕೆ) ರೂಪಿತಗೊಂಡ ಕಾಂಗ್ರೆಸ್ಸ್ ವಿರೋಧಿ ನಿಲುವು
೨) ಬಿ.ಜೆ.ಪಿ ತನ್ನ ಪ್ರಧಾನಿ ಆಭ್ಯರ್ಥಿ ನರೆಂದ್ರ ಮೋದಿಯವರ ಹಿನ್ನಲೆಯಲ್ಲಿ ರೂಪಿಸಿಕೊಂಡ ಜನಪ್ರಿಯತೆ.
ಹಾಗಾದರೆ, ೨೦೧೪ ರ ಚುನಾವಣೆ ಈ ಎರಡು ನಿಲುಗಳ ಆಧಾರದಲ್ಲಿಯೆ ನಡೆಯುತ್ತದಾ? ದೇಶದ ಎಲ್ಲಾ ಭಾಗದ ಮತದಾರ ಈ ನಿಲುವುಗಳ ಆಧಾರದಲ್ಲಿಯೆ ಮತ ಚಲಾಯಿಸುತ್ತಾನಾ? ಎಂಬ ಪ್ರಶ್ನೆಯನ್ನು ಭಾರತದಲ್ಲಿ ಇದುವರೆಗೆ ನಡೆದ ಲೋಕಸಭಾ ಚುನಾವಣೆಗಳ ಹಿನ್ನಲೆಯಲ್ಲಿ ವಿಶ್ಲೇಷಿಸಿ ಕೇಳಿಕೊಂಡರೆ, ’ಖಂಡಿತಾ ಇಲ್ಲಾ’ ಎಂಬ ಉತ್ತರವನ್ನೂ ಯಾರಾದರೂ ನೀರಿಕ್ಷಿಸಬಹುದಾಗಿದೆ…! ಏಕೆಂದರೆ ಕಳೆದ ಹತ್ತು ವರ್ಷಗಳ ಕಾಲ ಈ ದೇಶವನ್ನು ಆಳಿದ ಯುಪಿಎ ಸರ್ಕಾರ ಹಲವಾರು ಹಗರಣಗಳನ್ನು ತನ್ನ ಮೇಲೆ ಎಳೆದುಕೊಂಡಿದ್ದರೂ ಆದರ ಜೊತೆ ಜೊತೆಗೆ ’ಆರ್.ಟಿ.ಐ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನ”ಯಂತಹ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವುದರ ಮೂಲಕ ಸಮಾಜದ ಹಲವು ವರ್ಗಗಳ ಜನರ ಬೆಂಬಲವನ್ನು ಗಳಿಸಿಕೊಂಡಿದೆ .ಅದೂ ಅಲ್ಲದೆ, ಈ ದೇಶವನ್ನು ಹೆಚ್ಚು ಕಾಲ ಆಳಿದ ಕಾಂಗ್ರೆಸ್ಸ್ ಪಕ್ಷ ಅದರದ್ದೆ ಆದಂತಹ ಒಂದು ಮತದಾರರ ವರ್ಗ ಮತ್ತು ಬುದ್ದಿಜೀವಿಗಳ ಗುಂಪನ್ನು ಸೃಷ್ಟಿಸಿಕೊಂಡಿದೆ ಅವರು ಎಂದಿಗೂ ಕಾಂಗ್ರೆಸ್ಸ್ ಅನ್ನು ಬೆಂಬಲಿಸುತ್ತಾರೆ ಮತ್ತು ಚುನಾವಣೆಯಲ್ಲಿ ಈ ಅಂಶ ಖಂಡಿತವಾಗಿ ಪ್ರಭಾವ ಬೀರಲಿದೆ.ಇದರ ಜೊತೆಗೆ ದೇಶದ ಭವಿಷ್ಯದ ಪ್ರಧಾನಿ ಎಂದು ಕಾಂಗ್ರೆಸ್ಸ್ ವಲಯದಲ್ಲಿ ಗುರುತಿಸಿಕೊಂಡಿರುವ ರಾಹುಲ್ ಗಾಂಧಿಯವರು ಇತ್ತಿಚೆಗೆ “ಭಾರತಕ್ಕೆ ಬೇಕಿರುವುದು ಇಲ್ಲಿನ ವಿವಿಧತೆಯನ್ನು ಅವುಗಳ ನೆಲೆಯಲ್ಲಿಯೆ ಗುರುತಿಸಿ ಬೆಳೆಸಬೇಕಾದ ರಾಜಕೀಯ ಪಕ್ಷವೆ ಹೊರತು ವ್ಯಕ್ತಿ ಕೇಂದ್ರಿತ ಪಕ್ಷವಲ್ಲ” ಎಂಬ ಮಾದರಿಯ ಪ್ರಜಾಸತ್ತಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಮತ್ತು ಕಾಂಗ್ರೆಸ್ಸಿನಲ್ಲಿ ತಮ್ಮ ಈ ನಿಲುವನ್ನು ಜಾರಿಗೆ ತರುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಇದಕ್ಕೆ ಉದಾಹರಣೆ ಇತ್ತೀಚೆಗೆ ಕಾಂಗ್ರೆಸ್ಸ್ ಪಕ್ಷದೊಳಗೆ ನಡೆದ ಆಂತರಿಕ ಚುನಾವಣೆ.ಈ ಅಂಶವು ದೇಶದ ಮಧ್ಯಮ ವರ್ಗದ ಮತದಾರರನ್ನು ಖಂಡಿತಾ ಸೆಳೆಯುತ್ತದೆ.
ಪೆಪ್ಪರ್ ಸ್ಪ್ರೇ ಮತ್ತು ಕಾಂಗ್ರೆಸ್ಸ್
– ಪ್ರಸನ್ನ,ಬೆಂಗಳೂರು
ಇತ್ತೀಚೆಗೆ ಸಂಸತ್ತಿನಲ್ಲಿ ನಡೆದ ಪ್ರಸಂಗವನ್ನು ಎಲ್ಲ ಮಾಧ್ಯಮಗಳು ಒಕ್ಕೊರಲಿನಿಂದ ಪೆಪ್ಪರ್ ಸ್ಪ್ರೇಯಷ್ಟೇ ಖಾರವಾದ ಮತ್ತು ಚಾಕುವಿನಷ್ಟೇ ಹರಿತವಾದ ಶಬ್ದಗಳಲ್ಲಿ ಖಂಡಿಸಿವೆ. ಆದರೆ ಈ ಘಟನೆಗೆ ಕಾರಣಾರು? ಎಂಬುದನ್ನು ಎಲ್ಲಿಯಾದರೂ ವಿಶ್ಲೇಷಣೆಗೊಳಪಡಿಸಿವೆಯೆ?
ನಮ್ಮ ನ್ಯಾಯಾಲಯಗಳೂ ಕೂಡ ಎಲ್ಲ ಪ್ರಕರಣಗಳಲ್ಲೂ ಉತ್ತೇಜನಕಾರಿ ಮತ್ತು ಅಪರಾಧಕ್ಕೆ ಕಾರಣವಾಗುವ ಪ್ರಚೋದನಾಕಾರಿ ಅಂಶಗಳನ್ನು ಹುಡುಕಲು ಪ್ರಯತ್ನಿಸುತ್ತದೆ. ಬಲವಾದ ಕಾರಣವಿಲ್ಲದೆ ನಡೆದ ಪ್ರಕರಣಗಳನ್ನು ನ್ಯಾಯಾಲಯ ಹೆಚ್ಚು ಕಠಿಣ ಶಿಕ್ಷೆಗೆ ಗುರಿ ಪಡಿಸಲು ಹೋಗುವುದಿಲ್ಲ. ಕೆಲವೊಮ್ಮೆ ಕಾರಣವಿಲ್ಲದೆ ಜರುಗುವ ಅಪರಾಧಗಳನ್ನು ಕೇವಲ ಕಣ್ತಪ್ಪಿನಿಂದಾದ ಅನಾಹುತಗಳೆಂದೆ ಪರಿಗಣಿಸಿದ ಉದಾಹರಣೆಗಳಿವೆ.
೨೦೦೪ ರಲ್ಲಿ ಕೇವಲ ಪ್ರಾದೇಶಿಕ ಪಕ್ಷಗಳ ವೈಫಲ್ಯದಿಂದ ಚುಕ್ಕಾಣಿ ಹಿಡಿದ ಸರಕಾರದ ನಡವಳಿಕೆಗಳನ್ನು ಒಮ್ಮೆ ಸಿಂಹಾವಲೋಕನ ಮಾಡಿ ನೋಡಿ. ಇಂದಿನ ಸಂಸದರ ನಡವಳಿಕೆಗೆ ಒಂದು ಸಣ್ಣ ಕಾರಣದ ಎಳೆ ಕಾಣಿಸಿಕೊಳ್ಳುತ್ತದೆ. ಅದು ಹೇಗೋ ಹಿಂದಿನ ಸರಕಾರದ ಆರ್ಥಿಕ ನೀತಿಗಳಿಂದ ಮೊದಲ ಮೂರು ವರ್ಷ ತಳ್ಳಿದ ಈ ಸರಕಾರ, ಯುಪಿಎ-೧ರ ಕೊನೆಯ ೨ ವರ್ಷಗಳಲ್ಲಿ ನಡೆಸಿದ ಹಗರಣಗಳು ಹೊರ ಬರುವಷ್ಟರಲ್ಲಿ ಎರಡನೇ ಬಾರಿ ಚುನಾವಣೆ ಗೆದ್ದಿತ್ತು. ಅದರಲ್ಲೂ ನಮ್ಮ ಮೂಕ ಪ್ರಧಾನಿಯವರು ನಾವು ಚುನಾವಣೆ ಗೆದ್ದಿದ್ದೇವೆ ಹಾಗಾಗಿ ನಾವು ಮಾಡಿದ್ದೆಲ್ಲ ಸರಿ ೫ ವರ್ಷ ನಮಗೆ ಅಧಿಕಾರ ಕೊಟ್ಟಿದ್ದಾರೆ ನಾವು ಯಾರಿಗೂ ಉತ್ತರದಾಯಿಗಳಲ್ಲ ಎನ್ನುವಂತೆ ಹೇಳಿಕೆಗಳನ್ನು ಕೊಟ್ಟು ಅಂತೆಯೇ ನಡೆದು ಕೊಂಡರು.
ಮತ್ತಷ್ಟು ಓದು