ವಿಷಯದ ವಿವರಗಳಿಗೆ ದಾಟಿರಿ

Posts tagged ‘ಧರ್ಮ’

19
ಏಪ್ರಿಲ್

ಯುಎಇ ನಿಜಕ್ಕೂ ಅಷ್ಟೊಂದು ಅಸಹಿಷ್ಣು ದೇಶವೇ?

– ರಾಘವೇಂದ್ರ ಎಮ್‌ ಸುಬ್ರಹ್ಮಣ್ಯ

Arab_Gulf_States_englishಕಳೆದೆರಡು ವಾರದಿಂದ ಗಲ್ಫ್ ದೇಶಗಳಲ್ಲಿರುವ ಹಿಂದೂಗಳ ಕೆಲಸಕ್ಕೆ ಕುತ್ತು ತರುವ ವ್ಯವಸ್ಥಿತ ಸಂಚುಗಳು ನಡೆದಿವೆ. ದೆಹಲಿಯ ತಬ್ಲೀಗೀ ಜಮಾತ್’ನವರ ವರ್ತನೆಯನ್ನು ಖಂಡಿಸಿ ಏನನ್ನಾದರೂ ಬರೆದರೆ ಅದೇ ದೊಡ್ಡ ತಪ್ಪು ಎಂಬಂತೆ ಬಿಂಬಿಸಿ, ಪೋಲಿಸರಿಗೆ ದೂರು ನೀಡುವ ಕೆಲಸ ನಡೆದಿದೆ. ಹಾಗಾದರೆ ಯುಎಇಯಲ್ಲಿ ಅಷ್ಟೆಲ್ಲಾ ಸುಲಭಕ್ಕೆ ಯಾರನ್ನಾದರೂ ಅರೆಸ್ಟ್ ಮಾಡಿಸಬಹುದೇ? ಇಸ್ಲಾಂ ಬಗ್ಗೆ ಏನೂ ಕೆಟ್ಟದಾಗಿ ಬರೆಯದೇ, ಭಾರತದ ಕೆಲ ಮುಸ್ಲಿಮರ ತಪ್ಪುಗಳ ಬಗ್ಗೆ ಬರೆದರೆ ಅದು ಶಿಕ್ಷಾರ್ಹ ಅಪರಾಧವೇ?

ಹೆಚ್ಚಿನವರಿಗೆ ಅರಬ್ ರಾಷ್ಟ್ರಗಳೆಂದರೆ ಬಹಳಷ್ಟು ತಪ್ಪು ಅಭಿಪ್ರಾಯಗಳಿವೆ. ತಪ್ಪು ಮಾಡಿದರೆ ಸಾರ್ವಜನಿಕವಾಗಿ ಛಡಿಯೇಟು ಬೀಳುತ್ತದೆ, ಕೈ ಕಾಲು ತಲೆ ಕಡಿಯುತ್ತಾರೆ ಎಂಬೆಲ್ಲಾ ಅನಿಸಿಕೆಗಳಿವೆ. ಆದರೆ ಈ ಎಲ್ಲಾ ಹೆಚ್ಚಿನ ಅಭಿಪ್ರಾಯಗಳು ಬಂದಿರುವುದು ಸೌದಿ ಅರೇಬಿಯಾದಿಂದ. ಯಾಕೆಂದರೆ ಇವೆಲ್ಲಾ ಹೆಚ್ಚಾಗಿ ನಡೆಯುವುದು ಅಲ್ಲಿ ಮಾತ್ರ. ಆದರೆ ಎಲ್ಲಾ ಅರಬ್ ದೇಶಗಳೂ ಹೀಗಿಲ್ಲ. ಇಲ್ಲಿ ಇಸ್ಲಾಂ ನಿಂದನೆಯನ್ನು ಯಾರೂ ಸಹಿಸುವುದಿಲ್ಲವಾದರೂ, ಒಮಾನ್, ಬಹರೈನ್ ಮತ್ತು ಯುಎಇ ದೇಶಗಳು ಸಹಿಷ್ಣುತೆಯಲ್ಲಿ ಹೊಸ ಅಧ್ಯಾಯಗಳನ್ನೇ ಬರೆದಿವೆ. ಮತ್ತಷ್ಟು ಓದು »

29
ಮಾರ್ಚ್

ಹಿಂದೂಧರ್ಮದಿಂದ ಹೊರಹೋಗುವುದು ಎಂದರೇನು?

– ರಾಕೇಶ್ ಶೆಟ್ಟಿ

ಅರ್ಧ ಸೌಟು ಲಾರ್ಡ್ ಕರ್ಜನ್,ಒಂದು ಹಿಡಿಯಷ್ಟು ನೆಹರೂ-ಜಿನ್ನಾ ಮಿಶ್ರಣಕ್ಕೆ ಅರ್ಧ ಗ್ಲಾಸು ತುಘಲಕ್-ಟಿಪ್ಪು ಎಂಬ ದ್ರಾವಣ ಬೆರೆಸಿದರೇ ಸಿದ್ದರಾಮಯ್ಯ ತಯಾರಾಗಿಬಿಡುತ್ತಾರೆ. ಲಾರ್ಡ್ ಕರ್ಜನ್ ಸಾಧನೆ ಬಂಗಾಳ ವಿಭಜನೆಯದ್ದು. ಭಾರತ ವಿಭಜನೆಯ ಸಾಧನೆ ಜಿನ್ನದ್ದಾದರೂ,ಕಾಂಗ್ರೆಸ್-ನೆಹರೂ ಯೋಗದಾನವನ್ನು ಮರೆಯುವಂತಿಲ್ಲವಲ್ಲ.ಅದೇ ಸಾಲಿಗೆ ಸೇರುವುದು ಹಿಂದೂ ವಿಭಜನೆ ಮಾಡಿದ ಸನ್ಮಾನ್ಯ ಸಿದ್ದರಾಮಯ್ಯ. ಕರ್ಜನ್ ಬಂಗಾಳ ವಿಭಜನೆಗೆ ಕೈ ಹಾಕಿದ್ದು ಮತೀಯ ಆಧಾರದ ಮೇಲೆ,ಕರ್ಜನ್ ಹಾದಿಯನ್ನೇ ದಾರಿದೀಪವಾಗಿಸಿಕೊಂಡವ ಜಿನ್ನಾ,ದೇಶವನ್ನೇ ಮತೀಯವಾಗಿ ವಿಭಜಿಸಿದರು.ಇಬ್ಬರೂ ನೆಮ್ಮದಿಯಿಂದಿದ್ದ ಸಮಾಜವನ್ನು ವಿಭಜಿಸಿದ್ದು ಅಧಿಕಾರಕ್ಕಾಗಿ. ಈಗ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಮತ್ತವರ ಸಚಿವರು ವೀರಶೈವ-ಲಿಂಗಾಯಿತ ವಿಭಜನೆ ಮಾಡಿದ್ದು ಚುನಾವಣೆ ಗೆಲ್ಲಬೇಕೆಂಬ ಏಕೈಕ ಕಾರಣಕ್ಕಾಗಿ.ರಾಜಕೀಯ ಕಾರಣದಾಚೆಗೆ ಈ ವಿಭಜನೆಯಲ್ಲಿರುವುದು ವ್ಯಾವಹಾರಿಕ ಕಾರಣಗಳು, ಅಲ್ಪಸಂಖ್ಯಾತ ಬ್ಯಾಡ್ಜಿನಡಿ ಸಿಗುವ ಸೌಲಭ್ಯಗಳ ಆಧಾರವಷ್ಟೇ.ರಾಜಕೀಯ,ವ್ಯಾವಹಾರಿಕ ಕಾರಣಗಳಿಗಿಂತ , ಈ ವಿಷಯದ ವೈಚಾರಿಕ ಆಯಾಮದ ಬಗ್ಗೆ ಗಮನಹರಿಸುವುದು ಈ ಲೇಖನದ ಉದ್ದೇಶ.

ಲಿಂಗಾಯಿತರು “ಹಿಂದೂ ಧರ್ಮ” ಭಾಗವಲ್ಲ,ಅವರದ್ದು ಪ್ರತ್ಯೇಕ “ಧರ್ಮ” ಎಂದು ನಡೆಯುತ್ತಿರುವ ಈ ಚರ್ಚೆಯಲ್ಲಿ ಮುಖ್ಯವಾಗುವುದು ಹಿಂದೂ+ಧರ್ಮ ಪದಗಳು. ಒಂದು ಉದಾಹರಣೆಯ ಮೂಲಕ ಈ ಚರ್ಚೆಯೊಳಗೆ ಹೋಗೋಣ :ಶಾಲಾ ಪಠ್ಯವೊಂದರಲ್ಲಿ “ಭಾರತ ವೈವಿಧ್ಯಮಯ ದೇಶ.ಇಲ್ಲಿ ಹಿಂದೂ,ಜೈನ,ಬೌದ್ಧ,ಸಿಖ್,ಇಸ್ಲಾಂ,ಕ್ರಿಶ್ಚಿಯಾನಿಟಿ, ಪಾರ್ಸಿ (ಮುಂದೆ ಲಿಂಗಾಯತ ?) ಹೀಗೆ ಬಹಳಷ್ಟು ಧರ್ಮಗಳಿವೆ” ಎಂಬ ಪಾಠವನ್ನು ಕೇಳಿದ ವಿದ್ಯಾರ್ಥಿಯೊಬ್ಬ ಶಾಲೆ ಮುಗಿಸಿಕೊಂಡು ಹೊರಗೆ ಬಂದಾಗ,ಅವನಿಗೆ ಎದುರಾದ ಭಿಕ್ಷುಕನೊಬ್ಬ “ಧರ್ಮ ಮಾಡಪ್ಪ” ಅಂತಾನೇ.ಆಗ ಆ ಪಾಪದ ಹುಡುಗನಿಗೆ “ತರಗತಿಯಲ್ಲಿ ಮೇಷ್ಟ್ರು ಹೇಳಿದ ಅಷ್ಟೊಂದು ವೈವಿಧ್ಯಮಯ “ಧರ್ಮ”ಗಳಲ್ಲಿ ಯಾವ ಧರ್ಮವನ್ನು ಈ ಭಿಕ್ಷುಕನಿಗೆ ಮಾಡಬೇಕು? ಅಷ್ಟಕ್ಕೂ ಧರ್ಮ ಮಾಡುವುದೆಂದರೇನು?” ಎಂಬಿತ್ಯಾದಿ ಪ್ರಶ್ನೆಗಳು ಕಾಡಿದರೆ,ನಮ್ಮ ಬುದ್ಧಿಜೀವಿಗಳ ಬಳಿ ಆ ಹುಡುಗನ ಪ್ರಶ್ನೆಗೆ ಉತ್ತರವಿದೆಯೇ?

ಮತ್ತಷ್ಟು ಓದು »

22
ಆಕ್ಟೋ

ಲಿಂಗಾಯತವೆಂಬುದು ಹೊಸ ಧರ್ಮವೇ? … ಭಾಗ 2

– ದೇವು ಹನೆಹಳ್ಳಿ,
ಬಾರಕೂರು, ಉಡುಪಿ

ಮತ,ಪಂಥ,ಧರ್ಮ,Religion ಇತ್ಯಾದಿ… ಭಾಗ 1

Religion ಅನ್ನು `ಧರ್ಮ’ ವೆಂದು ಅನುವಾದಿಸಿದ್ದು ಶತಮಾನದ ದೊಡ್ಡ ಅಕ್ರಮ-ಸಕ್ರಮ ಯೋಜನೆ.    

ನಾವು ಭಾರತೀಯರು Religion ಎಂಬ ಏಕಸೂತ್ರದಲ್ಲಿ ಇಲ್ಲ ಎಂಬುದು ನಮ್ಮ ಸುಪ್ತಪ್ರಜ್ಞೆಗೆ ಗೊತ್ತು. ಏಕಸೂತ್ರಕ್ಕೆ ಏನೆನ್ನಬೇಕು? ಅದೊಂದು Religion ಅಲ್ಲ, ಜೀವನವಿಧಾನ ಎಂದು ಯಾರೋ ಅಂದರು. (ಎಂ.ಬಿ. ಪಾಟೀಲರೂ ಅದನ್ನೇ ಹೇಳುತ್ತಾರೆ! `ಹಿಂದೂ ಎಂಬುದಿಲ್ಲ; ಇಲ್ಲಿದ್ದುದು ಬರೇ ಜಾತಿಗಳು’ಎಂದು ಕಾಗೋಡು ತಿಮ್ಮಪ್ಪನವರು ಸರಿಯಾಗಿಯೇ ಹೇಳಿದ್ದಾರೆ.) ಜೀವನಧರ್ಮ ಎಂದರು. ಸನಾತನ ಪದ್ಧತಿ ಎಂದರು. ಸನಾತನ ಧರ್ಮ ಎಂದುಬಿಟ್ಟರು. `ಧರ್ಮ’ ಎಂದುಬಿಟ್ಟ ಅಚಾತುರ್ಯವಿದೆಯಲ್ಲಾ, ಅದು ಈ ಶತಮಾನದ ಒಂದು ದೊಡ್ಡ ಅಕ್ರಮ-ಸಕ್ರಮ ಯೋಜನೆ.

ಈ ಅಸ್ಪಷ್ಟವಾದ ‘ಧರ್ಮ’ ಎಂಬ ಪದ ಬಳಕೆಯಾದ ಕಾಲಘಟ್ಟದಲ್ಲಿ ನಡೆದುಹೋದ ಒಂದು ಚಾರಿತ್ರಿಕ ಘಟನೆಯೆಂದರೆ ಚಿಕಾಗೋದಲ್ಲಿ ನಡೆದ Parliament of World’s Religions. ಇದನ್ನು ಭಾರತೀಯ ಭಾಷೆಗಳಿಗೆ, ಕನ್ನಡಕ್ಕೆ ವಿಶ್ವ ಸರ್ವಧರ್ಮ ಸಮ್ಮೇಳನ ಎಂದು ಭಾಷಾಂತರಿಸಲಾಯಿತು. (ಅದಾಗಲೇ ಉತ್ತರಭಾರತದಲ್ಲಿ ಹಲವಾರು ಭಾಷೆಗಳ ಪದಗಳನ್ನು ಎರವಲು ಪಡೆದು ‘ಹಿಂದಿ’ ಎಂಬ ಹೊಸ ಭಾಷೆಯನ್ನು ತಯಾರಿಸುತ್ತಿದ್ದ  ಕಾಲದಲ್ಲಿ ಮತಕ್ಕೆ (Religion) ಬದಲಾಗಿ, ಧರಮ್ ಎನ್ನುವ ಪರಿಪಾಠ ಬಂದಿತ್ತು.) ಅದುವರೆಗೆ Religionಗೆ ಸಂವಾದಿಯಾಗಿ, ಸಮಾನಾರ್ಥಕವಾಗಿ ಬಳಕೆಯಾಗುತ್ತಿದ್ದ ‘ಮತ’ ಎಂಬ ಶಬ್ದವನ್ನು ಕದಲಿಸಿ ಅಲ್ಲಿ ‘ಧರ್ಮ’ ಎಂಬ ಪದವನ್ನು ಕೂರಿಸಲಾಯಿತು.  ಧರ್ಮ ಎಂಬುದು ಯಾವತ್ತೂ ಋತ, ನ್ಯಾಯ, ನೀತಿ, ಸತ್ಯ, ಋಜುತ್ವ, ದಯೆ, ಕರುಣೆ, ಕರ್ತವ್ಯ, ನ್ಯಾಯಸಮ್ಮತ ನಡವಳಿಕೆ ಮುಂತಾದ ಮಾನವೀಯ ಮೌಲ್ಯಗಳ ಮೊತ್ತವಾಗಿ ಗ್ರಹಿಸಿದ್ದೇ ವಿನಃ ಸಂಕುಚಿತ ಮತೀಯ ತೀರ್ಮಾನ, ಗ್ರಹಿಕೆಗಳಾಗಿ ಅಲ್ಲ.

ಭಾರತೀಯ ಸಂದರ್ಭದಲ್ಲಿ  Religionಗೆ ಸಂವಾದಿಯಾಗಿ ‘ಮತ’ ಎನ್ನುವುದಕ್ಕಿಂತ ‘ಧರ್ಮ’ಎಂದರೆ ಹೆಚ್ಚು ಸ್ವೀಕಾರಾರ್ಹತೆ, Legitimacy, ಬರುವ ವಾಸನೆ ಬಡಿಯುತ್ತಲೇ ರಕ್ತದಲ್ಲಿ ಮಿಂದೆದ್ದ Religion(ಮತ)ಗಳೆಲ್ಲ ತಮ್ಮನ್ನು ಧರ್ಮ ಎಂದು ಕರೆದುಕೊಳ್ಳಲಾರಂಭಿಸಿದವು. ಮತಪಂಥಗಳ ಕುರಿತಾದ ವಾಗ್ವಾದವನ್ನೇ ಹಾಳುಗೆಡವಿದ ಈ ವಿದ್ಯಮಾನ ಎಲ್ಲ ಭಾರತೀಯ ಭಾಷೆಗಳ ಪದಕೋಶಗಳನ್ನು ಕಲುಷಿತಗೊಳಿಸಿಬಿಟ್ಟಿತು. ಯುರೋಪಿಯನ್ ಭಾಷೆಗಳಲ್ಲಿ Religion ಮತ್ತು Munificence+Benevolence +Values+ Rectitude ಒಂದೇ ಅಲ್ಲ; ಆದರೆ ಭಾರತದಲ್ಲಿ ಮತ ಮತ್ತು ಧರ್ಮ ಎಂದರೆ ಒಂದೇ!

‘ನೂರು ಮತಗಳ ಹೊಟ್ಟ ತೂರಿ…’ ಎಂದು ಹಾಡುವ ಕಾಲದಲ್ಲಿ ಕುವೆಂಪು ಅವರ ಶಬ್ದಕೋಶ ಸರಿಯಿತ್ತು. ಆದರೆ ಅವರೇ `ಇಸ್ಲಾಂ ಧರ್ಮ’ ಎಂಬ ಹೊತ್ತಗೆ ಬರೆದರು! ಆದರೆ ಪಂಪನಿಗೆ ಈ ಗೊಂದಲವಿರಲಿಲ್ಲ. ಧರ್ಮ ಎಂದರೇನು, ಅಧರ್ಮ ಎಂದರೇನು? ಪಂಪ ಸ್ಪಷ್ಟವಾಗಿ ಹೇಳುತ್ತಾನೆ:

ಮತ್ತಷ್ಟು ಓದು »

21
ಆಕ್ಟೋ

ಮತ,ಪಂಥ,ಧರ್ಮ,Religion ಇತ್ಯಾದಿ… ಭಾಗ 1

– ದೇವು ಹನೆಹಳ್ಳಿ,
ಬಾರಕೂರು, ಉಡುಪಿ

 

ಒಂದು ಕಲ್ಲನು ಕಡಿದು ಮತ್ತೊಂದು ಕಲ್ಲಿಗೆ

ಭೋಗವ ಕೊಟ್ಟಿಹೆನೆಂಬ ಅಜ್ಞಾನವಿದೇನೋ?

–  ಅಲ್ಲಮಪ್ರಭು

 

ಲಿಂಗಾಯತ, ವೀರಶೈವ ‘ಸ್ವತಂತ್ರಧರ್ಮ’ ಘೋಷಣೆ, ಮಾನ್ಯತೆ ಇತ್ಯಾದಿಗಳ ಕುರಿತು ವ್ಯಾಪಕ ಚರ್ಚೆ, ಗುದ್ದಾಟಗಳನ್ನು ಪ್ರಸ್ತಾಪಿಸುವ ಮೊದಲು ‘ನಾನು ಯಾರು’ ಎಂಬುದನ್ನು ಸ್ಪಷ್ಟಗೊಳಿಸುವುದು ಅಗತ್ಯ ಮತ್ತು ಒಳಿತು. ಕಳೆದೆರಡು ಸಾವಿರ ವರ್ಷಗಳಿಂದ ‘ನಾನ್ಯಾರು’ ಎಂಬುದು ನನ್ನ ಸಮಸ್ಯೆಯಾಗಿರಲಿಲ್ಲ. ಯಾಕೆಂದರೆ ನಾನು ಅಜ್ಞಾನಿ, ಮೂಢ. ಅದು ಯಾರಿಗೆ ಸಮಸ್ಯೆಯಾಯಿತೋ ಅವರೇ ನೀಡಿದ ವ್ಯಾಖ್ಯೆಗಳನ್ನು ಒಪ್ಪಿಕೊಳ್ಳುತ್ತೇನೆ. ಏಕೆಂದರೆ ಅದು ಅನಿವಾರ್ಯ. ಹೌದು, ನಾನು ಪೇಗನ್,ಕಾಫಿರ, ಹೀದನ್. ಅನಂತರ ಹಿಂದೂ ಎಂದರು. “ಹಿಂದೂ” ಎನ್ನಿಸಿಕೊಳ್ಳುವುದು ಕೂಡಾ ನನ್ನ ಅಗತ್ಯವಾಗಿರಲಿಲ್ಲ, ಕೋರಿಕೆಯಾಗಿರಲಿಲ್ಲ. (ಕುರಿಯನ್ನು ‘ಕುರಿ’ ಎನ್ನುವುದು ಕುರಿಯ ಅಗತ್ಯವೇನೂ ಅಲ್ಲವಲ್ಲ?!) ಆದರೂ ಒಪ್ಪಿಕೊಳ್ಳುತ್ತೇನೆ. ಈಗ ಎಸ್.ಎಂ. ಜಾಮದಾರ್, ಗೊ.ರು.ಚ., ರಂಜಾನ್ ದರ್ಗಾ, ಮಾತೆ ಮಹಾದೇವಿ, ಮೀನಾಕ್ಷಿ ಬಾಳಿ ಮೊದಲಾದ ಶರಣಶರಣೆಯರು, ಅಸಂಖ್ಯ ಮಠಾಧೀಶರು, ಸಿದ್ಧರಾಮಯ್ಯನವರ ಸರಕಾರದ ಮಂತ್ರಿಗಳು, ಚಿಂತಕರು, ಪ್ರಗತಿಪರರು, ಪತ್ರಕರ್ತರು, ವಿಚಾರವಾದಿಗಳು, ಬುದ್ಧಿಜೀವಿಗಳು, liberals ಮುಂತಾದವರು ಒಂದು ಕೈಯಲ್ಲಿ ನನ್ನ ಕತ್ತು ಹಿಡಿದು, ಇನ್ನೊಂದು ಕೈಯಲ್ಲಿ ಕತ್ತಿ ಹಿಡಿದು ‘ಭವಿ’ ಎಂದು ಕರೆಯುತ್ತಿದ್ದಾರೆ. ನಾನು ಅಜ್ಞಾನಿಯಲ್ಲವೇ? ಮಹಾಪ್ರಸಾದವೆಂಬೆನು! (ಭವಿ ಎಂದರೆ ಇಷ್ಟಲಿಂಗವನ್ನು ಪೂಜಿಸದವನು; ಲೌಕಿಕವನ್ನು, ಅಂದರೆ ಭವವನ್ನು ನೆಚ್ಚಿ ಮೋಕ್ಷ ಪಡೆಯಲಾರದವನು; ಪಾಪಿ ಇತ್ಯಾದಿ.)

ಸತ್ಯವೆಂದರೆ ಪೇಗನ್, ಹೀದನ್, ಕಾಫಿರ್, ಹಿಂದೂ, ಭವಿ ಎಂಬೆಲ್ಲಾ ಬಿರುದುಗಳಿಗೂ, ಪಾಪಿ, ಅಜ್ಞಾನಿ, ಅವಿಶ್ವಾಸಿ, ಕಳ್ಳ, ಮೂರ್ತಿಪೂಜೆ ಮಾಡುವ ಮೂರ್ಖ, ಕಂದಾಚಾರಿ, ಮೂಢ, ಅನಾಚಾರಿ, ಮಿಥ್ಯಾರಾಧಕ ಎಂಬೆಲ್ಲಾ ಪದನಾಮಗಳಿಗೂ ಅಂತಹ ವ್ಯತ್ಯಾಸವೇನೂ ಇಲ್ಲ! ಜತೆಗೆ ವೈಯಕ್ತಿಕವಾಗಿ ನಾನು ನಾಸ್ತಿಕ ಮತ್ತು ನಿರೀಶ್ವರಿ. (ನಿರೀಶ್ವರವಾದಿಯಲ್ಲ.) ಅದು ಕೂಡಾ ಕಳೆದ 2-3 ಸಾವಿರ ವರ್ಷಗಳಿಂದ ನಾನು, ನನ್ನಂತಹ ಅಸಂಖ್ಯ ಪೇಗನ್ನರಿಗೆ ಸಮಸ್ಯೆಯಾಗಿರಲಿಲ್ಲ; ಯಾವ ಪೇಗನ್ನರೂ ನನ್ನನ್ನು ಸಾರ್ವಜನಿಕವಾಗಿ ಸುಡಲಿಲ್ಲ.

ನಾವು ನಮ್ಮ ಅಜ್ಞಾನದಲ್ಲಿ ಸುಖವಾಗಿದ್ದರೂ, ನಮಗೆ ಅವು ಸಮಸ್ಯೆಯಾಗಿ ಕಂಡಿಲ್ಲದಿದ್ದರೂ ‘ಇತರರಿಗೆ’ ಯಾಕೆ ಸಮಸ್ಯೆಯಾದವು? ಇವೆಲ್ಲ ಹಲವು ದಿಕ್ಕಿನಿಂದ ಒಂದಾಗಿ, ಒಂದೊಂದಾಗಿ ಆರಂಭಗೊಂಡವು ಎನ್ನಬಹುದು.

ಮತ್ತಷ್ಟು ಓದು »

22
ಡಿಸೆ

ವೈಚಾರಿಕತೆ, ನಾಸ್ತಿಕತೆ ಮತ್ತು ಬುದ್ಧಿಜೀವಿಗಳ ದುರಂತ ಕತೆ

– ರೋಹಿತ್ ಚಕ್ರತೀರ್ಥ

ನಕಲಿ ಮೆದುಳು“ನಾವು ವಿಚಾರವಾದಿಗಳಾಗಿ ನಾಸ್ತಿಕರಾಗೋಣ” ಎಂಬ ಮಾತನ್ನು ಒಬ್ಬ ಲೇಖಕ ಇತ್ತೀಚೆಗೆ ಬುದ್ಧಿಜೀವಿಗಳೆ ತುಂಬಿದ್ದ ಸಾಹಿತ್ಯ ಸಮ್ಮೇಳನವೊಂದರಲ್ಲಿ ಹೇಳಿದರಂತೆ. ಬಹುಶಃ ಅವರು ಪ್ರತಿಯೊಬ್ಬ ವಿಚಾರವಾದಿಯೂ ನಾಸ್ತಿಕನಾಗಿರಲೇಬೇಕು ಎಂಬ ಅರ್ಥದಲ್ಲಿ ಆ ಮಾತನ್ನು ಹೇಳಿರಬಹುದು. ಈ ಮಾತಿನ ಒಳಗಿಳಿಯಲು, ಮೊದಲು, ನಾವು “ವಿಚಾರವಾದ” ಅಂದರೆ ಏನು ಎನ್ನುವುದನ್ನು ನೋಡಬೇಕಾಗಿದೆ.

ವಿಚಾರವಾದಕ್ಕೆ ಕನ್ನಡದಲ್ಲಿರುವ ಅರ್ಥ: ವಿಚಾರ ಮಾಡುವ ಶಕ್ತಿ; ಚಿಂತನೆಯ ಶಕ್ತಿ ಎಂದು. ಇನ್ನೂ ಮುಂದುವರಿದು ತಾತ್ವಿಕ ದೃಷ್ಟಿ ಎಂದೂ ಹೇಳಬಹುದು. ಇಂಗ್ಲೀಷಿನಲ್ಲಿ Intellectual attitude, Ideological stance ಎಂದೆಲ್ಲ ಹೇಳುತ್ತಾರೆ. ಅಂದರೆ ಯಾವುದೇ ವಿಷಯವನ್ನು ಸರಿಯಾಗಿ ಗ್ರಹಿಸಿ, ಅದರ ಅಂತರಾರ್ಥವನ್ನು ಅರಿತು ಅದರಂತೆ ನಡೆಯುವವರು ವೈಚಾರಿಕತೆ ಬೆಳೆಸಿಕೊಂಡಿದ್ದಾರೆ ಎಂದು ಹೇಳಬಹುದು. ವಿಚಾರವಾದ ಅಥವಾ ವೈಚಾರಿಕತೆ ಎಂಬುದಕ್ಕೆ ಸಂವಾದಿಯಾಗಿ ಇಂಗ್ಲೀಷಿನಲ್ಲಿ ಬಳಕೆಯಾಗುವ “Intellectualism” ಎಂಬುದಕ್ಕೆ ಇರುವ ಅರ್ಥ: The exercise of the intellect at the expense of the emotions. ಅಂದರೆ, ಒಂದು ವಿಷಯವನ್ನು ಸರಿಯಾಗಿ ಗ್ರಹಿಸಲು ಹೋಗುವಾಗ ಅದಕ್ಕೆ ಸುತ್ತಿಕೊಂಡಿರುವ ಭಾವನಾತ್ಮಕ ಅಂಶಗಳನ್ನೆಲ್ಲ ಬದಿಗಿಟ್ಟು ಸತ್ಯವನ್ನಷ್ಟೇ ಎತ್ತಿ ಹಿಡಿಯುವುದು ಎಂದು ಅರ್ಥ. ಮಗ ಕಳ್ಳತನ ಮಾಡಿದ್ದಾನೆ. ಅದು ತಾಯಿಗೂ ಗೊತ್ತಿದೆ. ಆತನನ್ನು ಸೆರೆಮನೆಗೆ ಹಾಕಿದರೆ ತಾಯಿ ಅನಾಥೆಯಾಗುತ್ತಾಳೆ; ಆದರೆ ಆತನನ್ನು ಶಿಕ್ಷಿಸದೆ ಬಿಟ್ಟರೆ ದೇಶದ ಕಾನೂನಿಗೆ ಅಪಚಾರ. ಅಲ್ಲದೆ ಇದೇ ಉದಾಹರಣೆಯನ್ನು ನೋಡಿ ನೂರಾರು ಜನ ಕಳ್ಳತನಕ್ಕೆ ಇಳಿಯಬಹುದು. ಹಾಗಾಗಿ, ತಾಯಿಯ ಕಣ್ಣೀರನ್ನು ಕಷ್ಟಪಟ್ಟು ಅಲಕ್ಷಿಸಿ ಮಗನಿಗೆ ಶಿಕ್ಷೆಯಾಗುವಂತೆ ನೋಡಿಕೊಂಡು ಕಾನೂನನ್ನು ಎತ್ತಿಹಿಡಿಯುವುದು ಇಂಟಲೆಕ್ಚುಲಿಸಮ್ ಅಥವಾ ವೈಚಾರಿಕತೆಯ ಒಂದು ಮುಖ.

ವೈಚಾರಿಕತೆ – ಈಗೇನೋ ಬಹಳ ಪರಿಚಿತವಾದ ಭಾರತೀಯ ಶಬ್ದ ಅನ್ನಿಸಿದರೂ ಅದರ ಉಗಮವಾದದ್ದು ಭಾರತದಲ್ಲಲ್ಲ. ಇದು ಮಧ್ಯ ಯುರೋಪಿನಲ್ಲಿ ಸುಮಾರು ಹದಿನಾರನೇ ಶತಮಾನದಲ್ಲಿ ಹುಟ್ಟಿದ ಪದ ಮತ್ತು ಪರಿಕಲ್ಪನೆ. ಇದರ ಹುಟ್ಟಿನ ಹಿನ್ನೆಲೆ ತಿಳಿಯಲು ನಾವು ಸ್ವಲ್ಪ ಹಿಂದೆ ಹೋಗಬೇಕಾಗುತ್ತದೆ. ಕ್ರಿಸ್ತ ಹುಟ್ಟಿ ಒಂದೂವರೆ ಸಾವಿರ ವರ್ಷಗಳಾದರೂ ಯುರೋಪಿಯನ್ನರು ಬೈಬಲ್ಲಿನ ಭಾಗಗಳನ್ನು ಪ್ರಶ್ನೆ ಮಾಡಲು ಹೋಗಿರಲಿಲ್ಲ. ಚರ್ಚು ಅತ್ಯಂತ ಪ್ರಬಲವಾಗಿದ್ದ ವ್ಯವಸ್ಥೆ. ಅದನ್ನು ಎದುರುಹಾಕಿಕೊಳ್ಳುವವರಿಗೆ ಸಿಗುತ್ತಿದ್ದ ಪ್ರತಿಫಲ ಮರಣ. ಬೈಬಲ್ಲಿನ ವಿರುದ್ಧ ಮಾತಾಡಿದವರನ್ನು ಒಂದೋ ಜೀವಮಾನವೆಲ್ಲ ಸೆರೆಯಲ್ಲಿ ಹಾಕಿ ಭೀಕರ ಶಿಕ್ಷೆಗಳನ್ನು ಕೊಡಲಾಗುತ್ತಿತ್ತು ಇಲ್ಲವೇ ಹಲವು ಹತ್ಯಾರಗಳ ಮೂಲಕ ದೇಹವನ್ನು ಹಾಯಿಸಿ ಕೊಲ್ಲಲಾಗುತ್ತಿತ್ತು. ಪ್ರಭುತ್ವ ಯಾವತ್ತೂ ತನ್ನ ವಿರುದ್ಧ ಮಾತಾಡುವವನನ್ನು ಬದುಕಗೊಡುವುದಿಲ್ಲ ಅಥವಾ ಆತನನ್ನು ಸಂಪೂರ್ಣವಾಗಿ ಅಲಕ್ಷಿಸಿ ಕೊನೆಗೆ ತಾನಾಗಿ ಆತ ಬಾಯಿಮುಚ್ಚಿಕೊಂಡು ಸುಮ್ಮನಾಗುವಂತೆ ಮಾಡುತ್ತದೆ. ಗ್ರೀಸ್, ರೋಮ್ ನಾಗರಿಕತೆಗಳಲ್ಲಿ ಆ ಕಾಲದಲ್ಲಿ ರಾಜರಾಗಿದ್ದವರು, ಜೊತೆಗೆ ಅವರ ಆಸ್ಥಾನ ಪಂಡಿತರಾಗಿದ್ದವರು ಜನ ನಂಬಬೇಕಾದ ಮಾತುಗಳನ್ನು ಹೇಳುತ್ತಿದ್ದರು, ಬರೆದಿಡುತ್ತಿದ್ದರು. ಅವುಗಳು ಸರಿಯಿಲ್ಲ; ಸುಳ್ಳಿನ ಕಂತೆ ಎಂದವರನ್ನು ಅಲಕ್ಷಿಸಿ ದೂರಕ್ಕೆಸೆಯುತ್ತಿದ್ದರು. ಹಾಗಾಗಿ ಸೂರ್ಯ ಭೂಮಿಗೆ ಸುತ್ತು ಬರುತ್ತಾನೆ ಎಂದು ಹೇಳಿದ ಟಾಲೆಮಿ, ಅರಿಸ್ಟಾಟಲ್ ಮೊದಲಾದವರ ತಪ್ಪು ಚಿಂತನೆಗಳು ನೂರಾರು ವರ್ಷಗಳ ಕಾಲ ನಿಂತವು. ಟಾಲೆಮಿ ರಾಜನಾಗಿದ್ದ, ಅರಿಸ್ಟಾಟಲ್ ಅಸ್ಥಾನ ಪಂಡಿತನಾಗಿದ್ದ ಎನ್ನುವುದೇ ಇದಕ್ಕೆ ಕಾರಣ. ಸೂರ್ಯನ ಸುತ್ತ ಭೂಮಿ ತಿರುಗುತ್ತಿದೆ ಎಂದು ಅವರ ಕಾಲದಲ್ಲಿ ಹೇಳಿದ ಅರಿಸ್ಟಾರ್ಕಸ್‍ನ ದನಿ ಪ್ರಭುತ್ವದ ಧ್ವನಿವರ್ಧಕದ ಕೆಳಗೆ ಉಡುಗಿಯೇ ಹೋಯಿತು.
ಮತ್ತಷ್ಟು ಓದು »

20
ಜುಲೈ

ಕುವೆಂಪು ಮತ್ತು ಅಧ್ಯಾತ್ಮ

– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ಕುವೆಂಪುಕುವೆಂಪು ಮೂಲತಃ ಒಬ್ಬ ಕವಿ, ಶ್ರೇಷ್ಠ ಕವಿ. “ನಾನೃಷಿಃ ಕುರುತೇ ಕಾವ್ಯಂ” ಎಂಬ ಮಾತಿದೆ. ಋಷಿ ಎಂಬುದಕ್ಕೆ ದ್ರಷ್ಟಾರ ಎಂಬ ಅರ್ಥವಿದೆ. ಅಧ್ಯಾತ್ಮದ ಒಂದು ಮಜಲನ್ನು ದಾಟದಿದ್ದರೆ ದ್ರಷ್ಟಾರನಾಗುವುದು ಸಾಧ್ಯವಿಲ್ಲ. ಅಧ್ಯಾತ್ಮ ಎಂದರೆ ‘Immediate feeling of unity of the self with God’ ಎಂಬ ವ್ಯಾಖ್ಯೆಯನ್ನು ನೀಡಲಾಗಿದೆ. ದೇವರದೊಂದಿಗಿನ ಆತ್ಮದ ಐಕ್ಯವೇ ಅಧ್ಯಾತ್ಮ. ಕಾಯಕ, ನಿಸರ್ಗ, ಅಣುಜೀವ ಪ್ರೇಮ, ಹೀಗೆ ಯಾವುದೇ ಶಾಶ್ವತ ಮೌಲ್ಯವೂ ದೇವರಾಗಬಹುದು. ಇವು ವ್ಯಕ್ತಿಯಲ್ಲಿ ಲೀನವಾಗುವ ಬಗೆ ಅಧ್ಯಾತ್ಮದ ಹಂತಕ್ಕೆ ಒಯ್ಯುತ್ತದೆ.

ತೀವ್ರ ವಿಚಾರವಾದಿ, ಅಧ್ಯಾತ್ಮವಾದಿ, ಅಧ್ಯಾತ್ಮ ಜೀವಿಯಾದ ಕುವೆಂಪು ಸುಲಭಗ್ರಾಹ್ಯರಲ್ಲ. ಅವರು ವಿಚಾರವಾದಿ ನಿಜ, ಆದರೆ ಕೇವಲ ಭೌತವಾದಿಯಲ್ಲ. ಅಧ್ಯಾತ್ಮವಾದಿ ನಿಜ, ಆದರೆ ಕರ್ಮಠರಲ್ಲ. ಅಧ್ಯಾತ್ಮ ಜೀವಿ ನಿಜ, ಆದರೆ ಸಂನ್ಯಾಸಿಯಲ್ಲ. ನಿರಂಕುಶಮತಿಗಾಗಿ ಅವರು ನೀಡುವ ಕರೆ,ಆತ್ಮಶ್ರೀಗಾಗಿಯೇ ವಿನಾ ಭೌತಿಕ ರುಚಿಗಳ ಆರೈಕೆ, ಪೂರೈಕೆಗಳಿಗಾಗಿ ಅಲ್ಲ.

ಯಾವುದೇ ಅಧ್ಯಾತ್ಮ ತತ್ತ್ವದ ಅಂತಿಮ ಬಿಂದು ವ್ಯಕ್ತಿ ನಿಷ್ಠತೆ, ವ್ಯಕ್ತಿ ಉದ್ಧಾರ. ಸಮೂಹವನ್ನು ಇಡಿಯಾಗಿ ಉದ್ಧರಿಸುವ ಆಧ್ಯಾತ್ಮಿಕ ಸೂತ್ರ ಇಲ್ಲವೇ ಇಲ್ಲ. ಭಗವದ್ಗೀತೆಯಲ್ಲಿ ಹೇಳುವ “ಉದ್ಧರೇದಾತ್ಮನಾತ್ಮನಂ” ಎಂಬ ಮಾತು ಅಕ್ಷರಶಃ ನಿಜ. ವ್ಯಕ್ತಿ ಸ್ವತಃ ಉದ್ಧಾರವಾಗಬೇಕು. ವ್ಯಕ್ತಿ ವ್ಯಕ್ತಿಗಳು ಕೂಡಿ ಒಂದು ಸಮಾಜ. ವ್ಯಕ್ತಿಗಳ ಉದ್ಧಾರವೇ ಸಮಾಜದ ಉದ್ಧಾರ. ಕುವೆಂಪು ಅವರ ಕಾವ್ಯ, ಸಾಹಿತ್ಯ ಸೃಷ್ಟಿಯ ಮುಖ್ಯ ಸೂತ್ರವೂ ವ್ಯಕ್ತಿಯ ಆತ್ಮ ಸ್ವಾತಂತ್ರ್ಯಕ್ಕಾಗಿ ತುಡಿಯುವುದೇ ಆಗಿದೆ. ನಮ್ಮ ಉದ್ಧಾರಕ್ಕಾಗಿ ಯಾರೋ ಒಬ್ಬರು ದುಡಿಯುತ್ತಾರೆ ಎಂದು ಬಯಸುವಂತಿಲ್ಲ. ಎಲ್ಲರೂ ದುಡಿಯುತ್ತಲೇ ಅವರವರ ಹಾದಿಯಲ್ಲಿ ನಡೆದು, ಉದ್ಧಾರ ಕಂಡುಕೊಳ್ಳಬೇಕೆಂಬುದು ಅವರ ಕಾಣ್ಕೆ. ಹಾಗಾಗಿಯೇ ಅವರ ಸಾಹಿತ್ಯ ಸರ್ವಸ್ವದ ಸಾರವೇ ಆಗಿರುವ ಸಪ್ತ ಸೂತ್ರಗಳಲ್ಲಿ, “ಮತ ತೊಲಗಿ ಅಧ್ಯಾತ್ಮ ಮಾತ್ರ ವೈಜ್ಞಾನಿಕ ತತ್ತ್ವವಾಗಿ ಮಾನ್ಯತೆ ಪಡೆಯಬೇಕು ಹಾಗೂ ಯಾವ ಒಂದು ಗ್ರಂಥವೂ ‘ಏಕೈಕ ಪರಮ ಪೂಜ್ಯ’ ಧರ್ಮಗ್ರಂಥವಾಗಬಾರದು, ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾಗುವ ಎಲ್ಲವನ್ನೂ ಓದಿ ತಿಳಿದು ತನ್ನ ‘ದರ್ಶನ’ವನ್ನು ತಾನೇ ಪಡೆಯಬೇಕು” ಎಂದಿದ್ದಾರೆ.

ಮತ್ತಷ್ಟು ಓದು »

12
ಜೂನ್

ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೩

– ವಿನಾಯಕ ಹಂಪಿಹೊಳಿ

ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೧
ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೨

ದರ್ಶನಗಳಲ್ಲಿ ತರ್ಕ:

“ಭಗವಂತನಲ್ಲಿ ತನ್ನನ್ನು ಆರಾಧಿಸುವವರ ಮೇಲೆ ಪ್ರೀತಿ, ತನ್ನನ್ನು ಆರಾಧಿಸದವರ ಮೇಲೆ ಕ್ರೋಧ, ತನಗಿಷ್ಟ ಬಂದ ಹಾಗೆ ಮಾಡುವ ಸ್ವೇಚ್ಛೆ ಇವೆಲ್ಲವೂ ತುಂಬಿಕೊಂಡಿವೆ.” ಎಂಬ ಈ ಸೆಮೆಟಿಕ್ ರಿಲಿಜನ್ನಿನ ವಾಕ್ಯವನ್ನು ಭಾರತೀಯ ದಾರ್ಶನಿಕನೊಬ್ಬನಿಗೆ ಹೇಳಿ ನೋಡಿ. ಆಗ ಆತನ ಪ್ರತಿಕ್ರಿಯೆ ಹೇಗಿರುತ್ತದೆ? “ಛೇ! ಕೋಪ, ಆಸೆಗಳನ್ನು ಇಟ್ಟುಕೊಂಡವನು ಭಗವಂತ ಹೇಗಾದಾನು?” ಎಂದೇ ಪ್ರತಿಕ್ರಿಯೆ ನೀಡುತ್ತಾನಲ್ಲವೇ? ಕಾರಣ ನಮ್ಮ ಭಾರತೀಯ ದರ್ಶನಗಳ ತಳಹದಿಯೇ ಬೇರೆ. ದರ್ಶನಗಳಲ್ಲಿಯೂ ತರ್ಕಕ್ಕೆ ರಿಲಿಜನ್ನುಗಳಂತೆ ಪ್ರಥಮ ಪ್ರಾಶಸ್ತ್ಯವಿಲ್ಲ. ತರ್ಕದಿಂದ ಭಗವತ್ಪ್ರಾಪ್ತಿಯೂ ಇಲ್ಲ, ಮೋಕ್ಷವೂ ಇಲ್ಲ. ಆದರೆ “ಈ ಸಿದ್ಧಾಂತವೇ ಸತ್ಯ” ಎಂದು ಎದ್ದು ನಿಂತು ಒಬ್ಬ ಹೇಳಬೇಕಾದರೆ, ಆತ ಆ ತನ್ನ ಸಿದ್ಧಾಂತವನ್ನು ತರ್ಕಾಗ್ನಿಪರೀಕ್ಷೆಗೆ ದೂಡಿ ಪವಿತ್ರವಾಗಿ ಹೊರತರಬೇಕು. ರಿಲಿಜನ್ನುಗಳಂತೆ ಪುಸ್ತಕವೇ ಪರಮ ಸತ್ಯವಲ್ಲ ಈ ದರ್ಶನಗಳಲ್ಲಿ. ಅನುಭವವೇ ಪ್ರಧಾನ. “ವೇದಗಳು ಅಗ್ನಿ ತಣ್ಣಗಿದೆ ಎಂದು ಸಾವಿರ ಸಾರಿ ಹೇಳಿದರೂ ಅನುಭವವನ್ನೇ ಅನುಸರಿಸಬೇಕು” ಎಂದು ಶಂಕರರು ಹೇಳಿದ್ದಾರೆ. ಉಪನಿಷತ್ತುಗಳೂ ಕೂಡ “ಇಲ್ಲಿ ವೇದಗಳು ವೇದಗಳಾಗಿರುವದಿಲ್ಲ” ಎಂದು ಸಾರುತ್ತವೆ. ಅಂದರೆ ವೇದಕ್ಕಿಂತಲೂ ಅನುಭವಕ್ಕೇ ಪ್ರಥಮ ಪ್ರಾಶಸ್ತ್ಯ. ಸಹಸ್ರಾರು ಅನುಭವಿಗಳ ಅನುಭವದೊಂದಿಗೆ ತಾಳೆಯಾಗುವದರಿಂದಲೇ ವೇದ ಉಪನಿಷತ್ತು, ಗೀತೆಗಳಿಗೆ ನಮ್ಮಲ್ಲಿ ಹೆಚ್ಚು ಗೌರವ.

ಅನೇಕ ದರ್ಶನಗಳು ಅನೇಕ ತರ್ಕಗಳನ್ನನುಸರಿಸಿವೆ. ವೇದವನ್ನೊಪ್ಪದ ಬೌದ್ಧ ಮತ್ತು ಚಾರ್ವಾಕ ದರ್ಶನಗಳು ತಮ್ಮದೇ ತರ್ಕ ವ್ಯವಸ್ಥೆಯನ್ನು ಹಾಕಿಕೊಂಡಿವೆ. ವೇದಗಳನ್ನೊಪ್ಪುವ ಸಾಂಖ್ಯ, ಪೂರ್ವಮೀಮಾಂಸ ಮತ್ತು ವೇದಾಂತ ಮತಗಳೂ ಕೂಡ ವೇದ/ಉಪನಿಷತ್ತುಗಳಲ್ಲಿ ಬರುವ ತರ್ಕವನ್ನು ಆಧಾರವಾಗಿಟ್ಟುಕೊಂಡಿವೆ. ಇಲ್ಲಿ ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಮತ್ತು ದೇಶಾದ್ಯಂತ ಅನೇಕ ವಿದ್ವಜ್ಜನರು ಒಪ್ಪಿರುವ ಅದ್ವೈತ ವೇದಾಂತ ದರ್ಶನವನ್ನು ತೆಗೆದುಕೊಳ್ಳೋಣ. ಮುಖ್ಯವಾಗಿ ವೇದಾಂತಗಳಲ್ಲಿ ಕಾಣುವ ತರ್ಕ ಅತ್ಯಂತ ಜಟಿಲ. ಕಾರಣ ಉಪನಿಷತ್ತುಗಳು ಅನುಸರಿಸುವ ತರ್ಕ ರೋಮಾಂಚನಗೊಳಿಸುವಂಥದ್ದು. ಏಕೆಂದರೆ ಅದು ಮನುಷ್ಯನ ಮೂಲಭೂತ ನಂಬಿಕೆಗಳನ್ನೇ ಪ್ರಶ್ನಿಸುತ್ತದೆ. “ಆತ್ಮದ ವಿಷಯದಲ್ಲಿ, ಇದೆ ಎಂದು ಕೆಲವರು ಇಲ್ಲ ಎಂದು ಕೆಲವರು” ಎಂಬುದರೊಂದಿಗೆ ಆರಂಭವಾಗುವ ಕಠೋಪನಿಷತ್ತು, “ಆತ್ಮನು ಇದ್ದಾನೆ” ಎಂಬುದನ್ನು ತಾರ್ಕಿಕವಾಗಿ ಸಾಧಿಸಿ ಮುಕ್ತಾಯಗೊಳ್ಳುತ್ತದೆ. ಹಾಗೆಯೇ, ಶಂಕರರು “ಮನುಷ್ಯನಿಗೆ ಇಷ್ಟವಾದದ್ದನ್ನು ಪಡೆದುಕೊಳ್ಳುವದು ಮತ್ತು ಅನಿಷ್ಟವಾದದ್ದನ್ನು ಕಳೆದುಕೊಳ್ಳುವದು ಸ್ವಾಭಾವಿಕವಾಗಿದೆ. ಈ ಇಷ್ಟಪ್ರಾಪ್ತಿ-ಅನಿಷ್ಟಪರಿಹಾರವೆಂಬುದು ಜೀವಿಗಳ ಸ್ವಭಾವವು. ಉಪನಿಷತ್ತುಗಳ ಉದ್ದೇಶವೇ ಈ ಸ್ವಭಾವದ ಕಾರಣವನ್ನು ಅರಿಯುವದು” ಎಂದು ಹೇಳಿದ್ದಾರೆ. ಹೀಗೆ ಮನುಷ್ಯನ ಮೂಲ ನಂಬಿಕೆಯನ್ನೇ ತರ್ಕಕ್ಕೆ ಒಡ್ಡುವಲ್ಲಿ ಉಪನಿಷತ್ತುಗಳು ತೋರಿದ ಧೈರ್ಯ ಯಾವ ರಿಲಿಜನ್ನುಗಳಲ್ಲೂ ಕಂಡು ಬಂದಿಲ್ಲ.

ಮತ್ತಷ್ಟು ಓದು »

5
ಜೂನ್

ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೨

– ವಿನಾಯಕ ಹಂಪಿಹೊಳಿ

ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೧

ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ ರಿಲಿಜನ್ನುಗಳಲ್ಲಿ ತರ್ಕ:

ರಿಲಿಜನ್ನುಗಳಲ್ಲಿ ತರ್ಕಕ್ಕೆ ನಂಬಿಕೆಯ ನಂತರದ ಸ್ಥಾನವಿದೆ. ನಂಬಿಕೆಗೆ ಪ್ರಥಮ ಪ್ರಾಶಸ್ತ್ಯ. ನಂಬಿಕೆಗೂ ತರ್ಕಕ್ಕೂ ವಿರೋಧಾಭಾಸವಿದ್ದಲ್ಲಿ ನಂಬಿಕೆಯೇ ಸತ್ಯ. ತರ್ಕಕ್ಕೆ ಅಲ್ಲಿ ಜಾಗವಿಲ್ಲ. ತರ್ಕದಿಂದ ಭಗವಂತನ ದರ್ಶನವೂ ಆಗುವದಿಲ್ಲ ಮತ್ತು ತರ್ಕದಿಂದ ಸ್ವರ್ಗಪ್ರಾಪ್ತಿಯೂ ಇಲ್ಲ. ತರ್ಕವೇನಿದ್ದರೂ, ಉಳಿದ ರಿಲಿಜನ್ನುಗಳಿಗಿಂತ ತಮ್ಮ ರಿಲಿಜನ್ನು ಹೇಗೆ ಶ್ರೇಷ್ಠ ಎಂಬುದನ್ನು ತೋರಿಸಲು, ಮತ್ತು ತಮ್ಮ ರಿಲಿಜನ್ನುಗಳ ಮೂಲ ಕಲ್ಪನೆಗಳು ಮಾತ್ರ ಪರಮ ಸತ್ಯ ಎಂದು ಸಾಬೀತು ಪಡಿಸಲು ಅಷ್ಟೇ. ಉದಾಹರಣೆಗಾಗಿ ದೇವನು ಒಬ್ಬನೇ ಎಂಬುದನ್ನು ಸೆಮೆಟಿಕ್ ರಿಲಿಜನ್ನುಗಳು ನಂಬುತ್ತವೆ. ಮತ್ತು ಅದಕ್ಕೆ ಸಾಕಷ್ಟು ತರ್ಕಗಳನ್ನೂ ನೀಡುತ್ತವೆ. ಆದರೆ ದೇವನ ನಾಮ ಮತ್ತು ಗುಣಗಳ ಬಗ್ಗೆ ವಿರೋಧಾಭಾಸಗಳಿವೆ. ಪ್ರತಿಯೊಂದು ರಿಲಿಜನ್ನೂ ತಮ್ಮ ಪ್ರವಾದಿಗಳೇ ಸತ್ಯ ಎಂದು ಸಾರುತ್ತವೆ. ಮತ್ತು ಉಳಿದ ರಿಲಿಜನ್ನುಗಳ ಮುಂದೆ ಅದನ್ನೇ ತರ್ಕಬದ್ಧವಾಗಿ ಸಾಧಿಸುತ್ತವೆ.

ಆದರೂ ರಿಲಿಜನ್ನಿನ ಅನುಯಾಯಿಗಳು ತರ್ಕವನ್ನು ತಮ್ಮ ರಿಲಿಜನ್ನಿನ ಗ್ರಂಥಗಳ ಮೇಲೆ ಬಿಟ್ಟುಕೊಳ್ಳುವದಿಲ್ಲ. ಉದಾಹರಣೆಗೆ ಹಳೇ ಒಡಂಬಡಿಕೆಯೇ ಸತ್ಯ ಎಂಬುದು ಯಹೂದಿಗಳು ನಂಬುತ್ತಾರೆ ಅದಕ್ಕೆ ಅವರು ತರ್ಕವನ್ನು ಬೇಡುವದಿಲ್ಲ. ಆದರೆ ಹೊಸ ಒಡಂಬಡಿಕೆಯನ್ನು ಒಪ್ಪಿಕೊಳ್ಳಲು ತರ್ಕದ ಸಾಧನೆಯನ್ನು ಅಪೇಕ್ಷಿಸುತ್ತಾರೆ. ಮೊಹಮದ್ ಪೈಗಂಬರ್ ಅಂತಿಮ ಪ್ರವಾದಿ ಎಂಬುದನ್ನು ಮುಸ್ಲಿಮರು ತಮ್ಮ ಗ್ರಂಥದಿಂದಲೇ ಒಪ್ಪಿರುತ್ತಾರೆ. ಆದರೆ ಉಳಿದ ರಿಲಿಜನ್ನಿನವರಿಗೂ ಅದನ್ನು ಮನವರಿಕೆ ಮಾಡಲು ತರ್ಕವನ್ನಾಶ್ರಯಿಸುತ್ತಾರೆ. ಉಳಿದ ಗ್ರಂಥಗಳಲ್ಲಿನ ಇತಿಮಿತಿಗಳನ್ನು ತೋರಿಸಲು ತರ್ಕವನ್ನು ಹಿಡಿಯುತ್ತಾರೆ. ಆದರೆ ತಮ್ಮ ಗ್ರಂಥಗಳ ಇತಿಮಿತಿಗಳನ್ನು ತೋರಿಸುವ ಅದೇ ತರ್ಕವನ್ನು ಅಲ್ಲಗೆಳೆದು ತಮ್ಮ ಗ್ರಂಥವು ತರ್ಕಾತೀತವೆಂದು ಸಾರುತ್ತಾರೆ.

ಮತ್ತಷ್ಟು ಓದು »

29
ಮೇ

ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೧

– ವಿನಾಯಕ ಹಂಪಿಹೊಳಿ

ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನತರ್ಕ ಮನುಷ್ಯನಿಗಿರುವ ಒಂದು ಅತ್ಯುತ್ತಮ ಸಾಧನ. ಇದನ್ನು ಆಧರಿಸಿ ಮಾನವ ತನ್ನ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ. ವಿಜ್ಞಾನವಂತೂ ತರ್ಕದ ಆಧಾರದ ಮೇಲೆಯೇ ಬೆಳೆದಿರುವಂಥದ್ದು. ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕಕ್ಕೆ ವಿಜ್ಞಾನದಂತೆ ಮೊದಲನೇ ಪ್ರಾಶಸ್ತ್ಯವಿಲ್ಲವಾದರೂ, ತರ್ಕವನ್ನು ಸಂಪೂರ್ಣವಾಗಿ ಬಿಟ್ಟು ನಿಂತಿಲ್ಲ. ಪಾಶ್ಚಿಮಾತ್ಯ ರಿಲಿಜನ್ನುಗಳಿಗೂ ಭಾರತೀಯ ದರ್ಶನಗಳಿಗೂ ಇರುವ ಮುಖ್ಯ ವ್ಯತ್ಯಾಸ ಈಗಾಗಲೇ ನಿಲುಮೆಯಲ್ಲಿ ಸಾಕಷ್ಟು ಚರ್ಚೆಯಾಗಿದೆ. ಹೀಗಾಗಿ ಅವುಗಳ ವ್ಯತ್ಯಾಸದ ಕಡೆಗೆ ಹೆಚ್ಚು ಗಮನ ಕೊಡದೇ ಇವೆರಡರಲ್ಲೂ ತರ್ಕದ ಸ್ಥಾನವೇನು ಎಂಬುದರ ಬಗ್ಗೆ ಚರ್ಚಿಸೋಣ.

ವಿಜ್ಞಾನದಲ್ಲಿ ತರ್ಕ:

ಗಣಿತೀಯ ತರ್ಕ ಪದ್ಧತಿಯನ್ನು ವಿಜ್ಞಾನ ಅಳವಡಿಸಿಕೊಂಡಿದೆ. ಗಣಿತೀಯ ತರ್ಕದಲ್ಲಿ ’ಅಥವಾ’, ’ಮತ್ತು’, ’ಆದರೆ’ ಮುಂತಾದ ಸಂಬಂಧಗಳು ಮುಖ್ಯವಾಗಿರುತ್ತವೆ. ಎಲ್ಲ ವೈಜ್ಞಾನಿಕ ಸಿದ್ಧಾಂತಗಳೂ ಒಂದು ಗಣಿತೀಯ ತರ್ಕವೊಂದನ್ನು ಸಾಧಿಸಲು ಪ್ರಯತ್ನಿಸುತ್ತವೆ. ಕಾರಣ ಗಣಿತೀಯ ತರ್ಕದಿಂದ ಸಾಧಿಸಲ್ಪಟ್ಟ ಸಿದ್ಧಾಂತಗಳಲ್ಲಿ ಮೂಲ ಊಹೆಯು ತಪ್ಪಾಗಿಲ್ಲದಿದ್ದ ಪಕ್ಷದಲ್ಲಿ ಸಿದ್ಧಾಂತವು ಎಂದಿಗೂ ಸುಳ್ಳಾಗದು. ಐನ್ಸ್ಟೈನರ ಮಾತುಗಳಲ್ಲಿ ಹೇಳುವದಾದರೆ “ವೈಜ್ಞಾನಿಕ ಸಿದ್ಧಾಂತವೆಂಬುದು ಕೇವಲ ಕೆಲವೇ ಊಹೆಗಳನ್ನಾಧರಿಸಿ ನಿರ್ಮಿಸಿದ ಗಣಿತೀಯ ಮಾದರಿ”. ಉದಾಹರಣೆಗಾಗಿ ಅವರ ಸಾಪೇಕ್ಷತಾ ಸಿದ್ಧಾಂತವನ್ನೇ ತೆಗೆದುಕೊಳ್ಳೋಣ. ಅದರಲ್ಲಿ ಅವರು ಮಾಡಿದ ಊಹೆಗಳು ಎರಡೇ. ಮೊದಲನೇಯದು ಭೌತಿಕ ಕ್ರಿಯೆಗಳು ಎಲ್ಲ ರೀತಿಯ ಕಲ್ಪಿತ ಚೌಕಟ್ಟುಗಳಲ್ಲಿ ಒಂದೇ ತೆರನಾಗಿ ಅನ್ವಯವಾಗುತ್ತವೆ. ಎರಡನೇಯದು ಬೆಳಕಿನ ವೇಗ ಆ ಎಲ್ಲ ರೀತಿಯ ಕಲ್ಪಿತ ಚೌಕಟ್ಟುಗಳಲ್ಲಿ ಒಂದೇ ಆಗಿರುತ್ತದೆ. ಎಲ್ಲಿಯವರೆಗೆ ಈ ಊಹೆಗಳನ್ನು ನಿರಾಕರಿಸುವ ಪ್ರಕರಣಗಳು ಬೆಳಕಿಗೆ ಬರುವದಿಲ್ಲವೋ ಅಲ್ಲಿಯವರೆಗೂ ಸಾಪೇಕ್ಷತಾ ಸಿದ್ಧಾಂತ ಸತ್ಯವೇ.

ಮತ್ತಷ್ಟು ಓದು »

21
ಮೇ

ಬಹುಸಂಖ್ಯಾತರಿಗೆ ರಿಲಿಜನ್ ಇಲ್ಲವಾದರೆ ಅಲ್ಪಸಂಖ್ಯಾತರು ಯಾರು?

– ರಾಕೇಶ್ ಶೆಟ್ಟಿ

ರಿಲಿಜನ್ಅದು ರಾಮಕೃಷ್ಣ ಮಿಷನ್ ವರ್ಸಸ್ ಪಶ್ಚಿಮ ಬಂಗಾಳ ಸರ್ಕಾರದ ನಡುವೆ ನಡೆದ ಕುತೂಹಲಕಾರಿ ಕಾನೂನು ಕದನ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ರಾಮಕೃಷ್ಣ ಮಿಷನ್ ಸಂಸ್ಥೆಗೆ ಸೇರಿದ ಶಿಕ್ಷಣ ಸಂಸ್ಥೆಯೊಂದರಲ್ಲಿ ಶುರುವಾಗಿದ್ದ ಕಾಲೇಜಿನ ನಿರ್ವಹಣೆಗೆ ಸಂಬಂಧಿಸಿದಂತೆ,ಸರ್ಕಾರದ ಹಸ್ತಕ್ಷೇಪವನ್ನು ಪ್ರಶ್ನಿಸಿ ರಾಮಕೃಷ್ಣ ಮಿಷನ್ ನ್ಯಾಯಾಲಯದ ಮೆಟ್ಟಿಲೇರಿತ್ತು.ತಮ್ಮ ಸಂಘಟನೆಯೂ ರಾಮಕೃಷ್ಣರ ಬೋಧನೆಗಳ ಮೇಲೆ ಆಧಾರಿತವಾಗಿರುವುದರಿಂದ ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಸಂವಿಧಾನದ Article 30(1) ಮತ್ತು Article 26(a) ಕಾಯ್ದೆಯಡಿಯಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಇರಬೇಕಾದ ರಕ್ಷಣೆಯಿದೆ ಎಂದು ವಾದಿಸಿತ್ತು.ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟು, ರಾಮಕೃಷ್ಣಯಿಸಂ ಎಂಬ ಪ್ರತ್ಯೇಕವಾದ ರಿಲಿಜನ್ ಇಲ್ಲ ಮತ್ತದು ಹಿಂದೂ ಸಂಪ್ರದಾಯಗಳ ವ್ಯಾಪ್ತಿಯಲ್ಲೇ ಇದೆ ಎಂದಿತ್ತು ಹಾಗೂ ಹಿಂದೂ ಎಂಬುದು ರಿಲಿಜನ್ ಅಲ್ಲ ಅದೊಂದು ಜೀವನ ಪದ್ಧತಿ ಎಂದು ತೀರ್ಪು ನೀಡಿತ್ತು.ಈ ದೇಶದ ಸರ್ವೋಚ್ಚ ನ್ಯಾಯಾಲಯವೇ ಹಿಂದೂ ಎಂಬುದು ರಿಲಿಜನ್ ಅಲ್ಲ ಎಂದ ಮೇಲೆ ನಮ್ಮ ಸರ್ಕಾರಗಳು ಅದನ್ನು ಪರಿಗಣಿಸಬೇಕಿತ್ತಲ್ಲವೇ?

ಒಂದು ವೇಳೆ ಪರಿಗಣಿಸಿದ್ದರೆ ಈಗಲೂ ಸರ್ಕಾರಿ,ಖಾಸಗಿ ಕಚೇರಿ,ಶಿಕ್ಷಣ ಸಂಸ್ಥೆ ಇತ್ಯಾದಿಗಳ ಅರ್ಜಿಗಳಲ್ಲಿ “ಹಿಂದೂ” ಎಂಬುದನ್ನು “ರಿಲಿಜನ್” ಕಾಲಂನಲ್ಲಿ ಭರ್ತಿ ಮಾಡಿಕೊಳ್ಳುತ್ತಿರಲಿಲ್ಲ. ಉದಾಹರಣೆಗೆ ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ಸರ್ಕಾರ ಮಾಡಿದ ಜಾತಿಗಣತಿಯ ವೇಳೆ ನನಗಾದ ಅನುಭವದ ಬಗ್ಗೆ ಹೇಳಬೇಕು.

ಮತ್ತಷ್ಟು ಓದು »