ಮಹಾತ್ಮ ಬಸವಣ್ಣನವರು
– ಡಾ.ಸಂಗಮೇಶ ಸವದತ್ತಿಮಠ
(ಕಳೆದ ವರ್ಷ (2019) ನಾನು ಕೆನಡಾ ದೇಶದ ಟೊರೊಂಟೊ ನಗರದಲ್ಲಿ ವೀರಶೈವ ಸಮಾಜ ಏರ್ಪಡಿಸಿದ್ದ ಬಸವಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಡಿದ ಭಾಷಣದ update ಮಾಡಿದ ಲೇಖನ ಪ್ರಸ್ತುತ ಬಸವಜಯಂತಿ ಸಂದರ್ಭದಲ್ಲಿ ಆಸಕ್ತ ಓದುಗರಿಗಾಗಿ ಇಲ್ಲಿದೆ)
ಆತ್ಮೀಯ ನಾರ್ತ್ ಅಮೇರಿಕಾ ಟೋರೊಂಟೊ ಚಾಪ್ಟರ್ನ ವೀರಶೈವ ಸಮಾಜ ಬಾಂಧವರೆ,
ತಮಗೆಲ್ಲ ಬಸವಜಯಂತಿಯ ಹಾರ್ದಿಕ ಶುಭಾಶಯಗಳು.
ಕನ್ನಡನಾಡಿನ ಸೌಭಾಗ್ಯ ಎಂಬಂತೆ ಬಸವಣ್ಣನವರು ನಮ್ಮ ನಾಡಿನಲ್ಲಿ ಜನ್ಮತಳೆದರು. ಬಸವಣ್ಣನವರ ವ್ಯಕ್ತಿತ್ವ ಅಗಾಧವಾದದು, ಅದ್ಭುತವಾದದ್ದು, ಪರಿಪೂರ್ಣವಾದದ್ದು, ಬಹುಮುಖಿಯಾದದ್ದು. ಅವರನ್ನು ಒಬ್ಬೊಬ್ಬರೂ ಒಂದೊಂದು ದೃಷ್ಟಿಯಿಂದ ನೋಡಿದಾಗ ಅವರವರ ಭಾವದಂತೆ ಅವರು ಗೋಚರಿಸುತ್ತಾರೆ. ಅದೇ ಅವರÀ ವ್ಯಕ್ತಿತ್ವದ ವೈಶಿಷ್ಟ್ಯ.
1.ಒಬ್ಬನೆಂದ – ಬಸವಣ್ಣ ಒಬ್ಬ ರಾಜಕಾರಣಿ. ಹೌದು ಬಿಜ್ಜಳನ ಆಸ್ಥಾನದಲ್ಲಿದ್ದುದರಿಂದ ಅವರು political thinker .
- ಒಬ್ಬನೆಂದ – ರಾಜಕಾರಣಿಗಿಂತ ಅವರು ಒಬ್ಬ ಶ್ರೇಷ್ಠ ಅಧಿಕಾರಿ, ಆಡಳಿತಗಾರ. ಹೌದು ಅವರು Prime minister
- ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ಅಧಿಕಾರಿ ಎನ್ನುವುದಕ್ಕಿಂತ ಅವರೊಬ್ಬ ದಾರ್ಶನಿಕರು. ಹೌದು ಅವರು philosopher. ತತ್ತ್ವಜ್ಞಾನಿ.
- ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ದಾರ್ಶನಿಕ ಎನ್ನುವುದಕ್ಕಿಂತ ಅವರೊಬ್ಬ ಅಧ್ಯಾತ್ಮಜೀವಿ. ಹೌದು ಧರ್ಮದ ಚೌಕಟ್ಟಿನೊಳಗೆ ಭಕ್ತಿಯ ಸೋಪಾನಗಳನ್ನು ಇಟ್ಟು ಅಧ್ಯಾತ್ಮದ ಬೆಳಸು ತೆಗೆದವರು ಬಸವಣ್ಣನವರು.
- ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ದಾರ್ಶನಿಕ, ಅಧ್ಯಾತ್ಮಜೀವಿ ಎನ್ನುವುದಕ್ಕಿಂತ ಅವರೊಬ್ಬ ಸಮಾಜ ಸುಧಾರಕ. ಹೌದು Social reformer. ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಬೇಕಾದುದೆಲ್ಲವನ್ನೂ ಅವರು ಮಾಡಿತೋರಿಸಿದ ಧೀಮಂತ ಸಮಾಜೋದ್ಧಾರಕರು.
- ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ದಾರ್ಶನಿಕ, ಅಧ್ಯಾತ್ಮಜೀವಿ, ಸಮಾಜ ಸುಧಾರಕ ಎನ್ನುವುದಕ್ಕಿಂತ ಅವರೊಬ್ಬ ಕ್ರಾಂತಿಪುರುಷ. ಹೌದು ತನ್ನ ಕಾಲದಲ್ಲಿ ಇದ್ದ ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಿ ಜನರ ಬದುಕಿನಲ್ಲಿ ಬದಲಾವಣೆಗಳನ್ನು ತಂದವರು.
ಹೀಗೆಯೇ ಜಂಗಮಪ್ರೇಮಿ, ಭಕ್ತಾನುಕಂಪಿ, ಬಾಗಿದ ತಲೆಯ ಮುಗಿದ ಕೈಯ ವಿನಯಶೀಲ, ಸಿಟ್ಟು, ಸೆಡವು, ದ್ವೇಷ, ಅಸೂಯೆ, ಈರ್ಷೆ ಇಲ್ಲದ ಎಲ್ಲರನ್ನೂ ಸಮಾನ ಗೌರವದಿದ ಕಾಣುವವ ಇತ್ಯಾದಿ ಇತ್ಯಾದಿ ಹೇಳುತ್ತಲೇ ಹೋಗಬಹುದು. ಒಂದೊಂದೇ ಮಗ್ಗಲುಗಳನ್ನು ಬಿಡಿಸುತ್ತ ಹೋದಂತೆ ಬಸವಣ್ಣನವರ ಒಟ್ಟು ವ್ಯಕ್ತಿತ್ವದ ಪದರು ಪದರುಗಳು ಬಿಚ್ಚಿಕೊಳ್ಳುತ್ತಲೇ ಹೋಗುತ್ತವೆ. ಎಂತಹ ಅದ್ಭುತ ! ಜಗದ ಅಚ್ಚರಿ ಅಲ್ಲವೆ?
ಮಹಾತ್ಮ ಬಸವಣ್ಣನವರು ನಮಗಿಂದು ಎಷ್ಟು ಪ್ರಸ್ತುತ?
– ಡಾ. ಸಂಗಮೇಶ ಸವದತ್ತಿಮಠ
ಬಸವಣ್ಣನವರೆಂಬ ಮಹಾತ್ಮರ ಬಗ್ಗೆ ಯಾರಿಗೆ ಗೊತ್ತಿಲ್ಲ? ಬಿಜ್ಜಳನ ಆಸ್ಥಾನದಲ್ಲಿದ್ದು ರಾಜಕಾರಣಿ, ಆಡಳಿತಗಾರ; ಧರ್ಮತತ್ತ್ವಪ್ರಮೇಯಗಳನ್ನು ಹೊಸ ಆನ್ವಯಿಕತೆಯಿಂದ ಪ್ರಯೋಜನಕಾರಿಯಾಗಿಸಿದ್ದರಿಂದ ತತ್ತ್ವಜ್ಞಾನಿ; ಧರ್ಮದ ಚೌಕಟ್ಟಿನೊಳಗೆ ಭಕ್ತಿಯ ಸೋಪಾನಗಳನ್ನು ಇಟ್ಟು, ಆಧ್ಯಾತ್ಮದ ಬೆಳಸು ತೆಗೆದ ಶ್ರೇಷ್ಠ ಆಧ್ಯಾತ್ಮಸಂತ,ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಕನಸುಗಾರ, ಧೀಮಂತ ಸಮಾಜಪುರುಷ, ಬದಲಾವಣೆಯ ಹರಿಕಾರ ಕ್ರಾಂತಿಪುರುಷ ಬಸವಣ್ಣ.
ವೇದಿಕೆ, ಸಂದರ್ಭ ಸಿಕ್ಕರೆ ಸಾಕು, “12ನೇ ಶತಮಾನದ ಶರಣರ ಜೀವನ ಮತ್ತು ಸಂದೇಶಗಳು ನಮ್ಮ ಇಂದಿನ ಕಾಲದಲ್ಲಿಯೂ ಬಹಳ ಪ್ರಸ್ತುತ, ಮಾದರಿ, ಅನುಸರಿಸಲು ಯೋಗ್ಯ” ಎಂದೆಲ್ಲ ಒತ್ತಿ ಒತ್ತಿ ಹೇಳುತ್ತೇವೆ. ವಾಸ್ತವವಾಗಿ ಅವುಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ. ಇದು ವಿಪರ್ಯಾಸವಲ್ಲದೆ ಮತ್ತೇನು? ಧಾರ್ಮಿಕ, ಸಾಮಾಜಿಕ, ರಾಜಕೀಯ ಯಾವುದೇ ಕ್ಷೇತ್ರವಿರಲಿ ಅಲ್ಲಿ ಬಸವಣ್ಣನವರು ಯಾವುದನ್ನು ಹೇಳಿಲ್ಲವೋ ಅದನ್ನು ನಾವು ಮಾಡುತ್ತ ಅವರಿಗೆ ದ್ರೋಹ ಬಗೆಯುತ್ತಿದ್ದೇವೆ ಅನ್ಯಾಯಮಾಡುತ್ತಿದ್ದೇವೆ. ವಚನಗಳ ಪ್ರಸ್ತುತತೆಯ ಪ್ರಸ್ತಾಪ ಮಾಡುವವರು ಸಾಮಾನ್ಯವಾಗಿ ಬಸವಣ್ಣನವರ ಸಾಮಾಜಿಕ ರಾಜಕೀಯ ವಿಷಯಗಳು ಮತ್ತು ಆಚರಣಾತ್ಮಕ ವಿಷಯಗಳನ್ನು ಒತ್ತುಕೊಟ್ಟು ಹೇಳುತ್ತಾರೆ. ಸರಿ, ಆದರೆ ಬಸವಣ್ಣನವರು ಪರಮಾರ್ಥ,ಶಿವಯೋಗ,ಆಧ್ಯಾತ್ಮ ವಿಷಯಗಳನ್ನೂ ಕೂಡ ಅಷ್ಟೇ ಗಂಭೀರವಾಗಿಯೇ ತಗೆದುಕೊಂಡವರು.ಅಂಥ ವಿಷಯಗಳು ಈಗ ನಮಗೆ ಎಷ್ಟು ಪ್ರಸ್ತುತ? ಎಂಬುದನ್ನು ನಾವು ಬಹುತೇಕ ಬದಿಗೆ ಸರಿಸಿ ಅವರು ಲೌಕಿಕದ ಬಗ್ಗೆ ಹೇಳಿದ್ದನ್ನೇ ಪ್ರಸ್ತುತತೆಗೆ ಹೆಚ್ಚು ಬಳಸಿಕೊಳ್ಳಲಾಗುತ್ತಿದೆ. ಬಸವಣ್ಣನವರು ತೆರೆದ ಮನಸ್ಸಿನಿಂದ ಲೋಕವ್ಯವಹಾರವನ್ನು,ಪರಮಾರ್ಥವನ್ನು ಬಗಿದು ನೋಡಿದವರು. ಅವರಿಗೆ ಲೌಕಿಕ ಎನ್ನುವುದು ವರ್ಜ್ಯವಾಗಿರಲಿಲ್ಲ. ಆದರೆ ಬರೀ ಲೌಕಿಕದಲ್ಲೇ ತೊಳಲಾಡಿದರೆ ಪ್ರಾಣಿಗೂ ಮನುಷ್ಯನಿಗೂ ವ್ಯತ್ಯಾಸ ಇರುವುದಿಲ್ಲ. ಮನುಷ್ಯನ ಬದುಕಿನ ಸಾರ್ಥಕತೆ ಇರುವುದು ಲೌಕಿಕವನ್ನು ಸಾತ್ವಿಕವಾಗಿ ಅನುಭವಿಸುತ್ತಲೇ ಪರಮಾರ್ಥದ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದರಲ್ಲಿದೆ ಎಂಬುದನ್ನು ಅವರು ಆಚರಿಸಿ ತೋರಿಸಿಕೊಟ್ಟರು.
ಮತ್ತಷ್ಟು ಓದು